೦೪

[ನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ಕಂಸನ ಕೈಯಿಂದ ತಪ್ಪಿಸಿಕೊಂಡ ಯೋಗಮಾಯೆಯು ಆಕಾಶಕ್ಕೆ ಹಾರಿ ಭವಿಷ್ಯವನ್ನು ನುಡಿದುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಬಹಿರಂತಃ ಪುರದ್ವಾರಃ ಸರ್ವಾಃ ಪೂರ್ವವದಾವೃತಾಃ ।
ತತೋ ಬಾಲಧ್ವನಿಂ ಶ್ರುತ್ವಾ ಗೃಹಪಾಲಾಃ ಸಮುತ್ಥಿತಾಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ವಸುದೇವನು ಸೆರೆಮನೆಗೆ ಹಿಂದಿರುಗಿದೊಡನೆಯೇ ಎಲ್ಲ ಹೊರಗಿನ ಮತ್ತು ಒಳಗಿನ ಬಾಗಿಲುಗಳು ಹಿಂದಿನಂತೆಯೇ ಮುಚ್ಚಲ್ಪಟ್ಟವು. ದೇವಕಿಯ ಪಕ್ಕದಲ್ಲಿದ್ದ ನವಜಾತ ಶಿಶುವು ಅಳತೊಡಗಿತು. ಆ ಧ್ವನಿಯನ್ನು ಕೇಳುತ್ತಲೇ ದ್ವಾರಪಾಲರು ಎಚ್ಚರಗೊಂಡರು. ॥1॥

(ಶ್ಲೋಕ-2)

ಮೂಲಮ್

ತೇ ತು ತೂರ್ಣಮುಪವ್ರಜ್ಯ ದೇವಕ್ಯಾ ಗರ್ಭಜನ್ಮ ತತ್ ।
ಆಚಖ್ಯುರ್ಭೋಜರಾಜಾಯ ಯದುದ್ವಿಗ್ನಃ ಪ್ರತೀಕ್ಷತೇ ॥

(ಶ್ಲೋಕ-3)

ಮೂಲಮ್

ಸ ತಲ್ಪಾತ್ತೂರ್ಣಮುತ್ಥಾಯ ಕಾಲೋಯಮಿತಿ ವಿಹ್ವಲಃ ।
ಸೂತೀಗೃಹಮಗಾತ್ತೂರ್ಣಂ ಪ್ರಸ್ಖಲನ್ಮುಕ್ತಮೂರ್ಧಜಃ ॥

ಅನುವಾದ

ಅವರು ಒಡನೆಯೇ ಭೋಜರಾಜನಾದ ಕಂಸನ ಬಳಿಗೆ ಹೋಗಿ ದೇವಕಿಗೆ ಎಂಟನೆಯ ಶಿಶುವು ಹುಟ್ಟಿರುವ ಸಮಾಚಾರವನ್ನು ತಿಳಿಸಿದರು. ಕಂಸನಾದರೋ ಮಾತನ್ನು ಹೇಳುತ್ತಲೇ ಝಗ್ಗನೆ ಮೇಲೆದ್ದು ಶೀಘ್ರಾತಿಶೀಘ್ರವಾಗಿ ಸೂತಿಕಾಗೃಹದ ಕಡೆಗೆ ಧಾವಿಸಿದನು. ಈ ಬಾರಿಯಲ್ಲಾದರೋ ನನ್ನ ಮೃತ್ಯುವೇ ಹುಟ್ಟಿರುವನು ಎಂದು ಯೋಚಿಸುತ್ತಾ ಕಳವಳಗೊಂಡಿದ್ದನು. ಇದರಿಂದಾಗಿ ತನ್ನ ತಲೆಗೂದಲು ಬಿಚ್ಚಿಕೊಂಡಿದ್ದರೂ ಅವನ ಗಮನಕ್ಕೆ ಬರಲೇ ಇಲ್ಲ. ದಾರಿಯಲ್ಲಿ ಕೆಲವೆಡೆ ಎಡವುತ್ತಾ ಓಡುತ್ತಿದ್ದನು. ॥2-3॥

(ಶ್ಲೋಕ-4)

ಮೂಲಮ್

ತಮಾಹ ಭ್ರಾತರಂ ದೇವೀ ಕೃಪಣಾ ಕರುಣಂ ಸತೀ ।
ಸ್ನುಷೇಯಂ ತವ ಕಲ್ಯಾಣ ಸಿಯಂ ಮಾ ಹಂತುಮರ್ಹಸಿ ॥

ಅನುವಾದ

ಸೆರೆಮನೆಯನ್ನು ಪ್ರವೇಶಿಸುತ್ತಲೇ ಬಹಳ ದುಃಖದಿಂದಲೂ, ಕರುಣೆಯಿಂದಲೂ ದೇವಕೀದೇವಿಯು ಕಂಸನಲ್ಲಿ ಹೇಳಿದಳು ನನ್ನ ಹಿತೈಷಿಯಾದ ಅಣ್ಣನೇ! ಈ ಹೆಣ್ಣಾದರೋ ನಿನಗೆ ಸೊಸೆಯಾಗಿದ್ದಾಳೆ. ಹೆಣ್ಣುಶಿಶುವು ಹುಟ್ಟಿದೆ. ಆದುದರಿಂದ ಸ್ತ್ರೀಯನ್ನು ಕೊಲ್ಲುವುದು ನಿನಗೆ ಯೋಗ್ಯವಾದುದಲ್ಲ. ॥4॥

(ಶ್ಲೋಕ-5)

ಮೂಲಮ್

ಬಹವೋ ಹಿಂಸಿತಾ ಭ್ರಾತಃ ಶಿಶವಃ ಪಾವಕೋಪಮಾಃ ।
ತ್ವಯಾ ದೈವನಿಸೃಷ್ಟೇನ ಪುತ್ರಿಕೈಕಾ ಪ್ರದೀಯತಾಮ್ ॥

ಅನುವಾದ

ಅಣ್ಣಾ! ನೀನು ದೈವವಶಾತ್ ಅಗ್ನಿಯಂತೆ ತೇಜಸ್ವಿಗಳಾದ ನನ್ನ ಹಲವಾರು ಬಾಲಕರನ್ನು ಕೊಂದಿರುವೆ. ಈಗ ಕೇವಲ ಈ ಒಂದು ಕನ್ಯೆಮಾತ್ರ ಉಳಿದಿರುವಳು. ಇದನ್ನಾದರೂ ಕೊಲ್ಲದೆ ನನಗೆ ಕೊಟ್ಟುಬಿಡು. ॥5॥

(ಶ್ಲೋಕ-6)

ಮೂಲಮ್

ನನ್ವಹಂ ತೇ ಹ್ಯವರಜಾ ದೀನಾ ಹತಸುತಾ ಪ್ರಭೋ ।
ದಾತುಮರ್ಹಸಿ ಮಂದಾಯಾ ಅಂಗೇಮಾಂ ಚರಮಾಂ ಪ್ರಜಾಮ್ ॥

ಅನುವಾದ

ಅಣ್ಣಾ! ನಾನು ನಿನ್ನ ತಂಗಿಯಲ್ಲವೇ? ನನ್ನ ಅನೇಕ ಮಕ್ಕಳು ಸತ್ತು ಹೋಗಿರುವರು. ಅದಕ್ಕಾಗಿ ನಾನು ಅತ್ಯಂತ ದೀನಳಾಗಿರುವೆನು. ದೈನ್ಯದಿಂದ ಬೇಡಿಕೊಳ್ಳುವೆನು. ಮಂದಭಾಗ್ಯಳಾದ ನನಗೆ ಈ ಕಡೆಯ ಹೆಣ್ಣು ಶಿಶುವನ್ನಾದರೂ ದಯಪಾಲಿಸು. ॥6॥

(ಶ್ಲೋಕ-7)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಉಪಗುಹ್ಯಾತ್ಮಜಾಮೇವಂ ರುದತ್ಯಾ ದೀನದೀನವತ್ ।
ಯಾಚಿತಸ್ತಾಂ ವಿನಿರ್ಭರ್ತ್ಸ್ಯ ಹಸ್ತಾದಾಚಿಚ್ಛಿದೇ ಖಲಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಹೆಣ್ಣುಮಗುವನ್ನು ತನ್ನ ಮಡಿಲಲ್ಲಿ ಅಡಗಿಸಿಕೊಂಡು ದೇವಕಿಯು ಅತ್ಯಂತ ದೈನ್ಯದಿಂದ ಅಳುತ್ತಾ ಬೇಡಿಕೊಂಡಳು. ಆದರೆ ಕಂಸನು ಬಹಳ ದುಷ್ಟನಾಗಿದ್ದನು. ಅವನು ದೇವಕಿಯನ್ನು ಗದರಿಸುತ್ತಾ ಅವಳ ಕೈಯಲ್ಲಿದ್ದ ಆ ಕನ್ಯೆಯನ್ನು ಕಸಿದುಕೊಂಡನು. ॥7॥

(ಶ್ಲೋಕ-8)

ಮೂಲಮ್

ತಾಂ ಗೃಹೀತ್ವಾ ಚರಣಯೋರ್ಜಾತಮಾತ್ರಾಂ ಸ್ವಸುಃ ಸುತಾಮ್ ।
ಅಪೋಥಯಚ್ಛಿಲಾಪೃಷ್ಠೇ ಸ್ವಾರ್ಥೋನ್ಮೂಲಿತಸೌಹೃದಃ ॥

ಅನುವಾದ

ಕಂಸನು ಮಹಾಸ್ವಾರ್ಥಿಯಾಗಿದ್ದು ಅವನ ಮನಸ್ಸಿನಲ್ಲಿ ಸೌಹಾರ್ದ್ರವೆಂಬುದು ಲವಲೇಶವೂ ಇರಲಿಲ್ಲ. ಆಗತಾನೇ ಹುಟ್ಟಿದ ತನ್ನ ಸೊಸೆಯಾದ ಆ ಹೆಣ್ಣುಮಗುವಿನ ಕಾಲನ್ನು ಹಿಡಿದು ಒಂದು ಬಂಡೆಯ ಮೇಲೆ ಅಪ್ಪಳಿಸಿದನು. ॥8॥

(ಶ್ಲೋಕ-9)

ಮೂಲಮ್

ಸಾ ತದ್ಧಸ್ತಾತ್ಸಮುತ್ಪತ್ಯ ಸದ್ಯೋ ದೇವ್ಯಂಬರಂ ಗತಾ ।
ಅದೃಶ್ಯತಾನುಜಾ ವಿಷ್ಣೋಃ ಸಾಯುಧಾಷ್ಟಮಹಾಭುಜಾ ॥

ಅನುವಾದ

ಆದರೆ ಶ್ರೀಕೃಷ್ಣನ ತಂಗಿಯಾದ ಆ ಹೆಣ್ಣು ಸಾಮಾನ್ಯ ಮಗುವಾಗಿರದೆ ದೇವಿಯೇ ಆಗಿದ್ದಳು. ಅವನ ಕೈಯಿಂದ ಜಾರಿ ಒಡನೆಯೇ ಆಕಾಶಕ್ಕೆ ನೆಗೆದು ಅಷ್ಟಭುಜೆಯಾಗಿ ಎಂಟು ಕೈಗಳಲ್ಲಿಯೂ ಆಯುಧಗಳನ್ನು ಧರಿಸಿ ಆಗಸದಲ್ಲಿ ನಿಂತಿದ್ದಳು. ॥9॥

(ಶ್ಲೋಕ-10)

ಮೂಲಮ್

ದಿವ್ಯಸ್ರಗಂಬರಾಲೇಪರತ್ನಾಭರಣಭೂಷಿತಾ ।
ಧನುಃಶೂಲೇಷುಚರ್ಮಾಸಿಶಂಖಚಕ್ರಗದಾಧರಾ ॥

ಅನುವಾದ

ಆಕೆಯು ದಿವ್ಯ ಮಾಲೆಗಳಿಂದಲೂ, ವಸ್ತ್ರ, ಚಂದನ, ಮಣಿಮಯ ಆಭೂಷಣಗಳಿಂದ ವಿಭೂಷಿತಳಾಗಿದ್ದಳು. ಅವಳ ಕೈಗಳಲ್ಲಿ ಧನುಷ್ಯ, ತ್ರಿಶೂಲ, ಬಾಣ, ಗುರಾಣಿ, ಖಡ್ಗ, ಶಂಖ, ಚಕ್ರ, ಗದೆ ಇವೇ ಎಂಟು ಆಯುಧಗಳಿದ್ದವು. ॥10॥

(ಶ್ಲೋಕ-11)

ಮೂಲಮ್

ಸಿದ್ಧಚಾರಣಗಂಧರ್ವೈರಪ್ಸರಃ ಕಿನ್ನರೋರಗೈಃ ।
ಉಪಾಹೃತೋರುಬಲಿಭಿಃ ಸ್ತೂಯಮಾನೇದಮಬ್ರವೀತ್ ॥

ಅನುವಾದ

ಸಿದ್ಧರು, ಚಾರಣರು, ಗಂಧರ್ವರು, ಅಪ್ಸರೆಯರು, ಕಿನ್ನರರು, ನಾಗಗಳೂ ಅನೇಕ ಉಪಾಯನಗಳನ್ನು ಆ ದೇವಿಗೆ ಅರ್ಪಿಸಿ ಸ್ತೋತ್ರ ಮಾಡುತ್ತಿದ್ದರು. ಆ ಸಮಯದಲ್ಲಿ ವಿಷ್ಣುಮಾಯಾದೇವಿಯು ಕಂಸನಿಗೆ ಹೇಳಿದಳು ॥11॥

(ಶ್ಲೋಕ-12)

ಮೂಲಮ್

ಕಿಂ ಮಯಾ ಹತಯಾ ಮಂದ ಜಾತಃ ಖಲು ತವಾಂತಕೃತ್ ।
ಯತ್ರ ಕ್ವ ವಾ ಪೂರ್ವಶತ್ರುರ್ಮಾ ಹಿಂಸೀಃ ಕೃಪಣಾನ್ವ ಥಾ ॥

ಅನುವಾದ

ಎಲವೋ ಮೂರ್ಖನೇ! ನನ್ನನ್ನು ಕೊಲ್ಲುವುದರಿಂದ ನಿನಗೇನು ಸಿಕ್ಕೀತು? ನಿನ್ನ ಪೂರ್ವಜನ್ಮ ಶತ್ರುವು ನಿನ್ನನ್ನು ಕೊಲ್ಲಲಿಕ್ಕಾಗಿ ಎಲ್ಲಿಯೋ ಒಂದೆಡೆ ಹುಟ್ಟಿ ಬೆಳೆಯುತ್ತಿದ್ದಾನೆ. ಈಗ ನೀನು ವ್ಯರ್ಥವಾಗಿ ನಿರ್ದೋಷಿಗಳಾದ ಹಸುಳೆಗಳನ್ನು ಕೊಲ್ಲಬೇಡ. ॥12॥

ಮೂಲಮ್

(ಶ್ಲೋಕ-13)
ಇತಿ ಪ್ರಭಾಷ್ಯ ತಂ ದೇವೀ ಮಾಯಾ ಭಗವತೀ ಭುವಿ ।
ಬಹುನಾಮನಿಕೇತೇಷು ಬಹುನಾಮಾ ಬಭೂವ ಹ ॥

ಅನುವಾದ

ಕಂಸನಿಗೆ ಹೀಗೆ ಹೇಳಿ ಭಗವತಿ ಯೋಗಮಾಯೆಯು ಅಲ್ಲೇ ಅಂತರ್ಧಾನಗೊಂಡಳು ಹಾಗೂ ಭೂಮಂಡಲದಲ್ಲಿ ಅನೇಕ ಸ್ಥಾನಗಳಲ್ಲಿ ಬೇರೆ-ಬೇರೆ ಹೆಸರುಗಳಿಂದ ಪ್ರಸಿದ್ಧಳಾದಳು. ॥13॥

(ಶ್ಲೋಕ-14)

ಮೂಲಮ್

ತಯಾಭಿಹಿತಮಾಕರ್ಣ್ಯ ಕಂಸಃ ಪರಮವಿಸ್ಮಿತಃ ।
ದೇವಕೀಂ ವಸುದೇವಂ ಚ ವಿಮುಚ್ಯ ಪ್ರಶ್ರಿತೋಬ್ರವೀತ್ ॥

ಅನುವಾದ

ದೇವಿಯ ಈ ಮಾತನ್ನು ಕೇಳಿ ಕಂಸನಿಗೆ ಮಹದಾಶ್ಚರ್ಯವಾಯಿತು. ಆಗಲೇ ಅವನು ದೇವಕಿ ಮತ್ತು ವಸುದೇವ ಇವರನ್ನು ಸೆರೆಮನೆಯಿಂದ ಬಿಡುಗಡೆ ಮಾಡಿ ವಿನಯಪೂರ್ವಕವಾಗಿ ಹೀಗೆಂದನು ॥14॥

(ಶ್ಲೋಕ-15)

ಮೂಲಮ್

ಅಹೋ ಭಗಿನ್ಯಹೋ ಭಾಮ ಮಯಾ ವಾಂ ಬತ ಪಾಪ್ಮನಾ ।
ಪುರುಷಾದ ಇವಾಪತ್ಯಂ ಬಹವೋ ಹಿಂಸಿತಾಃ ಸುತಾಃ ॥

ಅನುವಾದ

ನನ್ನ ಪ್ರಿಯತಂಗಿಯೇ ಮತ್ತು ಭಾವನೇ! ಅಯ್ಯೋ! ನಾನು ಮಹಾಪಾಪಿಯಾಗಿದ್ದೇನೆ. ರಾಕ್ಷಸನು ತನ್ನ ಮಕ್ಕಳನ್ನೇ ಕೊಲ್ಲುವಂತೆ ನಾನು ನಿನ್ನ ಅನೇಕ ಮಕ್ಕಳನ್ನು ಕೊಂದುಹಾಕಿದೆನು. ಇದರಿಂದ ನನಗೆ ಬಹಳ ದುಃಖವಾಗಿದೆ.* ॥15॥

ಟಿಪ್ಪನೀ

ಯಾರ ಗರ್ಭದಲ್ಲಿ ಭಗವಂತನು ವಾಸಿಸಿದನೋ, ಯಾರಿಗೆ ಭಗವದ್ದರ್ಶನವಾಗಿದೆಯೋ ಅಂತಹ ವಸುದೇವ-ದೇವಕಿಯರ ದರ್ಶನದ ಫಲವಾಗಿಯೇ ಕಂಸನ ಹೃದಯದಲ್ಲಿ ವಿನಯ, ವಿಚಾರ, ಉದಾರತೆ ಮುಂತಾದ ಸದ್ಗುಣಗಳ ಉದಯವಾಯಿತು. ಆದರೆ ಅವರ ಮುಂದಿರುವ ತನಕ ಈ ಸದ್ಗುಣಗಳು ಇದ್ದವು. ದುಷ್ಟಮಂತ್ರಿಗಳ ಮಧ್ಯದಲ್ಲಿ ಹೋಗುತ್ತಲೇ ಪುನಃ ಹೇಗಿದ್ದನೋ ಹಾಗೆಯೇ ಆದನು.

(ಶ್ಲೋಕ-16)

ಮೂಲಮ್

ಸ ತ್ವಹಂ ತ್ಯಕ್ತಕಾರುಣ್ಯಸ್ತ್ಯಕ್ತಜ್ಞಾತಿಸುಹೃತ್ಖಲಃ ।
ಕಾಂಲ್ಲೋಕಾನ್ವೈ ಗಮಿಷ್ಯಾಮಿ ಬ್ರಹ್ಮಹೇವ ಮೃತಃ ಶ್ವಸನ್ ॥

ಅನುವಾದ

ಕರುಣೆ ಎಂಬುದಕ್ಕೆ ನನ್ನ ಹೃದಯದಲ್ಲಿ ಸ್ಥಾನವೇ ಇಲ್ಲದಾಗಿತ್ತು. ನಾನು ನನ್ನ ಬಂಧು-ಬಾಂಧವರನ್ನು, ಹಿತೈಷಿಗಳನ್ನೂ ತ್ಯಜಿಸಿಬಿಟ್ಟೆ. ನನಗೆ ಯಾವ ನರಕವು ಕಾದಿದೆಯೋ ತಿಳಿಯದು. ನಿಜವಾಗಿಯಾದರೋ ನಾನು ಬ್ರಹ್ಮಘಾತಿಯಂತೆ ಜೀವಿಸಿದ್ದರೂ ಸತ್ತಂತೆಯೇ ಸರಿ.॥16॥

(ಶ್ಲೋಕ-17)

ಮೂಲಮ್

ದೈವಮಪ್ಯನೃತಂ ವಕ್ತಿ ನ ಮರ್ತ್ಯಾ ಏವ ಕೇವಲಮ್ ।
ಯದ್ವಿಶ್ರಂಭಾದಹಂ ಪಾಪಃ ಸ್ವಸುರ್ನಿಹತವಾನ್ ಶಿಶೂನ್ ॥

ಅನುವಾದ

ಕೇವಲ ಮನುಷ್ಯನೇ ಸುಳ್ಳುಹೇಳುವುದಲ್ಲ, ವಿಧಾತನೂ ಸುಳ್ಳು ಹೇಳುತ್ತಿರುವನಲ್ಲ! ಅದನ್ನು ನಂಬಿ ನಾನು ನನ್ನ ತಂಗಿಯ ಮಕ್ಕಳನ್ನು ಕೊಂದುಹಾಕಿದೆನಲ್ಲ! ಅಯ್ಯೋ! ನಾನು ಎಂತಹ ಪಾಪಿಯಾಗಿರುವೆನು! ॥17॥

(ಶ್ಲೋಕ-18)

ಮೂಲಮ್

ಮಾ ಶೋಚತಂ ಮಹಾಭಾಗಾವಾತ್ಮಜಾನ್ಸ್ವಕೃತಂಭುಜಃ ।
ಜಂತವೋ ನ ಸದೈಕತ್ರ ದೈವಾಧೀನಾಸ್ತದಾಸತೇ ॥

ಅನುವಾದ

ನೀವಿಬ್ಬರೂ ಮಹಾತ್ಮರಾಗಿರುವಿರಿ. ನಿಮ್ಮ ಪುತ್ರರಿಗಾಗಿ ಶೋಕಿಸಬೇಡಿರಿ. ಅವರಿಗಾದರೋ ತಮ್ಮ ಕರ್ಮದ ಫಲವೇ ದೊರೆತಿದೆ. ಎಲ್ಲ ಪ್ರಾಣಿಗಳು ಪ್ರಾರಬ್ಧಕ್ಕೆ ಅಧೀನರು. ಅದರಿಂದ ಅವರು ಯಾವಾಗಲೂ ಜೊತೆಯಾಗಿ ಇರಲಾರರು. ॥18॥

(ಶ್ಲೋಕ-19)

ಮೂಲಮ್

ಭುವಿ ಭೌಮಾನಿ ಭೂತಾನಿ ಯಥಾ ಯಾಂತ್ಯಪಯಾಂತಿ ಚ ।
ನಾಯಮಾತ್ಮಾ ತಥೈತೇಷು ವಿಪರ್ಯೇತಿ ಯಥೈವ ಭೂಃ ॥

ಅನುವಾದ

ಮಣ್ಣಿನಿಂದ ಹಲವಾರು ಬಗೆಯ ಗಡಿಗೆಯೇ ಮುಂತಾದ ಪದಾರ್ಥಗಳು ಆಗುತ್ತವೆ, ನಾಶವಾಗುತ್ತವೆ. ಆದರೆ ಮಣ್ಣಿನಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಹಾಗೆಯೇ ಶರೀರಗಳು ಹುಟ್ಟುತ್ತವೆ, ಸಾಯುತ್ತವೆ. ಆದರೆ ಆತ್ಮನಲ್ಲಿ ಇದರ ಯಾವ ಪರಿಣಾಮವೂ ಉಂಟಾಗುವುದಿಲ್ಲ. ॥19॥

(ಶ್ಲೋಕ-20)

ಮೂಲಮ್

ಯಥಾನೇವಂವಿದೋ ಭೇದೋ ಯತ ಆತ್ಮವಿಪರ್ಯಯಃ ।
ದೇಹಯೋಗವಿಯೋಗೌ ಚ ಸಂಸೃತಿರ್ನ ನಿವರ್ತತೇ ॥

ಅನುವಾದ

ಈ ತತ್ತ್ವವನ್ನು ತಿಳಿಯದ ಜನರು ಈ ಅನಾತ್ಮ ಶರೀರವನ್ನೇ ಆತ್ಮಾ ಎಂದು ತಿಳಿದು ಬಿಡುತ್ತಾರೆ. ಇದೇ ವಿಪರೀತ ಬುದ್ಧಿ ಅಥವಾ ಅಜ್ಞಾನವಾಗಿದೆ. ಇದರಿಂದಲೇ ಹುಟ್ಟು-ಸಾವುಗಳಾಗುತ್ತಾ ಇರುತ್ತವೆ. ಈ ಅಜ್ಞಾನವು ಅಳಿಯುವವರೆಗೆ ಸುಖ-ದುಃಖರೂಪವಾದ ಸಂಸಾರದಿಂದ ಬಿಡುಗಡೆಯಾಗುವುದಿಲ್ಲ. ॥20॥

(ಶ್ಲೋಕ-21)

ಮೂಲಮ್

ತಸ್ಮಾದ್ಭದ್ರೇ ಸ್ವತನಯಾನ್ಮಯಾ ವ್ಯಾಪಾದಿತಾನಪಿ ।
ಮಾನುಶೋಚ ಯತಃ ಸರ್ವಃ ಸ್ವಕೃತಂ ವಿಂದತೇವಶಃ ॥

ಅನುವಾದ

ನನ್ನ ಪ್ರಿಯ ಸೋದರೀ! ನಾನು ನಿನ್ನ ಪುತ್ರರನ್ನು ಕೊಂದು ಹಾಕಿದ್ದರೂ ನೀನು ಅವರಿಗಾಗಿ ಶೋಕಿಸಬಾರದು. ಏಕೆಂದರೆ, ಎಲ್ಲ ಪ್ರಾಣಿಗಳೂ ಪರವಶರಾಗಿ ತಮ್ಮ ಕರ್ಮಗಳ ಫಲವನ್ನು ಭೋಗಿಸಬೇಕಾಗುತ್ತದೆ. ॥21॥

(ಶ್ಲೋಕ-22)

ಮೂಲಮ್

ಯಾವದ್ಧತೋಸ್ಮಿ ಹಂತಾಸ್ಮೀತ್ಯಾತ್ಮಾನಂ ಮನ್ಯತೇಸ್ವದೃಕ್ ।
ತಾವತ್ತದಭಿಮಾನ್ಯಜ್ಞೋ ಬಾಧ್ಯಬಾಧಕತಾಮಿಯಾತ್ ॥

ಅನುವಾದ

ತನ್ನ ಸ್ವರೂಪವನ್ನು ತಿಳಿದುಕೊಳ್ಳದ ಕಾರಣ ಜೀವನು ‘ನಾನು ಕೊಲ್ಲುವವನು ಮತ್ತು ಕೊಲ್ಲಲ್ಪಡುವವನು’ ಎಂದು ತಿಳಿಯುತ್ತಿರುವವರೆಗೆ ಶರೀರದ ಹುಟ್ಟು-ಸಾವುಗಳ ಅಭಿಮಾನವನ್ನಿಟ್ಟುಕೊಂಡ ಅಜ್ಞಾನಿಯು ಬಾಧ್ಯ-ಬಾಧಕ ಭಾವವನ್ನು ಪಡೆಯುತ್ತಾನೆ. ಅರ್ಥಾತ್ ಅವನು ಇತರರಿಗೆ ದುಃಖಕೊಡುತ್ತಾನೆ ಮತ್ತು ದುಃಖವನ್ನು ಅನುಭವಿಸುತ್ತಾನೆ.॥22॥

(ಶ್ಲೋಕ-23)

ಮೂಲಮ್

ಕ್ಷಮಧ್ವಂ ಮಮ ದೌರಾತ್ಮ್ಯಂ ಸಾಧವೋ ದೀನವತ್ಸಲಾಃ ।
ಇತ್ಯುಕ್ತ್ವಾಶ್ರುಮುಖಃ ಪಾದೌ ಶ್ಯಾಲಃ ಸ್ವಸ್ರೋರಥಾಗ್ರಹೀತ್ ॥

ಅನುವಾದ

ನನ್ನ ಈ ದುಷ್ಟತೆಯನ್ನು ನೀವಿಬ್ಬರೂ ಕ್ಷಮಿಸಿಬಿಡಿರಿ. ಏಕೆಂದರೆ, ನೀವುಗಳು ಸಾಧುಸ್ವಭಾವದವರಾಗಿದ್ದು, ದೀನರ ರಕ್ಷಕರಾಗಿದ್ದೀರಿ. ಹೀಗೆ ಹೇಳಿ ಕಂಸನು ತನ್ನ ತಂಗಿಯಾದ ದೇವಕಿಯ ಮತ್ತು ವಸುದೇವನ ಚರಣಗಳನ್ನು ಭದ್ರವಾಗಿ ಹಿಡಿದುಕೊಂಡು, ಕಣ್ಣೀರು ಸುರಿಸಿದನು.॥23॥

(ಶ್ಲೋಕ-24)

ಮೂಲಮ್

ಮೋಚಯಾಮಾಸ ನಿಗಡಾದ್ವಿಶ್ರಬ್ಧಃ ಕನ್ಯಕಾಗಿರಾ ।
ದೇವಕೀಂ ವಸುದೇವಂ ಚ ದರ್ಶಯನ್ನಾತ್ಮಸೌಹೃದಮ್ ॥

ಅನುವಾದ

ಅನಂತರ ಅವನು ಯೋಗಮಾಯೆಯ ಮಾತಿನ ಮೇಲೆ ವಿಶ್ವಾಸವಿಟ್ಟು ವಸುದೇವ-ದೇವಕಿಯರನ್ನು ಬಂಧನ ಮುಕ್ತರಾಗಿಸಿ ಅನೇಕ ರೀತಿಯಿಂದ ಅವರ ಕುರಿತು ತನ್ನ ಪ್ರೀತಿಯನ್ನು ಪ್ರಕಟಪಡಿಸತೊಡಗಿದನು.॥24॥

(ಶ್ಲೋಕ-25)

ಮೂಲಮ್

ಭ್ರಾತುಃ ಸಮನುತಪ್ತಸ್ಯ ಕ್ಷಾಂತ್ವಾ ರೋಷಂಚ ದೇವಕೀ ।
ವ್ಯಸೃಜದ್ವಸುದೇವಶ್ಚ ಪ್ರಹಸ್ಯ ತಮುವಾಚ ಹ ॥

ಅನುವಾದ

ಅಣ್ಣನಾದ ಕಂಸನು ಪಶ್ಚಾತ್ತಾಪ ಪಡುತ್ತಿರುವುದನ್ನು ನೋಡಿದ ದೇವಕಿಯು ಅವನನ್ನು ಕ್ಷಮಿಸಿಬಿಟ್ಟಳು. ಆಕೆಯು ಅವನ ಮೊದಲಿನ ಅಪರಾಧಗಳನ್ನು ಮರೆತುಬಿಟ್ಟಳು. ವಸುದೇವನು ನಗುತ್ತಾ ಕಂಸನಲ್ಲಿ ಹೇಳಿದನು.॥25॥

(ಶ್ಲೋಕ-26)

ಮೂಲಮ್

ಏವಮೇತನ್ಮಹಾಭಾಗ ಯಥಾ ವದಸಿ ದೇಹಿನಾಮ್ ।
ಅಜ್ಞಾನಪ್ರಭವಾಹಂಧೀಃ ಸ್ವಪರೇತಿ ಭಿದಾ ಯತಃ ॥

ಅನುವಾದ

ಮಹಾಭಾಗನಾದ ಕಂಸನೇ! ನೀನು ಹೇಳಿರುವುದು ಸರಿಯಾಗಿಯೇ ಇದೆ. ಜೀವನು ಅಜ್ಞಾನದಿಂದಲೇ ಶರೀರಾದಿಗಳನ್ನೂ ‘ನಾನೆಂದು’ ತಿಳಿದುಕೊಂಡಿರುವನು. ಇದರಿಂದಲೇ ಸ್ವ-ಪರ ಭೇದಗಳುಂಟಾಗುತ್ತವೆ. ॥26॥

(ಶ್ಲೋಕ-27)

ಮೂಲಮ್

ಶೋಕಹರ್ಷಭಯದ್ವೇಷಲೋಭಮೋಹಮದಾನ್ವಿತಾಃ ।
ಮಿಥೋ ಘ್ನಂತಂ ನ ಪಶ್ಯಂತಿ ಭಾವೈರ್ಭಾವಂ ಪೃಥಗ್ದೃಶಃ ॥

ಅನುವಾದ

ಈ ಭೇದ ದೃಷ್ಟಿ ಉಂಟಾದಾಗಲೇ ಜೀವರು ಶೋಕ, ಹರ್ಷ, ಭಯ, ದ್ವೇಷ, ಲೋಭ, ಮೋಹ, ಮದ ಇವುಗಳಿಂದ ಕುರುಡಾಗಿ ಹೋಗುತ್ತಾರೆ. ಹೀಗಾದಾಗ ಎಲ್ಲರ ಪ್ರೇರಕನಾದ ಭಗವಂತನೇ ಒಂದು ಭಾವದಿಂದ ಇನ್ನೊಂದನ್ನೂ, ಒಂದು ವಸ್ತುವಿನಿಂದ ಇನ್ನೊಂದು ವಸ್ತುವನ್ನು ನಾಶಮಾಡಿಸುತ್ತಾ ಇದ್ದಾನೆ ಎಂಬುದು ಅವರು ಅರಿಯುವುದೇ ಇಲ್ಲ.॥27॥

(ಶ್ಲೋಕ-28)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಕಂಸ ಏವಂ ಪ್ರಸನ್ನಾಭ್ಯಾಂ ವಿಶುದ್ಧಂ ಪ್ರತಿಭಾಷಿತಃ ।
ದೇವಕೀವಸುದೇವಾಭ್ಯಾಮನುಜ್ಞಾತೋವಿಶದ್ಗೃಹಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ವಸುದೇವ-ದೇವಕಿಯರು ಹೀಗೆ ಪ್ರಸನ್ನರಾಗಿ ನಿಷ್ಕಪಟ ಭಾವದಿಂದ ಕಂಸನೊಂದಿಗೆ ಮಾತನಾಡಿ, ಅವನಿಂದ ಬೀಳ್ಕೊಂಡು ಅವರು ತಮ್ಮ ಅರಮನೆಗೆ ಹೊರಟು ಹೋದರು. ॥28॥

(ಶ್ಲೋಕ-29)

ಮೂಲಮ್

ತಸ್ಯಾಂ ರಾತ್ರ್ಯಾಂ ವ್ಯತೀತಾಯಾಂ ಕಂಸ ಆಹೂಯ ಮಂತ್ರಿಣಃ ।
ತೇಭ್ಯ ಆಚಷ್ಟ ತತ್ಸರ್ವಂ ಯದುಕ್ತಂ ಯೋಗಮಾಯಯಾ ॥

ಅನುವಾದ

ಆ ರಾತ್ರಿಯು ಕಳೆಯುತ್ತಲೇ ಕಂಸನು ತನ್ನ ಮಂತ್ರಿಗಳನ್ನು ಕರೆಸಿ ಯೋಗಮಾಯೆಯು ಹೇಳಿದುದೆಲ್ಲವನ್ನು ಅವರಿಗೆ ತಿಳಿಸಿದನು. ॥29॥

(ಶ್ಲೋಕ-30)

ಮೂಲಮ್

ಆಕರ್ಣ್ಯ ಭರ್ತುರ್ಗದಿತಂ ತಮೂಚುರ್ದೇವಶತ್ರವಃ ।
ದೇವಾನ್ಪ್ರತಿ ಕೃತಾಮರ್ಷಾ ದೈತೇಯಾ ನಾತಿಕೋವಿದಾಃ ॥

ಅನುವಾದ

ಕಂಸನ ಮಂತ್ರಿಗಳು ಪೂರ್ಣವಾಗಿ ನೀತಿ ನಿಪುಣರಾಗಿರಲಿಲ್ಲ. ದೈತ್ಯರಾದ್ದರಿಂದ ಸ್ವಭಾವತಃ ಅವರು ದೇವತೆಗಳ ಕುರಿತು ಶತ್ರುಭಾವವನ್ನು ಇರಿಸಿಕೊಂಡಿದ್ದರು. ಒಡೆಯನಾದ ಕಂಸನ ಮಾತನ್ನು ಕೇಳಿ ಅವರು ದೇವತೆಗಳ ಬಗೆಗೆ ಇನ್ನೂ ರೊಚ್ಚಿಗೆದ್ದು ಕಂಸನಲ್ಲಿ ಹೇಳ ತೊಡಗಿದರು. ॥30॥

(ಶ್ಲೋಕ-31)

ಮೂಲಮ್

ಏವಂ ಚೇತ್ತರ್ಹಿ ಭೋಜೇಂದ್ರ ಪುರಗ್ರಾಮವ್ರಜಾದಿಷು ।
ಅನಿರ್ದಶಾನ್ನಿರ್ದಶಾಂಶ್ಚ ಹನಿಷ್ಯಾಮೋದ್ಯ ವೈ ಶಿಶೂನ್ ॥

ಅನುವಾದ

ಭೋಜರಾಜನೇ! ನಿನ್ನ ಶತ್ರುವು ಎಲ್ಲಿಯೋ ಹುಟ್ಟಿ ಬೆಳೆಯುತ್ತಿರುವನೆಂದಾದರೆ ನಾವು ಈಗಲೇ ದೊಡ್ಡ-ದೊಡ್ಡ ಪಟ್ಟಣಗಳಲ್ಲಿ ಸಣ್ಣ-ಪುಟ್ಟ ಗ್ರಾಮಗಳಲ್ಲಿ, ಗೊಲ್ಲರ ದೊಡ್ಡಿಗಳಲ್ಲಿ ಮತ್ತು ಇತರ ಸ್ಥಾನಗಳಲ್ಲಿ ಎಷ್ಟು ಮಕ್ಕಳು ಹುಟ್ಟಿರುವರೋ, ಅವು ಹತ್ತುದಿನಗಳಿಗಿಂತ ಹೆಚ್ಚಿನವರಿರಲಿ, ಕಡಿಮೆಯವರಾಗಿರಲಿ ಎಲ್ಲರನ್ನೂ ಇಂದೇ ಕೊಂದುಬಿಡುವೆವು. ॥31॥

(ಶ್ಲೋಕ-32)

ಮೂಲಮ್

ಕಿಮುದ್ಯಮೈಃ ಕರಿಷ್ಯಂತಿ ದೇವಾಃ ಸಮರಭೀರವಃ ।
ನಿತ್ಯಮುದ್ವಿಗ್ನಮನಸೋ ಜ್ಯಾಘೋಷೈರ್ಧನುಷಸ್ತವ ॥

ಅನುವಾದ

ಯುದ್ಧಭೀರುಗಳಾದ ದೇವತೆಗಳು ಯುದ್ಧೋದ್ಯೋಗಗೈದು ಏನು ತಾನೇ ಮಾಡಿ ಯಾರು? ಅವರಾದರೋ ನಿನ್ನ ಧನುಷ್ಟಂಕಾರ ಕೇಳಿಯೇ ಸದಾಕಾಲ ಹೆದರಿರುತ್ತಾರೆ. ॥32॥

(ಶ್ಲೋಕ-33)

ಮೂಲಮ್

ಅಸ್ಯತಸ್ತೇ ಶರವ್ರಾತೈರ್ಹನ್ಯಮಾನಾಃ ಸಮಂತತಃ ।
ಜಿಜೀವಿಷವ ಉತ್ಸೃಜ್ಯ ಪಲಾಯನಪರಾ ಯಯುಃ ॥

ಅನುವಾದ

ರಣರಂಗದಲ್ಲಿ ನೀನು ಏಟಿನ ಮೇಲೆ ಏಟು ಕೊಡಲು ತೊಡಗಿದಾಗ, ಬಾಣಗಳ ಮಳೆಯಿಂದ ಗಾಯಗೊಂಡು ತಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳಲಿಕ್ಕಾಗಿ ಸಮರಾಂಗಣವನ್ನು ಬಿಟ್ಟು ದೇವತೆಗಳು ಪಲಾಯನ-ಪರಾಯಣರಾಗಿ ಕಂಡ-ಕಂಡಲ್ಲಿಗೆ ಓಡಿ ಹೋಗುತ್ತಾರೆ. ॥33॥

(ಶ್ಲೋಕ-34)

ಮೂಲಮ್

ಕೇಚಿತ್ಪ್ರಾಂಜಲಯೋ ದೀನಾ ನ್ಯಸ್ತಶಸಾ ದಿವೌಕಸಃ ।
ಮುಕ್ತಕಚ್ಛಶಿಖಾಃ ಕೇಚಿದ್ಭೀತಾಃ ಸ್ಮ ಇತಿ ವಾದಿನಃ ॥

ಅನುವಾದ

ಕೆಲವು ದೇವತೆಗಳಾದರೋ ತಮ್ಮ ಅಸ್ತ್ರ-ಶಸ್ತ್ರಗಳನ್ನು ಚೆಲ್ಲಿ, ಕೈಜೋಡಿಸಿಕೊಂಡು ನಿನ್ನ ಮುಂದೆ ದೈನ್ಯವನ್ನು ಪ್ರಕಟಿಸುವರು. ಇನ್ನೂ ಕೆಲವರು ತಮ್ಮ ಜುಟ್ಟನ್ನೂ, ಕಚ್ಚೆಯನ್ನೂ ಬಿಚ್ಚಿಕೊಂಡು ನಿನಗೆ ಶರಣಾಗಿ ‘ನಾವು ಭಯಗೊಂಡಿದ್ದೇವೆ, ನಮ್ಮನ್ನು ರಕ್ಷಿಸು’ ಎಂದು ಹೇಳುತ್ತಾರೆ. ॥34॥

(ಶ್ಲೋಕ-35)

ಮೂಲಮ್

ನ ತ್ವಂ ವಿಸ್ಮೃತಶಸಾಸಾನ್ವಿರಥಾನ್ಭಯಸಂವೃತಾನ್ ।
ಹಂಸ್ಯನ್ಯಾಸಕ್ತವಿಮುಖಾನ್ಭಗ್ನಚಾಪಾನಯುಧ್ಯತಃ ॥

ಅನುವಾದ

ಅಸ್ತ್ರ-ಶಸ್ತ್ರಗಳನ್ನು ಮರೆತವರನ್ನು, ರಥ ಮುರಿದು ಹೋದವರನ್ನು, ಹೆದರಿದವರನ್ನು, ಯುದ್ಧವನ್ನು ಬಿಟ್ಟು ಅನ್ಯಮನಸ್ಕರಾದವರನ್ನು, ಧನುಸ್ಸು ತುಂಡಾದವರನ್ನು, ಯುದ್ಧದಿಂದ ಪರಾಙ್ಮುಖರಾದವರನ್ನು ಇಂತಹ ಶತ್ರುಗಳನ್ನು ಕೂಡ ನೀನು ಕೊಲ್ಲುವುದಿಲ್ಲ. ॥35॥

(ಶ್ಲೋಕ-36)

ಮೂಲಮ್

ಕಿಂ ಕ್ಷೇಮಶೂರೈರ್ವಿಬುಧೈರಸಂಯುಗವಿಕತ್ಥನೈಃ ।
ರಹೋಜುಷಾ ಕಿಂ ಹರಿಣಾ ಶಂಭುನಾ ವಾ ವನೌಕಸಾ ।
ಕಿಮಿಂದ್ರೇಣಾಲ್ಪವೀರ್ಯೇಣ ಬ್ರಹ್ಮಣಾ ವಾ ತಪಸ್ಯತಾ ॥

ಅನುವಾದ

ಯಾವುದೇ ಜಗಳ-ಕಾಳಗವಿಲ್ಲದ ಕಡೆಯಲ್ಲೇ ಆ ದೇವತೆಗಳು ವೀರರೆನಿಸಿಕೊಳ್ಳುವರು. ರಣಭೂಮಿಯಿಂದ ಹೊರಗೆ ನಾವೇ ವೀರರೆಂದು ಬಡಾಯಿಕೊಚ್ಚಿಕೊಳ್ಳುವರು. ಅವರಿಂದಾಗಲೀ, ಏಕಾಂತವಾಸೀ ವಿಷ್ಣುವಿನಿಂದಾಗಲೀ, ವನವಾಸೀ ಶಂಕರನಿಂದಾಗಲೀ, ಅಲ್ಪವೀರ್ಯನಾದ ಇಂದ್ರನಿಂದಾಗಲೀ, ತಪಸ್ವೀ ಬ್ರಹ್ಮನಿಂದಾಗಲೀ ನಮಗೆ ಯಾವ ಭಯವು ಇರಬಲ್ಲದು? ॥36॥

(ಶ್ಲೋಕ-37)

ಮೂಲಮ್

ತಥಾಪಿ ದೇವಾಃ ಸಾಪತ್ನ್ಯಾನ್ನೋಪೇಕ್ಷ್ಯಾ ಇತಿ ಮನ್ಮಹೇ ।
ತತಸ್ತನ್ಮೂಲಖನನೇ ನಿಯುಂಕ್ಷ್ವಾಸ್ಮಾನನುವ್ರತಾನ್ ॥

ಅನುವಾದ

ಹೀಗಿದ್ದರೂ ದೇವತೆಗಳನ್ನು ಉಪೇಕ್ಷಿಸಬಾರದು ಎಂಬುದೇ ನಮ್ಮ ಅಭಿಪ್ರಾಯವು. ಏಕೆಂದರೆ, ಅವರು ಶತ್ರುಗಳೇ ಅಲ್ಲವೇ? ಅದಕ್ಕಾಗಿ ಅವರ ಬೇರನ್ನೇ ಕಿತ್ತೆಸೆಯಲು ನಮ್ಮಂತಹ ವಿಶ್ವಾಸಪಾತ್ರ ಸೇವಕರನ್ನು ನಿಯುಕ್ತಗೊಳಿಸು. ॥37॥

(ಶ್ಲೋಕ-38)

ಮೂಲಮ್

ಯಥಾಮಯೋಂಗೇ ಸಮುಪೇಕ್ಷಿತೋ ನೃಭಿ-
ರ್ನ ಶಕ್ಯತೇ ರೂಢಪದಶ್ಚಿಕಿತ್ಸಿತುಮ್ ।
ಯಥೇಂದ್ರಿಯಗ್ರಾಮ ಉಪೇಕ್ಷಿತಸ್ತಥಾ
ರಿಪುರ್ಮಹಾನ್ಬದ್ಧಬಲೋ ನ ಚಾಲ್ಯತೇ ॥

ಅನುವಾದ

ಮನುಷ್ಯನ ಶರೀರದಲ್ಲಿ ರೋಗವು ಉಂಟಾದಾಗ, ಅದನ್ನು ಉಪೇಕ್ಷೆಮಾಡಿ ಔಷಧೋಪಚಾರವನ್ನು ಮಾಡದಿದ್ದಾಗ ರೋಗವು ಬೇರೂರುವುದು. ಮತ್ತೆ ಅದು ಗುಣಪಡಿಸಲು ಅಸಾಧ್ಯವಾಗುವಂತೆಯೇ ಅಥವಾ ಇಂದ್ರಿಯಗಳನ್ನು ಉಪೇಕ್ಷಿಸಿದಾಗ ಅವುಗಳ ದಮನ ಅಸಂಭವವಾಗುವಂತೆಯೇ, ಮೊದಲಿಗೆ ಶತ್ರುವನ್ನು ಉಪೇಕ್ಷೆಮಾಡಿ, ಅವನು ತಳವೂರಿದರೆ ಮತ್ತೆ ಅವನನ್ನು ಸೋಲಿಸುವುದು ಕಷ್ಟವಾಗುತ್ತದೆ. ॥38॥

(ಶ್ಲೋಕ-39)

ಮೂಲಮ್

ಮೂಲಂ ಹಿ ವಿಷ್ಣುರ್ದೇವಾನಾಂ ಯತ್ರ ಧರ್ಮಃ ಸನಾತನಃ ।
ತಸ್ಯ ಚ ಬ್ರಹ್ಮ ಗೋವಿಪ್ರಾಸ್ತಪೋಯಜ್ಞಾಃ ಸದಕ್ಷಿಣಾಃ ॥

ಅನುವಾದ

ದೇವತೆಗಳ ಮೂಲ(ಬೇರು)ವು ಮಹಾವಿಷ್ಣುವೇ ಆಗಿದ್ದು, ಅವನು ಸನಾತನಧರ್ಮವಿರುವಲ್ಲಿ ಇರುತ್ತಾನೆ. ಸನಾತನಧರ್ಮದ ಬೇರು-ವೇದಗಳು, ಗೋವುಗಳು, ಬ್ರಾಹ್ಮಣರು, ತಪಸ್ಸು ಮತ್ತು ದಕ್ಷಿಣೆಯಿಂದ ಕೂಡಿದ ಯಜ್ಞಗಳಾಗಿವೆ. ॥39॥

(ಶ್ಲೋಕ-40)

ಮೂಲಮ್

ತಸ್ಮಾತ್ಸರ್ವಾತ್ಮನಾ ರಾಜನ್ ಬ್ರಹ್ಮಣಾನ್ ಬ್ರಹ್ಮವಾದಿನಃ ।
ತಪಸ್ವಿನೋ ಯಜ್ಞಶೀಲಾನ್ಗಾಶ್ಚ ಹನ್ಮೋ ಹವಿರ್ದುಘಾಃ ॥

ಅನುವಾದ

ಅದಕ್ಕಾಗಿ ಭೋಜರಾಜನೇ! ವೇದವಾದಿಗಳಾದ ಬ್ರಾಹ್ಮಣರನ್ನು, ತಪಸ್ವಿಗಳನ್ನು, ಯಾಜ್ಞಿಕರನ್ನು ಮತ್ತು ಯಜ್ಞಕ್ಕಾಗಿ ಘೃತವೇ ಮುಂತಾದ ಹವಿಷ್ಯ ಪದಾರ್ಥಗಳನ್ನು ಕೊಡುವ ಗೋವುಗಳನ್ನು ನಾವುಗಳು ಸಮೂಲವಾಗಿ ನಾಶಮಾಡಿಬಿಡುತ್ತೇವೆ. ॥40॥

(ಶ್ಲೋಕ-41)

ಮೂಲಮ್

ವಿಪ್ರಾ ಗಾವಶ್ಚ ವೇದಾಶ್ಚ ತಪಃ ಸತ್ಯಂ ದಮಃ ಶಮಃ ।
ಶ್ರದ್ಧಾ ದಯಾ ತಿತಿಕ್ಷಾ ಚ ಕ್ರತವಶ್ಚ ಹರೇಸ್ತನೂಃ ॥

ಅನುವಾದ

ಬ್ರಾಹ್ಮಣರು, ಗೋವುಗಳು, ವೇದಗಳು, ತಪಸ್ಸು, ಸತ್ಯ, ಇಂದ್ರಿಯದಮನ ಮನೋನಿಗ್ರಹ, ಶ್ರದ್ಧೆ, ದಯೆ, ತಿತಿಕ್ಷೆ ಮತ್ತು ಯಜ್ಞಗಳು ಇವು ವಿಷ್ಣುವಿನ ಶರೀರವಾಗಿವೆ. ॥41॥

(ಶ್ಲೋಕ-42)

ಮೂಲಮ್

ಸ ಹಿ ಸರ್ವಸುರಾಧ್ಯಕ್ಷೋ ಹ್ಯಸುರದ್ವಿಡ್ಗುಹಾಶಯಃ ।
ತನ್ಮೂಲಾ ದೇವತಾಃ ಸರ್ವಾಃ ಸೇಶ್ವರಾಃ ಸಚತುರ್ಮುಖಾಃ ।
ಅಯಂ ವೈ ತದ್ವಧೋಪಾಯೋ ಯದೃಷೀಣಾಂ ವಿಹಿಂಸನಮ್ ॥

ಅನುವಾದ

ಆ ಮಹಾವಿಷ್ಣುವೇ ಎಲ್ಲ ದೇವತೆಗಳಿಗೆ ಒಡೆಯನಾಗಿದ್ದು, ಅಸುರರ ಮುಖ್ಯ ದ್ವೇಷಿಯಾಗಿರುವನು. ಆದರೆ ಅವನು ಯಾವುದೋ ಗುಹೆಯಲ್ಲಿ ಅಡಗಿರುತ್ತಾನೆ. ಮಹಾದೇವನಿಗೆ, ಚತುರ್ಮುಖಬ್ರಹ್ಮನಿಗೆ, ಇಂದ್ರಾದಿ ಸಕಲದೇವತೆಗಳಿಗೆ ಅವನೇ ಮೂಲನಾಗಿರುವನು. ಋಷಿಗಳನ್ನು ಕೊಂದುಹಾಕುವುದೇ ಅವನನ್ನು ಕೊಲ್ಲುವ ಉಪಾಯವಾಗಿದೆ. ॥42॥

(ಶ್ಲೋಕ-43)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ದುರ್ಮಂತ್ರಿಭಿಃ ಕಂಸಃ ಸಹ ಸಮ್ಮಂತ್ರ್ಯ ದುರ್ಮತಿಃ ।
ಬ್ರಹ್ಮಹಿಂಸಾಂ ಹಿತಂ ಮೇನೇ ಕಾಲಪಾಶಾವೃತೋಸುರಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಮೊದಲಿಗೆ ಕಂಸನ ಬುದ್ಧಿಯು ಕೆಟ್ಟುಹೋಗಿತ್ತು. ಮತ್ತೆ ಅವನಿಂದಲೂ ದುಷ್ಟರಾದ ಮಂತ್ರಿಗಳು ಅವನಿಗೆ ದೊರಕಿದ್ದರು. ಈ ಪ್ರಕಾರವಾಗಿ ಅವರಿಂದ ಸಲಹೆ ಪಡೆದು ಕಾಲಪಾಶದಲ್ಲಿ ಸಿಕ್ಕಿಕೊಂಡಿರುವ ಅಸುರನಾದ ಕಂಸನು ಬ್ರಾಹ್ಮಣರನ್ನು ಕೊಲ್ಲುವುದೇ ಸರಿ ಎಂದು ತಿಳಿದನು. ॥43॥

(ಶ್ಲೋಕ-44)

ಮೂಲಮ್

ಸಂದಿಶ್ಯ ಸಾಧುಲೋಕಸ್ಯ ಕದನೇ ಕದನಪ್ರಿಯಾನ್ ।
ಕಾಮರೂಪಧರಾಂದಿಕ್ಷು ದಾನವಾನ್ಗೃಹಮಾವಿಶತ್ ॥

ಅನುವಾದ

ಅವನು ಹಿಂಸಾಪ್ರಿಯರಾದ ರಾಕ್ಷಸರಿಗೆ ಸಂತ-ಸತ್ಪುರುಷರನ್ನು ಹಿಂಸಿಸಲು ಆದೇಶಿಸಿದನು. ಕಾಮರೂಪಿಗಳಾದ ಆ ಅಸುರರನ್ನು ಎಲ್ಲ ಕಡೆಗೆ ಕಳಿಸಿಕೊಟ್ಟು, ಕಂಸನು ತನ್ನರಮನೆಯನ್ನು ಪ್ರವೇಶಿಸಿದನು. ॥44॥

(ಶ್ಲೋಕ-45)

ಮೂಲಮ್

ತೇ ವೈ ರಜಃಪ್ರಕೃತಯಸ್ತಮಸಾ ಮೂಢಚೇತಸಃ ।
ಸತಾಂ ವಿದ್ವೇಷಮಾಚೇರುರಾರಾದಾಗತಮೃತ್ಯವಃ ॥

ಅನುವಾದ

ರಜೋಗುಣ ಪ್ರಕೃತಿಯುಳ್ಳ ಆ ಅಸುರರು ತಮೋಗುಣದಿಂದ ಅವರ ಚಿತ್ತವು ಉಚಿತ-ಅನುಚಿತ ವಿವೇಕದಿಂದ ರಹಿತವಾಗಿತ್ತು. ಅವರ ತಲೆಯಮೇಲೆ ಮೃತ್ಯುವು ಕುಣಿಯುತ್ತಿತ್ತು. ಈ ಕಾರಣದಿಂದಲೇ ಅವರು ಸಂತರನ್ನು ದ್ವೇಷಿಸಿದರು. ॥45॥

(ಶ್ಲೋಕ-46)

ಮೂಲಮ್

ಆಯುಃ ಶ್ರಿಯಂ ಯಶೋ ಧರ್ಮಂ ಲೋಕಾನಾಶಿಷ ಏವ ಚ ।
ಹಂತಿ ಶ್ರೇಯಾಂಸಿ ಸರ್ವಾಣಿ ಪುಂಸೋ ಮಹದತಿಕ್ರಮಃ ॥

ಅನುವಾದ

ಪರೀಕ್ಷಿತನೇ! ಸಂತ-ಸತ್ಪುರುಷರನ್ನು ಅನಾದರ ಮಾಡುವವರ ಆ ಕುಕರ್ಮವೇ ಅವರ ಆಯುಸ್ಸು, ಲಕ್ಷ್ಮೀ, ಕೀರ್ತಿ, ಧರ್ಮ, ಲೋಕ-ಪರಲೋಕ, ವಿಷಯಭೋಗ ಹಾಗೂ ಎಲ್ಲ ಕಲ್ಯಾಣ ಸಾಧನೆಗಳನ್ನು ನಾಶಮಾಡಿಬಿಡುತ್ತದೆ. ॥46॥

ಅನುವಾದ (ಸಮಾಪ್ತಿಃ)

ನಾಲ್ಕನೆಯ ಅಧ್ಯಾಯವು ಮುಗಿಯಿತು. ॥4॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಚತುರ್ಥೋಽಧ್ಯಾಯಃ ॥4॥