[ಹದಿಮೂರನೆಯ ಅಧ್ಯಾಯ]
ಭಾಗಸೂಚನಾ
ನಿಮಿರಾಜನ ವಂಶದ ವರ್ಣನೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ನಿಮಿರಿಕ್ಷ್ವಾಕುತನಯೋ ವಸಿಷ್ಠಮವೃತರ್ತ್ವಿಜಮ್ ।
ಆರಭ್ಯ ಸತ್ರಂ ಸೋಽಪ್ಯಾಹ ಶಕ್ರೇಣ ಪ್ರಾಗ್ವ ತೋಽಸ್ಮಿ ಭೋಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಇಕ್ಷ್ವಾಕುವಿಗೆ ನಿಮಿ ಎಂಬ ಪುತ್ರನಿದ್ದನು. ಅವನು ಯಜ್ಞವನ್ನು ಪ್ರಾರಂಭಿಸಿ ಮಹರ್ಷಿ ವಸಿಷ್ಠರನ್ನು ಋತ್ವಿಜರನ್ನಾಗಿ ವರಣ ಮಾಡಿದನು. ವಸಿಷ್ಠರು ಹೇಳಿದರು ರಾಜನೇ! ಇಂದ್ರನು ತನ್ನ ಯಜ್ಞಕ್ಕಾಗಿ ನನ್ನನ್ನು ಮೊದಲೇ ವರಣಮಾಡಿರುವನು. ॥1॥
(ಶ್ಲೋಕ-2)
ಮೂಲಮ್
ತಂ ನಿರ್ವರ್ತ್ಯಾಗಮಿಷ್ಯಾಮಿ ತಾವನ್ಮಾಂ ಪ್ರತಿಪಾಲಯ ।
ತೂಷ್ಣಿಮಾಸೀದ್ಗೃಹಪತಿಃ ಸೋಽಪೀಂದ್ರಸ್ಯಾಕರೋನ್ಮಖಮ್ ॥
ಅನುವಾದ
ಅವನ ಯಜ್ಞವನ್ನು ಪೂರೈಸಿ ನಾನು ನಿನ್ನ ಬಳಿಗೆ ಬರುವೆನು. ಅಲ್ಲಿಯವರೆಗೆ ನನ್ನ ಪ್ರತೀಕ್ಷೆ ಮಾಡು. ಈ ಮಾತನ್ನು ಕೇಳಿ ನಿಮಿರಾಜನು ಮೌನವಾಗಿದ್ದನು. ವಸಿಷ್ಠರು ಇಂದ್ರನಿಂದ ಯಜ್ಞವನ್ನು ಮಾಡಿಸಲು ಹೊರಟು ಹೋದರು. ॥2॥
(ಶ್ಲೋಕ-3)
ಮೂಲಮ್
ನಿಮಿಶ್ಚಲಮಿದಂ ವಿದ್ವಾನ್ಸತ್ರಮಾರಭತಾತ್ಮವಾನ್ ।
ಋತ್ವಿಗ್ಭಿರಪರೈಸ್ತಾವನ್ನಾಗಮದ್ಯಾವತಾ ಗುರುಃ ॥
ಅನುವಾದ
ಜೀವನವು ಕ್ಷಣಭಂಗುರವಾದುದರಿಂದ ವಸಿಷ್ಠರಿಗಾಗಿ ಕಾಯುವುದು ಉಚಿತವಲ್ಲವೆಂದು ಭಾವಿಸಿದ ನಿಮಿಯು ವಸಿಷ್ಠರು ಬರುವ ಮೊದಲೇ ಬೇರೆ ಋತ್ವಿಜರನ್ನು ಆಹ್ವಾನಿಸಿ ಯಜ್ಞವನ್ನು ಪ್ರಾರಂಭಿಸಿದನು. ॥3॥
(ಶ್ಲೋಕ-4)
ಮೂಲಮ್
ಶಿಷ್ಯವ್ಯತಿಕ್ರಮಂ ವೀಕ್ಷ್ಯ ನಿರ್ವರ್ತ್ಯ ಗುರುರಾಗತಃ ।
ಅಶಪತ್ಪತತಾದ್ದೇಹೋ ನಿಮೇಃ ಪಂಡಿತಮಾನಿನಃ ॥
ಅನುವಾದ
ಗುರು ವಸಿಷ್ಠರು ಇಂದ್ರನ ಯಜ್ಞವನ್ನು ಮುಗಿಸಿ ಮರಳಿದಾಗ ತನ್ನ ಶಿಷ್ಯನಾದ ನಿಮಿಯು ನನ್ನ ಮಾತನ್ನು ಮನ್ನಿಸದೆ ಯಜ್ಞವನ್ನು ಪ್ರಾರಂಭಿಸಿರುವುದನ್ನು ನೋಡಿದರು. ಅದರಿಂದ ಅವರು ಕೋಪಗೊಂಡು ‘ತನ್ನನ್ನೇ ಮಹಾಪಂಡಿತನೆಂದು ಭಾವಿಸಿಕೊಂಡಿರುವ ನಿನ್ನ ಶರೀರವು ಬಿದ್ದುಹೋಗಲಿ’ ಎಂದು ಶಾಪವನ್ನಿತ್ತರು.॥4॥
(ಶ್ಲೋಕ-5)
ಮೂಲಮ್
ನಿಮಿಃ ಪ್ರತಿದದೌ ಶಾಪಂ ಗುರವೇಽಧರ್ಮವರ್ತಿನೇ ।
ತವಾಪಿ ಪತತಾದ್ದೇಹೋ ಲೋಭಾದ್ಧರ್ಮಮಜಾನತಃ ॥
ಅನುವಾದ
ನಿಮಿಯ ದೃಷ್ಟಿಯಿಂದ ವಸಿಷ್ಠರಿತ್ತ ಶಾಪವು ಧರ್ಮಕ್ಕೆ ವಿರೋಧವಾಗಿತ್ತು. ಈ ಕಾರಣದಿಂದ ಅವನೂ ವಸಿಷ್ಠರಿಗೆ ಶಾಪವನ್ನಿತ್ತನು ‘ಲೋಭಪರವಶನಾಗಿ ಧರ್ಮವನ್ನು ಆದರಿಸದೇ ಇರುವುದರಿಂದ ನಿನ್ನ ಶರೀರವೂ ಬಿದ್ದುಹೋಗಲಿ.’ ॥5॥
(ಶ್ಲೋಕ-6)
ಮೂಲಮ್
ಇತ್ಯುತ್ಸಸರ್ಜ ಸ್ವಂ ದೇಹಂ ನಿಮಿರಧ್ಯಾತ್ಮಕೋವಿದಃ ।
ಮಿತ್ರಾವರುಣರ್ಯೋರ್ಜಜ್ಞೇ ಉರ್ವಶ್ಯಾಂ ಪ್ರಪಿತಾಮಹಃ ॥
ಅನುವಾದ
ಹೀಗೆ ಶಾಪವನ್ನಿತ್ತು ಆತ್ಮವಿದ್ಯಾನಿಪುಣ ನಾದ ನಿಮಿಯು ದೇಹತ್ಯಾಗಮಾಡಿದನು. ಪರೀಕ್ಷಿತನೇ! ಇತ್ತ ನನ್ನ ವೃದ್ಧ ಪ್ರಪಿತಾಮಹರಾದ ವಸಿಷ್ಠರೂ ಕೂಡ ತನ್ನ ಶರೀರವನ್ನು ತ್ಯಜಿಸಿ, ಮಿತ್ರಾವರುಣರ ಪುತ್ರರಾಗಿ ಊರ್ವಶಿಯ ಗರ್ಭದಲ್ಲಿ ಜನ್ಮತಾಳಿದರು. ॥6॥
(ಶ್ಲೋಕ-7)
ಮೂಲಮ್
ಗಂಧವಸ್ತುಷು ತದ್ದೇಹಂ ನಿಧಾಯ ಮುನಿಸತ್ತಮಾಃ ।
ಸಮಾಪ್ತೇ ಸತ್ರಯಾಗೇಽಥ ದೇವಾನೂಚುಃ ಸಮಾಗತಾನ್ ॥
ಅನುವಾದ
ನಿಮಿರಾಜನ ಯಜ್ಞಕ್ಕೆ ಬಂದಿರುವ ಶ್ರೇಷ್ಠಮುನಿಗಳು ರಾಜನ ಶರೀರವನ್ನು ಸುಗಂಧಿತ ವಸ್ತುಗಳಲ್ಲಿ ಇರಿಸಿದರು. ಸತ್ರಯಾಗವು ಮುಗಿದು ದೇವತೆಗಳು ಆಗಮಿಸಿದಾಗ ಋತ್ವಿಜರೆಲ್ಲರೂ ಸೇರಿ ದೇವತೆಗಳನ್ನು ಪ್ರಾರ್ಥಿಸಿದರು. ॥7॥
(ಶ್ಲೋಕ-8)
ಮೂಲಮ್
ರಾಜ್ಞೋ ಜೀವತು ದೇಹೋಽಯಂ ಪ್ರಸನ್ನಾಃ ಪ್ರಭವೋ ಯದಿ ।
ತಥೇತ್ಯುಕ್ತೇ ನಿಮಿಃ ಪ್ರಾಹ ಮಾ ಭೂನ್ಮೇ ದೇಹಬಂಧನಮ್ ॥
ಅನುವಾದ
ಮಹಾನುಭಾವರೇ! ನೀವೆಲ್ಲ ಸಮರ್ಥರಾಗಿದ್ದೀರಿ. ನೀವು ಈ ಯಾಗದಿಂದ ಪ್ರಸನ್ನರಾಗಿರುವಿರಾದರೆ ನಿಮಿರಾಜನ ಶರೀರವು ಪುನಃ ಜೀವಿತವಾಗಲಿ. ‘ಹಾಗೆಯೇ ಆಗಲಿ’ ಎಂದು ದೇವತೆಗಳು ಹೇಳಿದಾಗ ನಿಮಿಯು ಹೇಳಿದನು ‘ನನಗೆ ಪುನಃ ದೇಹದ ಬಂಧನಬೇಕಾಗಿಲ್ಲ. ॥8॥
(ಶ್ಲೋಕ-9)
ಮೂಲಮ್
ಯಸ್ಯ ಯೋಗಂ ನ ವಾಂಛಂತಿ ವಿಯೋಗಭಯಕಾತರಾಃ ।
ಭಜಂತಿ ಚರಣಾಂಭೋಜಂ ಮುನಯೋ ಹರಿಮೇಧಸಃ ॥
ಅನುವಾದ
ವಿಚಾರಶೀಲರಾದ ಮುನಿಗಳು ತಮ್ಮ ಬುದ್ಧಿಯನ್ನು ಪೂರ್ಣವಾಗಿ ಭಗವಂತನಲ್ಲೇ ತೊಡಗಿಸುವರು. ಅವನ ಚರಣಕಮಲಗಳನ್ನೇ ಭಜಿಸುತ್ತಾರೆ. ಒಂದಲ್ಲ ಒಂದುದಿನ ಈ ಶರೀರವು ಖಂಡಿತವಾಗಿ ಬಿದ್ದುಹೋಗುವುದು. ಈ ಭಯದಿಂದಾಗಿ ಅವರು ಈ ಶರೀರದ ಸಂಯೋಗವನ್ನು ಎಂದಿಗೂ ಬಯಸುವುದಿಲ್ಲ. ಅವರಾದರೋ ಮುಕ್ತರಾಗಲು ಬಯಸುತ್ತಿರುವರು. ॥9॥
(ಶ್ಲೋಕ-10)
ಮೂಲಮ್
ದೇಹಂ ನಾವರುರುತ್ಸೇಽಹಂ ದುಃಖಶೋಕ ಭಯಾವಹಮ್ ।
ಸರ್ವತ್ರಾಸ್ಯ ಯತೋ ಮೃತ್ಯುರ್ಮತ್ಸ್ಯಾನಾಮುದಕೇ ಯಥಾ ॥
ಅನುವಾದ
ಆದ್ದರಿಂದ ನಾನು ಈಗ ದುಃಖ, ಶೋಕ, ಭಯಕ್ಕೆ ಮೂಲಕಾರಣವಾದ ಈ ಶರೀರವನ್ನು ಧರಿಸಲು ಬಯಸುವುದಿಲ್ಲ. ನೀರಿನಲ್ಲಿರುವ ಮೀನಿಗೆ ಎಲ್ಲೆಡೆ ಮೃತ್ಯು ಭಯವೇ ಇರುವಂತೆ ಈ ಶರೀರಕ್ಕೂ ಎಲ್ಲೆಡೆ ಮೃತ್ಯುವೇ ಮೃತ್ಯುವಿದೆ.’ ॥10॥
(ಶ್ಲೋಕ-11)
ಮೂಲಮ್ (ವಾಚನಮ್)
ದೇವಾ ಊಚುಃ
ಮೂಲಮ್
ವಿದೇಹ ಉಷ್ಯತಾಂ ಕಾಮಂ ಲೋಚನೇಷು ಶರೀರಿಣಾಮ್ ।
ಉನ್ಮೇಷಣನಿಮೇಷಾಭ್ಯಾಂ ಲಕ್ಷಿತೋಽಧ್ಯಾತ್ಮಸಂಸ್ಥಿತಃ ॥
ಅನುವಾದ
ದೇವತೆಗಳು ಹೇಳಿದರು — ಮುನಿಗಳೇ! ನಿಮಿರಾಜನು ತನ್ನ ಇಚ್ಛೆಯಂತೆ ಶರೀರರಹಿತನಾಗಿ ಪ್ರಾಣಿಗಳ ಕಣ್ಣುಗಳಲ್ಲಿ ನೆಲಸಲಿ. ಅವನು ಅಲ್ಲಿದ್ದುಕೊಂಡು ಸೂಕ್ಷ್ಮಶರೀರದಿಂದ ಭಗವಂತನನ್ನು ಧ್ಯಾನಮಾಡಲಿ. ರೆಪ್ಪೆಗಳು ಮುಚ್ಚಿ ತೆರೆಯುವುದರಿಂದ ಅವನ ಅಸ್ತಿತ್ವದ ಅರಿವು ಉಂಟಾಗುವುದು. ॥11॥
(ಶ್ಲೋಕ-12)
ಮೂಲಮ್
ಅರಾಜಕಭಯಂ ನೃಣಾಂ ಮನ್ಯಮಾನಾ ಮಹರ್ಷಯಃ ।
ದೇಹಂ ಮಮಂಥುಃ ಸ್ಮ ನಿಮೇಃ ಕುಮಾರಃ ಸಮಜಾಯತ ॥
ಅನುವಾದ
ಇದಾದ ಬಳಿಕ ರಾಜನು ಇಲ್ಲದಿದ್ದಾಗ ಜನರಲ್ಲಿ ಅರಾಜಕತೆ ಹರಡಿಕೊಂಡೀತು ಎಂದು ಯೋಚಿಸಿದ ಮಹರ್ಷಿಗಳು ನಿಮಿ ರಾಜನ ಶರೀರವನ್ನು ಕಡೆದರು. ಅದರಿಂದ ಓರ್ವ ಕುಮಾರನು ಹುಟ್ಟಿದನು. ॥12॥
(ಶ್ಲೋಕ-13)
ಮೂಲಮ್
ಜನ್ಮನಾ ಜನಕಃ ಸೋಽಭೂದ್ವೈದೇಹಸ್ತು ವಿದೇಹಜಃ ।
ಮಿಥಿಲೋ ಮಥನಾಜ್ಜಾತೋ ಮಿಥಿಲಾ ಯೇನ ನಿರ್ಮಿತಾ ॥
ಅನುವಾದ
ಅಸಾಧಾರಣವಾದ ರೀತಿಯಲ್ಲಿ ಹುಟ್ಟಿದ ಕಾರಣ ಜನಕನೆಂದೂ, ಪ್ರಾಣವಿಲ್ಲದ ದೇಹದಿಂದ ಹುಟ್ಟಿದ್ದರಿಂದ ವಿದೇಹನೆಂದೂ, ಶರೀರ ಮಂಥನದಿಂದ ಹುಟ್ಟಿದನಾದ್ದರಿಂದ ಮಿಥಿಲನೆಂದೂ ಆ ಕುಮಾರನನ್ನು ಜನರು ಕರೆದರು. ಇವನೇ ಮಿಥಿಲಾಪುರಿಯನ್ನು ನಿರ್ಮಿಸಿದನು. ॥13॥
(ಶ್ಲೋಕ-14)
ಮೂಲಮ್
ತಸ್ಮಾದುದಾವಸುಸ್ತಸ್ಯ ಪುತ್ರೋಽಭೂನ್ನಂದಿವರ್ಧನಃ ।
ತತಃ ಸುಕೇತುಸ್ತಸ್ಯಾಪಿ ದೇವರಾತೋ ಮಹೀಪತೇ ॥
(ಶ್ಲೋಕ-15)
ಮೂಲಮ್
ತಸ್ಮಾದ್ಬೃಹದ್ರಥಸ್ತಸ್ಯ ಮಹಾವೀರ್ಯಃ ಸುಧೃತ್ಪಿತಾ ।
ಸುಧೃತೇರ್ಧೃಷ್ಟಕೇತುರ್ವೈ ಹರ್ಯಶ್ವೋಽಥ ಮರುಸ್ತತಃ ॥
ಅನುವಾದ
ಪರೀಕ್ಷಿತನೇ! ಜನಕನಿಗೆ ಉದಾವಸುವೆಂಬ ಪುತ್ರನು ಹುಟ್ಟಿದನು. ಅವನಿಗೆ ನಂದಿವರ್ಧನನು ಹುಟ್ಟಿದನು. ನಂದಿವರ್ಧನನಿಂದ ಸುಕೇತು, ಅವನಿಗೆ ದೇವರಾತ, ದೇವರಾತನಿಗೆ ಬೃಹದ್ರಥ, ಬೃಹದ್ರಥನಿಗೆ ಮಹಾವೀರ್ಯ, ಮಹಾವೀರ್ಯನಿಗೆ ಸುಧೃತಿ, ಸುಧೃತಿಯಿಂದ ಧೃಷ್ಟಕೇತು, ಧೃಷ್ಟಕೇತುವಿನಿಂದ ಹರ್ಯಶ್ವ, ಅವನಿಗೆ ಮರು ಎಂಬ ಪುತ್ರನು ಹುಟ್ಟಿದನು. ॥14-15॥
(ಶ್ಲೋಕ-16)
ಮೂಲಮ್
ಮರೋಃ ಪ್ರತೀಪಕಸ್ತಸ್ಮಾಜ್ಜಾತಃ ಕೃತಿರಥೋ ಯತಃ ।
ದೇವಮೀಢಸ್ತಸ್ಯ ಸುತೋ ವಿಶ್ರುತೋಽಥ ಮಹಾಧೃತಿಃ ॥
ಅನುವಾದ
ಮರುವಿನಿಂದ ಪ್ರತೀಪಕ, ಪ್ರತೀಪಕನಿಂದ ಕೃತಿರಥ, ಕೃತಿರಥನಿಂದ ದೇವಮೀಢ, ದೇವಮೀಢನಿಂದ ವಿಶ್ರುತ, ವಿಶ್ರುತನಿಂದ ಮಹಾಧೃತಿಯ ಜನ್ಮವಾಯಿತು. ॥16॥
(ಶ್ಲೋಕ-17)
ಮೂಲಮ್
ಕೃತಿರಾತಸ್ತತಸ್ತಸ್ಮಾನ್ಮಹಾರೋಮಾಥ ತತ್ಸುತಃ ।
ಸ್ವರ್ಣರೋಮಾ ಸುತಸ್ತಸ್ಯ ಹ್ರಸ್ವರೋಮಾ ವ್ಯಜಾಯತ ॥
ಅನುವಾದ
ಮಹಾಧೃತಿಗೆ ಕೃತಿರಾತ, ಕೃತಿರಾತನಿಗೆ ಮಹಾರೋಮಾ, ಮಹಾರೋಮನಿಗೆ ಸ್ವರ್ಣರೋಮಾ, ಸ್ವರ್ಣರೋಮನಿಗೆ ಹ್ರಸ್ವರೋಮನು ಮಗನಾದನು. ॥17॥
(ಶ್ಲೋಕ-18)
ಮೂಲಮ್
ತತಃ ಸೀರಧ್ವಜೋ ಜಜ್ಞೇ ಯಜ್ಞಾರ್ಥಂ ಕರ್ಷತೋ ಮಹೀಮ್ ।
ಸೀತಾ ಸೀರಾಗ್ರತೋ ಜಾತಾ ತಸ್ಮಾತ್ಸೀರಧ್ವಜಃ ಸ್ಮೃತಃ ॥
ಅನುವಾದ
ಇದೇ ಹ್ರಸ್ವರೋಮನ ಪುತ್ರ ಸೀರಧ್ವಜ ಮಹಾರಾಜನಾಗಿದ್ದನು. ಅವನು ಯಜ್ಞಕ್ಕಾಗಿ ನೆಲವನ್ನು ಊಳುತ್ತಿರುವಾಗ ನೇಗಿಲಿನ ತುದಿಯಿಂದಾಗಿ ಭೂಮಿಯಿಂದ ಸೀತೆಯು ಜನ್ಮತಾಳಿದಳು. ಇದರಿಂದ ಇವನ ಹೆಸರು ಸೀರಧ್ವಜನೆಂದಾಯಿತು. ॥18॥
(ಶ್ಲೋಕ-19)
ಮೂಲಮ್
ಕುಶಧ್ವಜಸ್ತಸ್ಯ ಪುತ್ರಸ್ತತೋ ಧರ್ಮಧ್ವಜೋ ನೃಪಃ ।
ಧರ್ಮಧ್ವಜಸ್ಯ ದ್ವೌ ಪುತ್ರೌ ಕೃತಧ್ವಜಮಿತಧ್ವಜೌ ॥
ಅನುವಾದ
ಸೀರಧ್ವಜನಿಗೆ ಕುಶಧ್ವಜ, ಕುಶಧ್ವಜನಿಗೆ ಧರ್ಮಧ್ವಜ, ಧರ್ಮಧ್ವಜನಿಗೆ ಕೃತಧ್ವಜ ಮತ್ತು ಮಿತಧ್ವಜರೆಂಬ ಇಬ್ಬರು ಪುತ್ರರಾದರು. ॥19॥
(ಶ್ಲೋಕ-20)
ಮೂಲಮ್
ಕೃತಧ್ವಜಾತ್ಕೇಶಿಧ್ವಜಃ ಖಾಂಡಿಕ್ಯಸ್ತು ಮಿತಧ್ವಜಾತ್ ।
ಕೃತಧ್ವಜಸುತೋ ರಾಜನ್ನಾತ್ಮವಿದ್ಯಾವಿಶಾರದಃ ॥
ಅನುವಾದ
ಕೃತಧ್ವಜನಿಗೆ ಕೇಶಿಧ್ವಜ ಮತ್ತು ಮಿತಧ್ವಜನಿಗೆ ಖಾಂಡಿಕ್ಯ ಹುಟ್ಟಿದ್ದನು. ಕೇಶಿಧ್ವಜನು ಆತ್ಮವಿದ್ಯೆಯಲ್ಲಿ ಮಹಾಪ್ರವೀಣನಾಗಿದ್ದನು. ॥20॥
(ಶ್ಲೋಕ-21)
ಮೂಲಮ್
ಖಾಂಡಿಕ್ಯಃ ಕರ್ಮತತ್ತ್ವಜ್ಞೋ ಭೀತಃ ಕೇಶಿಧ್ವಜಾದ್ದ್ರುತಃ ।
ಭಾನುಮಾಂಸ್ತಸ್ಯ ಪುತ್ರೋಽಭೂಚ್ಛತದ್ಯುಮ್ನಸ್ತು ತತ್ಸುತಃ ॥
ಅನುವಾದ
ಖಾಂಡಿಕ್ಯನು ಕರ್ಮಕಾಂಡದ ಮರ್ಮಜ್ಞನಾಗಿದ್ದನು. ಅವನು ಕೇಶಿಧ್ವಜನಿಂದ ಭಯಗೊಂಡು ಓಡಿಹೋದನು. ಕೇಶಿಧ್ವಜನ ಪುತ್ರ ಭಾನುಮಾನ್, ಭಾನುಮಂತನಿಗೆ ಶತದ್ಯುಮ್ನ ಮಗ ಹುಟ್ಟಿದನು. ॥21॥
(ಶ್ಲೋಕ-22)
ಮೂಲಮ್
ಶುಚಿಸ್ತತ್ತನಯಸ್ತಸ್ಮಾತ್ಸನದ್ವಾಜಸ್ತತೋಽಭವತ್ ।
ಊರ್ಧ್ವಕೇತುಃ ಸನದ್ವಾಜಾದಜೋಽಥ ಪುರುಜಿತ್ಸುತಃ ॥
(ಶ್ಲೋಕ-23)
ಮೂಲಮ್
ಅರಿಷ್ಟನೇಮಿಸ್ತಸ್ಯಾಪಿ ಶ್ರುತಾಯುಸ್ತತ್ಸುಪಾರ್ಶ್ವಕಃ ।
ತತಶ್ಚಿತ್ರರಥೋ ಯಸ್ಯ ಕ್ಷೇಮಧಿರ್ಮಿಥಿಲಾಧಿಪಃ ॥
ಅನುವಾದ
ಶತದ್ಯುಮ್ನನಿಂದ ಶುಚಿ, ಶುಚಿಯಿಂದ ಸನದ್ವಾಜ, ಸನದ್ವಾಜನಿಂದ ಊರ್ಧ್ವಕೇತು, ಊರ್ಧ್ವಕೇತುವಿನಿಂದ ಅಜ, ಅಜನಿಂದ ಪುರುಜಿತ್, ಪುರುಜಿತ್ತುವಿನಿಂದ ಅರಿಷ್ಟನೇಮಿ, ಅರಿಷ್ಟನೇಮಿಯಿಂದ ಶ್ರುತಾಯು, ಶ್ರುತಾಯುವಿನಿಂದ ಸುಪಾರ್ಶ್ವಕ, ಸುಪಾರ್ಶ್ವಕನಿಂದ ಚಿತ್ರರಥ, ಚಿತ್ರರಥನಿಂದ ಮಿಥಿಲಾಪತಿ ಕ್ಷೇಮಧಿಯ ಜನ್ಮವಾಯಿತು. ॥22-23॥
(ಶ್ಲೋಕ-24)
ಮೂಲಮ್
ತಸ್ಮಾತ್ಸಮರಥಸ್ತಸ್ಯ ಸುತಃ ಸತ್ಯರಥಸ್ತತಃ ।
ಆಸೀದುಪಗುರುಸ್ತಸ್ಮಾದುಪಗುಪ್ತೋಽಗ್ನಿಸಂಭವಃ ॥
ಅನುವಾದ
ಕ್ಷೇಮಧಿಯಿಂದ ಸಮರಥ, ಸಮರಥನಿಂದ ಸತ್ಯರಥ, ಸತ್ಯರಥನಿಂದ ಉಪಗುರು, ಉಪಗುರುವಿನಿಂದ ಉಪಗುಪ್ತನೆಂಬ ಪುತ್ರನಾದನು. ಇವನು ಅಗ್ನಿಯ ಅಂಶನಾಗಿದ್ದನು. ॥24॥
(ಶ್ಲೋಕ-25)
ಮೂಲಮ್
ವಸ್ವನಂತೋಽಥ ತತ್ಪುತ್ರೋ ಯುಯುಧೋ ಯತ್ಸುಭಾಷಣಃ ।
ಶ್ರುತಸ್ತತೋ ಜಯಸ್ತಸ್ಮಾದ್ವಿಜಯೋಽಸ್ಮಾದೃತಃ ಸುತಃ ॥
ಅನುವಾದ
ಉಪಗುಪ್ತನಿಂದ ವಸ್ವನಂತ, ವಸ್ವನಂತನಿಂದ ಯುಯುಧ, ಯುಯುಧನಿಂದ ಸುಭಾಷಣ, ಸುಭಾಷಣನಿಂದ ಶ್ರುತ, ಶ್ರುತನಿಂದ ಜಯ, ಜಯನಿಂದ ವಿಜಯ, ವಿಜಯನಿಂದ ಋತನೆಂಬ ಪುತ್ರನು ಹುಟ್ಟಿದನು. ॥25॥
(ಶ್ಲೋಕ-26)
ಮೂಲಮ್
ಶುನಕಸ್ತತ್ಸುತೋ ಜಜ್ಞೇ ವೀತಹವ್ಯೋ ಧೃತಿಸ್ತತಃ ।
ಬಹುಲಾಶ್ವೋ ಧೃತೇಸ್ತಸ್ಯ ಕೃತಿರಸ್ಯ ಮಹಾವಶೀ ॥
ಅನುವಾದ
ಋತನಿಗೆ ಶುನಕ, ಶುನಕನಿಗೆ ವೀತಹವ್ಯ, ವೀತಹವ್ಯ ನಿಂದ ಧೃತಿ, ಧೃತಿಯಿಂದ ಬಹುಲಾಶ್ವ, ಬಹುಲಾಶ್ವನಿಂದ ಕೃತಿ, ಕೃತಿಗೆ ಮಹಾವಶೀ ಎಂಬ ಪುತ್ರನು ಜನಿಸಿದನು. ॥26॥
(ಶ್ಲೋಕ-27)
ಮೂಲಮ್
ಏತೇ ವೈ ಮೈಥಿಲಾ ರಾಜನ್ನಾತ್ಮವಿದ್ಯಾವಿಶಾರದಾಃ ।
ಯೋಗೇಶ್ವರಪ್ರಸಾದೇನ ದ್ವಂದ್ವೈರ್ಮುಕ್ತಾ ಗೃಹೇಷ್ವಪಿ ॥
ಅನುವಾದ
ಪರೀಕ್ಷಿತನೇ! ಇವರೆಲ್ಲರೂ ಮಿಥಿಲನ ವಂಶದಲ್ಲಿ ಹುಟ್ಟಿದ್ದರಿಂದ ಮೈಥಿಲರೆಂದು ಕರೆಸಿಕೊಂಡರು. ಇವರೆಲ್ಲರೂ ಆತ್ಮಜ್ಞಾನದಿಂದ ಸಂಪನ್ನರಾಗಿದ್ದು, ಗೃಹಸ್ಥಾಶ್ರಮದಲ್ಲೇ ಇದ್ದು ಸುಖ-ದುಃಖಾದಿ ದ್ವಂದ್ವಗಳಿಂದ ಮುಕ್ತರಾಗಿದ್ದರು. ಯಾಜ್ಞವಲ್ಕ್ಯಾದಿ ಮಹಾ-ಮಹಾ ಯೋಗೇಶ್ವರರ ಮಹಾನ್ ಕೃಪೆಯು ಇವರ ಮೇಲೆ ಇತ್ತು. ॥27॥
ಅನುವಾದ (ಸಮಾಪ್ತಿಃ)
ಹದಿಮೂರನೆಯ ಅಧ್ಯಾಯವು ಮುಗಿಯಿತು. ॥13॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ನಿಮಿವಂಶಾನುವರ್ಣನಂ ನಾಮ ತ್ರಯೋದಶೋಽಧ್ಯಾಯಃ ॥13॥