೨೩

[ಇಪ್ಪತ್ತಮೂರನೆಯ ಅಧ್ಯಾಯ]

ಭಾಗಸೂಚನಾ

ಯಜ್ಞಪತ್ನಿಯರ ಮೇಲೆ ಕೃಪೆ

(ಶ್ಲೋಕ-1)

ಮೂಲಮ್ (ವಾಚನಮ್)

ಗೋಪಾ ಊಚುಃ

ಮೂಲಮ್

ರಾಮ ರಾಮ ಮಹಾವೀರ್ಯ ಕೃಷ್ಣ ದುಷ್ಟನಿಬರ್ಹಣ ।
ಏಷಾ ವೈ ಬಾಧತೇ ಕ್ಷುನ್ನಸ್ತಚ್ಛಾಂತಿಂ ಕರ್ತುಮರ್ಹಥಃ ॥

ಅನುವಾದ

ಗೋಪಾಲಕರು ಹೇಳುತ್ತಾರೆ — ನಯನಾಭಿರಾಮ ಬಲರಾಮನೇ! ನೀನು ಮಹಾಪರಾಕ್ರಮಿಯಾಗಿರುವೆ. ಚಿತ್ತ ಚೋರನಾದ ಶ್ಯಾಮಸುಂದರನೇ! ನೀನು ಹಲವಾರು ದುಷ್ಟರನ್ನು ಸಂಹರಿಸಿರುವೆ. ಈಗ ಈ ಹಸಿವೂ ಕೂಡ ನಮ್ಮನ್ನು ಕಾಡುತ್ತಿದೆ. ಆದ್ದರಿಂದ ನೀವಿಬ್ಬರೂ ಈ ಹಸಿವನ್ನು ಶಾಂತಗೊಳಿಸಲು ಏನಾದರೂ ಉಪಾಯ ಮಾಡಿರಿ. ॥1॥

(ಶ್ಲೋಕ-2)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ವಿಜ್ಞಾಪಿತೋ ಗೋಪೈರ್ಭಗವಾನ್ ದೇವಕೀಸುತಃ ।
ಭಕ್ತಾಯಾ ವಿಪ್ರಭಾರ್ಯಾಯಾಃ ಪ್ರಸೀದನ್ನಿದಮಬ್ರವೀತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಓ ಪರೀಕ್ಷಿತನೇ! ದೇವಕೀನಂದನ ಶ್ರೀಕೃಷ್ಣನಲ್ಲಿ ಗೋಪಾಲಕರು ಹೀಗೆ ಪ್ರಾರ್ಥಿಸಿದಾಗ ಅವನು ಮಥುರೆಯ ತನ್ನ ಭಕ್ತರಾದ ಬ್ರಾಹ್ಮಣಪತ್ನಿಯರ ಮೇಲೆ ಅನುಗ್ರಹವನ್ನು ತೋರಲಿಕ್ಕಾಗಿ ಹೀಗೆಂದನು - ॥2॥

(ಶ್ಲೋಕ-3)

ಮೂಲಮ್

ಪ್ರಯಾತ ದೇವಯಜನಂ ಬ್ರಾಹ್ಮಣಾ ಬ್ರಹ್ಮವಾದಿನಃ ।
ಸತ್ರಮಾಂಗಿರಸಂ ನಾಮ ಹ್ಯಾಸತೇ ಸ್ವರ್ಗಕಾಮ್ಯಯಾ ॥

ಅನುವಾದ

ಪ್ರಿಯ ಮಿತ್ರರೇ! ಇಲ್ಲಿಂದ ಸ್ವಲ್ಪ ದೂರದಲ್ಲೇ ವೇದವಾದಿಗಳಾದ ಬ್ರಾಹ್ಮಣರು ಸ್ವರ್ಗದ ಕಾಮನೆಯಿಂದ ಆಂಗಿರಸವೆಂಬ ಯಜ್ಞವನ್ನು ಮಾಡುತ್ತಿದ್ದಾರೆ. ನೀವು ಅವರ ಯಜ್ಞಶಾಲೆಗೆ ಹೋಗಿರಿ. ॥3॥

(ಶ್ಲೋಕ-4)

ಮೂಲಮ್

ತತ್ರ ಗತ್ವೌದನಂ ಗೋಪಾ ಯಾಚತಾಸ್ಮದ್ವಿಸರ್ಜಿತಾಃ ।
ಕೀರ್ತಯಂತೋ ಭಗವತ ಆರ್ಯಸ್ಯ ಮಮಚಾಭಿಧಾಮ್ ॥

ಅನುವಾದ

ಗೋಪಾಲಕರೇ! ನಾನು ಕಳಿಸಿದ್ದರಿಂದ ನೀವು ಅಲ್ಲಿಗೆ ಹೋಗಿ ನನ್ನ ಅಣ್ಣ ಬಲರಾಮನ ಮತ್ತು ನನ್ನ ಹೆಸರನ್ನು ಹೇಳಿ ಸ್ವಲ್ಪ ಅನ್ನ ಭೋಜನ ಸಾಮಗ್ರಿಗಳನ್ನು ಅವರಿಂದ ಕೇಳಿ ತನ್ನಿರಿ. ॥4॥

(ಶ್ಲೋಕ-5)

ಮೂಲಮ್

ಇತ್ಯಾದಿಷ್ಟಾ ಭಗವತಾ ಗತ್ವಾಯಾಚಂತ ತೇ ತಥಾ ।
ಕೃತಾಂಜಲಿಪುಟಾ ವಿಪ್ರಾನ್ ದಂಡವತ್ಪತಿತಾ ಭುವಿ ॥

ಅನುವಾದ

ಭಗವಂತನು ಹೀಗೆ ಆಜ್ಞಾಪಿಸಿದಾಗ ಗೊಲ್ಲಬಾಲಕರು ಆ ಬ್ರಾಹ್ಮಣರ ಯಜ್ಞಶಾಲೆಗೆ ಹೋಗಿ ಅವರಲ್ಲಿ ಭಗವಂತನ ಆಜ್ಞೆಯಂತೆ ಅನ್ನವನ್ನು ಯಾಚಿಸಿದರು. ಮೊದಲಿಗೆ ಅವರು ಸಾಷ್ಟಾಂಗ ನಮಸ್ಕಾರಮಾಡಿ ಮತ್ತೆ ಕೈ ಜೋಡಿಸಿಕೊಂಡು ಅವರಲ್ಲಿ ಕೇಳಿಕೊಂಡರು. ॥5॥

(ಶ್ಲೋಕ-6)

ಮೂಲಮ್

ಹೇ ಭೂಮಿದೇವಾಃ ಶೃಣುತ ಕೃಷ್ಣಸ್ಯಾದೇಶಕಾರಿಣಃ ।
ಪ್ರಾಪ್ತಾನ್ಜಾನೀತ ಭದ್ರಂ ವೋ ಗೋಪಾನ್ನೋ ರಾಮಚೋದಿತಾನ್ ॥

ಅನುವಾದ

ಭೂಸುರೋತ್ತಮರೇ! ನಿಮಗೆ ಮಂಗಳವಾಗಲಿ! ವ್ರಜದ ಗೊಲ್ಲರಾದ ನಾವು ನಿಮ್ಮಲ್ಲಿ ಬೇಡಿಕೊಳ್ಳುವೆವು. ಭಗವಾನ್ ಶ್ರೀಕೃಷ್ಣನು ಮತ್ತು ಬಲರಾಮರು ಇವರ ಅಪ್ಪಣೆಯಂತೆ ನಾವು ನಿಮ್ಮಲ್ಲಿಗೆ ಬಂದಿರುವೆವು. ತಾವು ನಮ್ಮ ಮಾತನ್ನು ಆಲಿಸಿರಿ. ॥6॥

(ಶ್ಲೋಕ-7)

ಮೂಲಮ್

ಗಾಶ್ಚಾರಯಂತಾವವಿದೂರ ಓದನಂ
ರಾಮಾಚ್ಯುತೌ ವೋ ಲಷತೋ ಬುಭುಕ್ಷಿತೌ ।
ತಯೋರ್ದ್ವಿಜಾ ಓದನಮರ್ಥಿನೋರ್ಯದಿ
ಶ್ರದ್ಧಾ ಚ ವೋ ಯಚ್ಛಥ ಧರ್ಮವಿತ್ತಮಾಃ ॥

ಅನುವಾದ

ಭಗವಾನ್ ಶ್ರೀಕೃಷ್ಣ ಬಲರಾಮರು ಹಸುಗಳನ್ನು ಮೇಯಿಸುತ್ತಾ ಇಲ್ಲಿಂದ ಸ್ವಲ್ಪವೇ ಅಂತರದಲ್ಲಿ ಬಂದಿರುವರು. ಅವರಿಗೆ ಹಸಿವಾಗಿದೆ ಹಾಗೂ ನೀವು ಅವರಿಗೆ ಸ್ವಲ್ಪ ಅನ್ನವನ್ನು ನೀಡಬೇಕೆಂದು ಅವರು ಬಯಸುತ್ತಿದ್ದಾರೆ. ವಿಪ್ರೋತ್ತಮರೇ! ನೀವು ಧರ್ಮದ ಮರ್ಮವನ್ನು ಬಲ್ಲವರಾಗಿರುವಿರಿ. ನಿಮಗೆ ಶ್ರದ್ಧೆ ಇದ್ದರೆ ಆ ಭೋಜನಾರ್ಥಿಗಳಿಗೆ ಸ್ವಲ್ಪ ಅನ್ನವನ್ನು ಕೊಡಿರಿ. ॥7॥

(ಶ್ಲೋಕ-8)

ಮೂಲಮ್

ದೀಕ್ಷಾಯಾಃ ಪಶುಸಂಸ್ಥಾಯಾಃ ಸೌತ್ರಾಮಣ್ಯಾಶ್ಚ ಸತ್ತಮಾಃ ।
ಅನ್ಯತ್ರ ದೀಕ್ಷಿತಸ್ಯಾಪಿ ನಾನ್ನಮಶ್ನನ್ಹಿ ದುಷ್ಯತಿ ॥

ಅನುವಾದ

ಸಜ್ಜನರೇ! ಪಶುಬಲಿ ಇರುವ ಯಜ್ಞದಲ್ಲಿ ಮತ್ತು ಸೌತ್ರಾಮಣಿ ಯಜ್ಞದಲ್ಲಿ ದೀಕ್ಷಿತನ ಅನ್ನವನ್ನು ತಿನ್ನಬಾರದು. ಇದಲ್ಲದ ಬೇರೆ ಯಾವುದೇ ಸಮಯದಲ್ಲಿಯೂ ಯಜ್ಞದ ದೀಕ್ಷಿತನ ಅನ್ನವನ್ನು ತಿನ್ನುವುದರಲ್ಲಿ ದೋಷವಿರುವುದಿಲ್ಲ. ॥8॥

(ಶ್ಲೋಕ-9)

ಮೂಲಮ್

ಇತಿ ತೇ ಭಗವದ್ಯಾಚ್ಞ್ಯಾಂ ಶೃಣ್ವಂತೋಪಿ ನ ಶುಶ್ರುವುಃ ।
ಕ್ಷುದ್ರಾಶಾ ಭೂರಿಕರ್ಮಾಣೋ ಬಾಲಿಶಾ ವೃದ್ಧಮಾನಿನಃ ॥

ಅನುವಾದ

ಪರೀಕ್ಷಿತನೇ! ಹೀಗೆ ಭಗವಂತನು ಅನ್ನವನ್ನು ಕೇಳಿದ ಮಾತಿನ ಕಡೆಗೆ ಆ ಬ್ರಾಹ್ಮಣರು ಯಾವುದೇ ಗಮನ ಕೊಡಲಿಲ್ಲ. ಅವರು ಸ್ವರ್ಗದ ತುಚ್ಛ ಫಲವನ್ನೇ ಬಯಸುತ್ತಿದ್ದರು. ಅದಕ್ಕಾಗಿ ಶ್ರಮಸಾಧ್ಯವಾದ ಮಹಾಯಜ್ಞದಲ್ಲಿ ತೊಡಗಿದ್ದರು. ನಿಜ ಹೇಳಬೇಕೆಂದರೆ, ಆ ಬ್ರಾಹ್ಮಣರು ಜ್ಞಾನದ ದೃಷ್ಟಿಯಿಂದ ಬಾಲಕರೇ ಆಗಿದ್ದರೂ ತಮ್ಮನ್ನು ಜ್ಞಾನವೃದ್ಧರೆಂದೇ ತಿಳಿಯುತ್ತಿದ್ದರು. ॥9॥

(ಶ್ಲೋಕ-10)

ಮೂಲಮ್

ದೇಶಃ ಕಾಲಃ ಪೃಥಗ್ದ್ರವ್ಯಂ ಮಂತ್ರತಂತ್ರರ್ತ್ವಿಜೋಗ್ನಯಃ ।
ದೇವತಾ ಯಜಮಾನಶ್ಚ ಕ್ರತುರ್ಧರ್ಮಶ್ಚ ಯನ್ಮಯಃ ॥

ಅನುವಾದ

ಪರೀಕ್ಷಿತನೇ! ದೇಶ, ಕಾಲ, ಅನೇಕ ರೀತಿಯ ಸಾಮಗ್ರಿಗಳು, ಬೇರೆ-ಬೇರೆ ಕರ್ಮಗಳಲ್ಲಿ ವಿಧಿಯುಕ್ತ ಮಂತ್ರಗಳು, ಅನುಷ್ಠಾನ ಪದ್ಧತಿ, ಋತ್ವಿಜ, ಬ್ರಹ್ಮನೇ ಆದಿ ಯಜ್ಞಮಾಡುವವರು, ಅಗ್ನಿ, ದೇವತೆ, ಯಜಮಾನ, ಯಜ್ಞ ಮತ್ತು ಧರ್ಮ - ಇವೆಲ್ಲದರ ರೂಪದಲ್ಲಿ ಏಕಮಾತ್ರ ಭಗವಂತನೇ ಪ್ರಕಟನಾಗುತ್ತಿದ್ದಾನೆ. ॥10॥

(ಶ್ಲೋಕ-11)

ಮೂಲಮ್

ತಂ ಬ್ರಹ್ಮ ಪರಮಂ ಸಾಕ್ಷಾದ್ಭಗವಂತಮಧೋಕ್ಷಜಮ್ ।
ಮನುಷ್ಯದೃಷ್ಟ್ಯಾ ದುಷ್ಪ್ರಜ್ಞಾ ಮರ್ತ್ಯಾತ್ಮಾನೋ ನ ಮೇನಿರೇ ॥

ಅನುವಾದ

ಅಂತಹವನೇ ಇಂದ್ರಿಯಾತೀತ, ಪರಬ್ರಹ್ಮ ಸಾಕ್ಷಾತ್ ಭಗವಾನ್ ಶ್ರೀಕೃಷ್ಣನೇ ಗೋಪಾಲಕರ ಮೂಲಕ ಅನ್ನವನ್ನು ಬೇಡುತ್ತಿರುವನು. ಆದರೆ ತಮ್ಮನ್ನು ಶರೀರವೆಂದೇ ತಿಳಿದಿರುವ ಈ ಮೂರ್ಖರು ಭಗವಂತನನ್ನು ಸಾಮಾನ್ಯ ಮನುಷ್ಯನೆಂದೇ ತಿಳಿದು ಅವನನ್ನು ಸಮ್ಮಾನಿಸಲಿಲ್ಲ. ॥11॥

(ಶ್ಲೋಕ-12)

ಮೂಲಮ್

ನ ತೇ ಯದೋಮಿತಿ ಪ್ರೋಚುರ್ನ ನೇತಿ ಚ ಪರಂತಪ ।
ಗೋಪಾ ನಿರಾಶಾಃ ಪ್ರತ್ಯೇತ್ಯ ತಥೋಚುಃ ಕೃಷ್ಣರಾಮಯೋಃ ॥

ಅನುವಾದ

ಪರೀಕ್ಷಿತನೇ! ಆ ಬ್ರಾಹ್ಮಣರು ಆಗಲಿ ಅಥವಾ ಇಲ್ಲ ಎಂದು ಏನನ್ನೂ ಹೇಳದಿದ್ದಾಗ ಗೊಲ್ಲಬಾಲಕರಿಗೆ ನಿರಾಸೆ ಉಂಟಾಯಿತು. ಅವರು ಮರಳಿ ಬಂದು ಅಲ್ಲಿಯ ಎಲ್ಲ ವೃತ್ತಾಂತವನ್ನು ಬಲರಾಮ-ಕೃಷ್ಣರಿಗೆ ತಿಳಿಸಿದರು. ॥12॥

(ಶ್ಲೋಕ-13)

ಮೂಲಮ್

ತದುಪಾಕರ್ಣ್ಯ ಭಗವಾನ್ ಪ್ರಹಸ್ಯ ಜಗದೀಶ್ವರಃ ।
ವ್ಯಾಜಹಾರ ಪುನರ್ಗೋಪಾನ್ ದರ್ಶಯನ್ ಲೌಕಿಕೀಂ ಗತಿಮ್ ॥

ಅನುವಾದ

ಸಕಲ ಜಗತ್ತಿನ ಸ್ವಾಮಿ ಭಗವಾನ್ ಶ್ರೀಕೃಷ್ಣನು ಅವರ ಮಾತನ್ನು ಕೇಳಿ ನಗತೊಡಗಿದನು. ಜಗತ್ತಿನಲ್ಲಿ ಅಸಲತೆ ಪದೇ-ಪದೇ ಉಂಟಾಗುತ್ತದೆ, ಆದರೆ ಅದರಿಂದ ನಿರಾಶರಾಗಬಾರದು, ಪುನಃ ಪುನಃ ಪ್ರಯತ್ನ ಮಾಡುವುದರಿಂದ ಖಂಡಿತವಾಗಿ ಸಫಲತೆ ಉಂಟಾಗುತ್ತದೆ ಎಂದು ಗೋಪಾಲಕರ ಬಳಿ ಅವನು ಹೇಳಿ ಮತ್ತೆ ಇಂತೆಂದನು. ॥13॥

(ಶ್ಲೋಕ-14)

ಮೂಲಮ್

ಮಾಂ ಜ್ಞಾಪಯತ ಪತ್ನೀಭ್ಯಃ ಸಸಂಕರ್ಷಣಮಾಗತಮ್ ।
ದಾಸ್ಯಂತಿ ಕಾಮಮನ್ನಂ ವಃ ಸ್ನಿಗ್ಧಾ ಮಯ್ಯುಷಿತಾ ಧಿಯಾ ॥

ಅನುವಾದ

ಪ್ರಿಯರಾದ ಗೋಪಬಾಲಕರೇ! ಈ ಬಾರಿ ನೀವುಗಳು ಆ ಬ್ರಾಹ್ಮಣರ ಪತ್ನಿಯರ ಬಳಿಗೆ ಹೋಗಿ ಅವರಲ್ಲಿ ರಾಮ-ಶ್ಯಾಮರು ಇಲ್ಲಿಗೆ ಬಂದಿರುವರು ಎಂದು ಹೇಳಿರಿ. ನೀವು ಬಯಸಿದಷ್ಟು ಭೋಜನವನ್ನು ಅವರು ನಿಮಗೆ ಕೊಡುವರು. ಅವರು ನನ್ನನ್ನು ಬಹಳವಾಗಿ ಪ್ರೀತಿಸುತ್ತಾರೆ. ಅವರ ಮನಸ್ಸು ಸದಾಕಾಲ ನನ್ನಲ್ಲೇ ತೊಡಗಿರುತ್ತದೆ. ॥14॥

(ಶ್ಲೋಕ-15)

ಮೂಲಮ್

ಗತ್ವಾಥ ಪತ್ನೀಶಾಲಾಯಾಂ ದೃಷ್ಟ್ವಾಸೀನಾಃ ಸ್ವಲಂಕೃತಾಃ ।
ನತ್ವಾ ದ್ವಿಜಸತೀರ್ಗೋಪಾಃ ಪ್ರಶ್ರಿತಾ ಇದಮಬ್ರುವನ್ ॥

ಅನುವಾದ

ಶ್ರೀಕೃಷ್ಣನ ಅಪ್ಪಣೆಯಂತೆ ಗೋಪಾಲಕರು ಪತ್ನೀಶಾಲೆಗೆ ಹೋದರು. ಅಲ್ಲಿ ಬ್ರಾಹ್ಮಣಪತ್ನಿಯರು ಸುಂದರವಾದ ವಸ್ತ್ರಗಳನ್ನುಟ್ಟು ಸರ್ವಾಲಂಕಾರಗಳಿಂದ ಭೂಷಿತೆಯರಾಗಿ ಕುಳಿತಿದ್ದರು. ಗೋಪಾಲಕರು ದ್ವಿಜಪತ್ನಿಯರಿಗೆ ನಮಸ್ಕರಿಸಿ ವೀನಿತರಾಗಿ ಹೀಗೆ ಹೇಳಿದರು. ॥15॥

(ಶ್ಲೋಕ-16)

ಮೂಲಮ್

ನಮೋ ವೋ ವಿಪ್ರಪತ್ನೀಭ್ಯೋ ನಿಬೋಧತ ವಚಾಂಸಿ ನಃ ।
ಇತೋವಿದೂರೇ ಚರತಾ ಕೃಷ್ಣೇನೇಹೇಷಿತಾ ವಯಮ್ ॥

ಅನುವಾದ

ವಿಪ್ರಪತ್ನಿಯರಾದ ನಿಮಗೆ ನಾವು ನಮಸ್ಕರಿಸುತ್ತಿದ್ದೇವೆ. ನೀವು ದಯಮಾಡಿ ನಮ್ಮ ಮಾತನ್ನು ಆಲಿಸಬೇಕು. ಭಗವಾನ್ ಶ್ರೀಕೃಷ್ಣನು ಇಲ್ಲಿಂದ ಸ್ವಲ್ಪ ದೂರದಲ್ಲೇ ಬಂದಿರುವನು ಹಾಗೂ ಅವನೇ ನಮ್ಮನ್ನು ನಿಮ್ಮಲ್ಲಿಗೆ ಕಳಿಸಿರುವನು. ॥16॥

(ಶ್ಲೋಕ-17)

ಮೂಲಮ್

ಗಾಶ್ಚಾರಯನ್ಸ ಗೋಪಾಲೈಃ ಸರಾಮೋ ದೂರಮಾಗತಃ ।
ಬುಭುಕ್ಷಿತಸ್ಯ ತಸ್ಯಾನ್ನಂ ಸಾನುಗಸ್ಯ ಪ್ರದೀಯತಾಮ್ ॥

ಅನುವಾದ

ಅವನು ಗೋಪಬಾಲಕರೊಂದಿಗೆ ಮತ್ತು ಬಲರಾಮನೊಂದಿಗೆ ಹಸುಗಳನ್ನು ಮೇಯಿಸುತ್ತಾ ಈ ಕಡೆ ಬಹಳ ದೂರಕ್ಕೆ ಬಂದಿರುವನು. ಈಗ ಅವನಿಗೆ ಮತ್ತು ಅವನ ಜೊತೆಯವರಿಗೆ ತುಂಬಾ ಹಸಿವಾಗಿದೆ. ನೀವು ಅವನಿಗಾಗಿ ಏನಾದರು ಭೋಜನವನ್ನು ನೀಡಿರಿ. ॥17॥

(ಶ್ಲೋಕ-18)

ಮೂಲಮ್

ಶ್ರುತ್ವಾಚ್ಯುತಮುಪಾಯಾತಂ ನಿತ್ಯಂ ತದ್ದರ್ಶನೋತ್ಸುಕಾಃ ।
ತತ್ಕಥಾಕ್ಷಿಪ್ತಮನಸೋ ಬಭೂವುರ್ಜಾತಸಂಭ್ರಮಾಃ ॥

ಅನುವಾದ

ಪರೀಕ್ಷಿತನೇ! ಆ ಬ್ರಾಹ್ಮಣಪತ್ನಿಯರು ಅನೇಕ ದಿನಗಳಿಂದ ಭಗವಂತನ ಮನೋಹರವಾದ ಲೀಲೆಗಳನ್ನು ಕೇಳುತ್ತಾ ಇದ್ದರು. ಅವರ ಮನಸ್ಸು ಶ್ರೀಕೃಷ್ಣನಲ್ಲೇ ನೆಟ್ಟುಹೋಗಿತ್ತು. ಯಾವ ರೀತಿಯಿಂದಲಾದರೂ ಶ್ರೀಕೃಷ್ಣನ ದರ್ಶನವಾಗಬೇಕೆಂದು ಸದಾಕಾಲ ಉತ್ಸುಕರಾಗಿದ್ದರು. ಅಚ್ಯುತನು ನಮ್ಮ ಸಮೀಪಕ್ಕೆ ಬಂದಿರುವನೆಂದು ತಿಳಿದೊಡನೆಯೇ ಅವರಿಗೆ ಸಂಭ್ರಮವೋ ಸಂಭ್ರಮ. ॥18॥

(ಶ್ಲೋಕ-19)

ಮೂಲಮ್

ಚತುರ್ವಿಧಂ ಬಹುಗುಣಮನ್ನಮಾದಾಯ ಭಾಜನೈಃ ।
ಅಭಿಸಸ್ರುಃ ಪ್ರಿಯಂ ಸರ್ವಾಃ ಸಮುದ್ರಮಿವ ನಿಮ್ನಗಾಃ ॥

(ಶ್ಲೋಕ-20)

ಮೂಲಮ್

ನಿಷಿಧ್ಯಮಾನಾಃ ಪತಿಭಿರ್ಭ್ರಾತೃಭಿರ್ಬಂಧುಭಿಃ ಸುತೈಃ ।
ಭಗವತ್ಯುತ್ತಮಶ್ಲೋಕೇ ದೀರ್ಘಶ್ರುತಧೃತಾಶಯಾಃ ॥

ಅನುವಾದ

ಅವರು ಪರಿಶುದ್ಧವಾದ ಪಾತ್ರೆಗಳಲ್ಲಿ ರುಚಿಕರವಾದ, ಹಿತಕರವಾದ ಭಕ್ಷ್ಯ, ಭೋಜ್ಯ, ಲೇಹ್ಯ, ಚೋಷ್ಯಗಳೆಂಬ ನಾಲ್ಕುವಿಧವಾದ ಭೋಜನ ಪದಾರ್ಥಗಳನ್ನು ತೆಗೆದುಕೊಂಡು ಅಣ್ಣ-ತಮ್ಮಂದಿರು, ಪತಿ-ಪುತ್ರರು ತಡೆಯುತ್ತಿದ್ದರೂ ಅದನ್ನು ಲೆಕ್ಕಿಸದೆ ನದಿಗಳು ಸಮುದ್ರದ ಕಡೆಗೆ ಸರ-ಸರನೆ ಹರಿದು ಹೋಗುವಂತೆ ತಮ್ಮ ಪ್ರಿಯತಮನಾದ ಭಗವಾನ್ ಶ್ರೀಕೃಷ್ಣನ ಬಳಿಗೆ ಹೋಗಲು ಹೊರಟರು. ಹಲವಾರು ದಿನಗಳಿಂದ ಶ್ರೀಕೃಷ್ಣನ ಲೀಲೆಗಳು, ಸೌಂದರ್ಯ, ಗುಣ, ಮಾಧುರ್ಯ-ಇವುಗಳನ್ನು ಕೇಳುತ್ತಲೇ ಇದ್ದ ದ್ವಿಜಪತ್ನಿಯರು ತಮ್ಮನ್ನು ಶ್ರೀಕೃಷ್ಣನಿಗೆ ಅರ್ಪಿಸಿಕೊಂಡು ಬಿಟ್ಟಿದ್ದರು. ॥19-20॥

(ಶ್ಲೋಕ-21)

ಮೂಲಮ್

ಯಮುನೋಪವನೇಶೋಕನವಪಲ್ಲವಮಂಡಿತೇ ।
ವಿಚರಂತಂ ವೃತಂ ಗೋಪೈಃ ಸಾಗ್ರಜಂ ದದೃಶುಃ ಸಿಯಃ ॥

ಅನುವಾದ

ಯಮುನಾ ನದಿಯ ತೀರದಲ್ಲಿ ಚಿಗುರುಗಳಿಂದ ಸಮಲಂಕೃತವಾದ ವೃಕ್ಷರಾಜಿಯಿಂದ ಕೂಡಿದ್ದ ಅಶೋಕವನದಲ್ಲಿ ಗೋಪರಿಂದ ಸುತ್ತುವರಿಯಲ್ಪಟ್ಟು ಅಣ್ಣನಾದ ಬಲರಾಮನೊಂದಿಗೆ ಸಂಚರಿಸುತ್ತಿದ್ದ ಮನಮೋಹಕನಾದ ಶ್ರೀಕೃಷ್ಣನನ್ನು ದ್ವಿಜಪತ್ನಿಯರು ನೋಡಿದರು. ॥21॥

(ಶ್ಲೋಕ-22)

ಮೂಲಮ್

ಶ್ಯಾಮಂ ಹಿರಣ್ಯಪರಿಧಿಂ ವನಮಾಲ್ಯಬರ್ಹ-
ಧಾತುಪ್ರವಾಲನಟವೇಷಮನುವ್ರತಾಂಸೇ ।
ವಿನ್ಯಸ್ತಹಸ್ತಮಿತರೇಣ ಧುನಾನಮಬ್ಜಂ
ಕರ್ಣೋತ್ಪಲಾಲಕಕಪೋಲಮುಖಾಬ್ಜಹಾಸಮ್ ॥

ಅನುವಾದ

ಅವನ ಶ್ಯಾಮಲ ಶರೀರದ ಮೇಲೆ ಬಂಗಾರದಂತಹ ಪೀತಾಂಬರವನ್ನು ಧರಿಸಿದ್ದನು. ಕೊರಳಲ್ಲಿ ವನಮಾಲೆಯು ವಿರಾಜಿಸುತ್ತಿತ್ತು. ತಲೆಯ ಮೇಲೆ ನವಿಲು ಗರಿಯ ಕಿರೀಟವಿತ್ತು. ಮಣಿಶಿಲೆಯೇ ಮೊದಲಾದ ಧಾತುಗಳಿಂದ ಶರೀರದಲ್ಲಿ ಚಿತ್ರಿಸಿಕೊಂಡು, ಚಿಗುರೆಲೆಯ ಗುಚ್ಛಗಳಿಂದ ಶರೀರವನ್ನು ಸಿಂಗರಿಸಿಕೊಂಡು ನಾಟಕದ ನಟನಂತೆ ಅವನು ಕಾಣುತ್ತಿದ್ದನು. ಒಂದು ಕೈಯನ್ನು ಗೋಪಬಾಲಕನ ಹೆಗಲಮೇಲಿಟ್ಟುಕೊಂಡು, ಇನ್ನೊಂದು ಕೈಯಲ್ಲಿ ಕಮಲದ ಪುಷ್ಪವನ್ನು ಹಿಡಿದುಕೊಂಡು ಕುಣಿಸುತ್ತಿದ್ದನು. ಕಿವಿಗಳಲ್ಲಿ ಕಮಲದ ಕುಂಡಲಗಳಿದ್ದು, ಕೆನ್ನೆಗಳ ಮೇಲೆ ಮುಂಗುರುಳುಗಳು ನಲಿದಾಡುತ್ತಿದ್ದವು. ಮುಖಕಮಲವು ಮಂದವಾದ ಮುಗುಳ್ನಗೆಯಿಂದ ಪ್ರುಲ್ಲಿತವಾಗಿತ್ತು. ॥22॥

(ಶ್ಲೋಕ-23)

ಮೂಲಮ್

ಪ್ರಾಯಃ ಶ್ರುತಪ್ರಿಯತಮೋದಯಕರ್ಣಪೂರೈ-
ರ್ಯಸ್ಮಿನ್ನಿಮಗ್ನಮನಸಸ್ತಮಥಾಕ್ಷಿರಂಧ್ರೈಃ ।
ಅಂತಃ ಪ್ರವೇಶ್ಯ ಸುಚಿರಂ ಪರಿರಭ್ಯತಾಪಂ
ಪ್ರಾಜ್ಞಂ ಯಥಾಭಿಮತಯೋ ವಿಜಹುರ್ನರೇಂದ್ರ ॥

ಅನುವಾದ

ಪರೀಕ್ಷಿತನೇ! ಈ ಮೊದಲು ಬ್ರಾಹ್ಮಣಪತ್ನಿಯರು ಶ್ಯಾಮಸುಂದರನ ಸುಮನೋಹರವಾದ ಲೀಲಾ ಪ್ರಸಂಗಗಳನ್ನು ಕಿವಿಗಳಿಂದ ಕೇಳಿ ತಮ್ಮ-ತಮ್ಮ ಮನಸ್ಸನ್ನು ಅವನಲ್ಲಿಯೇ ಮುಳುಗಿಸಿಬಿಟ್ಟಿದ್ದರು. ಈಗಲಾದರೋ ಅವರು ತಮ್ಮ ವಿಶಾಲವಾದ ಕಣ್ಣುಗಳೆಂಬ ಹೆಬ್ಬಾಗಿಲುಗಳ ಮೂಲಕ ಪ್ರೇಮ ಮೂರ್ತಿಯನ್ನು ಹೃತ್ಕಮಲದಲ್ಲಿ ನೆಲೆಸಿಕೊಂಡು ಮನಸ್ಸು ತಣಿಯುವವರೆಗೂ ಅವನನ್ನು ಗಾಢವಾಗಿ ಆಲಿಂಗಿಸಿಕೊಂಡು ತಮ್ಮ ಹೃದಯದ ವಿರಹತಾಪವನ್ನು ನೀಗಿಕೊಂಡರು. ಜಾಗ್ರತ್-ಸ್ವಪ್ನಗಳಲ್ಲಿ ಇರುವ ‘ನಾನು-ನನ್ನದು’ ಎಂಬ ಮನೋವೃತ್ತಿಗಳೆಲ್ಲವೂ ಸುಷುಪ್ತಿಗೆ ಸಾಕ್ಷಿಯಾದ ಪ್ರಾಜ್ಞನಲ್ಲಿ ಲಯವಾಗುವಂತೆಯೇ ಬ್ರಾಹ್ಮಣ ಪತ್ನಿಯರು ಶ್ರೀಕೃಷ್ಣನಲ್ಲಿಯೇ ಲೀನರಾಗಿ ಸಂಸಾರ ತಾಪವನ್ನು ಕಳೆದು ಕೊಂಡರು. ॥23॥

(ಶ್ಲೋಕ-24)

ಮೂಲಮ್

ತಾಸ್ತಥಾ ತ್ಯಕ್ತಸರ್ವಾಶಾಃ ಪ್ರಾಪ್ತಾ ಆತ್ಮದಿದೃಕ್ಷಯಾ ।
ವಿಜ್ಞಾಯಾಖಿಲದೃಗ್ದ್ರಷ್ಟಾ ಪ್ರಾಹ ಪ್ರಹಸಿತಾನನಃ ॥

ಅನುವಾದ

ಪ್ರಿಯ ಪರೀಕ್ಷಿತನೇ! ಭಗವಂತನು ಸಮಸ್ತರ ಮನಸ್ಸಿನಲ್ಲಿ ಇರುವುದನ್ನು ತಿಳಿಯುವವನೂ, ಎಲ್ಲರ ಬುದ್ಧಿಗೆ ಸಾಕ್ಷಿಯೂ ಆಗಿರುವನು. ಬ್ರಾಹ್ಮಣ ಪತ್ನಿಯರು ತಮ್ಮ ಪತಿ-ಪುತ್ರರನ್ನು, ಸಹೋದರರನ್ನು, ಬಂಧುಗಳನ್ನು ತೊರೆದು ವಿಷಯಸುಖಗಳನ್ನು ಪರಿತ್ಯಜಿಸಿ, ಕೇವಲ ನನ್ನ ದರ್ಶನಕ್ಕಾಗಿ ಬಂದಿರುವರೆಂಬುದನ್ನು ತಿಳಿದು ಶ್ರೀಕೃಷ್ಣಪರಮಾತ್ಮನು ನಗೆಮೊಗದಿಂದ ಬ್ರಾಹ್ಮಣಪತ್ನಿಯರಿಗೆ ಹೇಳಿದನು. ॥24॥

(ಶ್ಲೋಕ-25)

ಮೂಲಮ್ (ವಾಚನಮ್)

ಶ್ರೀಭಗವಾನುವಾಚf

ಮೂಲಮ್

ಸ್ವಾಗತಂ ವೋ ಮಹಾಭಾಗಾ ಆಸ್ಯತಾಂ ಕರವಾಮ ಕಿಮ್ ।
ಯನ್ನೋ ದಿದೃಕ್ಷಯಾ ಪ್ರಾಪ್ತಾ ಉಪಪನ್ನಮಿದಂ ಹಿ ವಃ ॥

ಅನುವಾದ

ಮಹಾಭಾಗ್ಯವತಿಯರೇ! ನಿಮಗೆ ಸ್ವಾಗತ ಬಯಸುತ್ತೇನೆ. ಇತ್ತ ಬನ್ನಿರಿ. ದಯಮಾಡಿ ಎಲ್ಲರೂ ಕುಳಿತುಕೊಳ್ಳಿರಿ. ನಾನು ನಿಮಗೆ ಯಾವ ಕಾರ್ಯವನ್ನು ಮಾಡಲಿ? ನೀವೆಲ್ಲರೂ ನನ್ನ ದರ್ಶನದ ಇಚ್ಛೆಯಿಂದ ಇಲ್ಲಿಗೆ ಬಂದಿರುವಿರಿ. ಪ್ರೇಮಪೂರ್ಣವಾದ ಹೃದಯಿಗಳಾಗಿರುವ ನಿಮಗೆ ಇದು ಅನುರೂಪವೇ ಆಗಿದೆ. ॥25॥

(ಶ್ಲೋಕ-26)

ಮೂಲಮ್

ನನ್ವದ್ಧಾ ಮಯಿ ಕುರ್ವಂತಿ ಕುಶಲಾಃ ಸ್ವಾರ್ಥದರ್ಶನಾಃ ।
ಅಹೈತುಕ್ಯವ್ಯವಹಿತಾಂ ಭಕ್ತಿಮಾತ್ಮಪ್ರಿಯೇ ಯಥಾ ॥

ಅನುವಾದ

ಜಗತ್ತಿನಲ್ಲಿ ತಮ್ಮ ಆತ್ಮೋನ್ನತಿಯನ್ನು ತಿಳಿದಿರುವ ಬುದ್ಧಿವಂತರಾದವರು ತಮ್ಮ ಪ್ರಿಯತಮನಂತೆ ನನ್ನಲ್ಲಿ ಪ್ರೇಮವನ್ನಿರಿಸುವರು. ಆ ಪ್ರೇಮದಲ್ಲಿ ಯಾವ ರೀತಿಯ ಕಾಮನೆಯೂ ಇರುವುದಿಲ್ಲ. ಅದರಲ್ಲಿ ಯಾವ ವಿಧವಾದ ವ್ಯವಧಾನ, ಸಂಕೋಚ, ಮರೆ, ಇದಾವವೂ ದ್ವೈತ ಇರುವುದಿಲ್ಲ. ॥26॥

(ಶ್ಲೋಕ-27)

ಮೂಲಮ್

ಪ್ರಾಣಬುದ್ಧಿಮನಃಸ್ವಾತ್ಮದಾರಾಪತ್ಯಧನಾದಯಃ ।
ಯತ್ಸಂಪರ್ಕಾತ್ ಪ್ರಿಯಾ ಆಸಂಸ್ತತಃ ಕೋ ನ್ವಪರಃ ಪ್ರಿಯಃ ॥

ಅನುವಾದ

ಪ್ರಾಣ, ಬುದ್ಧಿ, ಮನಸ್ಸು, ಶರೀರ, ಸ್ವಜನ, ಸ್ತ್ರೀ, ಪುತ್ರ, ಧನ ಸಂಪತ್ತು - ಇವೆಲ್ಲವೂ ಯಾರ ಸಂಪರ್ಕದಿಂದ ಪ್ರಿಯವಾಗುವವೋ ಅಂತಹ ಆತ್ಮಕ್ಕಿಂತಲೂ, ಪರಮಾತ್ಮನಿಗಿಂತಲೂ, ಆತ್ಮ-ಪರಮಾತ್ಮ ಸ್ವರೂಪ ಕೃಷ್ಣನಾದ ನನಗಿಂತಲೂ ಪ್ರಿಯತಮರು ಬೇರೆಯಾರಿದ್ದಾರೆ? ॥27॥

(ಶ್ಲೋಕ-28)

ಮೂಲಮ್

ತದ್ಯಾತ ದೇವಯಜನಂ ಪತಯೋ ವೋ ದ್ವಿಜಾತಯಃ ।
ಸ್ವಸತ್ರಂ ಪಾರಯಿಷ್ಯಂತಿ ಯುಷ್ಮಾಭಿರ್ಗೃಹಮೇಧಿನಃ ॥

ಅನುವಾದ

ಆದುದರಿಂದ ನೀವು ಬಂದಿರುವುದು ಉಚಿತವೇ ಆಗಿದೆ. ನಾನು ನಿಮ್ಮ ಪ್ರೇಮವನ್ನು ಅಭಿನಂದಿಸುತ್ತೇನೆ. ನೀವು ನನ್ನನ್ನು ಮನಃಪೂರ್ವಕವಾಗಿ ಸಂದರ್ಶಿಸಿದಿರಿ. ಇನ್ನು ನೀವು ಯಜ್ಞಶಾಲೆಗೆ ಹೋಗಿರಿ. ನಿಮ್ಮ ಪತಿಗಳು ಗೃಹಸ್ಥರಾಗಿದ್ದಾರೆ. ಅವರು ನಿಮ್ಮನ್ನು ಬಿಟ್ಟು ಯಜ್ಞವನ್ನು ಪೂರ್ಣಗೊಳಿಸಲಾರರು. ॥28॥

(ಶ್ಲೋಕ-29)

ಮೂಲಮ್ (ವಾಚನಮ್)

ಪತ್ನ್ಯ ಊಚುಃ

ಮೂಲಮ್

ಮೈವಂ ವಿಭೋರ್ಹತಿ ಭವಾನ್ಗದಿತುಂ ನೃಶಂಸಂ
ಸತ್ಯಂ ಕುರುಷ್ವ ನಿಗಮಂ ತವ ಪಾದಮೂಲಮ್ ।
ಪ್ರಾಪ್ತಾ ವಯಂ ತುಲಸಿದಾಮ ಪದಾವಸೃಷ್ಟಂ
ಕೇಶೈರ್ನಿವೋಢುಮತಿಲಂಘ್ಯ ಸಮಸ್ತಬಂಧೂನ್ ॥

ಅನುವಾದ

ಬ್ರಾಹ್ಮಣ ಪತ್ನಿಯರು ಹೇಳಿದರು — ಶ್ಯಾಮಸುಂದರನೇ! ವಿಭುವೇ! ಇಷ್ಟು ನಿಷ್ಠುರವಾಗಿ ಮಾತಾಡುವುದು ನಿನಗೆ ಯೋಗ್ಯವಾಗಿ ಕಾಣುವುದಿಲ್ಲ. ಒಮ್ಮೆ ಭಗವಂತನನ್ನು ಪಡೆದುಕೊಂಡವನು ಮತ್ತೆ ಸಂಸಾರಕ್ಕೆ ಮರಳುವುದಿಲ್ಲವೆಂದು ಶ್ರುತಿಗಳು ಹೇಳುತ್ತವೆ. ಆ ಶ್ರುತಿವಾಣಿಯನ್ನು ಸತ್ಯವನ್ನಾಗಿ ಮಾಡು. ನಾವು ನಮ್ಮ ಸಮಸ್ತ ಸಂಬಂಧಿಗಳ ಆಜ್ಞೆಯನ್ನು ಮೀರಿ-ನಿನ್ನ ಚರಣಗಳಿಂದ ಬಿದ್ದಿರುವ ತುಳಸಿಯ ಮಾಲೆಯನ್ನು ನಮ್ಮ ಮುಡಿಯಲ್ಲಿ ಧರಿಸಿಕೊಳ್ಳಬೇಕೆಂದು ಇಲ್ಲಿಗೆ ಬಂದಿರುವೆವು. ॥29॥

(ಶ್ಲೋಕ-30)

ಮೂಲಮ್

ಗೃಹ್ಣಂತಿ ನೋ ನ ಪತಯಃ ಪಿತರೌ ಸುತಾ ವಾ
ನ ಭ್ರಾತೃಬಂಧುಸುಹೃದಃ ಕುತ ಏವ ಚಾನ್ಯೇ ।
ತಸ್ಮಾದ್ಭವತ್ಪ್ರಪದಯೋಃ ಪತಿತಾತ್ಮನಾಂ ನೋ
ನಾನ್ಯಾ ಭವೇದ್ಗತಿರರಿಂದಮ ತದ್ವಿಧೇಹಿ ॥

ಅನುವಾದ

ಸ್ವಾಮಿಯೇ! ಈಗ ನಮ್ಮ ಪತಿ-ಪುತ್ರರು, ತಂದೆ-ತಾಯಿ, ಅಣ್ಣ-ತಮ್ಮಂದಿರು, ಸ್ವಜನ-ಬಂಧುಗಳು ನಮ್ಮನ್ನು ಸ್ವೀಕರಿಸಲಾರರು. ಹಾಗಿರುವಾಗ ಬೇರೆಯವರ ವಿಷಯವಾಗಿ ಹೇಳುವುದೇನಿದೆ? ವೀರಶಿರೋಮಣಿಯೇ! ಈಗ ನಾವು ನಿನ್ನ ಚರಣಗಳನ್ನೇ ಪರಮಾಶ್ರಯವೆಂದು ತಿಳಿದಿರುವೆವು. ನಮಗೆ ಬೇರೆಯಾರ ಆಸರೆಯೂ ಇಲ್ಲ. ಅದಕ್ಕಾಗಿ ನಾವು ಬೇರೆಯವರಲ್ಲಿ ಶರಣಾಗದ ಹಾಗೇ ನೀನೇ ವ್ಯವಸ್ಥೆ ಮಾಡು. ॥30॥

(ಶ್ಲೋಕ-31)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಪತಯೋ ನಾಭ್ಯಸೂಯೇರನ್ಪಿತೃಭ್ರಾತೃಸುತಾದಯಃ ।
ಲೋಕಾಶ್ಚ ವೋ ಮಯೋಪೇತಾ ದೇವಾ ಅಪ್ಯನುಮನ್ವತೇ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ದೇವಿಯರೇ! ನಿಮ್ಮ ಪತಿ-ಪುತ್ರರಾಗಲೀ, ತಂದೆ-ತಾಯಿಯಾಗಲೀ, ಬಂಧು-ಬಾಂಧವರಾಗಲೀ ಯಾರೂ ನಿಮ್ಮನ್ನು ತಿರಸ್ಕರಿಸಲಾರರು. ಇವರುಗಳ ಮಾತೇನು, ಇಡೀ ಜಗತ್ತೆ ನಿಮ್ಮನ್ನು ಸನ್ಮಾನಿಸುವುದು. ಇದಕ್ಕೆ ಕಾರಣವಿಷ್ಟೇ. ಈಗ ನೀವು ನನ್ನವರಾಗಿದ್ದೀರಿ. ದೇವತೆಗಳೂ ನನ್ನ ಈ ಮಾತನ್ನು ಅನುಮೋದಿಸುತ್ತಿದ್ದಾರೆ. ॥31॥

(ಶ್ಲೋಕ-32)

ಮೂಲಮ್

ನ ಪ್ರೀತಯೇನುರಾಗಾಯ ಹ್ಯಂಗಸಂಗೋ ನೃಣಾಮಿಹ ।
ತನ್ಮನೋ ಮಯಿ ಯುಂಜಾನಾ ಅಚಿರಾನ್ಮಾಮವಾಪ್ಸ್ಯಥ ॥

ಅನುವಾದ

ದೇವಿಯರೇ! ಈ ಪ್ರಪಂಚದ ಮನುಷ್ಯರಲ್ಲಿ ಪರಸ್ಪರವಾದ ಪ್ರೀತಿ-ಅನುರಾಗಗಳಿಗೆ ಕೇವಲ ಅಂಗಸಂಗವೇ ಕಾರಣವಾಗುವುದಿಲ್ಲ. ಆದುದರಿಂದ ನೀವು ಈಗಲೇ ಯಜ್ಞಶಾಲೆಗೆ ಹೋಗಿರಿ. ನಿಮ್ಮ ಮನಸ್ಸನ್ನು ನನ್ನಲ್ಲಿ ನೆಲೆಗೊಳಿಸಿರಿ. ನಿಮಗೆ ಬಹುಬೇಗನೇ ನನ್ನ ಪ್ರಾಪ್ತಿಯುಂಟಾಗುವುದು. ॥32॥

(ಶ್ಲೋಕ-33)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯುಕ್ತಾ ದ್ವಿಜಪತ್ನ್ಯಸ್ತಾ ಯಜ್ಞವಾಟಂ ಪುನರ್ಗತಾಃ ।
ತೇ ಚಾನಸೂಯವಃ ಸ್ವಾಭಿಃ ಸೀಭಿಃ ಸತ್ರಮಪಾರಯನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಂತನು ಹೀಗೆ ಹೇಳಲು ಭಗವದ್ಭಕ್ತರಾದ ಬ್ರಾಹ್ಮಣ ಪತ್ನಿಯರು ಯಜ್ಞಶಾಲೆಗೆ ಹಿಂದಿರುಗಿದರು. ಶ್ರೀಕೃಷ್ಣನು ಹೇಳಿದ್ದಂತೆ ಆ ಬ್ರಾಹ್ಮಣರು ತಮ್ಮ ಪತ್ನಿಯರಲ್ಲಿ ಯಾವ ವಿಧವಾದ ದೋಷವನ್ನು ಎಣಿಸಲಿಲ್ಲ. ಅವರೊಡನೆ ಸೇರಿಕೊಂಡು ತಮ್ಮ ಯಜ್ಞವನ್ನು ಪೂರ್ಣಗೊಳಿಸಿದರು. ॥33॥

(ಶ್ಲೋಕ-34)

ಮೂಲಮ್

ತತ್ರೈಕಾ ವಿಧೃತಾ ಭರ್ತ್ರಾ ಭಗವಂತಂ ಯಥಾಶ್ರುತಮ್ ।
ಹೃದೋಪಗುಹ್ಯ ವಿಜಹೌ ದೇಹಂ ಕರ್ಮಾನುಬಂಧನಮ್ ॥

ಅನುವಾದ

ಆ ಸ್ತ್ರೀಯರಲ್ಲಿ ಓರ್ವಳಿಗೆ ಹೊರಡುವಾಗಲೇ ಅವಳ ಪತಿಯು ಬಲವಂತವಾಗಿ ತಡೆದುಬಿಟ್ಟಿದ್ದನು. ಆ ಬ್ರಾಹ್ಮಣಪತ್ನಿಯು ಅನೇಕ ದಿನಗಳಿಂದ ಕೇಳಿದ ಭಗವಂತನ ಸ್ವರೂಪವನ್ನು ಹೃದಯದಲ್ಲಿರಿಸಿಕೊಂಡು, ಅವನ ಧ್ಯಾನವನ್ನೇ ಮಾಡುತ್ತಾ, ಮನಸ್ಸಿನಲ್ಲೇ ಭಗವಂತನನ್ನು ಆಲಿಂಗಿಸಿಕೊಂಡು ಕರ್ಮದಿಂದ ಉಂಟಾದ ತನ್ನ ಶರೀರವನ್ನು ತ್ಯಜಿಸಿದಳು. ಶುದ್ಧ ಸತ್ತ್ವಮಯ ದಿವ್ಯದೇಹವನ್ನು ಧರಿಸಿ ಭಗವಂತನಲ್ಲಿ ಐಕ್ಯಳಾದಳು. ॥34॥

(ಶ್ಲೋಕ-35)

ಮೂಲಮ್

ಭಗವಾನಪಿ ಗೋವಿಂದಸ್ತೇನೈವಾನ್ನೇನ ಗೋಪಕಾನ್ ।
ಚತುರ್ವಿಧೇನಾಶಯಿತ್ವಾ ಸ್ವಯಂ ಚ ಬುಭುಜೇ ಪ್ರಭುಃ ॥

ಅನುವಾದ

ಇತ್ತ ಭಗವಾನ್ ಶ್ರೀಕೃಷ್ಣನು ಬ್ರಾಹ್ಮಣ ಪತ್ನಿಯರು ತಂದಿರುವ ನಾಲ್ಕು ವಿಧವಾದ ಅನ್ನವನ್ನು ಮೊದಲಿಗೆ ಗೋಪಬಾಲಕರಿಗೆ ಭೋಜನ ಮಾಡಿಸಿ ಮತ್ತೆ ಸ್ವತಃ ಭೋಜನ ಮಾಡಿದನು. ॥35॥

(ಶ್ಲೋಕ-36)

ಮೂಲಮ್

ಏವಂ ಲೀಲಾನರವಪುರ್ನೃಲೋಕಮನುಶೀಲಯನ್ ।
ರೇಮೇ ಗೋಗೋಪಗೋಪೀನಾಂ ರಮಯನ್ರೂಪವಾಕ್ಕೃತೈಃ ॥

ಅನುವಾದ

ಪರೀಕ್ಷಿತನೇ! ಲೀಲಾಮಾನುಷ ವಿಗ್ರಹನಾದ ಶ್ರೀಕೃಷ್ಣನು ಈ ವಿಧವಾಗಿ ಮನುಷ್ಯರಂತೆ ಲೀಲೆಯನ್ನಾಡುತ್ತಾ ತನ್ನ ಸೌಂದರ್ಯ, ಮಾಧುರ್ಯ, ವಾಣಿ ಮತ್ತು ಕರ್ಮಗಳಿಂದ ಗೋವುಗಳನ್ನು ಗೋಪಬಾಲಕರನ್ನು, ಗೋಪಿಯರನ್ನು ಆನಂದಗೊಳಿಸಿದನು ಹಾಗೂ ತಾನೂ ಕೂಡ ಅವರ ಅಲೌಕಿಕ ಪ್ರೇಮರಸವನ್ನು ಆಸ್ವಾದಿಸುತ್ತಾ ಆನಂದಿತನಾದನು. ॥36॥

(ಶ್ಲೋಕ-37)

ಮೂಲಮ್

ಅಥಾನುಸ್ಮೃತ್ಯ ವಿಪ್ರಾಸ್ತೇ ಅನ್ವತಪ್ಯನ್ಕೃತಾಗಸಃ ।
ಯದ್ವಿಶ್ವೇಶ್ವರಯೋರ್ಯಾಚ್ಞಾಮಹನ್ಮ ನೃವಿಡಂಬಯೋಃ ॥

ಅನುವಾದ

ಪರೀಕ್ಷಿತನೇ! ಇತ್ತ ಬ್ರಾಹ್ಮಣರಿಗೆ ಶ್ರೀಕೃಷ್ಣನಾದರೋ ಸಾಕ್ಷಾತ್ ಭಗವಂತನಾಗಿರುವನು ಎಂದು ತಿಳಿದಾಗ ಅವರಿಗೆ ಬಹಳವಾಗಿ ಪಶ್ಚಾತ್ತಾಪವುಂಟಾಯಿತು. ಜಗದೀಶ್ವರರಾದ ಭಗವಾನ್ ಶ್ರೀಕೃಷ್ಣ ಮತ್ತು ಬಲರಾಮರ ಆಜ್ಞೆಯನ್ನು ಉಲ್ಲಂಘಿಸಿ ನಾವು ಬಹುದೊಡ್ಡ ಅಪರಾಧವನ್ನು ಮಾಡಿರುವೆವು ಎಂದು ಯೋಚಿಸಿದರು. ಅವರಾದರೋ ಮಾನವ ಲೀಲೆಗಳನ್ನು ಮಾಡುತ್ತಿದ್ದರೂ ಕೂಡ ಪರಮೇಶ್ವರರೇ ಆಗಿದ್ದಾರೆ. ॥37॥

(ಶ್ಲೋಕ-38)

ಮೂಲಮ್

ದೃಷ್ಟ್ವಾ ಸೀಣಾಂ ಭಗವತಿ ಕೃಷ್ಣೇ ಭಕ್ತಿಮಲೌಕಿಕೀಮ್ ।
ಆತ್ಮಾನಂ ಚ ತಯಾ ಹೀನಮನುತಪ್ತಾ ವ್ಯಗರ್ಹಯನ್ ॥

ಅನುವಾದ

ನಮ್ಮ ಪತ್ನಿಯರ ಹೃದಯದಲ್ಲಿ ಭಗವಂತನ ಆಲೌಕಿಕವಾದ ಪ್ರೇಮವು ತುಂಬಿದೆ. ನಾವು ಅದರಿಂದ ಪೂರ್ಣವಾಗಿ ಬರಿದಾಗಿರುವೆವು ಎಂದು ತಿಳಿದಾಗ, ಅವರು ಪಶ್ಚಾತ್ತಾಪ ಪಟ್ಟು ತಮ್ಮನ್ನು ತಾವೇ ನಿಂದಿಸಿಕೊಂಡರು. ॥38॥

(ಶ್ಲೋಕ-39)

ಮೂಲಮ್

ಧಿಗ್ಜನ್ಮನಸಿವೃದ್ವಿದ್ಯಾಂ ಧಿಗ್ವ್ರತಂ ಧಿಗ್ಬಹುಜ್ಞತಾಮ್ ।
ಧಿಕ್ಕುಲಂ ಧಿಕ್ಕ್ರಿಯಾದಾಕ್ಷ್ಯಂ ವಿಮುಖಾ ಯೇ ತ್ವಧೋಕ್ಷಜೇ ॥

ಅನುವಾದ

ಅಧೋಕ್ಷಜನಿಂದ ವಿಮುಖರಾಗಿರುವ ನಮಗೆ ಧಿಕ್ಕಾರವಿರಲಿ, ಶ್ರೇಷ್ಠಕುಲದಲ್ಲಿ ನಾವು ಹುಟ್ಟಿದೆವು, ಗಾಯತ್ರಿಯನ್ನು ಗ್ರಹಣಮಾಡಿ ದ್ವಿಜರಾದೆವು. ವೇದಾಧ್ಯಯನ ಮಾಡಿ ನಾವು ದೊಡ್ಡ-ದೊಡ್ಡ ಯಜ್ಞಗಳನ್ನು ಮಾಡಿದೆವು. ಆದರೆ ಇದೆಲ್ಲವೂ ಉಪಯೋಗಕ್ಕೆ ಬಂದಿಲ್ಲವಲ್ಲ! ನಮಗೆ ಧಿಕ್ಕಾರವಿರಲಿ, ಧಿಕ್ಕಾರವಿರಲಿ. ನಮ್ಮ ವಿದ್ಯೆ, ವ್ರತಗಳು ವ್ಯರ್ಥವಾದುವು. ನಮ್ಮ ಈ ಬಹುಜ್ಞತೆಗೆ ಧಿಕ್ಕಾರವಿರಲಿ. ಶ್ರೇಷ್ಠವಂಶದಲ್ಲಿ ಹುಟ್ಟುವುದು, ಕರ್ಮಕಾಂಡದಲ್ಲಿ ನಿಪುಣರಾಗುವುದು ಏನು ಪ್ರಯೋಜನ? ಇವುಗಳಿಗೆ ಧಿಕ್ಕಾರವಿರಲಿ. ॥39॥

(ಶ್ಲೋಕ-40)

ಮೂಲಮ್

ನೂನಂ ಭಗವತೋ ಮಾಯಾ ಯೋಗಿನಾಮಪಿ ಮೋಹಿನೀ ।
ಯದ್ವಯಂ ಗುರವೋ ನೃಣಾಂ ಸ್ವಾರ್ಥೇ ಮುಹ್ಯಾಮಹೇ ದ್ವಿಜಾಃ ॥

ಅನುವಾದ

ನಿಶ್ಚಯವಾಗಿಯೂ ಭಗವಂತನ ಮಾಯೆಯು ಮಹಾ-ಮಹಾಯೋಗಿಗಳನ್ನೂ ಮೋಹಿತರಾಗಿಸುತ್ತದೆ. ಹಾಗಿರುವಾಗ ನಾವು ಮನುಷ್ಯರ ಗುರುಗಳು ಮತ್ತು ಬ್ರಾಹ್ಮಣರೆಂದು ಹೇಳಿಸಿಕೊಳ್ಳುವೆವು. ಆದರೆ ನಿಜವಾದ ಸ್ವಾರ್ಥ ಮತ್ತು ಪರಮಾರ್ಥದ ವಿಷಯದಲ್ಲಿ ನಾವು ಖಂಡಿತವಾಗಿ ಅಜ್ಞರಾಗಿದ್ದೇವೆ. ॥40॥

(ಶ್ಲೋಕ-41)

ಮೂಲಮ್

ಅಹೋ ಪಶ್ಯತ ನಾರೀಣಾಮಪಿ ಕೃಷ್ಣೇ ಜಗದ್ಗುರೌ ।
ದುರಂತಭಾವಂ ಯೋವಿಧ್ಯನ್ಮೃತ್ಯುಪಾಶಾನ್ಗೃಹಾಭಿಧಾನ್ ॥

ಅನುವಾದ

ನೋಡಿರಲ್ಲ! ಇವರು ಸ್ತ್ರೀಯರಾಗಿದ್ದರೂ ಜಗದ್ಗುರು ಭಗವಾನ್ ಶ್ರೀಕೃಷ್ಣನಲ್ಲಿ ಇವರಿಗೆ ಎಷ್ಟೊಂದು ಅಗಾಧವಾದ ಪ್ರೇಮವಿದೆ, ಅಖಂಡ ಅನುರಾಗವಿದೆ! ಅದರಿಂದಲೇ ಇವರು - ಸಾವಿನೊಂದಿಗೂ ಕಡಿದು ಹೋಗದಿರುವ ಗೃಹವೆಂಬ ಹೆಸರುಳ್ಳ ಬಲಿಷ್ಠವಾದ ಪಾಶವನ್ನೂ ಕತ್ತರಿಸಿ ಬಿಟ್ಟಿರುವರು. ಇದೆಂತಹ ಆಶ್ಚರ್ಯ! ॥41॥

(ಶ್ಲೋಕ-42)

ಮೂಲಮ್

ನಾಸಾಂ ದ್ವಿಜಾತಿಸಂಸ್ಕಾರೋ ನ ನಿವಾಸೋ ಗುರಾವಪಿ ।
ನ ತಪೋ ನಾತ್ಮಮೀಮಾಂಸಾ ನ ಶೌಚಂ ನ ಕ್ರಿಯಾಃ ಶುಭಾಃ ॥

ಅನುವಾದ

ಇವರಿಗೆ ದ್ವಿಜಾತಿಗಳ ಉಪನಯನಾದಿ ಸಂಸ್ಕಾರಗಳು ಆಗಲಿಲ್ಲ. ಇವರು ಗುರುಕುಲದಲ್ಲಿ ವಾಸಿಸಲಿಲ್ಲ. ಇವರು ತಪಸ್ಸು ಮಾಡಿಲ್ಲ. ಆತ್ಮನ ಸಂಬಂಧವಾಗಿ ವಿವೇಕ-ವಿಚಾರ ಮಾಡಲಿಲ್ಲ. ಇವುಗಳ ಮಾತಾದರೋ ದೂರವುಳಿಯಿತು, ಇವರಲ್ಲಿ ಪೂರ್ಣ ಪವಿತ್ರತೆಯೂ ಇಲ್ಲ, ಶುಭಕರ್ಮಗಳೂ ಇಲ್ಲ. ॥42॥

(ಶ್ಲೋಕ-43)

ಮೂಲಮ್

ಅಥಾಪಿ ಹ್ಯುತ್ತಮಶ್ಲೋಕೇ ಕೃಷ್ಣೇ ಯೋಗೇಶ್ವರೇಶ್ವರೇ ।
ಭಕ್ತಿರ್ದೃಢಾ ನ ಚಾಸ್ಮಾಕಂ ಸಂಸ್ಕಾರಾದಿಮತಾಮಪಿ ॥

ಅನುವಾದ

ಹೀಗಿದ್ದರೂ ಸಮಸ್ತ ಯೋಗೇಶ್ವರರಿಗೂ ಈಶ್ವರನಾದ, ಪುಣ್ಯಶ್ಲೋಕನಾದ ಭಗವಾನ್ ಶ್ರೀಕೃಷ್ಣನ ಚರಣಗಳಲ್ಲಿ ಇವರಿಗೆ ದೃಢವಾದ ಭಕ್ತಿ ಉಂಟಾಗಿದೆ. ನಾವು ನಮ್ಮ ಸಂಸ್ಕಾರಗಳನ್ನು ಮಾಡಿಕೊಂಡಿರುವೆವು. ಗುರುಕುಲದಲ್ಲಿ ವಾಸಿಸಿದ್ದೇವೆ. ತಪಸ್ಸು ಮಾಡಿದ್ದೇವೆ. ಆತ್ಮಾನುಸಂಧಾನ ಮಾಡಿದ್ದೇವೆ. ಪವಿತ್ರತೆಯನ್ನು ಪಾಲಿಸಿದ್ದೇವೆ. ಉತ್ತ ಮೋತ್ತಮ ಕರ್ಮಗಳನ್ನು ಮಾಡಿದ್ದೇವೆ. ಆದರೂ ಭಗವಂತನ ಚರಣಗಳಲ್ಲಿ ನಮಗೆ ಭಕ್ತಿಯುಂಟಾಗಲಿಲ್ಲವಲ್ಲ! ॥43॥

(ಶ್ಲೋಕ-44)

ಮೂಲಮ್

ನನು ಸ್ವಾರ್ಥವಿಮೂಢಾನಾಂ ಪ್ರಮತ್ತಾನಾಂ ಗೃಹೇಹಯಾ ।
ಅಹೋ ನಃ ಸ್ಮಾರಯಾಮಾಸ ಗೋಪವಾಕ್ಯೈಃ ಸತಾಂ ಗತಿಃ ॥

ಅನುವಾದ

ನಾವುಗಳು ಗೃಹಕೃತ್ಯದಲ್ಲಿ ಉನ್ಮತ್ತರಾಗಿದ್ದೆವು, ನಮ್ಮ ಒಳಿತು-ಕೆಡುಕುಗಳನ್ನು ಪೂರ್ಣವಾಗಿ ಮರೆತು ಹೋಗಿದ್ದೆವು ಎಂಬುದು ನಿಜವಾದದು. ಆಹಾ! ಭಗವಂತನ ಎಷ್ಟೊಂದು ದಯೆ ಇದೆ, ಭಕ್ತವತ್ಸಲ ಪ್ರಭುವು ಗೊಲ್ಲಬಾಲಕರನ್ನು ಕಳಿಸಿ ಅವರ ಮಾತಿನಿಂದ ನಮ್ಮನ್ನು ಎಚ್ಚರಿಸಿದನು. ತನ್ನ ನೆನಪನ್ನು ಮಾಡಿಸಿದನು. ॥44॥

(ಶ್ಲೋಕ-45)

ಮೂಲಮ್

ಅನ್ಯಥಾ ಪೂರ್ಣಕಾಮಸ್ಯ ಕೈವಲ್ಯಾದ್ಯಾಶಿಷಾಂ ಪತೇಃ ।
ಈಶಿತವ್ಯೈಃ ಕಿಮಸ್ಮಾಭಿರೀಶಸ್ಯೈತದ್ವಿಡಂಬನಮ್ ॥

ಅನುವಾದ

ಭಗವಂತನು ಸ್ವತಃ ಪೂರ್ಣಕಾಮನಾಗಿರುವನು. ಕೈವಲ್ಯ ಮೋಕ್ಷದವರೆಗಿನ ಉಂಟಾಗುವ ಕಾಮನೆಗಳನ್ನು ಪೂರ್ಣ ಮಾಡುವವನು. ನಮ್ಮನ್ನು ಎಚ್ಚರಿಸುವುದೇ ಪ್ರಯೋಜನವಲ್ಲದಿದ್ದರೆ ನಮ್ಮಂತಹ ಕ್ಷುದ್ರ ಜೀವರಿಂದ ಅವನಿಗೇನು ಪ್ರಯೋಜನವಿತ್ತು? ಖಂಡಿತವಾಗಿಯೂ ಅವನು ಇದೇ ಉದ್ದೇಶದಿಂದ ಬೇಡುವ ನೆಪವನ್ನು ಮಾಡಿರುವನು. ಹಾಗಿಲ್ಲದಿದ್ದರೆ ಅವನಿಗೆ ಬೇಡುವ ಆವಶ್ಯಕತೆ ಏನಿತ್ತು? ॥45॥

(ಶ್ಲೋಕ-46)

ಮೂಲಮ್

ಹಿತ್ವಾನ್ಯಾನ್ಭಜತೇ ಯಂ ಶ್ರೀಃ ಪಾದಸ್ಪರ್ಶಾಶಯಾಸಕೃತ್ ।
ಆತ್ಮದೋಷಾಪವರ್ಗೇಣ ತದ್ಯಾಚ್ಞಾ ಜನಮೋಹಿನೀ ॥

ಅನುವಾದ

ಸಾಕ್ಷಾತ್ ಲಕ್ಷ್ಮೀದೇವಿಯೂ ಬೇರೆ ದೇವತೆಗಳೆಲ್ಲರನ್ನು ಬಿಟ್ಟು, ತನ್ನ ಚಂಚಲತೆ, ಗರ್ವ ಮೊದಲಾದ ದೋಷಗಳನ್ನು ಪರಿತ್ಯಾಗ ಮಾಡಿ ನಿರಂತರವಾಗಿ ಅವನ ಚರಣಕಮಲಗಳನ್ನು ಸ್ಪರ್ಶಿಸಲಿಕ್ಕಾಗಿ ಸೇವೆ ಮಾಡುತ್ತಾ ಇರುವಳು. ಅಂತಹ ಪ್ರಭುವು ಇತರರಲ್ಲಿ ಭೋಜನವನ್ನು ಯಾಚಿಸುವುದು ಜನರನ್ನು ವಿಮೋಹಗಳಿಸಲಿಕ್ಕಾಗಿಯಲ್ಲದೆ ಬೇರೇನಿದೆ? ॥46॥

(ಶ್ಲೋಕ-47)

ಮೂಲಮ್

ದೇಶಃ ಕಾಲಃ ಪೃಥಗ್ದ್ರವ್ಯಂ ಮಂತ್ರತಂತ್ರರ್ತ್ವಿಜೋಗ್ನಯಃ ।
ದೇವತಾ ಯಜಮಾನಶ್ಚ ಕ್ರತುರ್ಧರ್ಮಶ್ಚಯನ್ಮಯಃ ॥

ಅನುವಾದ

ದೇಶ, ಕಾಲ, ಬೇರೆ-ಬೇರೆ ಸಾಮಗ್ರಿಗಳು, ಆಯಾಯ ಕರ್ಮಗಳಲ್ಲಿ ವಿನಿಯೋಗಿಸುವ ಮಂತ್ರಗಳು, ಅನುಷ್ಠಾನ ಪದ್ಧತಿ, ಋತ್ವಿಜರು, ಅಗ್ನಿ, ದೇವತೆಗಳು, ಯಜಮಾನ, ಯಜ್ಞ ಮತ್ತು ಧರ್ಮ-ಇವೆಲ್ಲವೂ ಭಗವಂತನ ಸ್ವರೂಪವೇ ಆಗಿವೆ. ॥47॥

(ಶ್ಲೋಕ-48)

ಮೂಲಮ್

ಸ ಏಷ ಭಗವಾನ್ಸಾಕ್ಷಾದ್ವಿಷ್ಣುರ್ಯೋಗೇಶ್ವರೇಶ್ವರಃ ।
ಜಾತೋ ಯದುಷ್ವಿತ್ಯಶೃಣ್ಮ ಹ್ಯಪಿ ಮೂಢಾ ನ ವಿದ್ಮಹೇ ॥

ಅನುವಾದ

ಯೋಗೇಶ್ವರರಿಗೂ ಈಶ್ವರನಾದ ಭಗವಾನ್ ವಿಷ್ಣುವೇ ಸಾಕ್ಷಾತ್ ಶ್ರೀಕೃಷ್ಣರೂಪದಿಂದ ಯದುವಂಶದಲ್ಲಿ ಅವತರಿಸಿರುವನು. ಈ ಮಾತನ್ನು ನಾವು ಕೇಳಿದ್ದೆವು. ಆದರೆ ನಾವು ಅವನನ್ನು ಗುರುತಿಸಲಾರದಷ್ಟು ಮೂಢರಾಗಿದ್ದೇವೆ.॥48॥

(ಶ್ಲೋಕ-49)

ಮೂಲಮ್

ಅಹೋ ವಯಂ ಧನ್ಯತಮಾ ಯೇಷಾಂ ನಸ್ತಾದೃಶೀಃ ಸಿಯಃ ।
ಭಕ್ತ್ಯಾ ಯಾಸಾಂ ಮತಿರ್ಜಾತಾ ಅಸ್ಮಾಕಂ ನಿಶ್ಚಲಾ ಹರೌ ॥

ಅನುವಾದ

ಇಷ್ಟೆಲ್ಲ ಆಗಿದ್ದರೂ ಕೂಡ ನಾವು ಧನ್ಯಾತಿಧನ್ಯರಾಗಿದ್ದೇವೆ. ನಮ್ಮ ಸೌಭಾಗ್ಯವೇ ಸರಿ! ಅದರಿಂದಲೇ ಇಂತಹ ಪತ್ನಿಯರು ನಮಗೆ ದೊರಕಿರುವರು. ಅವರ ಭಕ್ತಿಯಿಂದಲೇ ನಮ್ಮ ಬುದ್ಧಿಯೂ ಶ್ರೀಹರಿಯಲ್ಲಿ ಅವಿಚಲವಾಗಿ ಸೇರಿಹೋಗಿದೆ. ॥49॥

(ಶ್ಲೋಕ-50)

ಮೂಲಮ್

ನಮಸ್ತುಭ್ಯಂ ಭಗವತೇ ಕೃಷ್ಣಾಯಾಕುಂಠಮೇಧಸೇ ।
ಯನ್ಮಾಯಾಮೋಹಿತಧಿಯೋ ಭ್ರಮಾಮಃ ಕರ್ಮವರ್ತ್ಮಸು ॥

ಅನುವಾದ

ಪ್ರಭೋ! ನೀನು ಅಚಿಂತ್ಯ ಮತ್ತು ಅನಂತ ಐಶ್ವರ್ಯಗಳ ಒಡೆಯನಾಗಿರುವೆ. ಶ್ರೀಕೃಷ್ಣನೇ! ನಿನ್ನ ಜ್ಞಾನವೂ ಅಬಾಧವಾಗಿದೆ. ನಿನ್ನ ಮಾಯೆಯಿಂದಲೇ ನಮ್ಮ ಬುದ್ಧಿಯು ಮೋಹಿತವಾಗಿದೆ ಹಾಗೂ ನಾವು ಕರ್ಮಗಳ ಜಂಜಾಟದಲ್ಲಿ ಆಲೆಯುತ್ತಿರುವೆವು. ನಾವು ನಿನಗೆ ನಮಸ್ಕರಿಸುತ್ತಿದ್ದೇವೆ. ॥50॥

(ಶ್ಲೋಕ-51)

ಮೂಲಮ್

ಸ ವೈ ನ ಆದ್ಯಃ ಪುರುಷಃ ಸ್ವಮಾಯಾಮೋಹಿತಾತ್ಮನಾಮ್ ।
ಅವಿಜ್ಞಾತಾನುಭಾವಾನಾಂ ಕ್ಷಂತುಮರ್ಹತ್ಯತಿಕ್ರಮಮ್ ॥

ಅನುವಾದ

ಆದಿಪುರುಷನಾದ, ಪುರುಷೋತ್ತಮನಾದ ಭಗವಾನ್ ಶ್ರೀಕೃಷ್ಣನು ನಮ್ಮ ಈ ಅಪರಾಧವನ್ನು ಕ್ಷಮಿಸಲಿ. ನಮ್ಮ ಬುದ್ಧಿಯು ಅವನ ಮಾಯೆಯಿಂದಲೇ ಮೋಹಿತವಾಗಿದೆ. ನಾವು ಅವನ ಅಪಾರವಾದ ಪ್ರಭಾವವನ್ನು ತಿಳಿಯದ ಅಜ್ಞಾನಿಗಳಾಗಿ ಇದ್ದೇವೆ. ॥51॥

(ಶ್ಲೋಕ-52)

ಮೂಲಮ್

ಇತಿ ಸ್ವಾಘಮನುಸ್ಮೃತ್ಯ ಕೃಷ್ಣೇ ತೇ ಕೃತಹೇಲನಾಃ ।
ದಿದೃಕ್ಷವೋಪ್ಯಚ್ಯುತಯೋಃ ಕಂಸಾದ್ಭೀತಾ ನ ಚಾಚಲನ್ ॥

ಅನುವಾದ

ಪರೀಕ್ಷಿತನೇ! ಆ ಬ್ರಾಹ್ಮಣರು ಶ್ರೀಕೃಷ್ಣನನ್ನು ತಿರಸ್ಕರಿಸಿದ್ದರು. ಆದ್ದರಿಂದ ಅವರಿಗೆ ತಮ್ಮ ಅಪರಾಧದ ಸ್ಮೃತಿಯಿಂದ ಬಹಳ ಪಶ್ಚಾತ್ತಾಪ ಉಂಟಾಯಿತು. ಅವರ ಹೃದಯದಲ್ಲಿ ಶ್ರೀಕೃಷ್ಣ ಬಲರಾಮರ ದರ್ಶನದ ತೀವ್ರ ಇಚ್ಛೆ ಉಂಟಾಯಿತು. ಆದರೆ ಕಂಸನ ಭಯದಿಂದ ಅವರು ದರ್ಶನಕ್ಕೆ ಹೋಗಲಿಲ್ಲ. ॥52॥

ಅನುವಾದ (ಸಮಾಪ್ತಿಃ)

ಇಪ್ಪತ್ತಮೂರನೆಯ ಅಧ್ಯಾಯವು ಮುಗಿಯಿತು. ॥23॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಯಜ್ಞಪತ್ನ್ಯುದ್ಧರಣಂ ನಾಮ ತ್ರಯೋವಿಂಶೋಽಧ್ಯಾಯಃ ॥23॥