[ಹತ್ತೊಂಭತ್ತನೆಯ ಅಧ್ಯಾಯ]
ಭಾಗಸೂಚನಾ
ಯಯಾತಿಯ ಗೃಹತ್ಯಾಗ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಸ ಇತ್ಥಮಾಚರನ್ ಕಾಮಾನ್ ಸ್ತ್ರೈಣೋಽಪಹ್ನವಮಾತ್ಮನಃ ।
ಬುದ್ಧ್ವಾ ಪ್ರಿಯಾಯೈ ನಿರ್ವಿಣ್ಣೋ ಗಾಥಾಮೇತಾಮಗಾಯತ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಹೀಗೆ ಯಯಾತಿಯು ಸ್ತ್ರೀವಶನಾಗಿ ವಿಷಯಗಳನ್ನು ಉಪಭೋಗಿಸುತ್ತಿದ್ದನು. ಒಂದುದಿನ ಇದ್ದಕ್ಕಿದ್ದಂತೆ ತನ್ನ ಅಧಃಪತನದತ್ತ ದೃಷ್ಟಿಯು ಹರಿದಾಗ ಅವನಿಗೆ ವೈರಾಗ್ಯವುಂಟಾಗಿ ತನ್ನ ಪ್ರಿಯಪತ್ನಿಯಾದ ದೇವಯಾನಿಯಲ್ಲಿ ಈ ಕಥೆಯನ್ನು ಹೇಳಿದನು. ॥1॥
(ಶ್ಲೋಕ-2)
ಮೂಲಮ್
ಶೃಣು ಭಾರ್ಗವ್ಯಮೂಂ ಗಾಥಾಂ ಮದ್ವಿಧಾಚರಿತಾಂ ಭುವಿ ।
ಧೀರಾ ಯಸ್ಯಾನುಶೋಚಂತಿ ವನೇ ಗ್ರಾಮನಿವಾಸಿನಃ ॥
ಅನುವಾದ
ಭೃಗುನಂದಿನೀ! ಈ ಕಥೆಯನ್ನು ಕೇಳು. ಭೂಮಿಯಲ್ಲಿ ನನ್ನಂತೆಯೇ ಇರುವ ವಿಷಯಾಪೇಕ್ಷಿಯ ಸತ್ಯ ಇತಿಹಾಸ ಇದಾಗಿದೆ. ಹೀಗೆಯೇ ಗ್ರಾಮವಾಸಿಗಳಾದ ವಿಷಯೀ ಪುರುಷರ ಸಂಬಂಧವಾಗಿ ವನವಾಸೀ ಜಿತೇಂದ್ರಿಯ ಪುರುಷರು ಇವರ ಶ್ರೇಯಸ್ಸು ಹೇಗಾದೀತೆಂದು ದುಃಖದಿಂದ ಯೋಚಿಸುತ್ತಾರೆ. ॥2॥
(ಶ್ಲೋಕ-3)
ಮೂಲಮ್
ಬಸ್ತ ಏಕೋ ವನೇ ಕಶ್ಚಿದ್ವಿಚಿನ್ವನ್ ಪ್ರಿಯಮಾತ್ಮನಃ ।
ದದರ್ಶ ಕೂಪೇ ಪತಿತಾಂ ಸ್ವಕರ್ಮವಶಗಾಮಜಾಮ್ ॥
ಅನುವಾದ
ಪ್ರಿಯೆ! ಕಾಡಿನಲ್ಲಿ ಒಂದು ಹೋತವು ತನಗೆ ಪ್ರಿಯವಾದುದನ್ನು ಹುಡುಕುತ್ತಾ ಸಂಚರಿಸುತ್ತಿತ್ತು. ಒಮ್ಮೆ ತನ್ನ ಕರ್ಮಫಲದಿಂದಲೇ ಒಂದು ಮೇಕೆಯು ಬಾವಿಯಲ್ಲಿ ಬಿದ್ದಿರುವುದನ್ನು ನೋಡಿತು. ॥3॥
(ಶ್ಲೋಕ-4)
ಮೂಲಮ್
ತಸ್ಯಾ ಉದ್ಧರಣೋಪಾಯಂ ಬಸ್ತಃ ಕಾಮೀ ವಿಚಿಂತಯನ್ ।
ವ್ಯಧತ್ತ ತೀರ್ಥಮುದ್ಧೃತ್ಯ ವಿಷಾಣಾಗ್ರೇಣ ರೋಧಸಿ ॥
ಅನುವಾದ
ಆ ಹೋತವು ಬಹಳ ಕಾಮಿಯಾಗಿತ್ತು. ಈ ಮೇಕೆಯನ್ನು ಬಾವಿಯಿಂದ ಹೇಗೆ ಮೇಲೆತ್ತಬಹುದೆಂದು ಯೋಚಿಸಿ ಅದು ತನ್ನ ಕೋಡುಗಳಿಂದ ಬಾವಿಯ ದಂಡೆಗಳನ್ನು ಆಗೆದು ದಾರಿಮಾಡಿತು.॥4॥
(ಶ್ಲೋಕ-5)
ಮೂಲಮ್
ಸೋತ್ತೀರ್ಯ ಕೂಪಾತ್ಸು ಶ್ರೋಣೀ ತಮೇವ ಚಕಮೇ ಕಿಲ ।
ತಯಾ ವೃತಂ ಸಮುದ್ವೀಕ್ಷ್ಯ ಬಹ್ವ್ಯೋಽಜಾಃ ಕಾಂತಕಾಮಿನೀಃ ॥
(ಶ್ಲೋಕ-6)
ಮೂಲಮ್
ಪೀವಾನಂ ಶ್ಮಶ್ರುಲಂ ಪ್ರೇಷ್ಠಂ ಮೀಢ್ವಾಂಸಂ ಯಾಭಕೋವಿದಮ್ ।
ಸ ಏಕೋಽಜವೃಷಸ್ತಾಸಾಂ ಬಹ್ವೀನಾಂ ರತಿವರ್ಧನಃ ।
ರೇಮೇ ಕಾಮಗ್ರಹಗ್ರಸ್ತ ಆತ್ಮಾನಂ ನಾವಬುಧ್ಯತ ॥
ಅನುವಾದ
ಹೋತನ ಸಹಾಯದಿಂದ ಮೇಲಕ್ಕೆ ಬಂದ ಮೇಕೆಯು ಆ ಹೋತನನ್ನೇ ಮೋಹಿಸಿತು. ಆ ಹೋತವು ಗಡ್ಡ-ಮೀಸೆಗಳನ್ನು ಹೊಂದಿ, ಹೃಷ್ಟಪುಷ್ಟ ತರುಣವಾಗಿದ್ದು, ಮೇಕೆಗಳಿಗೆ ಸುಖವನ್ನಿಡುವುದಲ್ಲಿ ವಿಹಾರ ಕುಶಲವಾಗಿದ್ದಿತು. ಬಾವಿಯಲ್ಲಿ ಬಿದ್ದ ಮೇಕೆಯು ಆ ಹೋತವನ್ನು ತನ್ನ ಪ್ರಿಯಕರನಾಗಿ ಆರಿಸಿಕೊಂಡಿರುವುದನ್ನು ನೋಡಿದ ಇತರ ಮೇಕೆಗಳೂ ಅದನ್ನೇ ತಮ್ಮ ಪತಿಯನ್ನಾಗಿಸಿಕೊಂಡವು. ಅವುಗಳಾದರೋ ಮೊದಲಿನಿಂದಲೂ ಪತಿಯ ಅನ್ವೇಷಣೆಯಲ್ಲಿದ್ದವು. ಆ ಒಂದೇ ಹೋತವು ಹಲವಾರು ಮೇಕೆಗಳೊಡನೆ ಮದನ ಪಿಶಾಚಗ್ರಸ್ತವಾಗಿ ವಿಹರಿಸುತ್ತಾ ತನ್ನನ್ನೇ ತಾನು ಮರೆತು ಬಿಟ್ಟಿತ್ತು. ॥5-6॥
(ಶ್ಲೋಕ-7)
ಮೂಲಮ್
ತಮೇವ ಪ್ರೇಷ್ಠ ತಮಯಾ ರಮಮಾಣಮಜಾನ್ಯಯಾ ।
ವಿಲೋಕ್ಯ ಕೂಪಸಂವಿಗ್ನಾ ನಾಮೃಷ್ಯದ್ ಬಸ್ತಕರ್ಮ ತತ್ ॥
ಅನುವಾದ
ಬಾವಿಯಿಂದ ಮೇಲೆ ಬಂದಿದ್ದ ಮೇಕೆಗೆ ತನ್ನ ಪತಿಯಾದರೋ ಇತರ ಮೇಕೆಗಳೊಡನೆ ವಿಹರಿಸುತ್ತಿದೆ ಎಂದು ತಿಳಿದಾಗ, ಅದಕ್ಕೆ ಆ ಹೋತನ ನಡೆವಳಿಕೆ ಸಹಿಸಲಾಗಲಿಲ್ಲ. ॥7॥
(ಶ್ಲೋಕ-8)
ಮೂಲಮ್
ತಂ ದುರ್ಹೃದಂ ಸುಹೃದ್ರೂಪಂ ಕಾಮಿನಂ ಕ್ಷಣಸೌಹೃದಮ್ ।
ಇಂದ್ರಿಯಾರಾಮಮುತ್ಸೃಜ್ಯ ಸ್ವಾಮಿನಂ ದುಃಖಿತಾ ಯಯೌ ॥
ಅನುವಾದ
ಈ ಹೋತವು ಬಹಳ ಕಾಮಿಯೆಂದೂ, ಇವನ ಯಾವ ಭರವಸೆಯೂ ಇಲ್ಲವೆಂದೂ, ಇದು ಮಿತ್ರರೂಪದಿಂದ ಶತ್ರುವಿನ ಕೆಲಸಮಾಡುತ್ತಿದೆ ಎಂದೂ ತಿಳಿದು ಆ ಮೇಕೆಯು ಈ ಇಂದ್ರಿಯಲೋಲುಪ ಹೋತನನ್ನು ಬಿಟ್ಟು ಭಾರೀ ದುಃಖದಿಂದ ತನ್ನನ್ನು ಸಾಕುವವನ ಬಳಿಗೆ ಹೊರಟುಹೋಯಿತು. ॥8॥
(ಶ್ಲೋಕ-9)
ಮೂಲಮ್
ಸೋಽಪಿ ಚಾನುಗತಃ ಸೈಣಃ ಕೃಪಣಸ್ತಾಂ ಪ್ರಸಾದಿತುಮ್ ।
ಕುರ್ವನ್ನಿಡವಿಡಾಕಾರಂ ನಾಶಕ್ನೋತ್ಪಥಿ ಸಂಧಿತುಮ್ ॥
ಅನುವಾದ
ಆ ದೀನವೂ, ಕಾಮಿಯೂ ಆದ ಹೋತವು ಅದನ್ನು ಒಲಿಸಿಕೊಳ್ಳಲು ಮ್ಯಾ ಮ್ಯಾ ಎಂದುಕೊಂಡು ಅದರ ಹಿಂದೆಯೇ ಹೋಯಿತು. ಆದರೆ ಆ ಮೇಕೆಯನ್ನು ದಾರಿಯಲ್ಲಿ ಒಲಿಸಿಕೊಳ್ಳಲಾಗಲಿಲ್ಲ. ॥9॥
(ಶ್ಲೋಕ-10)
ಮೂಲಮ್
ತಸ್ಯಾಸ್ತತ್ರ ದ್ವಿಜಃ ಕಶ್ಚಿದಜಾಸ್ವಾಮ್ಯಚ್ಛಿನದ್ರುಷಾ ।
ಲಂಬತಂ ವೃಷಣಂ ಭೂಯಃ ಸಂದಧೇಽರ್ಥಾಯ ಯೋಗವಿತ್ ॥
ಅನುವಾದ
ಆ ಮೇಕೆಯ ಒಡೆಯನು ಓರ್ವ ಬ್ರಾಹ್ಮಣನಾಗಿದ್ದನು. ಅವನು ಸಿಟ್ಟುಗೊಂಡು ಹೋತನ ಜೋಲಾಡುತ್ತಿದ್ದ ವೃಷಣಗಳನ್ನು ಕತ್ತರಿಸಿ ಹಾಕಿದನು. ಆದರೆ ಮತ್ತೆ ಮೇಕೆಯ ಒಳಿತನ್ನು ಯೋಚಿಸಿ ಪುನಃ ಅವನ್ನು ಜೋಡಿಸಿ ಬಿಟ್ಟನು. ಅವನಿಗೆ ಇಂತಹ ಅನೇಕ ಉಪಾಯಗಳು ತಿಳಿದಿದ್ದುವು. ॥10॥
(ಶ್ಲೋಕ-11)
ಮೂಲಮ್
ಸಂಬದ್ಧವೃಷಣಃ ಸೋಽಪಿ ಹ್ಯಜಯಾ ಕೂಪಲಬ್ಧಯಾ ।
ಕಾಲಂ ಬಹುತಿಥಂ ಭದ್ರೇ ಕಾಮೈರ್ನಾದ್ಯಾಪಿ ತುಷ್ಯತಿ ॥
ಅನುವಾದ
ಪ್ರಿಯೇ! ಹೀಗೆ ವೃಷಣಗಳು ಜೋಡಿಸಿದಾಗ ಆ ಹೋತವು ಪುನಃ ಬಾವಿಯಲ್ಲಿ ಸಿಕ್ಕಿದ ಮೇಕೆಯೊಂದಿಗೆ ಅನೇಕ ದಿನಗಳವರೆಗೆ ವಿಷಯ ಭೋಗಗಳನ್ನು ಅನುಭವಿಸುತ್ತಾ ಇದ್ದರೂ ಇಂದಿನವರೆಗೆ ಅದಕ್ಕೆ ಸಂತೋಷವಾಗಲಿಲ್ಲ. ॥11॥
(ಶ್ಲೋಕ-12)
ಮೂಲಮ್
ತಥಾಹಂ ಕೃಪಣಃ ಸುಭ್ರು ಭವತ್ಯಾಃ ಪ್ರೇಮಯಂತ್ರಿತಃ ।
ಆತ್ಮಾನಂ ನಾಭಿಜಾನಾಮಿ ಮೋಹಿತಸ್ತವ ಮಾಯಯಾ ॥
ಅನುವಾದ
ಸುಂದರೀ! ನನ್ನ ಸ್ಥಿತಿಯೂ ಇದೇ ಆಗಿದೆ. ನಿನ್ನ ಪ್ರೇಮ ಪಾಶದಲ್ಲಿ ಬಂಧಿತನಾದ ನಾನೂ ಅತ್ಯಂತ ದೀನನಾಗಿ ಹೋದೆನು. ನಿನ್ನ ಮಾಯೆಯಿಂದ ಮೋಹಿತನಾದ ನಾನು ನನ್ನನ್ನೇ ಮರೆತು ಬಿಟ್ಟಿರುವೆನು. ॥12॥
ಮೂಲಮ್
(ಶ್ಲೋಕ-13)
ಯತ್ ಪೃಥಿವ್ಯಾಂ ವ್ರೀಹಿಯವಂ ಹಿರಣ್ಯಂ ಪಶವಃ ಸಿಯಃ ।
ನ ದುಹ್ಯಂತಿ ಮನಃಪ್ರೀತಿಂ ಪುಂಸಃ ಕಾಮಹತಸ್ಯ ತೇ ॥
ಅನುವಾದ
ಪ್ರಿಯೇ! ಭೂಮಂಡಲದಲ್ಲಿ ಎಷ್ಟು ಧಾನ್ಯಗಳಿವೆಯೋ, ಸುವರ್ಣರಾಶಿಗಳಿವೆಯೋ, ಪಶುಗಳಿವೆಯೋ, ಸ್ತ್ರೀಯರಿರುವರೋ, ಇವೆಲ್ಲವೂ ಜೊತೆಗೂಡಿ ಬಂದರೂ ಕಾಮ ಹತನಾದ ಮನುಷ್ಯನ ಮನಸ್ಸನ್ನು ಸಂತುಷ್ಟಗೊಳಿಸಲಾರವು.॥13॥
(ಶ್ಲೋಕ-14)
ಮೂಲಮ್
ನ ಜಾತು ಕಾಮಃ ಕಾಮಾನಾಮುಪಭೋಗೇನ ಶಾಮ್ಯತಿ ।
ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ ॥
ಅನುವಾದ
ವಿಷಯಗಳನ್ನು ಭೋಗಿಸುವುದರಿಂದ ಭೋಗವಾಸನೆಯು ಎಂದೂ ಶಾಂತವಾಗಲಾರದು. ಬದಲಿಗೆ ತುಪ್ಪದ ಆಹುತಿ ಹಾಕಿದಾಗ ಯಜ್ಞೇಶ್ವರನು ಮತ್ತೆ ವೃದ್ಧಿ ಹೊಂದುತ್ತಿರುವಂತೆ ಭೋಗವಾಸನೆಗಳು ಕಾಮೋಪಭೋಗಗಳಿಂದ ಮತ್ತೂ ಪ್ರಬಲವಾಗುತ್ತವೆ. ॥14॥
(ಶ್ಲೋಕ-15)
ಮೂಲಮ್
ಯದಾ ನ ಕುರುತೇ ಭಾವಂ ಸರ್ವಭೂತೇಷ್ವಮಂಗಲಮ್ ।
ಸಮದೃಷ್ಟೇಸ್ತದಾ ಪುಂಸಃ ಸರ್ವಾಃ ಸುಖಮಯಾ ದಿಶಃ ॥
ಅನುವಾದ
ಮನುಷ್ಯನು ಯಾವುದೇ ಪ್ರಾಣಿ ಮತ್ತು ಯಾವುದೇ ವಸ್ತು ವಿನೊಡನೆ ರಾಗ-ದ್ವೇಷಗಳ ಭಾವವಿಡದಿದ್ದಾಗ, ಅವನು ಸಮದರ್ಶಿಯಾಗುತ್ತಾನೆ. ಸಮಸ್ತ ದಿಕ್ಕುಗಳೂ ಅಂತಹವನಿಗೆ ಸುಖಮಯವಾಗುತ್ತವೆ.॥15॥
(ಶ್ಲೋಕ-16)
ಮೂಲಮ್
ಯಾ ದುಸ್ತ್ಯಜಾ ದುರ್ಮತಿಭಿರ್ಜೀ ರ್ಯತೋ ಯಾ ನ ಜೀರ್ಯತೇ ।
ತಾಂ ತೃಷ್ಣಾಂ ದುಃಖನಿವಹಾಂ ಶರ್ಮಕಾಮೋ ದ್ರುತಂ ತ್ಯಜೇತ್ ॥
ಅನುವಾದ
ವಿಷಯಗಳ ತೃಷ್ಣೆಯೇ ದುಃಖಗಳ ಉಗಮಸ್ಥಾನವಾಗಿದೆ. ಮಂದಬುದ್ಧಿಯವರಾದ ಜನರು ಅಂತಹ ತೃಷ್ಣೆಯನ್ನು ಬಹಳ ಕಷ್ಟದಿಂದಲೂ ತ್ಯಾಗ ಮಾಡಲಾರರು. ಮುದಿತನವು ಬಂದರೂ ತೃಷ್ಣೆಯು ನಿತ್ಯ ನೂತನವಾಗಿಯೇ ಇರುತ್ತದೆ. ಆದ್ದರಿಂದ ತನ್ನ ಶ್ರೇಯಸ್ಸನ್ನು ಬಯಸುವವನು ಶೀಘ್ರಾತಿಶೀಘ್ರವಾಗಿ ಈ ತೃಷ್ಣೆಯನ್ನು ಪರಿತ್ಯಜಿಸಬೇಕು. ॥16॥
(ಶ್ಲೋಕ-17)
ಮೂಲಮ್
ಮಾತ್ರಾ ಸ್ವಸ್ರಾ ದುಹಿತ್ರಾ ವಾ ನಾವಿವಿಕ್ತಾಸನೋ ಭವೇತ್ ।
ಬಲವಾನಿಂದ್ರಿಯಗ್ರಾಮೋ ವಿದ್ವಾಂಸಮಪಿ ಕರ್ಷತಿ ॥
ಅನುವಾದ
ತನ್ನ ತಾಯಿಯೇ ಇರಲಿ, ಮಗಳೇ ಇರಲಿ, ತಂಗಿ ಯಾಗಿರಲಿ, ಏಕಾಂತದಲ್ಲಿ ಒಂದೇ ಆಸನದಲ್ಲಿ ಸೆಟೆದು ಕುಳಿತುಕೊಳ್ಳಬಾರದು. ಏಕೆಂದರೆ, ಇಂದ್ರಿಯಗಳು ಅತಿ ಬಲಿಷ್ಠವಾದುವುಗಳು. ಮಹಾ ಮಹಾ ವಿದ್ವಾಂಸರನ್ನೂ ಕೂಡ ಅವುಗಳು ವಿಚಲಿತನನ್ನಾಗಿಸಿ ಬಿಡುತ್ತವೆ. ॥17॥
(ಶ್ಲೋಕ-18)
ಮೂಲಮ್
ಪೂರ್ಣಂ ವರ್ಷಸಹಸ್ರಂ ಮೇ ವಿಷಯಾನ್ಸೇವತೋಸಕೃತ್ ।
ತಥಾಪಿ ಚಾನುಸವನಂ ತೃಷ್ಣಾ ತೇಷೂಪಜಾಯತೇ ॥
ಅನುವಾದ
ವಿಷಯಗಳನ್ನು ಪುನಃ ಪುನಃ ಸೇವಿಸುತ್ತಾ ನಾನು ಒಂದು ಸಾವಿರವರ್ಷಗಳನ್ನು ಕಳೆದೆನು. ಹೀಗಿದ್ದರೂ ಪ್ರತಿಕ್ಷಣವೂ ಆ ಭೋಗಗಳ ಲಾಲಸೆಯು ಬೆಳೆಯುತ್ತಲೇ ಇದೆ.॥18॥
(ಶ್ಲೋಕ-19)
ಮೂಲಮ್
ತಸ್ಮಾದೇತಾಮಹಂ ತ್ಯಕ್ತ್ವಾ ಬ್ರಹ್ಮಣ್ಯಾಧಾಯ ಮಾನಸಮ್ ।
ನಿರ್ದ್ವಂದ್ವೋ ನಿರಹಂಕಾರಶ್ಚರಿಷ್ಯಾಮಿ ಮೃಗೈಃ ಸಹ ॥
ಅನುವಾದ
ಅದಕ್ಕಾಗಿ ನಾನೀಗ ಈ ಭೋಗಗಳ ತೃಷ್ಣೆಯನ್ನು ಸಂಪೂರ್ಣವಾಗಿ ಪರಿತ್ಯಜಿಸಿ, ಮನಸ್ಸನ್ನು ಪರಬ್ರಹ್ಮ ಪರಮಾತ್ಮನಲ್ಲಿ ಲೀನಗೊಳಿಸಿ, ಶೀತೋಷ್ಣ, ಸುಖ-ದುಃಖಾದಿ ದ್ವಂದ್ವಗಳಿಂದ ರಹಿತನಾಗಿ, ಅಹಂಕಾರದಿಂದಲೂ ಮುಕ್ತನಾಗಿ, ಜಿಂಕೆಗಳೊಡನೆ ಅರಣ್ಯದಲ್ಲಿ ಸಂಚರಿಸುವೆನು.॥19॥
(ಶ್ಲೋಕ-20)
ಮೂಲಮ್
ದೃಷ್ಟಂ ಶ್ರುತಮಸದ್ಬುದ್ಧ್ವಾ ನಾನುಧ್ಯಾಯೇನ್ನ ಸಂವಿಶೇತ್ ।
ಸಂಸೃತಿಂ ಚಾತ್ಮನಾಶಂ ಚ ತತ್ರ ವಿದ್ವಾನ್ಸ ಆತ್ಮದೃಕ್ ॥
ಅನುವಾದ
ಇಹ-ಪರ ಲೋಕಗಳೆರಡರ ಭೋಗಗಳು ಅಸತ್ತಾಗಿವೆ ಎಂದು ಭಾವಿಸಿ, ಅವನ್ನು ಚಿಂತಿಸದೆ, ಭೋಗಿಸದೇ ಇರಬೇಕು, ಅವುಗಳ ಚಿಂತನದಿಂದಲೇ ಜನ್ಮ-ಮೃತ್ಯು ರೂಪವಾದ ಸಂಸಾರವು ಪ್ರಾಪ್ತವಾಗುವುದೆಂಬುದನ್ನು ತಿಳಿಯಬೇಕು. ಅವುಗಳ ಭೋಗದಿಂದಲಾದರೋ ಆತ್ಮನಾಶವಾಗುವುದೆಂಬ ರಹಸ್ಯವನ್ನು ತಿಳಿದು ಅವುಗಳಿಂದ ದೂರವುಳಿಯುವವನೇ ಆತ್ಮಜ್ಞಾನಿಯು.॥20॥
(ಶ್ಲೋಕ-21)
ಮೂಲಮ್
ಇತ್ಯುಕ್ತ್ವಾ ನಾಹುಷೋ ಜಾಯಾಂ ತದೀಯಂ ಪೂರವೇ ವಯಃ ।
ದತ್ತ್ವಾ ಸ್ವಾಂ ಜರಸಂ ತಸ್ಮಾದಾದದೇ ವಿಗತಸ್ಪೃಹಃ ॥
ಅನುವಾದ
ಪರೀಕ್ಷಿತನೇ! ಯಯಾತಿಯು ತನ್ನ ಪತ್ನಿಗೆ ಹೀಗೆ ಹೇಳಿ ಪುರುವಿನ ಯೌವನವನ್ನು ಅವನಿಗೆ ಮರಳಿಸಿ, ತನ್ನ ಮುದಿತನವನ್ನು ಅವನಿಂದ ಮರಳಿ ಸ್ವೀಕರಿಸಿ ನಿಃಸ್ಪೃಹನಾದನು. ಅವನಿಗೆ ವಿಷಯ ಸುಖಗಳಲ್ಲಿ ಆಸಕ್ತಿಯು ತೊಲಗಿ ಹೋಯಿತು. ॥21॥
(ಶ್ಲೋಕ-22)
ಮೂಲಮ್
ದಿಶಿ ದಕ್ಷಿಣಪೂರ್ವಸ್ಯಾಂ ದ್ರುಹ್ಯುಂ ದಕ್ಷಿಣತೋ ಯದುಮ್ ।
ಪ್ರತೀಚ್ಯಾಂ ತುರ್ವಸುಂ ಚಕ್ರ ಉದೀಚ್ಯಾಮನುಮೀಶ್ವರಮ್ ॥
ಅನುವಾದ
ಬಳಿಕ ಅವನು ಆಗ್ನೇಯ ದಿಕ್ಕಿನ ರಾಜ್ಯಗಳಿಗೆ ದ್ರುಹ್ಯುವನ್ನೂ, ದಕ್ಷಿಣದ ರಾಜ್ಯಗಳಿಗೆ ಯದುವನ್ನೂ, ಪಶ್ಚಿಮದಲ್ಲಿ ತುರ್ವಸುವನ್ನೂ, ಉತ್ತರದ ರಾಜ್ಯಗಳನ್ನು ಅನು ಎಂಬುವನಿಗೆ ಹಂಚಿದನು.॥22॥
(ಶ್ಲೋಕ-23)
ಮೂಲಮ್
ಭೂಮಂಡಲಸ್ಯ ಸರ್ವಸ್ಯ ಪೂರುಮರ್ಹತ್ತಮಂ ವಿಶಾಮ್ ।
ಅಭಿಷಿಚ್ಯಾಗ್ರಜಾಂಸ್ತಸ್ಯ ವಶೇ ಸ್ಥಾಪ್ಯ ವನಂ ಯಯೌ ॥
ಅನುವಾದ
ಭೂಮಂಡಲದಲ್ಲಿರುವ ಸಮಸ್ತವಾದ ಸಂಪತ್ತನ್ನೂ ಹೊಂದಲು ಯೋಗ್ಯನಾದ ಪುರುವನ್ನು ತನ್ನ ಸಿಂಹಾಸನದಲ್ಲಿ ಕುಳ್ಳಿರಿಸಿ ರಾಜ್ಯಾಭಿಷೇಕವನ್ನು ಮಾಡಿ ಪುರುವಿನ ಅಗ್ರಜರೆಲ್ಲರನ್ನು ಅವನ ವಶಕ್ಕೆ ಒಪ್ಪಿಸಿ ಯಯಾತಿಯು ಕಾಡಿಗೆ ಹೊರಟು ಹೋದನು.॥23॥
(ಶ್ಲೋಕ-24)
ಮೂಲಮ್
ಆಸೇವಿತಂ ವರ್ಷಪೂಗಾನ್ಷಡ್ವರ್ಗಂ ವಿಷಯೇಷು ಸಃ ।
ಕ್ಷಣೇನ ಮುಮುಚೇ ನೀಡಂ ಜಾತಪಕ್ಷ ಇವ ದ್ವಿಜಃ ॥
ಅನುವಾದ
ರಾಜಾ ಯಯಾತಿಯು ಬಹಳ ವರ್ಷಗಳವರೆಗೆ ಇಂದ್ರಿಯಗಳಿಂದ ವಿಷಯಸುಖಗಳನ್ನು ಭೋಗಿಸಿದ್ದರೂ ರೆಕ್ಕೆ ಮೂಡಿದ ಹಕ್ಕಿಯು ಗೂಡನ್ನು ಬಿಟ್ಟು ಹಾರಿಹೋಗುವಂತೆ ಅವನು ಕ್ಷಣಮಾತ್ರದಲ್ಲಿ ಸರ್ವಸ್ವವನ್ನು ಪರಿತ್ಯಜಿಸಿಬಿಟ್ಟನು.॥24॥
(ಶ್ಲೋಕ-25)
ಮೂಲಮ್
ಸ ತತ್ರ ನಿರ್ಮುಕ್ತ ಸಮಸ್ತಸಂಗ
ಆತ್ಮಾನುಭೂತ್ಯಾ ವಿಧುತತ್ರಿಲಿಂಗಃ ।
ಪರೇಽಮಲೇ ಬ್ರಹ್ಮಣಿ ವಾಸುದೇವೇ
ಲೇಭೇ ಗತಿಂ ಭಾಗವತೀಂ ಪ್ರತೀತಃ ॥
ಅನುವಾದ
ವನಕ್ಕೆ ತೆರಳಿದ ರಾಜನಾದ ಯಯಾತಿಯು ಸಮಸ್ತ ಆಸಕ್ತಿಗಳಿಂದ ಮುಕ್ತನಾಗಿಬಿಟ್ಟನು. ಆತ್ಮಸಾಕ್ಷಾತ್ಕಾರದ ಮೂಲಕ ಅವನ ತ್ರಿಗುಣಮಯ ಲಿಂಗಶರೀರವು ನಾಶವಾಯಿತು. ಅವನು ಮಾಯಾಮಲದಿಂದ ರಹಿತನಾದ ಪರಬ್ರಹ್ಮ ಪರಮಾತ್ಮ ವಾಸುದೇವನಲ್ಲಿ ಒಂದಾಗಿ ಭಗವತ್ಪ್ರೇಮಿಗಳಾದ ಸಂತರಿಗೆ ಲಭ್ಯವಾಗುವ ಭಾಗವತೀ ಗತಿಯನ್ನು ಸೇರಿದನು.॥25॥
(ಶ್ಲೋಕ-26)
ಮೂಲಮ್
ಶ್ರುತ್ವಾ ಗಾಥಾಂ ದೇವಯಾನೀ ಮೇನೇ ಪ್ರಸ್ತೋಭಮಾತ್ಮನಃ ।
ಸ್ತ್ರೀಪುಂಸೋಃ ಸ್ನೇಹವೈಕ್ಲವ್ಯಾತ್ಪರಿಹಾಸಮಿವೇರಿತಮ್ ॥
ಅನುವಾದ
ದೇವಯಾನಿಯು ಯಯಾತಿಯು ಹೇಳಿದ ಕಥೆಯನ್ನು ಕೇಳಿದಾಗ, ಇವರು ನನ್ನನ್ನು ನಿವೃತ್ತಿಮಾರ್ಗಕ್ಕಾಗಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ತಿಳಿದುಕೊಂಡಳು. ಏಕೆಂದರೆ, ಸ್ತ್ರೀ-ಪುರುಷರಲ್ಲಿ ಪರಸ್ಪರ ಪ್ರೇಮದಿಂದಾಗಿ ವಿರಹವು ಇದಿರಾದಾಗ ವಿಕಲತೆ ಉಂಟಾಗುತ್ತದೆ. ಇದನ್ನು ಯೋಚಿಸಿಯೇ ಇವರು ಪರಿಹಾಸ ಮಾಡುವಂತೆ ಈ ಕಥೆಯನ್ನು ಹೇಳಿರುವರೆಂದು ಭಾವಿಸಿದಳು. ॥26॥
(ಶ್ಲೋಕ-27)
ಮೂಲಮ್
ಸಾ ಸನ್ನಿವಾಸಂ ಸುಹೃದಾಂ ಪ್ರಪಾಯಾಮಿವ ಗಚ್ಛತಾಮ್ ।
ವಿಜ್ಞಾಯೇಶ್ವರತಂತ್ರಾಣಾಂ ಮಾಯಾವಿರಚಿತಂ ಪ್ರಭೋಃ ॥
(ಶ್ಲೋಕ-28)
ಮೂಲಮ್
ಸರ್ವತ್ರ ಸಂಗಮುತ್ಸೃಜ್ಯ ಸ್ವಪ್ನೌಪಮ್ಯೇನ ಭಾರ್ಗವೀ ।
ಕೃಷ್ಣೇ ಮನಃ ಸಮಾವೇಶ್ಯ ವ್ಯಧುನೋಲ್ಲಿಂಗಮಾತ್ಮನಃ ॥
ಅನುವಾದ
ಈಶ್ವರನಿಗೆ ಅಧೀನರಾಗಿರುವ ಬಂಧುಗಳು ಅರವಟ್ಟಿಗೆಯಲ್ಲಿ ದಾರಿಹೋಕರು ಸೇರುವಂತೆ ಒಂದೆಡೆಯಲ್ಲಿ ಸೇರಿರುವರು. ಇದೆಲ್ಲವೂ ಭಗವಂತನ ಮಾಯೆಯ ಆಟವಾಗಿದ್ದು, ಸ್ವಪ್ನದಂತೆಯೇ ಇದೆ. ಹೀಗೆ ತಿಳಿದು ದೇವಯಾನಿಯೂ ಎಲ್ಲ ಪದಾರ್ಥಗಳ ಆಸಕ್ತಿಯನ್ನು ತ್ಯಜಿಸಿ ತನ್ನ ಮನಸ್ಸನ್ನು ಭಗವಾನ್ ಶ್ರೀಕೃಷ್ಣನಲ್ಲಿ ತನ್ಮಯಗೊಳಿಸಿದಳು. ಬಂಧನಕ್ಕೆ ಕಾರಣವಾದ ಲಿಂಗ ಶರೀರವನ್ನು ಪರಿತ್ಯಜಿಸಿ ಆಕೆಯು ಭಗವಂತನನ್ನು ಹೊಂದಿದಳು.॥27-28॥
(ಶ್ಲೋಕ-29)
ಮೂಲಮ್
ನಮಸ್ತುಭ್ಯಂ ಭಗವತೇ ವಾಸುದೇವಾಯ ವೇಧಸೇ ।
ಸರ್ವಭೂತಾಧಿವಾಸಾಯ ಶಾಂತಾಯ ಬೃಹತೇ ನಮಃ ॥
ಅನುವಾದ
ದೇವಯಾನಿಯು ಭಗವಂತನನ್ನು ನಮಸ್ಕರಿಸುತ್ತಾ ಪ್ರಾರ್ಥಿಸಿದಳು ಸಮಸ್ತ ಜಗತ್ತಿನ ರಚಯಿತನೂ, ಸರ್ವಾಂತರ್ಯಾಮಿಯೂ, ಎಲ್ಲರ ಆಶ್ರಯ ಸ್ವರೂಪನೂ, ಸರ್ವಶಕ್ತನೂ ಆದ ಭಗವಾನ್ ವಾಸುದೇವನಿಗೆ ವಂದಿಸುತ್ತೇನೆ. ಪರಮ ಶಾಂತ ಮತ್ತು ಅನಂತ ತತ್ತ್ವವಾದ ಪರಮಾತ್ಮನಿಗೆ ನಾನು ನಮಸ್ಕರಿಸುತ್ತೇನೆ. ॥29॥
ಅನುವಾದ (ಸಮಾಪ್ತಿಃ)
ಹತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥19॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮಸ್ಕಂಧೇ ಏಕೋನವಿಂಶೋಽಧ್ಯಾಯಃ ॥19॥