೨೨

[ಇಪ್ಪತ್ತೆರಡನೆಯ ಅಧ್ಯಾಯ]

ಭಾಗಸೂಚನಾ

ಚೀರಹರಣ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಹೇಮಂತೇ ಪ್ರಥಮೇ ಮಾಸಿ ನಂದವ್ರಜಕುಮಾರಿಕಾಃ ।
ಚೇರುರ್ಹವಿಷ್ಯಂ ಭುಂಜಾನಾಃ ಕಾತ್ಯಾಯನ್ಯರ್ಚನವ್ರತಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಈಗ ಹೇಮಂತ ಋತುವು ಪ್ರಾರಂಭವಾಯಿತು. ಇದರ ಮೊದಲ ತಿಂಗಳಲ್ಲಿ ಅಂದರೆ - ಮಾರ್ಗಶಿರ ಮಾಸದಲ್ಲಿ ನಂದಗೋಪನ ಹಳ್ಳಿಯಲ್ಲಿದ್ದ ಕುಮಾರಿಯರು ಕಾತ್ಯಾಯಿನೀ ದೇವಿಯ ಪೂಜೆಯನ್ನು ಮತ್ತು ವ್ರತವನ್ನು ಮಾಡತೊಡಗಿದರು. ವ್ರತದ ನಿಯಮದಂತೆ ಅವರು ಹವಿಷ್ಯಾನ್ನವನ್ನೇ ಊಟ ಮಾಡುತ್ತಿದ್ದರು. ॥1॥

(ಶ್ಲೋಕ-2)

ಮೂಲಮ್

ಆಪ್ಲುತ್ಯಾಂಭಸಿ ಕಾಲಿಂದ್ಯಾ ಜಲಾಂತೇ ಚೋದಿತೇರುಣೇ ।
ಕೃತ್ವಾ ಪ್ರತಿಕೃತಿಂ ದೇವೀಮಾನರ್ಚುರ್ನೃಪ ಸೈಕತೀಮ್ ॥

(ಶ್ಲೋಕ-3)

ಮೂಲಮ್

ಗಂಧೈರ್ಮಾಲ್ಯೈಃ ಸುರಭಿಭಿರ್ಬಲಿಭಿರ್ಧೂಪದೀಪಕೈಃ ।
ಉಚ್ಚಾವಚೈಶ್ಚೋಪಹಾರೈಃ ಪ್ರವಾಲಲತಂಡುಲೈಃ ॥

ಅನುವಾದ

ಮಹಾರಾಜ! ಆ ಕನ್ಯೆಯರು ಅರುಣೋದಯವಾಗುತ್ತಲೇ ಯಮುನಾನದಿಯ ತೀರ್ಥದಲ್ಲಿ ಸ್ನಾನಮಾಡಿ, ತೀರದಲ್ಲಿರುವ ಮರಳಿನಿಂದಲೇ ಕಾತ್ಯಾಯಿನಿಯ ಮೂರ್ತಿಯನ್ನು ಕಲ್ಪಿಸಿಕೊಂಡು, ಸುಗಂಧವಾದ ಗಂಧ, ಪುಷ್ಪಗಳಿಂದಲೂ, ಹಾರಗಳಿಂದಲೂ, ಬಗೆ ಬಗೆಯ ನೈವೇದ್ಯಗಳಿಂದಲೂ ಧೂಪ-ದೀಪ ಮುಂತಾದ ಸಣ್ಣ-ದೊಡ್ಡ ಪೂಜಾಸಾಮಗ್ರಿಗಳಿಂದಲೂ, ಚಿಗುರೆಲೆಗಳಿಂದಲೂ, ಅಕ್ಷತೆಗಳಿಂದಲೂ ದೇವಿಯ ಪೂಜೆಯನ್ನು ಮಾಡುತ್ತಿದ್ದರು. ॥2-3॥

(ಶ್ಲೋಕ-4)

ಮೂಲಮ್

ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಧೀಶ್ವರಿ ।
ನಂದಗೋಪಸುತಂ ದೇವಿ ಪತಿಂ ಮೇ ಕುರು ತೇ ನಮಃ ।
ಇತಿ ಮಂತ್ರಂ ಜಪನ್ತ್ಯಸ್ತಾಃ ಪೂಜಾಂ ಚಕ್ರುಃ ಕುಮಾರಿಕಾಃ ॥

ಅನುವಾದ

‘‘ಹೇ ಕಾತ್ಯಾಯಿನಿ ಮಹಾ ಮಾಯಾ ದೇವಿಯೇ! ಮಹಾಯೋಗಿನಿಯೇ! ಸಮಸ್ತರಿಗೂ ಏಕಮಾತ್ರ ಸ್ವಾಮಿನಿಯೇ! ನಂದಗೋಪನ ಮಗನಾದ ಶ್ರೀಕೃಷ್ಣನು ನಮಗೆ ಪತಿಯಾಗುವಂತೆ ಅನುಗ್ರಹಿಸು. ನಿನ್ನ ಪಾದಾರವಿಂದಗಳಲ್ಲಿ ನಮಸ್ಕರಿಸುತ್ತೇವೆ’’- ಎಂಬ ಈ ಮಹಾಮಂತ್ರವನ್ನು ಎಲ್ಲ ಕುಮಾರಿಯರೂ ಜಪಿಸುತ್ತಾ ದೇವಿಯ ಆರಾಧನೆ ಮಾಡುತ್ತಿದ್ದರು. ॥4॥

(ಶ್ಲೋಕ-5)

ಮೂಲಮ್

ಏವಂ ಮಾಸಂ ವ್ರತಂ ಚೇರುಃ ಕುಮಾರ್ಯಃ ಕೃಷ್ಣಚೇತಸಃ ।
ಭದ್ರಕಾಲೀಂ ಸಮಾನರ್ಚುರ್ಭೂಯಾನ್ನಂದಸುತಃ ಪತಿಃ ॥

ಅನುವಾದ

ಹೀಗೆ ಶ್ರೀಕೃಷ್ಣನಲ್ಲಿಯೇ ನೆಟ್ಟು ಹೋಗಿದ್ದ ಮನಸ್ಸುಳ್ಳ ಆ ಕುಮಾರಿಯರು ಒಂದು ತಿಂಗಳಕಾಲ ವ್ರತಾನುಷ್ಠಾನ ಮಾಡುತ್ತಾ ನಂದಗೋಪನ ಮಗನೇ ತಮಗೆ ಪತಿಯಾಗಬೇಕೆಂದು ಭದ್ರಕಾಳಿಯನ್ನು ಶ್ರದ್ಧೆಯಿಂದ ಪೂಜಿಸಿದರು. ॥5॥

(ಶ್ಲೋಕ-6)

ಮೂಲಮ್

ಉಷಸ್ಯುತ್ಥಾಯ ಗೋತ್ರೈಃ ಸ್ವೈರನ್ಯೋನ್ಯಾಬದ್ಧಬಾಹವಃ ।
ಕೃಷ್ಣಮುಚ್ಚೈರ್ಜಗುರ್ಯಾಂತ್ಯಃ ಕಾಲಿಂದ್ಯಾಂ ಸ್ನಾತುಮನ್ವಹಮ್ ॥

ಅನುವಾದ

ಆ ಕನ್ನಿಕೆಯರು ಪ್ರತಿದಿನವೂ ಉಷಃಕಾಲದಲ್ಲೇ ಎದ್ದು ಒಬ್ಬರು ಮತ್ತೊಬ್ಬರ ಹೆಸರಿಡಿದು ಕೂಗಿಕೊಳ್ಳುತ್ತಾ ಪರಸ್ಪರ ಕೈ-ಕೈಹಿಡಿದುಕೊಂಡು ಗಟ್ಟಿಯಾಗಿ ಭಗವಾನ್ ಶ್ರೀಕೃಷ್ಣನ ಲೀಲೆಗಳನ್ನು, ಅವನ ನಾಮಗಳನ್ನು ಹಾಡುತ್ತಾ ಯಮುನಾ ಜಲದಲ್ಲಿ ಸ್ನಾನಮಾಡಲು ಹೋಗುತ್ತಿದ್ದರು. ॥6॥

(ಶ್ಲೋಕ-7)

ಮೂಲಮ್

ನದ್ಯಾಂ ಕದಾಚಿದಾಗತ್ಯ ತೀರೇ ನಿಕ್ಷಿಪ್ಯ ಪೂರ್ವವತ್ ।
ವಾಸಾಂಸಿ ಕೃಷ್ಣಂ ಗಾಯಂತ್ಯೋ ವಿಜಹ್ರುಃ ಸಲಿಲೇ ಮುದಾ ॥

ಅನುವಾದ

ಒಂದು ದಿನ ಕುಮಾರಿಯರೆಲ್ಲರೂ ಪ್ರತಿದಿನದಂತೆ ಯಮುನಾತೀರಕ್ಕೆ ಹೋಗಿ ತಮ್ಮ-ತಮ್ಮ ಬಟ್ಟೆಗಳನ್ನು ಬಿಚ್ಚಿಟ್ಟು ಭಗವಾನ್ ಶ್ರೀಕೃಷ್ಣನ ಗುಣಗಳನ್ನು ಹಾಡುತ್ತಾ ಆನಂದವಾಗಿ ಜಲಕ್ರೀಡೆಯಾಡತೊಡಗಿದರು. ॥7॥

(ಶ್ಲೋಕ-8)

ಮೂಲಮ್

ಭಗವಾಂಸ್ತದಭಿಪ್ರೇತ್ಯ ಕೃಷ್ಣೋ ಯೋಗೇಶ್ವರೇಶ್ವರಃ ।
ವಯಸ್ಯೈರಾವೃತಸ್ತತ್ರ ಗತಸ್ತತ್ಕರ್ಮಸಿದ್ಧಯೇ ॥

ಅನುವಾದ

ಪರೀಕ್ಷಿತನೇ! ಯೋಗೇಶ್ವರರಿಗೂ ಈಶ್ವರನಾದ ಶ್ರೀಕೃಷ್ಣನಿಗೆ ಗೋಪಕನ್ಯೆಯರ ಆಶಯವು ತಿಳಿದು ಹೋಯಿತು. ಅವನು ಅವರ ಆಶಯವನ್ನು ಪೂರೈಸಿಕೊಡುವ ಸಲುವಾಗಿ ತನ್ನ ಗೆಳೆಯರಾದ ಗೋಪಬಾಲಕರೊಡನೆ ಸಮಾವೃತನಾಗಿ ಆ ಕುಮಾರಿಯರ ಸಾಧನೆಯನ್ನು ಸಫಲಗೊಳಿಸಲಿಕ್ಕಾಗಿ ಯಮುನಾನದಿಯ ತೀರಕ್ಕೆ ಆಗಮಿಸಿದನು. ॥8॥

(ಶ್ಲೋಕ-9)

ಮೂಲಮ್

ತಾಸಾಂ ವಾಸಾಂಸ್ಯುಪಾದಾಯ ನೀಪಮಾರುಹ್ಯ ಸತ್ವರಃ ।
ಹಸದ್ಭಿಃ ಪ್ರಹಸನ್ಬಾಲೈಃ ಪರಿಹಾಸಮುವಾಚ ಹ ॥

ಅನುವಾದ

ಅವನು ಆ ಗೋಪಿಯರ ಎಲ್ಲ ವಸ್ತ್ರಗಳನ್ನು ಎತ್ತಿಕೊಂಡು ಲಗುಬಗೆಯಿಂದ ಒಂದು ಕದಂಬ ವೃಕ್ಷವನ್ನು ಹತ್ತಿ ಕುಳಿತನು. ಜೊತೆಗಿನ ಗೋಪಬಾಲಕರೆಲ್ಲರೂ ಕಿಲ-ಕಿಲನೆ ನಗತೊಡಗಿದರು. ಶ್ರೀಕೃಷ್ಣನು ಅವರೊಂದಿಗೆ ನಗುತ್ತಾ ಗೋಪಕುಮಾರಿಯರಿಗೆ ಹೇಳುತ್ತಾನೆ. ॥9॥

(ಶ್ಲೋಕ-10)

ಮೂಲಮ್

ಅತ್ರಾಗತ್ಯಾಬಲಾಃ ಕಾಮಂ ಸ್ವಂ ಸ್ವಂ ವಾಸಃ ಪ್ರಗೃಹ್ಯತಾಮ್ ।
ಸತ್ಯಂ ಬ್ರವಾಣಿ ನೋ ನರ್ಮ ಯದ್ಯೂಯಂ ವ್ರತಕರ್ಶಿತಾಃ ॥

ಅನುವಾದ

ಎಲೈ ಕುಮಾರಿಯರೇ! ನಿಮಗೆ ನಿಮ್ಮ ವಸ್ತ್ರಗಳು ಬೇಕಿದ್ದರೆ ಇಲ್ಲಿಗೆ ಬಂದು ತೆಗೆದುಕೊಂಡು ಹೋಗಿರಿ. ನಾನು ನಿಮ್ಮಲ್ಲಿ ನಿಜವನ್ನೇ ಹೇಳುತ್ತಿದ್ದೇನೆ. ಖಂಡಿತವಾಗಿ ಪರಿಹಾಸ್ಯಕ್ಕಾಗಿ ಅಲ್ಲ. ನೀವೆಲ್ಲರೂ ವ್ರತಾನುಷ್ಠಾನದಿಂದ ದುರ್ಬಲೆಯರಾಗಿರುವಿರಿ. ॥10॥

(ಶ್ಲೋಕ-11)

ಮೂಲಮ್

ನ ಮಯೋದಿತಪೂರ್ವಂ ವಾ ಅನೃತಂ ತದಿಮೇ ವಿದುಃ ।
ಏಕೈಕಶಃ ಪ್ರತೀಚ್ಛಧ್ವಂ ಸಹೈವೋತ ಸುಮಧ್ಯಮಾಃ ॥

ಅನುವಾದ

ನಾನು ಎಂದೂ ಸುಳ್ಳು ಹೇಳಲಿಲ್ಲ - ಇದನ್ನು ನನ್ನ ಮಿತ್ರರಾದ ಈ ಗೋಪ ಬಾಲಕರು ಬಲ್ಲರು. ಸುಂದರಿಯರೇ! ನೀವು ಬಯಸುವಿರಾದರೆ ಬೇರೆ-ಬೇರೆಯಾಗಿ ಬಂದು ನಿಮ್ಮ-ನಿಮ್ಮ ವಸ್ತ್ರಗಳನ್ನು ಕೊಂಡುಹೋಗಿರಿ. ಇಲ್ಲವೇ ಒಟ್ಟಿಗೆ ಬಂದು ಕೊಂಡೊಯ್ಯಿರಿ. ನನಗೆ ಇದರಲ್ಲಿ ಯಾವ ಅಭ್ಯಂತರವೂ ಇಲ್ಲ. ॥11॥

(ಶ್ಲೋಕ-12)

ಮೂಲಮ್

ತಸ್ಯ ತತ್ ಕ್ಷ್ವೇಲಿತಂ ದೃಷ್ಟ್ವಾ ಗೋಪ್ಯಃ ಪ್ರೇಮಪರಿಪ್ಲುತಾಃ ।
ವ್ರೀಡಿತಾಃ ಪ್ರೇಕ್ಷ್ಯ ಚಾನ್ಯೋನ್ಯಂ ಜಾತಹಾಸಾ ನ ನಿರ್ಯಯುಃ ॥

ಅನುವಾದ

ಭಗವಂತನ ಈ ಪರಿಹಾಸ್ಯದ ಮಾತನ್ನು ಕೇಳಿ ಗೋಪಿಕೆಯರ ಹೃದಯ ಪ್ರೇಮದಿಂದ ತುಂಬಿ ಹೋಯಿತು. ಅವರು ಸ್ವಲ್ಪ ನಾಚಿಕೊಂಡು ಪರಸ್ಪರ ನೋಡಿಕೊಂಡು ಮುಗುಳ್ನಗುತ್ತಿದ್ದರು. ನೀರಿನಿಂದ ಹೊರಗೆ ಬರಲಿಲ್ಲ. ॥12॥

(ಶ್ಲೋಕ-13)

ಮೂಲಮ್

ಏವಂ ಬ್ರುವತಿ ಗೋವಿಂದೇ ನರ್ಮಣಾಕ್ಷಿಪ್ತಚೇತಸಃ ।
ಆಕಂಠಮಗ್ನಾಃ ಶೀತೋದೇ ವೇಪಮಾನಾಸ್ತಮಬ್ರುವನ್ ॥

ಅನುವಾದ

ಭಗವಂತನು ಪರಿಹಾಸ್ಯದ ಮಾತುಗಳನ್ನಾಡಿದಾಗ ಅವನ ವಿನೋದದಿಂದ ಕುಮಾರಿಯರ ಚಿತ್ತವೂ ಇನ್ನೂ ಹೆಚ್ಚಾಗಿ ಅವನೆಡೆಗೆ ಸೆಳೆಯಲ್ಪಟ್ಟಿತು. ಅವರು ಕತ್ತಿನವರೆಗೆ ನೀರಿನಲ್ಲಿ, ಮುಳುಗಿ ನಿಂತಿದ್ದರು. ಅವರ ಶರೀರಗಳು ಚಳಿಯಿಂದ ಗಡ-ಗಡನೆ ನಡುಗುತ್ತಿದ್ದವು. ಅವರು ಕೃಷ್ಣನಲ್ಲಿ ಹೇಳತೊಡಗಿದರು. ॥13॥

(ಶ್ಲೋಕ-14)

ಮೂಲಮ್

ಮಾನಯಂ ಭೋಃ ಕೃಥಾಸ್ತ್ವಾಂ ತು ನಂದಗೋಪಸುತಂ ಪ್ರಿಯಮ್ ।
ಜಾನೀಮೋಂಗ ವ್ರಜಶ್ಲಾಘ್ಯಂ ದೇಹಿ ವಾಸಾಂಸಿ ವೇಪಿತಾಃ ॥

ಅನುವಾದ

ಸಮಸ್ತರಿಗೂ ಪ್ರಿಯನಾದ ಓ ಕೃಷ್ಣನೇ! ಇಂತಹ ಅನ್ಯಾಯವನ್ನು ನೀನು ಮಾಡಬಾರದು. ನೀನು ನಂದರಾಜನ ಮುದ್ದು ಮಗನೆಂಬುದನ್ನು ನಾವು ಬಲ್ಲೆವು. ಸಮಸ್ತ ವ್ರಜವಾಸಿಗಳಿಂದ ಶ್ಲಾಘಿಸಲ್ಪಡುವವನೆಂಬುದನ್ನೂ ನಾವು ಬಲ್ಲೆವು. ಆದುದರಿಂದ ನಮಗೂ ಪ್ರಿಯತಮನಾಗಿರುವೆ. ನೋಡು ನಾವು ಚಳಿಯಿಂದ ನಡುಗುತ್ತಿದ್ದೇವೆ. ನೀನು ನಮ್ಮ ವಸ್ತ್ರಗಳನ್ನು ಕೊಟ್ಟುಬಿಡು. ॥14॥

(ಶ್ಲೋಕ-15)

ಮೂಲಮ್

ಶ್ಯಾಮಸುಂದರ ತೇ ದಾಸ್ಯಃ ಕರವಾಮ ತವೋದಿತಮ್ ।
ದೇಹಿ ವಾಸಾಂಸಿ ಧರ್ಮಜ್ಞ ನೋ ಚೇದ್ರಾಜ್ಞೇ ಬ್ರುವಾಮಹೇ ॥

ಅನುವಾದ

ಪ್ರಿಯ ಶ್ಯಾಮಸುಂದರನೇ! ನಾವು ನಿನ್ನ ದಾಸಿಯರಾಗಿದ್ದೇವೆ. ನೀನು ಹೇಳಿದಂತೆ ಮಾಡಲು ಸಿದ್ಧರಾಗಿದ್ದೇವೆ. ನೀನಾದರೋ ಧರ್ಮದ ಮರ್ಮವನ್ನು ಚೆನ್ನಾಗಿ ತಿಳಿಯುತ್ತಿರುವೆ. ನಮಗೆ ಕಷ್ಟ ಕೊಡಬೇಡ. ನಮ್ಮ ಬಟ್ಟೆ ನಮಗೆ ಕೊಟ್ಟುಬಿಡು. ಇಲ್ಲದಿದ್ದರೆ ನಾವು ಹೋಗಿ ನಂದರಾಜನಿಗೆ ಹೇಳಿಬಿಡುತ್ತೇವೆ. ॥15॥

(ಶ್ಲೋಕ-16)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಭವತ್ಯೋ ಯದಿ ಮೇ ದಾಸ್ಯೋ ಮಯೋಕ್ತಂ ವಾ ಕರಿಷ್ಯಥ ।
ಅತ್ರಾಗತ್ಯ ಸ್ವವಾಸಾಂಸಿ ಪ್ರತೀಚ್ಛಂತು ಶುಚಿಸ್ಮಿತಾಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಶುಭ್ರವಾದ ಮಂದಹಾಸವುಳ್ಳ ಕುಮಾರಿಯರೇ! ನನಗೆ ದಾಸಿಯರಾಗಲು ನೀವು ಸಿದ್ಧರಿದ್ದರೆ ನಾನು ಹೇಳಿದಂತೆ ಮಾಡಿರಿ. ಇಲ್ಲಿಗೆ ಬಂದು ನಿಮ್ಮ-ನಿಮ್ಮ ವಸ್ತ್ರಗಳನ್ನು ತೆಗೆದುಕೊಂಡು ಹೋಗಿರಿ. ॥16॥

(ಶ್ಲೋಕ-17)

ಮೂಲಮ್

ತತೋ ಜಲಾಶಯಾತ್ಸರ್ವಾ ದಾರಿಕಾಃ ಶೀತವೇಪಿತಾಃ ।
ಪಾಣಿಭ್ಯಾಂ ಯೋನಿಮಾಚ್ಛಾದ್ಯ ಪ್ರೋತ್ತೇರುಃ ಶೀತಕರ್ಶಿತಾಃ ॥

ಅನುವಾದ

ಪರೀಕ್ಷಿತನೇ! ಆ ಕುಮಾರಿಯರು ಚಳಿಯಿಂದ ನಡುಗುತ್ತಿದ್ದರು. ಭಗವಂತನ ಇಂತಹ ಮಾತನ್ನು ಕೇಳಿ ಅವರ ತಮ್ಮ ಎರಡೂ ಕೈಗಳಿಂದ ಗುಪ್ತಾಂಗಗಳನ್ನು ಮುಚ್ಚಿಕೊಂಡು ಯಮುನೆಯಿಂದ ಮೇಲಕ್ಕೆ ಬಂದರು. ಆಗ ಚಳಿಯು ಅವರೆಲ್ಲರನ್ನು ತುಂಬಾ ಬಾಧಿಸುತ್ತಿತ್ತು. ॥17॥

(ಶ್ಲೋಕ-18)

ಮೂಲಮ್

ಭಗವಾನಾಹ ತಾ ವೀಕ್ಷ್ಯ ಶುದ್ಧಭಾವಪ್ರಸಾದಿತಃ ।
ಸ್ಕಂಧೇ ನಿಧಾಯ ವಾಸಾಂಸಿ ಪ್ರೀತಃ ಪ್ರೋವಾಚ ಸಸ್ಮಿತಮ್ ॥

ಅನುವಾದ

ಅವರ ಈ ಶುದ್ಧಭಾವದಿಂದ ಭಗವಂತನು ಅತ್ಯಂತ ಪ್ರಸನ್ನನಾದನು. ತನ್ನ ಬಳಿಗೆ ಬಂದ ಅವರನ್ನು ನೋಡಿ ಅವನು ಗೋಪಿಯರ ಬಟ್ಟೆಗಳನ್ನು ತನ್ನ ಹೆಗಲ ಮೇಲಿಟ್ಟುಕೊಂಡು, ಮುಗುಳ್ನಗುತ್ತಾ ಹೇಳಿದನು. ॥18॥

(ಶ್ಲೋಕ-19)

ಮೂಲಮ್

ಯೂಯಂ ವಿವಸಾ ಯದಪೋ ಧೃತವ್ರತಾ
ವ್ಯಗಾಹತೈತತ್ತದು ದೇವಹೇಲನಮ್ ।
ಬಧ್ವಾಂಜಲಿಂ ಮೂರ್ಧ್ನ್ಯಪನುತ್ತಯೇಂಹಸಃ
ಕೃತ್ವಾ ನಮೋಧೋ ವಸನಂ ಪ್ರಗೃಹ್ಯತಾಮ್ ॥

ಅನುವಾದ

ಎಲೈ ಗೋಪಿಯರೇ! ನೀವು ಕೈಗೊಂಡ ವ್ರತವನ್ನು ಚೆನ್ನಾಗಿ ನೆರವೇರಿಸಿರುವಿರಿ, ಇದರಲ್ಲಿ ಸಂದೇಹವೇ ಇಲ್ಲ. ಆದರೆ ನೀವು ವಸ್ತ್ರಹೀನರಾಗಿ ನದಿಯಲ್ಲಿ ಸ್ನಾನಮಾಡಿದುದು ಜಲಾಧಿಷ್ಠಾತೃದೇವನಾದ ವರುಣನಿಗೂ ಮತ್ತು ಯಮುನಾದೇವಿಗೂ ಅಪರಾಧ ಮಾಡಿದಂತಾಗಿದೆ. ಈ ದೋಷದ ಶಾಂತಿಗಾಗಿ ನೀವು ನಿಮ್ಮೆರಡೂ ಕೈಗಳನ್ನು ಜೋಡಿಸಿ (ಬದ್ಧಾಂಜಲಿಯಾಗಿ) ತಲೆಯ ಮೇಲಿಟ್ಟುಕೊಂಡು ಬಗ್ಗಿ ನಮಸ್ಕಾರ ಮಾಡಿರಿ. ಅನಂತರ ನಿಮ್ಮ-ನಿಮ್ಮ ವಸ್ತ್ರಗಳನ್ನು ಕೊಂಡುಹೋಗಿರಿ. ॥19॥

(ಶ್ಲೋಕ-20)

ಮೂಲಮ್

ಇತ್ಯಚ್ಯುತೇನಾಭಿಹಿತಾ ವ್ರಜಾಬಲಾ
ಮತ್ವಾ ವಿವಸಾಪ್ಲವನಂ ವ್ರತಚ್ಯುತಿಮ್ ।
ತತ್ಪೂರ್ತಿಕಾಮಾಸ್ತದಶೇಷಕರ್ಮಣಾಂ
ಸಾಕ್ಷಾತ್ಕೃತಂ ನೇಮುರವದ್ಯಮೃಗ್ಯತಃ ॥

ಅನುವಾದ

ಭಗವಾನ್ ಶ್ರೀಕೃಷ್ಣನ ಮಾತನ್ನು ಕೇಳಿದ ಆ ವ್ರಜದ ಕುಮಾರಿಯರು - ನಿಜವಾಗಿ ನಾವು ವಸ್ತ್ರಹೀನರಾಗಿ ಸ್ನಾನಮಾಡಿದ್ದರಿಂದ ನಮ್ಮ ವ್ರತದಲ್ಲಿ ಕೊರತೆ ಉಂಟಾಯಿತೆಂದೇ ತಿಳಿದರು. ಆದ್ದರಿಂದ ಅದು ನಿರ್ವಿಘ್ನವಾಗಿ ನೆರವೇರಲು ಅವರು ಸಮಸ್ತ ಕರ್ಮಗಳ ಸಾಕ್ಷಿಯಾದ ಶ್ರೀಕೃಷ್ಣನಿಗೆ ನಮಸ್ಕರಿಸಿದರು. ಏಕೆಂದರೆ, ಅವನಿಗೆ ನಮಸ್ಕಾರ ಮಾಡುವುದರಿಂದ ಎಲ್ಲ ನ್ಯೂನಾತಿರಿಕ್ತಗಳು ಮತ್ತು ಅಪರಾಧಗಳು ತೊಳೆದು ಹೋಗುವುವು. ॥20॥

(ಶ್ಲೋಕ-21)

ಮೂಲಮ್

ತಾಸ್ತಥಾವನತಾ ದೃಷ್ಟ್ವಾ ಭಗವಾನ್ ದೇವಕೀಸುತಃ ।
ವಾಸಾಂಸಿ ತಾಭ್ಯಃ ಪ್ರಾಯಚ್ಛತ್ಕರುಣಸ್ತೇನ ತೋಷಿತಃ ॥

ಅನುವಾದ

ಯಶೋದಾನಂದನ ಭಗವಾನ್ ಶ್ರೀಕೃಷ್ಣನು- ಎಲ್ಲ ಕುಮಾರಿಯರು ನನ್ನ ಆಜ್ಞೆಗನುಸಾರವಾಗಿ ನಮಸ್ಕರಿಸುತ್ತಿದ್ದಾರೆ ಎಂದು ನೋಡಿ ಅತ್ಯಂತ ಪ್ರಸನ್ನನಾದನು. ಅವನ ಹೃದಯದಲ್ಲಿ ಕರುಣೆ ಉಕ್ಕಿಬಂತು ಹಾಗೂ ಅವನು ಅವರ ವಸ್ತ್ರಗಳನ್ನು ಕೊಟ್ಟು ಬಿಟ್ಟನು. ॥21॥

(ಶ್ಲೋಕ-22)

ಮೂಲಮ್

ದೃಢಂ ಪ್ರಲಬ್ಧಾಸಪಯಾ ಚ ಹಾಪಿತಾಃ
ಪ್ರಸ್ತೋಭಿತಾಃ ಕ್ರೀಡನವಚ್ಚ ಕಾರಿತಾಃ ।
ವಸಾಣಿ ಚೈವಾಪಹೃತಾನ್ಯಥಾಪ್ಯಮುಂ
ತಾ ನಾಭ್ಯಸೂಯನ್ ಪ್ರಿಯಸಂಗನಿರ್ವೃತಾಃ ॥

ಅನುವಾದ

ಪರೀಕ್ಷಿತನೇ! ಶ್ರೀಕೃಷ್ಣನಿಂದ ಗೋಪಕುಮಾರಿಯರು ಲಜ್ಜೆ ಸಂಕೋಚ ಬಿಡಬೇಕಾಗಿ ಬಂದು, ಅಪಹಾಸ್ಯಕ್ಕೀಡಾದರು. ಆಟದ ಬೊಂಬೆಯಂತೆ ಶ್ರೀಕೃಷ್ಣನು ಗೋಪಕುಮಾರಿಯರನ್ನು ಮನಬಂದಂತೆ ಆಟವಾಡಿಸಿದನು. ಅವರ ವಸ್ತ್ರಗಳನ್ನು ಅಪಹರಿಸಿದನು. ಆದರೂ ಅವರು ಅವನ ಮೇಲೆ ಕೋಪಗೊಳ್ಳಲಿಲ್ಲ. ಅವನ ಕಾರ್ಯಗಳಲ್ಲಿ ದೋಷವೆಣಿಸಲಿಲ್ಲ. ಬದಲಿಗೆ ತಮ್ಮ ಪ್ರಿಯತಮನ ಪ್ರೀತಿಯಿಂದ ಅವರು ಇನ್ನೂ ಆನಂದಿಸಿದರು. ॥22॥

(ಶ್ಲೋಕ-23)

ಮೂಲಮ್

ಪರಿಧಾಯ ಸ್ವವಾಸಾಂಸಿ ಪ್ರೇಷ್ಠಸಂಗಮಸಜ್ಜಿತಾಃ ।
ಗೃಹೀತಚಿತ್ತಾ ನೋ ಚೇಲುಸ್ತಸ್ಮಿಂಲ್ಲಜ್ಜಾಯಿತೇಕ್ಷಣಾಃ ॥

ಅನುವಾದ

ಪರೀಕ್ಷಿತನೇ! ಬಳಿಕ ಗೋಪಿಯರೆಲ್ಲರೂ ಶ್ರೀಕೃಷ್ಣನು ಇತ್ತ ಪವಿತ್ರವಾದ ತಮ್ಮ-ತಮ್ಮ ವಸ್ತ್ರಗಳನ್ನು ಧರಿಸಿಕೊಂಡರು. ಆದರೆ ಅವರು ಒಂದು ಹೆಜ್ಜೆಯನ್ನೂ ಮುಂದಿಡಲಾರದಷ್ಟು ಅವರ ಮನಸ್ಸನ್ನು ಶ್ರೀಕೃಷ್ಣನು ಆಕರ್ಷಿಸಿಬಿಟ್ಟಿದ್ದನು. ತಮ್ಮ ಪ್ರಿಯತಮನ ಸಮಾಗಮನಕ್ಕಾಗಿ ಅವರು ಸಿಂಗರಿಸಿಕೊಂಡು, ನಾಚಿಕೆಯಿಂದ ಕುಡಿ ನೋಟದಿಂದ ಶ್ರೀಕೃಷ್ಣನನ್ನು ನೋಡುತ್ತಾ ಅಲ್ಲೇ ನಿಂತುಬಿಟ್ಟರು. ॥23॥

(ಶ್ಲೋಕ-24)

ಮೂಲಮ್

ತಾಸಾಂ ವಿಜ್ಞಾಯ ಭಗವಾನ್ ಸ್ವಪಾದಸ್ಪರ್ಶಕಾಮ್ಯಯಾ ।
ಧೃತವ್ರತಾನಾಂ ಸಂಕಲ್ಪಮಾಹ ದಾಮೋದರೋಬಲಾಃ ॥

ಅನುವಾದ

ಆ ಕುಮಾರಿಯರು ತನ್ನ ಚರಣಕಮಲಗಳನ್ನು ಸ್ಪರ್ಶಿ ಸುವ ಇಚ್ಛೆಯಿಂದ ಕಾತುರರಾಗಿಯೇ ವ್ರತವನ್ನು ಕೈಗೊಂಡಿದ್ದರು ಹಾಗೂ ಅವರ ಜೀವನದ ಇದೊಂದೇ ಸಂಕಲ್ಪವಿದ್ದುದನ್ನು ನೋಡಿದ ಭಗವಾನ್ ದಾಮೋದರನು ಅವರ ಪ್ರೇಮಕ್ಕೆ ಮನಸೋತು ಇಂತೆಂದನು. ॥24॥

(ಶ್ಲೋಕ-25)

ಮೂಲಮ್

ಸಂಕಲ್ಪೋ ವಿದಿತಃ ಸಾಧ್ವ್ಯೋ ಭವತೀನಾಂ ಮದರ್ಚನಮ್ ।
ಮಯಾನುಮೋದಿತಃ ಸೋಸೌ ಸತ್ಯೋ ಭವಿತುಮರ್ಹತಿ ॥

ಅನುವಾದ

ಪ್ರೇಯಸಿಯರಾದ ಕುಮಾರಿಯರೇ! ಸಾಧ್ವಿಯರೇ! ನನ್ನ ಸೇವೆ ಮಾಡಬೇಕೆನ್ನುವ ನಿಮ್ಮ ಸಂಕಲ್ಪವನ್ನು ನಾನು ತಿಳಿದಿರುತ್ತೇನೆ. ನಿಮ್ಮ ಈ ಅಭಿಲಾಷೆಯನ್ನು ಅನುಮೋದಿಸುತ್ತೇನೆ. ನಿಮ್ಮ ಸಂಕಲ್ಪವು ಸತ್ಯವಾಗಿ ಪರಿಣಮಿಸುವುದು. ನೀವು ನನ್ನನ್ನು ಮನತುಂಬಿ ಪೂಜಿಸಿರುವಿರಿ. ॥25॥

(ಶ್ಲೋಕ-26)

ಮೂಲಮ್

ನ ಮಯ್ಯಾವೇಶಿತಧಿಯಾಂ ಕಾಮಃ ಕಾಮಾಯ ಕಲ್ಪತೇ ।
ಭರ್ಜಿತಾ ಕ್ವಥಿತಾ ಧಾನಾ ಪ್ರಾಯೋ ಬೀಜಾಯ ನೇಷ್ಯತೇ ॥

ಅನುವಾದ

ಹುರಿದು ಬಿತ್ತಿದ ಬೀಜವು ಹೇಗೆ ಮೊಳೆಯುವುದಿಲ್ಲವೋ ಹಾಗೆಯೇ ತಮ್ಮ ಮನಸ್ಸು ಪ್ರಾಣಗಳನ್ನು ನನ್ನಲ್ಲಿ ಅರ್ಪಿಸುವವರ ಕಾಮನೆಗಳು ಸಾಂಸಾರಿಕ ಭೋಗಗಳ ಕಡೆಗೆ ಕೊಂಡುಹೋಗಲು ಸಮರ್ಥರಾಗುವುದಿಲ್ಲ. ಆ ಕಾಮನೆಗಳು ಕಾಮನೆಗಳೇ ಅಲ್ಲ. ॥26॥

(ಶ್ಲೋಕ-27)

ಮೂಲಮ್

ಯಾತಾಬಲಾ ವ್ರಜಂ ಸಿದ್ಧಾ ಮಯೇಮಾ ರಂಸ್ಯಥ ಕ್ಷಪಾಃ ।
ಯದುದ್ದಿಶ್ಯ ವ್ರತಮಿದಂ ಚೇರುರಾರ್ಯಾರ್ಚನಂ ಸತೀಃ ॥

ಅನುವಾದ

ಕುಮಾರಿಯರೇ! ಈಗ ನೀವು ನಿಮ್ಮ-ನಿಮ್ಮ ಮನೆಗಳಿಗೆ ಹೊರಟುಹೋಗಿರಿ. ನಿಮ್ಮ ಸಾಧನೆಯು ಸಿದ್ಧಿಸಿದೆ. ಮುಂದೆ ಬರಲಿರುವ ಶರದೃತುವಿನ ರಾತ್ರಿಯಲ್ಲಿ ನನ್ನೊಡನೆ ನೀವು ವಿಹರಿಸುವಿರಂತೆ. ಈ ಕಾರಣಕ್ಕಾಗಿಯೇ ಅಲ್ಲವೇ ನೀವು ವ್ರತನಿಷ್ಠರಾಗಿ ಕಾತ್ಯಾಯಿನೀ ದೇವಿಯನ್ನು ಪೂಜಿಸಿದ್ದು? ॥27॥

(ಶ್ಲೋಕ-28)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯಾದಿಷ್ಟಾ ಭಗವತಾ ಲಬ್ಧಕಾಮಾಃ ಕುಮಾರಿಕಾಃ ।
ಧ್ಯಾಯಂತ್ಯಸ್ತತ್ಪದಾಂಭೋಜಂ ಕೃಚ್ಛ್ರಾನ್ನಿರ್ವಿವಿಶುರ್ವ್ರಜಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಂತನ ಈ ಅಪ್ಪಣೆಯನ್ನು ಪಡೆದು ಆ ಗೋಪಿಕೆಯರು ಭಗವಾನ್ ಶ್ರೀಕೃಷ್ಣನ ಚರಣಕಮಲಗಳನ್ನು ಧ್ಯಾನಿಸುತ್ತಾ, ಅವನನ್ನು ಬಿಟ್ಟುಹೋಗಲು ಮನಸ್ಸಿಲ್ಲದ ಮನಸ್ಸಿನಿಂದ ಬಹಳ ಕಷ್ಟದಿಂದ ವ್ರಜಕ್ಕೆ ಮರಳಿದರು. ಈಗ ಅವರ ಸಮಸ್ತ ಕಾಮನೆಗಳು ಪೂರ್ಣವಾಗಿ ಹೋಗಿದ್ದವು. ॥28॥

(ಶ್ಲೋಕ-29)

ಮೂಲಮ್

ಅಥ ಗೋಪೈಃ ಪರಿವೃತೋ ಭಗವಾನ್ ದೇವಕೀಸುತಃ ।
ವೃಂದಾವನಾದ್ಗತೋ ದೂರಂ ಚಾರಯನ್ಗಾಃ ಸಹಾಗ್ರಜಃ ॥

ಅನುವಾದ

ಪ್ರಿಯ ಪರೀಕ್ಷಿತನೇ! ಒಂದುದಿನ ಭಗವಾನ್ ಶ್ರೀಕೃಷ್ಣನು ಬಲರಾಮ ಮತ್ತು ಗೋಪಬಾಲಕರೊಂದಿಗೆ ಗೋವುಗಳನ್ನು ಮೇಯಿಸುತ್ತಾ ವೃಂದಾವನದಿಂದ ಬಹಳದೂರ ಹೋಗಿ ಬಿಟ್ಟಿದ್ದನು. ॥29॥

(ಶ್ಲೋಕ-30)

ಮೂಲಮ್

ನಿದಾಘಾರ್ಕಾತಪೇ ತಿಗ್ಮೇ ಛಾಯಾಭಿಃ ಸ್ವಾಭಿರಾತ್ಮನಃ ।
ಆತಪತ್ರಾಯಿತಾನ್ವೀಕ್ಷ್ಯ ದ್ರುಮಾನಾಹ ವ್ರಜೌಕಸಃ ॥

(ಶ್ಲೋಕ-31)

ಮೂಲಮ್

ಹೇ ಸ್ತೋಕಕೃಷ್ಣ ಹೇ ಅಂಶೋ ಶ್ರೀದಾಮನ್ಸುಬಲಾರ್ಜುನ ।
ವಿಶಾಲರ್ಷಭ ತೇಜಸ್ವಿನ್ ದೇವಪ್ರಸ್ಥ ವರೂಥಪ ॥

ಅನುವಾದ

ಅದು ಗ್ರೀಷ್ಮಋತುವಾಗಿದ್ದು ಸೂರ್ಯನ ಕಿರಣಗಳು ತೀಕ್ಷ್ಣವಾಗಿದ್ದುವು. ಆದರೆ ದಟ್ಟವಾದ ವೃಕ್ಷಗಳು ಶ್ರೀಕೃಷ್ಣನಿಗೆ ಛತ್ರಿಯಂತೆ ನೆರಳನ್ನು ಕೊಡುತ್ತಿದ್ದವು. ಕೊಡೆಗಳಂತೆ ನೆರಳನ್ನು ನೀಡುತ್ತದ್ದ ವೃಕ್ಷಗಳನ್ನು ನೋಡಿ ಭಗವಂತನು ಸ್ತೊಕಕೃಷ್ಣ, ಅಂಶು, ಶ್ರೀದಾಮ, ಸುಬಲ, ಅರ್ಜುನ, ವಿಶಾಲ, ಋಷಭ, ತೇಜಸ್ವೀ, ದೇವಪ್ರಸ್ಥ, ವರೂಥಪ ಮೊದಲಾದ ಗೋಪ ಬಾಲಕರನ್ನು ಸಂಬೋಧಿಸಿ ಇಂತೆಂದನು. ॥30-31॥

(ಶ್ಲೋಕ-32)

ಮೂಲಮ್

ಪಶ್ಯತೈತಾನ್ಮಹಾಭಾಗಾನ್ ಪರಾರ್ಥೈಕಾಂತಜೀವಿತಾನ್ ।
ವಾತವರ್ಷಾತಪಹಿಮಾನ್ ಸಹಂತೋ ವಾರಯಂತಿ ನಃ ॥

ಅನುವಾದ

ನನ್ನ ಪ್ರಿಯಮಿತ್ರರೇ! ಇದೋ ನೋಡಿರಿ. ಈ ವೃಕ್ಷಗಳು ಎಷ್ಟು ಭಾಗ್ಯ ಶಾಲಿಗಳಾಗಿವೆ! ಇವುಗಳ ಜೀವನವು ಕೇವಲ ಬೇರೆಯವರ ಒಳಿತಿಗಾಗಿಯೇ ಇದೆ. ಇವುಗಳು ತಮ್ಮ ಮೇಲೆ ಬೀಳುವ ಬಿಸಿಲನ್ನೂ, ಮಳೆಯನ್ನೂ, ಹಿಮವನ್ನೂ, ಗಾಳಿಯನ್ನೂ ಸಹಿಸಿಕೊಂಡು ನಮ್ಮನ್ನು ಅವುಗಳಿಂದರಕ್ಷಿಸುತ್ತವೆ. ॥32॥

(ಶ್ಲೋಕ-33)

ಮೂಲಮ್

ಅಹೋ ಏಷಾಂ ವರಂ ಜನ್ಮ ಸರ್ವಪ್ರಾಣ್ಯುಪಜೀವನಮ್ ।
ಸುಜನಸ್ಯೇವ ಯೇಷಾಂ ವೈ ವಿಮುಖಾ ಯಾಂತಿ ನಾರ್ಥಿನಃ ॥

ಅನುವಾದ

ಇವುಗಳ ಜೀವನವೇ ಸರ್ವಶ್ರೇಷ್ಠವಾಗಿದೆ ಎಂದು ನಾನು ಹೇಳುತ್ತೇನೆ. ಏಕೆಂದರೆ, ಇವುಗಳ ಮೂಲಕ ಎಲ್ಲರಿಗೂ ಆಸರೆ ಸಿಗುತ್ತದೆ, ಅವರ ಜೀವನ ನಿರ್ವಾಹವೂ ಆಗುತ್ತದೆ. ಸಜ್ಜನರ ಮನೆಯಿಂದ ಯಾರೇ ಯಾಚಕನು ಬರಿಗೈಯಿಂದ ಮರಳುವುದಿಲ್ಲವೋ ಹಾಗೆಯೇ ಈ ವೃಕ್ಷಗಳಿಂದಲೂ ಕೂಡ ಎಲ್ಲರಿಗೆ ಏನಾದರೂ ಸಿಕ್ಕಿಯೇ ಸಿಗುತ್ತದೆ. ॥33॥

(ಶ್ಲೋಕ-34)

ಮೂಲಮ್

ಪತ್ರಪುಷ್ಪಲಚ್ಛಾಯಾಮೂಲವಲ್ಕಲದಾರುಭಿಃ ।
ಗಂಧನಿರ್ಯಾಸಭಸ್ಮಾಸ್ಥಿತೋಕ್ಮೈಃ ಕಾಮಾನ್ ವಿತನ್ವತೇ ॥

ಅನುವಾದ

ಇವುಗಳು ತನ್ನ ಎಲೆ, ಹೂವು, ಹಣ್ಣು, ನೆರಳು, ಬೇರು, ನಾರು, ಸಿಪ್ಪೆ, ಸೌದೆ, ಗಂಧ, ಹಾಲು, ಬೂದಿ, ಇದ್ದಲು, ಚಿಗುರು, ರೆಂಬೆಗಳು ಇವುಗಳಿಂದ ಜನರ ಕಾಮನೆ ಗಳನ್ನು ಪೂರ್ಣಗೊಳಿಸುತ್ತವೆ. ॥34॥

(ಶ್ಲೋಕ-35)

ಮೂಲಮ್

ಏತಾವಜ್ಜನ್ಮಸಾಲ್ಯಂ ದೇಹಿನಾಮಿಹ ದೇಹಿಷು ।
ಪ್ರಾಣೈರರ್ಥೈರ್ಧಿಯಾ ವಾಚಾ ಶ್ರೇಯ ಏವಾಚರೇತ್ ಸದಾ ॥

ಅನುವಾದ

ನನ್ನ ಪ್ರಿಯಗೆಳೆಯರೇ! ಜಗತ್ತಿನಲ್ಲಿ ಬಹಳಷ್ಟು ಪ್ರಾಣಿಗಳಿದ್ದಾರೆ. ಆದರೆ ಸಾಧ್ಯವಿದ್ದಷ್ಟು ತಮ್ಮ ಧನದಿಂದ, ವಿವೇಕದಿಂದ, ವಿಚಾರದಿಂದ, ಮಾತಿನಿಂದ ಮತ್ತು ಪ್ರಾಣಗಳಿಂದ ಬೇರೆಯವರ ಒಳಿತನ್ನು ಮಾಡಿದಾಗಲೇ ಅವರ ಜೀವನ ಸಫಲ ವಾಗುತ್ತದೆ. ॥35॥

(ಶ್ಲೋಕ-36)

ಮೂಲಮ್

ಇತಿ ಪ್ರವಾಲಸ್ತಬಕಲಪುಷ್ಪದಲೋತ್ಕರೈಃ ।
ತರೂಣಾಂ ನಮ್ರಶಾಖಾನಾಂ ಮಧ್ಯೇನ ಯಮುನಾಂ ಗತಃ ॥

ಅನುವಾದ

ಪರೀಕ್ಷಿತನೇ! ಇಕ್ಕೆಲಗಳಲ್ಲಿಯೂ ವೃಕ್ಷಗಳು ನವಪಲ್ಲವಗಳಿಂದಲೂ, ಹೂ-ಹಣ್ಣುಗಳಿಂದ, ನಿಬಿಡವಾದ ಎಲೆಗಳಿಂದಲೂ, ರೆಂಬೆ-ಕೊಂಬೆಗಳಿಂದ ನಳನಳಿಸುತ್ತಿದ್ದವು. ಅವುಗಳ ಕೊಂಬೆಗಳು ಭೂಮಿಯವರೆಗೆ ಬಾಗಿದ್ದವು. ಭಗವಾನ್ ಶ್ರೀಕೃಷ್ಣನು ಹೀಗೆ ಮಾತನಾಡುತ್ತಾ ಅವುಗಳ ನಡುವಿನಿಂದ ಯಮುನಾತೀರಕ್ಕೆ ಬಂದನು. ॥36॥

(ಶ್ಲೋಕ-37)

ಮೂಲಮ್

ತತ್ರ ಗಾಃ ಪಾಯಯಿತ್ವಾಪಃ ಸುಮೃಷ್ಟಾಃ ಶೀತಲಾಃ ಶಿವಾಃ ।
ತತೋ ನೃಪ ಸ್ವಯಂ ಗೋಪಾಃ ಕಾಮಂ ಸ್ವಾದು ಪಪುರ್ಜಲಮ್ ॥

ಅನುವಾದ

ರಾಜನೇ! ಯಮುನೆಯ ನೀರು ಅತ್ಯಂತ ಮಧುರವೂ, ಶೀತಲವೂ, ಸ್ವಚ್ಛವೂ ಆಗಿತ್ತು. ಅವರೆಲ್ಲರೂ ಮೊದಲು ಗೋವುಗಳಿಗೆ ನೀರನ್ನು ಕುಡಿಸಿ, ಅನಂತರ ತಾವು ಯಥೇಚ್ಛವಾಗಿ ನೀರನ್ನು ಕುಡಿದರು. ॥37॥

(ಶ್ಲೋಕ-38)

ಮೂಲಮ್

ತಸ್ಯಾ ಉಪವನೇ ಕಾಮಂ ಚಾರಯಂತಃ ಪಶೂನ್ನೃಪ ।
ಕೃಷ್ಣರಾಮಾವುಪಾಗಮ್ಯ ಕ್ಷುಧಾರ್ತಾ ಇದಮಬ್ರುವನ್ ॥

ಅನುವಾದ

ಪರೀಕ್ಷಿತನೇ! ಅವರೆಲ್ಲರೂ ಯಮುನಾನದಿಯ ತೀರದ ಹಚ್ಚ-ಹಸಿರಾದ ಉಪವನದಲ್ಲಿ ಸ್ವಚ್ಛಂದವಾಗಿ ತಮ್ಮ ಹಸುಗಳನ್ನು ಮೇಯಿಸುತ್ತಿರುವ ಸಮಯ ಕೆಲವು ಹಸಿದಿರುವ ಗೊಲ್ಲಬಾಲಕರು ಕೃಷ್ಣ-ಬಲರಾಮರ ಬಳಿಗೆ ಹೋಗಿ ಹೀಗೆಂದರು - ॥38॥

ಅನುವಾದ (ಸಮಾಪ್ತಿಃ)

ಇಪ್ಪತ್ತೆರಡನೆಯ ಅಧ್ಯಾಯವು ಮುಗಿಯಿತು. ॥22॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ಗೋಪೀವಸಾಪಹಾರೋ ನಾಮ ದ್ವಾವಿಂಶೋಽಧ್ಯಾಯಃ ॥22॥