೦೩

[ಮೂರನೆಯ ಅಧ್ಯಾಯ]

ಭಾಗಸೂಚನಾ

ಮಹರ್ಷಿ ಚ್ಯವನ ಮತ್ತು ಸುಕನ್ಯೆಯ ಚರಿತ್ರೆ, ಶರ್ಯಾತಿರಾಜನ ವಂಶವರ್ಣನೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಶರ್ಯಾತಿರ್ಮಾನವೋ ರಾಜಾ ಬ್ರಹ್ಮಿಷ್ಠಃ ಸ ಬಭೂವ ಹ ।
ಯೋ ವಾ ಅಂಗಿರಸಾಂ ಸತ್ರೇ ದ್ವಿತೀಯಮಹ ಊಚಿವಾನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಮನುಪುತ್ರನಾದ ಶರ್ಯಾತಿರಾಜನು ವೇದಗಳ ನಿಷ್ಠಾವಂತ ವಿದ್ವಾಂಸನಾಗಿದ್ದನು. ಅವನು ಅಂಗಿರಾ ಗೋತ್ರದ ಋಷಿಗಳ ಯಜ್ಞದಲ್ಲಿ ಎರಡನೆಯ ದಿನದ ಕರ್ಮವನ್ನು ತಿಳಿಸಿದ್ದನು. ॥1॥

(ಶ್ಲೋಕ-2)

ಮೂಲಮ್

ಸುಕನ್ಯಾ ನಾಮ ತಸ್ಯಾಸೀತ್ಕನ್ಯಾ ಕಮಲಲೋಚನಾ ।
ತಯಾ ಸಾರ್ಧಂ ವನಗತೋ ಹ್ಯಗಮಚ್ಚ್ಯವನಾಶ್ರಮಮ್ ॥

ಅನುವಾದ

ಅವನಿಗೆ ಕಮಲ ಲೋಚನೆಯಾದ ಸುಕನ್ಯೆ ಎಂಬ ಓರ್ವ ಮಗಳಿದ್ದಳು. ಒಂದು ದಿನ ಶರ್ಯಾತಿರಾಜನು ತನ್ನ ಕನ್ಯೆಯೊಂದಿಗೆ ವನದಲ್ಲಿ ಸುತ್ತಾಡುತ್ತಾ ಚ್ಯವನಋಷಿಯ ಆಶ್ರಮಕ್ಕೆ ಬಂದು ತಲುಪಿದನು. ॥2॥

(ಶ್ಲೋಕ-3)

ಮೂಲಮ್

ಸಾ ಸಖೀಭಿಃ ಪರಿವೃತಾ ವಿಚಿನ್ವತ್ಯಂಘ್ರಿಪಾನ್ವನೇ ।
ವಲ್ಮೀಕರಂಧ್ರೇ ದದೃಶೇ ಖದ್ಯೋತೇ ಇವ ಜ್ಯೋತಿಷೀ ॥

ಅನುವಾದ

ಸುಕನ್ಯೆಯು ತನ್ನ ಸಖಿಯರೊಂದಿಗೆ ವನದಲ್ಲಿ ಅಲೆದಾಡುತ್ತಾ ವೃಕ್ಷಗಳ ಸೌಂದರ್ಯವನ್ನು ನೋಡುತ್ತಿದ್ದಳು. ವೃಕ್ಷದ ಬುಡದಲ್ಲಿದ್ದ ಒಂದು ಹುತ್ತದಲ್ಲಿ ಸುಕನ್ಯೆಯು ಮಿಣುಕುಹುಳುಗಳಂತೆ ಮಿನುಗುತ್ತಿದ್ದ ಎರಡು ಜ್ಯೋತಿಗಳನ್ನು (ಅವು ಚ್ಯವನ ಮಹರ್ಷಿಯ ಎರಡು ಕಣ್ಣುಗಳಾಗಿದ್ದವು.) ನೋಡಿದಳು. ॥3॥

(ಶ್ಲೋಕ-4)

ಮೂಲಮ್

ತೇ ದೈವಚೋದಿತಾ ಬಾಲಾ ಜ್ಯೋತಿಷೀ ಕಂಟಕೇನ ವೈ ।
ಅವಿಧ್ಯನ್ಮುಗ್ಧಭಾವೇನ ಸುಸ್ರಾವಾಸೃಕ್ ತತೋ ಬಹು ॥

ಅನುವಾದ

ದೈವಪ್ರೇರಣೆಯಿಂದಾಗಿ ಅರಿವಿಲ್ಲದ ಆ ಬಾಲೆಯು ಹುಡುಗಾಟಕ್ಕಾಗಿ ಮಿನುಗುತ್ತಿದ್ದ ಆ ಬೆಳಕುಗಳನ್ನು ಮುಳ್ಳಿನಿಂದ ಚುಚ್ಚಿದಳು. ಇದರಿಂದ ಬೆಳಕಿದ್ದ ಸ್ಥಳದಿಂದ ರಕ್ತವು ಹರಿಯ ತೊಡಗಿತು. ॥4॥

(ಶ್ಲೋಕ-5)

ಮೂಲಮ್

ಶಕೃನ್ಮೂತ್ರನಿರೋಧೋಽಭೂತ್ ಸೈನಿಕಾನಾಂ ಚ ತತ್ಕ್ಷಣಾತ್ ।
ರಾಜರ್ಷಿಸ್ತಮುಪಾಲಕ್ಷ್ಯ ಪುರುಷಾನ್ವಿಸ್ಮಿತೋಽಬ್ರವೀತ್ ॥

ಅನುವಾದ

ಅದೇ ಸಮಯದಲ್ಲಿ ರಾಜಾ ಶರ್ಯಾತಿಯ ಸೈನಿಕರ ಮಲ-ಮೂತ್ರಗಳು ಅವರೋಧವಾದುವು. ರಾಜರ್ಷಿ ಶರ್ಯಾತಿಗೆ ಇದನ್ನು ನೋಡಿ ಬಹಳ ಆಶ್ಚರ್ಯವಾಯಿತು. ಅವನು ಸೈನಿಕರಲ್ಲಿ ಕೇಳಿದನು ॥5॥

(ಶ್ಲೋಕ-6)

ಮೂಲಮ್

ಅಪ್ಯಭದ್ರಂ ನ ಯುಷ್ಮಾಭಿರ್ಭಾರ್ಗವಸ್ಯ ವಿಚೇಷ್ಟಿತಮ್ ।
ವ್ಯಕ್ತಂ ಕೇನಾಪಿ ನಸ್ತಸ್ಯ ಕೃತಮಾಶ್ರಮದೂಷಣಮ್ ॥

ಅನುವಾದ

ಸೈನಿಕರೇ! ನೀವೇನಾದರೂ ಚ್ಯವನಮಹರ್ಷಿಯ ವಿಷಯದಲ್ಲಿ ಅನುಚಿತವಾಗಿ ವ್ಯವಹರಿಸಿದಿರಾ? ನಮ್ಮಲ್ಲಿ ಯಾರಾದರೂ ಅವರ ಆಶ್ರಮದಲ್ಲಿ ದುಷ್ಕಾರ್ಯವನ್ನು ಮಾಡಿರಬಹುದೆಂದು ನನಗೆ ಸ್ಪಷ್ಟವಾಗಿ ಕಾಣುತ್ತಿದೆ. ॥6॥

(ಶ್ಲೋಕ-7)

ಮೂಲಮ್

ಸುಕನ್ಯಾ ಪ್ರಾಹ ಪಿತರಂ ಭೀತಾ ಕಿಂಚಿತ್ಕೃತಂ ಮಯಾ ।
ದ್ವೇ ಜ್ಯೋತಿಷೀ ಅಜಾನಂತ್ಯಾ ನಿರ್ಭಿನ್ನೇ ಕಂಟಕೇನ ವೈ ॥

ಅನುವಾದ

ಆಗ ಸುಕನ್ಯೆಯು ತಂದೆಯ ಬಳಿಯಲ್ಲಿ ಹೆದರುತ್ತಲೇ ಹೇಳಿದಳು ಅಪ್ಪಾ! ನಾನೇ ಅಪರಾಧವನ್ನು ಮಾಡಿ ಬಿಟ್ಟಿದ್ದೇನೆ. ನಾನು ಅರಿವಿಲ್ಲದೆ ಹುತ್ತದಲ್ಲಿ ಫಳ-ಫಳಿಸುತ್ತಿದ್ದ ಎರಡು ಜ್ಯೋತಿಗಳನ್ನು ಮುಳ್ಳಿನಿಂದ ತಿವಿದುಬಿಟ್ಟಿರುವೆನು. ॥7॥

(ಶ್ಲೋಕ-8)

ಮೂಲಮ್

ದುಹಿತುಸ್ತದ್ವಚಃ ಶ್ರುತ್ವಾ ಶರ್ಯಾತಿರ್ಜಾತಸಾಧ್ವಸಃ ।
ಮುನಿಂ ಪ್ರಸಾದಯಾಮಾಸ ವಲ್ಮೀಕಾಂತರ್ಹಿತಂ ಶನೈಃ ॥

ಅನುವಾದ

ಮಗಳ ಈ ಮಾತನ್ನು ಕೇಳಿ ಶರ್ಯಾತಿಗೆ ಬಹಳ ಭಯವಾಯಿತು. ಅವನು ಹುತ್ತದಲ್ಲಿದ್ದ (ಕಣ್ಣುಗಳನ್ನು ಕಳಕೊಂಡ) ಚ್ಯವನಮಹರ್ಷಿಯನ್ನು ಸ್ತೋತ್ರಮಾಡುತ್ತಾ ಸ್ವಲ್ಪ-ಸ್ವಲ್ಪವಾಗಿ ಅವನನ್ನು ಸಮಾಧಾನಗೊಳಿಸಿದನು. ॥8॥

(ಶ್ಲೋಕ-9)

ಮೂಲಮ್

ತದಭಿಪ್ರಾಯಮಾಜ್ಞಾಯ ಪ್ರಾದಾದ್ದುಹಿತರಂ ಮುನೇಃ ।
ಕೃಚ್ಛ್ರಾನ್ಮುಕ್ತಸ್ತಮಾಮಂತ್ರ್ಯ ಪುರಂ ಪ್ರಾಯಾತ್ಸಮಾಹಿತಃ ॥

ಅನುವಾದ

ಅನಂತರ ಚ್ಯವನಮುನಿಯ ಅಭಿಪ್ರಾಯವನ್ನು ಅರಿತು ಅವನು ತನ್ನ ಮಗಳನ್ನು ವಿವಾಹಮಾಡಿಕೊಟ್ಟನು. ಚ್ಯವನನ ಅನುಗ್ರಹದಿಂದ ಈ ಸಂಕಟದಿಂದ ಬಿಡುಗಡೆಹೊಂದಿ, ಸಮಾಧಾನಗೊಂಡ ಶರ್ಯಾತಿಯು ಅವರ ಅನುಮತಿಯನ್ನು ಪಡೆದು ತನ್ನ ರಾಜಧಾನಿಗೆ ಮರಳಿದನು. ॥9॥

(ಶ್ಲೋಕ-10)

ಮೂಲಮ್

ಸುಕನ್ಯಾ ಚ್ಯವನಂ ಪ್ರಾಪ್ಯ ಪತಿಂ ಪರಮಕೋಪನಮ್ ।
ಪ್ರೀಣಯಾಮಾಸ ಚಿತ್ತಜ್ಞಾ ಅಪ್ರಮತ್ತಾನುವೃತ್ತಿಭಿಃ ॥

ಅನುವಾದ

ಇತ್ತ ಸುಕನ್ಯೆಯು ಪರಮಕ್ರೋಧಿಯಾದ ಚ್ಯವನಋಷಿಯನ್ನು ತನ್ನ ಪತಿಯನ್ನಾಗಿ ಪಡೆದುಕೊಂಡು ಬಹಳ ಎಚ್ಚರಿಕೆಯಿಂದ ಅವರ ಸೇವೆಮಾಡುತ್ತಾ ಅವರನ್ನು ಸಂತೋಷ ಪಡಿಸುತ್ತಿದ್ದಳು. ಅವಳು ಅವರ ಮನೋವೃತ್ತಿಯನ್ನು ಅರಿತುಕೊಂಡು ಅದಕ್ಕನುಸಾರವಾಗಿಯೇ ವರ್ತಿಸುತ್ತಿದ್ದಳು. ॥10॥

(ಶ್ಲೋಕ-11)

ಮೂಲಮ್

ಕಸ್ಯಚಿತ್ತ್ವಥ ಕಾಲಸ್ಯ ನಾಸತ್ಯಾವಾಶ್ರಮಾಗತೌ ।
ತೌ ಪೂಜಯಿತ್ವಾ ಪ್ರೋವಾಚ ವಯೋ ಮೇ ದತ್ತಮೀಶ್ವರೌ ॥

(ಶ್ಲೋಕ-12)

ಮೂಲಮ್

ಗ್ರಹಂ ಗ್ರಹೀಷ್ಯೇ ಸೋಮಸ್ಯ
ಯಜ್ಞೇ ವಾಮಪ್ಯಸೋಮಪೋಃ ।
ಕ್ರಿಯತಾಂ ಮೇ ವಯೋ ರೂಪಂ
ಪ್ರಮದಾನಾಂ ಯದೀಪ್ಸಿತಮ್ ॥

ಅನುವಾದ

ಕೆಲವು ಕಾಲ ಕಳೆದ ಬಳಿಕ ಒಮ್ಮೆ ಚ್ಯವನರ ಆಶ್ರಮಕ್ಕೆ ಅಶ್ವಿನೀಕುಮಾರರಿಬ್ಬರೂ ಆಗಮಿಸಿದರು. ಚ್ಯವನರು ಅವರಿಗೆ ಯಥೋಚಿತವಾಗಿ ಸತ್ಕಾರಗೈದು ಹೇಳಿದರು ನೀವಿಬ್ಬರೂ ಸಮರ್ಥರಾಗಿದ್ದೀರಿ. ಆದ್ದರಿಂದ ನನ್ನನ್ನು ಯುವಕನನ್ನಾಗಿಸಿರಿ. ನನ್ನ ರೂಪ ಹಾಗೂ ವಯಸ್ಸು ಯುವತಿ ಸ್ತ್ರೀಯರೂ ಬಯಸುವಂತೆ ಸುಂದರವಾಗಿಸಿರಿ. ನಿಮಗೆ ಸೋಮಪಾನದ ಅಧಿಕಾರವಿಲ್ಲ ಎಂಬುದನ್ನೂ ನಾನು ಬಲ್ಲೆನು. ಹೀಗಿದ್ದರೂ ನಾನು ನಿಮಗೆ ಸೋಮರಸದ ಪಾಲನ್ನು ಕೊಡುವೆನು.॥11-12॥

(ಶ್ಲೋಕ-13)

ಮೂಲಮ್

ಬಾಢಮಿತ್ಯೂಚತುರ್ವಿಪ್ರಮಭಿನಂದ್ಯ ಭಿಷಕ್ತವೌ ।
ನಿಮಜ್ಜತಾಂ ಭವಾನಸ್ಮಿನ್ ಹ್ರದೇ ಸಿದ್ಧವಿನಿರ್ಮಿತೇ ॥

ಅನುವಾದ

ವೈದ್ಯಶಿರೋಮಣಿಗಳಾದ ಅಶ್ವಿನೀಕುಮಾರರು ಚ್ಯವನಮಹರ್ಷಿಯನ್ನು ಅಭಿನಂದಿಸುತ್ತಾ ‘ಹಾಗೇ ಆಗಲಿ’ ಎಂದು ಹೇಳಿದರು. ಅನಂತರ ‘ಇದು ಸಿದ್ಧರ ಮೂಲಕ ನಿರ್ಮಾಣಗೊಂಡ ಒಂದು ಕುಂಡವಾಗಿದೆ. ಇದರಲ್ಲಿ ನೀವು ಸ್ನಾನಮಾಡಿರಿ’ ಎಂದು ಹೇಳಿದರು. ॥13॥

(ಶ್ಲೋಕ-14)

ಮೂಲಮ್

ಇತ್ಯುಕ್ತ್ವಾ ಜರಯಾ ಗ್ರಸ್ತದೇಹೋ ಧಮನಿಸಂತತಃ ।
ಹ್ರದಂ ಪ್ರವೇಶಿತೋಽಶ್ವಿಭ್ಯಾಂ ವಲೀಪಲಿತವಿಪ್ರಿಯಃ ॥

ಅನುವಾದ

ಚ್ಯವನಮುನಿಯ ಶರೀರದಲ್ಲಿ ಮುದಿತನವು ಆವರಿಸಿತ್ತು. ಮೂಳೆ-ನರಗಳು ಎದ್ದು ಕಾಣುತ್ತಿದ್ದವು. ಚರ್ಮ ಸುಕ್ಕುಗಟ್ಟಿತ್ತು. ಕೂದಲು ಹಣ್ಣಾದ್ದರಿಂದ ಕುರೂಪಿಗಳಂತೆ ಕಾಣುತ್ತಿದ್ದರು. ಅಶ್ವಿನೀ ಕುಮಾರರು ಅವರನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಿ ಕುಂಡದಲ್ಲಿ ಪ್ರವೇಶಿಸಿದರು. ॥14॥

(ಶ್ಲೋಕ-15)

ಮೂಲಮ್

ಪುರುಷಾಸ್ತ್ರಯ ಉತ್ತಸ್ಥುರಪೀಚ್ಯಾ ವನಿತಾಪ್ರಿಯಾಃ ।
ಪದ್ಮಸ್ರಜಃ ಕುಂಡಲಿನಸ್ತುಲ್ಯರೂಪಾಃ ಸುವಾಸಸಃ ॥

ಅನುವಾದ

ಆ ಸಮಯದಲ್ಲಿ ಕುಂಡದಿಂದ ಮೂವರು ಪುರುಷರು ಹೊರಬಂದರು. ಅವರು ಮೂವರೂ ಕಮಲಗಳ ಮಾಲೆಯನ್ನೂ, ಕುಂಡಲ ಮತ್ತು ಸುಂದರವಾದ ವಸ್ತ್ರಗಳನ್ನು ಧರಿಸಿದ್ದು, ಒಂದೇ ರೀತಿಯಾಗಿ ಕಂಡು ಬರುತ್ತಿದ್ದರು. ಅವರು ಅತೀವ ಸುಂದರರಾಗಿದ್ದು ಸ್ತ್ರೀಯರಿಗೆ ಪ್ರಿಯದರ್ಶನರಾಗಿದ್ದರು. ॥15॥

(ಶ್ಲೋಕ-16)

ಮೂಲಮ್

ತಾನ್ನಿರೀಕ್ಷ್ಯ ವರಾರೋಹಾ ಸರೂಪಾನ್ಸೂರ್ಯವರ್ಚಸಃ ।
ಅಜಾನತೀ ಪತಿಂ ಸಾಧ್ವೀ ಅಶ್ವಿನೌ ಶರಣಂ ಯಯೌ ॥

ಅನುವಾದ

ಪರಮಸಾಧ್ವಿಯಾದ ಸುಂದರಿಯಾದ ಸುಕನ್ಯೆಯು ಈ ಮೂವರೂ ಒಂದೇ ರೂಪವುಳ್ಳವರಾಗಿದ್ದು, ಸೂರ್ಯನಂತೆ ತೇಜಸ್ವಿಗಳಾಗಿರುವುದನ್ನು ನೋಡಿದಾಗ ತನ್ನ ಪತಿಯನ್ನು ಗುರುತಿಸಲಾರದೆ ಅವಳು ಅಶ್ವಿನೀ ಕುಮಾರರನ್ನೇ ಶರಣು ಹೊಂದಿದಳು. ॥16॥

(ಶ್ಲೋಕ-17)

ಮೂಲಮ್

ದರ್ಶಯಿತ್ವಾ ಪತಿಂ ತಸ್ಯೈ ಪಾತಿವ್ರತ್ಯೇನ ತೋಷಿತೌ ।
ಋಷಿಮಾಮಂತ್ರ್ಯ ಯಯತುರ್ವಿಮಾನೇನ ತ್ರಿವಿಷ್ಟಪಮ್ ॥

ಅನುವಾದ

ಅವಳ ಪಾತಿವ್ರತ್ಯದಿಂದ ಅಶ್ವಿನೀಕುಮಾರರು ಪರಮ ಸಂತುಷ್ಟರಾದರು. ಅವರು ಅವಳ ಪತಿಯನ್ನು ತೋರಿಸಿಕೊಟ್ಟು, ಮತ್ತೆ ಚ್ಯವನರಿಂದ ಅನುಮತಿಯನ್ನು ಪಡೆದು ವಿಮಾನದ ಮೂಲಕ ಅವರು ಸ್ವರ್ಗಕ್ಕೆ ಹೊರಟು ಹೋದರು.॥17॥

(ಶ್ಲೋಕ-18)

ಮೂಲಮ್

ಯಕ್ಷ್ಯಮಾಣೋಽಥ ಶರ್ಯಾತಿಶ್ಚ್ಯವನಸ್ಯಾಶ್ರಮಂ ಗತಃ ।
ದದರ್ಶ ದುಹಿತುಃ ಪಾರ್ಶ್ವೇ ಪುರುಷಂ ಸೂರ್ಯವರ್ಚಸಮ್ ॥

ಅನುವಾದ

ಕೆಲಕಾಲದ ನಂತರ ಯಜ್ಞಮಾಡುವ ಇಚ್ಛೆಯಿಂದ ಶರ್ಯಾತಿ ರಾಜನು ಚ್ಯವನಮುನಿಯ ಆಶ್ರಮಕ್ಕೆ ಬಂದನು. ಅಲ್ಲಿ ತನ್ನ ಮಗಳು ಸುಕನ್ಯೆಯ ಬಳಿಯಲ್ಲಿ ಸೂರ್ಯನಂತೆ ತೇಜಸ್ವಿ ಪುರುಷನೊಬ್ಬನು ಕುಳಿತಿರುವುದನ್ನು ಕಂಡನು. ॥18॥

(ಶ್ಲೋಕ-19)

ಮೂಲಮ್

ರಾಜಾ ದುಹಿತರಂ ಪ್ರಾಹ ಕೃತಪಾದಾಭಿವಂದನಾಮ್ ।
ಆಶಿಷಶ್ಚಾಪ್ರಯುಂಜಾನೋ ನಾತಿಪ್ರೀತಮನಾ ಇವ ॥

ಅನುವಾದ

ಸುಕನ್ಯೆಯು ತಂದೆಯ ಚರಣಗಳಿಗೆ ವಂದಿಸಿ ಕೊಂಡಳು. ಶರ್ಯಾತಿಯು ಅವಳಿಗೆ ಆಶೀರ್ವದಿಸದೆ ಸ್ವಲ್ಪ ಅಸಂತೋಷವನ್ನು ವ್ಯಕ್ತಪಡಿಸುತ್ತಾ ಹೇಳಿದನು ॥19॥

(ಶ್ಲೋಕ-20)

ಮೂಲಮ್

ಚಿಕೀರ್ಷಿತಂ ತೇ ಕಿಮಿದಂ ಪತಿಸ್ತ್ವಯಾ
ಪ್ರಲಂಭಿತೋ ಲೋಕನಮಸ್ಕೃತೋ ಮುನಿಃ ।
ಯತ್ತ್ವಂ ಜರಾಗ್ರಸ್ತಮಸತ್ಯಸಮ್ಮತಂ
ವಿಹಾಯ ಜಾರಂ ಭಜಸೇಽಮುಮಧ್ವಗಮ್ ॥

ಅನುವಾದ

ಎಲೈ ದುಷ್ಟಳೇ! ನೀನು ಇದೇನು ಮಾಡಿ ಬಿಟ್ಟೆ? ಲೋಕ ನಮಸ್ಕೃತನಾದ ಚ್ಯವನಮುನಿಯನ್ನು ವಂಚಿಸಿ ಬಿಟ್ಟೆಯಾ? ನೀನು ಖಂಡಿತವಾಗಿ ಇವನು ಮುದುಕನೂ, ನಿಷ್ಪ್ರಯೋಜಕನೂ ಎಂದು ತಿಳಿದು ತ್ಯಜಿಸಿ, ಈ ದಾರಿಹೋಕ ಜಾರ ಪುರುಷನನ್ನು ಸೇವಿಸುತ್ತಿರುವೆಯಲ್ಲ? ॥20॥

(ಶ್ಲೋಕ-21)

ಮೂಲಮ್

ಕಥಂ ಮತಿಸ್ತೇಽವಗತಾನ್ಯಥಾ ಸತಾಂ
ಕುಲಪ್ರಸೂತೇ ಕುಲದೂಷಣಂ ತ್ವಿದಮ್ ।
ಬಿಭರ್ಷಿ ಜಾರಂ ಯದಪತ್ರಪಾ ಕುಲಂ
ಪಿತುಶ್ಚ ಭರ್ತುಶ್ಚ ನಯಸ್ಯಧಸ್ತಮಃ ॥

ಅನುವಾದ

ನೀನು ಶ್ರೇಷ್ಠಕುಲದಲ್ಲಿ ಹುಟ್ಟಿದವಳು. ಇಂತಹ ವಿಪರೀತ ಬುದ್ಧಿಯು ನಿನಗೆ ಹೇಗೆ ಉಂಟಾಯಿತು? ನಿನ್ನ ಈ ವ್ಯವಹಾರವಾದರೋ ಕುಲಕಲಂಕಿತವಾಗಿದೆ. ಅಯ್ಯೋ! ಶಿವ! ಶಿವಾ!! ನೀನು ನಿರ್ಲಜ್ಜಳಾಗಿ ಜಾರ ಪುರುಷನ ಸೇವೆ ಮಾಡುತ್ತಿರುವೆ. ಹೀಗೆ ತಂದೆಯ ಮತ್ತು ಪತಿಯ ಎರಡೂ ವಂಶಗಳನ್ನೂ ಘೋರ ನರಕಕ್ಕೆ ತಳ್ಳಿ ಬಿಟ್ಟಿರುವೆಯಲ್ಲ! ॥21॥

(ಶ್ಲೋಕ-22)

ಮೂಲಮ್

ಏವಂ ಬ್ರುವಾಣಂ ಪಿತರಂ ಸ್ಮಯಮಾನಾ ಶುಚಿಸ್ಮಿತಾ ।
ಉವಾಚ ತಾತ ಜಾಮಾತಾ ತವೈಷ ಭೃಗುನಂದನಃ ॥

ಅನುವಾದ

ಶುಚಿಸ್ಮಿತೆಯಾದ ಸುಕನ್ಯೆಯು ಮುಗುಳ್ನಗುತ್ತಾ ತನ್ನನ್ನು ನಿಂದಿಸುತ್ತಿದ್ದ ತಂದೆ ಶರ್ಯಾತಿಗೆ ಹೇಳಿದಳು ಅಪ್ಪಾ! ಇವರು ನಿಮ್ಮ ಅಳಿಯ ಭೃಗುನಂದನ ಚ್ಯವನ ಮಹರ್ಷಿಗಳೇ ಆಗಿದ್ದಾರೆ.॥22॥

(ಶ್ಲೋಕ-23)

ಮೂಲಮ್

ಶಶಂಸ ಪಿತ್ರೇ ತತ್ಸರ್ವಂ ವಯೋರೂಪಾಭಿಲಂಭನಮ್ ।
ವಿಸ್ಮಿತಃ ಪರಮಪ್ರೀತಸ್ತನಯಾಂ ಪರಿಷಸ್ವಜೇ ॥

ಅನುವಾದ

ಅನಂತರ ಅವಳು ಮಹರ್ಷಿ ಚ್ಯವನರ ಯೌವನ ಮತ್ತು ಸೌಂದರ್ಯವು ದೊರೆತ ಎಲ್ಲ ವೃತ್ತಾಂತವನ್ನು ತಂದೆಯ ಬಳಿಯಲ್ಲಿ ಹೇಳಿದಳು. ಅದೆಲ್ಲವನ್ನೂ ಕೇಳಿ ಶರ್ಯಾತಿರಾಜನಿಗೆ ಅತ್ಯಂತ ವಿಸ್ಮಯವಾಯಿತು. ಅವನು ತುಂಬಾ ಪ್ರೇಮದಿಂದ ತನ್ನ ಮಗಳನ್ನು ಅಪ್ಪಿಕೊಂಡನು.॥23॥

(ಶ್ಲೋಕ-24)

ಮೂಲಮ್

ಸೋಮೇನ ಯಾಜಯನ್ವೀರಂ ಗ್ರಹಂ ಸೋಮಸ್ಯ ಚಾಗ್ರಹೀತ್ ।
ಅಸೋಮಪೋರಪ್ಯಶ್ವಿನೋಶ್ಚ್ಯವನಃ ಸ್ವೇನ ತೇಜಸಾ ॥

ಅನುವಾದ

ಮಹರ್ಷಿ ಚ್ಯವನರು ವೀರಶರ್ಯಾತಿಯಿಂದ ಸೋಮ ಯಜ್ಞದ ಅನುಷ್ಠಾನವನ್ನು ಮಾಡಿಸಿ, ಸೋಮರಸದ ಅಧಿಕಾರಿಗಳಲ್ಲದಿದ್ದರೂ ಅಶ್ವಿನೀಕುಮಾರರಿಗೆ ತನ್ನ ಪ್ರಭಾವದಿಂದ ಸೋಮಪಾನ ಮಾಡಿಸಿದರು.॥24॥

(ಶ್ಲೋಕ-25)

ಮೂಲಮ್

ಹಂತುಂ ತಮಾದದೇ ವಜ್ರಂ ಸದ್ಯೋಮನ್ಯುರಮರ್ಷಿತಃ ।
ಸವಜ್ರಂ ಸ್ತಂಭಯಾಮಾಸ ಭುಜಮಿಂದ್ರಸ್ಯ ಭಾರ್ಗವಃ ॥

ಅನುವಾದ

ಇದನ್ನು ಸಹಿಸಿಕೊಳ್ಳಲಾರದೆ ಇಂದ್ರನು ಪರಮಕ್ರುದ್ಧನಾದನು. ಶರ್ಯಾತಿಯನ್ನು ಕೊಲ್ಲಲಿಕ್ಕಾಗಿ ವಜ್ರಾಯುಧವನ್ನೇ ಮೇಲೆತ್ತಿಕೊಂಡನು. ಮಹರ್ಷಿಚ್ಯವನರು ವಜ್ರದೊಂದಿಗೆ ಅವನ ಕೈಯನ್ನು ಹಾಗೆಯೇ ಸ್ತಂಭಿಸಿಬಿಟ್ಟರು.॥25॥

(ಶ್ಲೋಕ-26)

ಮೂಲಮ್

ಅನ್ವಜಾನಂಸ್ತತಃ ಸರ್ವೇ ಗ್ರಹಂ ಸೋಮಸ್ಯ ಚಾಶ್ವಿನೋಃ ।
ಭಿಷಜಾವಿತಿ ಯತ್ಪೂರ್ವಂ ಸೋಮಾಹುತ್ಯಾ ಬಹಿಷ್ಕೃತೌ ॥

ಅನುವಾದ

ಆಗ ಎಲ್ಲ ದೇವತೆಗಳು ಅಶ್ವಿನೀಕುಮಾರರಿಗೆ ಸೋಮ ಪಾನದ ಪಾಲನ್ನು ಕೊಡಲು ಒಪ್ಪಿಕೊಂಡರು. ವೈದ್ಯರಾಗಿದ್ದ ಕಾರಣ ಮೊದಲು ಅವರು ಸೋಮ ಪಾನದಿಂದ ಬಹಿಷ್ಕೃತರಾಗಿದ್ದರು.॥26॥

(ಶ್ಲೋಕ-27)

ಮೂಲಮ್

ಉತ್ತಾನಬರ್ಹಿರಾನರ್ತೋ ಭೂರಿಷೇಣ ಇತಿ ತ್ರಯಃ ।
ಶರ್ಯಾತೇರಭವನ್ಪುತ್ರಾ ಆನರ್ತಾದ್ ರೇವತೋಽಭವತ್ ॥

ಅನುವಾದ

ಪರೀಕ್ಷಿತನೇ! ಶರ್ಯಾತಿಗೆ ಉತ್ತಾನಬರ್ಹಿ, ಆನರ್ತ ಮತ್ತು ಭೂರಿಷೇಣರೆಂಬ ಮೂವರು ಪುತ್ರರಿದ್ದರು. ಆನರ್ತನಿಗೆ ರೇವತನೆಂಬ ಮಗನಿದ್ದನು.॥27॥

(ಶ್ಲೋಕ-28)

ಮೂಲಮ್

ಸೋಽಂತಃಸಮುದ್ರೇ ನಗರೀಂ ವಿನಿರ್ಮಾಯ ಕುಶಸ್ಥಲೀಮ್ ।
ಆಸ್ಥಿತೋಽಭುಂಕ್ತ ವಿಷಯಾನಾನರ್ತಾದೀನರಿಂದಮ ॥

ಅನುವಾದ

ರಾಜೇಂದ್ರ! ರೇವತನು ಸಮುದ್ರದ ಮಧ್ಯದಲ್ಲಿ ಕುಶಸ್ಥಳೀ ಎಂಬ ಹೆಸರಿನ ಒಂದು ನಗರವನ್ನು ನಿರ್ಮಿಸಿದನು. ಅದರಲ್ಲೇ ವಾಸಿಸುತ್ತಾ ಆನರ್ತ ಮುಂತಾದ ದೇಶಗಳನ್ನು ಆಳುತ್ತಿದ್ದನು. ॥28॥

(ಶ್ಲೋಕ-29)

ಮೂಲಮ್

ತಸ್ಯ ಪುತ್ರಶತಂ ಜಜ್ಞೇ ಕಕುದ್ಮಿಜ್ಯೇಷ್ಠಮುತ್ತಮಮ್ ।
ಕಕುದ್ಮೀ ರೇವತೀಂ ಕನ್ಯಾಂ ಸ್ವಾಮಾದಾಯ ವಿಭುಂ ಗತಃ ॥

(ಶ್ಲೋಕ-30)

ಮೂಲಮ್

ಕನ್ಯಾವರಂ ಪರಿಪ್ರಷ್ಟುಂ ಬ್ರಹ್ಮಲೋಕಮಪಾವೃತಮ್ ।
ಆವರ್ತಮಾನೇ ಗಾಂಧರ್ವೇ ಸ್ಥಿತೋಽಲಬ್ಧಕ್ಷಣಃ ಕ್ಷಣಮ್ ॥

ಅನುವಾದ

ರೇವತನಿಗೆ ನೂರು ಮಂದಿ ಶ್ರೇಷ್ಠ ಮಕ್ಕಳು ಇದ್ದರು. ಅವರಲ್ಲಿ ಹಿರಿಯವನು ಕಕುದ್ಮಿಯಾಗಿದ್ದನು. ಕಕುದ್ಮಿಯು ತನ್ನ ಮಗಳಾದ ರೇವತಿಯನ್ನು ಕರೆದುಕೊಂಡು ಅವಳಿಗೆ ಯೋಗ್ಯನಾದ ವರನ ಕುರಿತು ವಿಚಾರಿಸಲು ಬ್ರಹ್ಮದೇವರ ಬಳಿಗೆ ಹೋದನು. ಆಗಿನ ಕಾಲದಲ್ಲಿ ಬ್ರಹ್ಮಲೋಕದ ರಹದಾರಿಯು ಇಂತಹವರಿಗೆ ಮುಕ್ತವಾಗಿತ್ತು. ಬ್ರಹ್ಮಲೋಕ ದಲ್ಲಿ ಆಗ ಸಂಗೀತ ಉತ್ಸವವು ನಡೆಯುತ್ತಿತ್ತು. ಅದರಿಂದ ಬ್ರಹ್ಮನೊಡನೆ ಮಾತನಾಡಲು ಅವಕಾಶ ಸಿಗಲಿಲ್ಲ; ಸ್ವಲ್ಪ ಹೊತ್ತು ಅಲ್ಲೇ ಕಾಯಬೇಕಾಯಿತು. ॥29-30॥

(ಶ್ಲೋಕ-31)

ಮೂಲಮ್

ತದಂತ ಆದ್ಯಮಾನಮ್ಯ ಸ್ವಾಭಿಪ್ರಾಯಂ ನ್ಯವೇದಯತ್ ।
ತಚ್ಛ್ರುತ್ವಾ ಭಗವಾನ್ಬ್ರಹ್ಮಾ ಪ್ರಹಸ್ಯ ತಮುವಾಚ ಹ ॥

ಅನುವಾದ

ಸಂಗೀತೋತ್ಸವದ ಕೊನೆಯಲ್ಲಿ ಬ್ರಹ್ಮದೇವರಿಗೆ ನಮಸ್ಕರಿಸಿ ಕಕುದ್ಮಿಯು ತನ್ನ ಅಭಿಪ್ರಾಯವನ್ನು ನಿವೇದಿಸಿಕೊಂಡನು. ಅವನ ಮಾತನ್ನು ಕೇಳಿ ಬ್ರಹ್ಮನು ನಕ್ಕು ಅವನಲ್ಲಿ ಹೇಳಿದರು.॥31॥

(ಶ್ಲೋಕ-32)

ಮೂಲಮ್

ಅಹೋ ರಾಜನ್ನಿರುದ್ಧಾಸ್ತೇ ಕಾಲೇನ ಹೃದಿ ಯೇ ಕೃತಾಃ ।
ತತ್ಪುತ್ರಪೌತ್ರನಪ್ತೃಣಾಂ ಗೋತ್ರಾಣಿ ಚ ನ ಶೃಣ್ಮಹೇ ॥

ಅನುವಾದ

‘ಮಹಾರಾಜನೇ! ನೀನು ಮನಸ್ಸಿನಲ್ಲಿ ಯಾವ ರಾಜಕುಮಾರರ ಕುರಿತು ಯೋಚಿಸಿದ್ದಿಯೋ ಅವರೆಲ್ಲರೂ ಕಾಲವಶರಾಗಿರುವರು. ಈಗ ಅವರ ಮಕ್ಕಳು, ಮೊಮ್ಮಕ್ಕಳು ಅಥವಾ ಸಂಬಂಧಿಗಳೇ ಏನು, ಆ ಗೋತ್ರದ ಹೆಸರೂ ಕೂಡ ಈಗ ಕೇಳುವಂತಿಲ್ಲ.॥32॥

(ಶ್ಲೋಕ-33)

ಮೂಲಮ್

ಕಾಲೋಽಭಿಯಾತಸ್ತ್ರಿಣವಚತುರ್ಯುಗವಿಕಲ್ಪಿತಃ ।
ತದ್ಗಚ್ಛ ದೇವದೇವಾಂಶೋ ಬಲದೇವೋ ಮಹಾಬಲಃ ॥

ಅನುವಾದ

ಇಷ್ಟರೊಳಗೆ ಇಪ್ಪತ್ತೇಳು ಚತುರ್ಯುಗಗಳ ಸಮಯವು ಕಳೆದುಹೋಗಿದೆ. ಅದಕ್ಕಾಗಿ ನೀನು ಭೂಲೋಕಕ್ಕೆ ಹೋಗು. ಈಗ ಭಗವಾನ್ ನಾರಾಯಣನ ಅಂಶಾವತಾರ ಮಹಾಬಲಾಢ್ಯನಾದ ಬಲರಾಮದೇವನು ಆಳುತ್ತಿದ್ದಾನೆ. ॥33॥

(ಶ್ಲೋಕ-34)

ಮೂಲಮ್

ಕನ್ಯಾರತ್ನಮಿದಂ ರಾಜನ್ ನರರತ್ನಾಯ ದೇಹಿ ಭೋಃ ।
ಭುವೋ ಭಾರಾವತಾರಾಯ ಭಗವಾನ್ಭೂತಭಾವನಃ ॥

(ಶ್ಲೋಕ-35)

ಮೂಲಮ್

ಅವತೀರ್ಣೋ ನಿಜಾಂಶೇನ ಪುಣ್ಯಶ್ರವಣಕೀರ್ತನಃ ।
ಇತ್ಯಾದಿಷ್ಟೋಽಭಿವಂದ್ಯಾಜಂ ನೃಪಃ ಸ್ವಪುರಮಾಗತಃ ।
ತ್ಯಕ್ತಂ ಪುಣ್ಯಜನತ್ರಾಸಾದ್ ಭ್ರಾತೃಭಿರ್ದಿಕ್ಷ್ವವಸ್ಥಿತೈಃ ॥

ಅನುವಾದ

ರಾಜನೇ! ಈ ಕನ್ಯಾರತ್ನವನ್ನು ಆ ನರಶ್ರೇಷ್ಠನಾದ ಬಲರಾಮನಿಗೆ ಸಮರ್ಪಿಸಿಬಿಡು. ಅವನ ನಾಮ, ಲೀಲಾದಿಗಳು, ಶ್ರವಣ-ಕೀರ್ತನಗಳು ಬಹಳ ಪವಿತ್ರವಾದವುಗಳು. ಪ್ರಾಣಿಗಳ ಜೀವನ ಸರ್ವಸ್ವನಾದ ಆ ಭಗವಂತನೇ ಭೂಭಾರವನ್ನು ಇಳುಹಲೋಸುಗ ತನ್ನ ಅಂಶದಿಂದ ಅವತರಿ ಸಿರುವನು.’ ಕಕುದ್ಮಿ ಮಹಾರಾಜನು ಬ್ರಹ್ಮದೇವರ ಅಪ್ಪಣೆಯನ್ನು ಪಡೆದು, ಅವನ ಚರಣಗಳಿಗೆ ವಂದಿಸಿ ತನ್ನ ಊರಿಗೆ ಮರಳಿದನು. ಅವನ ವಂಶಜರು ಯಕ್ಷರ ಭಯದಿಂದ ಆ ನಗರವನ್ನು ಬಿಟ್ಟು ಅಲ್ಲಲ್ಲಿ ವಾಸಮಾಡುತ್ತಿದ್ದಾರೆ. ॥34-35॥

(ಶ್ಲೋಕ-36)

ಮೂಲಮ್

ಸುತಾಂ ದತ್ತ್ವಾನವದ್ಯಾಂಗೀಂ ಬಲಾಯ ಬಲಶಾಲಿನೇ ।
ಬದರ್ಯಾಖ್ಯಂ ಗತೋ ರಾಜಾ ತಪ್ತುಂ ನಾರಾಯಣಾಶ್ರಮಮ್ ॥

ಅನುವಾದ

ರಾಜಾಕಕುದ್ಮಿಯು ಸರ್ವಾಂಗ ಸುಂದರಿಯಾದ ತನ್ನ ಮಗಳನ್ನು ಮಹಾ ಬಲಶಾಲಿಯಾದ ಬಲರಾಮದೇವನಿಗೆ ವಿವಾಹಮಾಡಿ ಕೊಟ್ಟು, ತಾನು ತಪಸ್ಸಿಗಾಗಿ ಭಗವಾನ್ ನರ-ನಾರಾಯಣರ ಬದರಿಕಾಶ್ರಮಕ್ಕೆ ತೆರಳಿದನು.॥36॥

ಅನುವಾದ (ಸಮಾಪ್ತಿಃ)

ಮೂರನೆಯ ಅಧ್ಯಾಯವು ಮುಗಿಯಿತು. ॥3॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ತೃತೀಯೋಽಧ್ಯಾಯಃ ॥3॥