[ಮೊದಲನೆಯ ಅಧ್ಯಾಯ]
ಭಾಗಸೂಚನಾ
ಭಗವಂತನು ಭೂದೇವಿಯನ್ನು ಸಂತೈಸಿದುದು, ವಸುದೇವ ದೇವಕಿಯರ ವಿವಾಹ ಮತ್ತು ಕಂಸನು ದೇವಕಿಯ ಆರು ಪುತ್ರರನ್ನು ವಧಿಸಿದುದು
(ಶ್ಲೋಕ-1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಕಥಿತೋ ವಂಶವಿಸ್ತಾರೋ ಭವತಾ ಸೋಮಸೂರ್ಯಯೋಃ ।
ರಾಜ್ಞಾಂ ಚೋಭಯವಂಶ್ಯಾನಾಂ ಚರಿತಂ ಪರಮಾದ್ಭುತಮ್ ॥
(ಶ್ಲೋಕ-2)
ಮೂಲಮ್
ಯದೋಶ್ಚ ಧರ್ಮಶೀಲಸ್ಯ ನಿತರಾಂ ಮುನಿಸತ್ತಮ ।
ತತ್ರಾಂಶೇನಾವತೀರ್ಣಸ್ಯ ವಿಷ್ಣೋರ್ವೀರ್ಯಾಣಿ ಶಂಸ ನಃ ॥
ಅನುವಾದ
ಪರೀಕ್ಷಿತರಾಜನು ಕೇಳಿದನು — ಎಲೈ ಮುನಿಶ್ರೇಷ್ಠರೇ! ತಾವು ಇಲ್ಲಿಯವರೆಗೆ ಚಂದ್ರವಂಶ ಮತ್ತು ಸೂರ್ಯವಂಶಗಳನ್ನು ವಿಸ್ತಾರವಾಗಿ ವರ್ಣಿಸಿದಿರಿ. ಎರಡೂ ವಂಶದ ರಾಜರುಗಳ ಅತ್ಯಂತ ಅದ್ಭುತವಾದ ಚರಿತ್ರೆಯನ್ನೂ ನಿರೂಪಿಸಿದಿರಿ. ಭಗವಂತನ ಪರಮ ಪ್ರೇಮಿಗಳಾದ ಮುನಿವರ್ಯರೇ! ತಾವು ಸ್ವಾಭಾವಿಕವಾದ ಧರ್ಮಶೀಲವಾದ ಯದುವಂಶವನ್ನೂ ವಿಶದವಾಗಿ ವರ್ಣಿಸಿದಿರಿ. ಈಗ ದಯಮಾಡಿ ಅದೇ ವಂಶದಲ್ಲಿ ತನ್ನ ಅಂಶವಾದ ಶ್ರೀಬಲರಾಮನೊಂದಿಗೆ ಅವತರಿಸಿದ ಭಗವಾನ್ ಶ್ರೀಕೃಷ್ಣನ ಪರಮ ಪವಿತ್ರ ಚರಿತ್ರೆಯನ್ನು ಹೇಳುವವರಾಗಿರಿ. ॥1-2॥
(ಶ್ಲೋಕ-3)
ಮೂಲಮ್
ಅವತೀರ್ಯ ಯದೋರ್ವಂಶೇ ಭಗವನಾನ್ಭೂತಭಾವನಃ ।
ಕೃತವಾನ್ಯಾನಿ ವಿಶ್ವಾತ್ಮಾ ತಾನಿ ನೋ ವದ ವಿಸ್ತರಾತ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಸಮಸ್ತ ಪ್ರಾಣಿಗಳ ಪ್ರಾಣಾಧಾರನೂ, ಸರ್ವಾತ್ಮಕನೂ ಆಗಿರುವನು. ಅವನು ಯದುವಂಶದಲ್ಲಿ ಅವತರಿಸಿ ಮಾಡಿದ ಎಲ್ಲ ಲೀಲೆಗಳನ್ನು ನಮಗೆ ವಿಸ್ತಾರವಾಗಿ ಶ್ರವಣ ಮಾಡಿಸಿರಿ. ॥3॥
(ಶ್ಲೋಕ-4)
ಮೂಲಮ್
ನಿವೃತ್ತತರ್ಷೈರುಪಗೀಯಮಾನಾದ್
ಭವೌಷಧಾಚ್ಛ್ರೋತ್ರಮನೋಭಿರಾಮಾತ್ ।
ಕ ಉತ್ತಮಶ್ಲೋಕಗುಣಾನುವಾದಾತ್
ಪುಮಾನ್ವಿರಜ್ಯೇತ ವಿನಾ ಪಶುಘ್ನಾತ್ ॥
ಅನುವಾದ
ಪುಣ್ಯಶ್ಲೋಕನಾದ ಆ ಪರಮಾತ್ಮನ ಕಲ್ಯಾಣ ಗುಣಗಳನ್ನು ಆಶಾಪಾಶಗಳನ್ನು ತೊರೆದ ನಿತ್ಯತೃಪ್ತರಾದ ಮಹಾತ್ಮರು ಎಷ್ಟು ಅನುಭವಿಸಿದರೂ ತೃಪ್ತಿಯಿಲ್ಲದೆ ಕೀರ್ತನೆ ಮಾಡುತ್ತಾ ಇರುತ್ತಾರೆ. ಅದು ಸಂಸಾರ ವ್ಯಾಧಿಗೆ ದಿವ್ಯೌಷಧವಾಗಿದೆ. ಕಿವಿಗಳಿಗೂ ಮನಸ್ಸಿಗೂ ಅಮೃತ ಪ್ರಾಯವಾಗಿದೆ. ಅದರ ಕುರಿತು ಯಾರಿಗೆ ತಾನೇ ಬೇಸರ ಉಂಟಾದೀತು? ಅದರಲ್ಲಿ ಬೇಸರ ಪಡಬೇಕಾದರೆ ಅವನು ಪಶುಘಾತಿಯಾದ ಕಟುಕನೇ ಆಗಿರಬೇಕು. ಆತನನ್ನು ಬಿಟ್ಟು ಬೇರೆ ಯಾರಿಗೂ ಅದರಲ್ಲಿ ವಿರಕ್ತಿ ಉಂಟಾಗುವುದಿಲ್ಲ. ॥4॥
(ಶ್ಲೋಕ-5)
ಮೂಲಮ್
ಪಿತಾಮಹಾ ಮೇ ಸಮರೇಮರಂಜಯೈ-
ರ್ದೇವವ್ರತಾದ್ಯಾತಿರಥೈಸ್ತಿಮಿಂಗಿಲೈಃ ।
ದುರತ್ಯಯಂ ಕೌರವಸೈನ್ಯಸಾಗರಂ
ಕೃತ್ವಾತರನ್ವತ್ಸಪದಂ ಸ್ಮ ಯತ್ಪ್ಲವಾಃ ॥
ಅನುವಾದ
ಶ್ರೀಕೃಷ್ಣನಾದರೋ ನನಗೆ ಕುಲದೈವನೇ ಆಗಿರುವನು. ಈ ಭಗವಾನ್ ಶ್ರೀಕೃಷ್ಣನ ಚರಣರೂಪಿ ನೌಕೆಯಿಂದಲೇ ನನ್ನ ತಾತಂದಿರಾದ ಪಾಂಡವರು ಮಹಾಭಾರತ ಯುದ್ಧದಲ್ಲಿ ದೇವತೆಗಳನ್ನು ಜಯಿಸಬಲ್ಲ ಭೀಷ್ಮ ಪಿತಾಮಹರೇ ಆದಿ ಅತಿರಥಯೋಧರೆಂಬ ತಿಮಿಂಗಿಲಗಳಿಂದ ಕೂಡಿದ ದಾಟಲು ಅಸಾಧ್ಯವಾದ ಕೌರವ ಸೈನ್ಯವೆಂಬ ಮಹಾಸಾಗರವನ್ನು ಕರುವಿನ ಹೆಜ್ಜೆಯಷ್ಟು ಹೊಂಡವನ್ನು ದಾಟುವಂತೆ ಲೀಲಾಜಾಲವಾಗಿ ದಾಟಿಬಿಟ್ಟರು. ॥5॥
(ಶ್ಲೋಕ-6)
ಮೂಲಮ್
ದ್ರೌಣ್ಯಸವಿಪ್ಲುಷ್ಟಮಿದಂ ಮದಂಗಂ
ಸಂತಾನಬೀಜಂ ಕುರುಪಾಂಡವಾನಾಮ್ ।
ಜುಗೋಪ ಕುಕ್ಷಿಂಗತ ಆತ್ತಚಕ್ರೋ
ಮಾತುಶ್ಚ ಮೇ ಯಃ ಶರಣಂ ಗತಾಯಾಃ ॥
ಅನುವಾದ
ತನ್ನನ್ನು ಮರೆಹೊಕ್ಕ ನನ್ನ ತಾಯಿಯ ಗರ್ಭವನ್ನು ಒಳಹೊಕ್ಕು ಚಕ್ರಾಯುಧವನ್ನು ಧರಿಸಿ, ಅಶ್ವತ್ಥಾಮನು ಪ್ರಯೋಗಿಸಿದ ಬ್ರಹ್ಮಾಸ್ತ್ರದಿಂದ ಸುಟ್ಟುಹೋಗುವುದರಲ್ಲಿದ್ದ, ಕೌರವ-ಪಾಂಡವ ವಂಶಗಳೆರಡರ ಬೀಜವಾಗಿದ್ದ ನಿಮ್ಮ ಮುಂದೆ ಇರುವ ಈ ದೇಹವನ್ನು ಕಾಪಾಡಿದವನೂ ಅವನೇ. ॥6॥
(ಶ್ಲೋಕ-7)
ಮೂಲಮ್
ವೀರ್ಯಾಣಿ ತಸ್ಯಾಖಿಲದೇಹಭಾಜಾ-
ಮಂತರ್ಬಹಿಃ ಪೂರುಷಕಾಲರೂಪೈಃ ।
ಪ್ರಯಚ್ಛತೋ ಮೃತ್ಯುಮುತಾಮೃತಂ ಚ
ಮಾಯಾಮನುಷ್ಯಸ್ಯ ವದಸ್ವ ವಿದ್ವನ್ ॥
ಅನುವಾದ
ಕೇವಲ ನನ್ನ ಮಾತಲ್ಲ. ಅವನು ಸಮಸ್ತ ಶರೀರಧಾರಿಗಳ ಒಳಗೆ ಅಂತರ್ಯಾಮಿ ಆತ್ಮರೂಪದಿಂದ ಇದ್ದು ಅಮೃತತ್ತ್ವವನ್ನು ಕರುಣಿಸುತ್ತಿರುವನು ಮತ್ತು ಹೊರಗೆ ಕಾಲರೂಪದಿಂದ ಇದ್ದು ಮೃತ್ಯುವನ್ನೊಡ್ಡುವನು.* ಮನುಷ್ಯರೂಪದಲ್ಲಿ ಕಾಣಿಸಿಕೊಳ್ಳುವುದು ಅವನ ಒಂದು ಲೀಲೆಯೇ ಆಗಿದೆ. ಅಂತಹವನ ಐಶ್ವರ್ಯ-ಮಾಧುರ್ಯಗಳಿಂದ ಕೂಡಿದ ಲೀಲೆಗಳನ್ನು ತಾವು ವರ್ಣಿಸಿರಿ.॥7॥
ಟಿಪ್ಪನೀ
- ಸಮಸ್ತ ದೇಹಧಾರಿಗಳ ಅಂತಃಕರಣದಲ್ಲಿ ಅಂತರ್ಯಾಮಿಯಾಗಿ ನೆಲೆಸಿರುವ ಭಗವಂತನು ಅವರ ಜೀವನಕ್ಕೆ ಕಾರಣನಾಗಿರುವನು ಹಾಗೂ ಹೊರಗೆ ಕಾಲರೂಪದಿಂದಿದ್ದು ಅವನೇ ಅವರನ್ನು ನಾಶಮಾಡುತ್ತಾನೆ. ಆದ್ದರಿಂದ ಆತ್ಮಜ್ಞಾನಿಗಳಾದವರು ಅಂತರ್ದೃಷ್ಟಿಯಿಂದ ಆ ಅಂತರ್ಯಾಮಿಯನ್ನು ಉಪಾಸಿಸಿ ಮೋಕ್ಷವೆಂಬ ಅಮರ ಪದವನ್ನು ಹೊಂದುವರು. ವಿಷಯ ಪರಾಯಣ ಅಜ್ಞಾನಿಗಳು ಬಾಹ್ಯದೃಷ್ಟಿಯಿಂದ ವಿಷಯಚಿಂತನೆಯಲ್ಲೇ ತೊಡಗಿರುವವರು ಜನ್ಮ-ಮರಣರೂಪೀ ಮೃತ್ಯುವಿಗೆ ತುತ್ತಾಗುತ್ತಾರೆ.
(ಶ್ಲೋಕ-8)
ಮೂಲಮ್
ರೋಹಿಣ್ಯಾಸ್ತನಯಃ ಪ್ರೋಕ್ತೋ ರಾಮಃ ಸಂಕರ್ಷಣಸ್ತ್ವಯಾ ।
ದೇವಕ್ಯಾ ಗರ್ಭಸಂಬಂಧಃ ಕುತೋ ದೇಹಾಂತರಂ ವಿನಾ ॥
ಅನುವಾದ
ಪೂಜ್ಯರೇ! ಸಂಕರ್ಷಣನೆಂದು ಪ್ರಸಿದ್ಧನಾದ ಬಲರಾಮನು ರೋಹಿಣಿದೇವಿಯ ಪುತ್ರನೆಂದು ನೀವೇ ಹೇಳಿದ್ದಿರಿ. ಬಳಿಕ ಇದೇ ಬಲರಾಮನನ್ನು ದೇವಕಿಯ ಪುತ್ರನೆಂದೂ ಹೇಳಿದಿರಿ. ಜನ್ಮಾಂತರವಿಲ್ಲದೆ ಒಂದೇ ಜನ್ಮದಲ್ಲಿ ಇಬ್ಬರು ತಾಯಂದಿರಿಗೆ ಮಗನಾಗಲು ಹೇಗೆ ಸಾಧ್ಯವಾಗುವುದು? ॥8॥
(ಶ್ಲೋಕ-9)
ಮೂಲಮ್
ಕಸ್ಮಾನ್ಮುಕುಂದೋ ಭಗವಾನ್ಪಿತುರ್ಗೇಹಾದ್ವ್ರಜಂ ಗತಃ ।
ಕ್ವ ವಾಸಂ ಜ್ಞಾತಿಭಿಃ ಸಾರ್ಧಂ ಕೃತವಾನ್ಸಾತ್ವತಾಂ ಪತಿಃ ॥
ಅನುವಾದ
ಅಸುರರಿಗೆ ಮುಕ್ತಿಯನ್ನು ಕರುಣಿಸುವವನೂ, ಭಕ್ತರಿಗೆ ಪ್ರೇಮವನ್ನು ವಿತರಿಸುವವನೂ ಆದ ಭಗವಾನ್ ಶ್ರೀಕೃಷ್ಣನು ತನ್ನ ವಾತ್ಸಲ್ಯ-ಸ್ನೇಹದಿಂದ ತುಂಬಿದ ತಂದೆಯ ಮನೆಯನ್ನು ಬಿಟ್ಟು ವ್ರಜಕ್ಕೆ ಏಕೆ ಹೋದನು? ಯದುವಂಶ ಶಿರೋಮಣಿ ಭಕ್ತವತ್ಸಲನಾದ ಪ್ರಭುವು ನಂದಾದಿ ಗೋಪಬಾಂಧವರೊಂದಿಗೆ ಎಲ್ಲೆಲ್ಲಿ ವಾಸಮಾಡಿದನು. ॥9॥
(ಶ್ಲೋಕ-10)
ಮೂಲಮ್
ವ್ರಜೇ ವಸನ್ಕಿಮಕರೋನ್ಮಧುಪುರ್ಯಾಂ ಚ ಕೇಶವಃ ।
ಭ್ರಾತರಂ ಚಾವಧೀತ್ಕಂಸಂ ಮಾತುರದ್ಧಾತದರ್ಹಣಮ್ ॥
ಅನುವಾದ
ಬ್ರಹ್ಮ-ರುದ್ರಾದಿಗಳಿಗೆ ನಿಯಾಮಕನಾದ ಕೇಶವನು ವ್ರಜದಲ್ಲಿ, ಮಥುರೆಯಲ್ಲಿ ನೆಲೆಸಿ ಯಾವ-ಯಾವ ಲೀಲೆಗಳನ್ನು ಮಾಡಿದನು? ಸ್ವಾಮಿ! ಅವನು ತನಗೆ ಸೋದರಮಾವನಾದ ಕಂಸನನ್ನು ತನ್ನ ಕೈಯ್ಯಾರೆ ಏಕೆ ಕೊಂದನು? ಏಕೆಂದರೆ, ಅವನು ತಾಯಿಗೆ ಸೋದರನಾಗಿದ್ದುದರಿಂದ ಶ್ರೀಕೃಷ್ಣನಿಂದ ವಧಿಸಲು ಅನರ್ಹನಾಗಿದ್ದನು. ॥10॥
(ಶ್ಲೋಕ-11)
ಮೂಲಮ್
ದೇಹಂ ಮಾನುಷಮಾಶ್ರಿತ್ಯ ಕತಿ ವರ್ಷಾಣಿ ವೃಷ್ಣಿಭಿಃ ।
ಯದುಪುರ್ಯಾಂ ಸಹಾವಾತ್ಸೀತ್ಪತ್ನ್ಯಃ ಕತ್ಯಭವನ್ಪ್ರಭೋಃ ॥
ಅನುವಾದ
ಸಚ್ಚಿದಾನಂದ ಪ್ರಭುವು ಮನುಷ್ಯಶರೀರವನ್ನು ಆಶ್ರಯಿಸಿ ವೃಷ್ಣಿವಂಶೀಯರೊಡನೆ ಎಷ್ಟು ವರ್ಷಗಳವರೆಗೆ ವಾಸಿಸಿದನು? ಸರ್ವಶಕ್ತಿವಂತನಾದ ಶ್ರೀಕೃಷ್ಣನಿಗೆ ಎಷ್ಟು ಮಂದಿ ಪತ್ನಿಯರಿದ್ದರು? ॥11॥
(ಶ್ಲೋಕ-12)
ಮೂಲಮ್
ಏತದನ್ಯಚ್ಚ ಸರ್ವಂ ಮೇ ಮುನೇ ಕೃಷ್ಣ ವಿಚೇಷ್ಟಿತಮ್ ।
ವಕ್ತುಮರ್ಹಸಿ ಸರ್ವಜ್ಞ ಶ್ರದ್ದಧಾನಾಯ ವಿಸ್ತೃತಮ್ ॥
ಅನುವಾದ
ಮುನಿಶ್ರೇಷ್ಠರೇ! ನಾನು ಕೇಳಿರುವ ಎಲ್ಲ ಪ್ರಶ್ನೆಗಳಿಗೂ ತಾವು ದಯಮಾಡಿ ಉತ್ತರಿಸಬೇಕು. ನಾನು ಪ್ರಶ್ನಿಸದೇ ಇರುವ ಶ್ರೀಕೃಷ್ಣನ ಲೀಲಾವಿನೋದಗಳನ್ನೂ ವಿಸ್ತಾರವಾಗಿ ತಾವು ಹೇಳಿರಿ. ಏಕೆಂದರೆ, ತಾವು ಎಲ್ಲವನ್ನೂ ಬಲ್ಲವರಾಗಿದ್ದೀರಿ. ನಾನು ಶ್ರದ್ಧೆಯಿಂದ ಅದನ್ನು ಕೇಳಲಿಚ್ಛಿಸುತ್ತೇನೆ.॥12॥
(ಶ್ಲೋಕ-13)
ಮೂಲಮ್
ನೈಷಾತಿದುಃಸಹಾ ಕ್ಷುನ್ಮಾಂ ತ್ಯಕ್ತೋದಮಪಿ ಬಾಧತೇ ।
ಪಿಬಂತಂ ತ್ವನ್ಮುಖಾನ್ಭೋಜಚ್ಯುತಂ ಹರಿಕಥಾಮೃತಮ್ ॥
ಅನುವಾದ
ಪೂಜ್ಯರೇ! ಅನ್ನದ ಮಾತಿರಲಿ, ನಾನು ಜಲವನ್ನೂ ತ್ಯಜಿಸಿ ಬಿಟ್ಟಿರುವೆನು. ಹೀಗಿದ್ದರೂ ಸಹಿಸಲು ಅಶಕ್ಯವಾದ ಹಸಿವು-ಬಾಯಾರಿಕೆಗಳು (ಆ ಕಾರಣದಿಂದಲೇ ನಾನು ಮುನಿಯ ಕತ್ತಿನಲ್ಲಿ ಸತ್ತ ಸರ್ಪವನ್ನು ಹಾಕಿದ ಅನ್ಯಾಯವನ್ನು ಮಾಡಿದ್ದೆ.) ನನಗೆ ಬಾಧಿಸುವುದಿಲ್ಲ. ಏಕೆಂದರೆ, ತಮ್ಮ ಮುಖಾರವಿಂದದಿಂದ ಸ್ರವಿಸುತ್ತಿರುವ ಹರಿಕಥಾಮೃತವನ್ನು ಪಾನಮಾಡುತ್ತಿರುವೆನು.॥13॥
(ಶ್ಲೋಕ-14)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಏವಂ ನಿಶಮ್ಯ ಭೃಗುನಂದನ ಸಾಧುವಾದಂ
ವೈಯಾಸಕಿಃ ಸ ಭಗವಾನಥ ವಿಷ್ಣುರಾತಮ್ ।
ಪ್ರತ್ಯರ್ಚ್ಯ ಕೃಷ್ಣಚರಿತಂ ಕಲಿಕಲ್ಮಷಘ್ನಂ
ವ್ಯಾಹರ್ತುಮಾರಭತ ಭಾಗವತಪ್ರಧಾನಃ ॥
ಅನುವಾದ
ಸೂತ ಪುರಾಣಿಕರು ಹೇಳುತ್ತಾರೆ — ಶೌನಕಾದಿ ಋಷಿಗಳೇ! ಭಗವಂತನ ಪ್ರೇಮಿಗಳಲ್ಲಿ ಅಗ್ರಗಣ್ಯರೂ, ಸರ್ವಜ್ಞರೂ ಆದ ಶ್ರೀಶುಕಮಹಾಮುನಿಗಳು ಪರೀಕ್ಷಿದ್ರಾಜನ ಇಂತಹ ಸಮೀಚೀನವಾದ ಪ್ರಶ್ನೆಯನ್ನು ಕೇಳಿ (ಸಂತರ ಸಭೆಯಲ್ಲಿ ಭಗವಂತನ ಲೀಲೆಗಳ ವರ್ಣನೆಯ ಉದ್ದೇಶವಿರುತ್ತದೆ.) ಅವನನ್ನು ಅಭಿನಂದಿಸಿ ಸಮಸ್ತ ಕಲಿ ಮಲದೋಷಗಳನ್ನು ಪೂರ್ಣವಾಗಿ ತೊಳೆದು ಹಾಕುವಂತಹ ಭಗವಾನ್ ಶ್ರೀಕೃಷ್ಣನ ಕರ್ಣಾನಂದಕರವಾದ ಲೀಲೆಗಳನ್ನು ವರ್ಣಿಸಲು ಪ್ರಾರಂಭಿಸಿದರು.॥14॥
(ಶ್ಲೋಕ-15)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಸಮ್ಯಗ್ವ್ಯವಸಿತಾ ಬುದ್ಧಿಸ್ತವ ರಾಜರ್ಷಿಸತ್ತಮ ।
ವಾಸುದೇವಕಥಾಯಾಂ ತೇ ಯಜ್ಜಾತಾ ನೈಷ್ಠಿಕೀ ರತಿಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಭಗವಂತನ ಲೀಲಾಕಥೆಗಳ ರಸಿಕನಾದ ರಾಜರ್ಷಿಶ್ರೇಷ್ಠನೇ! ನೀನು ಭಗವತ್ಕಥೆಯನ್ನು ಕೇಳಲು ಮಾಡಿರುವ ನಿಶ್ಚಯವು ಸುಂದರವೂ, ಆದರಣೀಯವೂ ಆಗಿದೆ. ಏಕೆಂದರೆ, ಎಲ್ಲರ ಹೃದಯದಲ್ಲಿ ಆರಾಧ್ಯ ಮೂರ್ತಿಯಾಗಿ ನೆಲೆಸಿರುವ ಶ್ರೀವಾಸುದೇವನ ಲೀಲೆಗಳ ಕಥಾಶ್ರವಣ ಮಾಡುವುದರಲ್ಲಿ ನಿನಗೆ ಸಹಜವಾದ ಸುದೃಢಪ್ರೀತಿ ಉಂಟಾಗಿದೆಯಲ್ಲ! ॥15॥
(ಶ್ಲೋಕ-16)
ಮೂಲಮ್
ವಾಸುದೇವಕಥಾಪ್ರಶ್ನಃ ಪುರುಷಾಂಸೀನ್ಪುನಾತಿ ಹಿ ।
ವಕ್ತಾರಂ ಪೃಚ್ಛಕಂ ಶ್ರೋತೃಂಸ್ತತ್ಪಾದಸಲಿಲಂ ಯಥಾ ॥
ಅನುವಾದ
ವಿಷ್ಣುಪಾದೋದ್ಭವೆಯಾದ ಗಂಗಾದೇವಿಯ ಪವಿತ್ರತೀರ್ಥವು ಮೂರು ಲೋಕಗಳನ್ನು ಪಾವನಗೊಳಿಸುವಂತೆ ಶ್ರೀವಾಸುದೇವನ ಕಥೆಗಳ ಸಂಬಂಧವಾಗಿ ಕೇಳುವ ಪ್ರಶ್ನೆಯು ಪ್ರಶ್ನೆ ಮಾಡುವವನು, ಪ್ರವಚನ ಮಾಡುವವನು ಮತ್ತು ಕೇಳುವವನು ಹೀಗೆ ಮೂವರನ್ನೂ ಪವಿತ್ರಗೊಳಿಸುತ್ತದೆ. ॥16॥
(ಶ್ಲೋಕ-17)
ಮೂಲಮ್
ಭೂಮಿರ್ದೃಪ್ತನೃಪವ್ಯಾಜದೈತ್ಯಾನೀಕಶತಾಯುತೈಃ ।
ಆಕ್ರಾಂತಾ ಭೂರಿಭಾರೇಣ ಬ್ರಹ್ಮಾಣಂ ಶರಣಂ ಯಯೌ ॥
ಅನುವಾದ
ಪರೀಕ್ಷಿತನೇ! ಹಿಂದೊಮ್ಮೆ ರಾಜರ ರೂಪದಲ್ಲಿ ದರ್ಪಿಷ್ಠರಾಗಿದ್ದ, ಅಧರ್ಮನಿಷ್ಠರಾಗಿದ್ದ ಸಾವಿರಾರು ಲಕ್ಷ-ಲಕ್ಷ ದೈತ್ಯರು ಭೂಮಂಡಲವನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು. ಭೂಭಾರದಿಂದ ತತ್ತರಿಸಿದ ಭೂದೇವಿಯು ರಕ್ಷಣೆಗಾಗಿ ಬ್ರಹ್ಮದೇವರನ್ನು ಮೊರೆ ಹೊಕ್ಕಳು.॥17॥
(ಶ್ಲೋಕ-18)
ಮೂಲಮ್
ಗೌರ್ಭೂತ್ವಾಶ್ರುಮುಖೀ ಖಿನ್ನಾ ಕ್ರಂದಂತೀ ಕರುಣಂ ವಿಭೋಃ ।
ಉಪಸ್ಥಿತಾಂತಿಕೇ ತಸ್ಮೈ ವ್ಯಸನಂ ಸ್ವಮವೋಚತ ॥
ಅನುವಾದ
ಆಗ ಭೂದೇವಿಯು ಗೋವಿನ ರೂಪವನ್ನು ಧರಿಸಿ ಬ್ರಹ್ಮನ ಬಳಿಗೆ ಬಂದಿದ್ದಳು. ಕಣ್ಣೀರನ್ನು ಸುರಿಸುತ್ತಾ ಅದು ಮುಖದ ಮೇಲೆಲ್ಲ ಹರಿಯುತ್ತಿತ್ತು. ಶರೀರವು ಕೃಶವಾಗಿದ್ದು, ಅವಳು ಅತ್ಯಂತ ಖಿನ್ನಳಾಗಿ ಕರುಣಾಜನಕ ರೀತಿಯಲ್ಲಿ ಹಂಬಲಿಸುತ್ತಿದ್ದಳು. ಬ್ರಹ್ಮನ ಬಳಿಗೆ ಬಂದು ಆಕೆಯು ತನ್ನೆಲ್ಲ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡಳು. ॥18॥
(ಶ್ಲೋಕ-19)
ಮೂಲಮ್
ಬ್ರಹ್ಮಾ ತದುಪಧಾರ್ಯಾಥ ಸಹ ದೇವೈಸ್ತಯಾ ಸಹ ।
ಜಗಾಮ ಸತ್ರಿನಯನಸ್ತೀರಂ ಕ್ಷೀರಪಯೋನಿಧೇಃ ॥
ಅನುವಾದ
ಬ್ರಹ್ಮದೇವರು ತುಂಬಾ ಸಹಾನುಭೂತಿಯಿಂದ ಆಕೆಯ ದುಃಖತುಂಬಿದ ಕಥೆಯನ್ನು ಕೇಳಿದರು. ಬಳಿಕ ಅವರು ಭಗವಾನ್ ಶಂಕರ, ಇಂದ್ರಾದಿದೇವತೆಗಳು, ಗೋರೂಪದಲ್ಲಿದ್ದ ಭೂದೇವಿ ಇವರನ್ನೆಲ್ಲ ಜೊತೆಗೆ ಸೇರಿಸಿಕೊಂಡು ಕ್ಷೀರಸಾಗರದ ತಡಿಗೆ ಹೋದರು. ॥19॥
(ಶ್ಲೋಕ-20)
ಮೂಲಮ್
ತತ್ರ ಗತ್ವಾ ಜಗನ್ನಾಥಂ ದೇವದೇವಂ ವೃಷಾಕಪಿಮ್ ।
ಪುರುಷಂ ಪುರುಷಸೂಕ್ತೇನ ಉಪತಸ್ಥೇ ಸಮಾಹಿತಃ ॥
ಅನುವಾದ
ಚತುರ್ಮುಖ ಬ್ರಹ್ಮದೇವರು ದೇವತೆಗಳೊಡನೆ ಕ್ಷೀರಸಮುದ್ರದ ತೀರಕ್ಕೆ ಹೋಗಿ ಸಮಸ್ತ ಜಗತ್ತಿಗೆ ಸ್ವಾಮಿಯಾದ, ದೇವದೇವನಾದ, ವೃಷಾಕಪಿಯಾದ, ಪರಮಪುರುಷನಾದ ಶ್ರೀಮನ್ನಾರಾಯಣನನ್ನು ಏಕಾಗ್ರಚಿತ್ತನಾಗಿ ಪುರುಷಸೂಕ್ತ ಮಂತ್ರಗಳಿಂದ ಸ್ತೋತ್ರ ಮಾಡಿದರು. ಸ್ತುತಿಸುತ್ತಿರುವಂತೆಯೇ, ಬ್ರಹ್ಮದೇವರು ಸಮಾಧಿಸ್ಥರಾದರು. ॥20॥
(ಶ್ಲೋಕ-21)
ಮೂಲಮ್
ಗಿರಂ ಸಮಾಧೌ ಗಗನೇ ಸಮೀರಿತಾಂ
ನಿಶಮ್ಯ ವೇಧಾಸಿದಶಾನುವಾಚ ಹ ।
ಗಾಂ ಪೌರುಷೀಂ ಮೇ ಶೃಣುತಾಮರಾಃ ಪುನ-
ರ್ವಿಧೀಯತಾಮಾಶು ತಥೈವ ಮಾ ಚಿರಮ್ ॥
ಅನುವಾದ
ಅವರು ಸಮಾಧಿಸ್ಥಿತಿಯಲ್ಲೇ ಆಕಾಶದಲ್ಲಿ ಸುಸ್ಪಷ್ಟವಾಗಿ ಕೇಳಿಬಂದ ದಿವ್ಯವಾಣಿಯನ್ನು ಆಲಿಸಿ, ದೇವತೆಗಳಿಗೆ ಇಂತೆಂದರು ದೇವತೆಗಳಿರಾ! ನಾನು ಭಗವಂತನ ವಾಣಿಯನ್ನು ಕೇಳಿದೆನು. ನೀವೆಲ್ಲರೂ ನನ್ನಿಂದ ಕೇಳಿ ಅದರಂತೆ ನಡೆಯಿರಿ. ವಿಳಂಬ ಮಾಡದೆ ಕಾರ್ಯಮಾಡಿರಿ. ॥21॥
(ಶ್ಲೋಕ-22)
ಮೂಲಮ್
ಪುರೈವ ಪುಂಸಾವಧೃತೋ ಧರಾಜ್ವರೋ
ಭವದ್ಭಿರಂಶೈರ್ಯದುಷೂಪಜನ್ಯತಾಮ್ ।
ಸ ಯಾವದುರ್ವ್ಯಾ ಭರಮೀಶ್ವರೇಶ್ವರಃ
ಸ್ವಕಾಲಶಕ್ತ್ಯಾ ಕ್ಷಪಯಂಶ್ಚರೇದ್ಭುವಿ ॥
ಅನುವಾದ
ಭೂದೇವಿಗೆ ಒದಗಿದ ಕಷ್ಟವು ಈ ಹಿಂದೆಯೇ ಪರಮ ಪುರುಷನಿಗೆ ತಿಳಿದಿದೆ. ಅವನು ಈಶ್ವರರಿಗೂ ಈಶ್ವರನಾಗಿರುವನು. ತನ್ನ ಕಾಲಶಕ್ತಿಯ ಮೂಲಕ ಅವತರಿಸಿ ಭೂಭಾರವನ್ನು ಹರಿಸುತ್ತಾ ಪೃಥಿವಿಯಲ್ಲಿ ಲೀಲೆಗಳನ್ನು ನಡೆಸುವಾಗ ನೀವುಗಳೂ ಕೂಡ ತಮ್ಮ-ತಮ್ಮ ಅಂಶಗಳೊಡನೆ ಯದುಕುಲದಲ್ಲಿ ಹುಟ್ಟಿ ಅವನ ಲೀಲೆಯಲ್ಲಿ ಸಹಯೋಗಿಗಳಾಗಿರಿ. ॥22॥
(ಶ್ಲೋಕ-23)
ಮೂಲಮ್
ವಸುದೇವಗೃಹೇ ಸಾಕ್ಷಾದ್ಭಗವಾನ್ಪುರುಷಃ ಪರಃ ।
ಜನಿಷ್ಯತೇ ತತ್ಪ್ರಿಯಾರ್ಥಂ ಸಂಭವಂತು ಸುರಸಿಯಃ ॥
ಅನುವಾದ
ವಸುದೇವನ ಮನೆಯಲ್ಲಿ ಸಾಕ್ಷಾತ್ ಪರಮಪುರುಷನಾದ ಶ್ರೀಹರಿಯು ಪ್ರಕಟಗೊಳ್ಳುವನು. ಅವನಿಗೆ ಪ್ರಿಯವನ್ನುಂಟುಮಾಡುವ ಸಲುವಾಗಿ ದೇವತಾ ಸ್ತ್ರೀಯರೂ ಯದುವಂಶದಲ್ಲಿ ಅವತರಿಸಲಿ. ॥23॥
(ಶ್ಲೋಕ-24)
ಮೂಲಮ್
ವಾಸುದೇವಕಲಾನಂತಃ ಸಹಸ್ರವದನಃ ಸ್ವರಾಟ್ ।
ಅಗ್ರತೋ ಭವಿತಾ ದೇವೋ ಹರೇಃ ಪ್ರಿಯಚಿಕೀರ್ಷಯಾ ॥
ಅನುವಾದ
ಅನಂತನಾದ ವಾಸುದೇವನ ಕಲೆಯಿಂದ ಪ್ರಾದುರ್ಭೂತನಾಗಿ ಅನಂತನೇ ಆಗಿರುವ, ಸಹಸ್ರಮುಖನಾದ, ಸ್ವಯಂಪ್ರಕಾಶನಾದ ಶೇಷನು ಶ್ರೀಹರಿಗೆ ಪ್ರಿಯವನ್ನುಂಟು ಮಾಡಲು ಯದುವಂಶದಲ್ಲಿ ಶ್ರೀಹರಿಯ ಅಗ್ರಜನಾಗಿ ಅವತರಿಸುವನು. ॥24॥
(ಶ್ಲೋಕ-25)
ಮೂಲಮ್
ವಿಷ್ಣೋರ್ಮಾಯಾ ಭಗವತೀ ಯಯಾ ಸಮ್ಮೋಹಿತಂ ಜಗತ್ ।
ಆದಿಷ್ಟಾ ಪ್ರಭುಣಾಂಶೇನ ಕಾರ್ಯಾರ್ಥೇ ಸಂಭವಿಷ್ಯತಿ ॥
ಅನುವಾದ
ಜಗತ್ತನ್ನೇ ವಿಮೋಹಗೊಳಿಸುವ ಭಗವತಿ ವಿಷ್ಣುಮಾಯೆಯೂ ಪ್ರಭುವಿನಿಂದ ಆಜ್ಞಪ್ತಳಾಗಿ ಅವನ ಕಾರ್ಯಾರ್ಥವಾಗಿ ಅವನ ಅಂಶರೂಪದಿಂದಲೇ ಭುವಿಯಲ್ಲಿ ಅವತರಿಸುವಳು.॥25॥
(ಶ್ಲೋಕ-26)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯಾದಿಶ್ಯಾಮರಗಣಾನ್ಪ್ರಜಾಪತಿಪತಿರ್ವಿಭುಃ ।
ಆಶ್ವಾಸ್ಯ ಚ ಮಹೀಂ ಗೀರ್ಭಿಃ ಸ್ವಧಾಮ ಪರಮಂ ಯಯೌ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಪ್ರಜಾಪತಿಗಳಿಗೆ ಸ್ವಾಮಿಯಾದ ಬ್ರಹ್ಮದೇವರು ದೇವತೆಗಳಿಗೆ ಹೀಗೆ ಆದೇಶವನ್ನು ನೀಡಿ, ಭೂದೇವಿಯನ್ನು ಸಾಂತ್ವನಗೊಳಿಸಿ ಶ್ರೇಷ್ಠವಾದ ತಮ್ಮ ಸತ್ಯಲೋಕಕ್ಕೆ ಹೊರಟು ಹೋದರು. ॥26॥
(ಶ್ಲೋಕ-27)
ಮೂಲಮ್
ಶೂರಸೇನೋ ಯದುಪತಿರ್ಮಥುರಾಮಾವಸನ್ಪುರೀಮ್ ।
ಮಾಥುರಾನ್ ಶೂರಸೇನಾಂಶ್ಚ ವಿಷಯಾನ್ಬುಭುಜೇ ಪುರಾ ॥
ಅನುವಾದ
ಹಿಂದೆ ಯದುವಂಶದಲ್ಲಿ ಶೂರಸೇನನೆಂಬ ರಾಜನಿದ್ದನು. ಅವನು ಮಥುರಾ ಪಟ್ಟಣದಲ್ಲಿದ್ದು ಮಥುರಾ ಮಂಡಲವನ್ನೂ, ಶೂರಸೇನ ಮಂಡಲವನ್ನೂ ಆಳುತ್ತಿದ್ದನು. ॥27॥
(ಶ್ಲೋಕ-28)
ಮೂಲಮ್
ರಾಜಧಾನೀ ತತಃ ಸಾಭೂತ್ಸರ್ವಯಾದವಭೂಭುಜಾಮ್ ।
ಮಥುರಾ ಭಗವಾನ್ಯತ್ರ ನಿತ್ಯಂ ಸಂನಿಹಿತೋ ಹರಿಃ ॥
ಅನುವಾದ
ನಿತ್ಯನಿರಂತರ ಭಗವಾನ್ ಶ್ರೀಹರಿಯ ಸಾನ್ನಿಧ್ಯವನ್ನು ಹೊಂದಿದ್ದ ಆ ಮಥುರಾಪಟ್ಟಣವೇ ಸಮಸ್ತ ಯದುವಂಶೀಯ ರಾಜರಿಗೂ ರಾಜಧಾನಿಯಾಗಿತ್ತು. ॥28॥
(ಶ್ಲೋಕ-29)
ಮೂಲಮ್
ತಸ್ಯಾಂ ತು ಕರ್ಹಿಚಿಚ್ಛೌರಿರ್ವಸುದೇವಃ ಕೃತೋದ್ವಹಃ ।
ದೇವಕ್ಯಾ ಸೂರ್ಯಯಾ ಸಾರ್ಧಂ ಪ್ರಯಾಣೇ ರಥಮಾರುಹತ್ ॥
ಅನುವಾದ
ಒಮ್ಮೆ ಮಥುರೆಯಲ್ಲಿ ಶೂರನ ಪುತ್ರನಾದ ವಸುದೇವನು ವಿವಾಹ ಮಾಡಿಕೊಂಡು ನೂತನ ವಧುವಾದ ದೇವಕಿಯೊಡನೆ ಮನೆಗೆ ಹೋಗಲು ರಥಾರೂಢನಾದನು. ॥29॥
(ಶ್ಲೋಕ-30)
ಮೂಲಮ್
ಉಗ್ರಸೇನಸುತಃ ಕಂಸಃ ಸ್ವಸುಃ ಪ್ರಿಯಚಿಕೀರ್ಷಯಾ ।
ರಶ್ಮೀನ್ಹಯಾನಾಂ ಜಗ್ರಾಹ ರೌಕ್ಮೈ ರಥಶತೈರ್ವೃತಃ ॥
ಅನುವಾದ
ಉಗ್ರಸೇನನ ಮಗನಾದ ಕಂಸನು ತನ್ನ ತಂಗಿಯಾದ ದೇವಕಿಗೆ ಸಂತೋಷವನ್ನುಂಟುಮಾಡಲು ಅವರ ರಥದ ವಾಘೆಯನ್ನು ತಾನೇ ಹಿಡಿದುಕೊಂಡು ರಥವನ್ನು ನಡೆಸತೊಡಗಿದನು. ಆ ದಿವ್ಯರಥವು ನೂರಾರು ಸುವರ್ಣಮಯವಾದ ರಥಗಳಿಂದ ಸಮಾವೃತವಾಗಿತ್ತು. ॥30॥
(ಶ್ಲೋಕ-31)
ಮೂಲಮ್
ಚತುಃಶತಂ ಪಾರಿಬರ್ಹಂ ಗಜಾನಾಂ ಹೇಮಮಾಲಿನಾಮ್ ।
ಅಶ್ವಾನಾಮಯುತಂ ಸಾರ್ಧಂ ರಥಾನಾಂ ಚ ತ್ರಿಷಟ್ಶತಮ್ ॥
(ಶ್ಲೋಕ-32)
ಮೂಲಮ್
ದಾಸೀನಾಂ ಸುಕುಮಾರೀಣಾಂ ದ್ವೇ ಶತೇ ಸಮಲಂಕೃತೇ ।
ದುಹಿತ್ರೇ ದೇವಕಃ ಪ್ರಾದಾದ್ಯಾನೇ ದುಹಿತೃವತ್ಸಲಃ ॥
ಅನುವಾದ
ಮಗಳಲ್ಲಿ ವಿಶೇಷವಾದ ಅಕ್ಕರೆಯನ್ನು ಹೊಂದಿದ್ದ ದೇವಕನು ದೇವಕಿಗೆ ಬಳುವಳಿಯಾಗಿ ಚಿನ್ನದ ಹಾರಗಳಿಂದ ಅಲಂಕೃತವಾದ ನಾಲ್ಕುನೂರು ಆನೆಗಳೂ, ಹದಿನೈದು ಸಾವಿರ ಕುದುರೆಗಳೂ, ಹದಿನೆಂಟುನೂರು ರಥಗಳೂ ಹಾಗೂ ಸುಂದರವಾದ ವಸ್ತ್ರಾಭೂಷಣಗಳಿಂದ ಅಲಂಕೃತರಾದ ಇನ್ನೂರು ಸುಂದರ ಸುಕುಮಾರಿ ದಾಸಿಯರನ್ನೂ ಕೊಟ್ಟನು. ॥31-32॥
(ಶ್ಲೋಕ-33)
ಮೂಲಮ್
ಶಂಖತೂರ್ಯಮೃದಂಗಾಶ್ಚ ನೇದುರ್ದುಂದುಭಯಃ ಸಮಮ್ ।
ಪ್ರಯಾಣಪ್ರಕ್ರಮೇ ತಾವದ್ವರವಧ್ವೋಃ ಸುಮಂಗಲಮ್ ॥
ಅನುವಾದ
ಆ ವಧೂವರರ ಪ್ರಯಾಣಕಾಲದಲ್ಲಿ ಮಂಗಳಾರ್ಥವಾಗಿ ಶಂಖ, ಭೇರಿ, ಮೃದಂಗ, ದುಂದುಭಿಗಳು ಏಕಕಾಲದಲ್ಲಿ ಮೊಳಗಿದವು. ॥33॥
(ಶ್ಲೋಕ-34)
ಮೂಲಮ್
ಪಥಿ ಪ್ರಗ್ರಹಿಣಂ ಕಂಸಮಾಭಾಷ್ಯಾಹಾಶರೀರವಾಕ್ ।
ಅಸ್ಯಾಸ್ತ್ವಾಮಷ್ಟಮೋ ಗರ್ಭೋ ಹಂತಾ ಯಾಂ ವಹಸೇಬುಧ ॥
ಅನುವಾದ
ಹೀಗೆ ಬಾಜಾಬಜಂತ್ರಿಗಳೊಂದಿಗೆ ಸಂಭ್ರಮದಿಂದ ಕಂಸನು ರಥವನ್ನು ನಡೆಸುತ್ತಿರುವಾಗ ಅವನನ್ನು ಸಂಬೋಧಿಸಿ ಆಕಾಶವಾಣಿಯೊಂದು ಇಂತು ನುಡಿಯಿತು ‘‘ಎಲೈ ಮೂರ್ಖನೇ! ಈಗ ನೀನು ಸಂಭ್ರಮದಿಂದ ಕರೆದೊಯ್ಯುತ್ತಿರುವ ನಿನ್ನ ಈ ತಂಗಿಯ ಎಂಟನೆಯ ಗರ್ಭದಲ್ಲಿ ಹುಟ್ಟುವ ಶಿಶುವು ನಿನಗೆ ಮೃತ್ಯುವಾಗಲಿದೆ.’’ ॥34॥
(ಶ್ಲೋಕ-35)
ಮೂಲಮ್
ಇತ್ಯುಕ್ತಃ ಸ ಖಲಃ ಪಾಪೋ ಭೋಜಾನಾಂ ಕುಲಪಾಂಸನಃ ।
ಭಗಿನೀಂ ಹಂತುಮಾರಬ್ಧಃ ಖಡ್ಗಪಾಣಿಃ ಕಚೇಗ್ರಹೀತ್ ॥
ಅನುವಾದ
ಕಂಸನು ಮಹಾಪಾಪಿಯಾಗಿದ್ದನು. ಅವನ ದುಷ್ಟತನಕ್ಕೆ ಎಲ್ಲೆಯೇ ಇರಲಿಲ್ಲ. ಅವನು ಭೋಜವಂಶಕ್ಕೆ ಕಲಂಕಪ್ರಾಯನಾಗಿದ್ದನು. ಆಕಾಶವಾಣಿಯನ್ನೂ ಕೇಳುತ್ತಲೇ ಖಡ್ಗವನ್ನೆತ್ತಿಕೊಂಡು ತಂಗಿಯ ಮುಡಿಯನ್ನು ಹಿಡಿದು ಅವಳನ್ನು ಕೊಲ್ಲಲು ಸಿದ್ಧನಾದನು.॥35॥
(ಶ್ಲೋಕ-36)
ಮೂಲಮ್
ತಂ ಜುಗುಪ್ಸಿತಕರ್ಮಾಣಂ ನೃಶಂಸಂ ನಿರಪತ್ರಪಮ್ ।
ವಸುದೇವೋ ಮಹಾಭಾಗ ಉವಾಚ ಪರಿಸಾನ್ತ್ವಯನ್ ॥
ಅನುವಾದ
ಅವನು ಅತ್ಯಂತ ಕ್ರೂರನಾಗಿದ್ದು, ಪಾಪಕರ್ಮಗಳನ್ನು ಮಾಡಲು ನಿರ್ಲಜ್ಜನೂ ಆಗಿದ್ದನು. ಅವನ ಈ ಕೃತ್ಯವನ್ನು ನೋಡಿ ಮಹಾನುಭಾವನಾದ ವಸುದೇವನು ಅವನನ್ನು ಸಮಾಧಾನಗೊಳಿಸುತ್ತಾ ಇಂತೆಂದನು. ॥36॥
(ಶ್ಲೋಕ-37)
ಮೂಲಮ್ (ವಾಚನಮ್)
ವಸುದೇವ ಉವಾಚ
ಮೂಲಮ್
ಶ್ಲಾಘನೀಯಗುಣಃ ಶೂರೈರ್ಭವಾನ್ಭೋಜಯಶಸ್ಕರಃ ।
ಸ ಕಥಂ ಭಗಿನೀಂ ಹನ್ಯಾತ್ ಸಿಯಮುದ್ವಾಹಪರ್ವಣಿ ॥
ಅನುವಾದ
ವಸುದೇವನು ಹೇಳಿದನು ರಾಜಕುಮಾರ! ನಿನ್ನ ಗುಣಗಳನ್ನು ಶೂರರು ಹೊಗಳುತ್ತಾರೆ. ನೀನು ಭೋಜವಂಶಕ್ಕೆ ಯಶೋದಾಯಕನಾಗಿರುವೆ. ಅಂತಹ ನೀನು ಒಬ್ಬ ಸ್ತ್ರೀಯನ್ನು, ಅದರಲ್ಲಿಯೂ ಸಾಕ್ಷಾತ್ ತಂಗಿಯನ್ನು, ಇನ್ನು ಮದುವಣಗಿತ್ತಿಯನ್ನು ವಿವಾಹದ ಶುಭಸಮಯದಲ್ಲಿ ಹೇಗೆ ತಾನೇ ಕೊಲ್ಲಬಲ್ಲೆ? ॥37॥
(ಶ್ಲೋಕ-38)
ಮೂಲಮ್
ಮೃತ್ಯುರ್ಜನ್ಮವತಾಂ ವೀರ ದೇಹೇನ ಸಹ ಜಾಯತೇ ।
ಅದ್ಯ ವಾಬ್ದಶತಾಂತೇ ವಾ ಮೃತ್ಯುರ್ವೈ ಪ್ರಾಣಿನಾಂ ಧ್ರುವಃ ॥
ಅನುವಾದ
ವೀರನೇ! ಈ ಲೋಕದಲ್ಲಿ ಜನ್ಮವನ್ನು ತಾಳಿದವರ ಶರೀರದೊಡನೆಯೇ ಮೃತ್ಯುವು ಹುಟ್ಟಿಕೊಳ್ಳುತ್ತದೆ. ಮೃತ್ಯುವು ಇಂದು ಬರಬಹುದು, ಇಲ್ಲವೇ ನೂರುವರ್ಷದ ಮೇಲೆ ಬರಬಹುದು. ಆದರೆ ಹುಟ್ಟಿದ ಪ್ರಾಣಿಗಳಿಗೆ ಮರಣವೆಂಬುದು ಶತಃಸಿದ್ಧ.॥38॥
(ಶ್ಲೋಕ-39)
ಮೂಲಮ್
ದೇಹೇ ಪಂಚತ್ವಮಾಪನ್ನೇ ದೇಹೀ ಕರ್ಮಾನುಗೋವಶಃ ।
ದೇಹಾಂತರಮನುಪ್ರಾಪ್ಯ ಪ್ರಾಕ್ತನಂ ತ್ಯಜತೇ ವಪುಃ ॥
ಅನುವಾದ
ದೇಹವು ಪಂಚಭೂತಗಳಲ್ಲಿ ಲೀನವಾಗಿ ಹೋದಾಗ (ಸತ್ತಾಗ) ಜೀವನು ಅಸ್ವತಂತ್ರನಾಗಿ ತನ್ನ ಕರ್ಮಕ್ಕೆ ಅನುಸಾರ ಬೇರೆ ಶರೀರವನ್ನು ಪಡೆದು ತನ್ನ ಮೊದಲ ಶರೀರವನ್ನು ಬಿಟ್ಟುಬಿಡುತ್ತಾನೆ. ॥39॥
(ಶ್ಲೋಕ-40)
ಮೂಲಮ್
ವ್ರಜಂಸ್ತಿಷ್ಠನ್ಪದೈಕೇನ ಯಥೈವೈಕೇನ ಗಚ್ಛತಿ ।
ಯಥಾ ತೃಣಜಲೂಕೈವಂ ದೇಹೀ ಕರ್ಮಗತಿಂ ಗತಃ ॥
ಅನುವಾದ
ಮನುಷ್ಯನು ನಡೆಯುವಾಗ ಒಂದು ಕಾಲನ್ನು ಊರಿ ಇನ್ನೊಂದನ್ನು ಮೇಲೆತ್ತುವನು ಹಾಗೂ ಜಿಗಣೆಯು ಮುಂದಿನ ಹುಲ್ಲುಕಡ್ಡಿಯನ್ನು ಹಿಡಿದ ನಂತರ ಹಿಂದಿನ ಹುಲ್ಲುಕಡ್ಡಿಯನ್ನು ಬಿಡುವಂತೆಯೇ ಜೀವನು ತನ್ನ ಕರ್ಮಕ್ಕನುಸಾರವಾಗಿ ಯಾವುದೋ ಶರೀರವನ್ನು ಪಡೆದ ನಂತರವೇ ಈ ಶರೀರವನ್ನು ಬಿಡುತ್ತಾನೆ. ॥40॥
(ಶ್ಲೋಕ-41)
ಮೂಲಮ್
ಸ್ವಪ್ನೇ ಯಥಾ ಪಶ್ಯತಿ ದೇಹಮೀದೃಶಂ
ಮನೋರಥೇನಾಭಿನಿವಿಷ್ಟಚೇತನಃ ।
ದೃಷ್ಟಶ್ರುತಾಭ್ಯಾಂ ಮನಸಾನುಚಿಂತಯನ್
ಪ್ರಪದ್ಯತೇ ತತ್ಕಿಮಪಿ ಹ್ಯಪಸ್ಮೃತಿಃ ॥
ಅನುವಾದ
ಒಬ್ಬ ಮನುಷ್ಯನು ಜಾಗ್ರತಾವಸ್ಥೆಯಲ್ಲಿ ರಾಜನ ಐಶ್ವರ್ಯವನ್ನು ನೋಡಿ, ಇಂದ್ರಾದಿಗಳ ಐಶ್ವರ್ಯವನ್ನು ಕೇಳಿ, ಅದಕ್ಕೆ ಆಸೆಪಡುತ್ತಾ ಅದನ್ನೇ ಚಿಂತಿಸುತ್ತಾ-ಚಿಂತಿಸುತ್ತಾ, ಮೈಮರೆತು ಬಿಡುತ್ತಾನೆ. ಸ್ವಪ್ನದಲ್ಲಿ ತನ್ನನ್ನು ರಾಜನೆಂದೋ, ಇಂದ್ರನೆಂದೋ ಅನುಭವ ಪಡೆಯುತ್ತಾನೆ. ಜೊತೆಗೆ ತನ್ನ ದಾರಿದ್ರ್ಯದ ಶರೀರವನ್ನು ಮರೆತುಬಿಡುತ್ತಾನೆ. ಕೆಲವೊಮ್ಮೆ ಎಚ್ಚರವಾಗಿರುವಾಗಲೇ ಮನೋರಾಜ್ಯವನ್ನು ಕಟ್ಟಿಕೊಂಡು ತನ್ಮಯನಾಗುತ್ತಾನೆ. ಅವನಿಗೆ ಸ್ಥೂಲಶರೀರದ ಎಚ್ಚರವೂ ಇರುವುದಿಲ್ಲ. ಹೀಗೆಯೇ ಜೀವನು ಕರ್ಮಕೃತ ಕಾಮನೆ ಮತ್ತು ಕಾಮನಾಕೃತ ಕರ್ಮಕ್ಕೆ ವಶನಾಗಿ ಇನ್ನೊಂದು ಶರೀರವನ್ನು ಹೊಂದುತ್ತಾನೆ ಹಾಗೂ ತನ್ನ ಮೊದಲಿನ ಶರೀರವನ್ನು ಮರೆತುಬಿಡುತ್ತಾನೆ.॥41॥
(ಶ್ಲೋಕ-42)
ಮೂಲಮ್
ಯತೋ ಯತೋ ಧಾವತಿ ದೈವಚೋದಿತಂ
ಮನೋ ವಿಕಾರಾತ್ಮಕಮಾಪ ಪಂಚಸು ।
ಗುಣೇಷು ಮಾಯಾರಚಿತೇಷು ದೇಹ್ಯಸೌ
ಪ್ರಪದ್ಯಮಾನಃ ಸಹ ತೇನ ಜಾಯತೇ ॥
ಅನುವಾದ
ಜೀವಿಯ ಮನಸ್ಸು ಅನೇಕ ವಿಕಾರಗಳ ಪುಂಜವಾಗಿದೆ. ದೇಹಾಂತ್ಯದ ಸಮಯದಲ್ಲಿ ಅವನು ಅನೇಕ ಜನ್ಮಗಳ ಸಂಚಿತ ಮತ್ತು ಪ್ರಾರಬ್ಧ ಕರ್ಮಗಳ ವಾಸನೆಗಳಿಗೆ ಅಧೀನನಾಗಿ, ಮಾಯೆಯಿಂದ ರಚಿತವಾದ ಅನೇಕ ಪಾಂಚಭೌತಿಕ ದೇಹಗಳಲ್ಲಿನ ಯಾವ ಶರೀರವನ್ನು ಚಿಂತಿಸುವನೋ, ನಾನು ಇದೇ ಆಗಿದ್ದೇನೆ ಎಂದು ತಿಳಿದುಕೊಳ್ಳುವನೋ, ಅದೇ ಶರೀರವನ್ನು ಪಡೆದು ಅವನು ಹುಟ್ಟಬೇಕಾಗುತ್ತದೆ. ॥42॥
(ಶ್ಲೋಕ-43)
ಮೂಲಮ್
ಜ್ಯೋತಿರ್ಯಥೈವೋದಕ ಪಾರ್ಥಿವೇಷ್ವದಃ
ಸಮೀರವೇಗಾನುಗತಂ ವಿಭಾವ್ಯತೇ ।
ಏವಂ ಸ್ವಮಾಯಾರಚಿತೇಷ್ವಸೌ ಪುಮಾನ್
ಗುಣೇಷು ರಾಗಾನುಗತೋ ವಿಮುಹ್ಯತಿ ॥
ಅನುವಾದ
ಸೂರ್ಯ-ಚಂದ್ರರೇ ಮುಂತಾದ ಜ್ಯೋತಿಗಳು ಗಡಿಗೆಯಲ್ಲಿರುವ ನೀರಿನಲ್ಲಿ ಅಥವಾ ಎಣ್ಣೆಯಲ್ಲಿ ಪ್ರತಿಬಿಂಬಿಸುತ್ತವೆ. ಗಾಳಿಯಿಂದ ನೀರು-ಎಣ್ಣೆ ಅಲುಗಾಡಿದರೆ ಅವರೂ ಅಲುಗಾಡುವಂತೆ ಕಾಣುತ್ತಾರೆ. ಹಾಗೆಯೇ ಜೀವನು ತನ್ನ ಸ್ವರೂಪದ ಅಜ್ಞಾನದಿಂದ ರಚಿತವಾದ ಶರೀರಗಳಲ್ಲಿ ಅನುರಾಗವನ್ನು ಹೊಂದಿ ಅವನ್ನೇ ತಾನು ಎಂದು ತಿಳಿದುಬಿಡುತ್ತಾನೆ. ಮೋಹವಶದಿಂದ ಅವುಗಳ ಬಂದು-ಹೋಗುವಿಕೆಯನ್ನೇ ತನ್ನ ಆವಾಗಮನವೆಂದು ತಿಳಿಯತೊಡಗುತ್ತಾನೆ. ॥43॥
(ಶ್ಲೋಕ-44)
ಮೂಲಮ್
ತಸ್ಮಾನ್ನ ಕಸ್ಯಚಿದ್ದ್ರೋಹಮಾಚರೇತ್ಸ ತಥಾವಿಧಃ ।
ಆತ್ಮನಃ ಕ್ಷೇಮಮನ್ವಿಚ್ಛನ್ ದ್ರೋಗ್ಧುರ್ವೈ ಪರತೋ ಭಯಮ್ ॥
ಅನುವಾದ
ಆದ್ದರಿಂದ ತನ್ನ ಶ್ರೇಯಸ್ಸನ್ನು ಬಯಸುವವನು ಯಾರಿಗೂ ದ್ರೋಹವನ್ನೆಸಗಬಾರದು. ಏಕೆಂದರೆ, ಜೀವನು ಕರ್ಮಕ್ಕೆ ಅಧೀನನಾದವನು. ದ್ರೋಹವೆಸಗಿದವನಿಗೆ ಈ ಲೋಕದಲ್ಲಿ ಶತ್ರುವಿನಿಂದಲೂ, ಪರಲೋಕದಲ್ಲಿ ಯಮಧರ್ಮನಿಂದಲೂ ಭಯಪಡಬೇಕಾಗುತ್ತದೆ. ॥44॥
(ಶ್ಲೋಕ-45)
ಮೂಲಮ್
ಏಷಾ ತವಾನುಜಾ ಬಾಲಾ ಕೃಪಣಾ ಪುತ್ರಿಕೋಪಮಾ ।
ಹಂತುಂ ನಾರ್ಹಸಿ ಕಲ್ಯಾಣೀಮಿಮಾಂ ತ್ವಂ ದೀನವತ್ಸಲಃ ॥
ಅನುವಾದ
ಕಂಸನೇ! ನಿನ್ನ ತಂಗಿಯಾದ ಇವಳು ಇನ್ನು ಬಾಲಕಿ, ದೀನಳಾಗಿರುವಳು. ನಿನ್ನ ಮಗಳಿಗೆ ಸಮಾನಳು. ವೈವಾಹಿಕ ಮಂಗಳ ಚಿಹ್ನೆಗಳು ಇನ್ನೂ ಇವಳ ಶರೀರದಲ್ಲಿ ಅಚ್ಚಳಿಯದಂತೆ ಇವೆ. ಇಂತಹ ಸ್ಥಿತಿಯಲ್ಲಿ ನಿನ್ನಂತಹ ದೀನವತ್ಸಲನು ಈ ಬಡಪಾಯಿಯನ್ನು ವಧಿಸುವುದು ಉಚಿತವಲ್ಲ. ॥45॥
(ಶ್ಲೋಕ-46)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ಸ ಸಾಮಭಿರ್ಭೇದೈರ್ಬೋಧ್ಯಮಾನೋಪಿ ದಾರುಣಃ ।
ನ ನ್ಯವರ್ತತ ಕೌರವ್ಯ ಪುರುಷಾದಾನನುವ್ರತಃ ॥
ಅನುವಾದ
ಶ್ರೀಶುಕ ಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಹೀಗೆ ವಸುದೇವನು ಕಂಸನಿಗೆ ಸಾಮ-ದಾನ-ಭೇದೋಪಾಯಗಳಿಂದ ಹಿತವನ್ನು ಬೋಧಿಸಿದರೂ, ದಾರುಣನಾದ, ರಾಕ್ಷಸರ ಅನುಯಾಯಿಯಾದ ಆ ಕಂಸನು ತನ್ನ ನಿಶ್ಚಯದಿಂದ ಹಿಂದೆಗೆಯಲಿಲ್ಲ. ॥46॥
(ಶ್ಲೋಕ-47)
ಮೂಲಮ್
ನಿರ್ಬಂಧಂ ತಸ್ಯ ತಂ ಜ್ಞಾತ್ವಾ ವಿಚಿಂತ್ಯಾನಕದುಂದುಭಿಃ ।
ಪ್ರಾಪ್ತಂ ಕಾಲಂ ಪ್ರತಿವ್ಯೋಢುಮಿದಂ ತತ್ರಾನ್ವಪದ್ಯತ ॥
ಅನುವಾದ
ಆಗ ವಸುದೇವನು ಕಂಸನ ಹಟವನ್ನು ನೋಡಿ, ತತ್ಕಾಲದಲ್ಲಿ ಒದಗಿ ಬಂದಿರುವ ಆಪತ್ತನ್ನು ನಿವಾರಿಸಿಕೊಳ್ಳಲು ಹೀಗೆ ನಿಶ್ಚಯಿಸಿದನು. ॥47॥
(ಶ್ಲೋಕ-48)
ಮೂಲಮ್
ಮೃತ್ಯುರ್ಬುದ್ಧಿಮತಾಪೋಹ್ಯೋ ಯಾವದ್ಬುದ್ಧಿ ಬಲೋದಯಮ್ ।
ಯದ್ಯಸೌ ನ ನಿವರ್ತೇತ ನಾಪರಾಧೋಸ್ತಿ ದೇಹಿನಃ ॥
ಅನುವಾದ
ಲೋಕದಲ್ಲಿ ಬುದ್ಧಿವಂತನಾದವನು ತನ್ನ ಬುದ್ಧಿಶಕ್ತಿ ಇರುವಷ್ಟನ್ನು ಉಪಯೋಗಿಸಿ ಮೃತ್ಯುವನ್ನು ಮುಂದೂಡಲು ಪ್ರಯತ್ನಿಸಬೇಕು. ಪ್ರಯತ್ನಿಸಿದರೂ ನಿವಾರಣೆಯಾಗದಿದ್ದರೆ ಮತ್ತೆ ಪ್ರಯತ್ನಿಸುವವನಲ್ಲಿ ದೋಷವಿರುವುದಿಲ್ಲ. ಕರ್ತವ್ಯಲೋಪವಾಗುವುದಿಲ್ಲ. ॥48॥
(ಶ್ಲೋಕ-49)
ಮೂಲಮ್
ಪ್ರದಾಯ ಮೃತ್ಯವೇ ಪುತ್ರಾನ್ಮೋಚಯೇ ಕೃಪಣಾಮಿಮಾಮ್ ।
ಸುತಾ ಮೇ ಯದಿ ಜಾಯೇರನ್ಮೃತ್ಯುರ್ವಾ ನ ಮ್ರಿಯೇತ ಚೇತ್ ॥
ಅನುವಾದ
ಅದಕ್ಕಾಗಿ ಈ ಮೃತ್ಯುರೂಪೀ ಕಂಸನಿಗೆ ಇವಳಲ್ಲಿ ಹುಟ್ಟುವ ಪುತ್ರರನ್ನು ಕೊಟ್ಟು ಬಿಡುವ ಪ್ರತಿಜ್ಞೆಯನ್ನು ಮಾಡಿ ನಾನು ದೀನಳಾದ ದೇವಕಿಯನ್ನು ಉಳಿಸುವೆನು. ಈಕೆಯಲ್ಲಿ ನನಗೆ ಮಕ್ಕಳಾಗಿಯೂ ಈ ಕಂಸನು ಸಾಯದಿದ್ದರೆ ದೈವೇಚ್ಛೆಯಿದ್ದಂತಾಗಲೀ. ॥49॥
(ಶ್ಲೋಕ-50)
ಮೂಲಮ್
ವಿಪರ್ಯಯೋ ವಾ ಕಿಂ ನ ಸ್ಯಾದ್ಗತಿರ್ಧಾತುರ್ದುರತ್ಯಯಾ ।
ಉಪಸ್ಥಿತೋ ನಿವರ್ತೇತ ನಿವೃತ್ತಃ ಪುನರಾಪತೇತ್ ॥
ಅನುವಾದ
ಈ ವಿಷಯದಲ್ಲಿ ವ್ಯತ್ಯಾಸವಾದರೂ ಏಕಾಗಬಾರದು? ನನ್ನ ಮಗನೇ ಇವನನ್ನು ಕೊಂದುಹಾಕಲೂಬಹುದು. ಏಕೆಂದರೆ, ದೈವಗತಿಯು ದಾಟಲು ಅಸಾಧ್ಯವಾದುದು. ಅದನ್ನು ಮೀರಿ ನಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸನ್ನಿಹಿತವಾದ ಮೃತ್ಯುವೂ ತಪ್ಪಿಹೋಗಬಹುದು; ತಪ್ಪಿಹೋದ ಮೃತ್ಯುವೂ ಪುನಃ ಬಳಿಗೆ ಬರಬಹುದು. ॥50॥
(ಶ್ಲೋಕ-51)
ಮೂಲಮ್
ಅಗ್ನೇರ್ಯಥಾ ದಾರುವಿಯೋಗಯೋಗಯೋ-
ರದೃಷ್ಟತೋನ್ಯನ್ನ ನಿಮಿತ್ತಮಸ್ತಿ ।
ಏವಂ ಹಿ ಜಂತೋರಪಿ ದುರ್ವಿಭಾವ್ಯಃ
ಶರೀರಸಂಯೋಗವಿಯೋಗ ಹೇತುಃ ॥
ಅನುವಾದ
ಕಾಡಿಗೆ ಬೆಂಕಿ ತಗುಲಿದಾಗ ಯಾವ ಕಟ್ಟಿಗೆ ಸುಟ್ಟೀತು, ಯಾವುದು ಸುಡದಿರಬಹುದು! ದೂರದಲ್ಲಿರುವುದು ಸುಟ್ಟು ಹೋಗಿ ಹತ್ತಿರದಲ್ಲಿರುವುದು ಸುಡಲಾರದು. ಇವೆಲ್ಲವೂ ಅದೃಷ್ಟವಲ್ಲದೆ ಬೇರೆ ಯಾವ ಕಾರಣವೂ ಇರುವುದಿಲ್ಲ. ಹಾಗೆಯೇ ಯಾವ ಜೀವಿಯ ಯಾವ ಶರೀರವು ಉಳಿಯುವುದು, ಯಾವ ಕಾರಣದಿಂದ ಯಾವ ಶರೀರ ನಾಶವಾದೀತು ಇದನ್ನು ತಿಳಿಯುವುದು ಬಹಳ ಕಷ್ಟವಾಗಿದೆ. ॥51॥
(ಶ್ಲೋಕ-52)
ಮೂಲಮ್
ಏವಂ ವಿಮೃಶ್ಯ ತಂ ಪಾಪಂ ಯಾವದಾತ್ಮನಿದರ್ಶನಮ್ ।
ಪೂಜಯಾಮಾಸ ವೈ ಶೌರಿರ್ಬಹುಮಾನಪುರಃಸರಮ್ ॥
ಅನುವಾದ
ವಸುದೇವನು ತನ್ನ ಶ್ರೇಷ್ಠವಾದ ಬುದ್ಧಿಯಿಂದ ಹೀಗೆ ನಿಶ್ಚಯಿಸಿ ಬಹುಮಾನ ಪುರಸ್ಸರವಾಗಿ ಕ್ರೂರಿಯಾದ ಕಂಸನನ್ನು ಬಹಳ ಪ್ರಶಂಸೆ ಮಾಡಿದನು. ॥52॥
ಮೂಲಮ್
(ಶ್ಲೋಕ-53)
ಪ್ರಸನ್ನವದನಾಂಭೋಜೋ ನೃಶಂಸಂ ನಿರಪತ್ರಪಮ್ ।
ಮನಸಾ ದೂಯಮಾನೇನ ವಿಹಸನ್ನಿದಮಬ್ರವೀತ್ ॥
ಅನುವಾದ
ಪರೀಕ್ಷಿತನೇ! ಕಂಸನು ಮಹಾಕ್ರೂರಿಯೂ, ನಿರ್ಲಜ್ಜನೂ ಆಗಿದ್ದನು. ಆ ಕಾರಣದಿಂದ ವಸುದೇವನ ಮನಸ್ಸಿನಲ್ಲಿ ಅತೀವ ಪೀಡನೆಯಾಗುತ್ತಿದ್ದರೂ, ಹೊರಗೆ ತೋರಿಸಿಕೊಳ್ಳದೆ ಪ್ರಫುಲ್ಲಿತ ಮುಖಕಮಲದಿಂದ ನಗು-ನಗುತ್ತಾ ಕಂಸನಲ್ಲಿ ಇಂತೆಂದನು ॥53॥
(ಶ್ಲೋಕ-54)
ಮೂಲಮ್ (ವಾಚನಮ್)
ವಸುದೇವ ಉವಾಚ
ಮೂಲಮ್
ನ ಹ್ಯಸ್ಯಾಸ್ತೇ ಭಯಂ ಸೌಮ್ಯ ಯದ್ವಾಗಾಹಾಶರೀರಿಣೀ ।
ಪುತ್ರಾನ್ಸಮರ್ಪಯಿಷ್ಯೇಸ್ಯಾ ಯತಸ್ತೇ ಭಯಮುತ್ಥಿತಮ್ ॥
ಅನುವಾದ
ವಸುದೇವನು ಹೇಳಿದನು — ಸೌಮ್ಯನೇ! ಆಕಾಶವಾಣಿಯು ನುಡಿದಂತೆ ನಿನಗೆ ದೇವಕಿಯಿಂದ ಯಾವ ಭಯವೂ ಇಲ್ಲ. ಭಯವಿರುವುದು ಅವಳ ಪುತ್ರರಿಂದ. ಆದ್ದರಿಂದ ನಾನು ಆಣೆಯಿಟ್ಟು ಹೇಳುತ್ತೇನೆ ‘ಇವಳಲ್ಲಿ ಹುಟ್ಟುವ ಮಕ್ಕಳನ್ನು ನಿನಗೆ ಒಪ್ಪಿಸಿಬಿಡುತ್ತೇನೆ.’ ॥54॥
(ಶ್ಲೋಕ-55)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಸ್ವಸುರ್ವಧಾನ್ನಿವವೃತೇ ಕಂಸಸ್ತದ್ವಾಕ್ಯಸಾರವಿತ್ ।
ವಸುದೇವೋಪಿ ತಂ ಪ್ರೀತಃ ಪ್ರಶಸ್ಯ ಪ್ರಾವಿಶದ್ಗೃಹಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ವಸುದೇವನು ಸುಳ್ಳುಹೇಳುತ್ತಿಲ್ಲವೆಂದೂ, ಅವನ ಮಾತು ಯುಕ್ತಿ-ಯುಕ್ತವಾಗಿದೆ ಎಂದು ಭಾವಿಸಿ ಕಂಸನು ತಂಗಿಯಾದ ದೇವಕಿಯನ್ನು ಕೊಲ್ಲದಿರಲು ನಿಶ್ಚಯಿಸಿದನು. ಇದರಿಂದ ಸಂತೋಷಗೊಂಡ ವಸುದೇವನು ಅವನನ್ನು ಹೊಗಳುತ್ತಾ ಪತ್ನಿಯೊಡನೆ ಮನೆಗೆ ಹೊರಟು ಹೋದನು. ॥55॥
(ಶ್ಲೋಕ-56)
ಮೂಲಮ್
ಅಥ ಕಾಲ ಉಪಾವೃತ್ತೇ ದೇವಕೀ ಸರ್ವದೇವತಾ ।
ಪುತ್ರಾನ್ಪ್ರಸುಷುವೇ ಚಾಷ್ಟೌ ಕನ್ಯಾಂ ಚೈವಾನುವತ್ಸರಮ್ ॥
ಅನುವಾದ
ದೇವಕಿಯು ಸಾಧ್ವಿಶಿರೋಮಣಿಯಾಗಿದ್ದಳು. ಎಲ್ಲ ದೇವತೆಗಳು ಅವಳಲ್ಲಿ ವಾಸಿಸುತ್ತಿದ್ದರು. ಕಾಲವು ಕಳೆದಂತೆ ವರ್ಷಕ್ಕೊಂದರಂತೆ ದೇವಕಿಯ ಗರ್ಭದಿಂದ ಎಂಟು ಪುತ್ರರು ಓರ್ವ ಪುತ್ರಿಯೂ ಜನಿಸಿದರು. ॥56॥
(ಶ್ಲೋಕ-57)
ಮೂಲಮ್
ಕೀರ್ತಿಮಂತಂ ಪ್ರಥಮಜಂ ಕಂಸಾಯಾನಕದುಂದುಭಿಃ ।
ಅರ್ಪಯಾಮಾಸ ಕೃಚ್ಛ್ರೇಣ ಸೋನೃತಾದತಿವಿಹ್ವಲಃ ॥
ಅನುವಾದ
ಮೊದಲನೆಯ ಪುತ್ರನಾದ ಕೀರ್ತಿಮಂತನನ್ನು ವಸುದೇವನು ತಂದು ಕಂಸನಿಗೆ ಒಪ್ಪಿಸಿದನು. ವಸುದೇವನಿಗೆ ಮಗುವನ್ನು ಒಪ್ಪಿಸುವುದಕ್ಕಿಂತಲೂ, ಸುಳ್ಳುಗಾರನಾಗುವುದು ಅತಿಕಷ್ಟಕರವಾಗಿತ್ತು. ॥57॥
(ಶ್ಲೋಕ-58)
ಮೂಲಮ್
ಕಿಂ ದುಃಸಹಂ ನು ಸಾಧೂನಾಂ ವಿದುಷಾಂ ಕಿಮಪೇಕ್ಷಿತಮ್ ।
ಕಿಮಕಾರ್ಯಂ ಕದರ್ಯಾಣಾಂ ದುಸ್ತ್ಯಜಂ ಕಿಂ ಧೃತಾತ್ಮನಾಮ್ ॥
ಅನುವಾದ
ಪರೀಕ್ಷಿತನೇ! ಸತ್ಯಸಂಧರಾದ ಸತ್ಪುರುಷರು ದೊಡ್ಡ-ದೊಡ್ಡ ಕಷ್ಟಗಳನ್ನೂ ಸಹಿಸಿಕೊಳ್ಳುವರು. ಜ್ಞಾನಿಗಳಿಗಾದರೋ ಯಾವುದರ ಅಪೇಕ್ಷೆಯೂ ಇರುವುದಿಲ್ಲ. ನೀಚ-ಪುರುಷರು ನೀಚಾತಿನೀಚ ಕೆಲಸವನ್ನೂ ಮಾಡಿ ಬಿಡುತ್ತಾರೆ. ಜಿತೇಂದ್ರಿಯರಾದವರು ಭಗವಂತನನ್ನು ಹೃದಯದಲ್ಲಿ ಧರಿಸಿಕೊಂಡಿರುವರು. ಅವರು ಎಲ್ಲವನ್ನೂ ತ್ಯಾಗ ಮಾಡಬಲ್ಲರು. ॥58॥
(ಶ್ಲೋಕ-59)
ಮೂಲಮ್
ದೃಷ್ಟ್ವಾ ಸಮತ್ವಂ ತಚ್ಛೌರೇಃ ಸತ್ಯೇ ಚೈವ ವ್ಯವಸ್ಥಿತಿಮ್ ।
ಕಂಸಸ್ತುಷ್ಟಮನಾ ರಾಜನ್ಪ್ರಹಸನ್ನಿದಮಬ್ರವೀತ್ ॥
ಅನುವಾದ
ವಸುದೇವನಿಗೆ ತನ್ನ ಪುತ್ರನ ಜೀವನ ಮೃತ್ಯುವಿನಲ್ಲಿ ಸಮಭಾವವಿದೆ ಹಾಗೂ ಅವನು ಸತ್ಯನಿಷ್ಠನಾಗಿದ್ದಾನೆ ಎಂಬುದನ್ನು ನೋಡಿ ಕಂಸನು ತುಂಬಾ ಸಂತೋಷಗೊಂಡು ನಗುತ್ತಾ ಶೌರಿಯಲ್ಲಿ ಹೇಳಿದನು ॥59॥
(ಶ್ಲೋಕ-60)
ಮೂಲಮ್
ಪ್ರತಿಯಾತು ಕುಮಾರೋಯಂ ನ ಹ್ಯಸ್ಮಾದಸ್ತಿ ಮೇ ಭಯಮ್ ।
ಅಷ್ಟಮಾದ್ಯುವಯೋರ್ಗರ್ಭಾನ್ಮೃತ್ಯುರ್ಮೇ ವಿಹಿತಃ ಕಿಲ ॥
ಅನುವಾದ
ವಸುದೇವನೇ! ನೀನು ಈ ಹಸುಳೆಯನ್ನು ತೆಗೆದುಕೊಂಡು ಹೋಗು. ಇದರಿಂದ ನನಗೇನೂ ಭಯವಿಲ್ಲ. ಏಕೆಂದರೆ, ‘ಆಕಾಶ ವಾಣಿಯು ನುಡಿದುದು ದೇವಕಿಯ ಎಂಟನೆಯ ಗರ್ಭದಿಂದ ಹುಟ್ಟಿದವನಿಂದ ನಿನ್ನ ಮೃತ್ಯುವಾದೀತು’ ಎಂದಿದೆಯಲ್ಲ. ॥60॥
(ಶ್ಲೋಕ-61)
ಮೂಲಮ್
ತಥೇತಿ ಸುತಮಾದಾಯ ಯಯಾವಾನಕದುಂದುಭಿಃ ।
ನಾಭ್ಯನಂದತ ತದ್ವಾಕ್ಯಮಸತೋವಿಜಿತಾತ್ಮನಃ ॥
ಅನುವಾದ
ಕಂಸನ ಮಾತಿನಂತೆ ವಸುದೇವನು ಶಿಶುವನ್ನು ಎತ್ತಿಕೊಂಡು ಮನೆಗೆ ಮರಳಿದನು. ಆದರೆ ಕಂಸನು ಅತಿದುಷ್ಟನಾಗಿದ್ದು, ಅವನ ಮನಸ್ಸು ಅವನ ಹತೋಟಿಯಲ್ಲಿಲ್ಲ, ಮರುಕ್ಷಣದಲ್ಲೇ ಬದಲಾಗಬಹುದು ಎಂಬುದನ್ನು ವಸುದೇವನು ಬಲ್ಲನು. ಅದಕ್ಕಾಗಿ ಅವನಿಗೆ ಕಂಸನ ಮಾತಿನಲ್ಲಿ ವಿಶ್ವಾಸ ಉಂಟಾಗಲಿಲ್ಲ.॥61॥
(ಶ್ಲೋಕ-62)
ಮೂಲಮ್
ನಂದಾದ್ಯಾಯೇ ವ್ರಜೇ ಗೋಪಾ ಯಾಶ್ಚಾ ಮೀಷಾಂ ಚ ಯೋಷಿತಃ ।
ವೃಷ್ಣಯೋ ವಸುದೇವಾದ್ಯಾ ದೇವಕ್ಯಾದ್ಯಾ ಯದುಸಿಯಃ ॥
(ಶ್ಲೋಕ-63)
ಮೂಲಮ್
ಸರ್ವೇ ವೈ ದೇವತಾಪ್ರಾಯಾ ಉಭಯೋರಪಿ ಭಾರತ ।
ಜ್ಞಾತಯೋ ಬಂಧುಸುಹೃದೋ ಯೇ ಚ ಕಂಸಮನುವ್ರತಾಃ ॥
(ಶ್ಲೋಕ-64)
ಮೂಲಮ್
ಏತತ್ ಕಂಸಾಯ ಭಗವಾನ್ ಶಶಂಸಾಭ್ಯೇತ್ಯ ನಾರದಃ ।
ಭೂಮೇರ್ಭಾರಾಯಮಾಣಾನಾಂ ದೈತ್ಯಾನಾಂ ಚ ವಧೋದ್ಯಮಮ್ ॥
ಅನುವಾದ
ಪರೀಕ್ಷಿತನೇ! ಇತ್ತ ದೇವಋಷಿಗಳಾದ ನಾರದರು ಕಂಸನ ಬಳಿಗೆ ಬಂದು ಕಂಸನಿಂದ ಸತ್ಕೃತರಾಗಿ ಅವನಿಗೆ ಇಂತೆಂದರು ‘ಎಲೈ ಕಂಸನೇ! ವ್ರಜದಲ್ಲಿ ವಾಸಿಸುವ ನಂದನೇ ಮೊದಲಾದ ಗೋಪರೂ, ಅವನ ಪತ್ನಿಯರೂ, ವಸುದೇವನೇ ಮೊದಲಾದ ವೃಷ್ಣಿವಂಶೀಯ ಯಾದವರೂ, ದೇವಕಿಯೇ ಮೊದಲಾದ ಸ್ತ್ರೀಯರೂ ಹೀಗೆ ನಂದ-ವಸುದೇವರ ಜ್ಞಾತಿಬಾಂಧವರೆಲ್ಲರೂ ದೈವಾಂಶ ಸಂಭೂತರು. ಈ ಸಮಯದಲ್ಲಿ ನಿನ್ನ ಸೇವೆಯಲ್ಲಿರುವವರೆಲ್ಲರೂ ದೇವತೆಗಳೇ ಆಗಿದ್ದಾರೆ. ದೈತ್ಯರ ಪ್ರಾಬಲ್ಯವು ಹೆಚ್ಚಾಗಿದ್ದು ಪೃಥಿವಿಯ ಭಾರವು ಹೆಚ್ಚಾಗಿದೆ. ಅದಕ್ಕಾಗಿ ದೈತ್ಯರನ್ನು ವಧಿಸಲು ದೇವತೆಗಳೆಲ್ಲ ಸೇರಿ ಕಾರ್ಯಕ್ರಮವನ್ನು ರೂಪಿಸುತ್ತಿದ್ದಾರೆ. ಇರುವ ವಿಷಯ ನಿನಗೆ ಅರುಹಿದೆನು. ನೀನು ಜಾಗರೂಕನಾಗಿರು’ ಎಂದು ಹೇಳಿದರು. ॥62-64॥
(ಶ್ಲೋಕ-65)
ಮೂಲಮ್
ಋಷೇರ್ವಿನಿರ್ಗಮೇ ಕಂಸೋ ಯದೂನ್ಮತ್ವಾ ಸುರಾನಿತಿ ।
ದೇವಕ್ಯಾ ಗರ್ಭಸಂಭೂತಂ ವಿಷ್ಣುಂ ಚ ಸ್ವವಧಂ ಪ್ರತಿ ॥
(ಶ್ಲೋಕ-66)
ಮೂಲಮ್
ದೇವಕೀಂ ವಸುದೇವಂ ಚ ನಿಗೃಹ್ಯ ನಿಗಡೈರ್ಗೃಹೇ ।
ಜಾತಂ ಜಾತಮಹನ್ಪುತ್ರಂ ತಯೋರಜನಶಂಕಯಾ ॥
ಅನುವಾದ
ದೇವಋಷಿ ನಾರದರು ಇಷ್ಟು ಹೇಳಿ ಹೊರಟುಹೋದ ಬಳಿಕ ಕಂಸನಿಗೆ ಈ ಯದುವಂಶೀಯರೆಲ್ಲರು ದೇವತೆಗಳು ಹಾಗೂ ದೇವಕಿಯ ಗರ್ಭದಿಂದ ಭಗವಾನ್ ವಿಷ್ಣುವೇ ನನ್ನನ್ನು ಕೊಲ್ಲಲು ಹುಟ್ಟಲಿರುವನು ಎಂದು ನಿಶ್ಚಯಿಸಿದನು. ಅದಕ್ಕಾಗಿ ಅವನು ವಸುದೇವ ದೇವಕಿಯರಿಬ್ಬರನ್ನು ಸಂಕೋಲೆಗಳಿಂದ ಬಂಧಿಸಿ ಕಾರಾಗೃಹದಲ್ಲಿಟ್ಟನು. ಅವರಲ್ಲಿ ಹುಟ್ಟಿದ ಮಕ್ಕಳನ್ನು ಕೊಲ್ಲುತ್ತಾ ಹೋದನು. ಪ್ರತಿ ಬಾರಿಯೂ ಅವನಿಗೆ ‘ಎಲ್ಲಾದರೂ ವಿಷ್ಣುವೇ ಈ ಬಾಲಕನ ರೂಪದಲ್ಲಿ ಬಂದಿರಬಹುದೇ?’ ಎಂಬ ಸಂಶಯವು ಯಾವಾಗಲೂ ಇರುತ್ತಿತ್ತು. ॥65-66॥
(ಶ್ಲೋಕ-67)
ಮೂಲಮ್
ಮಾತರಂ ಪಿತರಂ ಭ್ರಾತೃನ್ಸರ್ವಾಂಶ್ಚ ಸುಹೃದಸ್ತಥಾ ।
ಘ್ನಂತಿ ಹ್ಯಸುತೃಪೋ ಲುಬ್ಧಾ ರಾಜಾನಃ ಪ್ರಾಯಶೋ ಭುವಿ ॥
ಅನುವಾದ
ಪರೀಕ್ಷಿತನೇ! ಪ್ರಾಯಶಃ ಈ ಲೋಕದಲ್ಲಿ ತಮ್ಮ ಪ್ರಾಣಗಳನ್ನು ಪೋಷಿಸುವ ಲೋಭಿಗಳಾದ ರಾಜರು ತಮ್ಮ ಸ್ವಾರ್ಥಕ್ಕಾಗಿ ತಂದೆ-ತಾಯಿ, ಬಂಧು-ಬಾಂಧವರು ಹಾಗೂ ತಮ್ಮ ಅತ್ಯಂತ ಹಿತೈಷಿಗಳಾದ ಇಷ್ಟ-ಮಿತ್ರರನ್ನು ಕೊಂದು ಬಿಡುವುದನ್ನು ನಾವು ನೋಡುತ್ತೇವೆ. ॥67॥
(ಶ್ಲೋಕ-68)
ಮೂಲಮ್
ಆತ್ಮಾನಮಿಹ ಸಂಜಾತಂ ಜಾನನ್ಪ್ರಾಗ್ವಿಷ್ಣುನಾ ಹತಮ್ ।
ಮಹಾಸುರಂ ಕಾಲನೇಮಿಂ ಯದುಭಿಃ ಸ ವ್ಯರುಧ್ಯತ ॥
ಅನುವಾದ
ನಾನು ಮೊದಲು ಕಾಲನೇಮಿಯೆಂಬ ಅಸುರನಾಗಿದ್ದು, ವಿಷ್ಣುವು ನನ್ನನ್ನು ಕೊಂದುಬಿಟ್ಟಿರುವನೆಂದು ಕಂಸನಿಗೆ ತಿಳಿದಿತ್ತು. ಇದರಿಂದ ಅವನು ಯದುವಂಶೀಯರಲ್ಲಿ ಘೋರವಾದ ವಿರೋಧವನ್ನು ಕಟ್ಟಿಕೊಂಡನು. ॥68॥
(ಶ್ಲೋಕ-69)
ಮೂಲಮ್
ಉಗ್ರಸೇನಂ ಚ ಪಿತರಂ ಯದುಭೋಜಾಂಧಕಾಧಿಪಮ್ ।
ಸ್ವಯಂ ನಿಗೃಹ್ಯ ಬುಭುಜೇ ಶೂರಸೇನಾನ್ಮಹಾಬಲಃ ॥
ಅನುವಾದ
ಮಹಾಬಲಿಷ್ಠನಾದ ಕಂಸನು ಯದು, ಭೋಜ, ಅಂಧಕ ವಂಶಗಳಿಗೆ ಅಧಿನಾಯಕನಾಗಿದ್ದ ತನ್ನ ತಂದೆ ಉಗ್ರಸೇನನನ್ನೂ ಕಾರಾಗೃಹದಲ್ಲಿಟ್ಟು ಶೂರಸೇನ ರಾಜ್ಯವನ್ನು ತಾನೇ ಆಳತೊಡಗಿದನು.॥69॥
ಅನುವಾದ (ಸಮಾಪ್ತಿಃ)
ಮೊದಲನೆಯ ಅಧ್ಯಾಯವು ಮುಗಿಯಿತು. ॥1॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಶ್ರೀಕೃಷ್ಣಾವತಾರೋಪಕ್ರಮೇ ಪ್ರಥಮೋಽಧ್ಯಾಯಃ ॥1॥