[ಎಂಟನೆಯ ಅಧ್ಯಾಯ]
ಭಾಗಸೂಚನಾ
ಸಗರನ ಚರಿತ್ರೆ
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಹರಿತೋ ರೋಹಿತಸುತಶ್ಚಂಪಸ್ತಸ್ಮಾದ್ವಿನಿರ್ಮಿತಾ ।
ಚಂಪಾಪುರೀ ಸುದೇವೋಽತೋ ವಿಜಯೋ ಯಸ್ಯ ಚಾತ್ಮಜಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಹರಿಶ್ಚಂದ್ರನ ಮಗ ರೋಹಿತನಿಗೆ ಹರಿತನೆಂಬ ಮಗನಿದ್ದನು. ಹರಿತನ ಮಗ ಚಂಪ. ಇವನೇ ಚಂಪಾಪುರಿಯನ್ನು ನಿರ್ಮಿಸಿದನು. ಚಂಪನಿಂದ ಸುದೇವ, ಅವನ ಪುತ್ರ ವಿಜಯನಾದನು. ॥1॥
(ಶ್ಲೋಕ-2)
ಮೂಲಮ್
ಭರುಕಸ್ತತ್ಸುತಸ್ತಸ್ಮಾದ್ವ ಕಸ್ತಸ್ಯಾಪಿ ಬಾಹುಕಃ ।
ಸೋಽರಿಭಿರ್ಹೃತಭೂ ರಾಜಾ ಸಭಾರ್ಯೋ ವನಮಾವಿಶತ್ ॥
ಅನುವಾದ
ವಿಜಯನ ಮಗ ಭರುಕ, ಭರುಕನಿಂದ ವೃಕ, ವೃಕನಿಂದ ಬಾಹುಕನು ಹುಟ್ಟಿದನು. ಶತ್ರುಗಳು ಬಾಹುಕನಿಂದ ರಾಜ್ಯವನ್ನು ವಶಪಡಿಸಿಕೊಂಡಾಗ ಅವನು ತನ್ನ ಪತ್ನಿಯೊಂದಿಗೆ ಕಾಡಿಗೆ ಹೊರಟುಹೋದನು.॥2॥
(ಶ್ಲೋಕ-3)
ಮೂಲಮ್
ವೃದ್ಧಂ ತಂ ಪಂಚತಾಂ ಪ್ರಾಪ್ತಂ ಮಹಿಷ್ಯನು ಮರಿಷ್ಯತೀ ।
ಔರ್ವೇಣ ಜಾನತಾಽತ್ಮಾನಂ ಪ್ರಜಾವಂತಂ ನಿವಾರಿತಾ ॥
ಅನುವಾದ
ಕಾಡಿಗೆ ಹೋಗಿ ವೃದ್ಧಾಪ್ಯದಿಂದಾಗಿ ಬಾಹುಕನ ಮೃತ್ಯುವಾದಾಗ ಅವನ ಪತ್ನಿಯೂ ಅವನೊಂದಿಗೆ ಸಹಗಮನಕ್ಕೆ ಸಿದ್ಧಳಾದಳು. ಆದರೆ ಇವಳು ಗರ್ಭಿಣಿ ಎಂದು ಮಹರ್ಷಿ ಔರ್ವನಿಗೆ ತಿಳಿದಿತ್ತು. ಅದರಿಂದಾಗಿ ಅವನು ಆಕೆಯನ್ನು ಸಹಗಮನದಿಂದ ತಡೆದನು.॥3॥
(ಶ್ಲೋಕ-4)
ಮೂಲಮ್
ಆಜ್ಞಾಯಾಸ್ಯೈ ಸಪತ್ನೀಭಿರ್ಗರೋ ದತ್ತೋಽಂಧಸಾ ಸಹ ।
ಸಹ ತೇನೈವ ಸಂಜಾತಃ ಸಗರಾಖ್ಯೋ ಮಹಾಯಶಾಃ ॥
ಅನುವಾದ
ಅವಳ ಸವತಿಯರಿಗೆ ಈ ಮಾತು ತಿಳಿದಾಗ ಅವರು ಅವಳಿಗೆ ಊಟದೊಂದಿಗೆ ಗರ(ವಿಷ)ವನ್ನು ತಿನ್ನಿಸಿದರು. ಆದರೆ ಆ ವಿಷವು ಗರ್ಭದ ಮೇಲೆ ಯಾವ ಪ್ರಭಾವವೂ ಬೀಳದೆ ಆ ವಿಷದೊಂದಿಗೆ ಬಾಲಕನ ಜನ್ಮವಾಯಿತು. ಗರ(ವಿಷ)ದೊಂದಿಗೆ ಹುಟ್ಟಿದ ಕಾರಣದಿಂದ ಅವನು ‘ಸಗರ’ನೆಂದು ವಿಖ್ಯಾತನಾದನು. ಸಗರನು ಮಹಾಯಶೋವಂತ ರಾಜನಾದನು.॥4॥
(ಶ್ಲೋಕ-5)
ಮೂಲಮ್
ಸಗರಃ ಚಕ್ರವರ್ತ್ಯಾಸೀತ್ಸಾಗರೋ ಯತ್ಸುತೈಃ ಕೃತಃ ।
ಯಸ್ತಾಲಜಂಘಾನ್ಯವನಾಂಛಕಾನ್ ಹೈಹಯಬರ್ಬರಾನ್ ॥
(ಶ್ಲೋಕ-6)
ಮೂಲಮ್
ನಾವಧೀದ್ಗುರುವಾಕ್ಯೇನ ಚಕ್ರೇ ವಿಕೃತವೇಷಿಣಃ ।
ಮುಂಡಾಂ ಛ್ಮಶ್ರುಧರಾನ್ಕಾಂಶ್ಚಿನ್ಮುಕ್ತ ಕೇಶಾರ್ಧಮುಂಡಿತಾನ್ ॥
ಅನುವಾದ
ಸಗರನು ಚಕ್ರವರ್ತಿ, ಸಾಮ್ರಾಟನಾಗಿದ್ದನು. ಅವನ ಪುತ್ರರೇ ನೆಲವನ್ನು ಅಗೆದು ಸಮುದ್ರವನ್ನು ನಿರ್ಮಿಸಿದ್ದರು. ಸಗರನು ತನ್ನ ಗುರುವಾದ ಔರ್ವನ ಆಜ್ಞೆಯನ್ನು ಗೌರವಿಸಿ, ತಾಲಜಂಘ, ಯವನ, ಶಕ, ಹೈಹಯ, ಬರ್ಬರ ಮುಂತಾದ ಜಾತಿಯವರನ್ನು ವಧಿಸಲಿಲ್ಲ. ಅವರ ರೂಪವನ್ನು ವಿರೂಪಗೊಳಿಸಿದನು. ಅವರಲ್ಲಿ ಕೆಲವರು ತಲೆಯನ್ನು ಬೋಳಿಸಿದರು. ಕೆಲವರು ತಲೆಬೋಳಿಸಿ, ಗಡ್ಡ-ಮೀಸೆ ಹಾಗೆ ಬಿಟ್ಟರು. ಕೆಲವರು ಕೂದಲನ್ನು ಹಾಗೇ ಬಿಟ್ಟರು. ಕೆಲವರು ಅರ್ಧತಲೆ ಬೋಳಿಸಿದ್ದರು. ॥5-6॥
(ಶ್ಲೋಕ-7)
ಮೂಲಮ್
ಅನಂತರ್ವಾಸಸಃ ಕಾಂಶ್ಚಿದಬಹಿರ್ವಾಸಸೋಪರಾನ್ ।
ಸೋಶ್ವಮೇಧೈರಯಜತ ಸರ್ವವೇದಸುರಾತ್ಮಕಮ್ ॥
ಅನುವಾದ
ಆ ಸಮಯದಲ್ಲಿ ಮಹಾರಾಣಿ ಸುಮತಿಯ ಗರ್ಭದಿಂದ ಹುಟ್ಟಿದ ಸಗರಪುತ್ರರು ತಮ್ಮ ತಂದೆಯ ಆಜ್ಞೆಯಂತೆ ಕುದುರೆಗಾಗಿ ಇಡೀ ಪೃಥಿವಿಯನ್ನು ಜಾಲಾಡಿದರು. ಅವರಿಗೆ ಕುದುರೆಯು ಎಲ್ಲಿಯೂ ಸಿಗದಿದ್ದಾಗ ಗರ್ವಿಷ್ಠರಾಗಿದ್ದ ಅವರು ಎಲ್ಲ ಕಡೆಯಲ್ಲಿ ಭೂಮಿಯನ್ನು ಅಗೆದುಹಾಕಿದರು.॥9॥
(ಶ್ಲೋಕ-8)
ಮೂಲಮ್
ಔರ್ವೋಪದಿಷ್ಟಯೋಗೇನ ಹರಿಮಾತ್ಮಾನಮೀಶ್ವರಮ್ ।
ತಸ್ಯೋತ್ಸೃಷ್ಟಂ ಪಶುಂ ಯಜ್ಞೇ ಜಹಾರಾಶ್ವಂ ಪುರಂದರಃ ॥
ಅನುವಾದ
ಕೆಲವು ಜನರಿಗೆ ಸಗರನು ಬಟ್ಟೆಯನ್ನು ಉಡದೇ ಕೇವಲ ಹೊದೆಯಲು ಅನುಮತಿ ನೀಡಿದನು. ಕೆಲವರಿಗೆ ಬಟ್ಟೆಯನ್ನು ಹೊದೆದುಕೊಳ್ಳದೆ ಕೇವಲ ಕೌಪೀನ ಮಾತ್ರ ಉಡಲು ಹೇಳಿದನು. ಇದಾದ ಬಳಿಕ ಸಗರ ಚಕ್ರವರ್ತಿಯು ಔರ್ವಋಷಿಯ ಉಪದೇಶದಂತೆ ಅಶ್ವಮೇಧ ಯಜ್ಞದ ಮೂಲಕ ಸಂಪೂರ್ಣ ವೇದ ಹಾಗೂ ದೇವತಾಮಯ, ಆತ್ಮಸ್ವರೂಪ, ಸರ್ವಶಕ್ತಿವಂತ ಭಗವಂತನನ್ನು ಆರಾಧಿಸಿದನು. ಅವನ ಯಜ್ಞದಲ್ಲಿ ಬಿಟ್ಟಿದ್ದ ಕುದುರೆಯನ್ನು ಇಂದ್ರನು ಕದ್ದೊಯ್ದನು. ॥7-8॥
(ಶ್ಲೋಕ-9)
ಮೂಲಮ್
ಸುಮತ್ಯಾಸ್ತನಯಾ ದೃಪ್ತಾಃ ಪಿತುರಾದೇಶಕಾರಿಣಃ ।
ಹಯಮನ್ವೇಷಮಾಣಾಸ್ತೇ ಸಮಂತಾನ್ನ್ಯಖನನ್ಮಹೀಮ್ ॥
ಅನುವಾದ
ಆ ಸಮಯದಲ್ಲಿ ಮಹಾರಾಣಿ ಸುಮತಿಯ ಗರ್ಭದಿಂದ ಹುಟ್ಟಿದ ಸಗರಪುತ್ರರು ತಮ್ಮ ತಂದೆಯ ಆಜ್ಞೆಯಂತೆ ಕುದುರೆಗಾಗಿ ಇಡೀ ಪೃಥಿವಿಯನ್ನು ಜಾಲಾಡಿದರು. ಅವರಿಗೆ ಕುದುರೆಯು ಎಲ್ಲಿಯೂ ಸಿಗದಿದ್ದಾಗ ಗರ್ವಿಷ್ಠರಾಗಿದ್ದ ಅವರು ಎಲ್ಲ ಕಡೆಯಲ್ಲಿ ಭೂಮಿಯನ್ನು ಅಗೆದು ಹಾಕಿದರು. ॥9॥
(ಶ್ಲೋಕ-10)
ಮೂಲಮ್
ಪ್ರಾಗುದೀಚ್ಯಾಂ ದಿಶಿ ಹಯಂ ದದೃಶುಃ ಕಪಿಲಾಂತಿಕೇ ।
ಏಷ ವಾಜಿಹರಶ್ಚೌರ ಆಸ್ತೇ ಮೀಲಿತಲೋಚನಃ ॥
(ಶ್ಲೋಕ-11)
ಮೂಲಮ್
ಹನ್ಯತಾಂ ಹನ್ಯತಾಂ ಪಾಪ ಇತಿ ಷಷ್ಟಿಸಹಸ್ರಿಣಃ ।
ಉದಾಯುಧಾ ಅಭಿಯಯುರುನ್ಮಿಮೇಷ ತದಾ ಮುನಿಃ ॥
ಅನುವಾದ
ಅಗೆಯುತ್ತಾ-ಅಗೆಯುತ್ತಾ ಅವರಿಗೆ ಈಶಾನ್ಯದಿಕ್ಕಿನಲ್ಲಿ ತಪಸ್ಸು ಮಾಡುತ್ತಿದ್ದ ಕಪಿಲರ ಬಳಿಯಲ್ಲಿ ತಮ್ಮ ಯಜ್ಞಾಶ್ವವು ಕಂಡುಬಂತು. ಕುದುರೆಯನ್ನು ನೋಡುತ್ತಲೇ ಅರವತ್ತುಸಾವಿರ ರಾಜಕುಮಾರರು ಶಸ್ತ್ರಗಳನ್ನೆತ್ತಿಕೊಂಡು ಇವನೇ ನಮ್ಮ ಕುದುರೆಯನ್ನು ಕದ್ದಿರುವ ಕಳ್ಳನೆಂದು ಹೇಳುತ್ತಾ ಅವರತ್ತ ಓಡಿದರು. ನೋಡಿರಲ್ಲ, ಇವನು ಕಣ್ಣುಮುಚ್ಚಿಕೊಂಡಿರುವನು. ಇವನು ಪಾಪಿಯಾಗಿದ್ದಾನೆ. ಇವನನ್ನು ಕೊಂದುಬಿಡಿ, ಕೊಂದುಬಿಡಿ ಎಂದು ಕೂಗಿಕೊಂಡರು. ಆಗಲೇ ಕಪಿಲಮುನಿಯು ಕಣ್ಣುಬಿಟ್ಟನು. ॥10-11॥
(ಶ್ಲೋಕ-12)
ಮೂಲಮ್
ಸ್ವಶರೀರಾಗ್ನಿನಾ ತಾವನ್ಮಹೇಂದ್ರಹೃತಚೇತಸಃ ।
ಮಹದ್ವ್ಯತಿಕ್ರಮಹತಾ ಭಸ್ಮಸಾದಭವನ್ ಕ್ಷಣಾತ್ ॥
ಅನುವಾದ
ಇಂದ್ರನು ರಾಜಕುಮಾರರ ಬುದ್ಧಿಯನ್ನು ಅಪಹರಿಸಿದ್ದನು. ಇದರಿಂದ ಅವರು ಕಪಿಲ ಮುನಿಯಂತಹ ಮಹಾಪುರುಷರನ್ನು ತಿರಸ್ಕರಿಸಿದ್ದರು. ಈ ತಿರಸ್ಕಾರದಿಂದಾಗಿ ಅವರ ಶರೀರಗಳಲ್ಲಿ ಬೆಂಕಿ ಉರಿಯ ತೊಡಗಿ ಕ್ಷಣಾರ್ಧದಲ್ಲಿ ಅವರೆಲ್ಲರೂ ಸುಟ್ಟು ಬೂದಿಯಾಗಿ ಬಿಟ್ಟರು. ॥12॥
(ಶ್ಲೋಕ-13)
ಮೂಲಮ್
ನ ಸಾಧುವಾದೋ ಮುನಿಕೋಪಭರ್ಜಿತಾ
ನೃಪೇಂದ್ರಪುತ್ರಾ ಇತಿ ಸತ್ತ್ವಧಾಮನಿ ।
ಕಥಂ ತಮೋ ರೋಷಮಯಂ ವಿಭಾವ್ಯತೇ
ಜಗತ್ಪವಿತ್ರಾತ್ಮನಿ ಖೇ ರಜೋ ಭುವಃ ॥
ಅನುವಾದ
ಪರೀಕ್ಷಿತನೇ! ಸಗರ ಪುತ್ರರು ಕಪಿಲಮುನಿಯ ಕ್ರೋಧಾಗ್ನಿಯಿಂದ ಸುಟ್ಟುಹೋದರು ಎಂದು ಹೇಳುವುದು ಉಚಿತವಾಗಲಾರದು. ಕಪಿಲರಾದರೋ ಶುದ್ಧ ಸತ್ತ್ವಗುಣಕ್ಕೆ ಪರಮಾಶ್ರಯರಾಗಿದ್ದರು. ಅವರ ಶರೀರವು ಪ್ರಪಂಚವನ್ನೇ ಪವಿತ್ರಗೊಳಿಸುವಂತಹುದು. ಅಂತಹವರಲ್ಲಿ ತಮೋಭೂತವಾದ ಕ್ರೋಧವಿರುವುದೆಂದು ಭಾವಿಸಲು ಹೇಗೆ ತಾನೇ ಸಾಧ್ಯವಾಗುತ್ತದೆ? ಭೂಮಿಯಲ್ಲಿರುವ ಧೂಳಿನೊಡನೆ ಆಕಾಶದ ಸಂಬಂಧವೇನಾದರೂ ಇರುತ್ತದೆಯೇ? ॥13॥
(ಶ್ಲೋಕ-14)
ಮೂಲಮ್
ಯಸ್ಯೇರಿತಾ ಸಾಂಖ್ಯಮಯೀ ದೃಢೇಹ ನೌ-
ರ್ಯಯಾ ಮುಮುಕ್ಷುಸ್ತರತೇ ದುರತ್ಯಯಮ್ ।
ಭವಾರ್ಣವಂ ಮೃತ್ಯುಪಥಂ ವಿಪಶ್ಚಿತಃ
ಪರಾತ್ಮಭೂತಸ್ಯ ಕಥಂ ಪೃಥಙ್ಮತಿಃ ॥
ಅನುವಾದ
ಈ ಸಂಸಾರ ಸಾಗರವು ಮೃತ್ಯುವಿನ ಮಾರ್ಗವಾಗಿದೆ. ಇದನ್ನು ದಾಟಿ ಹೋಗುವುದು ಅತ್ಯಂತ ಕಷ್ಟವಾಗಿದೆ. ಆದರೆ ಕಪಿಲಮುನಿಗಳು ಈ ಜಗತ್ತಿನಲ್ಲಿ ಸಾಂಖ್ಯಶಾಸ್ತ್ರದ ಒಂದು ದೃಢವಾದ ನೌಕೆಯನ್ನು ಸಿದ್ಧಮಾಡಿಕೊಟ್ಟಿರುವರು. ಮುಕ್ತಿಯ ಇಚ್ಛೆಯುಳ್ಳವರು ಯಾರೇ ಆಗಲಿ ಅದರ ಮೂಲಕ ಈ ಸಂಸಾರ ಸಮುದ್ರದಿಂದ ದಾಟಿ ಹೋಗಬಲ್ಲರು. ಅವರು ಕೇವಲ ಪರಮಜ್ಞಾನಿಗಳು ಮಾತ್ರವಾಗಿರದೆ ಸ್ವಯಂ ಪರಮಾತ್ಮನಾಗಿರುವನು. ಅವರಲ್ಲಿ ಈ ಶತ್ರು-ಮಿತ್ರವೆಂಬ ಭೇದಬುದ್ಧಿಯು ಹೇಗೆ ತಾನೇ ಇರಬಲ್ಲದು? ॥14॥
(ಶ್ಲೋಕ-15)
ಮೂಲಮ್
ಯೋಽಸಮಂಜಸ ಇತ್ಯುಕ್ತಃ ಸ ಕೇಶಿನ್ಯಾ ನೃಪಾತ್ಮಜಃ ।
ತಸ್ಯ ಪುತ್ರೋಽಂಶುಮಾನ್ನಾಮ ಪಿತಾಮಹಹಿತೇ ರತಃ ॥
ಅನುವಾದ
ಸಗರನಿಗೆ ಕೇಶಿನೀ ಎಂಬ ಇನ್ನೋರ್ವ ಪತ್ನಿಯಿದ್ದಳು. ಅವಳ ಗರ್ಭದಲ್ಲಿ ಅಸಮಂಜಸನೆಂಬ ಪುತ್ರನು ಹುಟ್ಟಿದ್ದನು. ಅಸಮಂಜಸನ ಪುತ್ರನ ಹೆಸರು ಅಂಶುಮಾನ್ ಎಂದಿತ್ತು. ಅವನು ತನ್ನ ಅಜ್ಜನಾದ ಸಗರನ ಆದೇಶಗಳನ್ನು ಪಾಲಿಸುತ್ತಾ, ಅವನ ಸೇವೆಯಲ್ಲೇ ತೊಡಗಿರುತ್ತಿದ್ದನು.॥15॥
(ಶ್ಲೋಕ-16)
ಮೂಲಮ್
ಅಸಮಂಜಸ ಆತ್ಮಾನಂ ದರ್ಶಯನ್ನಸಮಂಜಸಮ್ ।
ಜಾತಿಸ್ಮರಃ ಪುರಾ ಸಂಗಾದ್ಯೋಗೀ ಯೋಗಾದ್ವಿಚಾಲಿತಃ ॥
(ಶ್ಲೋಕ-17)
ಮೂಲಮ್
ಆಚರನ್ಗರ್ಹಿತಂ ಲೋಕೇ ಜ್ಞಾತೀನಾಂ ಕರ್ಮ ವಿಪ್ರಿಯಮ್ ।
ಸರಯ್ವಾಂ ಕ್ರೀಡತೋ ಬಾಲಾನ್ಪ್ರಾಸ್ಯದುದ್ವೇಜಯಂಜನಮ್ ॥
ಅನುವಾದ
ಅಸಮಂಜಸನು ಹಿಂದಿನ ಜನ್ಮದಲ್ಲಿ ಯೋಗಿಯಾಗಿದ್ದನು. ಸಂಗದಿಂದಾಗಿ ಅವನು ಯೋಗದಿಂದ ವಿಚಲಿತನಾಗಿದ್ದನು. ಆದರೆ ಈಗಲೂ ಅವನಿಗೆ ಪೂರ್ವಜನ್ಮದ ಸ್ಮರಣೆ ಹಾಗೆಯೇ ಇತ್ತು. ಅದಕ್ಕಾಗಿ ಅವನು ಬಂಧು-ಬಾಂಧವರಿಗೆ ಮೆಚ್ಚಿಗೆಯಾಗದ ಕೆಲಸಗಳನ್ನೇ ಮಾಡುತ್ತಿದ್ದನು. ಅವನು ಕೆಲವೊಮ್ಮೆ ಅತ್ಯಂತ ನಿಂದಿತ ಕರ್ಮಗಳನ್ನು ಮಾಡಿಬಿಡುತ್ತಿದ್ದನು ಮತ್ತು ತನ್ನನ್ನು ಹುಚ್ಚನಂತೆ ತೋರಿಸಿಕೊಳ್ಳುತ್ತಿದ್ದನು. ಆಡುತ್ತಿದ್ದ ಬಾಲಕರನ್ನು ಎತ್ತಿಕೊಂಡು ಸರಯೂನದಿಗೆ ಎಸೆದು ಬಿಡುತ್ತಿದ್ದನು. ಇದರಿಂದ ಪ್ರಜೆಗಳು ಬಹಳವಾಗಿ ಉದ್ವೇಗಗೊಂಡರು. ॥16-17॥
(ಶ್ಲೋಕ-18)
ಮೂಲಮ್
ಏವಂವೃತ್ತಃ ಪರಿತ್ಯಕ್ತಃ ಪಿತ್ರಾ ಸ್ನೇಹಮಪೋಹ್ಯ ವೈ ।
ಯೋಗೈಶ್ವರ್ಯೇಣ ಬಾಲಾನ್ಸ್ತಾಂದರ್ಶಯಿತ್ವಾ ತತೋ ಯಯೌ ॥
ಅನುವಾದ
ಕೊನೆಗೆ ಅವನ ಉಪಟಳವನ್ನು ಸಹಿಸಲಾರದ ಅವನ ತಂದೆಯು ಪುತ್ರಸ್ನೇಹವನ್ನು ತೊರೆದು ಅವನನ್ನು ಕಾಡಿಗಟ್ಟಿಬಿಟ್ಟನು. ಬಳಿಕ ಅಸಮಂಜಸನು ತನ್ನ ಯೋಗಬಲದಿಂದ ಸರಯೂನದಿಗೆ ಎಸೆದ ಎಲ್ಲ ಬಾಲಕರನ್ನೂ ಜೀವಂತಗೊಳಿಸಿ ತಂದೆಗೆ ತೋರಿಸಿದನು. ಮತ್ತೆ ಕಾಡಿಗೆ ಹೊರಟುಹೋದನು.॥18॥
(ಶ್ಲೋಕ-19)
ಮೂಲಮ್
ಅಯೋಧ್ಯಾವಾಸಿನಃ ಸರ್ವೇ ಬಾಲಕಾನ್ಪುನರಾಗತಾನ್ ।
ದೃಷ್ಟ್ವಾ ವಿಸಿಸ್ಮಿರೇ ರಾಜನ್ ರಾಜಾ ಚಾಪ್ಯನ್ವತಪ್ಯತ ॥
ಅನುವಾದ
ಅಯೋಧ್ಯೆಯ ನಾಗರಿಕರಿಗೆ ತಮ್ಮ ಮಕ್ಕಳು ಜೀವಂತರಾಗಿ ಪುನಃ ಬಂದಿರುವುದನ್ನು ಕಂಡು ಪರಮಾಶ್ಚರ್ಯವಾಯಿತು. ಅಂತಹ ಯೋಗಿಯಾದ ಮಗನನ್ನು ಕಳೆದುಕೊಂಡುದಕ್ಕಾಗಿ ಸಗರನಿಗೂ ಪಶ್ಚಾತ್ತಾಪ ಉಂಟಾಯಿತು.॥19॥
(ಶ್ಲೋಕ-20)
ಮೂಲಮ್
ಅಂಶುಮಾಂಶ್ಚೋದಿತೋ ರಾಜ್ಞಾ ತುರಂಗಾನ್ವೇಷಣೇ ಯಯೌ ।
ಪಿತೃವ್ಯಖಾತಾನುಪಥಂ ಭಸ್ಮಾಂತಿ ದದೃಶೇ ಹಯಮ್ ॥
ಅನುವಾದ
ಇದಾದ ಬಳಿಕ ಸಗರನ ಆಜ್ಞೆಯಂತೆ ಅಂಶುಮಂತನು ಕುದುರೆಯನ್ನು ಹುಡುಕಲು ಹೊರಟನು. ಅವನು ತನ್ನ ಚಿಕ್ಕಪ್ಪಂದಿರು ಭೂಮಿಯನ್ನು ಅಗೆದು ನಿರ್ಮಿಸಿದ ಸಾಗರದ ತಟದಲ್ಲೇ ಮುಂದರಿಯುತ್ತಾ ಚಿಕ್ಕಪ್ಪಂದಿರ ಭಸ್ಮರಾಶಿಯನ್ನೂ, ಯಜ್ಞದ ಕುದುರೆಯನ್ನೂ ನೋಡಿದನು.॥20॥
(ಶ್ಲೋಕ-21)
ಮೂಲಮ್
ತತ್ರಾಸೀನಂ ಮುನಿಂ ವೀಕ್ಷ್ಯ ಕಪಿಲಾಖ್ಯಮಧೋಕ್ಷಜಮ್ ।
ಅಸ್ತೌತ್ಸಮಾಹಿತಮನಾಃ ಪ್ರಾಂಜಲಿಃ ಪ್ರಣತೋ ಮಹಾನ್ ॥
ಅನುವಾದ
ಅಲ್ಲೇ ಭಗವಂತನ ಅವತಾರನಾದ ಕಪಿಲಮುನಿಯು ಕುಳಿತಿದ್ದನು. ಅವರನ್ನು ನೋಡಿ ಉದಾರಹೃದಯಿಯಾದ ಅಂಶುಮಂತನು ಅವನ ಚರಣಗಳಲ್ಲಿ ವಂದಿಸಿ, ಕೈಜೋಡಿಸಿಕೊಂಡು ಏಕಾಗ್ರತೆಯಿಂದ ಸ್ತುತಿಸತೊಡಗಿದನು.॥21॥
(ಶ್ಲೋಕ-22)
ಮೂಲಮ್ (ವಾಚನಮ್)
ಅಂಶುಮಾನುವಾಚ
ಮೂಲಮ್
ನ ಪಶ್ಯತಿ ತ್ವಾಂ ಪರಮಾತ್ಮನೋಽಜನೋ
ನ ಬುಧ್ಯತೇಽದ್ಯಾಪಿ ಸಮಾಧಿಯುಕ್ತಿಭಿಃ ।
ಕುತೋಽಪರೇ ತಸ್ಯ ಮನಃಶರೀರಧೀ-
ವಿಸರ್ಗಸೃಷ್ಟಾ ವಯಮಪ್ರಕಾಶಾಃ ॥
ಅನುವಾದ
ಅಂಶುಮಂತನು ಹೇಳಿದನು ಭಗವಾನ್ ಕಪಿಲನೇ! ನೀನು ಅಜನ್ಮನಾದ ಬ್ರಹ್ಮನಿಗಿಂತಲೂ ಶ್ರೇಷ್ಠನಾಗಿರುವೆ. ಅದಕ್ಕಾಗಿಯೇ ಅವರು ನಿನ್ನನ್ನು ಪ್ರತ್ಯಕ್ಷವಾಗಿ ಕಾಣಲಾರರು. ಪ್ರತ್ಯಕ್ಷವಾಗಿ ನೋಡುವುದಿರಲಿ, ಸಮಾಧಿಯೋಗದಿಂದಲೂ, ಯೋಗವೇ ಮುಂತಾದ ಉಪಾಯಗಳಿಂದಲೂ ನಿನ್ನನ್ನು ಇಂದಿನವರೆಗೆ ತಿಳಿಯಲೂ ಆಗಲಿಲ್ಲ. ನಾವಾದರೋ ಅವರ ಮನ, ಶರೀರ, ಬುದ್ಧಿಯಿಂದ ಉಂಟಾಗುವ ಸೃಷ್ಟಿಯ ಮೂಲಕ ಹುಟ್ಟಿದ ಅಜ್ಞಾನೀ ಜೀವರಾಗಿದ್ದೇವೆ. ನಾವು ಹೇಗೆ ತಾನೇ ನಿನ್ನ ಸ್ವರೂಪವನ್ನು ತಿಳಿಯಬಲ್ಲೆವು? ॥22॥
(ಶ್ಲೋಕ-23)
ಮೂಲಮ್
ಯೇ ದೇಹಭಾಜಸ್ತ್ರಿಗುಣಪ್ರಧಾನಾ
ಗುಣಾನ್ವಿಪಶ್ಯಂತ್ಯುತ ವಾ ತಮಶ್ಚ ।
ಯನ್ಮಾಯಯಾ ಮೋಹಿತಚೇತಸಸ್ತೇ
ವಿದುಃ ಸ್ವಸಂಸ್ಥಂ ನ ಬಹಿಃಪ್ರಕಾಶಾಃ ॥
ಅನುವಾದ
ಈ ಪ್ರಪಂಚದಲ್ಲಿರುವ ಶರೀರಧಾರಿಗಳೆಲ್ಲರೂ ಸತ್ತ್ವ ಗುಣ, ರಜೋಗುಣ ಅಥವಾ ತಮೋಗುಣ ಪ್ರಧಾನರಾಗಿದ್ದಾರೆ. ಅವರು ಜಾಗೃತ್ ಮತ್ತು ಸ್ವಪ್ನಾವಸ್ಥೆಯಲ್ಲಿ ಕೇವಲ ಗುಣಮಯ ಪದಾರ್ಥಗಳನ್ನು, ವಿಷಯಗಳನ್ನು ಹಾಗೂ ಸುಷುಪ್ತಿಯಲ್ಲಿ ತಮೋಮಯ ಅಜ್ಞಾನವನ್ನೇ ನೋಡುತ್ತಾರೆ. ನಿನ್ನ ಮಾಯೆಯಿಂದ ಮೋಹಿತರಾಗಿರುವುದೇ ಇದಕ್ಕೆ ಕಾರಣವಾಗಿದೆ. ಅವರು ಬಹಿರ್ಮುಖರಾದ್ದರಿಂದ ಹೊರಗಿನ ವಸ್ತುಗಳನ್ನು ಮಾತ್ರ ನೋಡುತ್ತಾರೆ ; ಆದರೆ ತಮ್ಮ ಹೃದಯದಲ್ಲಿ ನೆಲೆಸಿರುವ ನಿನ್ನನ್ನು ನೋಡಲಾರರು. ॥23॥
(ಶ್ಲೋಕ-24)
ಮೂಲಮ್
ತಂ ತ್ವಾಮಹಂ ಜ್ಞಾನಘನಂ ಸ್ವಭಾವ-
ಪ್ರಧ್ವಸ್ತಮಾಯಾಗುಣಭೇದಮೋಹೈಃ ।
ಸನಂದನಾದ್ಯೈರ್ಮುನಿಭಿರ್ವಿಭಾವ್ಯಂ
ಕಥಂ ಹಿ ಮೂಢಃ ಪರಿಭಾವಯಾಮಿ ॥
ಅನುವಾದ
ನೀನು ಜ್ಞಾನಘನನೂ, ಏಕರಸನೂ ಆಗಿರುವೆ. ಮಾಯೆಯಿಂದ ಉಂಟಾಗುವ ಭೇದಭಾವವನ್ನೂ ಮತ್ತು ಅದರಿಂದ ಉಂಟಾಗುವ ಅಜ್ಞಾನವನ್ನೂ ನಾಶಪಡಿಸಿಕೊಂಡಿರುವ ಮುನಿಗಳು ಆತ್ಮಸ್ವರೂಪದ ಅನುಭವದಿಂದ ನಿನ್ನನ್ನು ನಿರಂತರವಾಗಿ ಧ್ಯಾನಿಸುತ್ತಿರುವರು. ಮಾಯೆಯ ಗುಣಗಳಿಗೆ ವಶನಾಗಿ ಮೂಢನಾದ ನಾನು ನಿನ್ನನ್ನು ಹೇಗೆ ತಾನೇ ಧ್ಯಾನಿಸಬಲ್ಲೆನು? ॥24॥
(ಶ್ಲೋಕ-25)
ಮೂಲಮ್
ಪ್ರಶಾಂತಮಾಯಾಗುಣಕರ್ಮಲಿಂಗ-
ಮನಾಮರೂಪಂ ಸದಸದ್ವಿಮುಕ್ತಮ್ ।
ಜ್ಞಾನೋಪದೇಶಾಯ ಗೃಹೀತದೇಹಂ
ನಮಾಮಹೇ ತ್ವಾಂ ಪುರುಷಂ ಪುರಾಣಮ್ ॥
ಅನುವಾದ
ಮಾಯೆಯ ಗುಣಗಳು, ಗುಣಗಳಿಂದಾಗುವ ಕರ್ಮ ಹಾಗೂ ಕರ್ಮಗಳ ಸಂಸ್ಕಾರಗಳು ಇವುಗಳಿಂದುಂಟಾದ ಲಿಂಗ ಶರೀರವು ನಿನ್ನಲ್ಲಿ ಇಲ್ಲವೇ ಇಲ್ಲ. ನಿನಗೆ ನಾಮವಾಗಲೀ, ರೂಪವಾಗಲೀ ಇಲ್ಲ. ನಿನ್ನಲ್ಲಿ ಕಾರ್ಯವಾಗಲೀ, ಕಾರಣವಾಗಲೀ ಇಲ್ಲ. ನೀನು ಸನಾತನ ಆತ್ಮನಾಗಿರುವೆ. ಜ್ಞಾನೋಪದೇಶಕ್ಕಾಗಿಯೇ ನೀನು ಈ ಶರೀರವನ್ನು ಧರಿಸಿಕೊಂಡಿರುವೆ. ಅಂತಹ ಪುರಾಣಪುರುಷನಾದ ನಿನಗೆ ನಾನು ನಮಸ್ಕರಿಸುತ್ತೇನೆ. ॥25॥
(ಶ್ಲೋಕ-26)
ಮೂಲಮ್
ತ್ವನ್ಮಾಯಾರಚಿತೇ ಲೋಕೇ ವಸ್ತುಬುದ್ಧ್ಯಾ ಗೃಹಾದಿಷು ।
ಭ್ರಮಂತಿ ಕಾಮಲೋಭೇರ್ಷ್ಯಾಮೋಹವಿಭ್ರಾಂತಚೇತಸಃ ॥
ಅನುವಾದ
ಪ್ರಭೋ! ನಿನ್ನ ಮಾಯೆಯಿಂದ ರಚಿತವಾದ ಈ ಲೋಕದಲ್ಲಿ ಕಾಮ, ಕ್ರೋಧ, ಲೋಭ, ಈರ್ಷೆ, ಮೋಹಾದಿಗಳಿಂದ ಬುದ್ಧಿಗೆಟ್ಟಿರುವ ಜನರು ಮಡದಿ, ಮಕ್ಕಳು, ಮನೆ-ಮಠ ಇವುಗಳನ್ನು ಶಾಶ್ವತವೆಂದು ಭ್ರಮಿಸಿ ಸಂಸಾರದಲ್ಲಿ ಅಲೆಯುತ್ತಾ ಇರುತ್ತಾರೆ. ॥26॥
(ಶ್ಲೋಕ-27)
ಮೂಲಮ್
ಅದ್ಯ ನಃ ಸರ್ವಭೂತಾತ್ಮನ್ಕಾಮಕರ್ಮೇಂದ್ರಿಯಾಶಯಃ ।
ಮೋಹಪಾಶೋ ದೃಢಶ್ಛಿನ್ನೋ ಭಗವಂಸ್ತವ ದರ್ಶನಾತ್ ॥
ಅನುವಾದ
ಸಮಸ್ತ ಪ್ರಾಣಿಗಳಿಗೆ ಆತ್ಮನಾಗಿರುವ ಪ್ರಭೋ! ಇಂದು ನಿನ್ನ ದಿವ್ಯದರ್ಶನದಿಂದ ನನ್ನಲ್ಲಿದ್ದ ಕಾಮ-ಕರ್ಮೇಂದ್ರಿಯಗಳಿಗೆ ಆಶ್ರಯಭೂತನಾಗಿರುವ ದೃಢವಾದ ಮೋಹಪಾಶವು ಕತ್ತರಿಸಲ್ಪಟ್ಟಿತು. ॥27॥
(ಶ್ಲೋಕ-28)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಥಂ ಗೀತಾನುಭಾವಸ್ತಂ ಭಗವಾನ್ಕಪಿಲೋ ಮುನಿಃ ।
ಅಂಶುಮಂತಮುವಾಚೇದಮನುಗೃಹ್ಯ ಧಿಯಾ ನೃಪ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಕಪಿಲಮುನಿಯನ್ನು ಅಂಶುಮಂತನು ಹೀಗೆ ಕೀರ್ತಿಸಿದಾಗ ಅವನು ಮನಸ್ಸಿನಲ್ಲೇ ಅಂಶುಮಂತನನ್ನು ಆಗ್ರಹಿಸುತ್ತಾ ಇಂತೆಂದನು. ॥28॥
(ಶ್ಲೋಕ-29)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಅಶ್ವೋಽಯಂ ನೀಯತಾಂ ವತ್ಸ ಪಿತಾಮಹಪಶುಸ್ತವ ।
ಇಮೇ ಚ ಪಿತರೋ ದಗ್ಧಾ ಗಂಗಾಂಭೋಽರ್ಹಂತಿ ನೇತರತ್ ॥
ಅನುವಾದ
ಶ್ರೀಭಗವಂತನು ಹೇಳಿದನು — ವತ್ಸ! ಈ ಕುದುರೆಯು ನಿನ್ನ ತಾತನ ಯಜ್ಞಪಶುವಾಗಿದೆ. ಇದನ್ನು ನೀನು ತೆಗೆದು ಕೊಂಡು ಹೋಗು. ಸುಟ್ಟುಹೋಗಿರುವ ನಿನ್ನ ಚಿಕ್ಕಪ್ಪಂದಿರ ಉದ್ಧಾರವು ಕೇವಲ ಗಂಗಾಜಲದಿಂದ ಆದೀತು. ಇದಲ್ಲದೆ ಬೇರೆ ಯಾವ ಉಪಾಯವೂ ಇಲ್ಲ. ॥29॥
(ಶ್ಲೋಕ-30)
ಮೂಲಮ್
ತಂ ಪರಿಕ್ರಮ್ಯ ಶಿರಸಾ ಪ್ರಸಾದ್ಯ ಹಯಮಾನಯತ್ ।
ಸಗರಸ್ತೇನ ಪಶುನಾ ಕ್ರತುಶೇಷಂ ಸಮಾಪಯತ್ ॥
ಅನುವಾದ
ಇದನ್ನು ಕೇಳಿ ಅಂಶುಮಂತನು ಪ್ರದಕ್ಷಿಣೆಮಾಡಿ ಮುನಿಯನ್ನು ನಮಸ್ಕರಿಸಿ, ಅವನನ್ನು ಪ್ರಸನ್ನಗೊಳಿಸಿ ಕುದುರೆಯನ್ನು ರಾಜಧಾನಿಗೆ ತಂದನು. ಸಗರನು ಆ ಯಜ್ಞಪಶುವಿನಿಂದ ಉಳಿದ ಯಜ್ಞಕ್ರಿಯೆಗಳನ್ನು ಮುಗಿಸಿದನು. ॥30॥
(ಶ್ಲೋಕ-31)
ಮೂಲಮ್
ರಾಜ್ಯಮಂಶುಮತಿ ನ್ಯಸ್ಯ ನಿಃಸ್ಪೃಹೋ ಮುಕ್ತಬಂಧನಃ ।
ಔರ್ವೋಪದಿಷ್ಟಮಾರ್ಗೇಣ ಲೇಭೇ ಗತಿಮನುತ್ತಮಾಮ್ ॥
ಅನುವಾದ
ಬಳಿಕ ಸಗರರಾಜನು ಅಂಶುಮಂತನಿಗೆ ರಾಜ್ಯಭಾರವನ್ನು ವಹಿಸಿಕೊಟ್ಟು ತಾನು ವಿಷಯಗಳಿಂದ ನಿಃಸ್ಪೃಹನಾಗಿ, ಬಂಧನ ಮುಕ್ತನಾದನು. ಅವನು ಮಹರ್ಷಿ ಔರ್ವರು ಅರುಹಿದ ಮಾರ್ಗದಂತೆ ಪರಮಪದವನ್ನು ಪಡೆದುಕೊಂಡನು. ॥31॥
ಅನುವಾದ (ಸಮಾಪ್ತಿಃ)
ಎಂಟನೆಯ ಅಧ್ಯಾಯವು ಮುಗಿಯಿತು. ॥8॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ಸಗರೋಪಾಖ್ಯಾನೇ ಅಷ್ಟಮೋಽಧ್ಯಾಯಃ ॥8॥