[ಹದಿನಾರನೆಯ ಅಧ್ಯಾಯ]
ಭಾಗಸೂಚನಾ
ಕಾಲಿಯನ ಮೇಲೆ ಕೃಪೆದೋರಿದುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ವಿಲೋಕ್ಯ ದೂಷಿತಾಂ ಕೃಷ್ಣಾಂ ಕೃಷ್ಣಃ ಕೃಷ್ಣಾಹಿನಾ ವಿಭುಃ ।
ತಸ್ಯಾ ವಿಶುದ್ಧಿ ಮನ್ವಿಚ್ಛನ್ಸರ್ಪಂ ತಮುದವಾಸಯತ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಮಹಾವಿಷವುಳ್ಳ ಕಾಳಿಯನಾಗನು ಯಮುನೆಯ ನೀರನ್ನು ವಿಷಭರಿತವನ್ನಾಗಿ ಮಾಡಿಬಿಟ್ಟಿರುವನೆಂಬ ವಿಷಯವನ್ನು ತಿಳಿದ ಭಗವಾನ್ ಶ್ರೀಕೃಷ್ಣನು ಯಮುನೆಯ ನೀರನ್ನು ಶುದ್ಧಗೊಳಿಸಲೋಸುಗ ಆ ಸರ್ಪವನ್ನು ಅಲ್ಲಿಂದ ಓಡಿಸಿ ಬಿಟ್ಟನು. ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಕಥಮಂತರ್ಜಲೇಗಾಧೇ ನ್ಯಗೃಹ್ಣಾದ್ಭಗವಾನಹಿಮ್ ।
ಸ ವೈ ಬಹುಯುಗಾವಾಸಂ ಯಥಾಸೀದ್ವಿಪ್ರ ಕಥ್ಯತಾಮ್ ॥
ಅನುವಾದ
ಪರೀಕ್ಷಿತರಾಜನು ಕೇಳಿದನು — ವಿಪ್ರರ್ಷಿಯೇ! ಭಗವಾನ್ ಶ್ರೀಕೃಷ್ಣನು ಯಮುನೆಯ ಅಗಾಧವಾದ ನೀರಿನಲ್ಲಿದ್ದ ಕಾಳಿಯನನ್ನು ಹೇಗೆ ದಮನ ಮಾಡಿದನು? ಕಾಳಿಯ ಸರ್ಪವಾದರೋ ಜಲಚರಪ್ರಾಣಿಯಲ್ಲ. ಹಾಗಿದ್ದರೂ ಅದು ಅನೇಕ ಯುಗಗಳಿಂದ ಅಲ್ಲಿ ಹೇಗೆ ವಾಸವಾಗಿತ್ತು? ಈ ವಿಷಯವನ್ನು ದಯವಿಟ್ಟು ತಿಳಿಸಿರಿ. ॥2॥
(ಶ್ಲೋಕ-3)
ಮೂಲಮ್
ಬ್ರಹ್ಮನ್ಭಗವತಸ್ತಸ್ಯ ಭೂಮ್ನಃ ಸ್ವಚ್ಛಂದವರ್ತಿನಃ ।
ಗೋಪಾಲೋದಾರಚರಿತಂ ಕಸ್ತೃಪ್ಯೇತಾಮೃತಂ ಜುಷನ್ ॥
ಅನುವಾದ
ಬ್ರಾಹ್ಮಣಶ್ರೇಷ್ಠರೇ! ಪರಬ್ರಹ್ಮ ಸ್ವರೂಪನೂ, ತನ್ನ ಇಷ್ಟಾನುಸಾರವಾಗಿ ವರ್ತಿಸುವವನೂ ಆದ ಶ್ರೀಕೃಷ್ಣನು ಗೋಪಾಲರೂಪದಿಂದ ನಡೆಸಿದ ಅದ್ಭುತ ಲೀಲಾಮೃತವನ್ನು ಎಷ್ಟು ಕುಡಿದರೂ ತೃಪ್ತಿಯುಂಟಾಗುವುದಿಲ್ಲ. ॥3॥
(ಶ್ಲೋಕ-4)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಕಾಲಿಂದ್ಯಾಂ ಕಾಲಿಯಸ್ಯಾಸೀದ್ಧ್ರದಃ ಕಶ್ಚಿದ್ವಿಷಾಗ್ನಿನಾ ।
ಶ್ರಪ್ಯಮಾಣಪಯಾ ಯಸ್ಮಿನ್ಪತಂತ್ಯುಪರಿಗಾಃ ಖಗಾಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಯಮುನಾನದಿಯಲ್ಲಿ ಕಾಲಿಯನಾಗಕ್ಕೆ ನೆಲೆಯಾದ ಒಂದು ಕುಂಡವಿತ್ತು. ಅದರ ನೀರು ವಿಷದಿಂದ ಕುದಿಯುತ್ತಿತ್ತು. ಆ ಕುಂಡದ ಮೇಲೆ ಹಾರಿ ಹೋಗುತ್ತಿದ್ದ ಪಕ್ಷಿಗಳು ವಿಷದ ಬೇಗೆಯನ್ನು ತಾಳಲಾರದೆ ಕುಂಡದಲ್ಲೇ ಸತ್ತು ಬೀಳುತ್ತಿದ್ದವು. ॥4॥
(ಶ್ಲೋಕ-5)
ಮೂಲಮ್
ವಿಪ್ರುಷ್ಮತಾ ವಿಷೋದೋರ್ಮಿಮಾರುತೇನಾಭಿಮರ್ಶಿತಾಃ ।
ಮ್ರಿಯಂತೇ ತೀರಗಾ ಯಸ್ಯ ಪ್ರಾಣಿನಃ ಸ್ಥಿರಜಂಗಮಾಃ ॥
ಅನುವಾದ
ಅಲೆಗಳ ಮೂಲಕವಾಗಿ ಹೊರಬಂದ ತುಂತುರುಗಳಿಂದ ಕೂಡಿದ ವಿಷದ ಗಾಳಿಯು ತೀರಪ್ರದೇಶದಲ್ಲಿ ಬೀಸಿ ಅಲ್ಲಿದ್ದ ಮರ-ಬಳ್ಳಿಗಳು ಸುಟ್ಟು ಹೋಗಿ, ಪಶು-ಪಕ್ಷಿಗಳು ಸತ್ತು ಹೋಗುತ್ತಿದ್ದವು. ॥5॥
(ಶ್ಲೋಕ-6)
ಮೂಲಮ್
ತಂ ಚಂಡವೇಗವಿಷವೀರ್ಯಮವೇಕ್ಷ್ಯ ತೇನ
ದುಷ್ಟಾಂ ನದೀಂ ಚ ಖಲಸಂಯಮನಾವತಾರಃ ।
ಕೃಷ್ಣಃ ಕದಂಬಮಧಿರುಹ್ಯ ತತೋತಿತುಂಗ-
ಮಾಸ್ಫೋಟ್ಯ ಗಾಢರಶನೋ ನ್ಯಪತದ್ವಿಷೋದೇ ॥
ಅನುವಾದ
ಪರೀಕ್ಷಿತನೇ! ದುಷ್ಟರದಮನಕ್ಕಾಗಿಯೇ ಅವತರಿಸಿದ್ದ ಭಗವಂತನು ಸರ್ಪದ ವಿಷವು ಪ್ರಚಂಡವಾಗಿರುವುದನ್ನು, ಭಯಂಕರವಾದ ಆ ವಿಷವೇ ಕಾಳಿಯ ಸರ್ಪದ ಬಲವಾಗಿ ರುವುದೆಂಬುದನ್ನೂ, ಆ ಕಾರಣದಿಂದಲೇ ತಾನು ವಿಹರಿಸುವ ಯಮುನೆಯ ಜಲವೂ ವಿಷದಿಂದ ದೂಷಿತವಾಗಿರುವುದೆಂಬುದನ್ನು ತಿಳಿದುಕೊಂಡನು. ಆಗ ಭಗವಾನ್ ಶ್ರೀಕೃಷ್ಣನು ಸೊಂಟಕ್ಕೆ ದಟ್ಟಿಯನ್ನು ಬಿಗಿದು ಒಂದು ಎತ್ತರವಾದ ಕದಂಬ ವೃಕ್ಷದ ಮೇಲೇರಿ ಕೈಗಳಿಂದ ಎರಡೂ ಭುಜಗಳನ್ನು ತಟ್ಟಿಕೊಳ್ಳುತ್ತಾ ಮಡುವಿನೊಳಗೆ ಧುಮುಕಿದನು. ॥6॥
(ಶ್ಲೋಕ-7)
ಮೂಲಮ್
ಸರ್ಪಹ್ರದಃ ಪುರುಷಸಾರನಿಪಾತವೇಗ-
ಸಂಕ್ಷೋಭಿತೋರಗವಿಷೋಚ್ಛ್ವಸಿತಾಂಬುರಾಶಿಃ ।
ಪರ್ಯಕ್ಪ್ಲುತೋ ವಿಷಕಷಾಯವಿಭೀಷಣೋರ್ಮಿ-
ರ್ಧಾವನ್ಧನುಃಶತಮನಂತಬಲಸ್ಯ ಕಿಂ ತತ್ ॥
ಅನುವಾದ
ಯಮುನೆಯ ನೀರು ಸರ್ಪದ ವಿಷದಿಂದ ಮೊದಲೇ ಕುದಿದು ಉಕ್ಕುತ್ತಿತ್ತು. ಅದರ ತೆರೆಗಳು ಕೆಂಪು-ಹಳದಿಯಾಗಿದ್ದು ಅತ್ಯಂತ ಭಯಂಕರವಾಗಿ ಮೇಲೆಳುತ್ತಿದ್ದುವು. ಪುರುಷೋತ್ತಮನಾದ ಭಗವಾನ್ ಶ್ರೀಕೃಷ್ಣನು ಹಾರಿದ್ದರಿಂದ ಅದರ ನೀರು ಇನ್ನು ಹೆಚ್ಚು ಉಕ್ಕತೊಡಗಿತು. ಆಗಲಾದರೋ ಕಾಳಿಯ ಮಡುವಿನ ನೀರು ಅತ್ತ-ಇತ್ತ ಹಾರಿ ನೂರು ಗಜಗಳಷ್ಟು ಹರಡಿಕೊಂಡಿತು. ಅಚಿಂತ್ಯ ಅನಂತ ಬಲಶಾಲಿಯಾದ ಭಗವಾನ್ ಶ್ರೀಕೃಷ್ಣನಿಗಾಗಿ ಇದರಲ್ಲಿ ಯಾವುದೇ ಆಶ್ಚರ್ಯದ ವಿಷಯವಾಗಿರಲಿಲ್ಲ. ॥7॥
(ಶ್ಲೋಕ-8)
ಮೂಲಮ್
ತಸ್ಯ ಹ್ರದೇ ವಿಹರತೋ ಭುಜದಂಡಘೂರ್ಣ-
ವಾರ್ಘೋಷಮಂಗ ವರವಾರಣವಿಕ್ರಮಸ್ಯ ।
ಆಶ್ರುತ್ಯ ತತ್ಸ್ವಸದನಾಭಿಭವಂ ನಿರೀಕ್ಷ್ಯ
ಚಕ್ಷುಃಶ್ರವಾಃ ಸಮಸರತ್ತದಮೃಷ್ಯಮಾಣಃ ॥
ಅನುವಾದ
ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಕಾಲಿಯ ಮಡುವಿಗೆ ಹಾರಿ ಅತುಲ ಬಲಶಾಲಿಯಾದ ಮತ್ತಗಜದಂತೆ ನೀರನ್ನು ಬಡಿಯ ತೊಡಗಿದನು. ಹೀಗೆ ಜಲಕ್ರೀಡೆಯಾಡುತ್ತಾ ಅವನ ಭುಜಗಳ ಬಡಿತದಿಂದ ನೀರಿನಲ್ಲಿ ಜೋರಾದ ಶಬ್ದವಾಗತೊಡಗಿತು. ಕಣ್ಣಿಂದಲೇ ಕೇಳುವ ಕಾಳಿಯ ಸರ್ಪನಿಗೆ ಆ ಶಬ್ದವನ್ನು ಕೇಳಿ, ಯಾರೋ ನನ್ನ ನಿವಾಸಸ್ಥಾನವನ್ನು ತಿರಸ್ಕರಿಸುತ್ತಿದ್ದಾನೆಂದು ತಿಳಿಯಿತು. ಇದನ್ನು ಸಹಿಸಲಾಗದೆ ಕಾಳಿಯನು ಕುಪಿತನಾಗಿ ಶ್ರೀಕೃಷ್ಣನ ಮುಂದೆ ಬಂದನು. ॥8॥
(ಶ್ಲೋಕ-9)
ಮೂಲಮ್
ತಂ ಪ್ರೇಕ್ಷಣೀಯ ಸುಕುಮಾರಘನಾವದಾತಂ
ಶ್ರೀವತ್ಸಪೀತವಸನಂ ಸ್ಮಿತಸುಂದರಾಸ್ಯಮ್ ।
ಕ್ರೀಡಂತಮಪ್ರತಿಭಯಂ ಕಮಲೋದರಾಂಘ್ರಿಂ
ಸಂದಸ್ಯ ಮರ್ಮಸು ರುಷಾ ಭುಜಯಾ ಚಛಾದ ॥
ಅನುವಾದ
ಎದುರಿಗೆ ಶ್ಯಾಮಲವರ್ಣದ ಬಾಲಕನನ್ನು ನೋಡಿದನು. ವರ್ಷಾಕಾಲದ ಮೇಘದಂತೆ ಅತ್ಯಂತ ಸುಕುಮಾರ ಶರೀರವಿದ್ದು, ಪುನಃ ಪುನಃ ನೋಡ ಬೇಕೆನ್ನುವಷ್ಟು ಸೌಂದರ್ಯವು ಅವನಲ್ಲಿತ್ತು. ಅವನ ವೃಕ್ಷ ಸ್ಥಳದಲ್ಲಿ ಸ್ವರ್ಣರೇಖೆಯಂತೆ ಶ್ರೀವತ್ಸದ ಚಿಹ್ನೆಯಿದ್ದು, ಪೀತಾಂಬರವನ್ನು ಧರಿಸಿದ್ದನು. ಅವನ ಸುಂದರವಾದ ಮುಖಾರವಿಂದದಿಂದ ಸುಮಧುರವಾದ ಮಂದಹಾಸವು ಹೊರಸೂಸುತ್ತಿತ್ತು. ಅವನ ಹೊಕ್ಕುಳು ಮತ್ತು ಪಾದಗಳು ಕಮಲ ಪುಷ್ಪದ ಕರ್ಣಿಕೆಯಂತೆ ಕೋಮಲ ಸುಮನೋಹರವಾಗಿದ್ದವು. ಯಾವ ವಿಧವಾದ ಭಯವು ಇಲ್ಲದೆ ಆ ಸುಂದರ ಬಾಲಕನು ನೀರಿನಲ್ಲಿ ತೊಳಲಾಡುತ್ತಿದ್ದನು. ಇಂತಹ ತಿರಸ್ಕಾರವನ್ನು ಕಂಡ ಸರ್ಪರಾಜನ ಕೋಪವು ನೆತ್ತಿಗೇರಿತು. ಅವನು ಶ್ರೀಕೃಷ್ಣನ ಮರ್ಮಸ್ಥಾನದಲ್ಲಿ ಬಲವಾಗಿ ಕಚ್ಚಿ ತನ್ನ ಶರೀರದಿಂದ ಅವನನ್ನು ಬಂಧಿಸಿದನು. ॥9॥
(ಶ್ಲೋಕ-10)
ಮೂಲಮ್
ತಂ ನಾಗಭೋಗಪರಿವೀತಮದೃಷ್ಟಚೇಷ್ಟ-
ಮಾಲೋಕ್ಯ ತತ್ಪ್ರಿಯಸಖಾಃ ಪಶುಪಾ ಭೃಶಾರ್ತಾಃ ।
ಕೃಷ್ಣೇರ್ಪಿತಾತ್ಮಸುಹೃದರ್ಥಕಲತ್ರಕಾಮಾ
ದುಃಖಾನುಶೋಕಭಯಮೂಢದಿಯೋ ನಿಪೇತುಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ನಾಗಪಾಶದಿಂದ ಬಂಧಿತನಾಗಿ ನಿಶ್ಚೇಷ್ಟಿತನಾದನು. ಇದನ್ನು ನೋಡಿದ ಅವನ ಪ್ರಾಣಪ್ರಿಯರಾದ ಗೋಪಬಾಲಕರು ಬಹಳವಾಗಿ ಸಂಕಟಪಟ್ಟರು. ದುಃಖ-ಪಶ್ಚಾತ್ತಾಪ-ಭಯಗಳಿಂದ ಮೂರ್ಛಿತರಾಗಿ ಕೆಳಗೆ ಬಿದ್ದರು. ಏಕೆಂದರೆ, ಅವರು ತಮ್ಮ ಶರೀರ, ಬಂಧುಗಳು, ಮಿತ್ರರು, ಧನಸಂಪತ್ತು, ಪುತ್ರ, ಕಳತ್ರರು, ಭೋಗಗಳು ಮತ್ತು ಸಮಸ್ತ ಕಾಮನೆಗಳು - ಇವೆಲ್ಲವನ್ನು ಭಗವಾನ್ ಶ್ರೀಕೃಷ್ಣನಿಗೆ ಸಮರ್ಪಿಸಿ ಬಿಟ್ಟಿದ್ದರು. ॥10॥
(ಶ್ಲೋಕ-11)
ಮೂಲಮ್
ಗಾವೋ ವೃಷಾ ವತ್ಸತರ್ಯಃ ಕ್ರಂದಮಾನಾಃ ಸುದುಃಖಿತಾಃ ।
ಕೃಷ್ಣೇ ನ್ಯಸ್ತೇಕ್ಷಣಾ ಭೀತಾ ರುದತ್ಯ ಇವ ತಸ್ಥಿರೇ ॥
ಅನುವಾದ
ಹಸುಗಳು, ಎತ್ತುಗಳು, ಕರುಗಳು, ಎಳೆಗರುಗಳು ಹೀಗೆ ಎಲ್ಲವೂ ಸರ್ಪಪಾಶದಿಂದ ಕಟ್ಟಲ್ಪಟ್ಟ ಬಾಲಕೃಷ್ಣನನ್ನು ದಿಟ್ಟಿಸಿ ನೋಡುತ್ತಾ ಅಪರಿಮಿತವಾದ ದುಃಖದಿಂದ ಕಿರುಚಿಕೊಳ್ಳುತ್ತಿದ್ದವು. ಭಯಗೊಂಡು ಅಳುತ್ತಿವೆಯೋ ಎಂಬಂತೆ ಸ್ಪಲ್ವವೂ ಕದಲದೆ ನಿಂತಿದ್ದವು. ॥11॥
(ಶ್ಲೋಕ-12)
ಮೂಲಮ್
ಅಥ ವ್ರಜೇ ಮಹೋತ್ಪಾತಾಸಿವಿಧಾ ಹ್ಯತಿದಾರುಣಾಃ ।
ಉತ್ಪೇತುರ್ಭುವಿ ದಿವ್ಯಾತ್ಮನ್ಯಾಸನ್ನಭಯಶಂಸಿನಃ ॥
ಅನುವಾದ
ಅತ್ತ ಗೋಕುಲದಲ್ಲಿ ಭಯವು ಸನ್ನಿಹಿತವಾಗುವುದೆಂಬುದನ್ನು ಸೂಚಿಸುವ ಮೂರು ಬಗೆಯ ದಾರುಣವಾದ ಮಹೋತ್ಪಾತಗಳು ಕಾಣಿಸಿಕೊಂಡವು. ಭೂಮಿಯು ಕಂಪಿಸಿತು, ಅಂತರಿಕ್ಷದಿಂದ ಉಲ್ಕೆಗಳು ಬೀಳತೊಡಗಿದವು. ಪುರುಷರ ಎಡ ಅಂಗಗಳು, ಸ್ತ್ರೀಯರ ಬಲ ಅಂಗಗಳೂ ಅದರ ತೊಡಗಿದವು. ॥12॥
(ಶ್ಲೋಕ-13)
ಮೂಲಮ್
ತಾನಾಲಕ್ಷ್ಯ ಭಯೋದ್ವಿಗ್ನಾ ಗೋಪಾ ನಂದಪುರೋಗಮಾಃ ।
ವಿನಾ ರಾಮೇಣ ಗಾಃ ಕೃಷ್ಣಂ ಜ್ಞಾತ್ವಾ ಚಾರಯಿತುಂ ಗತಮ್ ॥
ಅನುವಾದ
ನಂದಗೋಪನೇ ಮೊದಲಾದವರು ಮಹೋತ್ಪಾತಗಳನ್ನು ನೋಡಿ ಭಯದಿಂದ ಉದ್ವಿಗ್ನರಾದರು. ಬಲರಾಮನನ್ನು ಬಿಟ್ಟು ಶ್ರೀಕೃಷ್ಣನೊಬ್ಬನೇ ಹಸುಗಳನ್ನು ಮೇಯಿಸಲು ಹೋಗಿರುವನೆಂದು ತಿಳಿದ ಬಳಿಕ ಅವರ ಭಯವು ಮತ್ತಷ್ಟು ಉಲ್ಬಣಿಸಿತು. ॥13॥
(ಶ್ಲೋಕ-14)
ಮೂಲಮ್
ತೈರ್ದುರ್ನಿಮಿತ್ತೈರ್ನಿಧನಂ ಮತ್ವಾ ಪ್ರಾಪ್ತಮತದ್ವಿದಃ ।
ತತ್ಪ್ರಾಣಾಸ್ತನ್ಮನಸ್ಕಾಸ್ತೇ ದುಃಖಶೋಕಭಯಾತುರಾಃ ॥
ಅನುವಾದ
ಅವರು ಭಗವಂತನ ಮಹಿಮೆಯನ್ನು ತಿಳಿಯುತ್ತಿರಲಿಲ್ಲ. ಅದಕ್ಕಾಗಿ ಆ ಅಪಶಕುನಗಳನ್ನು ನೋಡಿ-ಇಂದು ಶ್ರೀಕೃಷ್ಣನಿಗೆ ಮೃತ್ಯುವೇ ಸಂಭವಿಸಬಹುದೆಂದು ಅವರ ಮನಸ್ಸಿಗೆ ಅನಿಸಿತು. ಅವರು ಆ ಕ್ಷಣವೇ ದುಃಖ, ಶೋಕ, ಭಯದಿಂದ ಆತುರರಾದರು. ಶ್ರೀಕೃಷ್ಣನೇ ಅವರಿಗೆ ಪಂಚ ಪ್ರಾಣವಾಗಿದ್ದನು. ಅವರ ಮನಸ್ಸು ಯಾವಾಗಲೂ ಅವನಲ್ಲೇ ಲೀನವಾಗಿ ಬಿಟ್ಟಿತ್ತು. ॥14॥
(ಶ್ಲೋಕ-15)
ಮೂಲಮ್
ಆಬಾಲವೃದ್ಧವನಿತಾಃ ಸರ್ವೇಂಗ ಪಶುವೃತ್ತಯಃ ।
ನಿರ್ಜಗ್ಮುರ್ಗೋಕುಲಾದ್ದೀನಾಃ ಕೃಷ್ಣದರ್ಶನಲಾಲಸಾಃ ॥
ಅನುವಾದ
ಪ್ರಿಯ ಪರೀಕ್ಷಿತನೇ! ವ್ರಜದ ಬಾಲಕ, ವೃದ್ಧ, ಸ್ತ್ರೀಯರ ಸ್ವಭಾವವೂ ಹಸುಗಳಂತೆ ವಾತ್ಸಲ್ಯಪೂರ್ಣವಾಗಿತ್ತು. ಮನಸ್ಸಿಗೆ ಹೀಗೆ ಅನಿಸುತ್ತಲೇ ಅವರು ಅತ್ಯಂತ ದುಃಖಿತರಾಗಿ ತಮ್ಮ ಪ್ರಿಯ ಮುದ್ದು ಕಂದಮ್ಮನನ್ನು ನೋಡಲು ಉತ್ಕಟ ಇಚ್ಛೆಯಿಂದ ಮನೆ-ಮಠ ಬಿಟ್ಟು ಹೊರಟೇ ಬಿಟ್ಟರು. ॥15॥
(ಶ್ಲೋಕ-16)
ಮೂಲಮ್
ತಾಂಸ್ತಥಾ ಕಾತರಾನ್ವೀಕ್ಷ್ಯ ಭಗವಾನ್ಮಾಧವೋ ಬಲಃ ।
ಪ್ರಹಸ್ಯ ಕಿಂಚಿನ್ನೋವಾಚ ಪ್ರಭಾವಜ್ಞೋನುಜಸ್ಯ ಸಃ ॥
ಅನುವಾದ
ಬಲರಾಮನು ಸಾಕ್ಷಾತ್ ಭಗವಂತನ ಸ್ವರೂಪನೇ ಆಗಿದ್ದು, ಸರ್ವಶಕ್ತನಾಗಿದ್ದನು. ವ್ರಜವಾಸಿಗಳು ಇಷ್ಟೊಂದು ಕಾತುರ ಮತ್ತು ಆತುರರಾಗಿರುವುದನ್ನು ನೋಡಿ ಅವನಿಗೆ ನಗುಬಂತು. ಆದರೆ ಅವನು ಏನೂ ಮಾತನಾಡದೆ ಸುಮ್ಮನೆ ಇದ್ದನು. ಏಕೆಂದರೆ, ಅವನು ತನ್ನ ತಮ್ಮನಾದ ಶ್ರೀಕೃಷ್ಣನ ಮಹಿಮೆಯನ್ನು ಚೆನ್ನಾಗಿ ತಿಳಿದಿದ್ದನು. ॥16॥
(ಶ್ಲೋಕ-17)
ಮೂಲಮ್
ತೇನ್ವೇಷಮಾಣಾ ದಯಿತಂ ಕೃಷ್ಣಂ ಸೂಚಿತಯಾ ಪದೈಃ ।
ಭಗವಲ್ಲಕ್ಷಣೈರ್ಜಗ್ಮುಃ ಪದವ್ಯಾ ಯಮುನಾತಟಮ್ ॥
ಅನುವಾದ
ಅನಂತರ ವ್ರಜವಾಸಿಗಳು ತಮಗೆ ಅತ್ಯಂತ ಪ್ರಿಯನಾದ ಶ್ರೀಕೃಷ್ಣನನ್ನು ಹುಡುಕಲು ತೊಡಗಿದರು. ಹುಡುಕಲು ಅವರಿಗೆ ಅಷ್ಟೇನೂ ಕಷ್ಟವಾಗಲಿಲ್ಲ. ಭಗವಂತನಿಟ್ಟಿದ್ದ ಕಮಲ, ಅಂಕುಶಾದಿ ವಿಶೇಷ ಲಕ್ಷಣಗಳುಳ್ಳ ಹೆಜ್ಜೆಗಳನ್ನು ಅನುಸರಿಸಿ ಹೋದರು. ಹೀಗೆ ಅವು ಅವರನ್ನು ಯಮುನಾನದಿಯ ತೀರಕ್ಕೆ ಒಯ್ದವು. ॥17॥
(ಶ್ಲೋಕ-18)
ಮೂಲಮ್
ತೇ ತತ್ರ ತತ್ರಾಬ್ಜಯವಾಂಕುಶಾಶನಿ-
ಧ್ವಜೋಪಪನ್ನಾನಿ ಪದಾನಿ ವಿಶ್ಪತೇಃ ।
ಮಾರ್ಗೇ ಗವಾಮನ್ಯಪದಾಂತರಾಂತರೇ
ನಿರೀಕ್ಷಮಾಣಾ ಯಯುರಂಗ ಸತ್ವರಾಃ ॥
ಅನುವಾದ
ಪರೀಕ್ಷಿತನೇ! ಮಾರ್ಗದಲ್ಲಿ ಹೋಗುತ್ತಿದ್ದಾಗ ಗೋವುಗಳ, ಕರುಗಳ, ಗೋಪಬಾಲಕರ ಹೆಜ್ಜೆಗಳ ನಡು-ನಡುವೆ ಭಗವಂತನ ಕಮಲ, ಯವ, ಅಂಕುಶ, ವಜ್ರಾಯುಧ, ಧ್ವಜಗಳ ಚಿಹ್ನೆಗಳಿಂದ ಕೂಡಿದ ಹೆಜ್ಜೆಗಳ ಗುರುತೂ ಸ್ಪಷ್ಟವಾಗಿ ಕಾಣಿಸುತ್ತಿದ್ದಿತು. ಅದನ್ನು ನೋಡಿಕೊಂಡು ಅದನ್ನೇ ಅನುಸರಿಸಿ ಗೋವಳರು ಅವಸರದಿಂದ ಯಮುನಾ ತೀರಕ್ಕೆ ಹೋದರು. ॥18॥
(ಶ್ಲೋಕ-19)
ಮೂಲಮ್
ಅಂತರ್ಹ್ರದೇ ಭುಜಗಭೋಗಪರೀತಮಾರಾತ್
ಕೃಷ್ಣಂ ನಿರೀಹಮುಪಲಭ್ಯ ಜಲಾಶಯಾಂತೇ ।
ಗೋಪಾಂಶ್ಚ ಮೂಢಧಿಷಣಾನ್ಪರಿತಃ ಪಶೂಂಶ್ಚ
ಸಂಕ್ರಂದತಃ ಪರಮಕಶ್ಮಲಮಾಪುರಾರ್ತಾಃ ॥
ಅನುವಾದ
ದೂರದಿಂದಲೇ ಅವರು ಶ್ರೀಕೃಷ್ಣನು ಕಾಳಿಯ ಸರ್ಪದಿಂದ ಬಂಧಿಸಲ್ಪಟ್ಟು ನಿಶ್ಚೇಷ್ಟ ನಾಗಿರುವುದನ್ನು ನೋಡಿದರು. ಮಡುವಿನ ಸಮೀಪದಲ್ಲಿ ಗೋಪಬಾಲಕರೂ, ಮೂರ್ಛಿತರಾಗಿ ಬಿದ್ದಿರುವುದನ್ನು, ಹಸುಗಳೂ ಎತ್ತುಗಳೂ-ಕರುಗಳೂ ಕುಂಡದ ಸುತ್ತಲೂ ನಿಂತು ಆರ್ತನಾದವನ್ನು ಮಾಡುತ್ತಿರುವುದನ್ನು ನೋಡಿದರು. ಇದೆಲ್ಲವನ್ನು ನೋಡಿದ ನಂದಗೋಪಾದಿಗಳು ಅತ್ಯಂತ ವ್ಯಾಕುಲರಾಗಿ ಕೊನೆಗೆ ಮೂರ್ಛಿತರಾಗಿ ಬಿದ್ದರು. ॥19॥
(ಶ್ಲೋಕ-20)
ಮೂಲಮ್
ಗೋಪ್ಯೋನುರಕ್ತಮನಸೋ ಭಗವತ್ಯನಂತೇ
ತತ್ಸೌಹೃದಸ್ಮಿತವಿಲೋಕಗಿರಃ ಸ್ಮರಂತ್ಯಃ ।
ಗ್ರಸ್ತೇಹಿನಾ ಪ್ರಿಯತಮೇ ಭೃಶದುಃಖತಪ್ತಾಃ
ಶೂನ್ಯಂ ಪ್ರಿಯವ್ಯತಿಹೃತಂ ದದೃಶುಸಿಲೋಕಮ್ ॥
ಅನುವಾದ
ಗೋಪಿಯರ ಸಂಕಟವಂತೂ ವರ್ಣಿಸಲು ಅಸದಳವಾದದ್ದು. ಭಗವಂತನಾದ ಅನಂತನಲ್ಲಿಯೇ ಅವರ ಮನಸ್ಸು ಅನುರಕ್ತವಾಗಿದ್ದಿತು. ನಿತ್ಯ ನಿರಂತರವಾದ ಭಗವಂತನ ಸೌಹಾರ್ದ, ಅವನ ಸುಮಧುರ ಮಂದಹಾಸ, ಪ್ರೇಮಪೂರ್ಣವಾದ ಮನಸ್ಸನ್ನು ಸೆಳೆಯುವ ಕುಡಿನೋಟ, ಅವನ ಸುಮಧುರವಾದ ವಾಣಿ ಇವೆಲ್ಲವನ್ನೂ ಗೋಪಿಯರು ಒಂದೊಂದಾಗಿ ಸ್ಮರಿಸಿಕೊಂಡರು. ತಮ್ಮ ಪ್ರಿಯತಮನಾದ ಶ್ಯಾಮಸುಂದರನು ಸರ್ಪಪಾಶದಿಂದ ಬಂಧಿತನಾಗಿರುವುದನ್ನು ನೋಡಿದೊಡನೆಯೇ ಅಸಹನೀಯವಾದ ದುಃಖದಿಂದ ಪರಿತಪಿಸಿದರು. ಅವರ ಹೊಟ್ಟೆಗೆ ಬೆಂಕಿ ಬಿದ್ದಂತಾಯಿತು. ಪ್ರಿಯತಮನಾದ ಶ್ರೀಕೃಷ್ಣನಿಲ್ಲದ ಮೂರು ಲೋಕಗಳೂ ಅವರಿಗೆ ಶೂನ್ಯವಾಗಿ ಕಂಡಿತು. ॥20॥
(ಶ್ಲೋಕ-21)
ಮೂಲಮ್
ತಾಃ ಕೃಷ್ಣಮಾತರಮಪತ್ಯಮನುಪ್ರವಿಷ್ಟಾಂ
ತುಲ್ಯವ್ಯಥಾಃ ಸಮನುಗೃಹ್ಯ ಶುಚಃ ಸ್ರವಂತ್ಯಃ ।
ತಾಸ್ತಾ ವ್ರಜಪ್ರಿಯಕಥಾಃ ಕಥಯಂತ್ಯ ಆಸನ್
ಕೃಷ್ಣಾನನೇರ್ಪಿತದೃಶೋ ಮೃತಕಪ್ರತೀಕಾಃ ॥
ಅನುವಾದ
ತಾಯಿಯಾದ ಯಶೋದೆಯಂತೂ ತಾನು ಮಡುವಿಗೆ ಬಿದ್ದು ಬಿಡುವೆನೆಂದೇ ಧಾವಿಸಿದಳು. ಆದರೆ ಇತರ ಗೋಪಿಯರು ಆಕೆಯನ್ನು ತಡೆದರು. ಇತರ ಗೋಪಿಯರಿಗೂ ಕೃಷ್ಣನಿಲ್ಲದ ದುಃಖವು ಯಶೋದೆಯ ದುಃಖಕ್ಕಿಂತ ಕಡಿಮೆಯಾಗಿರಲಿಲ್ಲ. ಅವರ ಕಣ್ಣುಗಳಿಂದ ಕಂಬನಿಯು ಧಾರಾಕಾರವಾಗಿ ಸುರಿಯುತ್ತಿತ್ತು. ಎಲ್ಲರ ಕಣ್ಣುಗಳೂ ಶ್ರೀಕೃಷ್ಣನಲ್ಲಿಯೇ ಕೇಂದ್ರಿಕೃತವಾಗಿದ್ದವು. ಕೆಲವು ಗೋಪಿಯರು ಪೂತನಾವಧೆ, ತೃಣಾವರ್ತಸಂಹಾರ, ಬಕಾಸುರ ಸಂಹಾರ, ಇವೇ ಮುಂತಾದ ಕಥೆಗಳನ್ನು ಹೇಳಿಕೊಂಡು ಯಶೋದೆಗೆ ಧೈರ್ಯ ತುಂಬುತ್ತಿದ್ದರು. ಆದರೆ ಹೆಚ್ಚು ಜನರು ಜೀವವಿಲ್ಲದ ಶವಗಳಂತೆಯೇ ಆಗಿಬಿಟ್ಟಿದ್ದರು. ॥21॥
(ಶ್ಲೋಕ-22)
ಮೂಲಮ್
ಕೃಷ್ಣಪ್ರಾಣಾನ್ನಿರ್ವಿಶತೋ ನಂದಾದೀನ್ವೀಕ್ಷ್ಯ ತಂ ಹ್ರದಮ್ ।
ಪ್ರತ್ಯಷೇಧತ್ಸ ಭಗವಾನ್ರಾಮಃ ಕೃಷ್ಣಾನುಭಾವವಿತ್ಞ್ ॥
ಅನುವಾದ
ಪರೀಕ್ಷಿತನೇ! ಶ್ರೀಕೃಷ್ಣನೇ ತಮ್ಮ ಪಂಚಪ್ರಾಣವೆಂದು ಭಾವಿಸಿಕೊಂಡಿದ್ದ ನಂದನೇ ಮೊದಲಾದ ಗೋಪರು ಮೂರ್ಛೆಯು ತಿಳಿದೊಡನೆಯೇ ಶ್ರೀಕೃಷ್ಣನಿದ್ದ ಕುಂಡಕ್ಕೆ ಧುಮುಕಲು ಮುಂದಾದರು. ಆದರೆ ಬಲರಾಮನು ಶ್ರೀಕೃಷ್ಣನ ಮಹಿಮೆಯನ್ನು ಚೆನ್ನಾಗಿ ತಿಳಿದವನಾದ್ದರಿಂದ ಹಾಗೆ ಕುಂಡಕ್ಕೆ ಧುಮುಕದಂತೆ ಅವರೆಲ್ಲರನ್ನು ತಡೆದನು. ॥22॥
(ಶ್ಲೋಕ-23)
ಮೂಲಮ್
ಇತ್ಥಂ ಸ್ವಗೋಕುಲಮನನ್ಯಗತಿಂ ನಿರೀಕ್ಷ್ಯ
ಸಸೀಕುಮಾರಮತಿದುಃಖಿತಮಾತ್ಮಹೇತೋಃ ।
ಆಜ್ಞಾಯ ಮರ್ತ್ಯಪದವೀಮನುವರ್ತಮಾನಃ
ಸ್ಥಿತ್ವಾ ಮುಹೂರ್ತಮುದತಿಷ್ಠದುರಂಗ ಬಂಧಾತ್ ॥
ಅನುವಾದ
ಪರೀಕ್ಷಿತನೇ! ಸರ್ಪದ ಬಂಧನಕ್ಕೆ ಒಳಪಟ್ಟಿದ್ದು ಶ್ರೀಕೃಷ್ಣನ ಒಂದು ಮಾನುಷ ಲೀಲೆಯೇ ಆಗಿತ್ತು. ವ್ರಜದ ಎಲ್ಲ ಜನರು ಸ್ತ್ರೀಯರೂ ಮಕ್ಕಳಾದಿಯಾಗಿ ನನಗಾಗಿ ಹೀಗೆ ಅತ್ಯಂತ ದುಃಖಿತರಾಗಿದ್ದಾರೆ, ಇವರಿಗೆ ನಿಜವಾಗಿಯೂ ನಾನಲ್ಲದೆ ಬೇರೆ ಯಾವುದೇ ಆಸರೆಯೂ ಇಲ್ಲವೆಂದು ತಿಳಿದಾಗ ಒಂದು ಮುಹೂರ್ತಕಾಲ ಸರ್ಪದ ಬಂಧನದಲ್ಲಿದ್ದು ಹೊರಕ್ಕೆ ಬಂದನು. ॥23॥
(ಶ್ಲೋಕ-24)
ಮೂಲಮ್
ತತ್ಪ್ರಥ್ಯಮಾನವಪುಷಾ ವ್ಯಥಿತಾತ್ಮಭೋಗ-
ಸ್ತ್ಯಕ್ತ್ವೋನ್ನಮಯ್ಯ ಕುಪಿತಃ ಸ್ವಣಾನ್ಭುಜಂಗಃ ।
ತಸ್ಥೌ ಶ್ವಸಞ್ಛ್ವಸನರಂಧ್ರವಿಷಾಂಬರೀಷ-
ಸ್ತಬ್ಧೇಕ್ಷಣೋಲ್ಮುಕಮುಖೋ ಹರಿಮೀಕ್ಷಮಾಣಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಆ ಸಮಯದಲ್ಲಿ ತನ್ನ ಶರೀರವನ್ನು ಹಿಗ್ಗಿಸಿಕೊಂಡನು. ಇದರಿಂದ ಸರ್ಪದ ಶರೀರವು ತುಂಡಾಗುವುದೋ ಎಂದೆನಿಸಿ ಅದು ಕೃಷ್ಣನನ್ನು ಬಿಟ್ಟು ದೂರಹೋಗಿ ನಿಂತಿತು. ಹೆಡೆಯನ್ನು ಬಿಚ್ಚಿಕೊಂಡು ಅತಿರೋಷದಿಂದ ವಿಷದ ಬಾಣಗಳಂತೆ ಮೂಗಿನ ಹೊಳ್ಳೆಗಳಿಂದ ನಿಟ್ಟುಸಿರನ್ನು ಬಿಡುತ್ತಾ ಸ್ವಲ್ಪವಾದರೂ ಅಲುಗಾಡದೆ ಉರಿಯುವ ಪಂಜಿನಂತಹ ಕಣ್ಣುಗಳಿಂದ ಶ್ರೀಕೃಷ್ಣನನ್ನು ದಿಟ್ಟಿಸಿ ನೋಡುತ್ತಾ ಸಟೆದು ನಿಂತನು. ॥24॥
(ಶ್ಲೋಕ-25)
ಮೂಲಮ್
ತಂ ಜಿಹ್ವಯಾ ದ್ವಿಶಿಖಯಾ ಪರಿಲೇಲಿಹಾನಂ
ದ್ವೇ ಸೃಕ್ಕಿಣೀ ಹ್ಯತಿಕರಾಲವಿಷಾಗ್ನಿದೃಷ್ಟಿಮ್ ।
ಕ್ರೀಡನ್ನಮುಂ ಪರಿಸಸಾರ ಯಥಾ ಖಗೇಂದ್ರೋ
ಬಭ್ರಾಮ ಸೋಪ್ಯವಸರಂ ಪ್ರಸಮೀಕ್ಷಮಾಣಃ ॥
ಅನುವಾದ
ಕಾಳಿಯನು ಅತ್ಯಂತ ಕಂಪಿತನಾಗಿ ತನ್ನ ಹೆಡೆಗಳಲ್ಲಿದ್ದ ಎರಡೆರಡು ನಾಲಿಗೆಗಳಿಂದ ಕಟವಾಯಿಯನ್ನು ನೆಕ್ಕಿಕೊಳ್ಳುತ್ತಿದ್ದನು. ಭಯಂಕರವಾದ ಕಣ್ಣುಗಳಿಂದ ವಿಷದ ಜ್ವಾಲೆಗಳನ್ನು ಕಾರುತ್ತಿದ್ದನು. ಆಕಾಶದಲ್ಲಿ ಹಾರಾಡುತ್ತಿರುವ ಗರುಡನು ಭೂಮಿಯ ಮೇಲಿರುವ ಹಾವನ್ನು ಹಿಡಿಯಲು ಹೊಂಚು ಹಾಕುವಂತೆ ಶ್ರೀಕೃಷ್ಣನು ಸರ್ಪವನ್ನು ಹಿಡಿಯಲು ಹೊಂಚುಹಾಕುತ್ತಾ ಅದರ ಸುತ್ತಲೂ ತಿರುಗುತ್ತಿದ್ದನು. ಅಂತೆಯೇ ಕಾಳಿಯನೂ ಶ್ರೀಕೃಷ್ಣನನ್ನು ಬಗ್ಗುಬಡಿಯಲು ಹೊಂಚುಹಾಕುತ್ತಾ ಸುತ್ತಲೂ ಸುತ್ತುತ್ತಿದ್ದನು. ॥25॥
(ಶ್ಲೋಕ-26)
ಮೂಲಮ್
ಏವಂ ಪರಿಭ್ರಮಹತೌಜಸಮುನ್ನತಾಂಸ-
ಮಾನಮ್ಯ ತತ್ಪೃಥುಶಿರಃಸ್ವಧಿರೂಢ ಆದ್ಯಃ ।
ತನ್ಮೂರ್ಧರತ್ನನಿಕರಸ್ಪರ್ಶಾತಿತಾಮ್ರ-
ಪಾದಾಂಬುಜೋಖಿಲಕಲಾದಿಗುರುರ್ನನರ್ತ ॥
ಅನುವಾದ
ಹೀಗೆ ಪರಸ್ಪರ ಒಬ್ಬರು ಮತ್ತೊಬ್ಬರನ್ನು ಹಿಡಿಯಲು ಸುತ್ತುತ್ತಿರುವಾಗ ಕಾಳಿಯನ ಬಲವು ಕ್ಷೀಣಿಸುತ್ತಾ ಬಂತು. ಇದೇ ಸಮಯವನ್ನು ಕಾಯುತ್ತಿದ್ದ ಶ್ರೀಕೃಷ್ಣನು ಸರ್ಪದ ದೊಡ್ಡ-ದೊಡ್ಡ ಹೆಡೆಗಳನ್ನು ಸ್ವಲ್ಪ ಬಗ್ಗಿಸಿ ಛಂಗನೆ ಅವುಗಳ ಮೇಲೆ ಹತ್ತಿದನು. ಕಾಳಿಯನ ಹೆಡೆಗಳಲ್ಲಿದ್ದ ಥಳಥಳಿಸುತ್ತಿದ್ದ ಕೆಂಪು ರತ್ನಗಳು ಶ್ರೀಕೃಷ್ಣ ನಪಾದಗಳನ್ನು ಬೆಳಗತೊಡಗಿದವು. ರತ್ನಗಳ ಕಾಂತಿಯಿಂದ ಶ್ರೀಕೃಷ್ಣನ ಪಾದಗಳು ಮತ್ತಷ್ಟು ಕೆಂಪಾಗಿ ಕಂಡವು. ಆ ರತ್ನಗಳ ಬೆಳಕಿನಲ್ಲಿ ಸಮಸ್ತ ಕಲೆಗಳಿಗೂ ಆದಿ ಪ್ರವರ್ತಕನಾದ ಶ್ರೀಕೃಷ್ಣನು ನಾನಾಭಂಗಿಗಳಲ್ಲಿ ನೃತ್ಯವಾಡ ತೊಡಗಿದನು. ॥26॥
(ಶ್ಲೋಕ-27)
ಮೂಲಮ್
ತಂ ನರ್ತುಮುದ್ಯತಮವೇಕ್ಷ್ಯ ತದಾ ತದೀಯ-
ಗಂಧರ್ವಸಿದ್ಧಸುರಚಾರಣದೇವವಧ್ವಃ ।
ಪ್ರೀತ್ಯಾ ಮೃದಂಗಪಣವಾನಕವಾದ್ಯಗೀತ-
ಪುಷ್ಪೋಪಹಾರನುತಿಭಿಃ ಸಹಸೋಪಸೇದುಃ ॥
ಅನುವಾದ
ಭಗವಂತನು ನೃತ್ಯವಾಡುತ್ತಿರಲು ಅವನ ಪ್ರಿಯಭಕ್ತರಾದ ಗಂಧರ್ವ-ಸಿದ್ಧ-ಚಾರಣರೂ-ದೇವತೆಗಳೂ, ದೇವಾಂಗನೆಯರೂ ಅತ್ಯಂತ ಪ್ರೀತಿಯಿಂದ ತಾಳ-ಮೃದಂಗ-ನಗಾರಿ ಇವೇ ಮೊದಲಾದ ವಾದ್ಯಗಳಿಂದ ಕೂಡಿದವರಾಗಿ ಶ್ರೀಕೃಷ್ಣನ ಲೀಲೆಗಳನ್ನು ಗಾನ ಮಾಡುತ್ತಾ ಪುಷ್ಪೋಪಹಾರಗಳನ್ನು ತೆಗೆದುಕೊಂಡು ಶ್ರೀಕೃಷ್ಣನ ಬಳಿಗೆ ಆಗಮಿಸಿದರು. ॥27॥
(ಶ್ಲೋಕ-28)
ಮೂಲಮ್
ಯದ್ಯಚ್ಛಿರೋ ನ ನಮತೇಂಗ ಶತೈಕಶೀರ್ಷ್ಣ-
ಸ್ತತ್ತನ್ಮಮರ್ದ ಖರದಂಡಧರೋಂಘ್ರಿಪಾತೈಃ ।
ಕ್ಷೀಣಾಯುಷೋ ಭ್ರಮತ ಉಲ್ಬಣಮಾಸ್ಯತೋಸೃಙ
ನಸ್ತೋ ವಮನ್ಪರಮಕಶ್ಮಲಮಾಪ ನಾಗಃ ॥
ಅನುವಾದ
ಪರೀಕ್ಷಿತನೇ! ಕಾಲಿಯನಾಗನಿಗೆ ಒಂದು ಸಾವಿರ ಹೆಡೆಗಳಿದ್ದವು. ಅವನು ತನ್ನ ಯಾವ ಹೆಡೆಯನ್ನು ಮೇಲೆತ್ತುವನೋ ಅದನ್ನು ಪ್ರಚಂಡ ದಂಡಧಾರಿಯಾದ ಭಗವಂತನು ತನ್ನ ಕಾಲಿನ ತುಳಿತದಿಂದ ಬಗ್ಗು ಬಡಿಯುತ್ತಿದ್ದನು. ಇದರಿಂದ ಕಾಳಿಯನ ಜೀವಶಕ್ತಿಯು ಕ್ಷೀಣಿಸತೊಡಗಿತು. ಅವನ ಮೂಗಿನಿಂದ, ಬಾಯಿಂದ ರಕ್ತವು ಹರಿಯತೊಡಗಿತು. ಕೊನೆಗೆ ಅವನು ಯಾತನೆಯನ್ನು ತಡೆಯಲಾರದೆ ಮೂರ್ಛಿತನಾಗಿ ಬಿಟ್ಟನು. ॥28॥
(ಶ್ಲೋಕ-29)
ಮೂಲಮ್
ತಸ್ಯಾಕ್ಷಿಭಿರ್ಗರಲಮುದ್ವಮತಃ ಶಿರಸ್ಸು
ಯದ್ಯತ್ಸಮುನ್ನಮತಿ ನಿಃಶ್ವಸತೋ ರುಷೋಚ್ಚೈಃ ।
ನೃತ್ಯನ್ಪದಾನುನಮಯನ್ ದಮಯಾಂಬಭೂವ
ಪುಷ್ಪೈಃ ಪ್ರಪೂಜಿತ ಇವೇಹ ಪುಮಾನ್ಪುರಾಣಃ ॥
ಅನುವಾದ
ಅವನು ಸ್ವಲ್ಪ ಎಚ್ಚರಗೊಂಡೊಡನೆಯೇ ಕುಪಿತನಾಗಿ ಪುನಃ ಕಣ್ಣುಗಳಿಂದ ವಿಷವನ್ನು ಸುರಿಸುವನು. ಗಟ್ಟಿಯಾಗಿ ಬುಸುಗುಟ್ಟುವನು. ಹೀಗೆ ಬುಸುಗುಟ್ಟುತ್ತಾ ಯಾವುದಾದರೂ ತಲೆಯನ್ನು ಮೇಲೆತ್ತಿದನೆಂದರೆ ಶ್ರೀಕೃಷ್ಣನು ಒಡನೆಯೇ ಆ ಹೆಡೆಯ ಮೇಲೆ ಹಾರಿ ನಾಟ್ಯವಾಡುತ್ತಾ ಆ ಹೆಡೆಯನ್ನು ಬಗ್ಗಿಸಿಬಿಡುವನು. ಆ ಸಮಯದಲ್ಲಿ ಪುರಾಣ ಪುರುಷೋತ್ತಮ ಭಗವಾನ್ ಶ್ರೀಕೃಷ್ಣನ ಚರಣಗಳಲ್ಲಿ ಬಿದ್ದ ರಕ್ತದ ಬಿಂದುಗಳು-ಗಂಧರ್ವರು ರಕ್ತಪುಷ್ಪಗಳಿಂದ ಅವನ ಪಾದಗಳಿಗೆ ಪೂಜಿಸುತ್ತಿರುವರೋ ಎಂಬಂತೆ ಭಾಸವಾಗುತ್ತಿತ್ತು. ॥29॥
(ಶ್ಲೋಕ-30)
ಮೂಲಮ್
ತಚ್ಚಿತ್ರತಾಂಡವವಿರುಗ್ಣಣಾತಪತ್ರೋ
ರಕ್ತಂ ಮುಖೈರುರು ವಮನ್ನೃಪ ಭಗ್ನಗಾತ್ರಃ ।
ಸ್ಮೃತ್ವಾ ಚರಾಚರಗುರುಂ ಪುರುಷಂ ಪುರಾಣಂ
ನಾರಾಯಣಂ ತಮರಣಂ ಮನಸಾ ಜಗಾಮ ॥
ಅನುವಾದ
ಪರೀಕ್ಷಿತನೇ! ಭಗವಂತನ ಆ ಅದ್ಭುತವಾದ ತಾಂಡವ ನೃತ್ಯದಿಂದಾಗಿ ಕಾಳಿಯನ ಛತ್ರರೂಪವಾಗಿದ್ದ ಹೆಡೆಗಳು ಛಿನ್ನ-ಭಿನ್ನವಾದುವು. ಅದರ ಪ್ರತಿಯೊಂದು ಅಂಗವೂ ನುಚ್ಚು ನೂರಾಯಿತು. ಬಾಯಿಂದ ರಕ್ತದ ಕೋಡಿಯೇ ಹರಿಯಿತು. ಆಗ ನಾಗನಿಗೆ ಚರಾಚರಾತ್ಮಕವಾದ ಜಗತ್ತಿಗೇ ಗುರುವಾಗಿದ್ದ ಪುರಾಣ ಪುರುಷ ಭಗವಾನ್ ನಾರಾಯಣನ ಸ್ಮರಣೆಯಾಯಿತು. ಕಾಳಿಯನು ಮನಸ್ಸಿನಿಂದಲೇ ಭಗವಂತನಿಗೆ ಶರಣಾದನು. ॥30॥
(ಶ್ಲೋಕ-31)
ಮೂಲಮ್
ಕೃಷ್ಣಸ್ಯ ಗರ್ಭಜಗತೋತಿಭರಾವಸನ್ನಂ
ಪಾರ್ಷ್ಣಿಪ್ರಹಾರಪರಿರುಗ್ಣಣಾತಪತ್ರಮ್ ।
ದೃಷ್ಟ್ವಾಹಿಮಾದ್ಯಮುಪಸೇದುರಮುಷ್ಯ ಪತ್ನ್ಯ
ಆರ್ತಾಃ ಶ್ಲಥದ್ವಸನಭೂಷಣಕೇಶಬಂಧಾಃ ॥
ಅನುವಾದ
ಭಗವಾನ್ ಶ್ರೀಕೃಷ್ಣನ ಉದರದಲ್ಲಿ ಸಂಪೂರ್ಣ ವಿಶ್ವವು ಅಡಗಿದೆ. ಅದರಿಂದಾಗಿ ಅವನ ಅಪಾರವಾದ ಭಾರವನ್ನು ತಡೆಯಲಾರದೆ ಕುಸಿದುಬಿದ್ದ ಫಣೀಂದ್ರನ ಛತ್ರಿರೂಪವಾಗಿದ್ದ ಫಣಗಳು ಬಾಲಕೃಷ್ಣನ ಹಿಮ್ಮಡಿಗಳ ಏಟಿನಿಂದಾಗಿ ನುಚ್ಚುನೂರಾದವು. ತನ್ನ ಪತಿಯ ಈ ದುರ್ದಶೆಯನ್ನು ಕಂಡ ಅವನ ಪತ್ನಿಯರು ಭಗವಂತನಿಗೆ ಶರಣಾದರು. ಅವರೆಲ್ಲರೂ ಅತ್ಯಂತ ದುಃಖಿತರಾಗಿದ್ದರು. ಭಯಗ್ರಸ್ತರಾದ ಆ ನಾಗಪತ್ನಿಯರ ವಸ್ತ್ರಾಭರಣಗಳು ಅಸ್ತ-ವ್ಯಸ್ತವಾಗಿದ್ದು, ತಲೆಕೂದಲು ಕೆದರಿಹೋಗಿದ್ದವು. ॥31॥
(ಶ್ಲೋಕ-32)
ಮೂಲಮ್
ತಾಸ್ತಂ ಸುವಿಗ್ನಮನಸೋಥ ಪುರಸ್ಕೃತಾರ್ಭಾಃ
ಕಾಯಂ ನಿಧಾಯ ಭುವಿ ಭೂತಪತಿಂ ಪ್ರಣೇಮುಃ ।
ಸಾಧ್ವ್ಯಃ ಕೃತಾಂಜಲಿಪುಟಾಃ ಶಮಲಸ್ಯ ಭರ್ತು-
ರ್ಮೋಕ್ಷೇಪ್ಸವಃ ಶರಣದಂ ಶರಣಂ ಪ್ರಪನ್ನಾಃ ॥
ಅನುವಾದ
ಆ ಸಮಯದಲ್ಲಿ ಸಾಧ್ವಿಯರಾದ ನಾಗಪತ್ನಿಯರು ಬಹಳವಾಗಿ ಗಾಬರಿಗೊಂಡಿದ್ದರು. ತಮ್ಮ ಮಕ್ಕಳನ್ನು ಮುಂದೆ ಮಾಡಿಕೊಂಡು, ತಲೆಯನ್ನು ಭೂಮಿಗೆ ಮುಟ್ಟಿಸಿ, ಪ್ರಾಣಿಮಾತ್ರರ ಏಕಮಾತ್ರ ಸ್ವಾಮಿಯಾದ ಭಗವಾನ್ ಶ್ರೀಕೃಷ್ಣನಿಗೆ ಪ್ರಣಾಮ ಮಾಡಿದರು. ಶ್ರೀಕೃಷ್ಣನನ್ನು ಶರಣಾಗತ ವತ್ಸಲನೆಂದು ಅರಿತು ಅಪರಾಧಿಯಾದ ತಮ್ಮ ಪತಿಯನ್ನು ಬಿಡಿಸಿಕೊಳ್ಳುವ ಇಚ್ಛೆಯಿಂದ ಅವರೆಲ್ಲರೂ ಶ್ರೀಕೃಷ್ಣನಿಗೆ ಶರಣಾಗಿ ಅವನನ್ನು ಪರಿಪರಿಯಾಗಿ ಸ್ತುತಿಸುತ್ತಾ ಇತೆಂದರು. ॥32॥
(ಶ್ಲೋಕ-33)
ಮೂಲಮ್ (ವಾಚನಮ್)
ನಾಗಪತ್ನ್ಯ ಊಚುಃ
ಮೂಲಮ್
ನ್ಯಾಯ್ಯೋ ಹಿ ದಂಡಃ ಕೃತಕಿಲ್ಬಿಷೇಸ್ಮಿಂ-
ಸ್ತವಾವತಾರಃ ಖಲನಿಗ್ರಹಾಯ ।
ರಿಪೋಃ ಸುತಾನಾಮಪಿ ತುಲ್ಯದೃಷ್ಟೇ-
ರ್ಧತ್ಸೇ ದಮಂ ಲಮೇವಾನುಶಂಸನ್ ॥
ಅನುವಾದ
ನಾಗಪತ್ನಿಯರು ಹೇಳುತ್ತಾರೆ — ಪ್ರಭುವೇ! ನಿನ್ನ ಈ ಅವತಾರವು ದುಷ್ಟರನ್ನು ಶಿಕ್ಷಿಸುವುದಕ್ಕಾಗಿಯೇ ಆಗಿದೆ. ಅದಕ್ಕಾಗಿ ಈ ಕಾಳಿಯನನ್ನು ಶಿಕ್ಷಿಸುವುದು ಉಚಿತವೇ ಆಗಿದೆ. ನಿನ್ನ ದೃಷ್ಟಿಯಲ್ಲಿ ಶತ್ರು ಮತ್ತು ಪುತ್ರರಲ್ಲಿ ಯಾವ ಭೇದವೂ ಇಲ್ಲ. ಅದರಿಂದ ನೀನು ಕೊಡುವ ಶಿಕ್ಷೆಯು ಅವರ ಪಾಪದ ಪ್ರಾಯಶ್ಚಿತ್ತಕ್ಕಾಗಿ ಮತ್ತು ಅವರ ಪರಮ ಕಲ್ಯಾಣಕ್ಕಾಗಿಯೇ ಇರುತ್ತದೆ. ॥33॥
ಮೂಲಮ್
(ಶ್ಲೋಕ-34)
ಅನುಗ್ರಹೋಯಂ ಭವತಃ ಕೃತೋ ಹಿ ನೋ
ದಂಡೋಸತಾಂ ತೇ ಖಲು ಕಲ್ಮಷಾಪಹಃ ।
ಯದ್ದಂದಶೂಕತ್ವಮಮುಷ್ಯ ದೇಹಿನಃ
ಕ್ರೋಧೋಪಿ ತೇನುಗ್ರಹ ಏವ ಸಮ್ಮತಃ ॥
ಅನುವಾದ
ನೀನು ನಮ್ಮ ಮೇಲೆ ಮಹದನುಗ್ರಹವನ್ನೇ ಮಾಡಿರುವೆ. ಇದಾದರೋ ನಿನ್ನ ಕೃಪಾಪ್ರಸಾದವೇ ಆಗಿದೆ. ಏಕೆಂದರೆ, ದುಷ್ಟ ಜನರಿಗೆ ನೀನು ಕೊಡುವ ಶಿಕ್ಷೆಯಿಂದ ಅವರ ಎಲ್ಲ ಪಾಪಗಳೂ ನಾಶವಾಗಿ ಹೋಗುತ್ತವೆ. ಈ ಸರ್ಪವು ಅಪರಾಧಿಯಾಗಿರುವುದರಲ್ಲಿ ಯಾವ ಸಂದೇಹವೂ ಇಲ್ಲ. ಅಪರಾಧಿಯಲ್ಲದಿದ್ದರೆ ಇವನಿಗೆ ಸರ್ಪಯೋನಿ ಏಕೆ ದೊರೆಯುತ್ತಿತ್ತು. ಅದಕ್ಕಾಗಿ ನಾವು ನಿಜವಾದ ಹೃದಯದಿಂದ ನಿನ್ನ ಈ ಕ್ರೋಧವನ್ನು ನಿನ್ನ ಅನುಗ್ರಹವೆಂದೇ ತಿಳಿಯುತ್ತೇವೆ. ॥34॥
(ಶ್ಲೋಕ-35)
ಮೂಲಮ್
ತಪಃ ಸುತಪ್ತಂ ಕಿಮನೇನ ಪೂರ್ವಂ
ನಿರಸ್ತಮಾನೇನ ಚ ಮಾನದೇನ ।
ಧರ್ಮೋಥ ವಾ ಸರ್ವಜನಾನುಕಂಪಯಾ
ಯತೋ ಭವಾಂಸ್ತುಷ್ಯತಿ ಸರ್ವಜೀವಃ ॥
ಅನುವಾದ
ಇವನು ಹಿಂದಿನ ಜನ್ಮದಲ್ಲಿ ಖಂಡಿತವಾಗಿ ನಿರಹಂಕಾರಿಯಾಗಿ, ಬೇರೆಯವರನ್ನು ಸಮ್ಮಾನಿಸುತ್ತಾ ಯಾವುದೋ ದೊಡ್ಡ ತಪಸ್ಸು ಮಾಡಿರಬೇಕು. ಅಥವಾ ಎಲ್ಲ ಜೀವರ ಮೇಲೆ ದಯೆ ಮಾಡುತ್ತಾ ಇವನು ಯಾವುದೋ ದೊಡ್ಡ ಧರ್ಮ ಕಾರ್ಯವನ್ನು ಮಾಡಿರಬೇಕು. ಅದರಿಂದಲೇ ನೀನು ಇವನ ಮೇಲೆ ಸಂತುಷ್ಟನಾಗಿರುವೆ. ಏಕೆಂದರೆ, ಸರ್ವಜೀವರ ಸ್ವರೂಪನಾದ ನಿನ್ನ ಪ್ರಸನ್ನತೆಗಾಗಿ ಇದೇ ಉಪಾಯವಾಗಿದೆ. ॥35॥
(ಶ್ಲೋಕ-36)
ಮೂಲಮ್
ಕಸ್ಯಾನುಭಾವೋಸ್ಯ ನ ದೇವ ವಿದ್ಮಹೇ
ತವಾಂಘ್ರಿರೇಣುಸ್ಪರ್ಶಾಧಿಕಾರಃ ।
ಯದ್ವಾಂಛಯಾ ಶ್ರೀರ್ಲಲನಾಚರತ್ತಪೋ
ವಿಹಾಯ ಕಾಮಾನ್ಸುಚಿರಂ ಧೃತವ್ರತಾ ॥
ಅನುವಾದ
ಭಗವಂತಾ! ನಿನ್ನ ಚರಣರಜದ ಸ್ಪರ್ಶವನ್ನು ಪಡೆಯುವ ಅಧಿಕಾರಿಯಾದುದು ಇದು ಇವನ ಯಾವ ಸಾಧನೆಯ ಫಲವೆಂದು ನಾವು ತಿಳಿಯುತ್ತಿಲ್ಲ. ನಿನ್ನ ಚರಣಗಳ ರಜವು ಎಷ್ಟು ದುರ್ಲಭವಾದುದೆಂದರೆ, ಅದಕ್ಕಾಗಿ ಅರ್ಧಾಂಗಿನಿಯಾದ ಲಕ್ಷ್ಮೀದೇವಿಯೂ ಕೂಡ ಬಹಳ ದಿನಗಳವರೆಗೆ ಸಮಸ್ತ ಭೋಗಗಳನ್ನು ತ್ಯಜಿಸಿ ನಿಯಮಗಳನ್ನು ಪಾಲಿಸುತ್ತಾ ತಪಸ್ಸು ಮಾಡಬೇಕಾಯಿತು. ॥36॥
(ಶ್ಲೋಕ-37)
ಮೂಲಮ್
ನ ನಾಕಪೃಷ್ಠಂ ನ ಚ ಸಾರ್ವಭೌಮಂ
ನ ಪಾರಮೇಷ್ಠ್ಯಂ ನ ರಸಾಧಿಪತ್ಯಮ್ ।
ನ ಯೋಗಸಿದ್ಧೀರಪುನರ್ಭವಂ ವಾ
ವಾಂಛಂತಿ ಯತ್ಪಾದರಜಃಪ್ರಪನ್ನಾಃ ॥
ಅನುವಾದ
ಪ್ರಭೋ! ನಿನ್ನ ಚರಣ ಧೂಳಿಯನ್ನು ಶರಣು ಹೋಗುವ ಭಗವದ್ಭಕ್ತರು ಸ್ವರ್ಗವನ್ನಾಗಲೀ, ಸಾರ್ವಭೌಮತ್ವವನ್ನಾಗಲೀ, ರಸಾತಲದ ಆಧಿಪತ್ಯವನ್ನಾಗಲೀ, ಬ್ರಹ್ಮಪದವಿಯನ್ನಾಗಲೀ ಬಯಸುವುದಿಲ್ಲ. ಅವರಿಗೆ ಅಣಿಮಾದಿ ಅಷ್ಟಸಿದ್ಧಿಗಳ ಇಚ್ಛೆಯೇ ಇರುವುದಿಲ್ಲ. ಅವರು ಜನ್ಮ-ಮರಣವನ್ನು ತಪ್ಪಿಸುವ ಕೈವಲ್ಯ ಮೋಕ್ಷವನ್ನೂ ಅಪೇಕ್ಷಿಸುವುದಿಲ್ಲ. ॥37॥
(ಶ್ಲೋಕ-38)
ಮೂಲಮ್
ತದೇಷ ನಾಥಾಪ ದುರಾಪಮನ್ಯೈ-
ಸ್ತಮೋಜನಿಃ ಕ್ರೋಧವಶೋಪ್ಯಹೀಶಃ ।
ಸಂಸಾರಚಕ್ರೇ ಭ್ರಮತಃ ಶರೀರಿಣೋ
ಯದಿಚ್ಛತಃ ಸ್ಯಾದ್ವಿಭವಃ ಸಮಕ್ಷಃ ॥
ಅನುವಾದ
ಸ್ವಾಮಿ! ಈ ನಾಗರಾಜನು ತಮೋಗುಣಿಗಳ ಯೋನಿಯಲ್ಲಿ ಹುಟ್ಟಿದವನು. ಸ್ವಾಭಾವಿಕವಾಗಿಯೇ ಮಹಾಕೋಪಿಷ್ಠನೂ ಆಗಿರುವನು. ಹೀಗಿದ್ದರೂ ಇವನಿಗೆ ಬೇರೆಯವರಿಗೆ ದುರ್ಲಭವಾದ ನಿನ್ನ ಪರಮ ಪವಿತ್ರ ಚರಣರಜವು ಪ್ರಾಪ್ತವಾಗಿದೆ. ಅದನ್ನು ಪಡೆಯುವ ಇಚ್ಛಾಮಾತ್ರದಿಂದಲೇ ಸಂಸಾರ ಚಕ್ರದಲ್ಲಿ ಬಿದ್ದಿರುವ ಜೀವನಿಗೆ ವೈಭವ-ಸಂಪತ್ತುಗಳ ಮಾತೇನು? ಮೋಕ್ಷವೂ ಪ್ರಾಪ್ತವಾಗುತ್ತದೆ. ॥38॥
(ಶ್ಲೋಕ-39)
ಮೂಲಮ್
ನಮಸ್ತುಭ್ಯಂ ಭಗವತೇ ಪುರುಷಾಯ ಮಹಾತ್ಮನೇ ।
ಭೂತಾವಾಸಾಯ ಭೂತಾಯ ಪರಾಯ ಪರಮಾತ್ಮನೇ ॥
ಅನುವಾದ
ಪ್ರಭೋ! ಅಚಿಂತ್ಯವಾದ ಐಶ್ವರ್ಯವೂ ನಿತ್ಯನಿಧಿಯಾಗಿರ ತಕ್ಕವನೇ! ಸಮಸ್ತರ ಅಂತಃಕರಣದಲ್ಲಿಯೂ ವಿರಾಜಿಸುತ್ತಿರುವವನೇ! ಸಮಸ್ತ ಪ್ರಾಣಿಗಳಿಗೂ ಮತ್ತು ವಸ್ತುಗಳಿಗೂ ಆಶ್ರಯನಾಗಿರತಕ್ಕವನೇ! ಪ್ರಾಣಿಗಳ ಹಾಗೂ ಪದಾರ್ಥಗಳ ರೂಪದಲ್ಲಿ ಇರುವವನೇ! ಪ್ರಕೃತಿಗೂ ಅತೀತನಾದ ಪರಮಾತ್ಮನೇ! ನಿನಗೆ ನಮಸ್ಕಾರವು. ॥39॥
(ಶ್ಲೋಕ-40)
ಮೂಲಮ್
ಜ್ಞಾನವಿಜ್ಞಾನನಿಧಯೇ ಬ್ರಹ್ಮಣೇನಂತಶಕ್ತಯೇ ।
ಅಗುಣಾಯಾವಿಕಾರಾಯ ನಮಸ್ತೇಪ್ರಾಕೃತಾಯ ಚ ॥
ಅನುವಾದ
ದೇವ! ನೀನು ಸಮಸ್ತವಾದ ಜ್ಞಾನಗಳಿಗೂ ಮತ್ತು ಅನುಭವಗಳಿಗೂ ನಿಧಿಪ್ರಾಯನಾಗಿರುವೆ. ನಿನ್ನ ಮಹಿಮೆ ಮತ್ತು ಶಕ್ತಿಯು ಅನಂತವಾದುದು. ನಿನ್ನ ಸ್ವರೂಪವು ಅಪ್ರಾಕೃತವೂ, ದಿವ್ಯವೂ, ಚಿನ್ಮಯವೂ ಆಗಿದೆ. ನೀನು ನಿರ್ಗುಣ ನಿರಾಕಾರ-ನಿರ್ವಿಕಾರನು. ನೀನೇ ಪರಬ್ರಹ್ಮ ವಸ್ತುವು. ಅಂತಹ ನಿನಗೆ ನಾವು ನಮಸ್ಕರಿಸುತ್ತೇವೆ. ॥40॥
(ಶ್ಲೋಕ-41)
ಮೂಲಮ್
ಕಾಲಾಯ ಕಾಲನಾಭಾಯ ಕಾಲಾವಯವಸಾಕ್ಷಿಣೇ ।
ವಿಶ್ವಾಯ ತದುಪದ್ರಷ್ಟ್ರೇ ತತ್ಕರ್ತ್ರೇ ವಿಶ್ವಹೇತವೇ ॥
ಅನುವಾದ
ನೀನು ಪ್ರಕೃತಿಯಲ್ಲಿ ಕ್ಷೋಭೆಯನ್ನುಂಟುಮಾಡುವ ಕಾಲಪುರುಷನಾಗಿದ್ದು, ಕಾಲಶಕ್ತಿಗೆ ಆಶ್ರಯನಾಗಿರುವೆ. ಕಾಲದ ಕ್ಷಣ-ಕಲ್ಪಾದಿ ಸಮಸ್ತ ಅವಯವಗಳಿಗೂ ಸಾಕ್ಷಿಯಾಗಿರುವೆ. ನೀನು ವಿಶ್ವರೂಪನಾಗಿದ್ದರೂ ಅದರಿಂದ ಬೇರೆಯಾಗಿದ್ದು ಅದರ ದ್ರಷ್ಟಾರನಾಗಿರುವೆ. ಜಗತ್ತಿಗೆ ಕಾರಣನೂ ನೀನೇ ಆಗಿರುವೆ. ಅಂತಹ ನಿನಗೆ ನಮಸ್ಕರಿಸುತ್ತೇವೆ. ॥41॥
(ಶ್ಲೋಕ-42)
ಮೂಲಮ್
ಭೂತಮಾತ್ರೇಂದ್ರಿಯಪ್ರಾಣಮನೋಬುದ್ಧ್ಯಾಶಯಾತ್ಮನೇ ।
ತ್ರಿಗುಣೇನಾಭಿಮಾನೇನ ಗೂಢಸ್ವಾತ್ಮಾನುಭೂತಯೇ ॥
ಅನುವಾದ
ಪ್ರಭೋ! ಪಂಚಭೂತಗಳೂ ಮತ್ತು ಪಂಚತನ್ಮಾತ್ರೆಗಳೂ, ಇಂದ್ರಿಯಗಳೂ, ಪ್ರಾಣ, ಮನಸ್ಸು, ಬುದ್ಧಿ ಮತ್ತು ಇವೆಲ್ಲಕ್ಕೆ ಆಶ್ರಯಸ್ಥಾನವಾದ ಚಿತ್ತ - ಇವೆಲ್ಲವೂ ನೀನೆ ಆಗಿರುವೆ. ನಿನ್ನ ಅಂಶಭೂತರಾದ ಜೀವಾತ್ಮರ ಶುದ್ಧಜ್ಞಾನವನ್ನು ತ್ರಿಗುಣಾತ್ಮಕವಾದ ಅಹಂಕಾರದಿಂದ ಮರೆ ಮಾಡಿರುವ ನಿನಗೆ ನಮಸ್ಕಾರವು. ॥42॥
(ಶ್ಲೋಕ-43)
ಮೂಲಮ್
ನಮೋನಂತಾಯ ಸೂಕ್ಷ್ಮಾಯ ಕೂಟಸ್ಥಾಯ ವಿಪಶ್ಚಿತೇ ।
ನಾನಾವಾದಾನುರೋಧಾಯ ವಾಚ್ಯವಾಚಕಶಕ್ತಯೇ ॥
ಅನುವಾದ
ನೀನು ಅನಂತನೂ, ಸೂಕ್ಷ್ಮನು, ವಿಕಾರವಿಲ್ಲದವನೂ, ಸರ್ವಜ್ಞನೂ ಆಗಿರುವೆ. ಇಂತಹ ನಿನಗೆ ನಮಸ್ಕಾರವು. ‘ಪರಮಾತ್ಮನು ಇದ್ದಾನೆ, ‘ಪರಮಾತ್ಮನು ಇಲ್ಲ. ಅವನು ಸರ್ವಜ್ಞನು, ಸರ್ವಜ್ಞನಲ್ಲ’- ಇವೇ ಮುಂತಾದ ವಾದ-ವಿವಾದಗಳಿಗೆ ವಿಷಯನಾಗಿಯೂ, ಶಬ್ದರೂಪನಾಗಿಯೂ, ಶಬ್ದಾರ್ಥರೂಪನಾಗಿಯೂ ಮತ್ತು ಅವೆರಡಕ್ಕೂ ಸಂಬಂಧವನ್ನು ಕಲ್ಪಿಸುವ ಶಕ್ತಿಯುಳ್ಳವನಾಗಿಯೂ ಇರುವ ನಿನಗೆ ನಮಸ್ಕಾರವು. ॥43॥
(ಶ್ಲೋಕ-44)
ಮೂಲಮ್
ನಮಃ ಪ್ರಮಾಣಮೂಲಾಯ ಕವಯೇ ಶಾಸಯೋನಯೇ ।
ಪ್ರವೃತ್ತಾಯ ನಿವೃತ್ತಾಯ ನಿಗಮಾಯ ನಮೋ ನಮಃ ॥
ಅನುವಾದ
ಪ್ರತ್ಯಕ್ಷ-ಅನುಮಾನ ಮುಂತಾದ ಪ್ರಮಾಣಗಳನ್ನು ಪ್ರಮಾಣೀಕರಿಸುವ ಮೂಲಪುರುಷನು ನೀನೇ ಆಗಿರುವೆ. ಸಮಸ್ತ ವೇದಶಾಸ್ತ್ರಗಳಿಗೂ ನೀನೇ ಉಗಮಸ್ಥಾನವಾಗಿರುವೆ. ನೀನು ಜ್ಞಾನ ಸ್ವರೂಪನಾಗಿರುವೆ. ಪ್ರವೃತ್ತಿ ಮಾರ್ಗ ಸ್ವರೂಪನೂ, ನಿವೃತ್ತಿಮಾರ್ಗ ಸ್ವರೂಪನೂ ನೀನೇ ಆಗಿರುವೆ. ಪ್ರವೃತ್ತಿ-ನಿವೃತ್ತಿ ಮಾರ್ಗಗಳ ವಿಧಾಯಕಗಳ ವೇದಸ್ವರೂಪನೂ ನೀನೇ. ಅಂತಹ ನಿನಗೆ ಪುನಃ ಪುನಃ ನಮಸ್ಕಾರಗಳು. ॥44॥
(ಶ್ಲೋಕ-45)
ಮೂಲಮ್
ನಮಃ ಕೃಷ್ಣಾಯ ರಾಮಾಯ ವಸುದೇವಸುತಾಯ ಚ ।
ಪ್ರದ್ಯುಮ್ನಾಯಾನಿರುದ್ಧಾಯ ಸಾತ್ವತಾಂ ಪತಯೇ ನಮಃ ॥
ಅನುವಾದ
ನೀನು ಶುದ್ಧ ಸತ್ತ್ವಮಯ ವಸುದೇವನ ಪುತ್ರನಾದ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧನೂ ನೀನೇ ಆಗಿರುವೆ. ಹೀಗೆ ಚತುರ್ವ್ಯೂಹದ ರೂಪದಲ್ಲಿ ನೀನು ಭಕ್ತರಿಗೆ ಹಾಗೂ ಯಾದವರಿಗೆ ಒಡೆಯನಾಗಿರುವೆ. ಶ್ರೀಕೃಷ್ಣ! ನಾವು ನಿನಗೆ ನಮಸ್ಕರಿಸುತ್ತೇವೆ.॥45॥
(ಶ್ಲೋಕ-46)
ಮೂಲಮ್
ನಮೋ ಗುಣಪ್ರದೀಪಾಯ ಗುಣಾತ್ಮಚ್ಛಾದನಾಯ ಚ ।
ಗುಣವೃತ್ತ್ಯುಪಲಕ್ಷ್ಯಾಯ ಗುಣದ್ರಷ್ಟ್ರೇ ಸ್ವಸಂವಿದೇ ॥
ಅನುವಾದ
ನೀನು ಅಂತಃಕರಣ ಮತ್ತು ಅದರ ವೃತ್ತಿಗಳ ಪ್ರಕಾಶಕನಾಗಿರುವೆ. ಅವುಗಳ ಮೂಲಕವೇ ತಾನೇ-ತನ್ನನ್ನು ಮುಚ್ಚಿಟ್ಟುಕೊಂಡಿರುವೆ. ಆ ಅಂತಃಕರಣ ಮತ್ತು ವೃತ್ತಿಗಳಿಂದಲೇ ನಿನ್ನ ಸ್ವರೂಪದ ಅಲ್ಪ-ಸ್ವಲ್ಪ ಸಂಕೇತವೂ ದೊರೆಯುತ್ತದೆ. ನೀನು ಆ ಗುಣಗಳ ಹಾಗೂ ಅವುಗಳ ವೃತ್ತಿಗಳ ಸಾಕ್ಷಿ ಮತ್ತು ಸ್ವಯಂ ಪ್ರಕಾಶನಾಗಿರುವೆ. ಅಂತಹ ನಿನಗೆ ನಾವು ನಮಸ್ಕರಿಸುತ್ತೇವೆ.॥46॥
(ಶ್ಲೋಕ-47)
ಮೂಲಮ್
ಅವ್ಯಾಕೃತವಿಹಾರಾಯ ಸರ್ವವ್ಯಾಕೃತಸಿದ್ಧಯೇ ।
ಹೃಷೀಕೇಶ ನಮಸ್ತೇಸ್ತು ಮುನಯೇ ವೌನಶೀಲಿನೇ ॥
ಅನುವಾದ
ನೀನು ಈ ಮೂಲ ಪ್ರಕೃತಿಯಲ್ಲಿ ನಿತ್ಯವೂ ವಿಹರಿಸುತ್ತಿರುವೆ. ಸಮಸ್ತವಾದ ಸ್ಥೂಲ, ಸೂಕ್ಷ್ಮ ಜಗತ್ತು ನಿನ್ನಿಂದಲೇ ಸಿದ್ಧವಾಗುತ್ತದೆ. ಹೃಷೀಕೇಶನೇ! ನೀನು ಮನನಶೀಲನಾದ ಆತ್ಮಾರಾಮನಾಗಿರುವೆ. ಮೌನವೇ ನಿನ್ನ ಸ್ವಭಾವವಾಗಿದೆ. ಅಂತಹ ನಿನಗೆ ನಮಸ್ಕರಿಸುತ್ತೇವೆ. ॥47॥
(ಶ್ಲೋಕ-48)
ಮೂಲಮ್
ಪರಾವರಗತಿಜ್ಞಾಯ ಸರ್ವಾಧ್ಯಕ್ಷಾಯ ತೇ ನಮಃ ।
ಅವಿಶ್ವಾಯ ಚ ವಿಶ್ವಾಯ ತದ್ದ್ರಷ್ಟ್ರೇಸ್ಯ ಚ ಹೇತವೇ ॥
ಅನುವಾದ
ನೀನು ಸ್ಥೂಲ, ಸೂಕ್ಷ್ಮ ಸಮಸ್ತ ಗತಿಗಳನ್ನು ತಿಳಿದವನೂ, ಎಲ್ಲರ ಸಾಕ್ಷಿಯೂ ಆಗಿರುವೆ. ನೀನು ವಿಶ್ವವಲ್ಲದಿದ್ದರೂ ವಿಶ್ವದ ಸ್ವರೂಪನಾಗಿರುವೆ. ಅಂತಹ ವಿಶ್ವಕ್ಕೆ ಸಾಕ್ಷಿಭೂತನೂ ಆಗಿರುವೆ ಮತ್ತು ಕಾರಣನೂ ಆಗಿರುವೆ. ಅಂತಹ ಸರ್ವೋತ್ಕೃಷ್ಟ ಮಹಿಮನಾಗಿರುವ ನಿನಗೆ ನಮಸ್ಕಾರ ಮಾಡುತ್ತೇವೆ. ॥48॥
ಮೂಲಮ್
(ಶ್ಲೋಕ-49)
ತ್ವಂ ಹ್ಯಸ್ಯ ಜನ್ಮಸ್ಥಿತಿಸಂಯಮಾನ್ಪ್ರಭೋ
ಗುಣೈರನೀಹೋಕೃತ ಕಾಲಶಕ್ತಿಧೃಕ್ ।
ತತ್ತತ್ಸ್ವಭಾವಾನ್ಪ್ರತಿಬೋಧಯನ್ಸತಃ
ಸಮೀಕ್ಷಯಾಮೋಘವಿಹಾರ ಈಹಸೇ ॥
ಅನುವಾದ
ಪ್ರಭುವೇ! ಕರ್ತೃತ್ವವಿಲ್ಲದ ಕಾರಣ ನೀನು ಯಾವುದೇ ಕರ್ಮವನ್ನು ಮಾಡದೇ ನಿಷ್ಕ್ರಿಯನಾಗಿರುವೆ. ಹಾಗಿದ್ದರೂ ಅನಾದಿಯಾದ ಕಾಲಶಕ್ತಿಯನ್ನು ಸ್ವೀಕರಿಸಿ ಪ್ರಕೃತಿಯ ಗುಣಗಳ ಮೂಲಕ ನೀನೇ ಈ ವಿಶ್ವದ ಉತ್ಪತ್ತಿ, ಸ್ಥಿತಿ, ಪ್ರಳಯ ಎಂಬ ಲೀಲೆಯನ್ನು ಮಾಡುತ್ತಿರುವೆ. ಏಕೆಂದರೆ, ನಿನ್ನ ಲೀಲೆಗಳು ಅಮೋಘವಾಗಿವೆ. ನೀನು ಸತ್ಯಸಂಕಲ್ಪನಾಗಿರುವೆ. ಅದಕ್ಕಾಗಿ ಜೀವರ ಸಂಸ್ಕಾರರೂಪದಿಂದ ಅಡಗಿದ್ದು ಸ್ವಭಾವಗಳನ್ನು ನಿನ್ನ ದೃಷ್ಟಿಯಿಂದ ಜಾಗ್ರತಗೊಳಿಸುತ್ತಿರುವೆ. ॥49॥
(ಶ್ಲೋಕ-50)
ಮೂಲಮ್
ತಸ್ಯೈವ ತೇಮೂಸ್ತನವಸಿಲೋಕ್ಯಾಂ
ಶಾಂತಾ ಅಶಾಂತಾ ಉತ ಮೂಢಯೋನಯಃ ।
ಶಾಂತಾಃ ಪ್ರಿಯಾಸ್ತೇ ಹ್ಯಧುನಾವಿತುಂ ಸತಾಂ
ಸ್ಥಾತುಶ್ಚ ತೇ ಧರ್ಮಪರೀಪ್ಸಯೇಹತಃ ॥
ಅನುವಾದ
ಪ್ರಭುವೇ! ಮೂರು ಲೋಕಗಳಲ್ಲಿಯೂ ಸತ್ತ್ವಗುಣ ಪ್ರಧಾನವಾದ ಶಾಂತ, ರಜೋಗುಣ ಪ್ರಧಾನವಾದ ಅಶಾಂತ ಮತ್ತು ತಮೋಗುಣ ಪ್ರಧಾನ ಮೂಢ ಎಂಬ ಮೂರು ರೀತಿಯ ಯೋನಿಗಳಿವೆ. ಇವೆಲ್ಲವೂ ನಿನ್ನ ಲೀಲಾ ಮೂರ್ತಿಗಳೇ ಆಗಿವೆ. ಹೀಗಿದ್ದರೂ ಈ ಸಮಯದಲ್ಲಿ ಸತ್ತ್ವಗುಣ ಪ್ರಧಾನವಾದ ಶಾಂತ ಜನರೇ ನಿನ್ನ ವಿಶೇಷ ಪ್ರೀತಿಗೆ ಪಾತ್ರರಾಗಿದ್ದಾರೆ. ಏಕೆಂದರೆ, ನಿನ್ನ ಈ ಅವತಾರವು ಮತ್ತು ಈ ಲೀಲೆಗಳು ಸಾಧುಗಳ ರಕ್ಷಣೆಗಾಗಿಯೂ, ಧರ್ಮದ ರಕ್ಷಣೆ ಹಾಗೂ ವಿಸ್ತಾರಕ್ಕಾಗಿಯೇ ಇದೆ. ॥50॥
(ಶ್ಲೋಕ-51)
ಮೂಲಮ್
ಅಪರಾಧಃ ಸಕೃದ್ಭರ್ತ್ರಾ ಸೋಢವ್ಯಃ ಸ್ವಪ್ರಜಾಕೃತಃ ।
ಕ್ಷಂತುಮರ್ಹಸಿ ಶಾಂತಾತ್ಮನ್ಮೂಢಸ್ಯ ತ್ವಾಮಜಾನತಃ ॥
ಅನುವಾದ
ಶಾಂತಾತ್ಮನೇ! ರಾಜನಾದವನು ತನ್ನ ಪ್ರಜೆಗಳು ಮಾಡಿದ ಮೊದಲ ಅಪರಾಧವನ್ನು ಕ್ಷಮಿಸಬೇಕು. ಹಾಗೆಯೇ ನೀನು ಯಾರೆಂಬುದನ್ನು ತಿಳಿಯದೇ ಮಾಡಿರುವ ಈ ಮೂಢನ (ನಮ್ಮ ಪತಿ) ಈ ಅಪರಾಧವನ್ನು ಕ್ಷಮಿಸಬೇಕು. ॥51॥
ಮೂಲಮ್
(ಶ್ಲೋಕ-52)
ಅನುಗೃಹ್ಣೀಷ್ವ ಭಗವನ್ಪ್ರಾಣಾಂಸ್ತ್ಯಜತಿ ಪನ್ನಗಃ ।
ಸೀಣಾಂ ನಃ ಸಾಧುಶೋಚ್ಯಾನಾಂ ಪತಿಃ ಪ್ರಾಣಃ ಪ್ರದೀಯತಾಮ್ ॥
ಅನುವಾದ
ಭಗವಂತನೇ! ದಯೆದೋರು. ಇಷ್ಟರಲ್ಲೇ ಈ ನಾಗರಾಜನು ಸಾಯುವುದರಲ್ಲಿದ್ದಾನೆ. ಸಾಧುಪುರುಷರು ಯಾವಾಗಲೂ ನಮ್ಮಂತಹ ಅಬಲೆಯರ ಮೇಲೆ ದಯೆತೋರುತ್ತಾರೆ. ಆದುದರಿಂದ ಪ್ರಾಣ ಸ್ವರೂಪನಾಗಿರುವ ನಮ್ಮ ಪತಿಯನ್ನು ನಮಗೆ ದಯಪಾಲಿಸು. ॥52॥
(ಶ್ಲೋಕ-53)
ಮೂಲಮ್
ವಿಧೇಹಿ ತೇ ಕಿಂಕರೀಣಾಮನುಷ್ಠೇಯಂ ತವಾಜ್ಞಯಾ ।
ಯಚ್ಛ್ರದ್ಧಯಾನುತಿಷ್ಠನ್ವೈ ಮುಚ್ಯತೇ ಸರ್ವತೋಭಯಾತ್ ॥
ಅನುವಾದ
ನಾವು ನಿನ್ನ ದಾಸಿಯರಾಗಿದ್ದೇವೆ. ನಾವು ನಿನಗೆ ಯಾವ ವಿಧವಾದ ಸೇವೆಯನ್ನು ಮಾಡಬೇಕೆಂಬುದರ ಕುರಿತು ನಮಗೆ ಆಜ್ಞಾಪಿಸು. ನಿನ್ನ ಆಜ್ಞೆಯನ್ನು ಪಾಲಿಸುತ್ತಾ, ಶ್ರದ್ಧೆಯಿಂದ ಸೇವೆಯನ್ನು ಮಾಡುವವರು ಸಮಸ್ತವಾದ ಭಯಗಳಿಂದಲೂ ಮುಕ್ತರಾಗುತ್ತಾರೆ. ॥53॥
(ಶ್ಲೋಕ-54)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಥಂ ಸ ನಾಗಪತ್ನೀಭಿರ್ಭಗವಾನ್ಸಮಭಿಷ್ಟುತಃ ।
ಮೂರ್ಚ್ಛಿತಂ ಭಗ್ನಶಿರಸಂ ವಿಸಸರ್ಜಾಂಘ್ರಿಕುಟ್ಟನೈಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಂತನ ಪಾದಗಳ ಪ್ರಹಾರದಿಂದ ಕಾಳಿಯ ನಾಗನ ಹೆಡೆಗಳು ಛಿನ್ನ-ಭಿನ್ನವಾಗಿದ್ದವು. ಅವನು ಎಚ್ಚರತಪ್ಪಿ ತಲೆ ತಗ್ಗಿಸಿದ್ದನು. ನಾಗಪತ್ನಿಯರು ಭಗವಂತನನ್ನು ಹೀಗೆ ಸ್ತುತಿಸಿದಾಗ ದಯಾಮಯನಾದ ಭಗವಂತನು ಕಾಳಿಯನನ್ನು ಬಿಟ್ಟುಬಿಟ್ಟನು. ॥54॥
(ಶ್ಲೋಕ-55)
ಮೂಲಮ್
ಪ್ರತಿಲಬ್ಧೇಂದ್ರಿಯಪ್ರಾಣಃ ಕಾಲಿಯಃ ಶನಕೈರ್ಹರಿಮ್ ।
ಕೃಚ್ಛ್ರಾತ್ಸಮುಚ್ಛ್ವಸನ್ದೀನಃ ಕೃಷ್ಣಂ ಪ್ರಾಹ ಕೃತಾಂಜಲಿಃ ॥
ಅನುವಾದ
ನಿಧಾನವಾಗಿ ಕಾಳಿಯನ ಇಂದ್ರಿಯಗಳಲ್ಲಿ, ಪ್ರಾಣಗಳಲ್ಲಿ ಚೈತನ್ಯವುಂಟಾಯಿತು. ಅವನು ಕಷ್ಟಪಟ್ಟು ಉಸಿರಾಡತೊಡಗಿದನು. ಸ್ವಲ್ಪ ಹೊತ್ತಿ ನಲ್ಲಿ ಅತಿದೀನತೆಯಿಂದ ವಿನಮ್ರನಾಗಿ ಭಗವಾನ್ ಶ್ರೀಕೃಷ್ಣನಲ್ಲಿ ಹೀಗೆ ಪ್ರಾರ್ಥಿಸಿದನು. ॥55॥
(ಶ್ಲೋಕ-56)
ಮೂಲಮ್ (ವಾಚನಮ್)
ಕಾಲಿಯ ಉವಾಚ
ಮೂಲಮ್
ವಯಂ ಖಲಾಃ ಸಹೋತ್ಪತ್ತ್ಯಾ ತಾಮಸಾ ದೀರ್ಘಮನ್ಯವಃ ।
ಸ್ವಭಾವೋ ದುಸ್ತ್ಯಜೋ ನಾಥ ಲೋಕಾನಾಂ ಯದಸದ್ಗ್ರಹಃ ॥
ಅನುವಾದ
ಕಾಳಿಯನಾಗನು ಹೇಳುತ್ತಾನೆ — ನಾಥನೇ! ನಾವು ಜನ್ಮದಿಂದಲೇ ದುಷ್ಟರಾಗಿದ್ದೇವೆ. ತಮೋಗುಣಿಗಳಾಗಿದ್ದೇವೆ. ದೀರ್ಘ ಕೋಪಿಗಳಾಗಿದ್ದೇವೆ. ಪ್ರಾಣಿಗಳಿಗೆ ತಮ್ಮ ಸ್ವಭಾವವವನ್ನು ಬಿಡುವುದು ಬಹಳ ಕಷ್ಟವೇ ಸರಿ. ಈ ಕಾರಣದಿಂದಲೇ ಪ್ರಪಂಚದ ಜನರು ನಾನಾಪ್ರಕಾರವಾದ ದುರಾಗ್ರಹಗಳಿಂದ ಕೂಡಿರುತ್ತಾರೆ. ॥56॥
(ಶ್ಲೋಕ-57)
ಮೂಲಮ್
ತ್ವಯಾ ಸೃಷ್ಟಮಿದಂ ವಿಶ್ವಂ ಧಾತರ್ಗುಣವಿಸರ್ಜನಮ್ ।
ನಾನಾಸ್ವಭಾವವೀರ್ಯೌಜೋಯೋನಿಬೀಜಾಶಯಾಕೃತಿ ॥
ಅನುವಾದ
ವಿಶ್ವವಿಧಾತನೇ! ಸತ್ತ್ವ-ರಜಸ್ತಮೋ ಗುಣಗಳಿಂದ ನೀನೇ ಸೃಷ್ಟಿಸಿರುವ ಈ ಜಗತ್ತಿನಲ್ಲಿ ನಾನಾಪ್ರಕಾರವಾದ ಸ್ವಭಾವ, ವೀರ್ಯ, ಬಲ, ಯೋನಿ, ಬೀಜ, ಚಿತ್ತ ಮತ್ತು ಆಕೃತಿಗಳಿವೆ. ॥57॥
(ಶ್ಲೋಕ-58)
ಮೂಲಮ್
ವಯಂ ಚ ತತ್ರ ಭಗವನ್ಸರ್ಪಾ ಜಾತ್ಯುರುಮನ್ಯವಃ ।
ಕಥಂ ತ್ಯಜಾಮಸ್ತ್ವನ್ಮಾಯಾಂ ದುಸ್ತ್ಯಜಾಂ ಮೋಹಿತಾಃ ಸ್ವಯಮ್ ॥
ಅನುವಾದ
ಭಗವಂತಾ! ನಿನ್ನದೇ ಆದ ಸೃಷ್ಟಿಯಲ್ಲೇ ಸರ್ಪಗಳಾದ ನಾವು ಇರುವುದು. ನಾವು ಹುಟ್ಟಿನಿಂದಲೇ ಅತಿಕ್ರೋಧಿಗಳಾಗಿದ್ದೇವೆ. ನಾವು ಈ ಮಾಯಾಜಾಲದಲ್ಲಿ ಮೋಹಿತರಾಗಿದ್ದೇವೆ. ಹಾಗಿರುವಾಗ ನಮ್ಮ ಪ್ರಯತ್ನದಿಂದ ಈ ದಾಟಲಶಕ್ಯವಾದ ಮಾಯೆಯನ್ನು ಹೇಗೆ ತ್ಯಜಿಸಬಲ್ಲೆವು? ॥58॥
(ಶ್ಲೋಕ-59)
ಮೂಲಮ್
ಭವಾನ್ಹಿ ಕಾರಣಂ ತತ್ರ ಸರ್ವಜ್ಞೋ ಜಗದೀಶ್ವರಃ ।
ಅನುಗ್ರಹಂ ನಿಗ್ರಹಂ ವಾ ಮನ್ಯಸೇ ತದ್ವಿಧೇಹಿ ನಃ ॥
ಅನುವಾದ
ನೀನು ಸರ್ವಜ್ಞನೂ, ಸಮಸ್ತ ಜಗತ್ತಿನ ಸ್ವಾಮಿಯೂ ಆಗಿರುವೆ. ನೀನೆ ನಮ್ಮ ಸ್ವಭಾವ ಮತ್ತು ಈ ಮಾಯೆಗೆ ಕಾರಣನಾಗಿರುವೆ. ಈಗ ನೀನು ನಿನ್ನ ಇಚ್ಛೆಯಂತೆ ನಿಗ್ರಹಿಸಬಹುದು, ಅನುಗ್ರಹಿಸಲೂಬಹುದು.॥59॥
(ಶ್ಲೋಕ-60)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯಾಕರ್ಣ್ಯ ವಚಃ ಪ್ರಾಹ ಭಗವಾನ್ಕಾರ್ಯಮಾನುಷಃ ।
ನಾತ್ರ ಸ್ಥೇಯಂ ತ್ವಯಾ ಸರ್ಪ ಸಮುದ್ರಂ ಯಾಹಿ ಮಾ ಚಿರಮ್ ।
ಸ್ವಜ್ಞಾತ್ಯಪತ್ಯದಾರಾಢ್ಯೋ ಗೋನೃಭಿರ್ಭುಜ್ಯತಾಂ ನದೀ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಕಾಳಿಯ ನಾಗನ ಮಾತನ್ನು ಕೇಳಿದ ಲೀಲಾಮಾನುಷ ವಿಗ್ರಹನಾದ ಶ್ರೀಕೃಷ್ಣನು ಹೀಗೆ ಎಂದನು - ಎಲೈ ಸರ್ಪವೇ! ನೀನು ಇನ್ನು ಮುಂದೆ ಇಲ್ಲಿರಬಾರದು. ನೀನು ನಿನ್ನ ಪುತ್ರ, ಭ್ರಾತೃ, ಭಾರ್ಯೆ, ಬಂಧುಗಳೊಡನೆ ಸಮುದ್ರಕ್ಕೆ ಹೊರಟು ಹೋಗು. ಇಲ್ಲಿರುವ ಗೋವುಗಳೂ, ಗೋಪಾಲಕರೂ ಯಮುನೆಯ ನೀರನ್ನು ಉಪಯೋಗಿಸುವಂತಾಗಲಿ. ॥60॥
(ಶ್ಲೋಕ-61)
ಮೂಲಮ್
ಯ ಏತತ್ಸಂಸ್ಮರೇನ್ಮರ್ತ್ಯಸ್ತುಭ್ಯಂ ಮದನುಶಾಸನಮ್ ।
ಕೀರ್ತಯನ್ನುಭಯೋಃ ಸಂಧ್ಯೋರ್ನ ಯುಷ್ಮದ್ಭಯಮಾಪ್ನುಯಾತ್ ॥
ಅನುವಾದ
ಎರಡೂ ಸಂಧ್ಯೆಗಳಲ್ಲಿ ನಾನು ನಿನಗಿತ್ತಿರುವ ಆಜ್ಞೆಯನ್ನು ಸ್ಮರಿಸುವವನಿಗೆ, ಕೀರ್ತಿಸುವವನಿಗೆ ಸರ್ಪಗಳಿಂದ ಭಯವು ಎಂದೂ ಉಂಟಾಗದಿರಲಿ. ॥61॥
(ಶ್ಲೋಕ-62)
ಮೂಲಮ್
ಯೋಸ್ಮಿನ್ಸ್ನಾತ್ವಾ ಮದಾಕ್ರೀಡೇದೇವಾದೀನಛಸ್ತರ್ಪಯೇಜ್ಜಲೈಃ ।
ಉಪೋಷ್ಯ ಮಾಂ ಸ್ಮರನ್ನರ್ಚೇತ್ಸರ್ವಪಾಪೈಃ ಪ್ರಮುಚ್ಯತೇ ॥
ಅನುವಾದ
ಈ ಕಾಳಿಯ ಮಡು ವಿನಲ್ಲಿ ನಾನು ಕ್ರೀಡಿಸಿದ್ದರಿಂದ ಇದರಲ್ಲಿ ಸ್ನಾನಮಾಡಿ, ನೀರಿನಿಂದ ದೇವತೆಗಳಿಗೆ, ತರ್ಪಣ ಮಾಡುವ ಜನರು ಹಾಗೂ ಉಪವಾಸವಿದ್ದು ನನ್ನನ್ನು ಸ್ಮರಿಸುತ್ತಾ, ಪೂಜೆ ಮಾಡುವವರು ಎಲ್ಲ ಪಾಪಗಳಿಂದ ಮುಕ್ತರಾಗಿ ಹೋಗುವರು. ॥62॥
(ಶ್ಲೋಕ-63)
ಮೂಲಮ್
ದ್ವೀಪಂ ರಮಣಕಂ ಹಿತ್ವಾ ಹ್ರದಮೇತಮುಪಾಶ್ರಿತಃ ।
ಯದ್ಭಯಾತ್ಸ ಸುಪರ್ಣಸ್ತ್ವಾಂ ನಾದ್ಯಾನ್ಮತ್ಪಾದಲಾಂಛಿತಮ್ ॥
ಅನುವಾದ
ನೀನು ಗರುಡನ ಭಯದಿಂದ ರಮಣ ಕದ್ವೀಪವನ್ನು ಬಿಟ್ಟು ಈ ಮಡುವಿನಲ್ಲಿ ಬಂದು ನೆಲೆಸಿದ್ದೆ ಎಂಬುದನ್ನು ನಾನು ಬಲ್ಲೆ. ಈಗ ನಿನ್ನ ಶರೀರವು ನನ್ನ ಚರಣಚಿಹ್ನೆಯಿಂದ ಅಂಕಿತವಾದ್ದರಿಂದ ಇನ್ನು ಮುಂದೆ ಗರುಡನು ನಿನ್ನನ್ನು ತಿನ್ನಲಾರನು; ಹೋಗು. ॥63॥
(ಶ್ಲೋಕ-64)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಮುಕ್ತೋ ಭಗವತಾ ಕೃಷ್ಣೇನಾದ್ಭುತಕರ್ಮಣಾ ।
ತಂ ಪೂಜಯಾಮಾಸ ಮುದಾ ನಾಗಪತ್ನ್ಯಶ್ಚ ಸಾದರಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಭಗವಾನ್ ಶ್ರೀಕೃಷ್ಣನ ಒಂದೊಂದು ಲೀಲೆಯೂ ಅದ್ಭುತವಾಗಿವೆ. ಅವನ ಆಜ್ಞೆಯನ್ನು ಪಡೆದು ಕಾಳಿಯ ನಾಗನು ಪತ್ನಿಯರೊಂದಿಗೆ ಆನಂದದಿಂದ ಬಹಳ ಆದರದಿಂದ ಶ್ರೀಕೃಷ್ಣನನ್ನು ಪೂಜಿಸಿದನು. ॥64॥
(ಶ್ಲೋಕ-65)
ಮೂಲಮ್
ದಿವ್ಯಾಂಬರಸ್ರಙ್ಮಣಿಭಿಃ ಪರಾರ್ಧ್ಯೈರಪಿ ಭೂಷಣೈಃ ।
ದಿವ್ಯಗಂಧಾನುಲೇಪೈಶ್ಚ ಮಹತ್ಯೋತ್ಪಲಮಾಲಯಾ ॥
(ಶ್ಲೋಕ-66)
ಮೂಲಮ್
ಪೂಜಯಿತ್ವಾ ಜಗನ್ನಾಥಂ ಪ್ರಸಾದ್ಯ ಗರುಡಧ್ವಜಮ್ ।
ತತಃ ಪ್ರೀತೋಭ್ಯನುಜ್ಞಾತಃ ಪರಿಕ್ರಮ್ಯಾಭಿವಂದ್ಯತಮ್ ॥
(ಶ್ಲೋಕ-67)
ಮೂಲಮ್
ಸಕಲತ್ರಸುಹೃತ್ಪುತ್ರೋ ದ್ವೀಪಮಬ್ಧೇರ್ಜಗಾಮ ಹ
ತದೈವ ಸಾಮೃತಜಲಾ ಯಮುನಾ ನಿರ್ವಿಷಾಭವತ್ ।
ಅನುಗ್ರಹಾದ್ಭಗವತಃ ಕ್ರೀಡಾಮಾನುಷರೂಪಿಣಃ ॥
ಅನುವಾದ
ಅವನು ದಿವ್ಯವಸ್ತ್ರ, ಪುಷ್ಪಮಾಲೆ, ಮಣಿ, ಬಹುಮೂಲ್ಯ ಆಭೂಷಣ, ದಿವ್ಯಗಂಧ, ಚಂದನ ಮತ್ತು ಅತಿಉತ್ತಮ ಕಮಲಗಳ ಮಾಲೆಗಳಿಂದ ಜಗತ್ಸ್ವಾಮಿಯಾದ ಗರುಡಧ್ವಜ ಭಗವಾನ್ ಶ್ರೀಕೃಷ್ಣನನ್ನು ಪೂಜಿಸಿ ಸಂತೋಷಪಡಿಸಿದನು. ಇದಾದ ಬಳಿಕ ಪ್ರೇಮಾನಂದದಿಂದ ಅವನ ಪ್ರದಕ್ಷಿಣೆ ಮಾಡಿ, ವಂದಿಸಿ, ಅವನಿಂದ ಬೀಳ್ಕೊಂಡು, ತನ್ನ ಪತ್ನೀ, ಪುತ್ರರೊಂದಿಗೆ ಹಾಗೂ ಬಂಧು ಬಾಂಧವರೊಂದಿಗೆ ಸಮುದ್ರದಲ್ಲಿ ಸರ್ಪಗಳು ವಾಸವಾಗಿರುವ ರಮಣಕದ್ವೀಪಕ್ಕೆ ಪ್ರಯಾಣ ಮಾಡಿದನು. ಲೀಲಾಮಾನುಷನಾದ ಭಗವಾನ್ ಶ್ರೀಕೃಷ್ಣನ ಕೃಪೆಯಿಂದ ಯಮುನೆಯ ನೀರು ಕೇವಲ ವಿಷಹೀನವಾದುದಲ್ಲ, ಆಗಿನಿಂದಲೇ ಅಮೃತದಂತೆ ಮಧುರವೂ ಪವಿತ್ರವೂ ಆಯಿತು. ॥65-67॥
ಅನುವಾದ (ಸಮಾಪ್ತಿಃ)
ಹದಿನಾರನೆಯ ಅಧ್ಯಾಯವು ಮುಗಿಯಿತು. ॥16॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಕಾಲಿಯಮೋಕ್ಷಣಂ ನಾಮ ಷೋಡಶೋಽಧ್ಯಾಯಃ ॥16॥