೨೦

[ಇಪ್ಪತ್ತನೆಯ ಅಧ್ಯಾಯ]

ಭಾಗಸೂಚನಾ

ವರ್ಷಾಋತು ಮತ್ತು ಶರದೃತುವಿನ ವರ್ಣನೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ತಯೋಸ್ತದದ್ಭುತಂ ಕರ್ಮ ದಾವಾಗ್ನೇರ್ಮೋಕ್ಷಮಾತ್ಮನಃ ।
ಗೋಪಾಃ ಸೀಭ್ಯಃ ಸಮಾಚಖ್ಯುಃ ಪ್ರಲಂಬವಧಮೇವ ಚ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಗೊಲ್ಲಬಾಲಕರು ತಮ್ಮ ಮನೆಗೆ ಹೋಗಿ ಮನೆಯಲ್ಲಿದ್ದ ತಾಯಿ ತಂಗಿ-ಹೆಂಡತಿ ಸ್ತ್ರೀಯರ ಬಳಿಯಲ್ಲಿ ಶ್ರೀಕೃಷ್ಣ-ಬಲರಾಮರು ದಾವಾಗ್ನಿಯಿಂದ ನಮ್ಮನ್ನು ರಕ್ಷಿಸಿದುದು ಮತ್ತು ಪ್ರಲಂಬಾಸುರನನ್ನು ವಧಿಸಿದುದು ಮುಂತಾದ ಅವರ ಅದ್ಭುತ ಕರ್ಮವನ್ನು ವರ್ಣಿಸಿದರು. ॥1॥

(ಶ್ಲೋಕ-2)

ಮೂಲಮ್

ಗೋಪವೃದ್ಧಾಶ್ಚ ಗೋಪ್ಯಶ್ಚ ತದುಪಾಕರ್ಣ್ಯ ವಿಸ್ಮಿತಾಃ ।
ಮೇನಿರೇ ದೇವಪ್ರವರೌ ಕೃಷ್ಣರಾವೌ ವ್ರಜಂ ಗತೌ ॥

ಅನುವಾದ

ವ್ರಜದಲ್ಲಿದ್ದ ವೃದ್ಧರಾದ ಗೋಪಾಲಕರೂ, ಗೋಪಿಯರೂ ರಾಮ-ಕೃಷ್ಣರ ಅಲೌಕಿಕ ಲೀಲೆಗಳನ್ನು ಕೇಳಿ ವಿಸ್ಮಿತರಾದರು. ‘ಶ್ರೀಕೃಷ್ಣ ಮತ್ತು ಬಲರಾಮನ ವೇಷದಲ್ಲಿ ಯಾರೋ ದೇವ ಶ್ರೇಷ್ಠರು ವ್ರಜದಲ್ಲಿ ಆಗಮಿಸಿರುವರು’ ಎಂದು ಅವರೆಲ್ಲರೂ ಭಾವಿಸಿದರು. ॥2॥

(ಶ್ಲೋಕ-3)

ಮೂಲಮ್

ತತಃ ಪ್ರಾವರ್ತತ ಪ್ರಾವೃಟ್ ಸರ್ವಸತ್ತ್ವಸಮುದ್ಭವಾ ।
ವಿದ್ಯೋತಮಾನಪರಿಧಿರ್ವಿಸ್ಫೂರ್ಜಿತನಭಸ್ತಲಾ ॥

ಅನುವಾದ

ಇದಾದ ಬಳಿಕ ವರ್ಷಾಋತುವಿನ ಶುಭಾಗಮನವಾಯಿತು. ಸಕಲ ಪ್ರಾಣಿಗಳಿಗೂ ಜೀವನವನ್ನಿತ್ತು ಸಲಹುವ ಕಾಲವದು. ಸೂರ್ಯ-ಚಂದ್ರರ ಸುತ್ತಲೂ ಪದೇ-ಪದೇ ಪ್ರಕಾಶಮಯ ವೃತ್ತವು ಕಾಣತೊಡಗಿತು. ಗುಡುಗು-ಸಿಡಿಲು-ಮಿಂಚು-ಗಾಳಿಗಳಿಂದ ಆಕಾಶವು ಕ್ಷೋಭೆಗೊಂಡಿತು. ॥3॥

(ಶ್ಲೋಕ-4)

ಮೂಲಮ್

ಸಾಂದ್ರನೀಲಾಂಬುದೈರ್ವ್ಯೋಮ ಸವಿದ್ಯುತ್ಸ್ತನಯಿತ್ನುಭಿಃ ।
ಅಸ್ಪಷ್ಟಜ್ಯೋತಿರಾಚ್ಛನ್ನಂ ಬ್ರಹ್ಮೇವ ಸಗುಣಂ ಬಭೌ ॥

ಅನುವಾದ

ಆಕಾಶದಲ್ಲಿ ದಟ್ಟವಾದ ಮತ್ತು ಕಪ್ಪಾದ ಮೇಘಗಳು ಆವರಿಸಿದುವು. ಗುಡುಗಿನ ಶಬ್ದದೊಡನೆ ಮಿಂಚು ಕಾಣಿಸಿಕೊಂಡಿತು. ಸೂರ್ಯ-ಚಂದ್ರ-ತಾರೆಗಳು ಮುಚ್ಚಿರುತ್ತಿದ್ದವು. ಬ್ರಹ್ಮಸ್ವರೂಪನಾಗಿದ್ದರೂ ಗುಣಗಳಿಂದ ಮುಚ್ಚಿ ಹೋದಾಗ ಜೀವನ ಸ್ಥಿತಿಯಂತೆ ಆಕಾಶವು ಶೋಭಿಸುತ್ತಿತ್ತು. ॥4॥

(ಶ್ಲೋಕ-5)

ಮೂಲಮ್

ಅಷ್ಟೌ ಮಾಸಾನ್ ನಿಪೀತಂ ಯದ್ಭೂಮ್ಯಾಶ್ಚೋದಮಯಂ ವಸು ।
ಸ್ವಗೋಭಿರ್ಮೋಕ್ತುಮಾರೇಭೇ ಪರ್ಜನ್ಯಃ ಕಾಲ ಆಗತೇ ॥

ಅನುವಾದ

ಸೂರ್ಯನು ರಾಜನಂತೆ ಪೃಥಿವಿರೂಪವಾದ ಪ್ರಜೆಯಿಂದ ಕಂದಾಯವಾಗಿ ಎಂಟು ತಿಂಗಳುಕಾಲ ಸಂಗ್ರಹಿಸಿದ ನೀರನ್ನು ಈಗ ಸಮಯಬಂದಾಗ ಅವನು ತನ್ನ ಕಿರಣಗಳೆಂಬ ಕೈಗಳಿಂದ ಪುನಃ ಅದಕ್ಕೆ ಹಂಚತೊಡಗಿದನು. ॥5॥

(ಶ್ಲೋಕ-6)

ಮೂಲಮ್

ತಡಿತ್ವಂತೋ ಮಹಾಮೇಘಾಶ್ಚಂಡಶ್ವಸನವೇಪಿತಾಃ ।
ಪ್ರೀಣನಂ ಜೀವನಂ ಹ್ಯಸ್ಯ ಮುಮುಚುಃ ಕರುಣಾ ಇವ ॥

ಅನುವಾದ

ದಯಾಳುಗಳಾದ ಮನುಷ್ಯರು ಪೀಡೆಗೊಳ ಗಾದವರನ್ನು ರಕ್ಷಿಸುವ ಸಲುವಾಗಿ ತಮ್ಮ ಪ್ರಾಣಗಳನ್ನಾದರೂ ಒತ್ತೆಯಿಡುವಂತೆಯೇ ಮೋಡಗಳು ಮಿಂಚೆಂಬ ಕಣ್ಣುಗಳ ಮೂಲಕವಾಗಿ ಪ್ರಪಂಚದ ಜನರ ಕಷ್ಟಗಳನ್ನು ನೋಡಿ ಗಾಳಿಯ ಪ್ರೇರಣೆಯಿಂದ ಜನರ ಶ್ರೇಯಸ್ಸಿಗಾಗಿ ಜೀವನರೂಪೀ ನೀರನ್ನು ಸುರಿಸತೊಡಗಿದವು. ॥6॥

(ಶ್ಲೋಕ-7)

ಮೂಲಮ್

ತಪಃಕೃಶಾ ದೇವಮೀಢಾ ಆಸೀದ್ವರ್ಷೀಯಸೀ ಮಹೀ ।
ಯಥೈವ ಕಾಮ್ಯತಪಸಸ್ತನುಃ ಸಂಪ್ರಾಪ್ಯ ತತ್ಫಲಮ್ ॥

ಅನುವಾದ

ಸಕಾಮಭಾವದಿಂದ ತಪಸ್ಸು ಮಾಡುವಾಗ ಶರೀರವು ದುರ್ಬಲವಾಗಿ, ಅದರ ಫಲವು ದೊರೆತಾಗ ಅದು ಹೃಷ್ಟ- ಪುಷ್ಟವಾಗುವಂತೆ ಗ್ರೀಷ್ಮಋತುವಿನಲ್ಲಿ ಒಣಗಿಹೋಗಿದ್ದ ಭೂಮಿಯು ಈಗ ವರ್ಷಾಋತುವು ಬಂದೊಡನೆ ವೃದ್ಧಿಹೊಂದಿ ಹಚ್ಚ-ಹಸಿರಾಯಿತು. ॥7॥

(ಶ್ಲೋಕ-8)

ಮೂಲಮ್

ನಿಶಾಮುಖೇಷು ಖದ್ಯೋತಾಸ್ತಮಸಾ ಭಾಂತಿ ನ ಗ್ರಹಾಃ ।
ಯಥಾ ಪಾಪೇನ ಪಾಖಂಡಾ ನ ಹಿ ವೇದಾಃ ಕಲೌ ಯುಗೇ ॥

ಅನುವಾದ

ಕಲಿಯುಗದಲ್ಲಿ ಪಾಪವು ಪ್ರಬಲವಾದಾಗ ವೈದಿಕ ಸಂಪ್ರದಾಯವು ಮರೆಯಾಗಿ ಪಾಖಂಡ ಮತಗಳು ಪ್ರಚಾರವಾಗುವಂತೆಯೇ, ವರ್ಷಾಕಾಲದ ಸಾಯಂಕಾಲಗಳಲ್ಲಿ ಕಾರ್ಮುಗಿಲಿನಿಂದಾಗಿ ಕತ್ತಲೆ ಆವರಿಸಿ ಗ್ರಹ, ತಾರೆಗಳು ಕಂಡುಬರದೇ ಮಿಣುಕು ಹುಳುಗಳ ಪ್ರಕಾಶವು ಕಾಣಿಸುತ್ತದೆ. ॥8॥

(ಶ್ಲೋಕ-9)

ಮೂಲಮ್

ಶ್ರುತ್ವಾ ಪರ್ಜನ್ಯನಿನದಂ ಮಂಡೂಕಾ ವ್ಯಸೃಜನ್ಗಿರಃ ।
ತೂಷ್ಣೀಂ ಶಯಾನಾಃ ಪ್ರಾಗ್ಯದ್ವದ್ ಬ್ರಾಹ್ಮಣಾ ನಿಯಮಾತ್ಯಯೇ ॥

ಅನುವಾದ

ನಿತ್ಯಕರ್ಮಗಳು ಮುಗಿದನಂತರ ಗುರುಗಳ ಆದೇಶದಂತೆ ಬ್ರಹ್ಮಚಾರಿಗಳು ವೇದಗಳನ್ನು ಪಠಿಸುವಂತೆ, ಇಷ್ಟರವರೆಗೆ ಸುಮ್ಮನಿದ್ದ ಕಪ್ಪೆಗಳು ಮೇಘಗರ್ಜನೆಯನ್ನು ಕೇಳಿ ವಟ ಗುಟ್ಟಲು ಪ್ರಾರಂಭಿಸಿದವು. ॥9॥

(ಶ್ಲೋಕ-10)

ಮೂಲಮ್

ಆಸನ್ನುತ್ಪಥವಾಹಿನ್ಯಃ ಕ್ಷುದ್ರನದ್ಯೋನುಶುಷ್ಯತೀಃ ।
ಪುಂಸೋ ಯಥಾಸ್ವತಂತ್ರಸ್ಯ ದೇಹದ್ರವಿಣಸಂಪದಃ ॥

ಅನುವಾದ

ಜಿತೇಂದ್ರಿಯನಲ್ಲದ ಪುರುಷನ ಶರೀರ ಮತ್ತು ಧನ-ಸಂಪತ್ತುಗಳು ಅಪವ್ಯಯವಾಗುವಂತೆ, ಗ್ರೀಷ್ಮ ಋತುವಿನಲ್ಲಿ ಒಣಗಿಹೋಗಿದ್ದ ಸಣ್ಣ-ಪುಟ್ಟ ನದಿಗಳು ವರ್ಷಾಕಾಲದಲ್ಲಿ ಮೇರೆ ಮೀರಿ ಹರಿಯ ತೊಡಗಿದವು. ॥10॥

(ಶ್ಲೋಕ-11)

ಮೂಲಮ್

ಹರಿತಾ ಹರಿಭಿಃ ಶಷ್ಪೈರಿಂದ್ರಗೋಪೈಶ್ಚ ಲೋಹಿತಾ ।
ಉಚ್ಛಿಲೀಂಧ್ರಕೃತಚ್ಛಾಯಾ ನೃಣಾಂ ಶ್ರೀರಿವ ಭೂರಭೂತ್ ॥

ಅನುವಾದ

ಕೆಲವು ಕಡೆಗಳಲ್ಲಿ ಭೂಮಿಯು ಹುಲ್ಲಿನಿಂದಾಗಿ ಹಚ್ಚ-ಹಸಿರಾಗಿಯೂ, ಕೆಲವೆಡೆಗಳಲ್ಲಿ ಚಂದ್ರಚೂಡಗಳೆಂಬ ಹುಳುಗಳಿಂದ ತುಂಬಿದ್ದು ಕೆಂಪಾಗಿಯೂ, ಮತ್ತೆ ಕೆಲವೆಡೆಗಳಲ್ಲಿ ನಾಯಿಕೊಡೆಗಳಿಂದ ತುಂಬಿದ್ದು ಬಿಳುಪಾಗಿಯೂ ಕಾಣಿಸುತ್ತಿದ್ದು ನಾನಾ ಬಣ್ಣದ ಉಡುಗೆ ತೊಡಿಗೆಗಳನ್ನು ಧರಿಸಿದ ರಾಜನ ಸೈನಿಕರಂತೆ ಕಾಣುತ್ತಿತ್ತು. ॥11॥

(ಶ್ಲೋಕ-12)

ಮೂಲಮ್

ಕ್ಷೇತ್ರಾಣಿ ಸಸ್ಯಸಂಪದ್ಭಿಃ ಕರ್ಷಕಾಣಾಂ ಮುದಂ ದದುಃ ।
ಧನಿನಾಮುಪತಾಪಂ ಚ ದೈವಾಧೀನಮಜಾನತಾಮ್ ॥

ಅನುವಾದ

ಎಲ್ಲ ಹೊಲ-ಗದ್ದೆಗಳು ಸಸ್ಯ ಸಮೃದ್ಧಿಯಿಂದ ಕೂಡಿದ್ದು ರೈತರಿಗೆ ಆನಂದವನ್ನುಂಟು ಮಾಡುತ್ತವೆ. ಸರ್ವಸ್ವವೂ ದೈವಾಧೀನವೆಂಬ ರಹಸ್ಯವನ್ನು ತಿಳಿಯದಿದ್ದ ಧನಿಕರಿಗೆ ರೈತರ ಸಂಪತ್ತು ನೋಡಿ ಇವರೂ ನಮ್ಮಂತೆ ಧನಿಕರಾಗುವರಲ್ಲ ಎಂದು ಅನುತಾಪವುಂಟಾಗುತ್ತದೆ. ॥12॥

(ಶ್ಲೋಕ-13)

ಮೂಲಮ್

ಜಲಸ್ಥಲೌಕಸಃ ಸರ್ವೇ ನವವಾರಿನಿಷೇವಯಾ ।
ಅಬಿಭ್ರದ್ರುಚಿರಂ ರೂಪಂ ಯಥಾ ಹರಿನಿಷೇವಯಾ ॥

ಅನುವಾದ

ಹರಿಸೇವೆಯಿಂದ ಅಂತರ್ಬಾಹ್ಯ ಎರಡೂ ರೂಪಗಳೂ ಸುಂದರವಾಗುವಂತೆ ವರ್ಷಾ ಕಾಲದ ಹೊಸ ನೀರಿನ ಪಾನದಿಂದ ಜಲಚರ ಭೂಚರ ಪ್ರಾಣಿಗಳ ಸೌಂದರ್ಯಗಳು ಹೆಚ್ಚಿದವು. ॥13॥

(ಶ್ಲೋಕ-14)

ಮೂಲಮ್

ಸರಿದ್ಭಿಃ ಸಂಗತಃ ಸಿಂಧುಶ್ಚುಕ್ಷುಭೇ ಶ್ವಸನೋರ್ಮಿಮಾನ್ ।
ಅಪಕ್ವಯೋಗಿನಶ್ಚಿತ್ತಂ ಕಾಮಾಕ್ತಂ ಗುಣಯುಗ್ಯಥಾ ॥

ಅನುವಾದ

ವಾಸನಾಯುಕ್ತ ಯೋಗಿಯ ಚಿತ್ತವು ವಿಷಯಗಳ ಸಂಪರ್ಕದಿಂದ ಕಾಮನೆಗಳು ಉಕ್ಕುವಂತೆಯೇ, ವರ್ಷಾಋತುವಿನಲ್ಲಿ ಬಿರುಗಾಳಿಗೆ ಸಮುದ್ರವು ಮೊದಲೇ ಎತ್ತರವಾದ ತೆರೆಗಳಿಂದ ಕೂಡಿತ್ತು, ಈಗ ನದಿಗಳ ಸಂಯೋಗದಿಂದ ಅದು ಇನ್ನೂ ಕ್ಷುಬ್ಧವಾಯಿತು. ॥14॥

ಮೂಲಮ್

(ಶ್ಲೋಕ-15)
ಗಿರಯೋ ವರ್ಷಧಾರಾಭಿರ್ಹನ್ಯಮಾನಾ ನ ವಿವ್ಯಥುಃ ।
ಅಭಿಭೂಯಮಾನಾ ವ್ಯಸನೈರ್ಯಥಾಧೋಕ್ಷಜಚೇತಸಃ ॥

ಅನುವಾದ

ತಮ್ಮ ಚಿತ್ತವನ್ನು ಭಗವಂತನಲ್ಲಿ ಸಮರ್ಪಿಸಿದ ಪುರುಷರಿಗೆ ಎಷ್ಟೇ ದುಃಖಗಳ ಹೊರೆಗಳೂ ಕೂಡ ಯಾವುದೇ ವ್ಯಥೆಯನ್ನು ಉಂಟು ಮಾಡದಂತೆ, ಮುಸಲಧಾರ ಮಳೆಯ ಆಘಾತ ಬೀಳುತ್ತಿದ್ದರೂ ಪರ್ವತಗಳಿಗೆ ಯಾವುದೇ ವ್ಯಥೆ ಉಂಟಾಗುವುದಿಲ್ಲ. ॥15॥

(ಶ್ಲೋಕ-16)

ಮೂಲಮ್

ಮಾರ್ಗಾ ಬಭೂವುಃ ಸಂದಿಗ್ಧಾಸ್ತೃಣೈಶ್ಛನ್ನಾ ಹ್ಯಸಂಸ್ಕೃತಾಃ ।
ನಾಭ್ಯಸ್ಯಮಾನಾಃ ಶ್ರುತಯೋ ದ್ವಿಜೈಃ ಕಾಲಹತಾ ಇವ ॥

ಅನುವಾದ

ಸತತವಾಗಿ ಅಭ್ಯಾಸ ಮಾಡದಿರುವ ವೇದಗಳು ದ್ವಿಜರಿಗೆ ಕಾಲಾನುಕ್ರಮದಲ್ಲಿ ಮರೆತು ಹೋಗುವಂತೆ, ಶುದ್ಧಸಂಸ್ಕಾರ ಹೀನವಾದ ಮಾರ್ಗಗಳು ಹುಲ್ಲಿನಿಂದ ತುಂಬಿ ಕೊಂಡು ಅದನ್ನು ಗುರುತಿಸುವುದೇ ಕಷ್ಟವಾಯಿತು. ॥16॥

(ಶ್ಲೋಕ-17)

ಮೂಲಮ್

ಲೋಕಬಂಧುಷು ಮೇಘೇಷು ವಿದ್ಯುತಶ್ಚಲಸೌಹೃದಾಃ ।
ಸ್ಥೈರ್ಯಂ ನ ಚಕ್ರುಃ ಕಾಮಿನ್ಯಃ ಪುರುಷೇಷು ಗುಣಿಷ್ವಿವ ॥

ಅನುವಾದ

ಚಂಚಲವಾದ ಅನುರಾಗವುಳ್ಳ ಕಾಮಿನಿಯು ಗುಣವಂತನಾದ ಪುರುಷನ ಬಳಿಯಲ್ಲೂ ಸ್ಥಿರಭಾವದಿಂದ ಇರುವುದಿಲ್ಲ. ಹಾಗೆಯೇ ಲೋಕೋಪ ಕಾರಿಗಳಾದ ಮೇಘಗಳಲ್ಲಿ ಮಿಂಚುಗಳು ಸ್ಥಿರವಾಗಿ ಇರುವುದಿಲ್ಲ. ॥17॥

(ಶ್ಲೋಕ-18)

ಮೂಲಮ್

ಧನುರ್ವಿಯತಿ ಮಾಹೇಂದ್ರಂ ನಿರ್ಗುಣಂ ಚ ಗುಣಿನ್ಯಭಾತ್ ।
ವ್ಯಕ್ತೇ ಗುಣವ್ಯತಿಕರೇಗುಣವಾನ್ಪುರುಷೋ ಯಥಾ ॥

ಅನುವಾದ

ತ್ರಿಗುಣಾತ್ಮಕವಾದ ಈ ಪ್ರಪಂಚದಲ್ಲಿ ನಿರ್ಗುಣನಾದ ಪರಬ್ರಹ್ಮನು ಬೆಳಗುವಂತೆ ಮೇಘಗಳ ಗುಡುಗು ಸಿಡಿಲುಗಳಿಂದ ತುಂಬಿರುವ ಆಕಾಶದಲ್ಲಿ ನಿರ್ಗುಣಿಯಾದ ನಾಣಿಲ್ಲದ ಇಂದ್ರಧನುಸ್ಸು (ಕಾಮನ ಬಿಲ್ಲು) ಮೂಡಿ ಬರುತ್ತದೆ. ॥18॥

(ಶ್ಲೋಕ-19)

ಮೂಲಮ್

ನ ರರಾಜೋಡುಪಶ್ಛನ್ನಃ ಸ್ವಜ್ಯೋತ್ಸ್ನಾರಾಜಿತೈರ್ಘನೈಃ ।
ಅಹಂಮತ್ಯಾ ಭಾಸಿತಯಾ ಸ್ವಭಾಸಾ ಪುರುಷೋ ಯಥಾ ॥

ಅನುವಾದ

ಪುರುಷನಲ್ಲಿರುವ ದೇಹಾತ್ಮಭ್ರಾಂತಿಯಿಂದ ಕೂಡಿದ ಅಹಂಕಾರವು ಆತ್ಮವನ್ನು ಮುಚ್ಚಿಬಿಡುವಂತೆ, ಚಂದ್ರನ ಬೆಳದಿಂಗಳಿಂದಲೇ ಪ್ರಕಾಶಗೊಂಡ ಮೋಡಗಳ ಆವರಣದಿಂದ ಚಂದ್ರನು ಮರೆಯಾಗಿದ್ದಾನೆ. ॥19॥

(ಶ್ಲೋಕ-20)

ಮೂಲಮ್

ಮೇಘಾಗಮೋತ್ಸವಾ ಹೃಷ್ಟಾಃ ಪ್ರತ್ಯನಂದನ್ ಶಿಖಂಡಿನಃ ।
ಗೃಹೇಷು ತಪ್ತಾ ನಿರ್ವಿಣ್ಣಾ ಯಥಾಚ್ಯುತಜನಾಗಮೇ ॥

ಅನುವಾದ

ತಾಪತ್ರಯಗಳಿಂದ ಬೆಂದು ಪರಿತಪಿಸುವ ಗೃಹಸ್ಥರಮನೆಗೆ ಹರಿದಾಸರು ಬಂದಾಗ ಅವರಿಗೆ ಆಗುವ ಆನಂದೋತ್ಸವದಂತೆ, ಮೇಘಗಳ ಶುಭಾಗಮನದಿಂದ ನವಿಲುಗಳು ಕೇಕೆಹಾಕಿಕೊಂಡು ನೃತ್ಯವಾಡುತ್ತಾ ಆನಂದೋತ್ಸವವನ್ನು ಆಚರಿಸುತ್ತಿರುವುವು. ॥20॥

(ಶ್ಲೋಕ-21)

ಮೂಲಮ್

ಪೀತ್ವಾಪಃ ಪಾದಪಾಃ ಪದ್ಭಿರಾಸನ್ನಾನಾತ್ಮಮೂರ್ತಯಃ ।
ಪ್ರಾಕ್ಕ್ಷಾಮಾಸ್ತಪಸಾ ಶ್ರಾಂತಾ ಯಥಾ ಕಾಮಾನುಸೇವಯಾ ॥

ಅನುವಾದ

ಸಕಾಮ ಭಾವದಿಂದ ತಪಸ್ಸು ಮಾಡುವವರ ಶರೀರವು ಮೊದಲಿಗೆ ಕೃಶವಾಗಿದ್ದರೂ, ಕಾಮನಾಪೂರ್ತಿ ಯಾದಾಗ ಹೃಷ್ಟ-ಪುಷ್ಟರಾಗುವಂತೆ, ಗ್ರೀಷ್ಮದಲ್ಲಿ ಒಣಗಿ ಹೋಗಿದ್ದ ವೃಕ್ಷಗಳೂ ಈಗ ವರ್ಷಾ ಋತುವಿನಲ್ಲಿ ಬೇರುಗಳಿಂದ ನೀರನ್ನುಂಡು ಸೊಂಪಾಗಿ ಚಿಗುರಿಕೊಳ್ಳುತ್ತವೆ. ॥21॥

(ಶ್ಲೋಕ-22)

ಮೂಲಮ್

ಸರಸ್ಸ್ವಶಾಂತರೋಧಸ್ಸು ನ್ಯೂಷುರಂಗಾಪಿ ಸಾರಸಾಃ ।
ಗೃಹೇಷ್ವಶಾಂತಕೃತ್ಯೇಷು ಗ್ರಾಮ್ಯಾ ಇವ ದುರಾಶಯಾಃ ॥

ಅನುವಾದ

ಮನಸ್ಸಿಗೆ ಅಹಿತವಾದ ಕಾರ್ಯಗಳು ಮನೆಯಲ್ಲಿ ನಡೆಯುತ್ತಿದ್ದರೂ ವಿಷಯೀ ಪುರುಷರು ಆ ಮನೆಯನ್ನು ತೊರೆದು ಹೋಗುವುದಿಲ್ಲವೋ ಹಾಗೆಯೇ, ಮಳೆ ಸುರಿಯುವಿಕೆಯಿಂದ ಸರೋವರಗಳು ಕೊಚ್ಚೆಯಾಗಿದ್ದರೂ ಸಾರಸಪಕ್ಷಿಗಳು ಅವನ್ನು ವರ್ಷಾಕಾಲದಲ್ಲಿ ಬಿಟ್ಟು ಹೋಗುವುದಿಲ್ಲ. ॥22॥

(ಶ್ಲೋಕ-23)

ಮೂಲಮ್

ಜಲೌಘೈರ್ನಿರಭಿದ್ಯಂತ ಸೇತವೋ ವರ್ಷತೀಶ್ವರೇ ।
ಪಾಖಂಡಿನಾಮಸದ್ವಾದೈರ್ವೇದಮಾರ್ಗಾಃ ಕಲೌ ಯಥಾ ॥

ಅನುವಾದ

ಕಲಿಯುಗದಲ್ಲಿ ನಾಸ್ತಿಕರ ಮಿಥ್ಯಾವಾದಗಳಿಂದ ವೈದಿಕ ಮತವು ಎಲ್ಲೆ ಮೀರುವಂತೆ, ವರ್ಷಾಕಾಲದಲ್ಲಿ ದೇವೆಂದ್ರನು ಸುರಿಸುತ್ತಿರುವ ಮುಸಲಧಾರೆಯಂತಹ ಮಳೆಯ ನೀರಿನ ಪ್ರವಾಹದಿಂದ ಹಲವಾರು ಅಣೆಕಟ್ಟು, ಸೇತುವೆಗಳೂ ಕೊಚ್ಚಿಕೊಂಡು ಹೋಗುತ್ತವೆ. ॥23॥

(ಶ್ಲೋಕ-24)

ಮೂಲಮ್

ವ್ಯಮುಂಚನ್ವಾಯುಭಿರ್ನುನ್ನಾ ಭೂತೇಭ್ಯೋಥಾಮೃತಂ ಘನಾಃ ।
ಯಥಾಶಿಷೋ ವಿಶ್ಪತಯಃ ಕಾಲೇ ಕಾಲೇ ದ್ವಿಜೇರಿತಾಃ ॥

ಅನುವಾದ

ಬ್ರಾಹ್ಮಣರ ಪ್ರೇರಣೆಯಿಂದ ಧನಿಕರಾದವರು ಜನೋಪಯೋಗಿ ಕಲ್ಯಾಣ ಕಾರ್ಯಗಳನ್ನು ಮಾಡುವಂತೆ, ವರ್ಷಾಕಾಲದಲ್ಲಿ ವಾಯುವಿನ ಪ್ರೇರಣೆಯಿಂದ ದಟ್ಟವಾದ ಮೇಘಗಳು ಪ್ರಾಣಿಗಳ ಹಿತದ ಸಲುವಾಗಿ ಅಮೃತಮಯವಾದ ನೀರನ್ನು ಸುರಿಸುತ್ತವೆ. ॥24॥

(ಶ್ಲೋಕ-25)

ಮೂಲಮ್

ಏವಂ ವನಂ ತದ್ವರ್ಷಿಷ್ಠಂ ಪಕ್ವಖರ್ಜೂರಜಂಬುಮತ್ ।
ಗೋಗೋಪಾಲೈರ್ವೃತೋ ರಂತುಂ ಸಬಲಃ ಪ್ರಾವಿಶದ್ಧರಿಃ ॥

ಅನುವಾದ

ವರ್ಷಾಋತುವಿನಲ್ಲಿ ವೃಂದಾವನವು ಹೀಗೆ ಶೋಭಾಯ ಮಾನವಾಗಿದ್ದು, ಪಕ್ವವಾದ ಖರ್ಜೂರದಿಂದಲೂ, ನೇರಳೆ ಹಣ್ಣುಗಳಿಂದಲೂ ಸಮೃದ್ಧವಾಗಿತ್ತು. ಅಂತಹ ಸುಂದರವಾದ ವನದಲ್ಲಿ ವಿಹರಿಸಲು ರಾಮ-ಶ್ಯಾಮರು ಗೊಲ್ಲ ಬಾಲಕರೊಡನೆ ಮತ್ತು ಗೋವುಗಳ ಜೊತೆಗೆ ಪ್ರವೇಶಿಸಿದರು. ॥25॥

(ಶ್ಲೋಕ-26)

ಮೂಲಮ್

ಧೇನವೋ ಮಂದಗಾಮಿನ್ಯ ಉಧೋಭಾರೇಣ ಭೂಯಸಾ ।
ಯಯುರ್ಭಗವತಾಹೂತಾ ದ್ರುತಂ ಪ್ರೀತ್ಯಾ ಸ್ನುತಸ್ತನೀಃ ॥

ಅನುವಾದ

ಕೆಚ್ಚಲುಗಳಲ್ಲಿ ಹಾಲು ತುಂಬಿ ಭಾರವಾದ್ದರಿಂದ ಹಸುಗಳು ನಿಧಾನವಾಗಿ ನಡೆದು ಹೋಗುತ್ತಿದ್ದವು. ಭಗವಾನ್ ಶ್ರೀಕೃಷ್ಣನು ಅವುಗಳ ಹೆಸರಿಡಿದು ಕೂಗಿದಾಗ ಅವು ಪ್ರೇಮಪರವಶರಾಗಿ ಬೇಗ-ಬೇಗನೇ ಓಡ ತೊಡಗಿದವು. ಹೀಗೆ ಓಡುವಾಗ ಅವುಗಳ ಕೆಚ್ಚಲುಗಳಿಂದ ಹಾಲು ಧಾರಾಕಾರವಾಗಿ ಸುರಿಯುತ್ತಿತ್ತು. ॥26॥

(ಶ್ಲೋಕ-27)

ಮೂಲಮ್

ವನೌಕಸಃ ಪ್ರಮುದಿತಾ ವನರಾಜೀರ್ಮಧುಚ್ಯುತಃ ।
ಜಲಧಾರಾ ಗಿರೇರ್ನಾದಾನಾಸನ್ನಾ ದದೃಶೇ ಗುಹಾಃ ॥

ಅನುವಾದ

ಆ ವೃಂದಾವನದಲ್ಲಿ ಶ್ರೀಕೃಷ್ಣನು ಆನಂದತುಂದಿಲರಾದ ವನವಾಸಿಗಳನ್ನು, ಜೇನನ್ನು ಸುರಿಸುತ್ತಿರುವ ವೃಕ್ಷಗಳನ್ನು, ಮೈತುಂಬಿ ಭೋರ್ಗರೆಯುತ್ತಾ ಹರಿಯುತ್ತಿದ್ದ ಗಿರಿನದಿಗಳನ್ನು, ಅವುಗಳ ಸಮೀಪದಲ್ಲೇ ಇದ್ದ ಗುಹೆಗಳನ್ನು ನೋಡಿದನು. ॥27॥

(ಶ್ಲೋಕ-28)

ಮೂಲಮ್

ಕ್ವಚಿದ್ವನಸ್ಪತಿಕ್ರೋಡೇ ಗುಹಾಯಾಂ ಚಾಭಿವರ್ಷತಿ ।
ನಿರ್ವಿಶ್ಯ ಭಗವಾನ್ರೇಮೇ ಕಂದಮೂಲಲಾಶನಃ ॥

ಅನುವಾದ

ಮಳೆಯು ಬಂದಾಗ ಶ್ರೀಕೃಷ್ಣನು ಕೆಲವೊಮ್ಮೆ ಮರದ ಪೊಟರೆಗಳಲ್ಲಿಯೂ, ಕೆಲವು ವೇಳೆ ಗುಹೆಗಳಲ್ಲಿಯೂ ಅಡಗಿಕೊಳ್ಳುತ್ತಿದ್ದನು. ಕೆಲವುವೇಳೆ ಗಡ್ಡೆ ಗೆಣಸು-ಹಣ್ಣುಗಳನ್ನು ತಿನ್ನುತ್ತಾ ಗೋಪಬಾಲಕರೊಂದಿಗೆ ಆಟವಾಡುತ್ತಿದ್ದನು. ॥28॥

(ಶ್ಲೋಕ-29)

ಮೂಲಮ್

ದಧ್ಯೋದನಂ ಸಮಾನೀತಂ ಶಿಲಾಯಾಂ ಸಲಿಲಾಂತಿಕೇ ।
ಸಂಭೋಜನೀಯೈರ್ಬುಭುಜೇ ಗೋಪೈಃ ಸಂಕರ್ಷಣಾನ್ವಿತಃ ॥

ಅನುವಾದ

ಕೆಲವು ವೇಳೆ ಶ್ರೀಕೃಷ್ಣನು ನದಿಯ ತೀರದ ಬಂಡೆಯ ಮೇಲೆ ಬಲರಾಮ ನೊಡನೆಯೂ, ಗೋಪಬಾಲಕರೊಂದಿಗೂ ಕುಳಿತು ಮನೆಯಿಂದ ತಂದ ಮೊಸರನ್ನವನ್ನು ಮೆಲ್ಲುತ್ತಿದ್ದನು. ॥29॥

(ಶ್ಲೋಕ-30)

ಮೂಲಮ್

ಶಾದ್ವಲೋಪರಿ ಸಂವಿಶ್ಯ ಚರ್ವತೋ ಮೀಲಿತೇಕ್ಷಣಾನ್ ।
ತೃಪ್ತಾನ್ವ ಷಾನ್ವತ್ಸತರಾನ್ ಗಾಶ್ಚ ಸ್ವೋಧೋಭರಶ್ರಮಾಃ ॥

(ಶ್ಲೋಕ-31)

ಮೂಲಮ್

ಪ್ರಾವೃಟ್ಶ್ರಿಯಂ ಚ ತಾಂ ವೀಕ್ಷ್ಯ ಸರ್ವಭೂತಮುದಾವಹಾಮ್ ।
ಭಗವಾನ್ಪೂಜಯಾನ್ಚಕ್ರೇ ಆತ್ಮಶಕ್ತ್ಯುಪಬೃಂಹಿತಾಮ್ ॥

ಅನುವಾದ

ಆ ವರ್ಷಾಕಾಲದಲ್ಲಿ ಎತ್ತುಗಳು, ಕರುಗಳು, ಕೆಚ್ಚಲಿನ ಭಾರದಿಂದ ದಣಿದಿದ್ದ ಹಸುಗಳು ಕೆಲಹೊತ್ತಿನವರೆಗೆ ಹುಲ್ಲು ಮೇಯುತ್ತಿದ್ದು ಹೊಟ್ಟೆ ತುಂಬಿದ ಮೇಲೆ ಹುಲ್ಲಿನ ಮೇಲೆಯೇ ಮಲಗಿ ಕಣ್ಣು ಮುಚ್ಚಿಕೊಂಡು ಮೆಲಕು ಹಾಕುತ್ತಿದ್ದವು. ಸಮಸ್ತ ಪ್ರಾಣಿಗಳಿಗೂ ಸುಖದಾಯಕವಾದ, ಆನಂದಪ್ರದವಾದ ಇಂತಹ ವರ್ಷಾಕಾಲದ ಸೊಬಗನ್ನು ತನ್ನ ಲೀಲಾವಿಲಾಸದಿಂದಲೇ ಪ್ರಾದುರ್ಭವಿಸಿದ್ದರೂ ಆ ಸನ್ನಿವೇಶವನ್ನು ನೋಡಿ ಶ್ರೀಕೃಷ್ಣನು ಅತ್ಯಂತ ಪ್ರಸನ್ನನಾದನು ಹಾಗೂ ಅವುಗಳನ್ನು ಬಹಳವಾಗಿ ಪ್ರಶಂಸೆ ಮಾಡಿದನು. ॥30-31॥

(ಶ್ಲೋಕ-32)

ಮೂಲಮ್

ಏವಂ ನಿವಸತೋಸ್ತಸ್ಮಿನ್ರಾಮಕೇಶವಯೋರ್ವ್ರಜೇ ।
ಶರತ್ಸಮಭವದ್ವ್ಯಭ್ರಾ ಸ್ವಚ್ಛಾಮ್ಬ್ವಪರುಷಾನಿಲಾ ॥

ಅನುವಾದ

ಹೀಗೆ ರಾಮ-ಕೇಶವರಿಬ್ಬರೂ ಮಹದಾನಂದದಿಂದ ವ್ರಜದಲ್ಲಿ ನಿವಾಸಮಾಡುತ್ತಿರಲಾಗಿ, ವರ್ಷಾಋತುವು ಕಳೆದು ಶರದೃತುವಿನ ಆಗಮನವಾಯಿತು. ಆಕಾಶವು ಮೋಡಗಳಿಲ್ಲದೆ ನಿರ್ಮಲವಾಯಿತು. ವಾಯುವು ಮಂದ-ಮಂದವಾಗಿ ಬೀಸತೊಡಗಿತು. ॥32॥

(ಶ್ಲೋಕ-33)

ಮೂಲಮ್

ಶರದಾ ನೀರಜೋತ್ಪತ್ತ್ಯಾ ನೀರಾಣಿ ಪ್ರಕೃತಿಂ ಯಯುಃ ।
ಭ್ರಷ್ಟಾನಾಮಿವ ಚೇತಾಂಸಿ ಪುನರ್ಯೋಗನಿಷೇವಯಾ ॥

ಅನುವಾದ

ಯೋಗಭ್ರಷ್ಟನಾದವನ ಚಿತ್ತವು ಪುನಃ ಯೋಗಾಭ್ಯಾಸ ಮಾಡುವುದರಿಂದ ನಿರ್ಮಲವಾಗುವಂತೆ, ಸರೋವರಗಳಲ್ಲಿ ಪುನಃ ಕಮಲಗಳು ಅರಳಿ, ಜಲಾಶಯಗಳ ನೀರು ತನ್ನ ಸಹಜವಾದ ಸ್ವಚ್ಛತೆಯನ್ನು ಪಡೆದುಕೊಂಡಿತು. ॥33॥

(ಶ್ಲೋಕ-34)

ಮೂಲಮ್

ವ್ಯೋಮ್ನೋಬ್ದಂ ಭೂತಶಾಬಲ್ಯಂ ಭುವಃ ಪಂಕಮಪಾಂ ಮಲಮ್ ।
ಶರಜ್ಜಹಾರಾಶ್ರಮಿಣಾಂ ಕೃಷ್ಣೇ ಭಕ್ತಿರ್ಯಥಾಶುಭಮ್ ॥

ಅನುವಾದ

ಭಗವಂತನ ಅನನ್ಯ ಭಕ್ತಿಯು ಬ್ರಹ್ಮಚಾರೀ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸಿ ಇವರ ಎಲ್ಲರ ರೀತಿಯ ಕಷ್ಟ ಮತ್ತು ಅಶುಭಗಳನ್ನು ನಾಶಮಾಡಿಬಿಡುವಂತೆಯೇ, ಶರದೃತುವು ಆಕಾಶವನ್ನು ಮೋಡಗಳಿಂದಲೂ, ವರ್ಷಾಕಾಲದಲ್ಲಿ ಬೆಳೆದ ಜೀವ-ಜಂತುಗಳನ್ನು, ಭೂಮಿಯಲ್ಲಿ ಇರುವ ಕೆಸರನ್ನು, ನೀರಿನ ಕೊಳೆಯನ್ನು ನಾಶಮಾಡಿ ಬಿಟ್ಟಿತು. ॥34॥

(ಶ್ಲೋಕ-35)

ಮೂಲಮ್

ಸರ್ವಸ್ವಂ ಜಲದಾ ಹಿತ್ವಾ ವಿರೇಜುಃ ಶುಭ್ರವರ್ಚಸಃ ।
ಯಥಾ ತ್ಯಕ್ತೈಷಣಾಃ ಶಾಂತಾ ಮುನಯೋ ಮುಕ್ತಕಿಲ್ಬಿಷಾಃ ॥

ಅನುವಾದ

ಪುತ್ರೇಷಣ, ವಿತ್ತೇಷಣ ಮತ್ತು ದಾರೇಷಣಗಳೆಂಬ ಈಷಣ ತ್ರಯಗಳನ್ನು ಪರಿತ್ಯಾಗ ಮಾಡಿ, ಕಾಮಕ್ರೋಧಾದಿಗಳನ್ನು ದೂರಿಕರಿಸಿ, ಪಾಪರಹಿತರಾಗಿ ಶುದ್ಧಾತ್ಮರಾದ ಬ್ರಹ್ಮಜ್ಞಾನಿಗಳಂತೆ, ಮೋಡಗಳು ತಮ್ಮಲ್ಲಿದ್ದ ನೀರೆಲ್ಲವನ್ನೂ ದಾನ ಮಾಡಿ ಪರಿಶುದ್ಧವಾದ ತೇಜಸ್ಸಿನಿಂದ ಕಂಗೊಳಿಸಿದವು. ॥35॥

(ಶ್ಲೋಕ-36)

ಮೂಲಮ್

ಗಿರಯೋ ಮುಮುಚುಸ್ತೋಯಂ ಕ್ವಚಿನ್ನ ಮುಮುಚುಃ ಶಿವಮ್ ।
ಯಥಾ ಜ್ಞಾನಾಮೃತಂ ಕಾಲೇ ಜ್ಞಾನಿನೋ ದದತೇ ನ ವಾ ॥

ಅನುವಾದ

ಜ್ಞಾನಿಗಳಾದವರು ಜ್ಞಾನಾಮೃತವನ್ನು ಕೆಲವು ವೇಳೆ ಕೆಲವರಿಗೆ ಅನುಗ್ರಹಿಸುವಂತೆ ಮತ್ತೆ ಕೆಲವರಿಗೆ ಅನುಗ್ರಹಿಸದೆಯೂ ಇರುವಂತೆ, ವರ್ಷಾಕಾಲದಲ್ಲಿ ತುಂಬಿ ಹರಿಯುತ್ತಿದ್ದ ಗಿರಿನದಿಗಳು ಶರತ್ಕಾಲದಲ್ಲಿ ಅಮೃತಪ್ರಾಯವಾದ ನೀರಿನಿಂದ ಕೂಡಿ ಹರಿಯುತ್ತಿದ್ದರೆ, ಕೆಲವು ವೇಳೆ ಬತ್ತಿಹೋಗುತ್ತಿದ್ದವು. ॥36॥

(ಶ್ಲೋಕ-37)

ಮೂಲಮ್

ನೈವಾವಿದನ್ ಕ್ಷೀಯಮಾಣಂ ಜಲಂ ಗಾಧಜಲೇಚರಾಃ ।
ಯಥಾಯುರನ್ವಹಂ ಕ್ಷಯ್ಯಂ ನರಾ ಮೂಢಾಃ ಕುಟುಂಬಿನಃ ॥

ಅನುವಾದ

ಕುಟುಂಬ ಪೋಷಣೆಯಲ್ಲೇ ಮೈಮರೆತ ಮೂಢಜನರು ತಮ್ಮ ಆಯುಸ್ಸು ಕ್ಷಣೆ-ಕ್ಷಣೇ ಕ್ಷೀಣವಾಗುತ್ತಿರುವುದನ್ನು ತಿಳಿಯಲಾರರು. ಅಂತೆಯೇ ಆಳವಿಲ್ಲದ ಜಲಾಶಯದಲ್ಲಿ ವಾಸಮಾಡುವ ಜಲಚರಗಳು ಜಲಾಶಯದ ನೀರು ದಿನೇ-ದಿನೇ ಬತ್ತಿ ಹೋಗುತ್ತಿರುವುದನ್ನು ತಿಳಿಯುವುದಿಲ್ಲ. ॥37॥

(ಶ್ಲೋಕ-38)

ಮೂಲಮ್

ಗಾಧವಾರಿಚರಾಸ್ತಾಪಮವಿಂದನ್ಛರದರ್ಕಜಮ್ ।
ಯಥಾ ದರಿದ್ರಃ ಕೃಪಣಃ ಕುಟುಂಬ್ಯವಿಜಿತೇಂದ್ರಿಯಃ ॥

ಅನುವಾದ

ಇಂದ್ರಿಯಗಳಿಗೆ ವಶನಾದ ಕೃಪಣ, ದರಿದ್ರನು ಕುಟುಂಬದ ನಾನಾರೀತಿಯ ತಾಪಗಳಿಂದ ಪರಿತಪಿಸುವಂತೆ, ಆಳವಿಲ್ಲದ ನೀರಿನಲ್ಲಿ ವಾಸಿಸುವ ಜಲಚರಗಳು ಶರತ್ಕಾಲದ ಪ್ರಖರ ಸೂರ್ಯನ ತಾಪದಿಂದ ಪರಿತಪಿಸತೊಡಗಿದವು. ॥38॥

(ಶ್ಲೋಕ-39)

ಮೂಲಮ್

ಶನೈಃ ಶನೈರ್ಜಹುಃ ಪಂಕಂ ಸ್ಥಲಾನ್ಯಾಮಂ ಚ ವೀರುಧಃ ।
ಯಥಾಹಂಮಮತಾಂ ಧೀರಾಃ ಶರೀರಾದಿಷ್ವನಾತ್ಮಸು ॥

ಅನುವಾದ

ವಿವೇಕ ಸಂಪನ್ನನಾದ ಸಾಧಕನು ನಿಧಾನವಾಗಿ ಶರೀರವೇ ಮುಂತಾದ ಅನಾತ್ಮ ವಸ್ತುಗಳಲ್ಲಿದ್ದ ‘ನಾನು’, ‘ನನ್ನದು’ ಎಂಬ ಅಹಂತೆ, ಮಮತೆಗಳನ್ನು ತೊರೆಯುವಂತೆ, ಶರತ್ಕಾಲದಲ್ಲಿ ಭೂಮಿಯು ಕೆಸರನ್ನೂ ತೊರೆದು, ಔಷಧಿಲತೆಗಳು ಪರಿಪಕ್ವವಾಗುತ್ತವೆ. ॥39॥

(ಶ್ಲೋಕ-40)

ಮೂಲಮ್

ನಿಶ್ಚಲಾಂಬುರಭೂತ್ತೂಷ್ಣೀಂ ಸಮುದ್ರಃ ಶರದಾಗಮೇ ।
ಆತ್ಮನ್ಯುಪರತೇ ಸಮ್ಯಙ್ಮುನಿರ್ವ್ಯಪರತಾಗಮಃ ॥

ಅನುವಾದ

ಮನಸ್ಸು ನಿಃಸಂಕಲ್ಪವಾದಾಗ ಆತ್ಮಾರಾಮನಾದ ಪುರುಷನು ಕರ್ಮಕಾಂಡದ ಜಂಜಾಟದಿಂದ ದೂರವಾಗಿ ಶಾಂತನಾಗುವಂತೆ, ಶರತ್ಕಾಲದಲ್ಲಿ ಸಮುದ್ರವು ಯಾವುದೇ ಕ್ಷುಬ್ಧತೆಯೂ ಇಲ್ಲದೆ ಗಂಭೀರವಾಗಿಯೂ, ಶಾಂತವಾಗಿಯೂ, ಸ್ಥಿರವಾಯಿತು. ॥40॥

(ಶ್ಲೋಕ-41)

ಮೂಲಮ್

ಕೇದಾರೇಭ್ಯಸ್ತ್ವಪೋಗೃಹ್ಣನ್ಕರ್ಷಕಾ ದೃಢಸೇತುಭಿಃ ।
ಯಥಾ ಪ್ರಾಣೈಃ ಸ್ರವಜ್ಜ್ಞಾನಂ ತನ್ನಿರೋಧೇನ ಯೋಗಿನಃ ॥

ಅನುವಾದ

ಯೋಗಿಗಳಾದವರು ಪ್ರತ್ಯಾಹಾರದ ಮೂಲಕ ಮನಸ್ಸು ಮತ್ತು ಇಂದ್ರಿಯಗಳನ್ನು ವಿಷಯಗಳಿಂದ ತಡೆದು ನಿಲ್ಲಿಸಿ, ಜ್ಞಾನವನ್ನು ರಕ್ಷಿಸಿಕೊಳ್ಳುವರೋ, ಹಾಗೆಯೇ ರೈತರು ಶರತ್ಕಾಲದಲ್ಲಿ ಗದ್ದೆಗಳಿಗೆ ಬಲವಾದ ಬದುಗಳನ್ನು ಕಟ್ಟಿ ಸೋರಿಹೋಗುವ ನೀರನ್ನು ತಡೆಯುತ್ತಿದ್ದರು. ॥41॥

(ಶ್ಲೋಕ-42)

ಮೂಲಮ್

ಶರದರ್ಕಾಂಶುಜಾಂಸ್ತಾಪಾನ್ಭೂತಾ ನಾಮುಡುಪೋಹರತ್ ।
ದೇಹಾಭಿಮಾನಜಂ ಬೋಧೋ ಮುಕುಂದೋ ವ್ರಜಯೋಷಿತಾಮ್ ॥

ಅನುವಾದ

ದೇಹಾಭಿಮಾನದಿಂದ ಉಂಟಾದ ಅಜ್ಞಾನವನ್ನು ಜ್ಞಾನವು ಹೋಗಲಾಡಿಸುವಂತೆಯೂ, ಗೋಪಿಯರ ವಿರಹತಾಪವನ್ನು ಶ್ರೀಕೃಷ್ಣನು ಹೋಗಲಾಡಿಸುವಂತೆಯೇ, ಶರತ್ಕಾಲದ ಸೂರ್ಯನ ಪ್ರಖರ ಕಿರಣಗಳಿಂದ ಪ್ರಾಣಿಗಳಿಗೆ ಉಂಟಾದ ತಾಪವನ್ನು ಶರಶ್ಚಂದ್ರನು ರಾತ್ರಿಯಲ್ಲಿ ಪರಿಹರಿಸುತ್ತಾನೆ. ॥42॥

(ಶ್ಲೋಕ-43)

ಮೂಲಮ್

ಖಮಶೋಭತ ನಿರ್ಮೇಘಂ ಶರದ್ವಿಮಲತಾರಕಮ್ ।
ಸತ್ತ್ವಯುಕ್ತಂ ಯಥಾ ಚಿತ್ತಂ ಶಬ್ದಬ್ರಹ್ಮಾರ್ಥದರ್ಶನಮ್ ॥

ಅನುವಾದ

ವೇದಗಳ ಅರ್ಥವನ್ನು ಸ್ಪಷ್ಟವಾಗಿ ತಿಳಿದಿರುವ ಸತ್ತ್ವಗುಣಿಯ ಚಿತ್ತವು ಅತ್ಯಂತ ಶೋಭಾಯಮಾನವಾಗಿರುವಂತೆ, ಶರದೃತುವಿನ ರಾತ್ರೆಯಲ್ಲಿ ಮೇಘರಹಿತವಾದ ನಿರ್ಮಲ ಆಕಾಶವು ತಾರೆಗಳ ಜ್ಯೋತಿಗಳಿಂದ ಬೆಳಗುತ್ತಿರುತ್ತದೆ. ॥43॥

(ಶ್ಲೋಕ-44)

ಮೂಲಮ್

ಅಖಂಡಮಂಡಲೋ ವ್ಯೋಮ್ನಿ ರರಾಜೋಡುಗಣೈಃ ಶಶೀ ।
ಯಥಾ ಯದುಪತಿಃ ಕೃಷ್ಣೋ ವೃಷ್ಣಿಚಕ್ರಾವೃತೋ ಭುವಿ ॥

ಅನುವಾದ

ಪರೀಕ್ಷಿತನೇ! ಭೂಮಂಡಲದಲ್ಲಿ ಯದುವಂಶೀಯರಲ್ಲಿ ಯದುಪತಿ ಭಗವಾನ್ ಶ್ರೀಕೃಷ್ಣನು ಶೋಭಿಸುತ್ತಿರುವಂತೆಯೇ, ಆಕಾಶದಲ್ಲಿ ತಾರೆಗಳಿಂದ ಕೂಡಿದ ಚಂದ್ರನು ಶೋಭಿಸತೊಡಗಿದನು. ॥44॥

(ಶ್ಲೋಕ-45)

ಮೂಲಮ್

ಆಶ್ಲಿಷ್ಯ ಸಮಶೀತೋಷ್ಣಂ ಪ್ರಸೂನವನಮಾರುತಮ್ ।
ಜನಾಸ್ತಾಪಂ ಜಹುರ್ಗೋಪ್ಯೋ ನ ಕೃಷ್ಣಹೃತಚೇತಸಃ ॥

ಅನುವಾದ

ವಿಕಸಿತವಾದ ವನ ಕುಸುಮಗಳನ್ನು ಆಲಂಗಿಸಿಕೊಂಡು ಮೆಲ್ಲ-ಮೆಲ್ಲನೇ ಮತ್ತು ಸಮಶೀತೋಷ್ಣವಾಗಿ ಬೀಸುತ್ತಿದ್ದ ಮಾರುತವು ಸಮಸ್ತ ಜನರ ತಾಪವನ್ನು ಪರಿಹರಿಸುತ್ತಿತ್ತು. ಗೋಪಿಯರ ವಿರಹ ತಾಪವನ್ನು ಮಾತ್ರ ಪರಿಹರಿಸಲು ಸಮರ್ಥವಾಗಲಿಲ್ಲ. ಅವರ ಮನಸ್ಸುಗಳನ್ನು ಶ್ರೀಕೃಷ್ಣನೇ ಅಪಹರಿಸಿ ಬಿಟ್ಟಿದ್ದನು. ॥45॥

(ಶ್ಲೋಕ-46)

ಮೂಲಮ್

ಗಾವೋ ಮೃಗಾಃ ಖಗಾ ನಾರ್ಯಃ ಪುಷ್ಪಿಣ್ಯಃ ಶರದಾಭವನ್ ।
ಅನ್ವೀಯಮಾನಾಃ ಸ್ವವೃಷೈಃ ಲೈರೀಶಕ್ರಿಯಾ ಇವ ॥

ಅನುವಾದ

ಸಮರ್ಥರಾದವರಿಂದ ಮಾಡಲ್ಪಡುವ ಕ್ರಿಯೆಗಳನ್ನು, ಫಲಗಳು ಅನುಸರಿಸುವವಂತೆ, ಶರತ್ಕಾಲದಲ್ಲಿ ಹಸುಗಳೂ, ಜಿಂಕೆಗಳೂ, ಪಕ್ಷಿಗಳೂ, ಹೆಂಗಸರೂ, ಋತು ಮತಿಯರೂ-ಸಂತಾನೋತ್ಪತ್ತಿಯ ಕಾಮನೆಯಿಂದ ಕೂಡಿ ಹೋರಿಗಳನ್ನು, ಗಂಡುಪಕ್ಷಿಗಳನ್ನು, ಗಂಡಸರನ್ನೂ, ಅನುಸರಿಸಿದವು. ॥46॥

(ಶ್ಲೋಕ-47)

ಮೂಲಮ್

ಉದಹೃಷ್ಯನ್ವಾರಿಜಾನಿ ಸೂರ್ಯೋತ್ಥಾನೇ ಕುಮುದ್ವಿನಾ ।
ರಾಜ್ಞಾ ತು ನಿರ್ಭಯಾ ಲೋಕಾ ಯಥಾ ದಸ್ಯೂನ್ವಿನಾ ನೃಪ ॥

ಅನುವಾದ

ಪರೀಕ್ಷಿತನೇ! ರಾಜನ ಶುಭಾಗಮನದಿಂದ ಕಳ್ಳರನ್ನು ಬಿಟ್ಟು ಉಳಿದವರೆಲ್ಲರೂ ನಿರ್ಭಯರಾಗುವಂತೆಯೇ, ಸೂರ್ಯೋದಯದಿಂದ ಕನ್ನೈದಿಲೆಗಳನ್ನು ಬಿಟ್ಟು ಉಳಿದ ಕಮಲವೇ ಮುಂತಾದ ಪುಷ್ಪಗಳು ವಿಕಸಿತವಾಗುತ್ತವೆ. ॥47॥

(ಶ್ಲೋಕ-48)

ಮೂಲಮ್

ಪುರಗ್ರಾಮೇಷ್ವಾಗ್ರಯಣೈರೈಂದ್ರಿಯೈಶ್ಚ ಮಹೋತ್ಸವೈಃ ।
ಬಭೌ ಭೂಃ ಪಕ್ವಸಸ್ಯಾಢ್ಯಾ ಕಲಾಭ್ಯಾಂ ನಿತರಾಂ ಹರೇಃ ॥

ಅನುವಾದ

ಶರತ್ಕಾಲದಲ್ಲಿ ದೊಡ್ಡ- ದೊಡ್ಡ ಪಟ್ಟಣಗಳಲ್ಲಿಯೂ, ಹಳ್ಳಿಗಳಲ್ಲಿಯೂ ಆಗ್ರಾಯಣವೂ (ನವಾನ್ನಪ್ರಾಶನ), ಇಂದ್ರನ ಸಂಬಂಧವಾದ ಉತ್ಸವಗಳು ನಡೆಯತೊಡಗಿದವು. ಮಾಗಿನಿಂತ ಬೆಳೆಗಳಿಂದ ಭೂಮಿಯು ಸಂಪನ್ನವಾಗಿತ್ತು ಮತ್ತು ಭಗವಾನ್ ಶ್ರೀಕೃಷ್ಣನ ಹಾಗೂ ಬಲರಾಮನ ಉಪಸ್ಥಿತಿಯಲ್ಲಿ ಭೂಮಂಡಲವು ಅತ್ಯಂತ ಶೋಭಿಸತೊಡಗಿತು. ॥48॥

(ಶ್ಲೋಕ-49)

ಮೂಲಮ್

ವಣಿಙ್ಮುನಿನೃಪಸ್ನಾತಾ ನಿರ್ಗಮ್ಯಾರ್ಥಾನ್ಪ್ರಪೇದಿರೇ ।
ವರ್ಷರುದ್ಧಾ ಯಥಾ ಸಿದ್ಧಾಃ ಸ್ವಪಿಂಡಾನ್ಕಾಲ ಆಗತೇ ॥

ಅನುವಾದ

ಸಾಧಕರು ತಮ್ಮ ಯೋಗ ಸಾಧನೆಗಳಿಂದ ಕಾಲಾನುಕ್ರಮವಾಗಿ ದಿವ್ಯಶರೀರಗಳನ್ನು ಪಡೆದುಕೊಳ್ಳುವಂತೆ, ವರ್ಷಾಕಾಲದಲ್ಲಿ ಒಂದೇ ಸ್ಥಳದಲ್ಲಿ ನೆಲೆಸಿದ್ದ ವೈಶ್ಯರು, ರಾಜರು, ಸಂನ್ಯಾಸಿಗಳು ಮತ್ತು ಸ್ನಾತಕರು ಶರತ್ಕಾಲವು ಪ್ರಾರಂಭವಾಗುತ್ತಲೇ ಸ್ವೆಚ್ಛೆಯಿಂದ ತಮ್ಮ-ತಮ್ಮ ಕಾರ್ಯಗಳಲ್ಲಿ ತೊಡಗಿದರು. ॥49॥

ಅನುವಾದ (ಸಮಾಪ್ತಿಃ)

ಇಪ್ಪತ್ತನೆಯ ಅಧ್ಯಾಯವು ಮುಗಿಯಿತು. ॥20॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ಪ್ರಾವೃಟ್ಶರದ್ವರ್ಣನಂ ನಾಮ ವಿಂಶೋಽಧ್ಯಾಯಃ ॥20॥