೨೨

[ಇಪ್ಪತ್ತೆರಡನೆಯ ಅಧ್ಯಾಯ]

ಭಾಗಸೂಚನಾ

ಪಾಂಚಾಲ, ಕೌರವ ಮತ್ತು ಮಗಧದೇಶದ ರಾಜರ ವಂಶವರ್ಣನೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಮಿತ್ರೇಯುಶ್ಚ ದಿವೋದಾಸಾಚ್ಚ್ಯವನಸ್ತತ್ಸುತೋ ನೃಪ ।
ಸುದಾಸಃ ಸಹದೇವೋಽಥ ಸೋಮಕೋ ಜಂತುಜನ್ಮಕೃತ್ ॥

(ಶ್ಲೋಕ-2)

ಮೂಲಮ್

ತಸ್ಯ ಪುತ್ರಶತಂ ತೇಷಾಂ ಯವೀಯಾನ್ಪೃಶತಃ ಸುತಃ ।
ದ್ರುಪದೋ ದ್ರೌಪದೀ ತಸ್ಯ ಧೃಷ್ಟದ್ಯುಮ್ನಾದಯಃ ಸುತಾಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ದಿವೋದಾಸನಿಗೆ ಮಿತ್ರೇಯು ಎಂಬ ಪುತ್ರನಿದ್ದನು. ಮಿತ್ರೇಯುವಿಗೆ ಚ್ಯವನ, ಸುದಾಸ, ಸಹದೇವ ಮತ್ತು ಸೋಮಕರೆಂಬ ನಾಲ್ಕು ಪುತ್ರರಾದರು. ಸೋಮಕನಿಗೆ ನೂರು ಮಕ್ಕಳಿದ್ದರು. ಅವರಲ್ಲಿ ಹಿರಿಯವನು ಜಂತು ಮತ್ತು ಕಿರಿಯವನು ಪೃಷತನಾಗಿದ್ದನು. ಪೃಷತನಿಗೆ ದ್ರುಪದನೆಂಬ ಪುತ್ರನಿದ್ದನು. ದ್ರುಪದನಿಗೆ ದ್ರೌಪದಿ ಎಂಬ ಕನ್ಯೆಯೂ, ಧೃಷ್ಟದ್ಯುಮ್ನನೇ ಮೊದಲಾದ ಪುತ್ರರಿದ್ದರು. ॥1-2॥

(ಶ್ಲೋಕ-3)

ಮೂಲಮ್

ದೃಷ್ಟದ್ಯುಮ್ನಾದ್ಧೃಷ್ಟಕೇತುರ್ಭಾರ್ಮ್ಯಾಃ ಪಂಚಾಲಕಾ ಇಮೇ ।
ಯೋಽಜಮೀಢಸುತೋ ಹ್ಯನ್ಯ ಋಕ್ಷಃ ಸಂವರಣಸ್ತತಃ ॥

ಅನುವಾದ

ಧೃಷ್ಟದ್ಯುಮ್ನನಿಗೆ ಧೃಷ್ಟಕೇತು ಎಂಬ ಪುತ್ರನಿದ್ದನು. ಭರ್ಮ್ಯಾಶ್ವನ ವಂಶದಲ್ಲಿ ಹುಟ್ಟಿದ ಈ ರಾಜರೆಲ್ಲರೂ ಪಾಂಚಾಲರೆಂದು ಖ್ಯಾತರಾದರು. ಅಜಮೀಢನಿಗೆ ಋಕ್ಷನೆಂಬ ಇನ್ನೋರ್ವ ಪುತ್ರನಿದ್ದನು. ಅವನಿಂದ ಸಂವರಣನು ಹುಟ್ಟಿದನು. ॥3॥

(ಶ್ಲೋಕ-4)

ಮೂಲಮ್

ತಪತ್ಯಾಂ ಸೂರ್ಯಕನ್ಯಾಯಾಂ ಕುರುಕ್ಷೇತ್ರಪತಿಃ ಕುರುಃ ।
ಪರೀಕ್ಷಿತ್ಸುಧನುರ್ಜಹ್ನುರ್ನಿಷಧಾಶ್ವಃ ಕುರೋಃ ಸುತಾಃ ॥

ಅನುವಾದ

ಸಂವರಣನ ವಿವಾಹವು ಸೂರ್ಯನ ಮಗಳಾದ ತಪತಿಯೊಂದಿಗೆ ನಡೆಯಿತು. ಅವಳ ಗರ್ಭದಿಂದ ಕುರುಕ್ಷೇತ್ರದ ಒಡೆಯ ಕುರುವಿನ ಜನ್ಮವಾಯಿತು. ಕುರುವಿಗೆ ಪರೀಕ್ಷಿತ, ಸುಧನ್ವಾ, ಜಹ್ನು ಮತ್ತು ನಿಷಧಾಶ್ವ ಎಂಬ ನಾಲ್ಕು ಪುತ್ರರು ಹುಟ್ಟಿದರು. ॥4॥

(ಶ್ಲೋಕ-5)

ಮೂಲಮ್

ಸುಹೋತ್ರೋಽಭೂತ್ಸುಧನುಷಶ್ಚ್ಯವನೋಽಥ ತತಃ ಕೃತೀ ।
ವಸುಸ್ತಸ್ಯೋಪರಿಚರೋ ಬೃಹದ್ರಥಮುಖಾಸ್ತತಃ ॥

ಅನುವಾದ

ಸುಧನ್ವನಿಂದ ಸುಹೋತ್ರ, ಸುಹೋತ್ರನಿಂದ ಚ್ಯವನ, ಚ್ಯವನನಿಂದ ಕೃತಿ, ಕೃತಿಯಿಂದ ಉಪರಿಚರವಸು ಮತ್ತು ಉಪರಿಚರವಸುವಿನಿಂದ ಬೃಹದ್ರಥರೇ ಮೊದಲಾದ ಅನೇಕ ಪುತ್ರರು ಹುಟ್ಟಿದರು. ॥5॥

(ಶ್ಲೋಕ-6)

ಮೂಲಮ್

ಕುಶಾಂಬಮತ್ಸ್ಯಪ್ರತ್ಯಗ್ರಚೇದಿಪಾದ್ಯಾಶ್ಚ ಚೇದಿಪಾಃ ।
ಬೃಹದ್ರಥಾತ್ಕುಶಾಗ್ರೋಽಭೂದೃಷಭಸ್ತಸ್ಯ ತತ್ಸುತಃ ॥

(ಶ್ಲೋಕ-7)

ಮೂಲಮ್

ಜಜ್ಞೇ ಸತ್ಯಹಿತೋಽಪತ್ಯಂ ಪುಷ್ಪವಾಂಸ್ತತ್ಸುತೋ ಜಹುಃ ।
ಅನ್ಯಸ್ಯಾಂ ಚಾಪಿ ಭಾರ್ಯಾಯಾಂ ಶಕಲೇ ದ್ವೇ ಬೃಹದ್ರಥಾತ್ ॥

ಅನುವಾದ

ಅವರಲ್ಲಿ ಬೃಹದ್ರಥ, ಕುಶಾಂಬ, ಮತ್ಸ್ಯ, ಪ್ರತ್ಯಗ್ರ ಮತ್ತು ಚೇದಿಪ ಮೊದಲಾದವರು ಚೇದಿ ರಾಜ್ಯದ ರಾಜರಾದರು. ಬೃಹದ್ರಥನಿಗೆ ಕುಶಾಗ್ರನೆಂಬ ಪುತ್ರನಿದ್ದನು. ಕುಶಾಗ್ರನಿಂದ ಋಷಭ, ಋಷಭನಿಂದ ಸತ್ಯಹಿತ, ಸತ್ಯಹಿತನಿಂದ ಪುಷ್ಪವಾನ್, ಪುಷ್ಪವಂತನಿಂದ ಜಹುನೆಂಬವ ಪುತ್ರನಾದನು. ಬೃಹದ್ರಥನ ಇನ್ನೋರ್ವ ಪತ್ನಿಯ ಗರ್ಭದಿಂದ ಒಂದು ಶರೀರದ ಎರಡು ಸೀಳುಗಳು ಹುಟ್ಟಿದವು. ॥6-7॥

(ಶ್ಲೋಕ-8)

ಮೂಲಮ್

ತೇ ಮಾತ್ರಾ ಬಹಿರುತ್ಸೃಷ್ಟೇ ಜರಯಾ ಚಾಭಿಸಂಧಿತೇ ।
ಜೀವ ಜೀವೇತಿ ಕ್ರೀಡಂತ್ಯಾ ಜರಾಸಂಧೋಽಭವತ್ಸುತಃ ॥

ಅನುವಾದ

ಅವನ್ನು ತಾಯಿಯು ಹೊರಗೆ ಎಸೆದುಬಿಟ್ಟಳು. ಆಗ ‘ಜರಾ’ ಎಂಬ ರಾಕ್ಷಸಿಯು ‘ಬದುಕು-ಬದುಕು’ ಎಂದು ಹೇಳಿ ಲೀಲಾಜಾಲವಾಗಿ ಅವೆರಡೂ ತುಂಡುಗಳನ್ನು ಜೋಡಿಸಿದಳು. ಆ ಜೋಡಿಸಿದ ಬಾಲಕನೇ ಜರಾಸಂಧನಾದನು. ॥8॥

(ಶ್ಲೋಕ-9)

ಮೂಲಮ್

ತತಶ್ಚ ಸಹದೇವೋಽಭೂತ್ಸೋಮಾಪಿರ್ಯಚ್ಛುತಶ್ರವಾಃ ।
ಪರೀಕ್ಷಿದನಪತ್ಯೋಽಭೂತ್ಸುರಥೋ ನಾಮ ಜಾಹ್ನವಃ ॥

ಅನುವಾದ

ಜರಾಸಂಧನಿಗೆ ಸಹದೇವ, ಸಹದೇವನಿಗೆ ಸೋಮಾಪಿ, ಸೋಮಾಪಿಗೆ ಶ್ರುತಶ್ರವಾ ಪುತ್ರನಾದನು. ಕುರುವಿನ ಜ್ಯೇಷ್ಠಪುತ್ರ ಪರೀಕ್ಷಿತನಿಗೆ ಯಾವ ಸಂತಾನವೂ ಆಗಲಿಲ್ಲ. ಜಹ್ನುವಿಗೆ ಸುರಥನೆಂಬ ಪುತ್ರನಿದ್ದನು. ॥9॥

(ಶ್ಲೋಕ-10)

ಮೂಲಮ್

ತತೋ ವಿದೂರಥಸ್ತಸ್ಮಾತ್ ಸಾರ್ವಭೌಮಸ್ತತೋಽಭವತ್ ।
ಜಯಸೇನಸ್ತತ್ತನಯೋ ರಾಧಿಕೋಽತೋಽಯುತೋ ಹ್ಯಭೂತ್ ॥

ಅನುವಾದ

ಸುರಥನಿಗೆ ವಿದೂರಥ, ವಿದೂರಥನಿಗೆ ಸೌರ್ವಭೌಮ, ಸಾರ್ವ ಭೌಮನಿಗೆ ಜಯಸೇನ, ಜಯ ಸೇನನಿಗೆ ರಾಧಿಕ, ರಾಧಿಕನಿಗೆ ಅಯುತನೆಂಬ ಪುತ್ರನಾದನು. ॥10॥

(ಶ್ಲೋಕ-11)

ಮೂಲಮ್

ತತಶ್ಚ ಕ್ರೋಧನಸ್ತಸ್ಮಾದ್ದೇವಾತಿಥಿರಮುಷ್ಯ ಚ ।
ಋಷ್ಯಸ್ತಸ್ಯ ದಿಲೀಪೋಽಭೂತ್ಪ್ರತೀಪಸ್ತಸ್ಯ ಚಾತ್ಮಜಃ ॥

ಅನುವಾದ

ಅಯುತನಿಗೆ ಕ್ರೋಧನ, ಕ್ರೋಧನನಿಗೆ ದೇವಾತಿಥಿ, ದೇವಾತಿಥಿಗೆ ಋಷ್ಯ, ಋಷ್ಯನಿಗೆ ದಿಲೀಪ, ದಿಲೀಪನಿಗೆ ಪ್ರತೀಪನೆಂಬ ಮಗನಾದನು. ॥11॥

(ಶ್ಲೋಕ-12)

ಮೂಲಮ್

ದೇವಾಪಿಃ ಶಂತನುಸ್ತಸ್ಯ ಬಾಹ್ಲೀಕ ಇತಿ ಚಾತ್ಮಜಾಃ ।
ಪಿತೃರಾಜ್ಯಂ ಪರಿತ್ಯಜ್ಯ ದೇವಾಪಿಸ್ತು ವನಂ ಗತಃ ॥

ಅನುವಾದ

ಪ್ರತೀಪನಿಗೆ ದೇವಾಪಿ, ಶಂತನು, ಬಾಹ್ಲೀಕ ಎಂಬ ಮೂವರು ಪುತ್ರರಿದ್ದರು. ದೇವಾಪಿಯು ಪಿತ್ರಾರ್ಜಿತ ರಾಜ್ಯವನ್ನು ಬಿಟ್ಟು ವನಕ್ಕೆ ಹೊರಟು ಹೋದನು. ॥12॥

(ಶ್ಲೋಕ-13)

ಮೂಲಮ್

ಅಭವಚ್ಛಂತನೂ ರಾಜಾ ಪ್ರಾಙ್ಮಹಾಭಿಷಸಂಜ್ಞಿತಃ ।
ಯಂ ಯಂ ಕರಾಭ್ಯಾಂ ಸ್ಪೃಶತಿ ಜೀರ್ಣಂ ಯೌವನಮೇತಿ ಸಃ ॥

ಅನುವಾದ

ಅದಕ್ಕಾಗಿ ಅವನ ತಮ್ಮನಾದ ಶಂತನು ರಾಜನಾದನು. ಹಿಂದಿನ ಜನ್ಮದಲ್ಲಿ ಶಂತನುವಿನ ಹೆಸರು ಮಹಾಭಿಷನೆಂದಿತ್ತು. ಈ ಜನ್ಮದಲ್ಲಿಯೂ ಅವನು ತನ್ನ ಕೈಯಿಂದ ಸ್ಪರ್ಶಿಸಿದವರು ಮುದುಕರಾಗಿದ್ದವರು ತರುಣರಾಗುತ್ತಿದ್ದರು.॥13॥

(ಶ್ಲೋಕ-14)

ಮೂಲಮ್

ಶಾಂತಿಮಾಪ್ನೋತಿ ಚೈವಾಗ್ರ್ಯಾಂ ಕರ್ಮಣಾ ತೇನ ಶಂತನುಃ ।
ಸಮಾ ದ್ವಾದಶ ತದ್ರಾಜ್ಯೇ ನ ವವರ್ಷ ಯದಾ ವಿಭುಃ ॥

(ಶ್ಲೋಕ-15)

ಮೂಲಮ್

ಶಂತನುರ್ಬ್ರಾಹ್ಮಣೈರುಕ್ತಃ ಪರಿವೇತ್ತಾಯಮಗ್ರಭುಕ್ ।
ರಾಜ್ಯಂ ದೇಹ್ಯಗ್ರಜಾಯಾಶು ಪುರರಾಷ್ಟ್ರವಿವೃದ್ಧಯೇ ॥

ಅನುವಾದ

ಅವನಿಗೆ ಪರಮ ಶಾಂತಿಯು ಲಭಿಸಿತ್ತು. ಈ ಅದ್ಭುತ ಶಕ್ತಿಯಿಂದಲೇ ಅವನು ‘ಶಂತನು’ ಎಂದು ಖ್ಯಾತನಾದನು. ಒಮ್ಮೆ ಹನ್ನೆರಡು ವರ್ಷಗಳಕಾಲ ಶಂತನುವಿನ ರಾಜ್ಯದಲ್ಲಿ ಇಂದ್ರನು ಮಳೆಗರೆಯಲೇ ಇಲ್ಲ. ಇದರ ಕಾರಣವನ್ನು ಬ್ರಾಹ್ಮಣರನ್ನು ಕರೆದು ಕೇಳಿದನು; ಬ್ರಾಹ್ಮಣರೆಂದರು ರಾಜನೇ! ನೀನು ನಿನ್ನಣ್ಣನಾದ ದೇವಾಪಿಯು ವಿವಾಹವಾಗುವುದಕ್ಕೆ ಮೊದಲೇ ವಿವಾಹವಾದೆ. ಅಗ್ನಿಹೋತ್ರ ಮತ್ತು ರಾಜ್ಯಪದವಿಯನ್ನೂ ಸ್ವೀಕರಿಸಿದೆ. ಆದ್ದರಿಂದ ನೀನು ಪರಿವೇತ್ತಾ* ಆಗಿರುವೆ. ಇದರಿಂದ ನಿನ್ನ ರಾಜ್ಯದಲ್ಲಿ ಮಳೆಯಾಗಲಿಲ್ಲ. ಈಗ ನೀನು ನಿನ್ನ ರಾಜ್ಯದ, ರಾಷ್ಟ್ರದ ಉನ್ನತಿಯನ್ನು ಬಯಸುವೆಯಾದರೆ ಶೀಘ್ರಾತಿ ಶೀಘ್ರವಾಗಿ ನಿನ್ನಣ್ಣನಿಗೆ ರಾಜ್ಯವನ್ನು ಮರಳಿಸಿಬಿಡು. ॥14-15॥

ಟಿಪ್ಪನೀ
  • ದಾರಾಗ್ನಿಹೋತ್ರಸಂಯೋಗಂ ಕುರುತೇ ಯೋಽಗ್ರಜೇ ಸ್ಥಿತೇ । ಪರಿವೇತ್ತಾ ಸ ವಿಜ್ಞೇಯಃ ಪರಿವಿತ್ತಿಸ್ತು ಪೂರ್ವಜಃ ॥
    ಅಣ್ಣನಿಗಿಂತಲೂ ಮೊದಲು ಮದುವೆಯಾಗಿ ಅಗ್ನಿಹೋತ್ರವನ್ನು ನಡೆಸುವ ತಮ್ಮನು ಪರಿವೇತ್ತೃನೆಂದೂ ಅವನ ಅಣ್ಣನು ‘ಪರಿವಿತ್ತಿ’ ಎಂದು ಕರೆಯಲ್ಪಡುತ್ತಾರೆ.

(ಶ್ಲೋಕ-16)

ಮೂಲಮ್

ಏವಮುಕ್ತೋ ದ್ವಿಜೈರ್ಜ್ಯೇಷ್ಠಂ ಛಂದಯಾಮಾಸ ಸೋಽಬ್ರವೀತ್ ।
ತನ್ಮಂತ್ರಿಪ್ರಹಿತೈರ್ವಿಪ್ರೈರ್ವೇದಾದ್ ವಿಭ್ರಂಶಿತೋ ಗಿರಾ ॥

(ಶ್ಲೋಕ-17)

ಮೂಲಮ್

ವೇದವಾದಾತಿವಾದಾನ್ವೈ ತದಾ ದೇವೋ ವವರ್ಷ ಹ ।
ದೇವಾಪಿರ್ಯೋಗಮಾಸ್ಥಾಯ ಕಲಾಪಗ್ರಾಮಮಾಶ್ರಿತಃ ॥

ಅನುವಾದ

ಬ್ರಾಹ್ಮಣರು ಶಂತನುವಿನ ಬಳಿ ಹೀಗೆ ಹೇಳಿದಾಗ ಅವನು ವನಕ್ಕೆ ಹೋಗಿ ತನ್ನಣ್ಣನಲ್ಲಿ ರಾಜ್ಯವನ್ನು ಸ್ವೀಕರಿಸುವಂತೆ ಪ್ರಾರ್ಥಿಸಿದನು. ಆದರೆ ಶಂತನುವಿನ ಮಂತ್ರಿಯಾದ ಅಶ್ಮರಾತನು ಮೊದಲೇ ದೇವಾಪಿಯ ಬಳಿಗೆ ಕೆಲವು ಬ್ರಾಹ್ಮಣರನ್ನು ಕಳಿಸಿ, ವೇದಗಳನ್ನು ದೂಷಿತಗೊಳಿಸುವಂತಹ ವಚನಗಳಿಂದ ದೇವಾಪಿಯನ್ನು ವೇದಮಾರ್ಗದಿಂದ ವಿಚಲಿತಗೊಳಿಸಿದ್ದನು. ಇದರ ಫಲವಾಗಿ ದೇವಾಪಿಯು ವೇದಮಾರ್ಗಕ್ಕನುಸಾರ ಗೃಹಸ್ಥಾಶ್ರಮವನ್ನು ಸ್ವೀಕರಿಸುವ ಬದಲು ಅದನ್ನು ನಿಂದಿಸತೊಡಗಿದನು. ಇದರಿಂದ ಅವನು ರಾಜ್ಯಾಧಿಕಾರದಿಂದ ವಂಚಿತನಾದನು. ಆಗ ಶಂತನುವಿನ ರಾಜ್ಯದಲ್ಲಿ ಮಳೆಯಾಯಿತು. ದೇವಾಪಿಯು ಈಗಲೂ ಯೋಗಸಾಧನೆಯನ್ನು ಮಾಡುತ್ತಾ ಯೋಗಿಗಳ ಪ್ರಸಿದ್ಧ ನಿವಾಸಸ್ಥಾನವಾದ ಕಲಾಪಗ್ರಾಮದಲ್ಲಿ ಇರುವನು. ॥16-17॥

(ಶ್ಲೋಕ-18)

ಮೂಲಮ್

ಸೋಮವಂಶೇ ಕಲೌ ನಷ್ಟೇ ಕೃತಾದೌ ಸ್ಥಾಪಯಿಷ್ಯತಿ ।
ಬಾಹ್ಲೀಕಾತ್ಸೋಮದತ್ತೋಽಭೂದ್ಭೂರಿರ್ಭೂರಿಶ್ರವಾಸ್ತತಃ ॥

(ಶ್ಲೋಕ-19)

ಮೂಲಮ್

ಶಲಶ್ಚ ಶಂತನೋರಾಸೀದ್ಗಂಗಾಯಾಂ ಭೀಷ್ಮ ಆತ್ಮವಾನ್ ।
ಸರ್ವಧರ್ಮವಿದಾಂ ಶ್ರೇಷ್ಠೋ ಮಹಾಭಾಗವತಃ ಕವಿಃ ॥

ಅನುವಾದ

ಕಲಿಯುಗದಲ್ಲಿ ಚಂದ್ರವಂಶವು ಅಂತ್ಯವಾದಾಗ ಕೃತಯುಗದ ಪ್ರಾರಂಭದಲ್ಲಿ ಅವನು ಪುನಃ ಚಂದ್ರವಂಶವನ್ನು ಸ್ಥಾಪಿಸುವನು. ಶಂತನುವಿನ ತಮ್ಮ ಬಾಹ್ಲೀಕನಿಗೆ ಸೋಮದತ್ತನೆಂಬ ಪುತ್ರನಾದನು. ಸೋಮದತ್ತನಿಗೆ ಭೂರಿ, ಭೂರಿಶ್ರವಾ ಮತ್ತು ಶಲ ಎಂಬ ಮೂವರು ಪುತ್ರರಾದರು. ಶಂತನುವಿನಿಂದ ಗಂಗಾದೇವಿಯ ಗರ್ಭದಿಂದ ನೈಷ್ಠಿಕ ಬ್ರಹ್ಮಚಾರೀ ಭೀಷ್ಮನ ಜನ್ಮವಾಯಿತು. ಅವನು ಸಮಸ್ತ ಧರ್ಮಜ್ಞರ ಶಿರೋಮಣಿಯಾಗಿದ್ದನು. ಭಗವಂತನ ಪರಮಪ್ರೇಮೀ ಭಕ್ತನು ಮತ್ತು ಪರಮ ಜ್ಞಾನಿಯಾಗಿದ್ದನು. ॥18-19॥

ಮೂಲಮ್

(ಶ್ಲೋಕ-20)

ಮೂಲಮ್

ವೀರಯೂಥಾಗ್ರಣಿರ್ಯೇನ ರಾಮೋಽಪಿ ಯುಧಿ ತೋಷಿತಃ ।
ಶಂತನೋರ್ದಾಶಕನ್ಯಾಯಾಂ ಜಜ್ಞೇ ಚಿತ್ರಾಂಗದಃ ಸುತಃ ॥

(ಶ್ಲೋಕ-21)

ಮೂಲಮ್

ವಿಚಿತ್ರ ವೀರ್ಯಶ್ಚಾವರಜೋ ನಾಮ್ನಾ ಚಿತ್ರಾಂಗದೋ ಹತಃ ।
ಯಸ್ಯಾಂ ಪರಾಶರಾತ್ಸಾಕ್ಷಾದವತೀರ್ಣೋ ಹರೇಃ ಕಲಾ ॥

(ಶ್ಲೋಕ-22)

ಮೂಲಮ್

ವೇದಗುಪ್ತೋ ಮುನಿಃ ಕೃಷ್ಣೋ ಯತೋಽಹಮಿದಮಧ್ಯಗಾಮ್ ।
ಹಿತ್ವಾ ಸ್ವಶಿಷ್ಯಾನ್ಪೈಲಾದೀನ್ಭಗವಾನ್ಬಾದರಾಯಣಃ ॥

(ಶ್ಲೋಕ-23)

ಮೂಲಮ್

ಮಹ್ಯಂ ಪುತ್ರಾಯ ಶಾಂತಾಯ ಪರಂ ಗುಹ್ಯಮಿದಂ ಜಗೌ ।
ವಿಚಿತ್ರವೀರ್ಯೋಽಥೋವಾಹ ಕಾಶಿರಾಜಸುತೇ ಬಲಾತ್ ॥

(ಶ್ಲೋಕ-24)

ಮೂಲಮ್

ಸ್ವಯಂವರಾದುಪಾನೀತೇ ಅಂಬಿಕಾಂಬಾಲಿಕೇ ಉಭೇ ।
ತಯೋರಾಸಕ್ತಹೃದಯೋ ಗೃಹೀತೋ ಯಕ್ಷ್ಮಣಾ ಮೃತಃ ॥

ಅನುವಾದ

ಅವನು ಜಗತ್ತಿನ ಸಮಸ್ತ ವೀರರಲ್ಲಿ ಅಗ್ರಗಣ್ಯನಾಗಿದ್ದನು. ಬೇರೆಯ ಮಾತೇನು? ಅವನು ತನ್ನ ಗುರುಗಳಾದ ಭಗವಾನ್ ಪರಶುರಾಮನನ್ನೂ ಕೂಡ ಯುದ್ಧದಲ್ಲಿ ಸಂತುಷ್ಟಿಗೊಳಿಸಿದ್ದನು. ಶಂತನುವು ದಾಶರಾಜನ ಮಗಳ* ಗರ್ಭದಿಂದ ಚಿತ್ರಾಂಗದ ಮತ್ತು ವಿಚಿತ್ರವೀರ್ಯರೆಂಬ ಈರ್ವರು ಪುತ್ರರನ್ನು ಪಡೆದನು. ಚಿತ್ರಾಂಗದನನ್ನು ಚಿತ್ರಾಂಗದನೆಂಬ ಗಂಧರ್ವನು ಕೊಂದು ಹಾಕಿದನು. ಇದೇ ದಾಶರಾಜನ ಕನ್ಯೆಯಾದ ಸತ್ಯವತಿಯಿಂದ ಪರಾಶರರ ಮೂಲಕ ನನ್ನ ತಂದೆಯಾದ ಭಗವಂತನ ಕಲಾವತಾರವಾಗಿದ್ದ ಸ್ವಯಂ ಭಗವಂತನು ಶ್ರೀಕೃಷ್ಣದ್ವೈಪಾಯನರಾದ ವೇದವ್ಯಾಸರು ಅವತರಿಸಿದರು. ಅವರು ವೇದಗಳನ್ನು ವಿಭಾಗಮಾಡಿ ರಕ್ಷಿಸಿದರು. ಪರೀಕ್ಷಿತನೇ! ನಾನು ಅವರಿಂದಲೇ ಈ ಶ್ರೀಮದ್ಭಾಗವತ ಮಹಾಪುರಾಣವನ್ನು ಅಧ್ಯಯನ ಮಾಡಿದೆನು. ಈ ಪುರಾಣವು ಪರಮಗೋಪ್ಯವೂ, ಅತ್ಯಂತ ರಹಸ್ಯಮಯವೂ ಆಗಿದೆ. ಇದರಿಂದ ನನ್ನ ತಂದೆಯಾದ ಭಗವಾನ್ ವ್ಯಾಸರು ತಮ್ಮ ಪೈಲರೇ ಮೊದಲಾದ ಶಿಷ್ಯರಿಗೆ ಉಪದೇಶಿಸಲಿಲ್ಲ. ನನ್ನನ್ನೇ ಯೋಗ್ಯ ಅಧಿಕಾರಿಯೆಂದರಿತು ನನಗೆ ಉಪದೇಶಿಸಿದರು. ನಾನು ಅವರ ಪುತ್ರನೇ ಆಗಿದ್ದೆನಲ್ಲ! ಅಲ್ಲದೆ ಶಾಂತಿ ಮುಂತಾದ ಸದ್ಗುಣಗಳು ನನ್ನಲ್ಲಿ ವಿಶೇಷವಾಗಿದ್ದುವು. ಶಂತನುವಿನ ಎರಡನೇ ಮಗನಾದ ವಿಚಿತ್ರವೀರ್ಯನು ಕಾಶಿರಾಜನ ಕನ್ಯೆಯರಾದ ಅಂಬಿಕಾ ಮತ್ತು ಅಂಬಾಲಿಕೆಯನ್ನು ವಿವಾಹವಾದನು. ಅವರಿಬ್ಬರನ್ನೂ ಸ್ವಯಂವರದಲ್ಲಿ ಭೀಷ್ಮರು ಬಲವಂತವಾಗಿ ಗೆದ್ದುತಂದಿದ್ದರು. ವಿಚಿತ್ರವೀರ್ಯನು ತನ್ನ ಇಬ್ಬರೂ ಪತ್ನಿಯರಲ್ಲಿ ಅತೀವ ಆಸಕ್ತನಾದನು. ಇದರಿಂದ ಅವನು ರಾಜಯಕ್ಷ್ಮಾ (ಕ್ಷಯರೋಗ) ರೋಗಕ್ಕೆ ತುತ್ತಾಗಿ ಅದರಿಂದಲೇ ಮೃತಿಯನ್ನೈದಿದನು.॥20-24॥

ಟಿಪ್ಪನೀ
  • ಈ ಕನ್ಯೆಯು ನಿಜವಾಗಿ ಉಪಚರವಸುವಿನ ವೀರ್ಯದಿಂದ ಮೀನಿನ ಹೊಟ್ಟೆಯಲ್ಲಿ ಹುಟ್ಟಿದವಳು. ಆದರೆ ದಾಶ (ಬೆಸ್ತ)ರಿಂದ ಸಾಕಲ್ಪಟ್ಟಿದ್ದರಿಂದ ಅವಳು ದಾಶರಾಜಕನ್ಯೆಯೆನಿಸಿದಳು.
ಅನುವಾದ

(ಶ್ಲೋಕ-25)

ಮೂಲಮ್

ಕ್ಷೇತ್ರೇಽಪ್ರಜಸ್ಯ ವೈ ಭ್ರಾತುರ್ಮಾತ್ರೋಕ್ತೋ ಬಾದರಾಯಣಃ ।
ಧೃತರಾಷ್ಟ್ರಂ ಚ ಪಾಂಡುಂ ಚ ವಿದುರಂ ಚಾಪ್ಯಜೀಜನತ್ ॥

ಅನುವಾದ

ತಾಯಿಯಾದ ಸತ್ಯವತಿಯ ನಿರ್ದೇಶನದಂತೆ ಭಗವಾನ್ ವ್ಯಾಸರು ಸಂತಾನಹೀನೆಯರಾಗಿದ್ದ ತನ್ನ ತಮ್ಮನ ಭಾರ್ಯೆಯರಿಗೆ ಧೃತರಾಷ್ಟ್ರ ಮತ್ತು ಪಾಂಡು ಎಂಬ ಇಬ್ಬರು ಪುತ್ರರನ್ನು ಅನುಗ್ರಹಿಸಿದರು. ಅವರ ದಾಸಿಯಲ್ಲಿ ವೇದವ್ಯಾಸರ ಅನುಗ್ರಹದಿಂದ ವಿದುರನು ಜನಿಸಿದನು. ॥25॥

(ಶ್ಲೋಕ-26)

ಮೂಲಮ್

ಗಾಂಧಾರ್ಯಾಂ ಧೃತರಾಷ್ಟ್ರಸ್ಯ ಜಜ್ಞೇ ಪುತ್ರಶತಂ ನೃಪ ।
ತತ್ರ ದುರ್ಯೋಧನೋ ಜ್ಯೇಷ್ಠೋ ದುಃಶಲಾ ಚಾಪಿ ಕನ್ಯಕಾ ॥

ಅನುವಾದ

ಪರೀಕ್ಷಿತನೇ! ಧೃತರಾಷ್ಟ್ರನಿಗೆ ಗಾಂಧಾರಿ ಎಂಬ ಪತ್ನಿಯಲ್ಲಿ ನೂರು ಮಕ್ಕಳಾದರು. ಅವರಲ್ಲಿ ಹಿರಿಯವನೇ ದುರ್ಯೋಧನ. ದುಃಶಲಾ ಎಂದ ಕಿರಿಯ ಕನ್ಯೆಯೂ ಇದ್ದಳು. ॥26॥

(ಶ್ಲೋಕ-27)

ಮೂಲಮ್

ಶಾಪಾನ್ಮೈಥುನರುದ್ಧಸ್ಯ ಪಾಂಡೋಃ ಕುಂತ್ಯಾಂ ಮಹಾರಥಾಃ ।
ಜಾತಾ ಧರ್ಮಾನಿಲೇಂದ್ರೇಭ್ಯೋ ಯುಧಿಷ್ಠಿರಮುಖಾಸ್ತ್ರಯಃ ॥

ಅನುವಾದ

ಪಾಂಡುವಿಗೆ ಕುಂತಿ ಎಂಬ ಪತ್ನಿಯಿದ್ದಳು. ಶಾಪವಶದಿಂದಾಗಿ ಪಾಂಡುವು ಸ್ತ್ರೀಸಹವಾಸವನ್ನು ಮಾಡಲಾಗಲಿಲ್ಲ. ಅದರಿಂದ ಅವನ ಪತ್ನೀ ಕುಂತಿಯ ಗರ್ಭದಿಂದ ಧರ್ಮ, ವಾಯು, ಇಂದ್ರ ಇವರ ಮೂಲಕ ಕ್ರಮವಾಗಿ ಯುಧಿಷ್ಠಿರ, ಭೀಮ, ಅರ್ಜುನ ಎಂಬ ಮೂವರು ಪುತ್ರರು ಉದಿಸಿದರು. ಇವರು ಮೂವರೂ ಮಹಾರಥಿಗಳಾಗಿದ್ದರು. ॥27॥

(ಶ್ಲೋಕ-28)

ಮೂಲಮ್

ನಕುಲಃ ಸಹದೇವಶ್ಚ ಮಾದ್ರ್ಯಾಂ ನಾಸತ್ಯದಸ್ರಯೋಃ ।
ದ್ರೌಪದ್ಯಾಂ ಪಂಚ ಪಂಚಭ್ಯಃ ಪುತ್ರಾಸ್ತೇ ಪಿತರೋಽಭವನ್ ॥

ಅನುವಾದ

ಪಾಂಡುವಿನ ಇನ್ನೋರ್ವ ಪತ್ನಿಯ ಹೆಸರು ಮಾದ್ರಿಯೆಂದಿತ್ತು. ಅವಳಲ್ಲಿ ಅಶ್ವಿನೀದೇವತೆಗಳ ಅನುಗ್ರಹದಿಂದ ನಕುಲ-ಸಹದೇವರೆಂಬ ಯಮಳರು ಹುಟ್ಟಿದರು. ಪರೀಕ್ಷಿತನೇ! ಈ ಪಂಚಪಾಂಡವರ ಪತ್ನಿಯಾದ ದ್ರೌಪದಿಯಲ್ಲಿ ನಿನ್ನ ಐವರು ಚಿಕ್ಕಪ್ಪಂದಿರು ಜನಿಸಿದರು. ॥28॥

(ಶ್ಲೋಕ-29)

ಮೂಲಮ್

ಯುಧಿಷ್ಠಿರಾತ್ಪ್ರತಿವಿಂಧ್ಯಃ ಶ್ರುತಸೇನೋ ವೃಕೋದರಾತ್ ।
ಅರ್ಜುನಾಚ್ಛ್ರುತಕೀರ್ತಿಸ್ತು ಶತಾನೀಕಸ್ತು ನಾಕುಲಿಃ ॥

(ಶ್ಲೋಕ-30)

ಮೂಲಮ್

ಸಹದೇವಸುತೋ ರಾಜನ್ ಶ್ರುತಕರ್ಮಾ ತಥಾಪರೇ ।
ಯುಧಿಷ್ಠಿರಾತ್ತು ಪೌರವ್ಯಾಂ ದೇವಕೋಽಥ ಘಟೋತ್ಕಚಃ ॥

(ಶ್ಲೋಕ-31)

ಮೂಲಮ್

ಭೀಮಸೇನಾದ್ಧಿಡಿಂಬಾಯಾಂ ಕಾಲ್ಯಾಂ ಸರ್ವಗತಸ್ತತಃ ।
ಸಹದೇವಾತ್ಸುಹೋತ್ರಂ ತು ವಿಜಯಾಸೂತ ಪಾರ್ವತೀ ॥

(ಶ್ಲೋಕ-32)

ಮೂಲಮ್

ಕರೇಣುಮತ್ಯಾಂ ನಕುಲೋ ನಿರಮಿತ್ರಂ ತಥಾರ್ಜುನಃ ।
ಇರಾವಂತಮುಲೂಪ್ಯಾಂ ವೈ ಸುತಾಯಾಂ ಬಭ್ರುವಾಹನಮ್ ।
ಮಣಿಪೂರಪತೇಃ ಸೋಽಪಿ ತತ್ಪುತ್ರಃ ಪುತ್ರಿಕಾಸುತಃ ॥

ಅನುವಾದ

ಇವರಲ್ಲಿ ಯುಧಿಷ್ಠಿರನಿಂದ ಪ್ರತಿವಿಂಧ್ಯ, ಭೀಮಸೇನನಿಂದ ಶ್ರುತಸೇನ, ಅರ್ಜುನನಿಂದ ಶ್ರುತಕೀರ್ತಿ, ನಕುಲನಿಂದ ಶತಾನೀಕ, ಸಹದೇವನಿಂದ ಶ್ರುತಕರ್ಮಾ ಎಂಬುವರು ಹುಟ್ಟಿದರು. ಇವರುಗಳಲ್ಲದೆ ಯುಧಿಷ್ಠಿರನ ಪೌರವೀ ಎಂಬ ಪತ್ನಿಯಿಂದ ದೇವಕನೂ, ಭೀಮಸೇನನ ಪತ್ನಿ ಹಿಡಿಂಬೆಯಿಂದ ಘಟೋತ್ಕಚ ಮತ್ತು ಕಾಲಿ ಎಂಬುವಳಲ್ಲಿ ಸರ್ವಗತನೆಂಬ ಮಗನೂ ಹುಟ್ಟಿದರು. ಸಹದೇವನ ಪರ್ವತಕುಮಾರಿ ವಿಜಯಾಳಿಂದ ಸುಹೋತ್ರನೂ, ನಕುಲನ ಕರೇಣುಮತಿಯಿಂದ ನರಮಿತ್ರರೆಂಬ ಪುತ್ರರಾದರು. ಅರ್ಜುನನಿಂದ ನಾಗಕನ್ಯೆ ಊಲೂಪಿಯ ಗರ್ಭದಲ್ಲಿ ಇರಾವಂತ ಮತ್ತು ಮಣಿಪುರದ ರಾಜನ ಮಗಳಾದ ಚಿತ್ರಾಂಗದೆಯಿಂದ ಬಭ್ರುವಾಹನನು ಹುಟ್ಟಿದನು. ಆದರೆ ಹಿಂದೆ ಮಾಡಿಕೊಂಡಿದ್ದ ಒಪ್ಪಂದದಂತೆ ಬಭ್ರುವಾಹನನು ಪುತ್ರಿಕಾಸುತನಾಗಿ ಅವನ ಅಜ್ಜನಿಗೇ ಮಗನಾದನು. ॥29-32॥

(ಶ್ಲೋಕ-33)

ಮೂಲಮ್

ತವ ತಾತಃ ಸುಭದ್ರಾಯಾಮಭಿಮನ್ಯುರಜಾಯತ ।
ಸರ್ವಾತಿರಥಜಿದ್ವೀರ ಉತ್ತರಾಯಾಂ ತತೋ ಭವಾನ್ ॥

ಅನುವಾದ

ಅರ್ಜುನನಿಗೆ ಸುಭದ್ರೆ ಎಂಬ ಪತ್ನಿಯಲ್ಲಿ ನಿನ್ನ ತಂದೆಯಾದ ಅಭಿಮನ್ಯುವಿನ ಜನ್ಮವಾಯಿತು. ವೀರ ಅಭಿಮನ್ಯುವು ಎಲ್ಲ ಅತಿರಥಿಯರನ್ನೂ ಗೆದ್ದುಕೊಂಡಿದ್ದನು. ಅಭಿಮನ್ಯುವಿನ ಮೂಲಕ ಉತ್ತರೆಯ ಗರ್ಭದಲ್ಲಿ ನಿನ್ನ ಜನ್ಮವಾಗಿದೆ. ॥33॥

(ಶ್ಲೋಕ-34)

ಮೂಲಮ್

ಪರಿಕ್ಷೀಣೇಷು ಕುರುಷು ದ್ರೌಣೇರ್ಬ್ರಹ್ಮಾಸ್ತ್ರ ತೇಜಸಾ ।
ತ್ವಂ ಚ ಕೃಷ್ಣಾನುಭಾವೇನ ಸಜೀವೋ ಮೋಚಿತೋಽಂತಕಾತ್ ॥

ಅನುವಾದ

ಪರೀಕ್ಷಿತನೇ! ಆ ಸಮಯದಲ್ಲಿ ಕುರುವಂಶವು ನಾಶವಾಗಿಹೋಗಿತ್ತು. ಅಶ್ವತ್ಥಾಮನ ಬ್ರಹ್ಮಾಸ್ತ್ರದಿಂದ ನೀನು ಸುಟ್ಟುಹೋಗಿದ್ದೆ. ಆದರೆ ಭಗವಾನ್ ಶ್ರೀಕೃಷ್ಣನು ತನ್ನ ಪ್ರಭಾವದಿಂದ ನಿನ್ನನ್ನು ಆ ಮೃತ್ಯುವಿನಿಂದ ಕಾಪಾಡಿ ಬದುಕಿಸಿದನು. ॥34॥

(ಶ್ಲೋಕ-35)

ಮೂಲಮ್

ತವೇಮೇ ತನಯಾಸ್ತಾತ ಜನಮೇಜಯಪೂರ್ವಕಾಃ ।
ಶ್ರುತಸೇನೋ ಭೀಮಸೇನ ಉಗ್ರಸೇನಶ್ಚ ವೀರ್ಯವಾನ್ ॥

ಅನುವಾದ

ಪರೀಕ್ಷಿತನೇ! ನಿನ್ನ ಪುತ್ರರಾದ ಜನಮೇಜಯ, ಶ್ರುತಸೇನ, ಭೀಮಸೇನ ಮತ್ತು ಉಗ್ರಸೇನರು ನಿನ್ನ ಮುಂದೆಯೇ ಕುಳಿತಿದ್ದಾರೆ. ಇವರೆಲ್ಲರೂ ಮಹಾಪರಾಕ್ರಮಿಗಳಾಗಿದ್ದಾರೆಂಬುದು ನಿನಗೆ ತಿಳಿದೇ ಇದೆ. ॥35॥

(ಶ್ಲೋಕ-36)

ಮೂಲಮ್

ಜನಮೇಜಯಸ್ತ್ವಾಂ ವಿದಿತ್ವಾ ತಕ್ಷಕಾನ್ನಿಧನಂ ಗತಮ್ ।
ಸರ್ಪಾನ್ವೈ ಸರ್ಪಯಾಗಾಗ್ನೌ ಸ ಹೋಷ್ಯತಿ ರುಷಾನ್ವಿತಃ ॥

ಅನುವಾದ

ತಕ್ಷಕನು ಕಚ್ಚಿದೊಡನೆ ನಿನ್ನ ಮೃತ್ಯುವಾದಾಗ ಇದನ್ನು ತಿಳಿದ ಜನಮೇಜಯನು ಬಹಳ ಸಿಟ್ಟುಗೊಂಡು, ಸರ್ಪಯಾಗದಿಂದ ಎಲ್ಲ ಸರ್ಪಗಳನ್ನು ಯಜ್ಞೇಶ್ವರನಿಗೆ ಆಹುತಿಯಾಗಿಸುವನು. ॥36॥

(ಶ್ಲೋಕ-37)

ಮೂಲಮ್

ಕಾವಷೇಯಂ ಪುರೋಧಾಯ ತುರಂ ತುರಗಮೇಧಯಾಟ್ ।
ಸಮಂತಾತ್ಪೃಥಿವೀಂ ಸರ್ವಾಂ ಜಿತ್ವಾ ಯಕ್ಷ್ಯತಿ ಚಾಧ್ವರೈಃ ॥

ಅನುವಾದ

ಕಾವಷೇಯನ ಪುತ್ರನಾದ ತುರನೆಂಬುವನನ್ನು ಪುರೋಹಿತ ನನ್ನಾಗಿಸಿಕೊಂಡು ಜನಮೇಜಯನು ಅಶ್ವಮೇಧ ಯಜ್ಞವನ್ನು ಮಾಡುವನು ಮತ್ತು ಎಲ್ಲ ದಿಕ್ಕುಗಳಲ್ಲಿ ಪೃಥಿವಿಯನ್ನು ಜಯಿಸಿ ಯಜ್ಞಗಳ ಮೂಲಕ ಭಗವಂತನನ್ನು ಆರಾಧಿಸುವನು.॥37॥

(ಶ್ಲೋಕ-38)

ಮೂಲಮ್

ತಸ್ಯ ಪುತ್ರಃ ಶತಾನೀಕೋ ಯಾಜ್ಞವಲ್ಕ್ಯಾತ್ತ್ರಯೀಂ ಪಠನ್ ।
ಅಸ್ತ್ರಜ್ಞಾನಂ ಕ್ರಿಯಾಜ್ಞಾನಂ ಶೌನಕಾತ್ಪರಮೇಷ್ಯತಿ ॥

ಅನುವಾದ

ಜನಮೇಜಯನಿಗೆ ಶತಾನೀಕನೆಂಬ ಪುತ್ರನು ಹುಟ್ಟುವನು. ಅವನು ಯಾಜ್ಞವಲ್ಕ್ಯರಿಂದ ಮೂರು ವೇದಗಳನ್ನು ಮತ್ತು ಕರ್ಮಕಾಂಡವನ್ನು ಕಲಿತು, ಕೃಪಾಚಾರ್ಯರಿಂದ ಅಸ್ತ್ರವಿದ್ಯೆಯನ್ನು ಪಡೆದುಕೊಳ್ಳುವನು. ಶೌನಕರಿಂದ ಆತ್ಮಜ್ಞಾನವನ್ನು ಸಂಪಾದಿಸಿ ಪರಮಾತ್ಮನನ್ನು ಹೊಂದುವನು. ॥38॥

(ಶ್ಲೋಕ-39)

ಮೂಲಮ್

ಸಹಸ್ರಾನೀಕಸ್ತತ್ಪುತ್ರಸ್ತತಶ್ಚೈವಾಶ್ವಮೇಧಜಃ ।
ಅಸೀಮಕೃಷ್ಣಸ್ತಸ್ಯಾಪಿ ನೇಮಿಚಕ್ರಸ್ತು ತತ್ಸುತಃ ॥

ಅನುವಾದ

ಶತಾನೀಕನಿಗೆ ಸಹಸ್ರಾನೀಕ, ಸಹಸ್ರಾನೀಕನಿಗೆ ಅಶ್ವಮೇಧಜ, ಅಶ್ವಮೇಧಜನಿಗೆ ಅಸೀಮಕೃಷ್ಣ ಮತ್ತು ಅಸೀಮ ಕೃಷ್ಣನಿಗೆ ನೇಮಿಚಕ್ರ ಪುತ್ರನು ಹುಟುವನು. ॥39॥

(ಶ್ಲೋಕ-40)

ಮೂಲಮ್

ಗಜಾಹ್ವಯೇ ಹೃತೇ ನದ್ಯಾ ಕೌಶಾಂಬ್ಯಾಂ ಸಾಧು ವತ್ಸ್ಯತಿ ।
ಉಕ್ತಸ್ತತಶ್ಚಿತ್ರರಥಸ್ತಸ್ಮಾತ್ಕವಿರಥಃ ಸುತಃ ॥

(ಶ್ಲೋಕ-41)

ಮೂಲಮ್

ತಸ್ಮಾಚ್ಚ ವೃಷ್ಟಿಮಾಂಸ್ತಸ್ಯ ಸುಷೇಣೋಽಥ ಮಹೀಪತಿಃ ।
ಸುನೀಥಸ್ತಸ್ಯ ಭವಿತಾ ನೃಚಕ್ಷುರ್ಯತ್ಸುಖೀನಲಃ ॥

(ಶ್ಲೋಕ-42)

ಮೂಲಮ್

ಪರಿಪ್ಲವಃ ಸುತಸ್ತಸ್ಮಾನ್ಮೇಧಾವೀ ಸುನಯಾತ್ಮಜಃ ।
ನೃಪಞ್ಜಯಸ್ತತೋ ದೂರ್ವಸ್ತಿಮಿಸ್ತಸ್ಮಾಜ್ಜನಿಷ್ಯತಿ ॥

ಅನುವಾದ

ಹಸ್ತಿನಾಪುರವು ಗಂಗೆಯಲ್ಲಿ ಕೊಚ್ಚಿಕೊಂಡು ಹೋದಾಗ ನೇಮಿಯು ಕೌಶಾಂಬಿ ಪುರದಲ್ಲಿ ಸುಖವಾಗಿ ನೆಲೆಸುವನು. ನೇಮಿಗೆ ಚಿತ್ರರಥ ಪುತ್ರನಾಗುವನು. ಚಿತ್ರರಥನಿಗೆ ಕವಿರಥ, ಕವಿರಥನಿಗೆ ವೃಷ್ಟಿಮಾನ್, ವೃಷ್ಟಿಮಂತನಿಗೆ ಸುಷೇಣ, ಸುಷೇಣನಿಗೆ ಸುನೀಥ, ಸುನೀಥನಿಗೆ ನೃಚಕ್ಷು, ನೃಚಕ್ಷುವಿಗೆ ಸುಖೀನಲ, ಸುಖೀನಲನಿಗೆ ಪರಿಪ್ಲವ, ಪರೀಪ್ಲವನಿಗೆ ಸುನಯ, ಸುನಯನಿಗೆ ಮೇಧಾವೀ, ಮೇಧಾವಿಗೆ ನೃಪಂಜಯ, ನೃಪಂಜಯನಿಗೆ ದೂರ್ವ, ದೂರ್ವನಿಗೆ ತಿಮಿ ಎಂಬ ಪುತ್ರನು ಉದಿಸುವನು. ॥40-42॥

(ಶ್ಲೋಕ-43)

ಮೂಲಮ್

ತಿಮೇರ್ಬೃಹದ್ರಥಸ್ತಸ್ಮಾಚ್ಛತಾನೀಕಃ ಸುದಾಸಜಃ ।
ಶತಾನೀಕಾದ್ದುರ್ದಮನಸ್ತಸ್ಯಾಪತ್ಯಂ ವಹೀನರಃ ॥

(ಶ್ಲೋಕ-44)

ಮೂಲಮ್

ದಂಡಪಾಣಿರ್ನಿಮಿಸ್ತಸ್ಯ ಕ್ಷೇಮಕೋ ಭವಿತಾ ನೃಪಃ ।
ಬ್ರಹ್ಮಕ್ಷತ್ರಸ್ಯ ವೈ ಪ್ರೋಕ್ತೋ ವಂಶೋ ದೇವರ್ಷಿಸತ್ಕೃತಃ ॥

ಅನುವಾದ

ತಿಮಿಯಿಂದ ಬೃಹದ್ರಥನು, ಬೃಹದ್ರಥನಿಗೆ ಸುದಾಸ, ಸುದಾಸನಿಗೆ ಶತಾನೀಕ, ಶತಾನೀಕನಿಗೆ ದುರ್ದಮನ, ದುರ್ದಮನನಿಗೆ ವಹೀನರ, ವಹೀ ನರನಿಗೆ ದಂಡಪಾಣಿ, ದಂಡಪಾಣಿಗೆ ನಿಮಿ ಮತ್ತು ನಿಮಿಗೆ ರಾಜಾಕ್ಷೇಮಕನ ಜನ್ಮವಾಗುವುದು. ಹೀಗೆ ನಾನು ನಿನಗೆ ಬ್ರಾಹ್ಮಣರು ಮತ್ತು ಕ್ಷತ್ರಿಯರ ಉತ್ಪತ್ತಿ ಸ್ಥಾನವಾದ ಚಂದ್ರವಂಶವನ್ನು ವರ್ಣಿಸಿ ಹೇಳಿರುವೆನು. ಮಹಾ-ಮಹಾದೇವತೆಗಳೂ, ಋಷಿಗಳೂ ಈ ವಂಶವನ್ನು ಸತ್ಕರಿಸುವರು. ॥43-44॥

(ಶ್ಲೋಕ-45)

ಮೂಲಮ್

ಕ್ಷೇಮಕಂ ಪ್ರಾಪ್ಯ ರಾಜಾನಂ ಸಂಸ್ಥಾಂ ಪ್ರಾಪ್ಸ್ಯತಿ ವೈ ಕಲೌ ।
ಅಥ ಮಾಗಧರಾಜಾನೋ ಭವಿತಾರೋ ವದಾಮಿ ತೇ ॥

ಅನುವಾದ

ಈ ವಂಶವು ಕಲಿಯುಗದಲ್ಲಿ ಕ್ಷೇಮಕನೊಂದಿಗೆ ಸಮಾಪ್ತವಾಗುವುದು. ಈಗ ನಾನು ಭವಿಷ್ಯದಲ್ಲಾಗುವ ಮಗಧದೇಶದ ರಾಜರನ್ನು ವರ್ಣಿಸುವೆನು ಕೇಳು. ॥45॥

(ಶ್ಲೋಕ-46)

ಮೂಲಮ್

ಭವಿತಾ ಸಹದೇವಸ್ಯ ಮಾರ್ಜಾರಿರ್ಯಚ್ಛ್ರುತಶ್ರವಾಃ ।
ತತೋಽಯುತಾಯುಸ್ತಸ್ಯಾಪಿ ನಿರಮಿತ್ರೋಽಥ ತತ್ಸುತಃ ॥

ಅನುವಾದ

ಜರಾಸಂಧನ ಮಗನಾದ ಸಹದೇವನಿಗೆ ಮಾರ್ಜಾರಿ, ಮಾರ್ಜಾರಿಯಿಂದ ಶ್ರುತಶ್ರವಾ, ಶ್ರುತಶ್ರವಸನಿಂದ ಅಯುತಾಯು, ಅಯುತಾಯುವಿನಿಂದ ನಿರಮಿತ್ರನೆಂಬ ಪುತ್ರನಾಗುವನು. ॥46॥

(ಶ್ಲೋಕ-47)

ಮೂಲಮ್

ಸುನಕ್ಷತ್ರಃ ಸುನಕ್ಷತ್ರಾದ್ಬೃಹತ್ಸೇನೋಽಥ ಕರ್ಮಜಿತ್ ।
ತತಃ ಸೃತಞ್ಜಯಾದ್ವಿಪ್ರಃ ಶುಚಿಸ್ತಸ್ಯ ಭವಿಷ್ಯತಿ ॥

ಅನುವಾದ

ನಿರಮಿತ್ರನಿಂದ ಸುನಕ್ಷತ್ರ, ಸುನಕ್ಷತ್ರನಿಂದ ಬೃಹತ್ಸೇನ, ಬೃಹತ್ಸೇನನಿಂದ ಕರ್ಮಜಿತ್, ಕರ್ಮ ಜಿತ್ತುವಿನಿಂದ ಸೃತಂಜಯ, ಸೃತಂಜಯನಿಂದ ವಿಪ್ರ, ವಿಪ್ರನಿಂದ ಶುಚಿ ಎಂಬ ಪುತ್ರನಾಗುವನು. ॥47॥

(ಶ್ಲೋಕ-48)

ಮೂಲಮ್

ಕ್ಷೇಮೋಽಥ ಸುವ್ರತಸ್ತಸ್ಮಾದ್ಧರ್ಮಸೂತ್ರಃ ಶಮಸ್ತತಃ ।
ದ್ಯುಮತ್ಸೇನೋಽಥ ಸುಮತಿಃ ಸುಬಲೋ ಜನಿತಾ ತತಃ ॥

ಅನುವಾದ

ಶುಚಿಗೆ ಕ್ಷೇಮ, ಕ್ಷೇಮನಿಗೆ ಸುವ್ರತ, ಸುವ್ರತನಿಗೆ ಧರ್ಮಸೂತ್ರ, ಧರ್ಮಸೂತ್ರನಿಗೆ ಶಮ, ಶಮನಿಗೆ ದ್ಯುಮತ್ಸೇನ, ದ್ಯುಮತ್ಸೇನನಿಗೆ ಸುಮತಿ, ಸುಮತಿಗೆ ಸುಬಲನು ಹುಟ್ಟುವನು. ॥48॥

(ಶ್ಲೋಕ-49)

ಮೂಲಮ್

ಸುನೀಥಃ ಸತ್ಯಜಿದಥ ವಿಶ್ವಜಿದ್ ಯದ್ ರಿಪುಂಜಯಃ ।
ಬಾರ್ಹದ್ರಥಾಶ್ಚ ಭೂಪಾಲಾ ಭಾವ್ಯಾಃ ಸಾಹಸ್ರವತ್ಸರಮ್ ॥

ಅನುವಾದ

ಸುಬಲನಿಗೆ ಸುನೀಥ, ಸುನೀಥನಿಗೆ ಸತ್ಯಜಿತ್, ಸತ್ಯಜಿತ್ತುವಿಗೆ ವಿಶ್ವಜಿತ್, ವಿಶ್ವಜಿತ್ತುವಿಗೆ ರಿಪುಂಜಯ ಪುತ್ರನು ಹುಟ್ಟುವನು. ಇವರೆಲ್ಲರೂ ಬೃಹದ್ರಥ ವಂಶದ ರಾಜರಾಗುವರು. ಇವರ ಶಾಸನ ಕಾಲವು ಒಂದು ಸಾವಿರವರ್ಷಗಳು ಮಾತ್ರ ಇರುವುದು.॥49॥

ಅನುವಾದ (ಸಮಾಪ್ತಿಃ)

ಇಪ್ಪತ್ತೆರಡನೆಯ ಅಧ್ಯಾಯವು ಮುಗಿಯಿತು. ॥22॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ದ್ವಾವಿಂಶೋಽಧ್ಯಾಯಃ ॥22॥