೧೦

[ಹತ್ತನೆಯ ಅಧ್ಯಾಯ]

ಭಾಗಸೂಚನಾ

ಭಗವಾನ್ ಶ್ರೀರಾಮನ ಲೀಲಾವರ್ಣನೆಗಳು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಖಟ್ವಾಂಗಾದ್ದೀರ್ಘಬಾಹುಶ್ಚ ರಘುಸ್ತಸ್ಮಾತ್ ಪೃಥುಶ್ರವಾಃ ।
ಅಜಸ್ತತೋ ಮಹಾರಾಜಸ್ತಸ್ಮಾದ್ ದಶರಥೋಽಭವತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಖಟ್ವಾಂಗನಿಗೆ ದೀರ್ಘಬಾಹು ಎಂಬ ಪುತ್ರನಿದ್ದನು. ಅವನಿಂದ ಪರಮಯಶಸ್ವೀ ರಘು ಜನಿಸಿದನು. ರಘುವಿನಿಂದ ಅಜನೂ, ಅಜನಿಂದ ದಶರಥ ಮಹಾರಾಜನು ಜನಿಸಿದನು. ॥1॥

(ಶ್ಲೋಕ-2)

ಮೂಲಮ್

ತಸ್ಯಾಪಿ ಭಗವಾನೇಷ ಸಾಕ್ಷಾದ್ಬ್ರಹ್ಮಮಯೋ ಹರಿಃ ।
ಅಂಶಾಂಶೇನ ಚತುರ್ಥಾಗಾತ್ಪುತ್ರತ್ವಂ ಪ್ರಾರ್ಥಿತಃ ಸುರೈಃ ।
ರಾಮಲಕ್ಷ್ಮಣಭರತಶತ್ರುಘ್ನಾ ಇತಿ ಸಂಜ್ಞಯಾ ॥

ಅನುವಾದ

ದೇವತೆಗಳ ಪ್ರಾರ್ಥನೆಯಂತೆ ಸಾಕ್ಷಾತ್ ಪರಬ್ರಹ್ಮ ಪರಮಾತ್ಮನಾದ ಭಗವಾನ್ ಶ್ರೀಹರಿಯು ತನ್ನ ಅಂಶಾಂಶಗಳಿಂದ ನಾಲ್ಕು ರೂಪಗಳನ್ನು ಧರಿಸಿ ದಶರಥ ಮಹಾರಾಜನಿಗೆ ಪುತ್ರರೂಪನಾದನು. ಅವರ ಹೆಸರು ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನ ಎಂಬುದಾಗಿದ್ದವು. ॥2॥

(ಶ್ಲೋಕ-3)

ಮೂಲಮ್

ತಸ್ಯಾನುಚರಿತಂ ರಾಜನ್ನೃಷಿಭಿಸ್ತತ್ತ್ವದರ್ಶಿಭಿಃ ।
ಶ್ರುತಂ ಹಿ ವರ್ಣಿತಂ ಭೂರಿ ತ್ವಯಾ ಸೀತಾಪತೇರ್ಮುಹುಃ ॥

ಅನುವಾದ

ಪರೀಕ್ಷಿತನೇ! ಸೀತಾಪತಿ ಭಗವಾನ್ ಶ್ರೀರಾಮನ ಚರಿತ್ರೆಯಾದರೋ ತತ್ತ್ವದರ್ಶಿಗಳಾದ ಋಷಿಗಳು ಬಹಳವಾಗಿ ವರ್ಣಿಸಿರುವರು. ನೀನು ಅದನ್ನು ಅನೇಕ ಬಾರಿ ಕೇಳಿಯೂ ಇರುವೆ. ॥3॥

(ಶ್ಲೋಕ-4)

ಮೂಲಮ್

ಗುರ್ವರ್ಥೇ ತ್ಯಕ್ತರಾಜ್ಯೋ ವ್ಯಚರದನುವನಂ
ಪದ್ಮಪದ್ಭ್ಯಾಂ ಪ್ರಿಯಾಯಾಃ
ಪಾಣಿಸ್ಪರ್ಶಾಕ್ಷಮಾಭ್ಯಾಂ ಮೃಜಿತಪಥರುಜೋ-
ಯೋ ಹರೀಂದ್ರಾನುಜಾಭ್ಯಾಮ್ ।
ವೈರೂಪ್ಯಾಚ್ಛೂರ್ಪಣಖ್ಯಾಃ ಪ್ರಿಯವಿರಹರುಷಾಽಽ-
ರೋಪಿತಭ್ರೂವಿಜೃಂಭ-
ತ್ರಸ್ತಾಬ್ಧಿರ್ಬದ್ಧಸೇತುಃ ಖಲದವದಹನಃ
ಕೋಸಲೇಂದ್ರೋಽವತಾನ್ನಃ ॥

ಅನುವಾದ

ಭಗವಂತನಾದ ಶ್ರೀರಾಮನು ತನ್ನ ತಂದೆ ದಶರಥನ ವಾಕ್ಯವನ್ನು ಸತ್ಯವಾಗಿಸಲು ರಾಜ್ಯಸಿಂಹಾಸನವನ್ನು ಪರಿತ್ಯಜಿಸಿ ಕಾಡಾಡಿಯಾಗಿ ಸಂಚರಿಸಿದನು. ಪರಮ ಸುಕುಮಾರಿಯಾದ ಜಾನಕಿಯ ಕರಸ್ಪರ್ಶವನ್ನೂ ಸಹಿಸದಷ್ಟು ಸುಕೋಮಲವಾಗಿದ್ದವು ಶ್ರೀರಾಮಚಂದ್ರನ ಚರಣಗಳು. ಅಂತಹ ಚರಣಕಮಲಗಳು ವನದಲ್ಲಿ ಸಂಚರಿಸುವಾಗ, ದಣಿದಾಗ ಹನುಮಂತ ಮತ್ತು ಲಕ್ಷ್ಮಣರು ಅವನ್ನು ಒತ್ತುತ್ತಾ ದಣಿವಾರಿಸುತ್ತಿದ್ದರು. ಶೂರ್ಪಣಖಿಯ ಕಿವಿ-ಮೂಗುಗಳನ್ನು ಕತ್ತರಿಸಿ ಅವಳನ್ನು ವಿರೂಪಗೊಳಿಸಿದುದರಿಂದ ಪ್ರಿಯತಮೆಯಾದ ಸೀತೆಯ ವಿಯೋಗದುಃಖವನ್ನು ಶ್ರೀರಾಮನು ಸಹಿಸಬೇಕಾಯಿತು. ಈ ವಿಯೋಗದಿಂದ ಕ್ರುದ್ಧನಾದ ಶ್ರೀರಾಮನ ಹುಬ್ಬುಗಳು ಗಂಟಿಕ್ಕಿದುವು. ಇದನ್ನು ನೋಡಿದ ಸಮುದ್ರರಾಜನೂ ಭಯಗೊಂಡನು. ಇದಾದ ಬಳಿಕ ಶ್ರೀರಾಮನು ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ, ಲಂಕೆಗೆ ಹೋಗಿ ದುಷ್ಟರಾದ ರಾಕ್ಷಸರನ್ನು ಕಾಡ್ಗಿಚ್ಚು ಕಾಡನ್ನು ಸುಟ್ಟು ಬಿಡುವಂತೆ ಭಸ್ಮಮಾಡಿಬಿಟ್ಟನು. ಅಂತಹ ಕೋಸಲೇಂದ್ರನಾದ ಶ್ರೀರಾಮನು ನಮ್ಮನ್ನು ರಕ್ಷಿಸಲಿ. ॥4॥

(ಶ್ಲೋಕ-5)

ಮೂಲಮ್

ವಿಶ್ವಾಮಿತ್ರಾಧ್ವರೇ ಯೇನ ಮಾರೀಚಾದ್ಯಾ ನಿಶಾಚರಾಃ ।
ಪಶ್ಯತೋ ಲಕ್ಷ್ಮಣಸ್ಯೈವ ಹತಾ ನೈರ್ಋತ ಪುಂಗವಾಃ ॥

ಅನುವಾದ

ಭಗವಾನ್ ಶ್ರೀರಾಮನು ವಿಶ್ವಾಮಿತ್ರನ ಯಜ್ಞರಕ್ಷಣೆಯಲ್ಲಿ ಲಕ್ಷ್ಮಣನ ಸಮಕ್ಷಮದಲ್ಲಿ ಮಾರೀಚನೇ ಮೊದಲಾದ ಮಹಾರಾಕ್ಷಸರನ್ನು ಸಂಹರಿಸಿದನು.॥5॥

(ಶ್ಲೋಕ-6)

ಮೂಲಮ್

ಯೋ ಲೋಕವೀರಸಮಿತೌ ಧನುರೈಶಮುಗ್ರಂ
ಸೀತಾಸ್ವಯಂವರಗೃಹೇ ತ್ರಿಶತೋಪನೀತಮ್ ।
ಆದಾಯ ಬಾಲಗಜಲೀಲ ಇವೇಕ್ಷುಯಷ್ಟಿಂ
ಸಜ್ಜೀಕೃತಂ ನೃಪ ವಿಕೃಷ್ಯ ಬಭಂಜ ಮಧ್ಯೇ ॥

ಅನುವಾದ

ಪರೀಕ್ಷಿತನೇ! ಜನಕಪುರಿಯಲ್ಲಿ ಸೀತಾಸ್ವಯಂವರದ ಸಿದ್ಧತೆಗಳಾಗುತ್ತಿದ್ದವು. ಜಗತ್ತಿನಲ್ಲಿ ವೀರರೆನಿಸಿಕೊಂಡಿರುವರೆಲ್ಲರೂ ಅಲ್ಲಿಗೆ ಆಗಮಿಸಿದ್ದರು. ಆ ಎಲ್ಲ ವೀರರ ಮಧ್ಯದಲ್ಲಿ ಭಯಂಕರವಾದ ಭಗವಾನ್ ಶಿವನ ಧನುಸ್ಸನ್ನು ಇರಿಸಲಾಗಿತ್ತು. ಅದು ಎಷ್ಟು ಭಾರವಾಗಿತ್ತೆಂದರೆ ಮೂರುನೂರು ವೀರಭಟರಿಂದ ಬಹುಪ್ರಯಾಸದಿಂದ ಅದನ್ನು ಸ್ವಯಂವರ ಮಂಟಪಕ್ಕೆ ತರಲಾಗಿತ್ತು. ಅಂತಹ ಧನುಸ್ಸನ್ನು ಮೇಲಕ್ಕೆತ್ತಿ ಅದನ್ನು ಹೆದೆಯೇರಿಸಿ ನಾಣನ್ನು ಸೆಳೆದೊಡನೆಯೇ ಆ ಧನುಸ್ಸು ಮಧ್ಯದಲ್ಲಿ ಮುರಿದು ಎರಡು ತುಂಡಾಗಿ ಕೆಳಕ್ಕೆ ಬಿತ್ತು.॥6॥

ಮೂಲಮ್

(ಶ್ಲೋಕ-7)

ಮೂಲಮ್

ಜಿತ್ವಾನುರೂಪಗುಣಶೀಲವಯೋಽಂಗರೂಪಾಂ
ಸೀತಾಭಿಧಾಂ ಶ್ರಿಯಮುರಸ್ಯಭಿಲಬ್ಧಮಾನಾಮ್ ।
ಮಾರ್ಗೇ ವ್ರಜನ್ ಭೃಗುಪತೇರ್ವ್ಯನಯತ್ಪ್ರರೂಢಂ
ದರ್ಪಂ ಮಹೀಮಕೃತ ಯಸ್ತ್ರಿರರಾಜಬೀಜಾಮ್ ॥

ಅನುವಾದ

ಭಗವಂತನು ತನ್ನ ವಕ್ಷಃಸ್ಥಳದಲ್ಲಿ ಧರಿಸಿಕೊಂಡು ಸಮ್ಮಾನಿತಳಾದ ಶ್ರೀಲಕ್ಷ್ಮೀದೇವಿಯೇ ಸೀತೆಯಾಗಿ ಜನಕನ ಪಟ್ಟಣದಲ್ಲಿ ಅವತರಿಸಿದ್ದಳು. ಅವಳು ಗುಣ, ಶೀಲ, ವಯಸ್ಸು, ಆಕೃತಿ ಮತ್ತು ರೂಪಗಳಲ್ಲಿ ಶ್ರೀರಾಮನಿಗೆ ಅನುರೂಪಳಾಗಿದ್ದಳು. ಭಗವಂತನು ಧನುಸ್ಸನ್ನು ಭಂಜಿಸಿ ಸೀತೆಯನ್ನು ಗೆದ್ದುಕೊಂಡಿದ್ದನು. ಅಲ್ಲಿಂದ ಅಯೋಧ್ಯೆಗೆ ಮರಳಿ ಬರುವಾಗ ದಾರಿಯಲ್ಲಿ ಇಪ್ಪತ್ತೊಂದು ಬಾರಿ ಭೂಮಂಡಲದ ಕ್ಷತ್ರಿಯರನ್ನೆಲ್ಲ ಸಂಹರಿಸಿದ ಪರಶುರಾಮರು ಭೆಟ್ಟಿಯಾದರು. ಭಗವಾನ್ ಶ್ರೀರಾಮನು ಪರಶುರಾಮರ ಬೆಳೆದಿರುವ ಗರ್ವವನ್ನೂ ಅಡಗಿಸಿದನು. ॥7॥

(ಶ್ಲೋಕ-8)

ಮೂಲಮ್

ಯಃ ಸತ್ಯಪಾಶಪರಿವೀತಪಿತುರ್ನಿದೇಶಂ
ಸ್ತ್ರೈಣಸ್ಯ ಚಾಪಿ ಶಿರಸಾ ಜಗೃಹೇ ಸಭಾರ್ಯಃ ।
ರಾಜ್ಯಂ ಶ್ರಿಯಂ ಪ್ರಣಯಿನಃ ಸುಹೃದೋ ನಿವಾಸಂ
ತ್ಯಕ್ತ್ವಾಯಯೌ ವನಮಸೂನಿವ ಮುಕ್ತಸಂಗಃ ॥

ಅನುವಾದ

ಇದಾದ ಬಳಿಕ ತಂದೆಯ ಮಾತನ್ನು ಸತ್ಯವಾಗಿಸಲು ಶ್ರೀರಾಮನು ವನವಾಸವನ್ನು ಕೈಗೊಂಡನು. ಮಹಾರಾಜಾ ದಶರಥನು ತನ್ನ ಪತ್ನಿಗೆ ಅಧೀನನಾಗಿಯೇ ಅವಳಿಗೆ ಅಂತಹ ಮಾತನ್ನು ಕೊಟ್ಟಿದ್ದನು. ಏಕೆಂದರೆ, ಅವನು ಸತ್ಯವೆಂಬ ಬಂಧನದಿಂದ ಕಟ್ಟಲ್ಪಟ್ಟಿದ್ದನು. ಅದಕ್ಕಾಗಿ ಭಗವಂತನು ತನ್ನ ತಂದೆಯ ಆಜ್ಞೆಯನ್ನು ಶಿರಸಾ ವಹಿಸಿಕೊಂಡು ಅನಾಸಕ್ತ ಪುರುಷನು ತನ್ನ ಪ್ರಾಣಗಳನ್ನು ತ್ಯಜಿಸುವಂತೆ ರಾಜ್ಯವನ್ನೂ, ಐಶ್ವರ್ಯವನ್ನೂ, ಪ್ರಿಯರನ್ನೂ, ಹಿತೈಷಿಗಳನ್ನೂ, ಮಿತ್ರರನ್ನೂ, ಅರಮನೆಯನ್ನೂ ಬಿಟ್ಟು ತನ್ನ ಪತ್ನಿಯೊಂದಿಗೆ ಅರಣ್ಯಕ್ಕೆ ಹೊರಟನು. ಏಕೆಂದರೆ, ಅವನಿಗೆ ಯಾರ ಕುರಿತು ಯಾವುದೇ ಆಸಕ್ತಿ ಇರಲಿಲ್ಲ. ॥8॥

(ಶ್ಲೋಕ-9)

ಮೂಲಮ್

ರಕ್ಷಃಸ್ವಸುರ್ವ್ಯಕೃತ ರೂಪಮಶುದ್ಧಬುದ್ಧೇ-
ಸ್ತಸ್ಯಾಃ ಖರತ್ರಿಶಿರದೂಷಣಮುಖ್ಯಬಂಧೂನ್ ।
ಜಘ್ನೇ ಚತುರ್ದಶ ಸಹಸ್ರಮಪಾರಣೀಯ-
ಕೋದಂಡಪಾಣಿರಟಮಾನ ಉವಾಸ ಕೃಚ್ಛ್ರಮ್ ॥

ಅನುವಾದ

ಕಾಡಿಗೆ ತೆರಳಿ ಭಗವಂತನು ಅಲ್ಲಿ ರಾಕ್ಷಸರಾಜನಾದ ರಾವಣನ ತಂಗಿಯಾದ ಶೂರ್ಪಣಖಿಯನ್ನು ವಿರೂಪಗೊಳಿಸಿದನು. ಏಕೆಂದರೆ, ಅವಳ ಬುದ್ಧಿಯು ಬಹಳ ಕಲುಷಿತ, ಕಾಮವಾಸನೆಯಿಂದ ಅಶುದ್ಧವಾಗಿತ್ತು. ಅವಳ ಮುಖ್ಯ ಬಂಧುಗಳಾದ ಖರ-ತ್ರಿಶಿರ-ದೂಷಣರನ್ನು ಹಾಗೂ ಹದಿನಾಲ್ಕು ಸಾವಿರ ರಾಕ್ಷಸರನ್ನೂ ಸಂಹರಿಸಿದನು. ಶತ್ರುಗಳಿಂದ ಎದುರಿಸಲು ಅಸಾಧ್ಯವಾದ ಕೋದಂಡವನ್ನು ಧರಿಸಿದ್ದ ಶ್ರೀರಾಮನು ಅರಣ್ಯದಲ್ಲಿ ಸಂಚರಿಸುತ್ತಾ ಬಹಳ ಕಷ್ಟದಿಂದ ಕಾಲಕಳೆಯುತ್ತಿದ್ದನು. ॥9॥

(ಶ್ಲೋಕ-10)

ಮೂಲಮ್

ಸೀತಾಕಥಾಶ್ರವಣದೀಪಿತಹೃಚ್ಛಯೇನ
ಸೃಷ್ಟಂ ವಿಲೋಕ್ಯ ನೃಪತೇ ದಶಕಂಧರೇಣ ।
ಜಘ್ನೇಽದ್ಭುತೈಣ ವಪುಷಾಽಽಶ್ರಮತೋಽಪಕೃಷ್ಟೋ
ಮಾರೀಚಮಾಶು ವಿಶಿಖೇನ ಯಥಾ ಕಮುಗ್ರಃ ॥

ಅನುವಾದ

ಪರೀಕ್ಷಿತನೇ! ಸೀತಾದೇವಿಯ ರೂಪ ಲಾವಣ್ಯಗಳನ್ನು ಶೂರ್ಪಣಖಿಯಿಂದ ಕೇಳಿದ ರಾವಣನು ಕಾಮಾತುರನಾದನು. ಅವನು ಮಾರೀಚನನ್ನು ಅದ್ಭುತವಾದ ಜಿಂಕೆಯ ವೇಷದಲ್ಲಿ ಶ್ರೀರಾಮನ ಪರ್ಣಕುಟಿಯ ಬಳಿಗೆ ಕಳಿಸಿದನು. ಮಾರೀಚನು ನಿಧಾನವಾಗಿ ಭಗವಂತನನ್ನು ದೂರಕ್ಕೆ ಕೊಂಡೊಯ್ದನು. ಕೊನೆಗೆ ಶ್ರೀರಾಮನು ತನ್ನ ಬಾಣದಿಂದ ಅವನನ್ನು ದಕ್ಷ ಪ್ರಜಾಪತಿಯನ್ನು ವೀರಭದ್ರನು ಸಂಹರಿಸಿದಂತೆ ಕ್ಷಣಮಾತ್ರದಲ್ಲಿ ಸಂಹರಿಸಿಬಿಟ್ಟನು. ॥10॥

(ಶ್ಲೋಕ-11)

ಮೂಲಮ್

ರಕ್ಷೋಽಧಮೇನ ವೃಕವದ್ವಿಪಿನೇಽಸಮಕ್ಷಂ
ವೈದೇಹರಾಜದುಹಿತರ್ಯಪಯಾಪಿತಾಯಾಮ್ ।
ಭ್ರಾತ್ರಾ ವನೇ ಕೃಪಣವತ್ಪ್ರಿಯಯಾ ವಿಯುಕ್ತಃ
ಸ್ತ್ರೀಸಂಗಿನಾಂ ಗತಿಮಿತಿ ಪ್ರಥಯಂಶ್ಚಚಾರ ॥

ಅನುವಾದ

ಭಗವಾನ್ ಶ್ರೀರಾಮನು ಆಶ್ರಮದಿಂದ ಬಹಳ ದೂರ ಹೋಗಿರಲಾಗಿ, ಲಕ್ಷ್ಮಣನೂ ಆಶ್ರಮದಲ್ಲಿರದಿದ್ದಾಗ ನೀಚನಾದ ರಾಕ್ಷಸ ರಾವಣನು ತೋಳವು ಕುರಿಮರಿಯನ್ನು ಅಪಹರಿಸುವಂತೆ ವಿದೇಹ ನಂದಿನಿಯಾದ, ಸುಕುಮಾರಿಯಾದ ಶ್ರೀಸೀತಾದೇವಿಯನ್ನು ಅಪಹರಿಸಿ ಕೊಂಡುಹೋದನು. ಹೀಗೆ ಪ್ರಾಣಪ್ರಿಯಳಾದ ಸೀತೆಯಿಂದ ಅಗಲಿದ ಶ್ರೀರಾಮನು ಲಕ್ಷ್ಮಣನೊಡನೆ ಕಾಡಿನಲ್ಲಿ ದೀನನಂತೆ ಅಲೆದಾಡುತ್ತಿದ್ದನು. ತನ್ನ ದುರವಸ್ಥೆಯಿಂದಾಗಿ ರಾಮನು ಸ್ತ್ರೀಸಂಗಿಗಳಾದ ಸಂಸಾರಿಗಳಿಗೆ ಇದೇ ವಿಧವಾದ ಪರಿಸ್ಥಿತಿ ಯುಂಟಾಗುವುದೆಂಬುದನ್ನು ಪ್ರಸಿದ್ಧಪಡಿಸುತ್ತಾ ಸಂಚರಿಸುತ್ತಿದ್ದನು. ॥11॥

(ಶ್ಲೋಕ-12)

ಮೂಲಮ್

ದಗ್ಧ್ವಾಽಽತ್ಮಕೃತ್ಯಹತಕೃತ್ಯಮಹನ್ ಕಬಂಧಂ
ಸಖ್ಯಂ ವಿಧಾಯ ಕಪಿಭಿರ್ದಯಿತಾಗತಿಂ ತೈಃ ।
ಬುದ್ಧ್ವಾಥವಾಲಿನಿ ಹತೇ ಪ್ಲವಗೇಂದ್ರಸೈನ್ಯೈ-
ರ್ವೇಲಾಮಗಾತ್ಸ ಮನುಜೋಽಜಭವಾರ್ಚಿತಾಂಘ್ರಿಃ ॥

ಅನುವಾದ

ಬಳಿಕ ಶ್ರೀರಾಮನು ಭಗವತ್ಸೇವಾರೂಪವಾದ ಕರ್ಮದಿಂದ ಮೊದಲೇ ಕರ್ಮ ಬಂಧನದಿಂದ ಮುಕ್ತನಾದ ಜಟಾಯುವಿಗೆ ದಾಹಸಂಸ್ಕಾರ ಮಾಡಿದನು. ಮತ್ತೆ ಕಬಂಧನನ್ನು ಸಂಹರಿಸಿದನು. ಅನಂತರ ಸುಗ್ರೀವಾದಿ ವಾನರರೊಂದಿಗೆ ಸ್ನೇಹವನ್ನು ಬೆಳೆಸಿ ವಾಲಿಯನ್ನು ವಧಿಸಿ, ವಾನರರ ಮೂಲಕ ತನ್ನ ಪ್ರಾಣಪ್ರಿಯೆಯು ಎಲ್ಲಿರುವಳೆಂದು ತಿಳಿದುಕೊಂಡನು. ಬ್ರಹ್ಮರುದ್ರರಿಂದ ಅರ್ಚಿಸಲ್ಪಡುವ ಪಾದಪದ್ಮಗಳುಳ್ಳ, ಮನುಷ್ಯರಂತೆ ಲೀಲೆಯಾಡುತ್ತಿರುವ ಭಗವಾನ್ ಶ್ರೀರಾಮನು ಕಪಿಗಳ ಸೈನ್ಯದೊಂದಿಗೆ ಸಮುದ್ರತೀರಕ್ಕೆ ತಲುಪಿದನು. ॥12॥

(ಶ್ಲೋಕ-13)

ಮೂಲಮ್

ಯದ್ರೋಷವಿಭ್ರಮವಿವೃತ್ತಕಟಾಕ್ಷಪಾತ-
ಸಂಭ್ರಾಂತನಕ್ರಮಕರೋ ಭಯಗೀರ್ಣಘೋಷಃ ।
ಸಿಂಧುಃ ಶಿರಸ್ಯರ್ಹಣಂ ಪರಿಗೃಹ್ಯ ರೂಪೀ
ಪಾದಾರವಿಂದಮುಪಗಮ್ಯ ಬಭಾಷ ಏತತ್ ॥

ಅನುವಾದ

ಅಲ್ಲಿ ಉಪವಾಸ ವ್ರತದಿಂದಾಗಲೀ, ಪ್ರಾರ್ಥನೆಯಿಂದಾಗಲೀ ಸಮುದ್ರರಾಜನ ಮೇಲೆ ಯಾವುದೇ ಪ್ರಭಾವ ಬೀಳದಿದ್ದಾಗ ಭಗವಂತನು ಕ್ರೋಧದ ಲೀಲೆಯನ್ನು ತೋರುತ್ತಾ ತನ್ನ ಉಗ್ರವಾದ ಓರೆನೋಟದಿಂದ ಸಮುದ್ರರಾಜನನ್ನು ನೋಡಿದನು. ಆಗಲೇ ಸಮುದ್ರದ ದೊಡ್ಡ ದೊಡ್ಡ ಮೀನು, ಮೊಸಳೆಗಳು ಭ್ರಾಂತವಾದವು. ಭಯದಿಂದಾಗಿ ಸಮುದ್ರದ ಗರ್ಜನೆ ಉಡುಗಿಹೋಯಿತು. ಆಗ ಸಮುದ್ರನು ಸಶರೀರಿಯಾಗಿ ತನ್ನ ತಲೆಯಲ್ಲಿ ಅನರ್ಘ್ಯವಾದ ಉಪಹಾರಗಳನ್ನು ಹೊತ್ತುಕೊಂಡು ಬಂದು ಭಗವಂತನ ಚರಣಕಮಲಗಳಲ್ಲಿ ಶರಣಾಗಿ ಇಂತೆಂದನು. ॥13॥

(ಶ್ಲೋಕ-14)

ಮೂಲಮ್

ನ ತ್ವಾಂ ವಯಂ ಜಡಧಿಯೋ ನು ವಿದಾಮ ಭೂಮನ್
ಕೂಟಸ್ಥಮಾದಿಪುರುಷಂ ಜಗತಾಮಧೀಶಮ್ ।
ಯತ್ಸತ್ತ್ವತಃ ಸುರಗಣಾ ರಜಸಃ ಪ್ರಜೇಶಾ
ಮನ್ಯೋಶ್ಚ ಭೂತಪತಯಃ ಸ ಭವಾನ್ಗುಣೇಶಃ ॥

ಅನುವಾದ

ಓ ಅನಂತನೇ! ನಾವು ಮೂರ್ಖರಾಗಿರುವುದರಿಂದ ನಿನ್ನ ನಿಜವಾದ ಸ್ವರೂಪವನ್ನು ತಿಳಿಯೆವು. ನೀನು ಸಮಸ್ತ ಜಗತ್ತಿನ ಏಕಮಾತ್ರ ಸ್ವಾಮಿಯೂ, ಆದಿಕಾರಣನೂ, ಜಗತ್ತಿನ ಪರಿವರ್ತನೆಗಳಲ್ಲಿ ಏಕರಸನೂ ಆಗಿರುವೆ. ನೀನು ಸಮಸ್ತ ಗುಣಗಳ ಸ್ವಾಮಿಯಾಗಿರುವೆ. ಇದರಿಂದ ನೀನು ಸತ್ತ್ವಗುಣವನ್ನು ಸ್ವೀಕರಿಸಿದಾಗ ದೇವತೆಗಳ, ರಜೋಗುಣವನ್ನು ಸ್ವೀಕರಿಸಿದಾಗ ಪ್ರಜಾಪತಿಗಳ, ತಮೋಗುಣವನ್ನು ಸ್ವೀಕರಿಸಿದಾಗ ನಿನ್ನ ಕ್ರೋಧದಿಂದ ರುದ್ರಗಣಗಳ ಉತ್ಪತ್ತಿಯಾಗುತ್ತದೆ. ॥14॥

(ಶ್ಲೋಕ-15)

ಮೂಲಮ್

ಕಾಮಂ ಪ್ರಯಾಹಿ ಜಹಿ ವಿಶ್ರವಸೋಽವಮೇಹಂ
ತ್ರೈಲೋಕ್ಯರಾವಣಮವಾಪ್ನುಹಿ ವೀರ ಪತ್ನೀಮ್ ।
ಬಧ್ನೀಹಿ ಸೇತುಮಿಹ ತೇ ಯಶಸೋ ವಿತತ್ಯೈ
ಗಾಯಂತಿ ದಿಗ್ವಿಜಯಿನೋ ಯಮುಪೇತ್ಯ ಭೂಪಾಃ ॥

ಅನುವಾದ

ವೀರಶಿರೋಮಣಿಯೇ! ನೀನು ನಿನ್ನ ಇಚ್ಛಾನುಸಾರವಾಗಿ ನನ್ನನ್ನು (ಸಮುದ್ರವನ್ನು) ದಾಟಿಕೊಂಡು ಹೋಗಬಹುದು. ಮೂರು ಲೋಕಗಳನ್ನು ಗೋಳಾಡಿಸುತ್ತಿರುವ ವಿಶ್ರವಸನ ಕುಪುತ್ರನಾದ ರಾವಣನನ್ನು ಸಂಹರಿಸಿ ನಿನ್ನ ಪತ್ನಿಯನ್ನು ಶೀಘ್ರವಾಗಿ ಪಡೆದುಕೋ. ಆದರೆ ನನ್ನದೊಂದು ಪ್ರಾರ್ಥನೆಯಿದೆ. ನೀನು ಇಲ್ಲಿ ನನ್ನಮೇಲೆ ಒಂದು ಸೇತುವೆಯನ್ನು ನಿರ್ಮಿಸು. ಇದರಿಂದ ನಿನ್ನ ಕೀರ್ತಿಯ ವಿಸ್ತಾರವಾಗುವುದು ಹಾಗೂ ಮುಂದೆ ಮಹಾ-ಮಹಾ ನರಪತಿಗಳು ದಿಗ್ವಿಜಯಮಾಡುತ್ತಾ ಇಲ್ಲಿಗೆ ಬಂದಾಗ ಅವರು ನಿನ್ನ ಕೀರ್ತಿಯ ಗುಣಗಾನಮಾಡುವರು.॥15॥

(ಶ್ಲೋಕ-16)

ಮೂಲಮ್

ಬದ್ಧ್ವೋದಧೌ ರಘುಪತಿರ್ವಿವಿಧಾದ್ರಿಕೂಟೈಃ
ಸೇತುಂ ಕಪೀಂದ್ರಕರಕಂಪಿತಭೂರುಹಾಂಗೈಃ ।
ಸುಗ್ರೀವನೀಲಹನುಮತ್ಪ್ರಮುಖೈರನೀಕೈಃ
ಲಂಕಾಂ ವಿಭೀಷಣದೃಶಾಽಽವಿಶದಗ್ರದಗ್ಧಾಮ್ ॥

ಅನುವಾದ

ಭಗವಾನ್ ಶ್ರೀರಾಮನು ಅನೇಕಾನೇಕ ಪರ್ವತ ಶಿಖರಗಳಿಂದ ಸಮುದ್ರದ ಮೇಲೆ ಸೇತುವೆಯನ್ನು ಕಟ್ಟಿಸಿದನು. ದೊಡ್ಡ-ದೊಡ್ಡ ವಾನರರು ತಮ್ಮ ಕೈಗಳಿಂದ ಪರ್ವತಗಳನ್ನು ಎತ್ತಿ ತರುತ್ತಿದ್ದಾಗ ಅವುಗಳ ವೃಕ್ಷಗಳು, ದೊಡ್ಡ-ದೊಡ್ಡ ಬಂಡೆಗಳು ಗಡ-ಗಡನೆ ನಡುಗುತ್ತಿದ್ದವು. ಇದಾದ ಬಳಿಕ ವಿಭೀಷಣನ ಸಲಹೆಯಂತೆ ಭಗವಂತನು ಸುಗ್ರೀವ, ನೀಲ, ಹನುಮಂತ ಮುಂತಾದ ಪ್ರಮುಖ ವೀರರೊಂದಿಗೆ ಮತ್ತು ಅತುಲ ವಾನರ ಸೇನೆಯೊಂದಿಗೆ ಲಂಕೆಯನ್ನು ಪ್ರವೇಶಿಸಿದನು. ಅದಾದರೋ ಶ್ರೀಹನುಮಂತನಿಂದ ಮೊದಲೇ ಸುಡಲ್ಪಟ್ಟಿತ್ತು. ॥16॥

(ಶ್ಲೋಕ-17)

ಮೂಲಮ್

ಸಾ ವಾನರೇಂದ್ರ ಬಲರುದ್ಧವಿಹಾರಕೋಷ್ಠ-
ಶ್ರೀದ್ವಾರಗೋಪುರ ಸದೋವಲಭೀವಿಟಂಕಾ ।
ನಿರ್ಭಜ್ಯಮಾನಧಿಷಣ ಧ್ವಜಹೇಮಕುಂಭ-
ಶೃಂಗಾಟಕಾ ಗಜಕುಲೈರ್ಹ್ರದಿನೀವ ಘೂರ್ಣಾ ॥

ಅನುವಾದ

ಆ ಸಮಯದಲ್ಲಿ ವಾನರ ರಾಜನ ಸೈನ್ಯವು ಲಂಕೆಯಲ್ಲಿ ಅಡ್ಡಾಡುತ್ತಾ ವಿಹಾರಸ್ಥಾನಗಳನ್ನೂ, ಧಾನ್ಯದ ಕಣಜಗಳನ್ನೂ, ಬಾಗಿಲುಗಳನ್ನೂ, ಮಹಾದ್ವಾರಗಳನ್ನೂ, ಸಭಾಭವನಗಳನ್ನೂ, ಮೊಗಸಾಲೆಗಳನ್ನೂ ಮತ್ತು ಪಕ್ಷಿಗಳು ವಾಸಿಸುವ ಸ್ಥಳಗಳನ್ನೂ ಆಕ್ರಮಿಸಿತು. ಅವರು ಅಲ್ಲಿಯ ವೇದಿಗಳನ್ನು, ಧ್ವಜಗಳನ್ನೂ, ಚಿನ್ನದ ಕಲಶಗಳನ್ನೂ, ಚೌಕಗಳನ್ನೂ ಒಡೆದು ಹಾಕಿದರು. ಆಗ ಲಂಕೆಯು ಆನೆಗಳ ಹಿಂಡು ನದಿಯನ್ನು ಕದಡಿ ಹಾಕಿದಂತೆ ಕಂಡುಬರುತ್ತಿತ್ತು. ॥17॥

(ಶ್ಲೋಕ-18)

ಮೂಲಮ್

ರಕ್ಷಃಪತಿಸ್ತದವಲೋಕ್ಯ ನಿಕುಂಭಕುಂಭ-
ಧೂಮ್ರಾಕ್ಷದುರ್ಮುಖ ಸುರಾಂತನರಾಂತಕಾದೀನ್ ।
ಪುತ್ರಂ ಪ್ರಹಸ್ತಮತಿಕಾಯವಿಕಂಪನಾದೀನ್
ಸರ್ವಾನುಗಾನ್ಸಮಹಿನೋದಥ ಕುಂಭಕರ್ಣಮ್ ॥

ಅನುವಾದ

ಇದನ್ನು ನೋಡಿದ ರಾಕ್ಷಸರಾಜ ರಾವಣನು ನಿಕುಂಭ, ಕುಂಭ, ಧೂಮ್ರಾಕ್ಷ, ದುರ್ಮುಖ, ಸುರಾಂತಕ, ನರಾಂತಕ, ಪ್ರಹಸ್ತ, ಅತಿಕಾಯ, ವಿಕಂಪನ ಮುಂತಾದ ತನ್ನ ಎಲ್ಲ ಅನುಚರರನ್ನು, ಪುತ್ರನಾದ ಮೇಘನಾದನನ್ನು, ಕೊನೆಗೆ ತಮ್ಮನಾದ ಕುಂಭಕರ್ಣನನ್ನೂ ಯುದ್ಧಮಾಡಲು ಕೊಟ್ಟು ಕಳಿಸಿದನು. ॥18॥

(ಶ್ಲೋಕ-19)

ಮೂಲಮ್

ತಾಂ ಯಾತುಧಾನಪೃತನಾಮಸಿಶೂಲಚಾಪ-
ಪ್ರಾಸರ್ಷ್ಟಿಶಕ್ತಿಶರತೋಮರಖಡ್ಗದುರ್ಗಾಮ್ ।
ಸುಗ್ರೀವಲಕ್ಷ್ಮಣಮರುತ್ಸುತಗಂಧಮಾದ-
ನೀಲಾಂಗದರ್ಕ್ಷಪನಸಾದಿಭಿರನ್ವಿತೋಽಗಾತ್ ॥

ಅನುವಾದ

ರಾಕ್ಷಸರ ಆ ವಿಶಾಲವಾದ ಸೈನ್ಯವು ಖಡ್ಗ, ತ್ರಿಶೂಲ, ಧನುಸ್ಸು, ಪ್ರಾಸ, ಋಷ್ಟಿ, ಶಕ್ತಿ, ಬಾಣ, ಶೂಲ ಮುಂತಾದ ಅಸ್ತ್ರ-ಶಸ್ತ್ರಗಳಿಂದ ಸುರಕ್ಷಿತ ಮತ್ತು ಅತ್ಯಂತ ದುರ್ಗಮವಾಗಿತ್ತು. ಭಗವಾನ್ ಶ್ರೀರಾಮನು ಸುಗ್ರೀವ, ಲಕ್ಷ್ಮಣ, ಹನುಮಂತ, ಗಂಧಮಾದನ, ನೀಲ, ಅಂಗದ, ಜಾಂಬವಂತ, ಪನಸ ಮೊದಲಾದ ವೀರರನ್ನು ಜೊತೆಗೂಡಿ ರಾಕ್ಷಸರ ಸೈನ್ಯವನ್ನು ಎದುರಿಸಿದನು. ॥19॥

(ಶ್ಲೋಕ-20)

ಮೂಲಮ್

ತೇಽನೀಕಪಾ ರಘುಪತೇರಭಿಪತ್ಯ ಸರ್ವೇ
ದ್ವಂದ್ವಂ ವರೂಥಮಿಭಪತ್ತಿರಥಾಶ್ವಯೋಧೈಃ ।
ಜಘ್ನುರ್ದ್ರುಮೈರ್ಗಿರಿಗದೇಷುಭಿರಂಗದಾದ್ಯಾಃ
ಸೀತಾಭಿಮರ್ಶಹತಮಂಗಲರಾವಣೇಶಾನ್ ॥

ಅನುವಾದ

ರಘುವಂಶ ಶಿರೋಮಣಿಯಾದ ಭಗವಾನ್ ಶ್ರೀರಾಮನ ಅಂಗದಾದಿ ಎಲ್ಲ ಸೇನಾಪತಿಗಳು ರಾಕ್ಷಸರ ರಥ-ಗಜಾಶ್ವ-ಪದಾತಿ ಸೈನ್ಯವನ್ನು ದ್ವಂದ್ವಯುದ್ಧದ ಮೂಲಕವಾಗಿ ಎದುರಿಸಿದರು ಮತ್ತು ರಾಕ್ಷಸರನ್ನು ವೃಕ್ಷಗಳಿಂದ, ಪರ್ವತ ಶಿಖರಗಳಿಂದ ಗದೆ, ಬಾಣಗಳಿಂದಲೂ ಪ್ರಹರಿಸಿದರು. ಮಂಗಳಮಯಿಯಾದ ಸೀತಾದೇವಿಯನ್ನು ಸ್ಪರ್ಶಿಸಿದ ಕಾರಣದಿಂದಾಗಿ ಅಮಂಗಳನಾಗಿದ್ದ ರಾವಣನನ್ನು ಒಡೆಯನನ್ನಾಗಿ ಹೊಂದಿದ್ದ ರಾಕ್ಷಸರಿಗೆ ವಿನಾಶವೆಂಬುದು ಮೊದಲೇ ಸಿದ್ಧವಾಗಿ ಹೋಗಿದ್ದಿತು.॥20॥

(ಶ್ಲೋಕ-21)

ಮೂಲಮ್

ರಕ್ಷಃಪತಿಃ ಸ್ವಬಲನಷ್ಟಿಮವೇಕ್ಷ್ಯ ರುಷ್ಟ
ಆರುಹ್ಯ ಯಾನಕಮಥಾಭಿಸಸಾರ ರಾಮಮ್ ।
ಸ್ವಃಸ್ಯಂದನೇ ದ್ಯುಮತಿ ಮಾತಲಿನೋಪನೀತೇ
ವಿಭ್ರಾಜಮಾನಮಹನನ್ನಿಶಿತೈಃ ಕ್ಷುರಪ್ರೈಃ ॥

ಅನುವಾದ

ರಾಕ್ಷಸರಾಜನಾದ ರಾವಣೇಶ್ವರನು ತನ್ನ ಸೈನ್ಯವು ದಿನ-ದಿನಕ್ಕೂ ನಾಶವಾಗುವುದನ್ನು ಕಂಡು ಅತ್ಯಂತ ಕ್ರುದ್ಧನಾಗಿ ಪುಷ್ಪಕ ವಿಮಾನವನ್ನೇರಿ ಬಂದು ಶ್ರೀರಾಮನಿಗೆ ಎದುರಾಗಿ ನಿಂತನು. ಆ ಸಮಯಕ್ಕೆ ಸರಿಯಾಗಿ ಇಂದ್ರನ ಸಾರಥಿಯಾದ ಮಾತಲಿಯು ತೇಜೋಮಯವಾದ ದಿವ್ಯರಥವನ್ನು ನಡೆಸಿಕೊಂಡು ಶ್ರೀರಾಮನ ಬಳಿಗೆ ಬಂದನು. ಮಂಗಳಮೂರ್ತಿಯಾದ ಶ್ರೀರಾಮನು ಆ ದಿವ್ಯರಥವನ್ನು ಹತ್ತಿಕುಳಿತನು. ಒಡನೆಯೇ ರಾವಣನು ತನ್ನ ತೀಕ್ಷ್ಣವಾದ ಬಾಣಗಳಿಂದ ಶ್ರೀರಾಮನನ್ನು ಪ್ರಹರಿಸತೊಡಗಿದನು. ॥21॥

(ಶ್ಲೋಕ-22)

ಮೂಲಮ್

ರಾಮಸ್ತಮಾಹ ಪುರುಷಾದಪುರೀಷ ಯನ್ನಃ
ಕಾಂತಾಸಮಕ್ಷಮಸತಾಪಹೃತಾ ಶ್ವವತ್ತೇ ।
ತ್ಯಕ್ತತ್ರಪಸ್ಯ ಲಮದ್ಯ ಜುಗುಪ್ಸಿತಸ್ಯ
ಯಚ್ಛಾಮಿ ಕಾಲ ಇವ ಕರ್ತುರಲಂಘ್ಯವೀರ್ಯಃ ॥

ಅನುವಾದ

ಆಗ ಭಗವಾನ್ ಶ್ರೀರಾಮನು ರಾವಣನಿಗೆ ಹೇಳಿದನು ಎಲೈ ನೀಚರಾಕ್ಷಸನೇ! ಹವಿಸ್ಸನ್ನು ಕದಿಯುವ ನಾಯಿಯಂತೆ ನೀನು ನಾನು ಇಲ್ಲದಿರುವಾಗ ನನ್ನ ಪ್ರಾಣಪ್ರಿಯಳಾದ ಪತ್ನಿಯನ್ನು ಅಪಹರಿಸಿ ತಂದಿರುವೆ. ನಿನ್ನಂತಹ ನಿಂದ್ಯನೂ, ನಾಚಿಕೆಗೆಟ್ಟವನೂ ಬೇರೆ ಯಾವನಿದ್ದಾನೆ? ಮೀರಿ ನಡೆಯಲು ಅಸಾಧ್ಯನಾದ ಕಾಲ ಪುರುಷನು ಅವುಗಳ ಕರ್ಮಾನುಸಾರವಾಗಿ ಪ್ರಾಣಿಗಳನ್ನು ಶಿಕ್ಷಿಸುವಂತೆ ನಿನ್ನ ಜುಗುಪ್ಸಿತವಾದ ಕಾರ್ಯಕ್ಕೆ ತಕ್ಕ ಫಲವನ್ನು ನಾನೀಗಲೇ ಕೊಡುತ್ತೇನೆ. ॥22॥

(ಶ್ಲೋಕ-23)

ಮೂಲಮ್

ಏವಂ ಕ್ಷಿಪನ್ ಧನುಷಿ ಸಂಧಿತಮುತ್ಸಸರ್ಜ
ಬಾಣಂ ಸ ವಜ್ರಮಿವ ತದ್ಧೃದಯಂ ಬಿಭೇದ ।
ಸೋಽಸೃಗ್ವಮನ್ ದಶಮುಖೈರ್ನ್ಯಪತತ್ ವಿಮಾನಾ-
ದ್ಧಾಹೇತಿ ಜಲ್ಪತಿ ಜನೇ ಸುಕೃತೀವ ರಿಕ್ತಃ ॥

ಅನುವಾದ

ಹೀಗೆ ದುಷ್ಟನಾದ ರಾವಣನನ್ನು ನಿಂದಿಸುತ್ತಾ ಭಗವಾನ್ ಶ್ರೀರಾಮನು ಧನುಸ್ಸಿಗೆ ಹೂಡಿದ್ದ ಬಾಣವನ್ನು ಅವನ ಮೇಲೆ ಪ್ರಯೋಗಿಸಿದನು. ಆ ಬಾಣವು ವಜ್ರದಂತಿರುವ ಅವನ ಹೃದಯವನ್ನು ಭೇದಿಸಿಬಿಟ್ಟಿತು. ಅವನು ತನ್ನ ಹತ್ತು ಮುಖಗಳಿಂದಲೂ ರಕ್ತವನ್ನು ಕಾರುತ್ತಾ ಪುಣ್ಯಾತ್ಮರು ಭೋಗ ಮುಗಿದಾಗ ಸ್ವರ್ಗದಿಂದ ಕೆಳಗೆ ಬೀಳುವಂತೆಯೇ ವಿಮಾನದಿಂದ ಉರುಳಿಬಿದ್ದನು. ಆ ಸಮಯದಲ್ಲಿ ಅವನ ಪುರಜನರೂ, ಪರಿಜನರೂ ಅಯ್ಯೋ! ಅಯ್ಯೋ! ಎಂದು ಕೂಗಿಕೊಂಡರು.॥23॥

(ಶ್ಲೋಕ-24)

ಮೂಲಮ್

ತತೋ ನಿಷ್ಕ್ರಮ್ಯ ಲಂಕಾಯಾ ಯಾತುಧಾನ್ಯಃ ಸಹಸ್ರಶಃ ।
ಮಂದೋದರ್ಯಾ ಸಮಂ ತಸ್ಮಿನ್ ಪ್ರರುದತ್ಯ ಉಪಾದ್ರವನ್ ॥

ಅನುವಾದ

ಅನಂತರ ಸಾವಿರಾರು ರಾಕ್ಷಸಿಯರು ಮಂದೋದರಿಯೊಂದಿಗೆ ಅಳುತ್ತಾ ಲಂಕೆಯಿಂದ ಹೊರಬಿದ್ದು ರಣಭೂಮಿಗೆ ಬಂದರು.॥24॥

(ಶ್ಲೋಕ-25)

ಮೂಲಮ್

ಸ್ವಾನ್ ಸ್ವಾನ್ ಬಂಧೂನ್ಪರಿಷ್ವಜ್ಯ ಲಕ್ಷ್ಮಣೇಷುಭಿರರ್ದಿತಾನ್ ।
ರುರುದುಃ ಸುಸ್ವರಂ ದೀನಾ ಘ್ನಂತ್ಯ ಆತ್ಮಾನಮಾತ್ಮನಾ ॥

ಅನುವಾದ

ಅವರ ಸ್ವಜನ-ಸಂಬಂಧಿಗಳು ಲಕ್ಷ್ಮಣನ ಬಾಣಗಳಿಂದ ಛಿನ್ನ-ಭಿನ್ನರಾಗಿ ಬಿದ್ದಿರುವುದನ್ನು ನೋಡಿದರು. ಅವರು ತಮ್ಮ ಕೈಯಿಂದ ಎದೆಯನ್ನು ಬಡಿದುಕೊಂಡು ತಮ್ಮ ಸಂಬಂಧಿಗಳನ್ನು ಅಪ್ಪಿಕೊಳ್ಳುತ್ತಾ ಗಟ್ಟಿಯಾಗಿ ವಿಲಾಪಿಸತೊಡಗಿದರು. ॥25॥

(ಶ್ಲೋಕ-26)

ಮೂಲಮ್

ಹಾ ಹತಾಃ ಸ್ಮ ವಯಂ ನಾಥ ಲೋಕರಾವಣ ರಾವಣ ।
ಕಂ ಯಾಯಾಚ್ಛರಣಂ ಲಂಕಾ ತ್ವದ್ವಿಹೀನಾ ಪರಾರ್ದಿತಾ ॥

ಅನುವಾದ

ಅಯ್ಯೋ! ಮೂರು ಲೋಕಗಳನ್ನೂ ಭಯದಿಂದ ತಲ್ಲಣಗೊಳಿಸುತ್ತಿದ್ದ ರಾವಣೇಶ್ವರನೇ! ನಾಥನೇ! ಇಂದು ನಾವೆಲ್ಲರೂ ಹಾಳಾಗಿ ಹೋದೆವು. ನೀನಿಲ್ಲದ ಕಾರಣದಿಂದಾಗಿ ಶತ್ರುಗಳಿಂದ ಈ ಲಂಕೆಯು ಧ್ವಂಸವಾಗಿಬಿಟ್ಟಿದೆ. ಈಗ ಲಂಕೆಯು ಯಾರ ಅಧೀನದಲ್ಲಿರುವುದೆಂಬುದೇ ಒಂದು ಪ್ರಶ್ನೆಯಾಗಿದೆ. ॥26॥

(ಶ್ಲೋಕ-27)

ಮೂಲಮ್

ನೈವಂ ವೇದ ಮಹಾಭಾಗ ಭವಾನ್ಕಾಮವಶಂ ಗತಃ ।
ತೇಜೋಽನುಭಾವಂ ಸೀತಾಯಾ ಯೇನ ನೀತೋ ದಶಾಮಿಮಾಮ್ ॥

ಅನುವಾದ

ಪ್ರಭುವೇ! ನೀನು ಎಲ್ಲ ರೀತಿಯಿಂದಲೂ ಸಂಪನ್ನನಾಗಿದ್ದೆ. ಯಾವುದೇ ಕೊರತೆ ಇರಲಿಲ್ಲ. ಆದರೆ ನೀನು ಕಾಮವಶನಾಗಿ ಸೀತೆಯು ಎಷ್ಟು ತೇಜಸ್ವಿನಿಯಾಗಿದ್ದಾಳೆ, ಅವಳ ಪ್ರಭಾವವೆಷ್ಟೆಂಬುದನ್ನು ತಿಳಿಯದೇ ಹೋದೆ. ನಿನ್ನ ಈ ತಪ್ಪೇ ಇಂತಹ ದುರ್ದಶೆಗೆ ಕಾರಣವಾಯಿತಲ್ಲ! ॥27॥

(ಶ್ಲೋಕ-28)

ಮೂಲಮ್

ಕೃತೈಷಾ ವಿಧವಾ ಲಂಕಾ ವಯಂ ಚ ಕುಲನಂದನ ।
ದೇಹಃ ಕೃತೋಽನ್ನಂ ಗೃಧ್ರಾಣಾಮಾತ್ಮಾ ನರಕಹೇತವೇ ॥

ಅನುವಾದ

ಅಂದು ನಿನ್ನ ಕಾರ್ಯಗಳಿಂದ ನಾವೆಲ್ಲರೂ ಮತ್ತು ಸಮಸ್ತ ರಾಕ್ಷಸವಂಶವು ಆನಂದಿತರಾಗಿದ್ದೆವು. ಇಂದು ನಾವೆಲ್ಲರೂ ಹಾಗೂ ಇಡೀ ಲಂಕಾನಗರಿಯು ವಿಧವೆಯಾಯಿತು. ನಿನ್ನ ದೇಹವು ರಣಹದ್ದು ಮೊದಲಾದ ಪಕ್ಷಿಗಳಿಗೆ ಆಹಾರವಾಗಿ ಪರಿಣಮಿಸಿತು. ನಿನ್ನ ಆತ್ಮನು ನರಕ ಭಾಜನವಾಗಿದೆ. ಇದೆಲ್ಲವೂ ನಿನ್ನ ಮೂರ್ಖತೆಯ ಮತ್ತು ಕಾಮುಕತೆಯ ಫಲವಾಗಿದೆ. ॥28॥

(ಶ್ಲೋಕ-29)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಸ್ವಾನಾಂ ವಿಭೀಷಣಶ್ಚಕ್ರೇ ಕೋಸಲೇಂದ್ರಾನುಮೋದಿತಃ ।
ಪಿತೃಮೇಧವಿಧಾನೇನ ಯದುಕ್ತಂ ಸಾಂಪರಾಯಿಕಮ್ ॥

ಅನುವಾದ

ಶ್ರೀಶುಕಮಹಾ ಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಕೋಸಲೇಶ್ವರನಾದ ಭಗವಾನ್ ಶ್ರೀರಾಮಚಂದ್ರನ ಆಣತಿಯಂತೆ ವಿಭೀಷಣನು ತನ್ನ ಸ್ವಜನ-ಸಂಬಂಧಿಗಳಿಗೆ ಪಿತೃ ಮೇಧವಿಧಿಯನ್ನನುಸರಿಸಿ ಅಂತ್ಯೇಷ್ಟಿಗಳನ್ನು ಮಾಡಿದನು.॥29॥

(ಶ್ಲೋಕ-30)

ಮೂಲಮ್

ತತೋ ದದರ್ಶ ಭಗವಾನಶೋಕವನಿಕಾಶ್ರಮೇ ।
ಕ್ಷಾಮಾಂ ಸ್ವವಿರಹವ್ಯಾಧಿಂ ಶಿಂಶಪಾಮೂಲಮಾಶ್ರಿತಾಮ್ ॥

ಅನುವಾದ

ಇದಾದ ಬಳಿಕ ಭಗವಾನ್ ಶ್ರೀರಾಮನು ಅಶೋಕವನದ ಆಶ್ರಮದಲ್ಲಿ ಅಶೋಕ ವೃಕ್ಷದ ಬುಡದಲ್ಲಿ ಕುಳಿತಿದ್ದ ಸೀತಾದೇವಿಯನ್ನು ನೋಡಿದನು. ಅವಳು ಅವನ ವಿರಹವ್ಯಥೆಯಿಂದ ಪೀಡಿತಳಾಗಿದ್ದು ಅತ್ಯಂತ ದುರ್ಬಲಳಾಗಿದ್ದಳು.॥30॥

(ಶ್ಲೋಕ-31)

ಮೂಲಮ್

ರಾಮಃ ಪ್ರಿಯತಮಾಂ ಭಾರ್ಯಾಂ ದೀನಾಂ ವೀಕ್ಷ್ಯಾನ್ವಕಂಪತ ।
ಆತ್ಮಸಂದರ್ಶನಾಹ್ಲಾದವಿಕಸನ್ಮುಖಪಂಕಜಾಮ್ ॥

ಅನುವಾದ

ಅತ್ಯಂತ ದೈನ್ಯಾವಸ್ಥೆಯಲ್ಲಿದ್ದ ಪ್ರಿಯತಮೆಯಾದ ಅರ್ಧಾಂಗಿನಿಯನ್ನು ನೋಡಿ ಶ್ರೀರಾಮನ ಹೃದಯವು ಪ್ರೀತಿ ಮತ್ತು ಕೃಪೆಯಿಂದ ತುಂಬಿಬಂತು. ಇತ್ತ ಭಗವಂತನ ದರ್ಶನವನ್ನು ಪಡೆದ ಸೀತೆಯ ಹೃದಯವೂ ಪ್ರೇಮಾನಂದದಿಂದ ಪರಿಪೂರ್ಣವಾಯಿತು. ಆಕೆಯ ಮುಖಕಮಲವು ಅರಳಿಕೊಂಡಿತು.॥31॥

(ಶ್ಲೋಕ-32)

ಮೂಲಮ್

ಆರೋಪ್ಯಾರುರುಹೇ ಯಾನಂ ಭ್ರಾತೃಭ್ಯಾಂ ಹನುಮದ್ಯುತಃ ।
ವಿಭೀಷಣಾಯ ಭಗವಾನ್ ದತ್ತ್ವಾ ರಕ್ಷೋಗಣೇಶತಾಮ್ ॥

(ಶ್ಲೋಕ-33)

ಮೂಲಮ್

ಲಂಕಾಮಾಯುಶ್ಚ ಕಲ್ಪಾಂತಂ ಯಯೌ ಚೀರ್ಣವ್ರತಃ ಪುರೀಮ್ ।
ಅವಕೀರ್ಯಮಾಣಃ ಕುಸುಮೈರ್ಲೋಕಪಾಲಾರ್ಪಿತೈಃ ಪಥಿ ॥

ಅನುವಾದ

ಭಗವಂತನು ವಿಭೀಷಣನಿಗೆ ರಾಕ್ಷಸರ ಒಡೆತನ, ಲಂಕೆಯ ರಾಜ್ಯ ಮತ್ತು ಒಂದು ಕಲ್ಪದ ಆಯುಸ್ಸನ್ನೂ ದಯಪಾಲಿಸಿದನು. ಇದಾದ ಬಳಿಕ ಮೊದಲಿಗೆ ಸೀತೆಯನ್ನು ಪುಷ್ಪಕವಿಮಾನದಲ್ಲಿ ಕುಳ್ಳಿರಿಸಿ ತನ್ನ ಈರ್ವರೂ ತಮ್ಮಂದಿರಾದ ಲಕ್ಷ್ಮಣ, ಸುಗ್ರೀವರನ್ನೂ ಹಾಗೂ ಸೇವಕನಾದ ಹನುಮಂತನೊಂದಿಗೆ ಸ್ವಯಂ ಪುಷ್ಪಕವಿಮಾನವನ್ನೇರಿದನು. ಹೀಗೆ ಹದಿನಾಲ್ಕು ವರ್ಷಗಳ ವ್ರತವು ಪೂರ್ಣವಾದಾಗ ಅವನು ತನ್ನ ನಗರಕ್ಕೆ ಹೊರಟನು. ಆಗ ಮಾರ್ಗದಲ್ಲಿ ಬ್ರಹ್ಮಾದಿ ಲೋಕಪಾಲರೂ, ದೇವತೆಗಳೂ ತುಂಬು ಪ್ರೇಮದಿಂದ ಹೂವುಗಳ ಮಳೆಯನ್ನು ಕರೆಯುತ್ತಿದ್ದರು.॥32-33॥

(ಶ್ಲೋಕ-34)

ಮೂಲಮ್

ಉಪಗೀಯಮಾನಚರಿತಃ ಶತಧೃತ್ಯಾದಿಭಿರ್ಮುದಾ ।
ಗೋಮೂತ್ರಯಾವಕಂ ಶ್ರುತ್ವಾ ಭ್ರಾತರಂ ವಲ್ಕಲಾಂಬರಮ್ ॥

(ಶ್ಲೋಕ-35)

ಮೂಲಮ್

ಮಹಾಕಾರುಣಿಕೋಽತಪ್ಯಜ್ಜಟಿಲಂ ಸ್ಥಂಡಿಲೇಶಯಮ್ ।
ಭರತಃ ಪ್ರಾಪ್ತಮಾಕರ್ಣ್ಯ ಪೌರಾಮಾತ್ಯಪುರೋಹಿತೈಃ ॥

(ಶ್ಲೋಕ-36)

ಮೂಲಮ್

ಪಾದುಕೇ ಶಿರಸಿ ನ್ಯಸ್ಯ ರಾಮಂ ಪ್ರತ್ಯುದ್ಯತೋಽಗ್ರಜಮ್ ।
ನಂದಿಗ್ರಾಮಾತ್ ಸ್ವಶಿಬಿರಾದ್ ಗೀತವಾದಿತ್ರನಿಃಸ್ವನೈಃ ॥

(ಶ್ಲೋಕ-37)

ಮೂಲಮ್

ಬ್ರಹ್ಮಘೋಷೇಣ ಚ ಮುಹುಃ ಪಠದ್ಭಿರ್ಬ್ರಹ್ಮವಾದಿಭಿಃ ।
ಸ್ವರ್ಣಕಕ್ಷಪತಾಕಾಭಿರ್ಹೈಮೈಶ್ಚಿತ್ರಧ್ವಜೈ ರಥೈಃ ॥

(ಶ್ಲೋಕ-38)

ಮೂಲಮ್

ಸದಶ್ವೈ ರುಕ್ಮಸನ್ನಾಹೈರ್ಭಟೈಃ ಪುರಟವರ್ಮಭಿಃ ।
ಶ್ರೇಣೀಭಿರ್ವಾರಮುಖ್ಯಾಭಿರ್ಭೃತ್ಯೈಶ್ಚೈವ ಪದಾನುಗೈಃ ॥

(ಶ್ಲೋಕ-39)

ಮೂಲಮ್

ಪಾರಮೇಷ್ಠ್ಯಾನ್ಯುಪಾದಾಯ ಪಣ್ಯಾನ್ಯುಚ್ಚಾವಚಾನಿ ಚ ।
ಪಾದಯೋರ್ನ್ಯಪತತ್ಪ್ರೇಮ್ಣಾ ಪ್ರಕ್ಲಿನ್ನಹೃದಯೇಕ್ಷಣಃ ॥

ಅನುವಾದ

ಇತ್ತ ಬ್ರಹ್ಮಾದಿ ದೇವತೆಗಳು ಆನಂದಭರಿತರಾಗಿ ಭಗವಂತನ ಲೀಲಾಪ್ರಸಂಗಗಳನ್ನು ಗಾನಮಾಡುತ್ತಿದ್ದರು. ಅತ್ತಲಾಗಿ ಶ್ರೀರಾಮನ ಆಗಮನದ ನಿರೀಕ್ಷಣೆಯಲ್ಲಿಯೇ ಕಾತರನಾಗಿದ್ದ ಭರತನು ಕೇವಲ ಗೋಮೂತ್ರದಲ್ಲಿ ಬೇಯಿಸಿದ ಜವೆಯ ಗಂಜಿಯನ್ನು ಮಾತ್ರವೇ ಸೇವಿಸುತ್ತಿದ್ದನು. ಅಣ್ಣನಂತೆಯೇ ನಾರುಮಡಿಯನ್ನೇ ಉಡುತ್ತಿದ್ದನು. ಜಟಾಧಾರಿಯಾಗಿದ್ದನು. ನೆಲದ ಮೇಲೆ ದರ್ಭೆಗಳನ್ನು ಹಾಸಿಕೊಂಡು ಮಲಗುತ್ತಿದ್ದನು. ಈ ಸಮಾಚಾರವನ್ನು ಕೇಳಿದ ಪರಮ ಕಾರುಣಿಕನಾದ ಶ್ರೀರಾಮನು ಕಳವಳಗೊಂಡನು. ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಶ್ರೀರಾಮನು ಅಯೋಧ್ಯೆಯ ಕಡೆಗೆ ಬರುತ್ತಿರುವನೆಂದು ತಿಳಿದೊಡನೆಯೇ ಆನಂದಭರಿತನಾದ ಭರತನು ಪುರವಾಸಿಗಳನ್ನು, ಮಂತ್ರಿ, ಪುರೋಹಿತರನ್ನು ಜೊತೆಗೆ ಕರೆದುಕೊಂಡು ಭಗವಂತನ ಚರಣಪಾದುಕೆಗಳನ್ನು ಶಿರದಮೇಲೆ ಹೊತ್ತುಕೊಂಡು ರಾಮನ ಸ್ವಾಗತಕ್ಕಾಗಿ ಹೊರಟನು. ನಂದಿಗ್ರಾಮದಲ್ಲಿದ್ದ ತನ್ನ ಶಿಬಿರದಿಂದ ಭರತನು ಹೊರಟಾಗ ಪುರಜನರು ಅವನೊಂದಿಗೆ ಮಂಗಳಗೀತೆಗಳನ್ನು ಹಾಡುತ್ತಾ, ವಾದ್ಯಘೋಷಗಳೊಡನೆ ಹೊರಟರು. ವೇದವಿದರಾದ ಬ್ರಾಹ್ಮಣರು ಸ್ವಸ್ತಿವಾಚನ ಮಾಡುತ್ತಿದ್ದರು. ಅವರ ಧ್ವನಿಯು ಎಲ್ಲೆಡೆ ಪ್ರತಿಧ್ವನಿಸಿತು. ಸುವರ್ಣಮಯವಾದ ಪತಾಕೆಗಳು ಎಲ್ಲೆಡೆ ಹಾರಾಡುತ್ತಿದ್ದವು. ಚಿತ್ರವಿಚಿತ್ರವಾದ ಧ್ವಜಗಳಿಂದ ಕೂಡಿದ ಸುವರ್ಣಮಯವಾದ ರಥಗಳೂ, ಸುವರ್ಣಮಯವಾದ ಜೀನುಗಳಿಂದ ಸಮಲಂಕೃತವಾದ ಕುದುರೆಗಳೂ, ಸುವರ್ಣಮಯವಾದ ಕವಚಗಳನ್ನೂ ಧರಿಸಿದ್ದ ಸೈನಿಕರು ಭರತನನ್ನು ಹಿಂಬಾಲಿಸಿ ಹೋಗುತ್ತಿದ್ದರು. ಶ್ರೀಮಂತ ಶ್ರೇಷ್ಠಿವರ್ಗ, ಶ್ರೇಷ್ಠ ವಾರಾಂಗನೆಯರೂ, ಕಾಲಾಳುಗಳು ಮಹಾರಾಜರಿಗೆ ಯೋಗ್ಯವಾದ ಸಕಲ ವಸ್ತುಗಳನ್ನು ಎತ್ತಿಕೊಂಡು ಭರತನೊಂದಿಗೆ ನಡೆಯುತ್ತಿದ್ದರು. ಭಗವಂತನನ್ನು ನೋಡುತ್ತಲೇ ಪ್ರೇಮೋದ್ರೇಕದಿಂದ ಭರತನ ಹೃದಯವು ಕರಗಿ, ಕಣ್ಣುಗಳಲ್ಲಿ ಆನಂದಾಶ್ರುಗಳು ಚಿಮ್ಮಿದುವು. ಅವನು ಭಗವಂತನ ಶ್ರೀಚರಣಗಳಲ್ಲಿ ಬಿದ್ದು ಹೊರಳಾಡಿದನು. ॥34-39॥

(ಶ್ಲೋಕ-40)

ಮೂಲಮ್

ಪಾದುಕೇ ನ್ಯಸ್ಯ ಪುರತಃ ಪ್ರಾಂಜಲಿರ್ಬಾಷ್ಪಲೋಚನಃ ।
ತಮಾಶ್ಲಿಷ್ಯ ಚಿರಂ ದೋರ್ಭ್ಯಾಂ ಸ್ನಾಪಯನ್ನೇತ್ರಜೈರ್ಜಲೈಃ ॥

ಅನುವಾದ

ಭರತನು ಪ್ರಭುವಿನ ಮುಂದೆ ಅವನ ಪಾದುಕೆಗಳನ್ನು ಇರಿಸಿದನು ಮತ್ತು ಕೈ ಜೋಡಿಸಿಕೊಂಡು ನಿಂತುಕೊಂಡನು. ಕಣ್ಣುಗಳಿಂದ ಅಶ್ರುಗಳು ಹರಿಯುತ್ತಿದ್ದವು. ಭಗವಂತನು ತನ್ನ ಎರಡೂ ಕೈಗಳಿಂದ ಬರಸೆಳೆದುಕೊಂಡು ದೀರ್ಘವಾಗಿ ಭರತನನ್ನು ಆಲಿಂಗಿಸಿಕೊಂಡನು. ಭಗವಂತನ ಕಣ್ಣುಗಳಿಂದ ಹರಿದ ಅಶ್ರುಜಲದಿಂದ ಭರತನ ಮೈ ನೆನೆದುಹೋಯಿತು. ॥40॥

(ಶ್ಲೋಕ-41)

ಮೂಲಮ್

ರಾಮೋ ಲಕ್ಷ್ಮಣಸೀತಾಭ್ಯಾಂ ವಿಪ್ರೇಭ್ಯೋ ಯೇಽರ್ಹಸತ್ತಮಾಃ ।
ತೇಭ್ಯಃ ಸ್ವಯಂ ನಮಶ್ಚಕ್ರೇ ಪ್ರಜಾಭಿಶ್ಚ ನಮಸ್ಕೃತಃ ॥

ಅನುವಾದ

ಅನಂತರ ಸೀತಾ ಲಕ್ಷ್ಮಣರೊಂದಿಗೆ ಭಗವಾನ್ ಶ್ರೀರಾಮನು ಬ್ರಾಹ್ಮಣರಿಗೆ, ಪೂಜ್ಯ ಗುರುಗಳಿಗೆ, ಹಿರಿಯರಿಗೆ ನಮಸ್ಕರಿಸಿದನು. ಸಮಸ್ತ ಪ್ರಜಾಜನರು ಭಕ್ತಿಯಿಂದ ತಲೆಬಾಗಿ ಭಗವಂತನ ಚರಣಗಳಲ್ಲಿ ವಂದಿಸಿಕೊಂಡರು. ॥41॥

(ಶ್ಲೋಕ-42)

ಮೂಲಮ್

ಧುನ್ವಂತ ಉತ್ತರಾಸಂಗಾನ್ಪತಿಂ ವೀಕ್ಷ್ಯ ಚಿರಾಗತಮ್ ।
ಉತ್ತರಾಃ ಕೋಸಲಾ ಮಾಲ್ಯೈಃ ಕಿರಂತೋ ನನೃತುರ್ಮುದಾ ॥

ಅನುವಾದ

ಆ ಸಮಯದಲ್ಲಿ ಉತ್ತರ ಕೋಸಲದೇಶದಲ್ಲಿ ವಾಸಿಸುವ ಸಮಸ್ತ ಪ್ರಜೆಯು ತನ್ನ ಸ್ವಾಮಿಯಾದ ಭಗವಂತನನ್ನು ಬಹಳ ದಿನಗಳ ಬಳಿಕ ಬಂದಿರುವುದನ್ನು ಕಂಡು ತಮ್ಮ ಉತ್ತರೀಯವನ್ನು ಹಾರಿಸುತ್ತಾ ಶ್ರೀರಾಮನ ಮೇಲೆ ಹೂವುಗಳ ಮಳೆಗರೆಯುತ್ತಾ ಆನಂದದಿಂದ ಕುಣಿದಾಡಿದರು. ॥42॥

(ಶ್ಲೋಕ-43)

ಮೂಲಮ್

ಪಾದುಕೇ ಭರತೋಽಗೃಹ್ಣಾಚ್ಚಾಮರವ್ಯಜನೋತ್ತಮೇ ।
ವಿಭೀಷಣಃ ಸಸುಗ್ರೀವಃ ಶ್ವೇತಚ್ಛತ್ರಂ ಮರುತ್ಸುತಃ ॥

ಅನುವಾದ

ಭರತನು ಭಗವಂತನ ಪಾದುಕೆಗಳನ್ನು ಎತ್ತಿಕೊಂಡನು, ವಿಭೀಷಣನು ಚಾಮರವನ್ನೂ, ಸುಗ್ರೀವನು ಬೀಸಣಿಗೆಯನ್ನೂ, ಹನುಮಂತನು ಬಿಳಿಯ ಕೊಡೆಯನ್ನೂ ಹಿಡಿದುಕೊಂಡರು. ॥43॥

(ಶ್ಲೋಕ-44)

ಮೂಲಮ್

ಧನುರ್ನಿಷಂಗಾಞ್ಛತ್ರುಘ್ನಃ ಸೀತಾ ತೀರ್ಥಕಮಂಡಲುಮ್ ।
ಅಬಿಭ್ರದಂಗದಃ ಖಡ್ಗಂ ಹೈಮಂ ಚರ್ಮರ್ಕ್ಷರಾಣ್ನೃಪ ॥

ಅನುವಾದ

ಪರೀಕ್ಷಿತನೇ! ಶತ್ರುಘ್ನನು ಶ್ರೀರಾಮನ ಧನುಸ್ಸನ್ನೂ, ಬತ್ತಳಿಕೆಯನ್ನೂ, ಸೀತೆಯು ತೀರ್ಥಗಳಿಂದ ತುಂಬಿದ ಕಮಂಡಲುವನ್ನೂ, ಅಂಗದನು ಚಿನ್ನದ ಖಡ್ಗವನ್ನೂ, ಜಾಂಬವಂತರು ಗುರಾಣಿಯನ್ನು ಹಿಡಿದುಕೊಂಡರು. ॥44॥

(ಶ್ಲೋಕ-45)

ಮೂಲಮ್

ಪುಷ್ಪಕಸ್ಥೋಽನ್ವಿತಃ ಸ್ತ್ರೀಭಿಃ ಸ್ತೂಯಮಾನಶ್ಚ ವಂದಿಭಿಃ ।
ವಿರೇಜೇ ಭಗವಾನ್ರಾಜನ್ ಗ್ರಹೈಶ್ಚಂದ್ರ ಇವೋದಿತಃ ॥

ಅನುವಾದ

ಇವರೊಂದಿಗೆ ಭಗವಂತನು ಪುಷ್ಪಕವಿಮಾನದಲ್ಲಿ ವಿರಾಜಮಾನನಾದನು. ಸುತ್ತಲೂ ಶುಭಾಂಗಿಯರು ಯಥಾಸ್ಥಾನದಲ್ಲಿ ಕುಳಿತರು. ವಂದಿ-ಮಾಗಧರು ಸ್ತುತಿಸತೊಡಗಿದರು. ಗ್ರಹಗಳೊಡನೆ ಚಂದ್ರನೇ ಉದಯಿಸಿರುವನೋ ಎಂಬಂತೆ ಶ್ರೀರಾಮ ಚಂದ್ರನು ಪುಷ್ಪಕವಿಮಾನದಲ್ಲಿ ಶೋಭಿಸಿದನು. ॥45॥

(ಶ್ಲೋಕ-46)

ಮೂಲಮ್

ಭ್ರಾತೃಭಿರ್ನಂದಿತಃ ಸೋಽಪಿ ಸೋತ್ಸವಾಂ ಪ್ರಾವಿಶತ್ಪುರೀಮ್ ।
ಪ್ರವಿಶ್ಯ ರಾಜಭವನಂ ಗುರುಪತ್ನೀಃ ಸ್ವಮಾತರಮ್ ॥

(ಶ್ಲೋಕ-46)

ಮೂಲಮ್

ಗುರೂನ್ವಯಸ್ಯಾವರಜಾನ್ ಪೂಜಿತಃ ಪ್ರತ್ಯಪೂಜಯತ್ ।
ವೈದೇಹೀ ಲಕ್ಷ್ಮಣಶ್ಚೈವ ಯಥಾವತ್ ಸಮುಪೇಯತುಃ ॥

ಅನುವಾದ

ಭಗವಂತನು ಹೀಗೆ ಸಹೋದರರಿಂದ ಅಭಿನಂದನೆಯನ್ನು ಸ್ವೀಕರಿಸಿ, ಅವರೊಂದಿಗೆ ಅಯೋಧ್ಯಾಪುರವನ್ನು ಪ್ರವೇಶಿಸಿದನು. ಆಗ ಆ ಪುರವು ಆನಂದೋತ್ಸವದಿಂದ ಪರಿಪೂರ್ಣವಾಗಿ ಹೋಗಿತ್ತು. ಅರಮನೆಯನ್ನು ಪ್ರವೇಶಿಸಿ ಶ್ರೀರಾಮನು ತಾಯಿ ಕೌಸಲ್ಯೆಗೂ, ಇತರ ತಾಯಂದಿರಿಗೂ, ಗುರುಹಿರಿಯರಿಗೂ ವಂದಿಸಿದನು. ಸಮಾನರಾದ ಮಿತ್ರರನ್ನು, ಚಿಕ್ಕವರನ್ನು ಯಥಾಯೋಗ್ಯವಾಗಿ ಸಮ್ಮಾನಿಸಿದನು ಹಾಗೂ ಅವರಿಂದ ಸಮ್ಮಾನವನ್ನು ಸ್ವೀಕರಿಸಿದನು. ಶ್ರೀಸೀತಾದೇವಿಯೂ, ಲಕ್ಷ್ಮಣನೂ ಭಗವಂತನೊಂದಿಗೆ ಎಲ್ಲರೊಡನೆ ಯಥಾಯೋಗ್ಯವಾಗಿ ವ್ಯವಹರಿಸಿದರು. ॥46-47॥

(ಶ್ಲೋಕ-48)

ಮೂಲಮ್

ಪುತ್ರಾನ್ ಸ್ವಮಾತರಸ್ತಾಸ್ತು ಪ್ರಾಣಾಂಸ್ತನ್ವ ಇವೋತ್ಥಿತಾಃ ।
ಆರೋಪ್ಯಾಂಕೇಽಭಿಷಿಂಚಂತ್ಯೋ ಬಾಷ್ಪೌಘೈರ್ವಿಜಹುಃಶುಚಃ ॥

ಅನುವಾದ

ಆಗ ಮೃತದೇಹದಲ್ಲಿ ಪ್ರಾಣಸಂಚಾರವಾದಂತೆ ತಾಯಂದಿರು ಪುತ್ರರ ಆಗಮನದಿಂದ ಹರ್ಷಿತರಾದರು. ಅವರನ್ನು ತನ್ನ ತೊಡೆಯಲ್ಲಿ ಕುಳ್ಳಿರಿಸಿಕೊಂಡು ಅವರನ್ನು ತಮ್ಮ ಕಣ್ಣೀರಿನಿಂದ ಅಭಿಷೇಕಮಾಡಿದರು. ಆ ಸಮಯದಲ್ಲಿ ಅವರ ಶೋಕವೆಲ್ಲ ಅಳಿದುಹೋಯಿತು. ॥48॥

(ಶ್ಲೋಕ-49)

ಮೂಲಮ್

ಜಟಾ ನಿರ್ಮುಚ್ಯ ವಿಧಿವತ್ ಕುಲವೃದ್ಧೈಃ ಸಮಂ ಗುರುಃ ।
ಅಭ್ಯಷಿಂಚದ್ಯಥೈವೇಂದ್ರಂ ಚತುಃಸಿಂಧುಜಲಾದಿಭಿಃ ॥

ಅನುವಾದ

ಇದಾದ ಬಳಿಕ ಗುರುವಸಿಷ್ಠರು ಇತರ ಹಿರಿಯರೊಂದಿಗೆ ವಿಧಿವತ್ತಾಗಿ ಶ್ರೀರಾಮನ ಜಟೆಯನ್ನು ತೆಗೆಸಿ ಬೃಹಸ್ಪತಿಯು ದೇವೇಂದ್ರನಿಗೆ ಪಟ್ಟಾಭಿಷೇಕ ಮಾಡಿದಂತೆಯೇ ನಾಲ್ಕು ಸಮುದ್ರಗಳಿಂದ ಪುಣ್ಯೋದಕವನ್ನು ತರಿಸಿ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಿದರು. ॥49॥

(ಶ್ಲೋಕ-50)

ಮೂಲಮ್

ಏವಂ ಕೃತಶಿರಃಸ್ನಾನಃ ಸುವಾಸಾಃ ಸ್ರಗ್ವ್ಯಲಂಕೃತಃ ।
ಸ್ವಲಂಕೃತೈಃ ಸುವಾಸೋಭಿರ್ಭ್ರಾತೃಭಿರ್ಭಾರ್ಯಯಾ ಬಭೌ ॥

ಅನುವಾದ

ಹೀಗೆ ಮಂಗಳಮಯವಾದ, ಮಂತ್ರಪೂತವಾದ ಶುದ್ಧೋದಕದಿಂದ ತಲೆಗೆ ಸ್ನಾನಮಾಡಿದ ಶ್ರೀರಾಮನು ಸುಂದರವಾದ ವಸಾಭರಣಗಳಿಂದಲೂ, ಗಂಧಮಾಲ್ಯಾದಿಗಳಿಂದಲೂ, ಸಮಲಂಕೃತನಾದನು. ಎಲ್ಲ ಸಹೋದರರೂ ಮತ್ತು ಜಾನಕೀದೇವಿಯೂ ಸುಂದರ ವಸ್ತ್ರಾಲಂಕಾರಗಳನ್ನೂ ಧರಿಸಿದರು. ಅವರೊಂದಿಗೆ ಶ್ರೀರಾಮಚಂದ್ರನು ಅತ್ಯಂತ ಶೋಭಾಯಮಾನವಾಗಿ ವಿರಾಜಿಸಿದನು. ॥50॥

(ಶ್ಲೋಕ-51)

ಮೂಲಮ್

ಅಗ್ರಹೀದಾಸನಂ ಭ್ರಾತ್ರಾ ಪ್ರಣಿಪತ್ಯ ಪ್ರಸಾದಿತಃ ।
ಪ್ರಜಾಃ ಸ್ವಧರ್ಮನಿರತಾ ವರ್ಣಾಶ್ರಮಗುಣಾನ್ವಿತಾಃ ।
ಜುಗೋಪ ಪಿತೃವದ್ರಾಮೋ ಮೇನಿರೇ ಪಿತರಂ ಚ ತಮ್ ॥

ಅನುವಾದ

ಭರತನು ಅವನ ಚರಣಗಳಲ್ಲಿ ವಂದಿಸಿ ಅವನ್ನು ಪ್ರಸನ್ನಗೊಳಿಸಿದನು ಮತ್ತು ಅವನ ಆಗ್ರಹದಿಂದ ಭಗವಾನ್ ಶ್ರೀರಾಮನು ರಾಜ್ಯ ಸಿಂಹಾಸನವನ್ನು ಸ್ವೀಕರಿಸಿದನು. ಬಳಿಕ ಅವನು ತಮ್ಮ- ತಮ್ಮ ಧರ್ಮಗಳಲ್ಲಿ ತತ್ಪರರಾದ ಹಾಗೂ ವರ್ಣಾಶ್ರಮದ ಆಚಾರಗಳನ್ನು ಪಾಲಿಸುವ ಪ್ರಜೆಯನ್ನು ತಂದೆಯಂತೆ ಪಾಲಿಸತೊಡಗಿದನು. ಅವನ ಪ್ರಜೆಯೂ ಆತನನ್ನು ತಂದೆಯಂತೆ ಭಾವಿಸುತ್ತಿದ್ದರು. ॥51॥

(ಶ್ಲೋಕ-52)

ಮೂಲಮ್

ತ್ರೇತಾಯಾಂ ವರ್ತಮಾನಾಯಾಂ ಕಾಲಃ ಕೃತಸಮೋಽಭವತ್ ।
ರಾಮೇ ರಾಜನಿ ಧರ್ಮಜ್ಞೇ ಸರ್ವಭೂತಸುಖಾವಹೇ ॥

ಅನುವಾದ

ಪರೀಕ್ಷಿತನೇ! ಸಮಸ್ತ ಪ್ರಾಣಿಗಳಿಗೆ ಸುಖವನ್ನು ನೀಡುವ ಪರಮ ಧರ್ಮಜ್ಞನಾದ ಭಗವಾನ್ ಶ್ರೀರಾಮನು ರಾಜನಾದಾಗ ತ್ರೇತಾಯುಗವಿದ್ದರೂ ಕೃತಯುಗದಂತೆ ಭಾಸವಾಗುತ್ತಿತ್ತು. ॥52॥

(ಶ್ಲೋಕ-53)

ಮೂಲಮ್

ವನಾನಿ ನದ್ಯೋ ಗಿರಯೋ ವರ್ಷಾಣಿ ದ್ವೀಪಸಿಂಧವಃ ।
ಸರ್ವೇ ಕಾಮದುಘಾ ಆಸನ್ಪ್ರಜಾನಾಂ ಭರತರ್ಷಭ ॥

ಅನುವಾದ

ಭರತರ್ಷಭ! ಆ ಸಮಯದಲ್ಲಿ ವನ, ಪರ್ವತಗಳು, ವರ್ಷ, ದ್ವೀಪ, ನದಿ, ಸಮುದ್ರ ಇವೆಲ್ಲವೂ ಪ್ರಜೆಗಳಿಗೆ ಕಾಮಧೇನುವಿನಂತೆ ಸಮಸ್ತ ಕಾಮನೆಗಳನ್ನೂ ಪೂರ್ಣಗೊಳಿಸುತ್ತಿದ್ದವು. ॥53॥

(ಶ್ಲೋಕ-54)

ಮೂಲಮ್

ನಾಧಿವ್ಯಾಧಿಜರಾಗ್ಲಾನಿದುಃಖಶೋಕಭಯಕ್ಲಮಾಃ ।
ಮೃತ್ಯುಶ್ಚಾನಿಚ್ಛತಾಂ ನಾಸೀದ್ರಾಮೇ ರಾಜನ್ಯಧೋಕ್ಷಜೇ ॥

ಅನುವಾದ

ಇಂದ್ರಿಯಾತೀತ ಭಗವಾನ್ ಶ್ರೀರಾಮನು ರಾಜ್ಯವಾಳುತ್ತಿರುವಾಗ ಯಾರಿಗೂ ಮಾನಸಿಕ ಚಿಂತೆಯಾಗಲೀ, ಶಾರೀರಿಕ ರೋಗವಾಗಲೀ ಇರಲಿಲ್ಲ. ವೃದ್ಧಾಪ್ಯ, ದೌರ್ಬಲ್ಯ, ದುಃಖ, ಶೋಕ, ಭಯ ಹಾಗೂ ಬಳಲಿಕೆ ಹೆಸರಿಗೆ ಮಾತ್ರವೂ ಇರಲಿಲ್ಲ. ಸಾಯಲು ಬಯಸದವರ ಮೃತ್ಯುವೂ ಕೂಡ ಆಗುತ್ತಿರಲಿಲ್ಲ. ॥54॥

(ಶ್ಲೋಕ-55)

ಮೂಲಮ್

ಏಕಪತ್ನೀವ್ರತಧರೋ ರಾಜರ್ಷಿಚರಿತಃ ಶುಚಿಃ ।
ಸ್ವಧರ್ಮಂ ಗೃಹಮೇಧೀಯಂ ಶಿಕ್ಷಯನ್ ಸ್ವಯಮಾಚರತ್ ॥

ಅನುವಾದ

ಭಗವಾನ್ ಶ್ರೀರಾಮನು ಏಕಪತ್ನೀವ್ರತವನ್ನು ಕೈಗೊಂಡಿದ್ದನು. ಅವನ ಚರಿತ್ರವು ಅತ್ಯಂತ ಪವಿತ್ರವಾಗಿದ್ದು ರಾಜರ್ಷಿಗಳಂತೆಯೇ ಇತ್ತು. ಗೃಹಸ್ಥೋಚಿತ ಸ್ವಧರ್ಮದ ಶಿಕ್ಷಣಕ್ಕಾಗಿ ಅವನು ಸ್ವತಃ ಆ ಧರ್ಮವನ್ನು ಆಚರಿಸುತ್ತಿದ್ದನು. ॥55॥

(ಶ್ಲೋಕ-56)

ಮೂಲಮ್

ಪ್ರೇಮ್ಣಾನುವೃತ್ತ್ಯಾ ಶೀಲೇನ ಪ್ರಶ್ರಯಾವನತಾ ಸತೀ ।
ಧಿಯಾ ಹ್ರಿಯಾ ಚ ಭಾವಜ್ಞಾ ಭರ್ತುಃ ಸೀತಾಹರನ್ಮನಃ ॥

ಅನುವಾದ

ಸತೀಶಿರೋಮಣಿಯಾದ ಸೀತಾದೇವಿಯು ತನ್ನ ಪತಿಯ ಹೃದ್ಗತವನ್ನು ಅರಿತಿದ್ದಳು. ಅವಳು ಪ್ರೇಮದಿಂದ, ಸೇವೆಯಿಂದ, ಸಚ್ಛೀಲದಿಂದ, ಅತ್ಯಂತ ವಿನಯದಿಂದ ಹಾಗೂ ತನ್ನ ಬುದ್ಧಿ, ಲಜ್ಜೆ ಮುಂತಾದ ಗುಣಗಳಿಂದ ತನ್ನ ಪತಿ ಭಗವಾನ್ ಶ್ರೀರಾಮನ ಮನಸ್ಸನ್ನು ಗೆದ್ದಿದ್ದಳು. ॥56॥

ಅನುವಾದ (ಸಮಾಪ್ತಿಃ)

ಹತ್ತನೆಯ ಅಧ್ಯಾಯವು ಮುಗಿಯಿತು. ॥10॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ರಾಮಚರಿತೇ ದಶಮೋಽಧ್ಯಾಯಃ॥10॥