[ಇಪ್ಪತ್ತೊಂದನೆಯ ಅಧ್ಯಾಯ]
ಭಾಗಸೂಚನಾ
ವೇಣುಗೀತೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಥಂ ಶರತ್ಸ್ವಚ್ಛಜಲಂ ಪದ್ಮಾಕರಸುಗಂಧಿನಾ ।
ನ್ಯವಿಶದ್ವಾಯುನಾ ವಾತಂ ಸಗೋಗೋಪಾಲಕೋಚ್ಯುತಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಶರತ್ಕಾಲದಲ್ಲಿ ಆ ವೃಂದಾವನವು ಬಹಳ ಸುಂದರವಾಗಿ ಕಾಣುತ್ತಿತ್ತು. ನೀರು ನಿರ್ಮಲವಾಗಿತ್ತು ಹಾಗೂ ಜಲಾಶಯಗಳಲ್ಲಿ ಅರಳಿದ ಕಮಲಗಳ ಸುಗಂಧವನ್ನು ಹೊತ್ತು ಮಂದಾನಿಲವು ಬೀಸುತ್ತಿತ್ತು. ಭಗವಾನ್ ಶ್ರೀಕೃಷ್ಣನು ಗೋವುಗಳ ಮತ್ತು ಗೋಪಾಲ ಬಾಲಕರೊಂದಿಗೆ ಆ ವನವನ್ನು ಪ್ರವೇಶಿಸಿದನು. ॥1॥
(ಶ್ಲೋಕ-2)
ಮೂಲಮ್
ಕುಸುಮಿತವನರಾಜಿಶುಷ್ಮಿಭೃಂಗ-
ದ್ವಿಜಕುಲಘುಷ್ಟಸರಃಸರಿನ್ಮಹೀಧ್ರಮ್ ।
ಮಧುಪತಿರವಗಾಹ್ಯ ಚಾರಯನ್ಗಾಃ
ಸಹಪಶುಪಾಲಬಲಶ್ಚುಕೂಜ ವೇಣುಮ್ ॥
ಅನುವಾದ
ಸುಂದರವಾದ ಮತ್ತು ಸುಗಂಧ ಯುಕ್ತವಾದ ಪುಷ್ಪಗಳಿಂದ ಸಮಲಂಕೃತವಾಗಿದ್ದ ವೃಕ್ಷಗಳ ಸಾಲುಗಳಲ್ಲಿ ದುಂಬಿಗಳು ಝೇಂಕರಿಸುತ್ತಾ ಮಧುಪಾನ ಮಾಡುತ್ತಿದ್ದುವು. ಸರೋವರಗಳಲ್ಲಿಯೂ, ನದಿಯ ತೀರಗಳಲ್ಲಿಯೂ, ಪರ್ವತದ ತಪ್ಪಲುಗಳಲ್ಲಿಯೂ ನಾನಾ ವಿಧವಾದ ಪಕ್ಷಿಗಳು ಕುಳಿತು ಕಲಕಲ ನಿನಾದ ಮಾಡುತ್ತಿದ್ದವು. ಮಧುಪತಿಯಾದ ಶ್ರೀಕೃಷ್ಣನು ಬಲರಾಮನೊಡನೆ ಮತ್ತು ಗೊಲ್ಲ ಬಾಲಕರೊಂದಿಗೆ ವೃಂದಾವನವನ್ನು ಪ್ರವೇಶಿಸಿ ಹಸುಗಳನ್ನು ಮೇಯಿಸುತ್ತಾ ತನ್ನ ಕೊಳಲನ್ನು ಕರ್ಣಾನಂದಕರವಾಗಿ ನುಡಿಸ ತೊಡಗಿದನು. ॥2॥
(ಶ್ಲೋಕ-3)
ಮೂಲಮ್
ತದ್ವ್ರಜಸಿಯ ಆಶ್ರುತ್ಯ ವೇಣುಗೀತಂ ಸ್ಮರೋದಯಮ್ ।
ಕಾಶ್ಚಿತ್ಪರೋಕ್ಷಂ ಕೃಷ್ಣಸ್ಯ ಸ್ವಸಖೀಭ್ಯೋನ್ವವರ್ಣಯನ್ ॥
ಅನುವಾದ
ಶ್ರೀಕೃಷ್ಣನ ಆ ವೇಣುಗಾನವು ಭಗವಂತನ ವಿಷಯದಲ್ಲಿ ಭಕ್ತಿಭಾವವನ್ನು, ಅವನನ್ನು ಸೇರಬೇಕೆಂಬ ಆಕಾಂಕ್ಷೆಯನ್ನು ಹುಟ್ಟಿಸುವುದಾಗಿತ್ತು. (ಅದನ್ನು ಕೇಳಿ ಗೋಪಿಯರ ಹೃದಯಗಳು ಪ್ರೇಮದಿಂದ ತುಂಬಿ ಹೋದುವು). ಅವರು ಏಕಾಂತದಲ್ಲಿ ಕಲೆತು ಸಖಿಯರೊಂದಿಗೆ ಶ್ರೀಕೃಷ್ಣನ ರೂಪ, ಗುಣ ಮತ್ತು ವೇಣುಗೀತದ ಮಾಧುರ್ಯ, ಪ್ರಭಾವವನ್ನು ವರ್ಣಿಸ ತೊಡಗಿದರು. ॥3॥
(ಶ್ಲೋಕ-4)
ಮೂಲಮ್
ತದ್ವರ್ಣಯಿತುಮಾರಬ್ಧಾಃ ಸ್ಮರಂತ್ಯಃ ಕೃಷ್ಣಚೇಷ್ಟಿತಮ್ ।
ನಾಶಕನ್ಸ್ಮರವೇಗೇನ ವಿಕ್ಷಿಪ್ತಮನಸೋ ನೃಪ ॥
ಅನುವಾದ
ವ್ರಜದ ಗೋಪಿಯರು ವೇಣುಗಾನದ ಮಾಧುರ್ಯವನ್ನು ವರ್ಣಿಸಲು ಪ್ರಾರಂಭಿಸುತ್ತಿರುವಂತೆಯೇ ಅವರಿಗೆ ಕೊಳಲನ್ನು ನುಡಿಸುತ್ತಿದ್ದ ಶ್ರೀಕೃಷ್ಣನ ಸ್ಮರಣೆಯುಂಟಾಗಿ, ಅವನ ಕೆಂದುಟಿ, ಕುಡಿ ನೋಟ, ಸುಂದರವಾದ ಹುಬ್ಬುಗಳು, ಅವನ ತಲೆಯ ಮೇಲೆ ಬೆಳಗುತ್ತಿದ್ದ ನವಿಲುಗರಿ-ಗುಂಗುರು ಕೂದಲು, ಮುಗುಳ್ನಗೆ-ಇವೆಲ್ಲವೂ ಅವರ ಸ್ಮೃತಿಪಥದಲ್ಲಿ ಸುಳಿದು ಜಗದಾನಂದಕಂದನನ್ನು ಸೇರಬೇಕೆಂಬ ಕಾತರವು ಹೆಚ್ಚಾಯಿತು. ಅವರ ಮನಸ್ಸೆಲ್ಲವೂ ಶ್ರೀಕೃಷ್ಣನಲ್ಲಿಯೇ ಸೇರಿ ಹೋಗಿದ್ದಿತು. ವೇಣುಗಾನ ಮಾಧುರ್ಯದ ವರ್ಣನೆಯಲ್ಲಿ ಅವರೆಲ್ಲರೂ ಅಸಮರ್ಥರಾದರು. ಕೃಷ್ಣ ಪ್ರೇಮಿಗಳಾದ ಗೋಪಿಯರು ವ್ರಜದಲ್ಲೇ ಇದ್ದುಕೊಂಡು ಶ್ರೀಕೃಷ್ಣನ ಚಿತ್ರವನ್ನು ತಮ್ಮ ಹೃದಯದಲ್ಲಿ ನೋಡ ತೊಡಗಿದರು. ॥4॥
(ಶ್ಲೋಕ-5)
ಮೂಲಮ್
ಬರ್ಹಾಪೀಡಂ ನಟವರವಪುಃ ಕರ್ಣಯೋಃ ಕರ್ಣಿಕಾರಂ
ಬಿಭ್ರದ್ವಾಸಃ ಕನಕಕಪಿಶಂ ವೈಜಯಂತೀಂ ಚ ಮಾಲಾಮ್ ।
ರಂಧ್ರಾನ್ವೇಣೋರಧರಸುಧಯಾ ಪೂರಯನ್ಗೋಪವೃಂದೈ-
ರ್ವೃಂದಾರಣ್ಯಂ ಸ್ವಪದರಮಣಂ ಪ್ರಾವಿಶದ್ಗೀತಕೀರ್ತಿಃ ॥
ಅನುವಾದ
ಶ್ರೀಕೃಷ್ಣನು ಗೊಲ್ಲಬಾಲಕರೊಂದಿಗೆ ವೃಂದಾವನವನ್ನು ಪ್ರವೇಶಿಸುತ್ತಿದ್ದಾನೆ. ಅವನ ತಲೆಯ ಮೇಲೆ ಮಯೂರ ಪಿಚ್ಛಗಳಿವೆ. ಕಿವಿಗಳು ಕರ್ಣಿಕಾರ ಪುಷ್ಪಗಳಿಂದ ಅಲಂಕೃತವಾಗಿದ್ದವು, ಹೊಂಬಣ್ಣದ ಪೀತಾಂಬರವನ್ನು ಉಟ್ಟಿರುವನು. ಅವನ ಕುತ್ತಿಗೆಯಲ್ಲಿ ಐದು ಪ್ರಕಾರದ ಸುಗಂಧಿತ ಪುಷ್ಪಗಳಿಂದ ಪೋಣಿಸಿದ ವೈಜಯಂತೀ ಮಾಲೆಯಿದೆ. ಸುಂದರವಾದ ವಸಗಳನ್ನು ಧರಿಸಿ ನಾಟಕವಾಡಲು ಸಿದ್ಧನಾದ ನಟನಂತೆ ಕಾಣುತ್ತಿದ್ದಾನೆ. ಕೊಳಲಿನ ರಂಧ್ರಗಳಲ್ಲಿ ತನ್ನ ಅಧರಾಮೃತವನ್ನು ತುಂಬುತ್ತಿರುವನು. ಅವನ ಕೀರ್ತಿಯನ್ನು ಹಾಡುತ್ತಾ ಗೋಪಬಾಲಕರು ಹಿಂದೆ-ಹಿಂದೆ ನಡೆಯುತ್ತಿದ್ದಾರೆ. ಹೀಗೆ ವೈಕುಂಠಕ್ಕಿಂತಲೂ ಶ್ರೇಷ್ಠವಾದ ವೃಂದಾವನವನ್ನು ತನ್ನ ಚರಣಕಮಲಗಳ ಚಿಹ್ನೆಯಿಂದ ಮತ್ತಷ್ಟು ರಮಣೀಯವನ್ನಾಗಿಸುತ್ತಾ ಮುನ್ನಡೆಯುತ್ತಿದ್ದಾನೆ. ॥5॥
(ಶ್ಲೋಕ-6)
ಮೂಲಮ್
ಇತಿ ವೇಣುರವಂ ರಾಜನ್ಸರ್ವಭೂತಮನೋಹರಮ್ ।
ಶ್ರುತ್ವಾ ವ್ರಜಸಿಯಃ ಸರ್ವಾ ವರ್ಣಯಂತ್ಯೋಭಿರೇಭಿರೇ ॥
ಅನುವಾದ
ಪರೀಕ್ಷಿತನೆ! ಈ ಮುರಲಿಯ ದನಿಯು ಜಡ-ಚೇತನ ಸಮಸ್ತ ಪ್ರಾಣಿಗಳ ಚಿತ್ತವನ್ನು ಅಪಹರಿಸುತ್ತಿತ್ತು. ಗೋಪಿಯರು ಅದನ್ನು ಕೇಳಿದರು ಹಾಗೂ ಕೇಳಿ ಅದನ್ನು ವರ್ಣಿಸತೊಡಗಿದರು. ವರ್ಣನೆ ಮಾಡುತ್ತಾ-ಮಾಡುತ್ತಾ ಅವರು ತನ್ಮಯ ಮನಸ್ಸಿನಲ್ಲೇ ಶ್ರೀಕೃಷ್ಣನ ಸಾನ್ನಿಧ್ಯದ ಅನುಭವವನ್ನು ಪಡೆದುಕೊಂಡು ಆಲಿಂಗಿಸಿಕೊಂಡರು. ॥6॥
(ಶ್ಲೋಕ-7)
ಮೂಲಮ್ (ವಾಚನಮ್)
ಗೋಪ್ಯ ಊಚುಃ
ಮೂಲಮ್
ಅಕ್ಷಣ್ವತಾಂ ಲಮಿದಂ ನ ಪರಂ ವಿದಾಮಃ
ಸಖ್ಯಃ ಪಶೂನನು ವಿವೇಶಯತೋರ್ವಯಸ್ಯೈಃ ।
ವಕಂ ವ್ರಜೇಶ ಸುತಯೋರನುವೇಣು ಜುಷ್ಟಂ
ಯೈರ್ವಾ ನಿಪೀತಮನುರಕ್ತಕಟಾಕ್ಷಮೋಕ್ಷಮ್ ॥
ಅನುವಾದ
ಗೋಪಿಯರು ಪರಸ್ಪರ ಆಡಿಕೊಳ್ಳುವರು — ಓರ್ವ ಗೋಪಿಯು ಹೇಳುತ್ತಾಳೆ - ಸಖಿಯರೇ! ಶ್ಯಾಮಸುಂದರ ಶ್ರೀಕೃಷ್ಣ ಮತ್ತು ಗೌರಸುಂದರ ಬಲರಾಮನು ಗೊಲ್ಲಬಾಲಕರೊಂದಿಗೆ ಹಸುಗಳನ್ನು ಅಟ್ಟಿಕೊಂಡು ವ್ರಜದಿಂದ ವೃಂದಾವನಕ್ಕೆ ಹೋಗುವಾಗ, ವ್ರಜಕ್ಕೆ ಬರುವಾಗ ಕೊಳಲಿನಿಂದ ಸಮಲಂಕೃತವಾದ ಅವರ ಮುದ್ದು ಮುಖದಿಂದ ಮತ್ತು ಪ್ರೇಮಪೂರ್ಣವಾದ ಒರೆನೋಟದಿಂದ ನಮ್ಮನ್ನು ನೋಡುತ್ತಿರುವಾಗ, ನಾವು ಅವರ ಆ ಮಧುರ ಮುಖಾರವಿಂದದ ಸವಿಯನ್ನು ಕಣ್ಣುಗಳಿಂದಲೇ ಪಾನಮಾಡುತ್ತೇವಲ್ಲ! ಕಣ್ಣುಗಳನ್ನು ಪಡೆದ ಜೀವರ, ಕಣ್ಣುಗಳ ಸಫಲತೆ ಇದೇಯಲ್ಲವೇ? ಇದರಿಂದ ಬೇರೆಯಾದ ಪ್ರಯೋಜನ ಯಾವುದಿದೆ? ॥7॥
(ಶ್ಲೋಕ-8)
ಮೂಲಮ್
ಚೂತಪ್ರವಾಲಬರ್ಹಸ್ತಬಕೋತ್ಪಲಾಬ್ಜ-
ಮಾಲಾನುಪೃಕ್ತಪರಿಧಾನವಿಚಿತ್ರವೇಷೌ ।
ಮಧ್ಯೇ ವಿರೇಜತುರಲಂ ಪಶುಪಾಲಗೋಷ್ಠ್ಯಾಂ
ರಂಗೇ ಯಥಾ ನಟವರೌ ಕ್ವ ಚ ಗಾಯಮಾನೌ ॥
ಅನುವಾದ
ಮತ್ತೊಬ್ಬಳು ಹೇಳಿದಳು — ಎಲೈ ಸಖಿಯೇ! ಶ್ಯಾಮಸುಂದರನಾದ ಶ್ರೀಕೃಷ್ಣನು ಪೀತಾಂಬರವನ್ನು, ಗೌರಾಂಗನಾದ ಬಲರಾಮನು ನೀಲಾಂಬರವನ್ನು ಧರಿಸಿಕೊಂಡು, ವೃಂದಾವನದಲ್ಲಿ ಇವರು ಮಾವಿನ ಎಳೆಚಿಗುರು, ನವಿಲುಗರಿ, ಹೂವುಗಳ ಗೊಂಚಲು, ನೈದಿಲೆ-ತಾವರೆಗಳ ಹಾರಗಳು ಇವುಗಳಿಂದ ಸಿಂಗರಿಸಿಕೊಂಡು ವಿಚಿತ್ರವಾದ ವೇಷಗಳನ್ನು ಧರಿಸಿ ಗೋಪಾಲರ ನಡುವೆ ಹಾಡುಗಳನ್ನು ಹಾಡುತ್ತಾ ರಂಗಮಂಟಪದಲ್ಲಿ ನಟಿಸುವ ಶ್ರೇಷ್ಠರಾದ ನಟರಂತೆಯೇ ವಿರಾಜಿಸುತ್ತಾರೆ. ॥8॥
(ಶ್ಲೋಕ-9)
ಮೂಲಮ್
ಗೋಪ್ಯಃ ಕಿಮಾಚರದಯಂ ಕುಶಲಂ ಸ್ಮ ವೇಣು-
ರ್ದಾಮೋದರಾಧರಸುಧಾಮಪಿ ಗೋಪಿಕಾನಾಮ್ ।
ಭುಂಕ್ತೇ ಸ್ವಯಂ ಯದವಶಿಷ್ಟರಸಂ ಹ್ರದಿನ್ಯೋ
ಹೃಷ್ಯತ್ತ್ವಚೋಶ್ರು ಮುಮುಚುಸ್ತರವೋ ಯಥಾರ್ಯಾಃ ॥
ಅನುವಾದ
ಇನ್ನೊಬ್ಬಳು ಹೇಳಿದಳು — ಎಲೈ ಗೋಪಿಯರೇ! ಈ ಕೊಳಲಿನ ಭಾಗ್ಯವನ್ನಾದರೂ ನೋಡಿರಿ. ವೇಣುವು ಪುರುಷ ಜಾತಿಯದು. ಆದರೂ ಅದು ಹಿಂದಿನ ಜನ್ಮದಲ್ಲಿ ಎಂತಹ ಪುಣ್ಯ ಕಾರ್ಯಗಳನ್ನು, ತಪಸ್ಸನ್ನು ಆಚರಿಸಿದೆಯೋ! ನಮಗೆ ಮಾತ್ರವೇ ಮೀಸಲೆಂದು ಭಾವಿಸಲಾಗಿದ್ದ ಮಾಧವನ ಅಧರಾಮೃತವನ್ನು ನಮಗೆ ಸ್ವಲ್ಪವೂ ಉಳಿಯದಂತೆ ಪಾನ ಮಾಡಿಬಿಡುತ್ತದಲ್ಲ! ಈ ವೇಣುವನ್ನು ಬೆಳೆಸಿ ಪೋಷಿಸಿದ ಸರೋವರಗಳು, ವಿಕಸಿತವಾದ ಕಮಲಗಳ ಮೂಲಕ ತಮಗಾದ ರೋಮಾಂಚನವನ್ನು ವ್ಯಕ್ತಪಡಿಸುತ್ತಿವೆ. ತಮ್ಮ ವಂಶದಲ್ಲಿ ಭಗವದ್ಭಕ್ತರು ಹುಟ್ಟಿದರೆ ಆನಂದಿಸುವಂತೆ ಬಿದಿರು ಮೇಳೆಗಳು ತಮ್ಮ ವಂಶಕ್ಕೆ ಸೇರಿದ ವೇಣುವು ಶ್ರೀಕೃಷ್ಣನ ಅಧರಾಮೃತವನ್ನು ಪಾನಮಾಡುತ್ತಿರುವುದನ್ನು ನೋಡಿ ಹಿರಿ-ಹಿರಿ ಹಿಗ್ಗಿ ಆನಂದಾಶ್ರುಗಳನ್ನು ಸುರಿಸುತ್ತಿರುವವು. ॥9॥
ಮೂಲಮ್
(ಶ್ಲೋಕ-10)
ಮೂಲಮ್
ವೃಂದಾವನಂ ಸಖಿ ಭುವೋ ವಿತನೋತಿ ಕೀರ್ತಿಂ
ಯದ್ದೇವಕೀಸುತಪದಾಂಬುಜಲಬ್ಧಲಕ್ಷ್ಮೀ ।
ಗೋವಿಂದ ವೇಣುಮನು ಮತ್ತಮಯೂರನೃತ್ಯಂ
ಪ್ರೇಕ್ಷ್ಯಾದ್ರಿಸಾನ್ವಪರತಾನ್ಯಸಮಸ್ತಸತ್ತ್ವಮ್ ॥
(ಶ್ಲೋಕ-11)
ಮೂಲಮ್
ಧನ್ಯಾಃ ಸ್ಮ ಮೂಢಮತಯೋಪಿ ಹರಿಣ್ಯ ಏತಾ
ಯಾ ನಂದನಂದನಮುಪಾತ್ತವಿಚಿತ್ರವೇಷಮ್ ।
ಆಕರ್ಣ್ಯ ವೇಣುರಣಿತಂ ಸಹಕೃಷ್ಣಸಾರಾಃ
ಪೂಜಾಂ ದಧುರ್ವಿರಚಿತಾಂ ಪ್ರಣಯಾವಲೋಕೈಃ ॥
ಅನುವಾದ
ಮತ್ತೊಬ್ಬಳು ಹೇಳುವಳು — ಓ ಸಖಿಯರೇ! ಈ ವೃಂದಾವನವು ಯಶೋದಾನಂದನ ಶ್ರೀಕೃಷ್ಣನ ಚರಣ ಕಮಲಗಳ ಚಿಹ್ನೆಯನ್ನು ಹೊಂದಿ ಈ ಭೂಲೋಕದ ಕೀರ್ತಿಯು ವೈಕುಂಠದವರೆಗೂ ಹರಡಿದೆ. ಸಖೀ! ಶ್ರೀಕೃಷ್ಣನು ಮುನಿಜರನ್ನು ವಿಮೋಹಗೊಳಿಸುವ ಮುರಲಿಯನ್ನು ನುಡಿಸುವಾಗ ನವಿಲುಗಳು ಮದವೇರಿ ನರ್ತಿಸತೊಡಗುವವು. ಇದನ್ನು ನೋಡಿದೊಡನೆ ಪರ್ವತದ ತಪ್ಪಲುಗಳಲ್ಲಿ ಸಂಚರಿಸುವ ಪಶು-ಪಕ್ಷಿಗಳೆಲ್ಲವೂ ಮೇಯುವುದನ್ನು ಬಿಟ್ಟು ಶಾಂತವಾಗಿ ನಿಂತುಬಿಡುವುವು. ಗೆಳತಿಯರೇ! ಪ್ರಾಣವಲ್ಲಭನಾದ ಶ್ರೀಕೃಷ್ಣನು ವಿಚಿತ್ರವಾದ ವೇಷವನ್ನು ಧರಿಸಿಕೊಂಡು ಕೊಳಲನ್ನು ನುಡಿಸಲು ಪ್ರಾರಂಭಿಸುತ್ತಲೇ ಮಂದಮತಿ ಗಳಾಗಿದ್ದರೂ ಹೆಣ್ಣು ಜಿಂಕೆಗಳು ಮುರಳಿಯ ನಾದವನ್ನು ಕೇಳಿ ಪತಿಗಳಾದ ಕೃಷ್ಣಸಾರ ಮೃಗಗಳೊಂದಿಗೆ ನಂದನಂದನನ ಬಳಿಗೆ ಹೋಗಿ ಕಮಲದಂತೆ ವಿಶಾಲವಾದ ಮತ್ತು ಚಂಚಲ ವಾದ ಕಣ್ಣುಗಳ ಅವಲೋಕನದಿಂದಲೇ ಶ್ರೀಕೃಷ್ಣನನ್ನು ಪೂಜಿಸುತ್ತವೆ. ನಿಶ್ಚಯವಾಗಿಯೂ ಈ ಜಿಂಕೆಗಳ ಜೀವನವೇ ಧನ್ಯವಲ್ಲವೇ! ॥10-11॥
(ಶ್ಲೋಕ-12)
ಮೂಲಮ್
ಕೃಷ್ಣಂ ನಿರೀಕ್ಷ್ಯ ವನಿತೋತ್ಸವರೂಪಶೀಲಂ
ಶ್ರುತ್ವಾ ಚ ತತ್ಕ್ವಣಿತವೇಣುವಿಚಿತ್ರಗೀತಮ್ ।
ದೇವ್ಯೋ ವಿಮಾನಗತಯಃ ಸ್ಮರನುನ್ನಸಾರಾ
ಭ್ರಶ್ಯತ್ಪ್ರಸೂನಕಬರಾ ಮುಮುಹುರ್ವಿನೀವ್ಯಃ ॥
ಅನುವಾದ
ಇನ್ನೊಬ್ಬಳು ಹೇಳಿದಳು ಸಖಿಯರೇ! ಜಿಂಕೆಗಳ ಮಾತಾದರೂ ಹಾಗಿರಲಿ. ಅತ್ತ ನೋಡಿ! ವಿಮಾನದಲ್ಲಿ ಸಂಚರಿಸುವ ಅಪ್ಸರೆಯರು - ಕಾಮಿನಿಯರ ಕಣ್ಮನಗಳನ್ನು ಸೂರೆಗೊಳ್ಳುವ ಸೌಂದರ್ಯದಿಂದಲೂ, ಸೌಶೀಲ್ಯದಿಂದಲೂ ಕೂಡಿದ ಶ್ರೀಕೃಷ್ಣನನ್ನು ನೋಡಿ, ವೇಣುವಿನಿಂದ ಅವನು ನುಡಿಸುವ ಸುಮಧುರ ಸಂಗೀತವನ್ನು ಕೇಳಿ, ಕಾಮಾವೇಶದಿಂದ ಧೈರ್ಯಗುಂದಿ ತುರುಬುಗಳಿಂದ ಹೂವಿನ ಮಾಲೆಗಳು ಜಾರುತ್ತಿರುವುದನ್ನು, ಉಟ್ಟಸೀರೆಗಳು ಸಡಿಲವಾಗುತ್ತಿರುವುದನ್ನು ಅರಿಯದೆ ವಿಮೋಹಿತರಾಗಿದ್ದಾರೆ. ॥12॥
(ಶ್ಲೋಕ-13)
ಮೂಲಮ್
ಗಾವಶ್ಚ ಕೃಷ್ಣಮುಖನಿರ್ಗತವೇಣುಗೀತ-
ಪೀಯೂಷಮುತ್ತಭಿತಕರ್ಣಪುಟೈಃ ಪಿಬಂತ್ಯಃ ।
ಶಾವಾಃ ಸ್ನುತಸ್ತನಪಯಃಕವಲಾಃ ಸ್ಮ ತಸ್ಥು-
ರ್ಗೋವಿಂದಮಾತ್ಮನಿ ದೃಶಾಶ್ರುಕಲಾಃ ಸ್ಪೃಶಂತ್ಯಃ ॥
ಅನುವಾದ
ಮಗದೊಬ್ಬಳು ಹೇಳಿದಳು - ಗೆಳತಿಯರೇ! ಅಪ್ಸರೆಯರ ವಿಷಯವನ್ನು ಏನು ಹೇಳುವಿರಿ? ಮಾತಿಲ್ಲದ ಗೋವುಗಳ ವರ್ತನೆಯನ್ನಾದರೂ ನೋಡಿರಲ್ಲ! ಶ್ರೀಕೃಷ್ಣನ ಮುಖಾರವಿಂದದಿಂದ ಹೊರಟ ವೇಣುಗಾನ ಸುಧೆಯನ್ನು ಕೇಳಿದೊಡನೆಯೇ ನಮ್ಮ ಗೋವುಗಳು ತಮ್ಮೆರಡು ಕಿವಿಗಳನ್ನು ನಿಮಿರಿಸಿಕೊಂಡು, ಕಿವಿಗಳನ್ನೇ ಬೊಗಸೆಗಳನ್ನಾಗಿಸಿಕೊಂಡು ಗಾನಾಮೃತ ಸುಧೆಯನ್ನು ಹೀರಿಕೊಳ್ಳುತ್ತವೆ. ತಮ್ಮ ಕಣ್ಣುಗಳ ಮೂಲಕವಾಗಿ ಶ್ಯಾಮಸುಂದರನನ್ನು ಹೃದಯದಲ್ಲಿರಿಸಿಕೊಂಡು ಆಲಿಂಗಿಸುತ್ತಾ ಆನಂದಬಾಷ್ಪಗಳನ್ನು ಸುರಿಸುತ್ತವೆ. ಹಸುಗಳ ಮೊಲೆಯುಣ್ಣುತ್ತಿರುವ ಎಳೆಗರುಗಳೂ ಕೂಡ ಶ್ರೀಕೃಷ್ಣನ ವೇಣುಗಾನವನ್ನು ಕೇಳಿ ಬಾಯಲ್ಲಿರುವ ನೊರೆಹಾಲನ್ನು ಗುಟುಕಿಸದೆ ಸ್ತಬ್ಧವಾಗಿ ನಿಂತುಬಿಡುತ್ತವೆ. ಅವುಗಳ ಸೌಭಾಗ್ಯವು ಎಂತಹದು! ॥13॥
(ಶ್ಲೋಕ-14)
ಮೂಲಮ್
ಪ್ರಾಯೋ ಬತಾಂಬ ವಿಹಗಾ ಮುನಯೋ ವನೇಸ್ಮಿನ್
ಕೃಷ್ಣೇಕ್ಷಿತಂ ತದುದಿತಂ ಕಲವೇಣುಗೀತಮ್ ।
ಆರುಹ್ಯ ಯೇ ದ್ರುಮಭುಜಾನ್ರುಚಿರಪ್ರವಾಲಾನ್
ಶೃಣ್ವಂತ್ಯ ಮೀಲಿತದೃಶೋ ವಿಗತಾನ್ಯವಾಚಃ ॥
ಅನುವಾದ
ಮತ್ತೊಬ್ಬಳು ಹೇಳಿದಳು - ಸಖಿಯರೇ! ಹಸುಗಳು-ಕರುಗಳಾದರೋ ನಮ್ಮ ಮನೆಯವೇ ಆಗಿವೆ, ಅವರ ಮಾತನ್ನು ಬಿಟ್ಟು ಬಿಡಿ, ಆದರೆ ವೃಂದಾವನದಲ್ಲಿರುವ ಪಕ್ಷಿಗಳನ್ನು ನೋಡಿರಿ. ನಿಜಹೇಳ ಬೇಕಾದರೆ ಅವು ಪಕ್ಷಿಗಳಲ್ಲ, ಪಕ್ಷಿಗಳ ರೂಪದಲ್ಲಿ ಋಷಿ-ಮುನಿಗಳೇ ಅಲ್ಲಿದ್ದಾರೆ. ಸುಂದರವಾದ ಚಿಗುರೆಲೆಗಳಿಂದ ಕೂಡಿದ ವೃಕ್ಷಗಳ ರೆಂಬೆಗಳ ಮೇಲೆ ಕುಳಿತು - ವೃಂದಾವನದಲ್ಲಿ ಕೊಳಲನ್ನು ನುಡಿಸಿಕೊಂಡು ಆಟವಾಡುವ ಸೌಂದರ್ಯದ ಖನಿಯಾದ ಶ್ರೀಕೃಷ್ಣನನ್ನೇ ಎವೆಯಿಕ್ಕದೆ ನೋಡುತ್ತಿರುತ್ತವೆ. ಅವು ಮುನಿಗಳೇ ಆಗಿರುವುದರಿಂದ ಬೇರೆ ಯಾವುದೇ ವಿಧವಾದ ಶಬ್ದವನ್ನು ಕೇಳದೆ ಶ್ರೀಕೃಷ್ಣನ ಸುಮಧುರವಾದ ವಾಣಿಯನ್ನು, ತ್ರಿಭುವನ ಮೋಹಕವಾದ ವೇಣುಗಾನವನ್ನು ಮಾತ್ರವೇ ಕೇಳುತ್ತಿರುತ್ತವೆ. ಇಂತಹ ಪಕ್ಷಿಗಳಿಗಿಂತ ಧನ್ಯರಾದವರು ಬೇರೆ ಯಾರಿದ್ದಾರೆ? ॥14॥
(ಶ್ಲೋಕ-15)
ಮೂಲಮ್
ನದ್ಯಸ್ತದಾ ತದುಪಧಾರ್ಯ ಮುಕುಂದಗೀತ-
ಮಾವರ್ತಲಕ್ಷಿತಮನೋಭವಭಗ್ನವೇಗಾಃ ।
ಆಲಿಂಗನಸ್ಥಗಿತಮೂರ್ಮಿಭುಜೈರ್ಮುರಾರೇ-
ರ್ಗೃಹ್ಣಂತಿ ಪಾದಯುಗಲಂ ಕಮಲೋಪಹಾರಾಃ ॥
ಅನುವಾದ
ಮತ್ತೊಬ್ಬಳು ಹೇಳುತ್ತಾರೆ — ಎಲೈ ಸಖಿಯರೇ! ಇಷ್ಟರವರೆಗೆ ನೀವೆಲ್ಲ ಗೋವುಗಳು, ಪಕ್ಷಿಗಳು, ಇವರ ಕುರಿತು ಮಾತನಾಡುತ್ತಿರುವಿರಿ. ಅವುಗಳಾದರೋ ಚೇತನವಾಗಿವೆ. ಈ ಜಡವಾದ ನದಿಗಳನ್ನಾದರೋ ನೋಡಿರಿ. ಇವುಗಳಲ್ಲಿ ಕಂಡುಬರುವ ಸುಳಿಗಳ ನೆಪದಿಂದ ಶ್ರೀಕೃಷ್ಣನನ್ನು ಸೇರಬೇಕೆಂಬ ತೀವ್ರವಾದ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಿವೆ. ಅದರಿಂದಲೇ ಪ್ರವಾಹದ ವೇಗವೂ ಕಡಿಮೆಯಾಗಿದೆ. ಇವುಗಳೂ ಕೂಡ ಪ್ರೇಮಸ್ವರೂಪನಾದ ಶ್ರೀಕೃಷ್ಣನ ವೇಣು ಗಾನವನ್ನು ಕೇಳುತ್ತಿರುವುವು. ನೋಡಿ! ನೋಡಿ! ಇವುಗಳು ತಮ್ಮ ತರಂಗಗಳೆಂಬ ಕೈಗಳಿಂದ ಶ್ರೀಕೃಷ್ಣನ ಪಾದಾರವಿಂದಗಳಿಗೆ ಕಮಲದ ಪುಷ್ಪಗಳನ್ನು ಸಮರ್ಪಿಸುತ್ತಾ ಆತನ ಚರಣಕಮಲಗಳನ್ನೇ ಆಲಿಂಗನಮಾಡಿಕೊಳ್ಳುತ್ತಿವೆ. ॥15॥
(ಶ್ಲೋಕ-16)
ಮೂಲಮ್
ದೃಷ್ಟ್ವಾತಪೇ ವ್ರಜಪಶೂನ್ಸಹ ರಾಮಗೋಪೈಃ
ಸಂಚಾರಯಂತಮನು ವೇಣುಮುದೀರಯಂತಮ್ ।
ಪ್ರೇಮಪ್ರವೃದ್ಧ ಉದಿತಃ ಕುಸುಮಾವಲೀಭಿಃ
ಸಖ್ಯುರ್ವ್ಯಧಾತ್ ಸ್ವವಪುಷಾಂಬುದ ಆತಪತ್ರಮ್ ॥
ಅನುವಾದ
ಮತ್ತೊಬ್ಬ ಗೋಪಿಕೆಯು ಹೇಳುತ್ತಾರೆ - ಸಖಿಯರೇ! ಈ ನದಿಗಳು ನಮ್ಮದೇ ಭೂಮಿಯ, ನಮ್ಮ ವೃಂದಾವನದೇ ವಸ್ತುಗಳಾಗಿವೆ. ಅವರಿಗೆ ಶ್ರೀಕೃಷ್ಣನ ಮೇಲೆ ಪ್ರೇಮವಿರುವುದು ಸಹಜವೇ; ಆದರೆ ಈ ಮೋಡಗಳನ್ನು ಸ್ವಲ್ಪ ನೋಡಿರಲ್ಲ! ಕೃಷ್ಣ-ಬಲರಾಮರು ಗೋಪಾಲಕರೊಡನೆ ಬಿಸಿಲಿನಲ್ಲಿ ಹಸುಗಳನ್ನು ಮೇಯಿಸುತ್ತಿರುವುದನ್ನು ಕಂಡು, ಹೃದಯಾನಂದಕರವಾಗಿ ಕೊಳಲು ನುಡಿಸುತ್ತಿರುವುದನ್ನು ಕೇಳಿ, ಮೋಡಗಳ ಹೃದಯವು ಪ್ರೇಮರಸದಿಂದ ತುಂಬಿಹೋಗುತ್ತದೆ. ಶ್ರೀಕೃಷ್ಣನು ಮೇಘಶ್ಯಾಮನಾದುದರಿಂದ ತಮ್ಮ ಆಪ್ತಮಿತ್ರನೆಂದೇ ಭಾವಿಸಿರುವ ಮೇಘಗಳು ಶ್ರೀಕೃಷ್ಣನ ಮತ್ತು ಅವನ ಪರಿವಾರದ ಮೇಲೆ ಹರಡಿಕೊಂಡು ಅವರ ತಾಪವನ್ನು ನಿವಾರಿಸುತ್ತವೆ. ಹಾಗೆಯೇ ಶ್ರೀಕೃಷ್ಣನ ಮೇಲೆ ತುಂತುರುಗಳ ರೂಪವಾದ ಬಿಳಿಯ ಹೂವುಗಳನ್ನು ಸುರಿಸುತ್ತಾ ಶ್ರೀಕೃಷ್ಣನನ್ನು ಪೂಜಿಸುತ್ತಿವೆಯೇ ಎಂಬಂತಿದೆ. ॥16॥
(ಶ್ಲೋಕ-17)
ಮೂಲಮ್
ಪೂರ್ಣಾಃ ಪುಲಿಂದ್ಯ ಉರುಗಾಯಪದಾಬ್ಜರಾಗ-
ಶ್ರೀಕುಂಕುಮೇನ ದಯಿತಾಸ್ತನಮಂಡಿತೇನ ।
ತದ್ದರ್ಶನಸ್ಮರರುಜಸ್ತೃಣರೂಷಿತೇನ
ಲಿಂಪಂತ್ಯ ಆನನಕುಚೇಷು ಜಹುಸ್ತದಾಧಿಮ್ ॥
ಅನುವಾದ
ಮತ್ತೊಬ್ಬಳು ಹೇಳಿದಳು — ಗೆಳತಿಯರೇ! ಈ ವೃಂದಾವನದಲ್ಲಿ ಸಂಚರಿಸುವ ಬೇಡತಿಯರೂ ಕೃತಕೃತ್ಯರಾಗಿರುವರೆಂದು ನಾನು ಭಾವಿಸುತ್ತೇನೆ. ನಮ್ಮ ಪ್ರಿಯತಮನಾದ ಶ್ರೀಕೃಷ್ಣನನ್ನು ನೋಡಿದಾಗ ಈ ಬೇಡತಿಯರಿಗೂ ಅವನೊಡನೆ ಸೇರಬೇಕೆಂಬ ಆಕಾಂಕ್ಷೆಯುಂಟಾಗುತ್ತದೆ. ಅವರು ಕಾಮಜ್ವರದಿಂದ ಪೀಡಿತರಾಗುತ್ತಾರೆ. ಅದರಿಂದ ಪಾರಾಗಲು ಅವರು ಕಂಡುಕೊಂಡ ಉಪಾಯವನ್ನು ಹೇಳುವೆನು, ಕೇಳಿರಿ. ನಮ್ಮ ಇನಿಯನ ಪ್ರೇಯಸಿಯರು ತಮ್ಮ ವೃಕ್ಷಃಸ್ಥಳಗಳನ್ನು ಶ್ರೀಕುಂಕುಮದಿಂದ ಅಲಂಕರಿಸಿಕೊಂಡಿರುತ್ತಾರೆ. ಕ್ರೀಡೆಗಳನ್ನಾಡುವಾಗ ವೃಕ್ಷಃಸ್ಥಳದ ಶ್ರೀಕುಂಕುಮವು ನಮ್ಮ ಇನಿಯನ ಚರಣಾರವಿಂದಗಳಿಗೆ ಅಂಟಿಕೊಳ್ಳುತ್ತದೆ. ಹಾಗೆ ಅಂಟಿಕೊಂಡ ಶ್ರೀಕುಂಕುಮವು ನಮ್ಮ ಕೃಷ್ಣನು ವೃಂದಾವನದಲ್ಲಿ ಸಂಚರಿಸುವಾಗ ಗರಿಕೆಹುಲ್ಲಿನ ಮೇಲೆ ಅಂಟಿಕೊಂಡಿರುತ್ತದೆ. ಅದನ್ನು ಅಲ್ಲಲ್ಲಿ ಹುಡುಕಿ ಈ ಬೇಡತಿಯರು ಪವಿತ್ರವಾದ ಆ ಶ್ರೀಕುಂಕುಮವನ್ನು ತಮ್ಮ ಹಣೆಗೂ ಮತ್ತು ಕುಚಗಳಿಗೂ ಹಚ್ಚಿಕೊಂಡು ಕಾಮಜ್ವರವನ್ನು ನಿವಾರಣೆ ಮಾಡಿಕೊಳ್ಳುತ್ತಾರೆ. ॥17॥
(ಶ್ಲೋಕ-18)
ಮೂಲಮ್
ಹಂತಾಯಮದ್ರಿರಬಲಾ ಹರಿದಾಸವರ್ಯೋ
ಯದ್ರಾಮಕೃಷ್ಣಚರಣಸ್ಪರ್ಶಪ್ರಮೋದಃ ।
ಮಾನಂ ತನೋತಿ ಸಹಗೋಗಣಯೋಸ್ತಯೋರ್ಯತ್
ಪಾನೀಯಸೂಯವಸಕಂದರಕಂದಮೂಲೈಃ ॥
ಅನುವಾದ
ಇನ್ನೊಬ್ಬಳು ಹೇಳುವಳು - ಓ ಸಖಿಯರೇ! ಈ ಗೋವರ್ಧನ ಪರ್ವತವು ಎಲ್ಲರಿಗಿಂತಲೂ ಮಿಗಿಲಾಗಿ ಶ್ರೀಕೃಷ್ಣನ ಸೇವೆ ಮಾಡುತ್ತಿದೆ. ಈ ಪರ್ವತವು ಭಗವಂತನ ಭಕ್ತರಲ್ಲಿ ಶ್ರೇಷ್ಠನಾದ ಭಕ್ತನೆಂದೇ ನಾನು ಭಾವಿಸುತ್ತೇನೆ. ನಮ್ಮ ಪ್ರಾಣ ವಲ್ಲಭನಾದ ಶ್ರೀಕೃಷ್ಣನ ಮತ್ತು ನಯನಾಭಿರಾಮ ಬಲರಾಮನ ಪಾದಸ್ಪರ್ಶದಿಂದ ಇದು ಮಹದಾನಂದವನ್ನು ಅನುಭವಿಸುತ್ತಿದೆ. ಆನಂದದಿಂದ ಪುಳಕಿತವಾದ ಈ ಗಿರಿಯು ರಾಮ-ಕೃಷ್ಣರಿಗೂ, ಗೋ-ಗೋಪಾಲಕರಿಗೂ ಸದಾಕಾಲ ಸತ್ಕಾರ ಮಾಡುತ್ತದೆ. ಸ್ನಾನ-ಪಾನಾದಿಗಳಿಗೆ ಗಿರಿನದಿಗಳಿಂದ ನಿರ್ಮಲವಾದ ನೀರನ್ನು ಒದಗಿಸುತ್ತದೆ. ಹಸುಗಳಿಗೆ ಮೇಯಲು ಹಚ್ಚ-ಹಸಿರು ಹುಲ್ಲನ್ನು ನೀಡುತ್ತದೆ. ರಾಮ-ಕೃಷ್ಣರು ಮತ್ತು ಗೋಪಾಲಕರು ವಿಶ್ರಮಿಸಿಕೊಳ್ಳಲು ಸುಂದರವಾದ ಗುಹೆಗಳನ್ನು ಒದಗಿಸುತ್ತದೆ. ಆಹಾರಕ್ಕಾಗಿ ಕಂದ-ಮೂಲ-ಫಲಗಳನ್ನು ಯಥೇಚ್ಛವಾಗಿ ಅರ್ಪಿಸುತ್ತಿದೆ. ಈ ಗೋವರ್ಧನ ಪರ್ವತದಂತೆ ಶ್ರೀಹರಿಗೆ ನಿರಂತರ ಸತ್ಕಾರಮಾಡುವವರು ಬೇರೆ ಯಾರಿದ್ದಾರೆ? ನಿಶ್ಚಯವಾಗಿಯೂ ಈ ಗೋವರ್ಧನ ಗಿರಿಯೇ ಪರಮ ಧನ್ಯವಾದುದು. ॥18॥
(ಶ್ಲೋಕ-19)
ಮೂಲಮ್
ಗಾ ಗೋಪಕೈರನುವನಂ ನಯತೋರುದಾರ-
ವೇಣುಸ್ವನೈಃ ಕಲಪದೈಸ್ತನುಭೃತ್ಸು ಸಖ್ಯಃ ।
ಅಸ್ಪಂದನಂ ಗತಿಮತಾಂ ಪುಲಕಸ್ತರೂಣಾಂ
ನಿರ್ಯೋಗಪಾಶಕೃತಲಕ್ಷಣಯೋರ್ವಿಚಿತ್ರಮ್ ॥
ಅನುವಾದ
ಮತ್ತೊಬ್ಬಳು ಹೇಳಿದಳು - ಸಖಿಯರೇ! ನಾನು ಮತ್ತೊಂದು ವಿಚಿತ್ರವಾದ ಸಂಗತಿಯನ್ನು ಹೇಳುವೆನು, ಲಾಲಿಸಿರಿ. ರಾಮ-ಕೃಷ್ಣರು ತುಂಟ ಹಸುಗಳನ್ನು, ಎತ್ತುಗಳನ್ನು ಕಟ್ಟಿಹಾಕುವುದಕ್ಕಾಗಿ ಹುರಿ ಹಗ್ಗಗಳ ಸಿಂಬೆಯನ್ನು ತಲೆಯ ಮೇಲೂ, ಹೆಗಲಮೇಲೂ ಹೊತ್ತುಕೊಂಡು ಗೊಲ್ಲರೊಡನೆ ಹಸುಗಳನ್ನು ಮೇಯಿಸುತ್ತಾ ಕೊಳಲು ನುಡಿಸುತ್ತಾ ಹೋಗುತ್ತಿರುತ್ತಾರೆ. ಇವರ ಕರ್ಣಾನಂದಕರವಾದ ವೇಣುಗಾನವನ್ನು ಕೇಳಿ ದೊಡನೆಯೇ ಜಂಗಮಗಳು (ಹಸುಗಳು) ಸ್ಥಾವರಗಳಾಗುತ್ತವೆ; ಸ್ತಬ್ಧವಾಗಿ ನಿಂತುಬಿಡುತ್ತವೆ. ಸ್ಥಾವರ ಜಂಗಮಗಳಾಗುತ್ತವೆ. ಸ್ಥಾವರಗಳಾದ ಗಿಡ-ಮರ-ಬಳ್ಳಿಗಳು ಪುಷ್ಪೋದ್ಗಮಾದಿಗಳ ರೂಪದಲ್ಲಿ ವೇಣುಗಾನದ ಆಸ್ವಾದನೆಯಿಂದ ಪುಳಕಿತವಾಗುವುದನ್ನು ವ್ಯಕ್ತಪಡಿಸುತ್ತವೆ. ॥19॥
(ಶ್ಲೋಕ-20)
ಮೂಲಮ್
ಏವಂವಿಧಾ ಭಗವತೋ ಯಾ ವೃಂದಾವನಚಾರಿಣಃ ।
ವರ್ಣಯಂತ್ಯೋ ಮಿಥೋ ಗೋಪ್ಯಃ ಕ್ರೀಡಾಸ್ತನ್ಮಯತಾಂ ಯಯುಃ ॥
ಅನುವಾದ
ಪರೀಕ್ಷಿತನೇ! ವೃಂದಾವನ ವಿಹಾರಿ ಶ್ರೀಕೃಷ್ಣನ ಇಂತಹ ಒಂದಲ್ಲ ಅನೇಕ ಲೀಲೆಗಳಿವೆ. ಗೋಪಿಯರು ಪ್ರತಿದಿನವೂ ಪರಸ್ಪರ ಅವನ್ನು ವರ್ಣಿಸುತ್ತಾ ತನ್ಮಯರಾಗುತ್ತಾರೆ. ಭಗವಂತನ ಲೀಲೆಗಳು ಅವರ ಹೃದಯದಲ್ಲಿ ಸ್ಫುರಣೆಗೊಳ್ಳತೊಡಗುತ್ತವೆ. ॥20॥
ಅನುವಾದ (ಸಮಾಪ್ತಿಃ)
ಇಪ್ಪತ್ತೊಂದನೆಯ ಅಧ್ಯಾಯವು ಮುಗಿಯಿತು. ॥21॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ವೇಣುಗೀತಂ ನಾಮೈಕವಿಂಶೋಽಧ್ಯಾಯಃ ॥21॥