೨೩

[ಇಪ್ಪತ್ತಮೂರನೆಯ ಅಧ್ಯಾಯ]

ಭಾಗಸೂಚನಾ

ಅನು, ದ್ರುಹ್ಯು, ತುರ್ವಸು ಮತ್ತು ಯದು ಇವರ ವಂಶದ ವರ್ಣನೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಅನೋಃ ಸಭಾನರಶ್ಚಕ್ಷುಃ ಪರೋಕ್ಷಶ್ಚ ತ್ರಯಃ ಸುತಾಃ ।
ಸಭಾನರಾತ್ಕಾಲನರಃ ಸೃಞ್ಜಯಸ್ತತ್ಸುತಸ್ತತಃ ॥

(ಶ್ಲೋಕ-2)

ಮೂಲಮ್

ಜನಮೇಜಯಸ್ತಸ್ಯ ಪುತ್ರೋ ಮಹಾಶೀಲೋ ಮಹಾಮನಾಃ ।
ಉಶೀನರಸ್ತಿತಿಕ್ಷುಶ್ಚ ಮಹಾಮನಸ ಆತ್ಮಜೌ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಯಯಾತಿಯ ಮತ್ತೊಬ್ಬ ಮಗನಾದ ಅನು ಎಂಬುವನಿಗೆ ಸಭಾನರ, ಚಕ್ಷು, ಪರೋಕ್ಷ ಎಂಬ ಮೂವರು ಪುತ್ರರಿದ್ದರು. ಸಭಾನರನಿಗೆ ಕಾಲನರ, ಕಾಲನರನಿಗೆ ಸೃಂಜಯ, ಸೃಂಜಯನಿಗೆ ಜನಮೇಜಯ, ಜನಮೇಜಯನಿಗೆ ಮಹಾಶೀಲ, ಮಹಾಶೀಲನಿಗೆ ಮಹಾಮನಾ ಎಂಬ ಪುತ್ರನಾದನು. ಮಹಾಮನನಿಗೆ ಉಶೀನರ ಮತ್ತು ತಿತಿಕ್ಷು ಎಂಬ ಇಬ್ಬರು ಪುತ್ರರಾದರು. ॥1-2॥

(ಶ್ಲೋಕ-3)

ಮೂಲಮ್

ಶಿಬಿರ್ವನಃ ಶಮಿರ್ದಕ್ಷಶ್ಚತ್ವಾರೋಶೀನರಾತ್ಮಜಾಃ ।
ವೃಷಾದರ್ಭಃ ಸುವೀರಶ್ಚ ಮದ್ರಃ ಕೈಕೇಯ ಆತ್ಮಜಾಃ ॥

(ಶ್ಲೋಕ-4)

ಮೂಲಮ್

ಶಿಬೇಶ್ಚತ್ವಾರ ಏವಾಸಂಸ್ತಿತಿಕ್ಷೋಶ್ಚ ರುಷದ್ರಥಃ ।
ತತೋ ಹೇಮೋಽಥ ಸುತಪಾ ಬಲಿಃ ಸುತಪಸೋಽಭವತ್ ॥

ಅನುವಾದ

ಉಶೀನರನಿಗೆ ಶಿಬಿ, ವನ, ಶಮೀ, ದಕ್ಷ ಎಂಬ ನಾಲ್ಕು ಮಕ್ಕಳಿದ್ದರು. ಶಿಬಿಗೆ ವೃಷಾದರ್ಭ, ಸುವೀರ, ಮದ್ರ, ಕೈಕೇಯ ಎಂಬ ನಾಲ್ಕು ಪುತ್ರರಾದರು. ಉಶೀನರನ ತಮ್ಮ ತಿತಿಕ್ಷುವಿಗೆ ರುಶದ್ರಥ, ರುಶದ್ರಥನಿಗೆ ಹೇಮ, ಹೇಮನಿಗೆ ಸುತಪಾ, ಸುತಪನಿಗೆ ಬಲಿ ಎಂಬ ಪುತ್ರನಾದನು. ॥3-4॥

(ಶ್ಲೋಕ-5)

ಮೂಲಮ್

ಅಂಗವಂಗಕಲಿಂಗಾದ್ಯಾಃ ಸುಹ್ಮಪುಂಡ್ರಾಂಧ್ರಸಂಜ್ಞಿತಾಃ ।
ಜಜ್ಞಿರೇ ದೀರ್ಘತಮಸೋ ಬಲೇಃ ಕ್ಷೇತ್ರೇ ಮಹೀಕ್ಷಿತಃ ॥

ಅನುವಾದ

ರಾಜಾಬಲಿಯ ಪತ್ನಿಯ ಗರ್ಭದಿಂದ ದೀರ್ಘತಮಾ ಋಷಿಯು ಅಂಗ, ವಂಗ, ಕಲಿಂಗ, ಸುಹ್ಮ, ಪುಂಡ್ರ ಮತ್ತು ಅಂಧ್ರ ಎಂಬ ಆರು ಮಂದಿಪುತ್ರರನ್ನು ಪಡೆದನು.॥5॥

(ಶ್ಲೋಕ-6)

ಮೂಲಮ್

ಚಕ್ರುಃ ಸ್ವನಾಮ್ನಾ ವಿಷಯಾನ್ಷಡಿಮಾನ್ಪ್ರಾಚ್ಯಕಾಂಶ್ಚ ತೇ ।
ಖನಪಾನೋಽಂಗತೋ ಜಜ್ಞೇ ತಸ್ಮಾದ್ದಿವಿರಥಸ್ತತಃ ॥

(ಶ್ಲೋಕ-7)

ಮೂಲಮ್

ಸುತೋ ಧರ್ಮರಥೋ ಯಸ್ಯ ಜಜ್ಞೇ ಚಿತ್ರರಥೋಽಪ್ರಜಾಃ ।
ರೋಮಪಾದ ಇತಿ ಖ್ಯಾತಸ್ತಸ್ಮೈ ದಶರಥಃ ಸಖಾ ॥

(ಶ್ಲೋಕ-8)

ಮೂಲಮ್

ಶಾಂತಾಂ ಸ್ವಕನ್ಯಾಂ ಪ್ರಾಯಚ್ಛದೃಷ್ಯಶೃಂಗ ಉವಾಹ ತಾಮ್ ।
ದೇವೇಽವರ್ಷತಿ ಯಂ ರಾಮಾ ಆನಿನ್ಯುರ್ಹರಿಣೀಸುತಮ್ ॥

(ಶ್ಲೋಕ-9)

ಮೂಲಮ್

ನಾಟ್ಯಸಂಗೀತವಾದಿತ್ರೈರ್ವಿಭ್ರಮಾಲಿಂಗನಾರ್ಹಣೈಃ ।
ಸ ತು ರಾಜ್ಞೊನಪತ್ಯಸ್ಯ ನಿರೂಪ್ಯೇಷ್ಟಿಂ ಮರುತ್ವತಃ ॥

(ಶ್ಲೋಕ-10)

ಮೂಲಮ್

ಪ್ರಜಾಮದಾದ್ದಶರಥೋ ಯೇನ ಲೇಭೇಪ್ರಜಾಃ ಪ್ರಜಾಃ ।
ಚತುರಂಗೋ ರೋಮಪಾದಾತ್ಪೃಥುಲಾಕ್ಷಸ್ತು ತತ್ಸುತಃ ॥

ಅನುವಾದ

ಇವರು ತಮ್ಮ-ತಮ್ಮ ಹೆಸರುಗಳಿಂದ ಪೂರ್ವದಿಕ್ಕಿನಲ್ಲಿ ಆರು ದೇಶಗಳನ್ನು ಸ್ಥಾಪಿಸಿದರು. ಅಂಗನಿಗೆ ಖನಪಾನನೆಂಬ ಪುತ್ರನಾದನು. ಖನಪಾನನಿಗೆ ದಿವಿರಥ, ದಿವಿರಥನಿಗೆ ಧರ್ಮರಥ, ಧರ್ಮರಥನಿಗೆ ಚಿತ್ರರಥನಾದನು. ಈ ಚಿತ್ರರಥನೇ ರೋಮಪಾದನೆಂದು ಪ್ರಸಿದ್ಧನಾಗಿದ್ದನು. ಅಯೋಧ್ಯಾಪತಿ ದಶರಥನು ಇವನಿಗೆ ಮಿತ್ರನಾಗಿದ್ದನು. ರೋಮಪಾದನಿಗೆ ಸಂತಾನವಿರಲಿಲ್ಲ. ಅದಕ್ಕಾಗಿ ದಶರಥನು ತನ್ನ ಮಗಳಾದ ಶಾಂತಾ ಎಂಬುವಳನ್ನೂ ದತ್ತಕವಾಗಿ ಕೊಟ್ಟನು. ಶಾಂತಾಳ ವಿವಾಹವು ಋಷ್ಯಶೃಂಗ ಮುನಿಯೊಂದಿಗೆ ಜರುಗಿತು. ಋಷ್ಯಶೃಂಗನು ವಿಭಾಂಡಕ ಋಷಿಯಿಂದ ಜಿಂಕೆಯ ಹೊಟ್ಟೆಯಲ್ಲಿ ಹುಟ್ಟಿದ್ದನು. ಒಮ್ಮೆ ರೋಮಪಾದರಾಜನ ರಾಜ್ಯದಲ್ಲಿ ಬಹಳ ದಿನಗಳವರೆಗೆ ಮಳೆಯಾಗಲಿಲ್ಲ. ಆಗ ಗಣಿಕೆಯರು ತಮ್ಮ ನೃತ್ಯ, ಸಂಗೀತ, ವಾದ್ಯ, ಹಾವ-ಭಾವ, ಆಲಿಂಗನ ಮತ್ತು ವಿಧ-ವಿಧವಾದ ಉಪಹಾರಗಳಿಂದ ಋಷ್ಯಶೃಂಗನನ್ನು ಮೋಹಿತನನ್ನಾಗಿಸಿ ರಾಜ್ಯಕ್ಕೆ ಕರೆತಂದರು. ಅವನು ಬರುತ್ತಲೇ ಮಳೆ ಸುರಿಯಿತು. ಅವನೇ ರೋಮಪಾದನಿಂದ ಇಂದ್ರದೇವತೆಯ ಯಜ್ಞವನ್ನು ಮಾಡಿಸಿದಾಗ ಸಂತಾನ ಹೀನನಾದ ಅವನಿಗೆ ಪುತ್ರನಾದನು. ಪುತ್ರಹೀನನಾದ ದಶರಥನೂ ಕೂಡ ಅವರ ಪ್ರಯತ್ನದಿಂದಲೇ ನಾಲ್ಕು ಮಕ್ಕಳನ್ನು ಪಡೆದನು. ರೋಮಪಾದನ ಪುತ್ರ ಚತುರಂಗನಾದನು. ಚತುರಂಗನಿಗೆ ಪೃಥುಲಾಶ್ವನೆಂಬುವನು ಹುಟ್ಟಿದನು. ॥6-10॥

(ಶ್ಲೋಕ-11)

ಮೂಲಮ್

ಬೃಹದ್ರಥೋ ಬೃಹತ್ಕರ್ಮಾ ಬೃಹದ್ಭಾನುಶ್ಚ ತತ್ಸುತಾಃ ।
ಆದ್ಯಾದ್ಬೃಹನ್ಮನಾಸ್ತಸ್ಮಾಜ್ಜಯದ್ರಥ ಉದಾಹೃತಃ ॥

ಅನುವಾದ

ಪೃಥುಲಾಶ್ವನಿಗೆ ಬೃಹದ್ರಥ, ಬೃಹತ್ಕರ್ಮಾ ಮತ್ತು ಬೃಹದ್ಭಾನು ಎಂಬ ಮೂವರು ಪುತ್ರರಾದರು. ಬೃಹದ್ರಥನಿಗೆ ಬೃಹನ್ಮನಾ, ಬೃಹನ್ಮನನಿಗೆ ಜಯದ್ರಥನು ಹುಟ್ಟಿದನು. ॥11॥

(ಶ್ಲೋಕ-12)

ಮೂಲಮ್

ವಿಜಯಸ್ತಸ್ಯ ಸಂಭೂತ್ಯಾಂ ತತೋ ಧೃತಿರಜಾಯತ ।
ತತೋ ಧೃತವ್ರತಸ್ತಸ್ಯ ಸತ್ಕರ್ಮಾಧಿರಥಸ್ತತಃ ॥

ಅನುವಾದ

ಜಯದ್ರಥನಿಗೆ ಸಂಭೂತಿ ಎಂಬ ಪತ್ನಿಯಿದ್ದಳು. ಅವಳ ಗರ್ಭದಿಂದ ವಿಜಯನ ಜನ್ಮವಾಯಿತು. ವಿಜಯನಿಗೆ ಧೃತಿ, ಧೃತಿಗೆ ಧೃತವ್ರತ, ಧೃತವ್ರತನಿಗೆ ಸತ್ಕರ್ಮಾ, ಸತ್ಕರ್ಮನಿಗೆ ಅಧಿರಥನೆಂಬ ಪುತ್ರನಾದನು. ॥12॥

(ಶ್ಲೋಕ-13)

ಮೂಲಮ್

ಯೋಸೌ ಗಂಗಾತಟೇ ಕ್ರೀಡನ್ ಮಂಜೂಷಾಂತರ್ಗತಂ ಶಿಶುಮ್ ।
ಕುಂತ್ಯಾಪವಿದ್ಧಂ ಕಾನೀನಮನಪತ್ಯೋಕರೋತ್ಸುತಮ್ ॥

ಅನುವಾದ

ಅಧಿರಥನಿಗೆ ಸಂತಾನವಿರಲಿಲ್ಲ. ಒಂದುದಿನ ಅವನು ಗಂಗಾತೀರದಲ್ಲಿ ಕ್ರೀಡಿಸುತ್ತಿದ್ದಾಗ ಗಂಗಾನದಿಯಲ್ಲಿ ತೇಲಿಬರುತ್ತಿದ್ದ ಪೆಟ್ಟಿಗೆಯಲ್ಲಿ ಒಂದು ಹಸುಳೆಯನ್ನು ನೋಡಿದನು. ಕುಂತಿಯು ಅವನನ್ನು ಕನ್ಯಾವಸ್ಥೆಯಲ್ಲೇ ಸೂರ್ಯನ ಅನುಗ್ರಹದಿಂದ ಪಡೆದಿದ್ದಳು. ಲೋಕಾಪವಾದಕ್ಕೆ ಹೆದರಿ ಅವನನ್ನು ನದಿಯಲ್ಲಿ ತೇಲಿಬಿಟ್ಟಿದ್ದಳು. ಅಧಿರಥನು ಅವನನ್ನು ತನ್ನ ಪುತ್ರನನ್ನಾಗಿಸಿಕೊಂಡನು. ಅವನೇ ವಿಖ್ಯಾತನಾದ ಕರ್ಣನಾದನು. ॥13॥

(ಶ್ಲೋಕ-14)

ಮೂಲಮ್

ವೃಷಸೇನಃ ಸುತಸ್ತಸ್ಯ ಕರ್ಣಸ್ಯ ಜಗತೀಪತೇಃ ।
ದ್ರುಹ್ಯೋಶ್ಚ ತನಯೋ ಬಭ್ರುಃ ಸೇತುಸ್ತಸ್ಯಾತ್ಮಜಸ್ತತಃ ॥

(ಶ್ಲೋಕ-15)

ಮೂಲಮ್

ಆರಬ್ಧಸ್ತಸ್ಯ ಗಾಂಧಾರಸ್ತಸ್ಯ ಧರ್ಮಸ್ತತೋ ಧೃತಃ ।
ಧೃತಸ್ಯ ದುರ್ಮನಾಸ್ತಸ್ಮಾತ್ಪ್ರಚೇತಾಃ ಪ್ರಾಚೇತಸಂ ಶತಮ್ ॥

(ಶ್ಲೋಕ-16)

ಮೂಲಮ್

ಮ್ಲೇಚ್ಛಾಧಿಪತಯೋಭೂವನ್ನು ದೀಚೀಂ ದಿಶಮಾಶ್ರಿತಾಃ ।
ತುರ್ವಸೋಶ್ಚ ಸುತೋ ವಹ್ನಿರ್ವಹ್ನೇರ್ಭರ್ಗೋಥ ಭಾನುಮಾನ್ ॥

(ಶ್ಲೋಕ-17)

ಮೂಲಮ್

ತ್ರಿಭಾನುಸ್ತತ್ಸುತೋಸ್ಯಾಪಿ ಕರಂಧಮ ಉದಾರಧೀಃ ।
ಮರುತಸ್ತತ್ಸುತೋಪುತ್ರಃ ಪುತ್ರಂ ಪೌರವಮನ್ವಭೂತ್ ॥

ಅನುವಾದ

ಪರೀಕ್ಷಿತನೇ! ಕರ್ಣನಿಗೆ ವೃಷಸೇನನೆಂಬ ಮಗನಿದ್ದನು. ಯಯಾತಿಯ ಪುತ್ರನಾದ ದ್ರುಹ್ಯುವಿಗೆ ಬಭ್ರುವಿನ ಜನ್ಮವಾಯಿತು. ಬಭ್ರುವಿಗೆ ಸೇತು, ಸೇತುವಿಗೆ ಆರಬ್ಧ, ಆರಬ್ಧನಿಗೆ ಗಾಂಧಾರ, ಗಾಂಧಾರನಿಗೆ ಧರ್ಮ, ಧರ್ಮನಿಗೆ ಧೃತ, ಧೃತನಿಗೆ ದುರ್ಮನಾ, ದುರ್ಮನನಿಗೆ ಪ್ರಚೇತಾ ಎಂಬ ಪುತ್ರನಾದನು. ಪ್ರಚೇತಸನಿಗೆ ನೂರು ಮಕ್ಕಳಾದರು. ಇವರು ಉತ್ತರ ದಿಕ್ಕಿನಲ್ಲಿ ಮ್ಲೇಂಛರಿಗೆ ರಾಜರಾದರು. ಯಯಾತಿಯ ಪುತ್ರ ತುರ್ವಸುವಿಗೆ ವಹ್ನಿ, ವಹ್ನಿಗೆ ಭರ್ಗ, ಭರ್ಗನಿಗೆ ಭಾನುಮಾನ್, ಭಾನುಮಂತನಿಗೆ ತ್ರಿಭಾನು, ತ್ರಿಭಾನುವಿಗೆ ಉದಾರ ಬುದ್ಧಿಯ ಕರಂಧಮನು. ಕರಂಧಮನಿಗೆ ಮರುತನೆಂಬ ಪುತ್ರನಾದನು. ಮರುತ್ತನು ಸಂತಾನಹೀನನಾಗಿದ್ದನು. ಅದಕ್ಕಾಗಿ ಅವನು ಪೂರುವಂಶೀ ದುಷ್ಯಂತನನ್ನು ತನ್ನ ಪುತ್ರನನ್ನಾಗಿಸಿಕೊಂಡಿದ್ದನು. ॥14-17॥

(ಶ್ಲೋಕ-18)

ಮೂಲಮ್

ದುಷ್ಯಂತಃ ಸ ಪುನರ್ಭೇಜೇ ಸ್ವಂ ವಂಶಂ ರಾಜ್ಯಕಾಮುಕಃ ।
ಯಯಾತೇರ್ಜ್ಯೇಷ್ಠಪುತ್ರಸ್ಯ ಯದೋರ್ವಂಶಂ ನರರ್ಷಭ ॥

ಅನುವಾದ

ಆದರೆ ದುಷ್ಯಂತನು ರಾಜ್ಯದ ಬಯಕೆಯಿಂದ ತನ್ನ ವಂಶಕ್ಕೆ ಮರಳಿದನು. ಪರೀಕ್ಷಿತನೇ! ಇನ್ನು ನಾನು ಯಯಾತಿಯ ಹಿರಿಯ ಮಗನಾದ ಯದುವಿನ ವಂಶವನ್ನು ವರ್ಣಿಸುವೆನು. ಆಲಿಸು. ॥18॥

(ಶ್ಲೋಕ-19)

ಮೂಲಮ್

ವರ್ಣಯಾಮಿ ಮಹಾಪುಣ್ಯಂ ಸರ್ವಪಾಪಹರಂ ನೃಣಾಮ್ ।
ಯದೋರ್ವಂಶಂ ನರಃ ಶ್ರುತ್ವಾ ಸರ್ವಪಾಪೈಃ ಪ್ರಮುಚ್ಯತೇ ॥

ಅನುವಾದ

ಪರೀಕ್ಷಿತನೇ! ಯದು ಮಹಾರಾಜನ ವಂಶವು ಪರಮ ಪವಿತ್ರವಾದುದು ಹಾಗೂ ಮನುಷ್ಯರ ಸಮಸ್ತ ಪಾಪಗಳನ್ನೂ ಪರಿಹರಿಸುವಂತಹುದು. ಇದನ್ನು ಶ್ರವಣಿಸುವವನು ಸಮಸ್ತ ಪಾಪಗಳಿಂದ ಮುಕ್ತನಾಗುವನು. ॥19॥

(ಶ್ಲೋಕ-20)

ಮೂಲಮ್

ಯತ್ರಾವತೀರ್ಣೋ ಭಗವಾನ್ಪರಮಾತ್ಮಾ ನರಾಕೃತಿಃ ।
ಯದೋಃ ಸಹಸ್ರಜಿತ್ಕ್ರೋಷ್ಟಾ ನಲೋ ರಿಪುರಿತಿ ಶ್ರುತಾಃ ॥

(ಶ್ಲೋಕ-21)

ಮೂಲಮ್

ಚತ್ವಾರಃ ಸೂನವಸ್ತತ್ರ ಶತಜಿತ್ಪ್ರಥಮಾತ್ಮಜಃ ।
ಮಹಾಹಯೋ ವೇಣುಹಯೋ ಹೈಹಯಶ್ಚೇತಿ ತತ್ಸುತಾಃ ॥

ಅನುವಾದ

ಈ ವಂಶದಲ್ಲಿ ಸ್ವಯಂ ಭಗವಾನ್ ಪರಬ್ರಹ್ಮ ಶ್ರೀಕೃಷ್ಣನು ಮನುಷ್ಯರೂಪದಿಂದ ಅವತರಿಸಿದ್ದನು. ಯದುವಿಗೆ ಸಹಸ್ರಜಿತ್, ಕ್ರೋಷ್ಟಾ, ನಲ ಮತ್ತು ರಿಪು ಎಂಬ ನಾಲ್ವರು ಪುತ್ರರಿದ್ದರು. ಸಹಸ್ರಜಿತ್ತುವಿಗೆ ಶತಜಿತ್ನಾದನು. ಶತಜಿತ್ತುವಿಗೆ ಮಹಾಹಯ, ವೇಣುಹಯ, ಮತ್ತು ಹೈಹಯ ಎಂಬ ಮೂವರು ಪುತ್ರರಾದರು. ॥20-21॥

(ಶ್ಲೋಕ-22)

ಮೂಲಮ್

ಧರ್ಮಸ್ತು ಹೈಹಯಸುತೋ ನೇತ್ರಃ ಕುಂತೇಃ ಪಿತಾ ತತಃ ।
ಸೋಹಂಜಿರಭವತ್ಕುಂತೇರ್ಮಹಿಷ್ಮಾನ್ಭದ್ರಸೇನಕಃ ॥

ಅನುವಾದ

ಹೈಹಯನಿಗೆ ಧರ್ಮ, ಧರ್ಮನಿಗೆ ನೇತ್ರ, ನೇತ್ರನಿಗೆ ಕುಂತಿ, ಕುಂತಿಗೆ ಸೋಹಂಜಿ, ಸೋಹಂಜಿಗೆ ಮಹಿಷ್ಮಾನ್, ಮಹಿಷ್ಮಂತನಿಗೆ ಭದ್ರಸೇನನೆಂಬ ಪುತ್ರನಾದನು. ॥22॥

(ಶ್ಲೋಕ-23)

ಮೂಲಮ್

ದುರ್ಮದೋ ಭದ್ರಸೇನಸ್ಯ ಧನಕಃ ಕೃತವೀರ್ಯಸೂಃ ।
ಕೃತಾಗ್ನಿಃ ಕೃತವರ್ಮಾ ಚ ಕೃತೌಜಾ ಧನಕಾತ್ಮಜಾಃ ॥

ಅನುವಾದ

ಭದ್ರಸೇನನಿಗೆ ದುರ್ಮದ ಮತ್ತು ಧನಕರೆಂಬ ಇಬ್ಬರು ಪುತ್ರರಿದ್ದರು. ಧನಕನಿಗೆ ಕೃತವೀರ್ಯ, ಕೃತಾಗ್ನಿ, ಕೃತವರ್ಮಾ, ಕೃತೌಜಾ ಎಂಬ ನಾಲ್ಕು ಮಕ್ಕಳಿದ್ದರು. ॥23॥

(ಶ್ಲೋಕ-24)

ಮೂಲಮ್

ಅರ್ಜುನಃ ಕೃತವೀರ್ಯಸ್ಯ ಸಪ್ತದ್ವೀಪೇಶ್ವರೋಭವತ್ ।
ದತ್ತಾತೇಯಾದ್ಧರೇರಂಶಾತ್ ಪ್ರಾಪ್ತಯೋಗಮಹಾಗುಣಃ ॥

ಅನುವಾದ

ಕೃತವೀರ್ಯನಿಗೆ ಅರ್ಜುನನಾಗಿದ್ದನು. ಅವನು ಸಪ್ತದ್ವೀಪಗಳಿಗೆ ಏಕಚ್ಛತ್ರ ಸಾಮ್ರಾಟನಾಗಿದ್ದನು. ಅವನು ಭಗವಂತನ ಅಂಶಾವತಾರವಾದ ದತ್ತಾತ್ರೇಯನಿಂದ ಯೋಗವಿದ್ಯೆ ಮತ್ತು ಅಣಿಮಾ, ಲಘಿಮಾ ಮುಂತಾದ ಮಹಾಸಿದ್ಧಿಗಳನ್ನು ಪಡೆದಿದ್ದನು. ॥24॥

(ಶ್ಲೋಕ-25)

ಮೂಲಮ್

ನ ನೂನಂ ಕಾರ್ತವೀರ್ಯಸ್ಯ ಗತಿಂ ಯಾಸ್ಯಂತಿ ಪಾರ್ಥಿವಾಃ ।
ಯಜ್ಞದಾನತಪೋಯೋಗಶ್ರುತವೀರ್ಯಜಯಾದಿಭಿಃ ॥

ಅನುವಾದ

ಪ್ರಪಂಚದಲ್ಲಿ ಯಾವ ಸಾಮ್ರಾಟನು ಯಜ್ಞ, ದಾನ, ತಪಸ್ಸು, ಯೋಗ, ಶಾಸ್ತ್ರಜ್ಞಾನ, ಪರಾಕ್ರಮ, ವಿಜಯ ಮುಂತಾದ ಗುಣಗಳಿಂದ ಕೂಡಿದ ಕಾರ್ತವೀರ್ಯಾರ್ಜುನನಿಗೆ ಸರಿಸಮಾನನಾಗಲಾರನು. ಇದರಲ್ಲಿ ಸಂದೇಹವೇ ಇಲ್ಲ. ॥25॥

(ಶ್ಲೋಕ-26)

ಮೂಲಮ್

ಪಂಚಾಶೀತಿಸಹಸ್ರಾಣಿ ಹ್ಯವ್ಯಾಹತಬಲಃ ಸಮಾಃ ।
ಅನಷ್ಟವಿತ್ತಸ್ಮರಣೋ ಬುಭುಜೇಕ್ಷಯ್ಯಷಡ್ವಸು ॥

ಅನುವಾದ

ಸಹಸ್ರಾರ್ಜುನನು ಎಂಭತ್ತೈದು ಸಾವಿರ ವರ್ಷಗಳವರೆಗೆ ಆರೂ ಇಂದ್ರಿಯಗಳಿಂದ ಅಕ್ಷಯ ವಿಷಯಗಳನ್ನು ಅನುಭವಿಸುತ್ತಾ ಇದ್ದನು. ಇದರ ನಡುವೆ ಅವನು ಶರೀರಬಲ ಕುಂದುವುದಾಗಲೀ, ಧನದ ನಾಶವಾಗುವುದಾಗಲೀ ಸ್ಮರಿಸಲೇ ಇಲ್ಲ. ಅವನ ಧನವು ನಾಶವಾಗುವುದಿರಲಿ, ಅವನ ಸ್ಮರಣೆಯಿಂದ ಕಳೆದುಹೋದ ಧನವು ಪುನಃ ದೊರಕುತ್ತಿತ್ತು.* ಅಂತಹ ಪ್ರಭಾವ ಅವನದಾಗಿತ್ತು. ॥26॥

ಟಿಪ್ಪನೀ
  • ಕಳೆದುಹೋದ ವಸ್ತುವನ್ನು ಪಡೆದುಕೊಳ್ಳಲು ಈಗಲೂ ಕೆಳಗಿನ ಈ ಕಾರ್ತವೀರ್ಯಾರ್ಜುನ ಮಂತ್ರವನ್ನು ಪಠಿಸುತ್ತಾರೆ.
  1. ಹೈಹಯಾನಾಂ ಮಹಾರಾಜಃ ಕಾರ್ತವೀರ್ಯೇತಿ ವಿಶ್ರುತಃ । ಯಸ್ಯ ಸ್ಮರಣ ಮಾತ್ರೇಣ ಹೃತಂ ನಷ್ಟಂ ಚ ಲಭ್ಯತೇ ॥
  2. ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹು ಸಹಸ್ರವಾನ್ । ಯಸ್ಯಸ್ಮರಣಮಾತ್ರೇಣ ಗತಂ ನಷ್ಟಂ ಚ ಲಭ್ಯತೇ ॥

(ಶ್ಲೋಕ-27)

ಮೂಲಮ್

ತಸ್ಯ ಪುತ್ರಸಹಸ್ರೇಷು ಪಂಚೈವೋರ್ವರಿತಾ ಮೃಧೇ ।
ಜಯಧ್ವಜಃ ಶೂರಸೇನೋ ವೃಷಭೋ ಮಧುರೂರ್ಜಿತಃ ॥

ಅನುವಾದ

ಅವನ ಸಾವಿರ ಮಕ್ಕಳಲ್ಲಿ ಕೇವಲ ಐವರು ಮಾತ್ರ ಜೀವಂತರಾಗಿದ್ದರು. ಉಳಿದವರೆಲ್ಲರೂ ಪರಶುರಾಮನ ಕ್ರೋಧಾಗ್ನಿಯಲ್ಲಿ ಭಸ್ಮವಾಗಿ ಹೋಗಿದ್ದರು. ಉಳಿದ ಪುತ್ರರ ಹೆಸರುಗಳು ಜಯಧ್ವಜ, ಶೂರಸೇನ, ವೃಷಭ, ಮಧು ಮತ್ತು ಊರ್ಜಿತ ಎಂದಿದ್ದವು. ॥27॥

(ಶ್ಲೋಕ-28)

ಮೂಲಮ್

ಜಯಧ್ವಜಾತ್ತಾಲಜಂಘಸ್ತಸ್ಯ ಪುತ್ರಶತಂ ತ್ವಭೂತ್ ।
ಕ್ಷತ್ರಂ ಯತ್ತಾಲಜಂಘಾಖ್ಯವೌರ್ವತೇಜೋಪಸಂಹೃತಮ್ ॥

ಅನುವಾದ

ಜಯಧ್ವಜನಿಗೆ ತಾಲಜಂಘನೆಂಬ ಪುತ್ರನಿದ್ದನು. ತಾಲಜಂಘನಿಗೆ ನೂರು ಪುತ್ರರಾದರು. ಅವರು ‘ತಾಲಜಂಘ’ರೆಂಬ ಹೆಸರಿನಿಂದ ಆ ಕ್ಷತ್ರಿಯರು ಕರೆಸಿಕೊಂಡರು. ಮಹರ್ಷಿ ಔರ್ವರೆಂಬುವರ ಶಕ್ತಿಯಿಂದ ಸಗರರಾಜನು ಇವರನ್ನು ಸಂಹರಿಸಿ ಬಿಟ್ಟನು. ॥28॥

(ಶ್ಲೋಕ-29)

ಮೂಲಮ್

ತೇಷಾಂ ಜ್ಯೇಷ್ಠೋ ವೀತಿಹೋತ್ರೋ ವೃಷ್ಣಿಃ ಪುತ್ರೋ ಮಧೋಃ ಸ್ಮೃತಃ ।
ತಸ್ಯ ಪುತ್ರಶತಂ ತ್ವಾಸೀದ್ವ ಷ್ಣಿಜ್ಯೇಷ್ಠಂ ಯತಃಕುಲಮ್ ॥

ಅನುವಾದ

ಆ ನೂರು ಪುತ್ರರಲ್ಲಿ ಹಿರಿಯವನು ವೀತಿ ಹೋತ್ರನಾಗಿದ್ದನು. ವೀತಿಹೋತ್ರನ ಮಗ ಮಧುವಾದನು. ಮಧುವಿಗೆ ನೂರು ಮಕ್ಕಳಿದ್ದರು. ಅವರಲ್ಲಿ ಎಲ್ಲರಿಗಿಂತ ಹಿರಿಯವನು ವೃಷ್ಣಿ ಎಂಬುವನಿದ್ದನು. ॥29॥

(ಶ್ಲೋಕ-30)

ಮೂಲಮ್

ಮಾಧವಾ ವೃಷ್ಣಯೋ ರಾಜನ್ ಯಾದವಾಶ್ಚೇತಿ ಸಂಜ್ಞಿತಾಃ ।
ಯದುಪುತ್ರಸ್ಯ ಚ ಕ್ರೋಷ್ಟೋಃ ಪುತ್ರೋ ವೃಜಿನವಾಂಸ್ತತಃ ॥

ಅನುವಾದ

ಪರೀಕ್ಷಿತನೇ! ಇವರೇ ಮಧು, ವೃಷ್ಣಿ ಮತ್ತು ಯದುವಿನ ಕಾರಣದಿಂದ ಈ ವಂಶವು ಮಾಧವ, ವಾರ್ಷ್ಣೇಯ ಮತ್ತು ಯಾದವ ಎಂಬ ಹೆಸರುಗಳಿಂದ ಪ್ರಸಿದ್ಧವಾಯಿತು. ಯದುನಂದನ ಕ್ರೋಷ್ಟುವಿಗೆ ವೃಜಿನವಾನ್ನೆಂಬ ಪುತ್ರನಿದ್ದನು. ॥30॥

(ಶ್ಲೋಕ-31)

ಮೂಲಮ್

ಶ್ವಾಹಿಸ್ತತೋ ರುಶೇಕುರ್ವೈ ತಸ್ಯ ಚಿತ್ರರಥಸ್ತತಃ ।
ಶಶಬಿಂದುರ್ಮಹಾಯೋಗೀ ಮಹಾಭೋಜೋ ಮಹಾನಭೂತ್ ॥

ಅನುವಾದ

ವೃಜಿನಮಂತನಿಗೆ ಶ್ವಾಹಿ. ಶ್ವಾಹಿಗೆ ರುಶೇಕು, ರುಶೇಕುವಿಗೆ ಚಿತ್ರರಥ, ಚಿತ್ರರಥನಿಗೆ ಶಶಬಿಂದು ಎಂಬ ಪುತ್ರನಿದ್ದನು. ಅವನು ಪರಮಯೋಗಿಯೂ, ಮಹಾಭೋಗ ಐಶ್ವರ್ಯ ಸಂಪನ್ನನೂ, ಅತ್ಯಂತ ಪರಾಕ್ರಮಿಯೂ ಆಗಿದ್ದನು. ॥31॥

(ಶ್ಲೋಕ-32)

ಮೂಲಮ್

ಚತುರ್ದಶಮಹಾರತ್ನಶ್ಚಕ್ರವರ್ತ್ಯಪರಾಜಿತಃ ।
ತಸ್ಯ ಪತ್ನೀಸಹಸ್ರಾಣಾಂ ದಶಾನಾಂ ಸುಮಹಾಯಶಾಃ ॥

(ಶ್ಲೋಕ-33)

ಮೂಲಮ್

ದಶಲಕ್ಷಸಹಸ್ರಾಣಿ ಪುತ್ರಾಣಾಂ ತಾಸ್ವಜೀಜನತ್ ।
ತೇಷಾಂ ತು ಷಟ್ಪ್ರಧಾನಾನಾಂ ಪೃಥುಶ್ರವಸ ಆತ್ಮಜಃ ॥

(ಶ್ಲೋಕ-34)

ಮೂಲಮ್

ಧರ್ಮೋ ನಾಮೋಶನಾ ತಸ್ಯ ಹಯಮೇಧಶತಸ್ಯ ಯಾಟ್ ।
ತತ್ಸುತೋ ರುಚಕಸ್ತಸ್ಯ ಪಂಚಾಸನ್ನಾತ್ಮಜಾಃ ಶೃಣು ॥

ಅನುವಾದ

ಅವನು ಹದಿನಾಲ್ಕು ರತ್ನಗಳಿಗೂ* ಒಡೆಯನೂ, ಚಕ್ರವರ್ತಿಯೂ, ಯುದ್ಧದಲ್ಲಿ ಅಜೇಯನೂ ಆಗಿದ್ದನು. ಪರಮ ಯಶಸ್ವೀ ಶಶಬಿಂದುವಿಗೆ ಹತ್ತುಸಾವಿರ ಪತ್ನಿಯರಿದ್ದರು. ಅವರಲ್ಲಿ ಒಬ್ಬೊಬ್ಬರಿಗೂ ಲಕ್ಷ-ಲಕ್ಷ ಸಂತಾನಗಳಿದ್ದವು. ಹೀಗೆ ಅವನು ನೂರುಕೋಟಿ ಮಕ್ಕಳನ್ನು ಪಡೆದನು. ಅವರಲ್ಲಿ ಪೃಥುಶ್ರವಾ ಮುಂತಾದ ಆರು ಪುತ್ರರು ಪ್ರಧಾನರಾಗಿದ್ದರು. ಪೃಥುಶ್ರವಸ್ಸುವಿಗೆ ಧರ್ಮನೆಂಬ ಪುತ್ರನಿದ್ದನು. ಧರ್ಮನಿಗೆ ಉಶನಾ ಎಂಬ ಪುತ್ರನಾದನು. ಅವನು ನೂರು ಅಶ್ವಮೇಧಗಳನ್ನು ಮಾಡಿದ್ದನು. ಉಶನನಿಗೆ ರುಚಕನೆಂಬ ಪುತ್ರನಾದನು. ರುಚಕನಿಗೆ ಐವರು ಪುತ್ರರಾದರು. ಅವರ ಹೆಸರು ಇಂತಿದೆ.॥32-34॥

ಟಿಪ್ಪನೀ
  • ಆನೆ, ಕುದುರೆ, ರಥ, ಸ್ತ್ರೀ, ಬಾಣ, ಭಂಡಾರ, ಮಾಲೆ, ವಸ್ತ್ರ, ವೃಕ್ಷ, ಶಕ್ತಿ, ಪಾಶ, ಮಣಿ, ಛತ್ರ ಮತ್ತು ವಿಮಾನ ಇವು ಹದಿನಾಲ್ಕು ರತ್ನಗಳು.

(ಶ್ಲೋಕ-35)

ಮೂಲಮ್

ಪುರುಜಿದ್ರುಕ್ಮರುಕ್ಮೇಷು ಪೃಥುಜ್ಯಾಮಘಸಂಜ್ಞಿತಾಃ ।
ಜ್ಯಾಮಘಸ್ತ್ವಪ್ರಜೋಪ್ಯನ್ಯಾಂ ಭಾರ್ಯಾಂ ಶೈಬ್ಯಾಪತಿರ್ಭಯಾತ್ ॥

(ಶ್ಲೋಕ-36)

ಮೂಲಮ್

ನಾವಿಂದಚ್ಛತ್ರುಭವನಾದ್ಭೋಜ್ಯಾಂ ಕನ್ಯಾಮಹಾರಷೀತ್ ।
ರಥಸ್ತಾಂ ತಾಂ ನಿರೀಕ್ಷ್ಯಾಹ ಶೈಬ್ಯಾ ಪತಿಮಮರ್ಷಿತಾ ॥

(ಶ್ಲೋಕ-37)

ಮೂಲಮ್

ಕೇಯಂ ಕುಹಕ ಮತ್ಸ್ಥಾನಂ ರಥಮಾರೋಪಿತೇತಿ ವೈ ।
ಸ್ನುಷಾ ತವೇತ್ಯಭಿಹಿತೇ ಸ್ಮಯಂತೀ ಪತಿಮಬ್ರವೀತ್ ॥

ಅನುವಾದ

ಪುರುಜಿತ್, ರುಕ್ಮ, ರುಕ್ಮೇಷು, ಪೃಥು ಮತ್ತು ಜ್ಯಾಮಘ. ಜ್ಯಾಮಘನ ಪತ್ನಿಯ ಹೆಸರು ಶೈಬ್ಯಾ ಎಂದಿತ್ತು. ಜ್ಯಾಮಘನಿಗೆ ಅನೇಕ ದಿನಗಳವರೆಗೆ ಸಂತಾನವಾಗಲಿಲ್ಲ. ಆದರೆ ಅವನು ತನ್ನ ಪತ್ನಿಯ ಭಯದಿಂದ ಇನ್ನೊಂದು ಮದುವೆ ಮಾಡಿಕೊಳ್ಳಲಿಲ್ಲ. ಒಮ್ಮೆ ಅವನು ತನ್ನ ಶತ್ರುವಿನ ಮನೆಯಿಂದ ಭೋಜ್ಯಾ ಎಂಬ ಕನ್ಯೆಯನ್ನು ಕದ್ದು ತಂದನು. ಶೈಬ್ಯಳು ಪತಿಯ ರಥದಲ್ಲಿ ಆ ಕನ್ಯೆಯನ್ನು ನೋಡಿದಾಗ ಅವಳು ಕೆರಳಿ ತನ್ನ ಪತಿಯಲ್ಲಿ ಕೇಳಿದಳು ‘ಕಪಟಿಯೇ! ನಾನು ಕುಳಿತುಕೊಳ್ಳುವ ಸ್ಥಳದಲ್ಲಿ ಇಂದು ಯಾರನ್ನು ಕುಳ್ಳಿರಿಸಿ ತರುತ್ತಿರುವೆ?’ ಜ್ಯಾಮಘನು ‘ಇವಳಾದರೋ ನಿನ್ನ ಸೊಸೆಯಾಗಿದ್ದಾಳೆ’ ಎಂದು ಹೇಳಿದನು. ಶೈಬ್ಯಳು ಮುಗುಳ್ನಕ್ಕು ಪತಿಯಲ್ಲಿ ಹೇಳಿದಳು ॥35-37॥

(ಶ್ಲೋಕ-38)

ಮೂಲಮ್

ಅಹಂ ವಂಧ್ಯಾಸಪತ್ನೀ ಚ ಸ್ನುಷಾ ಮೇ ಯುಜ್ಯತೇ ಕಥಮ್ ।
ಜನಯಿಷ್ಯಸಿ ಯಂ ರಾಜ್ಞೀ ತಸ್ಯೇಯಮುಪಯುಜ್ಯತೇ ॥

ಅನುವಾದ

‘ನಾನಾದರೋ ಜನ್ಮತಃ ಬಂಜೆಯಾಗಿರುವೆನು. ನನಗೆ ಸವತಿಯೂ ಯಾರೂ ಇಲ್ಲ. ಹಾಗಿರುವಾಗ ಇವಳು ಸೊಸೆ ಹೇಗಾಗಬಲ್ಲಳು?’ ಜ್ಯಾಮಘನು ‘ರಾಣೀ! ನಿನಗೆ ಹುಟ್ಟಲಿರುವ ಮಗನ ಪತ್ನಿಯಾಗುವಳು ಇವಳು’ ಎಂದು ಹೇಳಿದನು. ॥38॥

(ಶ್ಲೋಕ-39)

ಮೂಲಮ್

ಅನ್ವಮೋದಂತ ತದ್ವಿಶ್ವೇದೇವಾಃ ಪಿತರ ಏವ ಚ ।
ಶೈಬ್ಯಾ ಗರ್ಭಮಧಾತ್ಕಾಲೇ ಕುಮಾರಂ ಸುಷುವೇ ಶುಭಮ್ ।
ಸ ವಿದರ್ಭ ಇತಿ ಪ್ರೋಕ್ತ ಉಪಯೇಮೇ ಸ್ನುಷಾಂ ಸತೀಮ್ ॥

ಅನುವಾದ

ಜ್ಯಾಮಘರಾಜನ ಈ ಮಾತನ್ನು ವಿಶ್ವೇದೇವತೆಗಳು ಮತ್ತು ಪಿತೃಗಳು ಅನುಮೋದಿಸಿದರು. ಇವರಿಂದಾಗಿ ಸಕಾಲದಲ್ಲಿ ಶೈಬ್ಯಾಳು ಗರ್ಭವತಿಯಾಗಿ, ಅವಳು ಬಹಳ ಸುಂದರವಾದ ಬಾಲಕನಿಗೆ ಜನ್ಮನೀಡಿದಳು. ಅವನ ಹೆಸರು ವಿದರ್ಭವೆಂದಾಯ್ತು. ಅವನು ಶೈಬ್ಯಳ ಸಾಧ್ವಿಯಾದ ಸೊಸೆಯಾದ ಭೋಜ್ಯಾಳೊಂದಿಗೆ ವಿವಾಹವಾದನು. ॥39॥

ಅನುವಾದ (ಸಮಾಪ್ತಿಃ)

ಇಪ್ಪತ್ತಮೂರನೆಯ ಅಧ್ಯಾಯವು ಮುಗಿಯಿತು. ॥23॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ಯದುವಂಶಾನುವರ್ಣನೇ ತ್ರಯೋವಿಂಶೋಽಧ್ಯಾಯಃ ॥23॥