[ಹನ್ನೊಂದನೆಯ ಅಧ್ಯಾಯ]
ಭಾಗಸೂಚನಾ
ಗೋಕುಲದಿಂದ ವೃಂದಾವನಕ್ಕೆ ಹೋದುದು ಹಾಗೂ ವತ್ಸಾಸುರ ಮತ್ತು ಬಕಾಸುರರ ಉದ್ಧಾರ
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
(ಶ್ಲೋಕ-1)
ಮೂಲಮ್
ಗೋಪಾ ನಂದಾದಯಃ ಶ್ರುತ್ವಾ ದ್ರುಮಯೋಃ ಪತತೋ ರವಮ್ ।
ತತ್ರಾಜಗ್ಮುಃ ಕುರುಶ್ರೇಷ್ಠ ನಿರ್ಘಾತಭಯಶಂಕಿತಾಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಕುರುಶ್ರೇಷ್ಠನೇ! ಅರ್ಜುನ ವೃಕ್ಷಗಳು ಬಿದ್ದಾಗ ಉಂಟಾದ ಘೋರ ಶಬ್ದವನ್ನು ಗೋಕುಲದ ನಂದನೇ ಮೊದಲಾದ ಗೋಪಾಲಕರೂ ಕೇಳಿಸಿಕೊಂಡು, ಸಿಡಿಲೇನಾದರೂ ಬಡಿಯಿತೋ ಎಂಬ ಸಂದೇಹದಿಂದ ಅವರೆಲ್ಲರೂ ಆ ವೃಕ್ಷಗಳ ಬಳಿಗೆ ಬಂದರು.॥1॥
(ಶ್ಲೋಕ-2)
ಮೂಲಮ್
ಭೂಮ್ಯಾಂ ನಿಪತಿತೌ ತತ್ರ ದದೃಶುರ್ಯಮಲಾರ್ಜುನೌ ।
ಬಭ್ರಮುಸ್ತದವಿಜ್ಞಾಯ ಲಕ್ಷ್ಯಂ ಪತನಕಾರಣಮ್ ॥
(ಶ್ಲೋಕ-3)
ಮೂಲಮ್
ಉಲೂಖಲಂ ವಿಕರ್ಷಂತಂ ದಾಮ್ನಾ ಬದ್ಧಂ ಚ ಬಾಲಕಮ್ ।
ಕಸ್ಯೇದಂ ಕುತ ಆಶ್ಚರ್ಯಮುತ್ಪಾತ ಇತಿ ಕಾತರಾಃ ॥
ಅನುವಾದ
ಎರಡೂ ವೃಕ್ಷಗಳು ಬುಡಮೇಲಾಗಿ ಉರುಳಿ ಬಿದ್ದಿರುವುದನ್ನು ಅವರೆಲ್ಲರೂ ಕಂಡುರು. ಆ ವೃಕ್ಷಗಳ ಮಧ್ಯಭಾಗದಿಂದ ಸೊಂಟಕ್ಕೆ ಕಟ್ಟಿದ ಒರಳು ಕಲ್ಲನ್ನು ಕೃಷ್ಣನು ಎಳೆದುಕೊಂಡು ದಾಟಿ ಹೋಗಿರುವುದನ್ನು ನೋಡಿದರು. ಆದರೆ ವೃಕ್ಷಗಳು ಬಿದ್ದ ಕಾರಣವನ್ನು ಅವರು ತಿಳಿಯದೇ ಹೋದರು. ಈ ವೃಕ್ಷಗಳನ್ನು ಉರುಳಿಸಿದವರು ಯಾರು? ಹೇಗೆ ಉರುಳಿದುವು? ಇಂತಹ ಆಶ್ಚರ್ಯಕರವಾದ ಘಟನೆ ಹೇಗೆ ನಡೆಯಿತು? ಎಂದು ಯೋಚಿಸಿ ಗಾಬರಿಗೊಂಡರು. ಅವರ ಬುದ್ಧಿಯು ಭ್ರಮಿಸಿತು. ॥2-3॥
(ಶ್ಲೋಕ-4)
ಮೂಲಮ್
ಬಾಲಾ ಊಚುರನೇನೇತಿ ತಿರ್ಯಗ್ಗತಮುಲೂಖಲಮ್ ।
ವಿಕರ್ಷತಾ ಮಧ್ಯಗೇನ ಪುರುಷಾವಪ್ಯಚಕ್ಷ್ಮಹಿ ॥
ಅನುವಾದ
ಅಲ್ಲಿಯೇ ಆಡುತ್ತಿದ್ದ ಕೆಲವು ಬಾಲಕರು ನಂದಾದಿಗಳಿಗೆ ಹೇಳಿದರು — ಅಯ್ಯಾ! ಇದಾದರೋ ಇದೇ ಮುದ್ದುಕೃಷ್ಣನ ಕೆಲಸವಾಗಿದೆ. ಇವನು ಎರಡೂ ವೃಕ್ಷಗಳ ನಡುವಿನಿಂದ ದಾಟಿ ಹೋಗುವಾಗ ಒರಳು ಅಡ್ಡಲಾಗಿ ಸಿಕ್ಕಿಹಾಕಿಕೊಂಡಿತು. ಇವನು ಅದನ್ನು ಸ್ವಲ್ಪ ಎಳೆದಾಗ ಈ ಮರಗಳು ಉರುಳಿ ಬಿದ್ದವು. ನಾವಾದರೋ ಇವುಗಳಿಂದ ಹೊರಟ ಇಬ್ಬರು ದಿವ್ಯ ಪುರುಷರನ್ನೂ, ನೋಡಿದೆವು.॥4॥
(ಶ್ಲೋಕ-5)
ಮೂಲಮ್
ನ ತೇ ತದುಕ್ತಂ ಜಗೃಹುರ್ನ ಘಟೇತೇತಿ ತಸ್ಯ ತತ್ ।
ಬಾಲಸ್ಯೋತ್ಪಾಟನಂ ತರ್ವೋಃ ಕೇಚಿತ್ಸಂದಿಗ್ಧಚೇತಸಃ ॥
ಅನುವಾದ
ಆದರೆ ಗೋಪಾಲಕರು ಈ ಬಾಲಕರ ಮಾತುಗಳನ್ನು ಒಪ್ಪಿಕೊಳ್ಳಲಿಲ್ಲ. ‘ಒಂದು ಪುಟ್ಟ ಬಾಲಕನು ಇಷ್ಟು ದೊಡ್ಡದಾದ ಮರಗಳನ್ನು ಕಿತ್ತು ಹಾಕುವುದು ಇದು ಎಂದಿಗೂ ಸಂಭವವಿಲ್ಲ’ ಎಂದು ಆಡಿಕೊಂಡರು. ಕೆಲವರ ಮನಸ್ಸಿನಲ್ಲಿ ಶ್ರೀಕೃಷ್ಣನ ಮೊದಲಿನ ಲೀಲೆಗಳನ್ನು ನೆನೆದು ಇರಬಹುದೆಂದು ಸಂದೇಹಿಸಿದರು. ॥5॥
(ಶ್ಲೋಕ-6)
ಮೂಲಮ್
ಉಲೂಖಲಂ ವಿಕರ್ಷಂತಂ ದಾಮ್ನಾ ಬದ್ಧಂ ಸ್ವಮಾತ್ಮಜಮ್ ।
ವಿಲೋಕ್ಯ ನಂದಃ ಪ್ರಹಸದ್ವದನೋ ವಿಮುಮೋಚ ಹ ॥
ಅನುವಾದ
ನಂದಗೋಪನು ನೋಡುತ್ತಾನೆ - ತನ್ನ ಪ್ರಾಣಪ್ರಿಯನಾದ ಕಂದಮ್ಮನು ಹಗ್ಗದಿಂದ ಕಟ್ಟಲ್ಪಟ್ಟು ಒರಳನ್ನು ಎಳೆದುಕೊಂಡು ಹೋಗುತ್ತಿರುವನು. ಅವನು ನಗುತ್ತಾ ಲಗುಬಗೆಯಿಂದ ಹೋಗಿ ಹಗ್ಗವನ್ನು ಬಿಡಿಸಿದನು. ॥6॥
ಮೂಲಮ್
(ಶ್ಲೋಕ-7)
ಮೂಲಮ್
ಗೋಪೀಭಿಃ ಸ್ತೋಭಿತೋನೃತ್ಯದ್ಭಗವಾನ್ಬಾಲವತ್ಕ್ವಚಿತ್ ।
ಉದ್ಗಾಯತಿ ಕ್ವಚಿನ್ಮುಗ್ಧಸ್ತದ್ವಶೋ ದಾರುಯಂತ್ರವತ್ ॥
ಅನುವಾದ
ಸರ್ವಶಕ್ತನಾದ ಭಗವಂತನು ಕೆಲವೊಮ್ಮೆ ಗೋಪಿಯರು ಪುಸಲಾಯಿಸಿದಾಗ ಸಾಧಾರಣ ಬಾಲಕರಂತೆ ಕುಣಿಯುತ್ತಿದ್ದನು. ಕೆಲವೊಮ್ಮೆ ಮುಗ್ಧಬಾಲಕನಂತೆ ಹಾಡ ತೊಡಗುವನು. ಅವನು ಅವರ ಕೈಗೊಂಬೆಯಾಗಿ ಪೂರ್ಣವಾಗಿ ಅವರಿಗೆ ಅಧೀನನಾಗಿ ಬಿಟ್ಟಿದ್ದನು.॥7॥
(ಶ್ಲೋಕ-8)
ಮೂಲಮ್
ಬಿಭರ್ತಿ ಕ್ವಚಿದಾಜ್ಞಪ್ತಃ ಪೀಠಕೋನ್ಮಾನಪಾದುಕಮ್ ।
ಬಾಹುಕ್ಷೇಪಂ ಚ ಕುರುತೇ ಸ್ವಾನಾಂ ಚ ಪ್ರೀತಿಮಾವಹನ್ ॥
ಅನುವಾದ
ಕೆಲವೊಮ್ಮೆ ಅವರ ಆಜ್ಞೆಯಂತೆ ಮಣೆಗಳನ್ನು, ಪಾತ್ರೆಗಳನ್ನೂ ಪಾದುಕೆಗಳನ್ನೂ ಹೊತ್ತು ತರುತ್ತಿದ್ದನು. ಕೆಲವೊಮ್ಮೆ ತನ್ನ ಪ್ರೇಮೀ ಭಕ್ತರಿಗೆ (ಗೋಪಿಯರನ್ನು) ಸಂತೋಷವನ್ನು ಉಂಟುಮಾಡಲಿಕ್ಕಾಗಿ ಪೈಲ್ವಾನರಂತೆ ಭುಜಗಳನ್ನು ತಟ್ಟಿಕೊಳ್ಳುತ್ತಾ ಮೇಲೆತ್ತಿ ಹಿಡಿಯುವನು.॥8॥
(ಶ್ಲೋಕ-9)
ಮೂಲಮ್
ದರ್ಶಯಂಸ್ತದ್ವಿದಾಂ ಲೋಕ ಆತ್ಮನೋ ಭೃತ್ಯವಶ್ಯತಾಮ್ ।
ವ್ರಜಸ್ಯೋವಾಹ ವೈ ಹರ್ಷಂ ಭಗವಾನ್ಬಾಲಚೇಷ್ಟಿತೈಃ ॥
ಅನುವಾದ
ಹೀಗೆ ಸರ್ವಶಕ್ತಿಮಂತನಾದ ಭಗವಂತನು ತನ್ನ ಬಾಲಲೀಲೆಗಳಿಂದ ವ್ರಜವಾಸಿಗಳನ್ನು ಸಂತೋಷಪಡಿಸುತ್ತಾ, ಭಗವಂತನೆಂಬ ರಹಸ್ಯವನ್ನು ತಿಳಿದವರಿಗೆ ತಾನು ಭಕ್ತ ಪರಾಧೀನನೆಂಬುದನ್ನು ಪ್ರಕಟಪಡಿಸುತ್ತಿದ್ದನು.॥9॥
(ಶ್ಲೋಕ-10)
ಮೂಲಮ್
ಕ್ರೀಣೀಹಿ ಭೋಃ ಲಾನೀತಿ ಶ್ರುತ್ವಾ ಸತ್ವರಮಚ್ಯುತಃ ।
ಲಾರ್ಥೀ ಧಾನ್ಯಮಾದಾಯ ಯಯೌ ಸರ್ವಲಪ್ರದಃ ॥
ಅನುವಾದ
ಒಂದು ದಿನ ಹಣ್ಣುಮಾರುವವಳೊಬ್ಬಳು ಬಂದು ‘ಹಣ್ಣು ಬಂದಿದೆ! ಹಣ್ಣು ತೆಗೆದುಕೊಳ್ಳಿ’ ಎಂದು ಕೂಗಿಕೊಂಡಳು. ಇದನ್ನು ಕೇಳುತ್ತಲೇ ಸಮಸ್ತ ಕರ್ಮ ಮತ್ತು ಉಪಾಸನೆಗಳ ಫಲವನ್ನು ನೀಡುವಂತಹ ಭಗವಂತನಾದ ಅಚ್ಯುತನು ಹಣ್ಣುಗಳನ್ನು ಕೊಂಡುಕೊಳ್ಳಲು ತನ್ನ ಪುಟ್ಟದಾದ ಬೊಗಸೆಯಲ್ಲಿ ಧಾನ್ಯವನ್ನು ಎತ್ತಿಕೊಂಡು ಓಡಿ ಬಂದನು. ॥10॥
(ಶ್ಲೋಕ-11)
ಮೂಲಮ್
ಲವಿಕ್ರಯಿಣೀ ತಸ್ಯ ಚ್ಯುತಧಾನ್ಯಂ ಕರದ್ವಯಮ್ ।
ಲೈರಪೂರಯದ್ರತ್ನೈಃ ಲಭಾಂಡಮಪೂರಿ ಚ ॥
ಅನುವಾದ
ಅವನ ಬೊಗಸೆಯಿಂದ ಧಾನ್ಯವಾದರೋ ದಾರಿಯಲ್ಲೇ ಚೆಲ್ಲಿ ಹೋಗಿತ್ತು. ಆದರೆ ಹಣ್ಣು ಮಾರುವವಳು ಅವನ ಎರಡೂ ಕೈತುಂಬಾ ಹಣ್ಣುಗಳನ್ನು ಕೊಟ್ಟಳು. ಇತ್ತ ಭಗವಂತನೂ ಕೂಡ ಆಕೆಯ ಹಣ್ಣುಗಳನ್ನು ತುಂಬುವ ಬುಟ್ಟಿಯನ್ನು ನವರತ್ನಗಳಿಂದ ತುಂಬಿಬಿಟ್ಟನು. ॥11॥
(ಶ್ಲೋಕ-12)
ಮೂಲಮ್
ಸರಿತ್ತೀರಗತಂ ಕೃಷ್ಣಂ ಭಗ್ನಾರ್ಜುನಮಥಾಹ್ವಯತ್ ।
ರಾಮಂ ಚ ರೋಹಿಣೀ ದೇವೀ ಕ್ರೀಡಂತಂ ಬಾಲಕೈರ್ಭೃಶಮ್ ॥
ಅನುವಾದ
ಅನಂತರ ಒಂದು ದಿನ ಯಮಳಾರ್ಜುನ ವೃಕ್ಷವನ್ನು ಮುರಿದಿರುವ ಶ್ರೀಕೃಷ್ಣ ಮತ್ತು ಬಲರಾಮರು ಗೊಲ್ಲಬಾಲಕರೊಂದಿಗೆ ಆಡುತ್ತಾ-ಆಡುತ್ತಾ ಯಮುನಾನದಿಯ ತೀರಕ್ಕೆ ಹೋದರು ಹಾಗೂ ಆಟದಲ್ಲಿ ಮೈ ಮರೆತರು. ಆಗ ರೋಹಿಣಿದೇವಿಯು ಅವರಿಬ್ಬರನ್ನೂ ಕರೆಯುತ್ತಾ ಓ ಕೃಷ್ಣಾ! ಓ ಬಲರಾಮಾ! ಬೇಗನೇ ಬನ್ನಿ. ಇನ್ನು ಆಟ ಸಾಕು. ॥12॥
(ಶ್ಲೋಕ-13)
ಮೂಲಮ್
ನೋಪೇಯಾತಾಂ ಯದಾಹೂತೌ ಕ್ರೀಡಾಸಂಗೇನ ಪುತ್ರಕೌ ।
ಯಶೋದಾಂ ಪ್ರೇಷಯಾಮಾಸ ರೋಹಿಣೀ ಪುತ್ರವತ್ಸಲಾಮ್ ॥
ಅನುವಾದ
ಆದರೆ ರೋಹಿಣಿಯು ಎಷ್ಟು ಕರೆದರೂ ಬರಲಿಲ್ಲ. ಕಾರಣ ಅವರಿಬ್ಬರೂ ಆಟದಲ್ಲಿ ತನ್ಮಯರಾಗಿದ್ದರು. ನಾನಾ ರೀತಿಯಿಂದ ಕರೆದಾಗಲೂ ಬಾಲಕರು ಬಾರದಿದ್ದಾಗ ರೋಹಿಣಿಯು ಪುತ್ರವತ್ಸಲೆಯಾದ ಯಶೋದಾದೇವಿಯನ್ನು ಮಕ್ಕಳನ್ನು ಕರೆತರಲು ಕಳಿಸಿದಳು. ॥13॥
(ಶ್ಲೋಕ-14)
ಮೂಲಮ್
ಕ್ರೀಡಂತಂ ಸಾ ಸುತಂ ಬಾಲೈರತಿವೇಲಂ ಸಹಾಗ್ರಜಮ್ ।
ಯಶೋದಾಜೋಹವೀತ್ಕೃಷ್ಣಂ ಪುತ್ರಸ್ನೇಹಸ್ನುತಸ್ತನೀ ॥
ಅನುವಾದ
ಶ್ರೀಕೃಷ್ಣ-ಬಲರಾಮರು ಗೋಪಾಲರೊಡನೆ ಎಷ್ಟೋ ಹೊತ್ತಿನಿಂದ ಆಟವಾಡುತ್ತಿದ್ದರು. ಯಶೋದೆಯು ಹೋಗಿ ಅವರನ್ನು ಕರೆದಳು. ಆಗ ಪುತ್ರನಲ್ಲಿದ್ದ ಅತಿಶಯವಾದ ಪ್ರೀತಿಯಿಂದಾಗಿ ಆಕೆಯ ಸ್ತನಗಳಿಂದ ಹಾಲು ಒಸರುತ್ತಿತ್ತು. ॥14॥
(ಶ್ಲೋಕ-15)
ಮೂಲಮ್
ಕೃಷ್ಣ ಕೃಷ್ಣಾರವಿಂದಾಕ್ಷ ತಾತ ಏಹಿ ಸ್ತನಂ ಪಿಬ ।
ಅಲಂ ವಿಹಾರೈಃ ಕ್ಷುತ್ಕ್ಷಾಂತಃ ಕ್ರೀಡಾಶ್ರಾಂತೋಸಿ ಪುತ್ರಕ ॥
ಅನುವಾದ
ಯಶೋದೆಯು ಕೃಷ್ಣನನ್ನು ಗಟ್ಟಿಯಾಗಿ ಕೂಗುತ್ತಾ - ಓ ಕೃಷ್ಣಾ! ನನ್ನ ಮುದ್ದು ಕಂದಮ್ಮ! ಮೋಹನಕೃಷ್ಣ! ಅರವಿಂದಾಕ್ಷನೇ! ಮಗು! ಚಿನ್ನ! ಬೇಗ ಬಾರೋ! ಸ್ತನ್ಯಪಾನ ಮಾಡು. ಇನ್ನಾದರೂ ನಿನ್ನ ಆಟಗಳನ್ನು ಸಾಕುಮಾಡು, ನೋಡಿಲ್ಲಿ! ಆಟವಾಡಿ ದಣಿದಿರಬಹುದು. ಬೇಗ ಬಾರೋ! ॥15॥
(ಶ್ಲೋಕ-16)
ಮೂಲಮ್
ಹೇ ರಾಮಾಗಚ್ಛ ತಾತಾಶು ಸಾನುಜಃ ಕುಲನಂದನ ।
ಪ್ರಾತರೇವ ಕೃತಾಹಾರಸ್ತದ್ಭವಾನ್ಭೋಕ್ತುಮರ್ಹತಿ ॥
ಅನುವಾದ
ಮುದ್ದುಕಂದ ರಾಮಾ! ನೀನೂ ಬೇಗ ಬಾ. ಯದುಕುಲಕ್ಕೆ ಆನಂದವನ್ನುಂಟು ಮಾಡುವವನೇ! ತಮ್ಮನನ್ನು ಕರೆದುಕೊಂಡು ಬೇಗನೇ ಬಂದು ಬಿಡು. ಇಂದು ನೀವು ಬೆಳಿಗ್ಗೆ ಬೇಗ ಊಟಮಾಡಿದ್ದೀರಿ. ಈಗ ನಿಮಗೆ ಹಸಿವಾಗಿರಬಹುದು. ಏನಾದರೂ ತಿಂದುಕೊಳ್ಳಿ. ॥16॥
(ಶ್ಲೋಕ-17)
ಮೂಲಮ್
ಪ್ರತೀಕ್ಷತೇ ತ್ವಾಂ ದಾಶಾರ್ಹ ಭೋಕ್ಷ್ಯಮಾಣೋ ವ್ರಜಾಧಿಪಃ ।
ಏಹ್ಯಾವಯೋಃ ಪ್ರಿಯಂ ಧೇಹಿ ಸ್ವಗೃಹಾನ್ಯಾತ ಬಾಲಕಾಃ ॥
ಅನುವಾದ
ದಾಶಾರ್ಹ ಕುಲತಿಲಕನೇ! ವ್ರಜರಾಜರಾದ ನಂದಗೋಪರು ಊಟ ಮಾಡಲು ನಿಮಗಾಗಿ ಕಾಯುತ್ತಿದ್ದಾರೆ. ಬೇಗನೇ ಬಂದು ನಮ್ಮಿಬ್ಬರನ್ನೂ ಸಂತೋಷಪಡಿಸಿರಿ. ಗೋಪಬಾಲಕರೇ! ನೀವೂ ನಿಮ್ಮ-ನಿಮ್ಮ ಮನೆಗಳಿಗೆ ಹೋಗಿರಿ.॥17॥
(ಶ್ಲೋಕ-18)
ಮೂಲಮ್
ಧೂಲಿಧೂಸರಿತಾಂಗಸ್ತ್ವಂ ಪುತ್ರ ಮಜ್ಜನಮಾವಹ ।
ಜನ್ಮರ್ಕ್ಷಮದ್ಯ ಭವತೋ ವಿಪ್ರೇಭ್ಯೋ ದೇಹಿ ಗಾಃ ಶುಚಿಃ ॥
ಅನುವಾದ
ಮಗೂ! ನೋಡಿರಲ್ಲ. ನಿನ್ನ ಮೈಗೆ ಧೂಳೆಲ್ಲ ಮೆತ್ತಿಕೊಂಡಿದೆ. ಬಾ, ಬೇಗನೇ ಸ್ನಾನಮಾಡಿಕೋ. ಇಂದು ನಿನ್ನ ಜನ್ಮ ನಕ್ಷತ್ರವಾಗಿದೆ. ಶುಚಿರ್ಭೂತನಾಗಿ ಬ್ರಾಹ್ಮಣರಿಗೆ ಗೋದಾನವನ್ನು ಮಾಡು. ॥18॥
(ಶ್ಲೋಕ-19)
ಮೂಲಮ್
ಪಶ್ಯ ಪಶ್ಯ ವಯಸ್ಯಾಂಸ್ತೇ ಮಾತೃಮೃಷ್ಟಾನ್ಸ್ವಲಂಕೃತಾನ್ ।
ತ್ವಂ ಚ ಸ್ನಾತಃ ಕೃತಾಹಾರೋ ವಿಹರಸ್ವ ಸ್ವಲಂಕೃತಃ ॥
ಅನುವಾದ
ಅದೋ ನಿನ್ನ ಜೊತೆಯವರನ್ನು ನೋಡು. ಅವರೆಲ್ಲರನ್ನು ಅವರ ತಾಯಂದಿರು ಸ್ನಾನಮಾಡಿಸಿ ಒಳ್ಳೆಯ ಅಂದವಾದ ಉಡಿಗೆ ತೊಡಿಗೆಗಳಿಂದ ಶೃಂಗರಿಸಿರುವರು. ಈಗ ನೀನೂ ಸ್ನಾನಮಾಡಿಸಿಕೊಂಡು, ಒಳ್ಳೆಯ ಬಟ್ಟೆಗಳನ್ನು ಧರಿಸಿಕೊಂಡು, ಉಂಡು-ತಿಂದು ಮತ್ತೆ ಆಡುವೆಯಂತೆ. ॥19॥
ಮೂಲಮ್
(ಶ್ಲೋಕ-20)
ಇತ್ಥಂ ಯಶೋದಾ ತಮಶೇಷಶೇಖರಂ
ಮತ್ವಾ ಸುತಂ ಸ್ನೇಹನಿಬದ್ಧಧೀರ್ನೃಪ ।
ಹಸ್ತೇ ಗೃಹೀತ್ವಾ ಸಹರಾಮಮಚ್ಯುತಂ
ನೀತ್ವಾ ಸ್ವವಾಟಂ ಕೃತವತ್ಯಥೋದಯಮ್ ॥
ಅನುವಾದ
ಪರೀಕ್ಷತನೇ! ಯಶೋದೆಯ ಮನ-ಪ್ರಾಣಗಳು ಪುತ್ರಪ್ರೇಮದಿಂದ ಬಂಧಿಸಲ್ಪಟ್ಟಿದ್ದವು. ಅವಳು ಚರಾಚರ ಜಗತ್ತಿನ ಶಿರೋಮಣಿ ಭಗವಂತನನ್ನು ತನ್ನ ಪುತ್ರನೆಂದೇ ತಿಳಿಯುತ್ತಿದ್ದಳು. ಹೀಗೆ ಕರೆದು ಒಂದು ಕೈಯಿಂದ ಬಲರಾಮನನ್ನು, ಇನ್ನೊಂದು ಕೈಯಿಂದ ಕೃಷ್ಣನನ್ನೂ ಹಿಡಿದುಕೊಂಡು ಮನೆಗೆ ನಡೆದಳು. ಬಳಿಕ ಅವರಿಗೆ ಸ್ನಾನಾದಿಗಳನ್ನು ಮಾಡಿಸಿ, ಜನ್ಮೋತ್ಸವಕ್ಕೆ ಸಂಬಂಧಪಟ್ಟ ಮಂಗಳ ಕಾರ್ಯಗಳನ್ನು ಅತ್ಯಂತ ಪ್ರೀತಿಯಿಂದ ನೆರವೇರಿಸಿದಳು.॥20॥
(ಶ್ಲೋಕ-21)
ಮೂಲಮ್
ಗೋಪವೃದ್ಧಾ ಮಹೋತ್ಪಾತಾನನುಭೂಯ ಬೃಹದ್ವನೇ ।
ನಂದಾದಯಃ ಸಮಾಗಮ್ಯ ವ್ರಜಕಾರ್ಯಮಮಂತ್ರಯನ್ ॥
ಅನುವಾದ
ಗೋಕುಲದಲ್ಲಿ ಒಂದಿಲ್ಲೊಂದು ಉತ್ಪಾತಗಳು ನಡೆಯುತ್ತಿರುವುದನ್ನು ನಂದಗೋಪನೇ ಮೊದಲಾದ ವೃದ್ಧರಾದಗೋಪರು ಗಮನಿಸಿದಾಗ, ಅವರೆಲ್ಲರೂ ಸೇರಿ— ‘ಈಗ ವ್ರಜವಾಸಿಗಳು ಏನು ಮಾಡಬೇಕು?’ ಎಂದು ಈ ವಿಷಯದ ಕುರಿತು ಯೋಚಿಸತೊಡಗಿದರು.॥21॥
(ಶ್ಲೋಕ-22)
ಮೂಲಮ್
ತತ್ರೋಪನಂದನಾಮಾಹ ಗೋಪೋ ಜ್ಞಾನವಯೋಧಿಕಃ ।
ದೇಶಕಾಲಾರ್ಥತತ್ತ್ವಜ್ಞಃ ಪ್ರಿಯಕೃದ್ರಾಮಕೃಷ್ಣಯೋಃ ॥
ಅನುವಾದ
ಅವರಲ್ಲಿ ಉಪನಂದನೆಂಬ ವಯೋವೃದ್ಧನೂ, ಜ್ಞಾನ ವೃದ್ಧನೂ ಆದ ಓರ್ವಗೋಪನಿದ್ದನು. ಯಾವ ಸಮಯದಲ್ಲಿ ಯಾರೊಂದಿಗೆ ಹೇಗೆ ವ್ಯವಹರಿಸಬೇಕೆಂಬ ಅರಿವು ಅವನಿಗೆ ಚೆನ್ನಾಗಿತ್ತು. ಜೊತೆಗೆ - ‘ಬಲರಾಮ-ಕೃಷ್ಣರು ಸುಖವಾಗಿ ಇರಬೇಕು, ಅವರಿಗೆ ಯಾವುದೇ ಆಪತ್ತು ಬರಬಾರದೆಂದು ಬಯಸುತ್ತಿದ್ದನು. ಅವನೆಂದನು - ॥22॥
(ಶ್ಲೋಕ-23)
ಮೂಲಮ್
ಉತ್ಥಾತವ್ಯಮಿತೋಸ್ಮಾಭಿರ್ಗೋಕುಲಸ್ಯ ಹಿತೈಷಿಭಿಃ ।
ಆಯಾಂತ್ಯತ್ರ ಮಹೋತ್ಪಾತಾ ಬಾಲಾನಾಂ ನಾಶಹೇತವಃ ॥
ಅನುವಾದ
ಬಂಧುಗಳೆ! ನಿಮಗೆ ತಿಳಿದಿರುವಂತೆ ಬಾಲಕರ ವಿನಾಶಕ್ಕೆ ಕಾರಣವಾದ ಉತ್ಪಾತಗಳು ಇಲ್ಲಿ ಆಗಿಂದಾಗ್ಗೆ ನಡೆಯುತ್ತಲೇ ಇವೆ. ಆದುದರಿಂದ ಗೋಕುಲಕ್ಕೂ, ಗೋಪಾಲರಿಗೂ ಹಿತವನ್ನು ಬಯಸುವೆಯಾದರೆ ನಾವು ಇಲ್ಲಿಂದ ಬೇರೆಲ್ಲಿಗಾದರೂ ಹೋಗಬೇಕು.॥23॥
(ಶ್ಲೋಕ-24)
ಮೂಲಮ್
ಮುಕ್ತಃ ಕಥಂಚಿದ್ರಾಕ್ಷಸ್ಯಾ ಬಾಲಘ್ನ್ಯಾ ಬಾಲಕೋ ಹ್ಯಸೌ ।
ಹರೇರನುಗ್ರಹಾನ್ನೂನಮನಶ್ಚೋಪರಿ ನಾಪತತ್ ॥
ಅನುವಾದ
ಈ ನಮ್ಮ ನಂದಗೋಪನ ಮಗನಾದ ಶ್ರೀಕೃಷ್ಣನು ಬಾಲಹಂತಕಳಾದ ಪೂತನಾ ರಾಕ್ಷಸಿಯಿಂದ ದೈವವಶಾತ್ ಉಳಿದುಕೊಂಡನು. ಹರಿಯ ಅನುಗ್ರಹದಿಂದಲೇ ಸಾಮಗ್ರಿಗಳು ತುಂಬಿದ್ದ ಗಾಡಿಯು ತಲೆಕೆಳಗಾಗಿ ಬಿದ್ದರೂ ಈ ಬಾಲಕೃಷ್ಣನ ಮೇಲೆ ಬೀಳಲಿಲ್ಲ. ॥24॥
(ಶ್ಲೋಕ-25)
ಮೂಲಮ್
ಚಕ್ರವಾತೇನ ನೀತೋಯಂ ದೈತ್ಯೇನ ವಿಪದಂ ವಿಯತ್ ।
ಶಿಲಾಯಾಂ ಪತಿತಸ್ತತ್ರ ಪರಿತ್ರಾತಃ ಸುರೇಶ್ವರೈಃ ॥
ಅನುವಾದ
ಸುಂಟರಗಾಳಿಯಾಗಿ ಬಂದ ತೃಣಾವರ್ತನು ಈ ಮುದ್ದು ಕಂದನನ್ನು ಅಂತರಿಕ್ಷಕ್ಕೆ ಹಾರಿಸಿಕೊಂಡು ಹೋಗಿ ಭಾರೀ ವಿಪತ್ತನ್ನೇ ತಂದೊಡ್ಡಿದನು. ಆದರೆ ಆಗಸದಿಂದ ದೈತ್ಯನೊಂದಿಗೆ ಬಂಡೆಯ ಮೇಲೆ ಬಿದ್ದಾಗಲೂ ಸುರೇಶ್ವರನ ಪರಮಾನುಗ್ರಹದಿಂದ ಬಾಲಕನು ಬದುಕುಳಿದನು.॥25॥
(ಶ್ಲೋಕ-26)
ಮೂಲಮ್
ಯನ್ನ ಮ್ರಿಯೇತ ದ್ರುಮಯೋರಂತರಂ ಪ್ರಾಪ್ಯ ಬಾಲಕಃ ।
ಅಸಾವನ್ಯತಮೋ ವಾಪಿ ತದಪ್ಯಚ್ಯುತರಕ್ಷಣಮ್ ॥
ಅನುವಾದ
ಜೋಡೀ ಅತ್ತಿಮರಗಳು ಉರುಳಿದಾಗ ಅವುಗಳ ಮಧ್ಯದಲ್ಲಿಯೇ ಇದ್ದರೂ ಇವನು ಹಾಗೂ ಇತರ ಬಾಲಕರು ಸಾಯಲಿಲ್ಲ. ಆಗಲೂ ಭಗವಾನ್ ಅಚ್ಯುತನೇ ಇವನನ್ನು ರಕ್ಷಿಸಿದನೆಂದೇ ತಿಳಿಯಬೇಕು.॥26॥
(ಶ್ಲೋಕ-27)
ಮೂಲಮ್
ಯಾವದೌತ್ಪಾತಿಕೋರಿಷ್ಟೋ ವ್ರಜಂ ನಾಭಿಭವೇದಿತಃ ।
ತಾವದ್ಬಾಲಾನುಪಾದಾಯ ಯಾಸ್ಯಾಮೋನ್ಯತ್ರ ಸಾನುಗಾಃ ॥
ಅನುವಾದ
ಅದಕ್ಕಾಗಿ ಯಾವುದೇ ದೊಡ್ಡ ಅನಿಷ್ಟವು ನಮಗೆ ಮತ್ತು ನಮ್ಮ ಈ ವ್ರಜಕ್ಕೆ ಸಂಭವಿಸಿ ನಾಶವಾಗುವ ಮೊದಲೇ ನಾವುಗಳು ನಮ್ಮ ಮಕ್ಕಳನ್ನು ಕರಕೊಂಡು, ಅನುಯಾಯಿಗಳೊಂದಿಗೆ ಬೇರೆಲ್ಲಿಗಾದರೂ ಹೊರಟು ಹೋಗಬೇಕು. ॥27॥
(ಶ್ಲೋಕ-28)
ಮೂಲಮ್
ವನಂ ವೃಂದಾವನಂ ನಾಮ ಪಶವ್ಯಂ ನವಕಾನನಮ್ ।
ಗೋಪಗೋಪೀಗವಾಂ ಸೇವ್ಯಂ ಪುಣ್ಯಾದ್ರಿತೃಣವೀರುಧಮ್ ॥
ಅನುವಾದ
ನನಗೆ ತಿಳಿದಿರುವಂತೆ ಇಲ್ಲಿ ಸಮೀಪವೇ ವೃಂದಾವನ ಎಂಬ ಹಚ್ಚಹಸಿರಾದ ಹುಲ್ಲಿನಿಂದಲೂ, ಲತಾ-ವೃಕ್ಷಗಳಿಂದಲೂ ಕೂಡಿದ ನಿರಂತರ ನಿತ್ಯ-ನೂತನವಾದ ಒಂದು ಕಾಡು ಇದೆ. ಅಲ್ಲೊಂದು ಪವಿತ್ರವಾದ, ದೊಡ್ಡ ಪರ್ವತವೊಂದೂ ಇರುವುದು. ನಮ್ಮ ಪಶುಗಳಿಗಂತೂ ಬಹಳ ಹಿತಕರವಾಗಿದೆ. ಗೋಪ-ಗೋಪಿಯರಿಗೆ ಮತ್ತು ಹಸುಗಳಿಗೆ ಅದು ಕೇವಲ ಅನುಕೂಲದಾಯಕವಷ್ಟೇ ಅಲ್ಲ ಸೇವಿಸಲು ಯೋಗ್ಯವಾದ ಸ್ಥಾನವಾಗಿದೆ. ॥28॥
(ಶ್ಲೋಕ-29)
ಮೂಲಮ್
ತತ್ತತ್ರಾದ್ಯೈವ ಯಾಸ್ಯಾಮಃ ಶಕಟಾನ್ಯುಂಕ್ತ ಮಾ ಚಿರಮ್ ।
ಗೋಧನಾನ್ಯಗ್ರತೋ ಯಾಂತು ಭವತಾಂ ಯದಿ ರೋಚತೇ ॥
ಅನುವಾದ
ನಾನು ಹೇಳಿದುದು ನಿಮ್ಮಲ್ಲರಿಗೆ ಸರಿಯೆಂದು ಕಂಡರೆ ಇಂದೇ ನಾವೆಲ್ಲ ಅಲ್ಲಿಗೆ ಹೊರಟುಬಿಡೋಣ. ತಡಮಾಡದೆ ನಮ್ಮ ಸಂಪತ್ತಾದ ಹಸುಗಳು ಮುಂದಾಗಿ ಹೋಗಲಿ. ಬಂಡಿಗಳನ್ನು ಹೂಡಿ ಬೇಗನೆ ಹೊರಡಿರಿ.॥29॥
(ಶ್ಲೋಕ-30)
ಮೂಲಮ್
ತಚ್ಛ್ರುತ್ವೈಕಧಿಯೋ ಗೋಪಾಃ ಸಾಧು ಸಾಧ್ವಿತಿ ವಾದಿನಃ ।
ವ್ರಜಾನ್ಸ್ವಾನ್ಸ್ವಾನ್ ಸಮಾಯುಜ್ಯ ಯಯೂ ರೂಢಪರಿಚ್ಛದಾಃ ॥
ಅನುವಾದ
ಪರೀಕ್ಷಿತನೇ! ಉಪನಂದನ ಮಾತನ್ನು ಕೇಳುತ್ತಲೇ ಗೋಪಾಲಕರೆಲ್ಲರೂ ಒಂದೇ ಮನಸ್ಸಿನಿಂದ ಒಳ್ಳೆಯದು ತುಂಬಾ ಒಳ್ಳೆಯದು ನೀನು ಹೇಳಿರುವುದು ಸರಿಯಾಗಿದೆ ಎಂದು ದನಿಗೂಡಿಸಿದರು. ಈ ವಿಷಯದಲ್ಲಿ ಯಾರಿಗೂ ಮತಭೇದವಿರಲಿಲ್ಲ. ಎಲ್ಲರೂ ತಮ್ಮ-ತಮ್ಮ ಹಸುಗಳನ್ನು ಒಂದುಗೂಡಿಸಿ ಮುಂದಿಟ್ಟುಕೊಂಡು ಮನೆಯ ಸಾಮಗ್ರಿಗಳನ್ನು ಬಂಡಿಗಳ ಮೇಲೆ ಹೇರಿ ವೃಂದಾವನದ ಕಡೆಗೆ ಹೊರಟರು.॥30॥
(ಶ್ಲೋಕ-31)
ಮೂಲಮ್
ವೃದ್ಧಾನ್ಬಾಲಾನ್ ಸಿಯೋ ರಾಜನ್ಸರ್ವೋಪಕರಣಾನಿ ಚ ।
ಅನಸ್ಸ್ವಾರೋಪ್ಯ ಗೋಪಾಲಾ ಯತ್ತಾ ಆತ್ತಶರಾಸನಾಃ ॥
ಅನುವಾದ
ಪರೀಕ್ಷಿದ್ರಾಜನೇ! ಗೋಪಾಲಕರು ಮುದುಕರನ್ನೂ, ಮಕ್ಕಳನ್ನೂ, ಹೆಂಗಸರನ್ನೂ ಗಾಡಿಗಳ ಮೇಲೆ ಕುಳ್ಳಿರಿಸಿಕೊಂಡು ಹಲವಾರು ಬಂಡಿಗಳಲ್ಲಿ ಸಾಮಗ್ರಿಗಳನ್ನು ತುಂಬಿಕೊಂಡು ಧನುರ್ಬಾಣಗಳನ್ನು ಧರಿಸಿಕೊಂಡು ಆ ಗಾಡಿಗಳ ಹಿಂದೆ-ಹಿಂದೆಯೇ ಜಾಗರೂಕತೆಯಿಂದ ಹೋಗುತ್ತಿದ್ದರು.॥31॥
(ಶ್ಲೋಕ-32)
ಮೂಲಮ್
ಗೋಧನಾನಿ ಪುರಸ್ಕೃತ್ಯ ಶೃಂಗಾಣ್ಯಾಪೂರ್ಯ ಸರ್ವತಃ ।
ತೂರ್ಯಘೋಷೇಣ ಮಹತಾ ಯಯುಃ ಸಹಪುರೋಹಿತಾಃ ॥
ಅನುವಾದ
ಅವರು ಹಸು-ಕರುಗಳನ್ನು ಮುಂದೆ ಬಿಟ್ಟುಕೊಂಡು ಹಿಂದಿನಿಂದ ಬಾರಿ-ಬಾರಿಗೂ ಕೊಂಬು-ಕಹಳೆಗಳನ್ನು ಜೋರಾಗಿ ಊದುತ್ತಾ, ಪುರೋಹಿತರೊಡನೆ ಗೋಪಾಲಕರು ನಡೆದುಕೊಂಡು ಹೋಗುತ್ತಿದ್ದರು.॥32॥
(ಶ್ಲೋಕ-33)
ಮೂಲಮ್
ಗೋಪ್ಯೋ ರೂಢರಥಾ ನೂತ್ನಕುಚಕುಂಕುಮಕಾಂತಯಃ ।
ಕೃಷ್ಣಲೀಲಾ ಜಗುಃ ಪ್ರೀತಾ ನಿಷ್ಕಕಂಠ್ಯಃ ಸುವಾಸಸಃ ॥
ಅನುವಾದ
ಗೋಪಿಯರು ಸುಂದರವಾದ ವಸ್ತ್ರಗಳನ್ನು ವಿವಿಧವಾದ ಚಿನ್ನದ ಒಡವೆಗಳನ್ನು ಸಿಂಗರಿಸಿಕೊಂಡು ರಥಗಳಲ್ಲಿ ಕುಳಿತುಕೊಂಡು ಸಾಗುವಾಗ ಭಗವಾನ್ ಶ್ರೀಕೃಷ್ಣನ ಬಾಲಲೀಲೆಗಳನ್ನು ಆನಂದವಾಗಿ ಹಾಡುತ್ತಿದ್ದರು. ॥33॥
(ಶ್ಲೋಕ-34)
ಮೂಲಮ್
ತಥಾ ಯಶೋದಾರೋಹಿಣ್ಯಾವೇಕಂ ಶಕಟಮಾಸ್ಥಿತೇ ।
ರೇಜತುಃ ಕೃಷ್ಣರಾಮಾಭ್ಯಾಂ ತತ್ಕಥಾಶ್ರವಣೋತ್ಸುಕೇ ॥
ಅನುವಾದ
ಯಶೋದಾದೇವಿಯೂ, ರೋಹಿಣೀ ಇವರೂ ಅಂದವಾಗಿ ಅಲಂಕರಿಸಿಕೊಂಡು ತಮ್ಮ-ತಮ್ಮ ಕಂದಮ್ಮಗಳಾದ ಬಲರಾಮ, ಶ್ರೀಕೃಷ್ಣರನ್ನು ಎತ್ತಿಕೊಂಡು ಒಂದೇ ಗಾಡಿಯಲ್ಲಿ ಕುಳಿತುಕೊಂಡು ಹೋಗುತ್ತಿದ್ದರು. ಗೊಲ್ಲತಿಯರು ಹಾಡುತ್ತಿದ್ದ ಶ್ರೀಕೃಷ್ಣನ ಪರವಾದ ಗೀತೆಗಳನ್ನು ವಿಶೇಷವಾದ ಉತ್ಸಾಹದಿಂದ ಕೇಳುತ್ತಿದ್ದರು. ॥34॥
(ಶ್ಲೋಕ-35)
ಮೂಲಮ್
ವೃಂದಾವನಂ ಸಂಪ್ರವಿಶ್ಯ ಸರ್ವಕಾಲಸುಖಾವಹಮ್ ।
ತತ್ರ ಚಕ್ರುರ್ವ್ರಜಾವಾಸಂ ಶಕಟೈರರ್ಧಚಂದ್ರವತ್ ॥
ಅನುವಾದ
ವೃಂದಾವನವು ಅತ್ಯಂತ ಸುಂದರವಾದ ವನ. ಎಲ್ಲ ಋತುಗಳಲ್ಲೂ ಅಲ್ಲಿ ಸುಖವೇ ಸುಖವು ತುಂಬಿತ್ತು. ವೃಂದಾವನವನ್ನು ಪ್ರವೇಶಿಸಿ ಗೋಪಾಲಕರು ತಮ್ಮ ಚಕ್ಕಡಿಗಳನ್ನು ಅರ್ಧಚಂದ್ರಾಕಾರ ಮಂಡಲವಾಗಿಸಿ ನಿಲ್ಲಿಸಿಕೊಂಡು, ತಮ್ಮ ಹಸು-ಕರುಗಳಿಗೆ ಯೋಗ್ಯವಾದ ಸ್ಥಳವನ್ನು ಕಲ್ಪಿಸಿಕೊಂಡರು. ॥35॥
(ಶ್ಲೋಕ-36)
ಮೂಲಮ್
ವೃಂದಾವನಂ ಗೋವರ್ಧನಂ ಯಮುನಾಪುಲಿನಾನಿ ಚ ।
ವೀಕ್ಷ್ಯಾಸೀದುತ್ತಮಾ ಪ್ರೀತೀ ರಾಮಮಾಧವಯೋರ್ನೃಪ ॥
ಅನುವಾದ
ಪರೀಕ್ಷಿತನೇ! ವೃಂದಾವನದ ಹಚ್ಚ ಹಸಿರು ವನವನ್ನೂ, ಅತ್ಯಂತ ಮನೋಹರ ಗೋವರ್ಧನ ಪರ್ವತವನ್ನೂ, ಯಮುನಾ ನದಿಯ ತೀರದಲ್ಲಿರುವ ಸುಂದರವಾದ ಮರಳರಾಶಿಗಳನ್ನು ನೋಡಿ ಭಗವಾನ್ ಶ್ರೀಕೃಷ್ಣ ಮತ್ತು ಬಲರಾಮರು ಆನಂದದಿಂದ ಉಬ್ಬಿಹೋದರು. ॥36॥
(ಶ್ಲೋಕ-37)
ಮೂಲಮ್
ಏವಂ ವ್ರಜೌಕಸಾಂ ಪ್ರೀತಿಂ ಯಚ್ಛಂತೌ ಬಾಲಚೇಷ್ಟಿತೈಃ ।
ಕಲವಾಕ್ಯೈಃ ಸ್ವಕಾಲೇನ ವತ್ಸಪಾಲೌ ಬಭೂವತುಃ ॥
ಅನುವಾದ
ರಾಮ-ಕೃಷ್ಣರಿಬ್ಬರೂ ತಮ್ಮ ತೊದಲು ಮಾತುಗಳಿಂದ ಹಾಗೂ ಅತ್ಯಂತ ಮಧುರ ಬಾಲಲೀಲೆಗಳಿಂದ ಗೋಕುಲದಂತೆ ವೃಂದಾವನದಲ್ಲಿಯೂ ಗೋಪ-ಗೋಪಿಯರಿಗೆ ಆನಂದವನ್ನು ಉಂಟುಮಾಡುತ್ತಿದ್ದರು. ಕೆಲವೇ ದಿನಗಳಲ್ಲಿ ಅವರೂ ಕರುಗಳನ್ನು ಮೇಯಿಸಲು ತೊಡಗಿದರು.॥37॥
(ಶ್ಲೋಕ-38)
ಮೂಲಮ್
ಅವಿದೂರೇ ವ್ರಜಭುವಃ ಸಹ ಗೋಪಾಲದಾರಕೈಃ ।
ಚಾರಯಾಮಾಸತುರ್ವತ್ಸಾನ್ನಾನಾಕ್ರೀಡಾಪರಿಚ್ಛದೌ ॥
(ಶ್ಲೋಕ-39)
ಮೂಲಮ್
ಕ್ವಚಿದ್ವಾದಯತೋ ವೇಣುಂ ಕ್ಷೇಪಣೈಃ ಕ್ಷಿಪತಃ ಕ್ವಚಿತ್ ।
ಕ್ವಚಿತ್ಪಾದೈಃ ಕಿಂಕಿಣೀಭಿಃ ಕ್ವಚಿತ್ಕೃತ್ರಿಮಗೋವೃಷೈಃ ॥
ಅನುವಾದ
ಇತರ ಗೊಲ್ಲಬಾಲಕರೊಂದಿಗೆ ಆಟವಾಡಲು ಬಹಳಷ್ಟು ಸಾಮಗ್ರಿಗಳನ್ನು ಎತ್ತಿಕೊಂಡು ಹೊರಟು, ಹಸುಗಳ ಕೊಟ್ಟಿಗೆಗಳ ಬಳಿಯಲ್ಲೇ ತಮ್ಮ ಕರುಗಳನ್ನು ಮೇಯಿಸುತ್ತಾ ಆಟವಾಡುತ್ತಿದ್ದರು. ಕೆಲವು ವೇಳೆ ರಾಮ-ಕೃಷ್ಣರು ಕೊಳಲನ್ನು ನುಡಿಸುತ್ತಿದ್ದರೆ, ಕೆಲವು ವೇಳೆ ಕವಣೆಗಳಿಂದ ಕಲ್ಲುಗಳನ್ನು ಬೀರುತ್ತಿದ್ದರು. ಕೆಲವೊಮ್ಮೆ ಕಾಲುಗಳಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು ಕುಣಿಯುತ್ತಿದ್ದರೆ, ಕೆಲವೊಮ್ಮೆ ತಾವೇ ಹಸು ಎತ್ತುಗಳಾಗಿ ಆಟವಾಡುತ್ತಿದ್ದರು. ॥38-39॥
(ಶ್ಲೋಕ-40)
ಮೂಲಮ್
ವೃಷಾಯಮಾಣೌ ನರ್ದಂತೌ ಯುಯುಧಾತೇ ಪರಸ್ಪರಮ್ ।
ಅನುಕೃತ್ಯ ರುತೈರ್ಜಂತೂಂಶ್ಚೇರತುಃ ಪ್ರಾಕೃತೌ ಯಥಾ ॥
ಅನುವಾದ
ಕೆಲವೊಮ್ಮೆ ಆಟದಲ್ಲಿ ಹೋರಿಗಳಂತೆ ಗುಟುರು ಹಾಕುತ್ತಾ ಪರಸ್ಪರ ಕಾದಾಡುತ್ತಿದ್ದರು. ಕೆಲವೊಮ್ಮೆ ನವಿಲು, ಕೋಗಿಲೆ, ಕೋತಿ, ನರಿ, ನಾಯಿ ಮುಂತಾದ ಪಶು-ಪಕ್ಷಿಗಳ ಧ್ವನಿಗಳನ್ನು ಅಣಕವಾಡುತ್ತಿದ್ದರು. ಹೀಗೆ ಸರ್ವಶಕ್ತನಾದ ಭಗವಂತನು ಸಾಧಾರಣ ಬಾಲಕರಂತೆ ಆಟವಾಡುತ್ತಿದ್ದನು.॥40॥
(ಶ್ಲೋಕ-41)
ಮೂಲಮ್
ಕದಾಚಿದ್ಯಮುನಾತೀರೇ ವತ್ಸಾಂಶ್ಚಾರಯತೋಃ ಸ್ವಕೈಃ ।
ವಯಸ್ಯೈಃ ಕೃಷ್ಣಬಲಯೋರ್ಜಿಘಾಂಸುರ್ದೈತ್ಯ ಆಗಮತ್ ॥
ಅನುವಾದ
ಹೀಗೆ ಇರುತ್ತಿರಲಾಗಿ ಒಂದುದಿನ ರಾಮ-ಕೃಷ್ಣರು ತಮ್ಮ ಪ್ರಿಯಗೆಳೆಯರೊಂದಿಗೆ ಯಮುನಾತೀರದಲ್ಲಿ ಕರುಗಳನ್ನು ಮೇಯಿಸುತ್ತಿದ್ದಾಗ ಇವರನ್ನು ಸಂಹರಿಸುವ ದುರುದ್ದೇಶದಿಂದ ವತ್ಸಾಸುರನೆಂಬ ದ್ಯೆತ್ಯನೊಬ್ಬನು ಅಲ್ಲಿಗೆ ಬಂದನು.॥41॥
(ಶ್ಲೋಕ-42)
ಮೂಲಮ್
ತಂ ವತ್ಸರೂಪಿಣಂ ವೀಕ್ಷ್ಯ ವತ್ಸಯೂಥಗತಂ ಹರಿಃ ।
ದರ್ಶಯನ್ಬಲದೇವಾಯ ಶನೈರ್ಮುಗ್ಧ ಇವಾಸದತ್ ॥
ಅನುವಾದ
ಅವನು ಕರುವಿನ ರೂಪವನ್ನು ಧರಿಸಿ ಕರುಗಳ ಗುಂಪಿನಲ್ಲಿಯೇ ಸೇರಿಕೊಂಡಿರುವುದನ್ನು ಕಂಡ ಭಗವಂತನು ಕಣ್ಸನ್ನೆಯಿಂದ ಬಲರಾಮನಿಗೆ ತೋರಿಸುತ್ತಾ, ಮೆಲ್ಲ-ಮೆಲ್ಲನೆ ಆ ವತ್ಸಾಸುರನ ಬಳಿಗೆ ಹೋದನು. ಆಗ ದೈತ್ಯನನ್ನು ಗುರುತಿಸದೆ ಆ ಸುಂದರ ಕರುವಿನಲ್ಲಿ ಮುಗ್ಧನಾದವನಂತೆ ಕೃಷ್ಣನು ತೋರಿಸಿಕೊಂಡನು.॥42॥
(ಶ್ಲೋಕ-43)
ಮೂಲಮ್
ಗೃಹೀತ್ವಾ ಪರಪಾದಾಭ್ಯಾಂ ಸಹಲಾಂಗೂಲಮಚ್ಯುತಃ ।
ಭ್ರಾಮಯಿತ್ವಾ ಕಪಿತ್ಥಾಗ್ರೇ ಪ್ರಾಹಿಣೋದ್ಗತಜೀವಿತಮ್ ।
ಸ ಕಪಿತ್ಥೈರ್ಮಹಾಕಾಯಃ ಪಾತ್ಯಮಾನೈಃ ಪಪಾತ ಹ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಕರುವಾಗಿದ್ದ ಆ ಅಸುರನನ್ನು ಬಾಲದೊಂದಿಗೆ ಹಿಂದಿನ ಕಾಲುಗಳನ್ನು ಹಿಡಿದುಕೊಂಡು ಗರಗರನೆ ತಿರುಗಿಸುತ್ತಾ ಬೇಲದ ಮರಕ್ಕೆ ಅಪ್ಪಳಿಸಿದನು. ಇದರಿಂದ ಆ ದೈತ್ಯನು ಗತಪ್ರಾಣನಾಗಿ ಅನೇಕ ಮರಗಳನ್ನು ಉರುಳಿಸುತ್ತಾ ನೆಲದ ಮೇಲೆ ಸತ್ತು ಬಿದ್ದನು. ॥43॥
(ಶ್ಲೋಕ-44)
ಮೂಲಮ್
ತಂ ವೀಕ್ಷ್ಯ ವಿಸ್ಮಿತಾ ಬಾಲಾಃ ಶಶಂಸುಃ ಸಾಧು ಸಾಧ್ವಿತಿ ।
ದೇವಾಶ್ಚ ಪರಿಸಂತುಷ್ಟಾ ಬಭೂವುಃ ಪುಷ್ಪವರ್ಷಿಣಃ ॥
ಅನುವಾದ
ಇದನ್ನು ನೋಡಿದ ಗೊಲ್ಲ ಬಾಲಕರಿಗೆ ಆಶ್ಚರ್ಯದ ಸೀಮೆಯೇ ಉಳಿಯಲಿಲ್ಲ. ಅವರು ಕೃಷ್ಣ! ಭಲೇ-ಭಲೆ ಎಂದು ಕೂಗುತ್ತಾ ಪ್ರಿಯಕೃಷ್ಣನನ್ನು ಹೊಗಳ ತೊಡಗಿದರು. ದೇವತೆಗಳೂ ಕೂಡ ಅತೀವ ಆನಂದದಿಂದ ಹೂ ಮಳೆಗರೆದರು. ॥44॥
(ಶ್ಲೋಕ-45)
ಮೂಲಮ್
ತೌ ವತ್ಸಪಾಲಕೌ ಭೂತ್ವಾ ಸರ್ವಲೋಕೈಕಪಾಲಕೌ ।
ಸಪ್ರಾತರಾಶೋ ಗೋವತ್ಸಾಂಶ್ಚಾರಯಂತೌ ವಿಚೇರತುಃ ॥
ಅನುವಾದ
ಪರೀಕ್ಷಿತನೇ! ಸಮಸ್ತ ಲೋಕಗಳಿಗೆ ರಕ್ಷಕರಾದ ರಾಮ-ಕೃಷ್ಣರು ವತ್ಸಪಾಲಕರಾಗಿ ಬೆಳಿಗ್ಗೆ ಬೇಗನೇ ಎದ್ದು ಊಟದ ಬುತ್ತಿಯನ್ನು ಕಟ್ಟಿಕೊಂಡು ಕರುಗಳನ್ನು ಮೇಯಿಸುತ್ತಾ ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಹೋಗುತ್ತಾ ಸಂಚರಿಸುತ್ತಿದ್ದರು. ॥45॥
(ಶ್ಲೋಕ-46)
ಮೂಲಮ್
ಸ್ವಂ ಸ್ವಂ ವತ್ಸಕುಲಂ ಸರ್ವೇ ಪಾಯಯಿಷ್ಯಂತ ಏಕದಾ ।
ಗತ್ವಾ ಜಲಾಶಯಾಭ್ಯಾಶಂ ಪಾಯಯಿತ್ವಾ ಪಪುರ್ಜಲಮ್ ॥
ಅನುವಾದ
ಹೀಗಿರುತ್ತಾ ಒಂದುದಿನ ಎಲ್ಲ ಗೊಲ್ಲಬಾಲಕರು ತಮ್ಮ ಕರುಗಳ ಗುಂಪುಗಳಿಗೆ ನೀರು ಕುಡಿಸಲು ಜಲಾಶಯದ ತಟಕ್ಕೆ ಕೊಂಡು ಹೋದರು. ಅವರು ಮೊದಲಿಗೆ ಕರುಗಳಿಗೆ ನೀರು ಕುಡಿಸಿ, ತಾವೂ ನೀರುಕುಡಿದರು.॥46॥
(ಶ್ಲೋಕ-47)
ಮೂಲಮ್
ತೇ ತತ್ರ ದದೃಶುರ್ಬಾಲಾ ಮಹಾಸತ್ತ್ವಮವಸ್ಥಿತಮ್ ।
ತತ್ರಸುರ್ವಜ್ರನಿರ್ಭಿನ್ನಂ ಗಿರೇಃ ಶೃಂಗಮಿವ ಚ್ಯುತಮ್ ॥
ಅನುವಾದ
ಅಲ್ಲೇ ಒಂದು ಭಾರೀ ದೊಡ್ಡ ಪ್ರಾಣಿಯು ಕುಳಿತಿರುವುದನ್ನು ಗೊಲ್ಲರು ನೋಡಿದರು. ಇಂದ್ರನ ವಜ್ರದಿಂದ ತುಂಡಾದ ಯಾವುದೋ ಬೆಟ್ಟವೇ ಇಲ್ಲಿ ಬಿದ್ದಿದೆಯೋ ಎಂದು ಅನಿಸುತ್ತಿತ್ತು.॥47॥
(ಶ್ಲೋಕ-48)
ಮೂಲಮ್
ಸ ವೈ ಬಕೋ ನಾಮ ಮಹಾನಸುರೋ ಬಕರೂಪಧೃಕ್ ।
ಆಗತ್ಯ ಸಹಸಾ ಕೃಷ್ಣಂ ತೀಕ್ಷ್ಣತುಂಡೋಗ್ರಸದ್ಬಲೀ ॥
ಅನುವಾದ
ಗೊಲ್ಲಬಾಲಕರು ಅದನ್ನು ನೋಡಿ ಹೆದರಿಹೋದರು. ಅವನು ಬಕನೆಂಬ ಓರ್ವ ಮಹಾ ಅಸುರನಾಗಿದ್ದನು. ಅವನು ಬಕಪಕ್ಷಿಯ ರೂಪವನ್ನು ಧರಿಸಿ ಅಲ್ಲಿಗೆ ಬಂದಿದ್ದನು. ಅದಕ್ಕೆ ಅತೀತೀಕ್ಷ್ಣವಾದ ಕೊಕ್ಕು ಇತ್ತು. ಶ್ರೀಕೃಷ್ಣನನ್ನು ಕಾಣುತ್ತಲೇ ಬಲಿಷ್ಠನಾಗಿದ್ದ ಆ ಅಸುರನು (ಬಕಪಕ್ಷಿಯು) ಚೂಪಾದ ಕೊಕ್ಕಿನಿಂದ ಕೃಷ್ಣನನ್ನು ನುಂಗಿಯೇ ಬಿಟ್ಟನು.॥48॥
(ಶ್ಲೋಕ-49)
ಮೂಲಮ್
ಕೃಷ್ಣಂ ಮಹಾಬಕಗ್ರಸ್ತಂ ದೃಷ್ಟ್ವಾ ರಾಮಾದಯೋರ್ಭಕಾಃ ।
ಬಭೂವುರಿಂದ್ರಿಯಾಣೀವ ವಿನಾ ಪ್ರಾಣಂ ವಿಚೇತಸಃ ॥
ಅನುವಾದ
ಆ ಮಹಾಬಕಪಕ್ಷಿಯು ಶ್ರೀಕೃಷ್ಣನನ್ನು ನುಂಗಿದುದನ್ನು ಕಂಡಾಗ ಬಲರಾಮನೇ ಮುಂತಾದ ಗೋಪ ಬಾಲಕರು ಪ್ರಾಣಗಳು ಹಾರಿ ಹೋದಾಗ ಉಂಟಾಗುವ ಇಂದ್ರಿಯಗಳ ಸ್ಥಿತಿಯಂತೆ ನಿಶ್ಚೇಷ್ಟಿತರಾದರು.॥49॥
(ಶ್ಲೋಕ-50)
ಮೂಲಮ್
ತಂ ತಾಲುಮೂಲಂ ಪ್ರದಹಂತಮಗ್ನಿವದ್
ಗೋಪಾಲಸೂನುಂ ಪಿತರಂ ಜಗದ್ಗುರೋಃ ।
ಚಚ್ಛರ್ದ ಸದ್ಯೋತಿರುಷಾಕ್ಷತಂ ಬಕ-
ಸ್ತುಂಡೇನ ಹಂತುಂ ಪುನರಭ್ಯಪದ್ಯತ ॥
ಅನುವಾದ
ಪರೀಕ್ಷಿತನೇ! ಶ್ರೀಕೃಷ್ಣನು ಲೋಕಪಿತಾಮಹನಾದ ಬ್ರಹ್ಮನಿಗೂ ತಂದೆಯು. ಅವನು ಲೀಲೆಯಿಂದಲೇ ಗೋಪಬಾಲಕನಾಗಿದ್ದನು. ಅವನು ಆ ಬಕಾಸುರನ ದವಡೆಯನ್ನು ಸೇರಿದಾಗ ಒಳಗಿನಿಂದಲೇ ಬೆಂಕಿಯಂತೆ ಸುಡಲಾರಂಭಿಸಿದನು. ಆದ್ದರಿಂದ ಆ ದೈತ್ಯನು ಕೃಷ್ಣನಿಗೆ ಯಾವ ಏಟೂ ಕೊಡಲಾರದೆ ಕೂಡಲೇ ಅವನನ್ನು ಉಗುಳಬೇಕಾಯಿತು. ಮತ್ತೆ ಅತ್ಯಂತ ಕ್ರುದ್ಧನಾದ ಆ ದಾನವನು ತನ್ನ ಹರಿತವಾದ ಕೊಕ್ಕಿನಿಂದಲೇ ಕೃಷ್ಣನನ್ನು ಘಾತಿಸಲು ಮುನ್ನುಗ್ಗಿದನು.॥50॥
(ಶ್ಲೋಕ-51)
ಮೂಲಮ್
ತಮಾಪತಂತಂ ಸ ನಿಗೃಹ್ಯ ತುಂಡಯೋ-
ರ್ದೋರ್ಭ್ಯಾಂ ಬಕಂ ಕಂಸಸಖಂ ಸತಾಂ ಪತಿಃ ।
ಪಶ್ಯತ್ಸು ಬಾಲೇಷು ದದಾರ ಲೀಲಯಾ
ಮುದಾವಹೋ ವೀರಣವದ್ ದಿವೌಕಸಾಮ್ ॥
ಅನುವಾದ
ಭಕ್ತವತ್ಸಲನಾದ ಭಗವಾನ್ ಶ್ರೀಕೃಷ್ಣನು ತನ್ನ ಮೇಲೆ ರಭಸದಿಂದ ಬೀಳುತ್ತಿದ್ದ ಕಂಸನ ಮಿತ್ರನಾದ ಬಕಾಸುರನ ಕೊಕ್ಕನ್ನು ಎರಡೂ ಕೈಗಳಿಂದ ಬಲವಾಗಿ ಹಿಡಿದುಕೊಂಡು, ಗೋಪಬಾಲಕರು ನೋಡುತ್ತಿರುವಂತೆ ನೊಜೆಹುಲ್ಲನ್ನು ಅತಿಸುಲಭವಾಗಿ ಸೀಳಿಹಾಕುವಂತೆ ಲೀಲಾಜಾಲವಾಗಿ ಆ ಅಸುರನನ್ನು ಸೀಳಿ ಹಾಕಿದನು. ಇದರಿಂದ ದೇವತೆಗಳಿಗೆ ಬಹಳ ಆನಂದವಾಯಿತು.॥51॥
(ಶ್ಲೋಕ-52)
ಮೂಲಮ್
ತದಾ ಬಕಾರಿಂ ಸುರಲೋಕವಾಸಿನಃ
ಸಮಾಕಿರನ್ನಂದನಮಲ್ಲಿಕಾದಿಭಿಃ ।
ಸಮೀಡಿರೇ ಚಾನಕಶಂಖಸಂಸ್ತವೈ-
ಸ್ತದ್ವೀಕ್ಷ್ಯ ಗೋಪಾಲಸುತಾ ವಿಸಿಸ್ಮಿರೇ ॥
ಅನುವಾದ
ಸಮಸ್ತ ದೇವತೆಗಳು ಭಗವಾನ್ ಶ್ರೀಕೃಷ್ಣನ ಮೇಲೆ ನಂದನವನದಲ್ಲಿ ಸಿಕ್ಕುವ ಮಲ್ಲಿಗೆ, ಜಾಜಿ, ಪುನ್ನಾಗ, ಪಾರಿಜಾತ ಮುಂತಾದ ಹೂವುಗಳ ಮಳೆಗರೆದರು. ವಿಜಯಸೂಚಕವಾದ ಭೇರಿ-ಮೃದಂಗ, ಶಂಖ ಮೊದಲಾದ ವಾದ್ಯಗಳನ್ನು ಮೊಳಗಿಸಿ, ಸ್ತೋತ್ರಗಳ ಮೂಲಕ ಅವನನ್ನು ಕೊಂಡಾಡತೊಡಗಿದರು. ಇದೆಲ್ಲವನ್ನೂ ನೋಡಿದ ಗೊಲ್ಲಬಾಲಕರೆಲ್ಲರೂ ಆಶ್ಚರ್ಯ ಚಕಿತರಾದರು. ॥52॥
(ಶ್ಲೋಕ-53)
ಮೂಲಮ್
ಮುಕ್ತಂ ಬಕಾಸ್ಯಾದುಪಲಭ್ಯ ಬಾಲಕಾ
ರಾಮಾದಯಃ ಪ್ರಾಣಮಿವೈಂದ್ರಿಯೋ ಗಣಃ ।
ಸ್ಥಾನಾಗತಂ ತಂ ಪರಿರಭ್ಯ ನಿರ್ವೃತಾಃ
ಪ್ರಣೀಯ ವತ್ಸಾನ್ವ್ರಜಮೇತ್ಯ ತಜ್ಜಗುಃ ॥
ಅನುವಾದ
ಶ್ರೀಕೃಷ್ಣನು ಬಕಪಕ್ಷಿಯ ಬಾಯಿಂದ ಹೊರಟು ತಮ್ಮ ಬಳಿಗೆ ಬಂದುದನ್ನು ನೋಡಿದಾಗ ಬಲರಾಮನೇ ಮುಂತಾದ ಗೋಪಬಾಲಕರು ಪ್ರಾಣಸಂಚಾರವಾದಾಗ ಇಂದ್ರಿಯಗಳು ಸಚೇತನವಾಗುವಂತೆ ಆನಂದತುಂದಿಲರಾದರು. ಎಲ್ಲರೂ ಭಗವಂತನನ್ನು ಪ್ರತ್ಯೇಕ ಪ್ರತ್ಯೇಕವಾಗಿ ಬಾಚಿತಬ್ಬಿಕೊಂಡರು. ಇದಾದ ಬಳಿಕ ತಮ್ಮ-ತಮ್ಮ ಕರುಗಳನ್ನು ಅಟ್ಟಿಕೊಂಡು ಎಲ್ಲರೂ ವ್ರಜಕ್ಕೆ ಬಂದು, ಅಲ್ಲಿ ಅವರೆಲ್ಲರೂ ಮನೆಯ ಜನರಿಗೆ ಎಲ್ಲ ವೃತ್ತಾಂತವನ್ನು ಅರುಹಿದರು.॥53॥
(ಶ್ಲೋಕ-54)
ಮೂಲಮ್
ಶ್ರುತ್ವಾ ತದ್ವಿಸ್ಮಿತಾ ಗೋಪಾ ಗೋಪ್ಯಶ್ಚಾತಿಪ್ರಿಯಾದೃತಾಃ ।
ಪ್ರೇತ್ಯಾಗತಮಿವೌತ್ಸುಕ್ಯಾದೈಕ್ಷಂತ ತೃಷಿತೇಕ್ಷಣಾಃ ॥
ಅನುವಾದ
ಪರೀಕ್ಷಿತನೆ! ಬಕಾಸುರನ ವಧೆಯ ಘಟನೆಯನ್ನು ಕೇಳಿ ಎಲ್ಲ ಗೋಪ-ಗೋಪಿಯರು ಆಶ್ಚರ್ಯಚಕಿತರಾದರು. ಮುದ್ದುಕೃಷ್ಣನು ಸಾಕ್ಷಾತ್ ಮೃತ್ಯುವಿನ ಮುಖದಿಂದ ಬದುಕಿ ಬಂದಂತೆ ಅವರಿಗನ್ನಿಸಿತು. ಅವರೆಲ್ಲರೂ ಪ್ರೇಮಾದರಗಳಿಂದಲೂ, ಉತ್ಸುಕತೆಯಿಂದಲೂ ಶ್ರೀಕೃಷ್ಣನನ್ನು ನೋಡತೊಡಗಿದರು. ಅವರಿಗೆ ಆ ಸುಂದರ ಮೂರ್ತಿಯನ್ನು ಎಷ್ಟು ನೋಡಿದರೂ ತೃಪ್ತಿಯೇ ಆಗುತ್ತಿರಲಿಲ್ಲ. ॥54॥
(ಶ್ಲೋಕ-55)
ಮೂಲಮ್
ಅಹೋ ಬತಾಸ್ಯ ಬಾಲಸ್ಯ ಬಹವೋ ಮೃತ್ಯವೋಭವನ್ ।
ಅಪ್ಯಾಸೀದ್ವಿಪ್ರಿಯಂ ತೇಷಾಂ ಕೃತಂ ಪೂರ್ವಂ ಯತೋ ಭಯಮ್ ॥
ಅನುವಾದ
ಅವರು ತಮ್ಮ-ತಮ್ಮಲ್ಲೆ ಹೀಗೆ ಮಾತನಾಡಿಕೊಂಡರು ಅಬ್ಬಾ! ಎಂತಹ ಆಶ್ವರ್ಯದ ಮಾತಿದು? ಈ ಮುದ್ದುಬಾಲಕನು ಹಲವು ಬಾರಿ ಮೃತ್ಯುಮುಖನಾಗಿದ್ದನು. ಆದರೆ ಇವನಿಗೆ ಅನಿಷ್ಟವನ್ನು ಬಗೆದವರಿಗೇ ಕೇಡಾಯಿತು. ಏಕೆಂದರೆ, ಅವರು ಮೊದಲಿನಿಂದಲೇ ಇತರರಿಗೆ ಅನಿಷ್ಟವನ್ನು ಮಾಡಿದ್ದರು.॥55॥
(ಶ್ಲೋಕ-56)
ಮೂಲಮ್
ಅಥಾಪ್ಯಭಿಭವಂತ್ಯೇನಂ ನೈವ ತೇ ಘೋರದರ್ಶನಾಃ ।
ಜಿಘಾಂಸಯೈನಮಾಸಾದ್ಯ ನಶ್ಯಂತ್ಯಗ್ನೌ ಪತಂಗವತ್ ॥
ಅನುವಾದ
ಇದೆಲ್ಲವೂ ನಡೆದರೂ ಕೂಡ ಆ ಭಯಂಕರ ಅಸುರರು ಇವನನ್ನು ಏನೂ ಮಾಡಲಾರದೆ ಹೋದರು. ಇವನನ್ನು ಕೊಲ್ಲಲೆಂದು ಬರುತ್ತಾರೆ, ಆದರೆ ಬೆಂಕಿಯಿಂದ ಆಕರ್ಷಿತವಾದ ಪತಂಗಗಳು ಬಂದು ಬೆಂಕಿಯಲ್ಲಿ ಬಿದ್ದು ಸಾಯುವಂತೆ ಎಲ್ಲರೂ ಸತ್ತುಹೋಗುತ್ತಾರೆ. ॥56॥
(ಶ್ಲೋಕ-57)
ಮೂಲಮ್
ಅಹೋ ಬ್ರಹ್ಮವಿದಾಂ ವಾಚೋ ನಾಸತ್ಯಾಃ ಸಂತಿ ಕರ್ಹಿಚಿತ್ ।
ಗರ್ಗೋ ಯದಾಹ ಭಗವಾನನ್ವಭಾವಿ ತಥೈವ ತತ್ ॥
ಅನುವಾದ
ಬ್ರಹ್ಮವೇತ್ತರಾದ ಮಹಾತ್ಮರ ವಚನಗಳು ಎಂದೂ ಸುಳ್ಳಾಗುವುದಿಲ್ಲವೆಂಬುದು ದಿಟವೇ ಆಗಿದೆ. ನೋಡಿ! ಮಹಾತ್ಮರಾದ ಗರ್ಗಾಚಾರ್ಯರು ಹೇಳಿದ ಎಲ್ಲ ಮಾತುಗಳೂ ಹಾಗೆಯೇ ನಡೆಯುತ್ತಿವೆಯಲ್ಲ! ॥57॥
(ಶ್ಲೋಕ-58)
ಮೂಲಮ್
ಇತಿ ನಂದಾದಯೋ ಗೋಪಾಃ ಕೃಷ್ಣರಾಮಕಥಾಂ ಮುದಾ ।
ಕುರ್ವಂತೋ ರಮಮಾಣಾಶ್ಚ ನಾವಿಂದನ್ಭವವೇದನಾಮ್ ॥
ಅನುವಾದ
ನಂದಗೋಪನು ಮತ್ತು ಇತರ ಗೋಪರು ಹೀಗೆ ಅತೀವ ಆನಂದದಿಂದ ರಾಮ-ಕೃಷ್ಣರ ವಿಷಯವಾಗಿ ಮಾತನಾಡಿಕೊಳ್ಳುವರು. ಅವರೆಲ್ಲರೂ ಸಂಸಾರದ ದುಃಖ-ಸಂಕಟಗಳು ಅರಿವಿಗೆ ಬಾರದಂತೆ ಭಗವದ್ವಿಷಯದಲ್ಲಿ ತನ್ಮಯರಾಗಿರುತ್ತಿದ್ದರು.॥58॥
(ಶ್ಲೋಕ-59)
ಮೂಲಮ್
ಏವಂ ವಿಹಾರೈಃ ಕೌಮಾರೈಃ ಕೌಮಾರಂ ಜಹತುರ್ವ್ರಜೇ ।
ನಿಲಾಯನೈಃ ಸೇತುಬಂಧೈರ್ಮರ್ಕಟೋತ್ಪ್ಲವನಾದಿಭಿಃ ॥
ಅನುವಾದ
ಹೀಗೆ ಕೃಷ್ಣ-ಬಲರಾಮರು ಗೊಲ್ಲಬಾಲಕರೊಂದಿಗೆ ಕೆಲವೊಮ್ಮೆ ಕಣ್ಣು ಮುಚ್ಚಾಲೆಯಾಡುತ್ತಿದ್ದರೆ, ಕೆಲವೊಮ್ಮೆ ಮರಳಲ್ಲಿ ಸೇತುವೆ ಕಟ್ಟುತ್ತಿದ್ದರು. ಕೆಲವೊಮ್ಮೆ ಮರಕೋತಿ ಆಟವಾಡುತ್ತಿದ್ದರೆ, ಕೆಲವೊಮ್ಮೆ ವಿಚಿತ್ರವಾದ ಆಟಗಳನ್ನಾಡುತ್ತಿದ್ದರು. ಹೀಗೆ ಕುಣಿಯುತ್ತಾ, ಹಾಡುತ್ತಾ, ಆಡುತ್ತಾ ಅವರಿಬ್ಬರೂ ತಮ್ಮ ಬಾಲ್ಯವನ್ನು ವೃಂದಾವನದಲ್ಲಿ ಕಳೆದರು. ॥59॥
ಅನುವಾದ (ಸಮಾಪ್ತಿಃ)
ಹನ್ನೊಂದನೆಯ ಅಧ್ಯಾಯವು ಮುಗಿಯಿತು. ॥11॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ವತ್ಸ-ಬಕವಧೋ ನಾಮೈಕಾದಶೋಧ್ಯಾಯಃ ॥11॥