[ಹನ್ನೊಂದನೆಯ ಅಧ್ಯಾಯ]
ಭಾಗಸೂಚನಾ
ಭಗವಾನ್ ಶ್ರೀರಾಮನ ಉಳಿದ ಲೀಲೆಗಳ ವರ್ಣನೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಭಗವಾನಾತ್ಮನಾತ್ಮಾಽಽನಂ ರಾಮ ಉತ್ತಮಕಲ್ಪಕೈಃ ।
ಸರ್ವದೇವಮಯಂ ದೇವಮೀಜ ಆಚಾರ್ಯವಾನ್ಮಖೈಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಷಡ್ಗುಣೈಶ್ವರ್ಯಸಂಪನ್ನನಾದ ಶ್ರೀರಾಮನು ಗುರು ವಸಿಷ್ಠರನ್ನು ಆಚಾರ್ಯನನ್ನಾಗಿ ಇಟ್ಟುಕೊಂಡು ಶ್ರೇಷ್ಠತಮವಾದ ಸಾಮಗ್ರಿಗಳಿಂದ ಕೂಡಿದ ಯಜ್ಞದ ಮೂಲಕ ಸರ್ವದೇವ ಸ್ವರೂಪನಾದ, ಸ್ವಯಂ ಪ್ರಕಾಶನಾದ ಪರಮಾತ್ಮನನ್ನು ಆರಾಧಿಸಿದನು. ॥1॥
(ಶ್ಲೋಕ-2)
ಮೂಲಮ್
ಹೋತ್ರೇಽದದಾದ್ದಿಶಂ ಪ್ರಾಚೀಂ ಬ್ರಹ್ಮಣೇ ದಕ್ಷಿಣಾಂ ಪ್ರಭುಃ ।
ಅಧ್ವರ್ಯವೇ ಪ್ರತೀಚೀಂ ಚ ಉದೀಚೀಂ ಸಾಮಗಾಯ ಸಃ ॥
ಅನುವಾದ
ಯಜ್ಞಾಂತ್ಯದಲ್ಲಿ ಶ್ರೀರಾಮನು ಹೋತೃವಿಗೆ ಪೂರ್ವದಿಕ್ಕನ್ನೂ, ಬ್ರಹ್ಮನಿಗೆ ದಕ್ಷಿಣದಿಕ್ಕನ್ನೂ, ಅಧ್ವರ್ಯುವಿಗೆ ಪಶ್ಚಿಮದಿಕ್ಕನ್ನೂ, ಉದ್ಗಾತೃವಿಗೆ ಉತ್ತರದಿಕ್ಕನ್ನೂ (ಈ ದಿಕ್ಕುಗಳಿದ್ದ ರಾಜ್ಯಗಳನ್ನು) ದಕ್ಷಿಣೆಯ ರೂಪದಲ್ಲಿ ಕೊಟ್ಟನು.॥2॥
(ಶ್ಲೋಕ-3)
ಮೂಲಮ್
ಆಚಾರ್ಯಾಯ ದದೌ ಶೇಷಾಂ ಯಾವತೀ ಭೂಸ್ತದಂತರಾ ।
ಮನ್ಯಮಾನ ಇದಂ ಕೃತ್ಸ್ನಂ ಬ್ರಾಹ್ಮಣೋಽರ್ಹತಿ ನಿಃಸ್ಪೃಹಃ ॥
ಅನುವಾದ
ಇವುಗಳ ಮಧ್ಯ ಭಾಗದಲ್ಲಿದ್ದ ಭೂಭಾಗವೆಲ್ಲವನ್ನು ಆಚಾರ್ಯರಾಗಿದ್ದ ವಸಿಷ್ಠರಿಗೆ ದಕ್ಷಿಣೆಯಾಗಿ ನೀಡಿದನು. ಅಖಂಡ ಭೂಮಂಡಲಕ್ಕೂ ನಿಃಸ್ಪೃಹರಾದ ಬ್ರಾಹ್ಮಣರೇ ಏಕಮಾತ್ರ ಅಧಿಕಾರಿಗಳಾಗಿದ್ದಾರೆ ಎಂಬುದು ಶ್ರೀರಾಮನ ನಿಶ್ಚಯವಾಗಿತ್ತು. ॥3॥
(ಶ್ಲೋಕ-4)
ಮೂಲಮ್
ಇತ್ಯಯಂ ತದಲಂಕಾರವಾಸೋಭ್ಯಾಮವಶೇಷಿತಃ ।
ತಥಾ ರಾಜ್ಞ್ಯಪಿ ವೈದೇಹೀ ಸೌಮಂಗಲ್ಯಾವಶೇಷಿತಾ ॥
ಅನುವಾದ
ಹೀಗೆ ಅಖಂಡ ಭೂಮಂಡಲವನ್ನು ದಾನಮಾಡಿದ ನಂತರ ಅವನ ಬಳಿಯಲ್ಲಿ ಉಟ್ಟವಸ, ತೊಟ್ಟ ಅಲಂಕಾರಾದಿಗಳು ಮಾತ್ರ ಉಳಿದಿದ್ದುವು. ಅಂತೆಯೇ ಪಟ್ಟಮಹಿಷಿಯಾದ ಸೀತಾದೇವಿಯಲ್ಲಿಯೂ ಮಾಂಗಲ್ಯ ಸೂಚಕ ವಸ್ತ್ರಾಭರಣಗಳು ಮಾತ್ರವೇ ಉಳಿದಿದ್ದುವು. ॥4॥
(ಶ್ಲೋಕ-5)
ಮೂಲಮ್
ತೇ ತು ಬ್ರಹ್ಮಣ್ಯದೇವಸ್ಯ ವಾತ್ಸಲ್ಯಂ ವೀಕ್ಷ್ಯ ಸಂಸ್ತುತಮ್ ।
ಪ್ರೀತಾಃ ಕ್ಲಿನ್ನಧಿಯಸ್ತಸ್ಮೈ ಪ್ರತ್ಯರ್ಪ್ಯೇದಂ ಬಭಾಷಿರೇ ॥
ಅನುವಾದ
ಭಗವಾನ್ ಶ್ರೀರಾಮನಾದರೋ ಬ್ರಾಹ್ಮಣರನ್ನೇ ತನ್ನ ಇಷ್ಟದೇವರಾಗಿ ಭಾವಿಸಿದ್ದಾನೆ, ಅವನ ಹೃದಯದಲ್ಲಿ ಬ್ರಾಹ್ಮಣರ ಕುರಿತು ಅನಂತ ಪ್ರೀತಿಯಿದೆ ಎಂಬುದನ್ನು ಅರಿತ ಆಚಾರ್ಯಾದಿ ಬ್ರಾಹ್ಮಣರ ಹೃದಯವು ಪ್ರೇಮದಿಂದ ದ್ರವಿತವಾಯಿತು. ಅವರು ಸಂತುಷ್ಟರಾಗಿ ಇಡೀ ಪೃಥಿವಿಯನ್ನು ಭಗವಂತನಿಗೆ ಮರಳಿ ಒಪ್ಪಿಸಿ ವಿಜ್ಞಾಪಿಸಿಕೊಂಡರು.॥5॥
(ಶ್ಲೋಕ-6)
ಮೂಲಮ್
ಅಪ್ರತ್ತಂ ನಸ್ತ್ವಯಾ ಕಿಂ ನು ಭಗವನ್ಭುವನೇಶ್ವರ ।
ಯನ್ನೋಽಂತರ್ಹೃದಯಂ ವಿಶ್ಯ ತಮೋ ಹಂಸಿ ಸ್ವರೋಚಿಷಾ ॥
ಅನುವಾದ
ಪ್ರಭುವೇ! ನೀನು ಸರ್ವಲೋಕಗಳ ಏಕಮಾತ್ರ ಸ್ವಾಮಿಯಾಗಿರುವೆ. ನೀನಾದರೋ ನಮ್ಮ ಹೃದಯದೊಳಗಿದ್ದು ನಿನ್ನ ತೇಜಸ್ಸಿನಿಂದ ಅಜ್ಞಾನಾಂಧ ಕಾರವನ್ನು ನಾಶಪಡಿಸುತ್ತಿರುವೆ. ಹೀಗಿರುವಾಗ ನೀನು ನಮಗೆ ಕೊಡದಿರುವ ವಸ್ತುವು ಯಾವುದು ತಾನೇ ಇದೆ? (ಆತ್ಮವಸ್ತುವನ್ನೇ ನಮಗೆ ದರ್ಶನಮಾಡಿಸಿರುವಾಗ ಬೇರಾವುದನ್ನು ನಮಗೆ ಕೊಡಬೇಕಾಗಿದೆ?) ॥6॥
(ಶ್ಲೋಕ-7)
ಮೂಲಮ್
ನಮೋ ಬ್ರಹ್ಮಣ್ಯದೇವಾಯ ರಾಮಾಯಾಕುಂಠ ಮೇಧಸೇ ।
ಉತ್ತಮಶ್ಲೋಕಧುರ್ಯಾಯ ನ್ಯಸ್ತದಂಡಾರ್ಪಿತಾಂಘ್ರಯೇ ॥
ಅನುವಾದ
ಪ್ರಭೋ! ನಿನ್ನ ಜ್ಞಾನವು ಅನಂತವಾಗಿದೆ. ಪುಣ್ಯಶ್ಲೋಕರಲ್ಲಿ ನೀನು ಅಗ್ರಗಣ್ಯನಾಗಿರುವೆ. ಯಾರನ್ನು ಯಾವ ಕಾರಣದಿಂದಲೂ ಪೀಡಿಸದಿರುವ ಮಹಾತ್ಮರಿಗೆ ನೀನು ತನ್ನ ಚರಣಕಮಲಗಳನ್ನು ಕರುಣಿಸಿರುವೆ. ಹೀಗಿದ್ದರೂ ನೀನು ಬ್ರಾಹ್ಮಣರನ್ನು ನಿನ್ನ ಇಷ್ಟ ದೇವರೆಂದು ಭಾವಿಸುತ್ತಿರುವೆ. ಭಗವಂತಾ! ನಿನ್ನ ಈ ರಾಮರೂಪವನ್ನು ನಾವು ನಮಸ್ಕರಿಸುತ್ತೇವೆ. ॥7॥
(ಶ್ಲೋಕ-8)
ಮೂಲಮ್
ಕದಾಚಿಲ್ಲೋಕಜಿಜ್ಞಾಸುರ್ಗೂಢೋ ರಾತ್ರ್ಯಾಮಲಕ್ಷಿತಃ ।
ಚರನ್ವಾಚೋಽಶೃಣೋದ್ರಾಮೋ ಭಾರ್ಯಾಮುದ್ದಿಶ್ಯ ಕಸ್ಯಚಿತ್ ॥
ಅನುವಾದ
ಪರೀಕ್ಷಿತನೇ! ಒಮ್ಮೆ ಶ್ರೀರಾಮನು ತನ್ನ ಪ್ರಜೆಗಳ ಸ್ಥಿತಿಗತಿಗಳನ್ನು ತಿಳಿಯಲು ವೇಷವನ್ನು ಮರೆಸಿಕೊಂಡು, ಯಾರಿಗೂ ತಿಳಿಯದಂತೆ ಪಟ್ಟಣದಲ್ಲಿ ಅಡ್ಡಾಡುತ್ತಿದ್ದನು. ಆಗ ಓರ್ವವ್ಯಕ್ತಿಯು ತನ್ನ ಭಾರ್ಯೆಯನ್ನು ಉದ್ದೇಶಿಸಿ ಆಡುತ್ತಿದ್ದ ಮಾತುಗಳನ್ನು ರಾಮನು ಕೇಳಿಸಿಕೊಂಡನು.॥8॥
(ಶ್ಲೋಕ-9)
ಮೂಲಮ್
ನಾಹಂ ಬಿಭರ್ಮಿ ತ್ವಾಂ ದುಷ್ಟಾಮಸತೀಂ ಪರವೇಶ್ಮಗಾಮ್ ।
ಸ್ತ್ರೀಲೋಭೀ ಬಿಭೃಯಾತ್ಸೀತಾಂ ರಾಮೋ ನಾಹಂ ಭಜೇ ಪುನಃ ॥
ಅನುವಾದ
‘ಎಲೆಗೇ! ನೀನು ದುಷ್ಟಳೂ, ಕುಲಟೆಯೂ ಆಗಿರುವೆ. ಅನ್ಯರ ಮನೆಯಲ್ಲಿದ್ದು ಬಂದಿರುವೆ. ಸ್ತ್ರೀಲೋಭಿಯಾದ ರಾಮನು ಲಂಕೆಯಲ್ಲಿದ್ದು ಬಂದಿರುವ ಸೀತೆಯನ್ನು ಇಟ್ಟುಕೊಂಡಿರಬಹುದು. ಆದರೆ ನಾನು ನಿನ್ನನ್ನು ಪುನಃ ಮನೆ ಸೇರಿಸಲಾರೆ.॥9॥
(ಶ್ಲೋಕ-10)
ಮೂಲಮ್
ಇತಿ ಲೋಕಾದ್ಬಹುಮುಖಾದ್ದುರಾರಾಧ್ಯಾದಸಂವಿದಃ ।
ಪತ್ಯಾ ಭೀತೇನ ಸಾ ತ್ಯಕ್ತಾ ಪ್ರಾಪ್ತಾ ಪ್ರಾಚೇತಸಾಶ್ರಮಮ್ ॥
ಅನುವಾದ
ಎಲ್ಲ ಜನರನ್ನು ಸಂತೋಷ ಪಡಿಸುವುದು ನಿಜವಾಗಿಯೂ ಬಹುಕಷ್ಟತರವಾಗಿದೆ. ಏಕೆಂದರೆ, ಮೂರ್ಖರಿಗೆ ಕೊರತೆಯಿಲ್ಲ ತಾನೇ! ಭಗವಾನ್ ಶ್ರೀರಾಮನು ಬಹುಜನರ ಬಾಯಿಂದ ಕೇಳಿದ ಇಂತಹ ಮಾತಿನಿಂದ ಲೋಕಾಪವಾದಕ್ಕೆ ಹೆದರಿ ಸತೀ-ಸಾಧ್ವಿಯಾದ ಸೀತಾದೇವಿಯನ್ನು ತ್ಯಜಿಸಿಯೇ ಬಿಟ್ಟನು. ಸೀತೆಯು ವಾಲ್ಮೀಕಿಗಳ ಆಶ್ರಮದಲ್ಲಿ ಇರತೊಡಗಿದಳು.॥10॥
(ಶ್ಲೋಕ-11)
ಮೂಲಮ್
ಅಂತರ್ವತ್ನ್ಯಾಗತೇ ಕಾಲೇ ಯವೌ ಸಾ ಸುಷುವೇ ಸುತೌ ।
ಕುಶೋ ಲವ ಇತಿ ಖ್ಯಾತೌ ತಯೋಶ್ಚಕ್ರೇ ಕ್ರಿಯಾ ಮುನಿಃ ॥
ಅನುವಾದ
ಸೀತಾದೇವಿಯು ಆಗ ಗರ್ಭಿಣಿಯಾಗಿದ್ದಳು. ದಿನಗಳು ತುಂಬುತ್ತಲೇ ಆಕೆಯು ಅವಳಿ-ಜವಳಿ ಮಕ್ಕಳಿಗೆ ಜನ್ಮವನ್ನಿತ್ತಳು. ಕುಶ-ಲವರೆಂಬ ಶುಭ ನಾಮಗಳಿಂದ ಅವರು ಪ್ರಸಿದ್ಧರಾದರು. ವಾಲ್ಮೀಕಿಗಳು ಅವರ ಜಾತ ಕರ್ಮಾದಿ ಸಂಸ್ಕಾರಗಳನ್ನು ನೆರವೇರಿಸಿದರು.॥11॥
(ಶ್ಲೋಕ-12)
ಮೂಲಮ್
ಅಂಗದಶ್ಚಿತ್ರಕೇತುಶ್ಚ ಲಕ್ಷ್ಮಣಸ್ಯಾತ್ಮಜೌ ಸ್ಮೃತೌ ।
ತಕ್ಷಃ ಪುಷ್ಕಲ ಇತ್ಯಾಸ್ತಾಂ ಭರತಸ್ಯ ಮಹೀಪತೇ ॥
ಅನುವಾದ
ಲಕ್ಷ್ಮಣನಿಗೆ ಅಂಗದ ಮತ್ತು ಚಿತ್ರಕೇತು ಎಂಬ ಈರ್ವರು ಪುತ್ರರಾದರು. ಪರೀಕ್ಷಿತನೇ! ಹೀಗೆಯೇ ಭರತನಿಗೂ ತಕ್ಷ ಹಾಗೂ ಪುಷ್ಕಲ ಎಂಬ ಇಬ್ಬರು ಪುತ್ರರಿದ್ದರು. ॥12॥
(ಶ್ಲೋಕ-13)
ಮೂಲಮ್
ಸುಬಾಹುಃ ಶ್ರುತಸೇನಶ್ಚ ಶತ್ರುಘ್ನಸ್ಯ ಬಭೂವತುಃ ।
ಗಂಧರ್ವಾನ್ಕೋಟಿಶೋ ಜಘ್ನೇ ಭರತೋ ವಿಜಯೇ ದಿಶಾಮ್ ॥
ಅನುವಾದ
ಶತ್ರುಘ್ನನಿಗೆ ಸುಬಾಹು ಮತ್ತು ಶ್ರುತಸೇನರೆಂಬ ಇಬ್ಬರು ಪುತ್ರರಾದರು. ಭರತನು ದಿಗ್ವಿಜಯವನ್ನು ಮಾಡಿ ಕೋಟಿ-ಕೋಟಿ ಗಂಧರ್ವರನ್ನು ಸಂಹರಿಸಿದನು.॥13॥
(ಶ್ಲೋಕ-14)
ಮೂಲಮ್
ತದೀಯಂ ಧನಮಾನೀಯ ಸರ್ವಂ ರಾಜ್ಞೇ ನ್ಯವೇದಯತ್ ।
ಶತ್ರುಘ್ನಶ್ಚ ಮಧೋಃ ಪುತ್ರಂ ಲವಣಂ ನಾಮ ರಾಕ್ಷಸಮ್ ।
ಹತ್ವಾ ಮಧುವನೇ ಚಕ್ರೇ ಮಥುರಾಂ ನಾಮ ವೈ ಪುರೀಮ್ ॥
ಅನುವಾದ
ಅವನು ಅವರ ಸರ್ವಸಂಪತ್ತನ್ನು ತಂದು ಅಣ್ಣನಾದ ಭಗವಾನ್ ಶ್ರೀರಾಮನ ಸೇವೆಯಲ್ಲಿ ಅರ್ಪಿಸಿದನು. ಶತ್ರುಘ್ನನು ಮಧುವನದಲ್ಲಿದ್ದ ಮಧು ಎಂಬ ದಾನವನ ಪುತ್ರನಾದ ಲವಣಾಸುರನನ್ನು ಕೊಂದು ಅಲ್ಲಿ ಮಥುರಾಪುರಿಯನ್ನು ನಿರ್ಮಿಸಿದನು.॥14॥
(ಶ್ಲೋಕ-15)
ಮೂಲಮ್
ಮುನೌ ನಿಕ್ಷಿಪ್ಯ ತನಯೌ ಸೀತಾ ಭರ್ತ್ರಾ ವಿವಾಸಿತಾ ।
ಧ್ಯಾಯಂತೀ ರಾಮಚರಣೌ ವಿವರಂ ಪ್ರವಿವೇಶ ಹ ॥
ಅನುವಾದ
ಭಗವಾನ್ ಶ್ರೀರಾಮನಿಂದ ಪರಿತ್ಯಕ್ತಳಾದ ಸೀತಾದೇವಿಯು ಲವ- ಕುಶರನ್ನು ವಾಲ್ಮೀಕಿಯವರಿಗೆ ಒಪ್ಪಿಸಿ ಶ್ರೀರಾಮಚಂದ್ರನ ಚರಣಕಮಲಗಳನ್ನು ಧ್ಯಾನಿಸುತ್ತಾ ಪೃಥಿವಿದೇವಿಯ ಲೋಕವನ್ನು ಸೇರಿದಳು.॥15॥
(ಶ್ಲೋಕ-16)
ಮೂಲಮ್
ತಚ್ಛ್ರುತ್ವಾ ಭಗವಾನ್ರಾಮೋ ರುಂಧನ್ನಪಿ ಧಿಯಾ ಶುಚಃ ।
ಸ್ಮರಂಸ್ತಸ್ಯಾ ಗುಣಾಂಸ್ತಾನ್ಸ್ತಾನ್ ನಾಶಕ್ನೋದ್ರೋದ್ಧುಮೀಶ್ವರಃ ॥
ಅನುವಾದ
ಈ ವಾರ್ತೆಯನ್ನು ಕೇಳಿದ ಸಮರ್ಥನಾದ ಭಗವಾನ್ ಶ್ರೀರಾಮನು ತನ್ನ ಶೋಕಾವೇಶವನ್ನು ಬುದ್ಧಿಯ ಮೂಲಕವಾಗಿ ತಡೆಯಲು ಪ್ರಯತ್ನಿಸಿದರೂ ಸಾಧ್ವಿಯಾದ ಸೀತಾದೇವಿಯ ಅನುಪಮವಾದ, ಪವಿತ್ರವಾದ ಗುಣಗಳನ್ನು ಮತ್ತೆ-ಮತ್ತೆ ಸ್ಮರಿಸುತ್ತಲೇ ಇದ್ದನು. ॥16॥
(ಶ್ಲೋಕ-17)
ಮೂಲಮ್
ಸ್ತ್ರೀಪುಂಪ್ರಸಂಗ ಏತಾದೃಕ್ಸರ್ವತ್ರ ತ್ರಾಸಮಾವಹಃ ।
ಅಪೀಶ್ವರಾಣಾಂ ಕಿಮುತ ಗ್ರಾಮ್ಯಸ್ಯ ಗೃಹಚೇತಸಃ ॥
ಅನುವಾದ
ಪರೀಕ್ಷಿತನೇ! ಪತಿ-ಪತ್ನಿಯ ಈ ಸಂಬಂಧವು ಎಲ್ಲೆಡೆ ಹೀಗೆಯೇ ದುಃಖಕ್ಕೆ ಕಾರಣವಾಗಿದೆ. ಈ ಮಾತು ಮಹಾಸಮರ್ಥ ಜನರ ವಿಷಯದಲ್ಲಿಯೂ ಹೀಗೆಯೇ ಇರುವಾಗ ಗೃಹಾಸಕ್ತ ವಿಷಯಿಗಳ ಕುರಿತಾದರೋ ಹೇಳುವುದು ಏನಿದೆ?॥17॥
(ಶ್ಲೋಕ-18)
ಮೂಲಮ್
ತತ ಊರ್ಧ್ವಂ ಬ್ರಹ್ಮಚರ್ಯಂ ಧಾರಯನ್ನಜುಹೋತ್ಪ್ರಭುಃ ।
ತ್ರಯೋದಶಾಬ್ದಸಾಹಸ್ರಮಗ್ನಿಹೋತ್ರಮಖಂಡಿತಮ್ ॥
ಅನುವಾದ
ಇದಾದ ಬಳಿಕ ಭಗವಾನ್ ಶ್ರೀರಾಮನು ಬ್ರಹ್ಮಚರ್ಯ ವ್ರತವನ್ನು ಕೈಗೊಂಡು ಹದಿಮೂರು ಸಾವಿರ ವರ್ಷಗಳ ಕಾಲ ಅಖಂಡವಾಗಿ ಅಗ್ನಿಹೋತ್ರವನ್ನು ಮಾಡಿದನು. ॥18॥
(ಶ್ಲೋಕ-19)
ಮೂಲಮ್
ಸ್ಮರತಾಂ ಹೃದಿ ವಿನ್ಯಸ್ಯ ವಿದ್ಧಂ ದಂಡಕಕಂಟಕೈಃ ।
ಸ್ವಪಾದಪಲ್ಲವಂ ರಾಮ ಆತ್ಮಜ್ಯೋತಿರಗಾತ್ತತಃ ॥
ಅನುವಾದ
ಅನಂತರ ಶ್ರೀರಾಮನು ದಂಡಕಾರಣ್ಯದಲ್ಲಿ ಮುಳ್ಳುಗಳಿಂದ ಚುಚ್ಚಲ್ಪಟ್ಟಿದ್ದ, ಚಿಗುರಿನಂತೆ ಸುಕೋಮಲವಾದ ತನ್ನ ಪಾದ ಪಂಕಜಗಳನ್ನು ತನ್ನನ್ನು ಸ್ಮರಿಸುವ ಭಕ್ತರ ಹೃದಯದಲ್ಲಿ ನೆಲೆಗೊಳಿಸಿ ಆತ್ಮಜ್ಯೋತಿಯಲ್ಲಿ ಸೇರಿ ಹೋದನು. ॥19॥
(ಶ್ಲೋಕ-20)
ಮೂಲಮ್
ನೇದಂ ಯಶೋ ರಘುಪತೇಃ ಸುರಯಾಚ್ಞಯಾತ್ತ-
ಲೀಲಾತನೋರಧಿಕಸಾಮ್ಯವಿಮುಕ್ತಧಾಮ್ನಃ ।
ರಕ್ಷೋವಧೋಜಲಧಿಬಂಧನಮಸಪೂಗೈಃ
ಕಿಂ ತಸ್ಯ ಶತ್ರುಹನನೇ ಕಪಯಃ ಸಹಾಯಾಃ ॥
ಅನುವಾದ
ಪರೀಕ್ಷಿತನೇ! ಭಗವಂತನಂತಹ ಪ್ರತಾಪಶಾಲಿಯು ಬೇರೆ ಯಾರೂ ಇಲ್ಲದಿರುವಾಗ ಅವನಿಗಿಂತ ಮಿಗಿಲಾದವರು ಹೇಗೆ ಇರಬಲ್ಲರು? ಅವನು ದೇವತೆಗಳ ಪ್ರಾರ್ಥನೆಯಿಂದಲೇ ಈ ಲೀಲಾವಿಗ್ರಹವನ್ನು ಧರಿಸಿದ್ದನು. ಇಂತಹ ಸ್ಥಿತಿಯಲ್ಲಿ ರಘುವಂಶ ಶಿರೋಮಣಿ ಭಗವಾನ್ ಶ್ರೀರಾಮನಿಗೆ ಅಸ್ತ್ರ-ಶಸ್ತ್ರಗಳಿಂದ ರಾಕ್ಷಸರನ್ನು ಸಂಹರಿಸಿದುದು, ಸಮುದ್ರಕ್ಕೆ ಸೇತುವೆ ಕಟ್ಟಿದುದು ಇದೇನೋ ದೊಡ್ಡ ಗೌರವದ ಮಾತಲ್ಲ. ಅವನಿಗೆ ಶತ್ರುಗಳನ್ನು ಕೊಲ್ಲಲಿಕ್ಕಾಗಿ ಕಪಿಗಳ ಸಹಾಯದ ಆವಶ್ಯಕತೆಯಾದರೂ ಏನಿತ್ತು? ಇದೆಲ್ಲವೂ ಅವನ ಲೀಲೆ ಮಾತ್ರವಾಗಿದೆ. ॥20॥
(ಶ್ಲೋಕ-21)
ಮೂಲಮ್
ಯಸ್ಯಾಮಲಂ ನೃಪಸದಸ್ಸು ಯಶೋಽಧುನಾಪಿ
ಗಾಯಂತ್ಯಘಘ್ನಮೃಷಯೋ ದಿಗಿಭೇಂದ್ರಪಟ್ಟಮ್ ।
ತಂ ನಾಕಪಾಲವಸುಪಾಲಕಿರೀಟಜುಷ್ಟ-
ಪಾದಾಂಬುಜಂ ರಘುಪತಿಂ ಶರಣಂ ಪ್ರಪದ್ಯೇ ॥
ಅನುವಾದ
ಭಗವಾನ್ ಶ್ರೀರಾಮಚಂದ್ರನ ನಿರ್ಮಲವಾದ ಯಶಸ್ಸು ಸಮಸ್ತ ಪಾಪಗಳನ್ನು ಪರಿಹರಿಸುವಂತಹುದು. ಅದು ದಿಗ್ಗಜಗಳಿಗೆ ಪಟ್ಟವಸ್ತ್ರದಂತಿರುವ ಶ್ರೀರಾಮಚಂದ್ರನ ಯಶಸ್ಸು ದಿಗಂತದವರೆಗೂ ಹರಡಿದೆ. ಇಂದೂ ಕೂಡ ಮಹಾ-ಮಹಾ ಋಷಿ-ಮಹರ್ಷಿಗಳು ರಾಜರುಗಳ ಸಭೆಗಳಲ್ಲಿ ಗಾನಮಾಡುತ್ತಿದ್ದಾರೆ. ಸ್ವರ್ಗದ ದೇವತೆಗಳು ಮತ್ತು ಪೃಥಿವಿಯ ನರಪತಿಗಳು ತಮ್ಮ ಸುಂದರ ಕಿರೀಟಗಳಿಂದ ಅವನ ಚರಣಕಮಲಗಳ ಸೇವೆಯನ್ನು ಮಾಡುತ್ತಿದ್ದಾರೆ. ನಾನೂ ಕೂಡ ಅಂತಹ ರಘುವಂಶ ಶಿರೋಮಣಿ ಭಗವಾನ್ ಶ್ರೀರಾಮಚಂದ್ರನನ್ನು ಶರಣುಹೊಂದುತ್ತೇನೆ. ॥21॥
(ಶ್ಲೋಕ-22)
ಮೂಲಮ್
ಸ ಯೈಃ ಸ್ಪೃಷ್ಟೋಽಭಿದೃಷ್ಟೋ ವಾ ಸಂವಿಷ್ಟೋಽನುಗತೋಽಪಿ ವಾ ।
ಕೋಸಲಾಸ್ತೇ ಯಯುಃ ಸ್ಥಾನಂ ಯತ್ರ ಗಚ್ಛಂತಿ ಯೋಗಿನಃ ॥
ಅನುವಾದ
ಯಾರು ಭಗವಾನ್ ಶ್ರೀರಾಮನ ದರ್ಶನ ಪಡೆದಿದ್ದರೋ, ಸ್ಪರ್ಶಿಸಿದ್ದರೋ, ಅವನ ಸಹವಾಸದಲ್ಲಿದ್ದರೋ, ಅವನನ್ನು ಅನುಸರಿಸಿದ್ದರೋ ಅವರೆಲ್ಲರೂ ಹಾಗೂ ಕೋಸಲ ದೇಶದ ನಿವಾಸಿಗಳೂ ಕೂಡ ಮಹಾಯೋಗಿಗಳು ಯೋಗಸಾಧನೆಯಿಂದ ಪಡೆದುಕೊಳ್ಳುವ ದಿವ್ಯಲೋಕವನ್ನು ಸೇರಿರುವರು. ॥22॥
(ಶ್ಲೋಕ-23)
ಮೂಲಮ್
ಪುರುಷೋ ರಾಮಚರಿತಂ ಶ್ರವಣೈರುಪಧಾರಯನ್ ।
ಆನೃಶಂಸ್ಯಪರೋ ರಾಜನ್ಕರ್ಮಬಂಧೈರ್ವಿಮುಚ್ಯತೇ ॥
ಅನುವಾದ
ಯಾವ ಪುರುಷರು ತಮ್ಮ ಕಿವಿಯಾರೆ ಭಗವಾನ್ ಶ್ರೀರಾಮನ ಚರಿತ್ರೆಯನ್ನು ಕೇಳಿರುವರೋ, ಅವರಿಗೆ ಸರಳತೇ, ಕೋಮಲತೆ ಮುಂತಾದ ಸದ್ಗುಣಗಳ ಪ್ರಾಪ್ತಿಯಾಗುತ್ತದೆ. ಪರೀಕ್ಷಿತನೇ! ಕೇವಲ ಇಷ್ಟೇ ಅಲ್ಲ, ಅವನು ಸಮಸ್ತ ಕರ್ಮ ಬಂಧನದಿಂದ ಮುಕ್ತನಾಗುವನು. ॥23॥
(ಶ್ಲೋಕ-24)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಕಥಂ ಸ ಭಗವಾನ್ರಾಮೋ ಭ್ರಾತೃನ್ವಾ ಸ್ವಯಮಾತ್ಮನಃ ।
ತಸ್ಮಿನ್ವಾ ತೇಽನ್ವವರ್ತಂತ ಪ್ರಜಾಃ ಪೌರಾಶ್ಚ ಈಶ್ವರೇ ॥
ಅನುವಾದ
ಪರೀಕ್ಷಿದ್ರಾಜನು ಕೇಳಿದನು — ಪೂಜ್ಯರೇ! ಭಗವಾನ್ ಶ್ರೀರಾಮನು ತನ್ನ ಸಹೋದರರೊಡನೆ ಹೇಗೆ ವರ್ತಿಸುತ್ತಿದ್ದನು? ಭರತನೇ ಮೊದಲಾದ ಅವನ ಅನುಜರೂ, ಪ್ರಜೆಗಳೂ, ಅಯೋಧ್ಯಾ ನಿವಾಸಿಗಳೂ ಶ್ರೀರಾಮನ ಕುರಿತು ಹೇಗೆ ವ್ಯವಹರಿಸುತ್ತಿದ್ದರು? ॥24॥
(ಶ್ಲೋಕ-25)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅಥಾದಿಶದ್ದಿಗ್ವಿಜಯೇ ಭ್ರಾತೄಂಸ್ತ್ರಿಭುನೇಶ್ವರಃ ।
ಆತ್ಮಾನಂ ದರ್ಶಯನ್ ಸ್ವಾನಾಂ ಪುರೀಮೈಕ್ಷತ ಸಾನುಗಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳಿದರು — ಪರೀಕ್ಷಿತನೇ! ತ್ರಿಭುವನೇಶ್ವರ ಮಹಾರಾಜನಾದ ಶ್ರೀರಾಮನು ರಾಜ್ಯ ಸಿಂಹಾಸನವನ್ನು ಸ್ವೀಕರಿಸಿದ ಬಳಿಕ ತನ್ನ ಅನುಜರಿಗೆ ದಿಗ್ವಿಜಯಮಾಡಿಕೊಂಡು ಬರಲು ಆಜ್ಞಾಪಿಸಿದನು. ತಾನು ತನ್ನ ಪರಿಜನ-ಪುರಜನರಿಗೆ ದರ್ಶನವನ್ನೀಯುತ್ತಾ ತನ್ನ ಅನುಚರರೊಂದಿಗೆ ಅಯೋಧ್ಯಾಪಟ್ಟಣದ ಸೊಬಗನ್ನು ನೋಡಲು ಹೊರಟನು. ॥25॥
(ಶ್ಲೋಕ-26)
ಮೂಲಮ್
ಆಸಿಕ್ತಮಾರ್ಗಾಂ ಗಂಧೋದೈಃ ಕರಿಣಾಂ ಮದಶೀಕರೈಃ ।
ಸ್ವಾಮಿನಂ ಪ್ರಾಪ್ತಮಾಲೋಕ್ಯ ಮತ್ತಾಂ ವಾ ಸುತರಾಮಿವ ॥
ಅನುವಾದ
ಆ ಸಮಯದಲ್ಲಿ ಅಯೋಧ್ಯಾನಗರದ ಮಾರ್ಗಗಳು ಸುಗಂಧಜಲದಿಂದ ಮತ್ತು ಆನೆಗಳ ಮದೋದಕದಿಂದ ನೆನೆದಿದ್ದವು. ಈ ನಗರಿಯು ಸ್ವಾಮಿಯಾದ ಭಗವಾನ್ ಶ್ರೀರಾಮನನ್ನು ನೋಡಿ ಅತ್ಯಂತ ಆನಂದಭರಿತವಾಗಿದೆಯೋ ಎಂಬಂತೆ ಕಾಣುತ್ತಿತ್ತು. ॥26॥
(ಶ್ಲೋಕ-27)
ಮೂಲಮ್
ಪ್ರಾಸಾದಗೋಪುರಸಭಾಚೈತ್ಯದೇವಗೃಹಾದಿಷು ।
ವಿನ್ಯಸ್ತಹೇಮಕಲಶೈಃ ಪತಾಕಾಭಿಶ್ಚ ಮಂಡಿತಾಮ್ ॥
ಅನುವಾದ
ಶ್ರೀರಾಮನು ನಗರದರ್ಶನ ಮಾಡಿಕೊಂಡು ಬರುತ್ತಿರುವಾಗ ಸುವರ್ಣಕಲಶಗಳಿಂದ ಯುಕ್ತವಾಗಿದ್ದ ಪ್ರಾಸಾದಗಳನ್ನೂ, ಗೋಪುರಗಳನ್ನೂ, ಸಭಾಭವನಗಳನ್ನೂ, ವಿಹಾರಸ್ಥಳಗಳನ್ನೂ, ದೇವಾಲಯಗಳನ್ನೂ ನೋಡಿದನು. ಅಲ್ಲಲ್ಲಿ ಪತಾಕೆಗಳು ಹಾರಾಡುತ್ತಿದ್ದವು. ॥27॥
(ಶ್ಲೋಕ-28)
ಮೂಲಮ್
ಪೂಗೈಃ ಸವೃಂತೈರಂಭಾಭಿಃ ಪಟ್ಟಿಕಾಭಿಃ ಸುವಾಸಸಾಮ್ ।
ಆದರ್ಶೈರಂಶುಕೈಃ ಸ್ರಗ್ಭಿಃ ಕೃತಕೌತುಕತೋರಣಾಮ್ ॥
ಅನುವಾದ
ಹೊಂಬಾಳೆಗಳಿಂದ ಕೂಡಿದ ಅಡಿಕೆಮರಗಳಿಂದಲೂ, ಬಾಳೆಯ ಕಂಭದಿಂದಲೂ, ಸುಂದರವಾದ ಪಟ್ಟವಸ್ತ್ರಗಳಿಂದಲೂ ಶೃಂಗರಿಸಲ್ಪಟ್ಟಿತ್ತು. ಕನ್ನಡಿಗಳಿಂದಲೂ, ವಸ್ತ್ರ-ಪುಷ್ಪಮಾಲೆಗಳಿಂದಲೂ, ಮಾಂಗಲಿಕ ಚಿಹ್ನೆಗಳಿಂದ ಚಿತ್ರಿತವಾಗಿದ್ದ ಕೌತುಕವನ್ನುಂಟುಮಾಡುವ ತೋರಣಗಳಿಂದಲೂ ಇಡೀ ನಗರವು ಝಗಝಗಿಸುತ್ತಿತ್ತು. ॥28॥
(ಶ್ಲೋಕ-29)
ಮೂಲಮ್
ತಮುಪೇಯುಸ್ತತ್ರ ತತ್ರ
ಪೌರಾ ಅರ್ಹಣಪಾಣಯಃ ।
ಆಶಿಷೋ ಯುಯುಜುರ್ದೇವ
ಪಾಹೀಮಾಂ ಪ್ರಾಕ್ತ್ವಯೋದ್ಧೃತಾಮ್ ॥
ಅನುವಾದ
ನಗರವಾಸಿಗಳು ತಮ್ಮ ಕೈಗಳಲ್ಲಿ ನಾನಾರೀತಿಯ ಕಪ್ಪ-ಕಾಣಿಕೆಗಳನ್ನು ಹಿಡಿದುಕೊಂಡು ಭಗವಂತನ ಬಳಿಗೆ ಬಂದು, ಅವನನ್ನು ಪ್ರಾರ್ಥಿಸುತ್ತಾರೆ ದೇವದೇವನೇ! ನೀನು ನಿನ್ನ ಹಿಂದಿನ ವರಾಹಾವತಾರದಲ್ಲಿ ಈ ಭೂಮಿಯನ್ನು ಉದ್ಧರಿಸಿದ್ದೆ. ಈಗ ಇದರ ಪಾಲನೆಯನ್ನೂ ಮಾಡು.॥29॥
(ಶ್ಲೋಕ-30)
ಮೂಲಮ್
ತತಃ ಪ್ರಜಾ ವೀಕ್ಷ್ಯ ಪತಿಂ ಚಿರಾಗತಂ
ದಿದೃಕ್ಷಯೋತ್ಸೃಷ್ಟಗೃಹಾಃ ಸ್ತ್ರಿಯೋ ನರಾಃ ।
ಆರುಹ್ಯ ಹರ್ಮ್ಯಾಣ್ಯರವಿಂದಲೋಚನ-
ಮತೃಪ್ತನೇತ್ರಾಃ ಕುಸುಮೈರವಾಕಿರನ್ ॥
ಅನುವಾದ
ಪರೀಕ್ಷಿತನೇ! ಆ ಸಮಯದಲ್ಲಿ ಬಹಳ ದಿನಗಳ ಬಳಿಕ ಭಗವಾನ್ ಶ್ರೀರಾಮನು ಇತ್ತ ಆಗಮಿಸುತ್ತಿದ್ದಾನೆ ಎಂದು ತಿಳಿದಾಗ ಎಲ್ಲ ಪ್ರಜಾಜನರು, ಸ್ತ್ರೀ-ಪುರುಷರಾದಿಯಾಗಿ ಅವನ ದರ್ಶನದ ಉತ್ಕಂಠತೆಯಿಂದ ಮನೆಗಳ ಬಾಗಿಲುಗಳನ್ನು ಹಾರುಹೊಡೆದು ಅವನ ಕಡೆಗೆ ಓಡುತ್ತಿದ್ದರು. ಅವರು ಎತ್ತರವಾದ ಮಹಡಿಗಳಲ್ಲಿ ಹತ್ತಿಕೊಂಡು ತೃಪ್ತಿಹೊಂದದ ಕಣ್ಣುಗಳಿಂದ ಕಮಲನಯನ ಭಗವಂತನನ್ನು ನೋಡುತ್ತಾ ಅವನ ಮೇಲೆ ಹೂವುಗಳ ಮಳೆಗರೆಯುತ್ತಿದ್ದರು. ॥30॥
(ಶ್ಲೋಕ-31)
ಮೂಲಮ್
ಅಥ ಪ್ರವಿಷ್ಟಃ ಸ್ವಗೃಹಂ ಜುಷ್ಟಂ ಸ್ವೈಃ ಪೂರ್ವರಾಜಭಿಃ ।
ಅನಂತಾಖಿಲಕೋಶಾಢ್ಯಮನರ್ಘ್ಯೋರುಪರಿಚ್ಛದಮ್ ॥
ಅನುವಾದ
ಹೀಗೆ ಪ್ರಜಾಜನರ ನಿರೀಕ್ಷಣಮಾಡಿ ಭಗವಂತನು ಮರಳಿ ಅರಮನೆಗೆ ಬರುತ್ತಿದ್ದನು. ಆ ಅರಮನೆಯು ಹಿಂದಿನ ರಾಜರಿಂದ ಸೇವಿಸಲ್ಪಟ್ಟಿತ್ತು. ಅದರಲ್ಲಿ ಎಂದೂ ಬರಿದಾಗದ ದೊಡ್ಡ-ದೊಡ್ಡ ರತ್ನಭಂಡಾರಗಳಿದ್ದವು. ಬಹುಮೂಲ್ಯವಾದ ಅನೇಕ ಸಾಮಗ್ರಿಗಳಿಂದ ಸುಸಜ್ಜಿತವಾಗಿತ್ತು.॥31॥
(ಶ್ಲೋಕ-32)
ಮೂಲಮ್
ವಿದ್ರುಮೋದುಂಬರದ್ವಾರೈರ್ವೈದೂರ್ಯಸ್ತಂಭಪಂಕ್ತಿಭಿಃ ।
ಸ್ಥಲೈರ್ಮಾರಕತೈಃ ಸ್ವಚ್ಛೈರ್ಭಾತಸ್ಫಟಿಕಭಿತ್ತಿಭಿಃ ॥
ಅನುವಾದ
ಆ ಅರಮನೆಯ ದ್ವಾರ ಬಂಧಗಳು, ದ್ವಾರಗಳು ಹವಳಗಳಿಂದಲೇ ನಿರ್ಮಿತವಾಗಿದ್ದವು. ಅದರಲ್ಲಿರುವ ಎಲ್ಲ ಕಂಭಗಳು ವೈಡೂರ್ಯಮಣಿಗಳದ್ದಾಗಿದ್ದವು. ಮರಕತ ಮಣಿಯಿಂದ ರಚಿಸಿದ ಸುಂದರ ನೆಲವಿತ್ತು. ಸ್ಫಟಿಕದ ಗೋಡೆಗಳು ಹೊಳೆಯುತ್ತಿದ್ದವು. ॥32॥
(ಶ್ಲೋಕ-33)
ಮೂಲಮ್
ಚಿತ್ರಸ್ರಗ್ಭಿಃ ಪಟ್ಟಿಕಾಭಿರ್ವಾಸೋಮಣಿಗಣಾಂಶುಕೈಃ ।
ಮುಕ್ತಾಲೈಶ್ಚಿದುಲ್ಲಾಸೈಃ ಕಾಂತಕಾಮೋಪಪತ್ತಿಭಿಃ ॥
(ಶ್ಲೋಕ-34)
ಮೂಲಮ್
ಧೂಪದೀಪೈಃ ಸುರಭಿಭಿರ್ಮಂಡಿತಂ ಪುಷ್ಪಮಂಡನೈಃ ।
ಸ್ತ್ರೀಪುಂಭಿಃ ಸುರಸಂಕಾಶೈರ್ಜುಷ್ಟಂ ಭೂಷಣಭೂಷಣೈಃ ॥
ಅನುವಾದ
ಬಣ್ಣ-ಬಣ್ಣದ ಮಾಲೆಗಳಿಂದಲೂ, ಪತಾಕೆಗಳಿಂದಲೂ, ಮಣಿಗಳ ಹೊಳಪಿನಿಂದಲೂ, ಶುದ್ಧಚೇತನದಂತೆ ಉಜ್ವಲ ಮುತ್ತುಗಳಿಂದಲೂ, ಸುಂದರವಾದ ಭೋಗಸಾಮಗ್ರಿಗಳಿಂದಲೂ, ಸುಗಂಧಿತ ಧೂಪ-ದೀಪಗಳಿಂದಲೂ, ಪುಷ್ಪಗಳಿಂದಲೂ, ಒಡವೆಗಳಿಂದಲೂ ಆ ಅರಮನೆಯನ್ನು ತುಂಬಾ ಶೃಂಗರಿಸಿದ್ದರು. ಅಂತಹ ದಿವ್ಯವಾದ ಅರಮನೆಯನ್ನು ಶ್ರೀರಾಮನು ಪ್ರವೇಶಿಸುತ್ತಲೇ ಆಭೂಷಣಗಳಿಗೂ ಅಲಂಕಾರಪ್ರಾಯರಾದ ದೇವೋಪಮ ಸ್ತ್ರೀ-ಪುರುಷರು ಅವನ ಸೇವೆಯಲ್ಲಿ ಸರ್ವದಾ ನಿರತರಾಗಿರುತ್ತಿದ್ದರು. ॥33-34॥
(ಶ್ಲೋಕ-35)
ಮೂಲಮ್
ತಸ್ಮಿನ್ಸಭಗವಾನ್ರಾಮಃ ಸ್ನಿಗ್ಧಯಾ ಪ್ರಿಯಯೇಷ್ಟಯಾ ।
ರೇಮೇ ಸ್ವಾರಾಮಧೀರಾಣಾಮೃಷಭಃ ಸೀತಯಾ ಕಿಲ ॥
ಅನುವಾದ
ಪರೀಕ್ಷಿತನೇ! ಭಗವಾನ್ ಶ್ರೀರಾಮನು ಆತ್ಮಾರಾಮರಾದ ಜಿತೇಂದ್ರಿಯರಾದ ಪುರುಷರೆಲ್ಲರಿಗೂ ಶ್ರೇಷ್ಠನಾಗಿದ್ದನು. ಆ ದಿವ್ಯವಾದ ಅರಮನೆಯಲ್ಲಿ ಅವನು ತನ್ನ ಪ್ರಾಣಪ್ರಿಯಳಾದ ಪ್ರೇಮಮಯಿಯಾದ ಪತ್ನೀ ಶ್ರೀಸೀತಾದೇವಿಯೊಡನೆ ವಿಹರಿಸುತ್ತಿದ್ದನು. ॥35॥
(ಶ್ಲೋಕ-36)
ಮೂಲಮ್
ಬುಭುಜೇ ಚ ಯಥಾಕಾಲಂ ಕಾಮಾನ್ ಧರ್ಮಮಪೀಡಯನ್ ।
ವರ್ಷಪೂಗಾನ್ಬಹೂನ್ ನೄಣಾಮಭಿಧ್ಯಾತಾಂಘ್ರಿಪಲ್ಲವಃ ॥
ಅನುವಾದ
ಸಮಸ್ತ ಸ್ತ್ರೀ-ಪುರುಷರು ಯಾರ ಚರಣಕಮಲಗಳನ್ನು ಧ್ಯಾನಮಾಡುತ್ತಾ ಇರುವರೋ ಅಂತಹ ಭಗವಾನ್ ಶ್ರೀರಾಮನು ಬಹಳ ವರ್ಷಗಳವರೆಗೆ ಧರ್ಮ-ಮರ್ಯಾದೆಗಳನ್ನು ಪಾಲಿಸುತ್ತಾ ಕಾಲೋಚಿತವಾಗಿ ಸುಖೋಪಭೋಗಗಳನ್ನು ಸೇವಿಸುತ್ತಾ ರಾಜ್ಯಭಾರ ಮಾಡುತ್ತಿದ್ದನು.॥36॥
ಅನುವಾದ (ಸಮಾಪ್ತಿಃ)
ಹನ್ನೊಂದನೆಯ ಅಧ್ಯಾಯವು ಮುಗಿಯಿತು. ॥11॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ಶ್ರೀರಾಮೋಪಾಖ್ಯಾನೇ ಏಕಾದಶೋಽಧ್ಯಾಯಃ ॥11॥