೦೧

[ಮೊದಲನೆಯ ಅಧ್ಯಾಯ]

ಭಾಗಸೂಚನಾ

ವೈವಸ್ವತ ಮನುವಿನ ಪುತ್ರ ಸುದ್ಯುಮ್ನರಾಜನ ಕಥೆ

(ಶ್ಲೋಕ-1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಮನ್ವಂತರಾಣಿ ಸರ್ವಾಣಿ ತ್ವಯೋಕ್ತಾನಿ ಶ್ರುತಾನಿ ಮೇ ।
ವೀರ್ಯಾಣ್ಯನಂತವೀರ್ಯಸ್ಯ ಹರೇಸ್ತತ್ರ ಕೃತಾನಿ ಚ ॥

ಅನುವಾದ

ಪರೀಕ್ಷಿತ ಮಹಾರಾಜನು ಕೇಳಿದನು — ಪೂಜ್ಯರೇ! ತಾವು ಇದುವರೆಗೆ ವರ್ಣಿಸಿದ ಎಲ್ಲ ಮನ್ವಂತರಗಳ ಮತ್ತು ಅವುಗಳಲ್ಲಿ ನಡೆದ ಅನಂತವೀರ್ಯನಾದ, ಅಪ್ರಮೇಯನಾದ ಶ್ರೀಹರಿಯ ಐಶ್ವರ್ಯಪೂರ್ಣ ಚರಿತ್ರೆಗಳನ್ನು ನಾನು ಶ್ರವಣಿಸಿ ಧನ್ಯನಾಗಿರುವೆನು. ॥1॥

(ಶ್ಲೋಕ-2)

ಮೂಲಮ್

ಯೋಽಸೌ ಸತ್ಯವ್ರತೋ ನಾಮ ರಾಜರ್ಷಿರ್ದ್ರವಿಡೇಶ್ವರಃ ।
ಜ್ಞಾನಂ ಯೋಽತೀತಕಲ್ಪಾಂತೇ ಲೇಭೇ ಪುರುಷಸೇವಯಾ ॥

(ಶ್ಲೋಕ-3)

ಮೂಲಮ್

ಸ ವೈ ವಿವಸ್ವತಃ ಪುತ್ರೋ ಮನುರಾಸೀದಿತಿ ಶ್ರುತಮ್ ।
ತ್ವತ್ತಸ್ತಸ್ಯ ಸುತಾಶ್ಚೋಕ್ತಾ ಇಕ್ಷ್ವಾಕುಪ್ರಮುಖಾ ನೃಪಾಃ ॥

ಅನುವಾದ

ಹಿಂದಿನ ಕಲ್ಪಾಂತ್ಯದಲ್ಲಿ ದ್ರವಿಡದೇಶದ ಅರಸನಾದ ರಾಜರ್ಷಿ ಸತ್ಯವ್ರತನು ಭಗವಂತನ ಸೇವೆಯಿಂದ ಜ್ಞಾನಪಡೆದು, ಅವನೇ ಈ ಮನ್ವಂತರದಲ್ಲಿ ವೈವಸ್ವತ ಮನುವಾದನು ಎಂದು ನೀವು ಹೇಳಿದಿರಿ. ಹಾಗೆಯೇ ಅವನ ಇಕ್ಷ್ವಾಕು ಮೊದಲಾದ ರಾಜಪುತ್ರರ ಪರಿಚಯವನ್ನು ವರ್ಣಿಸಿದಿರಿ. ॥2-3॥

(ಶ್ಲೋಕ-4)

ಮೂಲಮ್

ತೇಷಾಂ ವಂಶಂ ಪೃಥಗ್ಬ್ರಹ್ಮನ್ವಂಶ್ಯಾನುಚರಿತಾನಿ ಚ ।
ಕೀರ್ತಯಸ್ವ ಮಹಾಭಾಗ ನಿತ್ಯಂ ಶುಶ್ರೂಷತಾಂ ಹಿ ನಃ ॥

ಅನುವಾದ

ಬ್ರಾಹ್ಮಣಶ್ರೇಷ್ಠರೇ! ಈಗ ದಯಮಾಡಿ ಅವರ ವಂಶ ಮತ್ತು ವಂಶದಲ್ಲಿ ನಡೆದ ಬೇರೆ-ಬೇರೆ ಚರಿತ್ರೆಗಳನ್ನೂ ತಾವು ವರ್ಣಿಸಿರಿ. ಮಹಾನುಭಾವರೇ! ನಮ್ಮ ಹೃದಯದಲ್ಲಿ ಸದಾ ಕಾಲವೂ ಕಥೆಯನ್ನು ಕೇಳುವ ಉತ್ಸುಕತೆ ಇದೆ. ॥4॥

(ಶ್ಲೋಕ-5)

ಮೂಲಮ್

ಯೇ ಭೂತಾ ಯೇ ಭವಿಷ್ಯಾಶ್ಚ ಭವಂತ್ಯದ್ಯತನಾಶ್ಚ ಯೇ ।
ತೇಷಾಂ ನಃ ಪುಣ್ಯಕೀರ್ತೀನಾಂ ಸರ್ವೇಷಾಂ ವದ ವಿಕ್ರಮಾನ್ ॥

ಅನುವಾದ

ವೈವಸ್ವತ ಮನುವಿನ ವಂಶದಲ್ಲಿ ಇದುವರೆಗೆ ಎಷ್ಟುಮಂದಿ ರಾಜರು ಆಗಿ ಹೋದರು? ಈಗ ಯಾವ ರಾಜರು ಆಳುತ್ತಿದ್ದಾರೆ? ಮುಂದೆ ಯಾರು-ಯಾರು ಆಗುವರು? ಆ ಎಲ್ಲ ಪುಣ್ಯಕೀರ್ತಿಗಳಾದ ಪುರುಷರ ಪರಾಕ್ರಮವನ್ನು ವರ್ಣಿಸಿರಿ. ॥5॥

(ಶ್ಲೋಕ-6)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಏವಂ ಪರೀಕ್ಷಿತಾ ರಾಜ್ಞಾ ಸದಸಿ ಬ್ರಹ್ಮವಾದಿನಾಮ್ ।
ಪೃಷ್ಟಃ ಪ್ರೋವಾಚ ಭಗವಾಞ್ಛುಕಃ ಪರಮಧರ್ಮವಿತ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿ ಋಷಿಗಳಿರಾ! ಪರೀಕ್ಷಿದ್ರಾಜನು ಬ್ರಹ್ಮವಾದಿಗಳ ಸಭೆಯಲ್ಲಿ ಹೀಗೆ ಪ್ರಶ್ನಿಸಿದಾಗ ಧರ್ಮದ ಪರಮ ಮರ್ಮಜ್ಞರಾದ, ಮಹಾತ್ಮರಾದ ಶ್ರೀಶುಕಮಹಾಮುನಿಗಳು ಇಂತು ಹೇಳತೊಡಗಿದರು. ॥6॥

(ಶ್ಲೋಕ-7)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಶ್ರೂಯತಾಂ ಮಾನವೋ ವಂಶಃ ಪ್ರಾಚುರ್ಯೇಣ ಪರಂತಪ ।
ನ ಶಕ್ಯತೇ ವಿಸ್ತರತೋ ವಕ್ತುಂ ವರ್ಷಶತೈರಪಿ ॥

ಅನುವಾದ

ಶ್ರೀಶುಕಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಮನುವಂಶದ ವರ್ಣನೆಯನ್ನು ಸಂಕ್ಷೇಪವಾಗಿ ಹೇಳುವೆನು ಕೇಳು. ವಿಸ್ತಾರವಾಗಿ ವರ್ಣಿಸಲು ನೂರಾರು ವರ್ಷಗಳೂ ಸಾಕಾಗಲಾರವು. ॥7॥

(ಶ್ಲೋಕ-8)

ಮೂಲಮ್

ಪರಾವರೇಷಾಂ ಭೂತಾನಾಮಾತ್ಮಾ ಯಃ ಪುರುಷಃ ಪರಃ ।
ಸ ಏವಾಸೀದಿದಂ ವಿಶ್ವಂ ಕಲ್ಪಾಂತೇಽನ್ಯನ್ನ ಕಿಂಚನ ॥

ಅನುವಾದ

ಪರಮಪುರುಷ ಪರಮಾತ್ಮನು ಸ್ಥೂಲ-ಸೂಕ್ಷ್ಮ ಪ್ರಾಣಿಗಳೆಲ್ಲರ ಆತ್ಮನಾಗಿರುವನು. ಪ್ರಳಯ ಕಾಲದಲ್ಲಿ ಕೇವಲ ಅವನೊಬ್ಬನೇ ಇದ್ದನು. ಈ ವಿಶ್ವವು ಹಾಗೂ ಬೇರೆ ಏನೂ ಇರಲಿಲ್ಲ. ॥8॥

(ಶ್ಲೋಕ-9)

ಮೂಲಮ್

ತಸ್ಯ ನಾಭೇಃ ಸಮಭವತ್ಪದ್ಮಕೋಶೋ ಹಿರಣ್ಮಯಃ ।
ತಸ್ಮಿಞ್ಜಜ್ಞೇ ಮಹಾರಾಜ ಸ್ವಯಂಭೂಶ್ಚತುರಾನನಃ ॥

ಅನುವಾದ

ಮಹಾರಾಜಾ! ಅಂತಹ ಪರಮಪುರುಷನ ನಾಭಿಯಲ್ಲಿ ಸುವರ್ಣಮಯವಾದ ಕಮಲವೊಂದು ಪ್ರಕಟವಾಯಿತು. ಅದರಲ್ಲೇ ಚತು ರ್ಮುಖರಾದ ಬ್ರಹ್ಮದೇವರು ಆವಿರ್ಭವಿಸಿದರು. ॥9॥

(ಶ್ಲೋಕ-10)

ಮೂಲಮ್

ಮರೀಚಿರ್ಮನಸಸ್ತಸ್ಯ ಜಜ್ಞೇ ತಸ್ಯಾಪಿ ಕಶ್ಯಪಃ ।
ದಾಕ್ಷಾಯಣ್ಯಾಂ ತತೋಽದಿತ್ಯಾಂ ವಿವಸ್ವಾನಭವತ್ಸುತಃ ॥

ಅನುವಾದ

ಬ್ರಹ್ಮದೇವರ ಮನಸ್ಸಿನಿಂದ ಮರೀಚಿ ಮತ್ತು ಮರೀಚಿಯ ಪುತ್ರ ಕಶ್ಯಪರು ಹುಟ್ಟಿದರು. ಅವರ ಧರ್ಮಪತ್ನೀ ದಕ್ಷಕುಮಾರೀ ಅದಿತಿಯಲ್ಲಿ ವಿವಸ್ವಂತನು (ಸೂರ್ಯನು) ಜನ್ಮ ತಾಳಿದನು. ॥10॥

(ಶ್ಲೋಕ-11)

ಮೂಲಮ್

ತತೋ ಮನುಃ ಶ್ರಾದ್ಧದೇವಃ ಸಂಜ್ಞಾಯಾಮಾಸ ಭಾರತ ।
ಶ್ರದ್ಧಾಯಾಂ ಜನಯಾಮಾಸ ದಶ ಪುತ್ರಾನ್ಸ ಆತ್ಮವಾನ್ ॥

(ಶ್ಲೋಕ-12)

ಮೂಲಮ್

ಇಕ್ಷ್ವಾಕುನೃಗಶರ್ಯಾತಿದಿಷ್ಟಧೃಷ್ಟಕರೂಷಕಾನ್ ।
ನರಿಷ್ಯಂತಂ ಪೃಷಧ್ರಂ ಚ ನಭಗಂ ಚ ಕವಿಂ ವಿಭುಃ ॥

ಅನುವಾದ

ವಿವಸ್ವಂತನ ಪತ್ನಿಯಾದ ಸಂಜ್ಞೆ ಎಂಬುವಳಲ್ಲಿ ಶ್ರಾದ್ಧದೇವ ಮನುವು ಹುಟ್ಟಿದನು. ಪರೀಕ್ಷಿತನೇ! ಆತ್ಮಜ್ಞಾನಿಯಾದ ಶ್ರಾದ್ಧದೇವನ ಪತ್ನಿಯಾದ ಶ್ರದ್ಧೆಯಲ್ಲಿ ಇಕ್ಷ್ವಾಕು, ನೃಗ, ಶರ್ಯಾತಿ, ದಿಷ್ಟ, ಧೃಷ್ಟ, ಕರೂಷ, ನರಿಷ್ಯಂತ, ಪೃಷಧ್ರ, ನಭಗ ಮತ್ತು ಕವಿ ಎಂಬ ಹತ್ತು ಪುತ್ರರು ಉದಿಸಿದರು.॥11-12॥

(ಶ್ಲೋಕ-13)

ಮೂಲಮ್

ಅಪ್ರಜಸ್ಯ ಮನೋಃ ಪೂರ್ವಂ ವಸಿಷ್ಠೋ ಭಗವಾನ್ಕಿಲ ।
ಮಿತ್ರಾವರುಣಯೋರಿಷ್ಟಿಂ ಪ್ರಜಾರ್ಥಮಕರೋತ್ಪ್ರಭುಃ ॥

ಅನುವಾದ

ವೈವಸ್ವತ ಮನುವಿಗೆ ಮೊದಲು ಮಕ್ಕಳಿರಲಿಲ್ಲ. ಆ ಸಮಯದಲ್ಲಿ ಸರ್ವಸಮರ್ಥರಾದ ಪೂಜ್ಯರಾದ ವಸಿಷ್ಠರು ಸಂತಾನ ಪ್ರಾಪ್ತಿಗಾಗಿ ವೈವಸ್ವತಮನುವಿನಿಂದ ಮೈತ್ರಾವರುಣೇಷ್ಟಿಯನ್ನು ಮಾಡಿಸಿದರು. ॥13॥

(ಶ್ಲೋಕ-14)

ಮೂಲಮ್

ತತ್ರ ಶ್ರದ್ಧಾ ಮನೋಃ ಪತ್ನೀ ಹೋತಾರಂ ಸಮಯಾಚತ ।
ದುಹಿತ್ರರ್ಥಮುಪಾಗಮ್ಯ ಪ್ರಣಿಪತ್ಯ ಪಯೋವ್ರತಾ ॥

ಅನುವಾದ

ಯಜ್ಞಾನುಷ್ಠಾನದಲ್ಲಿ ಪಯೋವ್ರತಳಾಗಿದ್ದ (ಕೇವಲ ಹಾಲನ್ನು ಮಾತ್ರ ಕುಡಿಯುತ್ತಿದ್ದ) ವೈವಸ್ವತ ಮನುವಿನ ಧರ್ಮಪತ್ನಿಯಾದ ಶ್ರದ್ಧಾದೇವಿಯು ಹೋತೃವಿನ ಬಳಿಗೆ ಹೋಗಿ ವಿನಯಪೂರ್ವಕವಾಗಿ ನಮಸ್ಕರಿಸಿ, ತನಗೆ ಹೆಣ್ಣುಶಿಶುವು ಹುಟ್ಟುವಂತೆ ಬೇಡಿಕೊಂಡಳು. ॥14॥

(ಶ್ಲೋಕ-15)

ಮೂಲಮ್

ಪ್ರೇಷಿತೋಽಧ್ವರ್ಯುಣಾ ಹೋತಾ ಧ್ಯಾಯಂಸ್ತತ್ಸು ಸಮಾಹಿತಃ ।
ಹವಿಷಿ ವ್ಯಚರತ್ತೇನ ವಷಟ್ಕಾರಂ ಗೃಣನ್ದ್ವಿಜಃ ॥

ಅನುವಾದ

ಆಗ ಅಧ್ವರ್ಯುವಿನ ಪ್ರೇರಣೆಯಂತೆ ಯಜ್ಞಕುಂಡದಲ್ಲಿ ಆಹುತಿಯನ್ನು ಹಾಕಬೇಕಾದ ಸಮಯದಲ್ಲಿ ಶ್ರದ್ಧಾದೇವಿಯ ಪ್ರಾರ್ಥನೆಯನ್ನು ಸ್ಮರಿಸಿ ಹೆಣ್ಣುಶಿಶುವಾಗ ಬೇಕೆಂದು ಸಂಕಲ್ಪಿಸಿ ವಷಟ್ಕಾರವನ್ನು ಹೇಳುತ್ತಾ ಯಜ್ಞೇಶ್ವರನಲ್ಲಿ ಹವಿಸ್ಸನ್ನು ಹೋಮ ಮಾಡಿದನು. ॥15॥

(ಶ್ಲೋಕ-16)

ಮೂಲಮ್

ಹೋತುಸ್ತದ್ ವ್ಯಭಿಚಾರೇಣ ಕನ್ಯೇಲಾ ನಾಮ ಸಾಭವತ್ ।
ತಾಂ ವಿಲೋಕ್ಯ ಮನುಃ ಪ್ರಾಹ ನಾತಿಹೃಷ್ಟಮನಾ ಗುರುಮ್ ॥

ಅನುವಾದ

ಹೋತೃವು ಹೀಗೆ ವಿಪರೀತ ಕರ್ಮವಾಚರಿಸಿದಾಗ ಯಜ್ಞದ ಫಲವಾಗಿ ಪುತ್ರನ ಸ್ಥಾನದಲ್ಲಿ ಇಲಾ ಎಂಬ ಹೆಸರಿನ ಕನ್ಯೆಯು ಹುಟ್ಟಿದಳು. ಅದನ್ನು ನೋಡಿ ವೈವಸ್ವತ ಮನುವಿಗೆ ಅಷ್ಟೊಂದು ಸಂತೋಷವಾಗಲಿಲ್ಲ. ಅವನು ತಮ್ಮ ಗುರುಗಳಾದ ವಸಿಷ್ಠರಲ್ಲಿ ಹೇಳಿದನು ॥16॥

(ಶ್ಲೋಕ-17)

ಮೂಲಮ್

ಭಗವನ್ ಕಿಮಿದಂ ಜಾತಂ ಕರ್ಮ ವೋ ಬ್ರಹ್ಮವಾದಿನಾಮ್ ।
ವಿಪರ್ಯಯಮಹೋ ಕಷ್ಟಂ ಮೈವಂ ಸ್ಯಾದ್ಬ್ರಹ್ಮವಿಕ್ರಿಯಾ ॥

ಅನುವಾದ

ಪೂಜ್ಯರೇ! ನೀವಾದರೋ ಬ್ರಹ್ಮವಾದಿಗಳಾಗಿದ್ದೀರಿ. ನಿಮ್ಮ ಕರ್ಮವು ಈ ಪ್ರಕಾರ ವಿಪರೀತ ಫಲಕೊಡುವಂತಹುದು ಹೇಗಾಯಿತು? ಕಷ್ಟ! ಕಷ್ಟ! ಇದು ಬಹಳ ದುಃಖದ ವಿಚಾರವಾಗಿದೆ. ವೈದಿಕ ಕರ್ಮದ ಫಲವಾದರೋ ಹೀಗೆ ವಿಪರೀತ ಎಂದಿಗೂ ಆಗಬಾರದು. ॥17॥

(ಶ್ಲೋಕ-18)

ಮೂಲಮ್

ಯೂಯಂ ಮಂತ್ರವಿದೋ ಯುಕ್ತಾಸ್ತಪಸಾ ದಗ್ಧಕಿಲ್ಬಿಷಾಃ ।
ಕುತಃ ಸಂಕಲ್ಪ ವೈಷಮ್ಯಮನೃತಂ ವಿಬುಧೇಷ್ವಿವ ॥

ಅನುವಾದ

ನಿಮ್ಮಗಳ ಮಂತ್ರಜ್ಞಾನವಾದರೋ ಪರಿಪೂರ್ಣವಾಗಿದೆ. ಇದಲ್ಲದೆ ತಾವು ಜಿತೇಂದ್ರಿಯರೂ ಆಗಿರುವಿರಿ. ತಪಸ್ಸಿನಿಂದಾಗಿ ನಿಃಷ್ಪಾಪರೂ ಆಗಿಬಿಟ್ಟಿದ್ದೀರಿ. ದೇವತೆಗಳಲ್ಲಿ ಸುಳ್ಳಿರುವಂತೆ (ದೇವತೆಗಳು ಕೊಟ್ಟ ವರವು ಸುಳ್ಳಾದಂತೆ) ನಿಮ್ಮ ಸಂಕಲ್ಪಕ್ಕೆ ವಿರುದ್ಧವಾದ ಫಲ ಹೇಗಾಯಿತು? ॥18॥

(ಶ್ಲೋಕ-19)

ಮೂಲಮ್

ತನ್ನಿಶಮ್ಯ ವಚಸ್ತಸ್ಯ ಭಗವಾನ್ ಪ್ರಪಿತಾಮಹಃ ।
ಹೋತುರ್ವ್ಯತಿಕ್ರಮಂ ಜ್ಞಾತ್ವಾ ಬಭಾಷೇ ರವಿನಂದನಮ್ ॥

ಅನುವಾದ

ಪರೀಕ್ಷಿತನೇ! ನಮ್ಮ ಮುತ್ತಾತಂದಿರಾದ ಪೂಜ್ಯರಾದ ವಸಿಷ್ಠರು ರಾಜನ ಮಾತನ್ನು ಕೇಳಿ, ಹೋತೃವು ವಿಪರೀತ ಸಂಕಲ್ಪವನ್ನು ಮಾಡಿದ್ದನು ಎಂದು ತಿಳಿದುಕೊಂಡರು. ಇದರಿಂದ ಅವರು ವೈವಸ್ವತ ಮನುವಿಗೆ ಹೇಳಿದರು.॥19॥

(ಶ್ಲೋಕ-20)

ಮೂಲಮ್

ಏತತ್ಸಂಕಲ್ಪವೈಷಮ್ಯಂ ಹೋತುಸ್ತೇ ವ್ಯಭಿಚಾರತಃ ।
ತಥಾಪಿ ಸಾಧಯಿಷ್ಯೇ ತೇ ಸುಪ್ರಜಾಸ್ತ್ವಂ ಸ್ವತೇಜಸಾ ॥

ಅನುವಾದ

ಮಹಾರಾಜನೇ! ನಿನ್ನ ಹೋತೃವಿನ ವಿಪರೀತ ಸಂಕಲ್ಪದಿಂದಾಗಿ ನಮ್ಮ ಸಂಕಲ್ಪವು ಸರಿಯಾಗಿ ನೆರವೇರಲಿಲ್ಲ. ಹೀಗಿದ್ದರೂ ನನ್ನ ತಪಃಪ್ರಭಾವದಿಂದ ನಾನು ನಿನಗೆ ಶ್ರೇಷ್ಠಪುತ್ರನನ್ನು ಕರುಣಿಸುತ್ತೇನೆ. ॥20॥

(ಶ್ಲೋಕ-21)

ಮೂಲಮ್

ಏವಂ ವ್ಯವಸಿತೋ ರಾಜನ್ ಭಗವಾನ್ಸ ಮಹಾಯಶಾಃ ।
ಅಸ್ತೌಷೀದಾದಿಪುರುಷಮಿಲಾಯಾಃ ಪುಂಸ್ತ್ವಕಾಮ್ಯಯಾ ॥

ಅನುವಾದ

ಪರೀಕ್ಷಿದ್ರಾಜನೇ! ಪರಮ ಯಶಸ್ವಿಗಳಾದ ಮಹಾತ್ಮಾ ವಸಿಷ್ಠರು ಮನುವಿಗೆ ಹೀಗೆ ಆಶ್ವಾಸನೆಯನ್ನಿತ್ತು ಇಲಾ ಎಂಬ ಕನ್ಯೆಯನ್ನು ಪುರುಷನನ್ನಾಗಿಸಲು ಪುರುಷೋತ್ತಮನಾದ ಭಗವಾನ್ ಶ್ರೀಹರಿಯನ್ನು ಸ್ತುತಿ ಮಾಡಿದನು.॥21॥

(ಶ್ಲೋಕ-22)

ಮೂಲಮ್

ತಸ್ಮೈ ಕಾಮವರಂ ತುಷ್ಟೋ ಭಗವಾನ್ಹರಿರೀಶ್ವರಃ ।
ದದಾವಿಲಾಭವತ್ತೇನ ಸುದ್ಯುಮ್ನಃ ಪುರುಷರ್ಷಭಃ ॥

ಅನುವಾದ

ಸರ್ವ ಶಕ್ತಿವಂತನಾದ ಭಗವಾನ್ ಶ್ರೀಹರಿಯು ಸಂತುಷ್ಟನಾಗಿ ಅವರಿಗೆ ಬೇಡಿದ ವರವನ್ನು ದಯಪಾಲಿಸಿದನು. ವರಪ್ರಭಾವದಿಂದ ಆ ಇಲಾಕನ್ಯೆಯೇ ಪುರುಷತ್ವವನ್ನು ಪಡೆದು ಸುದ್ಯುಮ್ನನೆಂಬ ಹೆಸರಿನಿಂದ ಪ್ರಸಿದ್ಧನಾದನು.॥22॥

ಮೂಲಮ್

(ಶ್ಲೋಕ-23)

ಮೂಲಮ್

ಸ ಏಕದಾ ಮಹಾರಾಜ ವಿಚರನ್ಮೃಗಯಾಂ ವನೇ ।
ವೃತಃ ಕತಿಪಯಾಮಾತ್ಯೈರಶ್ವಮಾರುಹ್ಯ ಸೈಂಧವಮ್ ॥

ಅನುವಾದ

ರಾಜೇಂದ್ರಾ! ಒಮ್ಮೆ ಸುದ್ಯುಮ್ನರಾಜನು ಸಿಂಧು ದೇಶದ ಕುದುರೆಯನ್ನೇರಿ ಕೆಲವು ಮಂತ್ರಿಗಳೊಂದಿಗೆ ಬೇಟೆಯಾಡಲು ಕಾಡಿಗೆ ಹೋದನು. ॥23॥

(ಶ್ಲೋಕ-24)

ಮೂಲಮ್

ಪ್ರಗೃಹ್ಯ ರುಚಿರಂ ಚಾಪಂ ಶರಾಂಶ್ಚ ಪರಮಾದ್ಭುತಾನ್ ।
ದಂಶಿತೋಽನುಮೃಗಂ ವೀರೋ ಜಗಾಮ ದಿಶಮುತ್ತರಾಮ್ ॥

ಅನುವಾದ

ಸುಂದರವಾದ ಧನುಸ್ಸನ್ನೂ, ಪರಮಾದ್ಭುತವಾದ ಬಾಣಗಳನ್ನೂ ಹಿಡಿದುಕೊಂಡು, ಕವಚವನ್ನೂ ಧರಿಸಿದ್ದ ವೀರನಾದ ಸುದ್ಯುಮ್ನನು ಜಿಂಕೆಯೊಂದನ್ನು ಹಿಂಬಾಲಿಸುತ್ತಾ ಉತ್ತರದಿಕ್ಕಿನ ಕಡೆಗೆ ಬಹುದೂರ ಹೋದನು. ॥24॥

(ಶ್ಲೋಕ-25)

ಮೂಲಮ್

ಸ ಕುಮಾರೋ ವನಂ ಮೇರೋರಧಸ್ತಾತ್ಪ್ರವಿವೇಶ ಹ ।
ಯತ್ರಾಸ್ತೇ ಭಗವಾಞ್ಛರ್ವೋ ರಮಮಾಣಃ ಸಹೋಮಯಾ ॥

ಅನುವಾದ

ಕೊನೆಗೆ ಸುದ್ಯುಮ್ನನು ಮೇರುಪರ್ವತದ ತಪ್ಪಲಿನ ಒಂದು ವನವನ್ನು ಪ್ರವೇಶಿಸಿದನು. ಆ ವನದಲ್ಲಿ ಭಗವಂತನಾದ ಶಂಕರನು ಪಾರ್ವತಿಯೊಂದಿಗೆ ವಿಹರಿಸುತ್ತಿದ್ದನು. ॥25॥

(ಶ್ಲೋಕ-26)

ಮೂಲಮ್

ತಸ್ಮಿನ್ಪ್ರವಿಷ್ಟ ಏವಾಸೌ ಸುದ್ಯುಮ್ನಃ ಪರವೀರಹಾ ।
ಅಪಶ್ಯತ್ ಸ್ತ್ರಿಯಮಾತ್ಮಾನಮಶ್ವಂ ಚ ವಡವಾಂ ನೃಪ ॥

ಅನುವಾದ

ಆ ವನವನ್ನು ಪ್ರವೇಶಿಸುತ್ತಲೇ ಪರಮವೀರನಾದ ಸುದ್ಯುಮ್ನನು ತಾನು ಹೆಣ್ಣಾಗಿರುವುದನ್ನು ಕಂಡುಕೊಂಡನು. ಅವನ ಕುದುರೆಯೂ ಹೆಣ್ಣುಕುದುರೆಯಾಗಿ ಹೋಗಿತ್ತು. ॥26॥

(ಶ್ಲೋಕ-27)

ಮೂಲಮ್

ತಥಾ ತದನುಗಾಃ ಸರ್ವೇ ಆತ್ಮಲಿಂಗವಿಪರ್ಯಯಮ್ ।
ದೃಷ್ಟ್ವಾ ವಿಮನಸೋಽಭೂವನ್ವೀಕ್ಷಮಾಣಾಃ ಪರಸ್ಪರಮ್ ॥

ಅನುವಾದ

ಪರೀಕ್ಷಿತನೇ! ಜೊತೆಗೆ ಅವನ ಅನುಚರರೆಲ್ಲರೂ ತಾವು ಹೆಣ್ಣಾಗಿ ಹೋಗಿರುವುದನ್ನು ಕಂಡರು. ಅವರೆಲ್ಲರೂ ಪರಸ್ಪರ ಮುಖಗಳನ್ನೂ ನೋಡಿಕೊಳ್ಳುತ್ತಾ ಅವರೆಲ್ಲರ ಮನಸ್ಸಿಗೆ ಬೇಸರವಾಯಿತು. ॥27॥

(ಶ್ಲೋಕ-28)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಕಥಮೇವಂಗುಣೋ ದೇಶಃ ಕೇನ ವಾ ಭಗವನ್ಕೃತಃ ।
ಪ್ರಶ್ನಮೇನಂ ಸಮಾಚಕ್ಷ್ವ ಪರಂ ಕೌತೂಹಲಂ ಹಿ ನಃ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಮಹಾತ್ಮರೇ! ಆ ಭೂಖಂಡದಲ್ಲಿ ಇಂತಹ ವಿಚಿತ್ರಗುಣ ಹೇಗೆ ಬಂತು? ಯಾರು ಅದನ್ನು ಹಾಗಾಗಿಸಿದರು? ತಾವು ದಯಮಾಡಿ ನಮ್ಮ ಈ ಪ್ರಶ್ನೆಗಳಿಗೆ ಉತ್ತರಿಸಿರಿ. ಏಕೆಂದರೆ ನಮಗೆ ಬಹಳ ಕುತೂಹಲ ಉಂಟಾಗಿದೆ. ॥28॥

(ಶ್ಲೋಕ-29)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏಕದಾ ಗಿರಿಶಂ ದ್ರಷ್ಟುಮೃಷಯಸ್ತತ್ರ ಸುವ್ರತಾಃ ।
ದಿಶೋ ವಿತಿಮಿರಾಭಾಸಾಃ ಕುರ್ವಂತಃ ಸಮುಪಾಗಮನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಒಮ್ಮೆ ವ್ರತನಿಷ್ಠರಾದ ಮಹರ್ಷಿಗಳು ತಮ್ಮ ದಿವ್ಯವಾದ ತೇಜಸ್ಸಿನಿಂದ ಎಲ್ಲ ದಿಕ್ಕುಗಳನ್ನು ಬೆಳಗಿಸುತ್ತಾ ಭಗವಾನ್ ಶಂಕರನನ್ನು ಸಂದರ್ಶಿಸಲು ಆ ವನಕ್ಕೆ ಆಗಮಿಸಿದರು. ॥29॥

(ಶ್ಲೋಕ-30)

ಮೂಲಮ್

ತಾನ್ವಿಲೋಕ್ಯಾಂಬಿಕಾ ದೇವೀ ವಿವಾಸಾ ವ್ರೀಡಿತಾ ಭೃಶಮ್ ।
ಭರ್ತುರಂಕಾತ್ಸಮುತ್ಥಾಯ ನೀವೀಮಾಶ್ವಥ ಪರ್ಯಧಾತ್ ॥

ಅನುವಾದ

ಆ ಸಮಯದಲ್ಲಿ ಶಂಕರನೊಡನೆ ಕ್ರೀಡಿಸುತ್ತಿದ್ದ ಪಾರ್ವತಿಯ ಉಡುಗೆ ಸಡಿಲಿಸಿದ್ದರಿಂದ ಋಷಿಗಳು ಬಂದುದನ್ನು ನೋಡಿ ಬಹಳವಾಗಿ ನಾಚಿಕೊಂಡು ಒಡನೆಯೇ ಶಿವನ ತೊಡೆಯಿಂದ ಮೇಲೆದ್ದು ಸೀರೆಯನ್ನು ಸರಿಪಡಿಸಿಕೊಂಡಳು. ॥30॥

(ಶ್ಲೋಕ-31)

ಮೂಲಮ್

ಋಷಯೋಽಪಿ ತಯೋರ್ವೀಕ್ಷ್ಯ ಪ್ರಸಂಗಂ ರಮಮಾಣಯೋಃ ।
ನಿವೃತ್ತಾಃ ಪ್ರಯಯುಸ್ತಸ್ಮಾನ್ನರನಾರಾಯಣಾಶ್ರಮಮ್ ॥

ಅನುವಾದ

ಮಹರ್ಷಿಗಳೂ ಕೂಡ ಶ್ರೀಶಂಕರನು ಗೌರಿಯೊಡನೆ ವಿಹರಿಸುತ್ತಿರುವನೆಂದು ನೋಡಿ ಒಡನೆಯೇ ಅಲ್ಲಿಂದ ಹಿಂದಿರುಗಿ ನರ-ನಾರಾಯಣಾಶ್ರಮವನ್ನು ಸೇರಿದರು. ॥31॥

ಮೂಲಮ್

(ಶ್ಲೋಕ-32)
ತದಿದಂ ಭಗವಾನಾಹ ಪ್ರಿಯಾಯಾಃ ಪ್ರಿಯಕಾಮ್ಯಯಾ ।
ಸ್ಥಾನಂ ಯಃ ಪ್ರವಿಶೇದೇತತ್ಸ ವೈ ಯೋಷಿದ್ಭವೇದಿತಿ ॥

ಅನುವಾದ

ಆ ಸಮಯದಲ್ಲಿ ಭಗವಾನ್ ಶಂಕರನು ಪಾರ್ವತಿಯನ್ನು ಸಂತೋಷಗೊಳಿಸಲು ‘ನಾನಲ್ಲದೆ ಯಾರೇ ಪುರುಷನೂ ಈ ಪ್ರದೇಶವನ್ನು ಪ್ರವೇಶಿಸುವವನು ಹೆಣ್ಣಾಗಲಿ’ ಎಂದು ಹೇಳಿದನು.॥32॥

(ಶ್ಲೋಕ-33)

ಮೂಲಮ್

ತತ ಊರ್ಧ್ವಂ ವನಂ ತದ್ವೈ ಪುರುಷಾ ವರ್ಜಯಂತಿ ಹಿ ।
ಸಾ ಚಾನುಚರಸಂಯುಕ್ತಾ ವಿಚಚಾರ ವನಾದ್ವನಮ್ ॥

ಅನುವಾದ

ಪರೀಕ್ಷಿತನೇ! ಅಂದಿನಿಂದ ಪುರುಷರಾರೂ ಆ ಸ್ಥಾನವನ್ನು ಪ್ರವೇಶಿಸುವುದಿಲ್ಲ. ಈಗ ಸುದ್ಯುಮ್ನನು ಸ್ತ್ರೀಯಾಗಿದ್ದನಲ್ಲ. ಅದಕ್ಕಾಗಿ ಅವನು ಹೆಣ್ಣುಗಳಾಗಿದ್ದ ತನ್ನ ಅನುಚರರೊಂದಿಗೆ ಒಂದು ವನದಿಂದ ಇನ್ನೊಂದು ವನಕ್ಕೆ ಹೀಗೆ ಸಂಚರಿಸುತ್ತಿದ್ದನು. ॥33॥

(ಶ್ಲೋಕ-34)

ಮೂಲಮ್

ಅಥ ತಾಮಾಶ್ರಮಾಭ್ಯಾಶೇ ಚರಂತೀಂ ಪ್ರಮದೋತ್ತಮಾಮ್ ।
ಸ್ತ್ರೀಭಿಃ ಪರಿವೃತಾಂ ವೀಕ್ಷ್ಯ ಚಕಮೇ ಭಗವಾನ್ಬುಧಃ ॥

ಅನುವಾದ

ಅದೇ ಸಮಯದಲ್ಲಿ ಶಕ್ತಿವಂತನಾದ ಬುಧನು ತನ್ನ ಆಶ್ರಮದ ಬಳಿಯಲ್ಲೇ ಅನೇಕ ಸ್ತ್ರೀಯರಿಂದ ಪರಿವೃತಳಾಗಿ ಸಂಚರಿಸುತ್ತಿದ್ದ ಸೀರತ್ನ ವನ್ನು ನೋಡಿದನು. ಅವಳ ಸೌಂದರ್ಯಕ್ಕೆ ಆಕರ್ಷಿತನಾಗಿ ಅವಳನ್ನು ತನ್ನವಳನ್ನಾಗಿಸಿಕೊಳ್ಳಬೇಕೆಂದು ಬಯಸಿದನು. ॥34॥

ಮೂಲಮ್

(ಶ್ಲೋಕ-35)
ಸಾಪಿ ತಂ ಚಕಮೇ ಸುಭ್ರೂಃ ಸೋಮರಾಜಸುತಂ ಪತಿಮ್ ।
ಸ ತಸ್ಯಾಂ ಜನಯಾಮಾಸ ಪುರೂರವಸಮಾತ್ಮಜಮ್ ॥

ಅನುವಾದ

ಆ ಸುಂದರಿಯೂ ಚಂದ್ರಕುಮಾರ ಬುಧನನ್ನು ಪತಿಯನ್ನಾಗಿ ವರಿಸಿದಳು. ಇದಾದ ಬಳಿಕ ಬುಧನು ಅವಳ ಗರ್ಭದಿಂದ ಪುರೂರವ ಎಂಬ ಪುತ್ರನನ್ನು ಪಡೆದನು. ॥35॥

(ಶ್ಲೋಕ-36)

ಮೂಲಮ್

ಏವಂ ಸ್ತ್ರೀತ್ವಮನುಪ್ರಾಪ್ತಃ ಸುದ್ಯುಮ್ನೋ ಮಾನವೋ ನೃಪಃ ।
ಸಸ್ಮಾರ ಸ್ವಕುಲಾಚಾರ್ಯಂ ವಸಿಷ್ಠಮಿತಿ ಶುಶ್ರುಮ ॥

ಅನುವಾದ

ಹೀಗೆ ಮನುಪುತ್ರನಾದ ಸುದ್ಯುಮ್ನನು ಸ್ತ್ರೀಯಾಗಿದ್ದ ಆ ಸ್ಥಿತಿಯಲ್ಲಿ ತನ್ನ ಕುಲಪುರೋಹಿತರಾದ ವಸಿಷ್ಠರನ್ನು ಸ್ಮರಿಸಿದನೆಂದು ಕೇಳಿದ್ದೇವೆ. ॥36॥

(ಶ್ಲೋಕ-37)

ಮೂಲಮ್

ಸ ತಸ್ಯ ತಾಂ ದಶಾಂ ದೃಷ್ಟ್ವಾ ಕೃಪಯಾ ಭೃಶಪೀಡಿತಃ ।
ಸುದ್ಯುಮ್ನಸ್ಯಾಶಯನ್ ಪುಂಸ್ತ್ವಮುಪಾಧಾವತ ಶಂಕರಮ್ ॥

ಅನುವಾದ

ಸುದ್ಯುಮ್ನನ ಈ ಸ್ಥಿತಿಯನ್ನು ನೋಡಿ ವಸಿಷ್ಠರಿಗೆ ತುಂಬಾ ಕನಿಕರ ಉಂಟಾಯಿತು. ಅವರು ಸುದ್ಯುಮ್ನನನ್ನು ಪುನಃ ಪುರುಷನನ್ನಾಗಿಸಲು ಭಗವಾನ್ ಶಂಕರನನ್ನು ಆರಾಧಿಸಿದರು. ॥37॥

(ಶ್ಲೋಕ-38)

ಮೂಲಮ್

ತುಷ್ಟಸ್ತಸ್ಮೈ ಸ ಭಗವಾನ್ ಋಷಯೇ ಪ್ರಿಯಮಾವಹನ್ ।
ಸ್ವಾಂ ಚ ವಾಚಮೃತಾಂ ಕುರ್ವನ್ನಿದಮಾಹ ವಿಶಾಂಪತೇ ॥

ಅನುವಾದ

ಪರೀಕ್ಷಿತನೇ! ಭಗವಾನ್ ಶಂಕರನು ವಸಿಷ್ಠರಲ್ಲಿ ಪ್ರಸನ್ನರಾಗಿ ಅವರ ಅಭಿಲಾಷೆಯನ್ನು ಪೂರ್ಣ ಗೊಳಿಸಲಿಕ್ಕಾಗಿ ತನ್ನ ಮಾತೂ ಸುಳ್ಳಾಗದ ರೀತಿಯಲ್ಲಿ ಹೀಗೆಂದನು ॥38॥

(ಶ್ಲೋಕ-39)

ಮೂಲಮ್

ಮಾಸಂ ಪುಮಾನ್ಸ ಭವಿತಾ ಮಾಸಂ ಸ್ತ್ರೀ ತವ ಗೋತ್ರಜಃ ।
ಇತ್ಥಂ ವ್ಯವಸ್ಥಯಾ ಕಾಮಂ ಸುದ್ಯುಮ್ನೋಽವತು ಮೇದಿನೀಮ್ ॥

ಅನುವಾದ

ವಸಿಷ್ಠರೇ! ನಿಮ್ಮ ಈ ಯಜಮಾನನು (ಯಜಮಾನನು ಪುರೋಹಿತರ ಗೋತ್ರದವನೆಂದೇ ಪರಿಗಣಿಸಲ್ಪಡುತ್ತಾನೆ) ಒಂದು ತಿಂಗಳು ಪುರುಷನಾಗಿರುವನು ಮತ್ತೊಂದು ತಿಂಗಳಲ್ಲಿ ಹೆಣ್ಣಾಗಿರುವನು. ಈ ವ್ಯವಸ್ಥೆಯಿಂದ ಸುದ್ಯುಮ್ನನು ಇಚ್ಛಾನುಸಾರವಾಗಿ ಭೂಮಂಡಲವನ್ನು ಪಾಲಿಸಲಿ. ॥39॥

(ಶ್ಲೋಕ-40)

ಮೂಲಮ್

ಆಚಾರ್ಯಾನುಗ್ರಹಾತ್ಕಾಮಂ ಲಬ್ಧ್ವಾ ಪುಂಸ್ತ್ವಂ ವ್ಯವಸ್ಥಯಾ ।
ಪಾಲಯಾಮಾಸ ಜಗತೀಂ ನಾಭ್ಯನಂದನ್ ಸ್ಮತಂ ಪ್ರಜಾಃ ॥

ಅನುವಾದ

ಹೀಗೆ ವಸಿಷ್ಠರ ಅನುಗ್ರಹದಿಂದ ವ್ಯವಸ್ಥಾಪೂರ್ವಕ ಬಯಸಿದ ಪುರುಷತ್ವವನ್ನು ಪಡೆದು ಸುದ್ಯುಮ್ನನು ಪೃಥಿವಿಯನ್ನು ಪಾಲಿಸತೊಡಗಿದನು. ಆದರೂ ಪ್ರಜೆ ಅವನನ್ನು ಅಭಿನಂದಿಸುತ್ತಿರಲಿಲ್ಲ. ॥40॥

(ಶ್ಲೋಕ-41)

ಮೂಲಮ್

ತಸ್ಯೋತ್ಕಲೋ ಗಯೋ ರಾಜನ್ವಿಮಲಶ್ಚ ಸುತಾಸ್ತ್ರಯಃ ।
ದಕ್ಷಿಣಾಪಥರಾಜಾನೋ ಬಭೂವುರ್ಧರ್ಮವತ್ಸಲಾಃ ॥

ಅನುವಾದ

ಅವನಿಗೆ ಉತ್ಕಲ, ಗಯ ಮತ್ತು ವಿಮಲ ಎಂಬ ಮೂವರು ಪುತ್ರರು ಹುಟ್ಟಿದರು. ರಾಜೇಂದ್ರಾ! ಅವರೆಲ್ಲರೂ ದಕ್ಷಿಣಾಪಥದ ರಾಜರಾದರು. ॥41॥

(ಶ್ಲೋಕ-42)

ಮೂಲಮ್

ತತಃ ಪರಿಣತೇ ಕಾಲೇ ಪ್ರತಿಷ್ಠಾನಪತೀಃ ಪ್ರಭುಃ ।
ಪುರೂರವಸ ಉತ್ಸೃಜ್ಯ ಗಾಂ ಪುತ್ರಾಯ ಗತೋ ವನಮ್ ॥

ಅನುವಾದ

ಅನೇಕ ದಿನಗಳ ಬಳಿಕ ಪ್ರತಿಷ್ಠಾನ ನಗರದ ಅಧಿಪತಿಯಾದ ಸುದ್ಯುಮ್ನನು ವೃದ್ಧನಾದಾಗ ತನ್ನ ಪುತ್ರ ಪುರೂರವನಿಗೆ ರಾಜ್ಯವನ್ನು ಒಪ್ಪಿಸಿ, ತಾನು ತಪಸ್ಸಿಗಾಗಿ ಕಾಡಿಗೆ ತೆರಳಿದನು. ॥42॥

ಅನುವಾದ (ಸಮಾಪ್ತಿಃ)

ಮೊದಲನೆಯ ಅಧ್ಯಾಯವು ಮುಗಿಯಿತು. ॥1॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ಇಲೋಪಾಖ್ಯಾನೇ ಪ್ರಥಮೋಽಧ್ಯಾಯಃ ॥1॥