[ಇಪ್ಪತ್ತನಾಲ್ಕನೆಯ ಅಧ್ಯಾಯ]
ಭಾಗಸೂಚನಾ
ವಿದರ್ಭವಂಶದ ವರ್ಣನೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತಸ್ಯಾಂ ವಿದರ್ಭೋಜನಯತ್ಪುತ್ರೌ ನಾಮ್ನಾ ಕುಶಕ್ರಥೌ ।
ತೃತೀಯಂ ರೋಮಪಾದಂ ಚ ವಿದರ್ಭಕುಲನಂದನಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ವಿದರ್ಭರಾಜನು ಪತ್ನಿಯಾದ ಭೋಜ್ಯಾಳಿಂದ ಕುಶ, ಕ್ರಥ ಮತ್ತು ರೋಮಪಾದರೆಂಬ ಮೂವರು ಪುತ್ರರನ್ನು ಪಡೆದನು. ರೋಮಪಾದನು ವಿದರ್ಭವಂಶದಲ್ಲಿ ಅತ್ಯಂತ ಶ್ರೇಷ್ಠರಾಜನಾಗಿದ್ದನು. ॥1॥
(ಶ್ಲೋಕ-2)
ಮೂಲಮ್
ರೋಮಪಾದಸುತೋ ಬಭ್ರುರ್ಬಭ್ರೋಃ ಕೃತಿರಜಾಯತ ।
ಉಶಿಕಸ್ತತ್ಸುತಸ್ತಸ್ಮಾಚ್ಚೇದಿಶ್ಚೈದ್ಯಾದಯೋ ನೃಪ ॥
ಅನುವಾದ
ರೋಮಪಾದನಿಗೆ ಬಭ್ರು, ಬಭ್ರುವಿಗೆ ಕೃತಿ, ಕೃತಿಗೆ ಉಶಿಕ, ಉಶಿಕನಿಗೆ ಚೇದಿ ಎಂಬುವನಾದನು. ರಾಜನೇ! ಈ ಚೇದಿಯ ವಂಶದಲ್ಲೇ ದಮಘೋಷ ಹಾಗೂ ಶಿಶುಪಾಲರೇ ಮುಂತಾದವರಾದರು. ॥2॥
(ಶ್ಲೋಕ-3)
ಮೂಲಮ್
ಕ್ರಥಸ್ಯ ಕುಂತಿಃ ಪುತ್ರೋಭೂದ್ಧೃಷ್ಟಿಸ್ತಸ್ಯಾಥ ನಿರ್ವೃತಿಃ ।
ತತೋ ದಶಾರ್ಹೋ ನಾಮ್ನಾಭೂತ್ತಸ್ಯ ವ್ಯೋಮಃ ಸುತಸ್ತತಃ ॥
ಅನುವಾದ
ಕ್ರಥನಿಗೆ ಕುಂತಿ ಎಂಬ ಪುತ್ರನಾದನು. ಕುಂತಿಗೆ ಧೃಷ್ಟಿ, ಧೃಷ್ಟಿಗೆ ನಿರ್ವೃತಿ, ನಿರ್ವೃತಿಗೆ ದಶಾರ್ಹ, ದಶಾರ್ಹನಿಗೆ ವ್ಯೋಮನೆಂಬುವನು ಹುಟ್ಟಿದನು. ॥3॥
(ಶ್ಲೋಕ-4)
ಮೂಲಮ್
ಜೀಮೂತೋ ವಿಕೃತಿಸ್ತಸ್ಯ ಯಸ್ಯ ಭೀಮರಥಃ ಸುತಃ ।
ತತೋ ನವರಥಃ ಪುತ್ರೋ ಜಾತೋ ದಶರಥಸ್ತತಃ ॥
ಅನುವಾದ
ವ್ಯೋಮನಿಂದ ಜೀಮೂತ, ಜೀಮೂತನಿಗೆ ವಿಕೃತಿ, ವಿಕೃತಿಗೆ ಭೀಮರಥ, ಭೀಮರಥನಿಗೆ ನವರಥ, ನವರಥನಿಗೆ ದಶರಥನು ಹುಟ್ಟಿದನು. ॥4॥
(ಶ್ಲೋಕ-5)
ಮೂಲಮ್
ಕರಂಭಿಃ ಶಕುನೇಃ ಪುತ್ರೋ ದೇವರಾತಸ್ತದಾತ್ಮಜಃ ।
ದೇವಕ್ಷತ್ರಸ್ತತಸ್ತಸ್ಯ ಮಧುಃ ಕುರುವಶಾದನುಃ ॥
ಅನುವಾದ
ದಶರಥನಿಂದ ಶಕುನಿ, ಶಕುನಿಯಿಂದ ಕರಂಭಿ, ಕರಂಭಿಯಿಂದ ದೇವರಾತ, ದೇವರಾತನಿಂದ ದೇವಕ್ಷತ್ರ, ದೇವಕ್ಷತ್ರನಿಂದ ಮಧು, ಮಧುವಿನಿಂದ ಕುರುವಶ, ಕುರುವಶನಿಂದ ಅನು ಹುಟ್ಟಿದನು. ॥5॥
(ಶ್ಲೋಕ-6)
ಮೂಲಮ್
ಪುರುಹೋತ್ರಸ್ತ್ವನೋಃ ಪುತ್ರಸ್ತಸ್ಯಾಯುಃ ಸಾತ್ವತಸ್ತತಃ ।
ಭಜಮಾನೋ ಭಜಿರ್ದಿವ್ಯೋ ವೃಷ್ಣಿರ್ದೇವಾವೃಧೋಂಧಕಃ ॥
(ಶ್ಲೋಕ-7)
ಮೂಲಮ್
ಸಾತ್ವತಸ್ಯ ಸುತಾಃ ಸಪ್ತ ಮಹಾಭೋಜಶ್ಚ ಮಾರಿಷ ।
ಭಜಮಾನಸ್ಯ ನಿಮ್ಲೋಚಿಃ ಕಿಂಕಿಣೋ ಧೃಷ್ಟಿರೇವ ಚ ॥
(ಶ್ಲೋಕ-8)
ಮೂಲಮ್
ಏಕಸ್ಯಾಮಾತ್ಮಜಾಃ ಪತ್ನ್ಯಾಮನ್ಯಸ್ಯಾಂ ಚ ತ್ರಯಃ ಸುತಾಃ ।
ಶತಾಜಿಚ್ಚ ಸಹಸ್ರಾಜಿದಯುತಾಜಿದಿತಿ ಪ್ರಭೋ ॥
ಅನುವಾದ
ಅನುವಿನಿಂದ ಪುರುಹೋತ್ರ, ಪುರುಹೋತ್ರನಿಂದ ಆಯು ಮತ್ತು ಆಯುವಿನಿಂದ ಸಾತ್ವತನ ಜನ್ಮವಾಯಿತು. ಪರೀಕ್ಷಿತನೇ! ಸಾತ್ವತನಿಗೆ ಭಜಮಾನ, ಭಜಿ, ದಿವ್ಯ, ವೃಷ್ಣಿ, ದೇವಾವೃಧ, ಅಂಧಕ ಮತ್ತು ಮಹಾಭೋಜರೆಂಬ ಏಳು ಪುತ್ರರು ಉದಿಸಿದರು. ಭಜಮಾನನಿಗೆ ಇಬ್ಬರು ಪತ್ನಿಯರಿದ್ದರು. ಒಬ್ಬಳಿಂದ ನಿಮ್ಲೋಚಿ, ಕಿಂಕಿಣ ಮತ್ತು ಧೃಷ್ಟಿ ಎಂಬ ಮೂವರು ಪುತ್ರರಾದರು. ಇನ್ನೊಬ್ಬಳಿಂದ ಶತಾಜಿತ್, ಸಹಸ್ರಾಜಿತ್ ಮತ್ತು ಅಯುತಾಜಿತ್ ಎಂಬ ಮೂವರು ಪುತ್ರರಾದರು. ॥6-8॥
(ಶ್ಲೋಕ-9)
ಮೂಲಮ್
ಬಭ್ರುರ್ದೇವಾವೃಧಸುತಸ್ತಯೋಃ ಶ್ಲೋಕೌ ಪಠಂತ್ಯಮೂ ।
ಯಥೈವ ಶೃಣುಮೋ ದೂರಾತ್ಸಂಪಶ್ಯಾಮಸ್ತಥಾಂತಿಕಾತ್ ॥
ಅನುವಾದ
ಸಾತ್ವತನ ಐದನೆಯ ಮಗನಾದ ದೇವಾವೃಧನಿಗೆ ಬಭ್ರು ಎಂಬ ಮಗನಿದ್ದನು. ದೇವಾವೃಧ ಮತ್ತು ಬಭ್ರುಗಳ ಸಂಬಂಧದಲ್ಲಿ ಈ ಗಾಥೆಯು ಹೇಳಲ್ಪಡುತ್ತದೆ ‘ನಾವು ದೂರದಲ್ಲಿ ಜನರ ಬಾಯಿಂದ ಕೇಳಿದ ಸದ್ಗುಣಗಳೇ ಇವರಲ್ಲಿ ಪ್ರತ್ಯಕ್ಷದಲ್ಲಿಯೂ ಕೂಡ ನೋಡುತ್ತಿದ್ದೇವೆ. ॥9॥
(ಶ್ಲೋಕ-10)
ಮೂಲಮ್
ಬಭ್ರುಃ ಶ್ರೇಷ್ಠೋ ಮನುಷ್ಯಾಣಾಂ ದೇವೈರ್ದೇವಾವೃಧಃ ಸಮಃ ।
ಪುರುಷಾಃ ಪಂಚಷಷ್ಟಿಶ್ಚ ಷಟ್ಸಹಸ್ರಾಣಿ ಚಾಷ್ಟ ಚ ॥
(ಶ್ಲೋಕ-11)
ಮೂಲಮ್
ಯೇಮೃತತ್ವಮನುಪ್ರಾಪ್ತಾ ಬಭ್ರೋರ್ದೇವಾವೃಧಾದಪಿ ।
ಮಹಾಭೋಜೋಪಿ ಧರ್ಮಾತ್ಮಾ ಭೋಜಾ ಆಸಂಸ್ತದನ್ವಯೇ ॥
ಅನುವಾದ
ಬಭ್ರು ಮನುಷ್ಯರಲ್ಲಿ ಶ್ರೇಷ್ಠನಾಗಿದ್ದಾನೆ ಮತ್ತು ದೇವಾವೃಧನು ದೇವತೆಗಳಿಗೆ ಸಮಾನನಾಗಿದ್ದಾನೆ. ಇದರ ಕಾರಣ ಬಭ್ರು ಮತ್ತು ದೇವಾವೃಧರಿಂದ ಉಪದೇಶಪಡೆದು ಹದಿನಾಲ್ಕು ಸಾವಿರದ ಅರವತ್ತೈದು ಮಂದಿಗಳು ಪರಮಪದವನ್ನು ಪಡೆದುಕೊಂಡಿರುವರು. ಸಾತ್ವತನ ಪುತ್ರರಲ್ಲಿ ಮಹಾಭೋಜನೂ ಕೂಡ ಮಹಾಧರ್ಮಾತ್ಮನಾಗಿದ್ದನು. ಅವನ ವಂಶದಲ್ಲೇ ಭೋಜವಂಶೀಯ ಯಾದವರಾದರು. ॥10-11॥
(ಶ್ಲೋಕ-12)
ಮೂಲಮ್
ವೃಷ್ಣೇಃ ಸುಮಿತ್ರಃ ಪುತ್ರೋಭೂದ್ಯುಧಾಜಿಚ್ಚ ಪರಂತಪ ।
ಶಿನಿಸ್ತಸ್ಯಾನಮಿತ್ರಶ್ಚ ನಿಮ್ನೋಭೂದನಮಿತ್ರತಃ ॥
ಅನುವಾದ
ಪರೀಕ್ಷಿತನೇ! ವೃಷ್ಟಿಗೆ ಸಮಿತ್ರ ಮತ್ತು ಯುಧಾಜಿತ್ತು ಎಂಬ ಇಬ್ಬರು ಪುತ್ರರಾದರು. ಯುಧಾಜಿತ್ತುವಿಗೆ ಶಿನಿ ಮತ್ತು ಅನಮಿತ್ರರೆಂಬ ಇಬ್ಬರು ಮಕ್ಕಳಿದ್ದರು. ಅನಮಿತ್ರನಿಂದ ನಿಮ್ನನ ಜನ್ಮವಾಯಿತು. ॥12॥
(ಶ್ಲೋಕ-13)
ಮೂಲಮ್
ಸತ್ರಾಜಿತಃ ಪ್ರಸೇನಶ್ಚ ನಿಮ್ನಸ್ಯಾಪ್ಯಾಸತುಃ ಸುತೌ ।
ಅನಮಿತ್ರಸುತೋ ಯೋನ್ಯಃ ಶಿನಿಸ್ತಸ್ಯಾಥ ಸತ್ಯಕಃ ॥
ಅನುವಾದ
ಸತ್ರಾಜಿತ್ ಹಾಗೂ ಪ್ರಸೇನರೆಂಬ ಪ್ರಸಿದ್ಧರಾದ ಯಾದವರು ನಿಮ್ನನ ಪುತ್ರರೇ ಆಗಿದ್ದರು. ಅನಮಿತ್ರನಿಗೆ ಇನ್ನೊಬ್ಬ ಶಿನಿ ಎಂಬ ಮಗನಿದ್ದನು. ಶಿನಿಯಿಂದ ಸತ್ಯಕನ ಜನ್ಮವಾಯಿತು. ॥13॥
(ಶ್ಲೋಕ-14)
ಮೂಲಮ್
ಯುಯುಧಾನಃ ಸಾತ್ಯಕಿರ್ವೈ ಜಯಸ್ತಸ್ಯ ಕುಣಿಸ್ತತಃ ।
ಯುಗಂಧರೋನಮಿತ್ರಸ್ಯ ವೃಷ್ಣಿಃ ಪುತ್ರೋಪರಸ್ತತಃ ॥
(ಶ್ಲೋಕ-15)
ಮೂಲಮ್
ಶ್ವಲ್ಕಶ್ಚಿತ್ರರಥಶ್ಚ ಗಾಂದಿನ್ಯಾಂ ಚ ಶ್ವಲ್ಕತಃ ।
ಅಕ್ರೂರಪ್ರಮುಖಾ ಆಸನ್ಪುತ್ರಾ ದ್ವಾದಶ ವಿಶ್ರುತಾಃ ॥
(ಶ್ಲೋಕ-16)
ಮೂಲಮ್
ಆಸಂಗಃ ಸಾರಮೇಯಶ್ಚ ಮೃದುರೋ ಮೃದುವಿದ್ಗಿರಿಃ ।
ಧರ್ಮವೃದ್ಧಃ ಸುಕರ್ಮಾ ಚ ಕ್ಷೇತ್ರೋಪೇಕ್ಷೋರಿಮರ್ದನಃ ॥
(ಶ್ಲೋಕ-17)
ಮೂಲಮ್
ಶತ್ರುಘ್ನೋ ಗಂಧಮಾದಶ್ಚ ಪ್ರತಿಬಾಹುಶ್ಚ ದ್ವಾದಶ ।
ತೇಷಾಂ ಸ್ವಸಾ ಸುಚೀರಾಖ್ಯಾ ದ್ವಾವಕ್ರೂರಸುತಾವಪಿ ॥
(ಶ್ಲೋಕ-18)
ಮೂಲಮ್
ದೇವವಾನುಪದೇವಶ್ಚ ತಥಾ ಚಿತ್ರರಥಾತ್ಮಜಾಃ ।
ಪೃಥುರ್ವಿದೂರಥಾದ್ಯಾಶ್ಚ ಬಹವೋ ವೃಷ್ಣಿನಂದನಾಃ ॥
ಅನುವಾದ
ಇದೇ ಸತ್ಯಕನ ಪುತ್ರನೇ ಯುಯುಧಾನನಾಗಿದ್ದನು. ಅವನು ಸಾತ್ಯಕಿ ಎಂಬ ಹೆಸರಿನಿಂದಲೂ ಪ್ರಸಿದ್ಧನಾಗಿ ಇರುವನು. ಸಾತ್ಯಕಿಯ ಮಗ ಜಯ, ಜಯನಿಗೆ ಕುಣಿ ಮತ್ತು ಕುಣಿಗೆ ಯುಗಂಧರನೆಂಬ ಪುತ್ರನು ಹುಟ್ಟಿದನು. ಅನಮಿತ್ರನ ಮೂರನೆಯ ಮಗನ ಹೆಸರು ವೃಷ್ಣಿಯೆಂದಿತ್ತು. ವೃಷ್ಣಿಗೆ ಶ್ವಲ್ಕ ಮತ್ತು ಚಿತ್ರರಥರೆಂಬ ಇಬ್ಬರು ಪುತ್ರರಿದ್ದರು. ಶ್ವಲ್ಕನ ಪತ್ನಿಯ ಹೆಸರು ಗಾಂದಿನೀ ಎಂದಿತ್ತು. ಅವರಲ್ಲಿ ಅತ್ಯಂತ ಶ್ರೇಷ್ಠ ಅಕ್ರೂರ ನಲ್ಲದೆ ಆಸಂಗ, ಸಾರಮೇಯ, ಮೃದುರ, ಮೃದುವಿದ್, ಗಿರಿ, ಧರ್ಮವೃದ್ಧ, ಸುಕರ್ಮಾ, ಕ್ಷೇತ್ರೋಪೇಕ್ಷ, ಅರಿಮರ್ದನ, ಶತ್ರುಘ್ನ, ಗಂಧಮಾದನ, ಪ್ರತಿಬಾಹು ಎಂಬ ಹನ್ನೆರಡು ಪುತ್ರರು ಹುಟ್ಟಿದರು. ಇವರಿಗೆ ಸುಚೀರಾ ಎಂಬ ಓರ್ವ ತಂಗಿಯೂ ಇದ್ದಳು. ಅಕ್ರೂರನಿಗೆ ದೇವವಾನ್ ಮತ್ತು ಉಪದೇವರೆಂಬ ಇಬ್ಬರು ಪುತ್ರರಿದ್ದರು. ಶ್ವಲ್ಕನ ತಮ್ಮ ಚಿತ್ರರಥನಿಗೆ ಪೃಥು, ವಿದೂರಥ ಮೊದಲಾದ ಅನೇಕ ಪುತ್ರರಾದರು. ಅವರೆಲ್ಲರೂ ವೃಷ್ಣಿ ವಂಶಿಯರಲ್ಲಿ ಶ್ರೇಷ್ಠರೆಂದು ಪರಿಗಣಿಸಲ್ಪಟ್ಟಿರುವರು. ॥14-18॥
(ಶ್ಲೋಕ-19)
ಮೂಲಮ್
ಕುಕುರೋ ಭಜಮಾನಶ್ಚ ಶುಚಿಃ ಕಂಬಲಬರ್ಹಿಷಃ ।
ಕುಕುರಸ್ಯ ಸುತೋ ವಹ್ನಿರ್ವಿಲೋಮಾ ತನಯಸ್ತತಃ ॥
(ಶ್ಲೋಕ-20)
ಮೂಲಮ್
ಕಪೋತರೋಮಾ ತಸ್ಯಾನುಃ ಸಖಾ ಯಸ್ಯ ಚ ತುಂಬುರುಃ ।
ಅಂಧಕೋ ದುಂದುಭಿಸ್ತಸ್ಮಾದರಿದ್ಯೋತಃ ಪುನರ್ವಸುಃ ॥
(ಶ್ಲೋಕ-21)
ಮೂಲಮ್
ತಸ್ಯಾಹುಕಶ್ಚಾಹುಕೀ ಚ ಕನ್ಯಾ ಚೈವಾಹುಕಾತ್ಮಜೌ ।
ದೇವಕಶ್ಚೋಗ್ರಸೇನಶ್ಚ ಚತ್ವಾರೋ ದೇವಕಾತ್ಮಜಾಃ ॥
ಅನುವಾದ
ಸಾತ್ವತನ ಪುತ್ರನಾದ ಅಂಧಕನಿಗೆ ಕುಕುರ, ಭಜಮಾನ, ಶುಚಿ, ಕಂಬಲಬರ್ಹಿ ಎಂಬ ನಾಲ್ವರು ಪುತ್ರರಾದರು. ಅವರಲ್ಲಿ ಕುಕುರನ ಪುತ್ರ ವಹ್ನಿ, ವಹ್ನಿಗೆ ವಿಲೋಮಾ, ವಿಲೋಮನಿಗೆ ಕಪೋತರೋಮಾ, ಕಪೋತ ರೋಮನಿಗೆ ಅನು ಎಂಬುವನು ಹುಟ್ಟಿದನು. ತುಂಬುರು ಗಂಧರ್ವನೊಂದಿಗೆ ಅವನಿಗೆ ಅತ್ಯಂತ ಮಿತ್ರತೆ ಇತ್ತು. ಅನುವಿನ ಪುತ್ರ ಅಂಧಕ, ಅಂಧಕನಿಗೆ ದುಂದುಭಿ, ದುಂದುಭಿಗೆ ಅರಿದ್ಯೋತ, ಅರಿದ್ಯೋತನಿಗೆ ಪುನರ್ವಸು, ಪುನರ್ವಸುವಿಗೆ ಆಹುಕನೆಂಬ ಓರ್ವ ಪುತ್ರನೂ, ಆಹುಕಿ ಎಂಬ ಓರ್ವ ಕನ್ಯೆಯು ಹುಟ್ಟಿದರು. ಆಹುಕನಿಗೆ ದೇವಕ ಮತ್ತು ಉಗ್ರಸೇನರೆಂಬ ಇಬ್ಪರು ಪುತ್ರರಾದರು. ದೇವಕನಿಗೆ ನಾಲ್ಕು ಮಕ್ಕಳಾದರು. ॥19-21॥
(ಶ್ಲೋಕ-22)
ಮೂಲಮ್
ದೇವವಾನುಪದೇವಶ್ಚ ಸುದೇವೋ ದೇವವರ್ಧನಃ ।
ತೇಷಾಂ ಸ್ವಸಾರಃ ಸಪ್ತಾಸನ್ಧೃತದೇವಾದಯೋ ನೃಪ ॥
(ಶ್ಲೋಕ-23)
ಮೂಲಮ್
ಶಾಂತಿದೇವೋಪದೇವಾ ಚ ಶ್ರೀದೇವಾ ದೇವರಕ್ಷಿತಾ ।
ಸಹದೇವಾ ದೇವಕೀ ಚ ವಸುದೇವ ಉವಾಹ ತಾಃ ॥
ಅನುವಾದ
ದೇವವಾನ್, ಉಪದೇವ, ಸುದೇವ ಮತ್ತು ದೇವವರ್ಧನ ಇವರು ದೇವಕನ ಮಕ್ಕಳು. ಇವರಿಗೆ ಧೃತದೇವಾ, ಶಾಂತಿದೇವಾ, ಉಪದೇವಾ, ಶ್ರೀದೇವಾ, ದೇವರಕ್ಷಿತಾ, ಸಹದೇವಾ ಮತ್ತು ದೇವಕಿ ಎಂಬ ಏಳುಮಂದಿ ತಂಗಿಯರಿದ್ದರು. ವಸುದೇವನು ಇವರೆಲ್ಲರೊಂದಿಗೆ ವಿವಾಹವಾಗಿದ್ದನು. ॥22-23॥
(ಶ್ಲೋಕ-24)
ಮೂಲಮ್
ಕಂಸಃ ಸುನಾಮಾ ನ್ಯಗ್ರೋಧಃ ಕಂಕಃ ಶಂಕುಃ ಸುಹೂಸ್ತಥಾ ।
ರಾಷ್ಟ್ರಪಾಲೋಥ ಸೃಷ್ಟಿಶ್ಚ ತುಷ್ಟಿಮಾನೌಗ್ರಸೇನಯಃ ॥
ಅನುವಾದ
ಉಗ್ರಸೇನನಿಗೆ ಕಂಸ, ಸುನಾಮಾ, ನ್ಯಗ್ರೋಧ, ಕಂಕ, ಶಂಕು, ಸುಹೂ, ರಾಷ್ಟ್ರಪಾಲ, ಸೃಷ್ಟಿ ಮತ್ತು ತುಷ್ಟಿಮಾನ್ ಎಂಬ ಒಂಭತ್ತು ಮಕ್ಕಳಿದ್ದರು.॥24॥
(ಶ್ಲೋಕ-25)
ಮೂಲಮ್
ಕಂಸಾ ಕಂಸವತೀ ಕಂಕಾ ಶೂರಭೂ ರಾಷ್ಟ್ರಪಾಲಿಕಾ ।
ಉಗ್ರಸೇನದುಹಿತರೋ ವಸುದೇವಾನುಜಃಸಿಯಃ ॥
ಅನುವಾದ
ಉಗ್ರಸೇನನಿಗೆ ಕಂಸಾ, ಕಂಸವತೀ, ಕಂಕಾ, ಶೂರಭೂ, ರಾಷ್ಟ್ರಪಾಲಿಕಾ ಎಂಬ ಐದು ಮಂದಿ ಕನ್ಯೆಯರೂ ಇದ್ದರು. ಇವರ ವಿವಾಹವು ದೇವಭಾಗ ಮೊದಲಾದ ವಸುದೇವನ ತಮ್ಮಂದಿರೊಂದಿಗೆ ಆಗಿತ್ತು. ॥25॥
(ಶ್ಲೋಕ-26)
ಮೂಲಮ್
ಶೂರೋ ವಿದೂರಥಾದಾಸೀದ್ಭಜಮಾನಃ ಸುತಸ್ತತಃ ।
ಶಿನಿಸ್ತಸ್ಮಾತ್ಸ್ವಯಂಭೋಜೋ ಹೃದೀಕಸ್ತತ್ಸುತೋ ಮತಃ ॥
ಅನುವಾದ
ಚಿತ್ರರಥನ ಪುತ್ರನಾದ ವಿದೂರಥನಿಗೆ ಶೂರ, ಶೂರನಿಂದ ಭಜಮಾನ, ಭಜಮಾನನಿಂದ ಶಿನಿ, ಶಿನಿಯಿಂದ ಸ್ವಯಂಭೋಜ, ಸ್ವಯಂಭೋಜನಿಂದ ಹೃದೀಕ ಹುಟ್ಟಿದರು.॥26॥
(ಶ್ಲೋಕ-27)
ಮೂಲಮ್
ದೇವಬಾಹುಃ ಶತಧನುಃ ಕೃತವರ್ಮೇತಿ ತತ್ಸುತಾಃ ।
ದೇವಮೀಢಸ್ಯ ಶೂರಸ್ಯ ಮಾರಿಷಾ ನಾಮ ಪತ್ನ್ಯಭೂತ್ ॥
ಅನುವಾದ
ಹೃದೀಕನಿಗೆ ದೇವಬಾಹು, ಶತಧನ್ವಾ, ಕೃತವರ್ಮಾ ಎಂಬ ಮೂರು ಮಕ್ಕಳಾದರು. ದೇವಮೀಢನ ಪುತ್ರನಾದ ಶೂರನ ಪತ್ನೀಯ ಹೆಸರು ಮಾರಿಷಾ ಎಂದಿತ್ತು. ॥27॥
(ಶ್ಲೋಕ-28)
ಮೂಲಮ್
ತಸ್ಯಾಂ ಸ ಜನಯಾಮಾಸ ದಶ ಪುತ್ರಾನಕಲ್ಮಷಾನ್ ।
ವಸುದೇವಂ ದೇವಭಾಗಂ ದೇವಶ್ರವಸಮಾನಕಮ್ ॥
(ಶ್ಲೋಕ-29)
ಮೂಲಮ್
ಸೃಂಜಯಂ ಶ್ಯಾಮಕಂ ಕಂಕಂ ಶಮೀಕಂ ವತ್ಸಕಂ ವೃಕಮ್ ।
ದೇವದುಂದುಭಯೋ ನೇದುರಾನಕಾ ಯಸ್ಯ ಜನ್ಮನಿ ॥
(ಶ್ಲೋಕ-30)
ಮೂಲಮ್
ವಸುದೇವಂ ಹರೇಃ ಸ್ಥಾನಂ ವದಂತ್ಯಾನಕದುಂದುಭಿಮ್ ।
ಪೃಥಾ ಚ ಶ್ರುತದೇವಾ ಚ ಶ್ರುತಕೀರ್ತಿಃ ಶ್ರುತಶ್ರವಾಃ ॥
(ಶ್ಲೋಕ-31)
ಮೂಲಮ್
ರಾಜಾಧಿದೇವೀ ಚೈತೇಷಾಂ ಭಗಿನ್ಯಃ ಪಂಚ ಕನ್ಯಕಾಃ
ಕುಂತೇಃ ಸಖ್ಯುಃ ಪಿತಾ ಶೂರೋ ಹ್ಯಪುತ್ರಸ್ಯ ಪೃಥಾಮದಾತ್ ॥
ಅನುವಾದ
ಶೂರಸೇನನು ಮಾರಿಷಾಳಿಂದ ವಸುದೇವ, ದೇವಭಾಗ, ದೇವಶ್ರವಾ, ಆನಕ, ಸೃಂಜಯ, ಶ್ಯಾಮಕ, ಕಂಕ, ಶಮೀಕ, ವತ್ಸಕ ಮತ್ತು ವೃಕ ಎಂಬ ಪುಣ್ಯಾತ್ಮರಾದ ಹತ್ತು ಮಕ್ಕಳನ್ನು ಪಡೆದನು. ವಸುದೇವನು ಹುಟ್ಟುವಾಗ ದೇವದುಂದುಭಿಗಳು ತಾನಾಗಿಯೇ ಮೊಳಗಿದವು. ಆದ್ದರಿಂದ ಅವನನ್ನು, ‘ಆನಕದುಂದುಭಿ’ ಎಂದೂ ಕರೆಯುತ್ತಿದ್ದರು. ಅವನೇ ಭಗವಾನ್ ಶ್ರೀಕೃಷ್ಣನಿಗೆ ತಂದೆಯಾದನು. ವಸುದೇವನಿಗೆ ಪೃಥಾ, (ಕುಂತಿ) ಶ್ರುತದೇವಾ, ಶ್ರುತಕೀರ್ತಿ, ಶ್ರುತಶ್ರವಾ ಮತ್ತು ರಾಜಾಧಿದೇವಿ ಎಂಬ ಐದು ತಂಗಿಯರೂ ಇದ್ದರು. ವಸುದೇವನ ತಂದೆ ಶೂರಸೇನನಿಗೆ ಕುಂತಿಭೋಜನೆಂಬ ಮಿತ್ರನಿದ್ದನು. ಕುಂತಿಭೋಜನಿಗೆ ಯಾವ ಸಂತಾನವೂ ಇರಲಿಲ್ಲ. ಅದಕ್ಕಾಗಿ ಶೂರಸೇನನು ಅವನಿಗೆ ತನ್ನ ಹಿರಿಯಳಾದ ಪೃಥಾಳನ್ನು ದತ್ತಕವಾಗಿ ಕೊಟ್ಟಿದ್ದನು. ॥28-31॥
(ಶ್ಲೋಕ-32)
ಮೂಲಮ್
ಸಾಪ ದುರ್ವಾಸಸೋ ವಿದ್ಯಾಂದೇವಹೂತೀಂ ಪ್ರತೋಷಿತಾತ್ ।
ತಸ್ಯಾ ವೀರ್ಯಪರೀಕ್ಷಾರ್ಥಮಾಜುಹಾವ ರವಿಂ ಶುಚಿಃ ॥
ಅನುವಾದ
ಪೃಥಾದೇವಿಯು ದುರ್ವಾಸರನ್ನು ತನ್ನ ಸೇವೆಯಿಂದ ಪ್ರಸನ್ನಗೊಳಿಸಿ ಅವರ ಅನುಗ್ರಹದಿಂದ ದೇವತೆಗಳನ್ನೂ ಸಮಾಗಮಕ್ಕಾಗಿ ಕರೆಯಬಹುದಾದ ವಿದ್ಯೆಯನ್ನು ಕಲಿತಳು. ಒಂದು ದಿನ ಆ ವಿದ್ಯೆಯನ್ನು ಪರೀಕ್ಷಿಸಲೋಸುಗ ಪೃಥೆಯು ಪರಮ ಪವಿತ್ರಳಾಗಿ ಭಗವಾನ್ ಸೂರ್ಯನನ್ನು ಆವಾಹನೆ ಮಾಡಿದಳು. ॥32॥
(ಶ್ಲೋಕ-33)
ಮೂಲಮ್
ತದೈವೋಪಾಗತಂ ದೇವಂ ವೀಕ್ಷ್ಯ ವಿಸ್ಮಿತಮಾನಸಾ ।
ಪ್ರತ್ಯಯಾರ್ಥಂ ಪ್ರಯುಕ್ತಾ ಮೇ ಯಾಹಿ ದೇವ ಕ್ಷಮಸ್ವ ಮೇ ॥
ಅನುವಾದ
ಮಂತ್ರಪಠಿಸಿ ಆಹ್ವಾನಿಸಿದೊಡನೆ ಸೂರ್ಯ ಭಗವಂತನು ಅವಳ ಬಳಿಗೆ ಬಂದೇ ಬಿಟ್ಟನು. ಸೂರ್ಯನನ್ನು ನೋಡಿ ಕುಂತಿಯು ಅಚ್ಚರಿಗೊಂಡು ಹೇಳಿದಳು ‘‘ಸೂರ್ಯಭಗವಂತ! ನನ್ನನ್ನು ಕ್ಷಮಿಸಿಬಿಡು. ಮುನಿಗಳ ಮಾತನ್ನು ಪರೀಕ್ಷಿಸಲು ಈ ವಿದ್ಯೆಯನ್ನು ಪ್ರಯೋಗಿಸಿದೆನು. ಮಂತ್ರದ ಪ್ರಭಾವ ನನಗೀಗ ತಿಳಿದು ಹೋಯಿತು. ನೀನಿನ್ನು ಹೊರಡಬಹುದು. ॥33॥
(ಶ್ಲೋಕ-34)
ಮೂಲಮ್
ಅಮೋಘಂ ದರ್ಶನಂ ದೇವಿ ಆಧಿತ್ಸೇ ತ್ವಯಿ ಚಾತ್ಮಜಮ್ ।
ಯೋನಿರ್ಯಥಾ ನ ದುಷ್ಯೇತ ಕರ್ತಾಹಂ ತೇ ಸುಮಧ್ಯಮೇ ॥
ಅನುವಾದ
ಸೂರ್ಯದೇವನು ಹೇಳಿದನು ದೇವೀ! ನನ್ನ ದರ್ಶನವು ನಿಷ್ಫಲವಾಗಬಾರದು. ಅದಕ್ಕಾಗಿ ನಾನೀಗಲೇ ನಿನಗೆ ಒಬ್ಬ ಪುತ್ರನನ್ನು ಅನುಗ್ರಹಿಸುತ್ತೇನೆ. ಇದರಿಂದ ನಿನ್ನ ಕ್ಷೇತ್ರವು ದೂಷಿತವಾಗುವುದಿಲ್ಲ. ನೀನು ಕನ್ಯೆಯಾಗಿಯೇ ಉಳಿಯುವೆ. ॥34॥
(ಶ್ಲೋಕ-35)
ಮೂಲಮ್
ಇತಿ ತಸ್ಯಾಂ ಸ ಆಧಾಯ ಗರ್ಭಂ ಸೂರ್ಯೋ ದಿವಂ ಗತಃ ।
ಸದ್ಯಃ ಕುಮಾರಃ ಸಂಜಜ್ಞೇ ದ್ವಿತೀಯ ಇವ ಭಾಸ್ಕರಃ ॥
ಅನುವಾದ
ಹೀಗೆ ಹೇಳಿ ಸೂರ್ಯದೇವನು ಆಕೆಗೆ ದಿವ್ಯವಾದ ಒಂದು ಗಂಡು ಮಗುವನ್ನು ಕರುಣಿಸಿ ಸ್ವರ್ಗಕ್ಕೆ ಹೊರಟುಹೋದನು. ಆ ಮಗುವು ಅತ್ಯಂತ ಸುಂದರವಾಗಿದ್ದು, ಪ್ರತಿಸೂರ್ಯನಂತೆ ಕಂಗೊಳಿಸುತ್ತಿತ್ತು.॥35॥
(ಶ್ಲೋಕ-36)
ಮೂಲಮ್
ತಂ ಸಾತ್ಯಜನ್ನದೀತೋಯೇ ಕೃಚ್ಛ್ರಾಲ್ಲೋಕಸ್ಯ ಬಿಭ್ಯತೀ ।
ಪ್ರಪಿತಾಮಹಸ್ತಾಮುವಾಹ ಪಾಂಡುರ್ವೈ ಸತ್ಯವಿಕ್ರಮಃ ॥
ಅನುವಾದ
ಪೃಥೆಯು ಲೋಕನಿಂದೆಗೆ ಹೆದರಿ, ಅತೀವ ದುಃಖದಿಂದ ಆ ಮುದ್ದು ಬಾಲಕನನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಗಂಗೆಯಲ್ಲಿ ತೇಲಿಬಿಟ್ಟಳು. ಪರೀಕ್ಷಿತನೇ! ಆ ಪೃಥೆಯನ್ನೇ ನಿನ್ನ ಮುತ್ತಾತನಾದ ಪಾಂಡುವು ವಿವಾಹವಾದನು. ಅವನು ನಿಜವಾಗಿ ಮಹಾಪರಾಕ್ರಮಿಯಾಗಿದ್ದನು. ॥36॥
(ಶ್ಲೋಕ-37)
ಮೂಲಮ್
ಶ್ರುತದೇವಾಂ ತು ಕಾರೂಷೋ ವೃದ್ಧಶರ್ಮಾ ಸಮಗ್ರಹೀತ್ ।
ಯಸ್ಯಾಮಭೂದ್ದಂತವಕ ಋಷಿಶಪ್ತೋ ದಿತೇಃ ಸುತಃ ॥
ಅನುವಾದ
ಪರೀಕ್ಷಿತನೇ! ಪೃಥೆಯ ತಂಗಿ ಶ್ರುತದೇವಾ ಎಂಬುವಳನ್ನು ಕರೂಷದೇಶದ ಅಧಿಪತಿ ವೃದ್ಧಶರ್ಮಾ ವಿವಾಹವಾದನು. ಆಕೆಯ ಗರ್ಭದಿಂದ ದಂತವಕ್ತ್ರನ ಜನ್ಮವಾಯಿತು. ಪೂರ್ವಜನ್ಮದಲ್ಲಿ ಸನಕಾದಿ ಋಷಿಗಳ ಶಾಪದಿಂದ ಹಿರಣ್ಯಾಕ್ಷನಾದವನೇ ಈ ದಂತವಕ್ತ್ರನಾಗಿದ್ದನು. ॥37॥
(ಶ್ಲೋಕ-38)
ಮೂಲಮ್
ಕೈಕೇಯೋ ಧೃಷ್ಟಕೇತುಶ್ಚ ಶ್ರುತಕೀರ್ತಿಮವಿಂದತ ।
ಸಂತರ್ದನಾದಯಸ್ತಸ್ಯ ಪಂಚಾಸನ್ಕೈಕಯಾಃ ಸುತಾಃ ॥
ಅನುವಾದ
ಕೇಕಯದೇಶದ ರಾಜಾ ಧೃಷ್ಟಕೇತುವು ಶ್ರುತಕೀರ್ತಿಯೊಂದಿಗೆ ವಿವಾಹವಾದನು. ಅವಳಲ್ಲಿ ಸಂತರ್ದನರೇ ಆದಿ ಐದು ಕೈಕಯ ರಾಜಕುಮಾರರು ಹುಟ್ಟಿದರು. ॥38॥
(ಶ್ಲೋಕ-39)
ಮೂಲಮ್
ರಾಜಾಧಿದೇವ್ಯಾಮಾವಂತ್ಯೌ ಜಯಸೇನೋಜನಿಷ್ಟ ಹ ।
ದಮಘೋಷಶ್ಚೇದಿರಾಜಃ ಶ್ರುತಶ್ರವಸಮಗ್ರಹೀತ್ ॥
ಅನುವಾದ
ರಾಜಾಧಿದೇವಿಯ ವಿವಾಹವು ಜಯಸೇನನೊಂದಿಗೆ ನಡೆಯಿತು. ಅವಳಿಗೆ ವಿಂದ ಮತ್ತು ಅನುವಿಂದ ಎಂಬ ಇಬ್ಬರು ಪುತ್ರರಾದರು. ಇವರಿಬ್ಬರೂ ಅವಂತಿ ನರೇಶರಾದರು. ಚೇದಿರಾಜ ದಮಘೋಷನು ಶ್ರುತಶ್ರವಾ ಎಂಬುವಳನ್ನು ಪಾಣಿಗ್ರಹಣ ಮಾಡಿದನು. ॥39॥
(ಶ್ಲೋಕ-40)
ಮೂಲಮ್
ಶಿಶುಪಾಲಃ ಸುತಸ್ತಸ್ಯಾಃ ಕಥಿತಸ್ತಸ್ಯ ಸಂಭವಃ ।
ದೇವಭಾಗಸ್ಯ ಕಂಸಾಯಾಂ ಚಿತ್ರಕೇತುಬೃಹದ್ಬಲೌ ॥
ಅನುವಾದ
ಅವಳ ಪುತ್ರನೇ ಶಿಶುಪಾಲನು. ಇವನ ವಿಷಯವಾಗಿ ನಾನು ಮೊದಲೇ (ಏಳನೆಯ ಸ್ಕಂಧದಲ್ಲಿ) ವರ್ಣಿಸಿರುವೆನು. ವಸುದೇವನ ತಮ್ಮಂದಿರಲ್ಲಿ ದೇವಭಾಗನ ಪತ್ನಿಯಾದ ಕಂಸೆಯಿಂದ ಚಿತ್ರಕೇತು ಮತ್ತು ಬೃಹದ್ಬಲರೆಂಬ ಇಬ್ಬರು ಪುತ್ರರು ಹುಟ್ಟಿದರು. ॥40॥
(ಶ್ಲೋಕ-41)
ಮೂಲಮ್
ಕಂಸವತ್ಯಾಂ ದೇವಶ್ರವಸಃ ಸುವೀರ ಇಷುಮಾಂಸ್ತಥಾ ।
ಕಂಕಾಯಾಮಾನಕಾಜ್ಜಾತಃ ಸತ್ಯಜಿತ್ಪುರುಜಿತ್ತಥಾ ॥
ಅನುವಾದ
ದೇವಶ್ರವಾನ ಪತ್ನಿಯಾದ ಕಂಸವತಿಯಿಂದ ಸುವೀರ ಹಾಗೂ ಇಷುಮಾನ್ ಎಂಬ ಇಬ್ಬರು ಪುತ್ರರಾದರು. ಆನಕನ ಪತ್ನಿಯಾದ ಕಂಕಾಳಿಂದ ಶತ್ರುಜಿತ್ ಮತ್ತು ಪುರುಜಿತ್ರೆಂಬ ಇಬ್ಬರು ಪುತ್ರರು ಹುಟ್ಟಿದರು. ॥41॥
(ಶ್ಲೋಕ-42)
ಮೂಲಮ್
ಸೃಂಜಯೋ ರಾಷ್ಟ್ರಪಾಲ್ಯಾಂ ಚ ವೃಷದುರ್ಮರ್ಷಣಾದಿಕಾನ್ ।
ಹರಿಕೇಶಹಿರಣ್ಯಾಕ್ಷೌ ಶೂರಭೂಮ್ಯಾಂ ಚ ಶಾಮಕಃ ॥
ಅನುವಾದ
ಸೃಂಜಯನು ತನ್ನ ಪತ್ನಿಯಾದ ರಾಷ್ಟ್ರಪಾಲಿಕೆಯಿಂದ ವೃಷ ಮತ್ತು ದುರ್ಮರ್ಷಣರೇ ಮೊದಲಾದ ಅನೇಕ ಪುತ್ರರನ್ನು ಪಡೆದನು. ಹೀಗೆಯೇ ಶ್ಯಾಮಕನು ಶೂರಭೂಮಿ (ಶೂರಭೂ) ಎಂಬ ಪತ್ನಿಯಿಂದ ಹರಿಕೇಶ ಮತ್ತು ಹಿರಣ್ಯಾಕ್ಷರೆಂಬ ಇಬ್ಬರು ಮಕ್ಕಳನ್ನು ಪಡೆದನು. ॥42॥
(ಶ್ಲೋಕ-43)
ಮೂಲಮ್
ಮಿಶ್ರಕೇಶ್ಯಾಮಪ್ಸರಸಿ ವೃಕಾದೀನ್ವತ್ಸಕಸ್ತಥಾ ।
ತಕ್ಷಪುಷ್ಕರಶಾಲಾದೀಂದುರ್ವಾರ್ಕ್ಷ್ಯಾಂ ವೃಕ ಆದಧೇ ॥
ಅನುವಾದ
ಮಿಶ್ರಕೇಶೀ ಅಪ್ಸರೆಯ ಗರ್ಭದಿಂದ ವತ್ಸಕನೂ ಕೂಡ ವೃಕ ಮೊದಲಾದ ಅನೇಕ ಪುತ್ರರನ್ನು ಹೊಂದಿದನು. ವೃಕನು ದುರ್ವಾರ್ಕ್ಷಿಯಿಂದ ತಕ್ಷ, ಪುಷ್ಕರ, ಶಾಲ ಮೊದಲಾದ ಹಲವು ಮಕ್ಕಳನ್ನು ಪಡೆದುಕೊಂಡನು. ॥43॥
(ಶ್ಲೋಕ-44)
ಮೂಲಮ್
ಸುಮಿತ್ರಾರ್ಜುನಪಾಲಾದೀನ್ ಶಮೀಕಾತ್ತು ಸುದಾಮಿನೀ ।
ಕಂಕಶ್ಚ ಕರ್ಣಿಕಾಯಾಂ ವೈ ಋತಧಾಮಜಯಾವಪಿ ॥
ಅನುವಾದ
ಶಮೀಕನ ಪತ್ನಿಯಾದ ಸುದಾಮಿನಿಯು ಸುಮಿತ್ರ, ಅರ್ಜುನಪಾಲ ಮೊದಲಾದ ಅನೇಕ ಮಕ್ಕಳನ್ನು ಹಡೆದಳು. ಕಂಕನ ಪತ್ನಿ ಕರ್ಣಿಕೆಯಿಂದ ಋತುಧಾಮ ಮತ್ತು ಜಯರೆಂಬ ಇಬ್ಬರು ಮಕ್ಕಳು ಉಂಟಾದರು. ॥44॥
(ಶ್ಲೋಕ-45)
ಮೂಲಮ್
ಪೌರವೀ ರೋಹಿಣೀ ಭದ್ರಾ ಮದಿರಾ ರೋಚನಾ ಇಲಾ ।
ದೇವಕೀಪ್ರಮುಖಾ ಆಸನ್ಪತ್ನ್ಯ ಆನಕದುಂದುಭೇಃ ॥
ಅನುವಾದ
ಆನಕದುಂದುಭಿಯಾದ ವಸುದೇವನಿಗೆ ಪೌರವೀ, ರೋಹಿಣೀ, ಭದ್ರಾ, ಮದಿರಾ, ರೋಚನಾ, ಇಲಾ ಮತ್ತು ದೇವಕಿ ಮುಂತಾದ ಅನೇಕ ಪತ್ನಿಯರಿದ್ದರು. ॥45॥
(ಶ್ಲೋಕ-46)
ಮೂಲಮ್
ಬಲಂ ಗದಂ ಸಾರಣಂ ಚ ದುರ್ಮದಂ ವಿಪುಲಂ ಧ್ರುವಮ್ ।
ವಸುದೇವಸ್ತು ರೋಹಿಣ್ಯಾಂ ಕೃತಾದೀನುದಪಾದಯತ್ ॥
ಅನುವಾದ
ರೋಹಿಣಿಯ ಗರ್ಭದಿಂದ ವಸುದೇವನು ಬಲರಾಮ, ಗದ, ಸಾರಣ, ದುರ್ಮದ, ವಿಪುಲ, ಧ್ರುವ ಮತ್ತು ಕೃತ ಮುಂತಾದ ಪುತ್ರರನ್ನು ಪಡೆದನು. ॥46॥
(ಶ್ಲೋಕ-47)
ಮೂಲಮ್
ಸುಭದ್ರೋ ಭದ್ರವಾಹಶ್ಚ ದುರ್ಮದೋ ಭದ್ರ ಏವ ಚ ।
ಪೌರವ್ಯಾಸ್ತನಯಾ ಹ್ಯೇತೇ ಭೂತಾದ್ಯಾ ದ್ವಾದಶಾಭವನ್ ॥
ಅನುವಾದ
ಪೌರವಿಯ ಗರ್ಭದಿಂದ ಭೂತ, ಸುಭದ್ರ, ಭದ್ರವಾಹ, ದುರ್ಮದ, ಭದ್ರ ಮೊದಲಾದ ಹನ್ನೆರಡು ಮಕ್ಕಳನ್ನು ಪಡೆದನು. ॥47॥
(ಶ್ಲೋಕ-48)
ಮೂಲಮ್
ನಂದೋಪನಂದಕೃತಕಶೂರಾದ್ಯಾ ಮದಿರಾತ್ಮಜಾಃ ।
ಕೌಸಲ್ಯಾ ಕೇಶಿನಂ ತ್ವೇಕಮಸೂತ ಕುಲನಂದನಮ್ ॥
ಅನುವಾದ
ಮದಿರೆಯ ಗರ್ಭದಿಂದ ನಂದ, ಉಪನಂದ, ಕೃತಕ, ಶೂರ ಮುಂತಾದವರು ಹುಟ್ಟಿದರು. ಕೌಸಲ್ಯೆಯು ಕುಲಕ್ಕೆ ಆನಂದ ದಾಯಕನಾದ ‘ಕೇಶೀ’ ಎಂಬ ಓರ್ವನೇ ಪುತ್ರನನ್ನು ಹಡೆದಳು. ॥48॥
(ಶ್ಲೋಕ-49)
ಮೂಲಮ್
ರೋಚನಾಯಾಮತೋ ಜಾತಾ ಹಸ್ತಹೇಮಾಂಗದಾದಯಃ ।
ಇಲಾಯಾ ಮುರುವಲ್ಕಾದೀನ್ಯದುಮುಖ್ಯಾನಜೀಜನತ್ ॥
ಅನುವಾದ
ರೋಚನಾ ಎಂಬುವಳಲ್ಲಿ ಹಸ್ತ, ಹೇಮಾಂಗ ಮೊದಲಾದವರು, ಇಲೆಯಿಂದ ಉರುವಲ್ಕ ಮೊದಲಾದ ಯಾದವ ಮುಖ್ಯರಾದ ಪುತ್ರರನ್ನು ಪಡೆದನು. ॥49॥
(ಶ್ಲೋಕ-50)
ಮೂಲಮ್
ವಿಪೃಷ್ಠೊ ಧೃತದೇವಾಯಾಮೇಕ ಆನಕದುಂದುಭೇಃ ।
ಶಾಂತಿದೇವಾತ್ಮಜಾ ರಾಜನ್ ಶ್ರಮಪ್ರತಿಶ್ರುತಾದಯಃ ॥
ಅನುವಾದ
ಪರೀಕ್ಷಿತನೇ! ವಸುದೇವನ ಪತ್ನಿಯಾದ ಧೃತದೇವಾ ಎಂಬುವಳಲ್ಲಿ ವಿಪೃಷ್ಠ ಎಂಬ ಒಬ್ಬ ಮಗನಾದನು. ಶಾಂತಿದೇವಿಯಲ್ಲಿ ಶ್ರಮ ಮತ್ತು ಪ್ರತಿಶ್ರುತ ಮೊದಲಾದ ಅನೇಕ ಪುತ್ರರು ಹುಟ್ಟಿದರು. ॥50॥
(ಶ್ಲೋಕ-51)
ಮೂಲಮ್
ರಾಜಾನಃ ಕಲ್ಪವರ್ಷಾದ್ಯಾ ಉಪದೇವಾಸುತಾ ದಶ ।
ವಸುಹಂಸಸುವಂಶಾದ್ಯಾಃ ಶ್ರೀದೇವಾಯಾಸ್ತು ಷಟ್ಸುತಾಃ ॥
ಅನುವಾದ
ಉಪದೇವಾ ಎಂಬುವಳಿಂದ ಕಲ್ಪವರ್ಷ ಮೊದಲಾದ ಹತ್ತು ರಾಜರನ್ನು ಪಡೆದನು. ಶ್ರೀದೇವಾಳಿಂದ ವಸು, ಹಂಸ, ಸುವಂಶ ಮೊದಲಾದ ಆರು ಪುತ್ರರಾದರು. ॥51॥
(ಶ್ಲೋಕ-52)
ಮೂಲಮ್
ದೇವರಕ್ಷಿತಯಾ ಲಬ್ಧಾ ನವ ಚಾತ್ರ ಗದಾದಯಃ ।
ವಸುದೇವಃ ಸುತಾನಷ್ಟಾವಾದಧೇ ಸಹದೇವಯಾ ॥
(ಶ್ಲೋಕ-53)
ಮೂಲಮ್
ಪುರುವಿಶ್ರುತಮುಖ್ಯಾಂಸ್ತು ಸಾಕ್ಷಾದ್ಧರ್ಮೋ ವಸೂನಿವ ।
ವಸುದೇವಸ್ತು ದೇವಕ್ಯಾಮಷ್ಟ ಪುತ್ರಾನಜೀಜನತ್ ॥
(ಶ್ಲೋಕ-54)
ಮೂಲಮ್
ಕೀರ್ತಿಮಂತಂ ಸುಷೇಣಂ ಚ ಭದ್ರಸೇನಮುದಾರಧೀಃ ।
ಋಜುಂ ಸಮ್ಮರ್ದನಂ ಭದ್ರಂ ಸಂಕರ್ಷಣಮಹೀಶ್ವರಮ್ ॥
ಅನುವಾದ
ದೇವರಕ್ಷಿತೆಯಿಂದ ಗದ ಮೊದಲಾದ ಒಂಭತ್ತು ಪುತ್ರರಾದರು. ಧರ್ಮನು ಎಂಟು ವಸುಗಳನ್ನು ಪಡೆದು ಕೊಂಡಂತೆ ವಸುದೇವನು ಸಹದೇವಾಳಿಂದ ಪುರುವಿಶ್ರುತ ಮೊದಲಾದ ಎಂಟು ಪುತ್ರರನ್ನು ಪಡೆದನು. ಪರಮ ಉದಾರ ವಸುದೇವನು ದೇವಕಿಯ ಗರ್ಭದಿಂದಲೂ ಎಂಟುಮಂದಿ ಪುತ್ರರನ್ನು ಪಡೆದನು ಅವರಲ್ಲಿ ಏಳರ ಹೆಸರು ಕೀರ್ತಿಮಾನ್, ಸುಷೇಣ, ಭದ್ರಸೇನ, ಋಜು, ಸಮ್ಮರ್ಧನ, ಭದ್ರ ಮತ್ತು ಶೇಷಾವತಾರೀ ಶ್ರೀಬಲರಾಮ ಎಂದಿತ್ತು. ॥52-54॥
(ಶ್ಲೋಕ-55)
ಮೂಲಮ್
ಅಷ್ಟಮಸ್ತು ತಯೋರಾಸೀತ್ಸ್ವಯಮೇವ ಹರಿಃ ಕಿಲ ।
ಸುಭದ್ರಾ ಚ ಮಹಾಭಾಗಾ ತವ ರಾಜನ್ಪಿತಾಮಹೀ ॥
ಅನುವಾದ
ಅವರಿಬ್ಬರಲ್ಲಿ ಎಂಟನೆಯನಾಗಿ ಸ್ವತಃ ಭಗವಂತನೇ ಆಗಿದ್ದನು. ಪರೀಕ್ಷಿತನೇ! ನಿನ್ನ ಪಿತಾಮಹಿ ಪರಮ ಸೌಭಾಗ್ಯ ವತಿಯಾದ ಸುಭದ್ರೆಯೂ ದೇವಕನ ಮಗಳಾಗಿದ್ದಳು. ॥55॥
(ಶ್ಲೋಕ-56)
ಮೂಲಮ್
ಯದಾ ಯದೇಹ ಧರ್ಮಸ್ಯ ಕ್ಷಯೋ ವೃದ್ಧಿಶ್ಚ ಪಾಪ್ಮನಃ ।
ತದಾ ತು ಭಗವಾನೀಶ ಆತ್ಮಾನಂ ಸೃಜತೇ ಹರಿಃ ॥
ಅನುವಾದ
ಪ್ರಪಂಚದಲ್ಲಿ ಧರ್ಮದ ಹ್ರಾಸ ಮತ್ತು ಪಾಪದ ವೃದ್ಧಿಯಾದಾಗಲೆಲ್ಲ ಸರ್ವಶಕ್ತನಾದ ಭಗವಾನ್ ಶ್ರೀಹರಿಯು ಅವತರಿಸುವನು. ॥56॥
(ಶ್ಲೋಕ-57)
ಮೂಲಮ್
ನ ಹ್ಯಸ್ಯ ಜನ್ಮನೋ ಹೇತುಃ ಕರ್ಮಣೋ ವಾ ಮಹೀಪತೇ ।
ಆತ್ಮಮಾಯಾಂ ವಿನೇಶಸ್ಯ ಪರಸ್ಯ ದ್ರಷ್ಟುರಾತ್ಮನಃ ॥
ಅನುವಾದ
ಪರೀಕ್ಷಿತನೇ! ಭಗವಂತನು ಎಲ್ಲರ ದ್ರಷ್ಟಾ ಮತ್ತು ವಾಸ್ತವವಾಗಿ ಅಸಂಗನಾದ ಆತ್ಮನೇ ಆಗಿರುವನು. ಅದಕ್ಕಾಗಿ ಅವನ ಜನ್ಮ ಮತ್ತು ಕರ್ಮಗಳಿಗೆ ಆತ್ಮಸ್ವರೂಪಿಣಿಯಾದ ಯೋಗಮಾಯೆಯಲ್ಲದೆ ಬೇರೆ ಯಾವ ಕಾರಣವೂ ಇಲ್ಲ. ॥57॥
(ಶ್ಲೋಕ-58)
ಮೂಲಮ್
ಯನ್ಮಾಯಾಚೇಷ್ಟಿತಂ ಪುಂಸಃ ಸ್ಥಿತ್ಯುತ್ಪತ್ತ್ಯಪ್ಯಯಾಯ ಹಿ ।
ಅನುಗ್ರಹಸ್ತನ್ನಿವೃತ್ತೇರಾತ್ಮಲಾಭಾಯ ಚೇಷ್ಯತೇ ॥
ಅನುವಾದ
ಅವನ ಮಾಯೆಯ ವಿಲಾಸವೇ ಜೀವಿಯ ಜನ್ಮ, ಜೀವನ, ಮರಣ ಇವುಗಳ ಕಾರಣವಾಗಿದೆ. ಅವನ ಅನುಗ್ರಹವೇ ಮಾಯೆಯನ್ನು ಕಳೆದು ಆತ್ಮಸ್ವರೂಪವನ್ನು ದೊರಕಿಸಿಕೊಡುವಂತಹುದಾಗಿದೆ. ॥58॥
(ಶ್ಲೋಕ-59)
ಮೂಲಮ್
ಅಕ್ಷೌಹಿಣೀನಾಂ ಪತಿಭಿರಸುರೈರ್ನೃಪಲಾಂಛನೈಃ ।
ಭುವ ಆಕ್ರಮ್ಯಮಾಣಾಯಾ ಅಭಾರಾಯ ಕೃತೋದ್ಯಮಃ ॥
(ಶ್ಲೋಕ-60)
ಮೂಲಮ್
ಕರ್ಮಾಣ್ಯಪರಿಮೇಯಾಣಿ ಮನಸಾಪಿ ಸುರೇಶ್ವರೈಃ ।
ಸಹಸಂಕರ್ಷಣಶ್ಚಕ್ರೇ ಭಗವಾನ್ಮಧುಸೂದನಃ ॥
ಅನುವಾದ
ಅಸುರರು ರಾಜರ ವೇಷವನ್ನು ತೊಟ್ಟು, ಬಹಳಷ್ಟು ಅಕ್ಷೌಹಿಣೀ ಸೈನ್ಯವನ್ನು ಒಟ್ಟುಗೂಡಿಸಿ ಪೃಥ್ವಿಯನ್ನು ಆಕ್ರಮಿಸಿ ಭೂಭಾರವಾದಾಗ ಭಗವಾನ್ ಮಧುಸೂದನನು ಬಲರಾಮನೊಂದಿಗೆ ಅವತರಿಸಿದನು. ಸಂಕರ್ಷಣನೊಂದಿಗೆ ಆ ಭಗವಂತನು ದೇವತೆಗಳೂ ಕೂಡ ಮನಸ್ಸಿನಿಂದಲೂ ಎಣಿಸಲಾರದ ಪರಮಾದ್ಭುತವಾದ ಲೀಲೆಗಳನ್ನು ನಡೆಸಿದನು. ॥59-60॥
(ಶ್ಲೋಕ-61)
ಮೂಲಮ್
ಕಲೌ ಜನಿಷ್ಯಮಾಣಾನಾಂ ದುಃಖಶೋಕತಮೋನುದಮ್ ।
ಅನುಗ್ರಹಾಯ ಭಕ್ತಾನಾಂ ಸುಪುಣ್ಯಂ ವ್ಯತನೋದ್ಯಶಃ ॥
ಅನುವಾದ
ಭೂಭಾರವನ್ನು ಇಳಿಸುವುದರ ಜೊತೆಗೆ ಕಲಿಯುಗದಲ್ಲಿ ಹುಟ್ಟಿದ, ಹುಟ್ಟಲಿರುವ ಭಕ್ತರ ಮೇಲೆ ಅನುಗ್ರಹ ಮಾಡಲಿಕ್ಕಾಗಿ ಭಗವಂತನು ಕೇವಲ ಶ್ರವಣಮಾತ್ರದಿಂದಲೇ ಭಕ್ತರ ಶೋಕ-ದುಃಖಗಳನ್ನೂ, ಅಜ್ಞಾನವನ್ನೂ ತೊಲಗಿಸುವಂತಹ ಪರಮಪವಿತ್ರ, ಪುಣ್ಯಕರವಾದ ಯಶವನ್ನು ಹರಡಿದನು. ॥61॥
(ಶ್ಲೋಕ-62)
ಮೂಲಮ್
ಯಸ್ಮಿನ್ಸತ್ಕರ್ಣಪೀಯೂಷೇ ಯಶಸ್ತೀರ್ಥವರೇ ಸಕೃತ್ ।
ಶ್ರೋತ್ರಾಂಜಲಿರುಪಸ್ಪೃಶ್ಯ ಧುನುತೇ ಕರ್ಮವಾಸನಾಮ್ ॥
ಅನುವಾದ
ಅವನ ಪವಿತ್ರಕೀರ್ತಿಯು ಜನರನ್ನು ಪವಿತ್ರಗೊಳಿಸುವಂತಹ ಪುಣ್ಯತೀರ್ಥವಾಗಿದೆ. ಸಾಧು-ಸಂತರ ಕಿವಿಗಳಿಗೆ ಅದಾದರೋ ಪ್ರತ್ಯಕ್ಷ ಅಮೃತವೇ ಆಗಿದೆ. ಒಂದೇ ಬಾರಿ ಕಿವಿಗಳೆಂಬ ಅಂಜಲಿಯಿಂದ ಪಾನಮಾಡಿದರೆ ಕರ್ಮವಾಸನೆಗಳು ನಿರ್ಮೂಲವಾಗುವುವು. ॥62॥
(ಶ್ಲೋಕ-63)
ಮೂಲಮ್
ಭೋಜವೃಷ್ಣ್ಯಂಧಕಮಧುಶೂರಸೇನದಶಾರ್ಹಕೈಃ ।
ಶ್ಲಾಘನೀಯೇಹಿತಃ ಶಶ್ವತ್ಕುರುಸೃಂಜಯಪಾಂಡುಭಿಃ ॥
ಅನುವಾದ
ಪರೀಕ್ಷಿತನೇ! ಭೋಜ, ವೃಷ್ಣಿ, ಅಂಧಕ, ಮಧು, ಶೂರಸೇನ, ದಶಾರ್ಹ, ಕುರು, ಸೃಂಜಯ ಮತ್ತು ಪಾಂಡುವಂಶದ ವೀರರು ನಿರಂತರವಾಗಿ ಭಗವಂತನ ಲೀಲೆಗಳನ್ನು ಆದರದಿಂದ ಪ್ರಶಂಸಿಸುತ್ತಾರೆ. ॥63॥
(ಶ್ಲೋಕ-64)
ಮೂಲಮ್
ಸ್ನಿಗ್ಧಸ್ಮಿತೇಕ್ಷಿತೋದಾರೈರ್ವಾಕ್ಯೈರ್ವಿಕ್ರಮಲೀಲಯಾ ।
ನೃಲೋಕಂ ರಮಯಾಮಾಸ ಮೂರ್ತ್ಯಾ ಸರ್ವಾಂಗ ರಮ್ಯಯಾ ॥
ಅನುವಾದ
ಅವನ ಶ್ಯಾಮಲ ಶರೀರವು ಸರ್ವಾಂಗ ಸುಂದರವಾಗಿತ್ತು. ಅವನು ಆ ಮನೋಹರ ವಿಗ್ರಹದಿಂದ ಹಾಗೂ ತನ್ನ ಪ್ರೇಮತುಂಬಿದ ಮುಗುಳ್ನಗೆಯಿಂದ, ಮಧುರ ನೋಟದಿಂದ, ಪ್ರಾಸಾದಿಕ ವಚನಗಳಿಂದ ಮತ್ತು ಪರಾಕ್ರಮದಿಂದ ಕೂಡಿದ ಲೀಲೆಗಳಿಂದ ಇಡೀ ಮನುಷ್ಯಲೋಕವನ್ನು ಆನಂದ ಸಾಗರದಲ್ಲಿ ಮುಳುಗಿಸಿ ಬಿಟ್ಟನು. ॥64॥
(ಶ್ಲೋಕ-65)
ಮೂಲಮ್
ಯಸ್ಯಾನನಂ ಮಕರಕುಂಡಲಚಾರುಕರ್ಣ-
ಭ್ರಾಜತ್ಕಪೋಲಸುಭಗಂ ಸವಿಲಾಸಹಾಸಮ್ ।
ನಿತ್ಯೋತ್ಸವಂ ನ ತತೃಪುರ್ದೃಶಿಭಿಃ ಪಿಬಂತ್ಯೋ
ನಾರ್ಯೋ ನರಾಶ್ಚ ಮುದಿತಾಃ ಕುಪಿತಾ ನಿಮೇಶ್ಚ ॥
ಅನುವಾದ
ಭಗವಂತನ ಮುಖ ಕಮಲದ ಶೋಭೆಯು ಅದ್ಭುತವಾಗಿತ್ತು. ಮಕರಾಕೃತಿಯ ಕುಂಡಲಗಳಿಂದ ಅವನ ಕಿವಿಗಳು ಕಮನೀಯವಾಗಿದ್ದವು. ಕುಂಡಲಗಳ ಕಾಂತಿಯಿಂದ ಕಪೋಲಗಳ ಕಾಂತಿಯು ಇನ್ನೂ ಝಗ-ಝಗಿಸುತ್ತಿತ್ತು. ಅವನು ಹುಸಿನಗೆಯಿಂದ ಕೂಡಿದ್ದ ಸರ್ವದಾ ಸಂತೋಷವನ್ನೇ ಉಂಟುಮಾಡುತ್ತಿದ್ದ ಶ್ರೀಕೃಷ್ಣನ ಮುಖಾರವಿಂದ ಮಾಧುರಿಯನ್ನು ಸ್ತ್ರೀ-ಪುರುಷರಾದಿಯಾಗಿ ಸಮಸ್ತ ಜನರು ಕಣ್ಣುಗಳೆಂಬ ಪಾತ್ರೆಯಿಂದ ಪಾನ ಮಾಡುತ್ತಿದ್ದರು. ಅವರಿಗೆ ಎಷ್ಟು ನೋಡಿದರೂ ತೃಪ್ತಿಯೇ ಆಗುತ್ತಿರಲಿಲ್ಲ. ಕಣ್ಣುಗಳನ್ನು ಮುಚ್ಚಿ ತೆರೆಯುವುದಕ್ಕೆ ನಿಯಾಮಕನಾದ ನಿಮಿಯನ್ನೇ ಅವರು ನಿಂದಿಸುತ್ತಿದ್ದರು. ॥65॥
(ಶ್ಲೋಕ-66)
ಮೂಲಮ್
ಜಾತೋ ಗತಃ ಪಿತೃಗೃಹಾದ್ವ್ರಜಮೇಧಿತಾರ್ಥೋ
ಹತ್ವಾ ರಿಪೂನ್ಸುತಶತಾನಿ ಕೃತೋರುದಾರಃ ।
ಉತ್ಪಾದ್ಯ ತೇಷು ಪುರುಷಃ ಕ್ರತುಭಿಃ ಸಮೀಜೇ
ಆತ್ಮಾನಮಾತ್ಮನಿಗಮಂ ಪ್ರಥಯಂಜನೇಷು ॥
ಅನುವಾದ
ಇಂತಹ ಜಗದಾನಂದಕರನಾದ ಭಗವಂತನು ಮಥುರೆಯ ವಸುದೇವನ ಮನೆಯಲ್ಲಿ ಅವತರಿಸಿದ್ದರೂ ಅವನು ಅಲ್ಲಿರದೆ ಗೋಕುಲದ ನಂದಮಹಾರಾಜನ ಮನೆಗೆ ಹೋದನು. ಅಲ್ಲಿ ಗೋಪರನ್ನೂ, ಗೋಪಿಯರನ್ನೂ, ಗೋವುಗಳನ್ನೂ ಸಂತೋಷ ಪಡಿಸಿ ಮಥುರೆಗೆ ಮರಳಿದನು. ವ್ರಜದಲ್ಲಿ, ಮಥುರೆಯಲ್ಲಿ, ದ್ವಾರಕೆಯಲ್ಲಿ ಇದ್ದು ಕೊಂಡು ಅನೇಕ ಶತ್ರುಗಳನ್ನು ಸಂಹರಿಸಿದನು. ಸಾವಿರಾರು ಕನ್ಯೆಯರನ್ನು ವಿವಾಹವಾದನು. ಅವರಲ್ಲಿ ಅಸಂಖ್ಯಾತ ಮಕ್ಕಳನ್ನು ಪಡೆದನು. ಜೊತೆಗೆ ಜನರಲ್ಲಿ ತನ್ನ ಸ್ವರೂಪವನ್ನು ಸಾಕ್ಷಾತ್ಕಾರ ಮಾಡಿಸುವಂತಹ ಶ್ರುತಿಗಳ ಮರ್ಯಾದೆಯನ್ನು ಸ್ಥಾಪಿಸಲಿಕ್ಕಾಗಿ ಅನೇಕ ಯಜ್ಞಗಳ ಮೂಲಕ ಸ್ವಯಂ ತನ್ನನ್ನೇ ತಾನು ಆರಾಧಿಸಿಕೊಂಡನು. ॥66॥
(ಶ್ಲೋಕ-67)
ಮೂಲಮ್
ಪೃಥ್ವ್ಯಾಃ ಸ ವೈ ಗುರುಭರಂ ಕ್ಷಪಯನ್ಕುರೂಣಾ-
ಮಂತಃ ಸಮುತ್ಥಕಲಿನಾ ಯುಧಿ ಭೂಪಚಮ್ವಃ ।
ದೃಷ್ಟ್ಯಾ ವಿಧೂಯ ವಿಜಯೇ ಜಯಮುದ್ವಿಘೋಷ್ಯ
ಪ್ರೋಚ್ಯೋದ್ಧವಾಯ ಚ ಪರಂ ಸಮಗಾತ್ಸ್ವಧಾಮ ॥
ಅನುವಾದ
ಕೌರವ-ಪಾಂಡವರಲ್ಲಿ ಉಂಟಾದ ಪರಸ್ಪರ ಕಲಹದಿಂದ ಅವನು ಪೃಥಿವಿಯ ಬಹಳಷ್ಟು ಭಾರವನ್ನು ತಗ್ಗಿಸಿದನು. ಕುರುಕ್ಷೇತ್ರದ ಯುದ್ಧದಲ್ಲಿ ತನ್ನ ದೃಷ್ಟಿಮಾತ್ರದಿಂದ ರಾಜರ ಅನೇಕ ಅಕ್ಷೌಹಿಣಿಗಳನ್ನು ಧ್ವಂಸಮಾಡಿ ಜಗತ್ತಿನಲ್ಲಿ ಅರ್ಜುನನ ವಿಜಯದುಂದುಭಿಯನ್ನು ಮೊಳಗಿಸಿದನು. ಮತ್ತೆ ಉದ್ಧವನಿಗೆ ಆತ್ಮತತ್ತ್ವವನ್ನು ಉಪದೇಶಿಸಿ ಕೊನೆಗೆ ತನ್ನ ಪರಮಧಾಮಕ್ಕೆ ತೆರಳಿದನು.॥67॥
ಅನುವಾದ (ಸಮಾಪ್ತಿಃ)
ಇಪ್ಪತ್ತನಾಲ್ಕನೆಯ ಅಧ್ಯಾಯವು ಮುಗಿಯಿತು.॥24॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ
ಶ್ರೀಸೂರ್ಯಸೋಮವಂಶಾನುಕೀರ್ತನೇ ಯದುವಂಶಾನುಕೀರ್ತನಂ ನಾಮ ಚತುರ್ವಿಂಶೋಽಧ್ಯಾಯಃ ॥24॥
ಒಂಭತ್ತನೆಯ ಸ್ಕಂಧವು ಸಂಪೂರ್ಣವಾಯಿತು.