೨೧

[ಇಪ್ಪತ್ತೊಂದನೆಯ ಅಧ್ಯಾಯ]

ಭಾಗಸೂಚನಾ

ಬಲಿಬಂಧನ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಸತ್ಯಂ ಸಮೀಕ್ಷ್ಯಾಬ್ಜಭವೋ ನಖೇಂದುಭಿ-
ರ್ಹತಸ್ವಧಾಮದ್ಯುತಿರಾವೃತೋಭ್ಯಗಾತ್ ।
ಮರೀಚಿಮಿಶ್ರಾ ಋಷಯೋ ಬೃಹದ್ವ್ರತಾಃ
ಸನಂದನಾದ್ಯಾ ನರದೇವ ಯೋಗಿನಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಭಗವಂತನ ಚರಣಕಮಲವು ಸತ್ಯಲೋಕವನ್ನು ವ್ಯಾಪಿಸಿತು. ಅವನ ದಿವ್ಯವಾದ ನಖಚಂದ್ರಿಕೆಯಿಂದ ಸತ್ಯಲೋಕದ ಕಾಂತಿಯು ಮಸಕಾಗಿ ಹೋಯಿತು. ಸ್ವಯಂ ಬ್ರಹ್ಮನೂ ಕೂಡ ಆ ಪ್ರಕಾಶದಲ್ಲಿ ಮುಳುಗಿಹೋದನು. ಮರೀಚಿಯೇ ಮೊದಲಾದ ಋಷಿಗಳೂ, ಸನಂದನಾದಿ ನೈಷ್ಠಿಕ ಬ್ರಹ್ಮಚಾರಿಗಳೂ, ಇತರ ಮಹಾಮಹಾ ಯೋಗಿಗಳೂ ಕೂಡ ಭಗವಂತನ ಚರಣಕಮಲವನ್ನು ಭಕ್ತಿಭಾವದಿಂದ ಸ್ವಾಗತಿಸಿದರು. ॥1॥

(ಶ್ಲೋಕ-2)

ಮೂಲಮ್

ವೇದೋಪವೇದಾ ನಿಯಮಾನ್ವಿತಾ ಯಮಾ-
ಸ್ತರ್ಕೇತಿಹಾಸಾಂಗ ಪುರಾಣಸಂಹಿತಾಃ ।
ಯೇ ಚಾಪರೇ ಯೋಗಸಮೀರದೀಪಿತ-
ಜ್ಞಾನಾಗ್ನಿನಾ ರಂಧಿತಕರ್ಮಕಲ್ಮಷಾಃ ।
ವವಂದಿರೇ ಯತ್ಸ್ಮರಣಾನುಭಾವತಃ
ಸ್ವಾಯಂಭುವಂ ಧಾಮ ಗತಾ ಅಕರ್ಮಕಮ್ ॥

ಅನುವಾದ

ಬ್ರಹ್ಮಲೋಕದಲ್ಲಿ ಮೂರ್ತಿವತ್ತಾಗಿ ನೆಲೆಸಿರುವ ವೇದಗಳೂ, ಉಪವೇದಗಳೂ, ನಿಯಮ-ಯಮಗಳೂ, ತರ್ಕ-ಇತಿಹಾಸಗಳೂ, ವೇದಾಂಗಗಳೂ, ಪುರಾಣ-ಸಂಹಿತೆ ಗಳೂ ಎಲ್ಲವೂ ಪರಮಪುರುಷನ ಚರಣಾರವಿಂದವನ್ನು ಸ್ವಾಗತಿಸಲು ಸಿದ್ಧರಾದರು. ಯೋಗರೂಪವಾದ ವಾಯು ವಿನಿಂದ ಜ್ಞಾನಾಗ್ನಿಯನ್ನು ಪ್ರಜ್ವಲಿತಗೊಳಿಸಿ ಕರ್ಮ ಮಲವನ್ನು ಭಸ್ಮಗೊಳಿಸಿದ್ದ ಮಹಾತ್ಮರೆಲ್ಲರೂ ಭಗವಂತನ ಚರಣವನ್ನು ವಂದಿಸಿದರು. ಇದೇ ಚರಣಕಮಲದ ಸ್ಮರಣೆಯ ಮಹಿಮೆಯಿಂದ ಇವರೆಲ್ಲರೂ ಕರ್ಮದಿಂದ ದೊರೆಯದಿರುವ ಬ್ರಹ್ಮದೇವರ ಧಾಮವನ್ನು ಹೊಂದಿದ್ದರು. ॥2॥

(ಶ್ಲೋಕ-3)

ಮೂಲಮ್

ಅಥಾಂಘ್ರಯೇ ಪ್ರೋನ್ನಮಿತಾಯ ವಿಷ್ಣೋ-
ರುಪಾಹರತ್ಪದ್ಮಭವೋರ್ಹಣೋದಕಮ್ ।
ಸಮರ್ಚ್ಯ ಭಕ್ತ್ಯಾಭ್ಯಗೃಣಾಚ್ಛುಚಿಶ್ರವಾ
ಯನ್ನಾಭಿಪಂಕೇರುಹಸಂಭವಃ ಸ್ವಯಮ್ ॥

ಅನುವಾದ

ಭಗವಾನ್ ಬ್ರಹ್ಮದೇವರ ಕೀರ್ತಿಯು ಪರಿಶುದ್ಧವಾದುದು. ಅವರು ಮಹಾವಿಷ್ಣುವಿನ ನಾಭಿಕಮಲದಿಂದ ಉತ್ಪನ್ನರಾಗಿದ್ದರು. ಅವರು ತಮ್ಮ ಲೋಕಕ್ಕೆ ಆಗಮಿಸಿದ್ದ ವಿಶ್ವ ರೂಪನಾದ ಭಗವಂತನ ಅಡಿದಾವರೆಗೆ ಸ್ವಾಗತವಿತ್ತ ಬಳಿಕ ಅರ್ಘ್ಯ-ಪಾದ್ಯಗಳಿಂದ ಸಂಪೂಜಿಸಿ ಆ ದಿವ್ಯ ಪಾದ-ಪದ್ಮವನ್ನು ತೊಳೆದರು. ಹೀಗೆ ತುಂಬುಭಕ್ತಿ ಯಿಂದಲೂ ಅರ್ಚಿಸಿದ ಬಳಿಕ ಪ್ರೇಮಭಾವದಿಂದ ಅವನನ್ನು ಸ್ತುತಿಸಿದರು. ॥3॥

(ಶ್ಲೋಕ-4)

ಮೂಲಮ್

ಧಾತುಃ ಕಮಂಡಲುಜಲಂ ತದುರುಕ್ರಮಸ್ಯ
ಪಾದಾವನೇಜನಪವಿತ್ರತಯಾ ನರೇಂದ್ರ ।
ಸ್ವರ್ಧುನ್ಯಭೂನ್ನಭಸಿ ಸಾ ಪತತೀ ನಿಮಾರ್ಷ್ಟಿ
ಲೋಕತ್ರಯಂ ಭಗವತೋ ವಿಶದೇವ ಕೀರ್ತಿಃ ॥

ಅನುವಾದ

ಪರೀಕ್ಷಿತನೇ! ಬ್ರಹ್ಮನ ಕಮಂಡಲುವಿನಲ್ಲಿದ್ದ ಆ ತೀರ್ಥವು ಭಗವಾನ್ ತ್ರಿವಿಕ್ರಮನ ಪಾದವನ್ನು ತೊಳೆದು ದರಿಂದ ಪವಿತ್ರವಾದ ಗಂಗೆಯಾಗಿ ಪರಿಣಮಿಸಿತು. ಅದು ಆಕಾಶದಿಂದ ಭೂಮಿಗೆ ಬಂದು ಮೂರು ಲೋಕಗಳನ್ನು ಪವಿತ್ರಗೊಳಿಸುತ್ತಿದೆ. ವಿಷ್ಣು ಪಾದೋದ್ಭವೆಯಾದ ಈ ಗಂಗೆಯು ಭಗವಂತನ ಮೂರ್ತಿಮಂತ ಉಜ್ವಲ ಕೀರ್ತಿಯಾಗಿದೆ. ॥4॥

(ಶ್ಲೋಕ-5)

ಮೂಲಮ್

ಬ್ರಹ್ಮಾದಯೋ ಲೋಕನಾಥಾಃ ಸ್ವನಾಥಾಯ ಸಮಾದೃತಾಃ ।
ಸಾನುಗಾ ಬಲಿಮಾಜಹ್ರುಃ ಸಂಕ್ಷಿಪ್ತಾತ್ಮವಿಭೂತಯೇ ॥

ಅನುವಾದ

ಭಕ್ತರ ಅನುಕೂಲಕ್ಕಾಗಿ ಭಗವಂತನು ತನ್ನ ರೂಪವನ್ನು ಸಣ್ಣದಾಗಿಸಿಕೊಂಡು ತನ್ನ ವಿಭೂತಿಗಳನ್ನು ಸಂಕೋಚಗೊಳಿಸಿಕೊಂಡಾಗ ಬ್ರಹ್ಮಾದಿ ಲೋಕಪಾಲರು ತಮ್ಮ ಅನುಯಾಯಿಗಳೊಂದಿಗೆ ಅತ್ಯಂತ ಆದರಭಾವದಿಂದ ತಮ್ಮ ಸ್ವಾಮಿಯಾದ ಭಗವಂತನಿಗೆ ಪೂಜೆಯನ್ನು ಸಮರ್ಪಿಸಿದರು. ॥5॥

(ಶ್ಲೋಕ-6)

ಮೂಲಮ್

ತೋಯೈಃ ಸಮರ್ಹಣೈಃ ಸ್ರಗ್ಭಿರ್ದಿವ್ಯಗಂಧಾನುಲೇಪನೈಃ ।
ಧೂಪೈರ್ದೀಪೈಃ ಸುರಭಿಭಿರ್ಲಾಜಾಕ್ಷತಲಾಂಕುರೈಃ ॥

(ಶ್ಲೋಕ-7)

ಮೂಲಮ್

ಸ್ತವನೈರ್ಜಯಶಬ್ದೈಶ್ಚ ತದ್ವೀರ್ಯಮಹಿಮಾಂಕಿತೈಃ ।
ನೃತ್ಯವಾದಿತ್ರಗೀತೈಶ್ಚ ಶಂಖದುಂದುಭಿನಿಃಸ್ವನೈಃ ॥

ಅನುವಾದ

ಅವರು ಅರ್ಘ್ಯ ಪಾದ್ಯಾಚಮನೀಯ ಮಧುಪರ್ಕಗಳಿಂದಲೂ, ಪುಷ್ಪಗಳಿಂದಲೂ, ದಿವ್ಯವಾದ ಗಂಧ-ಅಂಗರಾಗಗಳಿಂದಲೂ, ಸುವಾಸನೆಯುಳ್ಳ ಧೂಪ-ದೀಪ, ಅರಳು-ಅಕ್ಷತೆಗಳಿಂದಲೂ ಫಲ-ಅಂಕುರಗಳಿಂದಲೂ, ಭಗವಂತನ ಪರಾಕ್ರಮ- ಮಹಿಮೆ ಗಳಿಂದೊಡಗೂಡಿದ ಸ್ತೋತ್ರಗಳಿಂದಲೂ, ಜಯ-ಜಯ ಘೋಷಗಳಿಂದಲೂ, ನೃತ್ಯ-ಗೀತ-ವಾದ್ಯಗಳಿಂದಲೂ, ಶಂಖ-ದುಂದುಭಿಗಳ ಧ್ವನಿಯಿಂದಲೂ ಆ ತ್ರಿವಿಕ್ರಮ ಭಗವಂತನನ್ನು ಆರಾಧಿಸಿದರು. ॥6-7॥

(ಶ್ಲೋಕ-8)

ಮೂಲಮ್

ಜಾಂಬವಾನೃಕ್ಷರಾಜಸ್ತು ಭೇರೀಶಬ್ದೈರ್ಮನೋಜವಃ ।
ವಿಜಯಂ ದಿಕ್ಷು ಸರ್ವಾಸು ಮಹೋತ್ಸವಮಘೋಷಯತ್ ॥

ಅನುವಾದ

ಆ ಸಮಯ ದಲ್ಲಿ ಕರಡಿಗಳ ರಾಜನಾದ ಜಾಂಬವಂತನು ಮನೋವೇಗಕ್ಕೆ ಸಮಾನವಾಗಿ ವೇಗದಿಂದ ಎಲ್ಲ ದಿಕ್ಕುಗಳಲ್ಲಿಯೂ ಓಡಾಡುತ್ತಾ ಭೇರಿಯ ಶಬ್ದದೊಡನೆ ಭಗವಂತನ ಮಂಗಲಮಯ ವಿಜಯೋತ್ಸವ ವಾರ್ತೆಯನ್ನು ಸಾರಿದನು.॥8॥

(ಶ್ಲೋಕ-9)

ಮೂಲಮ್

ಮಹೀಂ ಸರ್ವಾಂ ಹೃತಾಂ ದೃಷ್ಟ್ವಾ ತ್ರಿಪದವ್ಯಾಜಯಾಚ್ಞಯಾ ।
ಊಚುಃ ಸ್ವಭರ್ತುರಸುರಾ ದೀಕ್ಷಿತಸ್ಯಾತ್ಯಮರ್ಷಿತಾಃ ॥

ಅನುವಾದ

ಈ ವಾಮನ ಮೂರ್ತಿಯು ಮೂರುಹೆಜ್ಜೆ ಭೂಮಿಯನ್ನು ಬೇಡುವ ನೆಪದಿಂದ ಇಡೀ ಭೂಮಿಯನ್ನೇ ಮೂರು ಲೋಕಗಳನ್ನೇ ತಮ್ಮಿಂದ ಕಿತ್ತುಕೊಂಡಿರುವುದನ್ನು ನೋಡಿ ಅಸುರರು ಅತ್ಯಂತ ಕ್ರುದ್ಧರಾದರು. ಅವರು ತಮ್ಮ- ತಮ್ಮಲ್ಲೇ ಯೋಚಿಸತೊಡಗಿದರು ‘ನಮ್ಮ ಒಡೆಯನು ಈ ಸಮಯದಲ್ಲಿ ಯಜ್ಞದೀಕ್ಷಿತನಾಗಿರುವನು. ಅದರಿಂದ ಅವನು ಏನನ್ನೂ ಮಾತನಾಡುವುದಿಲ್ಲ. ॥9॥

(ಶ್ಲೋಕ-10)

ಮೂಲಮ್

ನ ವಾ ಅಯಂ ಬ್ರಹ್ಮಬಂಧುರ್ವಿಷ್ಣುರ್ಮಾಯಾವಿನಾಂ ವರಃ ।
ದ್ವಿಜರೂಪಪ್ರತಿಚ್ಛನ್ನೋ ದೇವಕಾರ್ಯಂ ಚಿಕೀರ್ಷತಿ ॥

ಅನುವಾದ

ಎಲಾ! ಇವನು ಸಾಮಾನ್ಯ ಬ್ರಾಹ್ಮಣನಲ್ಲ! ಇವನು ಮಹಾಮಾಯಾವಿಯಾದ ವಿಷ್ಣುವೇ ಆಗಿದ್ದಾನೆ. ಬ್ರಾಹ್ಮಣ ರೂಪವನ್ನು ಧರಿಸಿ ಇವನು ದೇವತೆಗಳ ಕಾರ್ಯವನ್ನು ಸಾಧಿಸಿ ಕೊಡಲು ಬಯಸುತ್ತಿರುವನು. ॥10॥

(ಶ್ಲೋಕ-11)

ಮೂಲಮ್

ಅನೇನ ಯಾಚಮಾನೇನ ಶತ್ರುಣಾ ವಟುರೂಪಿಣಾ ।
ಸರ್ವಸ್ವಂ ನೋ ಹೃತಂ ಭರ್ತುರ್ನ್ಯಸ್ತದಂಡಸ್ಯ ಬರ್ಹಿಷಿ ॥

ಅನುವಾದ

ನಮ್ಮ ಒಡೆಯನು ಯಜ್ಞದ ದೀಕ್ಷಿತನಾಗಿರುವಾಗ ಯಾರಿಗೂ ಯಾವ ವಿಧವಾದ ಶಿಕ್ಷೆಯನ್ನೂ ಕೊಡಲಾರನು. ಇಂತಹ ಸಮಯದಲ್ಲೇ ಈ ನಮ್ಮ ಶತ್ರುವು ಬ್ರಹ್ಮಚಾರಿಯ ವೇಷವನ್ನು ಧರಿಸಿ ಮೊದಲು ಮೂರಡಿ ಭೂಮಿಯನ್ನು ಯಾಚಿಸಿ ಅನಂತರದಲ್ಲಿ ನಮ್ಮ ಸರ್ವಸ್ವವನ್ನು ಅಪಹರಿಸಿ ಬಿಟ್ಟನಲ್ಲ! ॥11॥

(ಶ್ಲೋಕ-12)

ಮೂಲಮ್

ಸತ್ಯವ್ರತಸ್ಯ ಸತತಂ ದೀಕ್ಷಿತಸ್ಯ ವಿಶೇಷತಃ ।
ನಾನೃತಂ ಭಾಷಿತುಂ ಶಕ್ಯಂ ಬ್ರಹ್ಮಣ್ಯಸ್ಯ ದಯಾವತಃ ॥

ಅನುವಾದ

ನಮ್ಮ ಸ್ವಾಮಿಯಾದರೋ ಸತತವಾಗಿ ಸತ್ಯದಲ್ಲಿಯೇ ಪರಮ ನಿಷ್ಠೆಯುಳ್ಳವನು. ಅದರಲ್ಲಿಯೂ ವಿಶೇಷವಾಗಿ ಯಜ್ಞದ ದೀಕ್ಷಿತನಾಗಿರುವನು. ಅವನು ಬ್ರಾಹ್ಮಣ ಭಕ್ತನೂ, ದಯಾಳುವೂ ಆಗಿರುವುದರಿಂದ ಸುಳ್ಳುಹೇಳಲು ಸಾಧ್ಯ ವಾಗುವುದಿಲ್ಲ. ॥12॥

(ಶ್ಲೋಕ-13)

ಮೂಲಮ್

ತಸ್ಮಾದಸ್ಯ ವಧೋ ಧರ್ಮೋ ಭರ್ತುಃ ಶುಷ್ರೂಷಣಂ ಚ ನಃ ।
ಇತ್ಯಾಯುಧಾನಿ ಜಗೃಹುರ್ಬಲೇರನುಚರಾಸುರಾಃ ॥

ಅನುವಾದ

ಇಂತಹ ಸಂದರ್ಭದಲ್ಲಿ ನಮ್ಮ ಶತ್ರುವನ್ನು ವಧಿಸುವುದೇ ನಮ್ಮ ಧರ್ಮವೂ, ಕರ್ತವ್ಯವೂ ಆಗಿದೆ. ಇದರಿಂದ ನಮ್ಮ ಒಡೆಯನ ಸೇವೆಯೂ ಆಗುವುದು’ ಎಂದು ನಿರ್ಧರಿಸಿ ಬಲಿ ಚಕ್ರವರ್ತಿಯ ಅನುಚರರು ತಮ್ಮ-ತಮ್ಮ ಆಯುಧಗಳಿಂದ ಸಜ್ಜಾದರು. ॥13॥

ಮೂಲಮ್

(ಶ್ಲೋಕ-14)
ತೇ ಸರ್ವೇ ವಾಮನಂ ಹಂತುಂ ಶೂಲಪಟ್ಟಿಶಪಾಣಯಃ ।
ಅನಿಚ್ಛತೋ ಬಲೇ ರಾಜನ್ಪ್ರಾದ್ರವನ್ ಜಾತಮನ್ಯವಃ ॥

ಅನುವಾದ

ಪರೀಕ್ಷಿತನೇ! ರಾಜನಾದ ಬಲಿಯು ಬಯಸ ದಿದ್ದರೂ, ಅವನ ಅನುಮತಿಯನ್ನೂ ಪಡೆಯದೆಯೇ ಎಲ್ಲರೂ ಅತ್ಯಂತ ಕ್ರೋಧಗೊಂಡು ಶೂಲ, ಪಟ್ಟಿಶ ಮುಂತಾದ ಆಯುಧಗಳನ್ನು ಹಿಡಿದು ಕೊಂಡು ಭಗವಾನ್ ವಾಮನನನ್ನು ಕೊಲ್ಲಲು ಮುಗಿಬಿದ್ದರು. ॥14॥

(ಶ್ಲೋಕ-15)

ಮೂಲಮ್

ತಾನಭಿದ್ರವತೋ ದೃಷ್ಟ್ವಾ ದಿತಿಜಾನೀಕಪಾನ್ನೃಪ ।
ಪ್ರಹಸ್ಯಾನುಚರಾ ವಿಷ್ಣೋಃ ಪ್ರತ್ಯಷೇಧನ್ನುದಾಯುಧಾಃ ॥

ಅನುವಾದ

ರಾಜೇಂದ್ರಾ! ದೈತ್ಯ ಸೇನಾಪತಿಗಳು ಆಕ್ರಮಣಕ್ಕಾಗಿ ಓಡಿ ಬರುವುದನ್ನು ಮಹಾವಿಷ್ಣುವಿನ ಪಾರ್ಷದರು ನೋಡಿದಾಗ ಗಹಗಹಿಸಿ ನಗುತ್ತಾ ತಮ್ಮ-ತಮ್ಮ ಶಸ್ತ್ರಾಸ್ತ್ರಗಳನ್ನು ಎತ್ತಿ ಕೊಂಡು ದೈತ್ಯಸೈನಿಕರನ್ನು ತಡೆದು ನಿಲ್ಲಿಸಿದರು. ॥15॥

(ಶ್ಲೋಕ-16)

ಮೂಲಮ್

ನಂದಃ ಸುನಂದೋಥ ಜಯೋ ವಿಜಯಃ ಪ್ರಬಲೋ ಬಲಃ ।
ಕುಮುದಃ ಕುಮುದಾಕ್ಷಶ್ಚ ವಿಷ್ವಕ್ಸೇನಃ ಪತತಿರಾಟ್ ॥

(ಶ್ಲೋಕ-17)

ಮೂಲಮ್

ಜಯಂತಃ ಶ್ರುತದೇವಶ್ಚ ಪುಷ್ಪದಂತೋಥ ಸಾತ್ವತಃ ।
ಸರ್ವೇ ನಾಗಾಯುತಪ್ರಾಣಾಶ್ಚಮೂಂ ತೇ ಜಘ್ನುರಾಸುರೀಮ್ ॥

ಅನುವಾದ

ನಂದ, ಸುನಂದ, ಜಯ, ವಿಜಯ, ಪ್ರಬಲ, ಬಲ, ಕುಮುದ, ಕುಮುದಾಕ್ಷ, ವಿಶ್ವಕ್ಸೇನ, ಗರುಡ, ಜಯಂತ, ಶ್ರುತದೇವ, ಪುಷ್ಪದಂತ, ಸಾತ್ವತ ಮುಂತಾದ ಭಗವಂತನ ಪಾರ್ಷದರೆಲ್ಲರೂ ಹತ್ತು-ಹತ್ತುಸಾವಿರ ಆನೆಗಳ ಬಲವುಳ್ಳ ವರು. ಇವರೆಲ್ಲರೂ ಅಸುರರ ಸೇನೆಯನ್ನು ಸಂಹರಿಸ ತೊಡಗಿದರು. ॥16-17॥

(ಶ್ಲೋಕ-18)

ಮೂಲಮ್

ಹನ್ಯಮಾನಾನ್ಸ್ವಕಾನ್ದೃಷ್ಟ್ವಾ ಪುರುಷಾನುಚರೈರ್ಬಲಿಃ ।
ವಾರಯಾಮಾಸ ಸಂರಬ್ಧಾನ್ಕಾವ್ಯಶಾಪಮನುಸ್ಮರನ್ ॥

(ಶ್ಲೋಕ-19)

ಮೂಲಮ್

ಹೇ ವಿಪ್ರಚಿತ್ತೇ ಹೇ ರಾಹೋ ಹೇ ನೇಮೇ ಶ್ರೂಯತಾಂ ವಚಃ ।
ಮಾ ಯುಧ್ಯತ ನಿವರ್ತಧ್ವಂ ನ ನಃ ಕಾಲೋಯಮರ್ಥಕೃತ್ ॥

ಅನುವಾದ

ಭಗವಂತನ ಪಾರ್ಷದರು ತನ್ನ ಸೈನಿಕರನ್ನು ಕೊಲ್ಲುತ್ತಿರುವುದನ್ನು ಬಲಿಯು ನೋಡಿದನು. ನಮ್ಮ ಸೈನಿಕರು ಕ್ರೋಧಗೊಂಡು ಅವರೊಂದಿಗೆ ಯುದ್ಧಮಾಡಲು ಸಿದ್ಧರಾಗಿದ್ದಾರೆ. ಅವನು ಶುಕ್ರಾಚಾರ್ಯರ ಶಾಪವನ್ನು ನೆನೆದು ವಿಪ್ರಚಿತ್ತಿ, ರಾಹು, ನೇಮಿ ಮೊದಲಾದ ದೈತ್ಯರನ್ನು ಸಂಬೋಧಿಸುತ್ತಾ ಸಹೋದರರೇ! ನನ್ನ ಮಾತನ್ನು ಕೇಳಿರಿ. ಯುದ್ಧಮಾಡದೆ ಹಿಂದೆ ಸರಿಯಿರಿ. ಈ ಸಮಯವು ನಮಗೆ ಅನುಕೂಲವಾಗಿಲ್ಲ ಎಂದು ನುಡಿದನು. ॥18-19॥

(ಶ್ಲೋಕ-20)

ಮೂಲಮ್

ಯಃ ಪ್ರಭುಃ ಸರ್ವಭೂತಾನಾಂ ಸುಖದುಃಖೋಪಪತ್ತಯೇ ।
ತಂ ನಾತಿವರ್ತಿತುಂ ದೈತ್ಯಾಃ ಪೌರುಷೈರೀಶ್ವರಃ ಪುಮಾನ್ ॥

ಅನುವಾದ

ಸಮಸ್ತ ಪ್ರಾಣಿಗಳಿಗೆ ಸುಖ ಮತ್ತು ದುಃಖವನ್ನು ಕೊಡಲು ಸಮರ್ಥವಾದ ಕಾಲವನ್ನು ಯಾರಾದರೂ ತನ್ನ ಪ್ರಯತ್ನದಿಂದ ಅತಿಕ್ರಮಿಸಲು ಬಯಸಿದರೆ ಅದು ಅವನ ಶಕ್ತಿಗೆ ಮೀರಿದುದು. ॥20॥

(ಶ್ಲೋಕ-21)

ಮೂಲಮ್

ಯೋ ನೋ ಭವಾಯ ಪ್ರಾಗಾಸೀದಭವಾಯ ದಿವೌಕಸಾಮ್ ।
ಸ ಏವ ಭಗವಾನದ್ಯ ವರ್ತತೇ ತದ್ವಿಪರ್ಯಯಮ್ ॥

ಅನುವಾದ

ಯಾವ ಕಾಲ ಪುರುಷನು ಈ ಹಿಂದೆ ನಮ್ಮ ಉನ್ನತಿಗೂ, ದೇವತೆಗಳ ಅವನತಿಗೂ ಕಾರಣನಾಗಿದ್ದನೋ ಆ ಕಾಲ ಪುರುಷನೇ ಇಂದು ನಮ್ಮ ಅವನತಿಗೂ, ದೇವತೆಗಳ ಉನ್ನತಿಗೂ ಕಾರಣವಾಗಿದೆ. ॥21॥

(ಶ್ಲೋಕ-22)

ಮೂಲಮ್

ಬಲೇನ ಸಚಿವೈರ್ಬುದ್ಧ್ಯಾ ದುರ್ಗೈರ್ಮಂತ್ರೌಷಧಾದಿಭಿಃ ।
ಸಾಮಾದಿಭಿರುಪಾಯೈಶ್ಚ ಕಾಲಂ ನಾತ್ಯೇತಿ ವೈ ಜನಃ ॥

ಅನುವಾದ

ಮನುಷ್ಯರು ಬಲ, ಮಂತ್ರೀ, ಬುದ್ಧಿ, ದುರ್ಗ, ಮಂತ್ರ, ಔಷಧಿ ಹಾಗೂ ಸಾಮ-ದಾನ ಮೊದಲಾದ ಉಪಾಯಗಳು ಇವುಗಳಲ್ಲಿ ಯಾವ ಉಪಾಯದಿಂದಾಗಲೀ, ಅಥವಾ ಎಲ್ಲದರ ಮೂಲಕವಾಗಲೀ ಕಾಲಪುರುಷನನ್ನು ಗೆಲ್ಲಲಾಗುವುದಿಲ್ಲ. ॥22॥

(ಶ್ಲೋಕ-23)

ಮೂಲಮ್

ಭವದ್ಭಿರ್ನಿರ್ಜಿತಾ ಹ್ಯೇತೇ ಬಹುಶೋನುಚರಾ ಹರೇಃ ।
ದೈವೇನರ್ದ್ಧೈಸ್ತ ಏವಾದ್ಯ ಯುಧಿ ಜಿತ್ವಾ ನದಂತಿ ನಃ ॥

ಅನುವಾದ

ದೈವವು ನಿಮಗೆ ಅನುಕೂಲವಾಗಿದ್ದಾಗ ನೀವು ದೇವತೆಗಳನ್ನು ಅನೇಕಬಾರಿ ಗೆದ್ದಿರುವಿರಿ. ಆದರೆ ಇಂದು ಅವರೇ ಯುದ್ಧದಲ್ಲಿ ನಮ್ಮನ್ನು ಗೆದ್ದು ಸಿಂಹನಾದ ಮಾಡುತ್ತಿದ್ದಾರೆ. ॥23॥

(ಶ್ಲೋಕ-24)

ಮೂಲಮ್

ಏತಾನ್ವಯಂ ವಿಜೇಷ್ಯಾಮೋ ಯದಿ ದೈವಂ ಪ್ರಸೀದತಿ ।
ತಸ್ಮಾತ್ಕಾಲಂ ಪ್ರತೀಕ್ಷಧ್ವಂ ಯೋ ನೋರ್ಥತ್ವಾಯ ಕಲ್ಪತೇ ॥

ಅನುವಾದ

ಮುಂದೆ ದೈವಾನುಕೂಲವು ನಮಗೆ ಒದಗಿ ಬಂದಾಗ ನಾವೂ ಅವರನ್ನು ಗೆದ್ದೇ ಗೆಲ್ಲುತ್ತೇವೆ. ಆದುದ ರಿಂದ ನೀವೆಲ್ಲ ಈಗ ಯುದ್ಧವನ್ನು ನಿಲ್ಲಿಸಿ, ಕಾರ್ಯ ಸಿದ್ಧಿ ಯಾಗುವಂತಹ ಕಾಲವನ್ನು ಪ್ರತೀಕ್ಷೆ ಮಾಡುತ್ತಿರಿ. ॥24॥

(ಶ್ಲೋಕ-25)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಪತ್ಯುರ್ನಿಗದಿತಂ ಶ್ರುತ್ವಾ ದೈತ್ಯದಾನವಯೂಥಪಾಃ ।
ರಸಾಂ ನಿವಿವಿಶೂ ರಾಜನ್ವಿಷ್ಣುಪಾರ್ಷದತಾಡಿತಾಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಹೀಗೆ ದೈತ್ಯಸೇನಾನಾಯಕರು ತಮ್ಮ ಒಡೆಯನಾದ ಬಲಿಯ ಮಾತನ್ನು ಕೇಳಿ ಭಗವಂತನ ಪಾರ್ಷದರಿಂದ ಪರಾಜಿತ ರಾದ ದಾನವರೂ, ದೈತ್ಯಸೇನಾಪತಿಗಳೂ ರಸಾತಳಕ್ಕೆ ಹೊರಟು ಹೋದರು. ॥25॥

(ಶ್ಲೋಕ-26)

ಮೂಲಮ್

ಅಥ ತಾರ್ಕ್ಷ್ಯಸುತೋ ಜ್ಞಾತ್ವಾ ವಿರಾಟ್ಪ್ರಭುಚಿಕೀರ್ಷಿತಮ್ ।
ಬಬಂಧ ವಾರುಣೈಃ ಪಾಶೈರ್ಬಲಿಂ ಸೌತ್ಯೇಹನಿ ಕ್ರತೌ ॥

ಅನುವಾದ

ಅವರು ಹೊರಟು ಹೋದ ಬಳಿಕ ಪಕ್ಷಿಶ್ರೇಷ್ಠನಾದ ಗರುಡನು ಭಗವಾನ್ ಶ್ರೀವಾಮನನ ಮನಸ್ಸಿನ ಇಂಗಿತವನ್ನು ಅರಿತು, ಬಲಿಯ ಆ ಅಶ್ವಮೇಧ ಯಜ್ಞದಲ್ಲಿ ಸೋಮಪಾನವಾಗ ಬೇಕಿದ್ದ ಆ ದಿನದಲ್ಲಿ ವರುಣನ ಪಾಶಗಳಿಂದ ಬಲಿಯನ್ನು ಬಂಧಿಸಿದನು. ॥26॥

(ಶ್ಲೋಕ-27)

ಮೂಲಮ್

ಹಾಹಾಕಾರೋ ಮಹಾನಾಸೀ-ದ್ರೋದಸ್ಯೋಃ ಸರ್ವತೋದಿಶಮ್ ।
ಗೃಹ್ಯಮಾಣೇಸುರಪತೌ ವಿಷ್ಣುನಾ ಪ್ರಭವಿಷ್ಣುನಾ ॥

ಅನುವಾದ

ಸರ್ವಶಕ್ತನಾದ ಭಗವಾನ್ ಮಹಾ ವಿಷ್ಣುವು ಬಲಿಯನ್ನು ಹೀಗೆ ಬಂಧಿಸಿದಾಗ ಭೂಮ್ಯಂತರಿಕ್ಷ ಗಳಲ್ಲಿಯೂ, ಸಮಸ್ತ ದಿಕ್ಕುಗಳಲ್ಲಿ ಭಾರೀ ಹಾಹಾಕಾರವೇ ಉಂಟಾಯಿತು. ॥27॥

(ಶ್ಲೋಕ-28)

ಮೂಲಮ್

ತಂ ಬದ್ಧಂ ವಾರುಣೈಃ ಪಾಶೈರ್ಭಗವಾನಾಹ ವಾಮನಃ ।
ನಷ್ಟಶ್ರಿಯಂ ಸ್ಥಿರಪ್ರಜ್ಞಮುದಾರಯಶಸಂ ನೃಪ ॥

ಅನುವಾದ

ಬಲಿಚಕ್ರವರ್ತಿಯು ವರುಣ ಪಾಶಗಳಿಂದ ಬಂಧಿಸಲ್ಪಟ್ಟಿದ್ದರೂ, ಅವನ ಸಮಸ್ತ ಸಂಪತ್ತು ನಷ್ಟವಾಗಿ ಹೋಗಿದ್ದರೂ ಅವನು ಮಾತ್ರ ಸ್ಥಿತಪ್ರಜ್ಞ ನಾಗಿದ್ದನು. ಎಲ್ಲರೂ ಅವನ ಶ್ರೇಷ್ಠವಾದ ಯಶಸ್ಸನ್ನು ಕೊಂಡಾಡುತ್ತಿದ್ದರು. ಪರೀಕ್ಷಿತನೇ! ಆಗ ಭಗವಂತನು ಬಲಿಯ ಬಳಿ ಇಂತೆಂದನು ॥28॥

(ಶ್ಲೋಕ-29)

ಮೂಲಮ್

ಪದಾನಿ ತ್ರೀಣಿ ದತ್ತಾನಿ ಭೂಮೇರ್ಮಹ್ಯಂ ತ್ವಯಾಸುರ ।
ದ್ವಾಭ್ಯಾಂ ಕ್ರಾಂತಾ ಮಹೀ ಸರ್ವಾ ತೃತೀಯಮುಪಕಲ್ಪಯ ॥

ಅನುವಾದ

ಅಸುರಶ್ರೇಷ್ಠನೇ! ನೀನು ನನಗೆ ಮೂರುಹೆಜ್ಜೆ ಭೂಮಿಯನ್ನು ದಾನವಾಗಿ ಕೊಟ್ಟಿದ್ದೆ. ಎರಡು ಹೆಜ್ಜೆಗಳಿಂದ ನಾನು ಸಮಸ್ತ ಭೂಮಂಡಲ ವನ್ನೂ, ಸ್ವರ್ಗಪಾತಾಳ ಹೀಗೆ ಎಲ್ಲವನ್ನೂ ಅಳೆದುಕೊಂಡು ಬಿಟ್ಟೆ. ಈಗ ನನಗೆ ಕೊಡಬೇಕಾದ ಮೂರನೆಯ ಹೆಜ್ಜೆಗೆ ಸ್ಥಳಾವಕಾಶವನ್ನು ಮಾಡಿಕೊಡು. ॥29॥

(ಶ್ಲೋಕ-30)

ಮೂಲಮ್

ಯಾವತ್ತಪತ್ಯಸೌ ಗೋಭಿರ್ಯಾವದಿಂದುಃ ಸಹೋದುಭಿಃ ।
ಯಾವದ್ವರ್ಷತಿ ಪರ್ಜನ್ಯಸ್ತಾವತೀ ಭೂರಿಯಂ ತವ ॥

ಅನುವಾದ

ಸೂರ್ಯನ ಕಿರಣಗಳು ಎಲ್ಲಿಯವರೆಗೆ ಪಸರಿಸಿವೆಯೋ, ಚಂದ್ರ ಮತ್ತು ನಕ್ಷತ್ರಗಳ ಕಿರಣಗಳು ಎಲ್ಲಿಯವರೆಗೆ ಪಸರಿಸಿವೆಯೋ, ಮೋಡಗಳು ಎಲ್ಲಿಯವರೆಗೆ ಮಳೆಗರೆಯುತ್ತವೆಯೋ ಅಲ್ಲಿಯವರೆಗಿನ ಇಡೀ ಪೃಥಿವಿಯು ನಿನ್ನ ಅಧಿಕಾರದಲ್ಲಿತ್ತು. ॥30॥

(ಶ್ಲೋಕ-31)

ಮೂಲಮ್

ಪದೈಕೇನ ಮಯಾ ಕ್ರಾಂತೋ ಭೂರ್ಲೋಕಃ ಖಂ ದಿಶಸ್ತನೋಃ ।
ಸ್ವರ್ಲೋಕಸ್ತು ದ್ವಿತೀಯೇನ ಪಶ್ಯತಸ್ತೇ ಸ್ವಮಾತ್ಮನಾ ॥

ಅನುವಾದ

ನೀನು ನೋಡು-ನೋಡುತ್ತಿರುವಂತೆ ನಾನು ಒಂದೇ ಹೆಜ್ಜೆಯಿಂದ ಭೂರ್ಲೋಕವನ್ನೂ, ಶರೀರದಿಂದ ಆಕಾಶ ಮತ್ತು ದಿಕ್ಕುಗಳನ್ನು ಅಳೆದುಬಿಟ್ಟೆ. ಎರಡನೆಯ ಹೆಜ್ಜೆಯಿಂದ ಸ್ವರ್ಗವನ್ನು ಅಳೆದು ಬಿಟ್ಟೆ. ಹೀಗೆ ನಿನ್ನದೆಲ್ಲವೂ ಈಗ ನನ್ನದಾಗಿದೆ. ॥31॥

(ಶ್ಲೋಕ-32)

ಮೂಲಮ್

ಪ್ರತಿಶ್ರುತಮದಾತುಸ್ತೇ ನಿರಯೇ ವಾಸ ಇಷ್ಯತೇ ।
ವಿಶ ತ್ವಂ ನಿರಯಂ ತಸ್ಮಾದ್ಗುರುಣಾ ಚಾನುಮೋದಿತಃ ॥

ಅನುವಾದ

ನೀನು ಮಾಡಿದ ಪ್ರತಿಜ್ಞೆಗನು ಸಾರವಾಗಿ ನಿನ್ನಿಂದ ನಡೆಯಲು ಸಾಧ್ಯವಾಗದೆ ಇರುವುದ ರಿಂದ ನೀನೀಗ ನರಕಕ್ಕೆ ಹೋಗ ಬೇಕಾಗಿದೆ. ನಿನ್ನ ಗುರುವಿನ ಅನುಮತಿಯು ಇದಕ್ಕೆ ಇದ್ದೇ ಇದೆ. ಈಗ ನೀನು ನರಕವನ್ನು ಪ್ರವೇಶಿಸು. ॥32॥

(ಶ್ಲೋಕ-33)

ಮೂಲಮ್

ವೃಥಾ ಮನೋರಥಸ್ತಸ್ಯ ದೂರೇ ಸ್ವರ್ಗಃ ಪತತ್ಯಧಃ ।
ಪ್ರತಿಶ್ರುತಸ್ಯಾದಾನೇನ ಯೋರ್ಥಿನಂ ವಿಪ್ರಲಂಭತೇ ॥

ಅನುವಾದ

ಯಾಚಕನಿಗೆ ದಾನಕೊಡುವ ಪ್ರತಿಜ್ಞೆ ಮಾಡಿ ಅದನ್ನು ಈಡೇರಿಸದವನು, ಅವನಿಗೆ ಮೋಸ ಮಾಡುವವನ ಎಲ್ಲ ಮನೋರಥಗಳು ವ್ಯರ್ಥವಾಗಿ ಹೋಗು ತ್ತವೆ. ಸ್ವರ್ಗದ ಮಾತಿರಲಿ ಅವನಿಗೆ ನರಕಕ್ಕೆ ಹೋಗಬೇಕಾಗುತ್ತದೆ. ॥33॥

(ಶ್ಲೋಕ-34)

ಮೂಲಮ್

ವಿಪ್ರಲಬ್ಧೋ ದದಾಮೀತಿ ತ್ವಯಾಹಂ ಚಾಢ್ಯಮಾನಿನಾ ।
ತದ್ವ್ಯಲೀಕಲಂ ಭುಂಕ್ಷ್ವ ನಿರಯಂ ಕತಿಚಿತ್ಸಮಾಃ ॥

ಅನುವಾದ

ನಾನು ಆಢ್ಯನೆಂಬ ಅಭಿಮಾನ ನಿನ್ನಲ್ಲಿತ್ತು. ನಿನಗೆ ಕೊಡುತ್ತೇನೆ ಎಂದು ನೀನು ನನ್ನಲ್ಲಿ ಪ್ರತಿಜ್ಞೆಮಾಡಿ ತಪ್ಪಿರುವೆ. ಈಗ ನೀನು ಕೆಲವು ವರ್ಷಗಳವರೆಗೆ ಈ ಪಾಪದ ಫಲವನ್ನು ಅನುಭವಿಸ ಬೇಕಾಗುವುದು. ॥34॥

ಅನುವಾದ (ಸಮಾಪ್ತಿಃ)

ಇಪ್ಪತ್ತೊಂದನೆಯ ಅಧ್ಯಾಯವು ಮುಗಿಯಿತು. ॥21॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ವಾಮನಪ್ರಾದುರ್ಭಾವೇ ಬಲಿನಿಗ್ರಹೋ ನಾಮೈಕವಿಂಶೋಧ್ಯಾಯಃ ॥21॥