[ಹದಿಮೂರನೆಯ ಅಧ್ಯಾಯ]
ಭಾಗಸೂಚನಾ
ಬ್ರಹ್ಮದೇವರ ಮೋಹ ಮತ್ತು ಅದರ ನಿರಸನ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಸಾಧು ಪೃಷ್ಟಂ ಮಹಾಭಾಗ ತ್ವಯಾ ಭಾಗವತೋತ್ತಮ ।
ಯನ್ನೂತನಯಸೀಶಸ್ಯ ಶೃಣ್ವನ್ನಪಿ ಕಥಾಂ ಮುಹುಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಮಹಾಭಾಗ್ಯಶಾಲಿಯೇ! ಭಗವದ್ಭಕ್ತರಲ್ಲಿ ಶ್ರೇಷ್ಠನಾದವನೇ! ನೀನು ಒಳ್ಳೆಯ ಪ್ರಶ್ನೆಯನ್ನೇ ಕೇಳಿರುವೆ. ಶ್ರೀಕೃಷ್ಣನ ಲೀಲಾಕಥೆಗಳನ್ನು ಬಾರಿ-ಬಾರಿಗೂ ಕೇಳುತ್ತಿದ್ದರೂ, ನೀನು ಕೇಳುತ್ತಿರುವ ಪ್ರಶ್ನೆಗಳ ಮೂಲಕ ಅವನ್ನು ಇನ್ನೂ ಸರಸವಾಗಿ-ನೂತನವಾಗಿ ಕೇಳಲು ಆಶಿಸುತ್ತಿರುವೆಯಲ್ಲ! ॥1॥
(ಶ್ಲೋಕ-2)
ಮೂಲಮ್
ಸತಾಮಯಂ ಸಾರಭೃತಾಂ ನಿಸರ್ಗೋ
ಯದರ್ಥವಾಣೀಶ್ರುತಿಚೇತಸಾಮಪಿ ।
ಪ್ರತಿಕ್ಷಣಂ ನವ್ಯವದಚ್ಯುತಸ್ಯ ಯತ್
ಸಿಯಾ ವಿಟಾನಾಮಿವ ಸಾಧು ವಾರ್ತಾ ॥
ಅನುವಾದ
ಕಾಮುಕರಾದ ವಿಟ ಪುರುಷರಿಗೆ ಸ್ತ್ರೀಯರ ವಿಷಯಕವಾದ ಚರ್ಚೆಯಲ್ಲಿ ಹೊಸ-ಹೊಸ ರಸವು ದೊರೆಯುವಂತೆ, ಸತ್ಪುರುಷರ ವಾಣಿ, ಕಿವಿ ಮತ್ತು ಹೃದಯಗಳು ಭಗವಂತನ ಲೀಲೆಗಳನ್ನೇ ಗಾನಮಾಡುವುದು, ಶ್ರವಣಿಸುವುದು ಚಿಂತಿಸುವುದರಲ್ಲೆ ತೊಡಗಿರುತ್ತವೆ. ಅವರು ಪ್ರತಿಕ್ಷಣವು ಭಗವಂತನ ಲೀಲೆಗಳನ್ನು ಅಪೂರ್ವ ರಸಮಯ ಹಾಗೂ ನಿತ್ಯನೂತನವಾಗಿ ಅನುಭವಿಸುತ್ತ ಇರುತ್ತಾರೆ. ಇದು ಅವರ ಸ್ವಭಾವವೇ ಆಗಿದೆ. ॥2॥
(ಶ್ಲೋಕ-3)
ಮೂಲಮ್
ಶೃಣುಷ್ವಾವಹಿತೋ ರಾಜನ್ನಪಿ ಗುಹ್ಯಂ ವದಾಮಿ ತೇ ।
ಬ್ರೂಯುಃ ಸ್ನಿಗ್ಧಸ್ಯ ಶಿಷ್ಯಸ್ಯ ಗುರವೋ ಗುಹ್ಯಮಪ್ಯುತ ॥
ಅನುವಾದ
ಪರೀಕ್ಷಿತನೇ! ನೀನು ಏಕಾಗ್ರಚಿತ್ತನಾಗಿ ಕೇಳು. ಭಗವಂತನ ಈ ಲೀಲೆಯು ಅತ್ಯಂತ ರಹಸ್ಯಮಯವಾಗಿದ್ದರೂ ಕೂಡ ನಾನು ನಿನಗೆ ಹೇಳುತ್ತೇನೆ. ದಯಾಳುಗಳಾದ ಆಚಾರ್ಯರು ತಮ್ಮ ಪ್ರಿಯ ಶಿಷ್ಯನಿಗೆ ರಹಸ್ಯವಿಷಯವನ್ನಾದರೂ ಹೇಳುವಂತೆಯೇ ನಾನು ಎಲ್ಲವನ್ನು ಹೇಳುವೆನು. ॥3॥
(ಶ್ಲೋಕ-4)
ಮೂಲಮ್
ತಥಾಘವದನಾನ್ಮೃತ್ಯೋ ರಕ್ಷಿತ್ವಾ ವತ್ಸಪಾಲಕಾನ್ ।
ಸರಿತ್ಪುಲಿನಮಾನೀಯ ಭಗವಾನಿದಮಬ್ರವೀತ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ತನ್ನ ಸಂಗಡಿಗರಾದ ಗೋಪ ಬಾಲಕರನ್ನು ಮೃತ್ಯುರೂಪೀ ಅಘಾಸುರನ ಮುಖದಿಂದ ರಕ್ಷಿಸಿದನೆಂಬುದನ್ನು ನಿನಗೆ ಹೇಳಿದ್ದನಲ್ಲವೇ! ಅನಂತರ ಶ್ರೀಕೃಷ್ಣನು ಅವರನ್ನು ಯಮುನಾನದಿಯ ತೀರದ ಮರಳ ದಿಣ್ಣೆಗೆ ಕರೆದುಕೊಂಡು ಬಂದು ತನ್ನ ಮಿತ್ರರಿಗೆ ಹೇಳಿದನು. ॥4॥
(ಶ್ಲೋಕ-5)
ಮೂಲಮ್
ಅಹೋತಿರಮ್ಯಂ ಪುಲಿನಂ ವಯಸ್ಯಾಃ
ಸ್ವಕೇಲಿಸಂಪನ್ಮೃದುಲಾಚ್ಛವಾಲುಕಮ್ ।
ಸ್ಫುಟತ್ಸರೋಗಂಧಹೃತಾಲಿಪತ್ರಿಕ-
ಧ್ವನಿ ಪ್ರತಿಧ್ವಾನಲಸದ್ದ್ರುಮಾಕುಲಮ್ ॥
ಅನುವಾದ
ಪ್ರಿಯಮಿತ್ರರೇ! ಯಮುನೆಯ ಈ ಮರಳದಿಣ್ಣೆಯು ಅತ್ಯಂತ ರಮಣೀಯವಾಗಿದೆ. ನೋಡಿರಲ್ಲ! ಇಲ್ಲಿಯ ಮರಳು ಕೋಮಲವಾಗಿ, ಸ್ವಚ್ಛವಾಗಿದೆ. ನಮಗೆ ಆಟವಾಡಲು ಎಲ್ಲ ಆಟದ ಸಾಮಗ್ರಿಗಳು ಇಲ್ಲಿ ಸಿಗುತ್ತವೆ. ಅಲ್ಲಿ ನೋಡಿರಿ! ಒಂದು ಕಡೆ ಬಣ್ಣ-ಬಣ್ಣದ ಕಮಲಗಳು ಅರಳಿದ್ದು, ಅದರ ಸುಗಂಧಕ್ಕೆ ಆಕರ್ಷಿತವಾದ ದುಂಬಿಗಳು ಸುತ್ತಲೂ ಝೇಂಕರಿಸುತ್ತಿವೆ. ಇನ್ನೊಂದೆಡೆ ಸುಂದರವಾದ ಹಕ್ಕಿಗಳು ಮಧುರವಾಗಿ ಕಲ-ಕಲ ನಿನಾದ ಮಾಡುತ್ತಿವೆ. ಅವುಗಳ ಪ್ರತಿಧ್ವನಿಯಿಂದ ಸುಶೋಭಿತವಾದ ವೃಕ್ಷಗಳು ಈ ಸ್ಥಳದ ಶೋಭೆಯನ್ನು ಇನ್ನೂ ಹೆಚ್ಚಿಸಿವೆ. ॥5॥
(ಶ್ಲೋಕ-6)
ಮೂಲಮ್
ಅತ್ರ ಭೋಕ್ತವ್ಯಮಸ್ಮಾಭಿರ್ದಿವಾ ರೂಢಂ ಕ್ಷುಧಾರ್ದಿತಾಃ ।
ವತ್ಸಾಃ ಸಮೀಪೇಪಃ ಪೀತ್ವಾ ಚರಂತು ಶನಕೈಸ್ತೃಣಮ್ ॥
ಅನುವಾದ
ರಮ್ಯವಾದ ಈ ಸ್ಥಳದಲ್ಲಿ ನಾವೆಲ್ಲರೂ ಊಟಮಾಡೋಣ. ಹೊತ್ತು ಮೀರಿದ್ದು ನಾವೆಲ್ಲರೂ ಬಹಳವಾಗಿ ಹಸಿದಿದ್ದೇವೆ. ಕರುಗಳು ನೀರು ಕುಡಿದು ಇಲ್ಲಿಯೆ ಸಮೀಪದಲ್ಲೇ ಗರಿಕೆ ಹುಲ್ಲನ್ನು ಸಾವಧಾನವಾಗಿ ಮೇಯುತ್ತಿರಲಿ. ॥6॥
(ಶ್ಲೋಕ-7)
ಮೂಲಮ್
ತಥೇತಿ ಪಾಯಯಿತ್ವಾರ್ಭಾ ವತ್ಸಾನಾರುಧ್ಯ ಶಾದ್ವಲೇ ।
ಮುಕ್ತ್ವಾ ಶಿಕ್ಯಾನಿ ಬುಭುಜುಃ ಸಮಂ ಭಗವತಾ ಮುದಾ ॥
ಅನುವಾದ
ಗೋಪಬಾಲಕರೆಲ್ಲರೂ ‘ಹಾಗೆಯೇ ಆಗಲೀ’ ಎಂದು ಏಕಕಂಠದಿಂದ ಹೇಳುತ್ತಾ, ಕರುಗಳಿಗೆ ನೀರು ಕುಡಿಸಿ ಹಚ್ಚ ಹಸಿರಾಗಿದ್ದ ಹುಲ್ಲಿರುವಲ್ಲಿ ಮೇಯಲು ಬಿಟ್ಟರು. ತಾವು ತಂದಿದ್ದ ಬುತ್ತಿಗಳೆಲ್ಲವನ್ನು ಬಿಚ್ಚಿ ಶ್ರೀಕೃಷ್ಣನೊಡನೆ ಪರಮಾನಂದದಿಂದ ಊಟಮಾಡಲು ಪ್ರಾರಂಭಿಸಿದರು. ॥7॥
(ಶ್ಲೋಕ-8)
ಮೂಲಮ್
ಕೃಷ್ಣಸ್ಯ ವಿಶ್ವಕ್ಪುರುರಾಜಿಮಂಡಲೈ-
ರಭ್ಯಾನನಾಃ ುಲ್ಲದೃಶೋ ವ್ರಜಾರ್ಭಕಾಃ ।
ಸಹೋಪವಿಷ್ಟಾ ವಿಪಿನೇ ವಿರೇಜು-
ಶ್ಛದಾ ಯಥಾಂಭೋರುಹಕರ್ಣಿಕಾಯಾಃ ॥
ಅನುವಾದ
ಗೋಪಬಾಲಕರ ಮಧ್ಯದಲ್ಲಿ ಭಗವಾನ್ ಶ್ರೀಕೃಷ್ಣನು ಕುಳಿತಿದ್ದನು. ಗೋಪಬಾಲಕರು ಶ್ರೀಕೃಷ್ಣನ ಸುತ್ತಲೂ ಮಂಡಲಾಕಾರವಾಗಿ ಕುಳಿತಿದ್ದರು. ಎಲ್ಲರ ಮುಖಗಳೂ ಶ್ರೀಕೃಷ್ಣನ ಕಡೆಗೆ ಇದ್ದು, ಎಲ್ಲರ ಕಣ್ಣುಗಳು ಆನಂದದಿಂದ ವಿಕಸಿತವಾಗಿದ್ದವು. ವನ ಭೋಜನದ ಸಮಯ ಶ್ರೀಕೃಷ್ಣನೊಂದಿಗೆ ಕುಳಿತಿರುವ ಗೋಪಬಾಲಕರು ಕಮಲದ ಕರ್ಣಿಕೆಯ ಸುತ್ತಲು ಇರುವ ಎಸಳುಗಳಂತೆ ವಿರಾಜಿಸುತ್ತಿದ್ದರು.॥8॥
(ಶ್ಲೋಕ-9)
ಮೂಲಮ್
ಕೇಚಿತ್ಪುಷ್ಪೈರ್ದಲೈಃ ಕೇಚಿತ್ಪಲ್ಲವೈರಂಕುರೈಃ ಲೈಃ ।
ಶಿಗ್ಭಿಸ್ತ್ವಗ್ಭಿರ್ದೃಷದ್ಭಿಶ್ಚ ಬುಭುಜುಃ ಕೃತಭಾಜನಾಃ ॥
ಅನುವಾದ
ಕೆಲವರು ಭೋಜನ ಮಾಡಲು ಅಗಲವಾದ ಹೂವುಗಳಿಂದಲೆ ತಟ್ಟೆಯನ್ನು ಮಾಡಿಕೊಂಡರೆ, ಕೆಲವರು ಎಸಳುಗಳಿಂದಲೂ, ಕೆಲವರು ಎಲೆಗಳಿಂದಲೂ, ಚಿಗುರುಗಳಿಂದಲೂ, ಹಣ್ಣುಗಳಿಂದಲೂ, ಬುತ್ತಿಯ ನೆಲವುಗಳಿಂದಲೂ, ಭೂರ್ಜ ಪತ್ರದಿಂದಲೂ, ಭೋಜನ ಪಾತ್ರೆಗಳನ್ನು ಮಾಡಿಕೊಂಡರು. ಕೆಲವರು ಅಗಲವಾದ ಕಲ್ಲನ್ನೇ ಭೋಜನ ಪಾತ್ರೆಯಾಗಿಸಿಕೊಂಡು ಭೋಜನ ಮಾಡತೊಡಗಿದರು. ॥9॥
(ಶ್ಲೋಕ-10)
ಮೂಲಮ್
ಸರ್ವೇ ಮಿಥೋ ದರ್ಶಯಂತಃ ಸ್ವಸ್ವಭೋಜ್ಯರುಚಿಂ ಪೃಥಕ್ ।
ಹಸಂತೋ ಹಾಸಯಂತಶ್ಚಾಭ್ಯವಜಹ್ರುಃ ಸಹೇಶ್ವರಾಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಮತ್ತು ಗೋಪಬಾಲಕರೆಲ್ಲರೂ ಪರಸ್ಪರ ತಮ್ಮ-ತಮ್ಮ ಬುತ್ತಿಯ ಬೇರೆ-ಬೇರೆ ರುಚಿಗಳನ್ನು ಪ್ರದರ್ಶಿಸುತ್ತಿದ್ದರು. ಒಬ್ಬರು ಇನ್ನೊಬ್ಬರನ್ನು ನಗಿಸಿದರೆ ಕೆಲವರು ಸ್ವತಃ ನಗುತ್ತಾ-ನಗಿಸುತ್ತಾ ಆನಂದತುಂದಿಲರಾಗಿ ಶ್ರೀಕೃಷ್ಣನೊಂದಿಗೆ ಭೋಜನ ಮಾಡುತ್ತಿದ್ದರು. ॥10॥
(ಶ್ಲೋಕ-11)
ಮೂಲಮ್
ಬಿಭ್ರದ್ವೇಣುಂ ಜಠರಪಟಯೋಃ ಶೃಂಗವೇತ್ರೇ ಚ ಕಕ್ಷೇ ।
ವಾಮೇ ಪಾಣೌ ಮಸೃಣಕವಲಂ ತತ್ಫಲಾನ್ಯಂಗುಲೀಷು
ತಿಷ್ಠನ್ಮಧ್ಯೇ ಸ್ವಪರಿಸುಹೃದೋ ಹಾಸಯನ್ನರ್ಮಭಿಃ ಸ್ವೈಃ ।
ಸ್ವರ್ಗೇ ಲೋಕೇ ಮಿಷತಿ ಬುಭುಜೇ ಯಜ್ಞಭುಗ್ಬಾಲಕೇಲಿಃ ॥
ಅನುವಾದ
ಆ ಸಮಯದಲ್ಲಿ ಶ್ರೀಕೃಷ್ಣನ ಸ್ವರೂಪವು ಮನೋಹರವಾಗಿತ್ತು. ಅವನು ಮುರಳಿಯನ್ನು ಸೊಂಟದಲ್ಲಿ ಪೀತಾಂಬರಕ್ಕೆ ಸಿಕ್ಕಿಸಿದ್ದನು, ಕೊಂಬು ಮತ್ತು ಬೆತ್ತವನ್ನು ಎಡದ ಬಗಲಲ್ಲಿ ಒತ್ತಿಹಿಡಿದಿದ್ದನು. ಕೈಯಲ್ಲಿ ಕೆನೆ ಮೊಸರಿನ ಅನ್ನವಿತ್ತು. ಬೆರಳುಗಳಲ್ಲಿ ನಿಂಬೆಹಣ್ಣು-ಮಾವು ಮುಂತಾದ ಹಣ್ಣುಗಳ ಉಪ್ಪಿನ ಕಾಯಿಗಳನ್ನು ಜೋಡಿಸಿಕೊಂಡಿದ್ದನು. ಅವನ ಸುತ್ತಲೂ ಗೊಲ್ಲಬಾಲಕರಿದ್ದರು. ಅವರ ಮಧ್ಯದಲ್ಲಿ ಕುಳಿತ ಯಜ್ಞ ಭೋಕ್ತೃವಾದ ಶ್ರೀಕೃಷ್ಣನು ವಿನೋದದ ಮಾತುಗಳನ್ನಾಡುತ್ತಾ ಅವರನ್ನು ನಗಿಸುತ್ತಾ, ತಾನೂ ನಗುತ್ತಾ ಅವರೊಡನೆ ಭೋಜನ ಮಾಡುತ್ತಿದ್ದನು. ಸ್ವರ್ಗಲೋಕದ ದೇವತೆಗಳು ಆಶ್ವರ್ಯಚಕಿತರಾಗಿ ಭೋಜನದ ಲೀಲೆಯನ್ನು ವೀಕ್ಷಿಸುತ್ತಿದ್ದರು. ॥11॥
(ಶ್ಲೋಕ-12)
ಮೂಲಮ್
ಭಾರತೈವಂ ವತ್ಸಪೇಷು ಭುಂಜಾನೇಷ್ವಚ್ಯುತಾತ್ಮಸು ।
ವತ್ಸಾಸ್ತ್ವಂತರ್ವನೇ ದೂರಂ ವಿವಿಶುಸ್ತೃಣಲೋಭಿತಾಃ ॥
ಅನುವಾದ
ಭರತವಂಶ ಶಿರೋಮಣಿಯೇ! ಹೀಗೆ ಶ್ರೀಕೃಷ್ಣನ ಲೀಲೆಗಳನ್ನು ನೋಡುತ್ತಾ ಭೋಜನಮಾಡುತ್ತಿದ್ದಾಗ ಗೋಪಬಾಲಕರು ಅವನಲ್ಲಿಯೇ ತನ್ಮಯರಾಗಿಬಿಟ್ಟರು. ಆ ವೇಳೆಗೆ ಮೇಯಲು ಬಿಟ್ಟಿದ್ದ ಕರುಗಳೆಲ್ಲವೂ ಹೊಸ-ಹೊಸ ಹಸಿರು ಹುಲ್ಲಿನ ಆಕರ್ಷಣೆಯಿಂದ ಬಹಳ ದೂರಕ್ಕೆ ಹೋಗಿ ಬಿಟ್ಟವು. ॥12॥
(ಶ್ಲೋಕ-13)
ಮೂಲಮ್
ತಾನ್ದೃಷ್ಟ್ವಾ ಭಯಸಂತ್ರಸ್ತಾನೂಚೇ ಕೃಷ್ಣೋಸ್ಯ ಭೀಭಯಮ್ ।
ಮಿತ್ರಾಣ್ಯಾಶಾನ್ಮಾ ವಿರಮತೇಹಾನೇಷ್ಯೇ ವತ್ಸಕಾನಹಮ್ ॥
ಅನುವಾದ
ಬಾಲಕರ ಗಮನ ಕರುಗಳ ಕಡೆಗೆ ಹೋದಾಗ ಅವುಗಳನ್ನು ಕಾಣದೆ ಭಯಭ್ರಾಂತರಾದರು. ಆಗ ತನ್ನ ಭಕ್ತರ ಭಯವನ್ನು ಹೊಡೆದಟ್ಟುವ ಭಗವಾನ್ ಶ್ರೀಕೃಷ್ಣನು ಹೇಳಿದನು - ‘ನನ್ನ ಪ್ರಿಯಮಿತ್ರರೇ! ಹೆದರ ಬೇಡಿರಿ. ನೀವು ಭೋಜನ ಮಾಡುವುದನ್ನು ನಿಲ್ಲಿಸಬೇಡಿ. ನಾನು ಈಗಾಗಲೇ ಕರುಗಳನ್ನು ಹೊಡೆದುಕೊಂಡು ಬರುತ್ತೇನೆ’ ॥13॥
(ಶ್ಲೋಕ-14)
ಮೂಲಮ್
ಇತ್ಯುಕ್ತ್ವಾದ್ರಿದರೀಕುಂಜಗಹ್ವರೇಷ್ವಾತ್ಮವತ್ಸಕಾನ್ ।
ವಿಚಿನ್ವನ್ಭಗವಾನ್ಕೃಷ್ಣಃ ಸಪಾಣಿಕವಲೋ ಯಯೌ ॥
ಅನುವಾದ
ಗೊಲ್ಲಬಾಲಕರಲ್ಲಿ ಹೀಗೆ ಹೇಳಿ ಭಗವಾನ್ ಶ್ರೀಕೃಷ್ಣನು ಕೈಯಲ್ಲಿ ಮೊಸರನ್ನದ ತುತ್ತನ್ನು ಎತ್ತಿಕೊಂಡೇ ಬೆಟ್ಟ-ಗುಡ್ಡಗಳಲ್ಲಿಯೂ, ಗುಹೆಗಳಲ್ಲಿಯೂ, ಪೊದರುಗಳಲ್ಲಿಯೂ ತನ್ನ ಮತ್ತು ಸಂಗಡಿಗರ ಕರುಗಳನ್ನು ಹುಡುಕ ತೊಡಗಿದನು. ॥14॥
(ಶ್ಲೋಕ-15)
ಮೂಲಮ್
ಅಂಭೋಜನ್ಮಜನಿಸ್ತದಂತರಗತೋ ಮಾಯಾರ್ಭಕಸ್ಯೇಶಿತುಃ
ದ್ರಷ್ಟುಂ ಮಂಜು ಮಹಿತ್ವಮನ್ಯದಪಿ ತದ್ವತ್ಸಾನಿತೋ ವತ್ಸಪಾನ್ ।
ನೀತ್ವಾನ್ಯತ್ರ ಕುರೂದ್ವಹಾಂತರದಧಾತ್ಖೇವಸ್ಥಿತೋ ಯಃ ಪುರಾ
ದೃಷ್ಟ್ವಾಘಾಸುರಮೋಕ್ಷಣಂ ಪ್ರಭವತಃ ಪ್ರಾಪ್ತಃ ಪರಂ ವಿಸ್ಮಯಮ್ ॥
ಅನುವಾದ
ಪರೀಕ್ಷಿತನೇ! ಬ್ರಹ್ಮದೇವರು ಮೊದಲಿನಿಂದಲೇ ಆಕಾಶದಲ್ಲಿ ಉಪಸ್ಥಿರಾಗಿದ್ದು, ಪ್ರಭುವಿನ ಪ್ರಭಾವದಿಂದ ಅಘಾಸುರನ ಮೋಕ್ಷವನ್ನು ನೋಡಿ ಅವರಿಗೆ ಬಹಳ ಆಶ್ಚರ್ಯವಾಗಿತ್ತು. ಲೀಲಾಮಾನುಷ ಬಾಲಕನಾದ ಭಗವಾನ್ ಶ್ರೀಕೃಷ್ಣನ ಇತರ ಮನೋಹರವಾದ ಮಹಿಮಾಯುಕ್ತ ಲೀಲೆಯನ್ನು ನೋಡಬೇಕೆಂದು ಅವರು ಯೋಚಿಸಿದರು, ಹೀಗೆ ಆಲೋಚಿಸಿ ಮೊದಲಿಗೆ ಕರುಗಳನ್ನೂ ಹಾಗೂ ಶ್ರೀಕೃಷ್ಣನು ಹೊರಟುಹೋದ ಬಳಿಕ ಗೊಲ್ಲಬಾಲಕರನ್ನು ಬೇರೆ ಕಡೆಗೆಕೊಂಡುಹೋಗಿ ಅಡಗಿ ಸಿಟ್ಟು, ಸ್ವಯಂ ಅಂತರ್ಧಾನರಾದರು. ಎಷ್ಟಾದರೂ ಜಡವಾದ ಕಮಲಸಂಭವರಲ್ಲವೆ? ॥15॥
(ಶ್ಲೋಕ-16)
ಮೂಲಮ್
ತತೋ ವತ್ಸಾನದೃಷ್ಟ್ವೈತ್ಯ ಪುಲಿನೇಪಿ ಚ ವತ್ಸಪಾನ್ ।
ಉಭಾವಪಿ ವನೇ ಕೃಷ್ಣೋ ವಿಚಿಕಾಯ ಸಮಂತತಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಕಾಡು-ಮೇಡುಗಳಲ್ಲಿ, ಗುಹೆ-ಕಂದರಗಳಲ್ಲಿ ಹುಡುಕಿದರೂ ಕರುಗಳು ಸಿಗದಿರುವಾಗ, ಯಮುನಾ ತೀರದಲ್ಲಿದ್ದ ಗೋಪಬಾಲಕರ ಬಳಿಗೆ ಹಿಂದಿರುಗಿದನು. ಆದರೆ ಅಲ್ಲಿ ಗೋಪಬಾಲಕರೂ ಇರಲಿಲ್ಲ. ವಿಸ್ಮಿತನಾದ ಶ್ರೀಕೃಷ್ಣನು ಗೋಪಬಾಲಕರನ್ನೂ, ಕರುಗಳನ್ನೂ ಹುಡುಕಲು ಹೊರಟನು. ॥16॥
(ಶ್ಲೋಕ-17)
ಮೂಲಮ್
ಕ್ವಾಪ್ಯದೃಷ್ಟ್ವಾಂತರ್ವಿಪಿನೇ ವತ್ಸಾನ್ಪಾಲಾಂಶ್ಚ ವಿಶ್ವವಿತ್ ।
ಸರ್ವಂ ವಿಧಿಕೃತಂ ಕೃಷ್ಣಃ ಸಹಸಾವಜಗಾಮ ಹ ॥
ಅನುವಾದ
ಆದರೆ ಗೊಲ್ಲಬಾಲಕರೂ, ಕರುಗಳೂ ಅವನಿಗೆ ಸಿಗದಿರುವಾಗ, ಅವನು ಇದೆಲ್ಲವೂ ಬ್ರಹ್ಮನದೇ ಕೆಲಸ. ಅವನೇ ಇವರನ್ನು ಬಚ್ಚಿಟ್ಟಿರುವೆನೆಂದು ಕೂಡಲೇ ತಿಳಿದುಕೊಂಡನು. ಅವನಾದರೋ ವಿಶ್ವದ ಏಕಮಾತ್ರ ಜ್ಞಾತೃವಾಗಿದ್ದನು, ವಿಶ್ವವಿದನಾಗಿದ್ದನು. ॥17॥
(ಶ್ಲೋಕ-18)
ಮೂಲಮ್
ತತಃ ಕೃಷ್ಣೋ ಮುದಂ ಕರ್ತುಂ ತನ್ಮಾತೃಣಾಂ ಚ ಕಸ್ಯ ಚ ।
ಉಭಯಾಯಿತಮಾತ್ಮಾನಂ ಚಕ್ರೇ ವಿಶ್ವಕೃದೀಶ್ವರಃ ॥
ಅನುವಾದ
ವಿಶ್ವವನ್ನೇ ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದ ವಿಶ್ವಕರ್ತೃವಾದ ಶ್ರೀಕೃಷ್ಣನು ಗೋಪಬಾಲಕರ ತಾಯಂದಿರಿಗೂ, ಗೋವುಗಳಿಗೂ, ಬ್ರಹ್ಮನಿಗೂ ತನ್ನ ಲೀಲೆಯನ್ನು ತೋರಿಸಿ ಆನಂದಗೊಳಿಸಬೇಕೆಂಬ ಆಶಯದಿಂದ, ಕ್ಷಣಮಾತ್ರದಲ್ಲಿ ಗೋಪಬಾಲಕರಾಗಿ, ಕರುಗಳಾಗಿ ತಾನೇ ಆಗಿಬಿಟ್ಟನು.* ॥18॥
ಟಿಪ್ಪನೀ
- ಭಗವಂತನು ಸರ್ವಸಮರ್ಥನಾಗಿದ್ದಾನೆ. ಅವನು ಬ್ರಹ್ಮನು ಕದ್ದುಕೊಂಡುಹೋದ ಬಾಲಕರನ್ನು, ಕರುಗಳನ್ನು ತರಬಲ್ಲನಾಗಿದ್ದರೂ ಇದರಿಂದ ಬ್ರಹ್ಮನ ಮೋಹ ದೂರವಾಗುತ್ತಿರಲಿಲ್ಲ. ಅವನು ಭಗವಂತನ ಆ ದಿವ್ಯ ಮಾಯಾ ಐಶ್ವರ್ಯವನ್ನು ನೋಡದೇ ಅವನ ವಿಶ್ವಕರ್ತೃತ್ವವೆಂಬ ಅಭಿಮಾನವು ದೂರವಾಗುತ್ತಿರಲಿಲ್ಲ. ಅದಕ್ಕಾಗಿ ಭಗವಂತನು ಅದೇ ಗೊಲ್ಲಬಾಲಕರನ್ನೂ, ಕರುಗಳನ್ನೂ ತಾರದೆ ಸ್ವತಃ ಅವರಂತೆಯೇ ಅಷ್ಟೇ ಬಾಲಕರೂ, ಕರುಗಳೂ ಆಗಿಬಿಟ್ಟನು.
(ಶ್ಲೋಕ-19)
ಮೂಲಮ್
ಯಾವದ್ವತ್ಸಪವತ್ಸಕಾಲ್ಪಕವಪುರ್ಯಾವತ್ಕರಾಂಘ್ರ್ಯಾದಿಕಂ
ಯಾವದ್ಯಷ್ಟಿವಿಷಾಣವೇಣುದಲಶಿಗ್ಯಾವದ್ವಿಭೂಷಾಂಬರಮ್ ।
ಯಾವಚ್ಛೀಲಗುಣಾಭಿದಾಕೃತಿವಯೋ ಯಾವದ್ವಿಹಾರಾದಿಕಂ
ಸರ್ವಂ ವಿಷ್ಣುಮಯಂ ಗಿರೋಂಗವದಜಃ ಸರ್ವಸ್ವರೂಪೋ ಬಭೌ ॥
ಅನುವಾದ
ಪರೀಕ್ಷಿತನೇ! ಆ ಬಾಲಕರು ಮತ್ತು ಕರುಗಳು ಮೊದಲು ಎಷ್ಟು ಸಂಖ್ಯೆಯಲ್ಲಿದ್ದರೋ ಈಗಲೂ ಅಷ್ಟೇ ಸಂಖ್ಯೆಯಲ್ಲಿದ್ದರು. ಗೋಪಬಾಲಕರ ಮತ್ತು ಕರುಗಳ ಶರೀರಗಳು ಎಷ್ಟು ಗಾತ್ರದಲ್ಲಿದ್ದವೋ, ಯಾವ ಬಣ್ಣದಲ್ಲಿದ್ದವೋ ಈಗಲೂ ಅದೇ ಬಣ್ಣ, ಗಾತ್ರದಿಂದ ಕಂಗೊಳಿಸುತ್ತಿದ್ದವು. ಕೋಲು, ಕೊಂಬು, ಕೊಳಲು, ತಲೆಯಲ್ಲಿ ಸಿಂಗರಿಸಿಕೊಂಡಿದ್ದ ಚಿಗುರುಗಳು, ನವಿಲುಗರಿಗಳು, ಬುತ್ತಿ, ಉಡಿಗೆ-ತೊಡಿಗೆಗಳು, ನಡೆ-ನುಡಿಗಳು, ಗುಣಗಳು, ಹೆಸರುಗಳು, ಆಕಾರಗಳು, ವಯಸ್ಸು ಎಲ್ಲವೂ ಯಥಾವತ್ತಾಗಿಯೇ ಇದ್ದವು. ಹಿಂದೆ ಆಡುತ್ತಿದ್ದ ಆಟಗಳನ್ನೇ ಆಡುತ್ತಿದ್ದ, ಅಷ್ಟೇ ರೂಪಗಳಲ್ಲಿ ಸರ್ವಸ್ವರೂಪನಾದ ಭಗವಾನ್ ಶ್ರೀಕೃಷ್ಣನು ಪ್ರಕಟನಾದನು. ‘ಸರ್ವಂ ವಿಷ್ಣುಮಯಂ ಜಗತ್’ ಎಂಬ ವೇದವಾಣಿಯು ಮೂರ್ತಿಭವಿಸಿತೋ ಎಂಬಂತೆ ಪ್ರಕಟವಾಗಿತ್ತು. ॥19॥
(ಶ್ಲೋಕ-20)
ಮೂಲಮ್
ಸ್ವಯಮಾತ್ಮಾತ್ಮಗೋವತ್ಸಾನ್ಪ್ರತಿವಾರ್ಯಾತ್ಮವತ್ಸಪೈಃ ।
ಕ್ರೀಡನ್ನಾತ್ಮವಿಹಾರೈಶ್ಚ ಸರ್ವಾತ್ಮಾ ಪ್ರಾವಿಶದ್ವ್ರಜಮ್ ॥
ಅನುವಾದ
ಸರ್ವಾತ್ಮನಾದ ಭಗವಂತನೇ ಸ್ವತಃ ಕರುಗಳಾದನು, ಸ್ವತಃ ಗೋಪ ಬಾಲಕರಾದನು. ತನ್ನ ಆತ್ಮಸ್ವರೂಪವಾದ ಕರುಗಳನ್ನೂ, ಆತ್ಮಸ್ವರೂಪರಾದ ಗೊಲ್ಲಬಾಲಕರನ್ನು ಸುತ್ತುವರೆದು ತನ್ನೊಡನೆ ಅನೇಕ ರೀತಿಯ ಆಟಗಳನ್ನಾಡುತ್ತಾ ಶ್ರೀಕೃಷ್ಣನು ಗೊಲ್ಲರಹಟ್ಟಿಯನ್ನು ಪ್ರವೇಶಿಸಿದನು. ॥20॥
(ಶ್ಲೋಕ-21)
ಮೂಲಮ್
ತತ್ತದ್ವತ್ಸಾನ್ಪೃಥಙ್ನೇತ್ವಾ ತತ್ತದ್ಗೋಷ್ಠೇ ನಿವೇಶ್ಯ ಸಃ ।
ತತ್ತದಾತ್ಮಾಭವದ್ರಾಜನ್ ಸ್ತತ್ತತ್ಸದ್ಮ ಪ್ರವಿಷ್ಟವಾನ್ ॥
ಅನುವಾದ
ಪರೀಕ್ಷಿತನೆ! ಒಂದೊಂದು ಕರುವನ್ನು ಪ್ರತ್ಯೇಕ-ಪ್ರತ್ಯೇಕವಾಗಿ ಆಯಾ ಮನೆಗಳಿಗೆ ಸೇರಿಸಿದನು. ಅಂತೆಯೇ ಆತ್ಮಸ್ವರೂಪರಾದ ಗೋಪಬಾಲಕರನ್ನು ಅವರವರ ಮನೆಗೆ ಸೇರುವಂತೆ ಮಾಡಿದನು. ಎಂದಿನಂತೆ ಕೃಷ್ಣಭೂತರಾದ ಗೋಪಬಾಲಕರು ಕೊಳಲನ್ನು ಊದಿಕೊಂಡೇ ಮನೆಗೆ ಬಂದರು. ॥21॥
(ಶ್ಲೋಕ-22)
ಮೂಲಮ್
ತನ್ಮಾತರೋ ವೇಣುರವತ್ವರೋತ್ಥಿತಾ
ಉತ್ಥಾಪ್ಯ ದೋರ್ಭಿಃ ಪರಿರಭ್ಯ ನಿರ್ಭರಮ್ ।
ಸ್ನೇಹಸ್ನುತಸ್ತನ್ಯಪಯಃಸುಧಾಸವಂ
ಮತ್ವಾ ಪರಂ ಬ್ರಹ್ಮ ಸುತಾನಪಾಯಯನ್ ॥
ಅನುವಾದ
ಕೊಳಲಿನ ಧ್ವನಿಯನ್ನು ಕೇಳುತ್ತಲೇ ಗೋಪಿಯರು ತಟ್ಟನೆ ಮೇಲೆದ್ದು, ಪರಬ್ರಹ್ಮನಾದ ಶ್ರೀಕೃಷ್ಣನ ಸ್ವರೂಪಿಗಳಾಗಿದ್ದ ಗೋಪಬಾಲಕರನ್ನು ತಮ್ಮ ಮಕ್ಕಳೆಂದೇ ಭಾವಿಸಿ, ತೊಳುಗಳಿಂದ ಬಾಚಿತಬ್ಬಿಕೊಂಡು ಅಮೃತಕ್ಕಿಂತಲೂ ಮಧುರವಾಗಿದ್ದ, ಆಸವಕ್ಕಿಂತಲೂ ಹೆಚ್ಚು ಮದವನ್ನುಂಟು ಮಾಡುವಂತಹ, ವಾತ್ಸಲ್ಯಪೂರ್ಣವಾದ ಸ್ತನ್ಯವನ್ನು ಅವರಿಗೆ ಉಣಿಸಿದರು. ॥22॥
(ಶ್ಲೋಕ-23)
ಮೂಲಮ್
ತತೋ ನೃಪೋನ್ಮರ್ದನಮಜ್ಜಲೇಪನಾ-
ಲಂಕಾರರಕ್ಷಾತಿಲಕಾಶನಾದಿಭಿಃ ।
ಸಂಲಾಲಿತಃ ಸ್ವಾಚರಿತೈಃ ಪ್ರಹರ್ಷಯನ್
ಸಾಯಂ ಗತೋ ಯಾಮಯಮೇನ ಮಾಧವಃ ॥
ಅನುವಾದ
ಪರೀಕ್ಷಿತನೇ! ಈ ಪ್ರಕಾರವಾಗಿ ಪ್ರತಿದಿನವೂ ಸಾಯಂಕಾಲ ಭಗವಾನ್ ಶ್ರೀಕೃಷ್ಣನು ಆ ಗೊಲ್ಲಬಾಲಕರ ರೂಪದಲ್ಲಿ ಕಾಡಿನಿಂದ ಮರಳಿ ಬಂದು ತನ್ನ ಬಾಲಸುಲಭವಾದ ಲೀಲೆಗಳಿಂದ ತಾಯಂದಿರನ್ನು ಆನಂದ ಗೊಳಿಸುತ್ತಿದ್ದನು. ಆ ತಾಯಂದಿರೂ ಕೂಡ ತಮ್ಮ ಆ ಮುದ್ದುಕಂದಮ್ಮರಿಗೆ ಸ್ನಾನಮಾಡಿಸುತ್ತಿದ್ದರು. ಅವರ ಪುಟ್ಟ ಕಾಲುಗಳನ್ನು ಒತ್ತುತ್ತಿದ್ದರು. ಅವರಿಗೆ ಗಂಧವನ್ನು ಪೂಸಿ, ಅಲಂಕರಿಸುತ್ತಿದ್ದರು. ತಿಲಕವಿಟ್ಟು ರಕ್ಷೆಯನ್ನಿಡುತ್ತಿದ್ದರು. ಭೋಜನ ಮಾಡಿಸುತ್ತಿದ್ದರು. ಇವೇ ಮುಂತಾದ ಉಪಚಾರಗಳಿಂದ ಸಾಕ್ಷಾತ್ ಶ್ರೀಕೃಷ್ಣನನ್ನೇ ಲಾಲಿಸುತ್ತಿದ್ದರು. ॥23॥
(ಶ್ಲೋಕ-24)
ಮೂಲಮ್
ಗಾವಸ್ತತೋ ಗೋಷ್ಠಮುಪೇತ್ಯ ಸತ್ವರಂ
ಹುಂಕಾರಘೋಷೈಃ ಪರಿಹೂತಸಂಗತಾನ್ ।
ಸ್ವಕಾನ್ಸ್ವಕಾನ್ವತ್ಸತರಾನಪಾಯಯನ್
ಮುಹುರ್ಲಿಹಂತ್ಯಃ ಸ್ರವದೌಧಸಂ ಪಯಃ ॥
ಅನುವಾದ
ಗೋಪಿಯರಿಗೆ ತಾವು ಗೋಪಬಾಲಕನ ರೂಪದಲ್ಲಿರುವ ಶ್ರೀಕೃಷ್ಣನಿಗೆ ಮೊಲೆಯುಣಿಸುತ್ತಿದ್ದೇವೆಂಬುದು ತಿಳಿಯದಿದ್ದ ಮೇಲೆ ಹಸುಗಳಾದರೂ ಹೇಗೆ ತಿಳಿಯಬಲ್ಲವು? ಶ್ರೀಕೃಷ್ಣನೇ ಕರುಗಳಾಗಿ ಕೊಟ್ಟಿಗೆಗೆ ಬಂದಾಕ್ಷಣ ಆ ಹಸುಗಳು ವಾತ್ಸಲ್ಯದಿಂದ ‘ಅಂಬಾ!’ ಎಂದು ಕೂಗುವುವು. ಕರುಗಳು ತಾಯಂದಿರ ಬಳಿಗೆ ನಾಗಾಲೋಟದಿಂದ ಓಡಿ ಹೋಗುವುವು. ಹಾಗೇ ತಮ್ಮ ಬಳಿಗೆ ಓಡಿ ಬಂದಿರುವ ಕರುಗಳನ್ನು ಅಕ್ಕರೆಯಿಂದ ನೆಕ್ಕುತ್ತಾ, ಕೆಚ್ಚಲಿನಿಂದ ಒಸರುತ್ತಿರುವ ಅಮೃತೋಪಮವಾದ ಹಾಲನ್ನು ಅವುಗಳಿಗೆ ಉಣಿಸುತ್ತಿದ್ದವು. ॥24॥
(ಶ್ಲೋಕ-25)
ಮೂಲಮ್
ಗೋಗೋಪೀನಾಂ ಮಾತೃ ತಾಸ್ಮಿನ್ಸರ್ವಾ ಸ್ನೇಹರ್ಧಿಕಾಂ ವಿನಾ ।
ಪುರೋವದಾಸ್ವಪಿ ಹರೇಸ್ತೋಕತಾ ಮಾಯಯಾ ವಿನಾ ॥
ಅನುವಾದ
ಈ ಹಸುಗಳಲ್ಲಿ ಮತ್ತು ಗೋಪಿಯರಲ್ಲಿ ಮಾತೃಭಾವವೂ ಮೊದಲಿನಿಂದಲೇ ವಿಶುದ್ಧವಾಗಿತ್ತು, ಆದರೂ ಈಗ ತಮ್ಮ ಮಕ್ಕಳ, ಕರುಗಳ ಕುರಿತು ಅವರ ಸ್ನೇಹ ಖಂಡಿತವಾಗಿ ಹೆಚ್ಚಾಗಿತ್ತು. ಹೀಗೆಯೇ ಭಗವಂತನೂ ಮೊದಲಿನ ಮಕ್ಕಳಂತೆ ಪುತ್ರಭಾವವನ್ನು ತೋರುತ್ತಿದ್ದನು. ಆದರೆ ಭಗವಂತನಲ್ಲಿ ಆ ಬಾಲಕರಂತೆ ‘ನಾನು ಇವರ ಮಗನಾಗಿದ್ದೇನೆ’ ಎಂಬ ಮೋಹ ಭಾವವಿರಲಿಲ್ಲ. ॥25॥
(ಶ್ಲೋಕ-26)
ಮೂಲಮ್
ವ್ರಜೌಕಸಾಂ ಸ್ವತೋಕೇಷು ಸ್ನೇಹವಲ್ಲ್ಯಾಬ್ದಮನ್ವಹಮ್ ।
ಶನೈರ್ನಿಃಸೀಮ ವವೃಧೇ ಯಥಾ ಕೃಷ್ಣೇ ತ್ವಪೂರ್ವವತ್ ॥
ಅನುವಾದ
ತಮ್ಮ-ತಮ್ಮ ಬಾಲಕರ ಕುರಿತು ವ್ರಜವಾಸಿಗಳ ಸ್ನೇಹ ಲತೆಯು ಪ್ರತಿದಿನವೂ ಒಂದು ವರ್ಷದವರೆಗೆ ಬೆಳೆಯುತ್ತಲೇ ಇತ್ತು. ಮೊದಲಿಗೆ ಶ್ರೀಕೃಷ್ಣನಲ್ಲಿ ಅವರಿಗಿದ್ದ ಅಸೀಮ ಹಾಗೂ ಅಪೂರ್ವ ಪ್ರೇಮದಂತೆ ತಮ್ಮ ಈ ಬಾಲಕರ ವಿಷಯದಲ್ಲಿಯೂ ಉಂಟಾಯಿತು. ॥26॥
(ಶ್ಲೋಕ-27)
ಮೂಲಮ್
ಇತ್ಥಮಾತ್ಮಾತ್ಮನಾತ್ಮಾನಂ ವತ್ಸಪಾಲಮಿಷೇಣ ಸಃ ।
ಪಾಲಯನ್ವತ್ಸಪೋ ವರ್ಷಂ ಚಿಕ್ರೀಡೇ ವನಗೋಷ್ಠಯೋಃ ॥
ಅನುವಾದ
ಹೀಗೆ ಸರ್ವಾತ್ಮನಾದ ಶ್ರೀಕೃಷ್ಣನು ಕರುಗಳು ಮತ್ತು ಗೋಪಬಾಲಕರ ನೆಪದಿಂದ ಗೋಪಾಲನಾಗಿ ತನ್ನ ಬಾಲಕ ರೂಪದಿಂದ ಕರುಗಳನ್ನು ಪಾಲಿಸುತ್ತಾ ಒಂದು ವರ್ಷದವರೆಗೆ ವೃಂದಾವನದಲ್ಲಿ, ಹಟ್ಟಿಗಳಲ್ಲಿ ಕ್ರೀಡಿಸುತ್ತಿದ್ದನು. ॥27॥
(ಶ್ಲೋಕ-28)
ಮೂಲಮ್
ಏಕದಾ ಚಾರಯನ್ವತ್ಸಾನ್ಸರಾಮೋ ವನಮಾವಿಶತ್ ।
ಪಂಚಷಾಸು ತ್ರಿಯಾಮಾಸು ಹಾಯನಾಪೂರಣೀಷ್ವಜಃ ॥
ಅನುವಾದ
ಒಂದು ವರ್ಷ ತುಂಬಲು ಇನ್ನೂ ಐದಾರು ದಿನಗಳಿರುವಾಗ ಒಂದುದಿನ ಭಗವಾನ್ ಶ್ರೀಕೃಷ್ಣನು ಬಲರಾಮನೊಂದಿಗೆ ಕರುಗಳನ್ನು ಮೇಯಿಸುತ್ತಾ ಕಾಡಿಗೆ ಹೋದನು. ॥28॥
(ಶ್ಲೋಕ-29)
ಮೂಲಮ್
ತತೋ ವಿದೂರಾಚ್ಚರತೋ ಗಾವೋ ವತ್ಸಾನುಪವ್ರಜಮ್ ।
ಗೋವರ್ಧನಾದ್ರಿಶಿರಸಿ ಚರಂತ್ಯೋ ದದೃಶುಸ್ತೃಣಮ್ ॥
ಅನುವಾದ
ಆ ಸಮಯದಲ್ಲಿ ಹಸುಗಳು ಗೋವರ್ಧನದ ತಪ್ಪಲಿನಲ್ಲಿ ಹುಲ್ಲು ಮೇಯುತ್ತಿದ್ದವು. ಅವು ಅಲ್ಲಿಂದಲೇ ಬಹುದೂರದಲ್ಲಿ ಹಳ್ಳಿಯ ಸಮೀಪದಲ್ಲಿ ಕರುಗಳು ಹುಲ್ಲು ಮೇಯುತ್ತಿರುವುದನ್ನು ನೋಡಿದವು. ॥29॥
(ಶ್ಲೋಕ-30)
ಮೂಲಮ್
ದೃಷ್ಟ್ವಾಥ ತತ್ಸ್ನೇಹವಶೋಸ್ಮೃತಾತ್ಮಾ
ಸ ಗೋವ್ರಜೋತ್ಯಾತ್ಮಪದುರ್ಗಮಾರ್ಗಃ ।
ದ್ವಿಪಾತ್ಕಕುದ್ಗ್ರೀವ ಉದಾಸ್ಯಪುಚ್ಛೋ-
ಗಾದ್ಧುಂಕೃತೈರಾಸ್ರುಪಯಾ ಜವೇನ ॥
ಅನುವಾದ
ಕರುಗಳನ್ನು ನೋಡುತ್ತಲೇ ಹಸುಗಳಿಗೆ ತಮ್ಮ ಕರುಗಳಲ್ಲಿದ್ದ ವಾತ್ಸಲ್ಯ-ಸ್ನೇಹವು ಉಕ್ಕಿ ಹರಿಯಿತು. ಅವುಗಳಿಗೆ ಮೈಮೇಲೆ ಪ್ರಜ್ಞೆಯೇ ಉಳಿಯಲಿಲ್ಲ. ಮೇಯುವುದನ್ನು ನಿಲ್ಲಿಸಿ ಗೋಪಾಲಕರು ತಡೆಯುತ್ತಿರುವುದನ್ನು ಲೆಕ್ಕಿಸದೆ, ಹಳ್ಳ-ಕೊಳ್ಳಗಳನ್ನು ಪರಿಗಣಿಸದೆ, ಗೋಪಾಲಕರೂ ಹೋಗಲಾಗದ ಮಾರ್ಗದಿಂದ, ಕೊರಳನ್ನೂ, ಮುಖ- ಬಾಲಗಳನ್ನು ಎತ್ತಿಕೊಂಡು ಎರಡು ಕಾಲಿನ ಪ್ರಾಣಿಗಳಂತೆ ಅತ್ಯಂತ ವೇಗವಾಗಿ ಹಾಲನ್ನು ಸುರಿಸುತ್ತಾ ‘ಅಂಬಾ’ ಎಂದು ಕೂಗಿಕೊಳ್ಳುತ್ತಾಕರುಗಳಿದ್ದೆಡೆಗೆ ಬಂದು ಸೇರಿದವು. ॥30॥
(ಶ್ಲೋಕ-31)
ಮೂಲಮ್
ಸಮೇತ್ಯ ಗಾವೋಧೋ ವತ್ಸಾನ್ವತ್ಸವತ್ಯೋಪ್ಯಪಾಯಯನ್ ।
ಗಿಲಂತ್ಯ ಇವ ಚಾಂಗಾನಿ ಲಿಹಂತ್ಯಃ ಸ್ವೌಧಸಂ ಪಯಃ್ಞ ॥
ಅನುವಾದ
ಆ ಹಸುಗಳಿಗೆ ಕೆಲವು ದಿನಗಳ ಹಿಂದೆ ಹುಟ್ಟಿದ್ದ ಚಿಕ್ಕ ಕರುಗಳಿದ್ದರೂ, ಹಳ್ಳಿಯ ಸಮೀಪದಲ್ಲಿದ್ದ ದೊಡ್ಡ ಕರುಗಳನ್ನು ಅತ್ಯಂತ ವಾತ್ಸಲ್ಯದಿಂದ ನೆಕ್ಕುತ್ತಾ ಅವುಗಳಿಗೆ ಹಾಲುಣಿಸತೊಡಗಿದವು. ಅವುಗಳನ್ನು ನೆಕ್ಕುತ್ತಿರುವುದನ್ನು ನೋಡಿದರೆ ಪ್ರೀತಿಯಿಂದ ಅವನ್ನು ನುಂಗಿಬಿಡುತ್ತವೆಯೋ ಎಂಬಂತೆ ಕಾಣುತ್ತಿದ್ದುವು. ॥31॥
(ಶ್ಲೋಕ-32)
ಮೂಲಮ್
ಗೋಪಾಸ್ತದ್ರೋಧನಾಯಾಸವೌಘ್ಯಲಜ್ಜೋರುಮನ್ಯುನಾ ।
ದುರ್ಗಾಧ್ವಕೃಚ್ಛ್ರತೋಭ್ಯೇತ್ಯ ಗೋವತ್ಸೈರ್ದದೃಶುಃ ಸುತಾನ್ ॥
ಅನುವಾದ
ಗೋಪಾಲಕರು ಅವನ್ನು ತಡೆಯಲು ಬಹಳ ಪ್ರಯತ್ನ ಮಾಡಿದರೂ, ಅವರ ಪ್ರಯತ್ನ ವ್ಯರ್ಥವೇ ಆಯಿತು. ಇದರಿಂದ ತಮ್ಮ ವಿಫಲತೆಯ ಕುರಿತು ಅವರಿಗೆ ನಾಚಿಕೆ ಉಂಟಾಗಿ, ಹಸುಗಳ ಮೇಲೆ ಸ್ವಲ್ಪ ಸಿಟ್ಟೂ ಬಂದಿತ್ತು. ಅವರೆಲ್ಲರೂ ಅತ್ಯಂತ ಕಷ್ಟಪಟ್ಟು, ದುರ್ಗಮವಾದ ಮಾರ್ಗದಿಂದ ಹಸುಗಳಿದ್ದಲ್ಲಿಗೆ ಬಂದಾಗ ಅವರು ಕರುಗಳೊಂದಿಗೆ ತಮ್ಮ ಬಾಲಕರನ್ನು ಅಲ್ಲಿ ನೋಡಿದರು. ॥32॥
(ಶ್ಲೋಕ-33)
ಮೂಲಮ್
ತದೀಕ್ಷಣೋತ್ಪ್ರೇಮರಸಾಪ್ಲುತಾಶಯಾ
ಜಾತಾನುರಾಗಾ ಗತಮನ್ಯವೋರ್ಭಕಾನ್ ।
ಉದುಹ್ಯ ದೋರ್ಭಿಃ ಪರಿರಭ್ಯ ಮೂರ್ಧನಿ
ಘ್ರಾಣೈರವಾಪುಃ ಪರಮಾಂ ಮುದಂ ತೇ ॥
ಅನುವಾದ
ತಮ್ಮ ಮಕ್ಕಳನ್ನು ನೋಡುತ್ತಲೇ ಅವರ ಹೃದಯ ಪ್ರೇಮರಸದಿಂದ ತುಂಬಿ ಹೋಯಿತು. ಬಾಲಕರ ಕುರಿತು ಅನುರಾಗದ ನೆರೆಯೇ ಉಕ್ಕಿಬಂತು. ಅವರಲ್ಲಿದ್ದ ಸಿಟ್ಟು ಎಲ್ಲಿಗೆ ಹೋಯಿತೋ ತಿಳಿಯದು. ಅವರೆಲ್ಲರೂ ತಮ್ಮ-ತಮ್ಮ ಮಕ್ಕಳನ್ನು ತೊಡೆಯಲ್ಲೆತ್ತಿಕೊಂಡು, ಎದೆಗೆ ಅವಚಿಕೊಂಡು, ಅವರ ನೆತ್ತಿಯನ್ನು ಮೂಸುತ್ತಾ ಅತ್ಯಂತ ಆನಂದಿತರಾದರು. ॥33॥
(ಶ್ಲೋಕ-34)
ಮೂಲಮ್
ತತಃ ಪ್ರವಯಸೋ ಗೋಪಾಸ್ತೋಕಾಶ್ಲೇಷಸುನಿರ್ವೃತಾಃ ।
ಕೃಚ್ಛ್ರಾಚ್ಛನೈರಪಗತಾಸ್ತದನುಸ್ಮೃತ್ಯುದಶ್ರವಃ ॥
ಅನುವಾದ
ಪುತ್ರಾಲಿಂಗನದಿಂದ ಆನಂದತುಂದಿಲರಾದ ವೃದ್ಧಗೋಪಾಲಕರಿಗೆ ಬಿಟ್ಟು ಹೋಗಲು ಸಾಧ್ಯವಾಗಲೇ ಇಲ್ಲ. ಬಹಳ ಕಷ್ಟಪಟ್ಟು ಅವರನ್ನು ಬಿಟ್ಟು ಅಗಲಿ ಹೊರಟರು. ಬಿಟ್ಟು ಹೋಗುವಾಗ ಮಕ್ಕಳನ್ನೂ, ಅವರ ಆಲಿಂಗನದ ಸೌಖ್ಯವನ್ನು ನೆನೆಯುತ್ತಾ ಕಣ್ಣುಗಳಿಂದ ಆನಂದಬಾಷ್ಟಗಳನ್ನು ಸುರಿಸಿದರು. ॥34॥
(ಶ್ಲೋಕ-35)
ಮೂಲಮ್
ವ್ರಜಸ್ಯ ರಾಮಃ ಪ್ರೇಮರ್ಧೇರ್ವೀಕ್ಷ್ಯೌತ್ಕಂಠ್ಯಮನುಕ್ಷಣಮ್ ।
ಮುಕ್ತಸ್ತನೇಷ್ವಪತ್ಯೇಷ್ವಪ್ಯಹೇತುವಿದಚಿಂತಯತ್ ॥
ಅನುವಾದ
ಗೋಪಬಾಲಕರು ತಾಯಿಯ ಹಾಲು ಕುಡಿಯುವ ಹಸುಳೆಗಳಾಗಿರಲಿಲ್ಲ. ಆದರೂ ಗೋಪ-ಗೋಪಿಯರಿಗೆ ಅವರ ಮೇಲೆ ಪ್ರೀತಿಯು ಕ್ಷಣ-ಕ್ಷಣಕ್ಕೂ ಹೆಚ್ಚುತ್ತಲೇ ಇತ್ತು. ಗೋವುಗಳಿಗೆ ಬೆಳೆದ ಕರುಗಳ ಮೇಲೆ ಚಿಕ್ಕ ಕರುಗಳಂತೆ ವಾತ್ಸಲ್ಯವು ಹೆಚ್ಚುತ್ತಲೇ ಇತ್ತು. ಇದನ್ನು ನೋಡಿದ ಬಲರಾಮನು ‘ಇದಕ್ಕೇನು ಕಾರಣ ವಿರಬಹುದು?’ ಎಂದು ಯೋಚಿಸತೊಡಗಿದನು. ॥35॥
(ಶ್ಲೋಕ-36)
ಮೂಲಮ್
ಕಿಮೇತದದ್ಭುತಮಿವ ವಾಸುದೇವೇಖಿಲಾತ್ಮನಿ ।
ವ್ರಜಸ್ಯ ಸಾತ್ಮನಸ್ತೋಕೇಷ್ವಪೂರ್ವಂ ಪ್ರೇಮವರ್ಧತೇ ॥
ಅನುವಾದ
ಇದೆಂತಹ ಅದ್ಭುತವು ಕಂಡುಬರುತ್ತಿದೆ! ‘ಸರ್ವಾತ್ಮನಾದ ಶ್ರೀಕೃಷ್ಣನಲ್ಲಿ ನನಗೂ, ಈ ವ್ರಜವಾಸಿಗಳಿಗೂ ಅಪೂರ್ವವಾದ, ಅನಿರ್ವಾಚ್ಯವಾದ ಪ್ರೇಮವಿರುವಂತೆಯೇ ಈ ಬಾಲಕರ ಮೇಲೆ ಮತ್ತು ಕರುಗಳ ಮೇಲೆಯೂ ಪ್ರೇಮವು ಹೆಚ್ಚುತ್ತಾ ಹೋಗುತ್ತಿದೆಯಲ್ಲ! ॥36॥
(ಶ್ಲೋಕ-37)
ಮೂಲಮ್
ಕೇಯಂ ವಾ ಕುತ ಆಯಾತಾ ದೈವೀ ವಾ ನಾರ್ಯುತಾಸುರೀ ।
ಪ್ರಾಯೋ ಮಾಯಾಸ್ತು ಮೇ ಭರ್ತುರ್ನಾನ್ಯಾ ಮೇಪಿ ವಿಮೋಹಿನೀ ॥
ಅನುವಾದ
ಇದೆಂತಹ ಮಾಯೆ? ಎಲ್ಲಿಂದ ಬಂದಿದೆ? ಇದು ಯಾವುದಾದರೂ ದೇವತೆಯದೋ, ಮನುಷ್ಯರದೋ, ಅಸುರರ ಮಾಯೆಯೋ? ಇಲ್ಲ; ಇಲ್ಲ; ಇದು ಬೇರೆ ಯಾರ ಮಾಯೆಯೂ ಅಲ್ಲ. ನನ್ನನ್ನು ಕೂಡ ವಿಮೋಹಗೊಳಿಸುತ್ತಿರುವ ಈ ಮಹಾಮಾಯೆಯು ನನ್ನ ಒಡೆಯನಾದ ಶ್ರೀಕೃಷ್ಣನದೇ ಆಗಿರಬೇಕು. ॥37॥
(ಶ್ಲೋಕ-38)
ಮೂಲಮ್
ಇತಿ ಸಂಚಿಂತ್ಯ ದಾಶಾರ್ಹೋ ವತ್ಸಾನ್ಸವಯಸಾನಪಿ ।
ಸರ್ವಾನಾಚಷ್ಟ ವೈಕುಂಠಂ ಚಕ್ಷುಷಾ ವಯುನೇನ ಸಃ ॥
ಅನುವಾದ
ಬಲರಾಮನು ಹೀಗೆ ವಿಚಾರಮಾಡಿ, ಜ್ಞಾನ ದೃಷ್ಟಿಯಿಂದ ಗೋಪಬಾಲಕರನ್ನು, ಕರುಗಳನ್ನು ನೋಡಿದಾಗ-ಇವೆಲ್ಲ ಕರುಗಳ, ಗೋಪಬಾಲಕರ ರೂಪದಲ್ಲಿ ಕೇವಲ ಶ್ರೀಕೃಷ್ಣನೋರ್ವನೇ ಆಗಿರುವನೆಂದು ತಿಳಿದುಕೊಂಡನು. ॥38॥
(ಶ್ಲೋಕ-39)
ಮೂಲಮ್
ನೈತೇ ಸುರೇಶಾ ಋಷಯೋ ನ ಚೈತೇ
ತ್ವಮೇವ ಭಾಸೀಶ ಭಿದಾಶ್ರಯೇಪಿ ।
ಸರ್ವಂ ಪೃಥಕ್ತ್ವಂ ನಿಗಮಾತ್ಕಥಂ ವದೇ-
ತ್ಯುಕ್ತೇನ ವೃತ್ತಂ ಪ್ರಭುಣಾ ಬಲೋವೈತ್ ॥
ಅನುವಾದ
ಹೀಗೆ ತಿಳಿದ ಬಳಿಕ ಬಲರಾಮನು ಶ್ರೀಕೃಷ್ಣನನ್ನೇ ನೇರವಾಗಿ ಕೇಳಿದನು-ಶ್ರೀಕೃಷ್ಣನೇ! ಈ ಗೋಪಬಾಲಕರು ಮತ್ತು ಕರುಗಳು ದೇವತೆಗಳಲ್ಲ, ಋಷಿಗಳೂ ಅಲ್ಲ. ಇವೆಲ್ಲ ಬೇರೆ-ಬೇರೆ ರೂಪಗಳ ಆಶ್ರಯ ಪಡೆದರೂ ನೀನೊಬ್ಬನೇ ಇಷ್ಟು ರೂಪಗಳಲ್ಲಿ ಪ್ರಕಾಶಿಸುತ್ತಿರುವೆ. ನೀನು ಹೀಗೆ ಕರುಗಳ, ಬಾಲಕರ, ಕೊಂಬು, ಕೊಳಲು, ಹಗ್ಗ ಮುಂತಾದ ರೂಪಗಳಲ್ಲಿ ಬೇರೆ-ಬೇರೆಯಾಗಿ ಏಕೆ ಪ್ರಕಾಶಿಸುತ್ತಿರುವೆ? ದಯವಿಟ್ಟು ಸ್ವಲ್ಪದರಲ್ಲೇ ಸ್ಪಷ್ಟಪಡಿಸಿ ತಿಳಿಸು. ಆಗ ಭಗವಂತನು ಬ್ರಹ್ಮದೇವರ ಕಾರ್ಯದಿಂದಾಗಿ ತಾನು ಹೀಗೆ ಆಗಬೇಕಾಯಿತೆಂದು ತಿಳಿಸಿದನು ಹಾಗೂ ಬಲರಾಮನು ಎಲ್ಲವನ್ನೂ ಅರಿತುಕೊಂಡನು. ॥39॥
(ಶ್ಲೋಕ-40)
ಮೂಲಮ್
ತಾವದೇತ್ಯಾತ್ಮಭೂರಾತ್ಮಮಾನೇನ ತ್ರುಟ್ಯನೇಹಸಾ ।
ಪುರೋವದಬ್ದಂ ಕ್ರೀಡಂತಂ ದದೃಶೇ ಸಕಲಂ ಹರಿಮ್ ॥
ಅನುವಾದ
ಪರೀಕ್ಷಿತನೇ! ಅದೇ ಹೊತ್ತಿಗೆ ಬ್ರಹ್ಮದೇವರು ತಮ್ಮ ಲೋಕದಿಂದ ವ್ರಜಕ್ಕೆ ಮರಳಿದರು. ಅವರ ಕಾಲಮಾನದಿಂದ ಅಷ್ಟರೊಳಗೆ ಕೇವಲ ಒಂದು ತ್ರುಟಿ (ಸೂಜಿಯಿಂದ ಕಮಲದ ಎಸಳನ್ನು ಚುಚ್ಚು ವಷ್ಟು ಕಾಲ) ಮಾತ್ರ ಸಮಯ ಕಳೆದಿತ್ತು. ಭಗವಾನ್ ಶ್ರೀಕೃಷ್ಣನು ಗೊಲ್ಲಬಾಲಕರು ಮತ್ತು ಕರುಗಳೊಂದಿಗೆ ಒಂದು ವರ್ಷದ ಹಿಂದಿನಂತೆಯೇ ಕ್ರೀಡಿಸುತ್ತಿರುವುದನ್ನು ಅವರು ನೋಡಿದರು. ॥40॥
(ಶ್ಲೋಕ-41)
ಮೂಲಮ್
ಯಾವಂತೋ ಗೋಕುಲೇ ಬಾಲಾಃ ಸವತ್ಸಾಃ ಸರ್ವ ಏವ ಹಿ ।
ಮಾಯಾಶಯೇ ಶಯಾನಾ ಮೇ ನಾದ್ಯಾಪಿ ಪುನರುತ್ಥಿತಾಃ ॥
ಅನುವಾದ
ಅವರು ಯೋಚಿಸತೊಡಗಿದರು - ಗೋಕುಲದಲ್ಲಿದ್ದ ಗೊಲ್ಲಬಾಲಕರೆಲ್ಲರೂ, ಕರುಗಳೆಲ್ಲವೂ ನನ್ನ ಮಾಯಾಹಾಸಿಗೆಯಲ್ಲಿ ಮಲಗಿದ್ದಾರೆ. ಅವರೆಲ್ಲರನ್ನು ನಾನು ಮಾಯೆಯಿಂದ ನಿಷ್ಟೇಶ್ಚಿತರನ್ನಾಗಿಸಿ ಬಿಟ್ಟಿರುವೆ; ಅವರು ಆಗಿನಿಂದ ಎಚ್ಚರವಾಗಿಲ್ಲ. ॥41॥
(ಶ್ಲೋಕ-42)
ಮೂಲಮ್
ಇತ ಏತೇತ್ರ ಕುತ್ರತ್ಯಾ ಮನ್ಮಾಯಾಮೋಹಿತೇತರೇ ।
ತಾವಂತ ಏವ ತತ್ರಾಬ್ದಂ ಕ್ರೀಡಂತೋ ವಿಷ್ಣುನಾ ಸಮಮ್ ॥
ಅನುವಾದ
ಹಾಗಿರುವಾಗ ನನ್ನ ಮಾಯೆಯಿಂದ ಮೋಹಿತರಲ್ಲದ ಒಂದು ವರ್ಷದಿಂದ ಭಗವಂತನೊಂದಿಗೆ ಆಡುತ್ತಿರುವ ಈ ಗೋಪ ಬಾಲಕರು ಮತ್ತು ಕರುಗಳು ಎಲ್ಲಿಂದ ಬಂದವು? ॥42॥
(ಶ್ಲೋಕ-43)
ಮೂಲಮ್
ಏವಮೇತೇಷು ಭೇದೇಷು ಚಿರಂ ಧ್ಯಾತ್ವಾ ಸ ಆತ್ಮಭೂಃ ।
ಸತ್ಯಾಃ ಕೇ ಕತರೇ ನೇತಿ ಜ್ಞಾತುಂ ನೇಷ್ಟೇ ಕಥಂಚನ ॥
ಅನುವಾದ
ಬ್ರಹ್ಮದೇವರು ಎರಡೂ ಕಡೆಗಳಲ್ಲಿ ಎರಡನ್ನೂ ನೋಡಿದರು ಮತ್ತು ಬಹಳ ಹೊತ್ತು ಧ್ಯಾನಮಾಡುತ್ತಾ ತಮ್ಮ ಜ್ಞಾನದೃಷ್ಟಿಯಿಂದ ಅದರ ರಹಸ್ಯವನ್ನು ತಿಳಿಯಲು ಬಯಸಿದರು, ಆದರೆ ಇವರಿಬ್ಬರಲ್ಲಿ ಮೊದಲಿನವರು ಯಾರು ಹಾಗೂ ಮತ್ತೆ ಸೃಷ್ಟಿಯಾದವರು ಯಾರು? ಇವರಲ್ಲಿ ನಿಜವಾದವರು ಯಾರು, ಕೃತ್ರಿಮ ವಾದವರು ಯಾರು ಎಂಬುದು ತಿಳಿಯದೇ ಹೋಯಿತು. ॥43॥
(ಶ್ಲೋಕ-44)
ಮೂಲಮ್
ಏವಂ ಸಮ್ಮೋಹಯನ್ವಿಷ್ಣುಂ ವಿಮೋಹಂ ವಿಶ್ವಮೋಹನಮ್ ।
ಸ್ವಯೈವ ಮಾಯಯಾಜೋಪಿ ಸ್ವಯಮೇವ ವಿಮೋಹಿತಃ ॥
ಅನುವಾದ
ಭಗವಾನ್ ಶ್ರೀಕೃಷ್ಣನ ಮಾಯೆಯಿಂದ ಎಲ್ಲರೂ ಮುಗ್ಧರಾಗುತ್ತಿದ್ದಾರೆ. ಆದರೆ ಯಾವುದೇ ಮಾಯೆ-ಮೋಹ ಭಗವಂತನನ್ನು ಸ್ಪರ್ಶಿಸಲಾರದು. ಬ್ರಹ್ಮದೇವರು ಅದೇ ಭಗವಾನ್ ಶ್ರೀಕೃಷ್ಣನನ್ನು ತನ್ನ ಮಾಯೆಯಿಂದ ಮೋಹಿತಗೊಳಿಸಲು ಹೊರಟಿದ್ದರು. ಆದರೆ ಅವನನ್ನು ಮೋಹಿತಗೊಳಿಸುವುದು ದೂರವುಳಿಯಿತು, ಅವರು ಅಜನ್ಮಾ ಆಗಿದ್ದರೂ ತನ್ನ ಮಾಯೆಯಿಂದ ತಾನೇ ಮೋಹಿತರಾದರು. ॥44॥
(ಶ್ಲೋಕ-45)
ಮೂಲಮ್
ತಮ್ಯಾಂ ತಮೋವನ್ನೈಹಾರಂ ಖದ್ಯೋತಾರ್ಚಿರಿವಾಹನಿ ।
ಮಹತೀತರಮಾಯೈಶ್ಯಂ ನಿಹಂತ್ಯಾತ್ಮನಿ ಯುಂಜತಃ ॥
ಅನುವಾದ
ರಾತ್ರಿಯ ಘೋರ ಅಂಧಕಾರದಲ್ಲಿ ಮಂಜಿನ ಕತ್ತಲೆ ಲಯವಾಗಿ ಹೋಗುವಂತೆ, ಮಿಂಚು ಹುಳುವಿನ ಪ್ರಕಾಶವು ಹಗಲಿನಲ್ಲಿ ಲಯವಾಗುವಂತೆಯೇ, ಕ್ಷುದ್ರ ಮನುಷ್ಯನು ಮಹಾಪುರಷರ ಮೇಲೆ ತನ್ನ ಮಾಯೆಯನ್ನು ಪ್ರಯೋಗಿಸಿದಾಗ, ಅದು ಮಹಾಪುರುಷರಿಗೆ ಏನನ್ನೂ ಮಾಡದೆ ತಾನೇ-ತಾನಾಗಿ ಕುಗ್ಗಿ ಹೋಗಿ, ಪ್ರಯೋಗಿಸಿದವನ ಸಾಮರ್ಥ್ಯವೂ ಹೊರಟು ಹೋಗುತ್ತದೆ. ॥45॥
(ಶ್ಲೋಕ-46)
ಮೂಲಮ್
ತಾವತ್ಸರ್ವೇ ವತ್ಸಪಾಲಾಃ ಪಶ್ಯತೋಜಸ್ಯ ತತ್ಕ್ಷಣಾತ್ ।
ವ್ಯದೃಶ್ಯಂತ ಘನಶ್ಯಾಮಾಃ ಪೀತಕೌಶೇಯವಾಸಸಃ ॥
(ಶ್ಲೋಕ-47)
ಮೂಲಮ್
ಚತುರ್ಭುಜಾಃ ಶಂಖಚಕ್ರಗದಾರಾಜೀವಪಾಣಯಃ ।
ಕಿರೀಟಿನಃ ಕುಂಡಲಿನೋ ಹಾರಿಣೋ ವನಮಾಲಿನಃ ॥
ಅನುವಾದ
ಬ್ರಹ್ಮದೇವರು ವಿಚಾರ ಮಾಡುತ್ತಾ ನೋಡುತ್ತಿದ್ದಾಗಲೇ ಎಲ್ಲ ಗೊಲ್ಲಬಾಲಕರು ಮತ್ತು ಕರುಗಳು ಶ್ರೀಕೃಷ್ಣನ ರೂಪದಲ್ಲಿ ಕಂಡು ಬರತೊಡಗಿದರು. ಎಲ್ಲರೂ ನೀರು ತುಂಬಿದ ಮೋಡಗಳಂತೆ ಶ್ಯಾಮಲವರ್ಣದವರಾಗಿದ್ದು, ಪೀತಾಂಬರವನ್ನು ಧರಿಸಿ ಶಂಖ, ಚಕ್ರ, ಗದೆ ಮತ್ತು ಪದ್ಮಗಳನ್ನು ಧರಿಸಿದ ಚತುರ್ಭುಜರಾಗಿದ್ದರು. ಎಲ್ಲರ ತಲೆಯಮೇಲೆ ಕಿರೀಟ, ಕಿವಿಯಲ್ಲಿ ಕುಂಡಲಗಳೂ, ಕೊರಳಲ್ಲಿ ಸುಂದರ ಹಾರಗಳೂ ಹಾಗೂ ವನಮಾಲೆಗಳು ಶೋಭಿಸುತ್ತಿದ್ದುವು. ॥46-47॥
(ಶ್ಲೋಕ-48)
ಮೂಲಮ್
ಶ್ರೀವತ್ಸಾಂಗದದೋರತ್ನಕಂಬುಕಂಕಣಪಾಣಯಃ ।
ನೂಪುರೈಃ ಕಟಕೈರ್ಭಾತಾಃ ಕಟಿಸೂತ್ರಾಂಗುಲೀಯಕೈಃ ॥
ಅನುವಾದ
ಅವರ ವೃಕ್ಷಃಸ್ಥಳದಲ್ಲಿ ಶ್ರೀವತ್ಸ ಲಾಂಛನವಿದ್ದು, ಬಾಹುಗಳಲ್ಲಿ ಕನಕಾಂಗದ-ಕೇಯೂರಗಳೂ, ಮಣಿಕಟ್ಟುಗಳಲ್ಲಿ ಶಂಖಾಕಾರವಾದ ರತ್ನಗಳನ್ನು ಕೊರೆದ ಕಂಕಣಗಳನ್ನೂ, ಚರಣಗಳಲ್ಲಿ ನೂಪುರಗಳನ್ನೂ ಧರಿಸಿದ್ದರು. ಸುವರ್ಣಮಯವಾದ ಉಡಿದಾರಗಳನ್ನು ಧರಿಸಿದ್ದರು ಹಾಗೂ ಬೆರಳುಗಳಲ್ಲಿ ರತ್ನದುಂಗುರಗಳು ಹೊಳೆಯುತ್ತಿದ್ದವು. ॥48॥
(ಶ್ಲೋಕ-49)
ಮೂಲಮ್
ಆಂಘ್ರಿಮಸ್ತಕಮಾಪೂರ್ಣಾಸ್ತುಲಸೀನವದಾಮಭಿಃ ।
ಕೋಮಲೈಃ ಸರ್ವಗಾತ್ರೇಷು ಭೂರಿಪುಣ್ಯವದರ್ಪಿತೈಃ ॥
ಅನುವಾದ
ನಖಶಿಖಾಂತವಾಗಿ ಸಮಸ್ತ ಅಂಗಗಳಲ್ಲಿಯೂ ಪುಣ್ಯವಂತರಾದ ಭಕ್ತರು ಅರ್ಪಿಸಿದ ಸುಕೋಮಲವಾದ, ನೂತನವಾದ ತುಳಸೀ ಮಾಲೆಗಳಿಂದ ಅಲಂಕೃತರಾಗಿದ್ದರು. ॥49॥
(ಶ್ಲೋಕ-50)
ಮೂಲಮ್
ಚಂದ್ರಿಕಾವಿಶದಸ್ಮೇರೈಃ ಸಾರುಣಾಪಾಂಗವೀಕ್ಷಿತೈಃ ।
ಸ್ವಕಾರ್ಥಾನಾಮಿವ ರಜಃಸತ್ತ್ವಾಭ್ಯಾಂ ಸ್ರಷ್ಟೃಪಾಲಕಾಃ ॥
ಅನುವಾದ
ಅವರ ಕಿರುನಗೆಯು ಬೆಳದಿಂಗಳಿನಂತೆ ಉಜ್ವಲವಾಗಿತ್ತು. ಎಣ್ಣೆಗೆಂಪಿನಿಂದ ಕೂಡಿದ್ದ ಅವರ ಕಡೆಗಣ್ಣಿನ ನೋಟವು ಸುಮಧುರವಾಗಿತ್ತು. ಅವರು ಇವೆರಡರ ಮೂಲಕ ಸತ್ತ್ವಗುಣ ಮತ್ತು ರಜೋಗುಣಗಳನ್ನು ಸ್ವೀಕರಿಸಿ, ಭಕ್ತರ ಇಷ್ಟಾರ್ಥಗಳನ್ನು ನಡೆಸಿಕೊಡಲು ಅವತರಿಸಿದ ಲೋಕಪಾಲಕರಂತೆಯೇ ಕಾಣುತ್ತಿದ್ದರು. ॥50॥
(ಶ್ಲೋಕ-51)
ಮೂಲಮ್
ಅತ್ಮಾದಿಸ್ತಂಭಪರ್ಯಂತೈರ್ಮೂರ್ತಿಮದ್ಭಿಶ್ಚರಾಚರೈಃ ।
ನೃತ್ಯಗೀತಾದ್ಯನೇಕಾರ್ಹೈಃ ಪೃಥಕ್ಪೃಥಗುಪಾಸಿತಾಃ ॥
ಅನುವಾದ
ತನ್ನನ್ನೂ ಮೊದಲ್ಗೊಂಡು ಹುಲ್ಲು ಕಡ್ಡಿಯವರೆಗಿನ ಸಮಸ್ತ ಚರಾಚರ ಪ್ರಾಣಿಗಳೂ ಮೂರ್ತಿವತ್ತಾಗಿ ಬಂದು ಗೀತ-ನೃತ್ಯಗಳೇ ಮೊದಲಾದ ಹಲವಾರು ಪೂಜಾವಿಧಾನಗಳಿಂದ ಪ್ರತ್ಯೇಕ-ಪ್ರತ್ಯೇಕವಾಗಿ ಆ ಎಲ್ಲ ಮೂರ್ತಿಗಳನ್ನು ಪೂಜಿಸುತ್ತಿದ್ದುದನ್ನೂ ಬ್ರಹ್ಮದೇವರು ನೋಡಿದರು. ॥51॥
(ಶ್ಲೋಕ-52)
ಮೂಲಮ್
ಆಣಿಮಾದ್ಯೈರ್ಮಹಿಮಭಿರಜಾದ್ಯಾಭಿರ್ವಿಭೂತಿಭಿಃ ।
ಚತುರ್ವಿಂಶತಿಭಿಸ್ತತ್ತ್ವೆ ಃ ಪರೀತಾ ಮಹದಾದಿಭಿಃ ॥
ಅನುವಾದ
ಪ್ರತಿಯೊಂದು ಮೂರ್ತಿಯೂ ಅಣಿಮಾದಿ ಅಷ್ಟಸಿದ್ಧಿಗಳಿಂದಲೂ, ಮಾಯೆಯೇ ಮೊದಲಾದ ಜಗತ್ಕಾರಣ ಶಕ್ತಿಗಳಿಂದಲೂ, ಮಹತ್ತತ್ವವೇ ಮೊದಲಾದ ಇಪ್ಪತ್ತುನಾಲ್ಕು ತತ್ತ್ವಗಳಿಂದಲೂ ಸುತ್ತುವರಿಯಲ್ಪಟ್ಟಿದ್ದಿತು. ॥52॥
(ಶ್ಲೋಕ-53)
ಮೂಲಮ್
ಕಾಲಸ್ವಭಾವಸಂಸ್ಕಾರಕಾಮಕರ್ಮಗುಣಾದಿಭಿಃ ।
ಸ್ವಮಹಿಧ್ವಸ್ತಮಹಿಭಿರ್ಮೂರ್ತಿಮದ್ಭಿರುಪಾಸಿತಾಃ ॥
ಅನುವಾದ
ಪ್ರಕೃತಿಯಲ್ಲಿ ಕ್ಷೋಭೆಯನ್ನುಂಟು ಮಾಡುವ ಕಾಲ, ಅದರ ಪರಿಣಾಮದ ಕಾರಣ ಸ್ವಭಾವ, ವಾಸನೆಗಳನ್ನು ಜಾಗ್ರತಗೊಳಿಸುವಂತಹ ಸಂಸ್ಕಾರಗಳು, ಕಾಮನೆಗಳು, ಕರ್ಮ, ವಿಷಯ ಮತ್ತು ಫಲ-ಇವೆಲ್ಲವೂ ಮೂರ್ತಿಮಂತರಾಗಿ ಭಗವಂತನ ಪ್ರತಿಯೊಂದು ರೂಪವನ್ನು ಉಪಾಸಿಸುತ್ತಿದ್ದವು. ಭಗವಂತನ ಸತ್ತೆ ಮತ್ತು ಮಹತ್ತುಗಳ ಎದುರು ಅವೆಲ್ಲವುಗಳ ಅಸ್ತಿತ್ವ ಹಾಗೂ ಮಹತ್ತುಗಳನ್ನು ಕಳಕೊಂಡುಬಿಟ್ಟಿದ್ದವು. ॥53॥
(ಶ್ಲೋಕ-54)
ಮೂಲಮ್
ಸತ್ಯಜ್ಞಾನಾನಂತಾನಂದಮಾತ್ರೈಕರಸಮೂರ್ತಯಃ ।
ಅಸ್ಪೃಷ್ಟಭೂರಿಮಾಹಾತ್ಮ್ಯಾ ಅಪಿ ಹ್ಯುಪನಿಷದ್ದೃಶಾಮ್ ॥
ಅನುವಾದ
ಅವರೆಲ್ಲರೂ ಭೂತ, ಭವಿಷ್ಯತ್ ಮತ್ತು ವರ್ತಮಾನ ಕಾಲಗಳ ಮೂಲಕ ಸೀಮಿತರಾಗಿರದೆ ತ್ರಿಕಾಲಾಬಾಧಿತ ಸತ್ಯವಾಗಿದ್ದರು. ಅವರೆಲ್ಲರೂ ಸ್ವಯಂ ಪ್ರಕಾಶರೂ, ಕೇವಲ ಅನಂತ ಆನಂದ ಸ್ವರೂಪರೂ ಆಗಿದ್ದಾರೆ. ಅವರಲ್ಲಿ ಜಡತೆ ಮತ್ತು ಚೈತನ್ಯದ ಭೇದಭಾವವೇ ಇಲ್ಲ. ಅವರೆಲ್ಲರೂ ಏಕರಸರಾಗಿದ್ದಾರೆ. ಎಲ್ಲಿಯವರೆಗೆಂದರೆ, ಉಪನಿಷದ್ದರ್ಶಿ ತತ್ತ್ವಜ್ಞಾನಿಗಳ ದೃಷ್ಟಿಯೂ ಕೂಡ ಅವರ ಅನಂತ ಮಹಿಮೆಯನ್ನು ಸ್ಪರ್ಶಿಸಲಾರದೆ ಹೋಯಿತು. ॥54॥
(ಶ್ಲೋಕ-55)
ಮೂಲಮ್
ಏವಂ ಸಕೃದ್ದದರ್ಶಾಜಃ ಪರಬ್ರಹ್ಮಾತ್ಮನೋಖಿಲಾನ್ ।
ಯಸ್ಯ ಭಾಸಾ ಸರ್ವಮಿದಂ ವಿಭಾತಿ ಸಚರಾಚರಮ್ ॥
ಅನುವಾದ
ಹೀಗೆ ಅವರೆಲ್ಲರೂ ಆ ಪರಬ್ರಹ್ಮ ಪರಮಾತ್ಮ ಶ್ರೀಕೃಷ್ಣನದೇ ಸ್ವರೂಪರಾಗಿದ್ದಾರೆ. ಅವರ ಪ್ರಕಾಶದಿಂದ ಈ ಇಡೀ ಚರಾಚರ ಜಗತ್ತು ಪ್ರಕಾಶಿಸುತ್ತಿರುವುದನ್ನು ಒಟ್ಟಿಗೆ ಬ್ರಹ್ಮದೇವರು ನೋಡಿದರು.॥55॥
(ಶ್ಲೋಕ-56)
ಮೂಲಮ್
ತತೋತಿಕುತುಕೋದ್ವ ತ್ತಸ್ತಿಮಿತೈಕಾದಶೇಂದ್ರಿಯಃ ।
ತದ್ಧಾಮ್ನಾಭೂದಜಸ್ತೂಷ್ಣೀಂ ಪೂರ್ದೇವ್ಯಂತೀವ ಪುತ್ರಿಕಾ ॥
ಅನುವಾದ
ಇಂತಹ ಅತ್ಯಂತ ಆಶ್ಚರ್ಯಮಯ ದೃಶ್ಯವನ್ನು ನೋಡಿ ಬ್ರಹ್ಮದೇವರು ಚಕಿತರಾದರು. ಅವರ ಹನ್ನೊಂದು ಇಂದ್ರಿಯಗಳು (ಐದು ಕರ್ಮೇಂದ್ರಿಯ, ಐದು ಜ್ಞಾನೇಂದ್ರಿಯ ಮತ್ತು ಒಂದು ಮನಸ್ಸು) ಸ್ತಬ್ಧವಾದುವು. ಅವರು ಭಗವಂತನ ತೇಜದಿಂದ ನಿಸ್ತೇಜಿತರಾಗಿ ಮೌನರಾದರು. ಆಗ ಅವರು ಹೀಗೆ ಸ್ತಬ್ಧರಾಗಿ ನಿಂತಿರುವಾಗ ಗೋಕುಲದ ಅಧಿಷ್ಠಾತೃದೇವತೆಯ ಮುಂದೆ ನಿಂತಿರುವ ಒಂದು ಗೊಂಬೆಯಂತೆಯೇ ಕಾಣುತ್ತಿದ್ದರು. ॥56॥
(ಶ್ಲೋಕ-57)
ಮೂಲಮ್
ಇತೀರೇಶೇತರ್ಕ್ಯೇ ನಿಜಮಹಿಮನಿ ಸ್ವಪ್ರಮಿತಿಕೇ
ಪರತ್ರಾಜಾತೋತನ್ನಿರಸನ ಮುಖಬ್ರಹ್ಮಕಮಿತೌ ।
ಅನೀಶೇಪೀ ದ್ರಷ್ಟುಂ ಕಿಮಿದಮಿತಿ ವಾ ಮುಹ್ಯತಿ ಸತಿ
ಚಛಾದಾಜೋ ಜ್ಞಾತ್ವಾ ಸಪದಿ ಪರಮೋಜಾಜವನಿಕಾಮ್ ॥
ಅನುವಾದ
ಪರೀಕ್ಷಿತನೇ! ಭಗವಂತನ ಸ್ವರೂಪವು ತರ್ಕಕ್ಕೆ ಅತೀತವಾದುದು. ಅವನ ಮಹಿಮೆ ಅಸಾಧಾರಣವಾದುದು. ಅವನು ಸ್ವಯಂ ಪ್ರಕಾಶನೂ, ಆನಂದಸ್ವರೂಪನೂ, ಮಾಯೆಯಿಂದ ಅತೀತನೂ ಆಗಿದ್ದಾನೆ. ವೇದಾಂತವೂ ಕೂಡ ಸಾಕ್ಷಾತ್ತಾಗಿ ಅವನನ್ನು ವರ್ಣಿಸಲು ಅಸಮರ್ಥವಾಗಿದೆ. ಅದಕ್ಕಾಗಿ ಅವನಿಂದ ಭಿನ್ನವಾದುದನ್ನು ನಿಷೇಧ ಮಾಡುತ್ತಾ ಆನಂದ ಸ್ವರೂಪೀ ಬ್ರಹ್ಮನನ್ನು ಹೇಗೋ, ಕೆಲವು ಸಂಕೇತ ಮಾಡುತ್ತದೆ. ಬ್ರಹ್ಮದೇವರು ಸಮಸ್ತ ವಿದ್ಯೆಗಳ ಅಧಿಪತಿಯಾಗಿದ್ದರೂ ಭಗವಂತನ ದಿವ್ಯಸ್ವರೂಪವನ್ನು ಇದು ಏನು ಎಂದು ಅವರು ಸ್ವಲ್ಪವೂ ತಿಳಿಯದೆ ಹೋದರು. ಅವರು ಭಗವಂತನ ಆ ಮಹಿಮೆಯುಳ್ಳ ರೂಪಗಳನ್ನು ನೋಡುವುದಕ್ಕೆ ಅಸಮರ್ಥರಾಗಿ ಕಣ್ಣು ಮುಚ್ಚಿಕೊಂಡರು. ಭಗವಾನ್ ಶ್ರೀಕೃಷ್ಣನು ಬ್ರಹ್ಮದೇವರ ಈ ಮೋಹ ಮತ್ತು ಅಸಮರ್ಥತೆಯನ್ನು ಮನಗಂಡು ಯಾವುದೇ ಪ್ರಯಾಸವಿಲ್ಲದೆ ಕೂಡಲೇ ತನ್ನ ಮಾಯೆಯ ತೆರೆಯನ್ನು ಸರಿಸಿಬಿಟ್ಟನು. ॥57॥
(ಶ್ಲೋಕ-58)
ಮೂಲಮ್
ತತೋರ್ವಾಕ್ ಪ್ರತಿಲಬ್ಧಾಕ್ಷಃ ಕಃ ಪರೇತವದುತ್ಥಿತಃ ।
ಕೃಚ್ಛ್ರಾದುನ್ಮೀಲ್ಯ ವೈ ದೃಷ್ಟೀರಾಚಷ್ಟೇದಂ ಸಹಾತ್ಮನಾ ॥
ಅನುವಾದ
ಇದರಿಂದ ಬ್ರಹ್ಮದೇವರಿಗೆ ಬಾಹ್ಯಜ್ಞಾನವುಂಟಾಯಿತು. ಸತ್ತವನು ಬದುಕಿ ಎದ್ದು ಕೂಡುವಂತೆ, ಸಚೇತನರಾಗಿ ಅವರು ಹೇಗೋ ಕಷ್ಟಪಟ್ಟು ತಮ್ಮ ಕಣ್ಣುಗಳನ್ನು ತೆರೆದರು. ಆಗ ಅವರಿಗೆ ತನ್ನ ಶರೀರ ಮತ್ತು ಈ ಜಗತ್ತು ಕಾಣತೊಡಗಿತು. ॥58॥
(ಶ್ಲೋಕ-59)
ಮೂಲಮ್
ಸಪದ್ಯೇವಾಭಿತಃ ಪಶ್ಯನ್ದಿಶೋಪಶ್ಯತ್ಪುರಃಸ್ಥಿತಮ್ ।
ವೃಂದಾವನಂ ಜನಾಜೀವ್ಯದ್ರುಮಾಕೀರ್ಣಂ ಸಮಾಪ್ರಿಯಮ್ ॥
ಅನುವಾದ
ಬ್ರಹ್ಮದೇವರು ಸುತ್ತಲೂ ನೋಡತೊಡಗಿದಾಗ ಮೊದಲಿಗೆ ದಿಕ್ಕುಗಳು, ಅನಂತರ ಆಗಲೇ ಅವರ ಮುಂದೆ ವೃಂದಾವನ ಕಂಡು ಬಂತು. ವೃಂದಾವನವು ಎಲ್ಲರಿಗಾಗಿ ಒಂದೇ ರೀತಿ ಪ್ರಿಯವಾಗಿದೆ. ನೊಡಿದಲ್ಲೆಲ್ಲ ಜೀವರಿಗೆ ಜೀವನವನ್ನು ಕೊಡುವಂತಹ ಫಲ-ಪುಷ್ಪಗಳಿಂದ ತುಂಬಿದ, ಹಚ್ಚ ಹಸಿರಾದ ಎಲೆಗಳಿಂದ ಕೂಡಿದ ಮರಗಳ ಸಾಲುಗಳು ಶೋಭಿಸುತ್ತಿದ್ದವು. ॥59॥
(ಶ್ಲೋಕ-60)
ಮೂಲಮ್
ಯತ್ರ ನೈಸರ್ಗದುರ್ವೈರಾಃ ಸಹಾಸನ್ನೃಮೃಗಾದಯಃ ।
ಮಿತ್ರಾಣೀವಾಜಿತಾವಾಸದ್ರುತರುಟ್ತರ್ಷಕಾದಿಕಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನ ಲೀಲಾಭೂಮಿಯಾದ ವೃಂದಾವನ ಧಾಮದಲ್ಲಿ ಕ್ರೋಧ, ತೃಷ್ಣೆ ಮುಂತಾದ ದೋಷಗಳು ಪ್ರವೇಶಿಸಲಾರವು. ಅಲ್ಲಿ ಸ್ವಭಾವತಃ ಪರಸ್ಪರ ವೈರಿಗಳಾದ ಮನುಷ್ಯರು, ಪಶು-ಪಕ್ಷಿಗಳೂ ಕೂಡ ಪ್ರಿಯಮಿತ್ರರಂತೆ ಒಂದಾಗಿ ಸೇರಿ ವಾಸಿಸುತ್ತಿದ್ದರು. ॥60॥
(ಶ್ಲೋಕ-61)
ಮೂಲಮ್
ತತ್ರೋದ್ವಹತ್ಪಶುಪವಂಶಶಿಶುತ್ವನಾಟ್ಯಂ
ಬ್ರಹ್ಮಾದ್ವಯಂ ಪರಮನಂತಮಗಾಧಬೋಧಮ್ ।
ವತ್ಸಾನ್ಸಖೀನಿವ ಪುರಾ ಪರಿತೋ ವಿಚಿನ್ವ-
ದೇಕಂ ಸಪಾಣಿಕವಲಂ ಪರಮೇಷ್ಠ್ಯಚಷ್ಟ ॥
ಅನುವಾದ
ಬ್ರಹ್ಮದೇವರು ವೃಂದಾವನವನ್ನು ದರ್ಶಿಸುವಾಗ ಅದ್ವಿತೀಯ ಪರಬ್ರಹ್ಮನು ಗೋಪಬಾಲಕನಂತೆ ನಾಟ್ಯವಾಡುತ್ತಿರುವುದನ್ನು ನೋಡಿದನು. ಒಬ್ಬನಾಗಿದ್ದರೂ ಅವನಿಗೆ ಮಿತ್ರರಿದ್ದಾರೆ, ಅನಂತನಾಗಿದ್ದರೂ ಅವನು ಅತ್ತ-ಇತ್ತ ತಿರುಗುತ್ತಿರುವನು. ಅವನ ಜ್ಞಾನವು ಅಗಾಧವಾಗಿದ್ದರೂ ಅವನು ತನ್ನ ಸ್ನೇಹಿತರಾದ ಗೋಪಬಾಲಕರನ್ನೂ, ಕರುಗಳನ್ನೂ ಹುಡುಕುತ್ತಿರುವನು. ಭಗವಂತನಾದ ಶ್ರೀಕೃಷ್ಣನು ಮೊದಲು ಕೈಯಲ್ಲಿ ಮೊಸರನ್ನದ ತುತ್ತನ್ನು ಎತ್ತಿಕೊಂಡು ಹುಡುಕುತ್ತಿದ್ದನೋ ಹಾಗೆಯೇ ಈಗಲೂ ಒಬ್ಬನಾಗಿಯೇ ಅವನ್ನು ಹುಡುಕುತ್ತಿರುವುದನ್ನೂ ಬ್ರಹ್ಮದೇವರು ನೋಡಿದರು. ॥61॥
(ಶ್ಲೋಕ-62)
ಮೂಲಮ್
ದೃಷ್ಟ್ವಾ ತ್ವರೇಣ ನಿಜಧೋರಣತೋವತೀರ್ಯ
ಪೃಥ್ವ್ಯಾಂ ವಪುಃ ಕನಕದಂಡಮಿವಾಭಿಪಾತ್ಯ ।
ಸ್ಪೃಷ್ಟ್ವಾ ಚತುರ್ಮುಕುಟಕೋಟಿಭಿರಂಘ್ರಿಯುಗ್ಮಂ
ನತ್ವಾ ಮುದಶ್ರುಸುಜಲೈರಕೃತಾಭಿಷೇಕಮ್ ॥
ಅನುವಾದ
ಭಗವಂತನನ್ನು ಕಾಣುತ್ತಲೇ ಬ್ರಹ್ಮದೇವರು ತಮ್ಮ ವಾಹನವಾದ ಹಂಸದಿಂದ ಕೆಳಗಿಳಿದು, ಚಿನ್ನದಂತೆ ಹೊಳೆಯುತ್ತಿರುವ ತನ್ನ ಶರೀರದಿಂದ ಭೂಮಿಯಲ್ಲಿ ದಂಡವತ್ ಪ್ರಯಾಣ ಮಾಡಿದರು. ಅವರು ತಮ್ಮ ನಾಲ್ಕೂ ಕಿರೀಟಗಳ ಅಗ್ರಭಾಗದಿಂದ ಭಗವಂತನ ಚರಣಗಳನ್ನು ಸ್ಪರ್ಶಿಸುತ್ತಾ ನಮಸ್ಕರಿಸಿದರು ಹಾಗೂ ಆನಂದಾಶ್ರುಗಳಿಂದ ಆ ಪಾದಗಳನ್ನು ತೊಳೆದರು. ॥62॥
(ಶ್ಲೋಕ-63)
ಮೂಲಮ್
ಉತ್ಥಾಯೋತ್ಥಾಯ ಕೃಷ್ಣಸ್ಯ ಚಿರಸ್ಯ ಪಾದಯೋಃ ಪತನ್ ।
ಆಸ್ತೇ ಮಹಿತ್ವಂ ಪ್ರಾಗ್ದೃಷ್ಟಂ ಸ್ಮೃತ್ವಾ ಸ್ಮೃತ್ವಾ ಪುನಃ ಪುನಃ ॥
ಅನುವಾದ
ಅವರು ಭಗವಾನ್ ಶ್ರೀಕೃಷ್ಣನ ಮೊದಲು ನೋಡಿದ ಮಹಿಮೆಯನ್ನು ಪದೇ-ಪದೇ ಸ್ಮರಿಸುತ್ತಾ, ಅವನ ಕಾಲಿಗೆ ಬೀಳುತ್ತಾ, ಏಳುತ್ತಾ ಪುನಃ ಪುನಃ ನಮಸ್ಕರಿಸುತ್ತಾರೆ. ಹೀಗೆ ಬಹಳ ಹೊತ್ತಿನವರೆಗೆ ಅವರು ಭಗವಂತನ ಚರಣಗಳಲ್ಲಿ ಬಿದ್ದುಕೊಂಡೇ ಇದ್ದರು. ॥63॥
(ಶ್ಲೋಕ-64)
ಮೂಲಮ್
ಶನೈರಥೋತ್ಥಾಯ ವಿಮೃಜ್ಯ ಲೋಚನೇ
ಮುಕುಂದಮುದ್ವೀಕ್ಷ್ಯ ವಿನಮ್ರಕಂಧರಃ ।
ಕೃತಾಂಜಲಿಃ ಪ್ರಶ್ರಯವಾನ್ಸಮಾಹಿತಃ
ಸವೇಪಥುರ್ಗದ್ಗದಯೈಲತೇಲಯಾ ॥
ಅನುವಾದ
ಮತ್ತೆ ನಿಧಾನವಾಗಿ ಎದ್ದು ತಮ್ಮ ಕಣ್ಣುಗಳನ್ನು ಒರೆಸಿಕೊಂಡರು. ಭಕ್ತಿ ಮತ್ತು ಮುಕ್ತಿಯ ಏಕಮಾತ್ರ ಉದ್ಗಮನಾದ ಭಗವಂತನನ್ನು ನೋಡಿ ಅವರ ಶಿರವು ಬಾಗಿತು. ನಡುಗುತ್ತಾ ಕೈಗಳನ್ನು ಜೋಡಿಸಿಕೊಂಡು ಅತ್ಯಂತ ವಿನಮ್ರರಾಗಿ, ಏಕಾಗ್ರತೆಯಿಂದ ಗದ್ಗದ ವಾಣಿಯಿಂದ ಬ್ರಹ್ಮದೇವರು ಭಗವಂತನನ್ನು ಸ್ತುತಿಸತೊಡಗಿದರು. ॥64॥
ಅನುವಾದ (ಸಮಾಪ್ತಿಃ)
ಹದಿಮೂರನೆಯ ಅಧ್ಯಾಯವು ಮುಗಿಯಿತು. ॥13॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ತ್ರಯೋದಶೋಽಧ್ಯಾಯಃ ॥13॥