೧೮

[ಹದಿನೆಂಟನೆಯ ಅಧ್ಯಾಯ]

ಭಾಗಸೂಚನಾ

ಭಗವಾನ್ ವಾಮನನ ಪ್ರಾಕಟ್ಯ ಮತ್ತು ಬಲಿಚಕ್ರವರ್ತಿಯ ಯಜ್ಞಶಾಲೆಯನ್ನು ಪ್ರವೇಶಿಸಿದುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಥಂ ವಿರಿಂಚಸ್ತುತಕರ್ಮವೀರ್ಯಃ
ಪ್ರಾದುರ್ಬಭೂವಾಮೃತಭೂರದಿತ್ಯಾಮ್ ।
ಚತುರ್ಭುಜಃ ಶಂಖಗದಾಬ್ಜಚಕ್ರಃ
ಪಿಶಂಗವಾಸಾ ನಲಿನಾಯತೇಕ್ಷಣಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಹೀಗೆ ಬ್ರಹ್ಮದೇವರು ಭಗವಂತನ ಅಪಾರವಾದ ಶಕ್ತಿಯನ್ನೂ, ಲೀಲೆಗಳನ್ನೂ ಸ್ತೋತ್ರಮಾಡಿದ ನಂತರ ಆದ್ಯಂತರಹಿತನಾದ ಶ್ರೀಹರಿಯು ಅದಿತಿಯ ಮುಂದೆ ಪ್ರಕಟನಾದನು. ಭಗವಂತನಿಗೆ ನಾಲ್ಕು ಭುಜಗಳಿದ್ದು, ಶಂಖ, ಚಕ್ರ, ಗದಾ, ಪದ್ಮಗಳನ್ನು ಧರಿಸಿದ್ದನು. ಕಮಲದಂತೆ ಕೋಮಲ-ವಿಶಾಲವಾದ ನೇತ್ರಗಳಿದ್ದು, ದಿವ್ಯ ಪೀತಾಂಬರವನ್ನು ಧರಿಸಿದ್ದನು. ॥1॥

(ಶ್ಲೋಕ-2)

ಮೂಲಮ್

ಶ್ಯಾಮಾವದಾತೋ ಝಷರಾಜಕುಂಡಲ-
ತ್ವಿಷೋಲ್ಲಸಚ್ಛ್ರೀವದನಾಂಬುಜಃ ಪುಮಾನ್ ।
ಶ್ರೀವತ್ಸವಕ್ಷಾ ವಲಯಾಂಗದೋಲ್ಲಸ-
ತ್ಕಿರೀಟಕಾಂಚೀಗುಣಚಾರುನೂಪುರಃ ॥

ಅನುವಾದ

ಭಗವಂತನ ಶರೀರವು ಶ್ಯಾಮಲ ವರ್ಣದಿಂದ ಕೂಡಿತ್ತು. ಮಕರಾಕೃತಿಯ ಕುಂಡಲಗಳ ಕಾಂತಿಯಿಂದ ಅವನ ಮುಖಕಮಲದ ಶೋಭೆಯು ಇನ್ನೂ ಹೆಚ್ಚಿತ್ತು. ವಕ್ಷಸ್ಥಳವು ಶ್ರೀವತ್ಸ ಚಿಹ್ನೆಯಿಂದ ಸಮಲಂಕೃತವಾಗಿತ್ತು. ಕರಗಳಲ್ಲಿ ಕಂಕಣಗಳೂ, ತೋಳುಗಳಲ್ಲಿ ಬಾಜು ಬಂದಿಗಳೂ, ಶಿರದಲ್ಲಿ ಕಿರೀಟವೂ, ನಡುವಿನಲ್ಲಿ ಓಡ್ಯಾಣವೂ, ಚರಣಗಳಲ್ಲಿ ಸುಂದರವಾದ ನೂಪುರಗಳು ಶೋಭಿಸುತ್ತಿದ್ದವು. ॥2॥

(ಶ್ಲೋಕ-3)

ಮೂಲಮ್

ಮಧುವ್ರತವ್ರಾತವಿಘುಷ್ಟಯಾ ಸ್ವಯಾ
ವಿರಾಜಿತಃ ಶ್ರೀವನಮಾಲಯಾ ಹರಿಃ ।
ಪ್ರಜಾಪತೇರ್ವೇಶ್ಮತಮಃ ಸ್ವರೋಚಿಷಾ
ವಿನಾಶಯನ್ಕಂಠನಿವಿಷ್ಟಕೌಸ್ತುಭಃ ॥

ಅನುವಾದ

ಭಗವಂತನ ಕಂಠದಲ್ಲಿ ರತ್ನಹಾರಗಳೂ, ಸ್ವಚ್ಛವಾದ ವನಮಾಲೆಯನ್ನೂ ಧರಿಸಿದ್ದನು. ಅದರ ಸುತ್ತಲೂ ಮತ್ತ ಭೃಂಗಗಳು ಹಿಂಡುಹಿಂಡಾಗಿ ಝೇಂಕರಿಸುತ್ತಿದ್ದವು. ಕೌಸ್ತುಭ ಮಣಿಯ ಶೋಭೆಯು ಕಂಠದಲ್ಲಿ ವಿರಾಜಿಸುತ್ತಿತ್ತು. ಭಗವಂತನ ಅಂಗಕಾಂತಿಯಿಂದ ಪ್ರಜಾಪತಿ ಕಶ್ಯಪರ ಆಶ್ರಮದ ಕತ್ತಲೆಯು ಕಳೆದುಹೋಗಿತ್ತು. ॥3॥

(ಶ್ಲೋಕ-4)

ಮೂಲಮ್

ದಿಶಃ ಪ್ರಸೇದುಃ ಸಲಿಲಾಶಯಾಸ್ತದಾ
ಪ್ರಜಾಃ ಪ್ರಹೃಷ್ಟಾ ಋತವೋ ಗುಣಾನ್ವಿತಾಃ ।
ದ್ಯೌರಂತರಿಕ್ಷಂ ಕ್ಷಿತಿರಗ್ನಿಜಿಹ್ವಾ
ಗಾವೋ ದ್ವಿಜಾಃ ಸಂಜಹೃಷುರ್ನಗಾಶ್ಚ ॥

ಅನುವಾದ

ಭಗವಂತನು ಅವತರಿಸಿದಾಗ ದಿಕ್ಕುಗಳು ನಿರ್ಮಲವಾದುವು. ನದೀ-ಸರೋವರಗಳ ನೀರು ಸ್ವಚ್ಛವಾಯಿತು. ಪ್ರಜೆಗಳ ಹೃದಯದಲ್ಲಿ ಆನಂದದ ನೆರೆಯೇ ಬಂದಂತಾಯ್ತು. ಎಲ್ಲ ಋತುಗಳು ಒಟ್ಟಿಗೆ ತಮ್ಮ-ತಮ್ಮ ಗುಣಗಳನ್ನು ಪ್ರಕಟಿಸಿದುವು. ಸ್ವರ್ಗಲೋಕ, ಅಂತರಿಕ್ಷ, ಪೃಥಿವಿ, ದೇವತೆಗಳು, ಗೋವುಗಳು, ದ್ವಿಜರು, ಪರ್ವತಗಳು ಹೀಗೆ ಎಲ್ಲವೂ ಹರ್ಷಗೊಂಡವು. ॥4॥

(ಶ್ಲೋಕ-5)

ಮೂಲಮ್

ಶ್ರೋಣಾಯಾಂ ಶ್ರವಣದ್ವಾದಶ್ಯಾಂ
ಮುಹೂರ್ತೇಭಿಜಿತಿ ಪ್ರಭುಃ ।
ಸರ್ವೇ ನಕ್ಷತ್ರತಾರಾದ್ಯಾ-
ಶ್ಚಕ್ರುಸ್ತಜ್ಜನ್ಮ ದಕ್ಷಿಣಮ್ ॥

ಅನುವಾದ

ಪರೀಕ್ಷಿತನೇ! ಭಗವಂತನು ಅವತರಿಸಿದಾಗ ಚಂದ್ರನು ಶ್ರವಣಾನಕ್ಷತ್ರದಲ್ಲಿದ್ದನು. ಭಾದ್ರಪದ ಮಾಸದ ಶುಕ್ಲದ್ವಾದಶೀ ಶ್ರವಣನಕ್ಷತ್ರದ ಅಭಿಜಿನ್ಮುಹೂರ್ತದಲ್ಲಿ ಭಗವಂತನು ಪ್ರಾದುರ್ಭವಿಸಿದನು. ಎಲ್ಲ ಗ್ರಹ-ನಕ್ಷತ್ರಗಳೂ ಜನ್ಮ ಮುಹೂರ್ತವನ್ನು ಮಂಗಲಮಯವಾಗಿಸಿದುವು. ॥5॥

(ಶ್ಲೋಕ-6)

ಮೂಲಮ್

ದ್ವಾದಶ್ಯಾಂ ಸವಿತಾ ತಿಷ್ಠನ್ಮಧ್ಯಂದಿನಗತೋ ನೃಪ ।
ವಿಜಯಾ ನಾಮ ಸಾ ಪ್ರೋಕ್ತಾ ಯಸ್ಯಾಂ ಜನ್ಮ ವಿದುರ್ಹರೇಃ ॥

ಅನುವಾದ

ರಾಜೇಂದ್ರಾ! ಭಗವಂತನು ಜನ್ಮತಾಳಿದ ತಿಥಿಯನ್ನು ‘ವಿಜಯದ್ವಾದಶೀ’ ಎಂದು ಹೇಳುತ್ತಾರೆ. ಆ ಸಮಯದಲ್ಲಿ ಸೂರ್ಯನು ಆಗಸದ ಮಧ್ಯಭಾಗದಲ್ಲಿದ್ದನು. ॥6॥

ಮೂಲಮ್

(ಶ್ಲೋಕ-7)
ಶಂಖದುಂದುಭಯೋ ನೇದುರ್ಮೃದಂಗಪಣವಾನಕಾಃ ।
ಚಿತ್ರವಾದಿತ್ರತೂರ್ಯಾಣಾಂ ನಿರ್ಘೋಷಸ್ತು ಮುಲೋಭವತ್ ॥

ಅನುವಾದ

ಭಗವಂತನ ಅವತಾರದ ಸಮಯದಲ್ಲಿ ಶಂಖ, ಡೋಲು, ಮೃದಂಗ, ದುಂದುಭಿ, ಪಣವ, ಆನಕ ಮುಂತಾದ ವಾದ್ಯಗಳು ಮೊಳಗಿದವು. ಹೀಗೆ ನಾನಾರೀತಿಯ ವಾದ್ಯಗಳು, ಕೊಂಬು, ಕಹಳೆ ಮುಂತಾದವುಗಳ ತುಮುಲಧ್ವನಿಯು ಉಂಟಾಯಿತು. ॥7॥

ಮೂಲಮ್

(ಶ್ಲೋಕ-8)
ಪ್ರೀತಾಶ್ಚಾಪ್ಸರಸೋನೃತ್ಯನ್ಗಂಧರ್ವಪ್ರವರಾ ಜಗುಃ ।
ತುಷ್ಟುವುರ್ಮುನಯೋ ದೇವಾ ಮನವಃ ಪಿತರೋಗ್ನಯಃ ॥

ಅನುವಾದ

ಅಪ್ಸರೆಯರು ಕುಣಿಯತೊಡಗಿದರು, ಗಂಧರ್ವರು ಹಾಡತೊಡಗಿದರು. ಮುನಿಗಳು, ದೇವತೆಗಳು, ಮನುಗಳು, ಪಿತೃಗಳು ಅಗ್ನಿ ಹೀಗೆ ಎಲ್ಲರೂ ಸ್ತುತಿಸತೊಡಗಿದರು. ॥8॥

(ಶ್ಲೋಕ-9)

ಮೂಲಮ್

ಸಿದ್ಧವಿದ್ಯಾಧರಗಣಾಃ ಸಕಿಂಪುರುಷಕಿನ್ನರಾಃ ।
ಚಾರಣಾ ಯಕ್ಷರಕ್ಷಾಂಸಿ ಸುಪರ್ಣಾ ಭುಜಗೋತ್ತಮಾಃ ॥

(ಶ್ಲೋಕ-10)

ಮೂಲಮ್

ಗಾಯಂತೋತಿಪ್ರಶಂಸಂತೋ ನೃತ್ಯಂತೋ ವಿಬುಧಾನುಗಾಃ ।
ಅದಿತ್ಯಾ ಆಶ್ರಮಪದಂ ಕುಸುಮೈಃ ಸಮವಾಕಿರನ್ ॥

ಅನುವಾದ

ಸಿದ್ಧರು, ವಿದ್ಯಾಧರರು, ಕಿಂಪುರುಷರು, ಕಿನ್ನರರು, ಚಾರಣರು, ಯಕ್ಷರು, ರಾಕ್ಷಸರು, ಪಕ್ಷಿಗಳು, ಮುಖ್ಯ-ಮುಖ್ಯನಾಗರು ಮತ್ತು ದೇವತೆಗಳ ಅನುಚರರು ಹಾಡುತ್ತಾ-ಕುಣಿಯುತ್ತಾ ಭಗವಂತನ ಅಪಾರ ಗುಣಗಳನ್ನೂ, ಸತ್ಕಥೆಗಳನ್ನೂ ಸಂಕೀರ್ತನೆ ಮಾಡುತ್ತಾ ಅದಿತಿಯ ಆಶ್ರಮವನ್ನು ಪುಷ್ಪವೃಷ್ಟಿಯಿಂದ ಮುಚ್ಚಿ ಬಿಟ್ಟರು.॥9-10॥

(ಶ್ಲೋಕ-11)

ಮೂಲಮ್

ದೃಷ್ಟ್ವಾದಿತಿಸ್ತಂ ನಿಜಗರ್ಭಸಂಭವಂ
ಪರಂ ಪುಮಾಂಸಂ ಮುದಮಾಪ ವಿಸ್ಮಿತಾ ।
ಗೃಹೀತದೇಹಂ ನಿಜಯೋಗಮಾಯಯಾ
ಪ್ರಜಾಪತಿಶ್ಚಾಹ ಜಯೇತಿ ವಿಸ್ಮಿತಃ ॥

ಅನುವಾದ

ಅದಿತಿಯು ತನ್ನ ಗರ್ಭದಿಂದ ಪ್ರಕಟಗೊಂಡ ಪರಮ ಪುರುಷ ಪರಮಾತ್ಮನನ್ನು ನೋಡಿದಾಗ ಅವಳು ಅತ್ಯಂತ ಆಶ್ಚರ್ಯ ಚಕಿತಳಾಗಿ, ಪರಮಾನಂದಭರಿತಳಾದಳು. ಕಶ್ಯಪ ಪ್ರಜಾಪತಿಯೂ ಭಗವಂತನು ತನ್ನ ಯೋಗಮಾಯೆಯಿಂದ ಶರೀರವನ್ನು ಧರಿಸಿರುವುದನ್ನು ನೋಡಿ ವಿಸ್ಮಿತರಾಗಿ ‘ಜಯವಾಗಲೀ! ಭಗವಂತನಿಗೆ ಜಯವಾಗಲೀ’ ಎಂದು ಉದ್ಗಾರವೆತ್ತಿದರು. ॥11॥

(ಶ್ಲೋಕ-12)

ಮೂಲಮ್

ಯತ್ತದ್ವಪುರ್ಭಾತಿ ವಿಭೂಷಣಾಯುಧೈ-
ರವ್ಯಕ್ತಚಿದ್ವ್ಯಕ್ತಮಧಾರಯದ್ಧರಿಃ ।
ಬಭೂವ ತೇನೈವ ಸ ವಾಮನೋ ವಟುಃ
ಸಂಪಶ್ಯ ತೋರ್ದಿವ್ಯಗತಿರ್ಯಥಾ ನಟಃ ॥

ಅನುವಾದ

ಪರೀಕ್ಷಿತನೇ! ಭಗವಂತನು ಸ್ವಯಂ ಅವ್ಯಕ್ತನೂ, ಚಿತ್ಸ್ವರೂಪನು. ಅಂತಹವನು ಪರಮಕಾಂತಿಮಯ ಆಭರಣ ಮತ್ತು ಆಯುಧಗಳಿಂದ ಕೂಡಿದ ಆ ಶರೀರವನ್ನು ಧರಿಸಿ ಆವಿರ್ಭವಿಸಿದ್ದನು. ಆ ದಿವ್ಯಶರೀರವನ್ನು ಅದಿತಿ-ಕಶ್ಯಪರು ನೋಡು-ನೋಡುತ್ತಿರುವಂತೆ ನಟನು ತನ್ನ ವೇಷವನ್ನು ಬದಲಿಸುವಂತೆ ಭಗವಂತನು ಕುಳ್ಳ ಬ್ರಹ್ಮಚಾರಿಯ ರೂಪವನ್ನು ತಾಳಿದನು. ನಿಶ್ಚಯವಾಗಿಯೂ ಪರಮಾತ್ಮನ ಲೀಲೆಯು ಪರಮಾದ್ಭುತವಾದುದು. ॥12॥

(ಶ್ಲೋಕ-13)

ಮೂಲಮ್

ತಂ ವಟುಂ ವಾಮನಂ ದೃಷ್ಟ್ವಾ ಮೋದಮಾನಾ ಮಹರ್ಷಯಃ ।
ಕರ್ಮಾಣಿ ಕಾರಯಾಮಾಸುಃ ಪುರಸ್ಕೃತ್ಯ ಪ್ರಜಾಪತಿಮ್ ॥

ಅನುವಾದ

ಭಗವಂತನನ್ನು ವಾಮನ ಬ್ರಹ್ಮಚಾರಿಯ ರೂಪದಲ್ಲಿ ನೋಡಿ ಮಹರ್ಷಿಗಳಿಗೆ ಮಹದಾನಂದವಾಯಿತು. ಅವರೆಲ್ಲರೂ ಕಶ್ಯಪ ಪ್ರಜಾಪತಿಯನ್ನು ಮುಂದೆಮಾಡಿ ಉಪೇಂದ್ರನ ಜಾತಕರ್ಮವೇ ಮೊದಲಾದ ಸಂಸ್ಕಾರಗಳನ್ನು ಮಾಡಿಸಿದರು. ॥13॥

(ಶ್ಲೋಕ-14)

ಮೂಲಮ್

ತಸ್ಯೋಪನೀಯಮಾನಸ್ಯ ಸಾವಿತ್ರೀಂ ಸವಿತಾಬ್ರವೀತ್ ।
ಬೃಹಸ್ಪತಿರ್ಬ್ರಹ್ಮಸೂತ್ರಂ ಮೇಖಲಾಂ ಕಶ್ಯಪೋದದಾತ್ ॥

ಅನುವಾದ

ಅವನ ಉಪನಯನ ಸಂಸ್ಕಾರವು ಪ್ರಾರಂಭವಾದಾಗ ಗಾಯತ್ರಿಯ ಅಧಿಷ್ಠಾತೃ ದೇವತೆಯಾದ ಸವಿತೃವೇ ವಾಮನನಿಗೆ ಗಾಯತ್ರಿಯನ್ನು ಉಪದೇಶಿಸಿದನು. ದೇವಗುರು ಬೃಹಸ್ಪತಿಯು ಯಜ್ಞೋಪವೀತವನ್ನೂ, ಕಶ್ಯಪರು ಮೇಖಲೆ (ಮೌಂಜಿಯನ್ನು ಕೊಟ್ಟರು. ॥14॥

(ಶ್ಲೋಕ-15)

ಮೂಲಮ್

ದದೌ ಕೃಷ್ಣಾಜಿನಂ ಭೂಮಿರ್ದಂಡಂ ಸೋಮೋ ವನಸ್ಪತಿಃ ।
ಕೌಪೀನಾಚ್ಛಾದನಂ ಮಾತಾ ದ್ಯೌಶ್ಛತ್ರಂ ಜಗತಃ ಪತೇಃ ॥

ಅನುವಾದ

ಪೃಥಿವಿದೇವಿಯು ಕೃಷ್ಣಾಜಿನವನ್ನೂ, ವನಸ್ಪತಿಗಳ ಒಡೆಯನಾದ ಚಂದ್ರನು ದಂಡವನ್ನೂ, ಮಾತಾ ಅದಿತಿಯು ಕೌಪೀನವನ್ನೂ ಮತ್ತು ಕಟಿವಸ್ತ್ರವನ್ನೂ, ಆಕಾಶಾಭಿಮಾನಿದೇವತೆಗಳು ವಾಮನವೇಷಧಾರಿಯಾದ ಭಗವಂತನಿಗೆ ಛತ್ರವನ್ನೂ ಅರ್ಪಿಸಿದರು. ॥15॥

(ಶ್ಲೋಕ-16)

ಮೂಲಮ್

ಕಮಂಡಲುಂ ವೇದಗರ್ಭಃ ಕುಶಾನ್ಸಪ್ತರ್ಷಯೋ ದದುಃ ।
ಅಕ್ಷಮಾಲಾಂ ಮಹಾರಾಜ ಸರಸ್ವತ್ಯವ್ಯಯಾತ್ಮನಃ ॥

ಅನುವಾದ

ಪರೀಕ್ಷಿತನೇ! ಅವಿನಾಶಿಯಾದ ವಾಮನಪ್ರಭುವಿಗೆ ಬ್ರಹ್ಮದೇವರು ಕಮಂಡಲುವನ್ನೂ, ಸಪ್ತರ್ಷಿಗಳು ಕುಶಗಳನ್ನೂ, ಸರಸ್ವತಿದೇವಿಯು ರುದ್ರಾಕ್ಷಮಾಲೆಯನ್ನೂ ಅರ್ಪಿಸಿದರು. ॥16॥

ಮೂಲಮ್

(ಶ್ಲೋಕ-17)
ತಸ್ಮಾ ಇತ್ಯುಪನೀತಾಯ ಯಕ್ಷರಾಟ್ಪಾತ್ರಿಕಾಮದಾತ್ ।
ಭಿಕ್ಷಾಂ ಭಗವತೀ ಸಾಕ್ಷಾದುಮಾದಾದಂಬಿಕಾ ಸತೀ ॥

ಅನುವಾದ

ಹೀಗೆ ಭಗವಾನ್ ವಾಮನನ ಉಪನಯನ ಸಂಸ್ಕಾರವಾದಾಗ ಯಕ್ಷಪತಿ ಕುಬೇರನು ಅವನಿಗೆ ಭಿಕ್ಷಾಪಾತ್ರೆಯನ್ನು ಕೊಟ್ಟನು. ಸತಿಶಿರೋಮಣಿ ಜಗಜ್ಜನನಿಯಾದ ಭಗವತಿ ಉಮಾದೇವಿಯು ಪ್ರಥಮ ಭಿಕ್ಷೆಯನ್ನು ನೀಡಿದಳು. ॥17॥

(ಶ್ಲೋಕ-18)

ಮೂಲಮ್

ಸ ಬ್ರಹ್ಮವರ್ಚಸೇನೈವಂ ಸಭಾಂ ಸಂಭಾವಿತೋ ವಟುಃ ।
ಬ್ರಹ್ಮರ್ಷಿಗಣಸಂಜುಷ್ಟಾಮತ್ಯರೋಚತ ಮಾರಿಷಃ ॥

ಅನುವಾದ

ಹೀಗೆ ಋಷಿ-ಮುನಿ-ದೇವತೆಗಳಾದಿಯಾಗಿ ಎಲ್ಲರೂ ವಟು ವೇಷಧರನಾದ ಶ್ರೀಭಗವಂತನನ್ನು ಸಮ್ಮಾನಿಸಿದರು. ಬ್ರಹ್ಮರ್ಷಿಗಳಿಂದ ತುಂಬಿದ ಆ ಮಹಾಸಭೆಯಲ್ಲಿ ವಾಮನನು ತನ್ನ ಬ್ರಹ್ಮತೇಜದಿಂದ ಅತ್ಯಂತ ಪ್ರಕಾಶಮಾನನಾದನು. ॥18॥

(ಶ್ಲೋಕ-19)

ಮೂಲಮ್

ಸಮಿದ್ಧಮಾಹಿತಂ ವಹ್ನಿಂ ಕೃತ್ವಾ ಪರಿಸಮೂಹನಮ್ ।
ಪರಿಸ್ತೀರ್ಯ ಸಮಭ್ಯರ್ಚ್ಯ ಸಮಿದ್ಭಿರಜುಹೋದ್ವಜಃ ॥

ಅನುವಾದ

ಬಳಿಕ ಭಗವಾನ್ ವಾಮನನು ಸ್ಥಾಪಿಸಲ್ಪಟ್ಟ ಪ್ರಜ್ವಲಿತ ಅಗ್ನಿಯನ್ನು ಕುಶಗಳಿಂದ ಪರಿಸಮೂಹ ಮತ್ತು ಪರಿಸ್ತರಣ ಗೈದು, ಅಗ್ನಿಪೂಜೆ ಮಾಡಿ ಸಮಿಧೆಗಳಿಂದ ಹೋಮವನ್ನು ಮಾಡಿದನು. ॥19॥

(ಶ್ಲೋಕ-20)

ಮೂಲಮ್

ಶ್ರುತ್ವಾಶ್ವಮೇಧೈರ್ಯಜಮಾನಮೂರ್ಜಿತಂ
ಬಲಿಂ ಭೃಗೂಣಾಮುಪಕಲ್ಪಿತೈಸ್ತತಃ ।
ಜಗಾಮ ತತ್ರಾಖಿಲಸಾರಸಂಭೃತೋ
ಭಾರೇಣ ಗಾಂ ಸನ್ನಮಯನ್ಪದೇ ಪದೇ ॥

ಅನುವಾದ

ಪರೀಕ್ಷಿತನೇ! ಆ ಸಮಯದಲ್ಲಿ ಸಮಸ್ತ ವಿಧವಾದ ಯಜ್ಞಸಾಮಗ್ರಿಗಳಿಂದಲೂ ಸಂಪನ್ನನಾದ ಯಶಸ್ವೀ ಬಲಿ ಚಕ್ರವರ್ತಿಯು ಭೃಗುವಂಶೀಯ ಬ್ರಾಹ್ಮಣರ ಆದೇಶಾನು ಸಾರವಾಗಿ ಹಲವಾರು ಅಶ್ವಮೇಧಗಳನ್ನು ಮಾಡುತ್ತಿರುವನೆಂಬ ವಿಷಯವು ಭಗವಂತನಾದ ವಾಮನಮೂರ್ತಿಗೆ ತಿಳಿಯಿತು. ಆಗ ಸಮಸ್ತ ಶಕ್ತಿಗಳಿಂದಲೂ ಯುಕ್ತನಾಗಿ ಅವನು ನಡೆಯುವಾಗ ಅತ್ಯಂತ ಭಾರವಾದ ಹೆಜ್ಜೆಯನ್ನಿಡು ತ್ತಿರುವಾಗ ಭೂಮಿಯನ್ನೇ ಬಗ್ಗಿಸುತ್ತಾ ಬಲಿಚಕ್ರ ವರ್ತಿಯ ಯಜ್ಞಶಾಲೆಗೆ ಹೊರಟನು.॥20॥

(ಶ್ಲೋಕ-21)

ಮೂಲಮ್

ತಂ ನರ್ಮದಾಯಾಸ್ತಟ ಉತ್ತರೇ ಬಲೇ-
ರ್ಯ ಋತ್ವಿಜಸ್ತೇ ಭೃಗುಕಚ್ಛಸಂಜ್ಞಕೇ ।
ಪ್ರವರ್ತಯಂತೋ ಭೃಗವಃ ಕ್ರತೂತ್ತಮಂ
ವ್ಯಚಕ್ಷತಾರಾದುದಿತಂ ಯಥಾ ರವಿಮ್ ॥

ಅನುವಾದ

ನರ್ಮದಾನದಿಯ ಉತ್ತರದ ತೀರದಲ್ಲಿ ‘ಭೃಗುಕಚ್ಛ’ವೆಂಬ ಸುಂದರವಾದ ಮತ್ತು ಪವಿತ್ರವಾದ ಸ್ಥಳವಿದೆ. ಅಲ್ಲಿಯೇ ಭೃಗುವಂಶೀಯ ಋತ್ವಿಜರು ಬಲಿಚಕ್ರವರ್ತಿಯಿಂದ ಯಜ್ಞಗಳನ್ನು ಮಾಡಿಸು ತ್ತಿದ್ದರು. ಅವರು ದೂರದಿಂದಲೇ ವಾಮನ ಭಗವಂತನನ್ನು ನೋಡಿ ಸಾಕ್ಷಾತ್ ಸೂರ್ಯನಾರಾಯಣನೇ ಉದಯಿಸಿ ಬರುತ್ತಿರುವಂತೆ ಭಾವಿಸಿದರು.॥21॥

(ಶ್ಲೋಕ-22)

ಮೂಲಮ್

ತ ಋತ್ವಿಜೋ ಯಜಮಾನಃ ಸದಸ್ಯಾ
ಹತತ್ವಿಷೋ ವಾಮನತೇಜಸಾ ನೃಪ ।
ಸೂರ್ಯಃ ಕಿಲಾಯಾತ್ಯುತ ವಾ ವಿಭಾವಸುಃ
ಸನತ್ಕುಮಾರೋಥ ದಿದೃಕ್ಷಯಾ ಕ್ರತೋಃ ॥

ಅನುವಾದ

ಪರೀಕ್ಷಿತನೇ! ಭಗವಾನ್ ಶ್ರೀವಾಮನನ ದಿವ್ಯ ತೇಜಸ್ಸಿನ ಮುಂದೆ ಋತ್ವಿಜರು, ಯಜಮಾನ, ಸದಸ್ಯರು ಇವರೆಲ್ಲರೂ ನಿಸ್ತೇಜರಾದರು. ಯಜ್ಞವನ್ನು ನೋಡುವ ಸಲುವಾಗಿ ಸೂರ್ಯನೋ, ಅಗ್ನಿಯೋ ಅಥವಾ ಸನತ್ಕುಮಾರನೋ ಅವಶ್ಯವಾಗಿ ಬರುತ್ತಿರಬಹುದೆಂದು ಊಹಿಸಿದರು. ॥22॥

(ಶ್ಲೋಕ-23)

ಮೂಲಮ್

ಇತ್ಥಂ ಸಶಿಷ್ಯೇಷು ಭೃಗುಷ್ವನೇಕಧಾ
ವಿತರ್ಕ್ಯಮಾಣೋ ಭಗವಾನ್ಸ ವಾಮನಃ ।
ಛತ್ರಂ ಸದಂಡಂ ಸಜಲಂ ಕಮಂಡಲುಂ
ವಿವೇಶ ಬಿಭ್ರದ್ಧಯಮೇಧವಾಟಮ್ ॥

ಅನುವಾದ

ಭೃಗು ಪುತ್ರ ಶುಕ್ರಾಚಾರ್ಯರೇ ಮೊದಲಾದವರು ತಮ್ಮ ಶಿಷ್ಯರೊಂದಿಗೆ ಹೀಗೆ ಅನೇಕ ಕಲ್ಪನೆಗಳನ್ನು ಮಾಡುತ್ತಿದ್ದರು. ಅದೇ ಸಮಯಕ್ಕೆ ಸರಿಯಾಗಿ ಕೈಯಲ್ಲಿ ಛತ್ರವನ್ನು, ದಂಡವನ್ನು, ನೀರಿನಿಂದ ತುಂಬಿದ ಕಮಂಡಲುವನ್ನು ಹಿಡಿದು ಕೊಂಡು ವಾಮನ ಭಗವಂತನು ಅಶ್ವಮೇಧ ಯಜ್ಞದ ಮಂಡಪವನ್ನು ಪ್ರವೇಶಿಸಿದನು. ॥23॥

(ಶ್ಲೋಕ-24)

ಮೂಲಮ್

ವೌಂಜ್ಯಾ ಮೇಖಲಯಾ ವೀತಮುಪವೀತಾಜಿನೋತ್ತರಮ್ ।
ಜಟಿಲಂ ವಾಮನಂ ವಿಪ್ರಂ ಮಾಯಾಮಾಣವಕಂ ಹರಿಮ್ ॥

(ಶ್ಲೋಕ-25)

ಮೂಲಮ್

ಪ್ರವಿಷ್ಟಂ ವೀಕ್ಷ್ಯ ಭೃಗವಃ ಸಶಿಷ್ಯಾಸ್ತೇ ಸಹಾಗ್ನಿಭಿಃ ।
ಪ್ರತ್ಯಗೃಹ್ಣನ್ಸಮುತ್ಥಾಯ ಸಂಕ್ಷಿಪ್ತಾಸ್ತಸ್ಯ ತೇಜಸಾ ॥

ಅನುವಾದ

ಅವನು ಸೊಂಟದಲ್ಲಿ ಮೌಂಜಿ(ಮೇಖಲೆ)ಯನ್ನೂ, ಕತ್ತಿನಲ್ಲಿ ಯಜ್ಞೋಪವೀತವನ್ನು ಧರಿಸಿದ್ದನು. ಕಂಕುಳಲ್ಲಿ ಮೃಗ ಚರ್ಮವಿತ್ತು. ತಲೆಯ ಮೇಲೆ ಜಟೆಯಿತ್ತು. ಈ ಪ್ರಕಾರ ಕುಳ್ಳ ಬ್ರಾಹ್ಮಣನ ವೇಷದಲ್ಲಿ ತನ್ನ ಮಾಯೆಯಿಂದ ಬ್ರಹ್ಮಚಾರಿಯಾದ ಭಗವಂತನು ಆ ಯಜ್ಞಶಾಲೆಯನ್ನು ಪ್ರವೇಶಿಸಿದಾಗ ಭೃಗುವಂಶೀ ಬ್ರಾಹ್ಮಣರು ಅವನನ್ನು ನೋಡಿ ತಮ್ಮ ಶಿಷ್ಯರೊಂದಿಗೆ ಅವನ ದಿವ್ಯತೇಜಸ್ಸಿನಿಂದ ನಿಸ್ತೇಜರಾಗಿ ಏನು ಮಾಡಬೇಕೆಂದು ಅರಿಯದೆ ಥಟ್ಟನೆ ಎದ್ದುನಿಂತರು. ತಮ್ಮ ಶಿಷ್ಯನಾದ ಬಲಿಚಕ್ರವರ್ತಿಯೊಡನೆ ಯಜ್ಞೇಶ್ವರನನ್ನು ಮುಂದೆಮಾಡಿಕೊಂಡು ಭೃಗುವಂಶೀಯ ಬ್ರಾಹ್ಮಣರು ಶ್ರೀವಾಮನ ಮೂರ್ತಿಯನ್ನು ಸ್ವಾಗತಿಸಿದರು. ॥24-25॥

(ಶ್ಲೋಕ-26)

ಮೂಲಮ್

ಯಜಮಾನಃ ಪ್ರಮುದಿತೋ
ದರ್ಶನೀಯಂ ಮನೋರಮಮ್ ।
ರೂಪಾನುರೂಪಾವಯವಂ
ತಸ್ಮಾ ಆಸನಮಾಹರತ್ ॥

ಅನುವಾದ

ಭಗವಂತನ ಪುಟ್ಟ ರೂಪಕ್ಕನುಸಾರವಾಗಿ ಎಲ್ಲ ಅವಯವಗಳು ಸಣ್ಣ-ಸಣ್ಣದಾಗಿದ್ದು ಬಹಳ ಮನೋಹರ ಹಾಗೂ ದರ್ಶನೀಯವಾಗಿದ್ದವು. ಅವನನ್ನು ನೋಡಿ ಬಲಿಚಕ್ರವರ್ತಿಗೆ ಪರಮಾನಂದವಾಗಿ ಭಗವಾನ್ ವಾಮನನಿಗೆ ಒಂದು ಉತ್ತಮಾಸನವನ್ನು ನೀಡಿದನು. ॥26॥

(ಶ್ಲೋಕ-27)

ಮೂಲಮ್

ಸ್ವಾಗತೇನಾಭಿನಂದ್ಯಾಥ ಪಾದೌ ಭಗವತೋ ಬಲಿಃ ।
ಅವನಿಜ್ಯಾರ್ಚಯಾಮಾಸ ಮುಕ್ತಸಂಗಮನೋರಮಮ್ ॥

ಅನುವಾದ

ಬಳಿಕ ಬಲಿಯು ಕುಶಲಪ್ರಶ್ನೆಗಳ ಮೂಲಕವಾಗಿ ವಟುವನ್ನು ನಮಸ್ಕರಿಸಿ, ಅವನ ದಿವ್ಯಪಾದಗಳನ್ನು ತೊಳೆದು, ನಿಸ್ಸಂಗರಾದ ಯೋಗಿಗಳ ಮನಸ್ಸಿನಲ್ಲಿ ಸದಾರಮಿಸುವ ಆ ವಾಮನ ಮೂರ್ತಿಯನ್ನು ಯಥಾವಿಧಿಯಾಗಿ ಪ್ರೇಮಾದರಗಳಿಂದ ಪೂಜಿಸಿದನು. ॥27॥

(ಶ್ಲೋಕ-28)

ಮೂಲಮ್

ತತ್ಪಾದಶೌಚಂ ಜನಕಲ್ಮಷಾಪಹಂ
ಸ ಧರ್ಮವಿನ್ಮೂರ್ಧ್ನ್ಯದಧಾತ್ಸುಮಂಗಲಮ್ ।
ಯದ್ದೇವದೇವೋ ಗಿರಿಶಶ್ಚಂದ್ರವೌಲಿ-
ರ್ದಧಾರ ಮೂರ್ಧ್ನಾ ಪರಯಾ ಚ ಭಕ್ತ್ಯಾ ॥

ಅನುವಾದ

ಭಗವಂತನ ಚರಣ ಕಮಲಗಳಪಾದ ತೀರ್ಥವು ಪರಮ ಮಂಗಳಕರವಾದುದು. ಅದರಿಂದ ಜೀವಿಗಳ ಎಲ್ಲ ಪಾಪ-ತಾಪಗಳು ತೊಳೆದುಹೋಗುತ್ತವೆ. ಸ್ವತಃ ದೇವಾಧಿದೇವನಾದ ಚಂದ್ರಮೌಳಿ ಭಗವಾನ್ ಶಂಕರನು ಅತ್ಯಂತ ಭಕ್ತಿಭಾವದಿಂದ ಅದನ್ನು ತನ್ನ ತಲೆಯಲ್ಲಿ ಧರಿಸಿದ್ದನು. ಇಂದು ಅದೇ ಚರಣಾಮೃತವು ಧರ್ಮದ ಮರ್ಮಜ್ಞನಾದ ರಾಜಾಬಲಿಗೆ ಪ್ರಾಪ್ತವಾಯಿತು. ಅವನು ಬಹಳ ಭಕ್ತಿಯಿಂದ ಅದನ್ನು ತನ್ನ ತಲೆಯಮೇಲೆ ಇರಿಸಿಕೊಂಡನು. ॥28॥

(ಶ್ಲೋಕ-29)

ಮೂಲಮ್ (ವಾಚನಮ್)

ಬಲಿರುವಾಚ

ಮೂಲಮ್

ಸ್ವಾಗತಂ ತೇ ನಮಸ್ತುಭ್ಯಂ ಬ್ರಹ್ಮನ್ಕಿಂ ಕರವಾಮ ತೇ ।
ಬ್ರಹ್ಮರ್ಷೀಣಾಂ ತಪಃಸಾಕ್ಷಾನ್ಮನ್ಯೇ ತ್ವಾರ್ಯ ವಪುರ್ಧರಮ್ ॥

ಅನುವಾದ

ಬಲಿಯು ಹೇಳಿದನು ಬ್ರಾಹ್ಮಣವಟುವೇ! ನಿನ್ನನ್ನು ಆದರದಿಂದ ಸ್ವಾಗತಿಸುತ್ತೇನೆ ಮತ್ತು ನಿನಗೆ ನಮಸ್ಕಾರ ಮಾಡುತ್ತೇನೆ. ನಾನು ನಿನಗೆ ಯಾವ ಕಾರ್ಯವನ್ನು ಮಾಡಿ ಕೊಡಲಿ! ನಿನ್ನನ್ನು ನೋಡಿದರೆ ಬ್ರಹ್ಮರ್ಷಿಗಳು ಮಾಡಿದ ತಪಸ್ಸೆಲ್ಲವೂ ಒಂದಾಗಿ ಮೂರ್ತೀಭವಿಸಿ ನನ್ನ ಮುಂದೆ ಬಂದಂತಿದೆ. ॥29॥

(ಶ್ಲೋಕ-30)

ಮೂಲಮ್

ಅದ್ಯ ನಃ ಪಿತರಸ್ತ ೃಪ್ತಾ ಅದ್ಯ ನಃ ಪಾವಿತಂ ಕುಲಮ್ ।
ಅದ್ಯ ಸ್ವಿಷ್ಟಃ ಕ್ರತುರಯಂ ಯದ್ಭವಾನಾಗತೋ ಗೃಹಾನ್ ॥

ಅನುವಾದ

ಮಹಾನುಭಾವನೇ! ಇಂದು ನೀನು ನಮ್ಮ ಮನೆಗೆ ಆಗಮಿಸಿದ್ದರಿಂದ ನಮ್ಮ ಪಿತೃದೇವತೆಗಳು ತೃಪ್ತರಾದರು. ನಮ್ಮ ಕುಲವು ಪವಿತ್ರವಾಯಿತು. ಇಂದಿಗೆ ನಾನು ಮಾಡಿದ ಯಜ್ಞವು ಸಫಲವಾಯಿತು. ॥30॥

ಮೂಲಮ್

(ಶ್ಲೋಕ-31)
ಅದ್ಯಾಗ್ನಯೋ ಮೇ ಸುಹುತಾ ಯಥಾವಿಧಿ
ದ್ವಿಜಾತ್ಮಜ ತ್ವಚ್ಚರಣಾವನೇಜನೈಃ ।
ಹತಾಂಹಸೋ ವಾರ್ಭಿರಿಯಂ ಚ ಭೂರಹೋ
ತಥಾ ಪುನೀತಾ ತನುಭಿಃ ಪದೈಸ್ತವ ॥

ಅನುವಾದ

ಬ್ರಾಹ್ಮಣಕುಮಾರನೇ! ನಿನ್ನ ಪಾದಪ್ರಕ್ಷಾಳನದಿಂದ ನನ್ನ ಪಾಪಗಳೆಲ್ಲವೂ ತೊಳೆದುಹೋದುವು. ವಿಧಿವತ್ತಾಗಿ ಯಜ್ಞಮಾಡುವುದರಿಂದ, ಅಗ್ನಿಯಲ್ಲಿ ಆಹುತಿಗಳನ್ನು ಅರ್ಪಿಸುವುದರಿಂದ ದೊರೆಯಬಹುದಾದ ಫಲವು ಆಯಾಸ ವಿಲ್ಲದೆ ನನಗೆ ದೊರೆಯಿತು. ನಿನ್ನ ಈ ಕೋಮಲವಾದ ಮುದ್ದು ಚರಣಗಳಿಂದ ಮತ್ತು ಇವುಗಳನ್ನು ತೊಳೆದು ದರಿಂದ ಪೃಥಿವಿಯು ಪವಿತ್ರಳಾದಳು. ॥31॥

(ಶ್ಲೋಕ-32)

ಮೂಲಮ್

ಯದ್ಯದ್ವಟೋ ವಾಂಛಸಿ ತತ್ಪ್ರತೀಚ್ಛ ಮೇ
ತ್ವಾಮರ್ಥಿನಂ ವಿಪ್ರಸುತಾನುತರ್ಕಯೇ ।
ಗಾಂ ಕಾಂಚನಂ ಗುಣವದ್ಧಾಮ ಮೃಷ್ಟಂ
ತಥಾನ್ನಪೇಯಮುತ ವಾ ವಿಪ್ರಕನ್ಯಾಮ್ ।
ಗ್ರಾಮಾನ್ಸಮೃದ್ಧಾಂಸ್ತುರಗಾಂಗಜಾನ್ವಾ
ರಥಾಂಸ್ತಥಾರ್ಹತ್ತಮ ಸಂಪ್ರತೀಚ್ಛ ॥

ಅನುವಾದ

ಬ್ರಾಹ್ಮಣ ವಟುವೇ! ನೀನು ಏನೋ ಬಯಸುತ್ತಿರುವೆ ಎಂದು ನನಗೆ ಅನಿಸುತ್ತದೆ. ಪರಮಪೂಜ್ಯ ಬ್ರಹ್ಮಚಾರಿಯೇ! ನೀನು ಬಯಸುವ ಗೋವುಗಳು, ಚಿನ್ನ, ಸಕಲ ಸಾಮಗ್ರಿಗಳಿಂದ ಸುಸಜ್ಜಿತಮನೆ, ಪವಿತ್ರವಾದ ಅನ್ನ, ಕುಡಿಯುವ ವಸ್ತು, ವಿವಾಹಕ್ಕಾಗಿ ಬ್ರಾಹ್ಮಣ ಕನ್ಯೆ, ಸಂಪತ್ಸಮೃದ್ಧವಾದ ಊರು, ಕುದುರೆ, ಆನೆ, ರಥ ಇವೆಲ್ಲವನ್ನು ನನ್ನಿಂದ ಕೇಳಿಕೋ. ನಿನಗೆ ಇಷ್ಟವಾದುದನ್ನು ಅವಶ್ಯವಾಗಿ ಕೇಳಿ ಪಡೆದುಕೋ. ॥32॥

ಅನುವಾದ (ಸಮಾಪ್ತಿಃ)

ಹದಿನೆಂಟನೆಯ ಅಧ್ಯಾಯವು ಮುಗಿಯಿತು. ॥18॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ವಾಮನಪ್ರಾದುರ್ಭಾವೇ ಬಲಿವಾಮನಸಂವಾದೇಷ್ಟಾದಶೋಧ್ಯಾಯಃ ॥18॥