೨೪

[ಇಪ್ಪತ್ತನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ಇಂದ್ರನ ಯಜ್ಞ ನಿವಾರಣೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಭಗವಾನಪಿ ತತ್ರೈವ ಬಲದೇವೇನ ಸಂಯುತಃ ।
ಅಪಶ್ಯನ್ನಿವಸನ್ಗೋಪಾನಿಂದ್ರಯಾಗಕೃತೋದ್ಯಮಾನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತ ಮಹಾರಾಜನೇ! ಭಗವಾನ್ ಶ್ರೀಕೃಷ್ಣನು ಬಲರಾಮನೊಂದಿಗೆ ವೃಂದಾವನದಲ್ಲಿದ್ದು ಅನೇಕ ಪ್ರಕಾರವಾದ ಲೀಲೆಗಳನ್ನು ಪ್ರಕಟಪಡಿಸುತ್ತಿದ್ದನು. ಒಂದು ದಿನ ಅಲ್ಲಿಯ ಗೋಪರೆಲ್ಲರೂ ಇಂದ್ರ ಯಜ್ಞವನ್ನು ಮಾಡಲು ಸಿದ್ಧತೆ ಮಾಡುತ್ತಿರುವುದನ್ನು ನೋಡಿದನು. ॥1॥

(ಶ್ಲೋಕ-2)

ಮೂಲಮ್

ತದಭಿಜ್ಞೋಪಿ ಭಗವಾನ್ ಸರ್ವಾತ್ಮಾ ಸರ್ವದರ್ಶನಃ ।
ಪ್ರಶ್ರಯಾವನತೋಪೃಚ್ಛದ್ವ ದ್ಧಾನ್ನಂದಪುರೋಗಮಾನ್ ॥

ಅನುವಾದ

ಶ್ರೀಕೃಷ್ಣನು ಸರ್ವಾಂತರ್ಯಾಮಿಯೂ, ಸರ್ವಜ್ಞನೂ ಆಗಿದ್ದುದರಿಂದ ಎಲ್ಲವನ್ನೂ ಅವನು ತಿಳಿದಿರುತ್ತಿದ್ದನು. ಹೀಗಿದ್ದರೂ ವಿನಯದಿಂದ ಕೂಡಿ ನಂದನೇ ಮೊದಲಾದ ಹಿರಿಯ ಗೋಪರನ್ನು ಕೇಳಿದನು. ॥2॥

(ಶ್ಲೋಕ-3)

ಮೂಲಮ್

ಕಥ್ಯತಾಂ ಮೇ ಪಿತಃ ಕೋಯಂ ಸಂಭ್ರಮೋ ವ ಉಪಾಗತಃ ।
ಕಿಂ ಲಂ ಕಸ್ಯಚೋದ್ದೇಶಃ ಕೇನ ವಾ ಸಾಧ್ಯತೇ ಮಖಃ ॥

ಅನುವಾದ

ತಂದೆಯವರೇ! ನಿಮ್ಮ ಮುಂದೆ ಎಂತಹ ಮಹಾಕಾರ್ಯವು ಇದಿರಾಗಿದೆ? ಯಾವ ಉತ್ಸವವು ನಡೆಯಲಿದೆ? ಇದರ ಫಲವು ಏನು? ಯಾವ ಉದ್ದೇಶದಿಂದ ಯಾವ ಯಾವ ಸಾಮಗ್ರಿಗಳಿಂದ ಈ ಯಜ್ಞವನ್ನು ಮಾಡಲಾಗುತ್ತದೆ? ಇದೆಲ್ಲವನ್ನು ನನಗೆ ತಿಳಿಸಿರಿ. ॥3॥

(ಶ್ಲೋಕ-4)

ಮೂಲಮ್

ಏತದ್ಬ್ರೂಹಿ ಮಹಾನ್ಕಾಮೋ ಮಹ್ಯಂ ಶುಶ್ರೂಷವೇ ಪಿತಃ ।
ನ ಹಿ ಗೋಪ್ಯಂ ಹಿ ಸಾಧೂನಾಂ ಕೃತ್ಯಂ ಸರ್ವಾತ್ಮನಾಮಿಹ ॥

(ಶ್ಲೋಕ-5)

ಮೂಲಮ್

ಅಸ್ತ್ಯಸ್ವಪರದೃಷ್ಟೀನಾಮಮಿತ್ರೋದಾಸ್ತವಿದ್ವಿಷಾಮ್ ।
ಉದಾಸೀನೋರಿವದ್ವರ್ಜ್ಯ ಆತ್ಮವತ್ಸುಹೃದುಚ್ಯತೇ ॥

ಅನುವಾದ

ನೀವು ನನಗೆ ತಂದೆಯಾಗಿದ್ದು, ನಾನು ನಿಮ್ಮ ಮಗನಲ್ಲವೇ! ಅಪ್ಪಾ! ಇದನ್ನು ತಿಳಿದುಕೊಳ್ಳಬೇಕೆಂಬ ಉತ್ಕಂಠತೆಯೂ ಇದೆ. ಲೋಕದಲ್ಲಿ ಸಮಸ್ತರನ್ನು ತಮ್ಮಂತೆಯೇ ಕಾಣುವ, ‘ಇವರು ತಮ್ಮವರು, ಇವರು ಪರರು’ ಎಂಬ ಭೇದ ಭಾವವೇ ಇಲ್ಲದಿರುವ ಸಾಧುಗಳಿಗೆ ಇತರರಿಂದ ಮುಚ್ಚಿಡಬೇಕಾದುದು ಯಾವುದೂ ಇರುವುದಿಲ್ಲ. ಇವರಿಗೆ ಮಿತ್ರ-ಶತ್ರು ಉದಾಸೀನ ಇವರಲ್ಲಿ ಯಾವ ಭೇದವೂ ಇರುವುದಿಲ್ಲ. ಆದರೆ ಇಂತಹ ಸ್ಥಿತಿಯಿಲ್ಲದಿದ್ದರೆ ರಹಸ್ಯದ ಮಾತನ್ನು ಶತ್ರುವಿನಂತೆ ಉದಾಸೀನನಲ್ಲಿಯೂ ಹೇಳಬಾರದು. ಮಿತ್ರನಾದರೋ ತನ್ನಂತೆಯೇ ಎಂದು ಹೇಳಲಾಗಿದೆ. ಅದಕ್ಕಾಗಿ ಅವನಲ್ಲಿ ಯಾವ ಮಾತನ್ನು ಮರೆಮಾಚಲಾಗುವುದಿಲ್ಲ. ॥4-5॥

(ಶ್ಲೋಕ-6)

ಮೂಲಮ್

ಜ್ಞಾತ್ವಾಜ್ಞಾತ್ವಾ ಚ ಕರ್ಮಾಣಿ ಜನೋಯಮನುತಿಷ್ಠತಿ ।
ವಿದುಷಃ ಕರ್ಮಸಿದ್ಧಿಃ ಸ್ಯಾತ್ತಥಾ ನಾವಿದುಷೋ ಭವೇತ್ ॥

ಅನುವಾದ

ಈ ಸಂಸಾರಿ ಮನುಷ್ಯನು ತಿಳಿದೊ-ತಿಳಿಯದೆಯೋ ಅನೇಕ ವಿಧದ ಕರ್ಮಗಳ ಅನುಷ್ಠಾನವನ್ನು ಮಾಡುತ್ತಾನೆ. ಅದರಲ್ಲಿ ತಿಳಿದು-ತಿಳಿದು ಮಾಡಿದ ಕರ್ಮಗಳು ಫಲ ಕೊಡುವಂತೆ ತಿಳಿಯದೇ ಮಾಡಿದ ಕರ್ಮಗಳ ಫಲದೊರೆಯುವುದಿಲ್ಲ. ॥6॥

(ಶ್ಲೋಕ-7)

ಮೂಲಮ್

ತತ್ರ ತಾವತ್ಕ್ರಿಯಾಯೋಗೋ ಭವತಾಂ ಕಿಂ ವಿಚಾರಿತಃ ।
ಅಥವಾ ಲೌಕಿಕಸ್ತನ್ಮೇ ಪೃಚ್ಛತಃ ಸಾಧು ಭಣ್ಯತಾಮ್ ॥

ಅನುವಾದ

ಆದ್ದರಿಂದ ಈಗ ನೀವೆಲ್ಲರೂ ಮಾಡಲು ಹೊರಟಿರುವ ಕ್ರಿಯಾಯೋಗವು ಸಹೃದಯರೊಂದಿಗೆ ವಿಚಾರ ವಿಮರ್ಶೆಮಾಡಿ, ಶಾಸ್ತ್ರ ಸಮ್ಮತವೂ ಅಥವಾ ಲೌಕಿಕವೇ ಇರಬಹುದು. ಇದೆಲ್ಲವನ್ನು ನಾನು ತಿಳಿಯಲು ಬಯಸುತ್ತೇನೆ. ದಯಮಾಡಿ ಸ್ಪಷ್ಟವಾಗಿ ಹೇಳುವವರಾಗಿರಿ. ॥7॥

(ಶ್ಲೋಕ-8)

ಮೂಲಮ್ (ವಾಚನಮ್)

ನಂದಗೋಪ ಉವಾಚ

ಮೂಲಮ್

ಪರ್ಜನ್ಯೋ ಭಗವಾನಿಂದ್ರೋ ಮೇಘಾಸ್ತಸ್ಯಾತ್ಮಮೂರ್ತಯಃ ।
ತೇಭಿವರ್ಷಂತಿ ಭೂತಾನಾಂ ಪ್ರೀಣನಂ ಜೀವನಂ ಪಯಃ ॥

ಅನುವಾದ

ನಂದಗೋಪನು ಹೇಳಿದನು — ಮಗು! ಭಗವಾನ್ ಇಂದ್ರನು ಮಳೆಗರೆಯುವ ಮೇಘಗಳ ಅಧಿಪತಿಯಾಗಿರುವನು. ಈ ಮೇಘಗಳು ಅವನದೇ ರೂಪಗಳಾಗಿವೆ. ಅವು ಸಮಸ್ತ ಪ್ರಾಣಿಗಳನ್ನು ತೃಪ್ತಿಪಡಿಸುವಂತಹ ಜೀವನ ದಾತೃವಾದ ನೀರನ್ನು ಸುರಿಸುವುವು. ॥8॥

(ಶ್ಲೋಕ-9)

ಮೂಲಮ್

ತಂ ತಾತ ವಯಮನ್ಯೇ ಚ ವಾರ್ಮುಚಾಂ ಪತಿಮೀಶ್ವರಮ್ ।
ದ್ರವ್ಯೈಸ್ತದ್ರೇತಸಾ ಸಿದ್ಧೈರ್ಯಜಂತೇ ಕ್ರತುಭಿರ್ನರಾಃ ॥

ಅನುವಾದ

ನನ್ನ ಮುದ್ದುಕಂದ! ನಾವು ಮತ್ತು ಇತರರು ಅದೇ ಮೇಘ ಪತಿಯಾದ ಭಗವಾನ್ ಇಂದ್ರನನ್ನು ಯಜ್ಞಗಳ ಮೂಲಕ ಪೂಜಿಸುತ್ತೇವೆ. ಯಜ್ಞಮಾಡುವ ಸಾಮಗ್ರಿಗಳೂ ಕೂಡ ಅವನು ಸುರಿಸಿದ ಶಕ್ತಿಯುತವಾದ ನೀರಿನಿಂದಲೇ ಉತ್ಪನ್ನವಾಗಿವೆ. ॥9॥

(ಶ್ಲೋಕ-10)

ಮೂಲಮ್

ತಚ್ಛೇಷೇಣೋಪಜೀವಂತಿ ತ್ರಿವರ್ಗಲಹೇತವೇ ।
ಪುಂಸಾಂ ಪುರುಷಕಾರಾಣಾಂ ಪರ್ಜನ್ಯಃ ಲಭಾವನಃ ॥

ಅನುವಾದ

ಅವನ ಯಜ್ಞವನ್ನು ಮಾಡಿದ ಬಳಿಕ ಉಳಿದಿರುವ ಅನ್ನದಿಂದಲೇ ನಾವೆಲ್ಲರೂ ಅರ್ಥ, ಧರ್ಮ ಮತ್ತು ಕಾಮರೂಪವಾದ ತ್ರಿವರ್ಗಗಳ ಸಿದ್ಧಿಗಾಗಿ ಜೀವನನಿರ್ವಾಹ ಮಾಡುತ್ತೇವೆ. ಮನುಷ್ಯರ ಬೇಸಾಯವೇ ಮುಂತಾದ ಪ್ರಯತ್ನಗಳಿಗೆ ಫಲವನ್ನು ಕೊಡುವವನು ಇಂದ್ರನೇ ಆಗಿರುವನು. ॥10॥

(ಶ್ಲೋಕ-11)

ಮೂಲಮ್

ಯಂ ಏವಂ ವಿಸೃಜೇದ್ಧರ್ಮಂ ಪಾರಂಪರ್ಯಾಗತಂ ನರಃ ।
ಕಾಮಾಲ್ಲೋಭಾದ್ಭಯಾದ್ದ್ವೇಷಾ ತ್ಸ ವೈ ನಾಪ್ನೋತಿ ಶೋಭನಮ್ ॥

ಅನುವಾದ

ಈ ಧರ್ಮವು (ಸಂಪ್ರದಾಯ) ನಮ್ಮ ಕುಲಪರಂಪರೆಯಿಂದ ನಡೆದು ಬಂದಿದೆ. ಇಂತಹ ಪರಂಪರಾಗತ ಧರ್ಮವನ್ನು ಕಾಮ, ಲೋಭ, ಭಯ ಅಥವಾ ದ್ವೇಷದಿಂದ ಬಿಟ್ಟು ಬಿಡುವವನಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ. ॥11॥

(ಶ್ಲೋಕ-12)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ವಚೋ ನಿಶಮ್ಯ ನಂದಸ್ಯ ತಥಾನ್ಯೇಷಾಂ ವ್ರಜೌಕಸಾಮ್ ।
ಇಂದ್ರಾಯ ಮನ್ಯುಂ ಜನಯನ್ಪಿತರಂ ಪ್ರಾಹ ಕೇಶವಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಕೇಶವನು ತಂದೆಯ ಮತ್ತು ಇತರ ವ್ರಜವಾಸಿಗಳ ಮಾತನ್ನು ಕೇಳಿ ಇಂದ್ರನಿಗೆ ಕೋಪವನ್ನುಂಟುಮಾಡುವ ಈ ಮಾತುಗಳನ್ನು ನಂದಗೋಪನ ಬಳಿ ಹೇಳಿದನು.॥12॥

(ಶ್ಲೋಕ-13)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಕರ್ಮಣಾ ಜಾಯತೇ ಜಂತುಃ ಕರ್ಮಣೈವ ವಿಲೀಯತೇ ।
ಸುಖಂ ದುಃಖಂ ಭಯಂ ಕ್ಷೇಮಂ ಕರ್ಮಣೈವಾಭಿಪದ್ಯತೇ ॥

ಅನುವಾದ

ಶ್ರೀಭಗವಂತನು ಹೇಳಿದನು — ತಂದೆಯವರೇ! ಪ್ರಾಣಿಯು ತನ್ನ ಕರ್ಮಕ್ಕನುಸಾರವಾಗಿಯೇ ಹುಟ್ಟುತ್ತಾನೆ ಮತ್ತು ಕರ್ಮಾನುಸಾರವೇ ಸಾಯುತ್ತಾನೆ. ಅವನಿಗೆ ಅವನ ಕರ್ಮಕ್ಕೆ ಅನುಸಾರವೇ ಸುಖ-ದುಃಖ, ಭಯ ಕ್ಷೇಮಗಳು ಪ್ರಾಪ್ತವಾಗುತ್ತವೆ. ॥13॥

(ಶ್ಲೋಕ-14)

ಮೂಲಮ್

ಅಸ್ತಿ ಚೇದೀಶ್ವರಃ ಕಶ್ಚಿತ್ಫಲರೂಪ್ಯನ್ಯಕರ್ಮಣಾಮ್ ।
ಕರ್ತಾರಂ ಭಜತೇ ಸೋಪಿ ನ ಹ್ಯಕರ್ತುಃ ಪ್ರಭುರ್ಹಿ ಸಃ ॥

ಅನುವಾದ

ಜಡವಾದ ಕರ್ಮವೇ ಕರ್ಮ ಮಾಡಿದವನಿಗೆ ಫಲನೀಡದೆಂದೂ, ಫಲವನ್ನು ಕೊಡುವ ಬೇರೊಬ್ಬ ಈಶ್ವರನಿದ್ದಾನೆಂದು ಭಾವಿಸಿದರೂ, ಆ ಈಶ್ವರನೂ ಕೂಡ ಕರ್ಮಮಾಡಿದವನಿಗೇ ಫಲನೀಡ ಬಲ್ಲನೇ ಹೊರತು ಕರ್ಮಮಾಡದವನ ಮೇಲೆ ಅವನ ಪ್ರಭಾವವೇನೂ ನಡೆಯುವುದಿಲ್ಲ. ॥14॥

(ಶ್ಲೋಕ-15)

ಮೂಲಮ್

ಕಿಮಿಂದ್ರೇಣೇಹ ಭೂತಾನಾಂ ಸ್ವಸ್ವಕರ್ಮಾನುವರ್ತಿನಾಮ್ ।
ಅನೀಶೇನಾನ್ಯಥಾ ಕರ್ತುಂ ಸ್ವಭಾವವಿಹಿತಂ ನೃಣಾಮ್ ॥

ಅನುವಾದ

ಸಮಸ್ತ ಪ್ರಾಣಿಗಳೂ ತಮ್ಮ-ತಮ್ಮ ಕರ್ಮಗಳ ಫಲಗಳನ್ನೇ ಅನುಭವಿಸುತ್ತಿರುವಾಗ ನಮಗೆ ಇಂದ್ರನ ಆವಶ್ಯಕತೆ ಏನಿದೆ? ಅಪ್ಪಾಜೀ! ಪೂರ್ವಸಂಸ್ಕಾರಕ್ಕೆ ಅನುಸಾರ ಪ್ರಾಪ್ತವಾಗುವ ಮನುಷ್ಯರ ಕರ್ಮಗಳನ್ನು ಅವನು ಬದಲಿಸಲಾರನೆಂದಾಗ ಅವನಿಂದ ಏನು ಪ್ರಯೋಜನ? ॥15॥

(ಶ್ಲೋಕ-16)

ಮೂಲಮ್

ಸ್ವಭಾವತಂತ್ರೋ ಹಿ ಜನಃ ಸ್ವಭಾವಮನುವರ್ತತೇ ।
ಸ್ವಭಾವಸ್ಥಮಿದಂ ಸರ್ವಂ ಸದೇವಾಸುರಮಾನುಷಮ್ ॥

ಅನುವಾದ

ಮನುಷ್ಯರೆಲ್ಲರೂ ತಮ್ಮ ಸ್ವಭಾವಕ್ಕೆ (ಹಿಂದಿನ ಸಂಸ್ಕಾರಕ್ಕೆ) ಅಧೀನರಾಗಿದ್ದಾರೆ. ಅವರು ಅದನ್ನೇ ಅನುಸರಿಸುತ್ತಾರೆ. ಇಷ್ಟೇ ಅಲ್ಲ, ದೇವತೆಗಳು, ಅಸುರರು, ಮನುಷ್ಯರು-ಇವರಿಂದ ಕೂಡಿದ ಈ ಜಗತ್ತೆಲ್ಲವೂ ಸ್ವಭಾವದಲ್ಲೇ ನೆಲೆ ನಿಂತಿದೆ. ॥16॥

(ಶ್ಲೋಕ-17)

ಮೂಲಮ್

ದೇಹಾನುಚ್ಚಾವಚಾನ್ಜಂತುಃ ಪ್ರಾಪ್ಯೋತ್ಸೃಜತಿ ಕರ್ಮಣಾ ।
ಶತ್ರುರ್ಮಿತ್ರಮುದಾಸೀನಃ ಕರ್ಮೈವ ಗುರುರೀಶ್ವರಃ ॥

ಅನುವಾದ

ಜೀವನು ತನ್ನ ಕರ್ಮಕ್ಕೆ ಅನುಸಾರವೇ ಉತ್ತಮ ಅಥವಾ ಅಧಮ ಶರೀರಗಳನ್ನು ಪಡೆಯುತ್ತಾನೆ ಹಾಗೂ ತೊರೆಯುತ್ತಾರೆ. ತನ್ನ ಕರ್ಮಕ್ಕನುಸಾರವೇ ಇವನು ಶತ್ರು, ಇವನು ಮಿತ್ರ, ಇವನು ಉದಾಸೀನ ಎಂದು ವ್ಯವ ಹರಿಸುತ್ತಾನೆ. ಕರ್ಮವೇ ಗುರು, ಕರ್ಮವೇ ಈಶ್ವರನು. ॥17॥

(ಶ್ಲೋಕ-18)

ಮೂಲಮ್

ತಸ್ಮಾತ್ಸಂಪೂಜಯೇತ್ಕರ್ಮ ಸ್ವಭಾವಸ್ಥಃ ಸ್ವಕರ್ಮಕೃತ್ ।
ಅಂಜಸಾ ಯೇನ ವರ್ತೇತ ತದೇವಾಸ್ಯ ಹಿ ದೈವತಮ್ ॥

ಅನುವಾದ

ಅದಕ್ಕಾಗಿ ತಂದೆಯವರೇ! ಮನುಷ್ಯನು ತನ್ನ ಪೂರ್ವಸಂಸ್ಕಾರಕ್ಕನುಸಾರ ಬಂದಿರುವ ವರ್ಣ ಮತ್ತು ಆಶ್ರಮಕ್ಕೆ ಅನುಕೂಲವಾದ ಧರ್ಮಗಳನ್ನೇ ಪಾಲಿಸುತ್ತಾ ಕರ್ಮವನ್ನೇ ಆದರಿಸಬೇಕು. ಯಾವುದರಿಂದ ಮನುಷ್ಯನ ಜೀವನ ನಿರ್ವಾಹವು ಸುಗಮವಾಗಿ ನಡೆಯುವುದೋ ಅದೇ ಅವನಿಗೆ ಇಷ್ಟದೇವತೆಯಾಗಿರುತ್ತದೆ. ॥18॥

(ಶ್ಲೋಕ-19)

ಮೂಲಮ್

ಆಜೀವ್ಯೈಕತರಂ ಭಾವಂ ಯಸ್ತ್ವನ್ಯಮುಪಜೀವತಿ ।
ನ ತಸ್ಮಾದ್ವಿಂದತೇ ಕ್ಷೇಮಂ ಜಾರಂ ನಾರ್ಯಸತೀ ಯಥಾ ॥

ಅನುವಾದ

ತನ್ನ ವಿವಾಹಿತ ಪತಿಯನ್ನು ತೊರೆದು ಜಾರನನ್ನು ಸೇವಿಸುವ ವ್ಯಭಿಚಾರಿಣಿ ಸ್ತ್ರೀಯು ಎಂದಿಗೂ ಶಾಂತಿಯನ್ನು ಪಡೆಯಲಾರಳು. ಹಾಗೆಯೇ ತನ್ನ ಜೀವನ ನಿರ್ವಾಹ ನಡೆಸುವ ಒಂದು ದೇವತೆಯನ್ನು ಬಿಟ್ಟು ಬೇರೆ ದೇವರನ್ನು ಉಪಾಸಿಸುವ ಮನುಷ್ಯನಿಗೆ ಎಂದಿಗೂ ಸುಖವು ಸಿಗಲಾರದು. ॥19॥

(ಶ್ಲೋಕ-20)

ಮೂಲಮ್

ವರ್ತೇತ ಬ್ರಹ್ಮಣಾ ವಿಪ್ರೋ ರಾಜನ್ಯೋ ರಕ್ಷಯಾ ಭುವಃ ।
ವೈಶ್ಯಸ್ತು ವಾರ್ತಯಾ ಜೀವೇಚ್ಛೂದ್ರಸ್ತು ದ್ವಿಜಸೇವಯಾ ॥

ಅನುವಾದ

ಬ್ರಾಹ್ಮಣನು ಅಧ್ಯಯನ-ಅಧ್ಯಾಪನದಿಂದ, ಕ್ಷತ್ರಿಯನು ಪ್ರಜಾಪಾಲನೆಯಿಂದ, ವೈಶ್ಯನು ವಾರ್ತೆಯಿಂದ ಮತ್ತು ಶೂದ್ರನು ತ್ರಿವರ್ಣದವರ ಸೇವೆಯಿಂದ ಜೀವನವನ್ನು ನಿರ್ವಹಿಸಬೇಕು. ॥20॥

(ಶ್ಲೋಕ-21)

ಮೂಲಮ್

ಕೃಷಿವಾಣಿಜ್ಯಗೋರಕ್ಷಾ ಕುಸೀದಂ ತುರ್ಯಮುಚ್ಯತೇ ।
ವಾರ್ತಾ ಚತುರ್ವಿಧಾ ತತ್ರ ವಯಂ ಗೋವೃತ್ತಯೋನಿಶಮ್ ॥

ಅನುವಾದ

ವೈಶ್ಯರ ವಾರ್ತೆಯು - ಕೃಷಿ, ವಾಣಿಜ್ಯ, ಗೋರಕ್ಷಣೆ ಮತ್ತು ಬಡ್ಡಿ ಪಡೆಯುವುದು ಎಂಬ ನಾಲ್ಕು ವಿಧವಾಗಿದೆ. ನಾವುಗಳು ಆ ನಾಲ್ಕರಲ್ಲಿ ಕೇವಲ ಗೋರಕ್ಷಣೆಯನ್ನೇ ಹಿಂದಿನಿಂದಲೂ ಮಾಡುತ್ತಾ ಬಂದಿರುವೆವು. ॥21॥

(ಶ್ಲೋಕ-22)

ಮೂಲಮ್

ಸತ್ತ್ವಂ ರಜಸ್ತಮ ಇತಿ ಸ್ಥಿತ್ಯುತ್ಪತ್ಯಂತಹೇತವಃ ।
ರಜಸೋತ್ಪದ್ಯತೇ ವಿಶ್ವಮನ್ಯೋನ್ಯಂ ವಿವಿಧಂ ಜಗತ್ ॥

ಅನುವಾದ

ಅಪ್ಪಾ! ಈ ಪ್ರಪಂಚದ ಸ್ಥಿತಿ-ಉತ್ಪತ್ತಿ-ಲಯಗಳು ಕ್ರಮವಾಗಿ ಸತ್ತ್ವಗುಣ, ರಜೋಗುಣ ಮತ್ತು ತಮೋಗುಣಗಳಿಂದ ಆಗುತ್ತದೆ. ವಿವಿಧ ರೀತಿಯ ಈ ಜಗತ್ತು ಸ್ತ್ರೀ-ಪುರುಷರ ಸಂಯೋಗದಿಂದ ರಜೋಗುಣದ ಮೂಲಕ ಹುಟ್ಟುತ್ತದೆ. ॥22॥

(ಶ್ಲೋಕ-23)

ಮೂಲಮ್

ರಜಸಾ ಚೋದಿತಾ ಮೇಘಾ ವರ್ಷಂತ್ಯಂಬೂನಿ ಸರ್ವತಃ ।
ಪ್ರಜಾಸ್ತೈರೇವ ಸಿದ್ಧ್ಯಂತಿ ಮಹೇಂದ್ರಃ ಕಿಂ ಕರಿಷ್ಯತಿ ॥

ಅನುವಾದ

ಅದೇ ರಜೋಗುಣದ ಪ್ರೇರಣೆಯಿಂದ ಮೇಘಗಳು ಎಲ್ಲೆಡೆ ನೀರು ಸುರಿಸುತ್ತವೆ. ಅದರಿಂದ ಅನ್ನವೂ ಮತ್ತು ಅನ್ನದಿಂದ ಸಮಸ್ತ ಜೀವರ ಜೀವನ ನಡೆಯುತ್ತದೆ. ಇದರಲ್ಲಿ ಇಂದ್ರನ ಸಂಬಂಧವೇನಿದೆ? ಅವನೇನು ಮಾಡಬಲ್ಲನು? ॥23॥

(ಶ್ಲೋಕ-24)

ಮೂಲಮ್

ನ ನಃ ಪುರೋ ಜನಪದಾ ನ ಗ್ರಾಮಾ ನ ಗೃಹಾ ವಯಮ್ ।
ನಿತ್ಯಂ ವನೌಕಸಸ್ತಾತ ವನಶೈಲನಿವಾಸಿನಃ ॥

ಅನುವಾದ

ತಂದೆಯವರೇ! ನಮ್ಮ ಅಧೀನದಲ್ಲಿ ಯಾವುದೇ ರಾಜ್ಯವಾಗಲೀ, ಪಟ್ಟಣವಾಗಲೀ, ಊರಾಗಲೀ, ಹಳ್ಳಿಯಾಗಲೀ ಇರುವುದಿಲ್ಲ. ನಮಗೆ ಮನೆ-ಮಠಗಳೂ ಇಲ್ಲ. ನಾವಾದರೋ ವನವಾಸಿಗಳು. ವನ ಮತ್ತು ಪರ್ವತವೇ ನಮ್ಮ ಮನೆಯಾಗಿದೆ.॥24॥

(ಶ್ಲೋಕ-25)

ಮೂಲಮ್

ತಸ್ಮಾದ್ಗವಾಂ ಬ್ರಾಹ್ಮಣಾನಾಮದ್ರೇಶ್ಚಾರಭ್ಯತಾಂ ಮಖಃ ।
ಯ ಇಂದ್ರಯಾಗಸಂಭಾರಾಸ್ತೈರಯಂ ಸಾಧ್ಯತಾಂ ಮಖಃ ॥

ಅನುವಾದ

ಆದುದರಿಂದ ನಾವುಗಳು ಗೋವುಗಳ, ಬ್ರಾಹ್ಮಣರ ಮತ್ತು ಗಿರಿರಾಜನಾದ ಗೋವರ್ಧನದ ಕುರಿತು ಯಜ್ಞವನ್ನು ಪ್ರಾರಂಭಿಸೋಣ. ಇಂದ್ರ ಯಜ್ಞಕ್ಕಾಗಿ ಸಂಗ್ರಹಿಸಿದ ಸಾಮಗ್ರಿಗಳಿಂದಲೇ ಈ ಯಜ್ಞಾನುಷ್ಠಾನ ನಡೆಯಲಿ. ॥25॥

(ಶ್ಲೋಕ-26)

ಮೂಲಮ್

ಪಚ್ಯಂತಾಂ ವಿವಿಧಾಃ ಪಾಕಾಃ ಸೂಪಾಂತಾಃ ಪಾಯಸಾದಯಃ ।
ಸಂಯಾವಾಪೂಪಶಷ್ಕುಲ್ಯಃ ಸರ್ವದೋಹಶ್ಚ ಗೃಹ್ಯತಾಮ್ ॥

ಅನುವಾದ

ಈ ಯಜ್ಞಕ್ಕಾಗಿ ಅನೇಕ ಪ್ರಕಾರದ ಪಕ್ವಾನ್ನಗಳೂ, ಪಾಯಸ, ಕಜ್ಜಾಯಗಳೂ, ಚಕ್ಕುಲಿಗಳೂ ಮೊದಲ್ಗೊಂಡು ತೊವ್ವೆಯವರೆಗಿನ ಬಗೆ-ಬಗೆಯ ಅಡಿಗೆಗಳನ್ನು ಸಿದ್ಧಪಡಿಸಿರಿ. ಇಂದು ಕರೆದ ಹಸುಗಳ ಎಲ್ಲ ಹಾಲನ್ನು ಕೂಡಿಹಾಕಿರಿ. ॥26॥

(ಶ್ಲೋಕ-27)

ಮೂಲಮ್

ಹೂಯಂತಾಮಗ್ನಯಃ ಸಮ್ಯಗ್ಬ್ರಾಹ್ಮಣೈರ್ಬ್ರಹ್ಮವಾದಿಭಿಃ ।
ಅನ್ನಂ ಬಹುವಿಧಂ ತೇಭ್ಯೋ ದೇಯಂ ವೋ ಧೇನುದಕ್ಷಿಣಾಃ ॥

ಅನುವಾದ

ಬ್ರಹ್ಮವಾದಿಗಳಾದ ಬ್ರಾಹ್ಮಣರು ಅಗ್ನಿಯಲ್ಲಿ ಚೆನ್ನಾಗಿ ಹವನ ಮಾಡಲಿ. ಅವರಿಗೆ ಅನೇಕ ವಿಧದ ಭಕ್ಷ್ಯಗಳಿಂದ ಕೂಡಿದ ಊಟ ಮಾಡಿಸಿ, ಗೋವುಗಳನ್ನೂ, ದಕ್ಷಿಣೆಯನ್ನೂ ದಾನ ಮಾಡಿರಿ.॥27॥

(ಶ್ಲೋಕ-28)

ಮೂಲಮ್

ಅನ್ಯೇಭ್ಯಶ್ಚಾಶ್ವಚಾಂಡಾಲಪತಿತೇಭ್ಯೋ ಯಥಾರ್ಹತಃ ।
ಯವಸಂ ಚ ಗವಾಂ ದತ್ತ್ವಾ ಗಿರಯೇ ದೀಯತಾಂ ಬಲಿಃ ॥

ಅನುವಾದ

ಬಳಿಕ ಇತರ ವರ್ಣದವರಿಗೂ, ಶುನಕ-ಚಾಂಡಾಲ ಪತಿತರಿಗೂ ಯಥಾಯೋಗ್ಯವಾಗಿ ಭೋಜನವನ್ನು ಮಾಡಿಸಿ, ಗೋವುಗಳಿಗೆ ಹುಲ್ಲು ತಿನ್ನಿಸಿ, ಗೋವರ್ಧನ ಗಿರಿಯನ್ನು ಪೂಜಿಸಿರಿ. ॥28॥

(ಶ್ಲೋಕ-29)

ಮೂಲಮ್

ಸ್ವಲಂಕೃತಾ ಭುಕ್ತವಂತಃ ಸ್ವನುಲಿಪ್ತಾಃ ಸುವಾಸಸಃ ।
ಪ್ರದಕ್ಷಿಣಂ ಚ ಕುರುತ ಗೋವಿಪ್ರಾನಲಪರ್ವತಾನ್ ॥

ಅನುವಾದ

ಬಳಿಕ ನೀವು ಭೋಜನವನ್ನು ಮಾಡಿ, ಹೊಸಬಟ್ಟೆಗಳನ್ನು ಧರಿಸಿ, ಗಂಧವನ್ನು ಪೂಸಿಕೊಂಡು ಅಲಂಕೃತರಾಗಿ ಅಗ್ನಿಗೆ, ಗೋವುಗಳಿಗೆ, ಬ್ರಾಹ್ಮಣರಿಗೆ, ಪರ್ವತರಾಜನಿಗೂ ಪ್ರದಕ್ಷಿಣೆ ಮಾಡಿರಿ. ॥29॥

(ಶ್ಲೋಕ-30)

ಮೂಲಮ್

ಏತನ್ಮಮ ಮತಂ ತಾತ ಕ್ರಿಯತಾಂ ಯದಿ ರೋಚತೇ ।
ಅಯಂ ಗೋಬ್ರಾಹ್ಮಣಾದ್ರೀಣಾಂ ಮಹ್ಯಂ ಚ ದಯಿತೋ ಮಖಃ ॥

ಅನುವಾದ

ಅಪ್ಪಾ! ಇದು ನಿಮಗೆಲ್ಲರಿಗೆ ಉಚಿತವೆನಿಸಿದಲ್ಲಿ ನಾನು ಹೇಳಿದಂತೆ ಮಾಡಬಹುದು. ಈ ಯಜ್ಞವು ಗೋ-ಬ್ರಾಹ್ಮಣ-ಗಿರಿರಾಜನಾದ ಗೋವರ್ಧನನಿಗೆ ಪ್ರಿಯವಾಗಿದೆ. ನನಗೂ ಈ ಯಜ್ಞವೇ ಅತ್ಯಂತ ಪ್ರಿಯವಾಗಿದೆ. ॥30॥

ಮೂಲಮ್

(ಶ್ಲೋಕ-31)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಕಾಲಾತ್ಮನಾ ಭಗವತಾ ಶಕ್ರದರ್ಪಂ ಜಿಘಾಂಸತಾ ।
ಪ್ರೋಕ್ತಂ ನಿಶಮ್ಯ ನಂದಾದ್ಯಾಃ ಸಾಧ್ವಗೃಹ್ಣಂತ ತದ್ವಚಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಕಾಲಾತ್ಮಕನಾದ ಭಗವಂತನಿಗೆ ಇಂದ್ರನ ಅಹಂಕಾರ ಮುರಿಯುವುದೇ ಆಶಯವಾಗಿತ್ತು. ನಂದಗೋಪನೇ ಮೊದಲಾದವರು, ಅವನ ಮಾತನ್ನು ಕೇಳಿ ಸಾಧು! ಸಾಧು! ಬಹಳ ಒಳ್ಳೆಯದೆಂದು ಹೇಳುತ್ತಾ ಸಂತೋಷದಿಂದ ಅಂಗೀಕರಿಸಿದರು. ॥31॥

(ಶ್ಲೋಕ-32)

ಮೂಲಮ್

ತಥಾ ಚ ವ್ಯದಧುಃ ಸರ್ವಂ ಯಥಾಹ ಮಧುಸೂದನಃ ।
ವಾಚಯಿತ್ವಾ ಸ್ವಸ್ತ್ಯಯನಂ ತದ್ದ್ರವ್ಯೇಣ ಗಿರಿದ್ವಿಜಾನ್ ॥

(ಶ್ಲೋಕ-33)

ಮೂಲಮ್

ಉಪಹೃತ್ಯ ಬಲೀನ್ ಸರ್ವಾನಾದೃತಾ ಯವಸಂ ಗವಾಮ್ ।
ಗೋಧನಾನಿ ಪುರಸ್ಕೃತ್ಯ ಗಿರಿಂ ಚಕ್ರುಃ ಪ್ರದಕ್ಷಿಣಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದಂತೆಯೆ ಯಜ್ಞವನ್ನು ಪ್ರಾರಂಭಿಸಿದರು. ಮೊದಲಿಗೆ ಬ್ರಾಹ್ಮಣರಿಂದ ಸ್ವಸ್ತಿವಾಚನ ಮಾಡಿಸಿ, ಅವರಿಂದ ಹೋಮ ಹವನಾದಿಗಳನ್ನು ಮಾಡಿಸಿ ಅವರಿಗೆ ಭೂರಿದಕ್ಷಿಣೆಯನ್ನಿತ್ತರು. ಗಿರಿರಾಜನನ್ನು ಅನೇಕ ವಿಧದಿಂದ ಪೂಜಿಸಿದರು. ಗೋವುಗಳಿಗೆ ಹುಲ್ಲನ್ನು ತಿನ್ನಿಸಿದ ಬಳಿದ ನಂದಗೋಪನೇ ಮೊದಲಾದ ಗೋಪರು ಗೋವುಗಳನ್ನು ಮುಂದಿಟ್ಟುಕೊಂಡು ಗಿರಿರಾಜನ ಪ್ರದಕ್ಷಿಣೆ ಮಾಡಿದರು. ॥32-33॥

(ಶ್ಲೋಕ-34)

ಮೂಲಮ್

ಅನಾಂಸ್ಯನಡುದ್ಯುಕ್ತಾನಿ ತೇ ಚಾರುಹ್ಯ ಸ್ವಲಂಕೃತಾಃ ।
ಗೋಪ್ಯಶ್ಚ ಕೃಷ್ಣವೀರ್ಯಾಣಿ ಗಾಯಂತ್ಯಃ ಸದ್ವಿಜಾಶಿಷಃ ॥

ಅನುವಾದ

ಬ್ರಾಹ್ಮಣರ ಆಶೀರ್ವಾದಗಳನ್ನು ಪಡೆದು ಗೋಪ-ಗೋಪಿಯರು ಚೆನ್ನಾಗಿ ಸಿಂಗರಿಸಿಕೊಂಡು ಎತ್ತುಗಳು ಹೂಡಿದ ಬಂಡಿಗಳಲ್ಲಿ ಕುಳಿತುಕೊಂಡು ಭಗವಾನ್ ಶ್ರೀಕೃಷ್ಣನ ಲೀಲೆಗಳನ್ನು ಹಾಡುತ್ತಾ ಗೋವರ್ಧನ ಗಿರಿಯ ಪ್ರದಕ್ಷಿಣೆ ಮಾಡತೊಡಗಿದರು. ॥34॥

(ಶ್ಲೋಕ-35)

ಮೂಲಮ್

ಕೃಷ್ಣಸ್ತ್ವನ್ಯತಮಂ ರೂಪಂ ಗೋಪವಿಶ್ರಂಭಣಂ ಗತಃ ।
ಶೈಲೋಸ್ಮೀತಿಬ್ರುವನ್ ಭೂರಿ ಬಲಿಮಾದದ್ಬೃಹದ್ವಪುಃ ॥

ಅನುವಾದ

ಶ್ರೀಕೃಷ್ಣನು ಗೋಪಾಲಕರಿಗೆ ವಿಶ್ವಾಸ ವನ್ನುಂಟುಮಾಡಲಿಕ್ಕಾಗಿ ಗೋವರ್ಧನ ಗಿರಿಯಮೇಲೆ ಇನ್ನೊಂದು ವಿಶಾಲದೇಹವನ್ನು ಧರಿಸಿ ಪ್ರಕಟನಾದನು. ‘ನಾನು ಗಿರಿರಾಜನಾಗಿರುವೆ’ ಹೀಗೆ ಹೇಳುತ್ತಾ ಅವರು ಅರ್ಪಿಸಿದ ಪೂಜೆಯನ್ನು ಸ್ವೀಕರಿಸಿ, ಭಕ್ಷ್ಯ-ಭೋಜ್ಯಗಳನ್ನು ಸಾಕ್ಷಾತ್ತಾಗಿ ಭುಂಜಿಸಿದನು. ॥35॥

(ಶ್ಲೋಕ-36)

ಮೂಲಮ್

ತಸ್ಮೈ ನಮೋ ವ್ರಜಜನೈಃ ಸಹ ಚಕ್ರೇತ್ಮನಾತ್ಮನೇ ।
ಅಹೋ ಪಶ್ಯತ ಶೈಲೋಸೌ ರೂಪೀ ನೋನುಗ್ರಹಂ ವ್ಯಧಾತ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ತನ್ನದೇ ಆದ ಆ ಸ್ವರೂಪಕ್ಕೆ ಇತರ ವ್ರಜವಾಸಿಗಳೊಂದಿಗೆ ನಮಸ್ಕರಿಸಿದನು ಮತ್ತು ಹೇಳಿದನು - ‘ನೋಡಿ, ನೋಡಿ! ಎಂತಹ ಅಚ್ಚರಿಯಾಗಿದೆ! ಗಿರಿರಾಜನೆ ಸಾಕ್ಷಾತ್ತಾಗಿ ಪ್ರಕಟನಾಗಿ ನಮ್ಮ ಮೇಲೆ ಕೃಪೆಯನ್ನು ತೋರಿರುವನು. ॥36॥

(ಶ್ಲೋಕ-37)

ಮೂಲಮ್

ಏಷೋವಜಾನತೋ ಮರ್ತ್ಯಾನ್ಕಾಮರೂಪೀ ವನೌಕಸಃ ।
ಹಂತಿ ಹ್ಯಸ್ಮೈ ನಮಸ್ಯಾಮಃ ಶರ್ಮಣೇ ಆತ್ಮನೋ ಗವಾಮ್ ॥

ಅನುವಾದ

ಬಂಧುಗಳೇ! ಈ ಪರ್ವತವು ಯಾವುದೇ ರೂಪವನ್ನು ಧರಿಸಬಲ್ಲದು. ಇದನ್ನು ತಿರಸ್ಕರಿಸುವ ವನವಾಸಿಗಳನ್ನು ಈ ಪರ್ವವು ಕೊಂದೇಬಿಡುತ್ತದೆ. ಬನ್ನಿರಿ, ನಮ್ಮ ಮತ್ತು ಗೋವುಗಳ ಕ್ಷೇಮಕ್ಕಾಗಿ ಈ ಗಿರಿರಾಜನಿಗೆ ನಮಸ್ಕರಿಸೋಣ.’ ॥37॥

(ಶ್ಲೋಕ-38)

ಮೂಲಮ್

ಇತ್ಯದ್ರಿಗೋದ್ವಿಜಮಖಂ ವಾಸುದೇವಪ್ರಣೋದಿತಾಃ ।
ಯಥಾ ವಿಧಾಯ ತೇ ಗೋಪಾಃ ಸಹಕೃಷ್ಣಾ ವ್ರಜಂ ಯಯುಃ ॥

ಅನುವಾದ

ಹೀಗೆ ಭಗವಾನ್ ಶ್ರೀಕೃಷ್ಣನ ಪ್ರೇರಣೆಯಿಂದ ನಂದ ಗೋಪನೇ ಮೊದಲಾದ ಹಿರಿಯ-ಕಿರಿಯ ಗೋಪಾಲಕರು ಗಿರಿರಾಜನನ್ನು, ಗೋವುಗಳನ್ನು, ಬ್ರಾಹ್ಮಣರನ್ನು ವಿಧಿವತ್ತಾಗಿ ಪೂಜಿಸಿ ಮತ್ತೆ ಶ್ರೀಕೃಷ್ಣನೊಂದಿಗೆ ಎಲ್ಲರೂ ವ್ರಜಕ್ಕೆ ಮರಳಿ ಬಂದರು. ॥38॥

ಅನುವಾದ (ಸಮಾಪ್ತಿಃ)

ಇಪ್ಪತ್ತನಾಲ್ಕನೆಯ ಅಧ್ಯಾಯವು ಮುಗಿಯಿತು. ॥24॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಚತುರ್ವಿಂಶೋಽಧ್ಯಾಯಃ ॥24॥