೧೯

[ಹತ್ತೊಂಭತ್ತನೆಯ ಅಧ್ಯಾಯ]

ಭಾಗಸೂಚನಾ

ಭಗವಾನ್ ವಾಮನನು ಬಲಿಯಲ್ಲಿ ಮೂರು ಹೆಜ್ಜೆ ಭೂಮಿಯನ್ನು ಬೇಡಿದುದು, ಬಲಿಯ ಸಮ್ಮತಿ, ಶುಕ್ರಾಚಾರ್ಯರು ತಡೆದುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ವೈರೋಚನೇರ್ವಾಕ್ಯಂ ಧರ್ಮಯುಕ್ತಂ ಸಸೂನೃತಮ್ ।
ನಿಶಮ್ಯ ಭಗವಾನ್ಪ್ರೀತಃ ಪ್ರತಿನಂದ್ಯೇದಮಬ್ರವೀತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಬಲಿಯು ಹೇಳಿದ ಮಾತುಗಳು ಧರ್ಮಯುಕ್ತವಾಗಿಯೂ, ಸತ್ಯವಾಗಿಯೂ, ಪ್ರಿಯವಾಗಿಯೂ ಇದ್ದವು. ಅದನ್ನು ಕೇಳಿದ ಭಗವಾನ್ ವಾಮನನು ಅತ್ಯಂತ ಸಂತೋಷದಿಂದ ಬಲಿಯನ್ನು ಅಭಿನಂದಿಸುತ್ತಾ ಇಂತೆಂದನು ॥1॥

(ಶ್ಲೋಕ-2)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ವಚಸ್ತವೈತಜ್ಜನದೇವ ಸೂನೃತಂ
ಕುಲೋಚಿತಂ ಧರ್ಮಯುತಂ ಯಶಸ್ಕರಮ್ ।
ಯಸ್ಯ ಪ್ರಮಾಣಂ ಭೃಗವಃ ಸಾಂಪರಾಯೇ
ಪಿತಾಮಹಃ ಕುಲವೃದ್ಧಃ ಪ್ರಶಾಂತಃ ॥

ಅನುವಾದ

ಶ್ರೀಭಗವಂತನು ಹೇಳಿದನು — ಮಹಾರಾಜಾ! ನೀನು ಆಡಿದ ಮಾತುಗಳು ನಿನ್ನ ಕುಲಪರಂಪರೆಗೆ ಅನುರೂಪ ವಾಗಿವೆ. ಧರ್ಮಭಾವದಿಂದ ಪರಿಪೂರ್ಣವಾಗಿವೆ. ಯಶ ಸ್ಕರವೂ, ಸತ್ಯವೂ, ಪ್ರಿಯವೂ ಆಗಿವೆ. ಇದಕ್ಕೆ ಕಾರಣ ಪರಲೋಕಹಿತಕಾರಿಯಾದ ಧರ್ಮದ ಸಂಬಂಧದಲ್ಲಿ ನೀನು ಭೃಗುವಂಶೀಯರಾದ ಶುಕ್ರಾಚಾರ್ಯರನ್ನೇ ಪರಮ ಪ್ರಮಾಣವೆಂದು ತಿಳಿದಿರುವೆ. ಜೊತೆಗೆ ಕುಲವೃದ್ಧನಾದ ಪಿತಾಮಹ ಪರಮ ಶಾಂತಸ್ವಭಾವದ ಪ್ರಹ್ಲಾದನ ಆಜ್ಞೆ ಯನ್ನೂ ಪರಮಪ್ರಮಾಣವೆಂದೂ ಪಾಲಿಸುತ್ತಿರುವೆ.॥2॥

(ಶ್ಲೋಕ-3)

ಮೂಲಮ್

ನ ಹ್ಯೇತಸ್ಮಿನ್ಕುಲೇ ಕಶ್ಚಿನ್ನಿಃಸತ್ತ್ವಃ ಕೃಪಣಃ ಪುಮಾನ್ ।
ಪ್ರತ್ಯಾಖ್ಯಾತಾ ಪ್ರತಿಶ್ರುತ್ಯ ಯೋ ವಾದಾತಾ ದ್ವಿಜಾತಯೇ ॥

ಅನುವಾದ

ನಿನ್ನ ವಂಶಪರಂಪರೆಯಲ್ಲಿ ಇಂದಿನವರೆಗೆ ಧೈರ್ಯ ಹೀನರೂ, ಕೃಪಣರೂ ಯಾರೂ ಹುಟ್ಟಲಿಲ್ಲ. ಬ್ರಾಹ್ಮಣನಿಗೆ ದಾನವನ್ನು ಕೊಡದವನಾಗಲೀ, ಇಂತಹ ವಸ್ತುವನ್ನು ಕೊಡು ವೆನೆಂದು ಪ್ರತಿಜ್ಞೆಮಾಡಿ ಅದನ್ನು ಭಂಗಪಡಿಸಿದವನಾಗಲೀ ನಿನ್ನ ವಂಶದಲ್ಲಿ ಹುಟ್ಟಲಿಲ್ಲ.॥3॥

(ಶ್ಲೋಕ-4)

ಮೂಲಮ್

ನ ಸಂತಿ ತೀರ್ಥೇ ಯುಧಿ ಚಾರ್ಥಿನಾರ್ಥಿತಾಃ
ಪರಾಙ್ಮುಖಾ ಯೇ ತ್ವಮನಸ್ವಿನೋ ನೃಪಾಃ ।
ಯುಷ್ಮತ್ಕುಲೇ ಯದ್ಯಶಸಾಮಲೇನ
ಪ್ರಹ್ಲಾದ ಉದ್ಭಾತಿ ಯಥೋಡುಪಃ ಖೇ ॥

ಅನುವಾದ

ದಾನಕೊಡಬೇಕಾದ ಸಮಯದಲ್ಲಿ ಯಾಚಕರ ಯಾಚನೆಯನ್ನು ಕೇಳಿ ಮುಖ ತಿರುಗಿಸಿದವನಾಗಲೀ, ಯುದ್ಧದ ಸಂದರ್ಭದಲ್ಲಿ ಶತ್ರುವು ಯುದ್ಧಕ್ಕಾಗಿ ಆಹ್ವಾನಿಸಿದಾಗ ಬೆನ್ನುತೋರುವ ಹೇಡಿಯಾಗಲೀ ನಿನ್ನ ವಂಶದಲ್ಲಿ ಯಾರೂ ಹುಟ್ಟಲಿಲ್ಲ. ನಿಮ್ಮ ಕುಲಪರಂಪರೆಯಲ್ಲಿ ಪ್ರಹ್ಲಾದನು ಈಗಲೂ ಆಕಾಶದಲ್ಲಿರುವ ಚಂದ್ರನಂತೆ ನಿರ್ಮಲವಾದ ಯಶಸ್ಸಿನಿಂದ ಬೆಳಗುತ್ತಿರುವನು.॥4॥

(ಶ್ಲೋಕ-5)

ಮೂಲಮ್

ಯತೋ ಜಾತೋ ಹಿರಣ್ಯಾಕ್ಷಶ್ಚರನ್ನೇಕ ಇಮಾಂ ಮಹೀಮ್ ।
ಪ್ರತಿವೀರಂ ದಿಗ್ವಿಜಯೇ ನಾವಿಂದತ ಗದಾಯುಧಃ ॥

ಅನುವಾದ

ನಿನ್ನ ಕುಲದಲ್ಲೇ ಹಿರಣ್ಯಾಕ್ಷ ನಂತಹ ವೀರರ ಜನ್ಮವಾಗಿತ್ತು. ಆ ವೀರನು ಕೈಯಲ್ಲಿ ಗದೆಯನ್ನು ಹಿಡಿದುಕೊಂಡು ಒಬ್ಬಂಟಿಗನಾಗಿ ದಿಗ್ವಿಜಯಕ್ಕಾಗಿ ಹೋದಾಗ ಇಡೀ ಪೃಥಿವಿಯಲ್ಲಿ ತಿರುಗಿದರೂ ಅವನಿಗೆ ತನಗೆ ಸಮಾನನಾದ ವೀರನು ದೊರೆಯಲೇ ಇಲ್ಲ. ॥5॥

(ಶ್ಲೋಕ-6)

ಮೂಲಮ್

ಯಂ ವಿನಿರ್ಜಿತ್ಯ ಕೃಚ್ಛ್ರೇಣ ವಿಷ್ಣುಃ ಕ್ಷ್ಮೋದ್ಧಾರ ಆಗತಮ್ ।
ನಾತ್ಮಾನಂ ಜಯಿನಂ ಮೇನೇ ತದ್ವೀರ್ಯಂ ಭೂರ್ಯನುಸ್ಮರನ್ ॥

ಅನುವಾದ

ಭಗವಾನ್ ವಿಷ್ಣುವು ನೀರಿನಿಂದ ಪೃಥಿವಿಯನ್ನು ಉದ್ಧರಿಸುತ್ತಿದ್ದಾಗ ಅವನು ಅವನ ಮುಂದೆ ಬಂದನು ಮತ್ತು ಭಾರೀ ಕಷ್ಟದಿಂದ ಅವನನ್ನು ಗೆದ್ದುಕೊಂಡನು. ಆದರೂ ಇದಾದ ಬಹಳ ದಿನಗಳವರೆಗೂ ವಿಷ್ಣುವಿಗೆ ಪದೇ-ಪದೇ ಹಿರಣ್ಯಾಕ್ಷನ ಶಕ್ತಿ ಮತ್ತು ಬಲದ ಸ್ಮರಣೆಯಾಗುತ್ತಿತ್ತು. ಅವನನ್ನು ಗೆದ್ದುಕೊಂಡಿದ್ದರೂ ಅವನು ತನ್ನನ್ನು ವಿಜಯಿ ಎಂದು ತಿಳಿಯುತ್ತಿರಲಿಲ್ಲ. ॥6॥

(ಶ್ಲೋಕ-7)

ಮೂಲಮ್

ನಿಶಮ್ಯ ತದ್ವಧಂ ಭ್ರಾತಾ ಹಿರಣ್ಯಕಶಿಪುಃ ಪುರಾ ।
ಹಂತುಂ ಭ್ರಾತೃಹಣಂ ಕ್ರುದ್ಧೋ ಜಗಾಮ ನಿಲಯಂ ಹರೇಃ ॥

ಅನುವಾದ

ಹಿರಣ್ಯಾಕ್ಷನ ಸಹೋದರ ಹಿರಣ್ಯಕಶಿಪುವಿಗೆ ತನ್ನ ತಮ್ಮನ ವಧೆಯ ವೃತ್ತಾಂತ ತಿಳಿದಾಗ ಅವನು ತನ್ನ ತಮ್ಮನನ್ನು ವಧಿಸಿದವನನ್ನು ಕೊಂದು ಹಾಕಲಿಕ್ಕಾಗಿ ಕ್ರೋಧಗೊಂಡು ಭಗವಂತನ ನಿವಾಸಸ್ಥಾನವಾದ ವೈಕುಂಠಕ್ಕೆ ಹೋದನು. ॥7॥

(ಶ್ಲೋಕ-8)

ಮೂಲಮ್

ತಮಾಯಾಂತಂ ಸಮಾಲೋಕ್ಯ
ಶೂಲಪಾಣಿಂ ಕೃತಾಂತವತ್ ।
ಚಿಂತಯಾಮಾಸ ಕಾಲಜ್ಞೋ
ವಿಷ್ಣುರ್ಮಾಯಾವಿನಾಂ ವರಃ ॥

ಅನುವಾದ

ಮಾಯಾವಿಗಳಲ್ಲಿ ಶ್ರೇಷ್ಠನಾದ, ಕಾಲಜ್ಞನಾದ, ಯಾವ ಕಾಲದಲ್ಲಿ ಹೇಗೆ ವರ್ತಿಸಬೇಕೆಂದು ತಿಳಿದಿದ್ದ ವಿಷ್ಣುವು ಯಮನಂತೆ ಶೂಲವನ್ನು ಕೈಯಲ್ಲಿ ಹಿಡಿದುಕೊಂಡು ಹಿರಣ್ಯ ಕಶಿಪು ತನ್ನನ್ನು ಆಕ್ರಮಿಸುತ್ತಿರುವನೆಂದು ತಿಳಿದು ಹೀಗೆ ಯೋಚಿಸಿದನು.॥8॥

(ಶ್ಲೋಕ-9)

ಮೂಲಮ್

ಯತೋ ಯತೋಹಂ ತತ್ರಾಸೌ ಮೃತ್ಯುಃ ಪ್ರಾಣಭೃತಾಮಿವ ।
ಅತೋಹಮಸ್ಯ ಹೃದಯಂ ಪ್ರವೇಕ್ಷ್ಯಾಮಿ ಪರಾಗ್ದೃಶಃ ॥

ಅನುವಾದ

ಯಾವಾಗಲೂ ಮೃತ್ಯುವು ಪ್ರಾಣಿಗಳ ಬೆನ್ನುಬಿಡದೆ ಇರುವಂತೆ ಈ ರಾಕ್ಷಸನು ನಾನು ಹೋದಲ್ಲೆಲ್ಲ ಹಿಂಬಾಲಿಸುವನು. ಅದಕ್ಕಾಗಿ ನಾನು ಇವನ ಹೃದಯದಲ್ಲಿ ಪ್ರವೇಶಿಸುವೆನು. ಅದರಿಂದ ಇವನು ನನ್ನನ್ನು ನೋಡಲಾರನು. ಏಕೆಂದರೆ, ಇವನಾದರೋ ಬಹಿರ್ಮುಖನಾಗಿದ್ದಾನೆ. ಹೊರಗಿನ ವಸ್ತುಗಳನ್ನು ಮಾತ್ರ ನೋಡಬಲ್ಲನು. ॥9॥

(ಶ್ಲೋಕ-10)

ಮೂಲಮ್

ಏವಂ ಸ ನಿಶ್ಚಿತ್ಯ ರಿಪೋಃ ಶರೀರ-
ಮಾಧಾವತೋ ನಿರ್ವಿವಿಶೇಸುರೇಂದ್ರ ।
ಶ್ವಾಸಾನಿಲಾಂತರ್ಹಿತಸೂಕ್ಷ್ಮದೇಹ-
ಸ್ತತ್ಪ್ರಾಣರಂಧ್ರೇಣ ವಿವಿಗ್ನಚೇತಾಃ ॥

ಅನುವಾದ

ಅಸುರಶಿರೋಮಣಿಯೇ! ಹಿರಣ್ಯಕಶಿಪು ಅವನ ಮೇಲೆ ಆಕ್ರಮಿಸಿದಾಗ ಹೀಗೆ ಯೋಚಿಸಿ ಭಯದಿಂದ ನಡುಗುತ್ತಾ ಭಗವಾನ್ ವಿಷ್ಣುವು ತನ್ನ ಶರೀರವನ್ನು ಸೂಕ್ಷ್ಮವಾಗಿಸಿಕೊಂಡು ಅವನ ಪ್ರಾಣಗಳೊಂದಿಗೆ ಮೂಗಿನ ಮೂಲಕ ಹೃದಯದಲ್ಲಿ ಹೋಗಿ ಕುಳಿತನು.॥10॥

(ಶ್ಲೋಕ-11)

ಮೂಲಮ್

ಸ ತನ್ನಿಕೇತಂ ಪರಿಮೃಶ್ಯ ಶೂನ್ಯ-
ಮಪಶ್ಯಮಾನಃ ಕುಪಿತೋ ನನಾದ ।
ಕ್ಷ್ಮಾಂ ದ್ಯಾಂ ದಿಶಃ ಖಂ ವಿವರಾನ್ಸಮುದ್ರಾನ್
ವಿಷ್ಣುಂ ವಿಚಿನ್ವನ್ನ ದದರ್ಶ ವೀರಃ ॥

ಅನುವಾದ

ಹಿರಣ್ಯಕಶಿಪು ಅವನ ಲೋಕವನ್ನು ಚೆನ್ನಾಗಿ ಜಾಲಾಡಿದನು. ಆದರೆ ಅವನು ಎಲ್ಲಿಯೂ ಕಾಣಲಿಲ್ಲ. ಇದರಿಂದ ಕ್ರೋಧಿತನಾಗಿ ಸಿಂಹನಾದವನ್ನು ಮಾಡತೊಡಗಿದನು. ಆ ವೀರನು ಪೃಥಿವಿ, ಸ್ವರ್ಗ, ದಿಕ್ಕುಗಳು, ಆಕಾಶ, ಪಾತಾಳ, ಸಮುದ್ರ ಹೀಗೆ ಎಲ್ಲೆಡೆ ಮಹಾವಿಷ್ಣುವನ್ನು ಹುಡುಕಿದನು. ಆದರೆ ಅವನು ಎಲ್ಲಿಯೂ ಅವನಿಗೆ ಕಂಡುಬರಲಿಲ್ಲ.॥11॥

(ಶ್ಲೋಕ-12)

ಮೂಲಮ್

ಅಪಶ್ಯನ್ನಿತಿ ಹೋವಾಚ ಮಯಾನ್ವಿಷ್ಟಮಿದಂ ಜಗತ್ ।
ಭ್ರಾತೃಹಾ ಮೇ ಗತೋ ನೂನಂ ಯತೋ ನಾವರ್ತತೇ ಪುಮಾನ್ ॥

ಅನುವಾದ

ಅವನನ್ನು ಎಲ್ಲಿಯೂ ಕಾಣದೆ ‘ನಾನು ಇಡೀ ಜಗತ್ತನ್ನು ಹುಡುಕಿಬಿಟ್ಟೆ. ಆದರೆ ಅವನು ಸಿಗಲೇ ಇಲ್ಲ. ಆ ಭ್ರಾತೃ ಘಾತಿಯು ಜೀವಿಗಳು ಹೋದಬಳಿಕ ಮರಳಿ ಬರದಿರುವ ಲೋಕಕ್ಕೆ (ಯಮಲೋಕಕ್ಕೆ) ಹೋಗಿರಬೇಕು’ ಎಂದು ಯೋಚಿಸಿದನು. ॥12॥

(ಶ್ಲೋಕ-13)

ಮೂಲಮ್

ವೈರಾನುಬಂಧ ಏತಾವಾನಾಮೃತ್ಯೋರಿಹ ದೇಹಿನಾಮ್ ।
ಅಜ್ಞಾನಪ್ರಭವೋ ಮನ್ಯುರಹಂಮಾನೋಪಬೃಂಹಿತಃ ॥

ಅನುವಾದ

ಮೃತ್ಯುವಶನಾದವನಲ್ಲಿ ವೈರ ಭಾವವನ್ನು ಇರಿಸಿಕೊಳ್ಳುವ ಆವಶ್ಯಕತೆ ಇಲ್ಲ. ಏಕೆಂದರೆ, ವೈರವಾದರೋ ದೇಹದೊಂದಿಗೆ ಮುಗಿದುಹೋಗುತ್ತದೆ. ಕ್ರೋಧದ ಕಾರಣ ಅಜ್ಞಾನ ಮತ್ತು ಅಹಂಕಾರದಿಂದ ಅದು ಬೆಳೆಯುತ್ತದೆ. ॥13॥

(ಶ್ಲೋಕ-14)

ಮೂಲಮ್

ಪಿತಾ ಪ್ರಹ್ಲಾದಪುತ್ರಸ್ತೇ ತದ್ವಿದ್ವಾನ್ದ್ವಿಜವತ್ಸಲಃ ।
ಸ್ವಮಾಯುರ್ದ್ವಿಜಲಿಂಗೇಭ್ಯೋ ದೇವೇಭ್ಯೋದಾತ್ಸ ಯಾಚಿತಃ ॥

ಅನುವಾದ

ರಾಜನೇ! ನಿನ್ನ ತಂದೆಯಾದ ಪ್ರಹ್ಲಾದನಂದನ ವಿರೋಚನನೂ ಬ್ರಾಹ್ಮಣಭಕ್ತನಾಗಿದ್ದನು. ಅವನ ಶತ್ರುಗಳಾದ ದೇವತೆಗಳು ಬ್ರಾಹ್ಮಣರ ವೇಷವನ್ನು ತಳೆದು ಅವನಲ್ಲಿ ಅವನ ಆಯುಸ್ಸನ್ನು ದಾನವಾಗಿ ಬೇಡಿದರು. ಅವನು ಬ್ರಾಹ್ಮಣರ ಕಪಟವನ್ನು ಅರಿತಿದ್ದರೂ ತನ್ನ ಆಯುಸ್ಸನ್ನು ದಾನ ಮಾಡಿಬಿಟ್ಟನು. ॥14॥

(ಶ್ಲೋಕ-15)

ಮೂಲಮ್

ಭವಾನಾಚರಿತಾನ್ಧರ್ಮಾನಾಸ್ಥಿತೋ ಗೃಹಮೇಧಿಭಿಃ ।
ಬ್ರಾಹ್ಮಣೈಃ ಪೂರ್ವಜೈಃ ಶೂರೈರನ್ಯೈಶ್ಚೋದ್ದಾಮಕೀರ್ತಿಭಿಃ ॥

ಅನುವಾದ

ನಿನ್ನ ಪೂರ್ವಜರಂತೆ ನೀನೂ ಕೂಡ ಶುಕ್ರಾಚಾರ್ಯರೇ ಮೊದಲಾದ ಗೃಹಸ್ಥ ಬ್ರಾಹ್ಮಣರು ಆಚರಿಸುವ ಧರ್ಮಗಳನ್ನೂ, ನಿನ್ನ ಪೂರ್ವಜರಾದ ಪ್ರಹ್ಲಾದನೇ ಮೊದಲಾದ ಇತರ ಯಶಸ್ವೀ ವೀರರು ಆಚರಿಸಿದ ಧರ್ಮವನ್ನೇ ಆಚರಿಸುತ್ತಿರುವೆ.॥15॥

(ಶ್ಲೋಕ-16)

ಮೂಲಮ್

ತಸ್ಮಾತ್ತ್ವತ್ತೋ ಮಹೀಮೀಷದ್ವ ಣೇಹಂ ವರದರ್ಷಭಾತ್ ।
ಪದಾನಿ ತ್ರೀಣಿ ದೈತ್ಯೇಂದ್ರ ಸಂಮಿತಾನಿ ಪದಾ ಮಮ ॥

ಅನುವಾದ

ದೈತ್ಯೇಂದ್ರನೇ! ನೀನು ಕೇಳಿದ ವಸ್ತುವನ್ನು ಕೊಡುವವರಲ್ಲಿ ಶ್ರೇಷ್ಠನಾಗಿರುವೆ. ಇದರಿಂದಲೇ ನಾನು ನಿನ್ನಲ್ಲಿ ಕೇವಲ ನನ್ನ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಬೇಡುತ್ತೇನೆ. ॥16॥

(ಶ್ಲೋಕ-17)

ಮೂಲಮ್

ನಾನ್ಯತ್ತೇ ಕಾಮಯೇ ರಾಜನ್ವದಾನ್ಯಾಜ್ಜಗದೀಶ್ವರಾತ್ ।
ನೈನಃ ಪ್ರಾಪ್ನೋತಿ ವೈ ವಿದ್ವಾನ್ಯಾವದರ್ಥಪ್ರತಿಗ್ರಹಃ ॥

ಅನುವಾದ

ಮಹಾರಾಜಾ! ನೀನು ಇಡೀ ಜಗತ್ತಿನ ಒಡೆಯನಾಗಿರುವೆ. ಉದಾರನಾಗಿರುವೆ. ಹೀಗಿ ದ್ದರೂ ನಾನು ನಿನ್ನಲ್ಲಿ ಇದಕ್ಕಿಂತ ಹೆಚ್ಚಿನದನ್ನು ಬಯಸುವುದಿಲ್ಲ. ವಿದ್ವಾಂಸನಾದವನು ಕೇವಲ ತನ್ನ ಆವಶ್ಯಕತೆಗನುಸಾರವಾಗಿಯೇ ದಾನವನ್ನು ಸ್ವೀಕರಿಸಬೇಕು. ಇದರಿಂದ ಅವನು ಪ್ರತಿಗ್ರಹಜನ್ಯ ದೋಷದಿಂದ ಮುಕ್ತನಾಗುತ್ತಾನೆ. ॥17॥

(ಶ್ಲೋಕ-18)

ಮೂಲಮ್ (ವಾಚನಮ್)

ಬಲಿರುವಾಚ

ಮೂಲಮ್

ಅಹೋ ಬ್ರಾಹ್ಮಣದಾಯಾದ ವಾಚಸ್ತೇ ವೃದ್ಧಸಂಮತಾಃ ।
ತ್ವಂ ಬಾಲೋ ಬಾಲಿಶಮತಿಃ ಸ್ವಾರ್ಥಂ ಪ್ರತ್ಯಬುಧೋ ಯಥಾ ॥

ಅನುವಾದ

ಬಲಿರಾಜನು ಹೇಳಿದನು — ಬ್ರಾಹ್ಮಣಕುಮಾರಾ! ನಿನ್ನ ಮಾತುಗಳಾದರೋ ವೃದ್ಧರ ಮಾತುಗಳಂತೆ ಇವೆ. ಆದರೆ ನಿನ್ನ ಬುದ್ಧಿಯು ಇನ್ನೂ ಬಾಲಕರಂತೆಯೇ ಇದೆಯಲ್ಲ! ಈಗ ನೀನು ಎಷ್ಟಾದರೂ ಹುಡುಗನೇ ಅಲ್ಲವೇ! ಇದರಿಂದ ನಿನ್ನ ಲಾಭ-ಹಾನಿ ತಿಳಿಯುತ್ತಿಲ್ಲ. ॥18॥

(ಶ್ಲೋಕ-19)

ಮೂಲಮ್

ಮಾಂ ವಚೋಭಿಃ ಸಮಾರಾಧ್ಯ
ಲೋಕಾನಾಮೇಕಮೀಶ್ವರಮ್ ।
ಪದತ್ರಯಂ ವೃಣೀತೇ ಯೋ-
ಬುದ್ಧಿಮಾನ್ ದ್ವೀಪದಾಶುಷಮ್ ॥

ಅನುವಾದ

ನಾನು ಮೂರು ಲೋಕಗಳಿಗೂ ಏಕಮಾತ್ರ ಅಧಿಪತಿಯಾಗಿರುವೆನು. ಬೇಕಾದರೆ ಒಂದು ದ್ವೀಪವನ್ನೇ ಕೊಡಬಲ್ಲೆನು. ನನ್ನನ್ನು ಸುಮಧುರ ಮಾತುಗಳಿಂದ ಸಂತೋಷಗೊಳಿಸಿ, ಕೇವಲ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಬಯಸಿದರೆ ಅವನನ್ನು ಬುದ್ಧಿವಂತನೆಂದು ಹೇಳ ಬಹುದೇ? ॥19॥

(ಶ್ಲೋಕ-20)

ಮೂಲಮ್

ನ ಪುಮಾನ್ಮಾಮುಪವ್ರಜ್ಯ ಭೂಯೋ ಯಾಚಿತುಮರ್ಹತಿ ।
ತಸ್ಮಾದ್ವತ್ತಿಕರೀಂ ಭೂಮಿಂ ವಟೋ ಕಾಮಂ ಪ್ರತೀಚ್ಛ ಮೇ ॥

ಅನುವಾದ

ಬ್ರಹ್ಮಚಾರಿಯೇ! ಯಾರೇ ಆಗಲೀ, ನನ್ನ ಬಳಿಯಲ್ಲಿ ಯಾಚಿಸಲು ಒಮ್ಮೆ ಬಂದವನು ಮತ್ತೆಂದಿಗೂ ಯಾರಲ್ಲಿಯೂ ಪುನಃ ಬೇಡಲು ಹೋಗಬಾರದು. ಇದು ನನ್ನ ಅಭಿಮತವಾಗಿದೆ. ಆದುದರಿಂದ ನಿನ್ನ ಜೀವನನಿರ್ವಾಹಕ್ಕೆ ಬೇಕಾದಷ್ಟು ಲವತ್ತಾದ ಭೂಮಿಯನ್ನು ಕೇಳಿಕೋ. ॥20॥

(ಶ್ಲೋಕ-21)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಯಾವಂತೋ ವಿಷಯಾಃ ಪ್ರೇಷ್ಠಾ ಸಿಲೋಕ್ಯಾಮಜಿತೇಂದ್ರಿಯಮ್ ।
ನ ಶಕ್ನುವಂತಿ ತೇ ಸರ್ವೇ ಪ್ರತಿಪೂರಯಿತುಂ ನೃಪ ॥

ಅನುವಾದ

ಶ್ರೀಭಗವಂತನು ಹೇಳಿದನು — ರಾಜನೇ! ಪ್ರಪಂಚದ ಎಲ್ಲ ಪ್ರಿಯವಾದ ವಿಷಯಗಳು ದೊರೆತರೂ ಜಿತೇಂದ್ರಿಯ ನಲ್ಲದ, ಸಂತೋಷಿಯಲ್ಲದ ಓರ್ವ ಮನುಷ್ಯನ ಕಾಮನೆ ಗಳನ್ನೂ ಕೂಡ ಪೂರ್ಣಗೊಳಿಸಲು ಸಮರ್ಥವಾಗಿಲ್ಲ. ॥21॥

(ಶ್ಲೋಕ-22)

ಮೂಲಮ್

ತ್ರಿಭಿಃ ಕ್ರಮೈರಸಂತುಷ್ಟೋ ದ್ವೀಪೇನಾಪಿ ನ ಪೂರ್ಯತೇ ।
ನವವರ್ಷಸಮೇತೇನ ಸಪ್ತದ್ವೀಪವರೇಚ್ಛಯಾ ॥

ಅನುವಾದ

ಮೂರು ಹೆಜ್ಜೆ ಭೂಮಿಯಿಂದ ಸಂತೋಷ ಪಡದವನಿಗೆ ಒಂದು ದ್ವೀಪವನ್ನೇ ಕೊಟ್ಟರೂ ಅವನು ಸಂತುಷ್ಟನಾಗಲಾರನು. ಏಕೆಂದರೆ, ಅವನ ಮನಸ್ಸಿನಲ್ಲಿ ಏಳೂ ದ್ವೀಪಗಳನ್ನೂ ಪಡೆಯುವ ಇಚ್ಛೆ ಇದ್ದೇ ಇರುತ್ತದೆ. ॥22॥

(ಶ್ಲೋಕ-23)

ಮೂಲಮ್

ಸಪ್ತದ್ವೀಪಾಧಿಪತಯೋ ನೃಪಾ ವೈನ್ಯಗಯಾದಯಃ ।
ಅರ್ಥೈಃ ಕಾಮೈರ್ಗತಾ ನಾಂತಂ ತೃಷ್ಣಾಯಾ ಇತಿ ನಃ ಶ್ರುತಮ್ ॥

ಅನುವಾದ

ಪೃಥು, ಗಯ, ಮೊದಲಾದ ರಾಜರು ಏಳು ದ್ವೀಪಗಳ ಅಧಿಪತಿಗಳಾಗಿದ್ದರು. ಆದರೂ ಅಷ್ಟು ಧನ, ಭೋಗ ಸಾಮಗ್ರಿಗಳು ದೊರತೆರೂ ಅವರು ತೃಷ್ಣೆಯ ಪಾರವನ್ನು ಕಾಣಲು ಸಾಧ್ಯವಾಗಲಿಲ್ಲವೆಂದು ನಾನು ಕೇಳಿದ್ದೇನೆ. ॥23॥

(ಶ್ಲೋಕ-24)

ಮೂಲಮ್

ಯದೃಚ್ಛಯೋಪಪನ್ನೇನ ಸಂತುಷ್ಟೋ ವರ್ತತೇ ಸುಖಮ್ ।
ನಾಸಂತುಷ್ಟಸಿಭಿರ್ಲೋಕೈರಜಿತಾತ್ಮೋಪಸಾದಿತೈಃ ॥

ಅನುವಾದ

ಪ್ರಾರಬ್ಧದಿಂದ ದೊರೆತುದರಲ್ಲಿ ಸಂತುಷ್ಟನಾಗಿರುವವನು ತನ್ನ ಜೀವನವನ್ನು ಸುಖವಾಗಿ ಕಳೆಯುತ್ತಾನೆ. ಆದರೆ ಜಿತೇಂದ್ರಿಯನಲ್ಲದವನು ಮೂರು ಲೋಕದ ರಾಜ್ಯ ಸಿಕ್ಕಿದರೂ ದುಃಖಿಯಾಗಿಯೇ ಇರು ತ್ತಾನೆ. ಏಕೆಂದರೆ, ಅವನ ಹೃದಯದಲ್ಲಿ ಅಸಂತೋಷದ ಅಗ್ನಿಯು ಧಗ-ಧಗಿಸುತ್ತಿರುತ್ತದೆ. ॥24॥

(ಶ್ಲೋಕ-25)

ಮೂಲಮ್

ಪುಂಸೋಯಂ ಸಂಸೃತೇರ್ಹೇೀತು-
ರಸಂತೋಷೋರ್ಥಕಾಮಯೋಃ ।
ಯದೃಚ್ಛಯೋಪಪನ್ನೇನ
ಸಂತೋಷೋ ಮುಕ್ತಯೇ ಸ್ಮೃತಃ ॥

ಅನುವಾದ

ಧನ ಮತ್ತು ಭೋಗಗಳಿಂದ ಸಂತೋಷಪಡದಿರುವುದೇ ಜೀವಿಯು ಜನ್ಮ-ಮರಣದ ಚಕ್ರದಲ್ಲಿ ಬೀಳುವುದಾಗಿದೆ. ದೈವೇಚ್ಛೆ ಯಿಂದ ದೊರೆತುದರಲ್ಲಿ ಸಂತೋಷ ಪಡುವುದೇ ಮುಕ್ತಿಗೆ ಕಾರಣವಾಗುತ್ತದೆ. ॥25॥

(ಶ್ಲೋಕ-26)

ಮೂಲಮ್

ಯದೃಚ್ಛಾಲಾಭತುಷ್ಟಸ್ಯ ತೇಜೋ ವಿಪ್ರಸ್ಯ ವರ್ಧತೇ ।
ತತ್ಪ್ರಶಾಮ್ಯತ್ಯಸಂತೋಷಾದಂಭಸೇವಾಶುಶುಕ್ಷಣಿಃ ॥

ಅನುವಾದ

ತಾನಾಗಿ ದೊರೆತ ವಸ್ತು ವಿನಿಂದಲೇ ಸಂತುಷ್ಟನಾಗುವ ಬ್ರಾಹ್ಮಣನ ತೇಜವು ವೃದ್ಧಿಯಾಗುತ್ತದೆ. ಅವನು ಅತೃಪ್ತನಾದರೆ ಅವನ ತೇಜವು ನೀರಿನಿಂದ ಅಗ್ನಿಯು ಶಾಂತವಾಗುವಂತೆ ಇಲ್ಲವಾಗುತ್ತದೆ. ॥26॥

ಮೂಲಮ್

(ಶ್ಲೋಕ-27)
ತಸ್ಮಾತೀಣಿ ಪದಾನ್ಯೇವ ವೃಣೇ ತ್ವದ್ವರದರ್ಷಭಾತ್ ।
ಏತಾವತೈವ ಸಿದ್ಧೋಹಂ ವಿತ್ತಂ ಯಾವತ್ಪ್ರಯೋಜನಮ್ ॥

ಅನುವಾದ

ಕೇಳಿದ ವಸ್ತುವನ್ನು ಕೊಡುವುದರಲ್ಲಿ ನೀನು ಶಿರೋಮಣಿಯಾಗಿರುವೆ. ಇದರಲ್ಲಿ ಸಂದೇಹವೇ ಇಲ್ಲ. ಅದಕ್ಕಾಗಿ ನಾನು ನಿನ್ನಲ್ಲಿ ಕೇವಲ ಮೂರು ಹೆಜ್ಜೆ ಭೂಮಿ ಯನ್ನು ಬೇಡುತ್ತಿದ್ದೇನೆ. ಇಷ್ಟರಿಂದಲೇ ನನ್ನ ಕೆಲಸ ಆಗಿ ಹೋದೀತು. ಆವಶ್ಯಕತೆ ಇದ್ದಷ್ಟೇ ಧನವನ್ನು ಸಂಗ್ರಹಿಸ ಬೇಕು. ॥27॥

(ಶ್ಲೋಕ-28)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯುಕ್ತಃ ಸ ಹಸನ್ನಾಹ ವಾಂಛಾತಃ ಪ್ರತಿಗೃಹ್ಯತಾಮ್ ।
ವಾಮನಾಯ ಮಹೀಂ ದಾತುಂ ಜಗ್ರಾಹ ಜಲಭಾಜನಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಭಗವಂತನು ಹೀಗೆ ಹೇಳಿದಾಗ ಬಲಿಯು ನಗುತ್ತಾ ‘ಒಳ್ಳೆಯದು, ನಿನಗೆ ಇಷ್ಟವಿರುವಷ್ಟೇ ಪಡೆದುಕೋ.’ ಹೀಗೆ ಹೇಳಿ ಭಗವಾನ್ ವಾಮನನಿಗೆ ಮೂರು ಹೆಜ್ಜೆ ಭೂಮಿಯನ್ನು ದಾನಮಾಡುವ ಸಂಕಲ್ಪಕ್ಕಾಗಿ ನೀರಿನ ಪಾತ್ರೆಯನ್ನು ಎತ್ತಿ ಕೊಂಡನು. ॥28॥

(ಶ್ಲೋಕ-29)

ಮೂಲಮ್

ವಿಷ್ಣವೇ ಕ್ಷ್ಮಾಂ ಪ್ರದಾಸ್ಯಂತಮುಶನಾ ಅಸುರೇಶ್ವರಮ್ ।
ಜಾನಂಶ್ಚಿಕೀರ್ಷಿತಂ ವಿಷ್ಣೋಃ ಶಿಷ್ಯಂ ಪ್ರಾಹ ವಿದಾಂ ವರಃ ॥

ಅನುವಾದ

ಶುಕ್ರಾಚಾರ್ಯರು ಎಲ್ಲವನ್ನೂ ಬಲ್ಲವರಾಗಿದ್ದರು. ಭಗವಂತನ ಈ ಲೀಲೆಯೂ ಕೂಡ ಅವರಿಗೆ ತಿಳಿದಿತ್ತು. ಅವರು ರಾಜಾಬಲಿಗೆ ಭೂಮಿಯನ್ನು ಕೊಡಲು ಉದ್ಯುಕ್ತನಾದುದನ್ನು ಕಂಡು ಅವನಲ್ಲಿ ಹೇಳಿದರು ॥29॥

(ಶ್ಲೋಕ-30)

ಮೂಲಮ್ (ವಾಚನಮ್)

ಶುಕ್ರ ಉವಾಚ

ಮೂಲಮ್

ಏಷ ವೈರೋಚನೇ ಸಾಕ್ಷಾದ್ಭಗವಾನ್ವಿಷ್ಣುರವ್ಯಯಃ ।
ಕಶ್ಯಪಾದದಿತೇರ್ಜಾತೋ ದೇವಾನಾಂ ಕಾರ್ಯಸಾಧಕಃ ॥

ಅನುವಾದ

ಶುಕ್ರಾಚಾರ್ಯರು ಹೇಳುತ್ತಾರೆ — ವೀರೋಚನ ಪುತ್ರನಾದ ಬಲಿಯೇ! ಇವನು ಸ್ವತಃ ಅವಿನಾಶಿ ಭಗವಂತನಾಗಿದ್ದಾನೆ. ದೇವತೆಗಳ ಕಾರ್ಯವನ್ನು ಸಾಧಿಸಿ ಕೊಡಲಿಕ್ಕಾಗಿ ಕಶ್ಯಪರ ಪತ್ನೀ ಅದಿತಿಯ ಗರ್ಭದಿಂದ ಅವತರಿಸಿರುವನು. ॥30॥

ಮೂಲಮ್

(ಶ್ಲೋಕ-31)

ಮೂಲಮ್

ಪ್ರತಿಶ್ರುತಂ ತ್ವಯೈತಸ್ಮೈ ಯದನರ್ಥಮಜಾನತಾ ।
ನ ಸಾಧು ಮನ್ಯೇ ದೈತ್ಯಾನಾಂ ಮಹಾನುಪಗತೋನಯಃ ॥

ಅನುವಾದ

ಇವನು ತನ್ನೆಲ್ಲವನ್ನು ಕಸಿದುಕೊಳ್ಳುವನು ಎಂಬುದನ್ನು ನೀನು ತಿಳಿಯೆ. ಇವನಿಗೆ ದಾನವನ್ನು ಕೊಡುವ ಪ್ರತಿಜ್ಞೆಯನ್ನು ಮಾಡಿರುವೆಯಲ್ಲ. ಇದರಿಂದ ಭಾರೀ ಅನರ್ಥವಾದೀತು. ಇದರಿಂದ ಸಕಲ ದೈತ್ಯರಿಗೆ ಅಪಾರ ವಿಪತ್ತು ಸಂಭವಿಸುತ್ತದೆ. ಇದು ಸರಿಯೆಂದು ನನಗೆ ಅನಿಸುವುದಿಲ್ಲ. ॥31॥

(ಶ್ಲೋಕ-32)

ಮೂಲಮ್

ಏಷ ತೇ ಸ್ಥಾನಮೈಶ್ವರ್ಯಂ ಶ್ರೀಯಂ ತೇಜೋ ಯಶಃ ಶ್ರುತಮ್ ।
ದಾಸ್ಯತ್ಯಾಚ್ಛಿದ್ಯ ಶಕ್ರಾಯ ಮಾಯಾಮಾಣವಕೋ ಹರಿಃ ॥

ಅನುವಾದ

ಸ್ವಯಂ ಭಗವಂತನೇ ತನ್ನ ಯೋಗ ಮಾಯೆಯಿಂದ ಹೀಗೆ ಬ್ರಹ್ಮಚಾರಿಯಾಗಿ ನಿನ್ನ ಮುಂದೆ ಕುಳಿತಿರುವನು. ಇವನು ನಿನ್ನ ರಾಜ್ಯ, ಐಶ್ವರ್ಯ, ಲಕ್ಷ್ಮೀ, ತೇಜ ಮತ್ತು ವಿಶ್ವವಿಖ್ಯಾತ ಕೀರ್ತಿ ಇವೆಲ್ಲವನ್ನೂ ನಿನ್ನಿಂದ ಕಸಿದು ಕೊಂಡು ಒಪ್ಪಿಸುವನು.॥32॥

(ಶ್ಲೋಕ-33)

ಮೂಲಮ್

ತ್ರಿಭಿಃ ಕ್ರಮೈರಿಮಾಂಲ್ಲೋಕಾನ್ವಿಶ್ವಕಾಯಃ ಕ್ರಮಿಷ್ಯತಿ ।
ಸರ್ವಸ್ವಂ ವಿಷ್ಣವೇ ದತ್ತ್ವಾ ಮೂಢ ವರ್ತಿಷ್ಯಸೇ ಕಥಮ್ ॥

ಅನುವಾದ

ಇವನು ವಿಶ್ವ ರೂಪನಾಗಿದ್ದಾನೆ. ಮೂರು ಹೆಜ್ಜೆಗಳಿಂದ ಇವನು ಎಲ್ಲ ಲೋಕಗಳನ್ನು ಅಳೆದು ಕೊಂಡಾನು. ಮೂರ್ಖ! ತನ್ನೆಲ್ಲ ವನ್ನೂ ನೀನು ವಿಷ್ಣುವಿಗೆ ಕೊಟ್ಟು ಬಿಟ್ಟರೆ ನಿನ್ನ ಜೀವನ ನಿರ್ವಾಹ ಹೇಗೆ ತಾನೇ ನಡೆದೀತು? ॥33॥

(ಶ್ಲೋಕ-34)

ಮೂಲಮ್

ಕ್ರಮತೋ ಗಾಂ ಪದೈಕೇನ ದ್ವಿತೀಯೇನ ದಿವಂ ವಿಭೋಃ ।
ಖಂ ಚ ಕಾಯೇನ ಮಹತಾ ತಾರ್ತೀಯಸ್ಯ ಕುತೋ ಗತಿಃ ॥

ಅನುವಾದ

ಈ ವಿಶ್ವವ್ಯಾಪಕ ಭಗವಂತನು ಒಂದು ಹೆಜ್ಜೆಯಿಂದ ಪೃಥಿವಿಯನ್ನೂ, ಎರಡನೆ ಹೆಜ್ಜೆಯಿಂದ ಸ್ವರ್ಗವನ್ನೂ ಅಳೆದುಕೊಂಡಾನು. ಇವನ ವಿಶಾಲ ಶರೀರದಿಂದ ಆಕಾಶ ತುಂಬಿ ಹೋದೀತು. ಆಗ ಇವನು ಮೂರನೆಯ ಹೆಜ್ಜೆಯನ್ನು ಎಲ್ಲಿಡುವನು? ॥34॥

(ಶ್ಲೋಕ-35)

ಮೂಲಮ್

ನಿಷ್ಠಾಂ ತೇ ನರಕೇ ಮನ್ಯೇ ಹ್ಯಪ್ರದಾತುಃ ಪ್ರತಿಶ್ರುತಮ್ ।
ಪ್ರತಿಶ್ರುತಸ್ಯ ಯೋನೀಶಃ ಪ್ರತಿಪಾದಯಿತುಂ ಭವಾನ್ ॥

ಅನುವಾದ

ನೀನು ಅದನ್ನು ಪೂರ್ಣಗೊಳಿಸಲಾರೆ. ಇಂತಹ ಸ್ಥಿತಿಯಲ್ಲಿ ಪ್ರತಿಜ್ಞೆಮಾಡಿ ಪೂರ್ಣ ಗೊಳಿಸದೇ ಇರುವುದರಿಂದ ನಿನಗೆ ನರಕಕ್ಕೆ ಹೋಗ ಬೇಕಾದೀತು ಎಂದು ನಾನು ತಿಳಿಯುತ್ತೇನೆ. ಏಕೆಂದರೆ ನೀನು ಮಾಡಿರುವ ಪ್ರತಿಜ್ಞೆಯನ್ನು ಪೂರ್ಣಗೊಳಿಸಲು ಸರ್ವಥಾ ಅಸಮರ್ಥನಾಗುವೆ. ॥35॥

(ಶ್ಲೋಕ-36)

ಮೂಲಮ್

ನ ತದ್ದಾನಂ ಪ್ರಶಂಸಂತಿ ಯೇನ ವೃತ್ತಿರ್ವಿಪದ್ಯತೇ ।
ದಾನಂ ಯಜ್ಞಸ್ತಪಃ ಕರ್ಮ ಲೋಕೇ ವೃತ್ತಿಮತೋ ಯತಃ ॥

ಅನುವಾದ

ಯಾವ ದಾನ ಮಾಡಿದ ನಂತರ ಜೀವನ ನಿರ್ವಹಣೆಗೂ ಏನೂ ಉಳಿಯುವುದಿಲ್ಲವೋ, ಆ ದಾನವನ್ನು ವಿದ್ವಾಂಸರು ಪ್ರಶಂಸಿಸು ವುದಿಲ್ಲ. ಜೀವನನಿರ್ವಾಹವು ಸರಿಯಾಗಿ ನಡೆಸುವವನೇ ಜಗತ್ತಿನಲ್ಲಿ ದಾನ, ಯಜ್ಞ, ತಪಸ್ಸು, ಪರೋಪಕಾರದ ಕರ್ಮ ಇವುಗಳನ್ನು ಮಾಡಬಲ್ಲನು. ॥36॥

(ಶ್ಲೋಕ-37)

ಮೂಲಮ್

ಧರ್ಮಾಯ ಯಶಸೇರ್ಥಾಯ ಕಾಮಾಯ ಸ್ವಜನಾಯ ಚ ।
ಪಂಚಧಾ ವಿಭಜನ್ವಿತ್ತಮಿಹಾಮುತ್ರ ಚ ಮೋದತೇ ॥

ಅನುವಾದ

ತನ್ನ ಧನದಲ್ಲಿ ಸ್ವಲ್ಪ ಧರ್ಮಕ್ಕಾಗಿ, ಸ್ವಲ್ಪ ಕೀರ್ತಿಗಾಗಿ, ಸ್ವಲ್ಪ ಧನದ ಅಭಿವೃದ್ಧಿಗಾಗಿ, ಸ್ವಲ್ಪ ಭೋಗಗಳಿಗಾಗಿ, ಸ್ವಲ್ಪ ಸ್ವಜನರಿಗಾಗಿ ಹೀಗೆ ಐದು ಭಾಗಗಳಲ್ಲಿ ಹಂಚುವ ಮನುಷ್ಯನೇ ಈ ಲೋಕ ಮತ್ತು ಪರಲೋಕದಲ್ಲಿ ಸುಖವಾಗಿರುತ್ತಾನೆ. ॥37॥

(ಶ್ಲೋಕ-38)

ಮೂಲಮ್

ಅತ್ರಾಪಿ ಬಹ್ವಚೈರ್ಗೀತಂ ಶೃಣು ಮೇಸುರಸತ್ತಮ ।
ಸತ್ಯಮೋಮಿತಿ ಯತ್ಪ್ರೋಕ್ತಂ ಯನ್ನೇತ್ಯಾಹಾನೃತಂ ಹಿ ತತ್ ॥

ಅನುವಾದ

ಅಸುರಶಿರೋಮಣಿಯೇ! ತನ್ನ ಪ್ರತಿಜ್ಞೆಯು ಭಂಗವಾದೀ ತೆಂಬ ಚಿಂತೆ ನಿನಗಿದ್ದರೆ ನಾನು ಈ ವಿಷಯದಲ್ಲಿ ನಿನಗೆ ಸತ್ಯಾನೃತಗಳ ಕುರಿತು ಋಗ್ವೇದದಲ್ಲಿ ಹೇಳಿರುವುದನ್ನು ತಿಳಿಸುವೆನು ಕೇಳು. ಯಾರಿಗಾದರೂ ಏನಾದರೂ ಕೊಡು ತ್ತೇನೆ ಎಂದು ಹೇಳುವುದು ಸತ್ಯವಾಗಿದೆ ಮತ್ತು ಅಸ್ವೀಕಾರ ಮಾಡುವುದು ಕೊಡುವುದಿಲ್ಲವೆಂದು ಹೇಳುವುದು ಅಸತ್ಯವಾಗಿದೆ. ॥38॥

(ಶ್ಲೋಕ-39)

ಮೂಲಮ್

ಸತ್ಯಂ ಪುಷ್ಪಲಂ ವಿದ್ಯಾದಾತ್ಮವೃಕ್ಷಸ್ಯ ಗೀಯತೇ ।
ವೃಕ್ಷೇಜೀವತಿ ತನ್ನ ಸ್ಯಾದನೃತಂ ಮೂಲಮಾತ್ಮನಃ ॥

ಅನುವಾದ

ಈ ಶರೀರವು ಒಂದು ವೃಕ್ಷವಾಗಿದೆ. ಸತ್ಯವು ಇದರ ಫಲ-ಪುಷ್ಪವಾಗಿದೆ. ಆದರೆ ವೃಕ್ಷವೇ ಇಲ್ಲದಿದ್ದರೆ (ದೇಹವೇ ಇಲ್ಲದಿದ್ದರೆ) ಫಲ-ಪುಷ್ಪಗಳು ಹೇಗೆ ಇರಬಲ್ಲವು? ಏಕೆಂದರೆ, ಇಲ್ಲವೆಂದು ಹೇಳುವುದು, ತನ್ನ ವಸ್ತುವನ್ನು ಬೇರೆಯವರಿಗೆ ಕೊಡದಿರುವುದು, ಇನ್ನೊಂದು ಅರ್ಥದಲ್ಲಿ ತನ್ನ ಸಂಗ್ರಹವನ್ನು ಉಳಿಸಿಕೊಳ್ಳುವುದು ಇದೇ ಶರೀರ ವೃಕ್ಷದ ಮೂಲವಾಗಿದೆ. ॥39॥

(ಶ್ಲೋಕ-40)

ಮೂಲಮ್

ತದ್ಯಥಾ ವೃಕ್ಷ ಉನ್ಮೂಲಃ ಶುಷ್ಯತ್ಯುದ್ವರ್ತತೇಚಿರಾತ್ ।
ಏವಂ ನಷ್ಟಾನೃತಃ ಸದ್ಯ ಆತ್ಮಾ ಶುಷ್ಯೇನ್ನ ಸಂಶಯಃ ॥

ಅನುವಾದ

ಬೇರುಗಳು ಕತ್ತರಿಸಿದಾಗ ಮರವು ಒಣಗಿಹೋಗಿ ಕೆಲವೇ ದಿನಗಳಲ್ಲಿ ಬಿದ್ದುಹೋಗುವಂತೆಯೇ ಧನವನ್ನು ಕೊಡಲು ಸ್ವೀಕರಿಸಿದರೆ ಈ ಜೀವನವು ಒಣಗಿ ಹೋಗುವುದರಲ್ಲಿ ಸಂದೇಹವೇ ಇಲ್ಲ. ॥40॥

(ಶ್ಲೋಕ-41)

ಮೂಲಮ್

ಪರಾಗ್ರಿಕ್ತಮಪೂರ್ಣಂ ವಾ ಅಕ್ಷರಂ ಯತ್ತದೋಮಿತಿ ।
ಯತ್ಕಿಂಚಿದೋಮಿತಿ ಬ್ರೂಯಾತ್ತೇನ ರಿಚ್ಯೇತ ವೈ ಪುಮಾನ್ ।
ಭಿಕ್ಷವೇ ಸರ್ವಮೋಂಕುರ್ವನ್ನಾಲಂ ಕಾಮೇನ ಚಾತ್ಮನೇ ॥

ಅನುವಾದ

‘ನಾನು ಕೊಡುವೆನು’ ಈ ವಾಕ್ಯವೇ ಧನವನ್ನು ದೂರತಳ್ಳುತ್ತದೆ. ಅದಕ್ಕಾಗಿ ಇದನ್ನು ಉಚ್ಚರಿಸುವುದೇ ಅಪೂರ್ಣ ಅರ್ಥಾತ್ ಧನವನ್ನು ಖಾಲಿಯಾಗಿಸುವುದಾಗಿದೆ. ‘ನಾನು ಕೊಡುತ್ತೇನೆ’ ಎಂದು ಹೇಳುವುದೇ ಧನದಿಂದ ಬರಿದಾಗುವ ಕಾರಣವಾಗಿದೆ. ಯಾರು ಯಾಚಕನಿಗೆ ಎಲ್ಲವನ್ನು ಕೊಡಲು ಸ್ವೀಕರಿಸುವನೋ ಅವನು ತನಗಾಗಿ ಭೋಗದ ಯಾವ ಸಾಮಗ್ರಿಯನ್ನು ಇರಿಸಲಾರನು. ॥41॥

(ಶ್ಲೋಕ-42)

ಮೂಲಮ್

ಅಥೈತತ್ಪೂರ್ಣಮಭ್ಯಾತ್ಮಂ ಯಚ್ಚ ನೇತ್ಯನೃತಂ ವಚಃ ।
ಸರ್ವಂ ನೇತ್ಯನೃತಂ ಬ್ರೂಯಾತ್ಸ ದುಷ್ಕೀರ್ತಿಃ ಶ್ವಸನ್ಮೃತಃ ॥

ಅನುವಾದ

ಇದಕ್ಕೆ ವಿರುದ್ಧವಾಗಿ ‘ನಾನು ಕೊಡುವುದಿಲ್ಲ’ ಈ ಅಸ್ವೀಕಾರಾತ್ಮಕ ಅಸತ್ಯವು ತನ್ನ ಧನವನ್ನು ಸುರಕ್ಷಿತವಾಗಿಡುವುದು ಹಾಗೂ ಪೂರ್ಣಗೊಳಿಸುವುದಾಗಿದೆ. ಆದರೆ ಎಲ್ಲ ಸಮಯದಲ್ಲಿ ಹೀಗೆ ಮಾಡಬಾರದು. ಇದನ್ನು ಎಲ್ಲರೊಂದಿಗೆ, ಎಲ್ಲ ವಸ್ತುಗಳಿಗಾಗಿ ಹೇಳಬಾರದು. ಇದರಿಂದ ಅಪಕೀರ್ತಿಯು ಉಂಟಾಗುತ್ತದೆ. ಅವನು ಜೀವಿಸಿದ್ದರೂ ಸತ್ತಂತೆಯೇ ಆಗಿದ್ದಾನೆ. ॥42॥

(ಶ್ಲೋಕ-43)

ಮೂಲಮ್

ಸೀಷು ನರ್ಮ ವಿವಾಹೇ ಚ ವೃತ್ತ್ಯರ್ಥೇ ಪ್ರಾಣಸಂಕಟೇ ।
ಗೋಬ್ರಾಹ್ಮಣಾರ್ಥೇ ಹಿಂಸಾಯಾಂ ನಾನೃತಂ ಸ್ಯಾಜ್ಜುಗುಪ್ಸಿತಮ್ ॥

ಅನುವಾದ

ಸ್ತ್ರೀಯರನ್ನು ಪ್ರಸನ್ನಗೊಳಿಸಲು, ಪರಿಹಾಸ್ಯಮಾಡುವಾಗ, ಮದುವೆಯ ವಿಷಯದಲ್ಲಿ, ತನ್ನ ಜೀವನದ ರಕ್ಷಣೆಗಾಗಿ, ಪ್ರಾಣಸಂಕಟವು ಸನ್ನಿಹಿತವಾಗಿರುವಾಗ, ಗೋ, ಬ್ರಾಹ್ಮಣರ ಹಿತಾರ್ಥವಾಗಿ ಅಥವಾ ಯಾರನ್ನಾದರೂ ಬದುಕಿಸಲಿಕ್ಕಾಗಿ ಸುಳ್ಳನ್ನೂ ಹೇಳಬೇಕಾಗಿ ಬಂದರೂ ಅದು ನಿಂದನೀಯವಲ್ಲ. ॥43॥

ಅನುವಾದ (ಸಮಾಪ್ತಿಃ)

ಹತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥19॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ವಾಮನಪ್ರಾದುರ್ಭಾವೇ ಏಕೋನವಿಂಶೋಧ್ಯಾಯಃ ॥19॥

ಮೂಲಮ್