[ಹದಿನೆಂಟನೆಯ ಅಧ್ಯಾಯ]
ಭಾಗಸೂಚನಾ
ಯಯಾತಿಯ ಚರಿತ್ರೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಯತಿರ್ಯಯಾತಿಃ ಸಂಯಾತಿರಾಯತಿರ್ವಿಯತಿಃ ಕೃತಿಃ ।
ಷಡಿಮೇ ನಹುಷಸ್ಯಾಸನ್ನಿಂದ್ರಿಯಾಣೀವ ದೇಹಿನಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ದೇಹಧಾರಿಗಳಿಗೆ ಆರು ಇಂದ್ರಿಯಗಳು ಇರುವಂತೆ ನಹುಷನಿಗೆ ಯತಿ, ಯಯಾತಿ, ಸಂಯಾತಿ, ಆಯತಿ, ವಿಯತಿ ಮತ್ತು ಕೃತಿಗಳೆಂಬ ಆರುಮಂದಿ ಮಕ್ಕಳಿದ್ದರು. ॥1॥
(ಶ್ಲೋಕ-2)
ಮೂಲಮ್
ರಾಜ್ಯಂ ನೈಚ್ಛದ್ಯತಿಃ ಪಿತ್ರಾ ದತ್ತಂ ತತ್ಪರಿಣಾಮವಿತ್ ।
ಯತ್ರ ಪ್ರವಿಷ್ಟಃ ಪುರುಷ ಆತ್ಮಾನಂ ನಾವಬುಧ್ಯತೇ ॥
ಅನುವಾದ
ನಹುಷನು ತನ್ನ ಹಿರಿಯಮಗನಾದ ಯತಿಗೆ ರಾಜ್ಯವನ್ನು ಕೊಡಬೇಕೆಂದು ಬಯಸುತ್ತಿದ್ದನು. ಆದರೆ ಅವನು ಅದನ್ನು ಸ್ವೀಕರಿಸಲಿಲ್ಲ. ಏಕೆಂದರೆ, ಯತಿಯು ರಾಜ್ಯಭಾರವನ್ನು ವಹಿಸಿಕೊಂಡರೆ ಅದರಿಂದ ಉಂಟಾಗುವ ಪರಿಣಾಮವನ್ನು ಚೆನ್ನಾಗಿ ಅರಿತಿದ್ದನು. ರಾಜ್ಯಭಾರದಲ್ಲಿ ತೊಡಗಿದ ಮನುಷ್ಯನು ತನ್ನ ಆತ್ಮಸ್ವರೂಪವನ್ನು ಅರಿತುಕೊಳ್ಳಲಾರನು. ॥2॥
(ಶ್ಲೋಕ-3)
ಮೂಲಮ್
ಪಿತರಿ ಭ್ರಂಶಿತೇ ಸ್ಥಾನಾದಿಂದ್ರಾಣ್ಯಾ ಧರ್ಷಣಾದ್ವಜೈಃ ।
ಪ್ರಾಪಿತೇಽಜಗರತ್ವಂ ವೈ ಯಯಾತಿರಭವನ್ನೃಪಃ ॥
ಅನುವಾದ
ಇಂದ್ರನ ಪತ್ನಿಯಾದ ಶಚೀದೇವಿಯನ್ನು ಬಯಸಿದ ನಹುಷನನ್ನು ಬ್ರಾಹ್ಮಣರು ಇಂದ್ರಪದವಿಯಿಂದ ತಳ್ಳಿ ಬಿಟ್ಟರು ಮತ್ತು ಶಾಪವಿತ್ತು ಅಜಗರನನ್ನಾಗಿಸಿದರು. ಆಗ ಯಯಾತಿಯು ರಾಜ್ಯಸಿಂಹಾಸನವನ್ನು ಏರಿದನು. ॥3॥
(ಶ್ಲೋಕ-4)
ಮೂಲಮ್
ಚತಸೃಷ್ವಾದಿಶದ್ದಿಕ್ಷು ಭ್ರಾತಾೃನ್ಭ್ರಾತಾ ಯವೀಯಸಃ ।
ಕೃತದಾರೋ ಜುಗೋಪೋರ್ವೀಂ ಕಾವ್ಯಸ್ಯ ವೃಷಪರ್ವಣಃ ॥
ಅನುವಾದ
ಯಯಾತಿಯು ತನ್ನ ನಾಲ್ಕು ಸೋದರರನ್ನು ನಾಲ್ಕು ದಿಕ್ಕುಗಳಲ್ಲಿ ಅಧಿಪತಿಗಳನ್ನಾಗಿ ಮಾಡಿದನು. ತಾನು ಸ್ವತಃ ಶುಕ್ರಾಚಾರ್ಯರ ಪುತ್ರಿಯಾದ ದೇವಯಾನಿಯನ್ನೂ ಮತ್ತು ದೈತ್ಯರಾಜನಾದ ವೃಷಪರ್ವನ ಮಗಳಾದ ಶರ್ಮಿಷ್ಠೆಯನ್ನೂ ಪತ್ನಿಯರಾಗಿ ಪರಿಗ್ರಹಿಸಿ ಭೂಮಂಡಲವನ್ನು ಆಳುತ್ತಿದ್ದನು. ॥4॥
(ಶ್ಲೋಕ-5)
ಮೂಲಮ್
ರಾಜೋವಾಚ
ಬ್ರಹ್ಮರ್ಷಿರ್ಭಗವಾನ್ಕಾವ್ಯಃ ಕ್ಷತ್ರಬಂಧುಶ್ಚ ನಾಹುಷಃ ।
ರಾಜನ್ಯವಿಪ್ರಯೋಃ ಕಸ್ಮಾದ್ವಿವಾಹಃ ಪ್ರತಿಲೋಮಕಃ ॥
ಅನುವಾದ
ಪರೀಕ್ಷಿದ್ರಾಜನು ಕೇಳಿದನು — ಪೂಜ್ಯರೇ! ಮಹಾತ್ಮರಾದ ಶುಕ್ರಾಚಾರ್ಯರು ಬ್ರಾಹ್ಮಣರಾಗಿದ್ದರು. ಯಯಾತಿಯು ಕ್ಷತ್ರಿಯ. ಹೀಗಿದ್ದರೂ ಬ್ರಾಹ್ಮಣಕನ್ಯೆಗೂ ಕ್ಷತ್ರಿಯವರನಿಗೂ ಪ್ರತಿಲೋಮದ ವಿವಾಹವು ಹೇಗೆ ನಡೆಯಿತು? ॥5॥
(ಶ್ಲೋಕ-6)
ಮೂಲಮ್
ಶ್ರೀಶುಕ ಉವಾಚ
ಏಕದಾ ದಾನವೇಂದ್ರಸ್ಯ ಶರ್ಮಿಷ್ಠಾ ನಾಮ ಕನ್ಯಕಾ ।
ಸಖೀಸಹಸ್ರಸಂಯುಕ್ತಾ ಗುರುಪುತ್ರ್ಯಾ ಚ ಭಾಮಿನೀ ॥
(ಶ್ಲೋಕ-7)
ಮೂಲಮ್
ದೇವಯಾನ್ಯಾ ಪುರೋದ್ಯಾನೇ ಪುಷ್ಪಿತದ್ರುಮಸಂಕುಲೇ ।
ವ್ಯಚರತ್ಕಲಗೀತಾಲಿನಲಿನೀಪುಲಿನೇಽಬಲಾ ॥
ಅನುವಾದ
ಶ್ರೀಶುಕಮುನಿಗಳು ಹೇಳಿದರು — ಪರೀಕ್ಷಿತನೇ! ದಾನವ ರಾಜನಾದ ವೃಷಪರ್ವನಿಗೆ ಮಾನಿಷ್ಠೆಯಾದ ಶರ್ಮಿಷ್ಠೆ ಎಂಬ ಮಗಳಿದ್ದಳು. ಅವಳು ಒಂದುದಿನ ಶುಕ್ರಾಚಾರ್ಯರ ಪುತ್ರಿಯಾದ ದೇವಯಾನಿ ಮತ್ತು ಸಾವಿರಾರು ಸಖಿಯರೊಂದಿಗೆ ತನ್ನ ರಾಜಧಾನಿಯ ಶ್ರೇಷ್ಠ ಉದ್ಯಾನವನದಲ್ಲಿ ಅಡ್ಡಾಡುತ್ತಿದ್ದಳು. ಆ ಪುಷ್ಪೋದ್ಯಾನವನದಲ್ಲಿ ಸುಂದರವಾದ ಪುಷ್ಪಗಳಿಂದ ಕೂಡಿದ ಅನೇಕ ವೃಕ್ಷಗಳಿದ್ದವು. ಅಲ್ಲಿ ಒಂದು ಅಂದವಾದ ಸರೋವರವು ಇದ್ದು, ಅದರಲ್ಲಿ ಕಮಲಗಳು ಅರಳಿದ್ದವು. ಆ ಕಮಲಗಳಲ್ಲಿ ದುಂಬಿಗಳು ಕುಳಿತು ಸುಮಧುರವಾಗಿ ಗುಂಜಾರವ ಮಾಡುತ್ತಿದ್ದವು. ಅವುಗಳ ಇಂಚರದಿಂದ ಸರೋವರದ ದಡಗಳು ಪ್ರತಿಧ್ವನಿಸುತ್ತಿದ್ದವು. ॥6-7॥
(ಶ್ಲೋಕ-8)
ಮೂಲಮ್
ತಾ ಜಲಾಶಯಮಾಸಾದ್ಯ ಕನ್ಯಾಃ ಕಮಲಲೋಚನಾಃ ।
ತೀರೇ ನ್ಯಸ್ಯ ದುಕೂಲಾನಿ ವಿಜಹ್ರುಃ ಸಿಂಚತೀರ್ಮಿಥಃ ॥
ಅನುವಾದ
ಸರೋವರದ ಸಮೀಪಕ್ಕೆ ಸಾರಿದ ಆ ಸುಂದರಿಯರು ತಮ್ಮ-ತಮ್ಮ ವಸ್ತ್ರಗಳನ್ನು ಸರೋವರದ ದಡದಲ್ಲಿ ಬಿಚ್ಚಿಟ್ಟು ನೀರಿಗಿಳಿದು ಒಬ್ಬರು ಮತ್ತೊಬ್ಬರ ಮೇಲೆ ನೀರನ್ನೆರಚುತ್ತಾ ಜಲಕ್ರೀಡೆಯಾಡುತ್ತಿದ್ದರು. ॥8॥
(ಶ್ಲೋಕ-9)
ಮೂಲಮ್
ವೀಕ್ಷ್ಯ ವ್ರಜಂತಂ ಗಿರಿಶಂ ಸಹ ದೇವ್ಯಾ ವೃಷಸ್ಥಿತಮ್ ।
ಸಹಸೋತ್ತೀರ್ಯ ವಾಸಾಂಸಿ ಪರ್ಯಧುರ್ವ್ರೀಡಿತಾಃ ಸ್ತ್ರಿಯಃ ॥
ಅನುವಾದ
ಅದೇ ಸಮಯದಲ್ಲಿ ಅತ್ತಕಡೆಯಿಂದ ಪಾರ್ವತಿದೇವಿಯೊಂದಿಗೆ ನಂದಿಯನ್ನೇರಿ ಬರುತ್ತಿದ್ದ ಭಗವಾನ್ ಶಂಕರನನ್ನು ಆ ಕನ್ಯೆಯರು ನೋಡಿದರು. ಪರಶಿವನನ್ನು ನೋಡುತ್ತಲೇ ನಾಚಿಕೆಯಿಂದ ಮುದುಡಿಹೋದ ಲಲನೆಯರು ಮೇಲೆ ಬಂದು ಲಗುಬಗೆಯಿಂದ ವಸ್ತ್ರಗಳನ್ನು ಉಟ್ಟುಕೊಂಡರು. ॥9॥
(ಶ್ಲೋಕ-10)
ಮೂಲಮ್
ಶರ್ಮಿಷ್ಠಾಜಾನತೀ ವಾಸೋ ಗುರುಪುತ್ರ್ಯಾಃ ಸಮವ್ಯಯತ್ ।
ಸ್ವೀಯಂ ಮತ್ವಾ ಪ್ರಕುಪಿತಾ ದೇವಯಾನೀದಮಬ್ರವೀತ್ ॥
ಅನುವಾದ
ಅವಸರದ ಪರಿಸ್ಥಿತಿಯಲ್ಲಿ ಶರ್ಮಿಷ್ಠೆಯು ಅರಿಯದೆ ದೇವಯಾನಿಯ ವಸ್ತ್ರವನ್ನು ತೊಟ್ಟುಕೊಂಡಳು. ಇದರಿಂದ ದೇವಯಾನಿಯು ಕ್ರೋಧದಿಂದ ಕಿಡಿ-ಕಿಡಿಯಾಗಿ ಶರ್ಮಿಷ್ಠೆಯನ್ನು ಮೂದಲಿಸುತ್ತಾ ಹೇಳಿದಳು ॥10॥
(ಶ್ಲೋಕ-11)
ಮೂಲಮ್
ಅಹೋ ನಿರೀಕ್ಷ್ಯತಾಮಸ್ಯಾ ದಾಸ್ಯಾಃ ಕರ್ಮ ಹ್ಯಸಾಮ್ಪ್ರತಮ್ ।
ಅಸ್ಮದ್ಧಾರ್ಯಂ ಧೃತವತೀ ಶುನೀವ ಹವಿರಧ್ವರೇ ॥
ಅನುವಾದ
ಸಖಿಯರೇ! ಈ ದಾಸಿಯು ಎಂತಹ ಅನುಚಿತವಾದ ಕಾರ್ಯವನ್ನು ಮಾಡಿರುವಳೆಂಬುದನ್ನು ನೋಡಿರಲ್ಲ! ಅಯ್ಯೋ! ನಾಯಿಯು ಯಜ್ಞದ ಹವಿಸ್ಸನ್ನು ತಿಂದುಹಾಕುವಂತೆ ನಾವು ಧರಿಸಬೇಕಾದ ವಸ್ತ್ರವನ್ನು ಈಕೆ ಧರಿಸಿದ್ದಾಳಲ್ಲ! ॥11॥
(ಶ್ಲೋಕ-12)
ಮೂಲಮ್
ಯೈರಿದಂ ತಪಸಾ ಸೃಷ್ಟಂ ಮುಖಂ ಪುಂಸಃ ಪರಸ್ಯ ಯೇ ।
ಧಾರ್ಯತೇ ಯೈರಿಹ ಜ್ಯೋತಿಃ ಶಿವಃ ಪಂಥಾಶ್ಚ ದರ್ಶಿತಃ ॥
(ಶ್ಲೋಕ-13)
ಮೂಲಮ್
ಯಾನ್ವಂದನ್ತ್ಯುಪತಿಷ್ಠಂತೇ ಲೋಕನಾಥಾಃ ಸುರೇಶ್ವರಾಃ ।
ಭಗವಾನಪಿ ವಿಶ್ವಾತ್ಮಾ ಪಾವನಃ ಶ್ರೀನಿಕೇತನಃ ॥
(ಶ್ಲೋಕ-14)
ಮೂಲಮ್
ವಯಂ ತತ್ರಾಪಿ ಭೃಗವಃ ಶಿಷ್ಯೋಽಸ್ಯಾ ನಃ ಪಿತಾಸುರಃ ।
ಅಸ್ಮದ್ಧಾರ್ಯಂ ಧೃತವತೀ ಶೂದ್ರೋ ವೇದಮಿವಾಸತೀ ॥
ಅನುವಾದ
ಯಾವ ಬ್ರಾಹ್ಮಣರು ತಮ್ಮ ತಪೋಬಲದಿಂದ ಈ ಪ್ರಪಂಚವನ್ನು ಸೃಷ್ಟಿಸಿರುವರೋ, ಯಾರು ಪರಮ ಪುರುಷ ಪರಮಾತ್ಮನ ಮುಖರೂಪರಾಗಿದ್ದಾರೋ, ಯಾರು ತಮ್ಮ ಹೃದಯದಲ್ಲಿ ನಿರಂತರವಾಗಿ ಜ್ಯೋತಿರ್ಮಯ ಪರಮಾತ್ಮನನ್ನು ಧರಿಸಿಕೊಂಡಿರುವರೋ, ಯಾರು ಸಮಸ್ತ ಪ್ರಾಣಿಗಳಿಗಾಗಿ ಶ್ರೇಯಸ್ಸಿಗಾಗಿ ವೈದಿಕ ಮಾರ್ಗವನ್ನು ನಿರ್ದೇಶಿಸಿರುವರೋ, ಯಾರ ಪಾದಕಮಲಗಳಿಗೆ ಸಮಸ್ತ ಲೋಕಪಾಲರೂ, ಬ್ರಹ್ಮೇಂದ್ರಾದಿಗಳೂ ವಂದಿಸುತ್ತಾ ಅವರ ಸೇವೆಯಲ್ಲಿ ನಿರತರಾಗಿರುವರೋ, ಲಕ್ಷ್ಮೀದೇವಿಗೆ ಏಕಮಾತ್ರ ಆಶ್ರಯನಾದ ಪರಮಪಾವನ ವಿಶ್ವಾತ್ಮಾ ಭಗವಂತನೂ ಕೂಡ ವಂದಿಸಿ, ಸ್ತುತಿಸುತ್ತಿರುವನೋ, ಅಂತಹ ಬ್ರಾಹ್ಮಣರಲ್ಲಿ ನಾವು ಸರ್ವಶ್ರೇಷ್ಠ ಭೃಗುವಂಶೀಯರಾಗಿದ್ದೇವೆ. ಇವಳ ತಂದೆಯಾದರೋ ಅಸುರನಾಗಿದ್ದು, ನಮ್ಮ ಶಿಷ್ಯನಾಗಿದ್ದಾನೆ. ಹೀಗಿದ್ದರೂ ಈ ದುಷ್ಟೆಯು ಶೂದ್ರನು ವೇದವನ್ನು ಓದುವಂತೆ ನಮ್ಮ ಬಟ್ಟೆಗಳನ್ನು ಉಟ್ಟುಕೊಂಡಿರುವಳಲ್ಲ. ॥12-14॥
(ಶ್ಲೋಕ-15)
ಮೂಲಮ್
ಏವಂ ಶಪಂತೀಂ ಶರ್ಮಿಷ್ಠಾ ಗುರುಪುತ್ರೀಮಭಾಷತ ।
ರುಷಾ ಶ್ವಸಂತ್ಯುರಂಗೀವ ಧರ್ಷಿತಾ ದಷ್ಟದಚ್ಛದಾ ॥
ಅನುವಾದ
ದೇವಯಾನಿಯು ಹೀಗೆ ಬಯ್ಯತೊಡಗಿದಾಗ ಶರ್ಮಿಷ್ಠೆಯು ಕ್ರೋಧದಿಂದ ಕಿಡಿ-ಕಿಡಿಯಾಗಿ, ಏಟುತಿಂದ ಸರ್ಪಿಣಿಯು ಬುಸುಗುಟ್ಟುವಂತೆ ನಿಟ್ಟುಸಿರು ಬಿಡುತ್ತಿದ್ದಳು. ತುಟಿಯನ್ನು ಕಡಿಯುತ್ತಾ ಇಂತೆಂದಳು ॥15॥
(ಶ್ಲೋಕ-16)
ಮೂಲಮ್
ಆತ್ಮವೃತ್ತಮಮಿಜ್ಞಾಯ ಕತ್ಥಸೇ ಬಹು ಭಿಕ್ಷುಕಿ ।
ಕಿಂ ನ ಪ್ರತೀಕ್ಷಸೇಽಸ್ಮಾಕಂ ಗೃಹಾನ್ಬಲಿಭುಜೋ ಯಥಾ ॥
ಅನುವಾದ
ಎಲೆಗೆ ಭಿಕ್ಷುಕಿಯೇ! ಮೊದಲು ನಿನ್ನ ಯೋಗ್ಯತೆಯೇನೆಂಬುದನ್ನು ಅರಿತುಕೊಳ್ಳದೆ ಬಡಬಡಿಸುತ್ತಿರುವೆಯಲ್ಲ? ಕಾಗೆಗಳೂ, ನಾಯಿಗಳೂ ರೊಟ್ಟಿಯ ಚೂರಿಗಾಗಿ ನಮ್ಮ ಅರಮನೆಯ ಬಾಗಿಲಲ್ಲಿ ಕಾಯುವಂತೆ ನೀವೂ ಕೂಡ ನಮ್ಮ ಅರಮನೆಯ ಬಾಗಿಲಿಗೆ ಬಂದು ಕಾಯುತ್ತಿರಲಿಲ್ಲವೇ? ॥16॥
(ಶ್ಲೋಕ-17)
ಮೂಲಮ್
ಏವಂವಿಧೈಃ ಸುಪರುಷೈಃ ಕ್ಷಿಪ್ತ್ವಾಽಽಚಾರ್ಯಸುತಾಂ ಸತೀಮ್ ।
ಶರ್ಮಿಷ್ಠಾ ಪ್ರಾಕ್ಷಿಪತ್ಕೂಪೇ ವಾಸ ಆದಾಯ ಮನ್ಯುನಾ ॥
ಅನುವಾದ
ಶರ್ಮಿಷ್ಠೆಯು ಇಂತಹ ಕಟುನುಡಿಗಳಿಂದ ಆಚಾರ್ಯಪುತ್ರಿಯಾದ ದೇವಯಾನಿಯನ್ನು ತಿರಸ್ಕರಿಸಿ, ನಿಂದಿಸುತ್ತಾ, ಕೋಪಾವಿಷ್ಟಳಾಗಿ ದೇವಯಾನಿಯ ವಸ್ತ್ರಗಳನ್ನು ಕಿತ್ತುಕೊಂಡು ಅವಳನ್ನು ಬಾವಿಯಲ್ಲಿ ತಳ್ಳಿಬಿಟ್ಟಳು. ॥17॥
(ಶ್ಲೋಕ-18)
ಮೂಲಮ್
ತಸ್ಯಾಂ ಗತಾಯಾಂ ಸ್ವಗೃಹಂ ಯಯಾತಿರ್ಮೃಗಯಾಂ ಚರನ್ ।
ಪ್ರಾಪ್ತೋ ಯದೃಚ್ಛಯಾ ಕೂಪೇ ಜಲಾರ್ಥೀ ತಾಂ ದದರ್ಶ ಹ ॥
(ಶ್ಲೋಕ-19)
ಮೂಲಮ್
ದತ್ತ್ವಾ ಸ್ವಮುತ್ತರಂ ವಾಸಸ್ತಸ್ಯೈ ರಾಜಾ ವಿವಾಸಸೇ ।
ಗೃಹೀತ್ವಾ ಪಾಣಿನಾ ಪಾಣಿಮುಜ್ಜಹಾರ ದಯಾಪರಃ ॥
ಅನುವಾದ
ಆಗ ಅವಳು ವಸ್ತ್ರಹೀನೆಯಾದ್ದರಿಂದ ತನ್ನ ಉತ್ತರೀಯವನ್ನೇ ಆಕೆಗೆ ಇತ್ತು ದಯೆಯಿಂದ ತನ್ನ ಕೈಯಿಂದ ಆಕೆಯ ಕೈಹಿಡಿದು ಆಕೆಯನ್ನು ಮೇಲಕ್ಕೆ ಎತ್ತಿಕೊಂಡನು. ॥19॥
(ಶ್ಲೋಕ-20)
ಮೂಲಮ್
ತಂ ವೀರಮಾಹೌಶನಸೀ ಪ್ರೇಮನಿರ್ಭರಯಾ ಗಿರಾ ।
ರಾಜಂಸ್ತ್ವಯಾ ಗೃಹೀತೋ ಮೇ ಪಾಣಿಃ ಪರಪುರಂಜಯ ॥
(ಶ್ಲೋಕ-21)
ಮೂಲಮ್
ಹಸ್ತಗ್ರಾಹೋಪರೋ ಮಾ ಭೂದ್ಗೃಹೀತಾಯಾಸ್ತ್ವಯಾ ಹಿ ಮೇ ।
ಏಷ ಈಶಕೃತೋ ವೀರ ಸಂಬಂಧೋ ನೌ ನ ಪೌರುಷಃ ।
ಯದಿದಂ ಕೂಪಲಗ್ನಾಯಾ ಭವತೋ ದರ್ಶನಂ ಮಮ ॥
ಅನುವಾದ
ಅದರಿಂದ ದೇವಯಾನಿಯ ಮನಸ್ಸಿನಲ್ಲಿ ಆತನಲ್ಲಿ ಪ್ರೇಮವಂಕುರಿಸಿತು. ಪ್ರೇಮಪೂರ್ಣವಾದ ಸುಮಧುರವಾದ ಮಾತಿನಿಂದ ವೀರ ಯಯಾತಿಯಲ್ಲಿ ಹೀಗೆಂದಳು ವೀರ ಶಿರೋಮಣಿಯಾದ ರಾಜನೇ! ನೀನಿಂದು ನನ್ನ ಕೈಯನ್ನು ಹಿಡಿದುಕೊಂಡೆ. ನೀನು ಪಾಣಿಗ್ರಹಣಮಾಡಿದ ಈ ಕೈಯನ್ನು ಬೇರೆ ಯಾರೂ ಹಿಡಿಯದಿರಲಿ. ವೀರಶ್ರೇಷ್ಠನೇ! ಬಾವಿಗೆ ಬಿದ್ದದ್ದರಿಂದ ನನಗೆ ಅಚಾನಕವಾಗಿ ನಿಮ್ಮ ದರ್ಶನವಾಯಿತು. ಇದು ಭಗವಂತನೇ ಮಾಡಿದ ಸಂಬಂಧವೆಂದು ತಿಳಿಯಬೇಕು. ಇದರಲ್ಲಿ ದೈವವಲ್ಲದೆ ನಮ್ಮದಾಗಲೀ ಅಥವಾ ಬೇರೆಯಾರದ್ದಾಗಲೀ ಯಾವುದೇ ಪ್ರಯತ್ನವು ಇಲ್ಲ. ॥20-21॥
(ಶ್ಲೋಕ-22)
ಮೂಲಮ್
ನ ಬ್ರಾಹ್ಮಣೋ ಮೇ ಭವಿತಾ ಹಸ್ತಗ್ರಾಹೋ ಮಹಾಭುಜ ।
ಕಚಸ್ಯ ಬಾರ್ಹಸ್ಪತ್ಯಸ್ಯ ಶಾಪಾದ್ಯಮಶಪಂ ಪುರಾ ॥
ಅನುವಾದ
ವೀರಶ್ರೇಷ್ಠನೇ! ಮೊದಲು ನಾನು ಬೃಹಸ್ಪತಿಯ ಪುತ್ರನಾದ ಕಚನಿಗೆ ಶಾಪವಿತ್ತಿದ್ದೆ. ಅದರಿಂದ ಅವನೂ ನನ್ನನ್ನು ಶಪಿಸಿದ್ದನು. ಈ ಕಾರಣದಿಂದಲೇ ಯಾವ ಬ್ರಾಹ್ಮಣನು ನನ್ನ ಪಾಣಿಗ್ರಹಣ ಮಾಡಲಾರನು.* ॥22॥
ಟಿಪ್ಪನೀ
- ಬೃಹಸ್ಪತಿಯ ಪುತ್ರ ಕಚನು ಶುಕ್ರಾಚಾರ್ಯರ ಬಳಿ ಮೃತಸಂಜೀವನೀ ವಿದ್ಯೆಯನ್ನು ಕಲಿಯುತ್ತಿದ್ದನು. ಅಧ್ಯಯನ ಮುಗಿಸಿ ಅವನು ಮನೆಗೆ ಹೊರಟಾಗ ದೇವಯಾನಿಯು ಅವನನ್ನು ವರಿಸಲು ಬಯಸಿದಳು. ಆದರೆ ಗುರುಪುತ್ರಿಯಾದ್ದರಿಂದ ಕಚನು ಆಕೆಯ ಇಂಗಿತವನ್ನು ಸ್ವೀಕರಿಸಲಿಲ್ಲ. ಅದರಿಂದ ಬೇಸರಗೊಂಡ ದೇವಯಾನಿಯು ‘ನೀನು ಕಲಿತ ವಿದ್ಯೆಯು ನಿಷ್ಫಲವಾಗಲಿ’ ಎಂದು ಶಾಪವನ್ನು ಕೊಟ್ಟಳು. ಕಚನೂ ಕೂಡ ಆಕೆಯನ್ನು ಶಪಿಸಿದನು ‘ಯಾವ ಬ್ರಾಹ್ಮಣನೂ ನಿನ್ನನ್ನು ಪತ್ನಿಯಾಗಿ ಸ್ವೀಕರಿಸದೆ ಹೋಗಲಿ.’ ಇದರಿಂದ ದೇವಯಾನಿಗೆ ಬ್ರಾಹ್ಮಣಪತಿಯು ದೊರಕುವುದು ಶಕ್ಯವಾಗಿರಲಿಲ್ಲ.
(ಶ್ಲೋಕ-23)
ಮೂಲಮ್
ಯಯಾತಿರನಭಿಪ್ರೇತಂ ದೈವೋಪಹೃತಮಾತ್ಮನಃ ।
ಮನಸ್ತು ತದ್ಗತಂ ಬುದ್ಧ್ವಾ ಪ್ರತಿಜಗ್ರಾಹ ತದ್ವಚಃ ॥
ಅನುವಾದ
ಪ್ರತಿಲೋಮ ವಿವಾಹವು ಶಾಸ್ತ್ರಕ್ಕೆ ವಿರುದ್ಧವಾದುದರಿಂದ ಯಯಾತಿಗೆ ಈ ಸಂಬಂಧವು ಇಷ್ಟವಿರಲಿಲ್ಲ. ಆದರೆ ಪ್ರಾರಬ್ಧವೇ ನನಗೆ ಈ ಸಂಬಂಧವನ್ನು ಒದಗಿಸಿಕೊಟ್ಟಿದೆ. ಮೇಲಾಗಿ ನನ್ನ ಮನಸ್ಸೂ ಇವಳಲ್ಲಿ ಅನುರಕ್ತವಾಗಿದೆ ಎಂದು ಯೋಚಿಸಿ ಆಕೆಯ ಮಾತನ್ನು ಒಪ್ಪಿಕೊಂಡನು. ॥23॥
(ಶ್ಲೋಕ-24)
ಮೂಲಮ್
ಗತೇ ರಾಜನಿ ಸಾ ವೀರೇ ತತ್ರ ಸ್ಮ ರುದತೀ ಪಿತುಃ ।
ನ್ಯವೇದಯತ್ತತಃ ಸರ್ವಮುಕ್ತಂ ಶರ್ಮಿಷ್ಠಯಾ ಕೃತಮ್ ॥
ಅನುವಾದ
ವೀರ ಯಯಾತಿಯು ಹೊರಟುಹೋದಾಗ ದೇವಯಾನಿಯು ಅಳುತ್ತಾ-ಕರೆಯುತ್ತಾ ತನ್ನ ತಂದೆಯಾದ ಶುಕ್ರಾಚಾರ್ಯರ ಬಳಿಗೆ ಬಂದು ಶರ್ಮಿಷ್ಠೆಯು ಮಾಡಿದುದೆಲ್ಲವನ್ನು ಹೇಳಿದಳು. ॥24॥
(ಶ್ಲೋಕ-25)
ಮೂಲಮ್
ದುರ್ಮನಾ ಭಗವಾನ್ಕಾವ್ಯಃ ಪೌರೋಹಿತ್ಯಂ ವಿಗರ್ಹಯನ್ ।
ಸ್ತುವನ್ವ ತ್ತಿಂ ಚ ಕಾಪೋತೀಂ ದುಹಿತ್ರಾ ಸ ಯಯೌ ಪುರಾತ್ ॥
ಅನುವಾದ
ಶರ್ಮಿಷ್ಠೆಯ ವ್ಯವಹಾರದಿಂದ ಭಗವಾನ್ ಶುಕ್ರಾಚಾರ್ಯರ ಮನಸ್ಸಿಗೂ ಬೇಸರ ಉಂಟಾಯಿತು. ಅವರು ಪೌರೋಹಿತ್ಯ ವೃತ್ತಿಯನ್ನೇ ನಿಂದಿಸ ತೊಡಗಿದರು. ಕಾಪೋತವೃತ್ತಿಯನ್ನೇ ಶ್ಲಾಘಿಸುತ್ತಾ ಮಗಳೊಡನೆ ನಗರವನ್ನು ಬಿಟ್ಟು ಹೊರಟುಬಿಟ್ಟರು. ॥25॥
(ಶ್ಲೋಕ-26)
ಮೂಲಮ್
ವೃಷಪರ್ವಾ ತಮಾಜ್ಞಾಯ ಪ್ರತ್ಯನೀಕವಿವಕ್ಷಿತಮ್ ।
ಗುರುಂ ಪ್ರಸಾದಯನ್ಮೂರ್ಧ್ನಾ ಪಾದಯೋಃ ಪತಿತಃ ಪಥಿ ॥
ಅನುವಾದ
ವೃಷಪರ್ವನಿಗೆ ಇದು ಗೊತ್ತಾಗುತ್ತಲೇ ಅವನ ಮನಸ್ಸಿನಲ್ಲಿ ಗುರುಗಳು ಎಲ್ಲಾದರೂ ಶತ್ರುಗಳ ವಿಜಯವನ್ನು ಮಾಡಿಸುವರೋ, ಅಥವಾ ನನಗೆ ಶಾಪಕೊಡಬಹುದೇ ಎಂದು ಶಂಕಿಸಿ ಅವರನ್ನು ಒಲಿಸಿಕೊಳ್ಳಲು ಅವರ ಹಿಂದೆಯೇ ಹೋಗಿ ದಾರಿಯಲ್ಲೇ ಚರಣಗಳಲ್ಲಿ ಶಿರವನ್ನಿಟ್ಟು ವಂದಿಸಿದನು. ॥26॥
(ಶ್ಲೋಕ-27)
ಮೂಲಮ್
ಕ್ಷಣಾರ್ಧಮನ್ಯುರ್ಭಗವಾನ್ ಶಿಷ್ಯಂ ವ್ಯಾಚಷ್ಟ ಭಾರ್ಗವಃ ।
ಕಾಮೋಽಸ್ಯಾಃ ಕ್ರಿಯತಾಂ ರಾಜನ್ನೈನಾಂ ತ್ಯಕ್ತುಮಿಹೋತ್ಸಹೇ ॥
ಅನುವಾದ
ಭಗವಾನ್ ಶುಕ್ರಾಚಾರ್ಯರ ಕ್ರೋಧವಾದರೋ ಕ್ಷಣಮಾತ್ರವಿತ್ತು. ಅವರು ವೃಷಪರ್ವನಿಗೆ ಹೇಳಿದರು ರಾಜನೇ! ನಾನು ನನ್ನ ಪುತ್ರಿ ದೇವಯಾನಿಯನ್ನು ಬಿಟ್ಟಿರಲಾರೆನು. ಅದಕ್ಕಾಗಿ ಆಕೆಯ ಇಚ್ಛೆಯನ್ನು ನೀನು ಪೂರ್ಣಗೊಳಿಸು. ಹಾಗಾದರೆ ನನಗೆ ಮರಳಿ ಬರುವುದರಲ್ಲಿ ಯಾವ ಅಭ್ಯಂತರವೂ ಇಲ್ಲ. ॥27॥
(ಶ್ಲೋಕ-28)
ಮೂಲಮ್
ತಥೇತ್ಯವಸ್ಥಿತೇ ಪ್ರಾಹ ದೇವಯಾನೀ ಮನೋಗತಮ್ ।
ಪಿತ್ರಾ ದತ್ತಾ ಯತೋ ಯಾಸ್ಯೇ ಸಾನುಗಾ ಯಾತು ಮಾಮನು ॥
ಅನುವಾದ
ವೃಷಪರ್ವನು ‘ಹಾಗೆಯೇ ಆಗಲಿ’ ಎಂದು ಹೇಳಿ ಅವರ ಆಜ್ಞೆಯನ್ನು ಸ್ವೀಕರಿಸಿದಾಗ ದೇವಯಾನಿಯು ತನ್ನ ಮನಸ್ಸಿನಲ್ಲಿದ್ದುದನ್ನು ಹೇಳಿದಳು ‘ತಂದೆಯೇ! ನನ್ನನ್ನು ಯಾರಿಗೆ ಮದುವೆಮಾಡಿ ಕೊಡುವೆಯೋ ಹಾಗೂ ನಾನು ಎಲ್ಲಿಗೆ ಹೋಗುವೆನೋ, ಶರ್ಮಿಷ್ಠೆಯೂ ತನ್ನ ಸಖಿಯರೊಂದಿಗೆ ನನ್ನ ಸೇವೆಗಾಗಿ ಅಲ್ಲಿಗೆ ಬರಬೇಕು.’’ ॥28॥
(ಶ್ಲೋಕ-29)
ಮೂಲಮ್
ಸ್ವಾನಾಂ ತತ್ಸಂಕಟಂ ವೀಕ್ಷ್ಯ ತದರ್ಥಸ್ಯ ಚ ಗೌರವಮ್ ।
ದೇವಯಾನೀಂ ಪರ್ಯಚರತ್ ಸ್ತ್ರೀಸಹಸ್ರೇಣ ದಾಸವತ್ ॥
ಅನುವಾದ
ಶರ್ಮಿಷ್ಠೆಯು ತನ್ನ ಪರಿವಾರದವರ ಸಂಕಟವನ್ನೂ, ಅವರ ಕಾರ್ಯ ಗೌರವವನ್ನೂ ಕಂಡು ದೇವಯಾನಿಯ ಮಾತನ್ನು ಸ್ವೀಕರಿಸಿದಳು. ಆಕೆಯು ಒಂದು ಸಾವಿರ ಸಖಿಯರೊಂದಿಗೆ ದಾಸಿಯಂತೆ ದೇವಯಾನಿಯ ಸೇವೆಯಲ್ಲಿ ಇರತೊಡಗಿದಳು. ॥29॥
ಮೂಲಮ್
(ಶ್ಲೋಕ-30)
ನಾಹುಷಾಯ ಸುತಾಂ ದತ್ತ್ವಾ ಸಹ ಶರ್ಮಿಷ್ಠಯೋಶನಾಃ ।
ತಮಾಹ ರಾಜನ್ ಶರ್ಮಿಷ್ಠಾಮಾಧಾಸ್ತಲ್ಪೇ ನ ಕರ್ಹಿಚಿತ್ ॥
ಅನುವಾದ
ಶುಕ್ರಾಚಾರ್ಯರು ದೇವಯಾನಿಯ ವಿವಾಹವನ್ನು ಯಯಾತಿಯೊಂದಿಗೆ ನಡೆಸಿದರು ಮತ್ತು ಶರ್ಮಿಷ್ಠೆಯನ್ನು ದಾಸಿಯ ರೂಪದಲ್ಲಿ ಒಪ್ಪಿಸಿ ಹೇಳಿದರು ರಾಜನೇ! ಈ ಶರ್ಮಿಷ್ಠೆಯನ್ನು ನಿನ್ನ ಹಾಸಿಗೆಗೆ ಎಂದೂ ಬರಲು ಬಿಡಬಾರದು. ॥30॥
ಮೂಲಮ್
(ಶ್ಲೋಕ-31)
ವಿಲೋಕ್ಯೌಶನಸೀಂ ರಾಜನ್ ಶರ್ಮಿಷ್ಠಾ ಸಪ್ರಜಾಂ ಕ್ವಚಿತ್ ।
ತಮೇವ ವವ್ರೇ ರಹಸಿ ಸಖ್ಯಾಃ ಪತಿಮೃತೌ ಸತೀ ॥
ಅನುವಾದ
ಪರೀಕ್ಷಿತನೇ! ಕೆಲದಿವಸಗಳು ಕಳೆದನಂತರ ದೇವಯಾನಿಯು ಪುತ್ರವತಿಯಾದಳು. ಅವಳು ಪುತ್ರವತಿಯಾದುದನ್ನು ನೋಡಿ ಶರ್ಮಿಷ್ಠೆಯು ತನ್ನ ಋತುಕಾಲದಲ್ಲಿ ದೇವಯಾನಿಯ ಪತಿಯೊಡನೆ ಏಕಾಂತದಲ್ಲಿ ಸಮಾಗಮವನ್ನು ಯಾಚಿಸಿದಳು. ॥31॥
(ಶ್ಲೋಕ-32)
ಮೂಲಮ್
ರಾಜಪುತ್ರ್ಯಾರ್ಥಿತೋಪತ್ಯೇ ಧರ್ಮಂ ಚಾವೇಕ್ಷ್ಯ ಧರ್ಮವಿತ್ ।
ಸ್ಮರಞ್ಛುಕ್ರವಚಃ ಕಾಲೇ ದಿಷ್ಟಮೇವಾಭ್ಯಪದ್ಯತ ॥
ಅನುವಾದ
ಶರ್ಮಿಷ್ಠೆಯ ಪುತ್ರಪ್ರಾಪ್ತಿಯ ಪ್ರಾರ್ಥನೆಯು ಧರ್ಮ ಸಂಗತವಾಗಿದೆ ಎಂದು ತಿಳಿದು ಧರ್ಮಜ್ಞನಾದ ಯಯಾತಿಯು ಶುಕ್ರಾಚಾರ್ಯರ ಮಾತು ನೆನಪಿನಲ್ಲಿದ್ದರೂ ಸಕಾಲದಲ್ಲಿ ಪ್ರಾರಬ್ಧಕ್ಕನುಸಾರ ಏನಾಗಬೇಕೋ ಅದು ಆಗಿಯೇ ತೀರುವುದು ಎಂದು ನಿಶ್ಚಯಿಸಿದನು. ॥32॥
(ಶ್ಲೋಕ-33)
ಮೂಲಮ್
ಯದುಂ ಚ ತುರ್ವಸುಂ ಚೈವ ದೇವಯಾನೀ ವ್ಯಜಾಯತ ।
ದ್ರುಹ್ಯುಂ ಚಾನುಂ ಚ ಪೂರುಂ ಚ ಶರ್ಮಿಷ್ಠಾ ವಾರ್ಷಪರ್ವಣೀ ॥
ಅನುವಾದ
ದೇವಯಾನಿಗೆ ಯದು ಮತ್ತು ತುರ್ವಸು ಎಂಬ ಎರಡು ಮಕ್ಕಳಾದರು. ಹಾಗೆಯೇ ವೃಷಪರ್ವನ ಮಗಳಾದ ಶರ್ಮಿಷ್ಠೆಗೆ ದ್ರಹ್ಯು, ಅನು, ಪುರು ಎಂಬ ಮೂವರು ಪುತ್ರರಾದರು. ॥33॥
(ಶ್ಲೋಕ-34)
ಮೂಲಮ್
ಗರ್ಭಸಂಭವಮಾಸುರ್ಯಾ ಭರ್ತುರ್ವಿಜ್ಞಾಯ ಮಾನಿನೀ ।
ದೇವಯಾನೀ ಪಿತುರ್ಗೇಹಂ ಯಯೌ ಕ್ರೋಧವಿಮೂರ್ಚ್ಛಿತಾ ॥
ಅನುವಾದ
ಮಾನಿಷ್ಠೆಯಾದ ದೇವಯಾನಿಗೆ ತನ್ನಂತೆಯೇ ಶರ್ಮಿಷ್ಠೆಗೂ ತನ್ನ ಪತಿಯಿಂದಲೇ ಮಕ್ಕಳಾಗುತ್ತಿವೆ ಎಂಬುದನ್ನು ಅರಿತಾಗ ಅವಳು ಕ್ರೋಧಗೊಂಡು ತನ್ನ ತಂದೆಯ ಮನೆಗೆ ಹೊರಟು ಹೋದಳು. ॥34॥
(ಶ್ಲೋಕ-35)
ಮೂಲಮ್
ಪ್ರಿಯಾಮನುಗತಃ ಕಾಮೀ ವಚೋಭಿರುಪಮಂತ್ರಯನ್ ।
ನ ಪ್ರಸಾದಯಿತುಂ ಶೇಕೇ ಪಾದಸಂವಾಹನಾದಿಭಿಃ ॥
ಅನುವಾದ
ಕಾಮಿಯಾದ ಯಯಾತಿಯು ದೇವಯಾನಿಯನ್ನು ಒಲಿಸಿಕೊಳ್ಳಲು ಸುಮಧುರ ಮಾತುಗಳಿಂದ, ನಯ ವಿನಯದಿಂದ ಪ್ರಯತ್ನಿಸಿದರೂ ಯಾವ ಪ್ರಯೋಜನವೂ ಆಗಲಿಲ್ಲ. ಅವಳ ಕಾಲುಗಳನ್ನೊತ್ತಿ ಸೇವೆ ಮಾಡಿದರೂ, ಅವಳ ಹಿಂದೆ-ಹಿಂದೆಯೇ ಹೋದರೂ ಪ್ರಯೋಜನವಾಗಲಿಲ್ಲ. ॥35॥
(ಶ್ಲೋಕ-36)
ಮೂಲಮ್
ಶುಕ್ರಸ್ತಮಾಹ ಕುಪಿತಃ ಸೀಕಾಮಾನೃತಪೂರುಷ ।
ತ್ವಾಂ ಜರಾ ವಿಶತಾಂ ಮಂದ ವಿರೂಪಕರಣೀ ನೃಣಾಮ್ ॥
ಅನುವಾದ
ಶುಕ್ರಾಚಾರ್ಯರೂ ಕೂಡ ಕೋಪಗೊಂಡು ಯಯಾತಿಗೆ ಹೇಳಿದರು ‘ನೀನು ಅತ್ಯಂತ ಸ್ತ್ರೀಲಂಪಟನಾಗಿರುವೆ. ಮಂದಬುದ್ಧಿಯವನೂ, ಸುಳ್ಳುಗಾರನೂ ಆಗಿರುವೆ. ಮನುಷ್ಯರನ್ನು ಕುರೂಪಗೊಳಿಸುವಂತಹ ಮುದಿತನವು ನಿನಗೆ ಉಂಟಾಗಲಿ ನಡೆ ಇಲ್ಲಿಂದ’ ಎಂದು ಶಪಿಸಿದರು. ॥36॥
(ಶ್ಲೋಕ-37)
ಮೂಲಮ್ (ವಾಚನಮ್)
ಯಯಾತಿರುವಾಚ
ಮೂಲಮ್
ಅತೃಪ್ತೋಽಸ್ಮ್ಯದ್ಯ ಕಾಮಾನಾಂ ಬ್ರಹ್ಮನ್ದುಹಿತರಿ ಸ್ಮ ತೇ ।
ವ್ಯತ್ಯಸ್ಯತಾಂ ಯಥಾಕಾಮಂ ವಯಸಾ ಯೋಽಭಿಧಾಸ್ಯತಿ ॥
ಅನುವಾದ
ಯಯಾತಿಯು ಹೇಳಿದನು — ಬ್ರಾಹ್ಮಣಶ್ರೇಷ್ಠರೇ! ನಿಮ್ಮ ಮಗಳೊಡನೆ ವಿಷಯಭೋಗಗಳನ್ನು ಅನುಭವಿಸುತ್ತಿರುವ ನನಗೆ ಇನ್ನೂ ತೃಪ್ತಿಯೇ ಆಗಲಿಲ್ಲ. ಈ ಶಾಪದಿಂದಲಾದರೋ ನಿಮ್ಮ ಮಗಳಿಗೂ ಅನಿಷ್ಟವೇ ಪರಿಣಮಿಸುತ್ತದೆ. ಆಗ ಶುಕ್ರಾಚಾರ್ಯರಿಗೂ ಯಯಾತಿಯ ಮಾತು ಸರಿ ಎನಿಸಿತು. ಶಾಪದಲ್ಲಿ ಸ್ವಲ್ಪ ತಿದ್ದುಪಡಿ ಮಾಡಿ ಹೇಳಿದರು ಸರಿ ಹೋಗು. ಸಂತೋಷದಿಂದ ನಿನಗೆ ತನ್ನ ತಾರುಣ್ಯವನ್ನು ಯಾರಾದರೂ ಕೊಟ್ಟರೆ ಅದನ್ನು ಪಡೆದು ಈ ವೃದ್ಧಾಪ್ಯವನ್ನು ಅವನಿಗೆ ಕೊಡಬಹುದು. ॥37॥
(ಶ್ಲೋಕ-38)
ಮೂಲಮ್
ಇತಿ ಲಬ್ಧವ್ಯವಸ್ಥಾನಃ ಪುತ್ರಂ ಜ್ಯೇಷ್ಠ ಮವೋಚತ ।
ಯದೋ ತಾತ ಪ್ರತೀಚ್ಛೇಮಾಂ ಜರಾಂ ದೇಹಿ ನಿಜಂ ವಯಃ ॥
(ಶ್ಲೋಕ-39)
ಮೂಲಮ್
ಮಾತಾಮಹಕೃತಾಂ ವತ್ಸ ನ ತೃಪ್ತೋ ವಿಷಯೇಷ್ವಹಮ್ ।
ವಯಸಾ ಭವದೀಯೇನ ರಂಸ್ಯೇ ಕತಿಪಯಾಃ ಸಮಾಃ ॥
ಅನುವಾದ
ಶುಕ್ರಾಚಾರ್ಯರು ಇಂತಹ ವ್ಯವಸ್ಥೆ ಮಾಡಿದಾಗ ಯಯಾತಿಯು ತನ್ನ ರಾಜಧಾನಿಗೆ ಬಂದು ತನ್ನ ಹಿರಿಯಪುತ್ರನಾದ ಯದುವಿನಲ್ಲಿ ಮಗೂ! ನೀನು ನಿನ್ನ ಯೌವನವನ್ನು ನನಗೆ ಕೊಟ್ಟು, ನಿನ್ನ ಅಜ್ಜನು ಕೊಟ್ಟಿರುವ ಈ ವೃದ್ಧಾಪ್ಯವನ್ನು ನೀನು ಪಡೆ. ಏಕೆಂದರೆ, ಪ್ರಿಯಪುತ್ರನೇ! ನಾನು ಇನ್ನೂ ವಿಷಯಗಳಿಂದ ತೃಪ್ತನಾಗಲಿಲ್ಲ. ಅದಕ್ಕಾಗಿ ನಿನ್ನ ಯೌವನವನ್ನು ಪಡೆದು ನಾನು ಕೆಲವು ವರ್ಷಗಳವರೆಗೆ ಇನ್ನೂ ಆನಂದವನ್ನು ಅನುಭವಿಸುವೆನು. ॥38-39॥
(ಶ್ಲೋಕ-40)
ಮೂಲಮ್ (ವಾಚನಮ್)
ಯದುರುವಾಚ
ಮೂಲಮ್
ನೋತ್ಸಹೇ ಜರಸಾ ಸ್ಥಾತುಮಂತರಾ ಪ್ರಾಪ್ತಯಾ ತವ ।
ಅವಿದಿತ್ವಾ ಸುಖಂ ಗ್ರಾಮ್ಯಂ ವೈತೃಷ್ಣ್ಯಂ ನೈತಿ ಪೂರುಷಃ ॥
ಅನುವಾದ
ಯದುವು ಹೇಳಿದನು — ತಂದೆಯೇ! ಅಕಾಲದಲ್ಲಿ ಪ್ರಾಪ್ತವಾದ ನಿನ್ನ ಮುದಿತನವನ್ನು ಪಡೆದು ನಾನು ಬದುಕಲು ಬಯಸುವುದಿಲ್ಲ. ಏಕೆಂದರೆ, ವಿಷಯಸುಖಗಳನ್ನು ಅನುಭವಿಸದೆ ಯಾವ ಮನುಷ್ಯನೂ ವೈರಾಗ್ಯವನ್ನು ಹೊಂದಲಾರನು.॥40॥
(ಶ್ಲೋಕ-41)
ಮೂಲಮ್
ತುರ್ವಸುಶ್ಚೋದಿತಃ ಪಿತ್ರಾ ದ್ರುಹ್ಯುಶ್ಚಾನುಶ್ಚ ಭಾರತ ।
ಪ್ರತ್ಯಾಚಖ್ಯುರಧರ್ಮಜ್ಞಾ ಹ್ಯನಿತ್ಯೇ ನಿತ್ಯಬುದ್ಧಯಃ ॥
ಅನುವಾದ
ಪರೀಕ್ಷಿತನೇ! ಹೀಗೆಯೇ ತುರ್ವಸು, ದ್ರಹ್ಯು ಮತ್ತು ಅನು ಇವರೂ ತಂದೆಯ ಆಜ್ಞೆಯನ್ನು ತಿರಸ್ಕರಿಸಿದರು. ಅವರೆಲ್ಲರೂ ಧರ್ಮವನ್ನು ತಿಳಿದವರಾಗಿರಲಿಲ್ಲ ಮತ್ತು ಅನಿತ್ಯವಾದ ಶರೀರವನ್ನೇ ಶಾಶ್ವತವೆಂದು ತಿಳಿದಿದ್ದರು. ॥41॥
(ಶ್ಲೋಕ-42)
ಮೂಲಮ್
ಅಪೃಚ್ಛತ್ತನಯಂ ಪೂರುಂ ವಯಸೋನಂ ಗುಣಾಧಿಕಮ್ ।
ನ ತ್ವಮಗ್ರಜವದ್ವತ್ಸ ಮಾಂ ಪ್ರತ್ಯಾಖ್ಯಾತುಮರ್ಹಸಿ ॥
ಅನುವಾದ
ಈಗ ಯಯಾತಿಯು ವಯಸ್ಸಿನಲ್ಲಿ ಅತಿ ಸಣ್ಣವನಾಗಿದ್ದರೂ ಗುಣಗಳಲ್ಲಿ ದೊಡ್ಡವನಾಗಿದ್ದ ತನ್ನ ಪುತ್ರ ಪುರುವನ್ನು ಕರೆದು ಕೇಳಿದನು ಮಗು! ನೀನು ನಿನ್ನ ಅಣ್ಣಂದಿರಂತೆ ನನ್ನ ಮಾತನ್ನು ತಿರಸ್ಕರಿಸಬೇಡ. ನನ್ನ ಮುದಿತನವನ್ನು ಸ್ವಲ್ಪ ಕಾಲದವರೆಗೆ ಪಡೆದು ನಿನ್ನ ಯೌವನವನ್ನು ನನಗೆ ಕೊಡು. ॥42॥
(ಶ್ಲೋಕ-43)
ಮೂಲಮ್ (ವಾಚನಮ್)
ಪೂರುರುವಾಚ
ಮೂಲಮ್
ಕೋ ನು ಲೋಕೇ ಮನುಷ್ಯೇಂದ್ರ ಪಿತುರಾತ್ಮಕೃತಃ ಪುಮಾನ್ ।
ಪ್ರತಿಕರ್ತುಂ ಕ್ಷಮೋ ಯಸ್ಯ ಪ್ರಸಾದಾದ್ವಿಂದತೇ ಪರಮ್ ॥
ಅನುವಾದ
ಪುರುವು ಹೇಳಿದನು — ತಂದೆಯೇ! ಪಿತೃವಿನ ಕೃಪೆಯಿಂದಲೇ ಮನುಷ್ಯನಿಗೆ ಪರಮಪದವು ಲಭಿಸುವುದು. ವಾಸ್ತವದಲ್ಲಿ ಪುತ್ರನ ಶರೀರವು ತಂದೆಯೇ ಕೊಟ್ಟಿದ್ದಾಗಿದೆ. ಇಂತಹ ಸ್ಥಿತಿಯಲ್ಲಿ ಪ್ರಪಂಚದಲ್ಲಿ ತಂದೆಯ ಉಪಕಾರವನ್ನು ತೀರಿಸಬಲ್ಲವನು ಯಾವನು ತಾನೇ ಇರುವನು? ॥43॥
(ಶ್ಲೋಕ-44)
ಮೂಲಮ್
ಉತ್ತಮಶ್ಚಿಂತಿತಂ ಕುರ್ಯಾತ್ಪ್ರೋಕ್ತಕಾರೀ ತು ಮಧ್ಯಮಃ ।
ಅಧಮೋಶ್ರದ್ಧಯಾ ಕುರ್ಯಾದಕರ್ತೋಚ್ಚರಿತಂ ಪಿತುಃ ॥
ಅನುವಾದ
ತಂದೆಯ ಮನಸ್ಸಿನ ಮಾತನ್ನು ಹೇಳದೆಯೇ ನಡೆಸುವವನೇ ಉತ್ತಮ ಪುತ್ರನಾಗಿರುವನು. ಹೇಳಿದ ಮೇಲೆ ಶ್ರದ್ಧೆಯಿಂದ ಆಜ್ಞೆಯನ್ನು ಪಾಲಿಸುವವನು ಮಧ್ಯಮನು. ಆಜ್ಞೆಪಡೆದರೂ ಅಶ್ರದ್ಧೆಯಿಂದ ಅದನ್ನು ಪಾಲಿಸುವ ಪುತ್ರನು ಅಧಮನು. ಯಾವ ರೀತಿಯಿಂದಲೂ ತಂದೆಯ ಆಜ್ಞೆಯನ್ನು ಪಾಲಿಸದಿರುವವನನ್ನು ಪುತ್ರನೆಂದು ಹೇಳುವುದೂ ತಪ್ಪೇ. ಅವನಾದರೋ ತಂದೆಯ ಮಲದಂತೆ ಆಗಿರುವನು.॥44॥
(ಶ್ಲೋಕ-45)
ಮೂಲಮ್
ಇತಿ ಪ್ರಮುದಿತಃ ಪೂರುಃ ಪ್ರತ್ಯಗೃಹ್ಣಾಜ್ಜರಾಂ ಪಿತುಃ ।
ಸೋಽಪಿ ತದ್ವಯಸಾ ಕಾಮಾನ್ಯಥಾವಜ್ಜುಜುಷೇ ನೃಪ ॥
ಅನುವಾದ
ಪರೀಕ್ಷಿತನೇ! ಹೀಗೆ ಹೇಳಿ ಪುರುವು ಬಹಳ ಆನಂದದಿಂದ ತಂದೆಯ ಮುದಿತನವನ್ನು ಸ್ವೀಕರಿಸಿದನು. ಯಯಾತಿಯೂ ಮಗನ ಯೌವನವನ್ನು ಪಡೆದು ಹಿಂದಿನಂತೆ ವಿಷಯಸೇವನೆಯಲ್ಲಿ ತೊಡಗಿದನು. ॥45॥
(ಶ್ಲೋಕ-46)
ಮೂಲಮ್
ಸಪ್ತದ್ವೀಪಪತಿಃ ಸಮ್ಯಕ್ಪಿತೃವತ್ಪಾಲಯನ್ ಪ್ರಜಾಃ ।
ಯಥೋಪಜೋಷಂ ವಿಷಯಾಞ್ಜುಜುಷೇಽವ್ಯಾಹತೇಂದ್ರಿಯಃ ॥
ಅನುವಾದ
ಯಯಾತಿಯು ಏಳು ದ್ವೀಪಗಳಿಗೂ ಸಾಮ್ರಾಟನಾಗಿದ್ದನು. ತಂದೆಯಂತೆಯೇ ಪ್ರಜಾಪಾಲನೆಯನ್ನು ಚೆನ್ನಾಗಿಯೇ ಮಾಡಿದ್ದನು. ಅವನ ಇಂದ್ರಿಯಗಳಲ್ಲಿ ಪರಿಪೂರ್ಣವಾದ ಶಕ್ತಿ ತುಂಬಿತ್ತು. ಅವನು ಯಥಾವಕಾಶದಲ್ಲಿ ದೊರೆತ ವಿಷಯಗಳನ್ನು ಯಥೇಚ್ಛವಾಗಿ ಅನುಭವಿಸುತ್ತಿದ್ದನು.॥46॥
(ಶ್ಲೋಕ-47)
ಮೂಲಮ್
ದೇವಯಾನ್ಯಪ್ಯನುದಿನಂ ಮನೋವಾಗ್ದೇಹವಸ್ತುಭಿಃ ।
ಪ್ರೇಯಸಃ ಪರಮಾಂ ಪ್ರೀತಿಮುವಾಹ ಪ್ರೇಯಸೀ ರಹಃ ॥
ಅನುವಾದ
ಅವನ ಪ್ರಿಯತಮೆಯಾದ ದೇವಯಾನಿಯೂ ತನ್ನ ಪ್ರಿಯತಮನಾದ ಯಯಾತಿಯನ್ನು ಮನ, ವಚನ, ಶರೀರದಿಂದ ಮತ್ತು ವಸ್ತುಗಳಿಂದ ಪ್ರತಿದಿನವೂ ಸಂತೋಷ ಪಡಿಸುತ್ತಾ ಏಕಾಂತದಲ್ಲಿಯೂ ಸುಖವನ್ನು ನೀಡುತ್ತಿದ್ದಳು. ॥47॥
(ಶ್ಲೋಕ-48)
ಮೂಲಮ್
ಅಯಜದ್ಯಜ್ಞಪುರುಷಂ ಕ್ರತುಭಿರ್ಭೂರಿದಕ್ಷಿಣೈಃ ।
ಸರ್ವದೇವಮಯಂ ದೇವಂ ಸರ್ವವೇದಮಯಂ ಹರಿಮ್ ॥
ಅನುವಾದ
ಸಾಮ್ರಾಟ ಯಯಾತಿಯು ವೇದಪ್ರತಿಪಾದ್ಯನಾದ ಸರ್ವದೇವಸ್ವರೂಪನಾದ ಯಜ್ಞಪುರುಷ ಭಗವಾನ್ ಶ್ರೀಹರಿಯನ್ನು ಅನೇಕ ಮಹಾ-ಮಹಾ ದಕ್ಷಿಣೆಗಳುಳ್ಳ ಯಜ್ಞಗಳ ಮೂಲಕ ಆರಾಧಿಸಿದನು. ॥48॥
(ಶ್ಲೋಕ-49)
ಮೂಲಮ್
ಯಸ್ಮಿನ್ನಿದಂ ವಿರಚಿತಂ ವ್ಯೋಮ್ನೀವ ಜಲದಾವಲಿಃ
ನಾನೇವ ಭಾತಿ ನಾಭಾತಿ ಸ್ವಪ್ನಮಾಯಾ ಮನೋರಥಃ ॥
ಅನುವಾದ
ಕೆಲವೊಮ್ಮೆ ಆಕಾಶದಲ್ಲಿ ದಟ್ಟವಾದ ಮೋಡಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಕಾಣದೆ ನಿರ್ಮಲವಾಗಿರುವಂತೆಯೇ ಪರಮಾತ್ಮನ ಸ್ವರೂಪದಲ್ಲಿ ಈ ಜಗತ್ತು ಸ್ವಪ್ನ, ಮಾಯೆ ಮತ್ತು ಮನೋರಾಜ್ಯದಂತೆ ಕಲ್ಪಿತವಾಗಿದೆ. ಇದು ಕೆಲವೊಮ್ಮೆ ನಾಮ-ರೂಪಗಳಿಂದ ಕಾಣಿಸಿಕೊಳ್ಳುತ್ತದೆ, ಕೆಲವೊಮ್ಮೆ ಕಾಣಿಸುವುದೂ ಇಲ್ಲ. ॥49॥
(ಶ್ಲೋಕ-50)
ಮೂಲಮ್
ತಮೇವ ಹೃದಿ ವಿನ್ಯಸ್ಯ ವಾಸುದೇವಂ ಗುಹಾಶಯಮ್ ।
ನಾರಾಯಣಮಣೀಯಾಂಸಂ ನಿರಾಶೀರಯಜತ್ಪ್ರಭುಮ್ ॥
ಅನುವಾದ
ಆ ಪರಮಾತ್ಮನು ಎಲ್ಲರ ಹೃದಯದಲ್ಲಿ ವಿರಾಜಮಾನನಾಗಿದ್ದಾನೆ. ಅವನ ಸ್ವರೂಪವು ಸೂಕ್ಷ್ಮಕ್ಕೂ ಸೂಕ್ಷ್ಮವಾಗಿದೆ. ಅಂತಹ ಸರ್ವಶಕ್ತನಾದ ಸರ್ವವ್ಯಾಪೀ ಭಗವಾನ್ನಾರಾಯಣನನ್ನೇ ತನ್ನ ಹೃದಯದಲ್ಲಿ ನೆಲೆಗೊಳಿಸಿ ಯಯಾತಿಯು ನಿಷ್ಕಾಮ ಭಾವದಿಂದ ಅವನನ್ನು ಆರಾಧಿಸಿದನು. ॥50॥
(ಶ್ಲೋಕ-51)
ಮೂಲಮ್
ಏವಂ ವರ್ಷಸಹಸ್ರಾಣಿ ಮನಃಷಷ್ಠೈರ್ಮನಃಸುಖಮ್ ।
ವಿದಧಾನೋಽಪಿ ನಾತೃಪ್ಯತ್ಸಾರ್ವಭೌಮಃ ಕದಿಂದ್ರಿಯೈಃ ॥
ಅನುವಾದ
ಈ ಪ್ರಕಾರವಾಗಿ ಅವನು ಒಂದುಸಾವಿರ ವರ್ಷಗಳವರೆಗೆ ತನ್ನ ಉಚ್ಛಂಖಲ ಇಂದ್ರಿಯಗಳೊಂದಿಗೆ ಮನಸ್ಸನ್ನು ಜೋಡಿಸಿ ಅದಕ್ಕೆ ಪ್ರಿಯವಾದ ವಿಷಯಗಳನ್ನು ಅನುಭವಿಸಿದನು. ಇಷ್ಟಾದರೂ ಚಕ್ರವರ್ತಿ ಯಯಾತಿಗೆ ಭೋಗಗಳಿಂದ ತೃಪ್ತಿಯಾಗಲೇ ಇಲ್ಲ. ॥51॥
ಅನುವಾದ (ಸಮಾಪ್ತಿಃ)
ಹದಿನೆಂಟನೆಯ ಅಧ್ಯಾಯವು ಮುಗಿಯಿತು. ॥18॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ಅಷ್ಟಾದಶೋಽಧ್ಯಾಯಃ ॥18॥