[ಇಪ್ಪತ್ತೊಂದನೆಯ ಅಧ್ಯಾಯ]
ಭಾಗಸೂಚನಾ
ಭರತವಂಶದ ವರ್ಣನೆ ರಂತಿದೇವನ ಕಥೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ವಿತಥಸ್ಯ ಸುತೋ ಮನ್ಯುರ್ಬೃಹತ್ಕ್ಷತ್ರೋ ಜಯಸ್ತತಃ ।
ಮಹಾವೀರ್ಯೋ ನರೋ ಗರ್ಗಃ ಸಂಕೃತಿಸ್ತು ನರಾತ್ಮಜಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ವಿತಥ ಅಥವಾ ಭರದ್ವಾಜನ ಮಗ ಮನ್ಯು ಎಂಬುವನು. ಮನ್ಯುವಿಗೆ ಬೃಹತ್ಕ್ಷತ್ರ, ಜಯ, ಮಹಾವೀರ್ಯ, ನರ, ಗರ್ಗರೆಂಬ ಐವರು ಪುತ್ರರಾದರು. ನರನಿಗೆ ಸಂಕೃತಿ ಎಂಬ ಮಗನಿದ್ದನು. ॥1॥
(ಶ್ಲೋಕ-2)
ಮೂಲಮ್
ಗುರುಶ್ಚ ರಂತಿದೇವಶ್ಚ ಸಂಕೃತೇಃ ಪಾಂಡುನಂದನ ।
ರಂತಿದೇವಸ್ಯ ಹಿ ಯಶ ಇಹಾಮುತ್ರ ಚ ಗೀಯತೇ ॥
ಅನುವಾದ
ಸಂಕೃತಿಗೆ ಗುರು ಮತ್ತು ರಂತಿ ದೇವರೆಂಬ ಇಬ್ಬರು ಮಕ್ಕಳಾದರು. ಪರೀಕ್ಷಿತನೇ! ರಂತಿದೇವನ ನಿರ್ಮಲವಾದ ಕೀರ್ತಿಯು ಇಹಪರಲೋಕಗಳಲ್ಲಿ ಎಲ್ಲೆಡೆ ಕೊಂಡಾಡಲ್ಪಡುತ್ತದೆ. ॥2॥
(ಶ್ಲೋಕ-3)
ಮೂಲಮ್
ವಿಯದ್ವಿತ್ತಸ್ಯ ದದತೋ ಲಬ್ಧಂ ಲಬ್ಧಂ ಬುಭುಕ್ಷತಃ ।
ನಿಷ್ಕಿಂಚನಸ್ಯ ಧೀರಸ್ಯ ಸಕುಟುಂಬಸ್ಯ ಸೀದತಃ ॥
ಅನುವಾದ
ರಂತಿದೇವನು ಆಕಾಶದಂತೆ ಪ್ರಯತ್ನವಿಲ್ಲದೆ ದೈವವಶದಿಂದ ಪ್ರಾಪ್ತವಾದ ವಸ್ತುಗಳನ್ನು ಉಪಭೋಗಿಸುತ್ತಿರುವಾಗ ದಿನಗಳೆದಂತೆ ಅವನ ಸಂಪತ್ತು ಕರಗಿಹೋಯಿತು. ಏನಾದರೂ ದೊರಕಿದರೆ ಅದನ್ನು ಇತರರಿಗೆ ಕೊಟ್ಟು ತಾನು ಹಸಿದುಕೊಂಡೇ ಇರುತ್ತಿದ್ದನು. ಅವನು ಸಂಗ್ರಹ-ಪರಿಗ್ರಹ, ಮಮತೆಯಿಂದ ರಹಿತನಾಗಿ ಧೈರ್ಯಶಾಲಿಯಾಗಿದ್ದನು ಮತ್ತು ತನ್ನ ಕುಟುಂಬದೊಡನೆ ದುಃಖವನ್ನು ಅನುಭವಿಸುತ್ತಾ ಇದ್ದನು. ॥3॥
(ಶ್ಲೋಕ-4)
ಮೂಲಮ್
ವ್ಯತೀಯುರಷ್ಟ ಚತ್ವಾರಿಂಶದಹಾನ್ಯಪಿಬತಃ ಕಿಲ ।
ಘೃತಪಾಯಸಸಂಯಾವಂ ತೋಯಂ ಪ್ರಾತರುಪಸ್ಥಿತಮ್ ॥
ಅನುವಾದ
ಒಮ್ಮೆ ಸತತವಾಗಿ ನಲವತ್ತೆಂಟು ದಿನಗಳವರೆಗೆ ಅವನಿಗೆ ನೀರೂ ಕೂಡ ಸಿಗದೆ ಕಳೆದು ಹೋದುವು. ನಲವತ್ತೊಂಭತ್ತನೆಯ ದಿನ ಬೆಳಿಗ್ಗೆಯೇ ಅವನಿಗೆ ಸ್ವಲ್ಪ ತುಪ್ಪ, ಪಾಯಸ, ಗೋದಿಯ ಅನ್ನ ಮತ್ತು ನೀರು ದೊರೆತವು. ॥4॥
(ಶ್ಲೋಕ-5)
ಮೂಲಮ್
ಕೃಚ್ಛ್ರಪ್ರಾಪ್ತಕುಟುಂಬಸ್ಯ ಕ್ಷುತ್ತೃಡ್ಭ್ಯಾಂ ಜಾತವೇಪಥೋಃ ।
ಅತಿಥಿರ್ಬ್ರಾಹ್ಮಣಃ ಕಾಲೇ ಭೋಕ್ತುಕಾಮಸ್ಯ ಚಾಗಮತ್ ॥
ಅನುವಾದ
ಅವನ ಪರಿವಾರವು ಹಸಿವು-ಬಾಯಾರಿಕೆಯಿಂದ ಬಹಳ ಸಂಕಟಪಡುತ್ತಾ ಗಡ-ಗಡನೆ ನಡುಗುತ್ತಿತ್ತು. ಆದರೆ ಅವರೆಲ್ಲರೂ ಇನ್ನೇನು ಭೋಜನ ಮಾಡಬೇಕೆಂದಿರುವಾಗ ಓರ್ವ ಬ್ರಾಹ್ಮಣನು ಅತಿಥಿಯಾಗಿ ಬಂದನು. ॥5॥
(ಶ್ಲೋಕ-6)
ಮೂಲಮ್
ತಸ್ಮೈ ಸಂವ್ಯಭಜತ್ಸೋಽನ್ನಮಾದೃತ್ಯ ಶ್ರದ್ಧಯಾನ್ವಿತಃ ।
ಹರಿಂ ಸರ್ವತ್ರ ಸಂಪಶ್ಯನ್ಸ ಭುಕ್ತ್ವಾ ಪ್ರಯಯೌ ದ್ವಿಜಃ ॥
ಅನುವಾದ
ರಂತಿದೇವನು ಎಲ್ಲರಲ್ಲಿ ಶ್ರೀಭಗವಂತನನ್ನೇ ದರ್ಶಿಸುತ್ತಿದ್ದನು. ಆದುದರಿಂದ ಅವನು ಅತ್ಯಂತ ಶ್ರದ್ಧಾದರಗಳಿಂದ ದೊರಕಿದ ಅದೇ ಅನ್ನದಿಂದ ಬ್ರಾಹ್ಮಣನಿಗೆ ಭೋಜನ ಮಾಡಿಸಿದನು. ಬ್ರಾಹ್ಮಣನು ಭೋಜನಮಾಡಿ ಹೊರಟು ಹೋದನು. ॥6॥
(ಶ್ಲೋಕ-7)
ಮೂಲಮ್
ಅಥಾನ್ಯೋ ಭೋಕ್ಷ್ಯಮಾಣಸ್ಯ ವಿಭಕ್ತಸ್ಯ ಮಹೀಪತೇ ।
ವಿಭಕ್ತಂ ವ್ಯಭಜತ್ತಸ್ಮೈ ವೃಷಲಾಯ ಹರಿಂ ಸ್ಮರನ್ ॥
ಅನುವಾದ
ಪರೀಕ್ಷಿತನೇ! ಈಗ ಉಳಿದಿರುವ ಅನ್ನವನ್ನು ಪರಸ್ಪರ ಹಂಚಿಕೊಂಡು ಊಟಮಾಡಲು ರಂತಿದೇವನು ಬಯಸಿದನು. ಅದೇ ಸಮಯಕ್ಕೆ ಇನ್ನೋರ್ವ ಶೂದ್ರನು ಅತಿಥಿಯಾಗಿ ಬಂದನು. ರಂತಿದೇವನು ಭಗವಂತನನ್ನು ಸ್ಮರಿಸುತ್ತಾ ಆ ಉಳಿದ ಅನ್ನದಲ್ಲಿಯೂ ಸ್ವಲ್ಪ ಭಾಗವನ್ನು ಶೂದ್ರನ ರೂಪದಲ್ಲಿ ಬಂದ ಅತಿಥಿಗೆ ಊಟ ಮಾಡಿಸಿದನು. ॥7॥
(ಶ್ಲೋಕ-8)
ಮೂಲಮ್
ಯಾತೇ ಶೂದ್ರೇ ತಮನ್ಯೋಽಗಾದತಿಥಿಃ ಶ್ವಭಿರಾವೃತಃ ।
ರಾಜನ್ಮೇ ದೀಯತಾಮನ್ನಂ ಸಗಣಾಯ ಬುಭುಕ್ಷತೇ ॥
ಅನುವಾದ
ಶೂದ್ರನು ತಿಂದುಂಡು ಹೊರಟುಹೋದಾಗ ನಾಯಿಗಳೊಂದಿಗೆ ಮತ್ತೋರ್ವ ಅತಿಥಿಯು ಬಂದನು. ಅವನೆಂದನು ರಾಜನೇ! ನಾನು ಮತ್ತು ನನ್ನ ನಾಯಿಗಳು ಹಸಿದಿದ್ದೇವೆ. ತಿನ್ನಲು ಏನಾದರೂ ಕೊಡು. ॥8॥
(ಶ್ಲೋಕ-9)
ಮೂಲಮ್
ಸ ಆದೃತ್ಯಾವಶಿಷ್ಟಂ ಯದ್ಬಹುಮಾನಪುರಸ್ಕೃತಮ್ ।
ತಚ್ಚ ದತ್ತ್ವಾ ನಮಶ್ಚಕ್ರೇ ಶ್ವಭ್ಯಃ ಶ್ವಪತಯೇ ವಿಭುಃ ॥
ಅನುವಾದ
ರಂತಿದೇವನು ಅತ್ಯಂತ ಆದರಭಾವದಿಂದ ಬಂದ ಅತಿಥಿಗೆ ಉಳಿದ ಅನ್ನವನ್ನು ಕೊಟ್ಟನು ಮತ್ತು ಭಗವನ್ಮಯನಾಗಿ ನಾಯಿಯ ಒಡೆಯನ ರೂಪದಲ್ಲಿ ಬಂದ ಭಗವಂತನನ್ನು ನಮಸ್ಕರಿಸಿದನು. ॥9॥
(ಶ್ಲೋಕ-10)
ಮೂಲಮ್
ಪಾನೀಯಮಾತ್ರಮುಚ್ಛೇಷಂ ತಚ್ಚೈಕಪರಿತರ್ಪಣಮ್ ।
ಪಾಸ್ಯತಃ ಪುಲ್ಕಸೋಽಭ್ಯಾಗಾದಪೋ ದೇಹ್ಯಶುಭಸ್ಯ ಮೇ ॥
ಅನುವಾದ
ಈಗ ಕೇವಲ ನೀರು ಮಾತ್ರ ಉಳಿದಿತ್ತು. ಅದೂ ಕೂಡ ಒಬ್ಬನಿಗೆ ಕುಡಿಯಲು ಸಾಕಾಗುವಷ್ಟೇ ಇತ್ತು. ಅದನ್ನು ತಮ್ಮಲ್ಲಿ ಹಂಚಿಕೊಂಡು ಕುಡಿಯ ಬೇಕೆಂದಿರುವಾಗ ಓರ್ವಚಾಂಡಾಲನು ಬಂದುಬಿಟ್ಟನು ‘ಸ್ವಾಮಿ! ನಾನು ಅತ್ಯಂತ ನೀಚನಾಗಿರುವೆನು. ನನಗೆ ನೀರನ್ನು ಕುಡಿಸು’ ಎಂದು ಹೇಳಿದನು. ॥10॥
(ಶ್ಲೋಕ-11)
ಮೂಲಮ್
ತಸ್ಯ ತಾಂ ಕರುಣಾಂ ವಾಚಂ ನಿಶಮ್ಯ ವಿಪುಲಶ್ರಮಾಮ್ ।
ಕೃಪಯಾ ಭೃಶಸಂತಪ್ತ ಇದಮಾಹಾಮೃತಂ ವಚಃ ॥
ಅನುವಾದ
ಹೀಗೆ ಹೇಳಲೂ ಕೂಡ ಬಹಳ ಬಳಲಿ ಕಷ್ಟಪಡುತ್ತಿದ್ದ ಆ ಚಾಂಡಾಲನ ಕರುಣಾಪೂರ್ಣವಾದ ಮಾತನ್ನು ಕೇಳಿ, ಕರುಣಾಶಾಲಿಯಾದ ರಂತಿದೇವನು ದಯೆಯಿಂದ ಅತ್ಯಂತ ಸಂಕಟಪಡುತ್ತಾ ಅಮೃತಮಯ ಈ ಮಾತನ್ನು ಹೇಳಿದನು. ॥11॥
(ಶ್ಲೋಕ-12)
ಮೂಲಮ್
ನ ಕಾಮಯೇಽಹಂ ಗತಿಮೀಶ್ವರಾತ್ಪರಾ-
ಮಷ್ಟರ್ಧಿಯುಕ್ತಾಮಪುನರ್ಭವಂ ವಾ ।
ಆರ್ತಿಂ ಪ್ರಪದ್ಯೇಽಖಿಲದೇಹಭಾಜಾ-
ಮಂತಃ ಸ್ಥಿತೋ ಯೇನ ಭವಂತ್ಯದುಃಖಾಃ ॥
ಅನುವಾದ
ನಾನು ಭಗವಂತನಲ್ಲಿ ಅಣಿಮಾದಿ ಅಷ್ಟಸಿದ್ಧಿಗಳಿಂದ ಕೂಡಿದ ಪರಮಗತಿಯನ್ನು ಬಯಸುವುದಿಲ್ಲ. ಹೆಚ್ಚೇನು ಮೋಕ್ಷವನ್ನೂ ಕೂಡ ಬೇಕೆಂದು ಕೇಳುವುದಿಲ್ಲ. ನಾನು ಸಮಸ್ತ ಪ್ರಾಣಿಗಳ ಹೃದಯದಲ್ಲಿ ನೆಲೆಸಿ ಅವರ ಎಲ್ಲ ದುಃಖಗಳನ್ನು ನಾನೇ ಸಹಿಸುವಂತಾಗಲಿ. ಹೀಗೆ ಮಾಡುವುದರಿಂದ ಯಾವ ಪ್ರಾಣಿಗೂ ದುಃಖವಾಗದಿರಲೆಂದು ಮಾತ್ರ ನನ್ನ ಅಪೇಕ್ಷೆಯಾಗಿದೆ. ॥12॥
(ಶ್ಲೋಕ-13)
ಮೂಲಮ್
ಕ್ಷುತ್ತೃಟ್ಶ್ರಮೋ ಗಾತ್ರಪರಿಶ್ರಮಶ್ಚ
ದೈನ್ಯಂ ಕ್ಲಮಃ ಶೋಕವಿಷಾದಮೋಹಾಃ ।
ಸರ್ವೇ ನಿವೃತ್ತಾಃ ಕೃಪಣಸ್ಯ ಜಂತೋ-
ರ್ಜಿಜೀವಿಷೋರ್ಜೀವಜಲಾರ್ಪಣಾನ್ಮೇ ॥
ಅನುವಾದ
ಈ ದೀನ ಪ್ರಾಣಿಯು ನೀರು ಕುಡಿದಾದರೂ ಬದುಕಲು ಬಯಸುತ್ತಿದೆ. ನೀರನ್ನು ಕೊಟ್ಟರೆ ಇವನ ಜೀವನದ ರಕ್ಷಣೆಯಾಗುವುದು. ಇದರಿಂದಾಗಿ ನನ್ನ ಹಸಿವು-ಬಾಯಾರಿಕೆಯ ಪೀಡೆ, ಶರೀರದ ಶಿಥಿಲತೆ, ದೀನತೆ, ಗ್ಲಾನಿ, ಶೋಕ, ವಿಷಾದ, ಮೋಹ ಇವೆಲ್ಲವೂ ಹೊರಟುಹೋಗುತ್ತವೆ. ನಿಶ್ಚಯವಾಗಿ ಈಗ ನಾನೇ ಸುಖಿಯು.॥13॥
(ಶ್ಲೋಕ-14)
ಮೂಲಮ್
ಇತಿ ಪ್ರಭಾಷ್ಯ ಪಾನೀಯಂ ಮ್ರಿಯಮಾಣಃ ಪಿಪಾಸಯಾ ।
ಪುಲ್ಕಸಾಯಾದದಾದ್ಧೀರೋ ನಿಸರ್ಗಕರುಣೋ ನೃಪಃ ॥
ಅನುವಾದ
ಹೀಗೆ ಹೇಳಿ ರಂತಿದೇವನು ಆ ಉಳಿದಿರುವ ನೀರನ್ನೂ ಕೂಡ ಆ ಚಾಂಡಾಲನಿಗೆ ಕೊಟ್ಟನು. ನೀರಿಲ್ಲದೆ ಅವನು ಸ್ವತಃ ಸಾಯುತ್ತಿದ್ದರೂ ಸ್ವಾಭಾವಿಕವಾಗಿಯೇ ಅವನ ಹೃದಯವು ಕರುಣಾಪೂರ್ಣವಾಗಿತ್ತು. ಅದರಿಂದ ಜೀವನಾಧಾರವಾದ ನೀರನ್ನೂ ಇಟ್ಟುಕೊಳ್ಳಲು ಕೂಡ ಅವನಿಗೆ ಸಾಧ್ಯವಾಗಲಿಲ್ಲ. ಅವನ ಧೈರ್ಯಕ್ಕೆ ಏನಾದರೂ ಸೀಮೆ ಇದೆಯೇ? ॥14॥
(ಶ್ಲೋಕ-15)
ಮೂಲಮ್
ತಸ್ಯ ತ್ರಿಭುವನಾಧೀಶಾಃ ಫಲದಾಃ ಲಮಿಚ್ಛತಾಮ್ ।
ಆತ್ಮಾನಂ ದರ್ಶಯಾಞ್ಚಕ್ರುರ್ಮಾಯಾ ವಿಷ್ಣುವಿನಿರ್ಮಿತಾಃ ॥
ಅನುವಾದ
ಪರೀಕ್ಷಿತನೇ! ಈ ಅತಿಥಿಗಳು ವಾಸ್ತವವಾಗಿ ಭಗವಂತನಿಂದ ರಚಿತವಾದ ಮಾಯೆಯ ವಿಭಿನ್ನರೂಪಗಳಾಗಿದ್ದವು. ಪರೀಕ್ಷೆಯು ಪೂರ್ಣಗೊಂಡಾಗ ತನ್ನ ಭಕ್ತರ ಅಭಿಲಾಷೆಯನ್ನು ಪೂರ್ಣಗೊಳಿಸುವಂತಹ ತ್ರಿಭುವನಕ್ಕೆ ಒಡೆಯರಾದ ಬ್ರಹ್ಮಾ, ವಿಷ್ಣು, ಮಹೇಶ್ವರ ಮೂವರು ಅವನೆದುರಿಗೆ ಪ್ರತ್ಯಕ್ಷರಾದರು. ॥15॥
(ಶ್ಲೋಕ-16)
ಮೂಲಮ್
ಸ ವೈ ತೇಭ್ಯೋ ನಮಸ್ಕೃತ್ಯ ನಿಃಸಂಗೋ ವಿಗತಸ್ಪೃಹಃ ।
ವಾಸುದೇವೇ ಭಗವತಿ ಭಕ್ತ್ಯಾ ಚಕ್ರೇ ಮನಃ ಪರಮ್ ॥
ಅನುವಾದ
ರಂತಿದೇವನು ಅವರ ಚರಣಗಳಲ್ಲಿ ನಮಸ್ಕರಿಸಿದನು. ಭಗವಂತನ ಕೃಪೆಯಿಂದ ಅವನು ನಿಸ್ಸಂಗನೂ, (ನಿರಾಸಕ್ತನೂ) ನಿಃಸ್ಪೃಹನೂ ಆಗಿದ್ದನು. ಪರಮ ಪ್ರೇಮಮಯ ಭಕ್ತಿಭಾವದಿಂದ ತನ್ನ ಮನಸ್ಸನ್ನು ಭಗವಾನ್ ವಾಸುದೇವನಲ್ಲಿ ತನ್ಮಯಗೊಳಿಸಿ, ಅವರಲ್ಲಿ ಏನನ್ನೂ ಬೇಡಲಿಲ್ಲ. ॥16॥
(ಶ್ಲೋಕ-17)
ಮೂಲಮ್
ಈಶ್ವರಾಲಂಬನಂ ಚಿತ್ತಂ ಕುರ್ವತೋಽನನ್ಯರಾಧಸಃ ।
ಮಾಯಾ ಗುಣಮಯೀ ರಾಜನ್ಸ್ವಪ್ನವತ್ಪ್ರತ್ಯಲೀಯತ ॥
ಅನುವಾದ
ಪರೀಕ್ಷಿತನೇ! ಅವನಿಗೆ ಭಗವಂತನಲ್ಲದೆ ಯಾವ ವಸ್ತುವಿನ ಇಚ್ಛೆಯೂ ಇರಲಿಲ್ಲ. ಅವನು ತನ್ನ ಮನಸ್ಸನ್ನು ಪೂರ್ಣವಾಗಿ ಭಗವಂತನಲ್ಲಿ ತೊಡಗಿಸಿದನು. ಅದರಿಂದ ಎಚ್ಚರವಾದಾಗ ಸ್ವಪ್ನ ದೃಶ್ಯವು ಇಲ್ಲವಾಗುವಂತೆ ತ್ರಿಗುಣಮಯವಾದ ಮಾಯೆಯು ನಾಶವಾಗಿಹೋಯಿತು.॥17॥
(ಶ್ಲೋಕ-18)
ಮೂಲಮ್
ತತ್ಪ್ರಸಂಗಾನುಭಾವೇನ ರಂತಿದೇವಾನುವರ್ತಿನಃ ।
ಅಭವನ್ಯೋಗಿನಃ ಸರ್ವೇ ನಾರಾಯಣಪರಾಯಣಾಃ ॥
ಅನುವಾದ
ರಂತಿದೇವನ ಅನುಯಾಯಿಗಳೂ ಕೂಡ ಅವನ ಸಂಗದಿಂದ ಯೋಗಿಗಳಾಗಿ, ಎಲ್ಲರೂ ನಾರಾಯಣ ಪರಾಯಣರಾದರು.॥18॥
(ಶ್ಲೋಕ-19)
ಮೂಲಮ್
ಗರ್ಗಾಚ್ಛಿನಿಸ್ತತೋ ಗಾರ್ಗ್ಯಃ ಕ್ಷತ್ರಾದ್ಬ್ರಹ್ಮ ಹ್ಯವರ್ತತ ।
ದುರಿತಕ್ಷಯೋ ಮಹಾವೀರ್ಯಾತ್ತಸ್ಯ ತ್ರಯ್ಯಾರುಣಿಃ ಕವಿಃ ॥
(ಶ್ಲೋಕ-20)
ಮೂಲಮ್
ಪುಷ್ಕರಾರುಣಿರಿತ್ಯತ್ರ ಯೇ ಬ್ರಾಹ್ಮಣಗತಿಂ ಗತಾಃ ।
ಬೃಹತ್ಕ್ಷತ್ರಸ್ಯ ಪುತ್ರೋಽಭೂದ್ಧಸ್ತೀ ಯದ್ಧಸ್ತಿನಾಪುರಮ್ ॥
ಅನುವಾದ
ಮನ್ಯುಪುತ್ರನಾದ ಗರ್ಗನಿಂದ ಶಿನಿ ಮತ್ತು ಶಿನಿಯಿಂದ ಗಾರ್ಗ್ಯನ ಜನ್ಮವಾಯಿತು. ಗಾರ್ಗ್ಯನು ಕ್ಷತ್ರಿಯನಾಗಿದ್ದರೂ ಅವನಿಂದ ತ್ರ್ಯಯಾರುಣ, ಕವಿ, ಪುಷ್ಕರಾರುಣಿ ಎಂಬ ಮೂವರು ಪುತ್ರರಾದರು. ಈ ಮೂವರೂ ಬ್ರಾಹ್ಮಣರಾದರು. ಬೃಹತ್ಕ್ಷತ್ರನ ಪುತ್ರ ಹಸ್ತಿ ಎಂಬುವನು. ಅವನೇ ಹಸ್ತಿನಾಪುರವನ್ನು ನೆಲೆಗೊಳಿಸಿದನು. ॥19-20॥
(ಶ್ಲೋಕ-21)
ಮೂಲಮ್
ಅಜಮೀಢೋ ದ್ವಿಮೀಢಶ್ಚ ಪುರುಮೀಢಶ್ಚ ಹಸ್ತಿನಃ ।
ಅಜಮೀಢಸ್ಯ ವಂಶ್ಯಾಃ ಸ್ಯುಃ ಪ್ರಿಯಮೇಧಾದಯೋ ದ್ವಿಜಾಃ ॥
ಅನುವಾದ
ಹಸ್ತಿಗೆ-ಅಜಮೀಢ, ದ್ವಿಮೀಢ ಮತ್ತು ಪುರುಮೀಢರೆಂಬ ಮೂವರು ಪುತ್ರರಿದ್ದರು. ಅಜಮೀಢನ ಪುತ್ರರಲ್ಲಿ ಪ್ರಿಯಮೇಧ ಮೊದಲಾದವರು ಬ್ರಾಹ್ಮಣರಾದರು.॥21॥
(ಶ್ಲೋಕ-22)
ಮೂಲಮ್
ಅಜಮೀಢಾದ್ಬೃಹದಿಷುಸ್ತಸ್ಯ ಪುತ್ರೋ ಬೃಹದ್ಧನುಃ ।
ಬೃಹತ್ಕಾಯಸ್ತತಸ್ತಸ್ಯ ಪುತ್ರ ಆಸೀಜ್ಜಯದ್ರಥಃ ॥
ಅನುವಾದ
ಇದೇ ಅಜಮೀಢನ ಓರ್ವ ಪುತ್ರನ ಹೆಸರು ಬೃಹದಿಷು ಎಂದಿತ್ತು. ಬೃಹದಿಷುವಿಗೆ ಬೃಹದ್ಧನು ಪುತ್ರನಾದನು. ಬೃಹದ್ಧನುವಿಗೆ ಬೃಹತ್ಕಾಯ, ಬೃಹತ್ಕಾಯನಿಗೆ ಜಯ ದ್ರಥನು ಹುಟ್ಟಿದನು.॥22॥
(ಶ್ಲೋಕ-23)
ಮೂಲಮ್
ತತ್ಸುತೋ ವಿಶದಸ್ತಸ್ಯ ಸೇನಜಿತ್ಸಮಜಾಯತ ।
ರುಚಿರಾಶ್ವೋ ದೃಢಹನುಃ ಕಾಶ್ಯೋ ವತ್ಸಶ್ಚ ತತ್ಸುತಾಃ ॥
ಅನುವಾದ
ಜಯದ್ರಥನ ಪುತ್ರ ವಿಶದನಾದನು. ವಿಶದನಿಗೆ ಸೇನಜಿತ್ ಹುಟ್ಟಿದನು. ಸೇನಜಿತ್ತುವಿಗೆ ರುಚಿರಾಶ್ವ, ದೃಢಹನು, ಕಾಶ್ಯ ಮತ್ತು ವತ್ಸ ಎಂಬ ನಾಲ್ವರು ಪುತ್ರರಾದರು. ॥23॥
(ಶ್ಲೋಕ-24)
ಮೂಲಮ್
ರುಚಿರಾಶ್ವಸುತಃ ಪಾರಃ ಪೃಥುಸೇನಸ್ತದಾತ್ಮಜಃ ।
ಪಾರಸ್ಯ ತನಯೋ ನೀಪಸ್ತಸ್ಯ ಪುತ್ರಶತಂ ತ್ವಭೂತ್ ॥
ಅನುವಾದ
ರುಚಿರಾಶ್ವನಿಗೆ ಪಾರನೆಂಬ ಪುತ್ರನಿದ್ದನು. ಪಾರನಿಗೆ ಪೃಥುಸೇನ ಜನಿಸಿದನು. ಪಾರನ ಇನ್ನೊಬ್ಬ ಪುತ್ರನ ಹೆಸರು ನೀಪ ಎಂದಿತ್ತು. ಅವನಿಗೆ ನೂರು ಮಕ್ಕಳಾದರು. ॥24॥
(ಶ್ಲೋಕ-25)
ಮೂಲಮ್
ಸ ಕೃತ್ವ್ಯಾಂ ಶುಕಕನ್ಯಾಯಾಂ ಬ್ರಹ್ಮದತ್ತಮಜೀಜನತ್ ।
ಸ ಯೋಗೀ ಗವಿ ಭಾರ್ಯಾಯಾಂ ವಿಷ್ವಕ್ಸೇನಮಧಾತ್ಸುತಮ್ ॥
ಅನುವಾದ
ಇದೇ ನೀಪನು ಛಾಯಾ*ಶುಕನ ಕನ್ಯೆಯಾದ ಕೃತ್ವಿಯೊಂದಿಗೆ ವಿವಾಹನಾಗಿದ್ದನು. ಅವನಿಂದ ಬ್ರಹ್ಮದತ್ತನೆಂಬ ಪುತ್ರನು ಜನಿಸಿದನು. ಬ್ರಹ್ಮದತ್ತನು ಮಹಾ ಯೋಗಿಯಾಗಿದ್ದನು. ಅವನು ತನ್ನ ಪತ್ನೀ ಸರಸ್ವತಿಯ ಗರ್ಭದಿಂದ ವಿಷ್ವಕ್ಸೇನನೆಂಬ ಪುತ್ರನನ್ನು ಪಡೆದನು. ॥25॥
ಟಿಪ್ಪನೀ
- ಶುಕಮುನಿಯು ಯಾವಾಗಲೂ ಅಸಂಗನೇ ಆಗಿದ್ದನು. ಆದರೆ ಅವನು ವಿರಾಗಿಯಾಗಿ ವನಕ್ಕೆ ಹೋಗುವ ಸಮಯದಲ್ಲಿ ಓರ್ವ ಛಾಯಾ ಶುಕನನ್ನು ರಚಿಸಿ ಬಿಟ್ಟುಹೋಗಿದ್ದನು. ಆ ಛಾಯಾ ಶುಕನೇ ಗೃಹಸ್ಥೋಚಿತವಾದ ವ್ಯವಹಾರಗಳನ್ನು ನಡೆಸಿದ್ದನು.
(ಶ್ಲೋಕ-26)
ಮೂಲಮ್
ಜೈಗೀಷವ್ಯೋಪದೇಶೇನ ಯೋಗತಂತ್ರಂ ಚಕಾರ ಹ ।
ಉದಕ್ಸ್ವನಸ್ತತಸ್ತಸ್ಮಾದ್ಭಲ್ಲಾದೋ ಬಾರ್ಹದೀಷವಾಃ ॥
ಅನುವಾದ
ಈ ವಿಷ್ವಕ್ಸೇನನೇ ಜೈಗೀಷವ್ಯರ ಉಪದೇಶದಿಂದ ಯೋಗಶಾಸ್ತ್ರವನ್ನು ರಚಿಸಿದನು. ವಿಷ್ವಕ್ಸೇನನ ಪುತ್ರನು ಉದಕ್ಸ್ವನ ಮತ್ತು ಉದಕ್ಸ್ವನಿಗೆ ಭಲ್ಲಾದನೆಂಬ ಪುತ್ರನಾದನು. ಇವರೆಲ್ಲರೂ ಬೃಹದಿಷುವಿನ ವಂಶಜರಾದರು. ॥26॥
(ಶ್ಲೋಕ-27)
ಮೂಲಮ್
ಯವೀನರೋ ದ್ವಿಮೀಢಸ್ಯ ಕೃತಿಮಾಂಸ್ತತ್ಸುತಃ ಸ್ಮೃತಃ ।
ನಾಮ್ನಾ ಸತ್ಯಧೃತಿರ್ಯಸ್ಯ ದೃಢನೇಮಿಃ ಸುಪಾರ್ಶ್ವಕೃತ್ ॥
ಅನುವಾದ
ದ್ವಿಮೀಢನಿಗೆ ಯವೀನರನೆಂಬ ಪುತ್ರನಿದ್ದನು. ಯವೀನರನಿಂದ ಕೃತಿಮಾನ್, ಕೃತಿಮಂತನಿಂದ ಸತ್ಯಧೃತಿ, ಸತ್ಯಧೃತಿಯಿಂದ ದೃಢನೇಮಿ, ಮತ್ತು ದೃಢನೇಮಿಗೆ ಸುಪಾರ್ಶ್ವನೆಂಬ ಪುತ್ರನಾದನು. ॥27॥
(ಶ್ಲೋಕ-28)
ಮೂಲಮ್
ಸುಪಾರ್ಶ್ವಾತ್ಸುಮತಿಸ್ತಸ್ಯ ಪುತ್ರಃ ಸನ್ನತಿಮಾಂಸ್ತತಃ ।
ಕೃತಿರ್ಹಿರಣ್ಯನಾಭಾದ್ಯೋ ಯೋಗಂ ಪ್ರಾಪ್ಯ ಜಗೌ ಸ್ಮ ಷಟ್ ॥
(ಶ್ಲೋಕ-29)
ಮೂಲಮ್
ಸಂಹಿತಾಃ ಪ್ರಾಚ್ಯಸಾಮ್ನಾಂ ವೈ ನೀಪೋ ಹ್ಯುಗ್ರಾಯುಧಸ್ತತಃ ।
ತಸ್ಯ ಕ್ಷೇಮ್ಯಃ ಸುವೀರೋಽಥ ಸುವೀರಸ್ಯ ರಿಪುಂಜಯಃ ॥
ಅನುವಾದ
ಸುಪಾರ್ಶ್ವನಿಂದ ಸುಮತಿ, ಸುಮತಿಯಿಂದ ಸನ್ನತಿಮಾನ್, ಸನ್ನತಿಮಂತನಿಂದ ಕೃತಿಯು ಹುಟ್ಟಿದನು. ಅವನು ಹಿರಣ್ಯನಾಭನಿಂದ ಯೋಗವಿದ್ಯೆಯನ್ನು ಪಡೆದಿದ್ದನು ಮತ್ತು ‘ಪ್ರಾಚ್ಯಸಾಮ’ ಎಂಬ ಋಚೆಗಳ ಆರು ಸಂಹಿತೆಗಳನ್ನು ಹೇಳಿದ್ದನು. ಕೃತಿಯ ಪುತ್ರ ನೀಪನೆಂಬುವನಿದ್ದನು. ನೀಪನಿಗೆ ಉಗ್ರಾಯುಧ, ಉಗ್ರಾಯುಧನಿಗೆ ಕ್ಷೇಮ್ಯ, ಕ್ಷೇಮ್ಯನಿಗೆ ಸುವೀರ, ಸುವೀರನಿಗೆ ರಿಪುಂಜಯನೆಂಬ ಪುತ್ರನಿದ್ದನು.॥28-29॥
(ಶ್ಲೋಕ-30)
ಮೂಲಮ್
ತತೋ ಬಹುರಥೋ ನಾಮ ಪುರುಮೀಢೋಽಪ್ರಜೋಽಭವತ್ ।
ನಲಿನ್ಯಾಮಜಮೀಢಸ್ಯನೀಲಃ ಶಾಂತಿಃ ಸುತಸ್ತತಃ ॥
ಅನುವಾದ
ರಿಪುಂಜಯನಿಗೆ ಬಹುರಥನೆಂಬ ಪುತ್ರನಿದ್ದನು. ದ್ವಿಮೀಢನ ತಮ್ಮ ಪುರುಮೀಢನಿಗೆ ಯಾವುದೇ ಸಂತಾನವಿರಲಿಲ್ಲ. ಅಜಮೀಢನ ಇನ್ನೋರ್ವ ಪತ್ನಿಯ ಹೆಸರು ನಲಿನಿ ಎಂದಿತ್ತು. ಅವಳ ಗರ್ಭದಿಂದ ನೀಲನ ಜನ್ಮವಾಯಿತು.॥30॥
(ಶ್ಲೋಕ-31)
ಮೂಲಮ್
ಶಾಂತೇಃ ಸುಶಾಂತಿಸ್ತತ್ಪುತ್ರಃ ಪುರುಜೋಽರ್ಕಸ್ತತೋಽಭವತ್ ।
ಭರ್ಮ್ಯಾಶ್ವಸ್ತನಯಸ್ತಸ್ಯ ಪಂಚಾಸನ್ಮುದ್ಗಲಾದಯಃ ॥
ಅನುವಾದ
ನೀಲನಿಂದ ಶಾಂತಿ, ಶಾಂತಿಗೆ ಸುಶಾಂತಿ, ಸುಶಾಂತಿಗೆ ಪುರುಜ, ಪುರುಜನಿಗೆ ಅರ್ಕ, ಅರ್ಕನಿಗೆ ಭರ್ಮ್ಯಾಶ್ವ, ಭರ್ಮ್ಯಾಶ್ವನಿಗೆ ಮುದ್ಗಲ, ಯವೀನರ, ಬೃಹದಿಷು, ಕಾಂಪಿಲ್ಯ ಮತ್ತು ಸಂಜಯ ಎಂಬ ಐದುಮಂದಿ ಮಕ್ಕಳಾದರು.॥31॥
(ಶ್ಲೋಕ-32)
ಮೂಲಮ್
ಯವೀನರೋ ಬೃಹದಿಷುಃ ಕಾಂಪಿಲ್ಯಃ ಸಂಜಯಃ ಸುತಾಃ ।
ಭರ್ಮ್ಯಾಶ್ವಃ ಪ್ರಾಹ ಪುತ್ರಾ ಮೇ ಪಂಚಾನಾಂ ರಕ್ಷಣಾಯ ಹಿ ॥
(ಶ್ಲೋಕ-33)
ಮೂಲಮ್
ವಿಷಯಾಣಾಮಲಮಿಮೇ ಇತಿ ಪಂಚಾಲಸಂಜ್ಞಿತಾಃ ।
ಮುದ್ಗಲಾದ್ಬ್ರಹ್ಮ ನಿರ್ವೃತ್ತಂ ಗೋತ್ರಂ ವೌದ್ಗಲ್ಯಸಂಜ್ಞಿತಮ್ ॥
ಅನುವಾದ
ಭರ್ಮ್ಯಾಶ್ವನು ಹೇಳಿದನು ಈ ನನ್ನ ಐವರು ಪುತ್ರರು (ಪಂಚ) ದೇಶಗಳಿಗೆ ಶಾಸನ ಮಾಡುವುದರಲ್ಲಿ ಸಮರ್ಥರಾಗಿರುವರು (ಪಂಚ ಅಲಮ್). ಇದರಿಂದ ಇವರು ‘ಪಾಂಚಾಲ’ರೆಂದು ಪ್ರಸಿದ್ಧರಾದರು. ಇವರಲ್ಲಿ ಮುದ್ಗಲನಿಂದ ‘ಮೌದ್ಗಲ್ಯ’ವೆಂಬ ಬ್ರಾಹ್ಮಣ ಗೋತ್ರವು ಪ್ರವೃತ್ತವಾಯಿತು.॥32-33॥
(ಶ್ಲೋಕ-34)
ಮೂಲಮ್
ಮಿಥುನಂ ಮುದ್ಗಲಾದ್ಭಾರ್ಮ್ಯಾದ್ದಿವೋದಾಸಃ ಪುಮಾನಭೂತ್ ।
ಅಹಲ್ಯಾ ಕನ್ಯಕಾ ಯಸ್ಯಾಂ ಶತಾನಂದಸ್ತು ಗೌತಮಾತ್ ॥
ಅನುವಾದ
ಭರ್ಮ್ಯಾಶ್ವನ ಪುತ್ರ ಮುದ್ಗಲನಿಗೆ ಅವಳೀ ಮಕ್ಕಳು ಹುಟ್ಟಿದರು. ಅವರಲ್ಲಿ ಪುತ್ರನ ಹೆಸರು ದಿವೋದಾಸ ಮತ್ತು ಪುತ್ರಿಯ ಹೆಸರು ಅಹಲ್ಯೆ ಎಂದಿತ್ತು. ಅಹಲ್ಯೆಯ ವಿವಾಹವು ಮಹರ್ಷಿ ಗೌತಮರೊಂದಿಗೆ ನಡೆಯಿತು. ಗೌತಮನಿಗೆ ಶತಾನಂದನೆಂಬ ಮಗನು ಹುಟ್ಟಿದನು. ॥34॥
(ಶ್ಲೋಕ-35)
ಮೂಲಮ್
ತಸ್ಯ ಸತ್ಯಧೃತಿಃ ಪುತ್ರೋ ಧನುರ್ವೇದವಿಶಾರದಃ ।
ಶರದ್ವಾಂಸ್ತತ್ಸುತೋ ಯಸ್ಮಾದುರ್ವಶೀದರ್ಶನಾತ್ಕಿಲ ॥
(ಶ್ಲೋಕ-36)
ಮೂಲಮ್
ಶರಸ್ತಂಬೇಽಪತದ್ರೇತೋ ಮಿಥುನಂ ತದಭೂಚ್ಛುಭಮ್ ।
ತದ್ದೃಷ್ಟ್ವಾ ಕೃಪಯಾಗೃಹ್ಣಾಚ್ಛಂತನುರ್ಮೃಗಯಾಂ ಚರನ್ ।
ಕೃಪಃ ಕುಮಾರಃ ಕನ್ಯಾ ಚ ದ್ರೋಣಪತ್ನ್ಯಭವತ್ಕೃಪೀ ॥
ಅನುವಾದ
ಶತಾನಂದನ ಪುತ್ರ ಸತ್ಯಧೃತಿಯಾಗಿದ್ದನು. ಅವನು ಧನುರ್ವಿದ್ಯೆಯಲ್ಲಿ ಅತ್ಯಂತ ನಿಪುಣನಾಗಿದ್ದನು. ಸತ್ಯಧೃತಿಯ ಪುತ್ರನ ಹೆಸರು ಶರದ್ವಾನ್. ಒಂದುದಿನ ಊರ್ವಶಿಯನ್ನು ಕಂಡು ಶರದ್ವಂತನ ವೀರ್ಯವು ಸ್ಖಲನವಾಗಿ ನೂಜೆಹುಲ್ಲಿನ ಮೇಲೆ ಬಿತ್ತು. ಅದರಿಂದ ಶುಭಲಕ್ಷಣಗಳುಳ್ಳ ಓರ್ವ ಪುತ್ರ ಮತ್ತು ಒಂದು ಪುತ್ರಿಯ ಜನ್ಮವಾಯಿತು. ಶಂತನು ಮಹಾರಾಜನು ಬೇಟೆಯಾಡಲು ಆ ಕಡೆ ಹೋದಾಗ ಅವರನ್ನು ನೋಡಿದನು. ದಯಾಪರನಾದ ಶಂತನು ಇಬ್ಬರನ್ನೂ ಎತ್ತಿತಂದನು. ಅವರಲ್ಲಿನ ಪುತ್ರನ ಹೆಸರು ಕೃಪಾಚಾರ್ಯನೆಂದಿತ್ತು ಮತ್ತು ಕನ್ಯೆಯ ಹೆಸರು ಕೃಪಿಯೆಂದಿತ್ತು. ಇವಳು ದ್ರೋಣಾಚಾರ್ಯರ ಪತ್ನಿಯಾದಳು. ॥35-36॥
ಅನುವಾದ (ಸಮಾಪ್ತಿಃ)
ಇಪ್ಪತ್ತೊಂದನೆಯ ಅಧ್ಯಾಯವು ಮುಗಿಯಿತು. ॥21॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ಏಕವಿಂಶೋಽಧ್ಯಾಯಃ ॥21॥