[ಹದಿನೈದನೆಯ ಅಧ್ಯಾಯ]
ಭಾಗಸೂಚನಾ
ಋಚೀಕ - ಜಮದಗ್ನಿ ಮತ್ತು ಪರಶುರಾಮರ ಚರಿತ್ರೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಐಲಸ್ಯ ಚೋರ್ವಶೀಗರ್ಭಾತ್ ಷಡಾಸನ್ನಾತ್ಮಜಾ ನೃಪ ।
ಆಯುಃ ಶ್ರುತಾಯುಃ ಸತ್ಯಾಯೂ ರಯೋಽಥ ವಿಜಯೋ ಜಯಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಊರ್ವಶಿಯ ಗರ್ಭದಿಂದ ಪುರೂರವನಿಗೆ ಆಯು, ಶ್ರುತಾಯು, ಸತ್ಯಾಯು, ರಯ, ವಿಜಯ ಮತ್ತು ಜಯ ಎಂಬ ಆರು ಪುತ್ರರು ಹುಟ್ಟಿದರು. ॥1॥
(ಶ್ಲೋಕ-2)
ಮೂಲಮ್
ಶ್ರುತಾಯೋರ್ವಸುಮಾನ್ಪುತ್ರಃ ಸತ್ಯಾಯೋಶ್ಚ ಶ್ರುತಂಜಯಃ ।
ರಯಸ್ಯ ಸುತ ಏಕಶ್ಚ ಜಯಸ್ಯ ತನಯೋಽಮಿತಃ ॥
ಅನುವಾದ
ಶ್ರುತಾಯುವಿಗೆ ವಸುಮಂತನೆಂಬ ಪುತ್ರನು ಹುಟ್ಟಿದನು. ಸತ್ಯಾಯುವಿಗೆ ಶ್ರುತಂಜಯನು, ರಯನಿಗೆ ಏಕನೂ, ಜಯನಿಗೆ ಅಮಿತರೆಂಬ ಪುತ್ರರಾದರು. ॥2॥
(ಶ್ಲೋಕ-3)
ಮೂಲಮ್
ಭೀಮಸ್ತು ವಿಜಯಸ್ಯಾಥ ಕಾಂಚನೋ ಹೋತ್ರಕಸ್ತತಃ ।
ತಸ್ಯ ಜಹ್ನುಃ ಸುತೋ ಗಂಗಾಂ ಗಂಡೂಷೀಕೃತ್ಯ ಯೋಽಪಿಬತ್ ।
ಜಹ್ನೋಸ್ತು ಪೂರುಸ್ತತ್ಪುತ್ರೋ ಬಲಾಕಶ್ಚಾತ್ಮಜೋಽಜಕಃ ॥
ಅನುವಾದ
ವಿಜಯನಿಗೆ ಭೀಮ, ಭೀಮನಿಗೆ ಕಾಂಚನ, ಕಾಂಚನನಿಗೆ ಹೋತೃ, ಹೋತೃವಿಗೆ ಜಹ್ನು ಹುಟ್ಟಿದನು. ಗಂಗೆಯನ್ನು ಬೊಗಸೆಯಿಂದ ಕುಡಿದ ಮಹಾಮಹಿಮನಾದ ಜಹ್ನುವು ಇವನೇ ಆಗಿದ್ದನು. ಜಹ್ನುವಿಗೆ ಪುರೂ, ಪುರೂವಿಗೆ ಬಲಾಕ, ಬಲಾಕನಿಗೆ ಅಜಕನೆಂಬುವನು ಹುಟ್ಟಿದನು. ॥3॥
(ಶ್ಲೋಕ-4)
ಮೂಲಮ್
ತತಃ ಕುಶಃ ಕುಶಸ್ಯಾಪಿ ಕುಶಾಂಬುಸ್ತನಯೋ ವಸುಃ ।
ಕುಶನಾಭಶ್ಚ ಚತ್ವಾರೋ ಗಾಧಿರಾಸೀತ್ಕುಶಾಂಬುಜಃ ॥
ಅನುವಾದ
ಅಜನ ಪುತ್ರ ಕುಶನಾಗಿ ಇದ್ದನು. ಕುಶನಿಗೆ - ಕುಶಾಂಬು, ತನಯ, ವಸು, ಕುಶನಾಭ ಎಂಬ ನಾಲ್ಕು ಪುತ್ರರಾದರು. ಇವರಲ್ಲಿ ಕುಶಾಂಬುವಿನ ಪುತ್ರ ಗಾಧಿಯಾದನು. ॥4॥
(ಶ್ಲೋಕ-5)
ಮೂಲಮ್
ತಸ್ಯ ಸತ್ಯವತೀಂ ಕನ್ಯಾಮೃಚೀಕೋಽಯಾಚತ ದ್ವಿಜಃ ।
ವರಂ ವಿಸದೃಶಂ ಮತ್ವಾ ಗಾಧಿರ್ಭಾರ್ಗವಮಬ್ರವೀತ್ ॥
ಅನುವಾದ
ಪರೀಕ್ಷಿತನೇ! ಗಾಧಿಗೆ ಸತ್ಯವತಿಯೆಂಬ ಕನ್ಯೆಯಿದ್ದಳು. ಋಚೀಕ ಋಷಿಯು ಗಾಧಿಯ ಬಳಿ ಸತ್ಯವತಿಯನ್ನು ಯಾಚಿಸಿದನು. ಇವನು ತನ್ನ ಕನ್ಯೆಗೆ ಯೋಗ್ಯವರನಲ್ಲವೆಂದು ಯೋಚಿಸಿ ಋಚೀಕನಲ್ಲಿ ಹೇಳಿದನು ॥5॥
(ಶ್ಲೋಕ-6)
ಮೂಲಮ್
ಏಕತಃ ಶ್ಯಾಮಕರ್ಣಾನಾಂ ಹಯಾನಾಂ ಚಂದ್ರವರ್ಚಸಾಮ್ ।
ಸಹಸ್ರಂ ದೀಯತಾಂ ಶುಲ್ಕಂ ಕನ್ಯಾಯಾಃ ಕುಶಿಕಾ ವಯಮ್ ॥
ಅನುವಾದ
ಮುನಿವರ್ಯರೇ! ಕುಶಿಕ ವಂಶದವರು ನಾವು. ನಮ್ಮ ಕನ್ಯೆಸಿಗುವುದು ಕಷ್ಟವೇ. ಅದಕ್ಕಾಗಿ ನೀವು ಶರೀರವು ಬೆಳ್ಳಗಿದ್ದು ಒಂದು ಕಿವಿಯು ಕಪ್ಪಾಗಿರುವ ಒಂದುಸಾವಿರ ಕುದುರೆಗಳನ್ನು ಕನ್ಯಾಶುಲ್ಕವಾಗಿ ತಂದು ನನಗೆ ಕೊಡಬೇಕು. ಆಗ ಮದುವೆಯಾಗಬಹುದು. ॥6॥
(ಶ್ಲೋಕ-7)
ಮೂಲಮ್
ಇತ್ಯುಕ್ತಸ್ತನ್ಮತಂ ಜ್ಞಾತ್ವಾ ಗತಃ ಸ ವರುಣಾಂತಿಕಮ್ ।
ಆನೀಯ ದತ್ತ್ವಾ ತಾನಶ್ವಾನುಪಯೇಮೇ ವರಾನನಾಮ್ ॥
ಅನುವಾದ
ಗಾಧಿಯು ಈ ಮಾತನ್ನು ಹೇಳಿದಾಗ ಅವನ ಮನದಾಶಯವನ್ನು ತಿಳಿದ ಋಚೀಕ ಮುನಿಯು ವರುಣನಲ್ಲಿಗೆ ಹೋಗಿ ಅಂತಹ ಕುದುರೆಗಳನ್ನು ತಂದನು ಹಾಗೂ ಅವನ್ನು ನೋಡಿದ ಗಾಧಿಯು ಸತ್ಯವತಿಯನ್ನು ಮದುವೆ ಮಾಡಿ ಕೊಟ್ಟನು. ॥7॥
(ಶ್ಲೋಕ-8)
ಮೂಲಮ್
ಸ ಋಷಿಃ ಪ್ರಾರ್ಥಿತಃ ಪತ್ನ್ಯಾ ಶ್ವಶ್ರ್ವಾ ಚಾಪತ್ಯಕಾಮ್ಯಯಾ ।
ಶ್ರಪಯಿತ್ವೋಭಯೈರ್ಮಂತ್ರೈಶ್ಚರುಂ ಸ್ನಾತುಂ ಗತೋ ಮುನಿಃ ॥
ಅನುವಾದ
ಒಮ್ಮೆ ಸತ್ಯವತಿ ಮತ್ತು ಅವಳ ತಾಯಿ ಇಬ್ಬರೂ ಸಂತಾನಾರ್ಥವಾಗಿ ಋಚೀಕನಲ್ಲಿ ಪ್ರಾರ್ಥಿಸಿದರು. ಋಚೀಕ ಮಹರ್ಷಿಗಳು ಪತ್ನಿಯ ಹಾಗೂ ಅತ್ತೆಯ ಪ್ರಾರ್ಥನೆಯನ್ನು ಅಂಗೀಕರಿಸಿ ಇಬ್ಬರಿಗೂ ಬೇರೆ-ಬೇರೆಯಾಗಿ ಎರಡು ಮಂತ್ರಗಳಿಂದ ಚರುವನ್ನು ಬೇಯಿಸಿಟ್ಟು ಸ್ನಾನಕ್ಕಾಗಿ ಹೊರಟುಹೋದರು. ॥8॥
(ಶ್ಲೋಕ-9)
ಮೂಲಮ್
ತಾವತ್ಸತ್ಯವತೀ ಮಾತ್ರಾ ಸ್ವಚರುಂ ಯಾಚಿತಾ ಸತೀ ।
ಶ್ರೇಷ್ಠಂ ಮತ್ವಾ ತಯಾಯಚ್ಛನ್ಮಾತ್ರೇ ಮಾತುರದತ್ಸ್ವಯಮ್ ॥
ಅನುವಾದ
ಋಷಿಯು ತನ್ನ ಪತ್ನಿಗಾಗಿ ಶ್ರೇಷ್ಠಚರುವನ್ನು ಸಿದ್ಧಗೊಳಿಸಿರಬಹುದು ಎಂದು ಸತ್ಯವತಿಯ ತಾಯಿಯು ತಿಳಿದು, ಸತ್ಯವತಿಗಾಗಿ ಅಭಿಮಂತ್ರಿಸಿದ ಚರುವನ್ನು ಮಗಳಲ್ಲಿ ಬೇಡಿಕೊಂಡು ತಾನು ತಿಂದಳು. ಸತ್ಯವತಿಯು ತಾಯಿಗಾಗಿ ಸಿದ್ಧಗೊಳಿಸಿದ ಚರುವನ್ನು ತಿಂದುಬಿಟ್ಟಳು.॥9॥
(ಶ್ಲೋಕ-10)
ಮೂಲಮ್
ತದ್ವಿಜ್ಞಾಯ ಮುನಿಃ ಪ್ರಾಹ ಪತ್ನೀಂ ಕಷ್ಟಮಕಾರಷೀಃ ।
ಘೋರೋ ದಂಡಧರಃ ಪುತ್ರೋ ಭ್ರಾತಾ ತೇ ಬ್ರಹ್ಮವಿತ್ತ ಮಃ ॥
ಅನುವಾದ
ಋಚೀಕ ಮುನಿಗಳಿಗೆ ಈ ವಿಷಯ ತಿಳಿದಾಗ ಅವರು ತನ್ನ ಪತ್ನಿಯಾದ ಸತ್ಯವತಿಯಲ್ಲಿ ಹೇಳಿದರು ‘ನೀನು ದೊಡ್ಡ ಅನರ್ಥವನ್ನೆಸಗಿದೆ. ಚರುವಿನ ವಿನಿಮಯದಿಂದಾಗಿ ನಿನ್ನ ಗರ್ಭದಲ್ಲಿ ಘೋರ ಪ್ರಕೃತಿಯುಳ್ಳ ದಂಡಧರನಾದ ಕ್ಷಾತ್ರಸ್ವಭಾವವುಳ್ಳ ಮಗನು ಹುಟ್ಟುವನು. ನಿನ್ನ ತಮ್ಮನು ಶ್ರೇಷ್ಠ ಬ್ರಹ್ಮವಿತ್ತಮನಾಗುವನು. ॥10॥
(ಶ್ಲೋಕ-11)
ಮೂಲಮ್
ಪ್ರಸಾದಿತಃ ಸತ್ಯವತ್ಯಾ ಮೈವಂ ಭೂದಿತಿ ಭಾರ್ಗವಃ ।
ಅಥ ತರ್ಹಿ ಭವೇತ್ಪೌತ್ರೋ ಜಮದಗ್ನಿಸ್ತತೋಽಭವತ್ ॥
ಅನುವಾದ
ಸತ್ಯವತಿಯು ಋಚೀಕನನ್ನು ಬಹಳವಾಗಿ ಪ್ರಸನ್ನಗೊಳಿಸಿ ‘ಸ್ವಾಮಿ! ಹೀಗಾಗಬಾರದು’ ಎಂದು ಪ್ರಾರ್ಥಿಸಿದಳು. ಆಗ ಋಚೀಕನೆಂದ ಸರಿ. ಒಳ್ಳೆಯದು. ಮಗನ ಬದಲಿಗೆ ಮೊಮ್ಮಗನು ಅಂತಹ ಘೋರ ಪ್ರಕೃತಿಯವನಾಗುವನು. ಸಕಾಲದಲ್ಲಿ ಸತ್ಯವತಿಯ ಗರ್ಭದಿಂದ ಜಮದಗ್ನಿಯ ಜನ್ಮವಾಯಿತು. ॥11॥
(ಶ್ಲೋಕ-12)
ಮೂಲಮ್
ಸಾ ಚಾಭೂತ್ಸುಮಹಾಪುಣ್ಯಾ ಕೌಶಿಕೀ ಲೋಕಪಾವನೀ ।
ರೇಣೋಃ ಸುತಾಂ ರೇಣುಕಾಂ ವೈ ಜಮದಗ್ನಿರುವಾಹ ಯಾಮ್ ॥
ಅನುವಾದ
ಸತ್ಯವತಿಯು ಸಮಸ್ತ ಲೋಕಗಳನ್ನು ಪವಿತ್ರಗೊಳಿಸುವಂತಹ ಪುಣ್ಯವತಿಯಾದ ‘ಕೌಶಿಕೀ’ ನದಿಯಾದಳು. ರೇಣು ಎಂಬ ಋಷಿಯ ಕನ್ಯೆಯಾದ ರೇಣುಕೆಯನ್ನು ಜಮದಗ್ನಿಯು ವಿವಾಹವಾದನು. ॥12॥
(ಶ್ಲೋಕ-13)
ಮೂಲಮ್
ತಸ್ಯಾಂ ವೈ ಭಾರ್ಗವಋಷೇಃ ಸುತಾ ವಸುಮದಾದಯಃ ।
ಯವೀಯಾಂಜಜ್ಞ ಏತೇಷಾಂ ರಾಮ ಇತ್ಯಭಿವಿಶ್ರುತಃ ॥
ಅನುವಾದ
ರೇಣುಕೆಯ ಗರ್ಭದಿಂದ ಜಮದಗ್ನಿಗಳು ವಸುಮಂತ ಮೊದಲಾದ ಅನೇಕ ಪುತ್ರರನ್ನು ಪಡೆದರು. ಅವರಲ್ಲಿ ಕಿರಿಯವನು ಸುಪ್ರಸಿದ್ಧನಾದ ಪರಶುರಾಮನಾಗಿದ್ದನು. ॥13॥
(ಶ್ಲೋಕ-14)
ಮೂಲಮ್
ಯಮಾಹುರ್ವಾಸುದೇವಾಂಶಂ ಹೈಹಯಾನಾಂ ಕುಲಾಂತಕಮ್ ।
ತ್ರಿಃ ಸಪ್ತಕೃತ್ವೋ ಯ ಇಮಾಂ ಚಕ್ರೇ ನಿಃಕ್ಷತ್ರಿಯಾಂ ಮಹೀಮ್ ॥
ಅನುವಾದ
ಹೈಹಯವಂಶವನ್ನು ಅಂತ್ಯಗೊಳಿಸಲೆಂದೇ ಸ್ವಯಂ ಭಗವಂತನೇ ಪರಶುರಾಮ ರೂಪದಲ್ಲಿ ಅಂಶಾವತಾರ ಮಾಡಿದ್ದನು ಎಂದು ಹೇಳುತ್ತಾರೆ. ಪರಶುರಾಮನು ಈ ಭೂಮಂಡಲವನ್ನು ಇಪ್ಪತ್ತೊಂದು ಬಾರಿ ನಿಃಕ್ಷತ್ರಿಯವಾಗಿ ಮಾಡಿಬಿಟ್ಟನು. ॥14॥
(ಶ್ಲೋಕ-15)
ಮೂಲಮ್
ದುಷ್ಟಂ ಕ್ಷತ್ರಂ ಭುವೋ ಭಾರಮಬ್ರಹ್ಮಣ್ಯಮನೀನಶತ್ ।
ರಜಸ್ತಮೋವೃತಮಹನ್ಫಲ್ಗುನ್ಯಪಿ ಕೃತೇಂಽಹಸಿ ॥
ಅನುವಾದ
ಕ್ಷತ್ರಿಯರು ಪರಶುರಾಮನ ಕುರಿತು ಮಾಡಿದ ಅಪರಾಧವು ಅಲ್ಪವಾಗಿದ್ದರೂ ಅವರು ಭಾರೀ ದುಷ್ಟರೂ, ಬ್ರಾಹ್ಮಣ ದ್ವೇಷಿಗಳೂ, ರಜೋಗುಣಿಗಳೂ ಆಗಿದ್ದು ವಿಶೇಷವಾಗಿ ತಮೋಗುಣಿಗಳೇ ಆಗಿದ್ದರು. ಇದೇ ಕಾರಣದಿಂದ ಅವರು ಭೂಭಾರಕರಾಗಿದ್ದರು. ಇದರ ಫಲವಾಗಿ ಭಗವಾನ್ ಪರಶುರಾಮನು ದುಷ್ಟ ಕ್ಷತ್ರಿಯರನ್ನು ಇಪ್ಪತ್ತೊಂದು ಬಾರಿ ತರಿದು ಭೂಭಾರವನ್ನಿಳಿಸಿದನು. ॥15॥
(ಶ್ಲೋಕ-16)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಕಿಂ ತದಂಹೋ ಭಗವತೋ ರಾಜನ್ಯೈರಜಿತಾತ್ಮಭಿಃ ।
ಕೃತಂ ಯೇನ ಕುಲಂ ನಷ್ಟಂ ಕ್ಷತ್ರಿಯಾಣಾಮಭೀಕ್ಷ್ಣಶಃ ॥
ಅನುವಾದ
ಪರೀಕ್ಷಿದ್ರಾಜನು ಕೇಳಿದನು — ಪೂಜ್ಯರೇ! ನೀವು ಹೇಳಿದಂತೆ ಆ ಸಮಯದಲ್ಲಿ ಕ್ಷತ್ರಿಯರು ವಿಷಯ ಲೋಲುಪರೂ ದುಷ್ಟರೂ ಅವಶ್ಯರಾಗಿದ್ದರು. ಆದರೆ ಅವರು ಪರಶುರಾಮನಿಗೆ ಅಂತಹ ಯಾವ ಅಪರಾಧವನ್ನು ಮಾಡಿದ್ದಕ್ಕಾಗಿ ಅವನು ಪದೇ-ಪದೇ ಕ್ಷತ್ರಿಯರ ವಂಶವನ್ನೇ ಸಂಹಾರಮಾಡಿದನು? ॥16॥
(ಶ್ಲೋಕ-17)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಹೈಹಯಾನಾಮಧಿಪತಿರರ್ಜುನಃ ಕ್ಷತ್ರಿಯರ್ಷಭಃ ।
ದತ್ತಂ ನಾರಾಯಣಸ್ಯಾಂಶಮಾರಾಧ್ಯ ಪರಿಕರ್ಮಭಿಃ ॥
(ಶ್ಲೋಕ-18)
ಮೂಲಮ್
ಬಾಹೂನ್ದಶಶತಂ ಲೇಭೇ ದುರ್ಧರ್ಷತ್ವಮರಾತಿಷು ।
ಅವ್ಯಾಹತೇಂದ್ರಿಯೌಜಃಶ್ರೀತೇಜೋವೀರ್ಯಯಶೋಬಲಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳಿದರು — ಪರೀಕ್ಷಿತನೇ! ಆ ಸಮಯದಲ್ಲಿ ಕ್ಷತ್ರಿಯಶ್ರೇಷ್ಠನಾದ ಅರ್ಜುನನು ಹೈಹಯರಿಗೆ ಅಧಿಪತಿಯಾಗಿದ್ದನು. ಅವನು ಅನೇಕ ವಿಧವಾದ ಸೇವಾ-ಶುಶ್ರೂಷೆಗಳಿಂದ ಭಗವನ್ನಾರಾಯಣನ ಅಂಶಾವತಾರನಾದ ದತ್ತಾತ್ರೇಯನನ್ನು ಒಲಿಸಿಕೊಂಡು ಒಂದು ಸಾವಿರ ಬಾಹುಗಳನ್ನು ಹಾಗೂ ಯಾವನೇ ಶತ್ರುವು ಯುದ್ಧದಲ್ಲಿ ಪರಾಜಿತ ಗೊಳಿಸದಂತಹ ವರವನ್ನು ಪಡೆದಿದ್ದನು. ಜೊತೆಗೆ ಅಬಾಧಿತವಾದ ಇಂದ್ರಿಯಗಳ ಬಲವನ್ನೂ, ಅತುಲಸಂಪತ್ತನ್ನೂ, ತೇಜಸ್ಸನ್ನೂ, ಪರಾಕ್ರಮವನ್ನೂ, ಕೀರ್ತಿಯನ್ನೂ, ಶಾರೀರಿಕ ಬಲವನ್ನೂ ಅವನು ದತ್ತಾತ್ರೇಯನ ಕೃಪೆಯಿಂದ ಪಡೆದುಕೊಂಡಿದ್ದನು. ॥17-18॥
(ಶ್ಲೋಕ-19)
ಮೂಲಮ್
ಯೋಗೇಶ್ವರತ್ವಮೈಶ್ವರ್ಯಂ ಗುಣಾ ಯತ್ರಾಣಿಮಾದಯಃ ।
ಚಚಾರಾವ್ಯಾಹತಗತಿರ್ಲೋಕೇಷು ಪವನೋ ಯಥಾ ॥
ಅನುವಾದ
ಅವನು ಯೋಗೇಶ್ವರನಾಗಿದ್ದನು. ಅವನಿಗೆ ಅತಿಸೂಕ್ಷ್ಮ ಮತ್ತು ಅತಿ ಸ್ಥೂಲರೂಪವನ್ನು ಧರಿಸುವಂತಹ ಎಲ್ಲ ಐಶ್ವರ್ಯ ಸಿದ್ಧಿಗಳು ಪ್ರಾಪ್ತವಾಗಿದ್ದವು. ಅವನು ಪ್ರಪಂಚದಲ್ಲೆಲ್ಲ ವಾಯುವಿನಂತೆ ಯಾವುದೇ ಅಡೆ-ತಡೆಗಳಿಲ್ಲದೆ ಸಂಚರಿಸುತ್ತಿದ್ದನು. ॥19॥
(ಶ್ಲೋಕ-20)
ಮೂಲಮ್
ಸ್ತ್ರೀರತ್ನೈರಾವೃತಃ ಕ್ರೀಡನ್ ರೇವಾಂಭಸಿ ಮದೋತ್ಕಟಃ ।
ವೈಜಯಂತೀಂ ಸ್ರಜಂ ಬಿಭ್ರದ್ರುರೋಧ ಸರಿತಂ ಭುಜೈಃ ॥
ಅನುವಾದ
ಒಮ್ಮೆ ಕತ್ತಿನಲ್ಲಿ ವೈಜಯಂತಿಯನ್ನು ಧರಿಸಿಕೊಂಡ ಸಹಸ್ರಾರ್ಜುನನು ಅನೇಕ ಸುಂದರಿಯರೊಂದಿಗೆ ನರ್ಮದಾ ನದಿಯಲ್ಲಿ ಜಲವಿಹಾರ ಮಾಡುತ್ತಿದ್ದನು. ಆಗ ಮದೋನ್ಮತ್ತನಾದ ಸಹಸ್ರಬಾಹುವು ತನ್ನ ಕೈಗಳಿಂದ ನದಿಯ ಪ್ರವಾಹವನ್ನೂ ತಡೆದು ಬಿಟ್ಟನು.॥20॥
(ಶ್ಲೋಕ-21)
ಮೂಲಮ್
ವಿಪ್ಲಾವಿತಂ ಸ್ವಶಿಬಿರಂ ಪ್ರತಿಸ್ರೋತಃಸರಿಜ್ಜಲೈಃ ।
ನಾಮೃಷ್ಯತ್ತಸ್ಯ ತದ್ವೀರ್ಯಂ ವೀರಮಾನೀ ದಶಾನನಃ ॥
ಅನುವಾದ
ದಶಕಂಠ ರಾವಣನು ಅಲ್ಲೇ ಸಮೀಪದಲ್ಲೇ ಬೀಡುಬಿಟ್ಟಿದ್ದನು. ನದಿಯ ನೀರು ಉಕ್ಕಿ ಅವನ ಶಿಬಿರವು ಮುಳಗ ತೊಡಗಿತು. ರಾವಣನಾದರೋ ತನ್ನನ್ನು ಮಹಾಪರಾಕ್ರಮಿ ವೀರನೆಂದು ತಿಳಿದಿದ್ದನು. ಅದಕ್ಕಾಗಿ ಸಹಸ್ರಾರ್ಜುನನ ಈ ಪರಾಕ್ರಮವು ಅವನಿಂದ ಸಹಿಸಲಾಗಲಿಲ್ಲ. ॥21॥
(ಶ್ಲೋಕ-22)
ಮೂಲಮ್
ಗೃಹೀತೋ ಲೀಲಯಾ ಸ್ತ್ರೀಣಾಂ ಸಮಕ್ಷಂ ಕೃತಕಿಲ್ಬಿಷಃ ।
ಮಾಹಿಷ್ಮತ್ಯಾಂ ಸಂನಿರುದ್ಧೋ ಮುಕ್ತೋ ಯೇನ ಕಪಿರ್ಯಥಾ ॥
ಅನುವಾದ
ರಾವಣನು ಸಹಸ್ರಾರ್ಜುನನ ಬಳಿಗೆ ಹೋಗಿ ಅವನನ್ನು ನಿಂದಿಸತೊಡಗಿದಾಗ ಅವನು ನಾರಿಯರ ಇದುರಿನಲ್ಲೇ ಲೀಲಾ ಜಾಲವಾಗಿ ಸೆರೆಹಿಡಿದುಕೊಂಡು ತನ್ನ ರಾಜಧಾನಿ ಮಾಹಿಷ್ಮತಿಗೆ ತಂದು ಕಪಿಯನ್ನು ಬೋನಿನಲ್ಲಿಡುವಂತೆ ರಾವಣನನ್ನು ಸೆರೆಯಲ್ಲಿಟ್ಟನು. ಬಳಿಕ ಪುಲಸ್ತ್ಯ ಮಹರ್ಷಿಗಳು ಹೇಳಿದಾಗ ಸಹಸ್ರಾರ್ಜುನನು ಅವನನ್ನು ಬಿಡುಗಡೆ ಗೊಳಿಸಿದನು. ॥22॥
(ಶ್ಲೋಕ-23)
ಮೂಲಮ್
ಸ ಏಕದಾ ತು ಮೃಗಯಾಂ ವಿಚರನ್ವಿಪಿನೇ ವನೇ ।
ಯದೃಚ್ಛಯಾಽಽಶ್ರಮಪದಂ ಜಮದಗ್ನೇರುಪಾವಿಶತ್ ॥
ಅನುವಾದ
ಇಂತಹ ಅತುಲ ಪರಾಕ್ರಮಿಯಾದ ಸಹಸ್ರಾರ್ಜುನನು ಒಮ್ಮೆ ಬೇಟೆಯಾಡಲು ಗೊಂಡಾರಣ್ಯವನ್ನು ಪ್ರವೇಶಿಸಿದನು. ದೈವವಶದಿಂದ ಅವನು ಜಮದಗ್ನಿ ಮುನಿಯ ಆಶ್ರಮವನ್ನು ತಲುಪಿದನು. ॥23॥
(ಶ್ಲೋಕ-24)
ಮೂಲಮ್
ತಸ್ಮೈ ಸ ನರದೇವಾಯ ಮುನಿರರ್ಹಣಮಾಹರತ್ ।
ಸಸೈನ್ಯಾಮಾತ್ಯವಾಹಾಯ ಹವಿಷ್ಮತ್ಯಾ ತಪೋಧನಃ ॥
ಅನುವಾದ
ಪರಮ ತಪಸ್ವಿಗಳಾದ ಜಮದಗ್ನಿ ಮುನಿಯ ಆಶ್ರಮದಲ್ಲಿ ಕಾಮಧೇನುವಿದ್ದಿತು. ಅದರ ಪ್ರಭಾವದಿಂದ ಮುನಿಗಳು ಆಶ್ರಮಕ್ಕೆ ಬಂದ ಹೈಹಯ ಪತಿಯನ್ನು, ಮಂತ್ರಿ, ಸೈನ್ಯ, ವಾಹನಗಳೊಂದಿಗೆ ತುಂಬಾ ಸ್ವಾಗತ-ಸತ್ಕಾರ ಮಾಡಿದರು. ॥24॥
(ಶ್ಲೋಕ-25)
ಮೂಲಮ್
ಸ ವೀರಸ್ತತ್ರ ತದ್ದೃಷ್ಟ್ವಾ ಆತ್ಮೈಶ್ವರ್ಯಾತಿಶಾಯನಮ್ ।
ತನ್ನಾದ್ರಿಯತಾಗ್ನಿಹೋತ್ರ್ಯಾಂ ಸಾಭಿಲಾಷಃ ಸ ಹೈಹಯಃ ॥
ಅನುವಾದ
ವೀರ ಸಹಸ್ರಾರ್ಜುನನು ನೋಡಿದನು ಈ ಮುನಿಯ ಐಶ್ವರ್ಯವಾದರೋ ನನಗಿಂತಲೂ ಮಿಗಿಲಾಗಿದೆ. ಅದಕ್ಕಾಗಿ ಅವನು ಅವರ ಸ್ವಾಗತ-ಸತ್ಕಾರವನ್ನು ಏನನ್ನೂ ಆದರಿಸದೆ ಕಾಮಧೇನುವನ್ನೇ ಕೊಂಡುಹೋಗಲು ಬಯಸಿದನು. ॥25॥
(ಶ್ಲೋಕ-26)
ಮೂಲಮ್
ಹವಿರ್ಧಾನೀಮೃಷೇರ್ದರ್ಪಾನ್ನರಾನ್ಹರ್ತುಮಚೋದಯತ್ ।
ತೇ ಚ ಮಾಹಿಷ್ಮತೀಂ ನಿನ್ಯುಃ ಸವತ್ಸಾಂ ಕ್ರಂದತೀಂ ಬಲಾತ್ ॥
ಅನುವಾದ
ದುರಭಿಮಾನಿಯಾದ ಅವನು ಜಮದಗ್ನಿಯಲ್ಲಿ ಕೇಳಿಕೊಳ್ಳದೆ ‘ಕಾಮಧೇನುವನ್ನು ಎಳೆದುಕೊಂಡು ಹೋಗಿರಿ’ ಎಂದು ತನ್ನ ಸೇವಕರಿಗೆ ಆಜ್ಞೆಯನ್ನು ಇತ್ತನು. ಅವನ ಅಪ್ಪಣೆಯಂತೆ ಸೇವಕರು ಕರುವಿನೊಂದಿಗೆ ಅಂಬಾ! ಅಂಬಾ! ಎಂದು ಅರಚಿಕೊಳ್ಳುತ್ತಿದ್ದ ಕಾಮಧೇನುವನ್ನು ಬಲವಂತವಾಗಿ ಮಾಹಿಷ್ಮತಿಗೆಕೊಂಡು ಹೋದರು. ॥26॥
(ಶ್ಲೋಕ-27)
ಮೂಲಮ್
ಅಥ ರಾಜನಿ ನಿರ್ಯಾತೇ ರಾಮ ಆಶ್ರಮ ಆಗತಃ ।
ಶ್ರುತ್ವಾ ತತ್ತಸ್ಯ ದೌರಾತ್ಮ್ಯಂ ಚುಕ್ರೋಧಾಹಿರಿವಾಹತಃ ॥
ಅನುವಾದ
ಇವೆಲ್ಲವೂ ನಡೆದಾಗ ಪರಶುರಾಮನು ಆಶ್ರಮಕ್ಕೆ ಬಂದನು. ರಾಜನ ದುಷ್ಕೃತ್ಯದ ವೃತ್ತಾಂತವನ್ನು ಕೇಳಿ ಏಟುತಿಂದ ಸರ್ಪದಂತೆ ಕೋಪದಿಂದ ಕಿಡಿ-ಕಿಡಿಯಾದನು. ॥27॥
(ಶ್ಲೋಕ-28)
ಮೂಲಮ್
ಘೋರಮಾದಾಯ ಪರಶುಂ ಸತೂಣಂ ಚರ್ಮ ಕಾರ್ಮುಕಮ್ ।
ಅನ್ವಧಾವತ ದುರ್ಧರ್ಷೋ ಮೃಗೇಂದ್ರ ಇವ ಯೂಥಪಮ್ ॥
ಅನುವಾದ
ಅವನು ತನ್ನ ಭಯಂಕರವಾದ ಗಂಡುಕೊಡಲಿಯನ್ನೂ, ಧನುಸ್ಸನ್ನೂ, ಬತ್ತಳಿಕೆಯನ್ನೂ, ಗುರಾಣಿಯನ್ನೂ ಎತ್ತಿಕೊಂಡು ಯಾರಿಂದಲೂ ತಡೆಯಲಾರದ ಸಿಂಹವು ಆನೆಯ ಮೇಲೆ ಎರಗುವಂತೆ ಅತಿವೇಗವಾಗಿ ಅವನನ್ನು ಹಿಂಬಾಲಿಸಿದನು. ॥28॥
(ಶ್ಲೋಕ-29)
ಮೂಲಮ್
ತಮಾಪತಂತಂ ಭೃಗುವರ್ಯಮೋಜಸಾ
ಧನುರ್ಧರಂ ಬಾಣಪರಶ್ವಧಾಯುಧಮ್ ।
ಐಣೇಯಚರ್ಮಾಂಬರಮರ್ಕಧಾಮಭಿ-
ರ್ಯುತಂ ಜಟಾಭಿರ್ದದೃಶೇ ಪುರೀಂ ವಿಶನ್ ॥
ಅನುವಾದ
ಸಹಸ್ರಾರ್ಜುನನು ಇನ್ನೇನು ತನ್ನ ನಗರವನ್ನು ಪ್ರವೇಶಿಸುವಾಗಲೇ ಭಗವಾನ್ ಪರಶುರಾಮನು ಅತಿವೇಗದಿಂದ ತನ್ನತ್ತ ಬರುತ್ತಿರುವುದನ್ನು ನೋಡಿದನು. ಅವನ ರೂಪವು ಅತ್ಯಂತ ವಿಲಕ್ಷಣವಾಗಿತ್ತು. ಅವನು ಕೈಯಲ್ಲಿ ಧನುರ್ಬಾಣಗಳನ್ನೂ, ಗಂಡುಕೊಡಲಿಯನ್ನೂ ಧರಿಸಿದ್ದನು. ಶರೀರದ ಮೇಲೆ ಕೃಷ್ಣಮೃಗ ಚರ್ಮವನ್ನು ಧರಿಸಿದ್ದು, ಅವನ ಜಟೆಗಳು ಸೂರ್ಯಕಿರಣಗಳಂತೆ ಹೊಳೆಯುತ್ತಿದ್ದವು. ॥29॥
(ಶ್ಲೋಕ-30)
ಮೂಲಮ್
ಅಚೋದಯದ್ಧಸ್ತಿರಥಾಶ್ವಪತ್ತಿಭಿ-
ರ್ಗದಾಸಿಬಾಣರ್ಷ್ಟಿಶತಘ್ನಿಶಕ್ತಿಭಿಃ ।
ಅಕ್ಷೌಹಿಣೀಃ ಸಪ್ತದಶಾತಿಭೀಷಣಾ
ಸ್ತಾ ರಾಮ ಏಕೋ ಭಗವಾನಸೂದಯತ್ ॥
ಅನುವಾದ
ಅವನನ್ನು ನೋಡುತ್ತಲೇ ಅರ್ಜುನನು ಗದೆ, ಖಡ್ಗ, ಬಾಣ, ಋಷ್ಟಿ, ಶತಘ್ನಿ, ಶಕ್ತಿ ಮುಂತಾದ ಆಯುಧಗಳಿಂದ ಸುಸಜ್ಜಿತವಾದ ಅತ್ಯಂತ ಭಯಂಕರವಾದ ಹದಿನೇಳು ಅಕ್ಷೌಹಿಣಿ ಚತುರಂಗಿಣಿ ಸೇನೆಯನ್ನು ಪರಶುರಾಮನೊಂದಿಗೆ ಯುದ್ಧಕ್ಕೆ ಕಳಿಸಿದನು. ಅಷ್ಟೊಂದು ಅಪಾರವಾದ ಸೈನ್ಯವನ್ನು ಭಗವಾನ್ ಪರಶುರಾಮನೊಬ್ಬನೇ ಕ್ಷಣಮಾತ್ರದಲ್ಲಿ ಧ್ವಂಸ ಮಾಡಿಬಿಟ್ಟನು. ॥30॥
(ಶ್ಲೋಕ-31)
ಮೂಲಮ್
ಯತೋ ಯತೋಽಸೌ ಪ್ರಹರತ್ಪರಶ್ವಧೋ
ಮನೋಽನಿಲೌಜಾಃ ಪರಚಕ್ರಸೂದನಃ ।
ತತಸ್ತತಶ್ಛಿನ್ನಭುಜೋರುಕಂಧರಾ
ನಿಪೇತುರುರ್ವ್ಯಾಂ ಹತಸೂತವಾಹನಾಃ ॥
ಅನುವಾದ
ಭಗವಾನ್ ಪರಶುರಾಮನ ಗತಿಯು ವಾಯು-ಮನೋವೇಗದಂತಿತ್ತು. ಅವನು ಶತ್ರುಗಳ ಸೈನ್ಯವನ್ನು ಕೊಚ್ಚುತ್ತಲೇ ನಡೆಯುತ್ತಿದ್ದನು. ಅವನು ಗಂಡುಕೊಡಲಿಯಿಂದ ಪ್ರಹರಿಸಿದಲ್ಲೆಲ್ಲ ಸಾರಥಿಗಳು ವಾಹನದೊಂದಿಗೆ ನುಚ್ಚುನೂರಾಗುತ್ತಿದ್ದವು. ಮಹಾ ಮಹಾವೀರರ ತೋಳು, ತೊಡೆ, ಹೆಗಲು ತುಂಡು-ತುಂಡಾಗಿ ನೆಲಕ್ಕೆ ಬೀಳುತ್ತಿದ್ದವು. ॥31॥
(ಶ್ಲೋಕ-32)
ಮೂಲಮ್
ದೃಷ್ಟ್ವಾ ಸ್ವಸೈನ್ಯಂ ರುಧಿರೌಘಕರ್ದಮೇ
ರಣಾಜಿರೇ ರಾಮಕುಠಾರಸಾಯಕೈಃ ।
ವಿವೃಕ್ಣಚರ್ಮಧ್ವಜಚಾಪವಿಗ್ರಹಂ
ನಿಪಾತಿತಂ ಹೈಹಯ ಆಪತದ್ರುಷಾ ॥
ಅನುವಾದ
ಹೈಹಯಾಪತಿಯ ಸೇನೇಯ ಸೈನಿಕರು, ಅವರ ಧನುಸ್ಸುಗಳು, ಧ್ವಜಗಳು, ಗುರಾಣಿಗಳು ಭಗವಾನ್ ಪರಶುರಾಮನ ಕೊಡಲಿಯಿಂದ ಮತ್ತು ಬಾಣಗಳಿಂದ ತುಂಡು ತುಂಡಾಗಿ ರಣರಂಗದ ರಕ್ತದ ಮಡುವಿನಲ್ಲಿ ಬಿದ್ದಿರುವರು. ದಾರುಣವಾದ ಈ ಸಂಹಾರ ಕಾರ್ಯವನ್ನು ನೋಡಿದ ಅರ್ಜುನನಿಗೆ ಕೋಪವನ್ನು ತಡೆಯಲು ಸಾಧ್ಯವಾಗದೆ, ಧನುಷ್ಪಾಣಿಯಾಗಿ ಸ್ವತಃ ಯುದ್ಧಕ್ಕಾಗಿ ಬಂದನು. ॥32॥
(ಶ್ಲೋಕ-33)
ಮೂಲಮ್
ಅಥಾರ್ಜುನಃ ಪಂಚಶತೇಷು ಬಾಹುಭಿ-
ರ್ಧನುಃಷು ಬಾಣಾನ್ಯುಗಪತ್ಸ ಸಂದಧೇ ।
ರಾಮಾಯ ರಾಮೋಽಸ್ತ್ರಭೃತಾಂ ಸಮಗ್ರಣೀಃ
ತಾನ್ಯೇಕ ಧನ್ವೇಷುಭಿರಾಚ್ಛಿನತ್ಸಮಮ್ ॥
ಅನುವಾದ
ಅವನು ಒಮ್ಮೆಗೆ ತನ್ನ ಸಾವಿರ ಭುಜಗಳಿಂದ ಐದುನೂರು ಧನುಷ್ಯಗಳಲ್ಲಿ ಬಾಣಗಳನ್ನು ಹೂಡಿ ಪರಶುರಾಮನ ಮೇಲೆ ಪ್ರಯೋಗಿಸಿದನು. ಸಮಸ್ತ ಶಸ್ತ್ರಧಾರಿಗಳಲ್ಲಿ ಶಿರೋಮಣಿಯಾದ ಪರಶುರಾಮನು ಒಂದೇ ಧನುಸ್ಸಿನ ಮೂಲಕ ಪ್ರಯೋಗಿಸಿದ ಒಂದೇ ಬಾಣದಿಂದ ಆ ಐದುನೂರು ಬಾಣಗಳನ್ನೂ ತುಂಡರಿಸಿಬಿಟ್ಟನು. ॥33॥
(ಶ್ಲೋಕ-34)
ಮೂಲಮ್
ಪುನಃ ಸ್ವಹಸ್ತೈರಚಲಾನ್ಮೃಧೇಽಂಘ್ರಿಪಾ-
ನುತ್ಕ್ಷಿಪ್ಯ ವೇಗಾದಭಿಧಾವತೋ ಯುಧಿ ।
ಭುಜಾನ್ಕುಠಾರೇಣ ಕಠೋರನೇಮಿನಾ
ಚಿಚ್ಛೇದ ರಾಮಃ ಪ್ರಸಭಂ ತ್ವಹೇರಿವ ॥
ಅನುವಾದ
ಈಗ ಅರ್ಜುನನು ತನ್ನ ಕೈಗಳಲ್ಲಿ ಪರ್ವತಗಳನ್ನೂ, ವೃಕ್ಷಗಳನ್ನೂ ಎತ್ತಿಕೊಂಡು ಪರಶುರಾಮನ ಮೇಲೆ ಎರಗಿದನು. ಆದರೆ ಪರಶುರಾಮನು ತನ್ನ ತೀಕ್ಷ್ಣವಾದ ಗಂಡು ಕೊಡಲಿಯಿಂದ ಕ್ಷಣಮಾತ್ರದಲ್ಲಿ ಅರ್ಜುನನ ಸರ್ಪಗಳ ಹೆಡೆಗಳಂತಿದ್ದ ಸಾವಿರ ತೋಳುಗಳನ್ನು ಕತ್ತರಿಸಿ ಹಾಕಿದನು. ॥34॥
(ಶ್ಲೋಕ-35)
ಮೂಲಮ್
ಕೃತ್ತಬಾಹೋಃ ಶಿರಸ್ತಸ್ಯ ಗಿರೇಃ ಶೃಂಗಮಿವಾಹರತ್ ।
ಹತೇ ಪಿತರಿ ತತ್ಪುತ್ರಾ ಅಯುತಂ ದುದ್ರುವುರ್ಭಯಾತ್ ॥
ಅನುವಾದ
ಬಾಹುಗಳು ಕತ್ತರಿಸಿದ ಬಳಿಕ ಪರ್ವತದ ಶಿಖರವನ್ನು ಕತ್ತರಿಸುವಂತೆ ಪರಶುರಾಮನು ಅವನ ಶಿರಸ್ಸನ್ನು ತುಂಡರಿಸಿದನು. ತಂದೆಯು ಸತ್ತದ್ದನ್ನು ನೋಡಿದ ಅವನ ಹತ್ತುಸಾವಿರ ಮಕ್ಕಳು ಹೆದರಿ ಓಡಿಹೋದರು. ॥35॥
(ಶ್ಲೋಕ-36)
ಮೂಲಮ್
ಅಗ್ನಿಹೋತ್ರೀಮುಪಾವರ್ತ್ಯ ಸವತ್ಸಾಂ ಪರವೀರಹಾ ।
ಸಮುಪೇತ್ಯಾಶ್ರಮಂ ಪಿತ್ರೇ ಪರಿಕ್ಲಿಷ್ಟಾಂ ಸಮರ್ಪಯತ್ ॥
ಅನುವಾದ
ಪರೀಕ್ಷಿತನೇ! ಶತ್ರುವೀರಹಂತಕನಾದ ಪರಶುರಾಮನು ಅತೀವ ದುಃಖಿತೆಯಾಗಿದ್ದ ಕಾಮಧೇನುವನ್ನು ಕರುವಿನೊಂದಿಗೆ ಮರಳಿ ತಂದು ತನ್ನ ಆಶ್ರಮದಲ್ಲಿದ್ದ ತಂದೆಗೆ ಒಪ್ಪಿಸಿದನು. ॥36॥
(ಶ್ಲೋಕ-37)
ಮೂಲಮ್
ಸ್ವಕರ್ಮ ತತ್ಕೃತಂ ರಾಮಃ ಪಿತ್ರೇ ಭ್ರಾತೃಭ್ಯ ಏವ ಚ ।
ವರ್ಣಯಾಮಾಸ ತಚ್ಛ್ರುತ್ವಾ ಜಮದಗ್ನಿರಭಾಷತ ॥
ಅನುವಾದ
ಮಾಹಿಷ್ಮತಿ ಪಟ್ಟಣದಲ್ಲಿ ತಾನು ಮಾಡಿದ ವಿಧ್ವಂಸನಕಾರ್ಯವನ್ನು ತಂದೆಗೂ, ಸಹೋದರರಿಗೂ ವಿವರಿಸಿ ಹೇಳಿದನು. ಮಹಾಪರಾಕ್ರಮಿಯಾದ ಸಹಸ್ರಾರ್ಜುನನನ್ನು ಸಂಹರಿಸಿದ ವಿಷಯವನ್ನೂ ತಿಳಿಸಿದನು. ಇದೆಲ್ಲವನ್ನು ಕೇಳಿ ಜಮದಗ್ನಿ ಮುನಿಗಳು ಹೇಳಿದರು ॥37॥
(ಶ್ಲೋಕ-38)
ಮೂಲಮ್
ರಾಮ ರಾಮ ಮಹಾಬಾಹೋ ಭವಾನ್ಪಾಪಮಕಾರಷೀತ್ ।
ಅವಧೀನ್ನರದೇವಂ ಯತ್ಸರ್ವದೇವಮಯಂ ವೃಥಾ ॥
ಅನುವಾದ
‘‘ರಾಮಾ! ಪರಶುರಾಮಾ! ನೀನು ತುಂಬಾ ಪಾಪವನ್ನು ಮಾಡಿಬಿಟ್ಟೆ. ಮಹಾಬಾಹುವೇ! ನೀನು ಮಹಾವೀರನೇ ಹೌದು. ಆದರೂ ಸರ್ವದೇವಮಯನಾದ ರಾಜನನ್ನು ವೃಥಾ ಸಂಹರಿಸಿದೆ. ॥38॥
(ಶ್ಲೋಕ-39)
ಮೂಲಮ್
ವಯಂ ಹಿ ಬ್ರಾಹ್ಮಣಾಸ್ತಾತ ಕ್ಷಮಯಾರ್ಹಣತಾಂ ಗತಾಃ ।
ಯಯಾ ಲೋಕ ಗುರುರ್ದೇವಃ ಪಾರಮೇಷ್ಠ್ಯಮಗಾತ್ಪದಮ್ ॥
ಅನುವಾದ
ಮಗು! ನಾವು ಬ್ರಾಹ್ಮಣರಾಗಿದ್ದೇವೆ. ನಮ್ಮಲ್ಲಿ ಕ್ಷಮಾಗುಣವಿರುವುದರಿಂದಲೇ ನಾವು ಲೋಕದಲ್ಲಿ ಪೂಜ್ಯರಾಗಿದ್ದೇವೆ. ಹೆಚ್ಚೇನು, ಲೋಕಗುರುವಾದ ದೇವನಾದ ಚತುರ್ಮುಖನೂ ಕೂಡ ಕ್ಷಮೆಯಿಂದಲೇ ಪರಮಪದವನ್ನು ಅಲಂಕರಿಸಿರುವನು. ॥39॥
(ಶ್ಲೋಕ-40)
ಮೂಲಮ್
ಕ್ಷಮಯಾ ರೋಚತೇ ಲಕ್ಷ್ಮೀರ್ಬ್ರಾಹ್ಮೀ ಸೌರೀ ಯಥಾ ಪ್ರಭಾ ।
ಕ್ಷಮಿಣಾಮಾಶು ಭಗವಾಂಸ್ತುಷ್ಯತೇ ಹರಿರೀಶ್ವರಃ ॥
ಅನುವಾದ
ಕ್ಷಮೆಯಿಂದಲೇ ಬ್ರಾಹ್ಮಣರ ಶೋಭೆಯು ಸೂರ್ಯನಂತೆ ಬೆಳಗುತ್ತಿದೆ. ಸರ್ವಶಕ್ತನಾದ ಭಗವಾನ್ ಶ್ರೀಹರಿಯೂ ಕೂಡ ಕ್ಷಮೆಯುಳ್ಳವರ ಮೇಲೆ ಬೇಗನೇ ಪ್ರಸನ್ನನಾಗುತ್ತಾನೆ.॥40॥
(ಶ್ಲೋಕ-41)
ಮೂಲಮ್
ರಾಜ್ಞೋ ಮೂರ್ಧಾಭಿಷಿಕ್ತಸ್ಯ ವಧೋ ಬ್ರಹ್ಮವಧಾದ್ಗುರುಃ ।
ತೀರ್ಥಸಂಸೇವಯಾ ಚಾಂಹೋ ಜಹ್ಯಂಗಾಚ್ಯುತಚೇತನಃ ॥
ಅನುವಾದ
ಮಗು! ಸಾರ್ವಭೌಮನಾದ ರಾಜನ ವಧೆಯು ಬ್ರಾಹ್ಮಣನ ಹತ್ಯೆಗಿಂತಲೂ ಮಿಗಿಲಾದುದು. ಹೋಗು, ಭಗವಂತನನ್ನು ಸ್ಮರಿಸುತ್ತಾ ಪುಣ್ಯತೀರ್ಥಗಳ ಸೇವನೆಗೈದು ನಿನ್ನ ಪಾಪಗಳನ್ನು ತೊಳೆದುಕೋ.’’ ॥41॥
ಅನುವಾದ (ಸಮಾಪ್ತಿಃ)
ಹದಿನೈದನೇ ಅಧ್ಯಾಯವು ಮುಗಿಯಿತು ॥15॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ಪಂಚದಶೋಽಧ್ಯಾಯಃ ॥15॥