೦೫

[ಐದನೆಯ ಅಧ್ಯಾಯ]

ಭಾಗಸೂಚನಾ

ದುರ್ವಾಸರು ದುಃಖದಿಂದ ಪಾರಾದುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಭಗವತಾಽಽದಿಷ್ಟೋ ದುರ್ವಾಸಾಶ್ಚಕ್ರತಾಪಿತಃ ।
ಅಂಬರೀಷಮುಪಾವೃತ್ಯ ತತ್ಪಾದೌ ದುಃಖಿತೋಽಗ್ರಹೀತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಭಗವಂತನು ಹೀಗೆ ಅಪ್ಪಣೆ ಕೊಡಿಸಿದಾಗ ಸುದರ್ಶನಚಕ್ರದ ಜ್ವಾಲೆಯಿಂದ ಬೇಯುತ್ತಿದ್ದ ದುರ್ವಾಸರು ಮರಳಿ ಅಂಬರೀಷ ರಾಜನ ಬಳಿಗೆ ಹೋಗಿ ಅತ್ಯಂತ ದುಃಖಿತರಾಗಿ ಅವನ ಎರಡೂ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡರು. ॥1॥

(ಶ್ಲೋಕ-2)

ಮೂಲಮ್

ತಸ್ಯ ಸೋದ್ಯಮನಂ ವೀಕ್ಷ್ಯ ಪಾದಸ್ಪರ್ಶವಿಲಜ್ಜಿತಃ ।
ಅಸ್ತಾವೀತ್ತದ್ಧರೇರಸ್ತ್ರಂ ಕೃಪಯಾ ಪೀಡಿತೋ ಭೃಶಮ್ ॥

ಅನುವಾದ

ದುರ್ವಾಸರ ಈ ಕಾರ್ಯವನ್ನು ನೋಡಿ ಮತ್ತು ತನ್ನ ಪಾದಗಳನ್ನು ಹಿಡಿದು ಕೊಂಡಿದ್ದರಿಂದ ಅಂಬರೀಷನು ಕಡು ನಾಚಿಕೊಂಡು ಅವನ ಹೃದಯ ದಯೆಯಿಂದ ಕರಗಿಹೋಗಿ ಭಗವಂತನ ಸುದರ್ಶನ ಚಕ್ರವನ್ನು ಸ್ತುತಿಸತೊಡಗಿದನು. ॥2॥

(ಶ್ಲೋಕ-3)

ಮೂಲಮ್ (ವಾಚನಮ್)

ಅಂಬರೀಷ ಉವಾಚ

ಮೂಲಮ್

ತ್ವಮಗ್ನಿರ್ಭಗವಾನ್ಸೂರ್ಯಸ್ತ್ವಂ ಸೋಮೋ ಜ್ಯೋತಿಷಾಂ ಪತಿಃ ।
ತ್ವಮಾಪಸ್ತ್ವಂ ಕ್ಷಿತಿರ್ವ್ಯೋಮ ವಾಯುರ್ಮಾತ್ರೇಂದ್ರಿಯಾಣಿ ಚ ॥

ಅನುವಾದ

ಅಂಬರೀಷನು ಹೇಳುತ್ತಾನೆ — ಓ ಸುದರ್ಶನಚಕ್ರವೇ! ನೀನೇ ಅಗ್ನಿಯಾಗಿರುವೆ. ಸರ್ವಸಮರ್ಥನಾದ ಸೂರ್ಯನೂ ನೀನೇ. ಸಮಸ್ತ ನಕ್ಷತ್ರಮಂಡಲದ ಅಧಿಪತಿ ಚಂದ್ರನೂ ನೀನೇ. ಜಲ, ಪೃಥಿವಿ, ಆಕಾಶ, ವಾಯು ಪಂಚತನ್ಮಾತ್ರೆಗಳೂ ಮತ್ತು ಎಲ್ಲ ಇಂದ್ರಿಯಗಳ ರೂಪದಲ್ಲಿಯೂ ನೀನೇ ಆಗಿರುವೆ. ॥3॥

(ಶ್ಲೋಕ-4)

ಮೂಲಮ್

ಸುದರ್ಶನ ನಮಸ್ತುಭ್ಯಂ ಸಹಸ್ರಾರಾಚ್ಯುತಪ್ರಿಯ ।
ಸರ್ವಾಸ್ತ್ರಘಾತಿನ್ ವಿಪ್ರಾಯ ಸ್ವಸ್ತಿ ಭೂಯಾ ಇಡಸ್ಪತೇ ॥

ಅನುವಾದ

ಓ ಸುದರ್ಶನಚಕ್ರಾಧಿ ದೇವತೆಯೇ! ನಿನಗೆ ನಮಸ್ಕರಿಸುತ್ತೇನೆ. ಸಾವಿರ ಅರಕಾಲುಗಳಿಂದ ಕೂಡಿರುವವನೇ! ಅಚ್ಯುತಪ್ರಿಯನೇ! ಸಮಸ್ತ ಅಸ್ತ್ರ-ಶಸ್ತ್ರಗಳನ್ನು ನಾಶಗೊಳಿಸುವ ಭೂಮಂಡಲಕ್ಕೆ ಒಡೆಯನಾದ ವನೇ! ನೀನು ಈ ಬ್ರಾಹ್ಮಣನನ್ನು ರಕ್ಷಿಸು. ॥4॥

(ಶ್ಲೋಕ-5)

ಮೂಲಮ್

ತ್ವಂ ಧರ್ಮಸ್ತ್ವಂ ಋತಂ ಸತ್ಯಂ ತ್ವಂ ಯಜ್ಞೋಽಖಿಲಯಜ್ಞಭುಕ್ ।
ತ್ವಂ ಲೋಕಪಾಲಃ ಸರ್ವಾತ್ಮಾ ತ್ವಂ ತೇಜಃ ಪೌರುಷಂ ಪರಮ್ ॥

ಅನುವಾದ

ನೀನೇ ಧರ್ಮಸ್ವರೂಪನಾಗಿರುವೆ. ಅಮೃತಸ್ವರೂಪನಾಗಿರುವೆ. ಸತ್ಯ ಸ್ವರೂಪನಾಗಿರುವೆ. ಸಮಸ್ತಯಜ್ಞಗಳೂ ನೀನೇ; ಯಜ್ಞ ಭೋಕ್ತೃವೂ ನೀನೇ. ಸಮಸ್ತ ಲೋಕಗಳ ರಕ್ಷಕನೂ, ಸರ್ವಲೋಕ ಸ್ವರೂಪನೂ ನೀನೆ. ನೀನು ಪರಮ ಪುರುಷ ಪರಮಾತ್ಮನ ಶ್ರೇಷ್ಠವಾದ ತೇಜಸ್ಸು ಮತ್ತು ಪೌರುಷವೂ ಆಗಿರುವೆ. ॥5॥

(ಶ್ಲೋಕ-6)

ಮೂಲಮ್

ನಮಃ ಸುನಾಭಾಖಿಲಧರ್ಮಸೇತವೇ
ಹ್ಯಧರ್ಮಶೀಲಾಸುರಧೂಮಕೇತವೇ ।
ತ್ರೈಲೋಕ್ಯಗೋಪಾಯ ವಿಶುದ್ಧವರ್ಚಸೇ
ಮನೋಜವಾಯಾದ್ಭುತಕರ್ಮಣೇ ಗೃಣೇ ॥

ಅನುವಾದ

ಓ ಸುಂದರವಾದ ಸುದರ್ಶನ ಚಕ್ರವೇ! ನೀನು ಸಮಸ್ತ ಧರ್ಮಗಳ ಮರ್ಯಾದೆಗಳನ್ನು ರಕ್ಷಿಸುವವನೇ! ಅಧರ್ಮವನ್ನು ಆಚರಿಸುವ ಅಸುರರನ್ನು ಭಸ್ಮ ಮಾಡುವ ಸಾಕ್ಷಾತ್ ಅಗ್ನಿಸ್ವರೂಪನು ನೀನೇ ಆಗಿರುವೆ. ನೀನೇ ಮೂರು ಲೋಕಗಳ ರಕ್ಷಕನೂ, ವಿಶುದ್ಧ ತೇಜೋಮಯನಾಗಿರುವೆ. ನಿನ್ನ ಗತಿಯು ಮನೋವೇಗದಂತೆ ಇದ್ದು, ನಿನ್ನ ಕರ್ಮಗಳು ಅದ್ಭುತವಾಗಿವೆ. ನಿನಗೆ ನಮಸ್ಕಾರ ಮಾಡುತ್ತಾ, ಸ್ತೋತ್ರಮಾಡುತ್ತೇನೆ. ॥6॥

(ಶ್ಲೋಕ-7)

ಮೂಲಮ್

ತ್ವತ್ತೇಜಸಾ ಧರ್ಮಮಯೇನ ಸಂಹೃತಂ
ತಮಃ ಪ್ರಕಾಶಶ್ಚ ಧೃತೋ ಮಹಾತ್ಮನಾಮ್ ।
ದುರತ್ಯಯಸ್ತೇ ಮಹಿಮಾ ಗಿರಾಂ ಪತೇ
ತ್ವದ್ರೂಪಮೇತತ್ಸದಸತ್ಪರಾವರಮ್ ॥

ಅನುವಾದ

ವೇದವಾಣಿಗಳಿಗೆ ಅಧೀಶ್ವರನೇ! ನಿನ್ನ ಧರ್ಮಮಯ ತೇಜಸ್ಸಿನಿಂದ ಅಂಧಕಾರವು ನಾಶವಾಗುತ್ತದೆ. ನಿನ್ನಿಂದಲೇ ಮಹಾಪುರುಷರ ಪ್ರಕಾಶದ ರಕ್ಷಣೆಯಾಗುತ್ತದೆ. ನಿನ್ನ ಮಹಿಮೆಯ ಪಾರವನ್ನು ತಿಳಿಯಲು ಯಾರಿಗೂ ಶಕ್ಯವಿಲ್ಲ. ಸದಸದ್ರೂಪನಾದ ಉಚ್ಚ-ನೀಚ ಭಾವನೆಗಳಿಂದ ಕೂಡಿರುವ ಸಮಸ್ತ ಕಾರ್ಯಕಾರಣಾತ್ಮಕವಾದ ಪ್ರಪಂಚವು ನಿನ್ನ ಸ್ವರೂಪವೇ ಆಗಿದೆ. ॥7॥

(ಶ್ಲೋಕ-8)

ಮೂಲಮ್

ಯದಾ ವಿಸೃಷ್ಟಸ್ತ್ವಮನಂಜನೇನ ವೈ
ಬಲಂ ಪ್ರವಿಷ್ಟೋಽಜಿತ ದೈತ್ಯದಾನವಮ್ ।
ಬಾಹೂದರೋರ್ವಂಘ್ರಿ ಶಿರೋಧರಾಣಿ
ವೃಕ್ಣನ್ನಜಸ್ರಂ ಪ್ರಧನೇ ವಿರಾಜಸೇ ॥

ಅನುವಾದ

ಸುದರ್ಶನಚಕ್ರವೇ! ದೇವತೆಯೇ! ನಿನ್ನನ್ನು ಯಾರೂ ಗೆಲ್ಲಲಾರರು. ನಿರಂಜನ ಭಗವಂತನು ನಿನ್ನನ್ನು ಪ್ರಯೋಗಿಸಿದಾಕ್ಷಣ ನೀನು ದೈತ್ಯ-ದಾನವರ ಸೇನೆಯನ್ನು ಪ್ರವೇಶಿಸಿದಾಗ, ಯುದ್ಧಭೂಮಿಯಲ್ಲಿ ಅವರ ಭುಜಗಳನ್ನು, ಉದರವನ್ನು, ತೊಡೆಕಾಲುಗಳನ್ನು, ಕತ್ತನ್ನು ನಿರಂತರವಾಗಿ ಕತ್ತರಿಸುತ್ತಿರುವ ನೀನು ಅತ್ಯಂತ ಶೋಭೆಯಿಂದ ಬೆಳಗುತ್ತಿರುವೆ. ॥8॥

(ಶ್ಲೋಕ-9)

ಮೂಲಮ್

ಸ ತ್ವಂ ಜಗತ್ತ್ರಾಣ ಖಲಪ್ರಹಾಣಯೇ
ನಿರೂಪಿತಃ ಸರ್ವಸಹೋ ಗದಾಭೃತಾ ।
ವಿಪ್ರಸ್ಯ ಚಾಸ್ಮತ್ಕುಲದೈವಹೇತವೇ
ವಿಧೇಹಿ ಭದ್ರಂ ತದನುಗ್ರಹೋ ಹಿ ನಃ ॥

ಅನುವಾದ

ಓ ವಿಶ್ವರಕ್ಷಕನೇ! ನೀನು ರಣಾಂಗಣದಲ್ಲಿ ಎಲ್ಲ ಪ್ರಹಾರಗಳನ್ನು ಸಹಿಸುವ ಸಾಮರ್ಥ್ಯವುಳ್ಳವನು. ನಿನ್ನನ್ನು ಯಾರೂ ಘಾತಿಸಲಾರರು. ಗದಾಧರನಾದ ಭಗವಂತನು ದುಷ್ಟರ ಸಂಹಾರಕ್ಕಾಗಿ ನಿನ್ನನ್ನು ನಿಯಮಿಸಿರುವನು. ದಯಮಾಡಿ ನೀನು ನಮ್ಮ ಕುಲದ ಭಾಗ್ಯೋದಯಕ್ಕಾಗಿ ದುರ್ವಾಸರಿಗೆ ಮಂಗಳವನ್ನುಂಟುಮಾಡು. ಇದೇ ನಮಗೆ ಪರಮಾನುಗ್ರಹವಾಗಿದೆ. ॥9॥

(ಶ್ಲೋಕ-10)

ಮೂಲಮ್

ಯದ್ಯಸ್ತಿ ದತ್ತಮಿಷ್ಟಂ ವಾ ಸ್ವಧರ್ಮೋ ವಾ ಸ್ವನುಷ್ಠಿತಃ ।
ಕುಲಂ ನೋ ವಿಪ್ರದೈವಂ ಚೇದ್ವಜೋ ಭವತು ವಿಜ್ವರಃ ॥

ಅನುವಾದ

ನನ್ನಲ್ಲಿ ಅಲ್ಪ-ಸ್ವಲ್ಪ ದಾನ, ಯಜ್ಞಮಾಡಿದ ಫಲವೇನಾದರೂ ಇದ್ದರೆ, ಅಥವಾ ಸ್ವಧರ್ಮವನ್ನು ಪಾಲಿಸಿದ್ದರೆ, ನಮ್ಮ ವಂಶದವರು ಬ್ರಾಹ್ಮಣರನ್ನೇ ಪರಮಾರಾಧ್ಯವೆಂದು ತಿಳಿಯುತ್ತಿದ್ದರೆ, ದುರ್ವಾಸರ ಉರಿಯನ್ನು ಶಾಂತಗೊಳಿಸು. ॥10॥

(ಶ್ಲೋಕ-11)

ಮೂಲಮ್

ಯದಿ ನೋ ಭಗವಾನ್ ಪ್ರೀತ ಏಕಃ ಸರ್ವಗುಣಾಶ್ರಯಃ ।
ಸರ್ವಭೂತಾತ್ಮಭಾವೇನ ದ್ವಿಜೋ ಭವತು ವಿಜ್ವರಃ ॥

ಅನುವಾದ

ಭಗವಂತನು ಸಮಸ್ತ ಗುಣಗಳ ಏಕಮಾತ್ರ ಆಶ್ರಯನಾಗಿದ್ದಾನೆ. ನಾನು ಸಮಸ್ತ ಪ್ರಾಣಿಗಳ ಆತ್ಮರೂಪದಲ್ಲಿ ಅವನನ್ನು ದರ್ಶಿಸುತ್ತಿದ್ದರೆ ಹಾಗೂ ಅವನು ನನ್ನ ಮೇಲೆ ಪ್ರಸನ್ನನಾಗಿದ್ದರೆ ದುರ್ವಾಸರ ಹೃದಯದ ತಾಪವನ್ನು (ಉರಿಯನ್ನು) ಇಲ್ಲವಾಗಿಸು. ॥11॥

(ಶ್ಲೋಕ-12)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ಸಂಸ್ತುವತೋ ರಾಜ್ಞೋ ವಿಷ್ಣುಚಕ್ರಂ ಸುದರ್ಶನಮ್ ।
ಅಶಾಮ್ಯತ್ಸರ್ವತೋ ವಿಪ್ರಂ ಪ್ರದಹದ್ರಾಜಯಾಂಚಯಾ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ದುರ್ವಾಸಮುನಿಯನ್ನು ಎಲ್ಲ ಕಡೆಯಿಂದ ಸುಡುತ್ತಿರುವ ಭಗವಂತನ ಸುದರ್ಶನಚಕ್ರವನ್ನು ರಾಜಾ ಅಂಬರೀಷನು ಈ ವಿಧವಾಗಿ ಸ್ತುತಿಸಿದಾಗ ಅವನ ಪ್ರಾರ್ಥನೆಯಂತೆ ಸುದರ್ಶನವು ಶಾಂತವಾಯಿತು. ॥12॥

(ಶ್ಲೋಕ-13)

ಮೂಲಮ್

ಸ ಮುಕ್ತೋಽಸಾಗ್ನಿತಾಪೇನ ದುರ್ವಾಸಾಃ ಸ್ವಸ್ತಿಮಾಂಸ್ತತಃ ।
ಪ್ರಶಶಂಸ ತಮುರ್ವೀಶಂ ಯುಂಜಾನಃ ಪರಮಾಶಿಷಃ ॥

ಅನುವಾದ

ದುರ್ವಾಸರು ಚಕ್ರದ ಉರಿಯಿಂದ ವಿಮುಕ್ತರಾಗಿ, ಸ್ವಸ್ಥಚಿತ್ತರಾದಾಗ ಅವರು ಅಂಬರೀಷನಿಗೆ ಅನೇಕಾನೇಕ ಶುಭಾಶೀರ್ವಾದಗಳನ್ನು ಕೊಡುತ್ತಾ, ಅವನನ್ನು ಪ್ರಶಂಸಿಸಿದರು. ॥13॥

(ಶ್ಲೋಕ-14)

ಮೂಲಮ್ (ವಾಚನಮ್)

ದುರ್ವಾಸಾ ಉವಾಚ

ಮೂಲಮ್

ಅಹೋ ಅನಂತದಾಸಾನಾಂ ಮಹತ್ತ್ವಂ ದೃಷ್ಟಮದ್ಯ ಮೇ ।
ಕೃತಾಗಸೋಽಪಿ ಯದ್ರಾಜನ್ಮಂಗಲಾನಿ ಸಮೀಹಸೇ ॥

ಅನುವಾದ

ದುರ್ವಾಸರು ಹೇಳಿದರು — ಮಹಾರಾಜಾ! ನೀನು ಧನ್ಯನಾಗಿರುವೆ. ಭಗವಂತನ ಪ್ರೇಮಿ ಭಕ್ತರ ಮಹತ್ವವನ್ನು ಇಂದು ನಾನು ಕಂಡೆ, ನಿನ್ನ ಕುರಿತು ಅಪರಾಧ ಮಾಡಿದೆ. ಹೀಗಿದ್ದರೂ ನೀನು ನನಗಾಗಿ ಮಂಗಲವನ್ನೇ ಬಯಸು ತ್ತಿರುವೆ. ॥14॥

(ಶ್ಲೋಕ-15)

ಮೂಲಮ್

ದುಷ್ಕರಃ ಕೋ ನು ಸಾಧೂನಾಂ
ದುಸ್ತ್ಯಜೋ ವಾ ಮಹಾತ್ಮನಾಮ್ ।
ಯೈಃ ಸಂಗೃಹೀತೋ ಭಗವಾನ್
ಸಾತ್ವತಾಮೃಷಭೋ ಹರಿಃ ॥

ಅನುವಾದ

ಭಕ್ತವತ್ಸಲ ಭಗವಾನ್ ಶ್ರೀಹರಿಯ ಚರಣಕಮಲಗಳನ್ನು ಭಕ್ತಿಭಾವದಿಂದ ದೃಢವಾಗಿ ಹಿಡಿದಿರುವ ಸಾಧು-ಸತ್ಪುರುಷರಿಗೆ ಕಠಿಣವಾದ ಕಾರ್ಯವು ಯಾವುದಿದೆ? ಉದಾರ ಹೃದಯವುಳ್ಳ ಮಹಾತ್ಮರು ಯಾವ ವಸ್ತುವನ್ನು ತಾನೇ ಪರಿತ್ಯಾಗ ಮಾಡಲಾರರು? ॥15॥

(ಶ್ಲೋಕ-16)

ಮೂಲಮ್

ಯನ್ನಾಮಶ್ರುತಿಮಾತ್ರೇಣ ಪುಮಾನ್ ಭವತಿ ನಿರ್ಮಲಃ ।
ತಸ್ಯ ತೀರ್ಥಪದಃ ಕಿಂ ವಾ ದಾಸಾನಾಮವಶಿಷ್ಯತೇ ॥

ಅನುವಾದ

ಯಾರ ಮಂಗಲಮಯ ನಾಮಗಳ ಶ್ರವಣ ಮಾತ್ರದಿಂದಲೇ ಜೀವಿಯು ನಿರ್ಮಲರಾಗಿ ಹೋಗುವರೋ, ಅಂತಹ ತೀರ್ಥ ಪಾದನಾದ ಶ್ರೀಭಗವಂತನ ಚರಣಕಮಲಗಳ ದಾಸರಾದ ಭಕ್ತರಿಗೆ ಯಾವ ಕರ್ತವ್ಯವು ತಾನೇ ಶೇಷವಾಗಿ ಉಳಿದಿರುತ್ತದೆ? ॥16॥

(ಶ್ಲೋಕ-17)

ಮೂಲಮ್

ರಾಜನ್ನನುಗೃಹೀತೋಽಹಂ ತ್ವಯಾತಿಕರುಣಾತ್ಮನಾ ।
ಮದಘಂ ಪೃಷ್ಠತಃ ಕೃತ್ವಾ ಪ್ರಾಣಾ ಯನ್ಮೇಽಭಿರಕ್ಷಿತಾಃ ॥

ಅನುವಾದ

ಅಂಬರೀಷ ಮಹರಾಜಾ! ನಿನ್ನ ಹೃದಯವು ಕರುಣಾಭಾವದಿಂದ ಪರಿಪೂರ್ಣವಾಗಿದೆ. ನೀನು ನನ್ನ ಮೇಲೆ ಮಹಾನ್ ಅನುಗ್ರಹವನ್ನು ಮಾಡಿರುವೆ. ಅಯ್ಯಾ! ನೀನು ನನ್ನ ಅಪರಾಧಗಳನ್ನು ಮರೆತು ನನ್ನ ಪ್ರಾಣಗಳನ್ನು ರಕ್ಷಿಸಿರುವೆ. ॥17॥

(ಶ್ಲೋಕ-18)

ಮೂಲಮ್

ರಾಜಾ ತಮಕೃತಾಹಾರಃ ಪ್ರತ್ಯಾಗಮನಕಾಂಕ್ಷಯಾ ।
ಚರಣಾವುಪಸಂಗೃಹ್ಯ ಪ್ರಸಾದ್ಯ ಸಮಭೋಜಯತ್ ॥

ಅನುವಾದ

ಪರೀಕ್ಷಿತನೇ! ದುರ್ವಾಸರು ಓಡಿಹೋದಂದಿನಿಂದ ಇಂದಿನವರೆಗೆ ಅಂಬರೀಷರಾಜನು ಭೋಜನವನ್ನು ಮಾಡಿರಲಿಲ್ಲ. ಅವನು ಅವರು ಮರಳಿ ಬರುವ ದಾರಿ ಕಾಯುತ್ತಿದ್ದನು. ಈಗ ಅವನು ದುರ್ವಾಸರ ಕಾಲಿಗೆ ಬಿದ್ದು, ಅವರನ್ನೂ ಸಂತೋಷಪಡಿಸಿ, ವಿಧಿವತ್ತಾಗಿ ಭೋಜನವನ್ನು ಮಾಡಿಸಿದನು. ॥18॥

(ಶ್ಲೋಕ-19)

ಮೂಲಮ್

ಸೋಽಶಿತ್ವಾಽಽದೃತಮಾನೀತಮಾತಿಥ್ಯಂ ಸಾರ್ವಕಾಮಿಕಮ್ ।
ತೃಪ್ತಾತ್ಮಾ ನೃಪತಿಂ ಪ್ರಾಹ ಭುಜ್ಯತಾಮಿತಿ ಸಾದರಮ್ ॥

ಅನುವಾದ

ಅಂಬರೀಷನು ಅತಿ ಆದರದಿಂದ ಅತಿಥಿಗೆ ಯೋಗ್ಯವಾದ ಎಲ್ಲ ವಿಧದ ಭೋಜನ ಸಾಮಗ್ರಿಯನ್ನು ತರಿಸಿದನು. ದುರ್ವಾಸರು ಭೋಜನಮಾಡಿ ತೃಪ್ತರಾದರು. ಆಗ ಅವರು ಆದರದಿಂದ ರಾಜನೇ! ಇನ್ನು ನೀನೂ ಭೋಜನವನ್ನು ಮಾಡು ಎಂದು ನುಡಿದರು. ॥19॥

(ಶ್ಲೋಕ-20)

ಮೂಲಮ್

ಪ್ರೀತೋಽಸ್ಮ್ಯನುಗೃಹೀತೋಽಸ್ಮಿ ತವ ಭಾಗವತಸ್ಯ ವೈ ।
ದರ್ಶನಸ್ಪರ್ಶನಾಲಾಪೈರಾತಿಥ್ಯೇನಾತ್ಮಮೇಧಸಾ ॥

ಅನುವಾದ

ಅಂಬರೀಷನೇ! ನೀನು ಭಗವಂತನಿಗೆ ಪರಮ ಪ್ರಿಯಭಕ್ತನಾಗಿರುವೆ. ನಿನ್ನ ದರ್ಶನ, ಸ್ಪರ್ಶ, ಸಂಭಾಷಣ ಮತ್ತು ಮನಸ್ಸನ್ನು ಭಗವಂತನ ಕಡೆಗೆ ಪ್ರವೃತ್ತಗೊಳಿಸುವಂತಹ ಆತಿಥ್ಯದಿಂದ ನಾನು ಅತ್ಯಂತ ಸಂತೋಷಗೊಂಡಿರುವೆನು; ಅನುಗ್ರಹಿತನಾಗಿರುವೆನು. ॥20॥

(ಶ್ಲೋಕ-21)

ಮೂಲಮ್

ಕರ್ಮಾವದಾತಮೇತತ್ತೇ ಗಾಯಂತಿ ಸ್ವಃಸ್ತ್ರಿಯೋ ಮುಹುಃ ।
ಕೀರ್ತಿಂ ಪರಮಪುಣ್ಯಾಂ ಚ ಕೀರ್ತಯಿಷ್ಯತಿ ಭೂರಿಯಮ್ ॥

ಅನುವಾದ

ಸ್ವರ್ಗದ ದೇವಾಂಗನೆಯರು ಪದೇ-ಪದೇ ನಿನ್ನ ಈ ಉಜ್ವಲ ಚರಿತ್ರೆಯನ್ನು ಕೊಂಡಾಡುವರು. ಈ ಭೂ ಮಂಡಲದಲ್ಲಿರುವ ಜನರೂ ಕೂಡ ಪರಮಪುಣ್ಯಮಯವಾದ ನಿನ್ನ ಕೀರ್ತಿಯನ್ನು ಸಂಕೀರ್ತನೆ ಮಾಡುತ್ತಾ ಇರುವರು. ॥21॥

(ಶ್ಲೋಕ-22)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಸಂಕೀರ್ತ್ಯ ರಾಜಾನಂ ದುರ್ವಾಸಾಃ ಪರಿತೋಷಿತಃ ।
ಯಯೌ ವಿಹಾಯಸಾಽಽಮಂತ್ರ್ಯ ಬ್ರಹ್ಮಲೋಕಮಹೈತುಕಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ದುರ್ವಾಸರು ಬಹಳ ಸಂತುಷ್ಟರಾಗಿ ಅಂಬರೀಷರಾಜನ ಸದ್ಗುಣಗಳನ್ನು ಪ್ರಶಂಸಿಸುತ್ತಾ, ಅವನಿಂದ ಬೀಳ್ಕೊಂಡು, ಕೇವಲ ನಿಷ್ಕಾಮ ಕರ್ಮದಿಂದಲೇ ದೊರೆಯಬಹುದಾದ ಬ್ರಹ್ಮಲೋಕಕ್ಕಾಗಿ ಆಕಾಶ ಮಾರ್ಗದಿಂದ ಪ್ರಯಾಣ ಮಾಡಿದರು. ॥22॥

(ಶ್ಲೋಕ-23)

ಮೂಲಮ್

ಸಂವತ್ಸರೋಽತ್ಯಗಾತ್ತಾವದ್ ಯಾವತಾ ನಾಗತೋ ಗತಃ ।
ಮುನಿಸ್ತದ್ದರ್ಶನಾಕಾಂಕ್ಷೋ ರಾಜಾಽಬ್ಭಕ್ಷೋ ಬಭೂವ ಹ ॥

ಅನುವಾದ

ರಾಜನೇ! ಸುದರ್ಶನಚಕ್ರದಿಂದ ಭಯಗೊಂಡು ದುರ್ವಾಸರು ಓಡಿಹೋದ ಅಂದಿನಿಂದ, ಅವರು ಮರಳಿ ಬರುವ ವೇಳೆಗೆ ಒಂದುವರ್ಷ ಕಳೆದು ಹೋಗಿತ್ತು. ಇಷ್ಟು ದಿನಗಳವರೆಗೂ ಅಂಬರೀಷರಾಜನು ಅವರ ದರ್ಶನದ ಆಕಾಂಕ್ಷೆಯಿಂದ ಕೇವಲ ನೀರು ಕುಡಿದುಕೊಂಡೇ ಇದ್ದನು. ॥23॥

(ಶ್ಲೋಕ-24)

ಮೂಲಮ್

ಗತೇ ಚ ದುರ್ವಾಸಸಿ ಸೋಽಂಬರೀಷೋ
ದ್ವಿಜೋಪಯೋಗಾತಿಪವಿತ್ರಮಾಹರತ್ ।
ಋಷೇರ್ವಿಮೋಕ್ಷಂ ವ್ಯಸನಂ ಚ ಬುದ್ಧ್ವಾ
ಮೇನೇ ಸ್ವವೀರ್ಯಂ ಚ ಪರಾನುಭಾವಮ್ ॥

ಅನುವಾದ

ದುರ್ವಾಸರು ಹೊರಟುಹೋದ ಬಳಿಕ ಅವರು ಭೋಜನ ಮಾಡಿದ ಮೇಲೆ ಮಿಕ್ಕಿ ಉಳಿದಿರುವ ಅತ್ಯಂತ ಪವಿತ್ರವಾದ ಅನ್ನವನ್ನು ಅಂಬರೀಷನು ಊಟಮಾಡಿದನು. ತನ್ನ ಕಾರಣದಿಂದಲೇ ದುರ್ವಾಸರಿಗೆ ಉಂಟಾದ ದುಃಖ ಹಾಗೂ ತನ್ನ ಪ್ರಾರ್ಥನೆಯಿಂದಲೇ ಅದರ ನಿವೃತ್ತಿ ಎರಡೂ ತನ್ನಿಂದಲೇ ನಡೆದಿದ್ದರೂ, ಇದನ್ನು ಭಗವಂತನ ಮಹಿಮೆ ಎಂದೇ ಅಂಬರೀಷನು ತಿಳಿದನು. ॥24॥

(ಶ್ಲೋಕ-25)

ಮೂಲಮ್

ಏವಂವಿಧಾನೇಕಗುಣಃ ಸ ರಾಜಾ
ಪರಾತ್ಮನಿ ಬ್ರಹ್ಮಣಿ ವಾಸುದೇವೇ ।
ಕ್ರಿಯಾಕಲಾಪೈಃ ಸಮುವಾಹ ಭಕ್ತಿಂ
ಯಯಾಽಽವಿರಿಂಚ್ಯಾನ್ನಿರಯಾಂಶ್ಚಕಾರ ॥

ಅನುವಾದ

ಅಂಬರೀಷ ಮಹಾರಾಜನಲ್ಲಿ ಇಂತಹ ಅನೇಕ ಗುಣಗಳಿದ್ದವು. ತನ್ನ ಕರ್ಮಗಳ ಮೂಲಕ ಅವನು ಪರಬ್ರಹ್ಮ ಪರಮಾತ್ಮಾ ಶ್ರೀಭಗವಂತನಲ್ಲಿ ಭಕ್ತಿಭಾವವನ್ನು ಅಭಿವೃದ್ಧಿಪಡಿಸುತ್ತಲೇ ಇದ್ದನು. ಆ ಭಕ್ತಿಯ ಪ್ರಭಾವದಿಂದ ಅವನು ಬ್ರಹ್ಮಲೋಕದವರೆಗಿನ ಸಮಸ್ತ ಭೋಗಗಳನ್ನು ನರಕದಂತೆ ತಿಳಿಯುತ್ತಿದ್ದನು. ॥25॥

(ಶ್ಲೋಕ-26)

ಮೂಲಮ್

ಅಥಾಂಬರೀಷಸ್ತನಯೇಷು ರಾಜ್ಯಂ
ಸಮಾನಶೀಲೇಷು ವಿಸೃಜ್ಯ ಧೀರಃ ।
ವನಂ ವಿವೇಶಾತ್ಮನಿ ವಾಸುದೇವೇ
ಮನೋ ದಧದ್ಧ್ವಸ್ತಗುಣಪ್ರವಾಹಃ ॥

ಅನುವಾದ

ಅನಂತರ ಅಂಬರೀಷ ರಾಜನು ತನ್ನಂತೆಯೇ ಇದ್ದ ಭಕ್ತರಾದ ಪುತ್ರರಿಗೆ ರಾಜ್ಯವನ್ನು ಒಪ್ಪಿಸಿ, ಸ್ವತಃ ತಪಸ್ಸಿಗಾಗಿ ಕಾಡಿಗೆ ತೆರಳಿದನು. ಅಲ್ಲಿ ಧೀರನಾದ ಅವನು ಆತ್ಮಸ್ವರೂಪನಾದ ವಾಸುದೇವನಲ್ಲಿ ತನ್ನ ಮನಸ್ಸನ್ನು ಲೀನಗೊಳಿಸಿ ಗುಣಗಳ ಪ್ರವಾಹರೂಪವಾದ ಪ್ರಪಂಚದಿಂದ ಮುಕ್ತನಾಗಿ ಹೋದನು. ॥26॥

(ಶ್ಲೋಕ-27)

ಮೂಲಮ್

ಇತ್ಯೇತತ್ಪುಣ್ಯಮಾಖ್ಯಾನಮಂಬರೀಷಸ್ಯ ಭೂಪತೇಃ
ಸಂಕೀರ್ತಯನ್ನನುಧ್ಯಾಯನ್ ಭಕ್ತೋ ಭಗವತೋ ಭವೇತ್ ॥

ಅನುವಾದ

ಪರೀಕ್ಷಿತನೇ! ಮಹಾರಾಜಾ ಅಂಬರೀಷನ ಈ ಆಖ್ಯಾನವು ಪರಮ ಪವಿತ್ರವಾಗಿದೆ. ಇದನ್ನು ಸಂಕೀರ್ತನೆ, ಸ್ಮರಣೆ ಮಾಡುವವನು ಅಂಬರೀಷನಂತೆ ಭಗವಂತನ ಭಕ್ತನಾಗಿ ಹೋಗುತ್ತಾನೆ. ॥27॥

ಅನುವಾದ (ಸಮಾಪ್ತಿಃ)

ಐದನೆಯ ಅಧ್ಯಾಯವು ಮುಗಿಯಿತು. ॥5॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ಅಂಬರೀಷಚರಿತಂ ನಾಮ ಪಂಚಮೋಽಧ್ಯಾಯಃ ॥5॥