[ಇಪ್ಪತ್ತೆರಡನೆಯ ಅಧ್ಯಾಯ]
ಭಾಗಸೂಚನಾ
ಬಲಿಯು ಭಗವಂತನನ್ನು ಸ್ತುತಿಸಿದುದು ಭಗವಂತನು ಬಲಿಗೆ ಪ್ರಸನ್ನನಾದುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ವಿಪ್ರಕೃತೋ ರಾಜನ್ಬಲಿರ್ಭಗವತಾಸುರಃ ।
ಭಿದ್ಯಮಾನೋಪ್ಯಭಿನ್ನಾತ್ಮಾ ಪ್ರತ್ಯಾಹಾವಿಕ್ಲವಂ ವಚಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಹೀಗೆ ಭಗವಂತನು ಬಲಿಯನ್ನು ಬಹಳವಾಗಿ ತಿರಸ್ಕರಿಸಿ ಮಾತಾಡಿದರೂ ಬಲಿಯು ಧೈರ್ಯದಿಂದ ಕದಲಲಿಲ್ಲ. ಸ್ವಲ್ಪವಾದರೂ ಎದೆಗುಂದದೆ ನಿರ್ಭಯನಾಗಿ ಇಂತೆಂದನು ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಬಲಿರುವಾಚ
ಮೂಲಮ್
ಯದ್ಯುತ್ತಮಶ್ಲೋಕ ಭವಾನ್ಮಮೇರಿತಂ
ವಚೋ ವ್ಯಲೀಕಂ ಸುರವರ್ಯ ಮನ್ಯತೇ ।
ಕರೋಮ್ಯೃತಂ ತನ್ನ ಭವೇತ್ಪ್ರಲಂಭನಂ
ಪದಂ ತೃತೀಯಂ ಕುರು ಶೀರ್ಷ್ಣಿ ಮೇ ನಿಜಮ್ ॥
ಅನುವಾದ
ದೈತ್ಯರಾಜ ಬಲಿಯು ಹೇಳಿದನು — ಸುರಶ್ರೇಷ್ಠನೇ! ಪುಣ್ಯ ಶ್ಲೋಕನೇ! ನಾನು ಕೊಟ್ಟಮಾತನ್ನು ಅಸತ್ಯವೆಂದು ಭಾವಿಸುವೆಯಾ? ಹಾಗೆಂದಿಗೂ ಆಗಲಾರದು. ನಾನು ಅದನ್ನು ಸತ್ಯವಾಗಿಸಿ ತೋರುವೆನು. ನಿನ್ನನ್ನು ಎಂದಿಗೂ ವಂಚಿಸುವುದಿಲ್ಲ. ನೀನು ಕೃಪೆದೋರಿ ನಿನ್ನ ಮೂರನೆಯ ಹೆಜ್ಜೆಯನ್ನು ನನ್ನ ತಲೆಯ ಮೇಲಿರಿಸು. ॥2॥
ಮೂಲಮ್
(ಶ್ಲೋಕ-3)
ಬಿಭೇಮಿ ನಾಹಂ ನಿರಯಾತ್ಪದಚ್ಯುತೋ
ನ ಪಾಶಬಂಧಾದ್ವ್ಯಸನಾದ್ದುರತ್ಯಯಾತ್ ।
ನೈವಾರ್ಥಕೃಚ್ಛ್ರಾದ್ಭವತೋ ವಿನಿಗ್ರಹಾ-
ದಸಾಧುವಾದಾದ್ಭೃಶಮುದ್ವಿಜೇ ಯಥಾ ॥
ಅನುವಾದ
ನನಗೆ ನರಕಕ್ಕೆ ಹೋಗಲು ಅಥವಾ ರಾಜ್ಯಭ್ರಷ್ಟನಾದ ಬಗ್ಗೆ ದುಃಖ ವಿಲ್ಲ. ನಾನು ಪಾಶಗಳಿಂದ ಬಂಧಿತನಾಗಿ, ಅಪಾರವಾದ ದುಃಖಸಾಗರದಲ್ಲಿ ಮುಳುಗಿದರೂ ನನಗೆ ಭಯವಿಲ್ಲ. ಅರ್ಥವೆಲ್ಲವೂ ಹೋಗಿ ದಾರಿದ್ರ್ಯಬಂತೆಂದೂ, ನೀನು ನನ್ನನ್ನು ಶಿಕ್ಷಿಸುವೆಯೆಂದೂ ನಾನು ಅಂಜುವುದಿಲ್ಲ. ನಾನು ಭಯಪಡುವುದು ಕೇವಲ ಅಪಯಶಸ್ಸಿಗೆ ಮಾತ್ರ. ॥3॥
(ಶ್ಲೋಕ-4)
ಮೂಲಮ್
ಪುಂಸಾಂ ಶ್ಲಾಘ್ಯತಮಂ ಮನ್ಯೇ ದಂಡಮರ್ಹತ್ತಮಾರ್ಪಿತಮ್ ।
ಯಂ ನ ಮಾತಾ ಪಿತಾ ಭ್ರಾತಾ ಸುಹೃದಶ್ಚಾದಿಶಂತಿ ಹಿ ॥
ಅನುವಾದ
ಪೂಜ್ಯತಮನಾದ ಭಗವಂತನು ಕೊಡುವ ಶಿಕ್ಷೆಯು ಪುರುಷರಿಗೆ ಶ್ರೇಯಸ್ಕರವೆಂದೇ ನಾನು ಭಾವಿಸುತ್ತೇನೆ. ಏಕೆಂದರೆ, ಅಂತಹ ಶಿಕ್ಷೆಯನ್ನು ಮೋಹಪರವಶರಾದ ಮಾತಾ-ಪಿತೃಗಳಾಗಲೀ, ಸಹೋದರ-ಸಹೃದಯರಾಗಲಿ ಕೊಡಲಾರರು. ॥4॥
(ಶ್ಲೋಕ-5)
ಮೂಲಮ್
ತ್ವಂ ನೂನಮಸುರಾಣಾಂ ನಃ ಪಾರೋಕ್ಷ್ಯಃ ಪರಮೋ ಗುರುಃ ।
ಯೋ ನೋನೇಕಮದಾಂಧಾನಾಂ ವಿಭ್ರಂಶಂ ಚಕ್ಷುರಾದಿಶತ್ ॥
ಅನುವಾದ
ನೀನು ಅಡಗಿಕೊಂಡೇ ಅಸುರರಾದ ನಮಗೆ ಉತ್ತಮವಾದ ಶಿಕ್ಷಣವನ್ನು ಕೊಡುತ್ತಾ ಇರುವೆ. ಅದ್ದರಿಂದ ನೀನು ನಮಗೆ ಪರಮ ಗುರುವಾಗಿರುವೆ. ನಾವುಗಳು ಧನ-ಕುಲ-ಬಲ ಮುಂತಾದ ಮದಗಳಿಂದ ಕುರುಡರಾದಾಗ ನೀನು ಆ ವಸ್ತುಗಳನ್ನು ನಮ್ಮಿಂದ ಕಸಿದುಕೊಂಡು ಜ್ಞಾನದೃಷ್ಟಿಯನ್ನು ಕೊಡುವೆ. ॥5॥
(ಶ್ಲೋಕ-6)
ಮೂಲಮ್
ಯಸ್ಮಿನ್ವೈರಾನುಬಂಧೇನ ರೂಢೇನ ವಿಬುಧೇತರಾಃ ।
ಬಹವೋ ಲೇಭಿರೇ ಸಿದ್ಧಿಂ ಯಾಮು ಹೈಕಾಂತಯೋಗಿನಃ ॥
ಅನುವಾದ
ಅಸುರರಾದ ನಮಗೆ ನಿನ್ನಿಂದ ಆಗುವ ಉಪಕಾರವನ್ನು ನಾನು ಎಷ್ಟೆಂದು ಹೇಳಲಿ? ಅನನ್ಯ ಭಾವದಿಂದ ಯೋಗವನ್ನಾಚರಿಸಿ ಯೋಗಿಗಳು ಪಡೆಯುವ ಸಿದ್ಧಿಯನ್ನೇ ಅನೇಕ ಅಸುರರು ನಿನ್ನೊಡನೆ ದೃಢಮೂಲವಾದ ವೈರಭಾವದಿಂದಲೇ ಪಡೆದುಕೊಂಡಿಲ್ಲವೇ? ॥6॥
(ಶ್ಲೋಕ-7)
ಮೂಲಮ್
ತೇನಾಹಂ ನಿಗೃಹೀತೋಸ್ಮಿ ಭವತಾ ಭೂರಿಕರ್ಮಣಾ ।
ಬದ್ಧಶ್ಚ ವಾರುಣೈಃ ಪಾಶೈರ್ನಾತಿವ್ರೀಡೇ ನ ಚ ವ್ಯಥೇ ॥
ಅನುವಾದ
ಇಂತಹ ಅಪಾರ ಮಹಿಮೆಯೂ, ಅನಂತವಾದ ಲೀಲೆಗಳುಳ್ಳ ಪರಮಪುರುಷ ಪರಮಾತ್ಮನಾದ ನಿನ್ನಿಂದ ನಾನು ಶಿಕ್ಷಿಸಲ್ಪಟ್ಟು, ವರುಣಪಾಶಗಳಿಂದ ಬಂಧಿತನಾಗಿದ್ದೇನೆ. ಇದರಿಂದ ನನಗೆ ಯಾವ ವಿಧವಾದ ನಾಚಿಕೆಯೂ, ವ್ಯಥೆಯೂ ಇಲ್ಲ. ॥7॥
(ಶ್ಲೋಕ-8)
ಮೂಲಮ್
ಪಿತಾಮಹೋ ಮೇ ಭವದೀಯಸಂಮತಃ
ಪ್ರಹ್ಲಾದ ಆವಿಷ್ಕೃತಸಾಧುವಾದಃ ।
ಭವದ್ವಿಪಕ್ಷೇಣ ವಿಚಿತ್ರವೈಶಸಂ
ಸಂಪ್ರಾಪಿತಸ್ತ್ವತ್ಪರಮಃ ಸ್ವಪಿತ್ರಾ ॥
ಅನುವಾದ
ಪ್ರಭುವೇ! ನನ್ನ ಪಿತಾಮಹನಾದ ಪ್ರಹ್ಲಾದನ ಕೀರ್ತಿಯು ಜಗತ್ಪ್ರಸಿದ್ಧವಾಗಿದೆ. ಅವನನ್ನು ನಿನ್ನ ಭಕ್ತರಲ್ಲಿ ಶ್ರೇಷ್ಠನೆಂದು ಪರಿಗಣಿಸಲ್ಪಟ್ಟಿದೆ. ಅವನ ತಂದೆಯಾದ ಹಿರಣ್ಯಕಶಿಪುವಿಗೆ ನಿನ್ನಲ್ಲಿ ವೈರವಿದ್ದ ಕಾರಣ ಅವನು ಮಗುವಿಗೆ ಅನೇಕ ಪ್ರಕಾರದ ದುಃಖವನ್ನು ಕೊಟ್ಟನು. ಆದರೂ ಪ್ರಹ್ಲಾದನು ನಿನ್ನನ್ನೇ ಪರಮಾಶ್ರಯವನ್ನಾಗಿ ಭಾವಿಸಿದನು. ತನ್ನ ಜೀವನವನ್ನೇ ಅವನು ಸಂಪೂರ್ಣವಾಗಿ ನಿನಗೆ ಒಪ್ಪಿಸಿ ಬಿಟ್ಟನು. ॥8॥
(ಶ್ಲೋಕ-9)
ಮೂಲಮ್
ಕಿಮಾತ್ಮನಾನೇನ ಜಹಾತಿ ಯೋಂತತಃ
ಕಿಂ ರಿಕ್ಥಹಾರೈಃ ಸ್ವಜನಾಖ್ಯದಸ್ಯುಭಿಃ ।
ಕಿಂ ಜಾಯಯಾ ಸಂಸತಿಹೇತುಭೂತಯಾ
ಮರ್ತ್ಯಸ್ಯ ಗೇಹೈಃ ಕಿಮಿಹಾಯುಷೋ ವ್ಯಯಃ ॥
ಅನುವಾದ
ನಮ್ಮ ತಾತನಾದ ಪ್ರಹ್ಲಾದನ ಅಭಿಪ್ರಾಯ ಹೀಗಿದ್ದಿತು ಎಂದಾದರೊಂದು ದಿನ ಕಳಚಿ ಬಿದ್ದುಹೋಗುವ ಶರೀರದಿಂದ ಏನು ಪ್ರಯೋಜನವಿದೆ? ಧನ-ಸಂಪತ್ತನ್ನು ದೋಚುವ ಸ್ವಜನರಂತೆ ಕಂಡುಬರುವ ಕಳ್ಳರಿಂದ ತನಗೆ ಏನಾಗ ಬೇಕಾಗಿದೆ? ಜನ್ಮ-ಮರಣ ಚಕ್ರದಲ್ಲಿ ಕೆಡಹುವಂತಹ ಹೆಂಡತಿಯಿಂದಲಾದರೂ ಏನು ಲಾಭವಿದೆ? ಒಂದಲ್ಲ ಒಂದುದಿನ ಸಾಯಲೇಬೇಕಾಗಿರುವಾಗ ಮನೆಯ ಕುರಿತು ಮೋಹವಿಡುವುದರಲ್ಲಿ ಯಾವ ಸ್ವಾರ್ಥವಿದೆ? ಇವೆಲ್ಲ ವಸ್ತುಗಳಲ್ಲಿ ಮೈಮರೆಯುವುದು ಕೇವಲ ತನ್ನ ಆಯುಸ್ಸನ್ನು ಹಾಳುಮಾಡುವುದು ಮಾತ್ರವಾಗಿದೆ. ॥9॥
(ಶ್ಲೋಕ-10)
ಮೂಲಮ್
ಇತ್ಥಂ ಸ ನಿಶ್ಚಿತ್ಯ ಪಿತಾಮಹೋ ಮಹಾ-
ನಗಾಧಬೋಧೋ ಭವತಃ ಪಾದಪದ್ಮಮ್ ।
ಧ್ರುವಂ ಪ್ರಪೇದೇ ಹ್ಯಕುತೋಭಯಂ ಜನಾದ್
ಭೀತಃ ಸ್ವಪಕ್ಷಕ್ಷಪಣಸ್ಯ ಸತ್ತಮಃ ॥
ಅನುವಾದ
ಹೀಗೆ ನಿಶ್ಚಯಮಾಡಿದ ನನ್ನ ಪಿತಾಮಹ ಪ್ರಹ್ಲಾದನು ಲೌಕಿಕ ದೃಷ್ಟಿಯಿಂದ ಅವನ ಬಂಧು-ಬಾಂಧವರನ್ನು ನಾಶಮಾಡುವ ಶತ್ರುವು ನೀನೇ ಎಂದು ತಿಳಿದಿದ್ದರೂ ಭಯರಹಿತವಾದ, ಅವಿನಾಶಿಯಾದ ನಿನ್ನ ಚರಣ ಕಮಲಗಳಲ್ಲೇ ಶರಣಾಗಿದ್ದನು. ಏನೇ ಇರಲಿ, ಅವನು ಸಂಸಾರದಿಂದ ಪರಮ ವಿರಕ್ತನೂ, ಅಗಾಧಬೋಧಸಂಪನ್ನನೂ, ಉದಾರ ಹೃದಯನೂ, ಸಂತ ಶಿರೋಮಣಿಯೂ ಆಗಿದ್ದನು. ॥10॥
(ಶ್ಲೋಕ-11)
ಮೂಲಮ್
ಅಥಾಹಮಪ್ಯಾತ್ಮರಿಪೋಸ್ತವಾಂತಿಕಂ
ದೈವೇನ ನೀತಃ ಪ್ರಸಭಂ ತ್ಯಾಜಿತಶ್ರೀಃ ।
ಇದಂ ಕೃತಾಂತಾಂತಿಕವರ್ತಿ ಜೀವಿತಂ
ಯಯಾಧ್ರುವಂ ಸ್ತಬ್ಧಮತಿರ್ನ ಬುಧ್ಯತೇ ॥
ಅನುವಾದ
ಹಾಗೆ ನೋಡಿದರೆ ನೀನೂ ನನ್ನ ಶತ್ರುವೇ ಆಗಿರುವೆ. ಹಾಗಿದ್ದರೂ ವಿಧಿಯು ನನ್ನನ್ನು ಬಲವಂತವಾಗಿ ಸಕಲ ಸಂಪತ್ತಿನಿಂದ ಬೇರ್ಪಡಿಸಿ ನಿನ್ನ ಬಳಿಗೆ ತಂದುಬಿಟ್ಟಿದೆ. ಇದೂ ಒಳ್ಳೆಯದೇ ಆಯಿತು. ಏಕೆಂದರೆ, ಸಂಪತ್ತು-ಐಶ್ವರ್ಯದಿಂದ ಜೀವಿಯ ಬುದ್ಧಿಯು ಜಡವಾಗಿ ನನ್ನ ಈ ಜೀವನ ಮೃತ್ಯುವಿನ ಹಿಡಿತದಲ್ಲಿದೆ, ಇದು ಅನಿತ್ಯವಾಗಿದೆ ಎಂಬುದೂ ತಿಳಿಯದೇ ಹೋಗುತ್ತಾನೆ. ॥11॥
(ಶ್ಲೋಕ-12)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತಸ್ಯೇತ್ಥಂ ಭಾಷಮಾಣಸ್ಯ ಪ್ರಹ್ಲಾದೋ ಭಗವತ್ಪ್ರಿಯಃ ।
ಆಜಗಾಮ ಕುರುಶ್ರೇಷ್ಠ ರಾಕಾಪತಿರಿವೋತ್ಥಿತಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಬಲಿಚಕ್ರವರ್ತಿಯು ಹೀಗೆ ಹೇಳುತ್ತಿದ್ದಂತೆ ಭಗವಂತನ ಪ್ರೇಮ ಪಾತ್ರನಾದ ಪ್ರಹ್ಲಾದನು ಚಂದ್ರನು ಉದಯಿಸಿ ಬಂದಂತೆ ಅಲ್ಲಿಗೆ ಆಗಮಿಸಿದನು. ॥12॥
(ಶ್ಲೋಕ-13)
ಮೂಲಮ್
ತಮಿಂದ್ರಸೇನಃ ಸ್ವಪಿತಾಮಹಂ ಶ್ರಿಯಾ
ವಿರಾಜಮಾನಂ ನಲಿನಾಯತೇಕ್ಷಣಮ್ ।
ಪ್ರಾಂಶುಂ ಪಿಶಂಗಾಂಬರಮಂಜನತ್ವಿಷಂ
ಪ್ರಲಂಬಬಾಹುಂ ಸುಭಗಂ ಸಮೈಕ್ಷತ ॥
ಅನುವಾದ
ಶ್ರೀಸಂಪನ್ನನಾಗಿದ್ದ (ಸೌಂದರ್ಯದಿಂದ ಕೂಡಿದ) ಕಾಂತಿಯಿಂದ ವಿರಾಜಿಸುತ್ತಿದ್ದ, ಕಮಲದಂತೆ ವಿಶಾಲಕಣ್ಣುಗಳುಳ್ಳ, ಆಜಾನು ಬಾಹುವಾಗಿದ್ದು ಉನ್ನತವಾಗಿದ್ದ, ಶ್ಯಾಮಲ ಶರೀರದಲ್ಲಿ ಪೀತಾಂಬರವನ್ನು ಧರಿಸಿದ್ದ ಪಿತಾಮಹನಾದ ಪ್ರಹ್ಲಾದನನ್ನು ಬಲಿಯು ನೋಡಿದನು. ॥13॥
(ಶ್ಲೋಕ-14)
ಮೂಲಮ್
ತಸ್ಮೈ ಬಲಿರ್ವಾರುಣಪಾಶಯಂತ್ರಿತಃ
ಸಮರ್ಹಣಂ ನೋಪಜಹಾರ ಪೂರ್ವವತ್ ।
ನನಾಮ ಮೂರ್ಧ್ನಾಶ್ರುವಿಲೋಲಲೋಚನಃ
ಸವ್ರೀಡನೀಚೀನಮುಖೋ ಬಭೂವ ಹ ॥
ಅನುವಾದ
ಆ ಸಮಯದಲ್ಲಿ ಬಲಿಯು ವರುಣಪಾಶದಲ್ಲಿ ಬಂಧಿತನಾದ್ದರಿಂದ ಪ್ರಹ್ಲಾದನು ಬಂದಾಗ ಮೊದಲಿನಂತೆ ಪೂಜಿಸದೇ ಹೋದನು. ಕಂಬನಿ ತುಂಬಿದ ಕಣ್ಣುಗಳಿಂದ ಕೂಡಿ ಕೇವಲ ತಲೆಯನ್ನು ತಗ್ಗಿಸುವುದರಿಂದಲೇ ಪ್ರಹ್ಲಾದನನ್ನು ವಂದಿಸಿ ಪುನಃ ನಾಚಿಕೆಯಿಂದ ತಲೆತಗ್ಗಿಸಿ ಕುಳಿತನು. ॥14॥
(ಶ್ಲೋಕ-15)
ಮೂಲಮ್
ಸ ತತ್ರ ಹಾಸೀನಮುದೀಕ್ಷ್ಯ ಸತ್ಪತಿಂ
ಸುನಂದನಂದಾದ್ಯನುಗೈರುಪಾಸಿತಮ್ ।
ಉಪೇತ್ಯ ಭೂವೌ ಶಿರಸಾ ಮಹಾಮನಾ
ನನಾಮ ಮೂರ್ಧ್ನಾ ಪುಲಕಾಶ್ರುವಿಕ್ಲವಃ ॥
ಅನುವಾದ
ಮಹಾತ್ಮನಾದ ಸುನಂದರೇ ಮೊದಲಾದ ಭಕ್ತರಿಂದ ಸೇವಿಸಲ್ಪಡುತ್ತಿದ್ದ, ಸತ್ಪುರುಷರಿಗೆ ಒಡೆಯನಾದ ಭಕ್ತವತ್ಸಲ ಶ್ರೀಹರಿಯು ಅಲ್ಲೇ ನಿಂತಿರುವುದನ್ನು ನೋಡಿ ಪುಳಕಿತನಾಗಿ, ಆನಂದಬಾಷ್ಪಗಳನ್ನು ಸುರಿಸುತ್ತಾ ಭಗವಂತನ ಬಳಿಗೆ ಹೋಗಿ ದೀರ್ಘದಂಡ ನಮಸ್ಕಾರವನ್ನು ಮಾಡಿ, ಕೈಜೋಡಿಸಿ ಕೊಂಡು ಇಂತೆಂದನು ॥15॥
(ಶ್ಲೋಕ-16)
ಮೂಲಮ್ (ವಾಚನಮ್)
ಪ್ರಹ್ಲಾದ ಉವಾಚ
ಮೂಲಮ್
ತ್ವಯೈವ ದತ್ತಂ ಪದಮೈಂದ್ರಮೂರ್ಜಿತಂ
ಹೃತಂ ತದೇವಾದ್ಯ ತಥೈವ ಶೋಭನಮ್ ।
ಮನ್ಯೇ ಮಹಾನಸ್ಯ ಕೃತೋ ಹ್ಯನುಗ್ರಹೋ
ವಿಭ್ರಂಶಿತೋ ಯಚ್ಛ್ರಿಯ ಆತ್ಮಮೋಹನಾತ್ ॥
ಅನುವಾದ
ಪ್ರಹ್ಲಾದನು ಹೇಳಿದನು — ಭಗವಂತಾ! ಈ ಬಲಿಗೆ ಐಶ್ವರ್ಯ ಪೂರ್ಣವಾದ ಇಂದ್ರಪದವಿಯನ್ನು ಕೊಟ್ಟವನೂ ನೀನೇ,. ಈಗ ಅದೇ ಸಾರ್ವಭೌಮತ್ವವನ್ನು ಅಪಹರಿಸಿ ದವನೂ ನೀನೇ. ನೀನು ಕೊಡುವುದು ಎಷ್ಟು ಸುಂದರವೋ ಪಡೆಯುವುದೂ ಅಷ್ಟೇ ಸುಂದರವು. ಮನಸ್ಸನ್ನು ಮರಳು ಗೊಳಿಸುವ ರಾಜ್ಯಲಕ್ಷ್ಮಿಯಿಂದ ಇವನನ್ನು ದೂರಗೊಳಿಸಿ ದುದು ನೀನು ಇವನ ಮೇಲೆ ತೋರಿದ ಪರಮಾನುಗ್ರಹ ವೆಂದೇ ನಾನು ಭಾವಿಸುತ್ತೇನೆ. ॥16॥
(ಶ್ಲೋಕ-17)
ಮೂಲಮ್
ಯಯಾ ಹಿ ವಿದ್ವಾನಪಿ ಮುಹ್ಯತೇ ಯತಃ
ತತ್ಕೋ ವಿಚಷ್ಟೇ ಗತಿಮಾತ್ಮನೋ ಯಥಾ ।
ತಸ್ಮೈ ನಮಸ್ತೇ ಜಗದೀಶ್ವರಾಯ ವೈ
ನಾರಾಯಣಾಯಾಖಿಲಲೋಕಸಾಕ್ಷಿಣೇ ॥
ಅನುವಾದ
ಐಶ್ವರ್ಯ ಮದವು ವಿದ್ವಾಂಸನನ್ನೂ ಕೂಡ ಮರಳುಗೊಳಿಸುತ್ತದೆ. ಧನಮದವಿರುವಾಗ ಯಾರಿಗೆ ತಾನೇ ನಿಜವಾದ ಸ್ವ-ಸ್ವರೂಪವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ? ಆದ್ದರಿಂದ ಆತ್ಮೋದ್ಧಾರಕ್ಕೆ ತಡೆಯನ್ನುಂಟು ಮಾಡುವಂತಹ ಐಶ್ವರ್ಯ ಕಸಿದುಕೊಂಡು ಮಹೋಪಕಾರ ಮಾಡಿದ ಸಮಸ್ತ ಜಗತ್ತಿಗೆ ಈಶ್ವರನಾದ, ಎಲ್ಲರ ಹೃದಯದಲ್ಲಿ ವಿರಾಜಮಾನನಾದ, ಎಲ್ಲರ ಸಾಕ್ಷೀಭೂತನಾಗಿರುವ ಶ್ರೀಮನ್ನಾರಾಯಣನಾದ ನಿನಗೆ ನಾನು ನಮಸ್ಕರಿಸುತ್ತೇನೆ. ॥17॥
(ಶ್ಲೋಕ-18)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತಸ್ಯಾನುಶೃಣ್ವತೋ ರಾಜನ್ ಪ್ರಹ್ಲಾದಸ್ಯ ಕೃತಾಂಜಲೇಃ ।
ಹಿರಣ್ಯಗರ್ಭೋ ಭಗವಾನುವಾಚ ಮಧುಸೂದನಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಶ್ರೀವಾಮನಮೂರ್ತಿಯ ಮುಂದೆ ಪ್ರಹ್ಲಾದನು ಕೈಮುಗಿದು ಕೊಂಡು ನಿಂತಿದ್ದನು. ಅವನಿಗೆ ಕೇಳಿಸುವಂತೆ ಪೂಜ್ಯರಾದ ಬ್ರಹ್ಮದೇವರು ಭಗವಾನ್ ವಾಮನನ ಬಳಿ ಏನೋ ಹೇಳ ಬೇಕೆಂದಿದ್ದರು. ॥18॥
(ಶ್ಲೋಕ-19)
ಮೂಲಮ್
ಬದ್ಧಂ ವೀಕ್ಷ್ಯ ಪತಿಂ ಸಾಧ್ವೀ ತತ್ಪತ್ನೀ ಭಯವಿಹ್ವಲಾ ।
ಪ್ರಾಂಜಲಿಃ ಪ್ರಣತೋಪೇಂದ್ರಂ ಬಭಾಷೇವಾಙ್ಮುಖೀ ನೃಪ ॥
ಅನುವಾದ
ಆದರೆ ಅಷ್ಟರಲ್ಲಿ ಬಲಿಯ ಪತ್ನಿಯಾದ ಪರಮ ಸಾಧ್ವಿಯಾದ ವಿಂಧ್ಯಾವಲಿಯು ವರುಣ ಪಾಶಗಳಿಂದ ಬಂಧಿಸಲ್ಪಟ್ಟ ತನ್ನ ಪತಿಯನ್ನು ನೋಡಿ ಭಯದಿಂದ ಗಾಬರಿಗೊಂಡು ಭಗವಂತನ ಪಾದಗಳಲ್ಲಿ ನಮಸ್ಕರಿಸಿ, ಕೈಜೋಡಿಸಿಕೊಂಡು, ತಲೆಯನ್ನು ತಗ್ಗಿಸಿ ಕೊಂಡು ಪ್ರಾರ್ಥಿಸಿದಳು. ॥19॥
(ಶ್ಲೋಕ-20)
ಮೂಲಮ್ (ವಾಚನಮ್)
ವಿಂಧ್ಯಾವಲಿರುವಾಚ
ಮೂಲಮ್
ಕ್ರೀಡಾರ್ಥಮಾತ್ಮನ ಇದಂ ತ್ರಿಜಗತ್ಕೃತಂ ತೇ
ಸ್ವಾಮ್ಯಂ ತು ತತ್ರ ಕುಧಿಯೋಪರ ಈಶ ಕುರ್ಯುಃ ।
ಕರ್ತುಃ ಪ್ರಭೋಸ್ತವ ಕಿಮಸ್ಯತ ಆವಹಂತಿ
ತ್ಯಕ್ತಹ್ರಿಯಸ್ತ್ವದವರೋಪಿತಕರ್ತೃವಾದಾಃ ॥
ಅನುವಾದ
ವಿಂಧ್ಯಾವಲಿಯು ಹೇಳಿದಳು — ಸ್ವಾಮಿಯೇ! ನೀನು ನಿನ್ನ್ನ ಕ್ರೀಡೆಗಾಗಿಯೇ ಈ ಮೂರು ಲೋಕಗಳನ್ನು ಸೃಷ್ಟಿಸಿರುವೆ. ಬುದ್ಧಿ ಹೀನರಾದವರೇ ತಮ್ಮನ್ನು ಇದರ ಒಡೆಯರೆಂದು ಭಾವಿಸುತ್ತಾರೆ. ಆದರೆ ನೀನೇ ಇದರ ಸೃಷ್ಟಿ, ಸ್ಥಿತಿ, ಲಯ ಗಳಿಗೆ ಕಾರಣನಾಗಿರುವೆ. ನಿನ್ನ ಮಾಯೆಯಿಂದ ಮೋಹಿತರಾಗಿ ತಮ್ಮನ್ನು ಸುಳ್ಳು-ಸುಳ್ಳೇ ಕರ್ತೃವೆಂದು ತಿಳಿಯುವ ನಿರ್ಲಜ್ಜರಾದವರು ನಿನಗೇನು ಅರ್ಪಿಸ ಬಲ್ಲರು? ॥20॥
(ಶ್ಲೋಕ-21)
ಮೂಲಮ್ (ವಾಚನಮ್)
ಬ್ರಹ್ಮೋವಾಚ
ಮೂಲಮ್
ಭೂತಭಾವನ ಭೂತೇಶ ದೇವದೇವ ಜಗನ್ಮಯ ।
ಮುಂಚೈನಂ ಹೃತಸರ್ವಸ್ವಂ ನಾಯಮರ್ಹತಿ ನಿಗ್ರಹಮ್ ॥
ಅನುವಾದ
ಬ್ರಹ್ಮದೇವರು ಹೇಳಿದರು — ಸಕಲ ಪ್ರಾಣಿಗಳನ್ನೂ ಸಲಹತಕ್ಕವನೇ! ಎಲ್ಲ ಪ್ರಾಣಿಗಳಿಗೂ ಒಡೆಯನೇ! ಜಗತ್ಸ್ವರೂಪನಾದ ದೇವಶ್ರೇಷ್ಠನೇ! ಈಗ ನೀನು ಇವನನ್ನು ಬಿಟ್ಟುಬಿಡು. ನೀನು ಇವನ ಸರ್ವಸ್ವವನ್ನು ಪಡೆದು ಕೊಂಡಿ ರುವೆ. ಆದ್ದರಿಂದ ಈಗ ಇವನು ಶಿಕ್ಷೆಗೆ ಅರ್ಹನಲ್ಲ. ॥21॥
(ಶ್ಲೋಕ-22)
ಮೂಲಮ್
ಕೃತ್ಸ್ನಾ ತೇನೇನ ದತ್ತಾ ಭೂರ್ಲೋಕಾಃ ಕರ್ಮಾರ್ಜಿತಾಶ್ಚ ಯೇ ।
ನಿವೇದಿತಂ ಚ ಸರ್ವಸ್ವಮಾತ್ಮಾವಿಕ್ಲವಯಾ ಧಿಯಾ ॥
ಅನುವಾದ
ಇವನು ತನ್ನ ಸಮಗ್ರವಾದ ಭೂ ಮಂಡಲವನ್ನು ಹಾಗೂ ಸತ್ಕರ್ಮಗಳಿಂದ ಸಂಪಾದಿಸಿದ ಸ್ವರ್ಗಾದಿ ಪುಣ್ಯಲೋಕಗಳನ್ನೂ, ತನ್ನ ಸರ್ವಸ್ವವನ್ನೂ ಹಾಗೂ ಆತ್ಮವನ್ನೇ (ಶರೀರವನ್ನೇ) ನಿನಗೆ ಸಮರ್ಪಿಸಿಬಿಟ್ಟಿರುವನು. ಹೀಗೆ ಮಾಡುವಾಗಲೂ ಇವನ ಬುದ್ಧಿಯು ಸ್ಥಿರವಾಗಿದೆ, ಧೈರ್ಯದಿಂದ ಚ್ಯುತನಾಗಲಿಲ್ಲ. ॥22॥
(ಶ್ಲೋಕ-23)
ಮೂಲಮ್
ಯತ್ಪಾದಯೋರಶಠಧೀಃ ಸಲಿಲಂ ಪ್ರದಾಯ
ದೂರ್ವಾಂಕುರೈರಪಿ ವಿಧಾಯ ಸತೀಂ ಸಪರ್ಯಾಮ್ ।
ಅಪ್ಯುತ್ತಮಾಂ ಗತಿಮಸೌ ಭಜತೇ ತ್ರಿಲೋಕೀಂ
ದಾಶ್ವಾನವಿಕ್ಲವಮನಾಃ ಕಥಮಾರ್ತಿಮೃಚ್ಛೇತ್ ॥
ಅನುವಾದ
ಓ ಕರುಣಾಳುವಾದ ಪ್ರಭುವೇ! ಶುದ್ಧ ಹೃದಯದಿಂದ ಲೋಭವನ್ನು ಬಿಟ್ಟು ನಿನ್ನ ಚರಣ ಕಮಲಗಳಲ್ಲಿ ಅರ್ಘ್ಯಪಾದ್ಯಾದಿಗಳನ್ನು ಸಮರ್ಪಿಸಿ ಕೇವಲ ದೂರ್ವಾದಲ (ತುಲಸೀದಳ)ದಿಂದ ನಿನ್ನನ್ನು ಪೂಜಿಸುವವನೂ ಕೂಡ ಉತ್ತಮಗತಿಯನ್ನು ಹೊಂದುತ್ತಾನೆ. ಹೀಗಿರುವಾಗ ಆದರಪೂರ್ವಕವಾಗಿ ಧೈರ್ಯ ಮತ್ತು ಸ್ಥಿರತೆಯಿಂದ ತನ್ನ ಮೂರುಲೋಕಗಳನ್ನೇ ನಿನಗೆ ದಾನವಾಗಿ ನಿನ್ನ ಪಾದಾರ ವಿಂದಗಳಲ್ಲಿ ಸಮರ್ಪಿಸಿರುವ ಈ ಬಲಿಯು ಹೇಗೆ ತಾನೇ ದುಃಖಕ್ಕೆ ಭಾಗಿಯಾಗುವನು? ॥23॥
(ಶ್ಲೋಕ-24)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಬ್ರಹ್ಮನ್ಯಮನುಗೃಹ್ಣಾಮಿ ತದ್ವಿಶೋ ವಿಧುನೋಮ್ಯಹಮ್ ।
ಯನ್ಮದಃ ಪುರುಷಃ ಸ್ತಬ್ಧೋ ಲೋಕಂ ಮಾಂ ಚಾವಮನ್ಯತೇ ॥
ಅನುವಾದ
ಶ್ರೀಭಗವಂತನು ಹೇಳಿದನು — ಬ್ರಹ್ಮನೇ ನಾನು ಯಾರ ಮೇಲೆ ಕೃಪೆದೋರುವೆನೋ ಅವನ ಧನವನ್ನು ಮೊದಲಿಗೆ ಕಿತ್ತುಕೊಳ್ಳುವೆನು. ಏಕೆಂದರೆ, ಮನುಷ್ಯನು ಧನಮದದಿಂದ ಉನ್ಮತ್ತನಾದಾಗ ನನ್ನನ್ನೂ, ಲೋಕವನ್ನೂ (ಜನರನ್ನೂ) ತಿರಸ್ಕಾರಬುದ್ಧಿಯಿಂದ ಕಾಣುತ್ತಾನೆ. ॥24॥
(ಶ್ಲೋಕ-25)
ಮೂಲಮ್
ಯದಾ ಕದಾಚಿಜ್ಜೀವಾತ್ಮಾ ಸಂಸರನ್ನಿಜಕರ್ಮಭಿಃ ।
ನಾನಾಯೋನಿಷ್ವನೀಶೋಯಂ ಪೌರುಷೀಂ ಗತಿಮಾವ್ರಜೇತ್ ॥
ಅನುವಾದ
ಈ ಜೀವಿಯು ತಾನು ಮಾಡಿದ ಶುಭಾಶುಭ ಕರ್ಮಗಳಿಂದ ವಿವಶನಾಗಿ ಅನೇಕ ಯೋನಿಗಳಲ್ಲಿ ಅಲೆಯುತ್ತಾ ಇರುತ್ತಾನೆ. ಎಂದಾದ ರೊಮ್ಮೆ ನನ್ನ ಹಿರಿದಾದ ಕೃಪೆಯಿಂದ ಮನುಷ್ಯ ಶರೀರವನ್ನು ಪಡೆಯುತ್ತಾನೆ. ॥25॥
(ಶ್ಲೋಕ-26)
ಮೂಲಮ್
ಜನ್ಮಕರ್ಮವಯೋರೂಪವಿದ್ಯೈಶ್ವರ್ಯಧನಾದಿಭಿಃ ।
ಯದ್ಯಸ್ಯ ನ ಭವೇತ್ಸ್ತಂಭಸ್ತತ್ರಾಯಂ ಮದನುಗ್ರಹಃ ॥
ಅನುವಾದ
ಮನುಷ್ಯನಾಗಿ ಹುಟ್ಟಿದ ಬಳಿಕ ಕುಲೀನತೆ, ಕರ್ಮ, ವಯಸ್ಸು, ರೂಪ, ವಿದ್ಯೆ, ಐಶ್ವರ್ಯ, ಸಂಪತ್ತು ಇತ್ಯಾದಿಗಳಿಂದ ಅಹಂಕಾರ ಬಾರದಿದ್ದರೆ ನನ್ನ ಅನುಗ್ರಹಕ್ಕೆ ಪಾತ್ರನಾಗಿದ್ದಾನೆ ಎಂದು ತಿಳಿಯಬೇಕು. ॥26॥
(ಶ್ಲೋಕ-27)
ಮೂಲಮ್
ಮಾನಸ್ತಂಭನಿಮಿತ್ತಾನಾಂ ಜನ್ಮಾದೀನಾಂ ಸಮಂತತಃ ।
ಸರ್ವಶ್ರೇಯಃಪ್ರತೀಪಾನಾಂ ಹಂತ ಮುಹ್ಯೇನ್ನ ಮತ್ಪರಃ ॥
ಅನುವಾದ
ಕುಲೀನತೆ, ವಿದ್ಯೆ, ಸಂಪತ್ತು ಮುಂತಾದವುಗಳು ಅಹಂಕಾರ, ಜಡತೆಗಳನ್ನುಂಟು ಮಾಡುವುದಾದರೂ, ಮನುಷ್ಯನ ಶ್ರೇಯಸ್ಸಿಗೆ ಪ್ರತಿಬಂಧಕಗಳಾಗಿದ್ದರೂ, ನನಗೆ ಶರಣಾಗತರಾದವರು ಇವುಗಳಿಂದ ಮೋಹಿತರಾಗುವುದಿಲ್ಲ. ॥27॥
(ಶ್ಲೋಕ-28)
ಮೂಲಮ್
ಏಶ ದಾನವದೈತ್ಯಾನಾಮಗ್ರಣೀಃ ಕೀರ್ತಿವರ್ಧನಃ ।
ಅಜೈಷೀದಜಯಾಂ ಮಾಯಾಂ ಸೀದನ್ನಪಿ ನ ಮುಹ್ಯತಿ ॥
ಅನುವಾದ
ದೈತ್ಯ- ದಾನವ ವಂಶಗಳೆರಡರಲ್ಲೂ ಅಗ್ರಗಣ್ಯನಾಗಿರುವ ಈ ಬಲಿಯು ಆ ವಂಶಗಳ ಕೀರ್ತಿಯನ್ನು ಹೆಚ್ಚಿಸುವವನಾಗಿ ದ್ದಾನೆ. ಈತನು ಜಯಿಸಲು ಅಸಾಧ್ಯವಾದ ನನ್ನ ಮಾಯೆ ಯನ್ನು ಗೆದ್ದಿರುವನು. ನೀನೇ ನೋಡುತ್ತಿರುವಂತೆ ಇಷ್ಟು ಕಷ್ಟಪಡುತ್ತಿದ್ದರೂ ಇವನು ಮೋಹಿತನಾಗಲಿಲ್ಲ. ॥28॥
(ಶ್ಲೋಕ-29)
ಮೂಲಮ್
ಕ್ಷೀಣರಿಕ್ಥಶ್ಚ್ಯುತಃ ಸ್ಥಾನಾತ್ ಕ್ಷಿಪ್ತೋ ಬದ್ಧಶ್ಚ ಶತ್ರುಭಿಃ ।
ಜ್ಞಾತಿಭಿಶ್ಚ ಪರಿತ್ಯಕ್ತೋ ಯಾತನಾಮನುಯಾಪಿತಃ ॥
(ಶ್ಲೋಕ-30)
ಮೂಲಮ್
ಗುರುಣಾ ಭರ್ತ್ಸಿತಃ ಶಪ್ತೋ ಜಹೌ ಸತ್ಯಂ ನ ಸುವ್ರತಃ ।
ಛಲೈರುಕ್ತೋ ಮಯಾ ಧರ್ಮೋ ನಾಯಂ ತ್ಯಜತಿ ಸತ್ಯವಾಕ್ ॥
ಅನುವಾದ
ಇವನ ಧನ-ಐಶ್ವರ್ಯ ಕಸಿದುಕೊಂಡೆ. ರಾಜ್ಯಪದವಿ ಕೈಬಿಟ್ಟು ಹೋಯಿತು. ಅನೇಕ ವಿಧದಿಂದ ಆಕ್ಷೇಪಿಸಿದೆ. ಶತ್ರುಗಳಿಂದ ಬಂಧಿಸಲ್ಪಟ್ಟನು. ಬಂಧು-ಬಾಂಧವರು ತೊರೆದುಹೋದರು. ಇಷ್ಟೇ ಅಲ್ಲ, ಇವನ ಗುರುಗಳಾದ ಶುಕ್ರಾಚಾರ್ಯರು ಗದರಿಸಿದರು. ಕಡೆಗೆ ಶಾಪವನ್ನೂ ಕೊಟ್ಟರು. ನಾನೂ ಕೂಡ ವಂಚಿಸಲೆಂದೇ ಧರ್ಮೋಪದೇಶ ಮಾಡಿದೆ. ಆದರೆ ಈ ಸತ್ಯವಾದಿಯೂ, ದೃಢವ್ರತಿಯೂ ಆದ ಬಲಿಯು ತನ್ನ ಧರ್ಮವನ್ನು ಬಿಡಲಿಲ್ಲ. ॥29-30॥
(ಶ್ಲೋಕ-31)
ಮೂಲಮ್
ಏಷ ಮೇ ಪ್ರಾಪಿತಃ ಸ್ಥಾನಂ ದುಷ್ಪ್ರಾಪಮಮರೈರಪಿ ।
ಸಾವರ್ಣೇರಂತರಸ್ಯಾಯಂ ಭವಿತೇಂದ್ರೋ ಮದಾಶ್ರಯಃ ॥
ಅನುವಾದ
ಆದ್ದರಿಂದ ಶ್ರೇಷ್ಠ ದೇವತೆಗಳಿಗೂ ಅತಿಕಷ್ಟದಿಂದ ದೊರೆಯಬಹುದಾದ ಸ್ಥಾನವನ್ನು ನಾನು ಇವನಿಗೆ ಕೊಟ್ಟಿರುವೆನು. ಇವನು ಸಾವರ್ಣಿ ಮನ್ವಂತರದಲ್ಲಿ ನನ್ನ ಆಶ್ರಯವನ್ನು ಪಡೆದು ಇಂದ್ರನಾಗುವನು. ॥31॥
(ಶ್ಲೋಕ-32)
ಮೂಲಮ್
ತಾವತ್ಸುತಲಮಧ್ಯಾಸ್ತಾಂ ವಿಶ್ವಕರ್ಮವಿನಿರ್ಮಿತಮ್ ।
ಯನ್ನಾಧಯೋ ವ್ಯಾಧಯಶ್ಚ ಕ್ಲಮಸ್ತಂದ್ರಾ ಪರಾಭವಃ ।
ನೋಪಸರ್ಗಾ ನಿವಸತಾ ಸಂಭವಂತಿ ಮಮೇಕ್ಷಯಾ ॥
ಅನುವಾದ
ಅಲ್ಲಿಯವರೆಗೆ ಇವನು ವಿಶ್ವಕರ್ಮನಿಂದ ನಿರ್ಮಿತವಾದ ಸುತಲಲೋಕದಲ್ಲಿ ವಾಸಿಸುವನು. ಅಲ್ಲಿ ಇರುವವರಿಗೆ ನನ್ನ ಕೃಪಾದೃಷ್ಟಿಯಿಂದ ಮಾನಸಿಕರೋಗವಾಗಲೀ, ಬಳಲಿಕೆಯಾಗಲೀ, ಸೋಮಾರಿತನವಾಗಲೀ, ಅಂತರ್ಬಾಹ್ಯ ಶತ್ರುಗಳಿಂದ ಪರಾಜಯವಾಗಲೀ ಉಂಟಾಗುವುದಿಲ್ಲ. ॥32॥
(ಶ್ಲೋಕ-33)
ಮೂಲಮ್
ಇಂದ್ರಸೇನ ಮಹಾರಾಜ ಯಾಹಿ ಭೋ ಭದ್ರಮಸ್ತು ತೇ ।
ಸುತಲಂ ಸ್ವರ್ಗಿಭಿಃ ಪ್ರಾರ್ಥ್ಯಂ ಜ್ಞಾತಿಭಿಃ ಪರಿವಾರಿತಃ ॥
ಅನುವಾದ
ಹೀಗೆ ಬ್ರಹ್ಮದೇವರಿಗೆ ಹೇಳಿ ಬಲಿಯನ್ನು ಸಂಬೋಧಿಸುತ್ತಾ ಮಹಾರಾಜ ಇಂದ್ರಸೇನನೇ! ನಿನಗೆ ಮಂಗಳವಾಗಲಿ. ಈಗ ನೀನು ಸ್ವರ್ಗದ ದೇವತೆಗಳೂ ಕೂಡ ಬಯಸುವಂತಹ ಸುತಲಲೋಕಕ್ಕೆ ಹೋಗಿ ನಿನ್ನ ಪರಿವಾರದೊಂದಿಗೆ ಇರು. ॥33॥
(ಶ್ಲೋಕ-34)
ಮೂಲಮ್
ನ ತ್ವಾಮಭಿಭವಿಷ್ಯಂತಿ ಲೋಕೇಶಾಃ ಕಿಮುತಾಪರೇ ।
ತ್ವಚ್ಛಾಸನಾತಿಗಾನ್ ದೈತ್ಯಾಂಶ್ಚಕ್ರಂ ಮೇ ಸೂದಯಿಷ್ಯತಿ ॥
ಅನುವಾದ
ಅಲ್ಲಿ ವಾಸವಾಗಿರುವ ನಿನ್ನನ್ನು ಲೋಕಪಾಲರೂ ಕೂಡ ಸೋಲಿಸಲಾರರು. ಇತರರ ಮಾತಿರಲಿ, ನಿನ್ನ ಅಪ್ಪಣೆಯನ್ನು ಮೀರಿ ನಡೆಯುವ ದೈತ್ಯ ರನ್ನು ನನ್ನ ಸುದರ್ಶನಚಕ್ರವೇ ನಾಶಗೊಳಿಸುತ್ತದೆ. ॥34॥
(ಶ್ಲೋಕ-35)
ಮೂಲಮ್
ರಕ್ಷಿಷ್ಯೇ ಸರ್ವತೋಹಂ ತ್ವಾಂ ಸಾನುಗಂ ಸಪರಿಚ್ಛದಮ್ ।
ಸದಾ ಸನ್ನಿಹಿತಂ ವೀರ ತತ್ರ ಮಾಂ ದ್ರಕ್ಷ್ಯತೇ ಭವಾನ್ ॥
ಅನುವಾದ
ವೀರವರೇಣ್ಯನೇ! ನಿನ್ನನ್ನು, ನಿನ್ನ ಅನುಯಾಯಿಗಳನ್ನು, ನಿನ್ನ ಭೋಗ ಸಾಮಗ್ರಿಗಳನ್ನು ನಾನು ಎಲ್ಲ ವಿಧದಿಂದ ರಕ್ಷಿಸುವೆನು. ಅಲ್ಲಿ ನೀನು ಯಾವಾಗಲೂ ನನ್ನನ್ನು ನಿನ್ನ ಬಳಿ ಯಲ್ಲೇ ನೋಡುತ್ತಾ ಇರುವೆ. ॥35॥
(ಶ್ಲೋಕ-36)
ಮೂಲಮ್
ತತ್ರ ದಾನವದೈತ್ಯಾನಾಂ ಸಂಗಾತ್ತೇ ಭಾವ ಆಸುರಃ ।
ದೃಷ್ಟ್ವಾ ಮದನುಭಾವಂ ವೈ ಸದ್ಯಃ ಕುಂಠೋ ವಿನಂಕ್ಷ್ಯತಿ ॥
ಅನುವಾದ
ದೈತ್ಯ-ದಾನವರ ಸಂಬಂಧದಿಂದ ಉಂಟಾದ ನಿನ್ನ ಅಸುರಭಾವವು ನನ್ನ ಮಹಿಮೆಯಿಂದಾಗಿ, ನನ್ನ ಸಾನ್ನಿಧ್ಯವಿರುವುದರಿಂದ ಕುಗ್ಗಿ ಹೋಗಿ ನಾಶಹೊಂದುವುದು. ॥36॥
ಅನುವಾದ (ಸಮಾಪ್ತಿಃ)
ಇಪ್ಪತ್ತೆರಡನೆಯ ಅಧ್ಯಾಯವು ಮುಗಿಯಿತು. ॥22॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ವಾಮನಪ್ರಾದುರ್ಭಾವೇ ಬಲಿವಾಮನಸಂವಾದೋ ನಾಮ ದ್ವಾವಿಂಶೋಧ್ಯಾಯಃ ॥22॥