[ಹತ್ತನೆಯ ಅಧ್ಯಾಯ]
ಭಾಗಸೂಚನಾ
ಯಮಳಾರ್ಜುನರ ಉದ್ಧಾರ
(ಶ್ಲೋಕ-1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಕಥ್ಯತಾಂ ಭಗವನ್ನೇತತ್ತಯೋಃ ಶಾಪಸ್ಯ ಕಾರಣಮ್ ।
ಯತ್ತದ್ವಿಗರ್ಹಿತಂ ಕರ್ಮ ಯೇನ ವಾ ದೇವರ್ಷೇಸ್ತಮಃ ॥
ಅನುವಾದ
ಪರೀಕ್ಷಿದ್ರಾಜನು ಕೇಳುತ್ತಾನೆ — ಪೂಜ್ಯರೇ! ಕುಬೇರನ ಮಕ್ಕಳಾದ ನಳಕೂಬರ - ಮಣಿಗ್ರೀವರಿಗೆ ಶಾಪ ಏಕೆ ಬಂತು? ಪರಮ ಶಾಂತರಾದ ದೇವರ್ಷಿನಾರದರಿಗೂ ಕೋಪ ಬರುವಂತಹ ನಿಂದನೀಯ ಯಾವ ಕರ್ಮಮಾಡಿದ್ದರು ಅವರು? ಇದನ್ನು ದಯಮಾಡಿ ತಿಳಿಸಬೇಕೆಂದು ಬೇಡಿಕೊಳ್ಳುತ್ತೇನೆ. ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ರುದ್ರಸ್ಯಾನುಚರೌ ಭೂತ್ವಾ ಸುದೃಪ್ತೌ ಧನದಾತ್ಮಜೌ ।
ಕೈಲಾಸೋಪವನೇ ರಮ್ಯೇ ಮಂದಾಕಿನ್ಯಾಂ ಮದೋತ್ಕಟೌ ॥
(ಶ್ಲೋಕ-3)
ಮೂಲಮ್
ವಾರುಣೀಂ ಮದಿರಾಂ ಪೀತ್ವಾ ಮದಾಘೂರ್ಣಿತಲೋಚನೌ ।
ಸೀಜನೈರನುಗಾಯದ್ಭಿಶ್ಚೇರತುಃ ಪುಷ್ಪಿತೇ ವನೇ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳಿದರು — ಎಲೈ ರಾಜನೇ! ನಳಕೂಬರ ಮತ್ತು ಮಣಿಗ್ರೀವರು ಕುಬೇರನ ಮಕ್ಕಳಾಗಿದ್ದರಲ್ಲದೆ, ಈಶ್ವರನ ಅನುಚರರೂ ಆಗಿದ್ದರು. ಇದರಿಂದ ಅತ್ಯಂತ ಅಹಂಕಾರಿಗಳಾಗಿದ್ದರು. ಒಂದು ದಿನ ಇವರಿಬ್ಬರೂ ಮಂದಾಕಿನಿಯ ತೀರದಲ್ಲಿ ಕೈಲಾಸದ ರಮಣೀಯವಾದ ಉಪವನದಲ್ಲಿ ವಾರುಣೀ ಎಂಬ ಮದ್ಯವನ್ನು ಕುಡಿದು ಮದೋನ್ಮತ್ತರಾಗಿದ್ದರು. ಮದಿರೆಯ ಅಮಲಿನಲ್ಲಿ ಅವರ ಕಣ್ಣುಗಳು ತಿರುಗುತ್ತಿದ್ದವು. ಬಹಳಷ್ಟು ನಾರಿಯರು ಹಾಡುತ್ತಾ-ಕುಣಿಯುತ್ತಾ ಪುಷ್ಪಭರಿತವಾದ ಆ ವನದಲ್ಲಿ ಅವರೊಂದಿಗೆ ವಿಹರಿಸುತ್ತಿದ್ದರು. ॥2-3॥
(ಶ್ಲೋಕ-4)
ಮೂಲಮ್
ಅಂತಃ ಪ್ರವಿಶ್ಯ ಗಂಗಾಯಾಮಂಭೋಜವನರಾಜಿನಿ ।
ಚಿಕ್ರೀಡತುರ್ಯುವತಿಭಿರ್ಗಜಾವಿವ ಕರೇಣುಭಿಃ ॥
ಅನುವಾದ
ಬಳಿಕ ಅವರು ಕೆಂದಾವರೆಗಳಿಂದ ಮಂಡಿತವಾದ ಗಂಗಾನದಿಯ ನೀರಿನಲ್ಲಿಳಿದು ಗಂಡಾನೆಗಳು ಹೆಣ್ಣಾನೆಗಳೊಂದಿಗೆ ರಮಿಸುವಂತೆ ಸ್ತ್ರೀಯರೊಂದಿಗೆ ಜಲಕ್ರೀಡೆಯಾಡುತ್ತಿದ್ದರು.॥4॥
(ಶ್ಲೋಕ-5)
ಮೂಲಮ್
ಯದೃಚ್ಛಯಾ ಚ ದೇವರ್ಷಿರ್ಭಗವಾಂಸ್ತತ್ರ ಕೌರವ ।
ಅಪಶ್ಯನ್ನಾರದೋ ದೇವೌ ಕ್ಷೀಬಾಣೌ ಸಮಬುಧ್ಯತ ॥
ಅನುವಾದ
ಪರೀಕ್ಷಿತನೇ! ಕಾಲ ಕರ್ಮಸಂಯೋಗದಿಂದ ಅದೇ ಮಾರ್ಗವಾಗಿ ದೇವಋಷಿಗಳಾದ ನಾರದರು ಆಗಮಿಸಿದರು. ಸ್ತ್ರೀಯರೊಂದಿಗೆ ಜಲಕ್ರೀಡೆಯಾಡುತ್ತಿದ್ದ ಆ ಯುವಕರನ್ನು ನೋಡಿ, ಇವರು ಮದೋನ್ಮತ್ತರಾಗಿರುವರು ಎಂದು ಅವರು ತಿಳಿದುಕೊಂಡರು. ॥5॥
(ಶ್ಲೋಕ-6)
ಮೂಲಮ್
ತಂ ದೃಷ್ಟ್ವಾ ವ್ರೀಡಿತಾ ದೇವ್ಯೋ ವಿವಸಾಃ ಶಾಪಶಂಕಿತಾಃ ।
ವಾಸಾಂಸಿ ಪರ್ಯಧುಃ ಶೀಘ್ರಂ ವಿವಸೌ ನೈವ ಗುಹ್ಯಕೌ ॥
ಅನುವಾದ
ದೇವರ್ಷಿನಾರದರನ್ನು ಕಂಡೊಡನೆ ಅಪ್ಸರೆಯರು ನಾಚಿಕೊಂಡು, ಮಹರ್ಷಿಗಳು ಶಾಪಕೊಟ್ಟಾರೆಂಬ ಭಯದಿಂದ ಬೇಗ-ಬೇಗನೇ ತಮ್ಮ-ತಮ್ಮ ವಸ್ತ್ರಗಳನ್ನು ಉಟ್ಟುಕೊಂಡರು. ಆದರೆ ಈ ಯಕ್ಷಕುಮಾರರು ನಾರದರನ್ನು ನೋಡಿಯೂ ವಸ್ತ್ರಗಳನ್ನು ಧರಿಸದೆ ಇದ್ದರು. ॥6॥
(ಶ್ಲೋಕ-7)
ಮೂಲಮ್
ತೌ ದೃಷ್ಟ್ವಾ ಮದಿರಾಮತ್ತೌ ಶ್ರೀಮದಾಂಧೌ ಸುರಾತ್ಮಜೌ ।
ತಯೋರನುಗ್ರಹಾರ್ಥಾಯ ಶಾಪಂ ದಾಸ್ಯನ್ನಿದಂ ಜಗೌ ॥
ಅನುವಾದ
ಇವರು ದೇವತೆಗಳ ಪುತ್ರರಾಗಿದ್ದರೂ ಧನಮದದಿಂದ ಕುರುಡರಾಗಿ, ಮದಿರಾಪಾನದಿಂದ ಉನ್ಮತ್ತರಾಗಿರುವುದನ್ನು ನೋಡಿದ ದೇವರ್ಷಿ ನಾರದರೂ ಅವರ ಮೇಲೆ ಅನುಗ್ರಹವನ್ನು ತೋರಲೆಂದೇ ಶಾಪವನ್ನು ಕೊಡುತ್ತಾ ಹೀಗೆಂದರು — ॥7॥
(ಶ್ಲೋಕ-8)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ನ ಹ್ಯನ್ಯೋ ಜುಷತೋ ಜೋಷ್ಯಾನ್ಬುದ್ಧಿಭ್ರಂಶೋ ರಜೋಗುಣಃ ।
ಶ್ರೀಮದಾದಾಭಿಜಾತ್ಯಾದಿರ್ಯತ್ರ ಸೀ ದ್ಯೂತಮಾಸವಃ ॥
ಅನುವಾದ
ನಾರದರು ಹೇಳಿದರು — ಇಂದ್ರಿಯಗಳಿಗೆ ಪ್ರಿಯವಾದ ವಿಷಯಗಳಲ್ಲಿ ಆಸಕ್ತನಾಗಿರುವ ಮನುಷ್ಯನ ಬುದ್ಧಿಯನ್ನು ಪೂರ್ಣವಾಗಿ ಹಾಳುಮಾಡುವುದು ವಿಶೇಷವಾಗಿ ಧನಮದವೇ ಆಗಿದೆ. ಹಿಂಸೆಯೇ ಮುಂತಾದ ರಜೋಗುಣೀ ಕರ್ಮಗಳಾಗಲೀ, ವಿದ್ಯಾಮದ, ಕುಲಮದ ಮೊದಲಾದವುಗಳಾಗಲೀ ಅಷ್ಟುಮಟ್ಟಿಗೆ ಬುದ್ಧಿಯನ್ನು ಹಾಳುಮಾಡುವುದಿಲ್ಲ. ಏಕೆಂದರೆ, ಧನಮದದ ಜೊತೆ-ಜೊತೆಗೆ ಸ್ತ್ರೀಸಂಗ, ಜೂಜು, ಮದ್ಯಪಾನ ಮುಂತಾದವುಗಳು ಸೇರಿಕೊಂಡೇ ಇರುತ್ತವೆ.॥8॥
(ಶ್ಲೋಕ-9)
ಮೂಲಮ್
ಹನ್ಯಂತೇ ಪಶವೋ ಯತ್ರ ನಿರ್ದಯೈರಜಿತಾತ್ಮಭಿಃ ।
ಮನ್ಯಮಾನೈರಿಮಂ ದೇಹಮಜರಾಮೃತ್ಯು ನಶ್ವರಮ್ ॥
ಅನುವಾದ
ಐಶ್ವರ್ಯಮದ, ಧನಮದದಿಂದ ಕುರುಡರಾಗಿ ತಮ್ಮ ಇಂದ್ರಿಯಗಳ ವಶದಲ್ಲಿರುವ ಕ್ರೂರ ಮನುಷ್ಯರು ತನ್ನ ನಾಶವುಳ್ಳ ಶರೀರವನ್ನು ಅಮರವೆಂದೇ ತಿಳಿದಿರುತ್ತಾರೆ ಹಾಗೂ ತನ್ನಂತೆಯೇ ಶರೀರಧಾರೀ ಪಶುಗಳನ್ನು ಕೊಲ್ಲುತ್ತಾ ಇರುತ್ತಾರೆ. ॥9॥
(ಶ್ಲೋಕ-10)
ಮೂಲಮ್
ದೇವಸಂಜ್ಞಿತಮಪ್ಯಂತೇ ಕೃಮಿವಿಡ್ಭಸ್ಮಸಂಜ್ಞಿತಮ್ ।
ಭೂತಧ್ರುಕ್ತತ್ಕೃತೇ ಸ್ವಾರ್ಥಂ ಕಿಂ ವೇದ ನಿರಯೋ ಯತಃ ॥
ಅನುವಾದ
ಅಯ್ಯೋ! ಯಾವ ಶರೀರವನ್ನು ‘ಭೂದೇವ’, ‘ನರದೇವ’, ‘ದೇವ’ ಮುಂತಾದ ಹೆಸರುಗಳಿಂದ ಕರೆಯುತ್ತಾರೋ, ಕೊನೆಗೆ ಅದರ ಗತಿ ಏನಾದೀತು? ಪ್ರಾಣಪಕ್ಷಿಯೂ ಹಾರಿ ಹೋದಾಗ ಅದು ಹುಳುಗಳ ರಾಶಿ, ನರಿ ಕಾಗೆಗಳ ಆಹಾರ, ಇಲ್ಲವೇ ಬೂದಿಯ ರಾಶಿಯಷ್ಟೆ. ಇಂತಹ ಶರೀರಕ್ಕಾಗಿಯೇ ಪ್ರಾಣಿಗಳೊಂದಿಗೆ ದ್ರೋಹ ಮಾಡುವುದರಿಂದ ಮನುಷ್ಯನು ತನ್ನ ಯಾವ ಸ್ವಾರ್ಥವನ್ನು ತಿಳಿಯುವನೋ? ಹೀಗೆ ಮಾಡುವುದರಿಂದ ಅವನಿಗೆ ನರಕವೇ ಪ್ರಾಪ್ತಿಯಾಗುವುದು. ॥10॥
(ಶ್ಲೋಕ-11)
ಮೂಲಮ್
ದೇಹಃ ಕಿಮನ್ನದಾತುಃ ಸ್ವಂ ನಿಷೇಕ್ತುರ್ಮಾತುರೇವ ಚ ।
ಮಾತುಃ ಪಿತುರ್ವಾ ಬಲಿನಃ ಕ್ರೇತುರಗ್ನೇಃ ಶುನೋಪಿ ವಾ ॥
ಅನುವಾದ
ನಶ್ವರವಾದ ಈ ಶರೀರವು ಯಾರದೆಂದು ನಿರ್ಧರಿಸಬಹುದೇ? ಅನ್ನವಿಟ್ಟು ಪೋಷಿಸಿದವನದ್ದೇ? ಗರ್ಭಾಧಾನ ಮಾಡಿದ ತಂದೆಗೆ ಸೇರಿದ್ದೇ ಅಥವಾ ಒಂಭತ್ತು ತಿಂಗಳು ಹೊತ್ತು ಹೆತ್ತ ತಾಯಿಯದೇ? ತಾಯಿಯ ಜನ್ಮಕ್ಕೆ ಕಾರಣನಾದ ತಾತನದೇ? ಬಲವಂತವಾಗಿ ಜೀತಮಾಡಿಸಿಕೊಳ್ಳುವ ಧಣಿಯದೇ? ಅಥವಾ ಗುಲಾಮನಂತೆ ಕ್ರಯಕೊಟ್ಟುಕೊಂಡು ಕೊಂಡವನದೇ? ಧಗಧಗನೆ ಉರಿಯುವ ಚಿತೆಯಲ್ಲಿ ಸುಟ್ಟು ಹೋಗುವ ಈ ಶರೀರ ಅಗ್ನಿಯದೆ? ಮೃತಶರೀರವನ್ನು ತಿನ್ನಲು ಕಾದುಕುಳಿತ ನರಿ-ನಾಯಿಗಳದ್ದೇ? ॥11॥
(ಶ್ಲೋಕ-12)
ಮೂಲಮ್
ಏವಂ ಸಾಧಾರಣಂ ದೇಹಮವ್ಯಕ್ತಪ್ರಭವಾಪ್ಯಯಮ್ ।
ಕೋ ವಿದ್ವಾನಾತ್ಮಸಾತ್ಕೃತ್ವಾ ಹಂತಿ ಜಂತೂನೃತೇಸತಃ ॥
ಅನುವಾದ
ನಿಶ್ಚಯವಾಗಿಯೂ ಈ ದೇಹವು ಸಾಧಾರಣವಾದ ಒಂದು ವಸ್ತುವಾಗಿದೆ. ಪ್ರಕೃತಿಯಿಂದ ಹುಟ್ಟುತ್ತದೆ ಹಾಗೂ ಅದರಲ್ಲೇ ಸೇರಿಹೋಗುತ್ತದೆ. ಯಾವ ವಿದ್ವಾಂಸನು ತಾನೇ ಇಂತಹ ನಶ್ವರವಾದ ದೇಹವನ್ನು ತನ್ನದೆಂಬುದಾಗಿ ಭಾವಿಸಿಕೊಂಡು ಅದರ ಪೋಷಣೆಗಾಗಿ ತನ್ನಂತೆಯೇ ಇರುವ ಇತರ ಪ್ರಾಣಿಗಳನ್ನು ವಧಿಸಬಲ್ಲನು? ಅಸತ್ಪುರುಷರಲ್ಲದೆ ಬೇರಾರೂ ಹೀಗೆ ಮಾಡುವುದಿಲ್ಲ. ॥12॥
(ಶ್ಲೋಕ-13)
ಮೂಲಮ್
ಅಸತಃ ಶ್ರೀಮದಾಂಧಸ್ಯ ದಾರಿದ್ರ್ಯಂ ಪರಮಂಜನಮ್ ।
ಆತ್ಮೌಪಮ್ಯೇನ ಭೂತಾನಿ ದರಿದ್ರಃ ಪರಮೀಕ್ಷತೇ ॥
ಅನುವಾದ
ಧನಮದದಿಂದ ಕುರುಡಾಗಿ ಇದ್ದವನ ಕಣ್ಣು ತೆರೆಸಲು ದಾರಿದ್ರ್ಯವೆಂಬುದೇ ಶ್ರೇಷ್ಠವಾದ ಅಂಜನವಾಗಿದೆ. ಏಕೆಂದರೆ, ದರಿದ್ರನಾದವನು ಬೇರೆ ಪ್ರಾಣಿಗಳನ್ನು ತನ್ನಂತೆಯೇ ಭಾವಿಸಿಕೊಂಡಿರುತ್ತಾನೆ. ಆದುದರಿಂದ ಅವುಗಳನ್ನು ಹಿಂಸಿಸಲು ಹೋಗುವುದಿಲ್ಲ. ॥13॥
ಮೂಲಮ್
(ಶ್ಲೋಕ-14)
ಯಥಾ ಕಂಟಕವಿದ್ಧಾಂಗೋ ಜಂತೋರ್ನೇಚ್ಛತಿ ತಾಂ ವ್ಯಥಾಮ್ ।
ಜೀವಸಾಮ್ಯಂ ಗತೋ ಲಿಂಗೈರ್ನ ತಥಾವಿದ್ಧಕಂಟಕಃ ॥
ಅನುವಾದ
ಯಾವನ ಕಾಲಿಗೆ ಒಮ್ಮೆ ಮುಳ್ಳು ಚುಚ್ಚಿದೆಯೋ ಮತ್ತು ಅದರ ಯಾತನೆಯನ್ನು ಅನುಭವಿಸಿರುವನೋ, ಅಂತಹವನು ಇತರರ ಕಾಲಿಗೂ ಮುಳ್ಳು ಚುಚ್ಚಬಾರದೆಂದೇ ಅಪೇಕ್ಷಿಸುತ್ತಾನೆ. ಏಕೆಂದರೆ, ಮುಳ್ಳು ಚುಚ್ಚುವುದರಿಂದ ಆಗುವ ನೋವು-ಕಷ್ಟಗಳನ್ನು ಅವನು ಅನುಭವಿಸಿದ್ದಾನೆ. ಆದರೆ ಮುಳ್ಳು ಚುಚ್ಚದೇ ಇರುವವನಿಗೆ, ಅದರ ಯಾತನೆಯನ್ನು ಅನುಭವಿಸದವನಿಗೆ ಹಾಗೆ ಅನಿಸುವುದಿಲ್ಲ. ॥14॥
(ಶ್ಲೋಕ-15)
ಮೂಲಮ್
ದರಿದ್ರೋ ನಿರಹಂಸ್ತಂಭೋ ಮುಕ್ತಃ ಸರ್ವಮದೈರಿಹ ।
ಕೃಚ್ಛ್ರಂ ಯದೃಚ್ಛಯಾಪ್ನೋತಿ ತದ್ಧಿ ತಸ್ಯ ಪರಂ ತಪಃ ॥
ಅನುವಾದ
ದರಿದ್ರನಲ್ಲಿ ಯಾವುದೇ ಅಹಂಕಾರ, ಮದ ಇರುವುದಿಲ್ಲ. ಅವನು ಎಲ್ಲ ವಿಧವಾದ ಮದಗಳಿಂದಲೂ ದೂರವುಳಿಯುತ್ತಾನೆ. ದೈವವಶಾತ್ ಅವನಿಗೆ ಕಷ್ಟಗಳು ಒದಗಿಬಂದಾಗ ಅವೆಲ್ಲವನ್ನು ಅವನು ಅನುಭವಿಸುತ್ತಲೇ ಇರುತ್ತಾನೆ. ಅದೇ ಅವನಿಗೆ ಒಂದು ತಪಸ್ಸು ಆಗಿದೆ. ॥15॥
(ಶ್ಲೋಕ-16)
ಮೂಲಮ್
ನಿತ್ಯಂ ಕ್ಷುತ್ಕ್ಷಾಮದೇಹಸ್ಯ ದರಿದ್ರಸ್ಯಾನ್ನಕಾಂಕ್ಷಿಣಃ ।
ಇಂದ್ರಿಯಾಣ್ಯನುಶುಷ್ಯಂತಿ ಹಿಂಸಾಪಿ ವಿನಿವರ್ತತೇ ॥
ಅನುವಾದ
ದರಿದ್ರನಾದವನು ಹೊಟ್ಟೆಪಾಡಿಗಾಗಿಯೇ ಒದ್ದಾಡುತ್ತಿರುತ್ತಾನೆ. ಹಸಿವಿನಿಂದ ಅವನ ಶರೀರವು ಕೃಶವಾಗಿ ಇರುತ್ತದೆ. ಕೃಶಹೊಂದಿದ ಅವನ ಇಂದ್ರಿಯಗಳು ವಿಷಯ ಸುಖಗಳನ್ನು ಬಯಸುವುದಿಲ್ಲ. ದರಿದ್ರನಾದವನು ನಾಲಿಗೆಯ ಚಾಪಲ್ಯಕ್ಕಾಗಿ ಇತರ ಪ್ರಾಣಿಗಳನ್ನು ಕೊಲ್ಲುವುದಿಲ್ಲ, ಹಿಂಸಿಸುವುದಿಲ್ಲ. ॥16॥
(ಶ್ಲೋಕ-17)
ಮೂಲಮ್
ದರಿದ್ರಸ್ಯೈವ ಯುಜ್ಯಂತೇ ಸಾಧವಃ ಸಮದರ್ಶಿನಃ ।
ಸದ್ಭಿಃ ಕ್ಷಿಣೋತಿ ತಂ ತರ್ಷಂ ತತ ಆರಾದ್ವಿಶುದ್ಧ್ಯತಿ ॥
ಅನುವಾದ
ಸಾಧು-ಸತ್ಪುರುಷರು ಸಮದರ್ಶಿಗಳಾಗಿ ಇರುವರು. ಆದುದರಿಂದ ಅವರ ಸಮಾಗಮವು ದರಿದ್ರರಿಗೆ ಸುಲಭವಾಗಿ ದೊರೆಯುತ್ತದೆ. ಏಕೆಂದರೆ, ದರಿದ್ರರಾದವರಲ್ಲಿ ಭೋಗಾದಿಗಳು ಇರುವುದೇ ಇಲ್ಲ. ಆಸೆಯೆಂಬುದೊಂದಿರುತ್ತದೆ. ಸಾಧುಸಮಾಗಮದಿಂದ ಆ ತೃಷ್ಣೆಯೂ ಇಂಗಿಹೋಗಿ ಅವರ ಮನಸ್ಸು ಬಹಳ ಬೇಗ ಶುದ್ಧವಾಗುತ್ತದೆ.* ॥17॥
ಟಿಪ್ಪನೀ
- ಧನಿಕರಲ್ಲಿ ಧನಮದ, ಧನದ ಮೇಲಿನ ಅಭಿಮಾನ ಮತ್ತು ಧನದ ತೃಷ್ಣೆ ಈ ಮೂರು ದೋಷಗಳು ಇರುತ್ತವೆ. ದರಿದ್ರರಲ್ಲಿ ಧನಮದವಾಗಲೀ, ಧನದ ಮೇಲಿನ ಅಭಿಮಾನವಾಗಲೀ ಇರುವುದಿಲ್ಲ; ಆದರೆ ಧನತೃಷ್ಣೆಯೆಂಬ ಒಂದು ದೋಷ ಇರುತ್ತದೆ. ಈ ದೋಷವೂ ಕೂಡ ಸತ್ಪುರುಷರ ಸಹವಾಸದಿಂದ ಹೊರಟುಹೋಗಿ ಬೇಗನೇ ಶ್ರೇಯಸ್ಸುಂಟಾಗುತ್ತದೆ.
(ಶ್ಲೋಕ-18)
ಮೂಲಮ್
ಸಾಧೂನಾಂ ಸಮಚಿತ್ತಾನಾಂ ಮುಕುಂದಚರಣೈಷಿಣಾಮ್ ।
ಉಪೇಕ್ಷ್ಯೈಃ ಕಿಂ ಧನಸ್ತಂಭೈರಸದ್ಭಿರಸದಾಶ್ರಯೈಃ ॥
ಅನುವಾದ
ಯಾವ ಮಹಾತ್ಮರ ಚಿತ್ತದಲ್ಲಿ ಸರ್ವರ ಕುರಿತು ಸಮತ್ವವಿದೆಯೋ, ಶ್ರೀಮುಕುಂದನ ಪಾದಾರವಿಂದಗಳಲ್ಲಿ ಯಾರು ಶರಣು ಹೊಂದಿರುವರೋ, ಅವರಿಗೆ ದುರ್ಗುಣಗಳ ಭಂಡಾರದಂತಿರುವ ಅಥವಾ ದುರಾಚಾರಿಗಳಂತೆ ಜೀವನ ನಡೆಸುವ ಹಾಗೂ ಧನಮದದಿಂದ ಉನ್ಮತ್ತರಾದ ಇಂತಹ ದುಷ್ಟರಿಂದ ಏನಾಗಬೇಕಾಗಿದೆ? ಇವರಾದರೋ ಸತ್ಪುರುಷರ ಉಪೇಕ್ಷೆಗೆ ಪಾತ್ರರಾಗಿ ಇರುತ್ತಾರೆ. ॥18॥
(ಶ್ಲೋಕ-19)
ಮೂಲಮ್
ತದಹಂ ಮತ್ತಯೋರ್ಮಾಧ್ವ್ಯಾ ವಾರುಣ್ಯಾ ಶ್ರೀಮದಾಂಧಯೋಃ ।
ತಮೋಮದಂ ಹರಿಷ್ಯಾಮಿ ಸೈಣಯೋರಜಿತಾತ್ಮನೋಃ ॥
ಅನುವಾದ
ಈ ಯಕ್ಷರಿಬ್ಬರೂ ವಾರುಣೀ ಮದ್ಯವನ್ನು ಕುಡಿದು ಉನ್ಮತ್ತರಾಗಿದ್ದು, ಧನಮದದಿಂದ ಕುರುಡರಾಗಿ ಇರುವರು. ತನ್ನ ಇಂದ್ರಿಯಗಳ ಅಧೀನದಲ್ಲಿರುವ ಈ ಸ್ತ್ರೀಲಂಪಟರಾದ ಯಕ್ಷರ ಅಜ್ಞಾನ ಜನಿತವಾದ ಮದವನ್ನು ನಾನು ನಾಶ ಮಾಡಿ ಬಿಡುತ್ತೇನೆ. ॥19॥
(ಶ್ಲೋಕ-20)
ಮೂಲಮ್
ಯದಿವೌ ಲೋಕಪಾಲಸ್ಯ ಪುತ್ರೌ ಭೂತ್ವಾ ತಮಃಪ್ಲುತೌ ।
ನ ವಿವಾಸಸಮಾತ್ಮಾನಂ ವಿಜಾನೀತಃ ಸುದುರ್ಮದೌ ॥
ಅನುವಾದ
ಇವರು ಲೋಕಪಾಲ ಕುಬೇರನ ಪುತ್ರರಾಗಿದ್ದರೂ ಮದೋನ್ಮತ್ತರಾಗಿ ಬುದ್ಧಿಗೆಟ್ಟಿರುವರು. ತಾವು ಮತ್ತೊಬ್ಬರ ಮುಂದೆ ನಗ್ನರಾಗಿದ್ದೇವೆಂಬ ಅರಿವೂ ಇವರಿಗಿಲ್ಲವಲ್ಲ! ॥20॥
(ಶ್ಲೋಕ-21)
ಮೂಲಮ್
ಅತೋರ್ಹತಃ ಸ್ಥಾವರತಾಂ ಸ್ಯಾತಾಂ ನೈವಂ ಯಥಾ ಪುನಃ ।
ಸ್ಮೃತಿಃ ಸ್ಯಾನ್ಮತ್ಪ್ರಸಾದೇನ ತತ್ರಾಪಿ ಮದನುಗ್ರಹಾತ್ ॥
(ಶ್ಲೋಕ-22)
ಮೂಲಮ್
ವಾಸುದೇವಸ್ಯ ಸಾನ್ನಿಧ್ಯಂ ಲಬ್ಧ್ವಾ ದಿವ್ಯಶರಚ್ಛತೇ ।
ವೃತ್ತೇ ಸ್ವರ್ಲೋಕತಾಂ ಭೂಯೋ ಲಬ್ಧಭಕ್ತೀ ಭವಿಷ್ಯತಃ ॥
ಅನುವಾದ
ಆದುದರಿಂದ ಇವರಿಬ್ಬರೂ ಈಗ ವೃಕ್ಷಯೋನಿಯನ್ನು ಹೊಂದಲು ಯೋಗ್ಯರಾಗಿದ್ದಾರೆ. ಹೀಗಾದರೆ ಇವರಿಗೆ ಇಂತಹ ಅಭಿಮಾನವು ಉಂಟಾಗಲಾರದು. ವೃಕ್ಷಯೋನಿಯಲ್ಲಿದ್ದರೂ ಇವರಿಗೆ ನನ್ನ ಅನುಗ್ರಹದಿಂದ ಭಗವಂತನ ಸ್ಮರಣೆಯಿರುತ್ತದೆ. ಮತ್ತೆ ನನ್ನ ಅನುಗ್ರಹದಿಂದ ದೇವತೆಗಳ ನೂರು ವರ್ಷಗಳು ಕಳೆದ ಬಳಿಕ ಇವರಿಗೆ ಭಗವಾನ್ ಶ್ರೀಕೃಷ್ಣನ ಸಾನ್ನಿಧ್ಯವು ಪ್ರಾಪ್ತವಾಗಿ, ಭಗವಂತನ ಚರಣಗಳಲ್ಲಿ ಪರಮಭಕ್ತಿಯುಳ್ಳವರಾಗಿ ಮತ್ತೆ ತಮ್ಮ ಲೋಕಗಳಿಗೆ ಹೊರಟು ಹೋಗುವರು. ॥21-22॥
(ಶ್ಲೋಕ-23)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಮುಕ್ತ್ವಾ ಸ ದೇವರ್ಷಿರ್ಗತೋ ನಾರಾಯಣಾಶ್ರಮಮ್ ।
ನಲಕೂಬರಮಣಿಗ್ರೀವಾವಾಸತುರ್ಯಮಲಾರ್ಜುನೌ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ರಾಜೇಂದ್ರನೇ! ದೇವರ್ಷಿ ನಾರದರು ಹೀಗೆ ಹೇಳಿ ಭಗವಾನ್ ನರ-ನಾರಾಯಣ ಆಶ್ರಮಕ್ಕೆ ಹೊರಟು ಹೋದರು. ನಾರದರು ಹೇಳಿದಂತೆನಳ ಕೂಬರ-ಮಣಿಗ್ರೀವ ಇವರಿಬ್ಬರೂ ಒಡನೆಯೇ ಅರ್ಜುನ ವೃಕ್ಷಗಳಾಗಿ ಯಮಳಾರ್ಜುನ ವೃಕ್ಷಗಳೆಂದು ಪ್ರಸಿದ್ಧರಾದರು. ॥23॥
(ಶ್ಲೋಕ-24)
ಮೂಲಮ್
ಋಷೇರ್ಭಾಗವತಮುಖ್ಯಸ್ಯ ಸತ್ಯಂ ಕರ್ತುಂ ವಚೋ ಹರಿಃ ।
ಜಗಾಮ ಶನಕೈಸ್ತತ್ರ ಯತ್ರಾಸ್ತಾಂ ಯಮಲಾರ್ಜುನೌ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಭಾಗವತೋತ್ತಮರಾದ ನಾರದಮುನಿಗಳ ಮಾತನ್ನು ಸತ್ಯವಾಗಿಸಲು ಆ ಒರಳುಕಲ್ಲನ್ನು ನಿಧಾನವಾಗಿ ಎಳೆದುಕೊಂಡೇ ಯಮಳಾರ್ಜುನ ವೃಕ್ಷಗಳ ಬಳಿಗೆ ಸಾರಿದನು. ॥24॥
(ಶ್ಲೋಕ-25)
ಮೂಲಮ್
ದೇವರ್ಷಿರ್ಮೇ ಪ್ರಿಯತಮೋ ಯದಿವೌ ಧನದಾತ್ಮಜೌ ।
ತತ್ತಥಾ ಸಾಧಯಿಷ್ಯಾಮಿ ಯದ್ಗೀತಂ ತನ್ಮಹಾತ್ಮನಾ ॥
ಅನುವಾದ
ಭಗವಂತನು ಯೋಚಿಸಿದನು - ದೇವರ್ಷಿಗಳಾದ ನಾರದರು ನನಗೆ ಅತ್ಯಂತ ಪ್ರಿಯರು. ಇವರಿಬ್ಬರೂ ಕೂಡ ನನ್ನ ಭಕ್ತನಾದ ಕುಬೇರನ ಮಕ್ಕಳಾಗಿದ್ದಾರೆ. ಆದುದರಿಂದ ಮಹಾತ್ಮರಾದ ನಾರದರು ಹೇಳಿರುವಂತೆಯೇ ಈ ಇಬ್ಬರನ್ನೂ ನಾನು ಉದ್ಧರಿಸುತ್ತೇನೆ. ॥25॥
(ಶ್ಲೋಕ-26)
ಮೂಲಮ್
ಇತ್ಯಂತರೇಣಾರ್ಜುನಯೋಃ ಕೃಷ್ಣಸ್ತು ಯಮಯೋರ್ಯಯೌ ।
ಆತ್ಮನಿರ್ವೇಶಮಾತ್ರೇಣ ತಿರ್ಯಗ್ಗತಮುಲೂಖಲಮ್ ॥
ಅನುವಾದ
ಹೀಗೆ ಅಂದುಕೊಂಡು ಭಗವಾನ್ ಶ್ರೀಕೃಷ್ಣನು ಎರಡೂ ಮರಗಳ ನಡುವೆ ನುಗ್ಗಿದನು. ಅವನಾದರೋ ಆ ಕಡೆ ದಾಟಿದನು, ಆದರೆ ಒರಳುಕಲ್ಲು ಅಡ್ಡಲಾಗಿ ಸಿಕ್ಕಿಹಾಕಿಕೊಂಡಿತು. ॥26॥
(ಶ್ಲೋಕ-27)
ಮೂಲಮ್
ಬಾಲೇನ ನಿಷ್ಕರ್ಷಯತಾನ್ವಗುಲೂಖಲಂ ತದ್
ದಾಮೋದರೇಣ ತರಸೋತ್ಕಲಿತಾಂಘ್ರಿಬಂಧೌ ।
ನಿಷ್ಪೇತತುಃ ಪರಮವಿಕ್ರಮಿತಾತಿವೇಪ-
ಸ್ಕಂಧಪ್ರವಾಲವಿಟಪೌ ಕೃತಚಂಡಶಬ್ದೌ ॥
ಅನುವಾದ
ದಾಮೋದರ ಭಗವಾನ್ ಶ್ರೀಕೃಷ್ಣನ ಸೊಂಟಕ್ಕೆ ಹಗ್ಗ ಕಟ್ಟಲ್ಪಟ್ಟಿತ್ತು. ಅವನು ತನ್ನ ಹಿಂದೆ ಉರುಳಿ ಬರುತ್ತಿದ್ದ ಒರಳ ಕಲ್ಲನ್ನು ಸ್ವಲ್ಪ ಜೋರಾಗಿ ಎಳೆದನು. ಆಗಲೇ ವೃಕ್ಷಗಳಲ್ಲಿದ್ದ ದೊಡ್ಡ-ದೊಡ್ಡ ರೆಂಬೆಗಳು, ಚಿಕ್ಕರೆಂಬೆಗಳೂ, ಎಲೆಗಳೂ, ಚಿಗುರುಗಳೂ ಕಂಪಿಸಿದವು ಮತ್ತು ಆ ಮಹಾವೃಕ್ಷಗಳು ಬುಡಸಮೇತವಾಗಿ ಸಿಡಿಲಿನಂತೆ ಶಬ್ದಮಾಡುತ್ತಾ ಕೆಳಕ್ಕೆ ಉರುಳಿದವು. ॥27॥
(ಶ್ಲೋಕ-28)
ಮೂಲಮ್
ತತ್ರ ಶ್ರಿಯಾ ಪರಮಯಾ ಕಕುಭಃ ಸ್ಫುರಂತೌ
ಸಿದ್ಧಾವುಪೇತ್ಯ ಕುಜಯೋರಿವ ಜಾತವೇದಾಃ ।
ಕೃಷ್ಣಂ ಪ್ರಣಮ್ಯ ಶಿರಸಾಖಿಲಲೋಕನಾಥಂ
ಬದ್ಧಾಂಜಲೀ ವಿರಜಸಾವಿದಮೂಚತುಃ ಸ್ಮ ॥
ಅನುವಾದ
ಆ ಎರಡೂ ಅರ್ಜುನವೃಕ್ಷಗಳಿಂದ ಅಗ್ನಿಯಂತೆ ತೇಜಸ್ವಿಗಳಾದ ಇಬ್ಬರು ಸಿದ್ಧಪುರುಷರು ಹೊರಬಂದರು. ಅವರ ದಿವ್ಯ ಪ್ರಭೆಯಿಂದಾಗಿ ದಿಕ್ಕುಗಳು ಬೆಳಗಿದವು. ಅವರು ಅಖಿಲಲೋಕ ನಾಥನಾದ ಪರಾತ್ಪರನಾದ ಶ್ರೀಕೃಷ್ಣನ ಬಳಿಗೆ ಬಂದು ಅವನ ಚರಣಗಳಲ್ಲಿ ತಲೆಯನ್ನಿಟ್ಟು ನಮಸ್ಕರಿಸಿ, ಕೈಗಳನ್ನು ಜೋಡಿಸಿಕೊಂಡು ಶುದ್ಧಹೃದಯದಿಂದ ಬಾಲಕೃಷ್ಣನನ್ನು ಸ್ತುತಿಸತೊಡಗಿದರು. ॥28॥
(ಶ್ಲೋಕ-29)
ಮೂಲಮ್
ಕೃಷ್ಣ ಕೃಷ್ಣ ಮಹಾಯೋಗಿನ್ ಸ್ತ್ವಮಾದ್ಯಃ ಪುರುಷಃ ಪರಃ ।
ವ್ಯಕ್ತಾವ್ಯಕ್ತಮಿದಂ ವಿಶ್ವಂ ರೂಪಂ ತೇ ಬ್ರಾಹ್ಮಣಾ ವಿದುಃ ॥
ಅನುವಾದ
ಓ ಸಚ್ಚಿದಾನಂದ ಸ್ವರೂಪಿಯೇ! ಸಮಸ್ತರನ್ನು ತನ್ನತ್ತ ಆಕರ್ಷಿಸುವ ಯೋಗೇಶ್ವರನಾದ ಕೃಷ್ಣನೇ! ನೀನು ಪ್ರಕೃತಿಗೆ ಅತೀತನಾಗಿ ಸ್ವಯಂ ಪುರುಷೋತ್ತಮನಾಗಿರುವೆ. ಈ ವ್ಯಕ್ತ ಮತ್ತು ಅವ್ಯಕ್ತ ಸಂಪೂರ್ಣ ಜಗತ್ತು ನಿನ್ನದೇ ಸ್ವರೂಪವಾಗಿದೆ ಎಂದು ವೇದಜ್ಞರಾದ ಬ್ರಾಹ್ಮಣರು ತಿಳಿದಿರುತ್ತಾರೆ. ॥29॥
(ಶ್ಲೋಕ-30)
ಮೂಲಮ್
ತ್ವಮೇಕಃ ಸರ್ವಭೂತಾನಾಂ ದೇಹಾಸ್ವಾತ್ಮೇಂದ್ರಿಯೇಶ್ವರಃ ।
ತ್ವಮೇವ ಕಾಲೋ ಭಗವಾನ್ವಿಷ್ಣುರವ್ಯಯ ಈಶ್ವರಃ ॥
ಅನುವಾದ
ನೀನೇ ಸಮಸ್ತ ಪ್ರಾಣಿಗಳ ಶರೀರ, ಪ್ರಾಣ, ಅಂತಃಕರಣ ಮತ್ತು ಇಂದ್ರಿಯಗಳ ಸ್ವಾಮಿಯಾಗಿರುವೆ. ನೀನೇ ಸರ್ವಶಕ್ತನಾದ ಕಾಲಸ್ವರೂಪನೂ, ಸರ್ವವ್ಯಾಪಕನೂ, ಅವಿನಾಶಿಯೂ, ಈಶ್ವರನೂ ಆಗಿರುವೆ.॥30॥
(ಶ್ಲೋಕ-31)
ಮೂಲಮ್
ತ್ವಂ ಮಹಾನ್ಪ್ರಕೃತಿಃ ಸೂಕ್ಷ್ಮಾ ರಜಃಸತ್ತ್ವತಮೋಮಯೀ ।
ತ್ವಮೇವ ಪುರುಷೋಧ್ಯಕ್ಷಃ ಸರ್ವಕ್ಷೇತ್ರ ವಿಕಾರವಿತ್ ॥
ಅನುವಾದ
ನೀನೇ ಮಹತ್ತ್ವವೂ, ಸತ್ತ್ವ-ರಜಸ್ತಮೋ ಗುಣಮಯವಾದ ಅತ್ಯಂತ ಸೂಕ್ಷ್ಮ ಪ್ರಕೃತಿಯೂ ಆಗಿರುವೆ. ನೀನೇ ಸಮಸ್ತ ಸ್ಥೂಲ ಮತ್ತು ಸೂಕ್ಷ್ಮ ಶರೀರಗಳ ಕರ್ಮ, ಭಾವ, ಧರ್ಮ ಮತ್ತು ಸತ್ತೆಯನ್ನು ತಿಳಿಯುವ ಎಲ್ಲರ ಸಾಕ್ಷಿಯಾದ ಪರಮಾತ್ಮನಾಗಿರುವೆ. ॥31॥
(ಶ್ಲೋಕ-32)
ಮೂಲಮ್
ಗೃಹ್ಯಮಾಣೈಸ್ತ್ವಮಗ್ರಾಹ್ಯೋ ವಿಕಾರೈಃ ಪ್ರಾಕೃತೈರ್ಗುಣೈಃ ।
ಕೋ ನ್ವಿಹಾರ್ಹತಿ ವಿಜ್ಞಾತುಂ ಪ್ರಾಕ್ಸಿದ್ಧಂ ಗುಣಸಂವೃತಃ ॥
ಅನುವಾದ
ವೃತ್ತಿಗಳಿಂದ ಗ್ರಹಿಸಲ್ಪಡುವ ಪ್ರಕೃತಿಯ ಗುಣಗಳಿಂದ ಮತ್ತು ವಿಕಾರಗಳಿಂದ ನೀನು ಗ್ರಹಿಸಲ್ಪಡತಕ್ಕವನಲ್ಲ. ಸ್ಥೂಲ ಮತ್ತು ಸೂಕ್ಷ್ಮ ಶರೀರಗಳ ಆವರಣಗಳಿಂದ ಮುಚ್ಚಲ್ಪಟ್ಟ ಯಾವನು ತಾನೇ ನಿನ್ನನ್ನು ತಿಳಿಯಬಲ್ಲನು? ಏಕೆಂದರೆ, ನೀನಾದರೋ ಆ ಶರೀರಗಳು ಉಂಟಾಗುವ ಮೊದಲೇ ಸ್ವಪ್ರಕಾಶನಾಗಿ ಸಿದ್ಧನಾಗಿರುವೆ. ॥32॥
(ಶ್ಲೋಕ-33)
ಮೂಲಮ್
ತಸ್ಮೈ ತುಭ್ಯಂ ಭಗವತೇ ವಾಸುದೇವಾಯ ವೇಧಸೇ ।
ಆತ್ಮದ್ಯೋತಗುಣೈಶ್ಛನ್ನಮಹಿಮ್ನೇ ಬ್ರಹ್ಮಣೇ ನಮಃ ॥
ಅನುವಾದ
ಸಮಸ್ತ ಪ್ರಪಂಚದ ಸೃಷ್ಟಿಕರ್ತನಾದ ಭಗವಾನ್ ವಾಸುದೇವನಿಗೆ ನಾವು ನಮಸ್ಕರಿಸುತ್ತೇವೆ. ಪ್ರಭೋ! ನಿನ್ನ ಮೂಲಕ ಪ್ರಕಾಶಿತವಾಗುವ ಗುಣಗಳಿಂದಲೇ ನೀನು ನಿನ್ನ ಮಹಿಮೆಯನ್ನು ಅಡಗಿಸಿಟ್ಟಿರುವೆ. ಪರಬ್ರಹ್ಮ ಸ್ವರೂಪನಾದ ಶ್ರೀಕೃಷ್ಣನೇ! ನಾವು ನಿನಗೆ ನಮಸ್ಕರಿಸುತ್ತಿದ್ದೇವೆ. ॥33॥
(ಶ್ಲೋಕ-34)
ಮೂಲಮ್
ಯಸ್ಯಾವತಾರಾ ಜ್ಞಾಯಂತೇ ಶರೀರೇಷ್ವಶರೀರಿಣಃ ।
ತೈಸ್ತೈರತುಲ್ಯಾತಿಶಯೈರ್ವೀರ್ಯೈರ್ದೇಹಿಷ್ವಸಂಗತೈಃ ॥
ಅನುವಾದ
ನೀನು ಪ್ರಾಕೃತ ಶರೀರದಿಂದ ರಹಿತನಾಗಿರುವೆ. ಹೀಗಿದ್ದರೂ ನೀನು ಸಾಧಾರಣವಾಗಿ ಶರೀರಧಾರಿಗಳಿಗೆ ಶಕ್ಯವಲ್ಲದ ಪರಾಕ್ರಮಗಳನ್ನು ಪ್ರಕಟಪಡಿಸುವೆ. ಅದರಿಂದ ಹೆಚ್ಚೇನು ಅದಕ್ಕೆ ಸಮಾನವಾಗಿಯೂ ಯಾರೂ ಮಾಡಲಾಗದಿದ್ದಾಗ ಅವುಗಳ ಮೂಲಕ ಆ ಶರೀರಗಳಲ್ಲಿ ನಿನ್ನ ಅವತಾರಗಳ ಅರಿವು ಉಂಟಾಗುತ್ತದೆ. ॥34॥
(ಶ್ಲೋಕ-35)
ಮೂಲಮ್
ಸ ಭವಾನ್ಸರ್ವಲೋಕಸ್ಯ ಭವಾಯ ವಿಭವಾಯ ಚ ।
ಅವತೀರ್ಣೋಂಶಭಾಗೇನ ಸಾಂಪ್ರತಂ ಪತಿರಾಶಿಷಾಮ್ ॥
ಅನುವಾದ
ಪ್ರಭೋ! ನೀನೇ ಸಮಸ್ತಲೋಕಗಳ ಅಭ್ಯುದಯ ಮತ್ತು ನಿಃಶ್ರೇಯಸ್ಸಿಗಾಗಿ ಈಗ ನಿನ್ನ ಸಮಸ್ತ ಶಕ್ತಿಗಳಿಂದ ಅವತರಿಸಿರುವೆ. ನೀನು ಸಮಸ್ತ ಅಭಿಲಾಷೆಗಳನ್ನು ಪೂರ್ಣಗೊಳಿಸುವವನಾಗಿರುವೆ. ॥35॥
(ಶ್ಲೋಕ-36)
ಮೂಲಮ್
ನಮಃ ಪರಮಕಲ್ಯಾಣ ನಮಃ ಪರಮಮಂಗಲ ।
ವಾಸುದೇವಾಯ ಶಾಂತಾಯ ಯದೂನಾಂ ಪತಯೇ ನಮಃ ॥
ಅನುವಾದ
ಪರಮ ಕಲ್ಯಾಣ ಸ್ವರೂಪನೇ! ದಿವ್ಯಮಂಗಳ ವಿಗ್ರಹನೇ! ಮಂಗಳ ಸ್ವರೂಪನೇ! ನಿನಗೆ ನಮಸ್ಕರಿಸುತ್ತೇವೆ. ಶಾಂತಾತ್ಮನೇ! ಯದುಪತಿಯೇ! ನಿನಗೆ ನಮಸ್ಕರಿಸುತ್ತೇವೆ.॥36॥
(ಶ್ಲೋಕ-37)
ಮೂಲಮ್
ಅನುಜಾನೀಹಿ ನೌ ಭೂಮಂಸ್ತವಾನುಚರಕಿಂಕರೌ ।
ದರ್ಶನಂ ನೌ ಭಗವತ ಋಷೇರಾಸೀದನುಗ್ರಹಾತ್ ॥
ಅನುವಾದ
ಅನಂತನೇ! ನಾವು ನಿನ್ನ ದಾಸಾನುದಾಸರಾಗಿದ್ದೇವೆ. ನೀನು ನಮ್ಮನ್ನು ಸ್ವೀಕರಿಸು. ಮಹರ್ಷಿಗಳಾದ ನಾರದಮುನಿಗಳ ಪರಮಾನುಗ್ರಹದಿಂದಲೇ ಅಪರಾಧಿಗಳಾಗಿದ್ದ ನಮಗೆ ನಿನ್ನ ದಿವ್ಯದರ್ಶನ ದೊರೆಯಿತು.॥37॥
(ಶ್ಲೋಕ-38)
ಮೂಲಮ್
ವಾಣೀ ಗುಣಾನುಕಥನೇ ಶ್ರವಣೌ ಕಥಾಯಾಂ
ಹಸ್ತೌ ಚ ಕರ್ಮಸು ಮನಸ್ತವ ಪಾದಯೋರ್ನಃ ।
ಸ್ಮೃತ್ಯಾಂ ಶಿರಸ್ತವ ನಿವಾಸಜಗತ್ಪ್ರಣಾಮೇ
ದೃಷ್ಟಿಃ ಸತಾಂ ದರ್ಶನೇಸ್ತು ಭವತ್ತನೂನಾಮ್ ॥
ಅನುವಾದ
ಪ್ರಭೋ! ನಮ್ಮ ವಾಣಿಯು ನಿನ್ನ ಮಂಗಳ ಗುಣಗಳನ್ನು ವರ್ಣಿಸುತ್ತಿರಲಿ. ನಮ್ಮ ಕಿವಿಗಳು ನಿನ್ನ ರಸವತ್ತಾದ ಕಥಾಶ್ರವಣದಲ್ಲಿ ತೊಡಗಿರಲಿ. ನಮ್ಮ ಕೈಗಳು ನಿನ್ನ ಸೇವೆಯಲ್ಲಿ ಮತ್ತು ಮನಸ್ಸು ನಿನ್ನ ಚರಣಕಮಲಗಳ ಸ್ಮರಣೆಯಲ್ಲಿ ತೊಡಗಿರಲಿ. ಈ ಸಮಸ್ತ ಜಗತ್ತು ನಿನ್ನ ನಿವಾಸ ಸ್ಥಾನವಾಗಿದೆ. ಎಲ್ಲರೆದುರು ನಮ್ಮ ಶಿರಸ್ಸು ಬಾಗಿರಲಿ. ಸಂತರು ನಿನ್ನ ಪ್ರತ್ಯಕ್ಷ ಶರೀರವಾಗಿದ್ದಾರೆ. ನಮ್ಮ ಕಣ್ಣುಗಳು ಅವರನ್ನು ದರ್ಶಿಸುತ್ತಿರಲಿ. ॥38॥
(ಶ್ಲೋಕ-39)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಥಂ ಸಂಕೀರ್ತಿತಸ್ತಾಭ್ಯಾಂ ಭಗವಾನ್ಗೋಕುಲೇಶ್ವರಃ ।
ದಾಮ್ನಾ ಚೋಲೂಖಲೇ ಬದ್ಧಃ ಪ್ರಹಸನ್ನಾಹ ಗುಹ್ಯಕೌ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ನಳಕೂಬರ-ಮಣಿಗ್ರೀವರು ಹೀಗೆ ಸ್ತೋತ್ರಮಾಡಲು, ಸೌಂದರ್ಯ ನಿಧಿಯೂ, ಮಾಧುರ್ಯನಿಧಿಯೂ, ಗೋಕುಲೇಶ್ವರನೂ ಆದ ಶ್ರೀಕೃಷ್ಣನು ಹಗ್ಗದಿಂದ ಒರಳಿಗೆ ಕಟ್ಟಿಹಾಕಲ್ಪಟ್ಟಂತೆ ನಸುನಗುತ್ತಾ ಅವರಲ್ಲಿ ಇಂತೆಂದನು. ॥39॥
(ಶ್ಲೋಕ-40)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಜ್ಞಾತಂ ಮಮ ಪುರೈವೈತದ್ ಋಷಿಣಾ ಕರುಣಾತ್ಮನಾ ।
ಯಚ್ಛ್ರೀಮದಾಂಧಯೋರ್ವಾಗ್ಭಿರ್ವಿಭ್ರಂಶೋನುಗ್ರಹಃ ಕೃತಃ ॥
ಅನುವಾದ
ಶ್ರೀಭಗವಂತನು ಹೇಳಿದನು — ಗುಹ್ಯಕರೇ! ನೀವು ಧನಮದದಿಂದ ಕುರುಡರಾಗಿಬಿಟ್ಟಿದ್ದಿರಿ. ಪರಮ ಕಾರುಣಿಕರಾದ ನಾರದಮಹರ್ಷಿಗಳು ನಿಮಗೆ ಶಾಪವನ್ನು ಕೊಟ್ಟು ನಿಮ್ಮ ಐಶ್ವರ್ಯವನ್ನು ವಿನಾಶಗೊಳಿಸಿದ್ದರು ಹಾಗೂ ನನ್ನ ಸಾನ್ನಿಧ್ಯವು ಸಿಕ್ಕಿ ಶಾಪಮುಕ್ತರಾಗುವಂತೆ ಅನುಗ್ರಹಿಸಿದ್ದರು ಎಂಬುದು ನಾನು ಮೊದಲಿನಿಂದಲೇ ತಿಳಿದಿದ್ದೆ. ॥40॥
(ಶ್ಲೋಕ-41)
ಮೂಲಮ್
ಸಾಧೂನಾಂ ಸಮಚಿತ್ತಾನಾಂ ಸುತರಾಂ ಮತ್ಕೃತಾತ್ಮನಾಮ್ ।
ದರ್ಶನಾನ್ನೋ ಭವೇದ್ಬಂಧಃ ಪುಂಸೋಕ್ಷ್ಣೋಃ ಸವಿತುರ್ಯಥಾ ॥
ಅನುವಾದ
ಯಾರ ಬುದ್ಧಿಯು ಸಮದರ್ಶಿಯಾಗಿದೆಯೋ, ಯಾರ ಹೃದಯ ಪೂರ್ಣವಾಗಿ ನನಗೆ ಸಮರ್ಪಿತವಾಗಿದೆಯೋ ಅಂತಹ ಸತ್ಪುರುಷರ ದರ್ಶನ ಮಾತ್ರದಿಂದಲೇ - ಸೂರ್ಯನುದಯಿಸಿದೊಡನೆ ಮನುಷ್ಯರ ಕಣ್ಣುಗಳಿಂದ ಕತ್ತಲೆಯು ದೂರವಾಗುವಂತೆಯೇ - ಸಮಸ್ತವಾದ ಬಂಧನಗಳು ದೂರವಾಗುತ್ತವೆ. ॥41॥
(ಶ್ಲೋಕ-42)
ಮೂಲಮ್
ತದ್ಗಚ್ಛತಂ ಮತ್ಪರವೌ ನಲಕೂಬರಸಾದನಮ್ ।
ಸಂಜಾತೋ ಮಯಿ ಭಾವೋ ವಾಮೀಪ್ಸಿತಃ ಪರಮೋಭವಃ ॥
ಅನುವಾದ
ಆದ್ದರಿಂದ ನಳ-ಕೂಬರ-ಮಣಿಗ್ರೀವರೇ! ನೀವು ನನ್ನಲ್ಲಿ ಪರಾಯಣರಾಗಿ ನಿಮ್ಮ ನಿಮ್ಮ ಮನೆಗಳಿಗೆ ಹೋಗಿರಿ. ನಿಮ್ಮಗಳಿಗೆ ಇಷ್ಟವಾದ ಸಂಸಾರ ಚಕ್ರದಿಂದ ಬಿಡುಗಡೆಗೊಳಿಸುವಂತಹ ಅನನ್ಯ ಭಕ್ತಿಭಾವವು ಪ್ರಾಪ್ತವಾಗಿದೆ. ॥42॥
(ಶ್ಲೋಕ-43)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯುಕ್ತೌ ತೌ ಪರಿಕ್ರಮ್ಯ ಪ್ರಣಮ್ಯ ಚ ಪುನಃ ಪುನಃ ।
ಬದ್ಧೋಲೂಖಲಮಾಮಂತ್ರ್ಯ ಜಗ್ಮತುರ್ದಿಶಮುತ್ತರಾಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಭಗವಂತನು ಹೀಗೆ ಹೇಳಿದಾಗ ಅವರಿಬ್ಬರೂ ಕೃಷ್ಣನಿಗೆ ಪ್ರದಕ್ಷಿಣೆ ಬಂದು ಪದೇ-ಪದೇ ನಮಸ್ಕಾರ ಮಾಡಿದರು. ಇದಾದ ಬಳಿಕ ಕಟ್ಟಲ್ಪಟ್ಟ ಸರ್ವೇಶ್ವರನ ಅಪ್ಪಣೆಯನ್ನು ಪಡೆದು ಅವರು ಉತ್ತರ ದಿಕ್ಕಿನ ಕಡೆ ಪ್ರಯಾಣ ಮಾಡಿದರು. ॥43॥
ಅನುವಾದ (ಸಮಾಪ್ತಿಃ)
ಹತ್ತನೆಯ ಅಧ್ಯಾಯವು ಮುಗಿಯಿತು. ॥10॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ನಾರದಶಾಪೋ ನಾಮ ದಶಮೋಧ್ಯಾಯಃ ॥10॥