೦೭

[ಏಳನೆಯ ಅಧ್ಯಾಯ]

ಭಾಗಸೂಚನಾ

ತ್ರಿಶಂಕುರಾಜನ ಮತ್ತು ಹರಿಶ್ಚಂದ್ರನ ಕಥೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಮಾಂಧಾತುಃ ಪುತ್ರಪ್ರವರೋ ಯೋಽಂಬರೀಷಃ ಪ್ರಕೀರ್ತಿತಃ ।
ಪಿತಾಮಹೇನ ಪ್ರವೃತೋ ಯೌವನಾಶ್ವಶ್ಚ ತತ್ಸುತಃ ।
ಹಾರೀತಸ್ತಸ್ಯ ಪುತ್ರೋಽಭೂನ್ಮಾಂಧಾತೃಪ್ರವರಾ ಇಮೇ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಮಾಂಧಾತನ ಪುತ್ರರಲ್ಲಿ ಅಂಬರೀಷನು ಎಲ್ಲರಿಂದ ಶ್ರೇಷ್ಠನಾಗಿದ್ದನು ಎಂಬುದನ್ನು ನಾನು ವರ್ಣಿಸಿರುವೆನು. ಅವನ ಅಜ್ಜನಾದ ಯುವನಾಶ್ವನು ಅವನನ್ನು ಪುತ್ರರೂಪದಿಂದ ಸ್ವೀಕರಿಸಿದ್ದನು. ಅವನಿಗೆ ಯೌವನಾಶ್ವನೆಂಬ ಮಗ ಹುಟ್ಟಿದನು. ಯೌವನಾಶ್ವನಿಂದ ಹಾರೀತನಾದನು. ಮಾಂಧಾತನ ವಂಶದಲ್ಲಿ ಈ ಮೂವರೂ ಅವಾಂತರ ಗೋತ್ರದ ಪ್ರವರ್ತಕರಾದರು. ॥1॥

(ಶ್ಲೋಕ-2)

ಮೂಲಮ್

ನರ್ಮದಾ ಭ್ರಾತೃಭಿರ್ದತ್ತಾ ಪುರುಕುತ್ಸಾಯ ಯೋರಗೈಃ ।
ತಯಾ ರಸಾತಲಂ ನೀತೋ ಭುಜಗೇಂದ್ರಪ್ರಯುಕ್ತಯಾ ॥

ಅನುವಾದ

ಮಾಂಧಾತನ ಹಿರಿಯ ಮಗ ಪುರುಕುತ್ಸನಿಗೆ ರಸಾತಲವಾಸಿಗಳಾದ ನಾಗರು ತಮ್ಮ ಸಹೋದರಿ ನರ್ಮದೆಯನ್ನು ವಿವಾಹಮಾಡಿ ಕೊಟ್ಟಿದ್ದರು. ನಾಗರಾಜ ವಾಸುಕಿಯ ಆಜ್ಞೆಯಂತೆ ನರ್ಮದೆಯು ತನ್ನ ಪತಿಯನ್ನು ರಸಾತಲಕ್ಕೆ ಕೊಂಡುಹೋದಳು.॥2॥

(ಶ್ಲೋಕ-3)

ಮೂಲಮ್

ಗಂಧರ್ವಾನವಧೀತ್ತತ್ರ ವಧ್ಯಾನ್ವೈ ವಿಷ್ಣುಶಕ್ತಿಧೃಕ್ ।
ನಾಗಾಲ್ಲಬ್ಧವರಃ ಸರ್ಪಾದಭಯಂ ಸ್ಮರತಾಮಿದಮ್ ॥

ಅನುವಾದ

ಅಲ್ಲಿ ಭಗವಂತನ ಶಕ್ತಿಯಿಂದ ಸಂಪನ್ನನಾಗಿ ಪುರು ಕುತ್ಸನು ವಧಾರ್ಹರಾದ ಗಂಧರ್ವರನ್ನು ಸಂಹರಿಸಿಬಿಟ್ಟನು. ಇದರಿಂದ ಸಂತೋಷಗೊಂಡ ನಾಗರಾಜನು ಪುರುಕುತ್ಸನಿಗೆ ‘ಈ ಪ್ರಸಂಗವನ್ನು ಸ್ಮರಿಸುವವನು ಸರ್ಪಗಳಿಂದ ನಿರ್ಭಯನಾಗುವನು’ ಎಂಬ ವರವನ್ನು ಕೊಟ್ಟನು. ॥3॥

(ಶ್ಲೋಕ-4)

ಮೂಲಮ್

ತ್ರಸದ್ದಸ್ಯುಃ ಪೌರುಕುತ್ಸೋ ಯೋಽನರಣ್ಯಸ್ಯ ದೇಹಕೃತ್ ।
ಹರ್ಯಶ್ವಸ್ತತ್ಸುತಸ್ತಸ್ಮಾದರುಣೋಽಥ ತ್ರಿಬಂಧನಃ ॥

ಅನುವಾದ

ರಾಜಾ ಪುರುಕುತ್ಸನಿಗೆ ತ್ರಸದ್ದಸ್ಯು ಎಂಬ ಪುತ್ರನಿದ್ದನು. ಅವನಿಗೆ ಅನರಣ್ಯನೆಂಬ ಪುತ್ರನಾದನು. ಅನರಣ್ಯನಿಂದ ಹರ್ಯಶ್ವ, ಅವನಿಂದ ಅರುಣ, ಅರುಣನ ಪುತ್ರ ತ್ರಿಬಂಧನನಾದನು. ॥4॥

(ಶ್ಲೋಕ-5)

ಮೂಲಮ್

ತಸ್ಯ ಸತ್ಯವ್ರತಃ ಪುತ್ರಸ್ತ್ರಿಶಂಕುರಿತಿ ವಿಶ್ರುತಃ ।
ಪ್ರಾಪ್ತಶ್ಚಾಂಡಾಲತಾಂ ಶಾಪಾದ್ಗುರೋಃ ಕೌಶಿಕತೇಜಸಾ ॥

(ಶ್ಲೋಕ-6)

ಮೂಲಮ್

ಸಶರೀರೋ ಗತಃ ಸ್ವರ್ಗಮದ್ಯಾಪಿ ದಿವಿ ದೃಶ್ಯತೇ ।
ಪಾತಿತೋಽವಾಕ್ಶಿರಾ ದೇವೈಸ್ತೇನೈವ ಸ್ತಂಭಿತೋ ಬಲಾತ್ ॥

ಅನುವಾದ

ತ್ರಿಬಂಧನನ ಪುತ್ರ ಸತ್ಯವ್ರತನಾದನು. ಈ ಸತ್ಯವ್ರತನೇ ತ್ರಿಶಂಕು ಎಂಬ ಹೆಸರಿನಿಂದ ವಿಖ್ಯಾತನಾದನು. ತ್ರಿಶಂಕುವು ತಂದೆ ಮತ್ತು ಗುರುವಿನ ಶಾಪದಿಂದ ಚಾಂಡಾಲನಾಗಿದ್ದನು. ಆದರೂ ವಿಶ್ವಾಮಿತ್ರನ ಪ್ರಭಾವದಿಂದಲೇ ಸಶರೀರಿಯಾಗಿ ಸ್ವರ್ಗಕ್ಕೆ ಹೋದನು. ದೇವತೆಗಳು ಅವನನ್ನು ಅಲ್ಲಿಂದ ತಳ್ಳಿಬಿಟ್ಟರು. ಅವನು ತಲೆಕೆಳಗಾಗಿ ಬೀಳುತ್ತಿದ್ದಾಗ ವಿಶ್ವಾಮಿತ್ರನು ತನ್ನ ತಪೋಬಲದಿಂದ ಅವನನ್ನು ಆಕಾಶದಲ್ಲೇ ಸ್ಥಿರಗೊಳಿಸಿದನು. ಅವನು ಈಗಲೂ ಆಕಾಶದಲ್ಲೇ ನೇತಾಡುತ್ತಿದ್ದಾನೆ. ॥5-6॥

(ಶ್ಲೋಕ-7)

ಮೂಲಮ್

ತ್ರೈಶಂಕವೋ ಹರಿಶ್ಚಂದ್ರೋ ವಿಶ್ವಾಮಿತ್ರವಸಿಷ್ಠಯೋಃ ।
ಯನ್ನಿಮಿತ್ತಮಭೂದ್ಯುದ್ಧಂ ಪಕ್ಷಿಣೋರ್ಬಹುವಾರ್ಷಿಕಮ್ ॥

ಅನುವಾದ

ತ್ರಿಶಂಕುವಿನ ಪುತ್ರನು ಹರಿಶ್ಚಂದ್ರನಾಗಿದ್ದನು. ಅವನಿಗಾಗಿ ವಿಶ್ವಾಮಿತ್ರರು ಮತ್ತು ವಸಿಷ್ಠರು ಪರಸ್ಪರ ಶಾಪಕೊಟ್ಟುಕೊಂಡು ಪಕ್ಷಿಗಳಾಗಿ ಅನೇಕ ವರ್ಷಗಳವರೆಗೆ ಕಾದಾಡುತ್ತಲೇ ಇದ್ದರು. ॥7॥

(ಶ್ಲೋಕ-8)

ಮೂಲಮ್

ಸೋಽನಪತ್ಯೋ ವಿಷಣ್ಣಾತ್ಮಾ ನಾರದಸ್ಯೋಪದೇಶತಃ ।
ವರುಣಂ ಶರಣಂ ಯಾತಃ ಪುತ್ರೋ ಮೇ ಜಾಯತಾಂ ಪ್ರಭೋ ॥

ಅನುವಾದ

ಹರಿಶ್ಚಂದ್ರನಿಗೆ ಸಂತಾನವಿರಲಿಲ್ಲ. ಇದರಿಂದ ಅವನು ಬಹಳ ದುಃಖಿತನಾಗಿದ್ದನು. ನಾರದರ ಉಪದೇಶದಂತೆ ಅವನು ವರುಣದೇವರಿಗೆ ಶರಣಾಗಿ ಪ್ರಾರ್ಥಿಸಿದನು ಪ್ರಭೋ! ನನಗೆ ಪುತ್ರಸಂತಾನ ಪ್ರಾಪ್ತವಾಗಲೀ. ॥8॥

(ಶ್ಲೋಕ-9)

ಮೂಲಮ್

ಯದಿ ವೀರೋ ಮಹಾರಾಜ ತೇನೈವ ತ್ವಾಂ ಯಜೇ ಇತಿ ।
ತಥೇತಿ ವರುಣೇನಾಸ್ಯ ಪುತ್ರೋ ಜಾತಸ್ತು ರೋಹಿತಃ ॥

ಅನುವಾದ

ನಿನ್ನ ಅನುಗ್ರಹದಿಂದ ನನಗೆ ವೀರಪುತ್ರನು ಹುಟ್ಟಿದರೆ, ಅವನನ್ನೇ ಯಜ್ಞಪಶುವನ್ನಾಗಿ ನಿನ್ನ ಪ್ರೀತ್ಯರ್ಥವಾಗಿ ಯಜ್ಞ ಮಾಡುವೆನು. ವರುಣನೆಂದನು ‘ಹಾಗೆಯೇ ಆಗಲಿ.’ ಆಗ ವರುಣನ ಕೃಪೆಯಿಂದ ಹರಿಶ್ಚಂದ್ರನಿಗೆ ರೋಹಿತನೆಂಬ ಮಗನು ಹುಟ್ಟಿದನು. ॥9॥

(ಶ್ಲೋಕ-10)

ಮೂಲಮ್

ಜಾತಃ ಸುತೋ ಹ್ಯನೇನಾಂಗ ಮಾಂ ಯಜಸ್ವೇತಿ ಸೋಽಬ್ರವೀತ್ ।
ಯದಾ ಪಶುರ್ನಿರ್ದಶಃ ಸ್ಯಾದಥ ಮೇಧ್ಯೋ ಭವೇದಿತಿ ॥

ಅನುವಾದ

ಪುತ್ರನು ಹುಟ್ಟುತ್ತಲೇ ವರುಣನು ಬಂದು ಹೇಳಿದನು ಹರಿಶ್ಚಂದ್ರಾ! ನಿನಗೆ ಪುತ್ರ ಸಂತಾನವಾಗಿದೆ. ಈಗ ಇವನ ಮೂಲಕ ಯಜ್ಞವನ್ನು ಮಾಡು. ಹರಿಶ್ಚಂದ್ರನೆಂದನು ಈಗ ನಿನ್ನ ಈ ಯಜ್ಞಪಶುವು (ರೋಹಿತನು) ಹತ್ತು ದಿವಸಗಳು ತುಂಬಿದಾಗ ಇವನು ಯಜ್ಞಕ್ಕೆ ಯೋಗ್ಯನಾಗುತ್ತಾನೆ. ॥10॥

(ಶ್ಲೋಕ-11)

ಮೂಲಮ್

ನಿರ್ದಶೇ ಚ ಸ ಆಗತ್ಯ ಯಜಸ್ವೇತ್ಯಾಹ ಸೋಽಬ್ರವೀತ್ ।
ದಂತಾಃ ಪಶೋರ್ಯಜ್ಜಾಯೇರನ್ನಥ ಮೇಧ್ಯೋ ಭವೇದಿತಿ ॥

ಅನುವಾದ

ಹತ್ತು ದಿವಸಗಳು ಕಳೆದಾಗ ವರುಣನು ಪುನಃ ಬಂದು ‘ಈಗ ನನ್ನ ಯಜ್ಞವನ್ನು ಮಾಡು’ ಎಂದು ಹೇಳಿದನು. ಆಗ ಹರಿಶ್ಚಂದ್ರನು ನಿನ್ನ ಯಜ್ಞಪಶುವಿಗೆ ಹಲ್ಲುಗಳು ಹುಟ್ಟಿದಾಗ ಅವನು ಯಜ್ಞಕ್ಕೆ ಯೋಗ್ಯನಾಗುತ್ತಾನೆ’ ಎಂದನು. ॥11॥

(ಶ್ಲೋಕ-12)

ಮೂಲಮ್

ಜಾತಾ ದಂತಾ ಯಜಸ್ವೇತಿ ಸ ಪ್ರತ್ಯಾಹಾಥ ಸೋಽಬ್ರವೀತ್ ।
ಯದಾ ಪತಂತ್ಯಸ್ಯ ದಂತಾ ಅಥ ಮೇಧ್ಯೋ ಭವೇದಿತಿ ॥

ಅನುವಾದ

ರೋಹಿತನಿಗೆ ಹಲ್ಲುಹುಟ್ಟಿದಾಗ ವರುಣನೆಂದನು ರಾಜಾ! ಈಗ ಇವನಿಗೆ ಹಲ್ಲುಗಳು ಹುಟ್ಟಿರುವುವು. ಈಗ ಯಜ್ಞಮಾಡು. ಹರಿಶ್ಚಂದ್ರನೆಂದ ಇವನ ಹಾಲು ಹಲ್ಲುಗಳು ಬಿದ್ದುಹೋದಾಗ ಇವನು ಯಜ್ಞಕ್ಕೆ ಯೋಗ್ಯನಾಗುವನು. ॥12॥

(ಶ್ಲೋಕ-13)

ಮೂಲಮ್

ಪಶೋರ್ನಿಪತಿತಾ ದಂತಾ ಯಜಸ್ವೇತ್ಯಾಹ ಸೋಽಬ್ರವೀತ್ ।
ಯದಾ ಪಶೋಃ ಪುನರ್ದಂತಾ ಜಾಯಂತೇಽಥ ಪಶುಃ ಶುಚಿಃ ॥

ಅನುವಾದ

ಹಾಲುಹಲ್ಲುಗಳು ಬಿದ್ದುಹೋದಾಗ ವರುಣನು ಬಂದು ಈಗ ಹಾಲುಹಲ್ಲುಗಳು ಬಿದ್ದು ಹೋಗಿವೆ, ನನ್ನ ಯಜ್ಞವನ್ನು ಮಾಡು ಎಂದು ಹೇಳಿದನು. ಹರಿಶ್ಚಂದ್ರನೆಂದ ಇವನಿಗೆ ಎರಡನೆಯ ಬಾರಿ ಹಲ್ಲುಗಳು ಬಂದಾಗ ಈ ಪಶುವು ಯಜ್ಞಕ್ಕೆ ಯೋಗ್ಯನಾದಾನು. ॥13॥

(ಶ್ಲೋಕ-14)

ಮೂಲಮ್

ಪುನರ್ಜಾತಾ ಯಜಸ್ವೇತಿ ಸ ಪ್ರತ್ಯಾಹಾಥ ಸೋಬ್ರವೀತ್ ।
ಸಾನ್ನಾಹಿಕೋ ಯದಾ ರಾಜನ್ರಾಜನ್ಯೋಽಥ ಪಶುಃ ಶುಚಿಃ ॥

ಅನುವಾದ

ಎರಡನೆಯ ಸಲ ಹಲ್ಲುಗಳು ಹುಟ್ಟಿದಾಗ ವರುಣನು ಬಂದು ‘ಈಗ ನನ್ನ ಯಜ್ಞವನ್ನು ಮಾಡು’ ಎಂದು ಹೇಳಿದನು. ಹರಿಶ್ಚಂದ್ರನು ವರುಣದೇವನೇ! ಕ್ಷತ್ರಿಯಪಶುವು ಕವಚ ಧರಿಸಲು ಯೋಗ್ಯನಾದಾಗ ಯಜ್ಞಕ್ಕೆ ಯೋಗ್ಯನಾಗುತ್ತಾನಲ್ಲ! ॥14॥

(ಶ್ಲೋಕ-15)

ಮೂಲಮ್

ಇತಿ ಪುತ್ರಾನುರಾಗೇಣ ಸ್ನೇಹಯಂತ್ರಿತಚೇತಸಾ ।
ಕಾಲಂ ವಂಚಯತಾ ತಂ ತಮುಕ್ತೋ ದೇವಸ್ತಮೈಕ್ಷತ ॥

ಅನುವಾದ

ಪರೀಕ್ಷಿತನೇ! ಹೀಗೆ ಹರಿಶ್ಚಂದ್ರ ರಾಜನು ಪುತ್ರ ವ್ಯಾಮೋಹದಿಂದಾಗಿ ಅನಿಯಂತ್ರಿತವಾದ ಬುದ್ಧಿಯಿಂದ ಇಲ್ಲ ಸಲ್ಲದ ಕುಂಟುನೆಪಗಳನ್ನು ಹೇಳುತ್ತಾ ಕಾಲವನ್ನು ಕಳೆಯುತ್ತಿದ್ದನು. ವರುಣನೂ ಅವನು ಹೇಳಿದಂತೆ ಕಾಲವನ್ನು ಎದುರು ನೋಡುತ್ತಿದ್ದನು. ॥15॥

(ಶ್ಲೋಕ-16)

ಮೂಲಮ್

ರೋಹಿತಸ್ತದಭಿಜ್ಞಾಯ ಪಿತುಃ ಕರ್ಮ ಚಿಕೀರ್ಷಿತಮ್ ।
ಪ್ರಾಣಪ್ರೇಪ್ಸುರ್ಧನುಷ್ಪಾಣಿರರಣ್ಯಂ ಪ್ರತ್ಯಪದ್ಯತ ॥

ಅನುವಾದ

ತಂದೆಯವರು ನನ್ನನ್ನು ಯಜ್ಞಪಶುವನ್ನಾಗಿಸಿ ಯಜ್ಞ ಮಾಡಲು ಬಯಸುವರೆಂಬುದನ್ನು ತಿಳಿದ ರೋಹಿತನು ಆತ್ಮರಕ್ಷಣೆಗಾಗಿ ಕೈಯಲ್ಲಿ ಧನುರ್ಬಾಣಗಳನ್ನು ಧರಿಸಿಕೊಂಡು ಅರಣ್ಯಕ್ಕೆ ಹೊರಟುಹೋದನು. ॥16॥

(ಶ್ಲೋಕ-17)

ಮೂಲಮ್

ಪಿತರಂ ವರುಣಗ್ರಸ್ತಂ ಶ್ರುತ್ವಾ ಜಾತಮಹೋದರಮ್ ।
ರೋಹಿತೋ ಗ್ರಾಮಮೇಯಾಯ ತಮಿಂದ್ರಃ ಪ್ರತ್ಯಷೇಧತ ॥

ಅನುವಾದ

ಕೆಲವು ದಿನಗಳ ಬಳಿಕ ವರುಣದೇವನು ಕುಪಿತನಾಗಿ ನನ್ನ ತಂದೆಯನ್ನು ಆಕ್ರಮಿಸಿರುವನು. ಅದರಿಂದ ಪಿತನು ಜಲೋದರ ರೋಗದಿಂದ ಪೀಡಿತನಾಗಿದ್ದಾನೆ ಎಂದು ತಿಳಿದ ರೋಹಿತನು ತನ್ನ ನಗರಕ್ಕೆ ಹೊರಟನು. ಆದರೆ ಇಂದ್ರನು ಬಂದು ಅವನನ್ನು ತಡೆದುಬಿಟ್ಟನು. ॥17॥

(ಶ್ಲೋಕ-18)

ಮೂಲಮ್

ಭೂಮೇಃ ಪರ್ಯಟನಂ ಪುಣ್ಯಂ ತೀರ್ಥಕ್ಷೇತ್ರನಿಷೇವಣೈಃ ।
ರೋಹಿತಾಯಾದಿಶಚ್ಛಕ್ರಃ ಸೋಽಪ್ಯರಣ್ಯೇಽವಸತ್ಸಮಾಮ್ ॥

ಅನುವಾದ

ಇಂದ್ರನು ಹೇಳಿದನು ಮಗೂ ರೋಹಿತ! ಯಜ್ಞಪಶುವಾಗಿ ಸಾಯುವುದಕ್ಕಿಂತ ಪವಿತ್ರ ತೀರ್ಥ-ಕ್ಷೇತ್ರಗಳನ್ನು ಸೇವಿಸುತ್ತಾ ಪೃಥಿವಿಯಲ್ಲಿ ಸಂಚರಿಸುವುದು ಶ್ರೇಷ್ಠವಾಗಿದೆ. ಇಂದ್ರನ ಮಾತನ್ನು ಮನ್ನಿಸಿ ಅದನ್ನು ಒಂದು ವರ್ಷಕಾಲ ಮತ್ತೆ ವನದಲ್ಲೇ ಇದ್ದನು.॥18॥

(ಶ್ಲೋಕ-19)

ಮೂಲಮ್

ಏವಂ ದ್ವಿತೀಯೇ ತೃತೀಯೇ ಚತುರ್ಥೇ ಪಂಚಮೇ ತಥಾ ।
ಅಭ್ಯೇತ್ಯಾಭ್ಯೇತ್ಯ ಸ್ಥವಿರೋ ವಿಪ್ರೋ ಭೂತ್ವಾಽಽಹ ವೃತ್ರಹಾ ॥

ಅನುವಾದ

ಹೀಗೆಯೇ ಎರಡನೆಯ, ಮೂರನೆಯ, ನಾಲ್ಕನೆಯ, ಐದನೆಯ ವರ್ಷಗಳಲ್ಲಿಯೂ ರೋಹಿತನು ತಂದೆಯ ಬಳಿಗೆ ಹೋಗುವ ವಿಚಾರ ಮಾಡಿದನು. ಆದರೆ ಪ್ರತಿಸಲವೂ ವೃದ್ಧಬ್ರಾಹ್ಮಣನಾಗಿ ಇಂದ್ರನು ಬಂದು ಅವನನ್ನು ತಡೆಯುತ್ತಿದ್ದನು.॥19॥

(ಶ್ಲೋಕ-20)

ಮೂಲಮ್

ಷಷ್ಠಂ ಸಂವತ್ಸರಂ ತತ್ರ ಚರಿತ್ವಾ ರೋಹಿತಃ ಪುರೀಮ್ ।
ಉಪವ್ರಜನ್ನಜೀಗರ್ತಾದಕ್ರೀಣಾನ್ಮಧ್ಯಮಂ ಸುತಮ್ ॥

(ಶ್ಲೋಕ-21)

ಮೂಲಮ್

ಶುನಃಶೇಪಂ ಪಶುಂ ಪಿತ್ರೇ ಪ್ರದಾಯ ಸಮವಂದತ ।
ತತಃ ಪುರುಷಮೇಧೇನ ಹರಿಶ್ಚಂದ್ರೋ ಮಹಾಯಶಾಃ ॥

(ಶ್ಲೋಕ-22)

ಮೂಲಮ್

ಮುಕ್ತೋದರೋಽಯಜದ್ದೇವಾನ್ವರುಣಾದೀನ್ಮಹತ್ಕಥಃ ।
ವಿಶ್ವಾಮಿತ್ರೋಽಭವತ್ತಸ್ಮಿನ್ಹೋತಾ ಚಾಧ್ವರ್ಯುರಾತ್ಮವಾನ್ ॥

(ಶ್ಲೋಕ-23)

ಮೂಲಮ್

ಜಮದಗ್ನಿರಭೂದ್ಬ್ರಹ್ಮಾ ವಸಿಷ್ಠೋಽಯಾಸ್ಯಸಾಮಗಃ ।
ತಸ್ಮೈ ತುಷ್ಟೋ ದದಾವಿಂದ್ರಃ ಶಾತಕೌಂಭಮಯಂ ರಥಮ್ ॥

ಅನುವಾದ

ಹೀಗೆ ಆರು ವರ್ಷಗಳ ಕಾಲ ರೋಹಿತನು ಕಾಡಿನಲ್ಲೇ ಇದ್ದನು. ಏಳನೆಯ ವರ್ಷದಲ್ಲಿ ಅವನು ತನ್ನ ನಗರಕ್ಕೆ ಹೊರಟಾಗ ಅಜೀಗರ್ತನಿಂದ ಅವನ ನಡುವಣ ಪುತ್ರ ಶುನಃಶೇಪನನ್ನು ಹಣಕೊಟ್ಟು ಪಡೆದು ಅವನನ್ನು ಯಜ್ಞಪಶುವನ್ನಾಗಿಸಲು ತನ್ನ ತಂದೆಗೆ ಒಪ್ಪಿಸಿ, ಅವನ ಚರಣಗಳಿಗೆ ವಂದಿಸಿಕೊಂಡನು. ಪರಮ ಯಶೋವಂತನೂ, ಶ್ರೇಷ್ಠ ಚರಿತ್ರವುಳ್ಳವನೂ ಆದ ಹರಿಶ್ಚಂದ್ರನು ಮಹೋದರ ರೋಗದಿಂದ ಬಿಡುಗಡೆಹೊಂದಲು ಪುರುಷ ಮೇಧದ ಮೂಲಕ ವರುಣನೇ ಮೊದಲಾದ ದೇವತೆಗಳ ಯಜ್ಞವನ್ನು ಮಾಡಿದನು. ಆ ಯಜ್ಞದಲ್ಲಿ ವಿಶ್ವಾಮಿತ್ರರು ಹೋತೃಗಳಾಗಿದ್ದರು. ಪರಮ ಸಂಯಮಿ ಜಮದಗ್ನಿಯು ಅಧ್ವರ್ಯು ಆಗಿದ್ದನು. ವಸಿಷ್ಠರು ಬ್ರಹ್ಮನ ಕೆಲಸ ನಿರ್ವಹಿಸಿದರು. ಅಯಾಸ್ಯ ಮುನಿಯು ಸಾಮಗಾನ ಮಾಡುವ ಉದ್ಗಾತೃವಾದನು. ಆ ಸಮಯದಲ್ಲಿ ಇಂದ್ರನು ಪ್ರಸನ್ನನಾಗಿ ಹರಿಶ್ಚಂದ್ರನಿಗೆ ಒಂದು ಚಿನ್ನದ ರಥವನ್ನು ಕೊಟ್ಟಿದ್ದನು.॥20-23॥

(ಶ್ಲೋಕ-24)

ಮೂಲಮ್

ಶುನಃಶೇಪಸ್ಯ ಮಾಹಾತ್ಮ್ಯಮುಪರಿಷ್ಟಾತ್ಪ್ರಚಕ್ಷ್ಯತೇ ।
ಸತ್ಯಸಾರಾಂ ಧೃತಿಂ ದೃಷ್ಟ್ವಾ ಸಭಾರ್ಯಸ್ಯ ಚ ಭೂಪತೇಃ ॥

(ಶ್ಲೋಕ-25)

ಮೂಲಮ್

ವಿಶ್ವಾಮಿತ್ರೋ ಭೃಶಂ ಪ್ರೀತೋ ದದಾವವಿಹತಾಂ ಗತಿಮ್ ।
ಮನಃ ಪೃಥಿವ್ಯಾಂ ತಾಮದ್ಭಿಸ್ತೇಜಸಾಪೋಽನಿಲೇನ ತತ್ ॥

(ಶ್ಲೋಕ-26)

ಮೂಲಮ್

ಖೇ ವಾಯುಂ ಧಾರಯಂಸ್ತಚ್ಚ ಭೂತಾದೌ ತಂ ಮಹಾತ್ಮನಿ ।
ತಸ್ಮಿನ್ ಜ್ಞಾನಕಲಾಂ ಧ್ಯಾತ್ವಾ ತಯಾಜ್ಞಾನಂ ವಿನಿರ್ದಹನ್ ॥

(ಶ್ಲೋಕ-27)

ಮೂಲಮ್

ಹಿತ್ವಾ ತಾಂ ಸ್ವೇನ ಭಾವೇನ ನಿರ್ವಾಣಸುಖಸಂವಿದಾ ।
ಅನಿರ್ದೇಶ್ಯಾಪ್ರತರ್ಕ್ಯೇಣ ತಸ್ಥೌ ವಿಧ್ವಸ್ತ ಬಂಧನಃ ॥

ಅನುವಾದ

ಪರೀಕ್ಷಿತನೇ! ಮುಂದೆ ನಾನು ನಿನಗೆ ಶುನಃಶೇಪನ ಮಹಾತ್ಮ್ಯೆಯನ್ನು ವರ್ಣಿಸುವೆನು. ಹರಿಶ್ಚಂದ್ರನು ತನ್ನ ಪತ್ನಿಯೊಡನೆ ಸತ್ಯನಿಷ್ಠೆಯಲ್ಲಿ ದೃಢವಾಗಿ ಇರುವುದನ್ನು ಕಂಡು ವಿಶ್ವಾಮಿತ್ರರು ಬಹಳ ಸಂತೋಷಗೊಂಡು ಅವನಿಗೆ ಎಂದೂ ನಾಶವಾಗದಿರುವ ಜ್ಞಾನವನ್ನು ಉಪದೇಶಿಸಿದರು. ಆ ಜ್ಞಾನದಿಂದಾಗಿ ಹರಿಶ್ಚಂದ್ರನು ತನ್ನ ಮನವನ್ನು ಪೃಥಿವಿಯಲ್ಲೂ, ಪೃಥಿವಿಯನ್ನು ಜಲದಲ್ಲೂ, ಜಲವನ್ನು ತೇಜದಲ್ಲೂ, ತೇಜವನ್ನು ವಾಯುವಿನಲ್ಲೂ, ವಾಯುವನ್ನು ಆಕಾಶದಲ್ಲಿಯೂ ನೆಲೆಗೊಳಿಸಿ, ಆಕಾಶವನ್ನು ಅಹಂಕಾರದಲ್ಲಿ ಲೀನಗೊಳಿಸಿದನು. ಮತ್ತೆ ಅಹಂಕಾರವನ್ನು ಮಹತ್ತತ್ತ್ವದಲ್ಲಿ ಲೀನಗೊಳಿಸಿ ಅದರಲ್ಲಿ ಜ್ಞಾನ-ಕಲೆಯ ಧ್ಯಾನಮಾಡುತ್ತಾ ಅದರಿಂದ ಅಜ್ಞಾನವನ್ನು ಭಸ್ಮವಾಗಿಸಿ ಬಿಟ್ಟನು. ॥24-26॥ ಇದಾದ ಬಳಿಕ ನಿರ್ವಾಣ-ಸುಖದ ಅನುಭೂತಿಯಿಂದ ಆ ಜ್ಞಾನ-ಕಲೆಯನ್ನೂ ಪರಿತ್ಯಾಗಮಾಡಿ, ಸಮಸ್ತ ಬಂಧನಗಳಿಂದ ಮುಕ್ತನಾಗಿ ಅವನು ನಿರ್ದೇಶಿಸುವುದಕ್ಕಾಗಲೀ, ಊಹಿಸುವುದಕ್ಕಾಗಲೀ ಸಾಧ್ಯವಾಗದ ಪರಮಾನಂದ ಮಯವಾದ ಸ್ವಸ್ವರೂಪದಲ್ಲಿ ನೆಲೆಗೊಂಡನು. ॥27॥

ಅನುವಾದ (ಸಮಾಪ್ತಿಃ)

ಏಳನೆಯ ಅಧ್ಯಾಯವು ಮುಗಿಯಿತು. ॥7॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ಹರಿಶ್ಚಂದ್ರೋಪಾಖ್ಯಾನಂ ನಾಮ ಸಪ್ತಮೋಽಧ್ಯಾಯಃ ॥7॥