೧೯

[ಹತ್ತೊಂಭತ್ತನೆಯ ಅಧ್ಯಾಯ]

ಭಾಗಸೂಚನಾ

ಗೋವುಗಳನ್ನು-ಗೋಪಾಲಕರನ್ನು ಶ್ರೀಕೃಷ್ಣನು ಕಾಡುಗಿಚ್ಚಿನಿಂದ ಕಾಪಾಡಿದುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಕ್ರೀಡಾಸಕ್ತೇಷು ಗೋಪೇಷು ತದ್ಗಾವೋ ದೂರಚಾರಿಣೀಃ ।
ಸ್ವೈರಂ ಚರಂತ್ಯೋ ವಿವಿಶುಸ್ತೃಣಲೋಭೇನ ಗಹ್ವರಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಒಮ್ಮೆ ಗೋಪಬಾಲಕರೆಲ್ಲರೂ ಆಟದಲ್ಲಿ ಮಗ್ನರಾಗಿದ್ದಾಗ ಅವರ ಗೋವುಗಳು ತಡೆಯುವವರೇ ಇಲ್ಲದ ಕಾರಣ ಬಹಳ ದೂರಕ್ಕೆ ಹೋಗಿಬಿಟ್ಟವು. ಹಸಿರು ಹುಲ್ಲಿನ ಆಸೆಯಿಂದ ಒಂದು ಗಹನವಾದ ಕಾಡನ್ನು ಪ್ರವೇಶಿಸಿದುವು. ॥1॥

(ಶ್ಲೋಕ-2)

ಮೂಲಮ್

ಅಜಾ ಗಾವೋ ಮಹಿಷ್ಯಶ್ಚ ನಿರ್ವಿಶಂತ್ಯೋ ವನಾದ್ವನಮ್ ।
ಇಷೀಕಾಟವೀಂ ನಿರ್ವಿವಿಶುಃ ಕ್ರಂದಂತ್ಯೋ ದಾವತರ್ಷಿತಾಃ ॥

ಅನುವಾದ

ಅವರ ಕರುಹಾಕದಿರುವ ಹಸುಗಳು, ಹಾಲು ಕೊಡುವ ಹಸುಗಳು, ಅನೇಕ ಕರುಗಳಿದ್ದ ಹಸುಗಳು ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ಹೋಗುತ್ತಾ ಬಿಸಿಲಿನ ತಾಪದಿಂದ ಪರಿತಪಿಸತೊಡಗಿದವು. ಅವುಗಳು ದಿಕ್ಕು ಗಾಣದೆ ಕೂಗಿಕೊಳ್ಳುತ್ತಾ ಕೊನೆಗೆ ಮುಂಜಾರಣ್ಯ (ನೊಜೆಹುಲ್ಲಿನ ಕಾಡು)ವನ್ನು ಹೊಕ್ಕವು. ॥2॥

(ಶ್ಲೋಕ-3)

ಮೂಲಮ್

ತೇಪಶ್ಯಂತಃ ಪಶೂನ್ಗೋಪಾಃ ಕೃಷ್ಣರಾಮಾದಯಸ್ತದಾ ।
ಜಾತಾನುತಾಪಾ ನ ವಿದುರ್ವಿಚಿನ್ವಂತೋ ಗವಾಂ ಗತಿಮ್ ॥

ಅನುವಾದ

ಶ್ರೀಕೃಷ್ಣ-ಬಲರಾಮರೇ ಮುಂತಾದ ಗೊಲ್ಲಬಾಲಕರು ತಮ್ಮ ಪಶುಗಳ ಸುಳಿವೇ ಇಲ್ಲದುದನ್ನು ನೋಡಿ ಅವರು ಆಟವನ್ನು ಬಿಟ್ಟು, ಅದಕ್ಕಾಗಿ ಮರುಗುತ್ತಾ ಎಲ್ಲೆಡೆ ಹುಡುಕತೊಡಗಿದರು. ಆದರೂ ಅವರಿಗೆ ತಮ್ಮ ಹಸುಗಳು ಕಂಡು ಬರಲಿಲ್ಲ. ॥3॥

(ಶ್ಲೋಕ-4)

ಮೂಲಮ್

ತೃಣೈಸ್ತತ್ಖುರದಚ್ಛಿನ್ನೈರ್ಗೋಷ್ಪದೈರಂಕಿತೈರ್ಗವಾಮ್ ।
ಮಾರ್ಗಮನ್ವಗಮನ್ಸರ್ವೇ ನಷ್ಟಾಜೀವ್ಯಾ ವಿಚೇತಸಃ ॥

ಅನುವಾದ

ಗೋವುಗಳೇ ವ್ರಜವಾಸಿಗಳ ಜೀವನಾಧಾರವಾಗಿದ್ದವು. ಅವುಗಳು ಸಿಗದಿರುವಾಗ ಅವರೆಲ್ಲರೂ ಬುದ್ಧಿಗೆಟ್ಟಂತಾದರು. ಬಳಿಕ ಅವರು ಹಸುಗಳ ಗೊರಸಿನ ಗುರುತನ್ನು, ಹುಲ್ಲು ಮೇದುಕೊಂಡು ಹೋದ ಜಾಗಗಳಿಂದ ಅವನ್ನು ಹುಡುಕುತ್ತಾ ಮುಂದೆ ಸಾಗಿದರು. ॥4॥

(ಶ್ಲೋಕ-5)

ಮೂಲಮ್

ಮುಂಜಾಟವ್ಯಾಂ ಭ್ರಷ್ಟಮಾರ್ಗಂ ಕ್ರಂದಮಾನಂ ಸ್ವಗೋಧನಮ್ ।
ಸಂಪ್ರಾಪ್ಯ ತೃಷಿತಾಃ ಶ್ರಾಂತಾಸ್ತತಸ್ತೇ ಸಂನ್ಯವರ್ತಯನ್ ॥

ಅನುವಾದ

ಕೊನೆಗೆ ಅವರು ತಮ್ಮ ಗೋವುಗಳು ಮುಂಜಾಟವಿಯಲ್ಲಿ ದಾರಿಗಾಣದೆ ಕೂಗಿಕೊಳ್ಳುತ್ತಿರುವುದನ್ನು ನೋಡಿ ಅವನ್ನು ಹಿಂದಿರುಗಿಸಲು ಪ್ರಯತ್ನಿಸತೊಡಗಿದನು. ಆಗ ಅವರೆಲ್ಲರೂ ಬಹಳವಾಗಿ ಆಯಾಸಗೊಂಡಿದ್ದು, ಬಾಯಾರಿಕೆಯಿಂದ ಬಳಲಿದ್ದು ಅವರಿಗೆ ಮುಂದುವರಿಯಲೂ ಸಾಧ್ಯವಾಗಲಿಲ್ಲ. ॥5॥

(ಶ್ಲೋಕ-6)

ಮೂಲಮ್

ತಾ ಆಹೂತಾ ಭಗವತಾ ಮೇಘಗಂಭೀರಯಾ ಗಿರಾ ।
ಸ್ವನಾಮ್ನಾಂ ನಿನದಂ ಶ್ರುತ್ವಾ ಪ್ರತಿನೇದುಃ ಪ್ರಹರ್ಷಿತಾಃ ॥

ಅನುವಾದ

ಗೋವುಗಳ ಆ ಸ್ಥಿತಿಯನ್ನು ನೋಡಿದ ಪ್ರಣತಾರ್ತಿಹರನಾದ ಶ್ರೀಕೃಷ್ಣನು ಮೇಘ ಸದೃಶವಾದ ಗಂಭೀರ ಧ್ವನಿಯಿಂದ ಹಸುಗಳ ಹೆಸರಿಡಿದು ಕರೆಯತೊಡಗಿದನು. ತಮ್ಮ ಹೆಸರನ್ನು ಕೇಳಿದ ಗೋವುಗಳು ಬಹಳ ಹರ್ಷಿತರಾಗಿ ಪ್ರತ್ಯುತ್ತರವಾಗಿ ತಾವೂ ‘ಅಂಬಾ’ ಎಂದು ಶ್ರೀಕೃಷ್ಣನ ಕರೆಗೆ ಓಗೊಟ್ಟವು. ॥6॥

(ಶ್ಲೋಕ-7)

ಮೂಲಮ್

ತತಃ ಸಮಂತಾದ್ವನಧೂಮಕೇತು-
ರ್ಯದೃಚ್ಛಯಾಭೂತ್ಕ್ಷಯಕೃದ್ವನೌಕಸಾಮ್ ।
ಸಮೀರಿತಃ ಸಾರಥಿನೋಲ್ಬಣೋಲ್ಮುಕೈಃ
ವಿಲೇಲಿಹಾನಃ ಸ್ಥಿರಜಂಗಮಾನ್ಮಹಾನ್ ॥

ಅನುವಾದ

ಪರೀಕ್ಷಿತನೇ! ಹೀಗೆ ಭಗವಂತನು ಆ ಹಸುಗಳನ್ನು ಕರೆಯುತ್ತಿರುವಾಗಲೇ ಆ ವನದ ನಾಲ್ಕೂ ಕಡೆಗಳಲ್ಲಿ ಅಕಸ್ಮಾತ್ತಾಗಿ ವನವಾಸೀ ಜೀವಿಗಳ ಕಾಲಸ್ವರೂಪವಾದ ಕಾಡ್ಗಿಚ್ಚು ಹೊತ್ತಿಕೊಂಡಿತು. ಜೊತೆಗೆ ಜೋರಾಗಿ ಬಿರುಗಾಳಿಯು ಬಿಸುತ್ತಾ ಆ ಬೆಂಕಿಯ ಉರಿಯನ್ನು ಹೆಚ್ಚಿಸುವುದರಲ್ಲಿ ಸಹಾಯಕವಾಯಿತು. ಇದರಿಂದ ಎಲ್ಲಡೆ ಹರಡಿಕೊಂಡ ಆ ಪ್ರಚಂಡ ಅಗ್ನಿಯು ತನ್ನ ಭಯಂಕರ ಜ್ವಾಲೆಗಳಿಂದ ಸಮಸ್ತ ಚರಾಚರ ಜೀವಿಗಳನ್ನು ಭಸ್ಮಮಾಡತೊಡಗಿತು. ॥7॥

(ಶ್ಲೋಕ-8)

ಮೂಲಮ್

ತಮಾಪತಂತಂ ಪರಿತೋ ದವಾಗ್ನಿಂ
ಗೋಪಾಶ್ಚ ಗಾವಃ ಪ್ರಸಮೀಕ್ಷ್ಯ ಭೀತಾಃ ।
ಊಚುಶ್ಚ ಕೃಷ್ಣಂ ಸಬಲಂ ಪ್ರಪನ್ನಾ
ಯಥಾ ಹರಿಂ ಮೃತ್ಯುಭಯಾರ್ದಿತಾ ಜನಾಃ ॥

ಅನುವಾದ

ಕಾಡ್ಗಿಚ್ಚು ನಾಲ್ಕೂ ಕಡೆಗಳಿಂದ ತಮ್ಮ ಕಡೆಗೆ ಬರುತ್ತಿರುವುದನ್ನು ಕಂಡ ಗೋವುಗಳೂ, ಗೋಪಾಲರೂ ಅತ್ಯಂತ ಭಯಭೀತರಾದರು. ಮರಣಭಯದಿಂದ ಹೆದರಿದ ಜೀವಿಯು ಭಗವಂತನಿಗೆ ಶರಣು ಹೋಗುವಂತೆ ಅವರು ಶ್ರೀಕೃಷ್ಣ ಮತ್ತು ಬಲರಾಮರಿಗೆ ಶರಣಾಗತರಾಗಿ, ಅವರನ್ನು ಕೂಗಿ ಕರೆಯುತ್ತಾ ಇಂತೆಂದರು. ॥8॥

(ಶ್ಲೋಕ-9)

ಮೂಲಮ್

ಕೃಷ್ಣ ಕೃಷ್ಣ ಮಹಾವೀರ ಹೇ ರಾಮಾಮಿತವಿಕ್ರಮ ।
ದಾವಾಗ್ನಿನಾ ದಹ್ಯಮಾನಾನ್ಪ್ರಪನ್ನಾಂಸಾತುಮರ್ಹಥಃ ॥

ಅನುವಾದ

ಓ ಮಹಾವೀರನಾದ ಪ್ರಿಯಕೃಷ್ಣನೇ! ಪರಮ ಬಲಶಾಲಿಯಾದ ಬಲರಾಮನೇ! ನಾವು ನಿಮಗೆ ಶರಣಾಗಿದ್ದೇವೆ. ಈ ಸಮಯದಲ್ಲಿ ನಾವು ದಾವಾಗ್ನಿಯಿಂದಬೆಂದು ಹೋಗುತ್ತಿದ್ದೇವೆ, ನೋಡು! ನೀವಿಬ್ಬರೂ ನಮ್ಮನ್ನು ಸಂರಕ್ಷಿಸಿರಿ. ॥9॥

(ಶ್ಲೋಕ-10)

ಮೂಲಮ್

ನೂನಂ ತ್ವದ್ಬಾಂಧವಾಃ ಕೃಷ್ಣ ನ ಚಾರ್ಹಂತ್ಯವಸೀದಿತುಮ್ ।
ವಯಂ ಹಿ ಸರ್ವಧರ್ಮಜ್ಞ ತ್ವನ್ನಾಥಾಸ್ತ್ವತ್ಪರಾಯಣಾಃ ॥

ಅನುವಾದ

ನಾವೆಲ್ಲರೂ ನಿಶ್ಚಯವಾಗಿಯೂ ನಿಮ್ಮ ಬಂಧುಗಳೇ ಆಗಿದ್ದೇವೆ. ಆಪದ್ಬಾಂಧವನ ಬಂಧುಗಳಾದ ನಾವು ಹೀಗೆ ವಿನಾಶಹೊಂದಬಾರದು. ಸಮಸ್ತವಾದ ಧರ್ಮಗಳನ್ನು ತಿಳಿದಿರತಕ್ಕವನೇ! ನೀನೇ ನಮಗೆ ಏಕ ಮಾತ್ರ ರಕ್ಷಕನೂ ಪರಮಾಶ್ರಯನೂ ಆಗಿರುವೆ. ನಿನ್ನದೇ ಭರವಸೆಯಿದ್ದ ನಮ್ಮನ್ನು ರಕ್ಷಿಸು. ॥10॥

(ಶ್ಲೋಕ-11)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ವಚೋ ನಿಶಮ್ಯ ಕೃಪಣಂ ಬಂಧೂನಾಂ ಭಗವಾನ್ಹರಿಃ ।
ನಿಮೀಲಯತ ಮಾ ಭೈಷ್ಟ ಲೋಚನಾನೀತ್ಯಭಾಷತ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಮಹಾರಾಜ! ತನ್ನ ಬಂಧುಗಳಾದ ಗೊಲ್ಲಬಾಲಕರ ದೈನ್ಯದಿಂದ ಕೂಡಿದ ವಚನವನ್ನು ಕೇಳಿದ ಭಗವಾನ್ ಶ್ರೀಕೃಷ್ಣನು ಅಭಯವನ್ನೀಯುತ್ತಾ ಇಂತೆದನು - ಹೆದರಬೇಡಿರಿ. ನೀವು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ. ॥11॥

(ಶ್ಲೋಕ-12)

ಮೂಲಮ್

ತಥೇತಿ ಮೀಲಿತಾಕ್ಷೇಷು ಭಗವಾನಗ್ನಿಮುಲ್ಬಣಮ್ ।
ಪೀತ್ವಾ ಮುಖೇನ ತಾನ್ಕೃಚ್ಛ್ರಾದ್ಯೋಗಾಧೀಶೋ ವ್ಯಮೋಚಯತ್ ॥

ಅನುವಾದ

ಭಗವಂತನ ಅಪ್ಪಣೆಯನ್ನು ಕೇಳಿದ ಗೋಪಬಾಲಕರು - ಸರಿ; ಹಾಗೆಯೇ ಆಗಲೆಂದು ಹೇಳಿ ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡರು. ಆಗ ಯೋಗೇಶ್ವರನಾದ ಭಗವಾನ್ ಶ್ರೀಕೃಷ್ಣನು ಭಯಂಕರವಾದ ಆ ಕಾಡ್ಗಿಚ್ಚನ್ನು ತನ್ನ ಬಾಯಿಂದ ಪಾನಮಾಡಿ ಬಿಟ್ಟನು. ಹೀಗೆ ಅವನು ಗೋಪಬಾಲಕರನ್ನು ಘೋರವಾದ ಸಂಕಟದಿಂದ ಪಾರುಮಾಡಿದನು. ॥12॥

(ಶ್ಲೋಕ-13)

ಮೂಲಮ್

ತತಶ್ಚ ತೇಕ್ಷೀಣ್ಯುನ್ಮೀಲ್ಯ ಪುನರ್ಭಾಂಡೀರಮಾಪಿತಾಃ ।
ನಿಶಾಮ್ಯ ವಿಸ್ಮಿತಾ ಆಸನ್ನಾತ್ಮಾನಂ ಗಾಶ್ಚ ಮೋಚಿತಾಃ ॥

ಅನುವಾದ

ಇದಾದ ಬಳಿಕ ಗೋಪಬಾಲಕರು ಕಣ್ಣುಬಿಟ್ಟು ನೋಡಿದಾಗ ತಾವು ಭಾಂಡೀರ ವಟವೃಕ್ಷದ ಬಳಿಯಲ್ಲಿರುವುದನ್ನು ನೋಡಿದರು. ಹೀಗೆ ತಮ್ಮನ್ನು ಮತ್ತು ಗೋವುಗಳನ್ನು ದಾವಾನಲದಿಂದ ಪಾರಾಗಿಸಿರುವುದನ್ನು ನೋಡಿ ಅತ್ಯಂತ ವಿಸ್ಮಿತರಾದರು. ॥13॥

(ಶ್ಲೋಕ-14)

ಮೂಲಮ್

ಕೃಷ್ಣಸ್ಯ ಯೋಗವೀರ್ಯಂ ತದ್ಯೋಗಮಾಯಾನುಭಾವಿತಮ್ ।
ದಾವಾಗ್ನೇರಾತ್ಮನಃ ಕ್ಷೇಮಂ ವೀಕ್ಷ್ಯ ತೇ ಮೇನಿರೇಮರಮ್ ॥

ಅನುವಾದ

ಶ್ರೀಕೃಷ್ಣನ ಈ ಯೋಗ ಸಿದ್ಧಿಯನ್ನು ಹಾಗೂ ಯೋಗ ಮಾಯೆಯ ಪ್ರಭಾವವನ್ನು ಮತ್ತು ದಾವಾನಲದಿಂದ ಆದ ತಮ್ಮ ರಕ್ಷಣೆಯನ್ನು ನೋಡಿ ಅವರೆಲ್ಲರೂ ಶ್ರೀಕೃಷ್ಣನು ಸಾಕ್ಷಾತ್ ದೇವತೆಯೆಂದೇ ಭಾವಿಸಿದರು. ॥14॥

(ಶ್ಲೋಕ-15)

ಮೂಲಮ್

ಗಾಃ ಸನ್ನಿವರ್ತ್ಯ ಸಾಯಾಹ್ನೇ ಸಹರಾಮೋ ಜನಾರ್ದನಃ ।
ವೇಣುಂ ವಿರಣಯನ್ಗೋಷ್ಠಮಗಾದ್ಗೋಪೈರಭಿಷ್ಟುತಃ ॥

ಅನುವಾದ

ಪರೀಕ್ಷಿತನೇ! ಸಾಯಂಕಾಲವಾಗುತ್ತಲೇ ಬಲರಾಮನೊಂದಿಗೆ ಭಗವಾನ್ ಶ್ರೀಕೃಷ್ಣನು ಮುರಳಿಯನ್ನು ನುಡಿಸುತ್ತಾ ಹಸುಗಳನ್ನು ಅಟ್ಟಿಸಿಕೊಂಡು ವ್ರಜದ ಕಡೆಗೆ ಹೊರಟನು. ಗೊಲ್ಲಬಾಲಕರು ಅವನನ್ನು ಸ್ತುತಿಸುತ್ತಾ ಅವನ ಹಿಂದೆ-ಹಿಂದೆಯೇ ಬರುತ್ತಿದ್ದರು. ॥15॥

(ಶ್ಲೋಕ-16)

ಮೂಲಮ್

ಗೋಪೀನಾಂ ಪರಮಾನಂದ ಆಸೀದ್ಗೋವಿಂದದರ್ಶನೇ ।
ಕ್ಷಣಂ ಯುಗಶತಮಿವ ಯಾಸಾಂ ಯೇನ ವಿನಾಭವತ್ ॥

ಅನುವಾದ

ಇತ್ತ ವ್ರಜದಲ್ಲಿ ಗೋಪಿಕೆಯರಿಗೆ ಶ್ರೀಕೃಷ್ಣನಿಲ್ಲದ ಒಂದೊಂದು ಕ್ಷಣವೂ ನೂರು ಯುಗಗಳಂತೆ ಕಾಣುತ್ತಿತ್ತು. ಭಗವಾನ್ ಶ್ರೀಕೃಷ್ಣನು ಮರಳಿದಾಗ ಅವನ ದರ್ಶನವನ್ನು ಪಡೆದ ಅವರೆಲ್ಲರೂ ಆನಂದ ಸಾಗರದಲ್ಲಿ ಮುಳುಗಿದರು. ॥16॥

ಅನುವಾದ (ಸಮಾಪ್ತಿಃ)

ಹತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥19॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ದಾವಾಗ್ನಿಪಾನಂ ನಾಮೈಕೋನವಿಂಶೋಽಧ್ಯಾಯಃ ॥19॥