೦೭

[ಏಳನೆಯ ಅಧ್ಯಾಯ]

ಭಾಗಸೂಚನಾ

ಶಕಟಾಸುರ ಭಂಜನ ಮತ್ತು ತೃಣಾವರ್ತನ ಉದ್ಧಾರ

(ಶ್ಲೋಕ-1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಯೇನ ಯೇನಾವತಾರೇಣ ಭಗವಾನ್ ಹರಿರೀಶ್ವರಃ ।
ಕರೋತಿ ಕರ್ಣರಮ್ಯಾಣಿ ಮನೋಜ್ಞಾನಿ ಚ ನಃ ಪ್ರಭೋ ॥

ಅನುವಾದ

ಪರೀಕ್ಷಿದ್ರಾಜನು ಕೇಳುತ್ತಾನೆ — ಪ್ರಭುವೇ! ಸರ್ವಶಕ್ತಿ ಮಂತನಾದ ಭಗವಾನ್ ಶ್ರೀಹರಿಯು ಅನೇಕ ಅವತಾರಗಳನ್ನೆತ್ತಿ ಅತ್ಯಂತ ಸುಂದರವಾದ ಮತ್ತು ಕರ್ಣಾನಂದಕರವಾದ ಲೀಲೆಗಳನ್ನು ಮಾಡುತ್ತಾನೆ. ಅವೆಲ್ಲವೂ ನನ್ನ ಮನಸ್ಸಿಗೆ ಬಹಳ ಆಪ್ಯಾಯಮಾನವನ್ನುಂಟುಮಾಡುತ್ತವೆ. ॥1॥

(ಶ್ಲೋಕ-2)

ಮೂಲಮ್

ಯಚ್ಛಣ್ವತೋಪೈತ್ಯರತಿರ್ವಿತೃಷ್ಣಾ
ಸತ್ತ್ವಂ ಚ ಶುದ್ಧ್ಯತ್ಯಚಿರೇಣ ಪುಂಸಃ ।
ಭಕ್ತಿರ್ಹರೌ ತತ್ಪುರುಷೇ ಚ ಸಖ್ಯಂ
ತದೇವ ಹಾರಂ ವದ ಮನ್ಯಸೇ ಚೇತ್ ॥

ಅನುವಾದ

ಅವುಗಳ ಶ್ರವಣಮಾತ್ರದಿಂದ ಕಷ್ಟಗಳು ದೂರವಾಗುತ್ತವೆ ಮತ್ತು ವಿವಿಧ ವಿಷಯಗಳ ತೃಷ್ಣೆಯು ಹೊರಟು ಹೋಗುತ್ತದೆ. ಮನುಷ್ಯನ ಅಂತಃಕರಣವು ಬಹುಬೇಗನೇ ಶುದ್ಧವಾಗಿ ಹೋಗುತ್ತದೆ. ಭಗವಂತನ ಚರಣಗಳಲ್ಲಿ ಭಕ್ತಿಯೂ, ಅವನ ಭಕ್ತರಲ್ಲಿ ಪ್ರೀತಿಯೂ ಉಂಟಾಗುತ್ತದೆ. ತಾವು ನನ್ನನ್ನು ಅವುಗಳ ಶ್ರವಣಕ್ಕೆ ಅಧಿಕಾರಿಯೆಂದು ತಿಳಿಯುತ್ತಿದ್ದರೆ ಭಗವಂತನ ಆ ಮನೋಹರವಾದ ಲೀಲೆಗಳನ್ನು ವರ್ಣಿಸಿರಿ. ॥2॥

(ಶ್ಲೋಕ-3)

ಮೂಲಮ್

ಅಥಾನ್ಯದಪಿ ಕೃಷ್ಣಸ್ಯ ತೋಕಾಚರಿತಮದ್ಭುತಮ್ ।
ಮಾನುಷಂ ಲೋಕಮಾಸಾದ್ಯ ತಜ್ಜಾತಿಮನುರುಂಧತಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಮನುಷ್ಯಲೋಕದಲ್ಲಿ ಅವತರಿಸಿ ಮನುಷ್ಯರ ಸ್ವಭಾವ ಗುಣಗಳನ್ನು ಅನುಕರಿಸುತ್ತಾ ಮಾಡಿದ ಬಾಲಲೀಲೆಗಳು ಪರಮಾದ್ಭುತವಾದವುಗಳು. ಅದಕ್ಕಾಗಿ ಈಗ ಅವನ ಇತರ ಬಾಲಲೀಲೆಗಳನ್ನೂ ವರ್ಣಿಸಿರಿ. ॥3॥

ಮೂಲಮ್

(ಶ್ಲೋಕ-4)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಕದಾಚಿದೌತ್ಥಾನಿಕಕೌತುಕಾಪ್ಲವೇ
ಜನ್ಮರ್ಕ್ಷಯೋಗೇ ಸಮವೇತಯೋಷಿತಾಮ್ ।
ವಾದಿತ್ರಗೀತದ್ವಿಜಮಂತ್ರವಾಚಕೈ-
ಶ್ಚಕಾರ ಸೂನೋರಭಿಷೇಚನಂ ಸತೀ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಮುದ್ದುಕೃಷ್ಣನು ಮೂರು ತಿಂಗಳಿಗೆ ಸರಿಯಾಗಿ ಬೋರಲು ಬಿದ್ದನು. ಅಂದಿಗೆ ಸರಿಯಾಗಿ ಅವನ ಜನ್ಮನಕ್ಷತ್ರ ರೋಹಿಣಿ ನಕ್ಷತ್ರದ ಯೋಗವಿತ್ತು. ಮಗುವಿಗೆ ನೀರೆರೆದು ಹಬ್ಬವನ್ನಾಚರಿಸುವ ಸಂಭ್ರಮ. ಹಲವಾರು ಗೋಪಿಯರು ನಂದಗೋಪನ ಮನೆಗೆ ಬಂದರು. ಕೆಲವರು ಸಂಪ್ರದಾಯದ ಹಾಡುಗಳನ್ನು ಹಾಡುತ್ತಿದ್ದರು. ಮಂಗಳ ವಾದ್ಯಗಳು ಮೊಳಗುತ್ತಿದ್ದುವು. ಗೋಪಿಯರ ಮಧ್ಯದಲ್ಲಿದ್ದ ಯಶೋದೆಯು ಮುದ್ದುಕೃಷ್ಣನಿಗೆ ನೀರೆರೆದಳು. ಬ್ರಾಹ್ಮಣರು ಮಂತ್ರಗಳನ್ನು ಹೇಳುತ್ತಾ ಆಶೀರ್ವದಿಸುತ್ತಿದ್ದರು. ॥4॥

(ಶ್ಲೋಕ-5)

ಮೂಲಮ್

ನಂದಸ್ಯ ಪತ್ನೀ ಕೃತಮಜ್ಜನಾದಿಕಂ
ವಿಪ್ರೈಃ ಕೃತಸ್ವಸ್ತ್ಯಯನಂ ಸುಪೂಜಿತೈಃ ।
ಅನ್ನಾದ್ಯವಾಸಃಸ್ರಗಭೀಷ್ಟಧೇನುಭಿಃ
ಸಂಜಾತನಿದ್ರಾಕ್ಷಮಶೀಶಯಚ್ಛನೈಃ ॥

ಅನುವಾದ

ನಂದ ರಾಣಿಯಾದ ಯಶೋದಾದೇವಿಯು ಬ್ರಾಹ್ಮಣರನ್ನು ಪೂಜಿಸಿ ಸನ್ಮಾನಿಸಿದಳು. ಅವರಿಗೆ ಅನ್ನ, ವಸ್ತ್ರ, ಮಾಲೆ, ಗೋವುಗಳು ಮುಂತಾದ ಅವರ ಅಭೀಷ್ಟ ವಸ್ತುಗಳನ್ನು ದಾನ ಮಾಡಿದಳು. ಯಶೋದೆಯು ಆ ಬ್ರಾಹ್ಮಣರಿಂದ ಸ್ವಸ್ತಿವಾಚನ ಮಾಡಿಸಿ ನೀರೆರೆಯುವುದನ್ನು ಮುಗಿಸಿದಾಗ ಮುದ್ದುಕೃಷ್ಣನಿಗೆ ಕಣ್ಣುಗಳಲ್ಲಿ ನಿದ್ದೆ ತುಂಬಿದೆ ಎಂದು ನೋಡಿ ನಿಧಾನವಾಗಿ ಶಯ್ಯೆಯಲ್ಲಿ ಮಗುವನ್ನು ಮಲಗಿಸಿದಳು. ॥5॥

(ಶ್ಲೋಕ-6)

ಮೂಲಮ್

ಔತ್ಥಾನಿಕೌತ್ಸುಕ್ಯಮನಾ ಮನಸ್ವಿನೀ
ಸಮಾಗತಾನ್ಪೂಜಯತೀ ವ್ರಜೌಕಸಃ ।
ನೈವಾಶೃಣೋದ್ವೈ ರುದಿತಂ ಸುತಸ್ಯ ಸಾ
ರುದನ್ ಸ್ತನಾರ್ಥೀ ಚರಣಾವುದಕ್ಷಿಪತ್ ॥

ಅನುವಾದ

ಸ್ವಲ್ಪ ಸಮಯದಲ್ಲಿ ಶ್ಯಾಮಸುಂದರನು ಕಣ್ಣುತೆರೆದು ಸ್ತನ್ಯಪಾನಕ್ಕಾಗಿ ಅಳತೊಡಗಿದನು. ಆಗ ಮನಸ್ವಿನಿಯಾದ ಯಶೋದೆಯು ಉತ್ಸವಕ್ಕೆ ಬಂದಿರುವ ವ್ರಜವಾಸಿಗಳ ಸ್ವಾಗತ-ಸತ್ಕಾರದಲ್ಲಿ ತನ್ಮಯಳಾಗಿದ್ದಳು. ಇದರಿಂದ ಆಕೆಗೆ ಶ್ರೀಕೃಷ್ಣನ ಅಳುವು ಕೇಳಿಸಲಿಲ್ಲ. ಶ್ರೀಕೃಷ್ಣನು ಅಳುತ್ತಾ ಅಳುತ್ತಾ ಕಾಲುಗಳನ್ನು ಬಡಿಯತೊಡಗಿದನು. ॥6॥

(ಶ್ಲೋಕ-7)

ಮೂಲಮ್

ಅಧಃ ಶಯಾನಸ್ಯ ಶಿಶೋರನೋಲ್ಪಕ-
ಪ್ರವಾಲಮೃದ್ವಂಘ್ರಿಹತಂ ವ್ಯವರ್ತತ ।
ವಿಧ್ವಸ್ತನಾನಾರಸಕುಪ್ಯಭಾಜನಂ
ವ್ಯತ್ಯಸ್ತಚಕ್ರಾಕ್ಷವಿಭಿನ್ನಕೂಬರಮ್ ॥

ಅನುವಾದ

ಬಾಲಕೃಷ್ಣನು ಒಂದು ಬಂಡಿಯ ಕೆಳಗೆ ಮಲಗಿದ್ದನು. ಅವನ ಕಾಲುಗಳು ಎಳೆ ಚಿಗುರಿನಂತೆ ತುಂಬಾ ಕೋಮಲವಾಗಿದ್ದು ಮನೋಹರವಾಗಿದ್ದವು. ಆದರೆ ಆ ಎಳೆಯಕಾಲು ಆ ವಿಶಾಲವಾದ ಬಂಡಿಗೆ ತಗಲುತ್ತಲೇ ಅದು ತಲೆಕೆಳಗಾಯಿತು.* ಆ ಬಂಡಿಯಲ್ಲಿ ಹಾಲು-ಮೊಸರು ಮುಂತಾದ ಅನೇಕ ರಸಗಳಿಂದ ತುಂಬಿದ ಮಡಕೆಗಳನ್ನೂ, ಇತರ ಪಾತ್ರೆಗಳನ್ನೂ ಇಟ್ಟಿದ್ದರು. ಅವೆಲ್ಲವೂ ಬಿದ್ದು ಒಡೆದುಹೋದವು. ಗಾಡಿಯ ಗಾಲಿಗಳು, ಅಚ್ಚುಮರ, ನೊಗ ಇತ್ಯಾದಿಗಳೆಲ್ಲ ಮುರಿದು ನುಚ್ಚುನೂರಾದವು. ॥7॥

ಟಿಪ್ಪನೀ
  • ಶಕಟಾಸುರನ ಪೂರ್ವಕಥೆ : ಉತ್ಕಚನೆಂಬುವವನು ಹಿರಣ್ಯಾಕ್ಷನ ಮಗನು. ಅವನು ಮಹಾಬಲಿಷ್ಠನೂ ಸ್ಥೂಲಕಾಯನೂ ಆಗಿದ್ದನು. ಅವನು ಪ್ರಪಂಚ ಪರ್ಯಟನ ಮಾಡುತ್ತಿದ್ದಾಗ ಒಮ್ಮೆ ಲೋಮಶ ಮಹರ್ಷಿಗಳ ಆಶ್ರಮಕ್ಕೂ ಬಂದನು. ಋಷಿ-ಮುನಿಗಳ ವಿಷಯದಲ್ಲಿ ಅವನಿಗೆ ತಿರಸ್ಕಾರ ಬುದ್ಧಿಯಿದ್ದಿತು. ರಾಕ್ಷಸ ಸಹಜವಾದ ಬುದ್ಧಿಯಿಂದ ಅವನು ಆಶ್ರಮದ ಪರಿಸರದಲ್ಲಿದ್ದ ವೃಕ್ಷಗಳೆಲ್ಲವನ್ನೂ ಕೀಳತೊಡಗಿದನು. ಲೋಮಶರು ಕುಪಿತರಾಗಿ ಶಪಿಸಿದರು. ‘ದುಷ್ಟನೇ! ನೀನು ದೇಹರಹಿತನಾಗು’. ಮರುಕ್ಷಣದಲ್ಲಿಯೇ ಉತ್ಕಚನು ಹಾವಿನ ಪೊರೆಯಂತೆ ಆಗಿಬಿಟ್ಟನು. ಭಯಗ್ರಸ್ತನಾದ ರಾಕ್ಷಸನು ಒಡನೆಯೇ ಲೋಮಶರ ಕಾಲುಗಳಿಗೆ ಬಿದ್ದು ಶಾಪದ ನಿರಸನಕ್ಕಾಗಿ ಬೇಡಿಕೊಂಡನು. ಲೋಮಶರು ಪ್ರಸನ್ನರಾದರು. ಮಹಾತ್ಮರ ಶಾಪವೂ ಕೆಲವು ವೇಳೆ ವರವಾಗಿ ಪರಿಣಮಿಸುತ್ತದೆ. ಪ್ರಸನ್ನರಾದ ಲೋಮಶರು ಹೇಳಿದರು : ‘ವೈವಸ್ವತ ಮನ್ವಂತರದಲ್ಲಿ ಶ್ರೀಕೃಷ್ಣನ ಪಾದಸ್ಪರ್ಶದಿಂದ ನೀನು ಮುಕ್ತನಾಗುವೆ.’ ಅವನೇ ಶಕಟಾಸುರನಾಗಿ ಬಂದು ಮುದ್ದುಕೃಷ್ಣನ ಪಾದಸ್ಪರ್ಶದಿಂದ ಮುಕ್ತನಾದನು.

(ಶ್ಲೋಕ-8)

ಮೂಲಮ್

ದೃಷ್ಟ್ವಾ ಯಶೋದಾಪ್ರಮುಖಾ ವ್ರಜಸಿಯ
ಔತ್ಥಾನಿಕೇ ಕರ್ಮಣಿ ಯಾಃ ಸಮಾಗತಾಃ ।
ನಂದಾದಯಶ್ಚಾದ್ಭುತದರ್ಶನಾಕುಲಾಃ
ಕಥಂ ಸ್ವಯಂ ವೈ ಶಕಟಂ ವಿಪರ್ಯಗಾತ್ ॥

ಅನುವಾದ

ಮುದ್ದುಕೃಷ್ಣನು ಬೋರಲುಬಿದ್ದ ಆ ಉತ್ಸವದಲ್ಲಿ ಭಾಗವಹಿಸಲು ಬಂದಿದ್ದ ಗೋಪಿಯರೂ, ಯಶೋದಾ ರೋಹಿಣೀ-ನಂದಗೋಪರೂ, ಗೋಪಾಲಕರೆಲ್ಲರೂ ಈ ವಿಚಿತ್ರ ಘಟನೆಯನ್ನು ನೋಡಿ ವ್ಯಾಕುಲಗೊಂಡರು. ‘ಇದೇನಾಯಿತು? ಈ ಗಾಡಿಯು ತಾನಾಗಿಯೇ ಹೇಗೆ ಮಗುಚಿಬಿತ್ತು?’ ಎಂದು ಪರಸ್ಪರ ಮಾತನಾಡತೊಡಗಿದರು. ॥8॥

(ಶ್ಲೋಕ-9)

ಮೂಲಮ್

ಊಚುರವ್ಯವಸಿತಮತೀನ್ಗೋಪಾನ್ಗೋಪೀಶ್ಚ ಬಾಲಕಾಃ ।
ರುದತಾನೇನ ಪಾದೇನ ಕ್ಷಿಪ್ತಮೇತನ್ನ ಸಂಶಯಃ ॥

ಅನುವಾದ

ಅವರು ಇದರ ಕಾರಣವನ್ನು ನಿಶ್ಚಯಿಸದಾದರು. ಅಲ್ಲೇ ಆಡುತ್ತಿದ್ದ ಗೋಪಬಾಲಕರು ಮತ್ತು ಗೋಪಿಯರು ಹೇಳಿದರು ‘ಈ ಮುದ್ದುಕೃಷ್ಣನೇ ಅಳುತ್ತಾ ಅಳುತ್ತಾ ತನ್ನ ಕಾಲಿನಿಂದ ಒದ್ದು ಗಾಡಿಯನ್ನು ತಲೆಕೆಳ ಗಾಗಿಸಿದನು.’ ಇದರಲ್ಲಿ ಸಂದೇಹವೇ ಇಲ್ಲ. ॥9॥

(ಶ್ಲೋಕ-10)

ಮೂಲಮ್

ನ ತೇ ಶ್ರದ್ಧಧಿರೇ ಗೋಪಾ ಬಾಲಭಾಷಿತಮಿತ್ಯುತ ।
ಅಪ್ರಮೇಯಂ ಬಲಂ ತಸ್ಯ ಬಾಲಕಸ್ಯ ನ ತೇ ವಿದುಃ ॥

ಅನುವಾದ

ಆದರೆ ಗೋಪಾಲಕರು ಅದನ್ನು ‘ಹುಡುಗರ ಮಾತು’ ಎಂದು ತಿಳಿದು ಅದರಲ್ಲಿ ವಿಶ್ವಾಸವಿಡಲಿಲ್ಲ. ಆ ಗೋಪರು ಈ ಬಾಲಕನ ಅನಂತಬಲವನ್ನು ತಿಳಿಯದಿರುವುದು ಸರಿಯೇ ಆಗಿದೆ. ॥10॥

(ಶ್ಲೋಕ-11)

ಮೂಲಮ್

ರುದಂತಂ ಸುತಮಾದಾಯ ಯಶೋದಾ ಗ್ರಹಶಂಕಿತಾ ।
ಕೃತಸ್ವಸ್ತ್ಯಯನಂ ವಿಪ್ರೈಃ ಸೂಕ್ತೈಃ ಸ್ತನಮಪಾಯಯತ್ ॥

ಅನುವಾದ

ಯಶೋದೆಯು ಈ ಘಟನೆಯನ್ನು ಯಾವುದೋ ಗ್ರಹಚೇಷ್ಟೆ ಇರಬಹುದೆಂದು ಭಾವಿಸಿದಳು. ಆಕೆಯು ಅಳುತ್ತಿದ್ದ ಮುದ್ದು ಕೃಷ್ಣನನ್ನು ತೊಡೆಯಮೇಲೆ ಎತ್ತಿಕೊಂಡು ಸಮಾಧಾನ ಪಡಿಸುತ್ತಾ, ಬ್ರಾಹ್ಮಣರಿಂದ ಮಂತ್ರಪೂರ್ವಕವಾಗಿ ಸ್ವಸ್ತಿವಾಚನ ಮಾಡಿಸಿ, ಹಾಲುಣಿಸಿದಳು. ॥11॥

(ಶ್ಲೋಕ-12)

ಮೂಲಮ್

ಪೂರ್ವವತ್ಸ್ಥಾಪಿತಂ ಗೋಪೈರ್ಬಲಿಭಿಃ ಸಪರಿಚ್ಛದಮ್ ।
ವಿಪ್ರಾ ಹುತ್ವಾರ್ಚಯಾಂಚಕ್ರುರ್ದಧ್ಯಕ್ಷತಕುಶಾಂಬುಭಿಃ ॥

ಅನುವಾದ

ಬಲಿಷ್ಠರಾದ ಗೋಪರು ಆ ಬಂಡಿಯನ್ನು ಸರಿಪಡಿಸಿದರು. ಮೊದಲಿದ್ದಂತೆ ಸಾಮಗ್ರಿಗಳನ್ನು ಗಾಡಿಯಲ್ಲಿಟ್ಟರು. ಬ್ರಾಹ್ಮಣರು ಅನಿಷ್ಟನಿವಾರಕಗಳಾದ ಹೋಮಗಳನ್ನು ಮಾಡಿ ಭಗವಂತನನ್ನು ಮತ್ತು ಆ ಗಾಡಿಯನ್ನು ಮೊಸರು, ಅಕ್ಷತೆ, ದರ್ಭೆ, ನೀರು ಇತ್ಯಾದಿಗಳಿಂದ ಪೂಜಿಸಿದರು. ॥12॥

(ಶ್ಲೋಕ-13)

ಮೂಲಮ್

ಯೇಸೂಯಾನೃತದಂಭೇರ್ಷ್ಯಾಹಿಂಸಾಮಾನವಿವರ್ಜಿತಾಃ ।
ನ ತೇಷಾಂ ಸತ್ಯಶೀಲಾನಾಮಾಶಿಷೋ ವಿಲಾಃ ಕೃತಾಃ ॥

ಅನುವಾದ

ಯಾರು ಇತರರಲ್ಲಿ ದೋಷಗಳನ್ನು ಹುಡುಕುವುದಿಲ್ಲವೋ, ಸುಳ್ಳುಹೇಳುವುದಿಲ್ಲವೋ, ದಂಭ, ಈರ್ಷೆ, ಹಿಂಸೆ ಇವುಗಳನ್ನು ಮಾಡುವುದಿಲ್ಲವೋ, ದುರಭಿಮಾನ ಶೂನ್ಯರಾಗಿರುವರೋ, ಅಂತಹ ಸತ್ಯಶೀಲ ಬ್ರಾಹ್ಮಣರ ಆಶೀರ್ವಾದವು ಎಂದೂ ನಿಷ್ಫಲವಾಗುವುದಿಲ್ಲ. ॥13॥

(ಶ್ಲೋಕ-14)

ಮೂಲಮ್

ಇತಿ ಬಾಲಕಮಾದಾಯ ಸಾಮರ್ಗ್ಯಜುರುಪಾಕೃತೈಃ ।
ಜಲೈಃ ಪವಿತ್ರೌಷಧಿಭಿರಭಿಷಿಚ್ಯ ದ್ವಿಜೋತ್ತಮೈಃ ॥

ಅನುವಾದ

ಹೀಗೆ ಯೋಚಿಸಿದ ನಂದಗೋಪನು ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಬ್ರಾಹ್ಮಣರಿಂದ ಋಗ್ಯಜುಸ್ಸಾಮ ಮಂತ್ರಗಳಿಂದ ಅಭಿಮಂತ್ರಿತವಾದ ಮತ್ತು ಔಷಧಿಗಳಿಂದ ಕೂಡಿದ ಪವಿತ್ರಜಲದಿಂದ ಮಗುವಿಗೆ ಅಭಿಷೇಕವನ್ನು ಮಾಡಿಸಿದನು. ॥14॥

(ಶ್ಲೋಕ-15)

ಮೂಲಮ್

ವಾಚಯಿತ್ವಾ ಸ್ವಸ್ತ್ಯಯನಂ ನಂದಗೋಪಃ ಸಮಾಹಿತಃ ।
ಹುತ್ವಾ ಚಾಗ್ನಿಂ ದ್ವಿಜಾತಿಭ್ಯಃ ಪ್ರಾದಾದನ್ನಂ ಮಹಾಗುಣಮ್ ॥

ಅನುವಾದ

ನಂದಗೋಪನು ಏಕಾಗ್ರ ಚಿತ್ತನಾಗಿ ಸ್ವಸ್ತಿವಾಚನ ಮತ್ತು ಹವನಮಾಡಿಸಿ ಬ್ರಾಹ್ಮಣರಿಗೆ ಷಡ್ರಸೋಪೇತವಾದ ಭಕ್ಷ್ಯ-ಭೋಜ್ಯಾದಿಗಳಿಂದ ಭೋಜನ ಮಾಡಿಸಿದನು. ॥15॥

(ಶ್ಲೋಕ-16)

ಮೂಲಮ್

ಗಾವಃ ಸರ್ವಗುಣೋಪೇತಾ ವಾಸಃಸ್ರಗ್ರುಕ್ಮಮಾಲಿನೀಃ ।
ಆತ್ಮಜಾಭ್ಯುದಯಾರ್ಥಾಯ ಪ್ರಾದಾತ್ತೇ ಚಾನ್ವಯುಂಜತ ॥

ಅನುವಾದ

ಅನಂತರ ನಂದಗೋಪನು ಪುತ್ರನ ಅಭ್ಯುದಯಾರ್ಥವಾಗಿ ವಸ್ತ್ರಗಳಿಂದಲೂ, ಪುಷ್ಪಮಾಲಿಕೆಗಳಿಂದಲೂ, ಚಿನ್ನದ ಹಾರಗಳಿಂದಲೂ ಸಮಲಂಕೃತವಾದ ಒಳ್ಳೆಯ ಗುಣಗಳಿಂದ ಕೂಡಿದ ಅನೇಕ ಗೋವುಗಳನ್ನು ಬ್ರಾಹ್ಮಣರಿಗೆ ದಾನಮಾಡಿದನು. ಬ್ರಾಹ್ಮಣರೆಲ್ಲರೂ ಮುದ್ದುಕೃಷ್ಣನಿಗೂ, ನಂದಗೋಪನಿಗೂ ಆಶೀರ್ವದಿಸಿದರು. ॥16॥

(ಶ್ಲೋಕ-17)

ಮೂಲಮ್

ವಿಪ್ರಾ ಮಂತ್ರವಿದೋ ಯುಕ್ತಾಸ್ತೈರ್ಯಾಃ ಪ್ರೋಕ್ತಾಸ್ತಥಾಶಿಷಃ ।
ತಾ ನಿಷ್ಫಲಾ ಭವಿಷ್ಯಂತಿ ನ ಕದಾಚಿದಪಿ ಸ್ಫುಟಮ್ ॥

ಅನುವಾದ

ಸದಾಚಾರವುಳ್ಳ ವೇದವಿದರಾದ ಬ್ರಾಹ್ಮಣರು ಮಾಡಿದ ಆಶೀರ್ವಾದಗಳು ಎಂದಿಗೂ ನಿಷ್ಫಲವಾಗುವುದಿಲ್ಲವೆಂಬುದು ಸ್ಪಷ್ಟವೇ ಆಗಿದೆ. ॥17॥

(ಶ್ಲೋಕ-18)

ಮೂಲಮ್

ಏಕದಾರೋಹಮಾರೂಢಂ ಲಾಲಯಂತೀ ಸುತಂ ಸತೀ ।
ಗರಿಮಾಣಂ ಶಿಶೋರ್ವೋಢುಂ ನ ಸೇಹೇ ಗಿರಿಕೂಟವತ್ ॥

ಅನುವಾದ

ಮುಂದೆ ಒಂದುದಿನ ಯಶೋದೆಯು ಮುದ್ದು ಕೃಷ್ಣನನ್ನು ತೊಡೆಯಮೇಲೆ ಮಲಗಿಸಿಕೊಂಡು ಆಡಿಸುತ್ತಿದ್ದಳು. ಇದ್ದಕ್ಕಿದ್ದಂತೆ ಶ್ರೀಕೃಷ್ಣನು ಪರ್ವತದಂತೆ ಬಹಳ ಭಾರವಾಗಿಬಿಟ್ಟನು. ಯಶೋದೆಯು ಅವನ ಭಾರವನ್ನು ತಡೆಯದಾದಳು. ॥18॥

(ಶ್ಲೋಕ-19)

ಮೂಲಮ್

ಭೂವೌ ನಿಧಾಯ ತಂ ಗೋಪೀ ವಿಸ್ಮಿತಾ ಭಾರಪೀಡಿತಾ ।
ಮಹಾಪುರುಷಮಾದಧ್ಯೌಜಗತಾಮಾಸ ಕರ್ಮಸು ॥

ಅನುವಾದ

ಆಕೆಯು ಭಾರಪೀಡಿತಳಾಗಿ ಶ್ರೀಕೃಷ್ಣನನ್ನು ನೆಲದ ಮೇಲೆ ಕುಳ್ಳಿರಿಸಿದಳು. ಇಂತಹ ಹೊಸ ಘಟನೆಯಿಂದ ಆಕೆಯು ಅತ್ಯಂತ ಚಕಿತಳಾಗಿದ್ದಳು. ಬಳಿಕ ಅವಳು ಕಂದನಿಗೆ ಯಾವುದೇ ಉಪದ್ರವವೂ ಆಗದಿರಲಿ ಎಂದು ಭಗವಂತನನ್ನು ಧ್ಯಾನಿಸಿ ಗೃಹಕೃತ್ಯದಲ್ಲಿ ತೊಡಗಿದಳು.॥19॥

(ಶ್ಲೋಕ-20)

ಮೂಲಮ್

ದೈತ್ಯೋ ನಾಮ್ನಾ ತೃಣಾವರ್ತಃ ಕಂಸಭೃತ್ಯಃ ಪ್ರಣೋದಿತಃ ।
ಚಕ್ರವಾತಸ್ವರೂಪೇಣ ಜಹಾರಾಸೀನಮರ್ಭಕಮ್ ॥

ಅನುವಾದ

ತೃಣಾವರ್ತನೆಂಬ ದೈತ್ಯನು ಕಂಸನ ಸೇವಕನಾಗಿದ್ದನು. ಕಂಸನ ಪ್ರೇರಣೆಯಿಂದ ಅವನು ಸುಂಟರಗಾಳಿಯ ರೂಪದಿಂದ ಗೋಕುಲಕ್ಕೆ ಬಂದನು ಹಾಗೂ ಕುಳಿತಿರುವ ಶ್ರೀಕೃಷ್ಣನನ್ನು ಹಾರಿಸಿಕೊಂಡು ಆಕಾಶಕ್ಕೆ ನೆಗೆದನು. ॥20॥

(ಶ್ಲೋಕ-21)

ಮೂಲಮ್

ಗೋಕುಲಂ ಸರ್ವಮಾವೃಣ್ವನ್ಮುಷ್ಣಂಶ್ಚಕ್ಷೂಂಷಿ ರೇಣುಭಿಃ ।
ಈರಯನ್ಸುಮಹಾಘೋರಶಬ್ದೇನ ಪ್ರದಿಶೋ ದಿಶಃ ॥

ಅನುವಾದ

ಅವನು ಗೋಕುಲದಲ್ಲೆಲ್ಲ ಧೂಳನ್ನು ಎಬ್ಬಿಸಿ ಎಲ್ಲರ ಕಣ್ಣುಗಳನ್ನು ಮುಚ್ಚಿಸಿದನು. ಅವನ (ಸುಂಟರಗಾಳಿಯ) ಅತಿ ಘೋರವಾದ ಕರ್ಕಶವಾದ ಶಬ್ದವು ಹತ್ತು ದಿಕ್ಕುಗಳಲ್ಲಿ ತುಂಬಿ ಹೋಯಿತು. ॥21॥

(ಶ್ಲೋಕ-22)

ಮೂಲಮ್

ಮುಹೂರ್ತಮಭವದ್ಗೋಷ್ಠಂ ರಜಸಾ ತಮಸಾವೃತಮ್ ।
ಸುತಂ ಯಶೋದಾ ನಾಪಶ್ಯತ್ತಸ್ಮಿನ್ನ್ಯಸ್ತವತೀ ಯತಃ ॥

ಅನುವಾದ

ಮುಹೂರ್ತಕಾಲ ಗೋಕುಲವು ಧೂಳಿನಿಂದ ಮತ್ತು ಕತ್ತಲೆಯಿಂದ ಮುಚ್ಚಿ ಹೋಗಿತ್ತು. ಯಶೋದೆಯು ಶ್ರೀಕೃಷ್ಣನನ್ನು ಕುಳ್ಳಿರಿಸಿದಲ್ಲಿಗೆ ಬಂದುನೋಡಿದರೆ ಅಲ್ಲಿ ಅವನು ಇರಲಿಲ್ಲ.॥22॥

(ಶ್ಲೋಕ-23)

ಮೂಲಮ್

ನಾಪಶ್ಯತ್ಕಶ್ಚನಾತ್ಮಾನಂ ಪರಂ ಚಾಪಿ ವಿಮೋಹಿತಃ ।
ತೃಣಾವರ್ತನಿಸೃಷ್ಟಾಭಿಃ ಶರ್ಕರಾಭಿರುಪದ್ರುತಃ ॥

ಅನುವಾದ

ಆ ಸಮಯದಲ್ಲಿ ತೃಣಾವರ್ತನು ಸುಂಟರ ಗಾಳಿಯ ರೂಪದಿಂದ ಹಾರಿಸಿದ ಧೂಳು-ಮರಳಿನಿಂದಾಗಿ ಜನರೆಲ್ಲರೂ ಅತ್ಯಂತ ಉದ್ವಿಗ್ನರಾಗಿ, ಕಳವಳಗೊಂಡು, ಒಬ್ಬರು ಮತ್ತೊಬ್ಬರನ್ನು ನೋಡಲಾಗುತ್ತಿರಲಿಲ್ಲ. ॥23॥

(ಶ್ಲೋಕ-24)

ಮೂಲಮ್

ಇತಿ ಖರಪವನಚಕ್ರಪಾಂಸುವರ್ಷೇ
ಸುತಪದವೀಮಬಲಾವಿಲಕ್ಷ್ಯ ಮಾತಾ ।
ಅತಿಕರುಣಮನುಸ್ಮರಂತ್ಯಶೋಚದ್
ಭುವಿ ಪತಿತಾ ಮೃತವತ್ಸಕಾ ಯಥಾ ಗೌಃ ॥

ಅನುವಾದ

ಜೋರಾಗಿ ಬೀಸುತ್ತಿದ್ದ ಸುಂಟರಗಾಳಿಯಿಂದ, ಧೂಳಿನ ಮಳೆಯಲ್ಲಿ ತನ್ನ ಪುತ್ರನನ್ನು ಕಾಣದೆ ಯಶೋದೆಯು ಅತ್ಯಂತ ಶೋಕಾಕುಲಳಾಗಿ ಪುತ್ರನನ್ನು ನೆನೆಯುತ್ತಾ ಕರುವನ್ನು ಕಳಕೊಂಡ ಹಸುವಿನಂತಾಗಿ ಅತೀವ ದುಃಖದಿಂದ ಅವಳು ನೆಲಕ್ಕುರುಳಿದಳು. ॥24॥

(ಶ್ಲೋಕ-25)

ಮೂಲಮ್

ರುದಿತಮನುನಿಶಮ್ಯ ತತ್ರ ಗೋಪ್ಯೋ
ಭೃಶಮನುತಪ್ತಧಿಯೋಶ್ರುಪೂರ್ಣಮುಖ್ಯಃ ।
ರುರುದುರನುಪಲಭ್ಯ ನಂದಸೂನುಂ
ಪವನ ಉಪಾರತಪಾಂಸುವರ್ಷವೇಗೇ ॥

ಅನುವಾದ

ಸುಂಟರಗಾಳಿಯು ಶಾಂತವಾಗಿ ಧೂಳಿನ ಮಳೆಯು ಕಡಿಮೆಯಾದಾಗ ಯಶೋದೆಯ ಅಳುವಿನ ಶಬ್ದವನ್ನು ಕೇಳಿ ಗೋಪಿಯರೆಲ್ಲರೂ ಅಲ್ಲಿಗೆ ಧಾವಿಸಿಬಂದರು. ಯಶೋದೆಯ ಬಳಿ ನಂದನಂದನ ಶ್ರೀಕೃಷ್ಣನು ಇಲ್ಲದಿರುವುದನ್ನು ನೋಡಿ ಅವರೆಲ್ಲರೂ ಪರಿತಪಿಸತೊಡಗಿದರು. ಅವರ ಕಣ್ಣುಗಳಿಂದ ಕಂಬನಿಯು ಧಾರಾಕಾರವಾಗಿ ಹರಿಯುತ್ತಿದ್ದು, ಅವರೆಲ್ಲರೂ ಬಿಕ್ಕಿ-ಬಿಕ್ಕಿ ಅಳುತ್ತಿದ್ದರು.॥25॥

(ಶ್ಲೋಕ-26)

ಮೂಲಮ್

ತೃಣಾವರ್ತಃ ಶಾಂತರಯೋ ವಾತ್ಯಾರೂಪಧರೋ ಹರನ್ ।
ಕೃಷ್ಣಂ ನಭೋಗತೋ ಗಂತುಂ ನಾಶಕ್ನೋದ್ಭೂರಿಭಾರಭೃತ್ ॥

ಅನುವಾದ

ತೃಣಾವರ್ತನು ಸುಂಟರಗಾಳಿಯ ರೂಪದಿಂದ ಭಗವಾನ್ ಶ್ರೀಕೃಷ್ಣನನ್ನು ಎತ್ತಿಕೊಂಡು ಆಕಾಶಕ್ಕೆ ಹೋದಾಗ ಕೃಷ್ಣನ ಭಾರವನ್ನು ಸಹಿಸಲಾರದೆ ಅವನ ವೇಗವು ಕಡಿಮೆಯಾಯಿತು. ಅವನನ್ನು ಮೇಲೆತ್ತಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ॥26॥

(ಶ್ಲೋಕ-27)

ಮೂಲಮ್

ತಮಶ್ಮಾನಂ ಮನ್ಯಮಾನ ಆತ್ಮನೋ ಗುರುಮತ್ತಯಾ ।
ಗಲೇ ಗೃಹೀತ ಉತ್ಸ್ರಷ್ಟುಂ ನಾಶಕ್ನೋದದ್ಭುತಾರ್ಭಕಮ್ ॥

ಅನುವಾದ

ತೃಣಾವರ್ತನು ತನಗಿಂತಲೂ ಹೆಚ್ಚು ಭಾರವಾಗಿರುವ ಶ್ರೀಕೃಷ್ಣನನ್ನು ನೀಲಗಿರಿಯ ಬಂಡೆಯೆಂದೇ ಭಾವಿಸಿದನು. ಅವನನ್ನು ಬಿಟ್ಟು ಬಿಡಲು ಸಾಧ್ಯವಾಗದಂತೆ ಶ್ರೀಕೃಷ್ಣನು ಅಸುರನ ಕತ್ತನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದನು. ॥27॥

(ಶ್ಲೋಕ-28)

ಮೂಲಮ್

ಗಲಗ್ರಹಣನಿಶ್ಚೇಷ್ಟೋ ದೈತ್ಯೋ ನಿರ್ಗತಲೋಚನಃ ।
ಅವ್ಯಕ್ತರಾವೋ ನ್ಯಪತತ್ಸಹಬಾಲೋ ವ್ಯಸುರ್ವ್ರಜೇ ॥

ಅನುವಾದ

ಭಗವಂತನು ಬಿಗಿಯಾಗಿ ಅವನ ಕತ್ತನ್ನು ಹಿಡಿದಿದ್ದರಿಂದ ಅಸುರನ ಕಣ್ಣುಗುಡ್ಡೆಗಳು ಹೊರಚಾಚಿಕೊಂಡು ನಿಶ್ಚೇಷ್ಟಿತನಾದನು. ಮಾತು ನಿಂತು ಹೋಯಿತು. ಪ್ರಾಣಪಕ್ಷಿಯು ಹಾರಿಹೋಗಿ ಬಾಲಕ ಶ್ರೀಕೃಷ್ಣನೊಂದಿಗೆ ಗೋಕುಲದಲ್ಲಿ ಬಿದ್ದುಬಿಟ್ಟನು.* ॥28॥

ಟಿಪ್ಪನೀ
  • ತೃಣಾವರ್ತನ ಪೂರ್ವಕಥೆ : ಪಾಂಡ್ಯದೇಶದಲ್ಲಿ ಸಹಸ್ರಾಕ್ಷನೆಂಬ ಹೆಸರಿನ ರಾಜನಿದ್ದನು. ಅವನು ನರ್ಮದಾನದಿಯ ತೀರದಲ್ಲಿ ತನ್ನ ರಾಣಿಯರೊಡನೆ ಜಲಕ್ರೀಡೆಯಾಡುತ್ತಿದ್ದನು. ಅಲ್ಲಿಗೆ ದುರ್ವಾಸ ಋಷಿಗಳು ಬಂದರು. ಮಹರ್ಷಿಗಳು ಆಗಮಿಸಿದರೂ ರಾಜನು ಅವರಿಗೆ ನಮಸ್ಕರಿಸಲಿಲ್ಲ. ದುರ್ವಾಸರು ಕೋಪಗೊಂಡು ರಾಕ್ಷಸನಾಗೆಂದು ಶಾಪಕೊಟ್ಟರು. ರಾಜನು ಮಹರ್ಷಿಗಳ ಕಾಲಿಗೆಬಿದ್ದು ಶಾಪವಿಮೋಚನೆಗೆ ಪ್ರಾರ್ಥಿಸಲಾಗಿ ದಯಾಮಯರಾದ ದುರ್ವಾಸರು ಹೇಳಿದರು ‘ಭಗವಾನ್ ಶ್ರೀಕೃಷ್ಣಮೂರ್ತಿಯ ಶ್ರೀವಿಗ್ರಹದ ಸ್ಪರ್ಶವಾದೊಡನೆಯೇ ನೀನು ಶಾಪದಿಂದ ವಿಮುಕ್ತನಾಗುವೆ.’ ಅಂತೆಯೇ ತೃಣಾವರ್ತನೆಂಬ ರಾಕ್ಷಸನಾಗಿ ಹುಟ್ಟಿದ್ದ ರಾಜನು ಶ್ರೀಕೃಷ್ಣನ ಸ್ಪರ್ಶವಾದೊಡನೆಯೇ ಮುಕ್ತಿಯನ್ನು ಹೊಂದಿದನು.

(ಶ್ಲೋಕ-29)

ಮೂಲಮ್

ತಮಂತರಿಕ್ಷಾತ್ಪತಿತಂ ಶಿಲಾಯಾಂ
ವಿಶೀರ್ಣಸರ್ವಾವಯವಂ ಕರಾಲಮ್ ।
ಪುರಂ ಯಥಾ ರುದ್ರಶರೇಣ ವಿದ್ಧಂ
ಸಿಯೋ ರುದತ್ಯೋ ದದೃಶುಃ ಸಮೇತಾಃ ॥

ಅನುವಾದ

ಮುದ್ದುಕೃಷ್ಣನನ್ನು ಕಾಣದೆ ರೋದಿಸುತ್ತಿದ್ದ ಗೋಪಿಯರೆಲ್ಲರೂ ರಾಕ್ಷಸನೊಬ್ಬನು ಆಕಾಶದಿಂದ ಬಿದ್ದುದನ್ನು ಕಂಡರು. ಅವನು ಆಕಾಶದಿಂದ ಒಂದು ದೊಡ್ಡ ಬಂಡೆಯ ಮೇಲೆ ಬಿದ್ದಿದ್ದನು. ಕರಾಳಸ್ವರೂಪನಾದ ಆ ದೈತ್ಯನು ಬಂಡೆಯ ಮೇಲೆ ಬಿದ್ದೊಡನೆಯೇ ಶಂಕರನ ಬಾಣಗಳಿಂದ ತ್ರಿಪುರಾಸುರರು ಛಿನ್ನ-ಭಿನ್ನವಾದಂತೆ ಅವನು ನುಚ್ಚು ನೂರಾಗಿದ್ದನು.॥29॥

(ಶ್ಲೋಕ-30)

ಮೂಲಮ್

ಪ್ರಾದಾಯ ಮಾತ್ರೇ ಪ್ರತಿಹೃತ್ಯ ವಿಸ್ಮಿತಾಃ
ಕೃಷ್ಣಂ ಚ ತಸ್ಯೋರಸಿ ಲಂಬಮಾನಮ್ ।
ತಂ ಸ್ವಸ್ತಿಮಂತಂ ಪುರುಷಾದನೀತಂ
ವಿಹಾಯಸಾ ಮೃತ್ಯುಮುಖಾತ್ಪ್ರಮುಕ್ತಮ್ ।
ಗೋಪ್ಯಶ್ಚ ಗೋಪಾಃ ಕಿಲ ನಂದಮುಖ್ಯಾ
ಲಬ್ಧ್ವಾ ಪುನಃ ಪ್ರಾಪುರತೀವ ಮೋದಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಅವನ ಎದೆಯಮೇಲೆ ಆಡುತ್ತಿದ್ದನು. ಇದನ್ನು ನೋಡಿ ಗೋಪಿಯರು ವಿಸ್ಮಿತರಾದರು. ಅವರು ಒಡನೆಯೇ ಅಲ್ಲಿಗೆ ಹೋಗಿ ಶ್ರೀಕೃಷ್ಣನನ್ನು ಎತ್ತಿಕೊಂಡುಬಂದು ಅಳುತ್ತಿದ್ದ ಯಶೋದೆಯ ಕೈಗೆಕೊಟ್ಟರು. ಬಾಲಕನು ಮೃತ್ಯು ಮುಖದಿಂದ ಸಕುಶಲನಾಗಿ ಮರಳಿದನು. ಅವನನ್ನು ರಾಕ್ಷಸನು ಆಕಾಶಕ್ಕೆ ಎತ್ತಿಕೊಂಡು ಹೋಗಿದ್ದರೂ ಅವನು ಬದುಕುಳಿದನು. ಹೀಗೆ ಬಾಲಕ ಶ್ರೀಕೃಷ್ಣನನ್ನು ಪುನಃ ಪಡೆದ ಯಶೋದೆಯೇ ಮೊದಲಾದ ಗೋಪಿಯರೂ ನಂದಾದಿ ಗೋಪರು ಅತ್ಯಂತ ಆನಂದಭರಿತರಾದರು. ॥30॥

ಮೂಲಮ್

(ಶ್ಲೋಕ-31)
ಅಹೋ ಬತಾತ್ಯದ್ಭುತಮೇಷ ರಕ್ಷಸಾ
ಬಾಲೋ ನಿವೃತ್ತಿಂ ಗಮಿತೋಭ್ಯಗಾತ್ಪುನಃ ।
ಹಿಂಸ್ರಃ ಸ್ವಪಾಪೇನ ವಿಹಿಂಸಿತಃ ಖಲಃ
ಸಾಧುಃ ಸಮತ್ವೇನ ಭಯಾದ್ವಿಮುಚ್ಯತೇ ॥

ಅನುವಾದ

ಅವರೆಲ್ಲರೂ ಹೇಳತೊಡಗಿದರು ಆಹಾ! ಎಂತಹ ಆಶ್ಚರ್ಯವಿದು! ಈ ಬಾಲಕನು ರಾಕ್ಷಸನಿಂದ ಮೃತ್ಯುಮುಖದಲ್ಲಿ ಹಾಕಲ್ಪಟ್ಟಿದ್ದನು. ಆದರೂ ಮತ್ತೆ ಬದುಕಿ ಬಂದಿರುವನು. ಹಿಂಸಕನಾದ ಆ ದುಷ್ಟನ ಪಾಪಗಳೇ ಅವನನ್ನು ನುಂಗಿ ಬಿಟ್ಟಿತು. ನೋಡಿರಲ್ಲ! ಸಾಧು ಪುರುಷನು ತನ್ನ ಸಮತೆಯಿಂದಲೇ ಸಮಸ್ತ ಭಯದಿಂದ ಪಾರಾಗುತ್ತಾನೆ, ಇದು ನಿಜವಾಗಿದೆ. ॥31॥

(ಶ್ಲೋಕ-32)

ಮೂಲಮ್

ಕಿಂ ನಸ್ತಪಶ್ಚೀರ್ಣಮಧೋಕ್ಷಜಾರ್ಚನಂ
ಪೂರ್ತೇಷ್ಟದತ್ತಮುತ ಭೂತಸೌಹೃದಮ್ ।
ಯತ್ಸಂಪರೇತಃ ಪುನರೇವ ಬಾಲಕೋ
ದಿಷ್ಟ್ಯಾ ಸ್ವಬಂಧೂನ್ಪ್ರಣಯನ್ನುಪಸ್ಥಿತಃ ॥

ಅನುವಾದ

ಈ ಬಾಲಕನು ರಾಕ್ಷಸನ ವಶನಾಗಿ ಸತ್ತೇ ಹೋಗಿದ್ದವನು ತಮ್ಮ ಸ್ವಜನರಿಗೆ ಸುಖವನ್ನು ಕೊಡಲು ಮರಳಿ ಬಂದಿರುವುದನ್ನು ನೋಡಿದರೆ ತಪಸ್ಸು, ಭಗವಂತನ ಪೂಜೆ, ಅರವಟ್ಟಿಗೆ ಇಡುವುದು, ಕೆರೆ-ಬಾವಿಗಳನ್ನು ಕಟ್ಟಿಸುವುದು, ಉದ್ಯಾನಗಳನ್ನು ರಚಿಸುವುದು, ಯಜ್ಞ, ದಾನ ಅಥವಾ ಸಮಸ್ತ ಜನರಿಗೆ ಹಿತವನ್ನು ಮಾಡುವುದು ಇವುಗಳಲ್ಲಿ ಏನಾದರೂ ನಾವು ಮಾಡಿರಬೇಕು. ಖಂಡಿತವಾಗಿ ಇದೊಂದು ಸೌಭಾಗ್ಯದ ಮಾತೇ ಆಗಿದೆ. ॥32॥

ಮೂಲಮ್

(ಶ್ಲೋಕ-33)
ದೃಷ್ಟ್ವಾದ್ಭುತಾನಿಬಹುಶೋನಂದಗೋಪೋಬೃಹದ್ವನೇ ।
ವಸುದೇವವಚೋ ಭೂಯೋ ಮಾನಯಾಮಾಸ ವಿಸ್ಮಿತಃ ॥

ಅನುವಾದ

ತಾವು ವಾಸಿಸುವ ಮಹಾವನದಲ್ಲಿ ಅನೇಕ ಅದ್ಭುತವಾದ ಘಟನೆಗಳು ನಡೆಯುವುದನ್ನು ನೋಡಿದಾಗ ನಂದಗೋಪನು ಆಶ್ಚರ್ಯಚಕಿತನಾಗಿ ವಸುದೇವನು ಹೇಳಿದ್ದ ಮಾತನ್ನು ಸಮರ್ಥಿಸಿಕೊಂಡನು. ॥33॥

(ಶ್ಲೋಕ-34)

ಮೂಲಮ್

ಏಕದಾರ್ಭಕಮಾದಾಯ ಸಾಂಕಮಾರೋಪ್ಯ ಭಾಮಿನೀ ।
ಪ್ರಸ್ನುತಂ ಪಾಯಯಾಮಾಸ ಸ್ತನಂ ಸ್ನೇಹಪರಿಪ್ಲುತಾ ॥

ಅನುವಾದ

ಒಂದು ದಿನ ಯಶೋದಾದೇವಿಯು ತಮ್ಮ ಮುದ್ದು ಕಂದಮ್ಮನನ್ನು ತೊಡೆಯಲ್ಲೆತ್ತಿಕೊಂಡು ಪ್ರೇಮದಿಂದ ಹಾಲನ್ನು ಉಣಿಸುತ್ತಿದ್ದಳು. ಅವಳು ವಾತ್ಸಲ್ಯ-ಸ್ನೇಹದಲ್ಲಿ ಮುಳುಗಿಹೋಗಿ, ಆಕೆಯ ಸ್ತನಗಳಿಂದ ತನ್ನಿಂದತಾನೇ ಹಾಲು ಹರಿಯುತ್ತಿತ್ತು. ॥34॥

(ಶ್ಲೋಕ-35)

ಮೂಲಮ್

ಪೀತಪ್ರಾಯಸ್ಯ ಜನನೀ ಸಾ ತಸ್ಯ ರುಚಿರಸ್ಮಿತಮ್ ।
ಮುಖಂ ಲಾಲಯತೀ ರಾಜನ್ ಜೃಂಭತೋ ದದೃಶೇ ಇದಮ್ ॥

ಅನುವಾದ

ಬಾಲಮುಕುಂದನು ಹಾಲುಕುಡಿದಾಗಿತ್ತು. ತಾಯಿ ಯಶೋದೆಯು ಅವನು ಕಿಲಕಿಲನೆ ನಗುತ್ತಿರುವಾಗ ಮುಖವನ್ನು ಮುದ್ದಿಸಿದಳು. ಆಗಲೇ ಶ್ರೀಕೃಷ್ಣನಿಗೆ ಆಕಳಿಕೆ ಬಂತು. ತಾಯಿಯು ಅವನ ಬಾಯಲ್ಲಿ ನೋಡುತ್ತಾಳೆ ॥35॥

(ಶ್ಲೋಕ-36)

ಮೂಲಮ್

ಖಂ ರೋದಸೀ ಜ್ಯೋತಿರನೀಕಮಾಶಾಃ
ಸೂರ್ಯೇಂದುವಹ್ನಿಶ್ವಸನಾಂಬುಧೀಂಶ್ಚ ।
ದ್ವೀಪಾನ್ ನಗಾಂಸ್ತದ್ದುಹಿತೃರ್ವನಾನಿ
ಭೂತಾನಿ ಯಾನಿ ಸ್ಥಿರಜಂಗಮಾನಿ ॥

ಅನುವಾದ

ಅದರಲ್ಲಿ ಆಕಾಶ, ಅಂತರಿಕ್ಷ, ಜ್ಯೋತಿರ್ಮಂಡಲ, ದಿಕ್ಕುಗಳು, ಸೂರ್ಯ, ಚಂದ್ರ, ಅಗ್ನಿ, ವಾಯು, ಸಮುದ್ರ, ದ್ವೀಪಗಳು, ಪರ್ವತ, ನದಿಗಳು, ವನಗಳು, ಸಮಸ್ತ ಚರಾಚರ ಪ್ರಾಣಿಗಳು ನೆಲೆಸಿರುವುದನ್ನು ಆಕೆಯು ನೋಡಿದಳು. ॥36॥

(ಶ್ಲೋಕ-37)

ಮೂಲಮ್

ಸಾ ವೀಕ್ಷ್ಯ ವಿಶ್ವಂ ಸಹಸಾ ರಾಜನ್ಸಂಜಾತವೇಪಥುಃ ।
ಸಮ್ಮೀಲ್ಯ ಮೃಗಶಾವಾಕ್ಷೀ ನೇತ್ರೇ ಆಸೀತ್ಸುವಿಸ್ಮಿತಾ ॥

ಅನುವಾದ

ಪರೀಕ್ಷಿತನೇ! ತನ್ನ ಪುತ್ರನ ಬಾಯಲ್ಲಿ ಹೀಗೆ ಸಮಸ್ತ ಜಗತ್ತನ್ನೂ ನೋಡಿದ ಹರಿಣಾಕ್ಷಿಯಾದ ಯಶೋದೆಯ ಶರೀರ ನಡುಗಿತು. ಆಕೆಯು ತನ್ನ ವಿಶಾಲವಾದ ಕಣ್ಣುಗಳನ್ನು ಮುಚ್ಚಿಕೊಂಡಳು. ಅವಳು ಅತ್ಯಂತ ಆಶ್ಚರ್ಯ ಚಕಿತಳಾದಳು. ॥37॥

ಅನುವಾದ (ಸಮಾಪ್ತಿಃ)

ಏಳನೆಯ ಅಧ್ಯಾಯವು ಮುಗಿಯಿತು. ॥7॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ತೃಣಾವರ್ತಮೋಕ್ಷೋ ನಾಮ ಸಪ್ತಮೋಽಧ್ಯಾಯಃ ॥7॥