೨೫

[ಇಪ್ಪತ್ತೈದನೆಯ ಅಧ್ಯಾಯ]

ಭಾಗಸೂಚನಾ

ಶ್ರೀಕೃಷ್ಣನು ಗೋವರ್ಧನ ಪರ್ವತವನ್ನು ಎತ್ತಿದುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇಂದ್ರಸ್ತದಾತ್ಮನಃ ಪೂಜಾಂ ವಿಜ್ಞಾಯ ವಿಹತಾಂ ನೃಪ ।
ಗೋಪೇಭ್ಯಃ ಕೃಷ್ಣನಾಥೇಭ್ಯೋ ನಂದಾದಿಭ್ಯಶ್ಚುಕೋಪ ಸಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಗೊಲ್ಲರು ತನ್ನ ಪೂಜೆಯನ್ನು ನಿಲ್ಲಿಸಿಬಿಟ್ಟರೆಂಬುದನ್ನು ತಿಳಿದ ಇಂದ್ರನು ಶ್ರೀಕೃಷ್ಣನನ್ನೇ ರಕ್ಷಕನನ್ನಾಗಿ ಹೊಂದಿದ್ದ ನಂದಗೋಪನೇ ಮೊದಲಾದ ಗೋಪಾಲಕರ ಮೇಲೆ ಅತ್ಯಂತ ಕ್ರೋಧಗೊಂಡನು. ॥1॥

(ಶ್ಲೋಕ-2)

ಮೂಲಮ್

ಗಣಂ ಸಾಂವರ್ತಕಂ ನಾಮ ಮೇಘಾನಾಂ ಚಾಂತಕಾರಿಣಾಮ್ ।
ಇಂದ್ರಃ ಪ್ರಾಚೋದಯತ್ಕ್ರುದ್ಧೋ ವಾಕ್ಯಂ ಚಾಹೇಶಮಾನ್ಯುತ ॥

ಅನುವಾದ

ತಾನು ಮೂರು ಲೋಕಗಳಿಗೂ ಒಡೆಯನಾಗಿ ಇರುವೆನೆಂಬ ಅಹಂಕಾರವು ಆತನಲ್ಲಿ ಬಹಳವಾಗಿತ್ತು. ಈ ಕಾರಣದಿಂದ ಅವನು ಸಿಟ್ಟಿನಿಂದ ಉರಿದೆದ್ದು ಪ್ರಳಯವನ್ನುಂಟು ಮಾಡುವ ಸಂವರ್ತಕಗಳೆಂಬ ಮೇಘಗಳನ್ನು ಕರೆದು ವ್ರಜದ ಮೇಲೆ ಆಕ್ರಮಣ ಮಾಡಿರೆಂದು ಅಪ್ಪಣೆ ಕೊಡುತ್ತಾ, ಇಂತೆಂದನು - ॥2॥

(ಶ್ಲೋಕ-3)

ಮೂಲಮ್

ಅಹೋ ಶ್ರೀಮದಮಾಹಾತ್ಮ್ಯಂ ಗೋಪಾನಾಂ ಕಾನನೌಕಸಾಮ್ ।
ಕೃಷ್ಣಂ ಮರ್ತ್ಯಮುಪಾಶ್ರಿತ್ಯ ಯೇ ಚಕ್ರುರ್ದೇವಹೇಲನಮ್ ॥

ಅನುವಾದ

ಕಾಡು ಮನುಷ್ಯರಾದ ಈ ಗೊಲ್ಲರು ಧನ ಮದದಿಂದ ಎಷ್ಟೊಂದು ಉದ್ಧಟರಾಗಿದ್ದಾರೆ. ಸಾಮಾನ್ಯ ಮನುಷ್ಯನಾದ ಶ್ರೀಕೃಷ್ಣನನ್ನು ಅವಲಂಬಿಸಿರುವ ಇವರು ದೇವರಾಜನಾದ ನನ್ನನ್ನೇ ಅವಮಾನಿಸುತ್ತಿದ್ದಾರಲ್ಲಾ! ॥3॥

(ಶ್ಲೋಕ-4)

ಮೂಲಮ್

ಯಥಾದೃಢೈಃ ಕರ್ಮಮಯೈಃ ಕ್ರತುಭಿರ್ನಾಮನೌನಿಭೈಃ ।
ವಿದ್ಯಾಮಾನ್ವೀಕ್ಷಿಕೀಂ ಹಿತ್ವಾ ತಿತೀರ್ಷಂತಿ ಭವಾರ್ಣವಮ್ ॥

ಅನುವಾದ

ಅಧ್ಯಾತ್ಮವಿದ್ಯೆಯನ್ನು ಬಿಟ್ಟಿರುವ ಅನೇಕ ಮಂದಬುದ್ಧಿಯ ಜನರು ಶಿಥಿಲವಾದ ಕರ್ಮಮಯವಾದ ನಾಮಮಾತ್ರಕ್ಕೆ ನಾವೆಗಳಂತೆ ತೋರುವ ಯಜ್ಞಗಳಿಂದ ಭವಸಾಗರವನ್ನು ದಾಟಲು ಇಚ್ಚಿಸುವಂತೆ, ಇವರು ಸರ್ವಸಂಪತ್ಸಮೃದ್ಧಿಯನ್ನು ಕೊಡುವ ಇಂದ್ರನ ಯಾಗವನ್ನು ಬಿಟ್ಟು ಗೋ-ಗೋವರ್ಧನಗಳ ಪೂಜೆಯನ್ನು ಆರಂಭಿಸಿದ್ದಾರಲ್ಲ! ॥4॥

(ಶ್ಲೋಕ-5)

ಮೂಲಮ್

ವಾಚಾಲಂ ಬಾಲಿಶಂ ಸ್ತಬ್ಧಮಜ್ಞಂ ಪಂಡಿತಮಾನಿನಮ್ ।
ಕೃಷ್ಣಂ ಮರ್ತ್ಯಮುಪಾಶ್ರಿತ್ಯ ಗೋಪಾ ಮೇ ಚಕ್ರುರಪ್ರಿಯಮ್ ॥

ಅನುವಾದ

ಬಾಯಿಬಡಕನಾದ, ಮೂರ್ಖನಾದ, ಸ್ತಬ್ಧನಾದ, ಅಜ್ಞನಾದ ಮತ್ತು ತನ್ನನ್ನು ಮಹಾಪಂಡಿತನೆಂದು ಭಾವಿಸಿಕೊಂಡಿರುವ ಮನುಷ್ಯಮಾತ್ರನಾದ ಕೃಷ್ಣನನ್ನು ಆಶ್ರಯಿಸಿ ಈ ಮೂರ್ಖ ಗೋಪಾಲಕರು ನನಗೆ ಬಹಳ ಅಪ್ರಿಯವಾದ ಕಾರ್ಯವನ್ನು ಮಾಡಿಬಿಟ್ಟರು. ॥5॥

(ಶ್ಲೋಕ-6)

ಮೂಲಮ್

ಏಷಾಂ ಶ್ರಿಯಾವಲಿಪ್ತಾನಾಂ ಕೃಷ್ಣೇನಾಧ್ಮಾಯಿತಾತ್ಮನಾಮ್ ।
ಧುನುತ ಶ್ರೀಮದಸ್ತಂಭಂ ಪಶೂನ್ನಯತ ಸಂಕ್ಷಯಮ್ ॥

ಅನುವಾದ

ಮೊದಲೇ ಇವರು ಧನಮದದಿಂದ ಉನ್ಮತ್ತರಾಗಿದ್ದರು. ಈಗ ಕೃಷ್ಣನೂ ಇವರನ್ನು ಪ್ರೋತ್ಸಾಹಿಸಿದನು. ಈಗ ನೀವು ಹೋಗಿ ಇವರ ಧನಮದವನ್ನು, ಉದ್ಧಟ ತನವನ್ನು ವಿನಾಶಗೊಳಿಸಿರಿ. ಅವರ ಗೋಸಂಪತ್ತನ್ನು ಧ್ವಂಸ ಮಾಡಿಬಿಡಿ.॥6॥

(ಶ್ಲೋಕ-7)

ಮೂಲಮ್

ಅಹಂ ಚೈರಾವತಂ ನಾಗಮಾರುಹ್ಯಾನುವ್ರಜೇ ವ್ರಜಮ್ ।
ಮರುದ್ಗಣೈರ್ಮಹಾವೀರ್ಯೈರ್ನಂದಗೋಷ್ಠಜಿಘಾಂಸಯಾ ॥

ಅನುವಾದ

ಸಾಂವರ್ತಕ ಮೇಘಗಳೇ! ನಾನೂ ಕೂಡ ನಿಮ್ಮ ಹಿಂದೆಯೆ ಐರಾವತನ್ನೇರಿ ನಂದನ ಹಳ್ಳಿಯನ್ನು ವಿನಾಶಗೊಳಿಸಲಿಕ್ಕಾಗಿ ಮಹಾಪರಾಕ್ರಮಿ ಮರುದ್ಗಣಗಳೊಂದಿಗೆ ಬರುತ್ತೇನೆ. ॥7॥

(ಶ್ಲೋಕ-8)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಥಂ ಮಘವತಾಜ್ಞಪ್ತಾ ಮೇಘಾ ನಿರ್ಮುಕ್ತಬಂಧನಾಃ ।
ನಂದಗೋಕುಲಮಾಸಾರೈಃ ಪೀಡಯಾಮಾಸುರೋಜಸಾ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಹೀಗೆ ಇಂದ್ರನು ಪ್ರಳಯಕಾಲದ ಮೇಘಗಳಿಗೆ ಆಜ್ಞೆಯನ್ನಿತ್ತು ಅವುಗಳ ಬಂಧನವನ್ನು ಬಿಚ್ಚಿ ಕಳಿಸಿದನು. ಅವುಗಳು ಅತ್ಯಂತ ವೇಗದಿಂದ ನಂದಗೋಕುಲಕ್ಕೆ ಧಾವಿಸಿ ಒನಕೆಯಷ್ಟು ದಪ್ಪವಾಗಿ ಮಳೆಗರೆದು ವ್ರಜವಾಸಿಗಳನ್ನು ಪೀಡಿಸತೊಡಗಿದವು. ॥8॥

(ಶ್ಲೋಕ-9)

ಮೂಲಮ್

ವಿದ್ಯೋತಮಾನಾ ವಿದ್ಯುದ್ಭಿಃ ಸ್ತನಂತಃ ಸ್ತನಯಿತ್ನುಭಿಃ ।
ತೀವ್ರೈರ್ಮರುದ್ಗಮೈರ್ನುನ್ನಾ ವವೃಷುರ್ಜಲಶರ್ಕರಾಃ ॥

ಅನುವಾದ

ನಾಲ್ಕೂ ದಿಕ್ಕುಗಳು ಮಿಂಚಿನಿಂದ ಪ್ರಕಾಶಿಸಿದುವು. ಮೇಘಗಳು ಪರಸ್ಪರ ಅಪ್ಪಳಿಸುತ್ತಾ ಗುಡುಗಿದವು. ಪ್ರಚಂಡವಾದ ಬಿರುಗಾಳಿಯು ಬೀಸತೊಡಗಿ ದೊಡ್ಡ-ದೊಡ್ಡ ಆಲಿಕಲ್ಲಿನ ಮಳೆ ಸುರಿಯತೊಡಗಿತು. ॥9॥

(ಶ್ಲೋಕ-10)

ಮೂಲಮ್

ಸ್ಥೂಣಾಸ್ಥೂಲಾ ವರ್ಷಧಾರಾ ಮುಂಚತ್ಸ್ವಭ್ರೇಷ್ವಭೀಕ್ಷ್ಣಶಃ ।
ಜಲೌಘೈಃ ಪ್ಲಾವ್ಯಮಾನಾ ಭೂರ್ನಾದೃಶ್ಯತ ನತೋನ್ನತಮ್ ॥

ಅನುವಾದ

ಹೀಗೆ ಮೇಘಗಳು ಕಂಬಗಾತ್ರದ ಜಲಧಾರೆಗಳಿಂದ ಕ್ಷಣ-ಕ್ಷಣಕ್ಕೂ ಮಳೆಯನ್ನು ಸುರಿಸಲು ಅಗಾಧವಾದ ನೀರಿನ ಪ್ರವಾಹದಿಂದ ವ್ರಜಭೂಮಿಯ ಹಳ್ಳ-ತಿಟ್ಟುಗಳೆಲ್ಲ ಮುಳುಗಿ ಕಾಣದಂತಾದುವು. ॥10॥

(ಶ್ಲೋಕ-11)

ಮೂಲಮ್

ಅತ್ಯಾಸಾರಾತಿವಾತೇನ ಪಶವೋ ಜಾತವೇಪನಾಃ ।
ಗೋಪಾ ಗೋಪ್ಯಶ್ಚ ಶೀತಾರ್ತಾ ಗೋವಿಂದಂ ಶರಣಂ ಯಯುಃ ॥

ಅನುವಾದ

ಹೀಗೆ ನಿರಂತರವಾಗಿ ಸುರಿಯುತ್ತಿದ್ದ ಜಲಧಾರೆಗೆ ಸಿಕ್ಕಿ ಹಸು-ಕರುಗಳು ನಡುಗ ತೊಡಗಿದವು. ಗೋಪ-ಗೋಪಿಯರು ಮಳೆಯಿಂದ ತೊಯ್ದು ಹೋಗಿ ಶೀತದಿಂದ ಪೀಡಿತರಾಗಿ, ಅನನ್ಯಗತಿಕರಾದ ಅವರು ಗೋವಿಂದನನ್ನೇ ಶರಣು ಹೋದರು. ॥11॥

(ಶ್ಲೋಕ-12)

ಮೂಲಮ್

ಶಿರಃ ಸುತಾಂಶ್ಚ ಕಾಯೇನ ಪ್ರಾಚ್ಛಾದ್ಯಾಸಾರಪೀಡಿತಾಃ ।
ವೇಪಮಾನಾ ಭಗವತಃ ಪಾದಮೂಲಮುಪಾಯಯುಃ ॥

ಅನುವಾದ

ಅತಿವೃಷ್ಟಿಯಿಂದ ಪೀಡಿತರಾದ ಗೋಪ-ಗೋಪಿಯರು ತಮ್ಮ ತಲೆಗಳನ್ನು ಮತ್ತು ಶಿಶುಗಳನ್ನು ಬಗ್ಗಿ ತಮ್ಮ ಮಡಿಲಲ್ಲಿ ಅಡಗಿಸಿಕೊಂಡರು. ಕಡೆಗೆ ಅವರೆಲ್ಲರೂ ರಕ್ಷಣೆಗಾಗಿ ಶ್ರೀಕೃಷ್ಣನ ಪಾದ ಮೂಲವನ್ನೇ ಆಶ್ರಯಿಸಿದರು. ಮತ್ತು ಪ್ರಾರ್ಥಿಸುತ್ತಾರೆ- ॥12॥

(ಶ್ಲೋಕ-13)

ಮೂಲಮ್

ಕೃಷ್ಣ ಕೃಷ್ಣ ಮಹಾಭಾಗ ತ್ವನ್ನಾಥಂ ಗೋಕುಲಂ ಪ್ರಭೋ ।
ತ್ರಾತುಮರ್ಹಸಿ ದೇವಾನ್ನಃ ಕುಪಿತಾದ್ಭಕ್ತವತ್ಸಲ ॥

ಅನುವಾದ

ಮಹಾಭಾಗ್ಯಶಾಲಿಯೇ! ಶ್ರೀಕೃಷ್ಣ! ಪ್ರಭುವೇ! ಗೋಕುಲಕ್ಕೆ ನೀನೇ ಒಡೆಯನು. ಗೊಲ್ಲರಿಗೆ ನೀನೆ ಪರಮಾಶ್ರಯನು. ಭಕ್ತವತ್ಸಲನೇ! ಕುಪಿತನಾಗಿರುವ ಇಂದ್ರದೇವನಿಂದ ನಮ್ಮನ್ನು ರಕ್ಷಿಸು. ॥13॥

(ಶ್ಲೋಕ-14)

ಮೂಲಮ್

ಶಿಲಾವರ್ಷನಿಪಾತೇನ ಹನ್ಯಮಾನಮಚೇತನಮ್ ।
ನಿರೀಕ್ಷ್ಯ ಭಗವಾನ್ಮೇನೇ ಕುಪಿತೇಂದ್ರಕೃತಂ ಹರಿಃ ॥

ಅನುವಾದ

ಆಲಿಕಲ್ಲುಗಳಿಂದಲೂ ಮತ್ತು ಮಳೆಯಿಂದಲೂ ಹಿಂಸಿಸಲ್ಪಡುತ್ತಿದ್ದ ಗೋವುಗಳನ್ನು, ಗೋಪಾಲಕರನ್ನು ಶ್ರೀಕೃಷ್ಣನು ನೋಡಿದನು. ಕುಪಿತನಾದ ಇಂದ್ರನೇ ಈ ಕಾರ್ಯವನ್ನು ಮಾಡಿರುವನೆಂದು ಭಗವಂತನು ತಿಳಿದುಕೊಂಡನು. ॥14॥

(ಶ್ಲೋಕ-15)

ಮೂಲಮ್

ಅಪರ್ತ್ವತ್ಯುಲ್ಬಣಂ ವರ್ಷಮತಿವಾತಂ ಶಿಲಾಮಯಮ್ ।
ಸ್ವಯಾಗೇ ವಿಹತೇಸ್ಮಾಭಿರಿಂದ್ರೋ ನಾಶಾಯ ವರ್ಷತಿ ॥

ಅನುವಾದ

ಬಳಿಕ ಶ್ರೀಕೃಷ್ಣನು ಮನಸ್ಸಿನಲ್ಲೇ ಹೀಗೆಂದು ಯೋಚಿಸಿದನು - ‘ನಾವು ಇಂದ್ರನ ಯಜ್ಞವನ್ನು ನಿಲ್ಲಿಸಿದ್ದರಿಂದ ಮಳೆಗಾಲವಲ್ಲದ ಕಾಲದಲ್ಲಿ ಪ್ರಚಂಡವಾದ ವಾಯುವಿನೊಂದಿಗೆ ಆಲಿಕಲ್ಲುಗಳಿಂದ ಕೂಡಿದ ಘನಘೋರ ಮಳೆಯನ್ನು ಸುರಿಸುತ್ತಿದ್ದಾನೆ. ॥15॥

(ಶ್ಲೋಕ-16)

ಮೂಲಮ್

ತತ್ರ ಪ್ರತಿವಿಧಿಂ ಸಮ್ಯಗಾತ್ಮಯೋಗೇನ ಸಾಧಯೇ ।
ಲೋಕೇಶಮಾನಿನಾಂ ವೌಢ್ಯಾದ್ಧರಿಷ್ಯೇ ಶ್ರೀಮದಂ ತಮಃ ॥

ಅನುವಾದ

ಇರಲಿ, ನಾನು ನನ್ನ ಯೋಗಮಾಯೆಯಿಂದ ಇವನಿಗೆ ಸರಿಯಾಗಿ ಪಾಠಕಲಿಸುತ್ತೇನೆ. ಇವನು ಮೂರ್ಖತೆಯಿಂದ ತನ್ನನ್ನೇ ಲೋಕಪಾಲನೆಂದು ತಿಳಿದಿರುವನು. ಇವನ ಐಶ್ವರ್ಯದ ಮತ್ತು ಧನದ ಸೊಕ್ಕನ್ನೂ, ಅಜ್ಞಾನವನ್ನೂ ತೊಲಗಿಸುತ್ತೇನೆ. ॥16॥

(ಶ್ಲೋಕ-17)

ಮೂಲಮ್

ನ ಹಿ ಸದ್ಭಾವಯುಕ್ತಾನಾಂ ಸುರಾಣಾಮೀಶವಿಸ್ಮಯಃ ।
ಮತ್ತೋಸತಾಂ ಮಾನಭಂಗಃ ಪ್ರಶಮಾಯೋಪಕಲ್ಪತೇ ॥

ಅನುವಾದ

ದೇವತೆಗಳಾದರೋ ಸತ್ತ್ವಪ್ರಧಾನರಾಗಿರುತ್ತಾರೆ. ಇವರಲ್ಲಿ ತಮ್ಮ ಐಶ್ವರ್ಯ, ಪದವಿಗಳ ಅಹಂಕಾರವಿರಬಾರದು. ಆದುದರಿಂದ ಈ ಸತ್ತ್ವಗುಣದಿಂದ ಚ್ಯುತರಾದ ದುಷ್ಟದೇವತೆಗಳ ಮಾನಭಂಗ ಮಾಡುತ್ತೇನೆ. ಇದರಿಂದ ಕೊನೆಗೆ ಅವರಿಗೆ ಶಾಂತಿಯೇ ಸಿಗುತ್ತದೆ. ॥17॥

(ಶ್ಲೋಕ-18)

ಮೂಲಮ್

ತಸ್ಮಾನ್ಮಚ್ಛರಣಂ ಗೋಷ್ಠಂ ಮನ್ನಾಥಂ ಮತ್ಪರಿಗ್ರಹಮ್ ।
ಗೋಪಾಯೇ ಸ್ವಾತ್ಮಯೋಗೇನ ಸೋಯಂ ಮೇ ವ್ರತ ಆಹಿತಃ ॥

ಅನುವಾದ

ಈ ಇಡೀ ವ್ರಜವೇ ನನಗೆ ಆಶ್ರಿತವಾಗಿದೆ. ನನ್ನನ್ನೇ ಏಕೈಕ ನಾಥನನ್ನಾಗಿ ಭಾವಿಸಿಕೊಂಡಿದ್ದಾರೆ. ನನ್ನಿಂದ ಸ್ವೀಕೃತರಾಗಿದ್ದಾರೆ. ಆದ್ದರಿಂದ ನಾನು ನನ್ನ ಯೋಗಮಾಯೆಯಿಂದ ಇವರನ್ನು ರಕ್ಷಿಸುವೆನು. ಶರಣಾಗತರನ್ನು ರಕ್ಷಿಸುವುದೇ ನನ್ನ ವ್ರತವಾಗಿದೆ. ಈಗ ಅದನ್ನು ಪಾಲಿಸುವ ಅವಕಾಶ ಸನ್ನಿಹಿತವಾಗಿದೆ. ॥18॥

(ಶ್ಲೋಕ-19)

ಮೂಲಮ್

ಇತ್ಯುಕ್ತ್ವೆ ಕೇನ ಹಸ್ತೇನ ಕೃತ್ವಾ ಗೋವರ್ಧನಾಚಲಮ್ ।
ದಧಾರ ಲೀಲಯಾ ಕೃಷ್ಣಶ್ಛತ್ರಾಕಮಿವ ಬಾಲಕಃ ॥

ಅನುವಾದ

ಪರೀಕ್ಷಿತನೇ! ಶ್ರೀಕೃಷ್ಣನು ಹೀಗೆ ಭಾವಿಸಿ-ಹುಡುಗರು ನಾಯಿಕೊಡೆಯನ್ನೆತ್ತಿ ಹಿಡಿದುಕೊಳ್ಳುವಂತೆ ಲೀಲಾಜಾಲವಾಗಿ ಗೋವರ್ಧನ ಪರ್ವತವನ್ನು ಒಂದೇ ಕೈಯಿಂದ ಎತ್ತಿ ಹಿಡಿದುಕೊಂಡನು. ॥19॥

(ಶ್ಲೋಕ-20)

ಮೂಲಮ್

ಅಥಾಹ ಭಗವಾನ್ ಗೋಪಾನ್ ಹೇಂಬ ತಾತ ವ್ರಜೌಕಸಃ ।
ಯಥೋಪಜೋಷಂ ವಿಶತ ಗಿರಿಗರ್ತಂ ಸಗೋಧನಾಃ ॥

ಅನುವಾದ

ಅನಂತರ ಭಗವಂತನು ಗೋಪರಲ್ಲಿ ಹೇಳಿದನು - ಅಪ್ಪ! ಅಮ್ಮ! ವ್ರಜವಾಸಿಗಳೇ! ನೀವೆಲ್ಲರೂ ನಿಮ್ಮ ಗೋವುಗಳೊಂದಿಗೆ ಹಾಗೂ ಸಮಸ್ತ ಸಾಮಗ್ರಿಗಳಿಂದ ಕೂಡಿಕೊಂಡು ಈ ಪರ್ವತದ ತಳಭಾಗದಲ್ಲಿ ಬಂದು ನಿಶ್ಚಿಂತರಾಗಿ ಕುಳಿತುಕೊಳ್ಳಿರಿ. ॥20॥

(ಶ್ಲೋಕ-21)

ಮೂಲಮ್

ನ ತ್ರಾಸ ಇಹ ವಃ ಕಾರ್ಯೋ ಮದ್ಧಸ್ತಾದ್ರಿನಿಪಾತನೇ ।
ವಾತವರ್ಷಭಯೇನಾಲಂ ತತಾಣಂ ವಿಹಿತಂ ಹಿ ವಃ ॥

ಅನುವಾದ

ಈ ಪರ್ವತವು ನನ್ನ ಕೈಯಿಂದ ಜಾರಿ ಬೀಳಬಹುದೆಂದು ನೀವು ಶಂಕಿಸಬೇಡಿರಿ. ನೀವೆಲ್ಲರೂ ಸ್ವಲ್ಪವೂ ಹೆದರಿಕೊಳ್ಳಬೇಡಿ. ಈ ಬಿರುಗಾಳಿ, ಮಳೆಯ ಭಯದಿಂದ ನಿಮ್ಮನ್ನು ರಕ್ಷಿಸಲಿಕ್ಕಾಗಿಯೇ ನಾನು ಈ ಯುಕ್ತಿಯನ್ನು ಮಾಡಿರುವೆನು. ॥21॥

(ಶ್ಲೋಕ-22)

ಮೂಲಮ್

ತಥಾ ನಿರ್ವಿವಿಶುರ್ಗರ್ತಂ ಕೃಷ್ಣಾಶ್ವಾಸಿತಮಾನಸಾಃ ।
ಯಥಾವಕಾಶಂ ಸಧನಾಃ ಸವ್ರಜಾಃ ಸೋಪಜೀವಿನಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೀಗೆ ಎಲ್ಲರಿಗೆ ಆಶ್ವಾಸನೆಯನ್ನು ಕೊಟ್ಟು ಧೈರ್ಯತುಂಬಿದಾಗ ಗೊಲ್ಲ ರೆಲ್ಲರೂ ತಮ್ಮ ಗೋಸಂಪತ್ತನ್ನು, ಕರುಗಳನ್ನು, ಆಶ್ರಿತರನ್ನು, ಪುರೋಹಿತರನ್ನು, ಭೃತ್ಯರನ್ನು, ಮಕ್ಕಳು-ಮರಿಗಳೊಂದಿಗೆ ಜೊತೆಯಲ್ಲಿ ಕರೆದುಕೊಂಡು ಗೋವರ್ಧನ ಪರ್ವತದ ಹಳ್ಳದಲ್ಲಿ ಸೇರಿಕೊಂಡರು. ॥22॥

(ಶ್ಲೋಕ-23)

ಮೂಲಮ್

ಕ್ಷುತ್ತೃಡ್ವ್ಯಥಾಂ ಸುಖಾಪೇಕ್ಷಾಂ ಹಿತ್ವಾ ತೈರ್ವ್ರಜವಾಸಿಭಿಃ ।
ವೀಕ್ಷ್ಯಮಾಣೋ ದಧಾವದ್ರಿಂ ಸಪ್ತಾಹಂ ನಾಚಲತ್ಪದಾತ್ ॥

ಅನುವಾದ

ಭಗವಾನ್ ಶ್ರೀಕೃಷ್ಣನನ್ನು ನೋಡುತ್ತಿರುವಂತೆಯೇ ವ್ರಜವಾಸಿಗಳು ಏಳು ದಿವಸಗಳ ಕಾಲ ಹಸಿವು ಬಾಯಾರಿಕೆಗಳನ್ನು ಸುಖಾಪೇಕ್ಷೆಯನ್ನು ಮರೆತುಬಿಟ್ಟರು. ಶ್ರೀಕೃಷ್ಣನು ಒಂದು ಹೆಜ್ಜೆಯಷ್ಟಾದರೂ ಕದಲದೆ ಗೋವರ್ಧನ ಗಿರಿಯನ್ನೆತ್ತಿಕೊಂಡು ಸ್ತಬ್ಧನಾಗಿ ನಿಂತಿದ್ದನು. ॥23॥

(ಶ್ಲೋಕ-24)

ಮೂಲಮ್

ಕೃಷ್ಣಯೋಗಾನುಭಾವಂ ತಂ ನಿಶಾಮ್ಯೇಂದ್ರೋತಿವಿಸ್ಮಿತಃ ।
ನಿಃಸ್ತಂಭೋ ಭ್ರಷ್ಟಸಂಕಲ್ಪಃ ಸ್ವಾನ್ಮೇಘಾನ್ ಸಂನ್ಯವಾರಯತ್ ॥

ಅನುವಾದ

ಶ್ರೀಕೃಷ್ಣನ ಇಂತಹ ಪರಮಾದ್ಬುತವಾದ ಯೋಗಮಾಯೆಯನ್ನು ಕಂಡು ಇಂದ್ರನಿಗೆ ಅತ್ಯಾಶ್ಚರ್ಯವಾಯಿತು. ಅವನ ಗರ್ವವೂ ಕುಗ್ಗಿತು. ಉದ್ದೇಶವು ಈಡೇರಲಿಲ್ಲ. ಬಳಿಕ ಅವನು ತಾನಾಗಿಯೇ ಮೇಘಗಳನ್ನು ಹಿಂದಕ್ಕೆ ಕರೆಸಿಕೊಂಡು ಮಳೆಯನ್ನು ನಿಲ್ಲಿಸಿದನು. ॥24॥

(ಶ್ಲೋಕ-25)

ಮೂಲಮ್

ಖಂ ವ್ಯಭ್ರಮುದಿತಾದಿತ್ಯಂ ವಾತವರ್ಷಂ ಚ ದಾರುಣಮ್ ।
ನಿಶಾಮ್ಯೋಪರತಂ ಗೋಪಾನ್ ಗೋವರ್ಧನಧರೋಬ್ರವೀತ್ ॥

ಅನುವಾದ

ಗೋವರ್ಧನ ಧಾರಿಯಾದ ಶ್ರೀಕೃಷ್ಣನು ನೋಡಿದನು - ಭಯಂಕರವಾದ ಬಿರುಗಾಳಿ ಮತ್ತು ಮಳೆಯು ನಿಂತು ಹೋಗಿ ಆಕಾಶವು ಸ್ವಚ್ಛವಾಗಿ ಸೂರ್ಯನು ಪ್ರಕಾಶಿಸುತ್ತಿರುವನು. ಆಗ ಅವನು ಗೋಪಾಲಕರಲ್ಲಿ ಹೇಳಿದನು. ॥25॥

(ಶ್ಲೋಕ-26)

ಮೂಲಮ್

ನಿರ್ಯಾತ ತ್ಯಜತ ತ್ರಾಸಂ ಗೋಪಾಃ ಸಸೀಧನಾರ್ಭಕಾಃ ।
ಉಪಾರತಂ ವಾತವರ್ಷಂ ವ್ಯದಪ್ರಾಯಾಶ್ಚ ನಿಮ್ನಗಾಃ ॥

ಅನುವಾದ

ಪ್ರಿಯರಾದ ಗೋಪಾಲಕರೇ! ಈಗ ನೀವು ಯಾವುದೇ ಭಯವಿಲ್ಲದೆ ನಿಮ್ಮ-ನಿಮ್ಮ ಗೋವುಗಳೊಡನೆ, ಹೆಂಡಿರು-ಮಕ್ಕಳೊಡನೆ, ಹೊರಗೆ ಹೊರಟು ಬನ್ನಿರಿ. ಇದೋ ನೋಡಿರಿ - ಬಿರುಗಾಳಿ, ಮಳೆ ನಿಂತು ಹೋಗಿ ನದಿಗಳ ನೀರೂ ಕೂಡ ಇಳಿಮುಖವಾಗಿದೆ. ॥26॥

(ಶ್ಲೋಕ-27)

ಮೂಲಮ್

ತತಸ್ತೇ ನಿರ್ಯಯುರ್ಗೋಪಾಃ ಸ್ವಂ ಸ್ವಮಾದಾಯ ಗೋಧನಮ್ ।
ಶಕಟೋಢೋಪಕರಣಂ ಸೀಬಾಲಸ್ಥವಿರಾಃ ಶನೈಃ ॥

ಅನುವಾದ

ಭಗವಂತನ ಈ ಆಜ್ಞೆಯನ್ನು ಪಡೆದು ಗೋಪರು ತಮ್ಮ-ತಮ್ಮ ಗೋಧನ, ಪುತ್ರಿ-ಪುತ್ರರೊಂದಿಗೆ, ಮುದುಕರೊಂದಿಗೆ ಜೊತೆಗೆ ಕರಕೊಂಡು, ತಮ್ಮ ಸಾಮಗ್ರಿಯನ್ನು ಗಾಡಿಗಳಲ್ಲಿ ತುಂಬಿಕೊಂಡು ಎಲ್ಲ ಜನರೂ ಹೊರಗೆ ಬಂದರು.॥27॥

(ಶ್ಲೋಕ-28)

ಮೂಲಮ್

ಭಗವಾನಪಿ ತಂ ಶೈಲಂ ಸ್ವಸ್ಥಾನೇ ಪೂರ್ವವತ್ಪ್ರಭುಃ ।
ಪಶ್ಯತಾಂ ಸರ್ವಭೂತಾನಾಂ ಸ್ಥಾಪಯಾಮಾಸ ಲೀಲಯಾ ॥

ಅನುವಾದ

ಸರ್ವಶಕ್ತನಾದ ಭಗವಾನ್ ಶ್ರೀಕೃಷ್ಣನೂ ಕೂಡ ಎಲ್ಲರೂ ನೋಡುತ್ತಿರುವಂತೆ ಲೀಲಾಜಾಲವಾಗಿಯೇ ಗೋವರ್ಧನ ಗಿರಿಯನ್ನು ಹಿಂದಿನಂತೆಯೇ ಅದರ ಸ್ಥಾನದಲ್ಲಿ ಇರಿಸಿದನು. ॥28॥

(ಶ್ಲೋಕ-29)

ಮೂಲಮ್

ತಂ ಪ್ರೇಮವೇಗಾನ್ನಿಭೃತಾ ವ್ರಜೌಕಸೋ
ಯಥಾ ಸಮೀಯುಃ ಪರಿರಂಭಣಾದಿಭಿಃ ।
ಗೋಪ್ಯಶ್ಚ ಸಸ್ನೇಹಮಪೂಜಯನ್ಮುದಾ
ದಧ್ಯಕ್ಷತಾದ್ಭಿರ್ಯುಯುಜುಃ ಸದಾಶಿಷಃ ॥

ಅನುವಾದ

ಪರ್ವತವನ್ನು ಕೆಳಗೆ ಇರಿಸಿದಾಕ್ಷಣ ವ್ರಜವಾಸಿಗಳ ಹೃದಯಗಳು ಪ್ರೇಮರಸದಿಂದ ತುಂಬಿ ಭಗವಾನ್ ಶ್ರೀಕೃಷ್ಣನ ಬಳಿಗೆ ಬಂದು ಕೆಲವರು ಅವನನ್ನು ಅಪ್ಪಿಕೊಂಡರೆ, ಕೆಲವರು ಮುತ್ತಿಟ್ಟರು. ಎಲ್ಲರೂ ಅವನನ್ನು ಸತ್ಕರಿಸಿದರು. ವೃದ್ಧೆಯರಾದ ಗೋಪಿಯರು ಮಹದಾನಂದದಿಂದ, ಸ್ನೇಹದಿಂದ ಶ್ರೀಕೃಷ್ಣನಿಗೆ ಮೊಸರು, ಅಕ್ಷತೆ, ನೀರು ಇವುಗಳಿಂದ ಮಂಗಲ ತಿಲಕವನ್ನಿಟ್ಟು ತುಂಬು ಹೃದಯದಿಂದ ಆಶೀರ್ವದಿಸಿದರು. ॥29॥

(ಶ್ಲೋಕ-30)

ಮೂಲಮ್

ಯಶೋದಾ ರೋಹಿಣೀ ನಂದೋ ರಾಮಶ್ಚ ಬಲಿನಾಂ ವರಃ ।
ಕೃಷ್ಣಮಾಲಿಂಗ್ಯ ಯುಯುಜುರಾಶಿಷಃ ಸ್ನೇಹಕಾತರಾಃ ॥

ಅನುವಾದ

ಯಶೋದಾದೇವಿ, ರೋಹಿಣಿ, ನಂದಗೋಪ ಮತ್ತು ಬಲಿಷ್ಠರಲ್ಲಿ ಶ್ರೇಷ್ಠನಾದ ಬಲರಾಮ ಮುಂತಾದವರು ಸ್ನೇಹಪರವಶರಾಗಿ ಶ್ರೀಕೃಷ್ಣನನ್ನು ಗಾಢವಾಗಿ ಆಲಿಂಗಿಸಿಕೊಂಡು ಆಶೀರ್ವದಿಸಿದರು. ॥30॥

(ಶ್ಲೋಕ-31)

ಮೂಲಮ್

ದಿವಿ ದೇವಗಣಾಃ ಸಾಧ್ಯಾಃ ಸಿದ್ಧಗಂಧರ್ವಚಾರಣಾಃ ।
ತುಷ್ಟುವುರ್ಮುಮುಚುಸ್ತುಷ್ಟಾಃ ಪುಷ್ಪವರ್ಷಾಣಿ ಪಾರ್ಥಿವ ॥

ಅನುವಾದ

ಪರೀಕ್ಷಿತನೇ! ಆ ಸಮಯದಲ್ಲಿ ಆಕಾಶದಲ್ಲಿ ಸ್ಥಿತರಾದ ದೇವತೆಗಳು ಸಾಧ್ಯರು, ಸಿದ್ಧರು, ಗಂಧರ್ವರು, ಚಾರಣರು ಮೊದಲಾದವರು ಪರಮ ಸಂತುಷ್ಟರಾಗಿ ಭಗವಂತನನ್ನು ಸ್ತುತಿಸುತ್ತಾ ಅವನ ಮೇಲೆ ಹೂವಿನ ಮಳೆಗರೆಯತೊಡಗಿದರು. ॥30॥

(ಶ್ಲೋಕ-32)

ಮೂಲಮ್

ಶಂಖದುಂಧುಭಯೋ ನೇದುರ್ದಿವಿ ದೇವಪ್ರಣೋದಿತಾಃ ।
ಜಗುರ್ಗಂಧರ್ವಪತಯಸ್ತುಂಬುರುಪ್ರಮುಖಾ ನೃಪ ॥

ಅನುವಾದ

ರಾಜನೇ! ಸ್ವರ್ಗದಲ್ಲಿ ದೇವತೆಗಳು ಶಂಖ, ದುಂದುಭಿಗಳನ್ನು ನುಡಿಸತೊಡಗಿದರು. ತುಂಬರು, ಗಂಧರ್ವರು ಭಗವಂತನ ಮಧುರ ಲೀಲೆಗಳನ್ನು ಹಾಡತೊಡಗಿದರು. ॥32॥

(ಶ್ಲೋಕ-33)

ಮೂಲಮ್

ತತೋನುರಕ್ತೈಃ ಪಶುಪೈಃ ಪರಿಶ್ರಿತೋ
ರಾಜನ್ಸ ಗೋಷ್ಠಂ ಸಬಲೋವ್ರಜದ್ಧರಿಃ ।
ತಥಾವಿಧಾನ್ಯಸ್ಯ ಕೃತಾನಿ ಗೋಪಿಕಾ
ಗಾಯಂತ್ಯ ಈಯುರ್ಮುದಿತಾ ಹೃದಿಸ್ಪೃಶಃ ॥

ಅನುವಾದ

ಇದಾದ ಬಳಿಕ ಭಗವಾನ್ ಶ್ರೀಕೃಷ್ಣನು ಗೊಲ್ಲಬಾಲಕರಿಂದರೊಡ ಗೂಡಿ ಬಲರಾಮನೊಂದಿಗೆ ವ್ರಜಕ್ಕೆ ಹೊರಟನು. ಅವನೊಂದಿಗೆ ಆನಂದಭರಿತರಾಗಿದ್ದ ಗೋಪಿಯರೂ ಶ್ರೀಕೃಷ್ಣನ ಚೇತೋಹಾರಿಗಳಾದ ಗೋವರ್ಧನೋದ್ಧರಣವೇ ಮುಂತಾದ ಲೀಲಾ ಪ್ರಸಂಗಗಳನ್ನು ಹೃದಯಂಗಮವಾಗಿ ಹಾಡುತ್ತಾ ವ್ರಜಕ್ಕೆ ತೆರಳಿದರು. ॥33॥

ಅನುವಾದ (ಸಮಾಪ್ತಿಃ)

ಇಪ್ಪತ್ತೈದನೆಯ ಅಧ್ಯಾಯವು ಮುಗಿಯಿತು. ॥25॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಪಂಚವಿಂಶೋಽಧ್ಯಾಯಃ ॥25॥