೨೪

[ಇಪ್ಪತ್ತನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ಭಗವಂತನ ಮತ್ಸ್ಯಾವತಾರದ ಕಥೆ

(ಶ್ಲೋಕ-1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಭಗವನ್ ಶ್ರೋತುಮಿಚ್ಛಾಮಿ ಹರೇರದ್ಭುತಕರ್ಮಣಃ ।
ಅವತಾರಕಥಾಮಾದ್ಯಾಂ ಮಾಯಾಮತ್ಸ್ಯವಿಡಂಬನಮ್ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಪೂಜ್ಯರೇ! ಭಗವಂತನ ಕರ್ಮಗಳು ಪರಮಾದ್ಭುತವಾದವುಗಳು. ಅವನೊಮ್ಮೆ ತನ್ನ ಯೋಗಮಾಯೆಯಿಂದ ಮತ್ಸ್ಯಾವತಾರವನ್ನು ತಾಳಿ ಸುಂದರವಾದ ಲೀಲೆಗಳನ್ನು ತೋರಿಸಿದನು. ನಾನು ಭಗವಂತನ ಆ ಆದಿ ಅವತಾರದ ಕಥೆಯನ್ನು ಕೇಳಲು ಇಚ್ಛಿಸುತ್ತೇನೆ. ॥1॥

(ಶ್ಲೋಕ-2)

ಮೂಲಮ್

ಯದರ್ಥಮದಧಾದ್ರೂಪಂ ಮಾತ್ಸ್ಯಂ ಲೋಕಜುಗುಪ್ಸಿತಮ್ ।
ತಮಃಪ್ರಕೃತಿ ದುರ್ಮಷಂ ಕರ್ಮಗ್ರಸ್ತ ಇವೇಶ್ವರಃ ॥

ಅನುವಾದ

ಪೂಜ್ಯರೇ! ಮತ್ಸ್ಯಯೋನಿಯಾದರೋ ಲೋಕನಿಂದಿತವಾಗಿದೆ. ಇನ್ನೊಂದು ತಮೋಗುಣೀ ಮತ್ತು ಅಸಹ್ಯ ಪರತಂತ್ರತೆಯಿಂದಲೂ ಕೂಡಿದೆ. ಸರ್ವಶಕ್ತ ನಾಗಿದ್ದರೂ ಭಗವಂತನು ಕರ್ಮಬಂಧನದಲ್ಲಿ ಬಂಧಿತರಾದ ಜೀವಿಗಳಂತೆ ಈ ಮತ್ಸ್ಯರೂಪವನ್ನು ಏಕೆ ಧರಿಸಿದನು? ॥2॥

(ಶ್ಲೋಕ-3)

ಮೂಲಮ್

ಏತನ್ನೋ ಭಗವನ್ಸರ್ವಂ ಯಥಾವದ್ವಕ್ತುಮರ್ಹಸಿ ।
ಉತ್ತಮಶ್ಲೋಕಚರಿತಂ ಸರ್ವಲೋಕಸುಖಾವಹಮ್ ॥

ಅನುವಾದ

ಮಹಾತ್ಮರೇ! ಮಹಾತ್ಮರಿಂದ ಕೀರ್ತಿ ಸಲ್ಪಡುವ ಭಗವಂತನ ಚರಿತ್ರೆಯು ಸಮಸ್ತ ಪ್ರಾಣಿಗಳಿಗೆ ಸುಖವನ್ನು ಕೊಡುವಂತಹುದಾಗಿದೆ. ತಾವು ದಯಮಾಡಿ ಅವನ ಆ ಎಲ್ಲ ಲೀಲೆಗಳನ್ನು ಪೂರ್ಣರೂಪದಿಂದ ವರ್ಣಿಸಿರಿ. ॥3॥

(ಶ್ಲೋಕ-4)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಇತ್ಯುಕ್ತೋ ವಿಷ್ಣುರಾತೇನ ಭಗವಾನ್ಬಾದರಾಯಣಿಃ ।
ಉವಾಚ ಚರಿತಂ ವಿಷ್ಣೋರ್ಮತ್ಸ್ಯರೂಪೇಣ ಯತ್ಕೃತಮ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿ ಋಷಿಗಳಿರಾ! ಪರೀಕ್ಷಿದ್ರಾಜನು ಶ್ರೀಶುಕಮಹಾಮುನಿಗಳಲ್ಲಿ ಹೀಗೆ ಪ್ರಶ್ನಿಸಿದಾಗ ಅವರು ಮತ್ಸ್ಯಾವತಾರವನ್ನೆತ್ತಿ ಮಹಾ ವಿಷ್ಣುವು ಮಾಡಿದ ಕರ್ಮಗಳನ್ನು ವರ್ಣಿಸಲು ಪ್ರಾರಂಭಿಸಿದರು ॥4॥

(ಶ್ಲೋಕ-5)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಗೋವಿಪ್ರಸುರಸಾಧೂನಾಂ ಛಂದಸಾಮಪಿ ಚೇಶ್ವರಃ ।
ರಕ್ಷಾಮಿಚ್ಛಂಸ್ತನೂರ್ಧತ್ತೇ ಧರ್ಮಸ್ಯಾರ್ಥಸ್ಯ ಚೈವ ಹಿ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿ ತನೇ! ಭಗವಂತನಾದರೋ ಎಲ್ಲರ ಏಕಮಾತ್ರ ಸ್ವಾಮಿ ಯಾಗಿದ್ದಾನೆ. ಹೀಗಿದ್ದರೂ ಅವನು ಗೋವು, ಬ್ರಾಹ್ಮಣರು, ದೇವತೆಗಳು, ಸಾಧುಗಳು, ವೇದ, ಧರ್ಮಾರ್ಥಗಳು ಹೀಗೆ ಇವುಗಳ ರಕ್ಷಣೆಗಾಗಿ ನಾನಾ ವಿಧವಾದ ಶರೀರಗಳನ್ನು ಧರಿಸಿ ಅವತರಿಸುತ್ತಾನೆ. ॥5॥

(ಶ್ಲೋಕ-6)

ಮೂಲಮ್

ಉಚ್ಚಾವಚೇಷು ಭೂತೇಷು ಚರನ್ವಾಯುರಿವೇಶ್ವರಃ ।
ನೋಚ್ಚಾವಚತ್ವಂ ಭಜತೇ ನಿರ್ಗುಣತ್ವಾದ್ಧಿಯೋ ಗುಣೈಃ ॥

ಅನುವಾದ

ಆ ಸರ್ವಶಕ್ತನಾದ ಪ್ರಭುವು ವಾಯುವಿನಂತೆ ಮೇಲೆ-ಕೆಳಗೆ, ಸಣ್ಣ-ದೊಡ್ಡ ಎಲ್ಲ ಪ್ರಾಣಿಗಳಲ್ಲಿ ಅಂತರ್ಯಾಮಿ ರೂಪದಿಂದ ಲೀಲೆ ಮಾಡುತ್ತಾನೆ. ಆದರೆ ಆಯಾ ಪ್ರಾಣಿಗಳ ಬುದ್ಧಿಗತ ಗುಣಗಳಿಂದ ಅವನು ಸಣ್ಣವನು-ದೊಡ್ಡವನು, ಎತ್ತರ-ತಗ್ಗು ಆಗುವುದಿಲ್ಲ. ಏಕೆಂದರೆ, ಅವನು ವಾಸ್ತವವಾಗಿ ಸಮಸ್ತ ಪ್ರಾಕೃತಗುಣಗಳಿಂದ ರಹಿತನಾಗಿದ್ದು ನಿರ್ಗುಣನೇ ಆಗಿದ್ದಾನೆ. ॥6॥

(ಶ್ಲೋಕ-7)

ಮೂಲಮ್

ಆಸೀದತೀತಕಲ್ಪಾಂತೇ ಬ್ರಾಹ್ಮೋ ನೈಮಿತ್ತಿಕೋ ಲಯಃ ।
ಸಮುದ್ರೋಪಪ್ಲುತಾಸ್ತತ್ರ ಲೋಕಾ ಭೂರಾದಯೋ ನೃಪ ॥

ಅನುವಾದ

ರಾಜೇಂದ್ರ! ಹಿಂದಿನ ಕಲ್ಪದ ಅಂತ್ಯದಲ್ಲಿ ಬ್ರಹ್ಮದೇವರು ನಿದ್ರಿಸಿದ್ದರಿಂದ ಬ್ರಾಹ್ಮವೆಂಬ ನೈಮಿತ್ತಿಕ ಪ್ರಳಯವಾಗಿತ್ತು. ಆಗ ಭೂರ್ಲೋಕ ಮೊದಲಾದ ಎಲ್ಲ ಲೋಕಗಳು ಸಮುದ್ರದಲ್ಲಿ ಮುಳುಗಿಹೋಗಿದ್ದವು. ॥7॥

(ಶ್ಲೋಕ-8)

ಮೂಲಮ್

ಕಾಲೇನಾಗತನಿದ್ರಸ್ಯ ಧಾತುಃ ಶಿಶಯಿಷೋರ್ಬಲೀ ।
ಮುಖತೋ ನಿಃಸೃತಾನ್ವೇದಾನ್ಹಯಗ್ರೀವೋಂತಿಕೇಹರತ್ ॥

ಅನುವಾದ

ಹಗಲು ಕಳೆದುಹೋಗಿ ರಾತ್ರಿಯು ಪ್ರಾರಂಭವಾದ ಕಾರಣ ಬ್ರಹ್ಮನು ನಿದ್ರಾಪರವಶನಾದನು. ಆ ಸಮಯದಲ್ಲಿ ವೇದಗಳು ಅವನ ಮುಖದಿಂದ ಹೊರಬಂದವು. ಆಗ ಸಮೀಪದಲ್ಲಿಯೇ ಇದ್ದ ಹಯಗ್ರೀವನೆಂಬ ಬಲಾಢ್ಯನಾದ ದೈತ್ಯನು ವೇದಗಳನ್ನು ಯೋಗಬಲದಿಂದ ಅಪಹರಿಸಿಬಿಟ್ಟನು. ॥8॥

(ಶ್ಲೋಕ-9)

ಮೂಲಮ್

ಜ್ಞಾತ್ವಾ ತದ್ದಾನವೇಂದ್ರಸ್ಯ ಹಯಗ್ರೀವಸ್ಯ ಚೇಷ್ಟಿತಮ್ ।
ದಧಾರ ಶರೀರೂಪಂ ಭಗವಾನ್ಹರಿರೀಶ್ವರಃ ॥

ಅನುವಾದ

ಸರ್ವಶಕ್ತನಾದ ಭಗವಾನ್ ಶ್ರೀಹರಿಗೆ ದಾನವರಾಜನಾದ ಹಯಗ್ರೀವನ ಈ ಕಾರ್ಯವು ತಿಳಿದುಹೋಯಿತು,. ವೇದಗಳನ್ನು ಉದ್ಧರಿಸುವುದಕ್ಕಾಗಿಯೇ ಅವನು ಮತ್ಸ್ಯಾವ ತಾರವನ್ನು ತಾಳಿದನು. ॥9॥

(ಶ್ಲೋಕ-10)

ಮೂಲಮ್

ತತ್ರ ರಾಜಋಷಿಃ ಕಶ್ಚಿನ್ನಾಮ್ನಾ ಸತ್ಯವ್ರತೋ ಮಹಾನ್ ।
ನಾರಾಯಣ ಪರೋತಪ್ಯತ್ತಪಃ ಸ ಸಲಿಲಾಶನಃ ॥

ಅನುವಾದ

ಪರೀಕ್ಷಿದ್ರಾಜನೇ! ಆ ಸಮಯದಲ್ಲಿ ಸತ್ಯವ್ರತನೆಂಬ ಉದಾರಿಯೂ, ನಾರಾಯಣಪರಾಯಣನೂ ಆದ ರಾಜರ್ಷಿಯು ಕೇವಲ ನೀರನ್ನು ಮಾತ್ರ ಕುಡಿದು ತಪಸ್ಸನ್ನಾಚರಿಸುತ್ತಿದ್ದನು. ॥10॥

(ಶ್ಲೋಕ-11)

ಮೂಲಮ್

ಯೋಸಾವಸ್ಮಿನ್ಮಹಾಕಲ್ಪೇ ತನಯಃ ಸ ವಿವಸ್ವತಃ ।
ಶ್ರಾದ್ಧದೇವ ಇತಿ ಖ್ಯಾತೋ ಮನುತ್ವೇ ಹರಿಣಾರ್ಪಿತಃ ॥

ಅನುವಾದ

ಆ ಸತ್ಯವ್ರತನೇ ವರ್ತಮಾನ ಶ್ವೇತ ವರಾಹ ಮಹಾಕಲ್ಪದಲ್ಲಿ ಸೂರ್ಯದೇವನ ಮಗನಾಗಿ ಶ್ರಾದ್ಧದೇವನೆಂಬ ಹೆಸರಿನಿಂದ ವಿಖ್ಯಾತನಾಗಿದ್ದಾನೆ. ಅವನನ್ನು ಭಗವಂತನು ವೈವಸ್ವತಮನುವನ್ನಾಗಿ ಮಾಡಿರುವನು. ॥11॥

ಮೂಲಮ್

(ಶ್ಲೋಕ-12)
ಏಕದಾ ಕೃತಮಾಲಾಯಾಂ ಕುರ್ವತೋ ಜಲತರ್ಪಣಮ್ ।
ತಸ್ಯಾಂಜಲ್ಯುದಕೇ ಕಾಚಿಚ್ಛರ್ಯೇಕಾಭ್ಯಪದ್ಯತ ॥

ಅನುವಾದ

ಒಂದು ದಿನ ಆ ರಾಜರ್ಷಿಯು ಕೃತಮಾಲಾ ನದಿಯಲ್ಲಿ ನೀರಿನಿಂದ ತರ್ಪಣಗಳನ್ನು ಕೊಡುತ್ತಿದ್ದನು. ಆಗಲೇ ಅವನ ಬೊಗಸೆಯ ನೀರಿನಲ್ಲಿ ಒಂದು ಸಣ್ಣ ಮೀನು ಬಂದುಬಿಟ್ಟಿತು. ॥12॥

(ಶ್ಲೋಕ-13)

ಮೂಲಮ್

ಸತ್ಯವ್ರತೋಂಜಲಿಗತಾಂ ಸಹ ತೋಯೇನ ಭಾರತ ।
ಉತ್ಸಸರ್ಜ ನದೀತೋಯೇ ಶರೀಂ ದ್ರವಿಡೇಶ್ವರಃ ॥

ಅನುವಾದ

ಪರೀಕ್ಷಿತನೇ! ದ್ರವಿಡದೇಶದ ಸತ್ಯವ್ರತರಾಜನು ತನ್ನ ಬೊಗಸೆಯಲ್ಲಿ ಬಂದಿರುವ ಮೀನನ್ನು ನೀರಿನೊಂದಿಗೆ ಪುನಃ ನದಿಯಲ್ಲಿ ಬಿಟ್ಟುಬಿಟ್ಟನು. ॥13॥

(ಶ್ಲೋಕ-14)

ಮೂಲಮ್

ತಮಾಹ ಸಾತಿಕರುಣಂ ಮಹಾಕಾರುಣಿಕಂ ನೃಪಮ್ ।
ಯಾದೋಭ್ಯೋ ಜ್ಞಾತಿಘಾತಿಭ್ಯೋ ದೀನಾಂ ಮಾಂ ದೀನವತ್ಸಲ ।
ಕಥಂ ವಿಸೃಜಸೇ ರಾಜನ್ಭೀತಾಮಸ್ಮಿನ್ಸರಿಜ್ಜಲೇ ॥

ಅನುವಾದ

ನೀರಿಗೆ ಬಿಟ್ಟೊಡನೆ ಆ ಮೀನು ಕರುಣಾಜನಕ ರೀತಿಯಿಂದ ಪರಮದಯಾಳುವಾದ ರಾಜನಲ್ಲಿ ಹೇಳಿತು ಮಹಾರಾಜನೇ! ನೀನು ದೀನ ವತ್ಸಲನಾಗಿರುವೆ. ನೀರಿನಲ್ಲಿರುವ ಜಂತುಗಳು ತಮ್ಮ ಜಾತಿಗೆ ಸೇರಿದವರನ್ನೇ ತಿಂದುಹಾಕುತ್ತವೆ. ಚಿಕ್ಕಮೀನನ್ನು ದೊಡ್ಡ ಮೀನುಗಳು ನುಂಗಿಹಾಕುತ್ತವೆ. ನಾನು ಅವುಗಳ ಭಯದಿಂದ ಅತ್ಯಂತ ವ್ಯಾಕುಲವಾಗಿದ್ದೇನೆ. ನೀನು ನನ್ನನ್ನು ಪುನಃ ಈ ನದಿಯ ನೀರಿನಲ್ಲಿ ಏಕೆ ಬಿಡುತ್ತಿರುವೆ? ॥14॥

ಮೂಲಮ್

(ಶ್ಲೋಕ-15)
ತಮಾತ್ಮನೋನುಗ್ರಹಾರ್ಥಂ ಪ್ರೀತ್ಯಾ ಮತ್ಸ್ಯವಪುರ್ಧರಮ್ ।
ಅಜಾನನ್ರಕ್ಷಣಾರ್ಥಾಯ ಶರ್ಯಾಃ ಸ ಮನೋ ದಧೇ ॥

ಅನುವಾದ

ಸತ್ಯವ್ರತಮಹಾರಾಜನಿಗೆ ಭಗವಂತನೇ ಸ್ವತಃ ನನ್ನ ಮೇಲೆ ಪ್ರಸನ್ನನಾಗಿ ಕರುಣೆದೋರಲು ಮತ್ಸ್ಯ ರೂಪದಿಂದ ಆಗಮಿಸಿದ್ದಾನೆ ಎಂಬುದು ತಿಳಿಯದು. ಅದಕ್ಕಾಗಿ ಅವನು ಆ ಮೀನನ್ನು ರಕ್ಷಿಸಬೇಕೆಂದು ಮನಸ್ಸಿನಲ್ಲೇ ಸಂಕಲ್ಪಿಸಿದನು. ॥15॥

(ಶ್ಲೋಕ-16)

ಮೂಲಮ್

ತಸ್ಯಾ ದೀನತರಂ ವಾಕ್ಯಮಾಶ್ರುತ್ಯ ಸ ಮಹೀಪತಿಃ ।
ಕಲಶಾಪ್ಸು ನಿಧಾಯೈನಾಂ ದಯಾಲುರ್ನಿನ್ಯ ಆಶ್ರಮಮ್ ॥

ಅನುವಾದ

ಆ ಮೀನಿನ ಅತ್ಯಂತ ದೈನ್ಯದ ಮಾತನ್ನು ಕೇಳಿದ ರಾಜಾ ಸತ್ಯವ್ರತನು ದಯಾರ್ದ್ರಹೃದಯನಾಗಿ ತನ್ನ ಕಮಂಡಲು ವಿನ ನೀರಿನಲ್ಲಿ ಅದನ್ನಿಟ್ಟುಕೊಂಡು ಆಶ್ರಮಕ್ಕೆ ತಂದನು. ॥16॥

(ಶ್ಲೋಕ-17)

ಮೂಲಮ್

ಸಾ ತು ತತ್ರೈಕರಾತ್ರೇಣ ವರ್ಧಮಾನಾ ಕಮಂಡಲೌ ।
ಅಲಬ್ಧ್ವಾತ್ಮಾವಕಾಶಂ ವಾ ಇದಮಾಹ ಮಹೀಪತಿಮ್ ॥

ಅನುವಾದ

ಆಶ್ರಮಕ್ಕೆ ತಂದಬಳಿಕ ಒಂದೇ ರಾತ್ರಿಯಲ್ಲಿ ಆ ಮೀನು ಆ ಕಮಂಡಲುವಿನಲ್ಲಿ ಹಿಡಿಸಲಾರದಷ್ಟು ದೊಡ್ಡದಾಯಿತು. ಆಗ ಆ ಮೀನು ರಾಜನಲ್ಲಿ ಹೇಳಿತು ॥17॥

(ಶ್ಲೋಕ-18)

ಮೂಲಮ್

ನಾಹಂ ಕಮಂಡಲಾವಸ್ಮಿನ್ ಕೃಚ್ಛ್ರಂ ವಸ್ತುಮಿಹೋತ್ಸಹೇ ।
ಕಲ್ಪಯೌಕಃ ಸುವಿಪುಲಂ ಯತ್ರಾಹಂ ನಿವಸೇ ಸುಖಮ್ ॥

ಅನುವಾದ

ಮಹಾರಾಜಾ! ಈ ಕಮಂಡಲುವಿನಲ್ಲಿ ನಾನು ಕಷ್ಟಪಟ್ಟಾದರೂ ಇರಲು ಸಾಧ್ಯವಾಗದು. ಆದ್ದರಿಂದ ನಾನು ಸುಖವಾಗಿ ಇರಬಹುದಾದ ಒಂದು ದೊಡ್ಡದಾದ ಸ್ಥಾನವನ್ನು ನನಗಾಗಿ ಕಲ್ಪಿಸಿಕೊಡು. ॥18॥

(ಶ್ಲೋಕ-19)

ಮೂಲಮ್

ಸ ಏನಾಂ ತತ ಆದಾಯ ನ್ಯಧಾದೌದಂಚನೋದಕೇ ।
ತತ್ರ ಕ್ಷಿಪ್ತಾ ಮುಹೂರ್ತೇನ ಹಸ್ತತ್ರಯಮವರ್ಧತ ॥

ಅನುವಾದ

ಸತ್ಯವ್ರತರಾಜನು ಆ ಮೀನಿನ ಮಾತನ್ನು ಕೇಳಿ ಒಂದು ದೊಡ್ಡದಾದ ನೀರಿನ ಮಡಕೆಯಲ್ಲಿ (ಹರಿಯಲ್ಲಿ) ಇರಿಸಿದನು. ಆದರೆ ಅದರಲ್ಲಿ ಇರಿಸುತ್ತಲೇ ಎರಡೇ ಗಳಿಗೆಯಲ್ಲಿ ಮೂರು ಮೊಳದಷ್ಟು ದೊಡ್ಡದಾಯಿತು. ॥19॥

(ಶ್ಲೋಕ-20)

ಮೂಲಮ್

ನ ಮ ಏತದಲಂ ರಾಜನ್ಸುಖಂ ವಸ್ತುಮುದಂಚನಮ್ ।
ಪೃಥು ದೇಹಿ ಪದಂ ಮಹ್ಯಂ ಯತ್ತ್ವಾಹಂ ಶರಣಂ ಗತಾ ॥

ಅನುವಾದ

ಪುನಃ ಅದು ರಾಜನಿಗೆ ಹೇಳಿತು ಸತ್ಯವ್ರತನೇ! ಈಗ ಈ ಮಡಕೆಯೂ ನನಗೆ ಸುಖವಾಗಿ ಇರಲು ಸಾಲದಾಗಿದೆ. ನಾನು ನಿನ್ನನ್ನೇ ಮರೆ ಹೊಕ್ಕಿದ್ದೇನೆ. ಅದಕ್ಕಾಗಿ ನನಗೆ ಇರಲು ಯಾವುದಾದರೊಂದು ಯೋಗ್ಯವಾದ ದೊಡ್ಡ ಸ್ಥಾನವನ್ನು ಕಲ್ಪಿಸಿಕೊಡು. ॥20॥

(ಶ್ಲೋಕ-21)

ಮೂಲಮ್

ತತ ಆದಾಯ ಸಾ ರಾಜ್ಞಾ ಕ್ಷಿಪ್ತಾ ರಾಜನ್ಸರೋವರೇ ।
ತದಾವೃತ್ಯಾತ್ಮನಾ ಸೋಯಂ ಮಹಾಮೀನೋನ್ವವರ್ಧತ ॥

ಅನುವಾದ

ಪರೀಕ್ಷಿತನೇ! ಸತ್ಯವ್ರತಮಹಾರಾಜನು ಆ ಮೀನನ್ನು ಅಲ್ಲಿಂದ ಎತ್ತಿಕೊಂಡುಹೋಗಿ ಒಂದು ದೊಡ್ಡ ಸರೋವರ ದಲ್ಲಿ ಇರಿಸಿದನು. ಆದರೆ ಅದು ಸ್ವಲ್ಪಹೊತ್ತಿನಲ್ಲೇ ಒಂದು ಮಹಾಮತ್ಸ್ಯವಾಗಿ ಬೆಳೆದು ತನ್ನ ಶರೀರದಿಂದ ಆ ಸರೋವರವನ್ನೆಲ್ಲಾ ವ್ಯಾಪಿಸಿಬಿಟ್ಟಿತು. ॥21॥

(ಶ್ಲೋಕ-22)

ಮೂಲಮ್

ನೈತನ್ಮೇ ಸ್ವಸ್ತಯೇ ರಾಜನ್ನುದಕಂ ಸಲಿಲೌಕಸಃ ।
ನಿಧೇಹಿ ರಕ್ಷಾಯೋಗೇನ ಹ್ರದೇ ಮಾಮವಿದಾಸಿನಿ ॥

ಅನುವಾದ

ಮತ್ತೆ ಪುನಃ ಹೇಳಿತು ರಾಜನೇ! ನಾನು ಜಲಚರ ಪ್ರಾಣಿಯಾಗಿದ್ದೇನೆ. ಈ ಸರೋವರದ ನೀರೂ ಕೂಡ ನನಗೆ ಸುಖವಾಗಿ ವಾಸಿ ಸಲು ಸಾಲದಾಗಿದೆ. ಅದಕ್ಕಾಗಿ ನೀನು ನನ್ನನ್ನು ರಕ್ಷಿಸಿ ನನಗೆ ಯಾವುದಾದರೂ ಆಳವಾದ ದೊಡ್ಡ ಸರೋವರದಲ್ಲಿ ಇರಿಸು. ॥22॥

(ಶ್ಲೋಕ-23)

ಮೂಲಮ್

ಇತ್ಯುಕ್ತಃ ಸೋನಯನ್ಮತ್ಸ್ಯಂ ತತ್ರ ತತ್ರಾವಿದಾಸಿನಿ ।
ಜಲಾಶಯೇ ಸಮ್ಮಿತಂ ತಂ ಸಮುದ್ರೇ ಪ್ರಾಕ್ಷಿಪಜ್ಝಷಮ್ ॥

ಅನುವಾದ

ಅದರಂತೆ ರಾಜನು ಅದಕ್ಕಿಂತ ದೊಡ್ಡ ಸರೋವರದಲ್ಲಿ ಇರಿಸಿದಾಗ ಆ ಮೀನು ಬೆಳೆಯುತ್ತಲೇ ಹೋಯಿತು. ಮತ್ತೊಂದು ಸರೋವರ ಅದು ಸಾಲದಾದಾಗ ಇನ್ನೊಂದು ಸರೋವರ ಹೀಗೆ ಕಡೆಗೆ ರಾಜನು ಆ ಲೀಲಾ ಮತ್ಸ್ಯವನ್ನು ಸಮುದ್ರಕ್ಕೆ ತಂದುಬಿಟ್ಟನು. ॥23॥

(ಶ್ಲೋಕ-24)

ಮೂಲಮ್

ಕ್ಷಿಪ್ಯಮಾಣಸ್ತಮಾಹೇದಮಿಹ ಮಾಂ ಮಕರಾದಯಃ ।
ಅದಂತ್ಯತಿಬಲಾ ವೀರ ಮಾಂ ನೇಹೋತ್ಸ್ರಷ್ಟುಮರ್ಹಸಿ ॥

ಅನುವಾದ

ಸಮುದ್ರಕ್ಕೆ ಹಾಕುವ ಸಮಯದಲ್ಲಿ ಮತ್ಸ್ಯರೂಪೀ ಭಗವಂತನು ಸತ್ಯವ್ರತನಿಗೆ ಹೇಳಿದನು ‘ವೀರಾಧಿವೀರನೇ! ಸಮುದ್ರದಲ್ಲಿ ದೊಡ್ಡ-ದೊಡ್ಡ ತಿಮಿಂಗಿಲಗಳಿವೆ. ಅವು ನನ್ನನ್ನು ತಿಂದುಬಿಟ್ಟಾವು. ಅದಕ್ಕಾಗಿ ನೀನು ನನ್ನನ್ನು ಸಮುದ್ರದಲ್ಲಿ ಬಿಡಬೇಡ.’ ॥24॥

(ಶ್ಲೋಕ-25)

ಮೂಲಮ್

ಏವಂ ವಿಮೋಹಿತಸ್ತೇನ ವದತಾ ವಲ್ಗುಭಾರತೀಮ್ ।
ತಮಾಹ ಕೋ ಭವಾನಸ್ಮಾನ್ಮತ್ಸ್ಯರೂಪೇಣ ಮೋಹಯನ್ ॥

ಅನುವಾದ

ಭಗವಾನ್ ಮತ್ಸ್ಯಮೂರ್ತಿಯ ಈ ಸುಮಧುರ ವಾಣಿಯನ್ನು ಕೇಳಿ ಸತ್ಯವ್ರತರಾಜನು ಮೋಹಮುಗ್ಧನಾಗಿ ಹೇಳಿದನು ಮತ್ಸ್ಯ ರೂಪವನ್ನು ಧರಿಸಿ ನನ್ನನ್ನು ವಿಮೋಹಗೊಳಿಸುತ್ತಿರುವ ನೀನು ಯಾರು? ॥25॥

(ಶ್ಲೋಕ-26)

ಮೂಲಮ್

ನೈವಂವೀರ್ಯೋ ಜಲಚರೋ ದೃಷ್ಟೋಸ್ಮಾಭಿಃ ಶ್ರುತೋಪಿ ಚ ।
ಯೋ ಭವಾನ್ಯೋಜನಶತಮಹ್ನಾಭಿವ್ಯಾನಶೇ ಸರಃ ॥

ಅನುವಾದ

ಮಹಾನು ಭಾವನೇ! ನೀನು ಒಂದೇ ದಿನದಲ್ಲಿ ನೂರುಯೋಜನ ವಿಸ್ತಾರವುಳ್ಳ ಸರೋವರವನ್ನು ವ್ಯಾಪಿಸಿ ಬಿಟ್ಟಿರುವೆ. ಇಂತಹ ಅಮೋಘಶಕ್ತಿಯುಳ್ಳ ಜಲಚರವನ್ನು ನಾವು ಇಂದಿನವರೆಗೆ ಕಂಡಿಲ್ಲ, ಕೇಳಿಲ್ಲ. ॥26॥

(ಶ್ಲೋಕ-27)

ಮೂಲಮ್

ನೂನಂ ತ್ವಂ ಭಗವಾನ್ಸಾಕ್ಷಾದ್ಧರಿರ್ನಾರಾಯಣೋವ್ಯಯಃ ।
ಅನುಗ್ರಹಾಯ ಭೂತಾನಾಂ ಧತ್ಸೇ ರೂಪಂ ಜಲೌಕಸಾಮ್ ॥

ಅನುವಾದ

ನಿಶ್ಚಯವಾಗಿಯೂ ನೀನು ಸರ್ವಶಕ್ತಿಯುಳ್ಳ, ಸರ್ವಾಂತರ್ಯಾಮಿ, ಅವಿನಾಶಿ ಸಾಕ್ಷಾತ್ ಭಗವಾನ್ ಶ್ರೀಹರಿಯೇ ಆಗಿರುವೆ. ಜೀವಿಗಳ ಮೇಲೆ ಅನುಗ್ರಹ ತೋರಲೆಂದೇ ನೀನು ಜಲಚರದ ರೂಪವನ್ನು ಧರಿಸಿರುವೆ. ॥27॥

(ಶ್ಲೋಕ-28)

ಮೂಲಮ್

ನಮಸ್ತೇ ಪುರುಷಶ್ರೇಷ್ಠ ಸ್ಥಿತ್ಯುತ್ಪತ್ತ್ಯಪ್ಯಯೇಶ್ವರ ।
ಭಕ್ತಾನಾಂ ನಃ ಪ್ರಪನ್ನಾನಾಂ ಮುಖ್ಯೋ ಹ್ಯಾತ್ಮಗತಿರ್ವಿಭೋ ॥

ಅನುವಾದ

ಪುರುಷೋತ್ತಮನೇ! ನೀನೇ ಜಗತ್ತಿನ ಉತ್ಪತ್ತಿ, ಸ್ಥಿತಿ, ಸಂಹಾರಮಾಡುವ ಸ್ವಾಮಿಯಾಗಿರುವೆ. ನಿನಗೆ ನಾನು ನಮಸ್ಕರಿಸುತ್ತೇನೆ. ವಿಭುವೇ! ಶರಣಾಗತ ಭಕ್ತರಾದ ನಮ್ಮಂತಹವರಿಗೆ ನೀನೇ ಪರಮಾತ್ಮನೂ, ಪರ ಮಾಶ್ರಯನೂ ಆಗಿರುವೆ. ॥28॥

(ಶ್ಲೋಕ-29)

ಮೂಲಮ್

ಸರ್ವೇ ಲೀಲಾವತಾರಾಸ್ತೇ ಭೂತಾನಾಂ ಭೂತಿಹೇತವಃ ।
ಜ್ಞಾತುಮಿಚ್ಛಾಮ್ಯದೋ ರೂಪಂ ಯದರ್ಥಂ ಭವತಾ ಧೃತಮ್ ॥

ಅನುವಾದ

ನಿನ್ನ ಎಲ್ಲ ಲೀಲಾ ವತಾರಗಳು ಪ್ರಾಣಿಗಳ ಶ್ರೇಯಸ್ಸಿಗಾಗಿಯೇ ಇದ್ದರೂ ನೀನು ಈ ರೂಪವನ್ನು ಯಾವ ಉದ್ದೇಶಕ್ಕಾಗಿ ಧರಿಸಿರುವೆ? ಇದನ್ನು ತಿಳಿಯಲು ನಾನು ಇಚ್ಛಿಸುತ್ತೇನೆ. ॥29॥

(ಶ್ಲೋಕ-30)

ಮೂಲಮ್

ನ ತೇರವಿಂದಾಕ್ಷ ಪದೋಪಸರ್ಪಣಂ
ಮೃಷಾ ಭವೇತ್ಸರ್ವಸುಹೃತ್ಪ್ರಿಯಾತ್ಮನಃ ।
ಯಥೇತರೇಷಾಂ ಪೃಥಗಾತ್ಮನಾಂ ಸತಾ-
ಮದೀದೃಶೋ ಯದ್ವಪುರದ್ಭುತಂ ಹಿ ನಃ ॥

ಅನುವಾದ

ಅರವಿಂದನೇ! ದೇಹಾದಿ ಅನಾತ್ಮ ಪದಾರ್ಥಗಳಲ್ಲಿ ಆತ್ಮ ಬುದ್ಧಿಯ ಅಭಿಮಾನಪಡುವ ಸಂಸಾರೀ ಜನರ ಆಶ್ರಯವು ವ್ಯರ್ಥವಾಗಿ ಹೋಗುವಂತೆ ನಿನ್ನ ಚರಣಕಮಲಗಳ ಶರಣಾ ಗತಿಯು ವ್ಯರ್ಥವಾಗಲಾರದು. ಏಕೆಂದರೆ, ನೀನು ಎಲ್ಲರ ಅಹೈತುಕ ಪ್ರೇಮಿಯಾಗಿರುವೆ. ಪರಮ ಪ್ರಿಯತಮನಾಗಿರುವೆ, ಆತ್ಮನಾಗಿರುವೆ. ಈಗ ನಮಗೆ ದರ್ಶನ ಕೊಡುತ್ತಿರುವ ಈ ರೂಪವು ಅದ್ಭುತವಾಗಿದೆ. ॥30॥

(ಶ್ಲೋಕ-31)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ಬ್ರುವಾಣಂ ನೃಪತಿಂ ಜಗತ್ಪತಿಃ
ಸತ್ಯವ್ರತಂ ಮತ್ಸ್ಯವಪುರ್ಯುಗಕ್ಷಯೇ ।
ವಿಹರ್ತುಕಾಮಃ ಪ್ರಲಯಾರ್ಣವೇಬ್ರವೀ-
ಚ್ಚಿಕೀರ್ಷುರೇಕಾಂತಜನಪ್ರಿಯಃ ಪ್ರಿಯಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಕ್ತಪ್ರಿಯನಾದ, ಜಗತ್ಪತಿಯಾದ ಭಗವಂತನು ಮತ್ಸ್ಯ ರೂಪವನ್ನು ಧರಿಸಿ ಪ್ರಳಯಕಾಲದಲ್ಲಿ ಸಮುದ್ರದಲ್ಲಿ ವಿಹರಿಸ ಬೇಕೆಂಬ ಇಚ್ಛೆಯಿಂದ ಕೂಡಿದ್ದನು. ತನ್ನನ್ನು ನಾನಾ ಪ್ರಕಾರವಾಗಿ ಸ್ತೋತ್ರ ಮಾಡುತ್ತಿದ್ದ ಸತ್ಯವ್ರತನಿಗೆ ಪ್ರಿಯವನ್ನುಂಟು ಮಾಡಬೇಕೆಂದು ಬಯಸಿ ಇಂತೆಂದನು ॥31॥

(ಶ್ಲೋಕ-32)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಸಪ್ತಮೇದ್ಯತನಾದೂರ್ಧ್ವಮಹನ್ಯೇತದರಿಂದಮ ।
ನಿಮಂಕ್ಷ್ಯತ್ಯಪ್ಯಯಾಂಭೋಧೌತ್ರೈಲೋಕ್ಯಂಭೂರ್ಭುವಾದಿಕಮ್ ॥

ಅನುವಾದ

ಶ್ರೀಭಗವಂತನು ಹೇಳಿದನು — ಸತ್ಯವ್ರತಮಹಾರಾಜನೇ! ಇಂದಿನಿಂದ ಏಳನೆಯ ದಿನ ಭೂಲೋಕವೇ ಮೊದಲಾದ ಮೂರೂ ಲೋಕಗಳೂ ಪ್ರಳಯಸಮುದ್ರದಲ್ಲಿ ಮುಳುಗಿ ಹೋಗುವುವು. ॥32॥

(ಶ್ಲೋಕ-33)

ಮೂಲಮ್

ತ್ರಿಲೋಕ್ಯಾಂ ಲೀಯಮಾನಾಯಾಂ ಸಂವರ್ತಾಂಭಸಿ ವೈ ತದಾ ।
ಉಪಸ್ಥಾಸ್ಯತಿ ನೌಃ ಕಾಚಿದ್ವಿಶಾಲಾ ತ್ವಾಂ ಮಯೇರಿತಾ ॥

ಅನುವಾದ

ಮೂರೂ ಲೋಕಗಳು ಪ್ರಳಯ ಜಲದಲ್ಲಿ ಮುಳುಗಿ ಹೋದಾಗ ನನ್ನ ಪ್ರೇರಣೆಯಂತೆ ನಿನ್ನ ಬಳಿಗೆ ವಿಶಾಲವಾದೊಂದು ನೌಕೆಯು ಬರುವುದು. ॥33॥

(ಶ್ಲೋಕ-34)

ಮೂಲಮ್

ತ್ವಂ ತಾವದೋಷಧೀಃ ಸರ್ವಾ ಬೀಜಾನ್ಯುಚ್ಚಾವಚಾನಿ ಚ ।
ಸಪ್ತರ್ಷಿಭಿಃ ಪರಿವೃತಃ ಸರ್ವಸತ್ತ್ವೋಪಬೃಂಹಿತಃ ॥

ಅನುವಾದ

ಆಗ ನೀನು ಸಮಸ್ತ ಪ್ರಾಣಿಗಳ ಸೂಕ್ಷ್ಮಶರೀರಗಳನ್ನು ತೆಗೆದುಕೊಂಡು ಸಪ್ತರ್ಷಿಗಳೊಡನೆ ಆ ನೌಕೆಯನ್ನು ಹತ್ತ ಬೇಕು. ಸಮಸ್ತ ಮೂಲಿಕೆಗಳನ್ನು, ಬಗೆ-ಬಗೆಯ ಬೀಜಗಳನ್ನು ನೀನು ಜೊತೆಯಲ್ಲಿರಿಸಿಕೊಳ್ಳಬೇಕು. ॥34॥

(ಶ್ಲೋಕ-35)

ಮೂಲಮ್

ಆರುಹ್ಯ ಬೃಹತೀಂ ನಾವಂ ವಿಚರಿಷ್ಯಸ್ಯವಿಕ್ಲವಃ ।
ಏಕಾರ್ಣವೇ ನಿರಾಲೋಕೇ ಋಷೀಣಾಮೇವ ವರ್ಚಸಾ ॥

ಅನುವಾದ

ಆ ಸಮಯದಲ್ಲಿ ಎಲ್ಲ ಕಡೆಯಲ್ಲಿಯೂ ಮಹಾಸಾಗರವೇ ಕಂಡು ಬಂದೀತು. ಬೆಳಕೂ ಇರುವುದಿಲ್ಲ. ಕೇವಲ ಸಪ್ತರ್ಷಿಗಳ ದಿವ್ಯ ಪ್ರಕಾಶವನ್ನೇ ನೀನು ಕಾಣುವೆ. ಅದರಿಂದಾಗಿ ಯಾವುದೇ ಭಯವಿಲ್ಲದೆ ನೀನು ಆ ವಿಶಾಲವಾದ ನೌಕೆಯಲ್ಲಿ ಕುಳಿತುಕೊಂಡು ಎಲ್ಲೆಡೆ ಸಂಚರಿಸುತ್ತಿರು. ॥35॥

(ಶ್ಲೋಕ-36)

ಮೂಲಮ್

ದೋಧೂಯಮಾನಾಂ ತಾಂ ನಾವಂ ಸಮೀರೇಣ ಬಲೀಯಸಾ ।
ಉಪಸ್ಥಿತಸ್ಯ ಮೇ ಶೃಂಗೇ ನಿಬಧ್ನೀಹಿ ಮಹಾಹಿನಾ ॥

ಅನುವಾದ

ಪ್ರಚಂಡವಾದ ಚಂಡಮಾರುತದಿಂದ ನೌಕೆಯು ಅಲ್ಲೋಲ ಕಲ್ಲೋಲವಾದಾಗ ನಾನು ಇದೇ ರೂಪದಿಂದ ಅಲ್ಲಿಗೆ ಬರುವೆನು. ಆಗ ನೀವುಗಳು ಸರ್ಪರಾಜನಾದ ವಾಸುಕಿ ಯನ್ನು ಹಗ್ಗವನ್ನಾಗಿಸಿ ಆ ನೌಕೆಯನ್ನು ನನ್ನ ಕೊಂಬಿಗೆ ಕಟ್ಟಿಹಾಕಿ. ॥36॥

(ಶ್ಲೋಕ-37)

ಮೂಲಮ್

ಅಹಂ ತಾಮೃಷಿಭಿಃ ಸಾಕಂ ಸಹನಾವಮುದನ್ವತಿ ।
ವಿಕರ್ಷನ್ವಿಚರಿಷ್ಯಾಮಿ ಯಾವದ್ಬ್ರಾಹ್ಮೀ ನಿಶಾ ಪ್ರಭೋ ॥

ಅನುವಾದ

ಸತ್ಯವ್ರತನೇ! ಬಳಿಕ ಬ್ರಹ್ಮದೇವರ ರಾತ್ರಿಯು ಇರುವತನಕ ನಾನು ಸಪ್ತರ್ಷಿಗಳೊಡನೆ ನಿನ್ನನ್ನು ಆ ನೌಕೆಯಲ್ಲಿ ಕುಳ್ಳಿರಿಸಿಕೊಂಡು ಅದನ್ನು ಎಳೆದುಕೊಂಡು ಹೋಗುತ್ತಾ ಸಮುದ್ರದಲ್ಲಿ ಸಂಚರಿಸುವೆನು. ॥37॥

(ಶ್ಲೋಕ-38)

ಮೂಲಮ್

ಮದೀಯಂ ಮಹಿಮಾನಂ ಚ ಪರಂ ಬ್ರಹ್ಮೇತಿ ಶಬ್ದಿತಮ್ ।
ವೇತ್ಸ್ಯಸ್ಯನುಗೃಹೀತಂ ಮೇ ಸಂಪ್ರಶ್ನೈರ್ವಿವೃತಂ ಹೃದಿ ॥

ಅನುವಾದ

ಆಗ ನೀನು ಪ್ರಶ್ನಿಸಿದುದಕ್ಕೆಲ್ಲ ನಾನು ಉತ್ತರಿಸುತ್ತಾ ಇರುವೆನು. ನನ್ನ ವಾಸ್ತವಿಕ ಪರಬ್ರಹ್ಮ ಮಹಿಮೆಯು ನನ್ನ ಅನುಗ್ರಹದಿಂದ ನಿನ್ನ ಹೃದಯದಲ್ಲಿ ಪ್ರಕಟವಾದೀತು. ಅದ ರಿಂದ ನೀನು ಸರಿಯಾಗಿ ಅರಿತುಕೊಳ್ಳುವೆ. ॥38॥

(ಶ್ಲೋಕ-39)

ಮೂಲಮ್

ಇತ್ಥಮಾದಿಶ್ಯ ರಾಜಾನಂ ಹರಿರಂತರಧೀಯತ ।
ಸೋನ್ವವೈಕ್ಷತ ತಂ ಕಾಲಂ ಯಂ ಹೃಷೀಕೇಶ ಆದಿಶತ್ ॥

ಅನುವಾದ

ಸತ್ಯ ವ್ರತರಾಜನಿಗೆ ಹೀಗೆ ಆದೇಶವನ್ನಿತ್ತು ಭಗವಂತನು ಅಂತ ರ್ಧಾನನಾದನು. ಆದ್ದರಿಂದ ಭಗವಂತನು ನಿರ್ದೇಶಿಸಿದ್ದ ಆ ಕಾಲವನ್ನು ರಾಜನು ನಿರೀಕ್ಷಿಸುತ್ತಾ ಇದ್ದನು. ॥39॥

(ಶ್ಲೋಕ-40)

ಮೂಲಮ್

ಆಸ್ತೀರ್ಯ ದರ್ಭಾನ್ಪ್ರಾಕ್ಕೂಲಾನ್ರಾಜರ್ಷಿಃ ಪ್ರಾಗುದಙ್ಮುಖಃ ।
ನಿಷಸಾದ ಹರೇಃ ಪಾದೌ ಚಿಂತಯನ್ಮತ್ಸ್ಯರೂಪಿಣಃ ॥

ಅನುವಾದ

ಬಳಿಕ ರಾಜರ್ಷಿಯಾದ ಸತ್ಯವ್ರತನು ಪೂರ್ವಾಗ್ರವಾಗಿ ದರ್ಭೆಗಳನ್ನು ಹಾಸಿ ಈಶಾನ್ಯದಿಕ್ಕಿಗೆ ಅಭಿಮುಖನಾಗಿ ಕುಳಿತು, ಮತ್ಸ್ಯರೂಪಿಯಾದ ಭಗವಂತನ ಚರಣಕಮಲ ಗಳನ್ನು ಧ್ಯಾನಿಸುತ್ತಿದ್ದನು. ॥40॥

(ಶ್ಲೋಕ-41)

ಮೂಲಮ್

ತತಃ ಸಮುದ್ರ ಉದ್ವೇಲಃ ಸರ್ವತಃ ಪ್ಲಾವಯನ್ಮಹೀಮ್ ।
ವರ್ಧಮಾನೋ ಮಹಾಮೇಘೈರ್ವರ್ಷದ್ಭಿಃ ಸಮದೃಶ್ಯತ ॥

ಅನುವಾದ

ಇಷ್ಟರಲ್ಲೇ ಭಗವಂತನು ಹೇಳಿದ ಆ ಸಮಯ ಸನ್ನಿಹಿತವಾಯಿತು. ರಾಜನು ನೋಡುತ್ತಾನೆ ಸಮುದ್ರವು ತನ್ನ ಮೇರೆಗಳನ್ನು ಮೀರಿ ಉಕ್ಕುತ್ತಾ ಇದೆ. ಪ್ರಳಯಕಾಲದ ಭಯಂಕರ ಮೇಘಗಳು ಮಳೆಗರೆಯುತ್ತಾ ಇದೆ. ನೋಡುನೋಡುತ್ತಿರುವಂತೆ ಇಡೀ ಪೃಥಿವಿಯು ನೀರಿನಲ್ಲಿ ಮುಳುಗ ತೊಡಗಿತು. ॥41॥

(ಶ್ಲೋಕ-42)

ಮೂಲಮ್

ಧ್ಯಾಯನ್ಭಗವದಾದೇಶಂ ದದೃಶೇ ನಾವಮಾಗತಾಮ್ ।
ತಾಮಾರುರೋಹ ವಿಪ್ರೇಂದ್ರೈರಾದಾಯೌಷಧಿವೀರುಧಃ ॥

ಅನುವಾದ

ಆಗ ರಾಜನು ಭಗವಂತನ ಆದೇಶವನ್ನು ನೆನೆದಾಗ ಒಂದು ನೌಕೆಯು ಬಳಿಗೆ ಬಂದಿರುವುದನ್ನು ನೋಡಿದನು. ಸತ್ಯ ವ್ರತನು ಸಕಲ ಔಷಧಿ-ವನಸ್ಪತಿ-ಧಾನ್ಯಬೀಜಗಳನ್ನು ಎತ್ತಿಕೊಂಡು ಸಪ್ತರ್ಷಿಗಳೊಡನೆ ನಾವೆಯನ್ನು ಹತ್ತಿದನು. ॥42॥

(ಶ್ಲೋಕ-43)

ಮೂಲಮ್

ತಮೂಚುರ್ಮುನಯಃ ಪ್ರೀತಾ ರಾಜನ್ ಧ್ಯಾಯಸ್ವ ಕೇಶವಮ್ ।
ಸ ವೈ ನಃ ಸಂಕಟಾದಸ್ಮಾದವಿತಾ ಶಂ ವಿಧಾಸ್ಯತಿ ॥

ಅನುವಾದ

ಸಪ್ತರ್ಷಿಗಳು ತುಂಬುಪ್ರೇಮದಿಂದ ಸತ್ಯವ್ರತರಾಜನಲ್ಲಿ ಹೇಳಿದರು ರಾಜನೇ! ನೀನು ಭಗವಂತನನ್ನು ಧ್ಯಾನಿಸು. ಅವನೇ ನಮ್ಮನ್ನು ಈ ಸಂಕಟದಿಂದ ಪಾರುಗೊಳಿಸುವನು ಹಾಗೂ ಪರಮಸುಖವನ್ನು ಅನುಗ್ರಹಿಸುವನು. ॥43॥

(ಶ್ಲೋಕ-44)

ಮೂಲಮ್

ಸೋನುಧ್ಯಾತಸ್ತತೋ ರಾಜ್ಞಾ ಪ್ರಾದುರಾಸೀನ್ಮಹಾರ್ಣವೇ ।
ಏಕಶೃಂಗಧರೋ ಮತ್ಸ್ಯೋ ಹೈಮೋ ನಿಯುತಯೋಜನಃ ॥

ಅನುವಾದ

ಅವರ ಆದೇಶದಂತೆ ರಾಜನು ಭಗವಂತನ ಧ್ಯಾನ ಮಾಡಿ ದನು. ಆಗಲೇ ಆ ಮಹಾಸಮುದ್ರದಲ್ಲಿ ಮತ್ಸ್ಯರೂಪದಿಂದ ಭಗವಂತನು ಪ್ರಕಟನಾದನು. ಮತ್ಸ್ಯಭಗವಂತನ ಶರೀರವು ಭಂಗಾರದಂತೆ ಹೊಳೆಯುತ್ತಿತ್ತು. ಅವನ ಶರೀರವು ಒಂದು ಲಕ್ಷ ಯೋಜನ ವಿಸ್ತಾರವಾಗಿತ್ತು. ತಲೆಯಲ್ಲಿ ಭಾರೀ ದೊಡ್ಡ ಒಂದು ಕೊಂಬೂ ಇತ್ತು. ॥44॥

(ಶ್ಲೋಕ-45)

ಮೂಲಮ್

ನಿಬಧ್ಯ ನಾವಂ ತಚ್ಛಂಗೇ ಯಥೋಕ್ತೋ ಹರಿಣಾ ಪುರಾ ।
ವರತ್ರೇಣಾಹಿನಾ ತುಷ್ಟಸ್ತುಷ್ಟಾವ ಮಧುಸೂದನಮ್ ॥

ಅನುವಾದ

ಭಗವಂತನು ಹಿಂದೆ ಹೇಳಿದಂತೆ ಆ ನೌಕೆಯನ್ನು ನಾಗರಾಜ ವಾಸುಕಿಯನ್ನು ಹಗ್ಗವಾಗಿಸಿ ಭಗವಂತನ ಕೊಂಬಿಗೆ ಕಟ್ಟಲಾಯಿತು. ಬಳಿಕ ಸತ್ಯವ್ರತ ರಾಜನು ಪರಮ ಸಂತುಷ್ಟನಾಗಿ ಭಗವಂತನನ್ನು ಸ್ತುತಿಸ ತೊಡಗಿದನು. ॥45॥

(ಶ್ಲೋಕ-46)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಅನಾದ್ಯವಿದ್ಯೋಪಹತಾತ್ಮಸಂವಿದ-
ಸ್ತನ್ಮೂಲಸಂಸಾರಪರಿಶ್ರಮಾತುರಾಃ ।
ಯದೃಚ್ಛಯೇಹೋಪಸೃತಾ ಯಮಾಪ್ನುಯು-
ರ್ವಿಮುಕ್ತಿದೋ ನಃ ಪರಮೋ ಗುರುರ್ಭವಾನ್ ॥

ಅನುವಾದ

ಸತ್ಯವ್ರತರಾಜನು ಹೇಳಿದನು — ಪ್ರಭುವೇ! ಪ್ರಪಂಚದಲ್ಲಿರುವ ಜೀವಿಗಳ ಆತ್ಮಜ್ಞಾನವು ಅನಾದಿಯಾದ ಅವಿದ್ಯೆಯಿಂದ ಮುಚ್ಚಿಹೋಗಿದೆ. ಇದರಿಂದಲೇ ಅವರು ಅನೇಕಾನೇಕ ಪ್ರಾಪಂಚಿಕ ಕ್ಲೇಶಗಳಿಂದ ಪೀಡಿತರಾಗಿ ಅನಾಯಾಸವಾಗಿಯೇ ನಿನ್ನ ಅನುಗ್ರಹದಿಂದ ಅವರು ನಿನಗೆ ಶರಣಾದಾಗ ನಿನ್ನನ್ನು ಪಡೆದುಕೊಳ್ಳುವರು. ಅದಕ್ಕಾಗಿ ನಮ್ಮನ್ನು ಬಂಧನದಿಂದ ಬಿಡಿಸಿ ನಿಜವಾದ ಮುಕ್ತಿಯನ್ನು ದಯಪಾಲಿಸುವ ಪರಮಗುರು ನೀನೇ ಆಗಿರುವೆ. ॥46॥

(ಶ್ಲೋಕ-47)

ಮೂಲಮ್

ಜನೋಬುಧೋಯಂ ನಿಜಕರ್ಮಬಂಧನಃ
ಸುಖೇಚ್ಛಯಾ ಕರ್ಮ ಸಮೀಹತೇಸುಖಮ್ ।
ಯತ್ಸೇವಯಾ ತಾಂ ವಿಧುನೋತ್ಯಸನ್ಮತಿಂ
ಗ್ರಂಥಿಂ ಸ ಭಿಂದ್ಯಾದ್ಧೃದಯಂ ಸ ನೋ ಗುರುಃ ॥

ಅನುವಾದ

ಅಜ್ಞಾನಿಯಾದ ಈ ಜೀವನು ತನ್ನ ಕರ್ಮಗಳಿಂದ ಬಂಧಿತನಾಗಿದ್ದಾನೆ. ಅವನು ವಿಷಯಸುಖಗಳ ಇಚ್ಛೆಯಿಂದ ಕಷ್ಟಕರವಾದ ಕರ್ಮಾನುಷ್ಠಾನಗಳನ್ನು ಮಾಡುತ್ತಾನೆ. ಯಾವನ ಸೇವೆಯಿಂದ ಅವನ ಈ ಅಜ್ಞಾನವು ನಷ್ಟವಾಗುತ್ತದೋ, ಆ ಪರಮಗುರುವಾದ ನೀನು ನನ್ನ ಹೃದಯಗ್ರಂಥಿಯನ್ನು ಕತ್ತರಿಸಿಬಿಡು. ॥47॥

ಮೂಲಮ್

(ಶ್ಲೋಕ-48)
ಯತ್ಸೇವಯಾಗ್ನೇರಿವ ರುದ್ರರೋದನಂ
ಪುಮಾನ್ವಿಜಹ್ಯಾನ್ಮಲಮಾತ್ಮನಸ್ತಮಃ ।
ಭಜೇತ ವರ್ಣಂ ನಿಜಮೇಷ ಸೋವ್ಯಯೋ
ಭೂಯಾತ್ಸ ಈಶಃ ಪರಮೋ ಗುರೋರ್ಗುರುಃ ॥

ಅನುವಾದ

ಬೆಂಕಿಯಲ್ಲಿ ಕಾಯಿಸಿದ ಚಿನ್ನ-ಬೆಳ್ಳಿಗಳು ಕೊಳೆಯನ್ನು ನೀಗಿ ತನ್ನ ನಿಜವಾದ ಹೊಳಪನ್ನು ಪಡೆಯುವಂತೆಯೇ, ನಿನ್ನ ಸೇವೆಯಿಂದ ಜೀವನು ತನ್ನ ಅಂತಃಕರಣದ ಅಜ್ಞಾನವೆಂಬ ಕೊಳೆಯನ್ನು ತೊಳೆದು ಕೊಂಡು ತನ್ನ ನಿಜವಾದ ಸ್ವರೂಪ ಸ್ಥಿತಿಯಲ್ಲಿ ನೆಲೆಸುವನು. ಸರ್ವಶಕ್ತನೂ, ಅವಿನಾಶಿಯೂ, ಪ್ರಭುವೂ ಆದ ನೀನೇ ನಮ್ಮ ಗುರುಜನರಿಗೂ ಪರಮಗುರುವಾಗಿರುವೆ. ಆದ್ದರಿಂದ ಈಶನಾದ ನೀನೇ ನನಗೂ ಗುರು ಆಗಿರುವೆ. ॥48॥

(ಶ್ಲೋಕ-49)

ಮೂಲಮ್

ನ ಯತ್ಪ್ರಸಾದಾಯುತಭಾಗಲೇಶ-
ಮನ್ಯೇ ಚ ದೇವಾ ಗುರವೋ ಜನಾಃ ಸ್ವಯಮ್ ।
ಕರ್ತುಂ ಸಮೇತಾಃ ಪ್ರಭವಂತಿ ಪುಂಸ-
ಸ್ತಮೀಶ್ವರಂ ತ್ವಾಂ ಶರಣಂ ಪ್ರಪದ್ಯೇ ॥

ಅನುವಾದ

ಪ್ರಪಂಚದಲ್ಲಿ ಎಷ್ಟು ದೇವತೆಗಳಿರುವರೋ, ಎಷ್ಟು ಗುರುಗಳು-ಸಾಧು-ಸತ್ಪುರುಷರಿರುವರೋ, ಅವರೆಲ್ಲರೂ ಒಟ್ಟಾಗಿ ಸೇರಿ ಕೃಪೆದೋರಿದರೂ ಅವರೆಲ್ಲರ ಕೃಪೆಯೂ ಕೃಪಾಸಾಗರನಾದ ನಿನ್ನ ಕೃಪೆಯ ಹತ್ತುಸಾವಿರದಲ್ಲಿ ಒಂದು ಅಂಶಕ್ಕೂ ಸರಿದೂಗಲಾರದು. ಪ್ರಭುವೇ! ನೀನು ಸರ್ವಶಕ್ತನಾಗಿರುವೆ. ನಾನು ನಿನ್ನನ್ನೇ ಶರಣು ಹೋಗುತ್ತೇನೆ. ॥49॥

(ಶ್ಲೋಕ-50)

ಮೂಲಮ್

ಅಚಕ್ಷುರಂಧಸ್ಯ ಯಥಾಗ್ರಣೀ ಕೃತ-
ಸ್ತಥಾ ಜನಸ್ಯಾವಿದುಷೋಬುಧೋ ಗುರುಃ ।
ತ್ವಮರ್ಕದೃಕ್ಸರ್ವದೃಶಾಂ ಸಮೀಕ್ಷಣೋ
ಕೃತೋ ಗುರುರ್ನಃ ಸ್ವಗತಿಂ ಬುಭುತ್ಸತಾಮ್ ॥

ಅನುವಾದ

ಕುರುಡನಿಗೆ ಕುರುಡನೇ ದಾರಿನಡೆಸುವವನಾಗುವಂತೆಯೇ ಅಜ್ಞಾನಿಯಾದ ಜೀವನು ಅಜ್ಞಾನಿಯನ್ನೇ ತನ್ನ ಗುರುವನ್ನಾಗಿಸಿಕೊಳ್ಳುವನು. ನೀನು ಸೂರ್ಯನಂತೆ ಸ್ವಯಂ ಪ್ರಕಾಶನೂ, ಸಮಸ್ತ ಇಂದ್ರಿಯಗಳ ಪ್ರೇರಕನೂ ಆಗಿರುವೆ. ಆತ್ಮತತ್ತ್ವದ ಜಿಜ್ಞಾಸುಗಳಾದ ನಾವು ನಿನ್ನನ್ನೇ ಗುರುವಾಗಿ ಪರಿಗ್ರಹಿಸಿದ್ದೇವೆ. ॥50॥

(ಶ್ಲೋಕ-51)

ಮೂಲಮ್

ಜನೋ ಜನಸ್ಯಾದಿಶತೇಸತೀಂ ಮತಿಂ
ಯಯಾ ಪ್ರಪದ್ಯೇತ ದುರತ್ಯಯಂ ತಮಃ ।
ತ್ವಂ ತ್ವವ್ಯಯಂ ಜ್ಞಾನಮಮೋಘಮಂಜಸಾ
ಪ್ರಪದ್ಯತೇ ಯೇ ನ ಜನೋ ನಿಜಂ ಪದಮ್ ॥

ಅನುವಾದ

ಅಜ್ಞಾನಿಯಾದ ಮನುಷ್ಯನು ಮಾಡುವ ಉಪದೇಶವು ಅಜ್ಞಾನವಾಗಿಯೇ ಇರುತ್ತದೆ. ಅವನಿಂದ ಸಂಸಾರರೂಪವಾದ ಅಂಧಕಾರವೇ ಹೆಚ್ಚೆಚ್ಚು ದೊರೆಯುತ್ತದೆ. ಆದರೆ ನೀನಾದರೋ ಅವಿನಾಶಿಯಾದ, ಅಮೋಘವಾದ ಜ್ಞಾನವನ್ನೇ ಉಪದೇಶಿಸುವೆ. ಇದರಿಂದ ಮನುಷ್ಯನು ಸುಲಭವಾಗಿ ಸ್ವಸ್ವರೂಪವನ್ನು ಪಡೆದುಕೊಳ್ಳುವನು. ॥51॥

(ಶ್ಲೋಕ-52)

ಮೂಲಮ್

ತ್ವಂ ಸರ್ವಲೋಕಸ್ಯ ಸುಹೃತ್ಪ್ರಿಯೇಶ್ವರೋ
ಹ್ಯಾತ್ಮಾ ಗುರುರ್ಜ್ಞಾನಮಭೀಷ್ಟಸಿದ್ಧಿಃ ।
ತಥಾಪಿ ಲೋಕೋ ನ ಭವಂತಮಂದಧೀ-
ರ್ಜಾನಾತಿ ಸಂತಂ ಹೃದಿ ಬದ್ಧಕಾಮಃ ॥

ಅನುವಾದ

ಮಹಾನುಭಾವನೇ! ನೀನು ಸಮಸ್ತ ಜನರಿಗೂ ಹಿತೈಷಿಯೂ, ಪ್ರಿಯತಮನೂ, ಒಡೆಯನೂ, ಆತ್ಮನೂ ಆಗಿರುವೆ. ಗುರುವಿನ ಮೂಲಕ ದೊರೆಯುವ ಜ್ಞಾನವೂ, ಅಭೀಷ್ಟವಾದ ಸಿದ್ಧಿಯೂ ನಿನ್ನ ಸ್ವರೂಪವೇ ಆಗಿದೆ. ಹೀಗಿದ್ದರೂ ಕಾಮನೆಗಳಲ್ಲಿ ಬಂಧಿತರಾದ ಜನರು ಕುರುಡರಾಗಿದ್ದಾರೆ. ಅವರಿಗೆ ನೀನೇ ಅವರ ಹೃದಯದಲ್ಲಿ ವಿರಾಜಿಸುತ್ತಿರುವೆ ಎಂಬುದೂ ತಿಳಿಯದು. ॥52॥

(ಶ್ಲೋಕ-53)

ಮೂಲಮ್

ತಂ ತ್ವಾಮಹಂ ದೇವವರಂ ವರೇಣ್ಯಂ
ಪ್ರಪದ್ಯ ಈಶಂ ಪ್ರತಿಬೋಧನಾಯ ।
ಛಿಂದ್ಯರ್ಥದೀಪೈರ್ಭಗವನ್ವಚೋಭಿ-
ರ್ಗ್ರಂಥೀನ್ ಹೃದಯ್ಯಾನ್ವಿವೃಣು ಸ್ವಮೋಕಃ ॥

ಅನುವಾದ

ನೀನು ದೇವತೆಗಳಿಗೂ ಪರಮಾರಾಧ್ಯ, ಪರಮ ಪೂಜನೀಯ ಪರಮೇಶ್ವರನಾಗಿರುವೆ. ನಾನು ನಿನ್ನಿಂದ ಜ್ಞಾನವನ್ನು ಪಡೆಯಲಿಕ್ಕಾಗಿ ನಿನಗೆ ಶರಣುಬಂದಿರುವೆನು. ಭಗವಂತಾ! ಪರಮಾರ್ಥವನ್ನು ಪ್ರಕಾಶಗೊಳಿಸುವಂತಹ ನಿನ್ನ ವಾಣಿಯ ಮೂಲಕ ನನ್ನ ಹೃದಯಗ್ರಂಥಿಯನ್ನು ಭೇದಿಸಿಬಿಡು ಹಾಗೂ ನಿನ್ನ ನಿಜ ಸ್ವರೂಪವನ್ನು ಪ್ರಕಾಶಗೊಳಿಸು. ॥53॥

(ಶ್ಲೋಕ-54)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯುಕ್ತವಂತಂ ನೃಪತಿಂ ಭಗವಾನಾದಿಪೂರುಷಃ ।
ಮತ್ಸ್ಯರೂಪೀ ಮಹಾಂಭೋಧೌ ವಿಹರನ್ ತತ್ತ್ವಮಬ್ರವೀತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ—ಪರೀಕ್ಷಿತನೇ! ಸತ್ಯವ್ರತರಾಜನು ಹೀಗೆ ಪ್ರಾರ್ಥಿಸಿದಾಗ ಮತ್ಸ್ಯರೂಪ ಧಾರೀ ಭಗವಾನ್ ಪುರುಷೋತ್ತಮನು ಪ್ರಳಯಸಮುದ್ರ ದಲ್ಲಿ ವಿಹರಿಸುತ್ತಿರುವಂತೆಯೇ ಅವನಿಗೆ ಆತ್ಮತತ್ತ್ವವನ್ನು ಉಪದೇಶಿಸಿದನು.॥54॥

(ಶ್ಲೋಕ-55)

ಮೂಲಮ್

ಪುರಾಣಸಂಹಿತಾಂ ದಿವ್ಯಾಂ ಸಾಂಖ್ಯಯೋಗಕ್ರಿಯಾವತೀಮ್ ।
ಸತ್ಯವ್ರತಸ್ಯ ರಾಜರ್ಷೇರಾತ್ಮಗುಹ್ಯಮಶೇಷತಃ ॥

ಅನುವಾದ

ರಾಜರ್ಷಿ ಸತ್ಯವ್ರತನಿಗೆ ಭಗವಂತನು ತನ್ನ ಸ್ವರೂಪದ ಸಮಗ್ರ ರಹಸ್ಯವನ್ನು ವರ್ಣಿಸುತ್ತಾ ಜ್ಞಾನ, ಭಕ್ತಿ, ಕರ್ಮಯೋಗಗಳಿಂದ ಪರಿಪೂರ್ಣವಾದ ಜ್ಞಾನವನ್ನು ಉಪದೇಶಿಸಿದನು. ಅದನ್ನೇ ‘ಮತ್ಸ್ಯ ಪುರಾಣ’ವೆಂದು ಹೇಳುತ್ತಾರೆ. ॥55॥

(ಶ್ಲೋಕ-56)

ಮೂಲಮ್

ಅಶ್ರೌಷೀದೃಷಿಭಿಃ ಸಾಕಮಾತ್ಮತತ್ತ್ವಮಸಂಶಯಮ್ ।
ನಾವ್ಯಾಸೀನೋ ಭಗವತಾ ಪ್ರೋಕ್ತಂ ಬ್ರಹ್ಮ ಸನಾತನಮ್ ॥

ಅನುವಾದ

ಸತ್ಯವ್ರತನು ಸಪ್ತರ್ಷಿಗಳೊಂದಿಗೆ ನೌಕೆಯಲ್ಲಿ ಕುಳಿತುಕೊಂಡೇ ಭಗವಂತನಿಂದ ಹೇಳಲ್ಪಟ್ಟ ಸನಾತನ ಬ್ರಹ್ಮಸ್ವರೂಪ ಆತ್ಮತತ್ತ್ವವನ್ನು ಸ್ವಲ್ಪವೂ ಸಂದೇಹಕ್ಕೆ ಎಣೆಯಿಲ್ಲದೆ ಶ್ರವಣಿಸಿದನು. ॥56॥

(ಶ್ಲೋಕ-57)

ಮೂಲಮ್

ಅತೀತಪ್ರಲಯಾಪಾಯ ಉತ್ಥಿತಾಯ ಸ ವೇಧಸೇ ।
ಹತ್ವಾಸುರಂ ಹಯಗ್ರೀವಂ ವೇದಾನ್ ಪ್ರತ್ಯಾಹರದ್ಧರಿಃ ॥

ಅನುವಾದ

ಇದಾದಬಳಿಕ ಹಿಂದಿನ ಪ್ರಳಯವು ಅಂತ್ಯವಾಗಿ ಬ್ರಹ್ಮ ದೇವರು ಎಚ್ಚರಗೊಂಡಾಗ ಭಗವಂತನು ಹಯಗ್ರೀವ ಅಸುರನನ್ನು ಕೊಂದು ಅವನು ಕದ್ದೊಯ್ದ ವೇದಗಳನ್ನು ತಂದು ಬ್ರಹ್ಮದೇವರಿಗೆ ಹಿಂದಿರುಗಿಸಿದನು. ॥57॥

(ಶ್ಲೋಕ-58)

ಮೂಲಮ್

ಸ ತು ಸತ್ಯವ್ರತೋ ರಾಜಾ ಜ್ಞಾನವಿಜ್ಞಾನಸಂಯುತಃ ।
ವಿಷ್ಣೋಃ ಪ್ರಸಾದಾತ್ಕಲ್ಪೇಸ್ಮಿನ್ನಾಸೀದ್ವೈವಸ್ವತೋ ಮನುಃ ॥

ಅನುವಾದ

ಭಗವಂತನ ಕೃಪೆಯಿಂದ ಸತ್ಯವ್ರತರಾಜನೇ ಜ್ಞಾನ ಮತ್ತು ವಿಜ್ಞಾನದಿಂದ ಕೂಡಿಕೊಂಡು ಈ ಕಲ್ಪದಲ್ಲಿ ವೈವಸ್ವತಮನು ಆದನು. ॥58॥

ಮೂಲಮ್

(ಶ್ಲೋಕ-59)
ಸತ್ಯವ್ರತಸ್ಯ ರಾಜರ್ಷೇರ್ಮಾಯಾಮತ್ಸ್ಯಸ್ಯ ಶಾರ್ಙ್ಗೆಣಃ ।
ಸಂವಾದಂ ಮಹದಾಖ್ಯಾನಂ ಶ್ರುತ್ವಾ ಮುಚ್ಯೇತ ಕಿಲ್ಬಿಷಾತ್ ॥

ಅನುವಾದ

ತನ್ನ ಯೋಗಮಾಯೆಯಿಂದ ಮತ್ಸ್ಯ ರೂಪವನ್ನು ಧರಿಸಿದ ಭಗವಾನ್ ಮಹಾವಿಷ್ಣುವಿನ ಮತ್ತು ರಾಜರ್ಷಿ ಸತ್ಯವ್ರತರ ಈ ಸಂವಾದರೂಪವಾದ ಶ್ರೇಷ್ಠವಾದ ಆಖ್ಯಾನವನ್ನು ಶ್ರವಣಿಸಿ ಮನುಷ್ಯನು ಎಲ್ಲ ವಿಧವಾದ ಪಾಪಗಳಿಂದ ಬಿಡುಗಡೆ ಹೊಂದುವನು. ॥59॥

(ಶ್ಲೋಕ-60)

ಮೂಲಮ್

ಅವತಾರೋ ಹರೇರ್ಯೋಯಂ ಕೀರ್ತಯೇದನ್ವಹಂ ನರಃ ।
ಸಂಕಲ್ಪಾಸ್ತಸ್ಯ ಸಿಧ್ಯಂತಿ ಸ ಯಾತಿ ಪರಮಾಂ ಗತಿಮ್ ॥

ಅನುವಾದ

ಭಗವಂತನ ಈ ಅವತಾರವನ್ನು ಪ್ರತಿದಿನವೂ ಕೀರ್ತಿಸುವವನ ಎಲ್ಲ ಸಂಕಲ್ಪಗಳು ಸಿದ್ಧಿಯಾಗುತ್ತವೆ ಮತ್ತು ಅವನಿಗೆ ಪರಮ ಗತಿಯು ಪ್ರಾಪ್ತವಾಗುತ್ತದೆ. ॥60॥

(ಶ್ಲೋಕ-61)

ಮೂಲಮ್

ಪ್ರಲಯಪಯಸಿ ಧಾತುಃ ಸುಪ್ತಶಕ್ತೇರ್ಮುಖೇಭ್ಯಃ
ಶ್ರುತಿಗಣಮಪನೀತಂ ಪ್ರತ್ಯುಪಾದತ್ತ ಹತ್ವಾ ।
ದಿತಿಜಮಕಥಯದ್ಯೋ ಬ್ರಹ್ಮ ಸತ್ಯವ್ರತಾನಾಂ
ತಮಹಮಖಿಲಹೇತುಂ ಜಿಹ್ಮಮೀನಂ ನತೋಸ್ಮಿ ॥

ಅನುವಾದ

ಪ್ರಳಯಕಾಲದ ಸಮುದ್ರದಲ್ಲಿ, ಬ್ರಹ್ಮದೇವರು ಮಲಗಿದ್ದಾಗ, ಅವರ ಸೃಷ್ಟಿಶಕ್ತಿಯು ಲುಪ್ತವಾಗಿದ್ದಾಗ, ಅವನ ಬಾಯಿಂದ ಹೊರಟ ವೇದಗಳನ್ನು ಕದ್ದು ಹಯಗ್ರೀವನೆಂಬ ದೈತ್ಯನು ಪಾತಾಳಕ್ಕೆ ಕೊಂಡುಹೋಗಿದ್ದನು. ಭಗವಂತನು ಅವನನ್ನು ಸಂಹರಿಸಿ ಆ ವೇದಗಳನ್ನು ಬ್ರಹ್ಮದೇವರಿಗೆ ಹಿಂದಿರುಗಿಸಿದನು ಹಾಗೂ ಸತ್ಯವ್ರತ ಮತ್ತು ಸಪ್ತರ್ಷಿಗಳಿಗೆ ಬ್ರಹ್ಮ ತತ್ತ್ವವನ್ನು ಉಪದೇಶಿಸಿದನು. ಅಂತಹ ಸಮಸ್ತ ಜಗತ್ತಿನ ಪರಮಕಾರಣನಾದ ಮಾಯಾಮತ್ಸ್ಯ ಭಗವಂತನಿಗೆ ನಾನು ನಮಸ್ಕಾರಮಾಡುತ್ತೇನೆ. ॥61॥

ಅನುವಾದ (ಸಮಾಪ್ತಿಃ)

ಇಪ್ಪತ್ತನಾಲ್ಕನೆಯ ಅಧ್ಯಾಯವು ಮುಗಿಯಿತು. ॥24॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ಮತ್ಸ್ಯಾವತಾರಚರಿತಾನುವರ್ಣನಂ ನಾಮ ಚತುರ್ವಿಂಶೋಧ್ಯಾಯಃ ॥24॥
ಎಂಟನೆಯ ಸ್ಕಂಧವು ಸಂಪೂರ್ಣವಾಯಿತು.