೧೫

[ಹದಿನೈದನೆಯ ಅಧ್ಯಾಯ]

ಭಾಗಸೂಚನಾ

ಧೇನುಕಾಸುರ ಉದ್ಧಾರ, ಕಾಲಿಯನಾಗನ ವಿಷದಿಂದ ಗೋಪಬಾಲಕರನ್ನು ಬದುಕಿಸಿದುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ತತಶ್ಚ ಪೌಗಂಡವಯಃ ಶ್ರಿತೌ ವ್ರಜೇ
ಬಭೂವತುಸ್ತೌ ಪಶುಪಾಲಸಮ್ಮತೌ ।
ಗಾಶ್ಚಾರಯಂತೌ ಸಖಿಭಿಃ ಸಮಂ ಪದೈ-
ರ್ವೃಂದಾವನಂ ಪುಣ್ಯಮತೀವ ಚಕ್ರತುಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಶ್ರೀಕೃಷ್ಣ ಬಲರಾಮರಿಗೆ ಈಗ ಪೌಂಗಡಾವಸ್ಥೆಯು ಪ್ರಾಪ್ತವಾಯಿತು. ಈಗ ಅವರಿಗೆ ಹಸುಗಳನ್ನು ಮೇಯಿಸಲು ಸ್ವೀಕೃತಿ ದೊರೆಯಿತು. ಅವರು ತಮ್ಮ ಸ್ನೇಹಿತರಾದ ಗೊಲ್ಲಬಾಲಕರೊಂದಿಗೆ ಹಸುಗಳನ್ನು ಮೇಯಿಸುತ್ತಾ ವೃಂದಾವನಕ್ಕೆ ಹೋಗಿ ತಮ್ಮ ಚರಣಗಳಿಂದ ವೃಂದಾವನವನ್ನು ಅತ್ಯಂತ ಪಾವನ ಗೊಳಿಸುತ್ತಿದ್ದರು. ॥1॥

(ಶ್ಲೋಕ-2)

ಮೂಲಮ್

ತನ್ಮಾಧವೋ ವೇಣುಮುದೀರಯನ್ವ ತೋ
ಗೋಪೈರ್ಗೃಣದ್ಭಿಃ ಸ್ವಯಶೋ ಬಲಾನ್ವಿತಃ ।
ಪಶೂನ್ಪುರಸ್ಕೃತ್ಯ ಪಶವ್ಯಮಾವಿಶದ್
ವಿಹರ್ತುಕಾಮಃ ಕುಸುಮಾಕರಂ ವನಮ್ ॥

ಅನುವಾದ

ಈ ವನವು ಹಸುಗಳಿಗೆ ಹಸುರಾದ ಎಳೆ ಹುಲ್ಲಿನಿಂದ ಕೂಡಿದ್ದು ಬಣ್ಣ-ಬಣ್ಣದ ಹೂವುಗಳ ಆಗರವೇ ಆಗಿತ್ತು. ಮುಂದೆ-ಮುಂದೆ ಹಸುಗಳು ಅವುಗಳ ಹಿಂದೆ-ಹಿಂದೆ ಕೊಳಲನ್ನು ಊದುತ್ತಾ ಶ್ಯಾಮಸುಂದರನು ಅವನ ಬೆನ್ನಿಗೆ ಬಲರಾಮನು ಹಾಗೂ ಶ್ರೀಕೃಷ್ಣನ ಕೀರ್ತಿಯನ್ನು ಹಾಡುತ್ತಿರುವ ಗೋಪಾಲಕರು ಅವರ ಹಿಂದೆ ಹೀಗೆ ವಿಹರಿಸುತ್ತಾ ಅವರು ಆ ವೃಂದಾವನವನ್ನು ಪ್ರವೇಶಿಸಿದರು. ॥2॥

(ಶ್ಲೋಕ-3)

ಮೂಲಮ್

ತನ್ಮಂಜುಘೋಷಾಲಿಮೃಗದ್ವಿಜಾಕುಲಂ
ಮಹನ್ಮನಃ ಪ್ರಖ್ಯಪಯಃ ಸರಸ್ವತಾ ।
ವಾತೇನ ಜುಷ್ಟಂ ಶತಪತ್ರಗಂಧಿನಾ
ನಿರೀಕ್ಷ್ಯ ರಂತುಂ ಭಗವಾನ್ಮನೋ ದಧೇ ॥

ಅನುವಾದ

ಆ ವನದಲ್ಲಿ ಕೆಲವು ಕಡೆ ಭೃಂಗಗಳು ಗುಂಜಾರವ ಮಾಡುತ್ತಿದ್ದರೆ, ಕೆಲವು ಕಡೆ ಜಿಂಕೆಗಳು ಗುಂಪುಗುಂಪಾಗಿ ಅತ್ತಂದಿತ್ತ ನೆಗೆಯುತ್ತಿದ್ದವು. ಕೆಲ ಅಂದವಾದ ಪಕ್ಷಿಗಳು ಸುಮಧುರವಾಗಿ ಧ್ವನಿ ಮಾಡುತ್ತಿದ್ದವು. ಅಲ್ಲಲ್ಲಿ ಅತ್ಯಂತ ಸುಂದರವಾದ ಸರೋವರಗಳಿದ್ದವು. ಅವುಗಳಲ್ಲಿ ಮಹಾತ್ಮರ ಹೃದಯದಂತೆ ಸ್ವಚ್ಛವಾದ ತಿಳಿನೀರು ತುಂಬಿತ್ತು. ಅವುಗಳಲ್ಲಿ ಅರಳಿದ ಕಮಲಗಳ ಸುಗಂಧದಿಂದ ಕೂಡಿದ ಶೀತಲ-ಮಂದ ಮಾರುತವು ಆ ವೃಂದಾವನವನ್ನು ಸೇವಿಸುತ್ತಿತ್ತು. ಆ ಮನೋಹರವಾದ ವನವನ್ನು ನೋಡಿ ಭಗವಂತನು ಅಲ್ಲಿ ವಿಹರಿಸಲು ಮನಸ್ಸಿನಲ್ಲೇ ನಿಶ್ಚಯಿಸಿದನು. ॥3॥

(ಶ್ಲೋಕ-4)

ಮೂಲಮ್

ಸ ತತ್ರ ತತ್ರಾರುಣಪಲ್ಲವಶ್ರಿಯಾ
ಲಪ್ರಸೂನೋರುಭರೇಣ ಪಾದಯೋಃ ।
ಸ್ಪೃಶಚ್ಛಿಖಾನ್ವೀಕ್ಷ್ಯ ವನಸ್ಪತೀನ್ಮುದಾ
ಸ್ಮಯನ್ನಿವಾಹಾಗ್ರಜಮಾದಿಪೂರುಷಃ ॥

ಅನುವಾದ

ಎಣ್ಣೆಗೆಂಪಿನ ಚಿಗುರುಗಳ ಕಾಂತಿಯಿಂದ ಕೂಡಿ ಫಲ-ಪುಷ್ಪಗಳ ಭಾರದಿಂದ ಬಗ್ಗಿದ ರೆಂಬೆಗಳ ವೃಕ್ಷಗಳು ಶ್ರೀಕೃಷ್ಣನ ಪಾದಗಳಿಗೆ ನಮಸ್ಕರಿಸುತ್ತವೆಯೋ ಎಂಬಂತೆ ಕಾಣುತ್ತಿತ್ತು. ಅಂತಹ ನೇತ್ರಾನಂದಕರವಾದ ಅವನ್ನು ನೋಡಿ ಆದಿದೇವನಾದ ಶ್ರೀಕೃಷ್ಣಪರಮಾತ್ಮನು ಅಣ್ಣನಾದ ಬಲರಾಮನಲ್ಲಿ ಹೇಳಿದನು. ॥4॥

(ಶ್ಲೋಕ-5)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಅಹೋ ಅಮೀ ದೇವವರಾಮರಾರ್ಚಿತಂ
ಪಾದಾಂಬುಜಂ ತೇ ಸುಮನಃಲಾರ್ಹಣಮ್ ।
ನಮಂತ್ಯುಪಾದಾಯ ಶಿಖಾಭಿರಾತ್ಮನ-
ಸ್ತಮೋಪಹತ್ಯೈ ತರುಜನ್ಮ ಯತ್ಕೃತಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ದೇವಶಿರೋಮಣಿಯೇ! ಶ್ರೇಷ್ಠರಾದ ದೇವತೆಗಳೇನೋ ನಿನ್ನ ಚರಣಕಮಲಗಳನ್ನು ಪೂಜಿಸುತ್ತಾರೆ. ಆದರೆ ಇಲ್ಲಿ ನೋಡು! ಈ ವೃಕ್ಷಗಳೂ ಕೂಡ ತಮ್ಮ ರೆಂಬೆಗಳ ಮೂಲಕವಾಗಿ ಫಲ-ಪುಷ್ಪಗಳನ್ನು ಹೊತ್ತು ನಿನ್ನ ಚರಣಾರವಿಂದಗಳ ಸೇವೆ ಮಾಡಲು ಬಗ್ಗಿ ನಮಸ್ಕರಿಸುತ್ತವೆ. ಅವುಗಳು ಇಂತಹ ಸೌಭಾಗ್ಯವನ್ನು ಪಡೆಯುವುದಕ್ಕಾಗಿಯೇ ಹಾಗೂ ನಿನ್ನ ದರ್ಶನ, ನಿನ್ನ ಲೀಲಾಪ್ರಸಂಗಗಳನ್ನು ಶ್ರವಣ ಮಾಡಿದವರ ಅಜ್ಞಾನವನ್ನು ನಾಶಗೊಳಿಸುವ ಸಲುವಾಗಿ ಈ ಪುಣ್ಯ ಪ್ರದವಾದ ವೃಂದಾವನದಲ್ಲಿ ವೃಕ್ಷಗಳಾಗಿ ಹುಟ್ಟಿವೆ. ನಿಶ್ಚಯವಾಗಿಯೂ ಇವುಗಳ ಜೀವನವೇ ಧನ್ಯವಾದುದು. ॥5॥

ಮೂಲಮ್

(ಶ್ಲೋಕ-6)
ಏತೇಲಿನಸ್ತವ ಯಶೋಖಿಲಲೋಕತೀರ್ಥಂ
ಗಾಯಂತ ಆದಿಪುರುಷಾನುಪದಂ ಭಜಂತೇ ।
ಪ್ರಾಯೋ ಅಮೀ ಮುನಿಗಣಾ ಭವದೀಯಮುಖ್ಯಾ
ಗೂಢಂ ವನೇಪಿ ನ ಜಹತ್ಯನಘಾತ್ಮದೈವಮ್ ॥

ಅನುವಾದ

ಆದಿಪುರುಷನೇ! ನೀನು ಈ ವೃಂದಾವನದಲ್ಲಿ ನಿನ್ನ ಐಶ್ವರ್ಯವನ್ನು ಮರೆಸಿ ಸಾಮಾನ್ಯ ಬಾಲಕರಂತೆ ಲೀಲೆ ಮಾಡುತ್ತಿದ್ದರೂ ನಿನ್ನ ಶ್ರೇಷ್ಠ ಭಕ್ತರಾದ ಮುನಿಗಳು ತಮ್ಮ ಇಷ್ಟ ದೈವವನ್ನು ಗುರುತಿಸಿಕೊಂಡು ಇಲ್ಲಿಯೂ ಪ್ರಾಯಶಃ ದುಂಬಿಗಳಾಗಿ ನಿನ್ನ ಭುವನ ಪಾವನ ಕೀರ್ತಿಯನ್ನು ನಿರಂತರವಾಗಿ ಹಾಡುತ್ತಾ ನಿನ್ನ ಭಜನೆಯಲ್ಲಿ ತೊಡಗಿರುತ್ತಾರೆ. ಅವರು ಒಂದು ಕ್ಷಣಕ್ಕಾದರೂ ನಿನ್ನನ್ನು ಬಿಡಲು ಬಯಸುವುದಿಲ್ಲ. ॥6॥

(ಶ್ಲೋಕ-7)

ಮೂಲಮ್

ನೃತ್ಯಂತ್ಯಮೀ ಶಿಖಿನ ಈಡ್ಯ ಮುದಾ ಹರಿಣ್ಯಃ
ಕುರ್ವಂತಿ ಗೋಪ್ಯ ಇವ ತೇ ಪ್ರಿಯಮೀಕ್ಷಣೇನ ।
ಸೂಕ್ತೈಶ್ಚ ಕೋಕಿಲಗಣಾ ಗೃಹಮಾಗತಾಯ
ಧನ್ಯಾ ವನೌಕಸ ಇಯಾನ್ಹಿ ಸತಾಂ ನಿಸರ್ಗಃ ॥

ಅನುವಾದ

ಅಣ್ಣಾ! ನಿಜವಾಗಿ ನೀನೇ ಸ್ತುತಿಸಲು ಯೋಗ್ಯನಾಗಿರುವೆ. ತಮ್ಮ ಮನೆಗೆ ಬಂದಿರುವ ನಿನ್ನನ್ನು ನೋಡಿದ ನವಿಲುಗಳು ನಿನ್ನ ದರ್ಶನದಿಂದ ಆನಂದಿತವಾಗಿ ಕುಣಿಯುತ್ತಾ ಇವೆ. ಜಿಂಕೆಗಳು ಮೃಗನಯನೀ ಗೋಪಿಯರಂತೆ ತಮ್ಮ ಪ್ರೇಮಪೂರ್ಣ ಓರೆ ನೋಟದಿಂದ ನಿನ್ನ ಕುರಿತು ಪ್ರೀತಿಯನ್ನು ಪ್ರಕಟಿಸುತ್ತಾ ನಿನ್ನನ್ನು ಸಂತೋಷಗೊಳಿಸುತ್ತಿರುವರು. ಈ ಕೋಗಿಲೆಗಳು ತಮ್ಮ ಮಧುರ ಪಂಚಮದ ಇಂಚರದಿಂದ ನಿನ್ನನ್ನು ಎಷ್ಟು ಸುಂದರವಾಗಿ ಸ್ವಾಗತಿಸುತ್ತವೆ. ಇವು ವನವಾಸಿಗಳಾಗಿದ್ದರೂ ಧನ್ಯರಾಗಿದ್ದಾರೆ. ಏಕೆಂದರೆ, ಸತ್ಪುರುಷರ ಸ್ವಭಾವವೇ ಹೀಗಿರುತ್ತದೆ. ಅವರು ಮನೆಗೆ ಬಂದಿರುವ ಅತಿಥಿಗೆ ತಮಗೆ ಪ್ರಿಯವಾದ ವಸ್ತುವನ್ನು ಅರ್ಪಿಸಿ ಬಿಡುತ್ತಾರೆ. ॥7॥

(ಶ್ಲೋಕ-8)

ಮೂಲಮ್

ಧನ್ಯೇಯಮದ್ಯ ಧರಣೀ ತೃಣವೀರುಧಸ್ತ್ವತ್
ಪಾದಸ್ಪೃಶೋ ದ್ರುಮಲತಾಃ ಕರಜಾಭಿಮೃಷ್ಟಾಃ ।
ನದ್ಯೋದ್ರಯಃ ಖಗಮೃಗಾಃ ಸದಯಾವಲೋಕೈ-
ರ್ಗೋಪ್ಯೋಂತರೇಣ ಭುಜಯೋರಪಿ ಯತ್ಸ್ಪೃಹಾ ಶ್ರೀಃ ॥

ಅನುವಾದ

ಇಂದು ಇಲ್ಲಿಯ ಭೂಮಿಯು ತನ್ನ ಹಚ್ಚ ಹಸಿರು ಹುಲ್ಲಿನೊಂದಿಗೆ ನಿನ್ನ ಚರಣಗಳನ್ನು ಸ್ಪರ್ಶಿಸುತ್ತಾ ಧನ್ಯವಾಗಿದೆ. ಇಲ್ಲಿಯ ಮರ-ಗಿಡ-ಬಳ್ಳಿಗಳು ನಿನ್ನ ಬೆರಳುಗಳ ಸ್ಪರ್ಶವನ್ನು ಪಡೆದು ತಮ್ಮ ಅಹೋಭಾಗ್ಯವೆಂದು ತಿಳಿಯುತ್ತಿವೆ. ನಿನ್ನ ಕರುಣಾಕಟಾಕ್ಷದಿಂದ ನದಿ, ಪರ್ವತ, ಪಶು-ಪಕ್ಷಿ ಎಲ್ಲವೂ ಕೃತಾರ್ಥರಾಗುತ್ತಿದ್ದಾರೆ. ವ್ರಜದಲ್ಲಿರುವ ಗೋಪಿಕೆಯರು ಸ್ವತಃ ಲಕ್ಷ್ಮಿದೇವಿಯೂ ಕೂಡ ಅಪೇಕ್ಷಿಸುತ್ತಿರುವ ನಿನ್ನ ವಕ್ಷಃಸ್ಥಲದ ಸ್ಪರ್ಶವನ್ನು ಪಡೆದುಕೊಂಡು ಧನ್ಯರಾಗುತ್ತಿದ್ದಾರೆ. ॥8॥

(ಶ್ಲೋಕ-9)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ವೃಂದಾವನಂ ಶ್ರೀಮತ್ಕೃಷ್ಣಃ ಪ್ರೀತಮನಾಃ ಪಶೂನ್ ।
ರೇಮೇ ಸಂಚಾರಯನ್ನದ್ರೇಃ ಸರಿದ್ರೋಧಸ್ಸು ಸಾನುಗಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಹೀಗೆ ಪರಮಸುಂದರ ವೃಂದಾವನವನ್ನು ನೋಡಿ ಭಗವಾನ್ ಶ್ರೀಕೃಷ್ಣನು ಬಹಳವಾಗಿ ಆನಂದಿತನಾದನು. ಅವನು ತನ್ನ ಮಿತ್ರರಾದ ಗೊಲ್ಲಬಾಲಕರೊಂದಿಗೆ ಗೋವರ್ಧನದ ತಪ್ಪಲುಗಳಲ್ಲಿ, ಯಮುನಾ ತೀರದಲ್ಲಿ ಹಸುಗಳನ್ನು ಮೇಯಿಸುತ್ತಾ ಅನೇಕ ರೀತಿಯ ಲೀಲೆಗಳನ್ನು ಮಾಡತೊಡಗಿದನು. ॥9॥

(ಶ್ಲೋಕ-10)

ಮೂಲಮ್

ಕ್ವಚಿದ್ಗಾಯತಿ ಗಾಯತ್ಸು ಮದಾಂಧಾಲಿಷ್ವನುವ್ರತೈಃ ।
ಉಪಗೀಯಮಾನಚರಿತಃ ಸ್ರಗ್ವೀ ಸಂಕರ್ಷಣಾನ್ವಿತಃ ॥

ಅನುವಾದ

ಒಂದೆಡೆ ಗೋಪಬಾಲಕರು ಭಗವಾನ್ ಶ್ರೀಕೃಷ್ಣನ ಚರಿತ್ರೆಗಳನ್ನು ಆಲಾಪಿಸುತ್ತಾ ಮಧುರವಾಗಿ ಹಾಡುತ್ತಿದ್ದಾರೆ, ಇನ್ನೊಂದೆಡೆ ಬಲರಾಮನೊಂದಿಗೆ ವನಮಾಲೆಯನ್ನು ಧರಿಸಿರುವ ಶ್ರೀಕೃಷ್ಣನು ಮತ್ತ ಭೃಂಗಗಳ ಸುಮಧುರ ಗುಂಜಾರವದೊಂದಿಗೆ ತನ್ನ ಸ್ವರವನ್ನೂ ಸೇರಿಸಿ ಆಲಾಪಿಸತೊಡಗಿದನು. ॥10॥

(ಶ್ಲೋಕ-11)

ಮೂಲಮ್

ಕ್ವಚಿಚ್ಚ ಕಲಹಂಸಾನಾಮನುಕೂಜತಿ ಕೂಜಿತಮ್ ।
ಅಭಿನೃತ್ಯತಿ ನೃತ್ಯಂತಂ ಬರ್ಹಿಣಂ ಹಾಸಯನ್ಕ್ವಚಿತ್ ॥

ಅನುವಾದ

ಕೆಲವೊಮ್ಮೆ ಶ್ರೀಕೃಷ್ಣನು ರಾಜಹಂಸಗಳು ಕೂಗಿದಾಗ ಅವುಗಳಂತೆಯೇ ಅವುಗಳ ಜೊತೆಯಲ್ಲೇ ಕೂಗುತ್ತಾ ಅವುಗಳನ್ನು ಅಣಕಿಸುತ್ತಿದ್ದನು. ಕೆಲವೊಮ್ಮೆ ನೃತ್ಯವಾಡುವ ನವಿಲುಗಳೊಡನೆ ತಕ-ತಕನೆ ತಾನೂ ಕುಣಿಯುತ್ತಾ ತನ್ನ ಮಿತ್ರರನ್ನು ಸಂತೋಷಗೊಳಿಸುವನು. ॥11॥

(ಶ್ಲೋಕ-12)

ಮೂಲಮ್

ಮೇಘಗಂಭೀರಯಾ ವಾಚಾ ನಾಮಭಿರ್ದೂರಗಾನ್ಪಶೂನ್ ।
ಕ್ವಚಿದಾಹ್ವಯತಿ ಪ್ರೀತ್ಯಾ ಗೋಗೋಪಾಲಮನೋಜ್ಞಯಾ ॥

ಅನುವಾದ

ಕೆಲವೊಮ್ಮೆ ಬಹಳ ದೂರಕ್ಕೆ ಹೋದ ಹಸುಗಳನ್ನು ಅವುಗಳ ಹೆಸರು ಹಿಡಿದು ಮೇಘದಂತೆ ಗಂಭೀರ ಧ್ವನಿಯಿಂದ ಪ್ರೇಮದಿಂದ ಕರೆಯುವನು. ಅವನ ಈ ಮಧುರ ಧ್ವನಿಯನ್ನು ಕೇಳಿ ಗೋವುಗಳ ಮತ್ತು ಗೋಪಾಲಬಾಲಕರ ಮನಸ್ಸಿಗೆ ಉಲ್ಲಾಸವುಂಟಾಗುತ್ತಿತ್ತು. ॥12॥

(ಶ್ಲೋಕ-13)

ಮೂಲಮ್

ಚಕೋರಕ್ರೌಞ್ಚಚಕ್ರಾಹ್ವಭಾರದ್ವಾಜಾಂಶ್ಚ ಬರ್ಹಿಣಃ ।
ಅನುರೌತಿ ಸ್ಮ ಸತ್ತ್ವಾನಾಂ ಭೀತವದ್ವ್ಯಾಘ್ರಸಿಂಹಯೋಃ ॥

ಅನುವಾದ

ಕೆಲವೊಮ್ಮೆ ಚಕೋರ, ಕ್ರೌಂಚ, ಹಂಸ, ಚಕ್ರವಾಕ, ಭರದ್ವಾಜ, ನವಿಲು ಮುಂತಾದ ಪಕ್ಷಿಗಳ ಧ್ವನಿಯನ್ನು ಅನುಸರಿಸಿ ಕೂಗಿದರೆ, ಕೆಲವೊಮ್ಮೆ ಹುಲಿ, ಸಿಂಹಗಳಂತೆ ಗರ್ಜಿಸುವನು. ಆ ಗರ್ಜನೆಯಿಂದ ಹೆದರಿದ ಜೀವಿಗಳಂತೆ ತಾನೂ ಕೂಡ ಭಯಗೊಂಡವನಂತೆ ನಟಿಸುವನು. ॥13॥

(ಶ್ಲೋಕ-14)

ಮೂಲಮ್

ಕ್ವಚಿತ್ಕ್ರೀಡಾಪರಿಶ್ರಾಂತಂ ಗೋಪೋತ್ಸಂಗೋಪಬರ್ಹಣಮ್ ।
ಸ್ವಯಂ ವಿಶ್ರಮಯತ್ಯಾರ್ಯಂ ಪಾದಸಂವಾಹನಾದಿಭಿಃ ॥

ಅನುವಾದ

ಬಲರಾಮನು ಆಟವಾಡುತ್ತಾಡುತ್ತಾ ಬಳಲಿ ಗೋಪಬಾಲಕನ ತೊಡೆಯಲ್ಲಿ ತಲೆಯನ್ನಿಟ್ಟು ಮಲಗಿದಾಗ ಶ್ರೀಕೃಷ್ಣನು ಅವನ ಕಾಲನ್ನು ಒತ್ತುತ್ತಾ ಬೀಸಣಿಗೆಯಿಂದ ಗಾಳಿ ಬೀಸಿ ಅಣ್ಣನ ಆಯಾಸವನ್ನು ಪರಿಹರಿಸುತ್ತಿದ್ದನು. ॥14॥

(ಶ್ಲೋಕ-15)

ಮೂಲಮ್

ನೃತ್ಯತೋ ಗಾಯತಃ ಕ್ವಾಪಿ ವಲ್ಗತೋ ಯುಧ್ಯತೋ ಮಿಥಃ ।
ಗೃಹೀತಹಸ್ತೌ ಗೋಪಾಲಾನ್ಹಸಂತೌ ಪ್ರಶಶಂಸತುಃ ॥

ಅನುವಾದ

ಒಂದೆಡೆ ಗೊಲ್ಲಬಾಲಕರು ಕುಣಿಯುತ್ತಿದ್ದರು. ಮತ್ತೊಂದೆಡೆಯಲ್ಲಿ ಕುಳಿತು ಹಾಡುತ್ತಿದ್ದರು. ಇನ್ನೊಂದೆಡೆಯಲ್ಲಿ ಕುಸ್ತಿಗಳನ್ನಾಡುತ್ತಿದ್ದರು. ಅಂತಹ ಕಡೆಗಳಲ್ಲಿ ಬಲರಾಮ-ಕೃಷ್ಣರು ಕೈ ಕೈಹಿಡಿದುಕೊಂಡು ನಿಂತುಕೊಂಡು ನಗುತ್ತಾ ಭಲೇ, ಭಲೇ ಎಂದು ಪ್ರೋತ್ಸಾಹಿಸುತ್ತಿದ್ದರು. ॥15॥

(ಶ್ಲೋಕ-16)

ಮೂಲಮ್

ಕ್ವಚಿತ್ಪಲ್ಲವತಲ್ಪೇಷು ನಿಯುದ್ಧಶ್ರಮಕರ್ಶಿತಃ ।
ವೃಕ್ಷಮೂಲಾಶ್ರಯಃ ಶೇತೇ ಗೋಪೋತ್ಸಂಗೋಪಬರ್ಹಣಃ ॥

ಅನುವಾದ

ಕೆಲವೊಮ್ಮೆ ಸ್ವಯಂ ಶ್ರೀಕೃಷ್ಣನು ಗೊಲ್ಲಬಾಲಕರೊಂದಿಗೆ ಕುಸ್ತಿಯಾಡುತ್ತಾ ಬಳಲಿದಾಗ ಒಂದು ಸುಂದರ ವೃಕ್ಷದ ಕೆಳಗೆ ಚಿಗುರುಗಳ ಹಾಸಿಗೆಯಲ್ಲಿ ಯಾರೋ ಗೋಪಬಾಲಕನ ತೊಡೆಯನ್ನೇ ದಿಂಬಾಗಿಸಿ ಪವಡಿಸುತ್ತಿದ್ದನು. ॥16॥

(ಶ್ಲೋಕ-17)

ಮೂಲಮ್

ಪಾದಸಂವಾಹನಂ ಚಕ್ರುಃ ಕೇಚಿತ್ತಸ್ಯ ಮಹಾತ್ಮನಃ ।
ಅಪರೇ ಹತಪಾಪ್ಮಾನೋ ವ್ಯಜನೈಃ ಸಮವೀಜಯನ್ ॥

ಅನುವಾದ

ಪರೀಕ್ಷಿತನೇ! ಆ ಸಮಯದಲ್ಲಿ ಪುಣ್ಯಾತ್ಮರಾದ ಗೋಪಬಾಲಕರು ಮಹಾತ್ಮನಾದ ಶ್ರೀಕೃಷ್ಣನ ಸುಂದರವಾದ ಕಾಲುಗಳನ್ನು ಒತ್ತುತ್ತಿದ್ದರು. ನಿಷ್ಪಾಪರಾದ ಬೇರೆ ಬಾಲಕರು ದೊಡ್ಡ ದೊಡ್ಡ ಎಲೆಗಳಿಂದ ಅಥವಾ ಅಂಗವಸದಿಂದ ಗಾಳಿ ಬೀಸುತ್ತಿದ್ದರು ॥17॥

(ಶ್ಲೋಕ-18)

ಮೂಲಮ್

ಅನ್ಯೇ ತದನುರೂಪಾಣಿ ಮನೋಜ್ಞಾನಿ ಮಹಾತ್ಮನಃ ।
ಗಾಯಂತಿ ಸ್ಮ ಮಹಾರಾಜ ಸ್ನೇಹಕ್ಲಿನ್ನಧಿಯಃ ಶನೈಃ ॥

ಅನುವಾದ

ಸ್ನೇಹಮಗ್ನವಾದ ಮನಸ್ಸಿನಿಂದ ಕೂಡಿದ ಕೆಲವು ಗೋಪ ಬಾಲಕರು ಶ್ರೀಕೃಷ್ಣನಲೀಲೆಗನುಗುಣವಾಗಿ ಮನೋಜ್ಞವಾಗಿ ಕಿವಿಗಿಂಪಾದ ಗೀತೆಗಳನ್ನು ಅವನ ಸುತ್ತಲೂ ಕುಳಿತುಕೊಂಡು ನಿಧಾನವಾಗಿ ಹಾಡುತ್ತಿದ್ದರು. ॥18॥

(ಶ್ಲೋಕ-19)

ಮೂಲಮ್

ಏವಂ ನಿಗೂಢಾತ್ಮಗತಿಃ ಸ್ವಮಾಯಯಾ
ಗೋಪಾತ್ಮಜತ್ವಂ ಚರಿತೈರ್ವಿಡಂಬಯನ್ ।
ರೇಮೇ ರಮಾಲಾಲಿತಪಾದಪಲ್ಲವೋ
ಗ್ರಾಮ್ಯೈಃ ಸಮಂ ಗ್ರಾಮ್ಯವದೀಶಚೇಷ್ಟಿತಃ ॥

ಅನುವಾದ

ಭಗವಂತನು ಹೀಗೆ ತನ್ನ ಯೋಗಮಾಯೆಯಿಂದ ತನ್ನ ಐಶ್ವರ್ಯಮಯವಾದ ಸ್ವರೂಪವನ್ನು ಬಚ್ಚಿಟ್ಟುಕೊಂಡಿದ್ದನು. ಅವನು ಮಾಡುವ ಲೀಲೆಗಳು ನಿಜವಾದ ಗೋಪಬಾಲಕರು ಮಾಡುವಂತೆ ಇದ್ದವು. ಸಾಕ್ಷಾತ್ ಲಕ್ಷ್ಮೀದೇವಿಯು ಯಾರ ಚರಣಕಮಲಗಳ ಸೇವೆಯಲ್ಲಿ ನಿರತಳಾಗಿರುತ್ತಿದ್ದಳೋ ಅಂತಹ ಭಗವಂತನು ಈ ಗ್ರಾಮೀಣ ಬಾಲಕರೊಂದಿಗೆ ಅತ್ಯಂತ ಪ್ರೇಮದಿಂದ, ಆನಂದಿಂದ ಗ್ರಾಮ್ಯರೀತಿಯ ಆಟವಾಡುತ್ತಿದ್ದನು. ಪರೀಕ್ಷಿತನೇ! ಹೀಗಿದ್ದರೂ ಕೂಡ ಕೆಲವೊಮ್ಮೆ ಅವನ ಐಶ್ವರ್ಯಮಯ ಲೀಲೆಗಳು ಪ್ರಕಟವಾಗುತ್ತಲೇ ಇದ್ದವು.॥19॥

(ಶ್ಲೋಕ-20)

ಮೂಲಮ್

ಶ್ರೀದಾಮಾ ನಾಮ ಗೋಪಾಲೋ ರಾಮಕೇಶವಯೋಃ ಸಖಾ ।
ಸುಬಲಸ್ತೋಕಕೃಷ್ಣಾದ್ಯಾ ಗೋಪಾಃ ಪ್ರೇಮ್ಣೇದಮಬ್ರುವನ್ ॥

ಅನುವಾದ

ಬಲರಾಮ ಮತ್ತು ಶ್ರೀಕೃಷ್ಣರ ಆಪ್ತಸ್ನೇಹಿತರಲ್ಲಿ ಶ್ರೀದಾಮನೆಂಬ ಒಬ್ಬ ಗೋಪಬಾಲಕನು ಪ್ರಧಾನನಾಗಿದ್ದನು. ಒಂದು ದಿನ ಶ್ರೀದಾಮ, ಸುಬಲ, ಸ್ತೋಕಕೃಷ್ಣ (ಚಿಕ್ಕಕೃಷ್ಣ) ಮೊದಲಾದ ಗೊಲ್ಲಬಾಲಕರು ಪ್ರೇಮಪೂರ್ವಕವಾಗಿ ಬಲರಾಮ-ಕೃಷ್ಣರಲ್ಲಿ ಹೀಗೆಂದರು. ॥20॥

(ಶ್ಲೋಕ-21)

ಮೂಲಮ್

ರಾಮ ರಾಮ ಮಹಾಬಾಹೋ ಕೃಷ್ಣ ದುಷ್ಟನಿಬರ್ಹಣ ।
ಇತೋವಿದೂರೇ ಸುಮಹದ್ವನಂ ತಾಲಾಲಿಸಂಕುಲಮ್ ॥

ಅನುವಾದ

‘‘ಮಹಾಬಾಹುವಾದ! ಬಲರಾಮನೇ! ದುಷ್ಟನಾಶಕನಾದ ಶ್ರೀಕೃಷ್ಣನೇ! ಇಲ್ಲಿ ಸ್ವಲ್ಪ ದೂರದಲ್ಲಿಯೇ ಸಾಲು-ಸಾಲಾಗಿ ತಾಳೆಯ ಮರಗಳಿಂದ ತುಂಬಿದ ಒಂದು ದೊಡ್ಡ ವನವಿದೆ. ॥21॥

(ಶ್ಲೋಕ-22)

ಮೂಲಮ್

ಲಾನಿ ತತ್ರ ಭೂರೀಣಿ ಪತಂತಿ ಪತಿತಾನಿ ಚ ।
ಸಂತಿ ಕಿಂತ್ವವರುದ್ಧಾನಿ ಧೇನುಕೇನ ದುರಾತ್ಮನಾ ॥

ಅನುವಾದ

ಅಲ್ಲಿ ಹಲವಾರು ಪಕ್ವವಾದ ತಾಳೆಯ ಹಣ್ಣುಗಳು ಮರದಿಂದ ಬಿದ್ದಿವೆ. ಇನ್ನು ಬೀಳುತ್ತಲೂ ಇವೆ. ಆದರೆ ಅಲ್ಲಿಯೇ ಇರುವ ದುರಾತ್ಮನಾದ ಧೇನುಕಾಸುರನೆಂಬ ದೈತ್ಯನು ಆ ಹಣ್ಣುಗಳನ್ನು ಬೇರೆ ಯಾರೂ ಮುಟ್ಟದಂತೆ ತಡೆದಿರುವನು. ॥22॥

(ಶ್ಲೋಕ-23)

ಮೂಲಮ್

ಸೋತಿವೀರ್ಯೋಸುರೋ ರಾಮ ಹೇ ಕೃಷ್ಣ ಖರರೂಪಧೃಕ್ ।
ಆತ್ಮತುಲ್ಯಬಲೈರನ್ಯೈರ್ಜ್ಞಾತಿಭಿರ್ಬಹುಭಿರ್ವೃತಃ ॥

ಅನುವಾದ

ಬಲರಾಮ-ಕೃಷ್ಣರೇ! ಆ ದೈತ್ಯನು ಕತ್ತೆಯ ರೂಪದಿಂದ ಅಲ್ಲೆ ಇರುವನು. ಅವನಾದರೋ ಮಹಾ ಬಲಶಾಲಿಯಾಗಿದ್ದು ಅವನೊಂದಿಗೆ ಇನ್ನೂ ಅನೇಕ ದೈತ್ಯರು ಬಲಶಾಲಿಯಾಗಿದ್ದು ಕತ್ತೆಗಳ ರೂಪದಿಂದಲೇ ಇದ್ದಾರೆ. ॥23॥

(ಶ್ಲೋಕ-24)

ಮೂಲಮ್

ತಸ್ಮಾತ್ಕೃತನರಾಹಾರಾದ್ಭೀತೈರ್ನೃಭಿರಮಿತ್ರಹನ್ ।
ನ ಸೇವ್ಯತೇ ಪಶುಗಣೈಃ ಪಕ್ಷಿಸಂಘೈರ್ವಿವರ್ಜಿತಮ್ ॥

ಅನುವಾದ

ಓ ಶತ್ರುಸೂದನನೇ! ಆ ದೈತ್ಯನು ಇಷ್ಟರವರೆಗೆ ಎಷ್ಟು ಜನರನ್ನು ತಿಂದು ಹಾಕಿರುವನೋ ತಿಳಿಯದು. ಈಗಂತೂ ಮರಣ ಭಯದಿಂದಾಗಿ ಯಾವ ಮನುಷ್ಯನೂ ಅಲ್ಲಿಗೆ ಹೋಗುವುದಿಲ್ಲ. ಮನುಷ್ಯರೇ ಅಲ್ಲ, ಪಶು-ಪಕ್ಷಿಗಳೂ ಕೂಡ ಆ ಕಾಡಿನ ಕಡೆಗೆ ಕಣ್ಣೆತ್ತಿಯೂ ನೋಡುವುದಿಲ್ಲ. ॥24॥

(ಶ್ಲೋಕ-25)

ಮೂಲಮ್

ವಿದ್ಯಂತೇಭುಕ್ತಪೂರ್ವಾಣಿ ಲಾನಿ ಸುರಭೀಣಿ ಚ ।
ಏಷ ವೈ ಸುರಭಿರ್ಗಂಧೋ ವಿಷೂಚೀನೋವಗೃಹ್ಯತೇ ॥

ಅನುವಾದ

ತಾಳೆಯ ಫಲಗಳಂತೂ ತುಂಬಾ ಸುಗಂಧಿತವಾಗಿವೆ. ಆದರೆ ನಾವು ಎಂದೂ ಅದನ್ನು ತಿಂದಿಲ್ಲ. ನೋಡಿ, ಸುತ್ತಲೂ ಆ ಹಣ್ಣುಗಳ ಮಂದ-ಮಂದ ಪರಿಮಳವು ಪಸರಿಸಿದೆ. ಸ್ವಲ್ಪ ಮನಸ್ಟಿಟ್ಟು ಗಮನಿಸಿದರೆ ಅದರ ಮಾಧುರ್ಯವನ್ನು ಅರಿಯಬಹುದು. ॥25॥

(ಶ್ಲೋಕ-26)

ಮೂಲಮ್

ಪ್ರಯಚ್ಛ ತಾನಿ ನಃ ಕೃಷ್ಣ ಗಂಧಲೋಭಿತಚೇತಸಾಮ್ ।
ವಾಂಛಾಸ್ತಿ ಮಹತೀ ರಾಮ ಗಮ್ಯತಾಂ ಯದಿ ರೋಚತೇ ॥

ಅನುವಾದ

ಶ್ರೀಕೃಷ್ಣ! ಅವುಗಳ ಸುಗಂಧದಿಂದ ನಮ್ಮ ಮನಸ್ಸು ಆಕರ್ಷಿತವಾಗಿದೆ ಹಾಗೂ ಅದನ್ನು ತಿನ್ನಬೇಕೆಂದು ಆಶಿಸುತ್ತಿದೆ. ನೀನು ಆ ಫಲಗಳನ್ನು ನಮಗೆ ತಿನ್ನಿಸು. ಬಲರಾಮ! ನಮಗೆ ಆ ಫಲಗಳ ಕುರಿತು ಬಹಳ ಉತ್ಕಂಠತೆ ಇದೆ. ನಿಮಗೆ ಉಚಿತವೆನಿಸಿದರೆ ಖಂಡಿತವಾಗಿ ಅಲ್ಲಿಗೆ ಹೋಗೋಣ. ॥26॥

(ಶ್ಲೋಕ-27)

ಮೂಲಮ್

ಏವಂ ಸುಹೃದ್ವಚಃ ಶ್ರುತ್ವಾ ಸುಹೃತ್ಪ್ರಿಯಚಿಕೀರ್ಷಯಾ ।
ಪ್ರಹಸ್ಯ ಜಗ್ಮತುರ್ಗೋಪೈರ್ವೃತೌ ತಾಲವನಂ ಪ್ರಭೂ ॥

ಅನುವಾದ

ತಮ್ಮ ಸ್ನೇಹಿತರು ಆಡಿದ ಮಾತನ್ನು ಕೇಳಿ ಭಗವಾನ್ ಶ್ರೀಕೃಷ್ಣ ಮತ್ತು ಬಲರಾಮರಿಬ್ಬರೂ ನಗುತ್ತಾ ಅವರನ್ನು ಸಂತೋಷಗೊಳಿಸಲಿಕ್ಕಾಗಿ ಅವರೊಂದಿಗೆ ತಾಳೆವನಕ್ಕೆ ಹೊರಟರು. ॥27॥

(ಶ್ಲೋಕ-28)

ಮೂಲಮ್

ಬಲಃ ಪ್ರವಿಶ್ಯ ಬಾಹುಭ್ಯಾಂ ತಾಲಾನ್ಸಂಪರಿಕಂಪಯನ್ ।
ಲಾನಿ ಪಾತಯಾಮಾಸ ಮತಂಗಜ ಇವೌಜಸಾ ॥

ಅನುವಾದ

ಅಲ್ಲಿಗೆ ಹೋದ ಮೇಲೆ ಬಲರಾಮನು ತನ್ನ ತೋಳುಗಳಿಂದ ತಾಳೆಮರವನ್ನು ಬಿಗಿದಪ್ಪಿ ಆನೆಮರಿಯಂತೆ ತಾಳೆಮರವನ್ನು ಜೋರಾಗಿ ಅಲ್ಲಾಡಿಸಿದನು. ನೂರಾರು ಹಣ್ಣುಗಳು ತೊಪತೊಪನೆ ಕೆಳಕ್ಕೆ ಬಿದ್ದವು. ॥28॥

(ಶ್ಲೋಕ-29)

ಮೂಲಮ್

ಲಾನಾಂ ಪತತಾಂ ಶಬ್ದಂ ನಿಶಮ್ಯಾಸುರರಾಸಭಃ ।
ಅಭ್ಯಧಾವತ್ ಕ್ಷಿತಿತಲಂ ಸನಗಂ ಪರಿಕಂಪಯನ್ ॥

ಅನುವಾದ

ಕತ್ತೆಯ ರೂಪದಲ್ಲಿದ್ದ ದೈತ್ಯನು ಹಣ್ಣುಗಳು ಬಿದ್ದ ಶಬ್ದವನ್ನು ಕೇಳಿದಾಗ ಅವನು ಪರ್ವತಗಳಿಂದ ಕೂಡಿದ ಪೃಥ್ವಿಯನ್ನು ನಡುಗಿಸುತ್ತಾ ಅವರೆಡೆಗೆ ಧಾವಿಸಿ ಬಂದನು. ॥29॥

(ಶ್ಲೋಕ-30)

ಮೂಲಮ್

ಸಮೇತ್ಯ ತರಸಾ ಪ್ರತ್ಯಗ್ದ್ವಾಭ್ಯಾಂ ಪದ್ಭ್ಯಾಂ ಬಲಂ ಬಲೀ ।
ನಿಹತ್ಯೋರಸಿ ಕಾಶಬ್ದಂ ಮುಂಚನ್ಪರ್ಯಸರತ್ಖಲಃ ॥

ಅನುವಾದ

ಅವನು ಮಹಾಬಲಶಾಲಿ ಯಾಗಿದ್ದನು. ತಾಳೆಯ ಮರವನ್ನು ಅಲ್ಲಾಡಿಸುತ್ತಿದ್ದ ಬಲರಾಮನ ಮುಂದೆ ಹಿಮ್ಮುಖವಾಗಿ ನಿಂತು ಹಿಂಗಾಲುಗಳಿಂದ ಅವನ ಎದೆಗೆ ಒದ್ದನು. ಅನಂತರ ಆ ದುಷ್ಟನು ಜೋರಾಗಿ ಕಿರುಚುತ್ತಾ ಹಿಂದಕ್ಕೆ ಸರಿದು ನಿಂತನು. ॥30॥

(ಶ್ಲೋಕ-31)

ಮೂಲಮ್

ಪುನರಾಸಾದ್ಯ ಸಂರಬ್ಧ ಉಪಕ್ರೋಷ್ಟಾ ಪರಾಕ್ ಸ್ಥಿತಃ ।
ಚರಣಾವಪರೌ ರಾಜನ್ಬಲಾಯ ಪ್ರಾಕ್ಷಿಪದ್ರುಷಾ ॥

ಅನುವಾದ

ರಾಜೇಂದ್ರ! ಆ ಕತ್ತೆಯು ಅತ್ಯಂತ ಕ್ರುದ್ಧವಾಗಿ ಪುನಃ ಕಿರುಚಿತ್ತಾ ಮತ್ತೆ ಬಲರಾಮನ ಬಳಿಗೆ ಬಂದು ಅವನೆಡೆಗೆ ಬೆನ್ನುಮಾಡಿ ಪುನಃ ತನ್ನ ಹಿಂಗಾಲಿನಿಂದ ಬಲರಾಮನಿಗೆ ಒದೆದನು. ॥31॥

(ಶ್ಲೋಕ-32)

ಮೂಲಮ್

ಸ ತಂ ಗೃಹೀತ್ವಾ ಪ್ರಪದೋರ್ಭ್ರಾಮಯಿತ್ವೈಕಪಾಣಿನಾ ।
ಚಿಕ್ಷೇಪ ತೃಣರಾಜಾಗ್ರೇ ಭ್ರಾಮಣತ್ಯಕ್ತ ಜೀವಿತಮ್ ॥

ಅನುವಾದ

ಬಲರಾಮನು ತನ್ನ ಒಂದೇ ಕೈಯಿಂದ ಅವನ ಎರಡೂ ಕಾಲುಗಳನ್ನು ಹಿಡಿದು ಗರ-ಗರನೆ ತಿರುಗಿಸಿ ತಾಳೆಯ ಮರದ ಮೇಲಕ್ಕೆ ಎಸೆದನು. ಹಾಗೆ ಗರ-ಗರನೆ ತಿರುಗಿಸುವಾಗಲೇ ರಾಕ್ಷಸನ ಪ್ರಾಣಪಕ್ಷಿ ಹಾರಿಹೋಗಿತ್ತು. ॥32॥

(ಶ್ಲೋಕ-33)

ಮೂಲಮ್

ತೇನಾಹತೋ ಮಹಾತಾಲೋ ವೇಪಮಾನೋ ಬೃಹಚ್ಛಿರಾಃ ।
ಪಾರ್ಶ್ವಸ್ಥಂ ಕಂಪಯನ್ಭಗ್ನಃ ಸ ಚಾನ್ಯಂ ಸೋಪಿ ಚಾಪರಮ್ ॥

ಅನುವಾದ

ತಾಳೆಯ ಮರದ ಮೇಲ್ಭಾಗವು ಗರಿಗಳಿಂದ ಅಗಲವಾಗಿತ್ತು. ದೈತ್ಯನು ಮರದ ಮೇಲೆ ಬೀಳುತ್ತಲೇ ಆ ತಾಳೆಮರವು ಉರುಳಿಬಿತ್ತು. ಅದರ ಜೊತೆಗೆ ಅದಕ್ಕೆ ತಾಕಿನಿಂತ ಅನೇಕ ತಾಳೆಮರಗಳೂ ಉರುಳಿ ಬಿದ್ದವು. ॥33॥

(ಶ್ಲೋಕ-34)

ಮೂಲಮ್

ಬಲಸ್ಯ ಲೀಲಯೋತ್ಸೃಷ್ಟಖರದೇಹಹತಾಹತಾಃ ।
ತಾಲಾಶ್ಚ ಕಂಪಿರೇ ಸರ್ವೇ ಮಹಾವಾತೇರಿತಾ ಇವ ॥

ಅನುವಾದ

ಬಲರಾಮನಿಗೆ ಇದೊಂದು ಲೀಲೆಯೇ ಆಗಿತ್ತು. ಆದರೆ ಅವನಿಂದ ಎಸೆಯಲ್ಪಟ್ಟ ಕತ್ತೆಯ ಶರೀರದ ಏಟಿ ನಿಂದ ಅಲ್ಲಿಯ ಎಲ್ಲ ಮರಗಳೂ ಬಿರುಗಾಳಿಗೆ ಸಿಲುಕಿದಂತೆ ನಡುಗಿ ಹೋದುವು. ॥34॥

(ಶ್ಲೋಕ-35)

ಮೂಲಮ್

ನೈತಚ್ಚಿತ್ರಂ ಭಗವತಿ ಹ್ಯನಂತೇ ಜಗದೀಶ್ವರೇ ।
ಓತಪ್ರೋತಮಿದಂ ಯಸ್ಮಿಂಸ್ತಂತುಷ್ವಂಗ ಯಥಾ ಪಟಃ ॥

ಅನುವಾದ

ಭಗವಾನ್ ಬಲರಾಮನು ಸಾಕ್ಷಾತ್ ಜಗದೀಶ್ವರನೇ ಆಗಿದ್ದಾನೆ. ಅವನಲ್ಲಿ ಈ ಜಗತ್ತು ಬಟ್ಟೆಯಲ್ಲಿ ದಾರವು ಹಾಸುಹೊಕ್ಕಾಗಿರುವಂತೆ ಹೆಣೆದುಕೊಂಡಿದೆ. ಹಾಗಿರುವಾಗ ಅವನ ಕುರಿತು ಇದರಲ್ಲಿ ಆಶ್ಚರ್ಯವೇನಿದೆ. ॥35॥

(ಶ್ಲೋಕ-36)

ಮೂಲಮ್

ತತಃ ಕೃಷ್ಣಂ ಚ ರಾಮಂ ಚ ಜ್ಞಾತಯೋ ಧೇನುಕಸ್ಯ ಯೇ ।
ಕ್ರೋಷ್ಟಾರೋಭ್ಯದ್ರವನ್ಸರ್ವೇ ಸಂರಬ್ಧಾ ಹತಬಾಂಧವಾಃ ॥

ಅನುವಾದ

ಆ ಸಮಯದಲ್ಲಿ ಧೇನುಕಾಸುರನ ಜಾತಿ-ಬಾಂಧವರೆಲ್ಲರೂ ಅತ್ಯಂತ ಕುಪಿತರಾಗಿ ಗಟ್ಟಿಯಾಗಿ ಕಿರುಚಿಕೊಳ್ಳುತ್ತಾ ಬಲರಾಮ ಕೃಷ್ಣರನ್ನು ರಭಸದಿಂದ ಆಕ್ರಮಿಸಿದರು. ॥36॥

(ಶ್ಲೋಕ-37)

ಮೂಲಮ್

ತಾಂಸ್ತಾನಾಪತತಃ ಕೃಷ್ಣೋ ರಾಮಶ್ಚ ನೃಪ ಲೀಲಯಾ ।
ಗೃಹೀತಪಶ್ಚಾಚ್ಚರಣಾನ್ಪ್ರಾಹಿಣೋತ್ತೃಣರಾಜಸು ॥

ಅನುವಾದ

ರಾಜನೇ! ತಮ್ಮ ಬಳಿಗೆ ಬಂದ ಕತ್ತೆಯ ರೂಪದ ರಾಕ್ಷಸರೆಲ್ಲರನ್ನೂ ರಾಮ-ಕೃಷ್ಣರು ಅವುಗಳ ಹಿಂಗಾಲುಗಳನ್ನು ಹಿಡಿದು ಒಬ್ಬೊಬ್ಬರನ್ನಾಗಿ ಗರ-ಗರನೆ ತಿರುಗಿಸುತ್ತಾ ಲೀಲಾಜಾಲವಾಗಿ ತಾಳೆಮರದ ಮೇಲಕ್ಕೆ ಎಸೆಯ ಗೊಡಗಿದರು. ॥37॥

(ಶ್ಲೋಕ-38)

ಮೂಲಮ್

ಲಪ್ರಕರಸಂಕೀರ್ಣಂ ದೈತ್ಯದೇಹೈರ್ಗತಾಸುಭಿಃ ।
ರರಾಜ ಭೂಃ ಸತಾಲಾಗ್ರೈರ್ಘನೈರಿವ ನಭಸ್ತಲಮ್ ॥

ಅನುವಾದ

ಆಗ ಅಲ್ಲಿಯ ಭೂಮಿಯು ತಾಳೆ ಹಣ್ಣುಗಳಿಂದ, ಮುರಿದು ಬಿದ್ದ ಮರಗಳಿಂದ ಹಾಗೂ ದೈತ್ಯರ ಪ್ರಾಣಹೀನ ಶರೀರಗಳಿಂದ-ಮೋಡಗಳಿಂದ ಆಕಾಶವು ತುಂಬಿ ಹೋಗಿರುವಂತೆ ಮುಚ್ಚಿ ಹೋಗಿ ಶೋಭಿಸುತ್ತಿತ್ತು. ॥38॥

ಮೂಲಮ್

(ಶ್ಲೋಕ-39)
ತಯೋಸ್ತತ್ಸುಮಹತ್ಕರ್ಮ ನಿಶಾಮ್ಯ ವಿಬುಧಾದಯಃ ।
ಮುಮುಚುಃ ಪುಷ್ಪವರ್ಷಾಣಿ ಚಕ್ರುರ್ವಾದ್ಯಾನಿ ತುಷ್ಟುವುಃ ॥

ಅನುವಾದ

ಬಲರಾಮ-ಶ್ರೀಕೃಷ್ಣರ ಈ ಮಂಗಲಮಯ ಲೀಲೆಯನ್ನು ನೋಡಿ ದೇವತೆಗಳು ಅವರ ಮೇಲೆ ಪುಷ್ಪವೃಷ್ಟಿಗರೆದರು. ವಾದ್ಯಗಳನ್ನು ನುಡಿಸುತ್ತಾ ಸ್ತುತಿಸತೊಡಗಿದರು. ॥39॥

(ಶ್ಲೋಕ-40)

ಮೂಲಮ್

ಅಥ ತಾಲಲಾನ್ಯಾದನ್ಮನುಷ್ಯಾ ಗತಸಾಧ್ವಸಾಃ ।
ತೃಣಂ ಚ ಪಶವಶ್ಚೇರುರ್ಹತಧೇನುಕಕಾನನೇ ॥

ಅನುವಾದ

ಧೇನುಕಾಸುರನು ಸತ್ತ ದಿನದಿಂದ ಜನರು ಧೈರ್ಯವಾಗಿ ಆ ವನಕ್ಕೆ ಹೋಗಿ ತಾಳೆ ಫಲಗಳನ್ನು ತಿನ್ನತೊಡಗಿದರು. ಪಶುಗಳೂ ಸ್ವಚ್ಛಂದವಾಗಿ ಅಲ್ಲಿ ಹುಲ್ಲು ಮೇಯತೊಡಗಿದವು. ॥40॥

(ಶ್ಲೋಕ-41)

ಮೂಲಮ್

ಕೃಷ್ಣಃ ಕಮಲಪತ್ರಾಕ್ಷಃ ಪುಣ್ಯಶ್ರವಣಕೀರ್ತನಃ ।
ಸ್ತೂಯಮಾನೋನುಗೈರ್ಗೋಪೈಃ ಸಾಗ್ರಜೋ ವ್ರಜಮಾವ್ರಜತ್ ॥

ಅನುವಾದ

ಇದಾದ ಬಳಿಕ ಕಮಲದಳ ಲೋಚನನಾದ ಭಗವಾನ್ ಶ್ರೀಕೃಷ್ಣನು ಅಣ್ಣನಾದ ಬಲರಾಮನೊಂದಿಗೆ ವ್ರಜಕ್ಕೆ ಆಗಮಿಸಿದನು. ಆಗ ಅವನ ಸಂಗಡಿಗರಾದ ಗೋಪಬಾಲಕರು ಭಗವಂತನ ಲೀಲೆಗಳ ಶ್ರವಣ-ಕೀರ್ತನವೇ ಎಲ್ಲಕ್ಕೂ ಮಿಗಿಲಾದ ಪವಿತ್ರವಾಗಿ ಇರುವುದರಿಂದ ಆ ಕೀರ್ತನೆಗಳಿಂದ ಸ್ತುತಿಸುತ್ತಾ ಹಿಂದೆ-ಹಿಂದೆಯೇ ಬರುತ್ತಿದ್ದರು. ॥41॥

(ಶ್ಲೋಕ-42)

ಮೂಲಮ್

ತಂ ಗೋರಜಶ್ಛುರಿತಕುಂತಲಬದ್ಧಬರ್ಹ-
ವನ್ಯಪ್ರಸೂನರುಚಿರೇಕ್ಷಣಚಾರುಹಾಸಮ್ ।
ವೇಣುಂ ಕ್ವಣಂತಮನುಗೈರನುಗೀತಕೀರ್ತಿಂ
ಗೋಪ್ಯೋ ದಿದೃಕ್ಷಿತದೃಶೋಭ್ಯಗಮನ್ಸಮೇತಾಃ ॥

ಅನುವಾದ

ಆ ಸಮಯದಲ್ಲಿ ಶ್ರೀಕೃಷ್ಣನ ಗುಂಗುರು ಕೂದಲುಗಳಲ್ಲಿ ಹಸುಗಳ ಗೊರಸಿನಿಂದ ಎದ್ದ ಧೂಳು ತುಂಬಿತ್ತು. ತಲೆಯಲ್ಲಿ ನವಿಲುಗರಿಗಳ ಮುಕುಟವಿತ್ತು. ಕೂದಲುಗಳಲ್ಲಿ ಅಂದವಾದ ವನಪುಷ್ಪಗಳು ಮುಡಿದಿದ್ದುವು. ಅವನ ಕಡೆಗಣ್ಣ ನೋಟವೂ, ಹುಸಿನಗೆಯೂ ಸುಮಧುರವಾಗಿತ್ತು. ಅವನು ಕರ್ಣಾನಂದಕರವಾಗಿ ಮುರಳಿಯನ್ನು ನುಡಿಸುತ್ತಿದ್ದನು. ಜೊತೆಗೆ ಗೊಲ್ಲಬಾಲಕರು ಅವನ ಕೀರ್ತಿಯನ್ನು ಹಾಡುತ್ತಿದ್ದರು. ಕೊಳಲಿನ ಧ್ವನಿಯನ್ನು ಕೇಳಿದ ಅನೇಕ ಗೋಪಿಯರು ಒಟ್ಟಾಗಿ ಹಟ್ಟಿಯಿಂದ ಹೊರಬಂದು ಅವನನ್ನೇ ದಿಟ್ಟಿಸಿ ನೋಡುತ್ತಿದ್ದರು. ಅವರ ಕಣ್ಣುಗಳು ಎಷ್ಟೋ ಹೊತ್ತಿನಿಂದ ಅವನ ದರ್ಶನಕ್ಕಾಗಿ ಕಾತರವಾಗಿ ಇದ್ದವು. ॥42॥

(ಶ್ಲೋಕ-43)

ಮೂಲಮ್

ಪೀತ್ವಾ ಮುಕುಂದಮುಖಸಾರಘಮಕ್ಷಿಭೃಂಗೈ-
ಸ್ತಾಪಂ ಜಹುರ್ವಿರಹಜಂ ವ್ರಜಯೋಷಿತೋಹ್ನಿ ।
ತತ್ಸತ್ಕೃತಿಂ ಸಮಧಿಗಮ್ಯ ವಿವೇಶ ಗೋಷ್ಠಂ
ಸವ್ರೀಡಹಾಸವಿನಯಂ ಯದಪಾಂಗಮೋಕ್ಷಮ್ ॥

ಅನುವಾದ

ಗೋಪಿಯರು ತಮ್ಮ ಕಣ್ಣುಗಳೆಂಬ ಭ್ರಮರಗಳಿಂದ ಭಗವಂತನ ಮುಖಾರವಿಂದದ ಮಕರಂದ ರಸವನ್ನು ಪಾನ ಮಾಡಿ ಇಡೀ ದಿನದ ಅಗಲುವಿಕೆಯ ತಾಪವನ್ನು ತಣಿಸಿಕೊಂಡರು. ಭಗವಂತನೂ ಕೂಡ ಅವರ ಲಜ್ಜೆಯಿಂದ ಕೂಡಿದ ಮುಗುಳ್ನಗೆಯನ್ನು, ಪ್ರೇಮಪೂರ್ಣ ಓರೆನೋಟಗಳ ಸತ್ಕಾರವನ್ನು ಸ್ವೀಕರಿಸುತ್ತಾ ವ್ರಜವನ್ನು ಪ್ರವೇಶಿಸಿದನು. ॥43॥

(ಶ್ಲೋಕ-44)

ಮೂಲಮ್

ತಯೋರ್ಯಶೋದಾರೋಹಿಣ್ಯೌ ಪುತ್ರಯೋಃ ಪುತ್ರವತ್ಸಲೇ ।
ಯಥಾಕಾಮಂ ಯಥಾಕಾಲಂ ವ್ಯಧತ್ತಾಂ ಪರಮಾಶಿಷಃ ॥

ಅನುವಾದ

ಅತ್ತ ತಾಯಿ ಯಶೋದೆಯ ಮತ್ತು ರೋಹಿಣಿಯ ಹೃದಯಗಳು ವಾತ್ಸಲ್ಯಭಾವದಿಂದ ಉಕ್ಕಿಹರಿಯುತ್ತಿತ್ತು. ಶ್ಯಾಮ ಮತ್ತು ರಾಮರು ಮನೆಗೆ ಬರುತ್ತಲೇ ಅವರು ಅವರ ಇಚ್ಛೆಗನುಸಾರ ಹಾಗೂ ಸಮಯಕ್ಕನುಸಾರ ಮೊದಲೇ ಸಿದ್ಧಪಡಿಸಿದ್ದ ಭಕ್ಷ್ಯ ಭೋಜ್ಯಗಳನ್ನು ಮೃಷ್ಟಾನ್ನವನ್ನೂ ಅವರಿಗೆ ತಿನ್ನಿಸಿದರು. ॥44॥

(ಶ್ಲೋಕ-45)

ಮೂಲಮ್

ಗತಾಧ್ವಾನಶ್ರವೌ ತತ್ರ ಮಜ್ಜನೋನ್ಮರ್ದನಾದಿಭಿಃ ।
ನೀವೀಂ ವಸಿತ್ವಾ ರುಚಿರಾಂ ದಿವ್ಯಸ್ರಗ್ಗಂಧಮಂಡಿತೌ ॥

ಅನುವಾದ

ತಾಯಂದಿರು ಅವರಿಗೆ ಎಣ್ಣೆಹಚ್ಚಿ ಸ್ನಾನಮಾಡಿಸಿದರು. ಅದರಿಂದ ಅವರ ಇಡೀ ದಿನದ ಬಳಲಿಕೆಯು ದೂರವಾಯಿತು. ಮತ್ತೆ ಅವರಿಗೆ ಸುಂದರವಾದ ವಸ್ತ್ರಗಳನ್ನು ತೊಡಿಸಿ ದಿವ್ಯ ಪುಷ್ಪಮಾಲಿಕೆಗಳಿಂದ ಸಿಂಗರಿಸಿ, ಚಂದನವನ್ನು ಪೂಸಿದರು. ॥45॥

(ಶ್ಲೋಕ-46)

ಮೂಲಮ್

ಜನನ್ಯುಪಹೃತಂ ಪ್ರಾಶ್ಯ ಸ್ವಾದ್ವನ್ನಮುಪಲಾಲಿತೌ ।
ಸಂವಿಶ್ಯ ವರಶಯ್ಯಾಯಾಂ ಸುಖಂ ಸುಷುಪತುರ್ವ್ರಜೇ ॥

ಅನುವಾದ

ಬಳಿಕ ಸೋದರರಿಬ್ಬರೂ ತಾಯಂದಿರು ಬಡಿಸಿದ ಸ್ವಾದಿಷ್ಟವಾದ ಭೋಜನವನ್ನು ಮಾಡಿದರು. ಅನಂತರ ಅವರನ್ನು ಮುದ್ದಿಸುತ್ತಾ ಯಶೋದೆ ಮತ್ತು ರೋಹಿಣಿಯರು ಸುಂದರವಾದ ಮೃದುವಾದ ಶಯ್ಯೆಯಲ್ಲಿ ಮಲಗಿಸಿದರು. ರಾಮ-ಕೃಷ್ಣರು ಸುಖವಾಗಿ ನಿದ್ರಿಸಿದರು. ॥46॥

(ಶ್ಲೋಕ-47)

ಮೂಲಮ್

ಏವಂ ಸ ಭಗವಾನ್ಕೃಷ್ಣೋ ವೃಂದಾವನಚರಃ ಕ್ವಚಿತ್ ।
ಯಯೌ ರಾಮಮೃತೇ ರಾಜನ್ಕಾಲಿಂದೀಂ ಸಖಿಭಿರ್ವೃತಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೀಗೆ ವೃಂದಾವನದಲ್ಲಿ ಅನೇಕ ಲೀಲೆಗಳನ್ನು ನಡೆಸಿದನು. ಒಂದು ದಿನ ಅವನು ತನ್ನ ಸ್ನೇಹಿತರೊಂದಿಗೆ ಯಮುನಾತೀರಕ್ಕೆ ಹೋದನು. ರಾಜನೇ! ಆ ದಿನ ಬಲರಾಮನು ಅವನೊಂದಿಗೆ ಹೋಗಿರಲಿಲ್ಲ. ॥47॥

(ಶ್ಲೋಕ-48)

ಮೂಲಮ್

ಅಥ ಗಾವಶ್ಚ ಗೋಪಾಶ್ಚ ನಿದಾಘಾತಪಪೀಡಿತಾಃ ।
ದುಷ್ಟಂ ಜಲಂ ಪಪುಸ್ತಸ್ಯಾಸ್ತೃಷಾರ್ತಾ ವಿಷದೂಷಿತಮ್ ॥

ಅನುವಾದ

ಆ ಸಮಯದಲ್ಲಿ ಗೋ-ಗೋಪಾಲಕರು ಬೇಸಿಗೆಯ ಬಿಸಿಲಿನಿಂದ ಬಾಯಾರಿದ್ದು, ಅವರ ಗಂಟಲು ಒಣಗಿ ಹೋಗಿತ್ತು. ಇದರಿಂದಾಗಿ ಅವರು ಯಮುನಾನದಿಯ ವಿಷಮಿಶ್ರಿತ ನೀರನ್ನು ಯಥೇಚ್ಛವಾಗಿ ಕುಡಿದರು. ॥48॥

(ಶ್ಲೋಕ-49)

ಮೂಲಮ್

ವಿಷಾಂಭಸ್ತದುಪಸ್ಪೃಶ್ಯ ದೈವೋಪಹತಚೇತಸಃ ।
ನಿಪೇತುರ್ವ್ಯಸವಃ ಸರ್ವೇ ಸಲಿಲಾಂತೇ ಕುರೂದ್ವಹ ॥

ಅನುವಾದ

ಪರೀಕ್ಷಿತನೇ! ದುರದೃಷ್ಟವಶಾತ್ ಈ ವಿಷಯವು ಅವರಿಗೆ ತಿಳಿದಿರಲಿಲ್ಲ. ಆ ವಿಷಮಿಶ್ರಿತ ನೀರನ್ನು ಕುಡಿಯುತ್ತಲೇ ಎಲ್ಲ ಗೋವುಗಳು, ಗೋಪಾಲಕರು ಗತಪ್ರಾಣರಾಗಿ ಯಮುನಾತೀರದಲ್ಲಿ ಬಿದ್ದುಬಿಟ್ಟರು. ॥49॥

(ಶ್ಲೋಕ-50)

ಮೂಲಮ್

ವೀಕ್ಷ್ಯ ತಾನ್ವೈ ತಥಾಭೂತಾನ್ಕೃಷ್ಣೋ ಯೋಗೇಶ್ವರೇಶ್ವರಃ ।
ಈಕ್ಷಯಾಮೃತವರ್ಷಿಣ್ಯಾ ಸ್ವನಾಥಾನ್ಸಮಜೀವಯತ್ ॥

ಅನುವಾದ

ಅವರ ಇಂತಹ ಸ್ಥಿತಿಯನ್ನು ನೋಡಿದ ಯೋಗೇಶ್ವರರಿಗೂ ಈಶ್ವರನಾದ ಭಗವಾನ್ ಶ್ರೀಕೃಷ್ಣನು ತನ್ನ ಅಮೃತವನ್ನು ಸುರಿಸುವ ಕೃಪಾದೃಷ್ಟಿಯಿಂದ ಅವರನ್ನು ಬದುಕಿಸಿದನು. ಅವರಿಗೆ ಸ್ವಾಮಿಯೂ ಸರ್ವಸ್ವವೂ ಏಕಮಾತ್ರ ಶ್ರೀಕೃಷ್ಣನೇ ಆಗಿದ್ದನು. ॥50॥

(ಶ್ಲೋಕ-51)

ಮೂಲಮ್

ತೇ ಸಂಪ್ರತೀತಸ್ಮೃತಯಃ ಸಮುತ್ಥಾಯ ಜಲಾಂತಿಕಾತ್ ।
ಆಸನ್ಸುವಿಸ್ಮಿತಾಃ ಸರ್ವೇ ವೀಕ್ಷಮಾಣಾಃ ಪರಸ್ಪರಮ್ ॥

ಅನುವಾದ

ಪರೀಕ್ಷಿತನೇ! ಚೇತರಿಸಿಕೊಂಡು ಅವರೆಲ್ಲರೂ ಯಮುನಾ ತೀರದಲ್ಲಿ ಎದ್ದುನಿಂತು ಆಶ್ಚರ್ಯಚಕಿತರಾಗಿ ಒಬ್ಬರು ಮತ್ತೊಬ್ಬರನ್ನು ನೋಡತೊಡಗಿದರು. ॥51॥

(ಶ್ಲೋಕ-52)

ಮೂಲಮ್

ಅನ್ವಮಂಸತ ತದ್ರಾಜನ್ಗೋವಿಂದಾನುಗ್ರಹೇಕ್ಷಿತಮ್ ।
ಪೀತ್ವಾ ವಿಷಂ ಪರೇತಸ್ಯ ಪುನರುತ್ಥಾನಮಾತ್ಮನಃ ॥

ಅನುವಾದ

ರಾಜೇಂದ್ರ! ಕೊನೆಗೆ ‘ನಾವೆಲ್ಲರೂ ವಿಷಯುಕ್ತ ನೀರನ್ನು ಕುಡಿದು ಸತ್ತುಹೋಗಿದ್ದೇವು. ಆದರೆ ನಮ್ಮ ಶ್ರೀಕೃಷ್ಣನೇ ತನ್ನ ಅನುಗ್ರಹ ತುಂಬಿದ ದೃಷ್ಟಿಯಿಂದ ನಮ್ಮನ್ನು ಪುನಃ ಬದುಕಿಸಿದನು’ ಎಂದು ಅವರೆಲ್ಲರೂ ನಿಶ್ಚಯಿಸಿಕೊಂಡರು. ॥52॥

ಅನುವಾದ (ಸಮಾಪ್ತಿಃ)

ಹದಿನೈದನೆಯ ಅಧ್ಯಾಯವು ಮುಗಿಯಿತು. ॥15॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ಧೇನುಕವಧೋ ನಾಮ ಪಂಚದಶೋಧ್ಯಾಯಃ ॥15॥