[ಇಪ್ಪತ್ತನೆಯ ಅಧ್ಯಾಯ]
ಭಾಗಸೂಚನಾ
ಪುರುವಿನ ವಂಶ, ರಾಜಾ ದುಷ್ಯಂತ ಮತ್ತು ಭರತನ ಚರಿತ್ರವರ್ಣನೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಪೂರೋರ್ವಂಶಂ ಪ್ರವಕ್ಷ್ಯಾಮಿ ಯತ್ರ ಜಾತೋಽಸಿ ಭಾರತ ।
ಯತ್ರ ರಾಜರ್ಷಯೋ ವಂಶ್ಯಾ ಬ್ರಹ್ಮವಂಶ್ಯಾಶ್ಚ ಜಜ್ಞಿರೇ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಈಗ ನಾನು ಪುರುರಾಜನ ವಂಶವನ್ನು ವರ್ಣಿಸುವೆನು. ಇದೇ ವಂಶದಲ್ಲಿ ನೀನು ಜನ್ಮ ತಾಳಿರುವೆ. ಈ ವಂಶದಲ್ಲಿಯೇ ಹಲವಾರು ರಾಜರ್ಷಿಗಳೂ, ಬ್ರಹ್ಮರ್ಷಿಗಳೂ ಆಗಿಹೋಗಿದ್ದಾರೆ. ॥1॥
(ಶ್ಲೋಕ-2)
ಮೂಲಮ್
ಜನಮೇಜಯೋ ಹ್ಯಭೂತ್ಪೂರೋಃ ಪ್ರಚಿನ್ವಾಂಸ್ತತ್ಸುತಸ್ತತಃ ।
ಪ್ರವೀರೋಥ ನಮಸ್ಯುರ್ವೈ ತಸ್ಮಾಚ್ಚಾರುಪದೋಭವತ್ ॥
ಅನುವಾದ
ಪುರುವಿಗೆ ಜನಮೇಜಯ ಪುತ್ರನು ಹುಟ್ಟಿದನು. ಜನಮೇಜಯನಿಗೆ ಪ್ರಚಿನ್ವಾನ್, ಪ್ರಚಿನ್ವಂತನಿಗೆ ಪ್ರವೀರ, ಪ್ರವೀರನಿಗೆ ನಮಸ್ಯು, ನಮಸ್ಯುವಿಗೆ ಚಾರುಪದ ಪುತ್ರನಾದನು.॥2॥
(ಶ್ಲೋಕ-3)
ಮೂಲಮ್
ತಸ್ಯ ಸುದ್ಯುರಭೂತ್ಪುತ್ರಸ್ತಸ್ಮಾದ್ಬಹುಗವಸ್ತತಃ ।
ಸಂಯಾತಿಸ್ತಸ್ಯಾಹಂಯಾತೀ ರೌದ್ರಾಶ್ವಸ್ತತ್ಸುತಃ ಸ್ಮೃತಃ ॥
ಅನುವಾದ
ಚಾರುಪದನಿಂದ ಸುದ್ಯು, ಸುದ್ಯುವಿನಿಂದ ಬಹುಗವ, ಬಹುಗವನಿಂದ ಸಂಯಾತಿ, ಸಂಯಾತಿಯಿಂದ ಅಹಂಯಾತಿ, ಅಹಂಯಾತಿಯಿಂದ ರೌದ್ರಾಶ್ವ ಹುಟ್ಟಿದನು.॥3॥
(ಶ್ಲೋಕ-4)
ಮೂಲಮ್
ಋತೇಯುಸ್ತಸ್ಯ ಕುಕ್ಷೇಯುಃ ಸ್ಥಂಡಿಲೇಯುಃ ಕೃತೇಯುಕಃ ।
ಜಲೇಯುಃ ಸಂತತೇಯುಶ್ಚ ಧರ್ಮಸತ್ಯವ್ರತೇಯವಃ ॥
(ಶ್ಲೋಕ-5)
ಮೂಲಮ್
ದಶೈತೇಽಪ್ಸರಸಃ ಪುತ್ರಾ ವನೇಯುಶ್ಚಾವಮಃ ಸ್ಮೃತಃ ।
ಘೃತಾಚ್ಯಾಮಿಂದ್ರಿಯಾಣೀವ ಮುಖ್ಯಸ್ಯ ಜಗದಾತ್ಮನಃ ॥
ಅನುವಾದ
ಪರೀಕ್ಷಿತನೇ! ವಿಶ್ವಾತ್ಮಾ ಪ್ರಧಾನ ಪ್ರಾಣದಿಂದ ಹತ್ತು ಇಂದ್ರಿಯಗಳು ಆಗುವಂತೆಯೇ ಘೃತಾಚಿ ಅಪ್ಸರೆಯ ಗರ್ಭದಿಂದ ರೌದ್ರಾಶ್ವನು ಋತೇಯು, ಕುಕ್ಷೇಯು, ಸ್ಥಂಡಿಲೇಯು, ಕೃತೇಯು, ಜಲೇಯು, ಸಂತತೇಯು, ಧರ್ಮೇಯು, ಸತ್ಯೇಯು, ವ್ರತೇಯು ಮತ್ತು ವನೇಯು ಎಂಬ ಹತ್ತು ಪುತ್ರರನ್ನು ಪಡೆದನು. ॥4-5॥
(ಶ್ಲೋಕ-6)
ಮೂಲಮ್
ಋತೇಯೋ ರಂತಿಭಾರೋಽಭೂತ್ತ್ರಯಸ್ತಸ್ಯಾತ್ಮಜಾ ನೃಪ ।
ಸುಮತಿರ್ಧ್ರುವೋಽಪ್ರತಿರಥಃ ಕಣ್ವೋಽಪ್ರತಿರಥಾತ್ಮಜಃ ॥
ಅನುವಾದ
ರಾಜೇಂದ್ರ! ಅವರಲ್ಲಿ ಋತೇಯುವಿನ ಪುತ್ರ ರಂತಿಭಾರ ಹುಟ್ಟಿದನು. ರಂತಿಭಾರನಿಗೆ ಸುಮತಿ, ಧ್ರುವ, ಅಪ್ರತಿರಥರೆಂಬ ಮೂವರು ಪುತ್ರರಾದರು. ಅಪ್ರತಿರಥನಿಗೆ ಕಣ್ವನೆಂಬ ಪುತ್ರನಾದನು. ॥6॥
(ಶ್ಲೋಕ-7)
ಮೂಲಮ್
ತಸ್ಯ ಮೇಧಾತಿಥಿಸ್ತಸ್ಮಾತ್ಪ್ರಸ್ಕಣ್ವಾದ್ಯಾ ದ್ವಿಜಾತಯಃ ।
ಪುತ್ರೋಽಭೂತ್ಸುಮತೇ ರೈಭ್ಯೋ ದುಷ್ಯಂತಸ್ತತ್ಸುತೋ ಮತಃ ॥
ಅನುವಾದ
ಕಣ್ವನಿಗೆ ಪುತ್ರನಾದನು ಮೇಧಾತಿಥಿ. ಮೇಧಾತಿಥಿಯಿಂದ ಪ್ರಸ್ಕಣ್ವ ಮೊದಲಾದ ಬ್ರಾಹ್ಮಣರು ಉತ್ಪನ್ನರಾದರು. ಸುಮತಿಗೆ ರೈಭ್ಯನೆಂಬ ಪುತ್ರನಾದನು. ಈ ರೈಭ್ಯನ ಪುತ್ರನೇ ದುಷ್ಯಂತ. ॥7॥
(ಶ್ಲೋಕ-8)
ಮೂಲಮ್
ದುಷ್ಯಂತೋ ಮೃಗಯಾಂ ಯಾತಃ ಕಣ್ವಾಶ್ರಮಪದಂ ಗತಃ ।
ತತ್ರಾಸೀನಾಂ ಸ್ವಪ್ರಭಯಾ ಮಂಡಯಂತೀಂ ರಮಾಮಿವ ॥
(ಶ್ಲೋಕ-9)
ಮೂಲಮ್
ವಿಲೋಕ್ಯ ಸದ್ಯೋ ಮುಮುಹೇ ದೇವಮಾಯಾಮಿವ ಸ್ತ್ರಿಯಮ್ ।
ಬಭಾಷೇ ತಾಂ ವರಾರೋಹಾಂ ಭಟೈಃ ಕತಿಪಯೈರ್ವೃತಃ ॥
ಅನುವಾದ
ಒಮ್ಮೆ ದುಷ್ಯಂತನು ತನ್ನ ಕೆಲವು ಸೈನಿಕರೊಂದಿಗೆ ಬೇಟೆಯಾಡಲು ವನಕ್ಕೆ ಹೋದನು. ಬೇಟೆಯಾಡುತ್ತಾ ಅವನು ಕಣ್ವ ಮುನಿಯ ಆಶ್ರಮಕ್ಕೆ ಹೋದನು. ಆ ಆಶ್ರಮದಲ್ಲಿ ದೇವಮಾಯೆಯಂತಿರುವ ಮನೋಹರವಾದ ಓರ್ವ ಯುವತಿಯು ಕುಳಿತಿದ್ದಳು. ಲಕ್ಷ್ಮಿಗೆ ಸಮಾನವಾದ ಆಕೆಯ ಅಂಗಕಾಂತಿಯಿಂದ ಆ ಆಶ್ರಮವು ಬೆಳಗುತ್ತಿತ್ತು. ಅಂತಹ ಸುಂದರಿಯನ್ನು ನೋಡುತ್ತಲೇ ದುಷ್ಯಂತನು ವಿಮೋಹಿತನಾಗಿ ಅವಳೊಂದಿಗೆ ಮಾತನಾಡ ತೊಡಗಿದನು. ॥8-9॥
(ಶ್ಲೋಕ-10)
ಮೂಲಮ್
ತದ್ದರ್ಶನಪ್ರಮುದಿತಃ ಸಂನಿವೃತ್ತ ಪರಿಶ್ರಮಃ ।
ಪಪ್ರಚ್ಛ ಕಾಮಸಂತಪ್ತಃ ಪ್ರಹಸನ್ ಶ್ಲಕ್ಷ್ಣಯಾ ಗಿರಾ ॥
ಅನುವಾದ
ಅವಳನ್ನು ನೋಡಿದೊಡನೆಯೇ ಅವನಿಗೆ ಪರಮಾನಂದವಾಯಿತು. ಅವನ ಮನಸ್ಸಿನಲ್ಲಿ ಕಾಮವಾಸನೆ ಜಾಗ್ರತವಾಯಿತು. ಬಳಲಿಕೆಯೆಲ್ಲವೂ ಪರಿಹಾರವಾಯಿತು. ಅವನು ಮುಗುಳ್ನಗುತ್ತಾ ಮಧುರವಾದ ಮಾತುಗಳಿಂದ ಅವಳಲ್ಲಿ ಕೇಳಿದನು ॥10॥
(ಶ್ಲೋಕ-11)
ಮೂಲಮ್
ಕಾ ತ್ವಂ ಕಮಲಪತ್ರಾಕ್ಷಿ ಕಸ್ಯಾಸಿ ಹೃದಯಂಗಮೇ ।
ಕಿಂ ವಾ ಚಿಕೀರ್ಷಿತಂ ತ್ವತ್ರ ಭವತ್ಯಾ ನಿರ್ಜನೇ ವನೇ ॥
ಅನುವಾದ
ಎಲೈ ಕಮಲಾಕ್ಷಿಯೇ! ನೀನು ಯಾರು? ಯಾರ ಮಗಳು? ನನ್ನ ಹೃದಯವನ್ನು ನಿನ್ನತ್ತ ಆಕರ್ಷಿಸಿದ ಸುಂದರಿಯೇ! ನೀನು ಈ ನಿರ್ಜನ ವನದಲ್ಲಿ ಇದ್ದುಕೊಂಡು ಏನು ಮಾಡಬೇಕೆಂದಿರುವೆ? ॥11॥
(ಶ್ಲೋಕ-12)
ಮೂಲಮ್
ವ್ಯಕ್ತಂ ರಾಜನ್ಯತನಯಾಂ ವೇದ್ಮ್ಯಹಂ ತ್ವಾಂ ಸುಮಧ್ಯಮೇ ।
ನ ಹಿ ಚೇತಃ ಪೌರವಾಣಾಮಧರ್ಮೇ ರಮತೇ ಕ್ವಚಿತ್ ॥
ಅನುವಾದ
ಸುಂದರಿಯೇ! ನೀನು ಯಾರೋ ಕ್ಷತ್ರಿಯನ ಮಗಳಾಗಿರಬೇಕೆಂದು ನಾನು ಸ್ಪಷ್ಟವಾಗಿ ತಿಳಿಯುತ್ತಿದ್ದೇನೆ. ಏಕೆಂದರೆ, ಪುರುವಂಶೀಯರ ಚಿತ್ತವು ಎಂದೂ ಅಧರ್ಮದ ಕಡೆಗೆ ವಾಲುವುದಿಲ್ಲ. ॥12॥
(ಶ್ಲೋಕ-13)
ಮೂಲಮ್ (ವಾಚನಮ್)
ಶಕುಂತಲೋವಾಚ
ಮೂಲಮ್
ವಿಶ್ವಾಮಿತ್ರಾತ್ಮಜೈವಾಹಂ ತ್ಯಕ್ತಾ ಮೇನಕಯಾ ವನೇ ।
ವೇದೈತದ್ಭಗವಾನ್ ಕಣ್ವೋ ವೀರ ಕಿಂ ಕರವಾಮ ತೇ ॥
ಅನುವಾದ
ಶಕುಂತಲೆಯು ಹೇಳಿದಳು — ಮಹರಾಜ! ನೀವು ಹೇಳಿದುದು ನಿಜವಾಗಿದೆ. ನಾನು ವಿಶ್ವಾಮಿತ್ರರ ಮಗಳು. ಮೇನಕೆಯೆಂಬ ಅಪ್ಸರೆಯು ನನ್ನನ್ನು ವನದಲ್ಲಿ ಬಿಟ್ಟು ಹೋಗಿದ್ದಳು. ಈ ಮಾತಿಗೆ ನನ್ನನ್ನು ಪಾಲಿಸಿ ಪೋಷಿಸಿದ ಮಹರ್ಷಿ ಕಣ್ವರೇ ಸಾಕ್ಷಿಯಾಗಿದ್ದಾರೆ. ವೀರಶಿರೋ ಮಣಿಯೇ! ನಾನು ನಿಮಗೆ ಏನು ಸೇವೆ ಮಾಡಲಿ? ॥13॥
(ಶ್ಲೋಕ-14)
ಮೂಲಮ್
ಆಸ್ಯತಾಂ ಹ್ಯರವಿಂದಾಕ್ಷ ಗೃಹ್ಯತಾಮರ್ಹಣಂ ಚ ನಃ ।
ಭುಜ್ಯತಾಂ ಸಂತಿ ನೀವಾರಾ ಉಷ್ಯತಾಂ ಯದಿ ರೋಚತೇ ॥
ಅನುವಾದ
ಕಮಲಾಕ್ಷನೇ! ಇಲ್ಲಿಯೇ ಕುಳಿತುಕೋ. ನಾವು ಮಾಡಲಿರುವ ಯತ್ಕಿಂಚಿತ್ ಸತ್ಕಾರವನ್ನು ಸ್ವೀಕರಿಸು. ಆಶ್ರಮದಲ್ಲಿ ಶಾಲ್ಯಾನ್ನವಿದೆ. ನೀನು ಬಯಸುವಿರಾದರೆ ಊಟಮಾಡು. ಉಚಿತವೆನಿಸಿದರೆ ಇಲ್ಲೇ ಉಳಿದುಕೊಳ್ಳಬಹುದು. ॥14॥
(ಶ್ಲೋಕ-15)
ಮೂಲಮ್ (ವಾಚನಮ್)
ದುಷ್ಯಂತ ಉವಾಚ
ಮೂಲಮ್
ಉಪಪನ್ನಮಿದಂ ಸುಭ್ರು ಜಾತಾಯಾಃ ಕುಶಿಕಾನ್ವಯೇ ।
ಸ್ವಯಂ ಹಿ ವೃಣತೇ ರಾಜ್ಞಾಂ ಕನ್ಯಕಾಃ ಸದೃಶಂ ವರಮ್ ॥
ದುಷ್ಯಂತನು ಹೇಳಿದನು — ಸುಂದರಿಯೇ! ನೀನು ಕುಶಿಕ ವಂಶದಲ್ಲಿ ಹುಟ್ಟಿರುವೆ. ಅದಕ್ಕಾಗಿ ಈ ಪ್ರಕಾರದ ಆತಿಥ್ಯ-ಸತ್ಕಾರ ಮಾಡುವುದು ನಿನಗೆ ಯೋಗ್ಯವೇ ಆಗಿದೆ. ಏಕೆಂದರೆ ರಾಜಕನ್ಯೆಯರು ಸ್ವತಃ ತಮ್ಮ ಪತಿಯನ್ನು ವರಣ ಮಾಡಿಕೊಳ್ಳುವರು. ॥15॥
(ಶ್ಲೋಕ-16)
ಮೂಲಮ್
ಓಮಿತ್ಯುಕ್ತೇ ಯಥಾಧರ್ಮಮುಪಯೇಮೇ ಶಕುಂತಲಾಮ್ ।
ಗಾಂಧರ್ವವಿಧಿನಾ ರಾಜಾ ದೇಶಕಾಲವಿಧಾನವಿತ್ ॥
ಅನುವಾದ
ಶಕುಂತಲೆಯ ಸ್ವೀಕೃತಿ ದೊರೆತಾಗ ದೇಶ, ಕಾಲ ಮತ್ತು ಶಾಸ್ತ್ರದ ವಿಧಿ-ವಿಧಾನಗಳನ್ನೂ ಬಲ್ಲ ದುಷ್ಯಂತನು ಗಾಂಧರ್ವವಿಧಿಯಿಂದ ಆಕೆಯನ್ನು ವಿವಾಹವಾದನು. ॥16॥
(ಶ್ಲೋಕ-17)
ಮೂಲಮ್
ಅಮೋಘವೀರ್ಯೋ ರಾಜರ್ಷಿರ್ಮಹಿಷ್ಯಾಂ ವೀರ್ಯಮಾದಧೇ ।
ಶ್ವೋಭೂತೇ ಸ್ವಪುರಂ ಯಾತಃ ಕಾಲೇನಾಸೂತ ಸಾ ಸುತಮ್ ॥
ಅನುವಾದ
ಅಮೋಘ ವೀರ್ಯನಾದ ದುಷ್ಯಂತನು ಅಂದು ರಾತ್ರಿ ಅಲ್ಲಿಯೇ ಇದ್ದು ಗರ್ಭಾಧಾನ ಸಂಸ್ಕಾರವನ್ನು ಮುಗಿಸಿ ಬೆಳಗಾಗುತ್ತಲೇ ತನ್ನ ರಾಜಧಾನಿಗೆ ತೆರಳಿದನು. ನವಮಾಸಗಳು ತುಂಬುತ್ತಲೇ ಶಕುಂತಲೆಯು ಗಂಡುಮಗುವನ್ನು ಹಡೆದಳು. ॥17॥
(ಶ್ಲೋಕ-18)
ಮೂಲಮ್
ಕಣ್ವಃ ಕುಮಾರಸ್ಯ ವನೇ ಚಕ್ರೇ ಸಮುಚಿತಾಃ ಕ್ರಿಯಾಃ ।
ಬದ್ಧ್ವಾ ಮೃಗೇಂದ್ರಾಂಸ್ತರಸಾ ಕ್ರೀಡತಿ ಸ್ಮ ಸ ಬಾಲಕಃ ॥
ಅನುವಾದ
ಮಹರ್ಷಿ ಕಣ್ವರು ಕಾಡಿನಲ್ಲೇ ಆ ರಾಜಕುಮಾರನ ಜಾತಕರ್ಮಾದಿ ಸಂಸ್ಕಾರಗಳನ್ನು ವಿಧಿವತ್ತಾಗಿ ನೆರವೇರಿಸಿದರು. ಆ ಬಾಲಕನು ಬಾಲ್ಯದಲ್ಲೇ ದೊಡ್ಡ-ದೊಡ್ಡ ಸಿಂಹಗಳನ್ನು ಹಿಡಿದು ಕಟ್ಟಿಹಾಕಿ ಅವುಗಳೊಂದಿಗೆ ಆಡುತ್ತಿದ್ದನು. ॥18॥
(ಶ್ಲೋಕ-19)
ಮೂಲಮ್
ತಂ ದುರತ್ಯಯವಿಕ್ರಾಂತಮಾದಾಯ ಪ್ರಮದೋತ್ತಮಾ ।
ಹರೇರಂಶಾಂಶಸಂಭೂತಂ ಭರ್ತುರಂತಿಕಮಾಗಮತ್ ॥
ಅನುವಾದ
ಆ ಬಾಲಕನು ಭಗವಂತನ ಅಂಶಾಂಶಾವತಾರನಾಗಿದ್ದನು. ಅವನ ಬಲ ಪರಾಕ್ರಮಗಳು ಅಪರಿಮಿತವಾಗಿದ್ದುವು. ಪ್ರಮದೆಯರಲ್ಲಿ ಶ್ರೇಷ್ಠಳಾದ ಶಕುಂತಲೆಯು ಅವನನ್ನು ಜೊತೆಗೆ ಕರೆದುಕೊಂಡು ತನ್ನ ಪತಿಯಬಳಿಗೆ ಹೋದಳು. ॥19॥
(ಶ್ಲೋಕ-20)
ಮೂಲಮ್
ಯದಾ ನ ಜಗೃಹೇ ರಾಜಾ ಭಾರ್ಯಾಪುತ್ರಾವನಿಂದಿತೌ ।
ಶೃಣ್ವತಾಂ ಸರ್ವಭೂತಾನಾಂ ಖೇ ವಾಗಾಹಾಶರೀರಿಣೀ ॥
ಅನುವಾದ
ನಿರ್ದೋಷಿಗಳಾದ ಭಾರ್ಯಾ-ಪುತ್ರರನ್ನು ರಾಜನು ಸ್ವೀಕರಿಸಲಿಲ್ಲ. ಅವರ ವಿಷಯವಾಗಿ ತಾನು ಏನನ್ನೂ ಅರಿಯೆನೆಂದು ಹೇಳಿಬಿಟ್ಟನು. ಈ ಸಮಯದಲ್ಲಿ ಸಮಸ್ತ ಪ್ರಾಣಿಗಳು ಕೇಳಿಸುವಂತೆ ಆಕಾಶದಲ್ಲಿ ಅಶರೀರವಾಣಿಯೊಂದು ನುಡಿಯಿತು ॥20॥
(ಶ್ಲೋಕ-21)
ಮೂಲಮ್
ಮಾತಾ ಭಸ್ತ್ರಾ ಪಿತುಃ ಪುತ್ರೋ ಯೇನ ಜಾತಃ ಸ ಏವ ಸಃ ।
ಭರಸ್ವ ಪುತ್ರಂ ದುಷ್ಯಂತ ಮಾವಮಂಸ್ಥಾಃ ಶಕುಂತಲಾಮ್ ॥
ಅನುವಾದ
‘‘ಪುತ್ರನ ಉತ್ಪತ್ತಿಯಲ್ಲಿ ತಾಯಿಯು ಕೇವಲ ಚರ್ಮದ ಚೀಲಕ್ಕೆ ಸಮಾನಳಾಗಿರುತ್ತಾಳೆ. ವಾಸ್ತವವಾಗಿ ಪುತ್ರನು ಪಿತನಿಗೇ ಸೇರಿದವನು. ಏಕೆಂದರೆ, ತಂದೆಯೇ ಸಾಕ್ಷಾತ್ತಾಗಿ ಪುತ್ರನ ರೂಪದಲ್ಲಿ ಜನಿಸುತ್ತಾನೆ. ಎಲೈ ದುಷ್ಯಂತನೇ! ನೀನು ಶಕುಂತಲೆಯನ್ನು ತಿರಸ್ಕರಿಸಬೇಡ. ನಿನ್ನ ಪುತ್ರನ ಭರಣ-ಪೋಷಣೆ ಮಾಡು. ॥21॥
ಮೂಲಮ್
(ಶ್ಲೋಕ-22)
ರೇತೋಧಾಃ ಪುತ್ರೋ ನಯತಿ ನರದೇವ ಯಮಕ್ಷಯಾತ್ ।
ತ್ವಂ ಚಾಸ್ಯ ಧಾತಾ ಗರ್ಭಸ್ಯ ಸತ್ಯಮಾಹ ಶಕುಂತಲಾ ॥
ಅನುವಾದ
ರಾಜನೇ! ವಂಶದ ವೃದ್ಧಿಯನ್ನು ಮಾಡುವ ಪುತ್ರನು ತನ್ನ ತಂದೆಯನ್ನು ನರಕದಿಂದ ಉದ್ಧರಿಸುವನು. ಆದುದರಿಂದ ನಿನ್ನ ಮಗನನ್ನು ತಿರಸ್ಕರಿಸಬೇಡ. ಶಕುಂತಲೆಯಲ್ಲಿ ಗರ್ಭವನ್ನು ಇಟ್ಟವನು ನೀನೇ ಆಗಿರುವೆ. ಅವಳು ಹೇಳುವುದು ಸತ್ಯವಾಗಿದೆ.’’ ॥22॥
(ಶ್ಲೋಕ-23)
ಮೂಲಮ್
ಪಿತರ್ಯುಪರತೇ ಸೋಽಪಿ ಚಕ್ರವರ್ತೀ ಮಹಾಯಶಾಃ ।
ಮಹಿಮಾ ಗೀಯತೇ ತಸ್ಯ ಹರೇರಂಶಭುವೋ ಭುವಿ ॥
ಅನುವಾದ
ಆಕಾಶವಾಣಿಯಂತೆ ದುಷ್ಯಂತನು ಶಕುಂತಲೆಯನ್ನೂ, ತನ್ನ ಪುತ್ರನನ್ನು ಯಥಾಯೋಗ್ಯವಾಗಿ ಸ್ವೀಕರಿಸಿ, ಆ ಬಾಲಕನಿಗೆ ಭರತನೆಂದು ನಾಮಕರಣಮಾಡಿದನು. ಪರೀಕ್ಷಿತನೇ! ತಂದೆಯಾದ ದುಷ್ಯಂತನ ಮೃತ್ಯುವಾದ ಬಳಿಕ ಪರಮ ಯಶಸ್ವಿಯೂ, ಭಗವಂತನ ಅಂಶಸಂಭೂತನಾಗಿದ್ದ ಭರತನು ಚಕ್ರವರ್ತಿಯಾದನು. ಇಂದೂ ಕೂಡ ಅವನ ಮಹಿಮೆಯನ್ನು ಭೂಮಂಡಲದಲ್ಲಿ ಹಾಡಲಾಗುತ್ತದೆ. ॥23॥
(ಶ್ಲೋಕ-24)
ಮೂಲಮ್
ಚಕ್ರಂ ದಕ್ಷಿಣಹಸ್ತೇಽಸ್ಯ ಪದ್ಮಕೋಶೋಽಸ್ಯ ಪಾದಯೋಃ ।
ಈಜೇ ಮಹಾಭಿಷೇಕೇಣ ಸೋಭಿಷಿಕ್ತೋಽಧಿರಾಡ್ವಿಭುಃ ॥
ಅನುವಾದ
ಅವನ ಬಲದ ಕೈಯಲ್ಲಿ ಚಕ್ರದ ಚಿಹ್ನೆಯಿದ್ದಿತು. ಪಾದಗಳಲ್ಲಿ ಕಮಲಕೋಶದ ಚಿಹ್ನೆಗಳಿದ್ದವು. ಮಹಾಭಿಷೇಕದ ವಿಧಿಯಿಂದ ಪುರೋಹಿತರು ಭರತನನ್ನು ರಾಜಾಧಿರಾಜನಾದ ಚಕ್ರವರ್ತಿಯ ಪದವಿಯಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ ಮಾಡಿದರು. ಅವನು ಮಹಾಶಕ್ತಿಶಾಲಿಯಾದ ರಾಜನಾಗಿದ್ದನು. ॥24॥
(ಶ್ಲೋಕ-25)
ಮೂಲಮ್
ಪಂಚಪಂಚಾಶತಾ ಮೇಧ್ಯೈರ್ಗಂಗಾಯಾಮನು ವಾಜಿಭಿಃ ।
ಮಾಮತೇಯಂ ಪುರೋಧಾಯ ಯಮುನಾಯಾಮನು ಪ್ರಭುಃ ॥
(ಶ್ಲೋಕ-26)
ಮೂಲಮ್
ಅಷ್ಟಸಪ್ತತಿಮೇಧ್ಯಾಶ್ವಾನ್ ಬಬಂಧ ಪ್ರದದದ್ವಸು ।
ಭರತಸ್ಯ ಹಿ ದೌಷ್ಯಂತೇರಗ್ನಿಃ ಸಾಚೀಗುಣೇ ಚಿತಃ ।
ಸಹಸ್ರಂ ಬದ್ವಶೋ ಯಸ್ಮಿನ್ ಬ್ರಾಹ್ಮಣಾ ಗಾ ವಿಭೇಜಿರೇ ॥
ಅನುವಾದ
ಭರತ ಚಕ್ರವರ್ತಿಯು ಮಮತಾ ಎಂಬುವಳ ಪುತ್ರ ದೀರ್ಘತಮಸ ಮುನಿಯನ್ನು ಪುರೋಹಿತನನ್ನಾಗಿಸಿಕೊಂಡು ಗಂಗೋತ್ರಿಯಿಂದ ಹಿಡಿದು ಗಂಗಾಸಾಗರ ಸಂಗಮದವರೆಗಿನ ಗಂಗಾತಟದಲ್ಲಿ ಐವತ್ತೈದು ಅಶ್ವಮೇಧಗಳನ್ನು ಮಾಡಿದನು. ಹೀಗೆಯೇ ಯಮುನೋತ್ರಿಯಿಂದ ಪ್ರಯಾಗದವರೆಗಿನ ಯಮುನಾತೀರದಲ್ಲಿ ಎಪ್ಪತ್ತೆಂಟು ಅಶ್ವಮೇಧಗಳನ್ನು ಮಾಡಿದನು. ಈ ಎಲ್ಲ ಯಜ್ಞಗಳಲ್ಲಿಯೂ ಭರತನು ಅಪಾರವಾದ ಧನರಾಶಿಯನ್ನು ಬ್ರಾಹ್ಮಣರಿಗೆ ದಾನ ಮಾಡಿದನು. ಅವನು ಪ್ರಕೃಷ್ಟವಾದ ಗುಣಗಳಿಂದ ಕೂಡಿದ ಪ್ರದೇಶದಲ್ಲಿ ಅಗ್ನಿಚಯನ ಮಾಡಿ, ಆ ಪ್ರದೇಶದಲ್ಲಿ ಒಂದು ಸಾವಿರ ಬ್ರಾಹ್ಮಣರು ಭರತನಿಂದ ದಕ್ಷಿಣೆಯಾಗಿ ಕೊಡಲ್ಪಟ್ಟ ಗೋವುಗಳನ್ನು ಬಧ್ವ-ಬಧ್ವ ಸಂಖ್ಯೆಯಲ್ಲಿ (ಒಂದು ಬಧ್ವವೆಂದರೆ 13,084) ಹಂಚಿಕೊಂಡರು.॥25-26॥
(ಶ್ಲೋಕ-27)
ಮೂಲಮ್
ತ್ರಯಸಿಂಶಚ್ಛತಂ ಹ್ಯಶ್ವಾನ್ಬದ್ಧ್ವಾ ವಿಸ್ಮಾಪಯನ್ನೃಪಾನ್ ।
ದೌಷ್ಯಂತಿರತ್ಯಗಾನ್ಮಾಯಾಂ ದೇವಾನಾಂ ಗುರುಮಾಯಯೌ ॥
ಅನುವಾದ
ಹೀಗೆ ಭರತ ಚಕ್ರವರ್ತಿಯು ಆ ಯಜ್ಞಗಳಲ್ಲಿ ಒಂದು ನೂರಮೂವತ್ತಮೂರು ಕುದುರೆಗಳನ್ನು ಯೂಪಗಳಿಗೆ ಕಟ್ಟಿನೂರ ಮೂವತ್ತಮೂರು ಯಜ್ಞಗಳನ್ನು ಮಾಡಿ ಸಮಸ್ತ ರಾಜರನ್ನು ಆಶ್ಚರ್ಯಗೊಳಿಸಿದನು. ಈ ಯಜ್ಞಗಳ ಮೂಲಕ ಈ ಲೋಕದಲ್ಲಿ ಭರತನಿಗೆ ಪರಮ ಯಶಸ್ಸು ಲಭಿಸಿತು. ಕೊನೆಗೆ ಅವನು ಮಾಯೆಯನ್ನು ಜಯಿಸಿ, ದೇವತೆಗಳ ಪರಮಗುರುವಾದ ಭಗವಾನ್ ಶ್ರೀಹರಿಯನ್ನು ಪಡೆದುಕೊಂಡನು. ॥27॥
(ಶ್ಲೋಕ-28)
ಮೂಲಮ್
ಮೃಗಾನ್ ಶುಕ್ಲದತಃ ಕೃಷ್ಣಾನ್ ಹಿರಣ್ಯೇನ ಪರೀವೃತಾನ್ ।
ಅದಾತ್ಕರ್ಮಣಿ ಮಷ್ಣಾರೇ ನಿಯುತಾನಿ ಚತುರ್ದಶ ॥
ಅನುವಾದ
ಯಜ್ಞದಲ್ಲಿ ‘ಮಷ್ಣಾರ’ ಎಂಬ ಒಂದು ಕರ್ಮವಿರುತ್ತದೆ. ಅದರಲ್ಲಿ ಭರತನು ಸುವರ್ಣ ವಿಭೂಷಿತವಾದ ಬಿಳಿಯ ದಂತಗಳಿಂದ ಕೂಡಿದ್ದ, ಕಪ್ಪುಬಣ್ಣದ ಹದಿನಾಲ್ಕು ಲಕ್ಷ ಆನೆಗಳನ್ನು ದಾನಮಾಡಿದನು. ॥28॥
(ಶ್ಲೋಕ-29)
ಮೂಲಮ್
ಭರತಸ್ಯ ಮಹತ್ಕರ್ಮ ನ ಪೂರ್ವೇ ನಾಪರೇ ನೃಪಾಃ ।
ನೈವಾಪುರ್ನೈವ ಪ್ರಾಪ್ಸ್ಯಂತಿ ಬಾಹುಭ್ಯಾಂ ತ್ರಿದಿವಂ ಯಥಾ ॥
ಅನುವಾದ
ಭರತನು ಮಾಡಿದಂತಹ ಮಹಾಕಾರ್ಯವನ್ನು ಹಿಂದೆ ಯಾರೂ ಮಾಡಿರಲಿಲ್ಲ, ಮುಂದೆ ಯಾರೂ ಮಾಡಲಾರರು. ಯಾರಾದರೂ ಕೈಯಿಂದ ಸ್ವರ್ಗವನ್ನು ಮುಟ್ಟಬಲ್ಲನೇ? ॥29॥
(ಶ್ಲೋಕ-30)
ಮೂಲಮ್
ಕಿರಾತಹೂಣಾನ್ಯವನಾನಂಧ್ರಾನ್ ಕಂಕಾನ್ಖಶಾಂಛಕಾನ್ ।
ಅಬ್ರಹ್ಮಣ್ಯಾನ್ನೃಪಾಂಶ್ಚಾಹನ್ ಮ್ಲೇಚ್ಛಾನ್ದಿಗ್ವಿಜಯೇಽಖಿಲಾನ್ ॥
ಅನುವಾದ
ಭರತ ಚಕ್ರವರ್ತಿಯು ದಿಗ್ವಿಜಯದ ಸಮಯದಲ್ಲಿ ಕಿರಾತ, ಹೂಣ, ಯವನ, ಅಂಧ್ರ, ಕಂಕ, ಖಸ, ಶಕ, ಮ್ಲೇಚ್ಛ ಮೊದಲಾದ ಸಮಸ್ತ ಬ್ರಾಹ್ಮಣದ್ರೋಹಿಗಳನ್ನು ಕೊಂದುಹಾಕಿದನು.॥30॥
(ಶ್ಲೋಕ-31)
ಮೂಲಮ್
ಜಿತ್ವಾ ಪುರಾಸುರಾದೇವಾನ್ಯೇ ರಸೌಕಾಂಸಿ ಭೇಜಿರೇ ।
ದೇವಸಿಯೋ ರಸಾಂ ನೀತಾಃ ಪ್ರಾಣಿಭಿಃ ಪುನರಾಹರತ್ ॥
ಅನುವಾದ
ಬಲಿಷ್ಠರಾದ ಅಸುರರು ದೇವತೆಗಳನ್ನು ಗೆದ್ದು, ದೇವ ಸ್ತ್ರೀಯರನ್ನು ಅಪಹರಿಸಿಕೊಂಡು ರಸಾತಳಕ್ಕೆ ಹೋಗಿ ವಾಸಮಾಡುತ್ತಿದ್ದರು. ದೇವತೆಗಳ ಪ್ರಾರ್ಥನೆಯಂತೆ ಭರತ ಚಕ್ರವರ್ತಿಯು ಆ ದೇವತಾ ಸ್ತ್ರೀಯರನ್ನು ಬಿಡಿಸಿ ತಂದು ದೇವತೆಗಳಿಗೆ ಒಪ್ಪಿಸಿದನು.॥31॥
(ಶ್ಲೋಕ-32)
ಮೂಲಮ್
ಸರ್ವಕಾಮಾನ್ ದುದುಹತುಃ ಪ್ರಜಾನಾಂ ತಸ್ಯ ರೋದಸೀ ।
ಸಮಾಸ್ತ್ರಿಣವಸಾಹಸ್ರೀರ್ದಿಕ್ಷು ಚಕ್ರಮವರ್ತಯತ್ ॥
ಅನುವಾದ
ಭರತನ ರಾಜ್ಯದಲ್ಲಿ ಭೂಮ್ಯಂತರಿಕ್ಷಗಳು ಪ್ರಜೆಗಳ ಸಕಲ ಆವಶ್ಯಕತೆಗಳನ್ನು ಪೂರ್ಣಗೊಳಿಸುತ್ತಿದ್ದವು. ಅವನು ಇಪ್ಪತ್ತೇಳುಸಾವಿರ ವರ್ಷಗಳವರೆಗೆ ಅಖಂಡ ಭೂಮಂಡಲದ ಏಕಚ್ಛತ್ರ ರಾಜ್ಯವಾಳಿದನು. ॥32॥
(ಶ್ಲೋಕ-33)
ಮೂಲಮ್
ಸ ಸಮ್ರಾಡ್ಲೋಕಪಾಲಾಖ್ಯಮೈಶ್ವರ್ಯಮಧಿರಾಟ್ ಶ್ರಿಯಮ್ ।
ಚಕ್ರಂ ಚಾಸ್ಖಲಿತಂ ಪ್ರಾಣಾನ್ಮೃಷೇತ್ಯುಪರರಾಮ ಹ ॥
ಅನುವಾದ
ಕೊನೆಗೆ ಭರತ ಚಕ್ರವರ್ತಿಯು ಲೋಕಪಾಲರನ್ನೂ ಚಕಿತಗೊಳಿಸುವಂತಹ ಐಶ್ವರ್ಯ, ಸಾರ್ವಭೌಮ ಸಂಪತ್ತು, ಅಖಂಡ ಶಾಸನ ಮತ್ತು ಈ ಜೀವನವೂ ಕೂಡ ಮಿಥ್ಯೆಯೇ ಆಗಿದೆ ಎಂದು ನಿಶ್ಚಯಿಸಿ ಸಂಸಾರದಿಂದ ವಿರಕ್ತನಾದನು.॥33॥
(ಶ್ಲೋಕ-34)
ಮೂಲಮ್
ತಸ್ಯಾಸನ್ನೃಪ ವೈದರ್ಭ್ಯಃ ಪತ್ನ್ಯಸ್ತಿಸ್ರಃ ಸುಸಮ್ಮತಾಃ ।
ಜಘ್ನುಸ್ತ್ಯಾಗಭಯಾತ್ಪುತ್ರಾನ್ನಾನುರೂಪಾ ಇತೀರಿತೇ ॥
ಅನುವಾದ
ಪರೀಕ್ಷಿತನೇ! ವಿದರ್ಭರಾಜನ ಮೂವರು ಕನ್ಯೆಯರು ಭರತ ಚಕ್ರವರ್ತಿಯ ಪತ್ನಿಯರಾಗಿದ್ದರು. ಅವರು ಪತಿಯನ್ನು ಬಹಳವಾಗಿ ಆದರಿಸುತ್ತಿದ್ದರು. ಆದರೆ ಭರತನು ಅವರಲ್ಲಿ ನಿಮ್ಮಲ್ಲಿ ಹುಟ್ಟಿದ ಮಕ್ಕಳು ನನಗೆ ಅನುರೂಪರಾಗಿಲ್ಲವೆಂದು ಹೇಳಿದಾಗ ಅವರೆಲ್ಲರೂ ಹೆದರಿ ಸಾಮ್ರಾಟನು ನಮ್ಮನ್ನು ತ್ಯಜಿಸದಿರಲಿ ಎಂದು ತಮ್ಮ ಮಕ್ಕಳನ್ನು ಕೊಂದುಹಾಕಿದರು. ॥34॥
(ಶ್ಲೋಕ-35)
ಮೂಲಮ್
ತಸ್ಯೈವಂ ವಿತಥೇ ವಂಶೇ ತದರ್ಥಂ ಯಜತಃ ಸುತಮ್ ।
ಮರುತ್ಸ್ತೋಮೇನ ಮರುತೋ ಭರದ್ವಾಜಮುಪಾದದುಃ ॥
ಅನುವಾದ
ಹೀಗೆ ಭರತಚಕ್ರವರ್ತಿಯ ವಂಶವು ವಿಚ್ಛಿನ್ನವಾಯಿತು. ಆಗ ಅವನು ಸಂತಾನದ ಪ್ರಾಪ್ತಿಗಾಗಿ ‘ಮರುತ್ಸ್ತೋಮ’ವೆಂಬ ಯಜ್ಞವನ್ನು ಮಾಡಿದನು. ಇದರಿಂದ ಮರುದ್ಗಣರು ಸುಪ್ರೀತರಾಗಿ ಭರತನಿಗೆ ಭರದ್ವಾಜನೆಂಬ ಪುತ್ರನನ್ನು ದಯಪಾಲಿಸಿದರು. ॥35॥
(ಶ್ಲೋಕ-36)
ಮೂಲಮ್
ಅಂತರ್ವತ್ನ್ಯಾಂ ಭ್ರಾತೃಪತ್ನ್ಯಾಂ ಮೈಥುನಾಯ ಬೃಹಸ್ಪತಿಃ ।
ಪ್ರವೃತ್ತೋ ವಾರಿತೋ ಗರ್ಭಂ ಶಪ್ತ್ವಾ ವೀರ್ಯಮವಾಸೃಜತ್ ॥
ಅನುವಾದ
ಭರದ್ವಾಜರ ಉತ್ಪತ್ತಿಯ ಪ್ರಸಂಗ ಇಂತಿದೆ ಒಮ್ಮೆ ಬೃಹಸ್ಪತಿಯು ತನ್ನ ತಮ್ಮನಾದ ಉತಥ್ಯನ ಗರ್ಭವತಿಯಾದ ಪತ್ನಿಯೊಡನೆ ಸಮಾಗಮವನ್ನು ಬಯಸಿದರು. ಆ ಸಮಯದಲ್ಲಿ ಗರ್ಭದಲ್ಲಿ ಬಾಲಕ (ದೀರ್ಘತಮಾ)ನು ಅವನನ್ನು ತಡೆದನು. ಆದರೆ ಬೃಹಸ್ಪತಿಯು ಅದರ ಮಾತಿಗೆ ಕಿವಿಗೊಡದೆ ಅದಕ್ಕೆ ‘ನೀನು ಕುರುಡನಾಗು’ ಎಂದು ಶಪಿಸಿ ಗರ್ಭಾಧಾನವನ್ನು ಮಾಡಿಬಿಟ್ಟನು.॥36॥
(ಶ್ಲೋಕ-37)
ಮೂಲಮ್
ತಂ ತ್ಯಕ್ತುಕಾಮಾಂ ಮಮತಾಂ ಭರ್ತೃತ್ಯಾಗವಿಶಂಕಿತಾಮ್ ।
ನಾಮನಿರ್ವಚನಂ ತಸ್ಯ ಶ್ಲೋಕಮೇನಂ ಸುರಾ ಜಗುಃ ॥
ಅನುವಾದ
ಉತಥ್ಯನ ಪತ್ನೀ ಮಮತೆಯು ತನ್ನ ಪತಿಯು ತನ್ನನ್ನು ತ್ಯಜಿಸಿ ಬಿಡುವನೆಂದು ಹೆದರಿದಳು. ಅದಕ್ಕಾಗಿ ಬೃಹಸ್ಪತಿಯ ಮೂಲಕ ಹುಟ್ಟಲಿರುವ ಶಿಶುವನ್ನು ತ್ಯಜಿಸಲು ಬಯಸಿದಳು. ಆ ಸಮಯದಲ್ಲಿ ದೇವತೆಗಳು ಗರ್ಭಸ್ಥವಾದ ಶಿಶುವಿನ ನಾಮನಿರ್ವಚನ ಮಾಡುತ್ತಾ ಈ ಶ್ಲೋಕವನ್ನು ಹೇಳಿದರು.॥37॥
(ಶ್ಲೋಕ-38)
ಮೂಲಮ್
ಮೂಢೇ ಭರ ದ್ವಾಜಮಿಮಂ ಭರ ದ್ವಾಜಂ ಬೃಹಸ್ಪತೇ ।
ಯಾತೌ ಯದುಕ್ತ್ವಾ ಪಿತರೌ ಭರದ್ವಾಜಸ್ತತಸ್ತ್ವಯಮ್ ॥
ಅನುವಾದ
ಮೂಢಳೇ! ನಿನ್ನ ಪತಿಗೂ ಮತ್ತು ಬೃಹಸ್ಪತಿಗೂ ಮಗನಾಗಿರುವ ಈ ದ್ವಾಜನನ್ನು ನೀನೇ ಭರಿಸು. ಹೆದರಬೇಡ ಎಂದು ಹೇಳಿದಾಗ ಮಮತೆಯು ಒಲ್ಲೆನೆಂದಳು. ಆಗ ಬೃಹಸ್ಪತಿಯೇ! ನಿನಗೂ ನಿನ್ನ ತಮ್ಮನಿಗೂ ಪುತ್ರ ರೂಪದಲ್ಲಿರುವ ಈ ದ್ವಾಜನನ್ನು ನೀನೇ ಭರಿಸು. ದೇವತೆಗಳ ಮಾತಿಗೆ ಬೃಹಸ್ಪತಿಯು ಒಲ್ಲೆನೆಂದನು. ಇದರಿಂದಾಗಿ ಈ ಮಗುವಿಗೆ ಭರದ್ವಾಜನೆಂದು ಹೆಸರಾಯಿತು. ॥38॥
(ಶ್ಲೋಕ-39)
ಮೂಲಮ್
ಚೋದ್ಯಮಾನಾ ಸುರೈರೇವಂ ಮತ್ವಾ ವಿತಥಮಾತ್ಮಜಮ್ ।
ವ್ಯಸೃಜನ್ಮರುತೋಽಬಿಭ್ರನ್ ದತ್ತೋಽಯಂ ವಿತಥೇಽನ್ವಯೇ ॥
ಅನುವಾದ
ದೇವತೆಗಳ ಮೂಲಕ ಹೀಗೆ ನಾಮ ನಿರ್ವಚನವಾದರೂ ಮಮತೆಯೂ ನನ್ನ ಈ ಪುತ್ರನು ಅನ್ಯಾಯದಿಂದ ಹುಟ್ಟಿರುವನು ಎಂದು ತಿಳಿದು ಆಕೆಯು ಆ ಶಿಶುವನ್ನು ಬಿಟ್ಟುಬಿಟ್ಟಳು. ಆಗ ಮರುದ್ಗಣರೇ ಅದನ್ನು ಸಾಕಿದರು. ಭರತನ ವಂಶವು ನಿಂತುಹೋಗುವಾಗ, ಅವನನ್ನು ತಂದು ಭರತನಿಗೆ ಇತ್ತರು. ಈ ವಿತಥನೇ (ಭರದ್ವಾಜ) ಭರತನಿಗೆ ದತ್ತಪುತ್ರನಾದನು.॥39॥
ಅನುವಾದ (ಸಮಾಪ್ತಿಃ)
ಇಪ್ಪತ್ತನೆಯ ಅಧ್ಯಾಯವು ಮುಗಿಯಿತು. ॥20॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ವಿಂಶೋಽಧ್ಯಾಯಃ ॥20॥