[ಇಪ್ಪತ್ತಮೂರನೆಯ ಅಧ್ಯಾಯ]
ಭಾಗಸೂಚನಾ
ಬಲಿಯು ಬಂಧನದಿಂದ ಬಿಡುಗಡೆಹೊಂದಿ ಸುತಲಲೋಕಕ್ಕೆ ಹೋದುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯುಕ್ತವಂತಂ ಪುರುಷಂ ಪುರಾತನಂ
ಮಹಾನುಭಾವೋಖಿಲಸಾಧುಸಂಮತಃ ।
ಬದ್ಧಾಂಜಲಿರ್ಬಾಷ್ಪಕಲಾಕುಲೇಕ್ಷಣೋ
ಭಕ್ತ್ಯುದ್ಗಲೋ ಗದ್ಗದಯಾ ಗಿರಾಬ್ರವೀತ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಪುರಾಣಪುರುಷನಾದ ಭಗವಂತನು ಹೀಗೆ ಹೇಳುತ್ತಲೇ ಸಾಧುಗಳ ಆದರಣೀಯನಾದ ಮಹಾನುಭಾವನಾದ ದೈತ್ಯ ರಾಜನ ಕಣ್ಣುಗಳಿಂದ ಆನಂದಬಾಷ್ಪಗಳು ಸುರಿಯ ತೊಡಗಿದವು. ಪ್ರೇಮೋದ್ರೇಕದಿಂದ ಅವನ ಕಂಠವು ಬಿಗಿಯಿತು. ಕೈಮುಗಿದುಕೊಂಡು ಗದ್ಗದಧ್ವನಿಯಿಂದ ಬಲಿಯು ಭಗವಂತನಲ್ಲಿ ಇಂತೆಂದನು ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಬಲಿರುವಾಚ
ಮೂಲಮ್
ಅಹೋ ಪ್ರಣಾಮಾಯ ಕೃತಃ ಸಮುದ್ಯಮಃ
ಪ್ರಪನ್ನಭಕ್ತಾರ್ಥವಿಧೌ ಸಮಾಹಿತಃ ।
ಯಲ್ಲೋಕಪಾಲೈಸ್ತ್ವದನುಗ್ರಹೋಮರೈ-
ರಲಬ್ಧಪೂರ್ವೋಪಸದೇಸುರೇರ್ಪಿತಃ ॥
ಅನುವಾದ
ಬಲಿಯು ಹೇಳಿದನು — ಪ್ರಭುವೇ! ನಾನಾದರೋ ನಿನಗೆ ಪೂರ್ಣವಾಗಿ ಪ್ರಣಾಮವನ್ನೂ ಮಾಡಲಿಲ್ಲ. ಪ್ರಣಾಮ ಮಾಡಲು ಪ್ರಯತ್ನಿಸಿದೆ ಅಷ್ಟೆ . ಇಷ್ಟರಿಂದಲೇ ನಿನ್ನ ಚರಣ ಕಮಲಗಳಲ್ಲಿ ಶರಣಾಗತರಾದ ಭಕ್ತರಿಗೆ ದೊರೆಯುವಂತಹ ಫಲವು ನನಗೆ ಸಿಕ್ಕಿಬಿಟ್ಟಿತು. ಲೋಕಪಾಲಕರಿಗಾಗಲೀ, ದೇವತೆಗಳಿಗಾಗಲೀ ಅಲಭ್ಯವಾದ ಅನುಗ್ರಹವನ್ನು ನೀಚ ಅಸುರನಾದ ನನ್ನ ಮೇಲೆ ತೋರಿರುವೆ. ಪರಮ ಕರುಣಾಶಾಲಿಯಾದ ನಿನಗೆ ನಮೋ ನಮಃ ॥2॥
(ಶ್ಲೋಕ-3)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯುಕ್ತ್ವಾ ಹರಿಮಾನಮ್ಯ ಬ್ರಹ್ಮಾಣಂ ಸಭವಂ ತತಃ ।
ವಿವೇಶ ಸುತಲಂ ಪ್ರೀತೋ ಬಲಿರ್ಮುಕ್ತಃ ಸಹಾಸುರೈಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಹೀಗೆ ಹೇಳುವಂತೆಯೇ ಬಲಿಯು ವರುಣಪಾಶಗಳಿಂದ ಬಿಡುಗಡೆಹೊಂದಿದನು. ಆಗ ಅವನು ಭಗವಾನ್ ಶ್ರೀಹರಿಯನ್ನೂ, ಬ್ರಹ್ಮದೇವನನ್ನೂ, ರುದ್ರದೇವರನ್ನೂ, ನಮಸ್ಕರಿಸಿ, ಪರಮ ಸಂತುಷ್ಟನಾಗಿ ತನ್ನ ಪರಿವಾರದೊಡನೆ ಸುತಲಲೋಕವನ್ನು ಪ್ರವೇಶಿಸಿದನು. ॥3॥
(ಶ್ಲೋಕ-4)
ಮೂಲಮ್
ಏವಮಿಂದ್ರಾಯ ಭಗವಾನ್ಪ್ರತ್ಯಾನೀಯ ತ್ರಿವಿಷ್ಟಪಮ್ ।
ಪೂರಯಿತ್ವಾದಿತೇಃ ಕಾಮಮಶಾಸತ್ಸಕಲಂ ಜಗತ್ ॥
ಅನುವಾದ
ಈ ವಿಧವಾಗಿ ಭಗವಂತನು ಬಲಿಯಿಂದ ಸ್ವರ್ಗವನ್ನು ಕಿತ್ತುಕೊಂಡು ಇಂದ್ರನಿಗೆ ಕೊಟ್ಟನು. ಅದಿತಿಯ ಆಶಯವನ್ನು ಪೂರ್ಣಗೊಳಿಸಿದನು. ತಾನು ಉಪೇಂದ್ರನಾಗಿ (ಇಂದ್ರನ ತಮ್ಮನಾಗಿ) ಸಮಸ್ತ ಜಗತ್ತನ್ನು ಶಾಸನ ಮಾಡತೊಡಗಿದನು. ॥4॥
(ಶ್ಲೋಕ-5)
ಮೂಲಮ್
ಲಬ್ಧಪ್ರಸಾದಂ ನಿರ್ಮುಕ್ತಂ ಪೌತ್ರಂ ವಂಶಧರಂ ಬಲಿಮ್ ।
ನಿಶಾಮ್ಯ ಭಕ್ತಿಪ್ರವಣಃ ಪ್ರಹ್ಲಾದ ಇದಮಬ್ರವೀತ್ ॥
ಅನುವಾದ
ತನ್ನ ಮೊಮ್ಮಗನಾದ ಬಲಿಯು ವರುಣನ ಪಾಶಗಳಿಂದ ಮುಕ್ತ ನಾದುದನ್ನು ಮತ್ತು ಭಗವಂತನ ಪೂರ್ಣಾನು ಗ್ರಹವನ್ನು ಪಡೆದುಕೊಂಡುದನ್ನು ಭಕ್ತಾಗ್ರೇಸರನಾದ ಪ್ರಹ್ಲಾದನು ನೋಡಿ ಸಂತೋಷಭರಿತನಾಗಿ ಭಕ್ತಿಭಾವದಿಂದ ಭಗವಂತ ನನ್ನು ಇಂತು ಸ್ತುತಿಸಿದನು. ॥5॥
(ಶ್ಲೋಕ-6)
ಮೂಲಮ್ (ವಾಚನಮ್)
ಪ್ರಹ್ಲಾದ ಉವಾಚ
ಮೂಲಮ್
ನೇಮಂ ವಿರಿಂಚೋ ಲಭತೇ ಪ್ರಸಾದಂ
ನ ಶ್ರೀರ್ನ ಶರ್ವಃ ಕಿಮುತಾಪರೇ ತೇ ।
ಯನ್ನೋಸುರಾಣಾಮಸಿ ದುರ್ಗಪಾಲೋ
ವಿಶ್ವಾಭಿವಂದ್ಯೈರಪಿ ವಂದಿತಾಂಘ್ರಿಃ ॥
ಅನುವಾದ
ಪ್ರಹ್ಲಾದನು ಹೇಳಿದನು — ಪ್ರಭುವೇ! ಬ್ರಹ್ಮದೇವರಿ ಗಾಗಲೀ, ಲಕ್ಷ್ಮೀದೇವಿಗಾಗಲೀ, ರುದ್ರದೇವರಿಗಾಗಲೀ ಇಂತಹ ಕೃಪಾ ಪ್ರಸಾದವು ದೊರೆಯಲಿಲ್ಲ. ಹಾಗಿರುವಾಗ ಇತರರ ಮಾತಿರಲಿ, ವಿಶ್ವವಂದ್ಯರಾದ ಬ್ರಹ್ಮಾದಿಗಳು ಯಾರ ಚರಣಾರವಿಂದಗಳಿಗೆ ನಮಸ್ಕರಿಸುವರೋ ಅಂತಹ ಪರಮದಯಾಳುವಾದ ನೀನು ನಮ್ಮಂತಹ ಅಸುರರ ಬಾಗಿಲುಕಾಯುವವನಾದೆ. ಇದೆಂತಹ ಅಚ್ಚರಿಯ ಮಾತು! ॥6॥
(ಶ್ಲೋಕ-7)
ಮೂಲಮ್
ಯತ್ಪಾದಪದ್ಮಮಕರಂದನಿಷೇವಣೇನ
ಬ್ರಹ್ಮಾದಯಃ ಶರಣದಾಶ್ನುವತೇ ವಿಭೂತೀಃ ।
ಕಸ್ಮಾದ್ವಯಂ ಕುಸೃತಯಃ ಖಲಯೋನಯಸ್ತೇ
ದಾಕ್ಷಿಣ್ಯದೃಷ್ಟಿಪದವೀಂ ಭವತಃ ಪ್ರಣೀತಾಃ ॥
ಅನುವಾದ
ಓ ಶರಣಾಗತವತ್ಸಲನಾದ ಪ್ರಭುವೇ! ಬ್ರಹ್ಮಾದಿ ಲೋಕಪಾಲರು ನಿನ್ನ ಚರಣಾರವಿಂದಗಳ ಮಕರಂದವನ್ನು ಪಾನಮಾಡುವುದರಿಂದ ಸೃಷ್ಟಿರಚನಾದಿ ಅನೇಕ ಶಕ್ತಿಗಳನ್ನೂ, ವಿಭೂತಿಗಳನ್ನೂ ಪಡೆದುಕೊಳ್ಳುವರು. ನಾವಾದರೋ ಜನ್ಮ ದಿಂದಲೇ ಖಳರೂ, ಕುಮಾರ್ಗಿಗಳು. ಇಂತಹ ನಮ್ಮ ಮೇಲೆ ನಿನ್ನ ದಾಕ್ಷಿಣ್ಯದಿಂದ ಕೂಡಿದ ಅನುಗ್ರಹ ದೃಷ್ಟಿಯು ಹೇಗೆ ತಾನೇ ಬಿದ್ದೀತು? ಇಂತಹ ಪರಮಾನುಗ್ರಹದಿಂದ ನೀನು ನಮ್ಮ ಮನೆಯ ದ್ವಾರಪಾಲಕನೇ ಅಗಿಬಿಟ್ಟೆಯಲ್ಲ? ॥7॥
(ಶ್ಲೋಕ-8)
ಮೂಲಮ್
ಚಿತ್ರಂ ತವೇಹಿತಮಹೋಮಿತಯೋಗಮಾಯಾ-
ಲೀಲಾವಿಸೃಷ್ಟಭುವನಸ್ಯ ವಿಶಾರದಸ್ಯ ।
ಸರ್ವಾತ್ಮನಃ ಸಮದೃಶೋ ವಿಷಮಃ ಸ್ವಭಾವೋ
ಭಕ್ತಪ್ರಿಯೋ ಯದಸಿ ಕಲ್ಪತರುಸ್ವಭಾವಃ ॥
ಅನುವಾದ
ನೀನು ನಿನ್ನ ಯೋಗ ಮಾಯೆಯಿಂದ ಲೀಲಾಮಾತ್ರದಿಂದ ತ್ರಿಭುವನಗಳನ್ನು ರಚಿಸಿ ಬಿಟ್ಟಿರುವೆ. ನೀನು ಸರ್ವಜ್ಞನೂ, ಸರ್ವಾತ್ಮನೂ, ಸಮದರ್ಶಿಯೂ ಆಗಿರುವೆ. ಹೀಗಿದ್ದರೂ ನಿನ್ನ ಲೀಲಾವಿಲಾಸವು ತುಂಬಾ ವಿಚಿತ್ರವಾಗಿದೆ. ನಿನ್ನ ಸ್ವಭಾವವು ಕಲ್ಪವೃಕ್ಷದಂತೆ ಇದೆ. ಏಕೆಂದರೆ, ನೀನು ನಿನ್ನ ಭಕ್ತರಲ್ಲಿ ಅತ್ಯಂತ ಪ್ರೀತಿಯನ್ನು ತೋರುತ್ತಿರುವೆ. ಇದ ರಿಂದಲೇ ಕೆಲವೊಮ್ಮೆ ಉಪಾಸಕರ ಕುರಿತು ಪಕ್ಷಪಾತ ಮತ್ತು ನಿನಗೆ ವಿಮುಖ ರಾದವರಲ್ಲಿ ನಿರ್ದಯಕತೆಯೂ ಕಂಡು ಬರುತ್ತದೆ. ॥8॥
(ಶ್ಲೋಕ-9)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ವತ್ಸ ಪ್ರಹ್ಲಾದ ಭದ್ರಂ ತೇ ಪ್ರಯಾಹಿ ಸುತಲಾಲಯಮ್ ।
ಮೋದಮಾನಃ ಸ್ವಪೌತ್ರೇಣ ಜ್ಞಾತೀನಾಂ ಸುಖಮಾವಹ ॥
ಅನುವಾದ
ಶ್ರೀಭಗವಂತನು ಹೇಳಿದನು — ವತ್ಸ! ಪ್ರಹ್ಲಾದನೇ! ನಿನಗೆ ಮಂಗಳವಾಗಲಿ. ಈಗ ನೀನು ಕೂಡ ಸುತಲಲೋಕಕ್ಕೆ ಹೋಗು. ಅಲ್ಲಿ ನಿನ್ನ ಮೊಮ್ಮಗನೊಂದಿಗೆ ಆನಂದವಾಗಿ ಇರುತ್ತಾ ನಿನ್ನ ಜ್ಞಾತಿ-ಬಾಂಧವರಿಗೆ ಸುಖದಾಯಕನಾಗು. ॥9॥
(ಶ್ಲೋಕ-10)
ಮೂಲಮ್
ನಿತ್ಯಂ ದ್ರಷ್ಟಾಸಿ ಮಾಂ ತತ್ರ ಗದಾಪಾಣಿಮವಸ್ಥಿತಮ್ ।
ಮದ್ದರ್ಶನಮಹಾಹ್ಲಾದಧ್ವಸ್ತಕರ್ಮನಿಬಂಧನಃ ॥
ಅನುವಾದ
ಅಲ್ಲಿ ನೀನು ನಿತ್ಯವೂ ಗದಾಪಾಣಿಯಾಗಿ ನಿಂತಿರುವ ನನ್ನನ್ನು ನೋಡುವೆ. ನನ್ನ ದರ್ಶನದ ಪರಮಾನಂದದಲ್ಲಿ ಮುಳುಗಿ ಇರುವ ನಿನ್ನ ಸರ್ವ ಕರ್ಮಬಂಧನಗಳು ನಾಶವಾಗಿಹೋಗುವುವು. ॥10॥
(ಶ್ಲೋಕ-11)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಆಜ್ಞಾಂ ಭಗವತೋ ರಾಜನ್ಪ್ರಹ್ಲಾದೋ ಬಲಿನಾ ಸಹ ।
ಬಾಢಮಿತ್ಯಮಲಪ್ರಜ್ಞೋ ಮೂರ್ಧ್ನ್ಯಾಧಾಯ ಕೃತಾಂಜಲಿಃ ॥
(ಶ್ಲೋಕ-12)
ಮೂಲಮ್
ಪರಿಕ್ರಮ್ಯಾದಿಪುರುಷಂ ಸರ್ವಾಸುರಚಮೂಪತಿಃ ।
ಪ್ರಣತಸ್ತದನುಜ್ಞಾತಃ ಪ್ರವಿವೇಶ ಮಹಾಬಿಲಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಸಮಸ್ತ ದೈತ್ಯಸೈನ್ಯಗಳಿಗೂ ಸ್ವಾಮಿಯಾಗಿದ್ದ ವಿಶುದ್ಧ ಬುದ್ಧಿಯುಳ್ಳ ಪ್ರಹ್ಲಾದನು ‘ಹಾಗೆಯೇ ಆಗಲಿ’ ಎಂದು ಹೇಳಿ ಭಗವಂತನ ಆಜ್ಞೆಯನ್ನು ಶಿರಸಾವಹಿಸಿ, ಕೈಜೋಡಿಸಿಕೊಂಡು ಅವನಿಗೆ ನಮಸ್ಕರಿಸಿ, ಬಲಿಯೊಂದಿಗೆ ಆದಿಪುರುಷನಾದ ಭಗವಂತನಿಗೆ ಪ್ರದಕ್ಷಿಣೆ ಬಂದು ವಂದಿಸಿ, ಅವನ ಅನುಜ್ಞೆಯನ್ನು ಪಡೆದುಕೊಂಡು ಸುತಲಲೋಕಕ್ಕೆ ಹೊರಟು ಹೋದನು. ॥11-12॥
(ಶ್ಲೋಕ-13)
ಮೂಲಮ್
ಅಥಾಹೋಶನಸಂ ರಾಜನ್ಹರಿರ್ನಾರಾಯಣೋಂತಿಕೇ ।
ಆಸೀನಮೃತ್ವಿಜಾಂ ಮಧ್ಯೇ ಸದಸಿ ಬ್ರಹ್ಮವಾದಿನಾಮ್ ॥
ಅನುವಾದ
ರಾಜೇಂದ್ರನೇ! ಆಗ ಭಗವಾನ್ ಶ್ರೀಹರಿಯು ಬ್ರಹ್ಮವಾದಿಗಳಾದ ಋತ್ವಿ ಜರ ಸಭೆಯಲ್ಲಿ ತನ್ನ ಬಳಿಯಲ್ಲೇ ಕುಳಿತಿರುವ ಶುಕ್ರಾ ಚಾರ್ಯರನ್ನು ಕುರಿತು ಇಂತೆಂದನು ॥13॥
(ಶ್ಲೋಕ-14)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಬ್ರಹ್ಮನ್ಸಂತನು ಶಿಷ್ಯಸ್ಯ ಕರ್ಮಚ್ಛಿದ್ರಂ ವಿತನ್ವತಃ ।
ಯತ್ತತ್ಕರ್ಮಸು ವೈಷಮ್ಯಂ ಬ್ರಹ್ಮದೃಷ್ಟಂ ಸಮಂ ಭವೇತ್ ॥
ಅನುವಾದ
ಶ್ರೀಭಗವಂತನು ಹೇಳಿದನು — ‘ಬ್ರಾಹ್ಮಣಶ್ರೇಷ್ಠನೇ! ನಿಮ್ಮ ಶಿಷ್ಯನು ಯಜ್ಞವನ್ನು ಮಾಡುತ್ತಿದ್ದನು. ಅದರಲ್ಲಿ ಇರುವ ಕೊರತೆಯನ್ನು ನೀವು ಪೂರ್ಣಗೊಳಿಸಿರಿ. ಏಕೆಂದರೆ, ಕರ್ಮಗಳಲ್ಲೇನಾದರೂ ನ್ಯೂನಾತಿರೇಕಗಳು ಉಂಟಾದರೆ, ಅವೆಲ್ಲವೂ ಬ್ರಾಹ್ಮಣರ ಕೃಪಾ ದೃಷ್ಟಿಯಿಂದಲೇ ಪರಿಹಾರವಾಗಿ ಬಿಡುತ್ತವೆ.’ ॥14॥
(ಶ್ಲೋಕ-15)
ಮೂಲಮ್ (ವಾಚನಮ್)
ಶುಕ್ರ ಉವಾಚ
ಮೂಲಮ್
ಕುತಸ್ತತ್ಕರ್ಮವೈಷಮ್ಯಂ ಯಸ್ಯ ಕರ್ಮೆಶ್ವರೋ ಭವಾನ್ ।
ಯಜ್ಞೇಶೋ ಯಜ್ಞಪುರುಷಃ ಸರ್ವಭಾವೇನ ಪೂಜಿತಃ ॥
ಅನುವಾದ
ಶುಕ್ರಾಚಾರ್ಯರು ಹೇಳಿದರು — ಭಗವಂತನೇ! ಯಾರು ತನ್ನ ಸಮಸ್ತ ಕರ್ಮಗಳನ್ನು ಕರ್ಮೇಶ್ವರನಾದ ನಿನಗೆ ಅರ್ಪಿಸಿ, ಯಜ್ಞೇಶ್ವರನೂ, ಯಜ್ಞಪುರುಷನೂ ಆದ ನಿನ್ನನ್ನು ಆರಾಧಿಸಿರುವನೋ, ಅವನ ಕರ್ಮದಲ್ಲಿ ಕೊರತೆ, ವಿಷಮತೆ ಹೇಗೆ ಉಳಿಯ ಬಲ್ಲದು? ॥15॥
(ಶ್ಲೋಕ-16)
ಮೂಲಮ್
ಮಂತ್ರತಸ್ತಂತ್ರತಶ್ಛಿದ್ರಂ ದೇಶಕಾಲಾರ್ಹವಸ್ತುತಃ ।
ಸರ್ವಂ ಕರೋತಿ ನಿಶ್ಛಿದ್ರಂ ನಾಮಸಂಕೀರ್ತನಂ ತವ ॥
ಅನುವಾದ
ಏಕೆಂದರೆ, ಮಂತ್ರಗಳ, ಅನುಷ್ಠಾನ ಪದ್ಧತಿಯ, ದೇಶ, ಕಾಲ, ಪಾತ್ರ, ವಸ್ತು ಇವೆಲ್ಲವುಗಳ ಲೋಪ-ದೋಷಗಳು ಅಚ್ಯುತಾನಂತ ಗೋವಿಂದ ಎಂಬ ನಿನ್ನ ನಾಮಸಂಕೀರ್ತನೆಯಿಂದಲೇ ಪರಿಹಾರವಾಗುವುವು. ನಿನ್ನ ನಾಮವು ಎಲ್ಲ ಕೊರತೆಗಳನ್ನೂ ಪೂರ್ಣಗೊಳಿಸುವುದು. ॥16॥
ಮೂಲಮ್
(ಶ್ಲೋಕ-17)
ತಥಾಪಿ ವದತೋ ಭೂಮನ್ಕರಿಷ್ಯಾಮ್ಯನುಶಾಸನಮ್ ।
ಏತಚ್ಛ್ರೇಯಃ ಪರಂ ಪುಂಸಾಂ ಯತ್ತವಾಜ್ಞಾನುಪಾಲನಮ್ ॥
ಅನುವಾದ
ಆದರೂ ಅನಂತನೇ! ನೀನು ಸ್ವತಃ ಹೇಳುತ್ತಿರುವೆ. ಆದ್ದರಿಂದ ನಿನ್ನ ಆಜ್ಞೆಯನ್ನು ಅವಶ್ಯವಾಗಿ ಪಾಲಿಸುತ್ತೇವೆ. ನಿನ್ನ ಆಜ್ಞೆಯನ್ನು ಪಾಲಿಸುವುದೇ ಮನುಷ್ಯನಿಗೆ ಶ್ರೇಯಸ್ಸಿನ ದೊಡ್ಡ ಸಾಧನೆಯಾಗಿದೆ. ॥17॥
(ಶ್ಲೋಕ-18)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅಭಿನಂದ್ಯ ಹರೇರಾಜ್ಞಾಮುಶನಾ ಭಗವಾನಿತಿ ।
ಯಜ್ಞಚ್ಛಿದ್ರಂ ಸಮಾಧತ್ತ ಬಲೇರ್ವಿಪ್ರರ್ಷಿಭಿಃ ಸಹ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ರಾಜಾ! ಪೂಜ್ಯರಾದ ಶುಕ್ರಾಚಾರ್ಯರು ಭಗವಾನ್ ಶ್ರೀಹರಿಯ ಈ ಆಜ್ಞೆಯನ್ನು ಶಿರಸಾವಹಿಸಿ ಇತರ ಬ್ರಹ್ಮರ್ಷಿಗಳೊಡನೆ ಬಲಿಯ ಯಜ್ಞದಲ್ಲಿ ಉಳಿದಿರುವ ಕರ್ಮಾಂಗಗಳನ್ನು ವಿಧಿವತ್ತಾಗಿ ಪೂರ್ಣಗೊಳಿಸಿದರು. ॥18॥
(ಶ್ಲೋಕ-19)
ಮೂಲಮ್
ಏವಂ ಬಲೇರ್ಮಹೀಂ ರಾಜನ್ಭಿಕ್ಷಿತ್ವಾ ವಾಮನೋ ಹರಿಃ ।
ದದೌ ಭ್ರಾತ್ರೇ ಮಹೇಂದ್ರಾಯ ತ್ರಿದಿವಂ ಯತ್ಪರೈರ್ಹೃತಮ್ ॥
ಅನುವಾದ
ಪರೀಕ್ಷಿತನೇ! ಹೀಗೆ ಭಗವಾನ್ ವಾಮನನು ಬಲಿಯಿಂದ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ದಾನವಾಗಿ ಕೇಳಿ, ಶತ್ರುಗಳು ಅಪಹರಿಸಿಕೊಂಡಿದ್ದ ಸ್ವರ್ಗದ ರಾಜ್ಯವನ್ನು ತನ್ನ ಅಣ್ಣನಾದ ಇಂದ್ರನಿಗೆ ಕೊಡಿಸಿದನು. ॥19॥
(ಶ್ಲೋಕ-20)
ಮೂಲಮ್
ಪ್ರಜಾಪತಿಪತಿರ್ಬ್ರಹ್ಮಾ ದೇವರ್ಷಿ ಪಿತೃಭೂಮಿಪೈಃ ।
ದಕ್ಷಭೃಗ್ವಂಗಿರೋಮುಖ್ಯೈಃ ಕುಮಾರೇಣ ಭವೇನ ಚ ॥
(ಶ್ಲೋಕ-21)
ಮೂಲಮ್
ಕಶ್ಯಪಸ್ಯಾದಿತೇಃ ಪ್ರೀತ್ಯೈ ಸರ್ವಭೂತಭವಾಯ ಚ ।
ಲೋಕಾನಾಂ ಲೋಕಪಾಲಾನಾಮಕರೋದ್ವಾಮನಂ ಪತಿಮ್ ॥
ಅನುವಾದ
ಇದಾದ ಬಳಿಕ ಪ್ರಜಾಪತಿಗಳಿಗೆ ಒಡೆಯರಾದ ಬ್ರಹ್ಮದೇವರು ದೇವತೆಗಳು, ಋಷಿಗಳು, ಪಿತೃಗಳು, ಮನು, ದಕ್ಷ, ಭೃಗು, ಅಂಗಿರಾ, ಸನತ್ಕುಮಾರರು ಮತ್ತು ರುದ್ರದೇವರು ಇವರುಗಳೊಡನೆ ಕಶ್ಯಪ-ಅದಿತಿಯರಿಗೆ ಸಂತೋಷಗೊಳಿಸಲು ಹಾಗೂ ಸಮಸ್ತ ಪ್ರಾಣಿಗಳ ಅಭ್ಯುದಯಕ್ಕಾಗಿ, ಎಲ್ಲ ಲೋಕಗಳಿಗೂ, ಲೋಕಪಾಲಕರಿಗೂ ಒಡೆಯನನ್ನಾಗಿ ಶ್ರೀವಾಮನಮೂರ್ತಿಯನ್ನು ಅಭಿಷೇಕ ಮಾಡಿದರು. ॥20-21॥
(ಶ್ಲೋಕ-22)
ಮೂಲಮ್
ವೇದಾನಾಂ ಸರ್ವದೇವಾನಾಂ ಧರ್ಮಸ್ಯ ಯಶಸಃ ಶ್ರಿಯಃ ।
ಮಂಗಲಾನಾಂ ವ್ರತಾನಾಂ ಚ ಕಲ್ಪಂ ಸ್ವರ್ಗಾಪವರ್ಗಯೋಃ ॥
(ಶ್ಲೋಕ-23)
ಮೂಲಮ್
ಉಪೇಂದ್ರಂ ಕಲ್ಪಯಾಂಚಕ್ರೇ ಪತಿಂ ಸರ್ವವಿಭೂತಯೇ ।
ತದಾ ಸರ್ವಾಣಿ ಭೂತಾನಿ ಭೃಶಂ ಮುಮುದಿರೇ ನೃಪ ॥
ಅನುವಾದ
ಪರೀಕ್ಷಿತನೇ! ವೇದಗಳು, ಸಮಸ್ತ ದೇವತೆಗಳು, ಧರ್ಮ, ಯಶಸ್ಸು, ಲಕ್ಷ್ಮೀ, ಮಂಗಳ, ವ್ರತ, ಸ್ವರ್ಗ, ಅಪ ವರ್ಗ ಇವೆಲ್ಲದರ ರಕ್ಷಕನ ರೂಪದಲ್ಲಿ ಸಮಸ್ತರ ಪರಮ ಕಲ್ಯಾಣಕ್ಕಾಗಿ ಸರ್ವಶಕ್ತಿವಂತನಾದ ಭಗವಾನ್ ವಾಮನನನ್ನು ಬ್ರಹ್ಮದೇವರು ಉಪೇಂದ್ರನ ಪದವಿಯಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ ಮಾಡಿದರು. ಇದನ್ನು ನೋಡಿ ಎಲ್ಲ ಪ್ರಾಣಿಗಳಿಗೂ ಮಹದಾನಂದವಾಯಿತು. ॥22-23॥
(ಶ್ಲೋಕ-24)
ಮೂಲಮ್
ತತಸ್ತ್ವಿಂದ್ರಃ ಪುರಸ್ಕೃತ್ಯ ದೇವಯಾನೇನ ವಾಮನಮ್ ।
ಲೋಕಪಾಲೈರ್ದಿವಂ ನಿನ್ಯೇ ಬ್ರಹ್ಮಣಾ ಚಾನುಮೋದಿತಃ ॥
ಅನುವಾದ
ಬಳಿಕ ದೇವೇಂದ್ರನು ಬ್ರಹ್ಮದೇವರ ಅಪ್ಪಣೆಯಂತೆ ಲೋಕಪಾಲಕರೊಂದಿಗೆ ವಾಮನ ಭಗವಂತನನ್ನು ಮುಂದೆಮಾಡಿ ಕೊಂಡು ವಿಮಾನದಲ್ಲಿ ಕುಳ್ಳಿರಿಸಿಕೊಂಡು ತನ್ನೊಂದಿಗೆ ಸ್ವರ್ಗಕ್ಕೆ ಕೊಂಡುಹೋದನು. ॥24॥
(ಶ್ಲೋಕ-25)
ಮೂಲಮ್
ಪ್ರಾಪ್ಯ ತ್ರಿಭುವನಂ ಚೇಂದ್ರ ಉಪೇಂದ್ರಭುಜಪಾಲಿತಃ ।
ಶ್ರಿಯಾ ಪರಮಯಾ ಜುಷ್ಟೋ ಮುಮುದೇ ಗತಸಾಧ್ವಸಃ ॥
ಅನುವಾದ
ದೇವೇಂದ್ರನಿ ಗಾದರೋ ಮೂರು ಲೋಕದ ರಾಜ್ಯ ದೊರೆಯಿತು. ಅದಕ್ಕಿಂತಲೂ ಮಿಗಿಲಾಗಿ ಭಗವಾನ್ ವಾಮನನ ಕರ ಕಮಲಗಳ ಛತ್ರಛಾಯೆ ದೊರೆಯಿತು. ಸರ್ವಶ್ರೇಷ್ಠ ಐಶ್ವರ್ಯಲಕ್ಷ್ಮಿಯಿಂದ ಸೇವಿತನಾಗಿ ಅವನು ನಿರ್ಭಯನಾಗಿ ಆನಂದೋತ್ಸವವನ್ನು ಆಚರಿಸಿದನು. ॥25॥
(ಶ್ಲೋಕ-26)
ಮೂಲಮ್
ಬ್ರಹ್ಮಾ ಶರ್ವಃ ಕುಮಾರಶ್ಚ ಭೃಗ್ವಾದ್ಯಾ ಮುನಯೋ ನೃಪ ।
ಪಿತರಃ ಸರ್ವಭೂತಾನಿ ಸಿದ್ಧಾ ವೈಮಾನಿಕಾಶ್ಚ ಯೇ ॥
(ಶ್ಲೋಕ-27)
ಮೂಲಮ್
ಸುಮಹತ್ಕರ್ಮ ತದ್ವಿಷ್ಣೋರ್ಗಾಯಂತಃ ಪರಮಾದ್ಭುತಮ್ ।
ಧಿಷ್ಣ್ಯಾನಿ ಸ್ವಾನಿ ತೇ ಜಗ್ಮುರದಿತಿಂ ಚ ಶಶಂಸಿರೇ ॥
ಅನುವಾದ
ಶಿವ, ವಿರಿಂಚಿ, ಸನತ್ಕುಮಾರರು, ಭೃಗುವೇ ಮುಂತಾದ ಮುನಿಗಳು, ಪಿತೃಗಳು, ಸಮಸ್ತ ಪ್ರಾಣಿಗಳು, ಸಿದ್ಧರೂ, ವಿಮಾನಾ ರೂಢರಾದ ದೇವತೆಗಳು ಭಗವಂತನ ಈ ಪರಮ ಅದ್ಭುತವಾದ ಹಾಗೂ ಅತ್ಯಂತ ಮಹತ್ಕರ್ಮವನ್ನು ಹೇಳುತ್ತಾ, ಅದಿತಿದೇವಿಯನ್ನು ಶ್ಲಾಘಿಸುತ್ತಾ ತಮ್ಮ-ತಮ್ಮ ಲೋಕಗಳಿಗೆ ತೆರಳಿದರು. ॥26-27॥
(ಶ್ಲೋಕ-28)
ಮೂಲಮ್
ಸರ್ವಮೇತನ್ಮಯಾಖ್ಯಾತಂ ಭವತಃ ಕುಲನಂದನ ।
ಉರುಕ್ರಮಸ್ಯ ಚರಿತಂ ಶ್ರೋತೃಣಾಮಘಮೋಚನಮ್ ॥
ಅನುವಾದ
ಕುರುನಂದನನೇ! ಕೇಳಿದವರ ಸಮಸ್ತ ಪಾಪಗಳನ್ನು ಪರಿಹರಿಸುವ ಭಗವಾನ್ ತ್ರಿವಿಕ್ರಮನ ಅದ್ಭುತವಾದ ಈ ಚರಿತ್ರೆಯನ್ನು ನಾನು ನಿನಗೆ ಹೇಳಿರುತ್ತೇನೆ. ॥28॥
(ಶ್ಲೋಕ-29)
ಮೂಲಮ್
ಪಾರಂ ಮಹಿಮ್ನ ಉರು ವಿಕ್ರಮತೋ ಗೃಣಾನೋ
ಯಃ ಪಾರ್ಥಿವಾನಿ ವಿಮಮೇ ಸ ರಜಾಂಸಿ ಮರ್ತ್ಯಃ ।
ಕಿಂ ಜಾಯಮಾನ ಉತ ಜಾತ ಉಪೈತಿ ಮರ್ತ್ಯ
ಇತ್ಯಾಹ ಮಂತ್ರದೃಗೃಷಿಃ ಪುರುಷಸ್ಯ ಯಸ್ಯ॥
ಅನುವಾದ
ಭಗವಂತನ ಲೀಲೆಗಳು ಅನಂತ. ಅವನ ಮಹಿಮೆ ಅಪಾರ. ಅವನ ಮಹಿಮೆಯ ಪಾರವನ್ನು ಕಾಣಲಿಚ್ಛಿಸುವವನು ಪೃಥಿವೀಯ ಪರಮಾಣುಗಳನ್ನು ಎಣಿಸಲು ಹೊರಟಿರುವಂತೆ ಇದೆ. ಭಗವಂತನ ಸಂಬಂಧದಲ್ಲಿ ಮಂತ್ರದ್ರಷ್ಟಾರ ರಾದ ಮಹರ್ಷಿ ವಸಿಷ್ಠರು ವೇದದಲ್ಲಿ ಭಗವಂತನ ಮಹಿಮೆಯ ಪಾರವನ್ನು ಕಾಣಬಲ್ಲ ಪುರುಷನು ಈ ಹಿಂದೆ ಯಾರೂ ಇರಲಿಲ್ಲ, ಈಗಲೂ ಇಲ್ಲ, ಮುಂದೆಯೂ ಇರಲಾರರು’ ಎಂದು ಹೇಳಿರುವರು. ॥29॥
(ಶ್ಲೋಕ-30)
ಮೂಲಮ್
ಯ ಇದಂ ದೇವದೇವಸ್ಯ ಹರೇರರದ್ಭುತಕರ್ಮಣಃ ।
ಅವತಾರಾನುಚರಿತಂ ಶೃಣ್ವನ್ಯಾತಿ ಪರಾಂ ಗತಿಮ್ ॥
ಅನುವಾದ
ದೇವತೆಗಳ ಆರಾಧ್ಯ ದೇವನಾದ ಅದ್ಭುತಲೀಲಾಧಾರೀ ವಾಮನ ಭಗವಂತನ ಈ ಅವತಾರ ಚರಿತ್ರವನ್ನು ಶ್ರವಣಿಸುವವನಿಗೆ ಪರಮಗತಿಯು ಪ್ರಾಪ್ತವಾಗುವುದು. ॥30॥
(ಶ್ಲೋಕ-31)
ಮೂಲಮ್
ಕ್ರಿಯಮಾಣೇ ಕರ್ಮಣೀದಂ ದೈವೇ ಪಿತ್ರ್ಯೇಥ ಮಾನುಷೇ ।
ಯತ್ರ ಯತ್ರಾನುಕೀರ್ತ್ಯೇತ ತತ್ತೇಷಾಂ ಸುಕೃತಂ ವಿದುಃ ॥
ಅನುವಾದ
ದೇವಯಜ್ಞ, ಪಿತೃಯಜ್ಞ, ಮನುಷ್ಯ ಯಜ್ಞ (ಅತಿಥಿಸೇವೆ) ಮುಂತಾದ ಯಾವುದೇ ಕರ್ಮಗಳ ಅನುಷ್ಠಾನ ನಡೆಯುವಲ್ಲಿ ಭಗವಂತನ ಈ ಲೀಲೆಯ ಕೀರ್ತನೆಯು ಆ ಕರ್ಮವನ್ನು ಸಫಲಗೊಳಿಸುತ್ತದೆ ಎಂದು ಮಹಾ-ಮಹಾ ವಿದ್ವಾಂಸರು ಹೇಳುತ್ತಾರೆ. ॥31॥
ಅನುವಾದ (ಸಮಾಪ್ತಿಃ)
ಇಪ್ಪತ್ತಮೂರನೆಯ ಅಧ್ಯಾಯವು ಮುಗಿಯಿತು. ॥23॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ವಾಮನಾವತಾರಚರಿತೇ ತ್ರಯೋವಿಂಶೋಧ್ಯಾಯಃ ॥23॥