[ಹದಿನಾಲ್ಕನೆಯ ಅಧ್ಯಾಯ]
ಭಾಗಸೂಚನಾ
ಚಂದ್ರವಂಶದ ವರ್ಣನೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅಥಾತಃ ಶ್ರೂಯತಾಂ ರಾಜನ್ವಂಶಃ ಸೋಮಸ್ಯ ಪಾವನಃ ।
ಯಸ್ಮಿನ್ನೈಲಾದಯೋ ಭೂಪಾಃ ಕೀರ್ತ್ಯಂತೇ ಪುಣ್ಯಕೀರ್ತಯಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಈಗ ನಾನು ನಿನಗೆ ಪರಮ ಪವಿತ್ರವಾದ ಚಂದ್ರವಂಶದ ಚರಿತ್ರೆಯನ್ನು ಹೇಳುತ್ತೇನೆ. ಈ ವಂಶದಲ್ಲಿ ಪುರೂರವನೇ ಮೊದಲಾದ ದೊಡ್ಡ-ದೊಡ್ಡ ರಾಜರ ಪವಿತ್ರವಾದ ಕೀರ್ತಿಯ ಸಂಕೀರ್ತನವಿದೆ. ॥1॥
(ಶ್ಲೋಕ-2)
ಮೂಲಮ್
ಸಹಸ್ರಶಿರಸಃ ಪುಂಸೋ ನಾಭಿಹ್ರದಸರೋರುಹಾತ್ ।
ಜಾತಸ್ಯಾಸೀತ್ಸುತೋ ಧಾತುರತ್ರಿಃ ಪಿತೃಸಮೋ ಗುಣೈಃ ॥
ಅನುವಾದ
ಸಹಸ್ರಶೀರ್ಷನಾದ ವಿರಾಟ್ಪುರುಷನಾದ ಶ್ರೀಮನ್ನಾರಾಯಣನ ನಾಭಿಕಮಲದಿಂದ ಚತುರ್ಮುಖ ಬ್ರಹ್ಮನು ಆವಿರ್ಭವಿಸಿದನು. ಬ್ರಹ್ಮನಿಗೆ ಅತ್ರಿಯು ಮಗನಾದನು. ಅವನು ತನ್ನ ಸದ್ಗುಣಗಳಿಂದ ಬ್ರಹ್ಮನಿಗೆ ಸಮಾನನೇ ಆಗಿದ್ದನು. ॥2॥
(ಶ್ಲೋಕ-3)
ಮೂಲಮ್
ತಸ್ಯ ದೃಗ್ಭ್ಯೋಽಭವತ್ಪುತ್ರಃ ಸೋಮೋಽಮೃತಮಯಃ ಕಿಲ ।
ವಿಪ್ರೌಷಧ್ಯುಡುಗಣಾನಾಂ ಬ್ರಹ್ಮಣಾ ಕಲ್ಪಿತಃ ಪತಿಃ ॥
ಅನುವಾದ
ಆ ಅತ್ರಿಮ ಹರ್ಷಿಯ ಕಣ್ಣುಗಳಿಂದ ಅಮೃತಮಯ ಚಂದ್ರನ ಜನ್ಮವಾಯಿತು. ಬ್ರಹ್ಮದೇವರು ಚಂದ್ರನನ್ನು ಬ್ರಾಹ್ಮಣರಿಗೂ, ಔಷಧಿಗಳಿಗೂ, ನಕ್ಷತ್ರಗಳಿಗೂ ಅಧಿಪತಿಯನ್ನಾಗಿಸಿದನು. ॥3॥
(ಶ್ಲೋಕ-4)
ಮೂಲಮ್
ಸೋಽಯಜದ್ರಾಜಸೂಯೇನ ವಿಜಿತ್ಯ ಭುವನತ್ರಯಮ್ ।
ಪತ್ನೀಂ ಬೃಹಸ್ಪತೇರ್ದರ್ಪಾತ್ತಾರಾಂ ನಾಮಾಹರದ್ಬಲಾತ್ ॥
ಅನುವಾದ
ಚಂದ್ರನು ಮೂರು ಲೋಕಗಳನ್ನೂ ಜಯಿಸಿ ರಾಜಸೂಯ ಯಜ್ಞವನ್ನು ಮಾಡಿದನು. ಇದರಿಂದ ಕೊಬ್ಬಿದ ಚಂದ್ರನು ಬೃಹಸ್ಪತಿಯ ಪತ್ನಿಯಾದ ತಾರಾದೇವಿಯನ್ನು ಬಲಾತ್ಕಾರಪೂರ್ವಕವಾಗಿ ಅಪಹರಿಸಿದನು. ॥4॥
(ಶ್ಲೋಕ-5)
ಮೂಲಮ್
ಯದಾ ಸ ದೇವಗುರುಣಾ ಯಾಚಿತೋಽಭೀಕ್ಷ್ಣಶೋ ಮದಾತ್ ।
ನಾತ್ಯಜತ್ತತ್ಕೃತೇ ಜಜ್ಞೇ ಸುರದಾನವವಿಗ್ರಹಃ ॥
ಅನುವಾದ
ದೇವಗುರು ಬೃಹಸ್ಪತಿಯು ತನ್ನ ಪತ್ನಿಯನ್ನು ಕಳುಹಿಸಿಕೊಡಲು ಹಲವು ಬಾರಿ ಚಂದ್ರನಿಗೆ ಹೇಳಿದನು. ಆದರೆ ಮದದಿಂದ ಕೊಬ್ಬಿಹೋಗಿದ್ದ ಚಂದ್ರನು ಆಕೆಯನ್ನು ಹಿಂದಕ್ಕೆ ಕಳಿಸಲೇ ಇಲ್ಲ. ಇಂತಹ ಸನ್ನಿವೇಶದಲ್ಲಿ ಇದೇ ಕಾರಣದಿಂದ ದೇವತೆಗಳಿಗೂ, ದಾನವರಿಗೂ ಘೋರ ಸಂಗ್ರಾಮ ಏರ್ಪಟ್ಟಿತು. ॥5॥
(ಶ್ಲೋಕ-6)
ಮೂಲಮ್
ಶುಕ್ರೋ ಬೃಹಸ್ಪತೇರ್ದ್ವೇಷಾದಗ್ರಹೀತ್ಸಾಸುರೋಡುಪಮ್ ।
ಹರೋ ಗುರುಸುತಂ ಸ್ನೇಹಾತ್ಸರ್ವಭೂತಗಣಾವೃತಃ ॥
ಅನುವಾದ
ಶುಕ್ರಾಚಾರ್ಯರು ಬೃಹಸ್ಪತ್ಯಾಚಾರ್ಯರ ಮೇಲಿನ ದ್ವೇಷದಿಂದ ಅಸುರರೊಡನೆ ಚಂದ್ರನ ಪಕ್ಷವನ್ನು ವಹಿಸಿದರು. ಮಹಾದೇವನು ಸ್ನೇಹವಶನಾಗಿ ಸಮಸ್ತ ಭೂತಗಣಗಳೊಂದಿಗೆ ತನ್ನ ವಿದ್ಯಾಗುರು ಅಂಗಿರಸ್ಸುವಿನ ಪುತ್ರ ಬೃಹಸ್ಪತಿಯ ಪಕ್ಷವನ್ನು ಸೇರಿದನು. ॥6॥
(ಶ್ಲೋಕ-7)
ಮೂಲಮ್
ಸರ್ವದೇವಗಣೋಪೇತೋ ಮಹೇಂದ್ರೋ ಗುರುಮನ್ವಯಾತ್ ।
ಸುರಾಸುರವಿನಾಶೋಽಭೂತ್ ಸಮರಸ್ತಾರಕಾಮಯಃ ॥
ಅನುವಾದ
ದೇವೇಂದ್ರನೂ ಕೂಡ ಸಮಸ್ತ ದೇವತೆಗಳೊಂದಿಗೆ ತನ್ನ ಗುರುವಾದ ಬೃಹಸ್ಪತಿಯ ಪಕ್ಷವನ್ನೇ ವಹಿಸಿದನು. ಈ ಪ್ರಕಾರ ತಾರೆಯ ನಿಮಿತ್ತದಿಂದ ದೇವಾಸುರರಲ್ಲಿ ಸಂಹಾರಕ್ಕೆ ಕಾರಣವಾದ ಘೋರ ಸಂಗ್ರಾಮವು ಪ್ರಾರಂಭವಾಯಿತು. ॥7॥
(ಶ್ಲೋಕ-8)
ಮೂಲಮ್
ನಿವೇದಿತೋಽಥಾಂಗಿರಸಾ ಸೋಮಂ ನಿರ್ಭತ್ಸ್ಯ ವಿಶ್ವಕೃತ್ ।
ತಾರಾಂ ಸ್ವಭರ್ತ್ರೇ ಪ್ರಾಯಚ್ಛದಂತರ್ವತ್ನೀಮವೈತ್ಪತಿಃ ॥
ಅನುವಾದ
ಬಳಿಕ ಅಂಗೀರಸ ಮಹರ್ಷಿಯು ಬ್ರಹ್ಮದೇವರ ಬಳಿಗೆ ಬಂದು ಸರ್ವವಿನಾಶಕರವಾದ ಈ ಯುದ್ಧವನ್ನು ನಿಲ್ಲಿಸುವಂತೆ ಪ್ರಾರ್ಥಿಸಿಕೊಂಡನು. ವಿಶ್ವಕರ್ತೃವಾದ ಬ್ರಹ್ಮನು ಚಂದ್ರನನ್ನು ಗದರಿಸಿ ತಾರಾದೇವಿಯನ್ನು ಆಕೆಯ ಪತಿಯಾದ ಬೃಹಸ್ಪತಿಗೆ ಒಪ್ಪಿಸುವಂತೆ ಮಾಡಿದನು. ತಾರೆಯು ಗರ್ಭವತಿಯಾಗಿರುವಳೆಂಬುದನ್ನು ಅರಿತಾಗ ಬೃಹಸ್ಪತಿಯು ತನ್ನ ಪತ್ನಿಗೆ ಹೇಳಿದನು ॥8॥
(ಶ್ಲೋಕ-9)
ಮೂಲಮ್
ತ್ಯಜ ತ್ಯಜಾಶು ದುಷ್ಪ್ರಜ್ಞೇ ಮತ್ಕ್ಷೇತ್ರಾದಾಹಿತಂ ಪರೈಃ ।
ನಾಹಂ ತ್ವಾಂ ಭಸ್ಮಸಾತ್ಕುರ್ಯಾಂ ಸ್ತ್ರಿಯಂ ಸಾಂತಾನಿಕಃ ಸತಿ ॥
ಅನುವಾದ
‘ಎಲೈ ದುಷ್ಟಳೇ! ನನ್ನ ಕ್ಷೇತ್ರದಲ್ಲಿ ಬೇರೆಯವರ ಗರ್ಭವಿದೆ. ಅದನ್ನು ನೀನೀಗಲೇ ಪರಿತ್ಯಜಿಸು. ನಿನ್ನಲ್ಲಿ ಕ್ಷಣಮಾತ್ರವೂ ಅದು ಇರಬಾರದು. ಭಯಪಡಬೇಡ, ನಾನು ನಿನ್ನನ್ನು ದಹಿಸಹೋಗುವುದಿಲ್ಲ. ಏಕೆಂದರೆ, ನೀನು ಸ್ತ್ರೀಯಾಗಿರುವೆ. ಮೇಲಾಗಿ ನಿನ್ನಲ್ಲಿ ಸಂತಾನ ಪಡೆಯುವ ಆಶಯವೂ ನನಗಿದೆ. ದೇವಿಯಾದ್ದರಿಂದ ನೀನು ನಿರ್ದೋಷಳೂ ಆಗಿರುವೆ. ॥9॥
(ಶ್ಲೋಕ-10)
ಮೂಲಮ್
ತತ್ಯಾಜ ವ್ರೀಡಿತಾ ತಾರಾ ಕುಮಾರಂ ಕನಕಪ್ರಭಮ್ ।
ಸ್ಪೃಹಾಮಾಂಗಿರಸಶ್ಚಕ್ರೇ ಕುಮಾರೇ ಸೋಮ ಏವ ಚ ॥
ಅನುವಾದ
ಪತಿಯ ಮಾತನ್ನು ಕೇಳಿ ತಾರೆಯು ಅತ್ಯಂತ ನಾಚಿಕೊಂಡಳು. ಆಕೆಯು ಚಿನ್ನದ ಕಾಂತಿಯಿಂದ ಕೂಡಿದ ಶಿಶುವನ್ನು ಒಡನೆಯೇ ವಿಸರ್ಜಿಸಿದಳು. ಶಿಶುವಿನ ದಿವ್ಯಕಾಂತಿಯನ್ನು ನೋಡಿ ಬೃಹಸ್ಪತಿ ಮತ್ತು ಚಂದ್ರ ಇಬ್ಬರೂ ಮೋಹಿತರಾಗಿ ಈ ಶಿಶುವು ತನಗೆ ಸೇರಬೇಕೆಂದು ಆಶಿಸಿದರು. ॥10॥
(ಶ್ಲೋಕ-11)
ಮೂಲಮ್
ಮಮಾಯಂ ನ ತವೇತ್ಯುಚ್ಚೈಸ್ತಸ್ಮಿನ್ವಿವದಮಾನಯೋಃ ।
ಪಪ್ರಚ್ಛುರ್ಋಷಯೋ ದೇವಾ ನೈವೋಚೇ ವ್ರೀಡಿತಾ ತು ಸಾ ॥
ಅನುವಾದ
ಆಶಿಸಿದ್ದು ಮಾತ್ರವಲ್ಲ ‘ಇದು ನನ್ನ ಮಗು, ನಿನ್ನದಲ್ಲ’ ಎಂದು ಗಟ್ಟಿಯಾಗಿ ಜಗಳಾಡಿದರು. ಈ ವಿವಾದವನ್ನು ಬಗೆ ಹರಿಸಲು ದೇವತೆಗಳು, ಋಷಿಗಳು ತಾರೆಯ ಬಳಿಯಲ್ಲಿ ಕೇಳಿದರು ‘ಈ ಮಗು ಯಾರಿಗೆ ಸೇರಿದುದು’ ಆದರೆ ತಾರೆಯು ನಾಚಿಕೆಯಿಂದಾಗಿ ಏನೂ ಹೇಳಲಿಲ್ಲ.॥11॥
(ಶ್ಲೋಕ-12)
ಮೂಲಮ್
ಕುಮಾರೋ ಮಾತರಂ ಪ್ರಾಹ ಕುಪಿತೋಽಲೀಕಲಜ್ಜಯಾ ।
ಕಿಂ ನ ವೋಚಸ್ಯಸದ್ವ ತ್ತೇ ಆತ್ಮಾವದ್ಯಂ ವದಾಶು ಮೇ ॥
ಅನುವಾದ
ತನ್ನ ತಾಯಿಯ ತೋರಿಕೆಯ ಲಜ್ಜೆಯಿಂದ ಕುಪಿತನಾದ ಆ ಬಾಲಕನು ತಾಯಿಗೆ ಹೇಳಿದನು ‘ಎಲೈ ದುಷ್ಟಳೇ! ನೀನೇಕೆ ಮಾತಾಡುತ್ತಿಲ್ಲ? ಕುತ್ಸಿತವಾದ ನಿನ್ನ ನಡವಳಿಕೆಯನ್ನು ಬೇಗನೇ ನನಗೆ ಹೇಳು. ಯಾರ ಮಗನೆಂದು ನಾನಾದರೂ ತಿಳಿಯಬೇಡವೇ? ॥12॥
(ಶ್ಲೋಕ-13)
ಮೂಲಮ್
ಬ್ರಹ್ಮಾ ತಾಂ ರಹ ಆಹೂಯ ಸಮಪ್ರಾಕ್ಷೀಚ್ಚ ಸಾಂತ್ವಯನ್ ।
ಸೋಮಸ್ಯೇತ್ಯಾಹ ಶನಕೈಃ ಸೋಮಸ್ತಂ ತಾವದಗ್ರಹೀತ್ ॥
ಅನುವಾದ
ಅದೇ ಸಮಯದಲ್ಲಿ ಬ್ರಹ್ಮದೇವರು ತಾರೆಯನ್ನು ಏಕಾಂತಸ್ಥಳಕ್ಕೆ ಕೊಂಡೊಯ್ದು ಆಕೆಯನ್ನು ಸಾಂತ್ವನಗೊಳಿಸಿ ಕೇಳಿದರು. ಆಗ ತಾರೆಯು ಮೆಲ್ಲನೆ ‘ಇದು ಚಂದ್ರನಿಗೆ ಸೇರಿದುದು’ ಎಂದು ಹೇಳಿದಳು. ಇದರಿಂದಾಗಿ ಚಂದ್ರನು ಆ ಬಾಲಕ ನನ್ನು ಕರೆದುಕೊಂಡು ಹೊರಟನು. ॥13॥
(ಶ್ಲೋಕ-14)
ಮೂಲಮ್
ತಸ್ಯಾತ್ಮಯೋನಿರಕೃತ ಬುಧ ಇತ್ಯಭಿಧಾಂ ನೃಪ ।
ಬುಧ್ಧ್ಯಾ ಗಂಭೀರಯಾ ಯೇನ ಪುತ್ರೇಣಾಪೋಡುರಾಣ್ಮುದಮ್ ॥
ಅನುವಾದ
ಪರೀಕ್ಷಿತನೇ! ಬ್ರಹ್ಮದೇವರು ಆ ಬಾಲಕನಿಗೆ ಬುಧನೆಂದು ಹೆಸರಿಟ್ಟರು. ಏಕೆಂದರೆ, ಅವನ ಬುದ್ಧಿಯು ಬಹಳ ಗಂಭೀರವಾಗಿದ್ದಿತು. ಇಂತಹ ಪುತ್ರನನ್ನು ಪಡೆದು ಚಂದ್ರನಿಗೆ ಬಹಳ ಆನಂದವಾಯಿತು. ॥14॥
(ಶ್ಲೋಕ-15)
ಮೂಲಮ್
ತತಃ ಪುರೂರವಾ ಜಜ್ಞೇ ಇಲಾಯಾಂ ಯ ಉದಾಹೃತಃ ।
ತಸ್ಯ ರೂಪಗುಣೌದಾರ್ಯಶೀಲದ್ರವಿಣವಿಕ್ರಮಾನ್ ॥
(ಶ್ಲೋಕ-16)
ಮೂಲಮ್
ಶ್ರುತ್ವೋರ್ವಶೀಂದ್ರಭವನೇ ಗೀಯಮಾನಾನ್ಸುರರ್ಷಿಣಾ ।
ತದಂತಿಕಮುಪೇಯಾಯ ದೇವೀ ಸ್ಮರಶರಾರ್ದಿತಾ ॥
ಅನುವಾದ
ಪರೀಕ್ಷಿದ್ರಾಜನೇ! ಬುಧನಿಗೆ ಇಲೆಯ ಗರ್ಭದಿಂದ ಪುರೂರವನು ಹುಟ್ಟಿದನು ಎಂಬುದನ್ನೂ ನಾನು ಹಿಂದೆಯೇ ಹೇಳಿಬಿಟ್ಟಿರುವೆನು. ಒಂದು ದಿನ ದೇವೇಂದ್ರನ ಸಭೆಯಲ್ಲಿ ದೇವಋಷಿಗಳಾದ ನಾರದರು ಬುಧನ ಪುತ್ರನಾದ ಪುರೂರವನ ರೂಪ, ಗುಣ, ಉದಾರತೆ, ಶೀಲ-ಸ್ವಭಾವ, ಧನ-ಸಂಪತ್ತು, ಪರಾಕ್ರಮ ಇವುಗಳನ್ನು ಕೊಂಡಾಡಿದರು. ಇದನ್ನು ಕೇಳಿದ ಊರ್ವಶಿಯ ಮನಸ್ಸಿನಲ್ಲಿ ಕಾಮಭಾವವು ಉದಯಿಸಿತು. ಅದರಿಂದ ಪೀಡಿತಳಾಗಿ ಆ ದೇವಾಂಗನೆಯು ಪುರೂರವನ ಬಳಿಗೆ ಬಂದುಬಿಟ್ಟಳು. ॥15-16॥
(ಶ್ಲೋಕ-17)
ಮೂಲಮ್
ಮಿತ್ರಾವರುಣಯೋಃ ಶಾಪಾದಾಪನ್ನಾನರಲೋಕತಾಮ್ ।
ನಿಶಮ್ಯಪುರುಷಶ್ರೇಷ್ಠಂ ಕಂದರ್ಪಮಿವ ರೂಪಿಣಮ್ ।
ಧೃತಿಂ ವಿಷ್ಟಭ್ಯ ಲಲನಾ ಉಪತಸ್ಥೇ ತದಂತಿಕೇ ॥
ಅನುವಾದ
ಮಿತ್ರಾವರುಣರು ಊರ್ವಶಿಗೆ ಕೊಟ್ಟಿದ್ದ ಶಾಪವೂ ಕೂಡ ಅವಳು ಭೂಲೋಕಕ್ಕೆ ಬರಲು ಒಂದು ಕಾರಣವಾಗಿದ್ದರೂ, ಪುರುಷ ಶಿರೋಮಣಿ ಪುರೂರವನು ಮೂರ್ತಿಮಂತ ಮನ್ಮಥನೇ ಆಗಿರುವನೆಂದು ಕೇಳಿ ಸುರಸಂದರಿಯಾದ ಊರ್ವಶಿಯು ಧೈರ್ಯವಹಿಸಿ ತಾನಾಗಿಯೇ ಪುರೂರವನ ಬಳಿಗೆ ಆಗಮಿಸಿದಳು.॥17॥
(ಶ್ಲೋಕ-18)
ಮೂಲಮ್
ಸ ತಾಂ ವಿಲೋಕ್ಯ ನೃಪತಿರ್ಹರ್ಷೇಣೋತ್ಫುಲ್ಲಲೋಚನಃ ।
ಉವಾಚ ಶ್ಲಕ್ಷ್ಣಯಾ ವಾಚಾ ದೇವೀಂ ಹೃಷ್ಟ ತನೂರುಹಃ ॥
ಅನುವಾದ
ದೇವಾಂಗನೆಯಾದ ಊರ್ವಶಿಯನ್ನು ಕಂಡು ಪುರೂರವರಾಜನ ಕಣ್ಣುಗಳು ಅರಳಿದವು. ಶರೀರವು ರೋಮಾಂಚನವಾಯಿತು. ಅವನು ಸವಿಮಾತುಗಳಿಂದ ಇಂತೆಂದನು ॥18॥
(ಶ್ಲೋಕ-19)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಸ್ವಾಗತಂ ತೇ ವರಾರೋಹೇ ಆಸ್ಯತಾಂ ಕರವಾಮ ಕಿಮ್ ।
ಸಂರಮಸ್ವ ಮಯಾ ಸಾಕಂ ರತಿರ್ನೌ ಶಾಶ್ವತೀಃ ಸಮಾಃ ॥
ಅನುವಾದ
ರಾಜಾ ಪುರೂರವನು ಕೇಳಿದನು — ಎಲೈ ಸುಂದರಿಯೇ! ನಿನ್ನನ್ನು ನಾನು ಸ್ವಾಗತಿಸುತ್ತೇನೆ. ಇಲ್ಲಿಯೇ ನನ್ನ ಬಳಿಯಲ್ಲಿ ಕುಳಿತುಕೋ. ನಾನು ನಿನಗೇನು ಸೇವೆ ಮಾಡಲಿ? ಒಲಿದು ಬಂದಿರುವ ಅರಗಿಣಿಯೇ! ನನ್ನೊಡನೆ ವಿಹರಿಸು. ನಮ್ಮಿಬ್ಬರ ಈ ವಿಹಾರವು ಅನಂತಕಾಲದವರೆಗೂ ನಡೆಯುತ್ತಲೇ ಇರಲಿ.॥19॥
(ಶ್ಲೋಕ-20)
ಮೂಲಮ್ (ವಾಚನಮ್)
ಉರ್ವಶ್ಯುವಾಚ
ಮೂಲಮ್
ಕಸ್ಯಾಸ್ತ್ವಯಿ ನ ಸಜ್ಜೇತ ಮನೋ ದೃಷ್ಟಿಶ್ಚ ಸುಂದರ ।
ಯದಂಗಾಂತರಮಾಸಾದ್ಯ ಚ್ಯವತೇ ಹ ರಿರಂಸಯಾ ॥
ಅನುವಾದ
ಊರ್ವಶಿಯು ಹೇಳಿದಳು — ಸುಂದರಾಂಗನೇ! ನೀನು ಸೌಂದರ್ಯದ ಮೂರ್ತಸ್ವರೂಪನಾಗಿರುವೆ. ದೃಷ್ಟಿ ಮತ್ತು ಮನಸ್ಸುಗಳನ್ನು ನಿನ್ನಂತಹ ಕಡುಚೆಲುವನಲ್ಲಿ ಲೀನಗೊಳಿಸದೆ ಇರುವ ಕಾಮಿನಿಯರು ಯಾರಿದ್ದಾರೆ? ನಿನ್ನ ಸಮೀಪಕ್ಕೆ ಬಂದಿರುವ ನನ್ನ ಮನಸ್ಸು ನಿನ್ನೊಡನೆ ಕ್ರೀಡಿಸಲು ತವಕಪಡುತ್ತಿದೆ. ॥20॥
(ಶ್ಲೋಕ-21)
ಮೂಲಮ್
ಏತಾವುರಣಕೌ ರಾಜನ್ ನ್ಯಾಸೌ ರಕ್ಷಸ್ವ ಮಾನದ ।
ಸಂರಂಸ್ಯೇ ಭವತಾ ಸಾಕಂ ಶ್ಲಾಘ್ಯಃ ಸ್ತ್ರೀಣಾಂ ವರಃ ಸ್ಮೃತಃ ॥
ಅನುವಾದ
ರಾಜನೇ! ಯಾವ ಪುರುಷನು ರೂಪದಿಂದಲೂ, ಗುಣದಿಂದಲೂ, ಪ್ರಶಂಸನೀಯನಾಗಿರು ವನೋ ಅಂತಹವನೇ ಸ್ತ್ರೀಯರಿಗೆ ಅಭೀಷ್ಟನಾಗಿರುತ್ತಾನೆ. ಆದುದರಿಂದ ನಾನು ಅವಶ್ಯವಾಗಿ ನಿನ್ನ ಅಭೀಷ್ಟವನ್ನು ಈಡೇರಿಸಿಕೊಡುತ್ತೇನೆ. ಆದರೆ ಪ್ರಿಯತಮನೇ! ನನ್ನದೊಂದು ಸಣ್ಣ ನಿಬಂಧನೆಯಿದೆ. ನಾನು ನಿನ್ನಲ್ಲಿ ಅಡವಾಗಿ ಎರಡು ಮೇಕೆಗಳನ್ನು ಒಪ್ಪಿಸುತ್ತೇನೆ. ನೀನು ಅವನ್ನು ರಕ್ಷಿಸಬೇಕು. ॥21॥
(ಶ್ಲೋಕ-22)
ಮೂಲಮ್
ಘೃತಂ ಮೇ ವೀರ ಭಕ್ಷ್ಯಂ ಸ್ಯಾನ್ನೇಕ್ಷೇ ತ್ವಾನ್ಯತ್ರ ಮೈಥುನಾತ್ ।
ವಿವಾಸಸಂ ತತ್ತಥೇತಿ ಪ್ರತಿಪೇದೇ ಮಹಾಮನಾಃ ॥
ಅನುವಾದ
ವೀರಶಿರೋಮಣಿಯೇ! ನಾನು ಕೇವಲ ತುಪ್ಪವನ್ನು ಮಾತ್ರ ತಿನ್ನುವೆನು. ಮೈಥುನದ ಸಮಯವಲ್ಲದೆ ಬೇರೆ ಯಾವ ಸಮಯದಲ್ಲೂ ನಿನ್ನನ್ನು ವಿವಸ್ತ್ರನಾಗಿ ನೋಡಲು ಅವಕಾಶವಿರಬಾರದು. ಪುರೂರವನು ‘ಹಾಗೆಯೇ ಆಗಲಿ’ ಎಂದು ಹೇಳಿ ಅವಳ ನಿಬಂಧನೆಯನ್ನು ಸ್ವೀಕರಿಸಿದನು. ॥22॥
(ಶ್ಲೋಕ-23)
ಮೂಲಮ್
ಅಹೋ ರೂಪಮಹೋ ಭಾವೋ ನರಲೋಕ ವಿಮೋಹನಮ್ ।
ಕೋ ನ ಸೇವೇತ ಮನುಜೋ ದೇವೀಂ ತ್ವಾಂ ಸ್ವಯಮಾಗತಾಮ್ ॥
ಅನುವಾದ
ಮತ್ತೆ ಊರ್ವಶಿಯ ಬಳಿ ಹೇಳಿದನು ಆಹಾ! ಎಂತಹ ರೂಪ! ಎಂತಹ ಭಾವ! ಎಂತಹ ಪ್ರೀತಿ! ಎಂತಹ ವಿಶ್ವಾಸ! ಇವೆಲ್ಲವು ಮನುಷ್ಯಲೋಕವನ್ನೇ ಮೋಹಿತಗೊಳಿಸುವಂತಹುದು. ದೇವೀ! ಕೃಪೆಮಾಡಿ ನೀನಾಗಿ ಇಲ್ಲಿಗೆ ಬಂದಿರುವೆ. ಹಾಗಿರುವಾಗ ನಿನ್ನನ್ನು ಸೇವಿಸದ ಮನುಷ್ಯನು ಯಾರು ತಾನೇ ಇರಬಲ್ಲನು? ॥23॥
(ಶ್ಲೋಕ-24)
ಮೂಲಮ್
ತಯಾ ಸ ಪುರುಷಶ್ರೇಷ್ಠೋ ರಮಯಂತ್ಯಾ ಯಥಾರ್ಹತಃ ।
ರೇಮೇ ಸುರವಿಹಾರೇಷು ಕಾಮಂ ಚೈತ್ರರಥಾದಿಷು ॥
ಅನುವಾದ
ಪರೀಕ್ಷಿತನೇ! ಆಗ ಊರ್ವಶಿಯು ಕಾಮಶಾಸ್ತ್ರಾನುಸಾರವಾಗಿ ಪುರುಷಶ್ರೇಷ್ಠ ಪುರೂರವನೊಂದಿಗೆ ವಿಹರಿಸತೊಡಗಿದಳು. ಅವನೂ ಕೂಡ ದೇವತೆಗಳ ವಿಹಾರಸ್ಥಳವಾದ ಚೈತ್ರರಥ, ನಂದನವನ ಮೊದಲಾದ ಉಪವನಗಳಲ್ಲಿ ಅವಳೊಂದಿಗೆ ಸ್ವಚ್ಛಂದವಾಗಿ ವಿಹರಿಸಿದನು. ॥24॥
(ಶ್ಲೋಕ-25)
ಮೂಲಮ್
ರಮಮಾಣಸ್ತಯಾ ದೇವ್ಯಾ ಪದ್ಮಕಿಂಜಲ್ಕಗಂಧಯಾ ।
ತನ್ಮುಖಾಮೋದಮುಷಿತೋ ಮುಮುದೇಽಹರ್ಗಣಾನ್ಬಹೂನ್ ॥
ಅನುವಾದ
ದೇವಿ ಊರ್ವಶಿಯ ಶರೀರದಿಂದ ಕಮಲಕೇಸರದಂತಹ ಸುಗಂಧವು ಸೂಸುತ್ತಿತ್ತು. ಅವಳೊಡನೆ ಪುರೂರವನು ಅನೇಕ ವರ್ಷಗಳ ಕಾಲ ಆನಂದವಾಗಿ ವಿಹರಿಸಿದನು. ಅವನು ಆಕೆಯ ಮುಖಸುರಭಿಯಿಂದ ಮರುಳಾಗಿ ಬಿಟ್ಟಿದ್ದನು. ॥25॥
(ಶ್ಲೋಕ-26)
ಮೂಲಮ್
ಅಪಶ್ಯನ್ನುರ್ವಶೀಮಿಂದ್ರೋ ಗಂಧರ್ವಾನ್ಸಮಚೋದಯತ್ ।
ಉರ್ವಶೀರಹಿತಂ ಮಹ್ಯಮಾಸ್ಥಾನಂ ನಾತಿಶೋಭತೇ ॥
ಅನುವಾದ
ಇತ್ತ ಸ್ವರ್ಗದಲ್ಲಿ ಊರ್ವಶಿಯು ಇಲ್ಲದಿರುವುದನ್ನು ನೋಡಿದ ಇಂದ್ರನು ಗಂಧರ್ವರಿಗೆ ‘ಊರ್ವಶಿಯು ಎಲ್ಲಿಯೇ ಇರಲಿ ಅವಳನ್ನು ಕರೆತನ್ನಿರಿ, ಅವಳಿಲ್ಲದೆ ಈ ಸ್ವರ್ಗವು ಶೋಭಿಸುವುದಿಲ್ಲ’ ಎಂದು ಹೇಳಿ ಅವರನ್ನೂ ಕಳಿಸಿದನು. ॥26॥
(ಶ್ಲೋಕ-27)
ಮೂಲಮ್
ತೇ ಉಪೇತ್ಯ ಮಹಾರಾತ್ರೇ ತಮಸಿ ಪ್ರತ್ಯುಪಸ್ಥಿತೇ ।
ಉರ್ವಶ್ಯಾ ಉರಣೌ ಜಹ್ರುರ್ನ್ಯಸ್ತೌ ರಾಜನಿ ಜಾಯಯಾ ॥
ಅನುವಾದ
ಆ ಗಂಧರ್ವರು ಅರ್ಧರಾತ್ರಿಯ ಅಂಧಕಾರದಲ್ಲಿ ಊರ್ವಶಿಯು ರಾಜನಲ್ಲಿ ಅಡವಾಗಿ ಇಟ್ಟಿದ್ದ ಎರಡೂ ಮೇಕೆಗಳನ್ನು ಕದ್ದುಕೊಂಡು ಹೋದರು. ॥27॥
(ಶ್ಲೋಕ-28)
ಮೂಲಮ್
ನಿಶಮ್ಯಾಕ್ರಂದಿತಂ ದೇವೀ ಪುತ್ರಯೋರ್ನೀಯಮಾನಯೋಃ ।
ಹತಾಸ್ಮ್ಯಹಂ ಕುನಾಥೇನ ನಪುಂಸಾ ವೀರಮಾನಿನಾ ॥
ಅನುವಾದ
ತನ್ನ ಪುತ್ರರಂತೆ ಇದ್ದ ಪ್ರಿಯ ಮೇಕೆಗಳ ಬೇಂ-ಬೇಂ ಧ್ವನಿಯನ್ನು ಕೇಳಿ, ಗಂಧರ್ವರು ಅವನ್ನು ಕದ್ದುಕೊಂಡು ಹೋಗುವುದನ್ನು ನೋಡಿ, ಎದ್ದು ಅಯ್ಯೋ! ಈ ಹೇಡಿಯನ್ನು ನಾನು ಪಿಯನ್ನಾಗಿಸಿಕೊಂಡು ಸತ್ತೆ! ನಾನು ಕೆಟ್ಟೆ! ಇವನಿಂದ ನನ್ನ ಮೇಕೆಗಳನ್ನೂ ರಕ್ಷಿಸಲಾಗಲಿಲ್ಲವಲ್ಲ! ಎಂದು ಮರುಗಿದಳು. ॥28॥
(ಶ್ಲೋಕ-29)
ಮೂಲಮ್
ಯದ್ವಿಶ್ರಂಭಾದಹಂ ನಷ್ಟಾ ಹೃತಾಪತ್ಯಾ ಚ ದಸ್ಯುಭಿಃ ।
ಯಃ ಶೇತೇ ನಿಶಿ ಸಂತ್ರಸ್ತೋ ಯಥಾ ನಾರೀ ದಿವಾ ಪುಮಾನ್ ॥
ಅನುವಾದ
ಇವನ ಮೇಲೆ ವಿಶ್ವಾಸ ವಿಟ್ಟಿದ್ದರಿಂದ ಕಳ್ಳರು ನನ್ನ ಮರಿಗಳನ್ನು ಕದ್ದುಕೊಂಡು ಹೋಗುತ್ತಿದ್ದಾರೆ. ನಾನಾದರೋ ಹಾಳಾದೆ. ನೋಡಿರಲ್ಲ! ಇವನು ಹಗಲಲ್ಲಿ ಗಂಡಸಾಗಿದ್ದು ರಾತ್ರಿಯಲ್ಲಿ ಸ್ತ್ರೀಯರಂತೆ ಹೆದರಿ ಮಲಗಿರುತ್ತಾನೆ. ॥29॥
(ಶ್ಲೋಕ-30)
ಮೂಲಮ್
ಇತಿ ವಾಕ್ಸಾಯಕೈರ್ವಿದ್ಧಃ ಪ್ರತೋತೈರಿವ ಕುಂಜರಃ ।
ನಿಶಿ ನಿಸ್ತ್ರಿಂಶಮಾದಾಯ ವಿವಸ್ತ್ರೋಽಭ್ಯದ್ರವದ್ರುಷಾ ॥
ಅನುವಾದ
ಪರೀಕ್ಷಿತನೇ! ಆನೆಯನ್ನು ಅಂಕುಶದಿಂದ ತಿವಿಯುವಂತೆ ಊರ್ವಶಿಯು ತನ್ನ ವಾಗ್ಬಾಣಗಳಿಂದ ರಾಜನನ್ನು ಘಾಸಿಗೊಳಿಸಿದಳು. ರಾಜಾ ಪುರೂರವನಿಗೆ ಭಾರೀಕೋಪ ಬಂತು ಹಾಗೂ ಕೈಯಲ್ಲಿ ಖಡ್ಗವನ್ನೆತ್ತಿಕೊಂಡು ವಿವಸ್ತ್ರನಾಗಿಯೇ ಗಂಧರ್ವರತ್ತ ಓಡಿದನು. ॥30॥
(ಶ್ಲೋಕ-31)
ಮೂಲಮ್
ತೇ ವಿಸೃಜ್ಯೋರಣೌ ತತ್ರ ವ್ಯದ್ಯೋತಂತ ಸ್ಮ ವಿದ್ಯುತಃ ।
ಆದಾಯ ಮೇಷಾವಾಯಾಂತಂ ನಗ್ನಮೈಕ್ಷತ ಸಾ ಪತಿಮ್ ॥
ಅನುವಾದ
ಪುರೂರವನು ಅಟ್ಟಿಸಿಕೊಂಡು ಬರುವುದನ್ನು ನೋಡಿ ಮೇಕೆಗಳನ್ನು ಅಲ್ಲೇ ಬಿಟ್ಟು ಗಂಧರ್ವರು ಮಿಂಚಿನಂತೆ ಪ್ರಕಾಶಿಸಿದರು. ರಾಜನು ಮೇಕೆಗಳನ್ನು ತಂದು ಮರಳಿಸಿದಾಗ, ಊರ್ವಶಿಯು ಆ ಪ್ರಕಾಶದಲ್ಲಿ ಅವನನ್ನು ವಿವಸ್ತ್ರನಾಗಿರುವುದನ್ನು ನೋಡಿದಳು. ಸರಿ! ಆ ಕ್ಷಣದಲ್ಲೇ ಆಕೆಯು ಪುರೂರವನನ್ನು ಬಿಟ್ಟು ಹೊರಟುಹೋದಳು. ॥31॥
(ಶ್ಲೋಕ-32)
ಮೂಲಮ್
ಐಲೋಽಪಿ ಶಯನೇ ಜಾಯಾಮಪಶ್ಯನ್ವಿಮನಾ ಇವ ।
ತಚ್ಚಿತ್ತೋ ವಿಹ್ವಲಃ ಶೋಚನ್ಬಭ್ರಾಮೋನ್ಮತ್ತವನ್ಮಹೀಮ್ ॥
ಅನುವಾದ
ಪರೀಕ್ಷಿತನೇ! ಪುರೂರವನು ಶಯನಾಗಾರದಲ್ಲಿ ತನ್ನ ಪ್ರಿಯತಮೆಯಾದ ಊರ್ವಶಿಯನ್ನು ಕಾಣದಿದ್ದಾಗ ಅವನಿಗೆ ದುಃಖ ವುಂಟಾಯಿತು. ಅವನ ಮನಸ್ಸು ಊರ್ವಶಿಯಲ್ಲೇ ನೆಟ್ಟಿತ್ತು. ಅವನು ಅವಳಿಗಾಗಿ ಶೋಕದಿಂದ ವಿಹ್ವಲನಾಗಿ ಹುಚ್ಚನಂತೆ ಭೂಮಂಡಲದಲ್ಲೆಲ್ಲ ಅಲೆದಾಡ ತೊಡಗಿದನು.॥32॥
(ಶ್ಲೋಕ-33)
ಮೂಲಮ್
ಸ ತಾಂ ವೀಕ್ಷ್ಯ ಕುರುಕ್ಷೇತ್ರೇ ಸರಸ್ವತ್ಯಾಂ ಚ ತತ್ಸಖೀಃ ।
ಪಂಚ ಪ್ರಹೃಷ್ಟವದನಾಃ ಪ್ರಾಹ ಸೂಕ್ತಂ ಪುರೂರವಾಃ ॥
ಅನುವಾದ
ಹೀಗೆ ಅಲೆಯುತ್ತಿರುವಾಗ ಒಂದು ದಿನ ಕುರುಕ್ಷೇತ್ರದಲ್ಲಿ ಸರಸ್ವತೀ ನದೀತೀರದಲ್ಲಿ ಅವನು ಊರ್ವಶಿಯನ್ನೂ ಮತ್ತು ಪ್ರಸನ್ನ ಮುಖಿಯರಾದ ಆಕೆಯ ಐವರು ಸಖಿಯರನ್ನೂ ನೋಡಿದನು. ಆಗ ಆನಂದತುಂದಿಲನಾಗಿ ಅವನು ಸವಿಮಾತುಗಳಿಂದ ನುಡಿದನು. ॥33॥
(ಶ್ಲೋಕ-34)
ಮೂಲಮ್
ಅಹೋ ಜಾಯೇ ತಿಷ್ಠ ತಿಷ್ಠ ಘೋರೇ ನ ತ್ಯಕ್ತುಮರ್ಹಸಿ ।
ಮಾಂ ತ್ವಮದ್ಯಾಪ್ಯನಿರ್ವೃತ್ಯ ವಚಾಂಸಿ ಕೃಣವಾವಹೈ ॥
ಅನುವಾದ
ಪ್ರಿಯೇ! ಸ್ವಲ್ಪಹೊತ್ತು ನಿಲ್ಲು! ಒಮ್ಮೆ ನನ್ನ ಮಾತನ್ನೂ ಆಲಿಸು. ಕಠೋರವಾದ ಮನಸ್ಸನ್ನು ಹೊಂದಿರುವವಳೇ! ಇಂದು ನೀನು ನನ್ನನ್ನು ಸುಖಿಯನ್ನಾಗಿ ಮಾಡದೆ ಖಂಡಿತವಾಗಿ ಹೋಗಬಾರದು. ಕ್ಷಣಕಾಲವಾದರೂ ನಿಲ್ಲು. ನಾವಿಬ್ಬರು ಕಲೆತು ಸ್ವಲ್ಪ ಹೊತ್ತಾದರೂ ಮಾತಾಡೋಣ ॥34॥
(ಶ್ಲೋಕ-35)
ಮೂಲಮ್
ಸುದೇಹೋಽಯಂ ಪತತ್ಯತ್ರ ದೇವಿ ದೂರಂ ಹೃತಸ್ತ್ವಯಾ ।
ಖಾದಂತ್ಯೇನಂ ವೃಕಾ ಗೃಧ್ರಾಸ್ತ್ವತ್ಪ್ರಸಾದಸ್ಯ ನಾಸ್ಪದಮ್ ॥
ಅನುವಾದ
ದೇವೀ! ಈಗ ಈ ಶರೀರದ ಮೇಲೆ ನಿನ್ನ ಕೃಪಾಪ್ರಸಾದವು ಉಳಿಯಲಿಲ್ಲ. ಇದರಿಂದ ನೀನು ಇದನ್ನು ದೂರಕ್ಕೆಸೆದು ಬಿಟ್ಟೆ. ಆದ್ದರಿಂದ ನನ್ನ ಈ ಸುಂದರ ಶರೀರವು ಈಗಲೇ ಬಿದ್ದು ಹೋಗುವುದು. ನೀನು ನೋಡು-ನೋಡುತ್ತಿರುವಾಗಲೇ ಇದನ್ನು ತೋಳಗಳು, ಹದ್ದುಗಳು ತಿಂದುಬಿಡುವುವು. ॥35॥
(ಶ್ಲೋಕ-36)
ಮೂಲಮ್ (ವಾಚನಮ್)
ಉರ್ವಶ್ಯುವಾಚ
ಮೂಲಮ್
ಮಾ ಮೃಥಾಃ ಪುರುಷೋಽಸಿ ತ್ವಂ ಮಾ ಸ್ಮ ತ್ವಾದ್ಯುರ್ವೃಕಾ ಇಮೇ ।
ಕ್ವಾಪಿ ಸಖ್ಯಂ ನ ವೈ ಸೀಣಾಂ ವೃಕಾಣಾಂ ಹೃದಯಂ ಯಥಾ ॥
ಅನುವಾದ
ಊರ್ವಶಿಯು ಹೇಳಿದಳು — ರಾಜನೇ! ನೀನು ಪುರುಷನಾಗಿರುವೆ. ಈ ಪ್ರಕಾರವಾಗಿ ಸಾಯಬೇಡ. ಸತ್ತ ನಂತರ ತೋಳಗಳು ನಿನ್ನನ್ನು ತಿನ್ನುವುದು ಬೇಡ. ಸ್ತ್ರೀಯರಲ್ಲಿ ಯಾರೊಂದಿಗೂ ನಿಜವಾದ ಮೈತ್ರಿ ಇರುವುದಿಲ್ಲ. ಸ್ತ್ರೀಯರ ಹೃದಯ ಮತ್ತು ತೋಳಗಳ ಹೃದಯ ಒಂದೇ ರೀತಿಯದಾಗಿರುತ್ತದೆ. ॥36॥
(ಶ್ಲೋಕ-37)
ಮೂಲಮ್
ಸ್ತ್ರಿಯೋ ಹ್ಯಕರುಣಾಃ ಕ್ರೂರಾ ದುರ್ಮರ್ಷಾಃ ಪ್ರಿಯಸಾಹಸಾಃ ।
ಘ್ನಂತ್ಯಲ್ಪಾರ್ಥೇಪಿ ವಿಶ್ರಬ್ಧಂ ಪತಿಂ ಭ್ರಾತರಮಪ್ಯುತ ॥
ಅನುವಾದ
ಸ್ತ್ರೀಯರು ದಯಾಹೀನರಾಗಿರುತ್ತಾರೆ. ಕ್ರೌರ್ಯವು ಅವರ ಸ್ವಾಭಾವಿಕ ಗುಣವೇ ಆಗಿದೆ. ತಾಳ್ಮೆಯಿಲ್ಲದವರು ಪ್ರಿಯವಾದುದನ್ನು ಪಡೆಯಲಿಕ್ಕಾಗಿ ಅಸಾಧ್ಯವಾದ ಕಾರ್ಯವನ್ನು ಮಾಡಿ ಬಿಡುತ್ತಾರೆ. ವಿಶ್ವಾಸವನ್ನಿಟ್ಟಿರುವ ಪತಿಯನ್ನಾಗಲೀ, ಸಹೋದರನನ್ನಾಗಲೀ ಅತ್ಯಲ್ಪ ಪ್ರಯೋಜನಕ್ಕಾಗಿಕೊಂದೇ ಹಾಕುತ್ತಾರೆ. ॥ 37॥
(ಶ್ಲೋಕ-38)
ಮೂಲಮ್
ವಿಧಾಯಾಲೀಕವಿಶ್ರಂಭಮಜ್ಞೇಷು ತ್ಯಕ್ತಸೌಹೃದಾಃ ।
ನವಂ ನವಮಭೀಪ್ಸಂತ್ಯಃ ಪುಂಶ್ಚಲ್ಯಃ ಸ್ವೈರವೃತ್ತಯಃ ॥
ಅನುವಾದ
ಇವರ ಹೃದಯದಲ್ಲಿ ಸೌಹಾರ್ದ್ರವೆಂಬುದು ಎಳ್ಳಷ್ಟಾದರೂ ಇರುವುದಿಲ್ಲ. ಕುಲಟೆಯರಾದ ಈ ಸ್ತ್ರೀಯರು ಅರಿಯದವರಿಗೆ ತೋರಿಕೆಯ ವಿಶ್ವಾಸವನ್ನು ತೋರಿಸುತ್ತಾ ಸ್ವಲ್ಪವಾದರೂ ಮರುಕವಿಲ್ಲದೆ ಹೊಸ-ಹೊಸ ಗಂಡಸರನ್ನು ಹುಡುಕುತ್ತಾ ಸ್ವೇಚ್ಛಾಚಾರಿಣಿಯರಾಗಿರುತ್ತಾರೆ. ॥38॥
(ಶ್ಲೋಕ-39)
ಮೂಲಮ್
ಸಂವತ್ಸರಾಂತೇ ಹಿ ಭವಾನೇಕರಾತ್ರಂ ಮಯೇಶ್ವರ ।
ವತ್ಸ್ಯತ್ಯಪತ್ಯಾನಿ ಚ ತೇ ಭವಿಷ್ಯಂತ್ಯಪರಾಣಿ ಭೋಃ ॥
ಅನುವಾದ
ಮಹರಾಜಾ! ಧೈರ್ಯತಾಳು. ನೀನು ರಾಜರಾಜೇಶ್ವರನಾಗಿರುವೆ. ವರ್ಷಕ್ಕೊಮ್ಮೆ ಒಂದು ರಾತ್ರಿ ನೀನು ನನ್ನೊಡನೆ ಇರಬಹುದಾಗಿದೆ. ಆಗ ನಿನಗೆ ಇನ್ನೂ ಸಂತಾನಗಳು ಆಗಬಹುದು. ॥39॥
(ಶ್ಲೋಕ-40)
ಮೂಲಮ್
ಅಂತರ್ವತ್ನೀಮುಪಾಲಕ್ಷ್ಯ ದೇವೀಂ ಸ ಪ್ರಯಯೌ ಪುರಮ್ ।
ಪುನಸ್ತತ್ರ ಗತೋಽಬ್ದಾಂತೇ ಉರ್ವಶೀಂ ವೀರಮಾತರಮ್ ॥
ಅನುವಾದ
ಊರ್ವಶಿಯು ಗರ್ಭವತಿಯಾಗಿರುವುದನ್ನು ಅರಿತು ಪುರೂರವನು ಸಂತುಷ್ಟನಾಗಿ ತನ್ನ ರಾಜಧಾನಿಗೆ ಮರಳಿದನು. ಒಂದು ವರ್ಷ ಕಳೆದಾಗ ಪುನಃ ಅವಳು ಹೇಳಿದ್ದ ಸ್ಥಳಕ್ಕೆ ಹೋದನು. ಆಗ ಊರ್ವಶಿಯು ಓರ್ವ ವೀರಪುತ್ರನ ತಾಯಿಯಾಗಿದ್ದಳು. ॥40॥
(ಶ್ಲೋಕ-41)
ಮೂಲಮ್
ಉಪಲಭ್ಯ ಮುದಾ ಯುಕ್ತಃ ಸಮುವಾಸ ತಯಾ ನಿಶಾಮ್ ।
ಅಥೈನಮುರ್ವಶೀ ಪ್ರಾಹ ಕೃಪಣಂ ವಿರಹಾತುರಮ್ ॥
ಅನುವಾದ
ಊರ್ವಶಿಯ ಸಮಾಗಮದಿಂದ ರಾಜನಿಗೆ ಮಹದಾನಂದವಾಯಿತು. ಒಂದು ರಾತ್ರಿಯನ್ನು ಅವನು ಅವಳೊಂದಿಗೆ ಕಳೆದನು. ಬೆಳಗ್ಗೆ ಆಗುತ್ತಲೇ ಅಗಲಬೇಕಾದ ಸಮಯಬಂದಾಗ ವಿರಹ ದುಃಖದಿಂದ ಅವನು ದೀನನಾದನು. ಆಗ ಊರ್ವಶಿಯು ಹೇಳಿದಳು. ॥41॥
(ಶ್ಲೋಕ-42)
ಮೂಲಮ್
ಗಂಧರ್ವಾನುಪಧಾವೇಮಾಂಸ್ತುಭ್ಯಂ ದಾಸ್ಯಂತಿ ಮಾಮಿತಿ ।
ತಸ್ಯ ಸಂಸ್ತುವತಸ್ತುಷ್ಟಾ ಅಗ್ನಿಸ್ಥಾಲೀಂ ದದುರ್ನೃಪ ।
ಉರ್ವಶೀಂ ಮನ್ಯಮಾನಸ್ತಾಂ ಸೋಽಬುಧ್ಯತ ಚರನ್ವನೇ ॥
ಅನುವಾದ
‘ಮಹರಾಜ! ನೀನು ಈ ಗಂಧರ್ವರನ್ನು ಸ್ತೋತ್ರ ಮಾಡು. ಅವರು ಬಯಸಿದರೆ ನಿನಗೆ ನನ್ನನ್ನು ಕೊಡಬಹುದು.’ ಆಗ ಪುರೂರವನು ಗಂಧರ್ವರನ್ನು ಸ್ತುತಿಸಿದನು. ಪರೀಕ್ಷಿತನೇ! ಪುರೂರವನ ಸ್ತೋತ್ರದಿಂದ ಸಂತುಷ್ಟರಾದ ಗಂಧರ್ವರು ಅವನಿಗೆ ಒಂದು ಅಗ್ನಿಸ್ಥಾಲಿಯನ್ನು ಕೊಟ್ಟರು. ರಾಜನು ಆ ಅಗ್ನಿಸ್ಥಾಲಿಯನ್ನೇ ಊರ್ವಶಿಯೆಂದು ಭಾವಿಸಿ ಅದನ್ನು ತಬ್ಬಿಕೊಂಡು ವನಗಳಲ್ಲಿ ಅಲೆಯುತ್ತಿದ್ದನು. ॥42॥
(ಶ್ಲೋಕ-43)
ಮೂಲಮ್
ಸ್ಥಾಲೀಂ ನ್ಯಸ್ಯ ವನೇ ಗತ್ವಾ ಗೃಹಾನಾಧ್ಯಾಯತೋ ನಿಶಿ ।
ತ್ರೇತಾಯಾಂ ಸಂಪ್ರವೃತ್ತಾಯಾಂ ಮನಸಿ ತ್ರಯ್ಯವರ್ತತ ॥
ಅನುವಾದ
ಅವನಿಗೆ ಅರಿವು ಮೂಡಿದಾಗ ಅವನು ಆ ಅಗ್ನಿಸ್ಥಾಲಿಯನ್ನು ಅಲ್ಲೇ ಕಾಡಿನಲ್ಲಿ ಬಿಟ್ಟು ತನ್ನ ಅರಮನೆಗೆ ಮರಳಿದನು. ರಾತ್ರಿಯಲ್ಲಿ ರಾಜನು ಸದಾ ಊರ್ವಶಿಯನ್ನೇ ಧ್ಯಾನಿಸುತ್ತಿದ್ದನು. ಹೀಗಿರಲು ಕೃತಯುಗವು ಕಳೆದು ತ್ರೇತಾಯುಗವು ಪ್ರಾರಂಭವಾಯಿತು. ಆಗ ಅವನ ಹೃದಯದಲ್ಲಿ ಋಗ್ಯಜು ಸ್ಸಾಮ ವೇದಗಳು ಪ್ರಕಟಗೊಂಡವು. ॥43॥
(ಶ್ಲೋಕ-44)
ಮೂಲಮ್
ಸ್ಥಾಲೀಸ್ಥಾನಂ ಗತೋಽಶ್ವತ್ಥಂ ಶಮೀಗರ್ಭಂ ವಿಲಕ್ಷ್ಯ ಸಃ ।
ತೇನ ದ್ವೇ ಅರಣೀ ಕೃತ್ವಾ ಉರ್ವಶೀಲೋಕಕಾಮ್ಯಯಾ ॥
(ಶ್ಲೋಕ-45)
ಮೂಲಮ್
ಉರ್ವಶೀಂ ಮಂತ್ರತೋ ಧ್ಯಾಯನ್ನಧರಾರಣಿಮುತ್ತರಾಮ್ ।
ಆತ್ಮಾನಮುಭಯೋರ್ಮಧ್ಯೇ ಯತ್ತತ್ಪ್ರಜನನಂ ಪ್ರಭುಃ ॥
ಅನುವಾದ
ಮೂರು ವೇದಗಳನ್ನು ಹೃದಯದಲ್ಲಿ ಕಂಡುಕೊಂಡ ರಾಜನು ಅಗ್ನಿಸ್ಥಾಲಿಯನ್ನು ಬಿಟ್ಟ ಅರಣ್ಯಕ್ಕೆ ಧಾವಿಸಿದನು. ಅಲ್ಲಿ ಬನ್ನಿಮರದ ಗರ್ಭದಲ್ಲಿ ಒಂದು ಅರಳೀಮರವು ಹುಟ್ಟಿಕೊಂಡಿತ್ತು. ಅದನ್ನು ಕಂಡು ರಾಜನು ಅವುಗಳಿಂದ ಅಗ್ನಿಯನ್ನು ಕಡೆಯುವ ಎರಡು ಅರಣಿ (ಅಗ್ನಿಮಂಥನದ ಮರ)ಗಳನ್ನು ಸಿದ್ಧಪಡಿಸಿದನು. ಮತ್ತೆ ಊರ್ವಶಿಯ ಲೋಕದ ಕಾಮನೆಯಿಂದ ಪುರೂರವನು ಕೆಳಗಿನ ಅರಣಿಯನ್ನು ಊರ್ವಶಿಯನ್ನಾಗಿಯೂ, ಮೇಲಿನ ಅರಣಿಯನ್ನು ಪುರೂರವನನ್ನಾಗಿ, ಮಧ್ಯದ ಮರವನ್ನು ಪುತ್ರರೂಪದಿಂದ ಭಾವಿಸಿಕೊಂಡು ಅಗ್ನಿಯನ್ನು ಪ್ರಜ್ವಲಿಸುವ ಮಂತ್ರಗಳಿಂದ ಅವುಗಳನ್ನು ಕಡೆದನು. ॥44-45॥
(ಶ್ಲೋಕ-46)
ಮೂಲಮ್
ತಸ್ಯ ನಿರ್ಮಂಥನಾಜ್ಜಾತೋ ಜಾತವೇದಾ ವಿಭಾವಸುಃ ।
ತ್ರಯ್ಯಾ ಸ ವಿದ್ಯಯಾ ರಾಜ್ಞಾ ಪುತ್ರತ್ವೇ ಕಲ್ಪಿತಸಿವೃತ್ ॥
ಅನುವಾದ
ಹೀಗೆ ಮಂಥನ ಮಾಡುವಾಗ ಜಾತವೇದಸನೆಂಬ ಅಗ್ನಿಯು ಪ್ರಾದುರ್ಭವಿಸಿದನು. ರಾಜಾ ಪುರೂರವನು ಆ ಅಗ್ನಿಯನ್ನು ತ್ರಯೀ ವಿದ್ಯೆಯ ಮೂಲಕ ಆಹವನೀಯ, ಗಾರ್ಹಪತ್ಯ, ದಕ್ಷಿಣಾಗ್ನಿಗಳೆಂಬ ಮೂರು ವಿಭಾಗಗಳನ್ನು ಮಾಡಿ ಅವನ್ನು ರಾಜನು ಪುತ್ರರೂಪದಿಂದ ಸ್ವೀಕರಿಸಿದನು.॥46॥
(ಶ್ಲೋಕ-47)
ಮೂಲಮ್
ತೇನಾಯಜತ ಯಜ್ಞೇಶಂ ಭಗವಂತಮಧೋಕ್ಷಜಮ್ ।
ಉರ್ವಶೀಲೋಕಮನ್ವಿಚ್ಛನ್ಸರ್ವದೇವಮಯಂ ಹರಿಮ್ ॥
ಅನುವಾದ
ಮತ್ತೆ ಊರ್ವಶಿಯ ಲೋಕದ ಬಯಕೆಯಿಂದ ಪುರೂರವನು ಆ ಮೂರು ಅಗ್ನಿಗಳ ಮೂಲಕ ಸರ್ವದೇವ ಸ್ವರೂಪನೂ, ಇಂದ್ರಿಯಾತೀತನೂ ಆದ ಯಜ್ಞಪತಿ ಭಗವಾನ್ ಶ್ರೀಹರಿಯನ್ನು ಆರಾಧಿಸಿದನು. ॥47॥
(ಶ್ಲೋಕ-48)
ಮೂಲಮ್
ಏಕ ಏವ ಪುರಾ ವೇದಃ ಪ್ರಣವಃ ಸರ್ವವಾಙ್ಮಯಃ ।
ದೇವೋ ನಾರಾಯಣೋ ನಾನ್ಯ ಏಕೋಽಗ್ನಿರ್ವರ್ಣ ಏವ ಚ ॥
ಅನುವಾದ
ಪರೀಕ್ಷಿತನೇ! ತ್ರೇತಾಯುಗಕ್ಕೆ ಮೊದಲು ಕೃತಯುಗದಲ್ಲಿ ಏಕಮಾತ್ರ ಪ್ರಣವ (ಓಂಕಾರ) ಮಾತ್ರ ವೇದವಾಗಿತ್ತು. ಎಲ್ಲ ವೇದ-ಶಾಸ್ತ್ರಗಳು ಅದರ ಅಂತರ್ಭೂತವಾಗಿದ್ದವು. ನಾರಾಯಣನೊಬ್ಬನಲ್ಲದೆ ಇತರ ಯಾವ ದೇವತೆಗಳೂ ಇರಲಿಲ್ಲ. ಅಗ್ನಿಗಳೂ ಮೂರಾಗಿರದೆ ಒಂದೇ ಆಗಿದ್ದಿತು. ಹಂಸವೆಂಬ ಒಂದೇ ವರ್ಣವಿದ್ದಿತು. ॥48॥
(ಶ್ಲೋಕ-49)
ಮೂಲಮ್
ಪುರೂರವಸ ಏವಾಸೀತಯೀ ತ್ರೇತಾಮುಖೇ ನೃಪ ।
ಅಗ್ನಿನಾ ಪ್ರಜಯಾ ರಾಜಾ ಲೋಕಂ ಗಾಂಧರ್ವಮೇಯಿವಾನ್ ॥
ಅನುವಾದ
ರಾಜೇಂದ್ರಾ! ತ್ರೇತಾಯುಗದ ಪ್ರಾರಂಭದಲ್ಲಿ ಪುರೂರವನಿಂದಲೇ ವೇದತ್ರಯೀ ಮತ್ತು ಅಗ್ನಿತ್ರಯೀ ಇವುಗಳ ಆವಿರ್ಭಾವ ವಾಯಿತು. ಪುರೂರವರಾಜನು ಅಗ್ನಿಯನ್ನು ಸಂತಾನ ರೂಪದಿಂದ ಸ್ವೀಕರಿಸಿ ಗಂಧರ್ವಲೋಕವನ್ನು ಹೊಂದಿದನು. ॥49॥
ಅನುವಾದ (ಸಮಾಪ್ತಿಃ)
ಹದಿನಾಲ್ಕನೆಯ ಅಧ್ಯಾಯವು ಮುಗಿಯಿತು ॥14॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ಐಲೋಪಾಖ್ಯಾನೇ ಚತುರ್ದಶೋಽಧ್ಯಾಯಃ ॥14॥