[ಹದಿನೇಳನೆಯ ಅಧ್ಯಾಯ]
ಭಾಗಸೂಚನಾ
ಭಗವಂತನು ಪ್ರತ್ಯಕ್ಷನಾಗಿ ಅದಿತಿಗೆ ವರವನ್ನು ಕೊಡುವುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯುಕ್ತಾ ಸಾದಿತೀ ರಾಜನ್ಸ್ವಭರ್ತ್ರಾ ಕಶ್ಯಪೇನ ವೈ ।
ಅನ್ವತಿಷ್ಠದ್ವ್ರತಮಿದಂ ದ್ವಾದಶಾಹಮತಂದ್ರಿತಾ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ತನ್ನ ಪತಿಯಾದ ಮಹರ್ಷಿ ಕಶ್ಯಪರ ಉಪ ದೇಶವನ್ನು ಪಡೆದ ಅದಿತಿದೇವಿಯು ಬಹಳ ಎಚ್ಚರಿಕೆ ಯಿಂದ ಹನ್ನೆರಡು ದಿನಗಳವರೆಗೆ ಪಯೋವ್ರತವನ್ನು ಆಚರಿಸಿದಳು. ॥1॥
(ಶ್ಲೋಕ-2)
ಮೂಲಮ್
ಚಿಂತಯಂತ್ಯೇಕಯಾ ಬುದ್ಧ್ಯಾ ಮಹಾಪುರುಷಮೀಶ್ವರಮ್ ।
ಪ್ರಗೃಹ್ಯೇಂದ್ರಿಯದುಷ್ಟಾಶ್ವಾನ್ಮನಸಾ ಬುದ್ಧಿಸಾರಥಿಃ ॥
ಅನುವಾದ
ಆಕೆಯು ಬುದ್ಧಿಯನ್ನು ಸಾರಥಿ ಯನ್ನಾಗಿಸಿಕೊಂಡು, ಮನಸ್ಸೆಂಬ ಲಗಾಮಿನಿಂದ ಇಂದ್ರಿಯ ರೂಪವಾದ ತುಂಟಕುದುರೆಗಳನ್ನು ತನ್ನ ವಶಪಡಿಸಿಕೊಂಡು, ಏಕಾಗ್ರಬುದ್ಧಿಯಿಂದ ಪುರುಷೋತ್ತಮನಾದ ಭಗವಂತ ನನ್ನು ಧ್ಯಾನಿಸುತ್ತಿದ್ದಳು. ॥2॥
(ಶ್ಲೋಕ-3)
ಮೂಲಮ್
ಮನಶ್ಚೈಕಾಗ್ರಯಾ ಬುದ್ಧ್ಯಾ ಭಗವತ್ಯಖಿಲಾತ್ಮನಿ ।
ವಾಸುದೇವೇ ಸಮಾಧಾಯ ಚಚಾರ ಹ ಪಯೋವ್ರತಮ್ ॥
ಅನುವಾದ
ಅದಿತಿಯು ಏಕಾಗ್ರವಾದ ಬುದ್ಧಿಯಿಂದ ತನ್ನ ಮನಸ್ಸನ್ನು ಸರ್ವಾತ್ಮನಾದ ಭಗವಾನ್ ವಾಸುದೇವನಲ್ಲಿ ಸಂಪೂರ್ಣವಾಗಿ ತೊಡಗಿಸಿ ಪಯೋ ವ್ರತದ ಅನುಷ್ಠಾನವನ್ನು ಮಾಡಿದಳು. ॥3॥
(ಶ್ಲೋಕ-4)
ಮೂಲಮ್
ತಸ್ಯಾಃ ಪ್ರಾದುರಭೂತ್ತಾತ ಭಗವಾನಾದಿಪೂರುಷಃ ।
ಪೀತವಾಸಾಶ್ಚತುರ್ಬಾಹುಃ ಶಂಖಚಕ್ರಗದಾಧರಃ ॥
ಅನುವಾದ
ಆಗ ಭಗವಾನ್ ಪುರುಷೋತ್ತಮನು ಅವಳ ಮುಂದೆ ಪ್ರಕಟ ನಾದನು. ಪರೀಕ್ಷಿತನೇ! ಆ ಭಗವಂತನು ಪೀತಾಂಬರವನ್ನು ಉಟ್ಟಿದ್ದನು. ಚತುರ್ಭುಜನಾಗಿದ್ದು, ಶಂಖ, ಚಕ್ರ, ಗದೆಗಳನ್ನು ಧರಿಸಿದ್ದನು. ॥4॥
(ಶ್ಲೋಕ-5)
ಮೂಲಮ್
ತಂ ನೇತ್ರಗೋಚರಂ ವೀಕ್ಷ್ಯ ಸಹಸೋತ್ಥಾಯ ಸಾದರಮ್ ।
ನನಾಮ ಭುವಿ ಕಾಯೇನ ದಂಡವತ್ಪ್ರೀತಿವಿಹ್ವಲಾ ॥
ಅನುವಾದ
ತನ್ನ ಕಣ್ಮುಂದೆ ನಿಂತಿದ್ದ ಭಗವಂತನನ್ನು ಸಾಕ್ಷಾತ್ತಾಗಿ ನೋಡಿದ ಅದಿತಿದೇವಿಯು ಒಡನೆಯೇ ಆದರದಿಂದ ಎದ್ದು ನಿಂತು, ಪ್ರೇಮ ಪರವಶಳಾಗಿ ಭೂಮಿಯ ಮೇಲೆ ದೀರ್ಘದಂಡ ನಮಸ್ಕಾರವನ್ನು ಮಾಡಿದಳು. ॥5॥
(ಶ್ಲೋಕ-6)
ಮೂಲಮ್
ಸೋತ್ಥಾಯ ಬದ್ಧಾಂಜಲಿರೀಡಿತುಂ ಸ್ಥಿತಾ
ನೋತ್ಸೇಹ ಆನಂದಜಲಾಕುಲೇಕ್ಷಣಾ ।
ಬಭೂವ ತೂಷ್ಣೀಂ ಪುಲಕಾಕುಲಾಕೃತಿ-
ಸ್ತದ್ದರ್ಶನಾತ್ಯುತ್ಸವಗಾತ್ರವೇಪಥುಃ ॥
ಅನುವಾದ
ಮತ್ತೆ ಮೇಲೆದ್ದು ಕೈಜೋಡಿಸಿಕೊಂಡು ಭಗವಂತ ನನ್ನು ಸ್ತುತಿಸಲು ಪ್ರಯತ್ನಿಸಿದಳು. ಆದರೆ ಕಣ್ಣುಗಳಲ್ಲಿ ಆನಂದ ಬಾಷ್ಪಗಳು ಉಕ್ಕಿಹರಿಯುತ್ತಿದ್ದುದರಿಂದ, ಕಂಠ ತುಂಬಿಬಂತು. ಮಾತನಾಡಲಾಗಲಿಲ್ಲ,. ಶರೀರವಿಡೀ ಪುಳಕಿತವಾಗಿತ್ತು. ದರ್ಶನದ ಆನಂದೋಲ್ಲಾಸದಿಂದ ಅವಳ ಶರೀರವು ನಡುಗುತ್ತಿತ್ತು. ಸ್ತುತಿಸಲಾರದೆ ಅವಳು ಸುಮ್ಮನೆ ನಿಂತಿದ್ದಳು. ॥6॥
(ಶ್ಲೋಕ-7)
ಮೂಲಮ್
ಪ್ರೀತ್ಯಾ ಶನೈರ್ಗದ್ಗದಯಾ ಗಿರಾ ಹರಿಂ
ತುಷ್ಟಾವ ಸಾ ದೇವ್ಯದಿತಿಃ ಕುರೂದ್ವಹ ।
ಉದ್ವೀಕ್ಷತೀ ಸಾ ಪಿಬತೀವ ಚಕ್ಷುಷಾ
ರಮಾಪತಿಂ ಯಜ್ಞಪತಿಂ ಜಗತ್ಪತಿಮ್ ॥
ಅನುವಾದ
ಪರೀಕ್ಷಿತನೇ! ಲಕ್ಷ್ಮೀಪತಿಯೂ, ಜಗತ್ಪತಿಯೂ, ಯಜ್ಞಪತಿಯೂ ಆದ ಭಗವಂತನನ್ನು ಕಣ್ಣು ಗಳಿಂದಲೇ ಕುಡಿದುಬಿಡುವಳೋ ಎಂಬಂತೆ ಅದಿತಿಯು ತನ್ನ ಕಣ್ಣುಗಳಿಂದ ಪ್ರೇಮಪೂರ್ಣವಾಗಿ ನೋಡುತ್ತಿದ್ದಳು. ಅನಂತರ ಪ್ರೀತಿಯಿಂದ ಗದ್ಗದವಾದ ಮಾತುಗಳಿಂದ ಮೆಲ್ಲ-ಮೆಲ್ಲನೆ ಶ್ರೀಭಗವಂತನನ್ನು ಸ್ತುತಿಸಿದಳು. ॥7॥
(ಶ್ಲೋಕ-8)
ಮೂಲಮ್ (ವಾಚನಮ್)
ಅದಿತಿರುವಾಚ
ಮೂಲಮ್
ಯಜ್ಞೇಶ ಯಜ್ಞಪುರುಷಾಚ್ಯುತ ತೀರ್ಥಪಾದ
ತೀರ್ಥಶ್ರವಃ ಶ್ರವಣಮಂಗಲನಾಮಧೇಯ ।
ಆಪನ್ನಲೋಕವೃಜಿನೋಪಶಮೋದಯಾದ್ಯ
ಶಂ ನಃ ಕೃಧೀಶ ಭಗವನ್ನಸಿ ದೀನನಾಥಃ ॥
ಅನುವಾದ
ಅದಿತಿದೇವಿಯು ಹೇಳಿದಳು — ಓ ಯಜ್ಞೇಶ್ವರನೇ! ಯಜ್ಞಪುರುಷನೇ! ಅಚ್ಯುತನೇ! ತೀರ್ಥಶ್ರೇಷ್ಠವಾದ ಗಂಗಾನದಿಯನ್ನು ಪಾದಗಳಲ್ಲಿ ಧರಿಸಿರುವವನೇ! ಪುಣ್ಯ ಕೀರ್ತಿಯೇ! ಶ್ರವಣಮಾತ್ರದಿಂದಲೇ ಮಂಗಳವನ್ನುಂಟು ಮಾಡುವ ನಾಮಾವಳಿಗಳುಳ್ಳವನೇ! ಶರಣಾಗತರ ಪಾಪಗಳನ್ನು ಹೋಗಲಾಡಿಸುವುದಕ್ಕಾಗಿಯೇ ಅವತರಿಸಿ ರುವವನೇ! ಆದಿಪುರುಷನೇ! ನೀನು ದೀನರಿಗೆ ನಾಥನಾಗಿರುವೆ. ನೀನು ನಮಗೆ ಮಂಗಳವನ್ನುಂಟು ಮಾಡು. ॥8॥
(ಶ್ಲೋಕ-9)
ಮೂಲಮ್
ವಿಶ್ವಾಯ ವಿಶ್ವಭವನಸ್ಥಿತಿಸಂಯಮಾಯ
ಸ್ವೈರಂ ಗೃಹೀತಪುರುಶಕ್ತಿಗುಣಾಯ ಭೂಮ್ನೇ ।
ಸ್ವಸ್ಥಾಯ ಶಶ್ವದುಪಬೃಂಹಿತಪೂರ್ಣಬೋಧ-
ವ್ಯಾಪಾದಿತಾತ್ಮ ತಮಸೇ ಹರಯೇ ನಮಸ್ತೇ ॥
ಅನುವಾದ
ನೀನು ವಿಶ್ವದ ಉತ್ಪತ್ತಿ, ಸ್ಥಿತಿ ಮತ್ತು ಪ್ರಳಯಗಳಿಗೆ ಕಾರಣನಾಗಿರುವೆ. ವಿಶ್ವರೂಪನೂ ನೀನೇ ಆಗಿರುವೆ. ಅನಂತ ನಾಗಿದ್ದರೂ ಸ್ವೇಚ್ಛೆಯಿಂದ ನೀನು ಅನೇಕ ಶಕ್ತಿಗಳನ್ನು ಮತ್ತು ಗುಣಗಳನ್ನು ಸ್ವೀಕರಿಸುತ್ತೀಯೆ. ನೀನು ಸದಾ ನಿನ್ನ ಸ್ವರೂಪ ದಲ್ಲೇ ನೆಲೆಸಿರುತ್ತೀಯೆ. ನಿತ್ಯ-ನಿರಂತರ ಬೆಳೆಯುತ್ತಿರುವ ಪೂರ್ಣ ಬೋಧದಿಂದ ನೀನು ಹೃದಯದ ಅಂಧಕಾರವನ್ನು ನಾಶಮಾಡಿ ಬಿಡುತ್ತೀಯೆ. ಭಗವಂತಾ! ನಾನು ನಿನಗೆ ನಮಸ್ಕರಿಸುತ್ತೇನೆ. ॥9॥
(ಶ್ಲೋಕ-10)
ಮೂಲಮ್
ಆಯುಃ ಪರಂ ವಪುರಭೀಷ್ಟಮತುಲ್ಯ ಲಕ್ಷ್ಮೀ-
ರ್ದ್ಯೌಭೂರಸಾಃ ಸಕಲಯೋಗಗುಣಾಸಿವರ್ಗಃ ।
ಜ್ಞಾನಂ ಚ ಕೇವಲಮನಂತ ಭವಂತಿ ತುಷ್ಟಾ-
ತ್ತ್ವತ್ತೋ ನೃಣಾಂ ಕಿಮು ಸಪತ್ನಜಯಾದಿರಾಶೀಃ ॥
ಅನುವಾದ
ಪ್ರಭೋ! ಅನಂತನೇ! ನೀನು ಸಂತುಷ್ಟನಾದಲ್ಲಿ ದೀರ್ಘಾಯುಷ್ಯವೂ, ಇಷ್ಟವಾದ ಶರೀರವೂ, ಅಸದೃಶವಾದ ಐಶ್ವರ್ಯವೂ, ಸ್ವರ್ಗ, ಮರ್ತ್ಯ, ಪಾತಾಳಲೋಕಗಳು, ಯೋಗದ ಸಮಸ್ತ ಸಿದ್ಧಿಗಳೂ, ಧರ್ಮಾರ್ಥಕಾಮಗಳೂ, ಇವೆಲ್ಲಕ್ಕಿಂತಲೂ ಮಿಗಿಲಾದ ಅಪರೋಕ್ಷ ಜ್ಞಾನವೂ ಮನುಷ್ಯರಿಗೆ ಪ್ರಾಪ್ತವಾಗುತ್ತದೆ. ಹೀಗಿರುವಾಗ ಶತ್ರುಜಯವೇ ಮೊದಲಾದ ಸಣ್ಣ-ಪುಟ್ಟ ಕೋರಿಕೆಗಳ ವಿಷಯದಲ್ಲಿ ಹೇಳುವುದೇನಿದೆ? ॥10॥
ಮೂಲಮ್
(ಶ್ಲೋಕ-11)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅದಿತ್ಯೈವಂ ಸ್ತುತೋ ರಾಜನ್ಭಗವಾನ್ಪುಷ್ಕರೇಕ್ಷಣಃ ।
ಕ್ಷೇತ್ರಜ್ಞಃ ಸರ್ವಭೂತಾನಾಮಿತಿ ಹೋವಾಚ ಭಾರತ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಅದಿತಿಯು ಕಮಲನಯನ ಭಗವಂತನನ್ನು ಹೀಗೆ ಸ್ತುತಿಸಿದಾಗ ಸಮಸ್ತ ಪ್ರಾಣಿಗಳ ಹೃದಯದಲ್ಲಿ ಅಂತರ್ಯಾಮಿಯಾಗಿರುವ ಭಗವಂತನು ಇಂತೆಂದನು ॥11॥
(ಶ್ಲೋಕ-12)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ದೇವಮಾತರ್ಭವತ್ಯಾ ಮೇ ವಿಜ್ಞಾತಂ ಚಿರಕಾಂಕ್ಷಿತಮ್ ।
ಯತ್ಸಪತ್ನೈರ್ಹೃತಶ್ರೀಣಾಂ ಚ್ಯಾವಿತಾನಾಂ ಸ್ವಧಾಮತಃ ॥
ಅನುವಾದ
ಶ್ರೀಭಗವಂತನು ಹೇಳಿದನು — ಎಲೈ ದೇವಮಾತೆಯಾದ ಅದಿತಿಯೇ! ನಿನ್ನ ಮನಸ್ಸಿನಲ್ಲಿ ಬಹಳ ಕಾಲದಿಂದಿ ರುವ ಆಶಯವನ್ನು ನಾನು ಬಲ್ಲೆನು. ಶತ್ರುಗಳು ನಿನ್ನ ಮಕ್ಕಳ ಸಂಪತ್ತನ್ನು ಅಪಹರಿಸಿರುವುದಲ್ಲದೆ ಅವರನ್ನು ಅವರ ಲೋಕ(ಸ್ವರ್ಗ)ದಿಂದ ಓಡಿಸಿಬಿಟ್ಟಿದ್ದಾರೆ. ॥12॥
(ಶ್ಲೋಕ-13)
ಮೂಲಮ್
ತಾನ್ವಿನಿರ್ಜಿತ್ಯ ಸಮರೇ ದುರ್ಮದಾನಸುರರ್ಷಭಾನ್ ।
ಪ್ರತಿಲಬ್ಧಜಯಶ್ರೀಭಿಃ ಪುತ್ರೈರಿಚ್ಛಸ್ಯುಪಾಸಿತುಮ್ ॥
ಅನುವಾದ
ಯುದ್ಧದಲ್ಲಿ ನಿನ್ನ ಮಕ್ಕಳು ಆ ಕೊಬ್ಬಿರುವ ಅಸುರರನ್ನು, ಬಲಿಯನ್ನು ಗೆದ್ದು ವಿಜಯಲಕ್ಷ್ಮಿಯನ್ನು ಪಡೆದುಕೊಂಡಾಗ ನೀನು ಅವರೊಂದಿಗೆ ಭಗವಂತನ ಉಪಾಸನೆ ಮಾಡಬೇಕೆಂದು ಬಯಸುತ್ತಿರುವೆ. ॥13॥
(ಶ್ಲೋಕ-14)
ಮೂಲಮ್
ಇಂದ್ರಜ್ಯೇಷ್ಠೈಃ ಸ್ವತನಯೈರ್ಹತಾನಾಂ ಯುಧಿ ವಿದ್ವಿಷಾಮ್ ।
ಸಿಯೋ ರುದಂತೀರಾಸಾದ್ಯ ದ್ರಷ್ಟುಮಿಚ್ಛಸಿ ದುಃಖಿತಾಃ ॥
ಅನುವಾದ
ಇಂದ್ರನೇ ಮೊದಲಾದ ನಿನ್ನ ಪುತ್ರರು ಶತ್ರುಗಳನ್ನು ಕೊಂದುಹಾಕಿದಾಗ ನೀವು ಆ ದೈತ್ಯಸ್ತ್ರೀಯರು ದುಃಖದಿಂದ ಅಳುವುದನ್ನು ಕಣ್ಣಾರೆ ಕಾಣಬೇಕೆಂಬುದೂ ನಿನ್ನ ಬಯಕೆಯಾಗಿದೆ. ॥14॥
(ಶ್ಲೋಕ-15)
ಮೂಲಮ್
ಆತ್ಮಜಾನ್ಸುಸಮೃದ್ಧಾಂಸ್ತ್ವಂ ಪ್ರತ್ಯಾಹೃತಯಶಃಶ್ರಿಯಃ ।
ನಾಕಪೃಷ್ಠಮಧಿಷ್ಠಾಯ ಕ್ರೀಡತೋ ದ್ರಷ್ಟುಮಿಚ್ಛಸಿ ॥
ಅನುವಾದ
ಅದಿತಿಯೇ! ಯುದ್ಧದಲ್ಲಿ ದೈತ್ಯರನ್ನು ಗೆದ್ದು ಕಳೆದು ಹೋಗಿದ್ದ ಕೀರ್ತಿ, ಐಶ್ವರ್ಯವನ್ನು ಪುನಃ ಪಡೆದುಕೊಂಡು ಸಕಲೈಶ್ವರ್ಯ ಸಂಪನ್ನರಾಗಿ ಸ್ವರ್ಗಲೋಕದಲ್ಲಿ ಪುನಃ ನೆಲೆಸಿ ಹಿಂದಿನಂತೆ ವಿಹರಿಸಬೇಕೆಂಬುದನ್ನೂ ಬಯಸುತ್ತಿರುವೆಯಲ್ಲ! ॥15॥
(ಶ್ಲೋಕ-16)
ಮೂಲಮ್
ಪ್ರಾಯೋಧುನಾ ತೇಸುರಯೂಥನಾಥಾ
ಅಪಾರಣೀಯಾ ಇತಿ ದೇವಿ ಮೇ ಮತಿಃ ।
ಯತ್ತೇನುಕೂಲೇಶ್ವರವಿಪ್ರಗುಪ್ತಾ
ನ ವಿಕ್ರಮಸ್ತತ್ರ ಸುಖಂ ದದಾತಿ ॥
ಅನುವಾದ
ಆದರೆ ದೇವೀ! ಆ ಅಸುರ ಸೇನಾಪತಿಗಳನ್ನು ಈ ಸಮಯದಲ್ಲಿ ಜಯಿಸಲು ಸಾಧ್ಯವಾಗದೆಂದು ನನಗೆ ಅನಿಸುತ್ತದೆ. ಏಕೆಂದರೆ, ಈಶ್ವರನು ಮತ್ತು ಬ್ರಾಹ್ಮಣರು ಈಗ ಅವರಿಗೆ ಅನುಕೂಲರಾಗಿದ್ದಾರೆ. ಈಗಲಂತೂ ಅವರೊಂದಿಗೆ ಯುದ್ಧಹೂಡಿದರೆ ಅವರಿಂದ ಸುಖಸಿಗುವ ಆಸೆ ಇಲ್ಲ. ॥16॥
(ಶ್ಲೋಕ-17)
ಮೂಲಮ್
ಅಥಾಪ್ಯುಪಾಯೋ ಮಮ ದೇವಿ ಚಿಂತ್ಯಃ
ಸಂತೋಷಿತಸ್ಯ ವ್ರತಚರ್ಯಯಾ ತೇ ।
ಮಮಾರ್ಚನಂ ನಾರ್ಹತಿ ಗಂತುಮನ್ಯಥಾ
ಶ್ರದ್ಧಾನುರೂಪಂ ಲಹೇತುಕತ್ವಾತ್ ॥
ಅನುವಾದ
ಹೀಗಿದ್ದರೂ ದೇವಿ! ನಿನ್ನ ಈ ವ್ರತಾನುಷ್ಠಾನದಿಂದ ನಾನು ಬಹಳ ಪ್ರಸನ್ನನಾಗಿರುವೆನು. ಅದಕ್ಕಾಗಿ ಈ ಸಂಬಂಧವಾಗಿ ನನಗೆ ಏನಾದರೂ ಉಪಾಯ ಮಾಡಲೇ ಬೇಕಾಗಿದೆ. ಏಕೆಂದರೆ, ನನ್ನ ಆರಾಧನೆಯು ವ್ಯರ್ಥವಾಗಬಾರದು. ಅದರಿಂದ ಶ್ರದ್ಧೆಗನುಸಾರವಾಗಿ ಫಲವು ಅವಶ್ಯವಾಗಿ ಸಿಗುತ್ತದೆ. ॥17॥
(ಶ್ಲೋಕ-18)
ಮೂಲಮ್
ತ್ವಯಾರ್ಚಿತಶ್ಚಾಹಮಪತ್ಯಗುಪ್ತಯೇ
ಪಯೋವ್ರತೇನಾನುಗುಣಂ ಸಮೀಡಿತಃ ।
ಸ್ವಾಂಶೇನ ಪುತ್ರತ್ವಮುಪೇತ್ಯ ತೇ ಸುತಾನ್
ಗೋಪ್ತಾಸ್ಮಿ ಮಾರೀಚತಪಸ್ಯಧಿಷ್ಠಿತಃ ॥
ಅನುವಾದ
ನೀನು ನಿನ್ನ ಪುತ್ರರ ರಕ್ಷಣೆಗಾಗಿಯೇ ವಿಧಿವತ್ತಾಗಿ ಪಯೋ ವ್ರತದಿಂದ ನನ್ನ ಪೂಜೆ-ಸ್ತುತಿ ಮಾಡಿರುವೆ. ಆದ್ದರಿಂದ ನಾನು ಅಂಶರೂಪದಿಂದ ಕಶ್ಯಪರ ತಪಸ್ಸಿನಲ್ಲಿ ನೆಲೆಸಿ ನಿನ್ನ ಪುತ್ರನಾಗಿ ಅವತರಿಸಿ ನಿನ್ನ ಸಂತಾನವನ್ನು ರಕ್ಷಿಸುವೆನು. ॥18॥
(ಶ್ಲೋಕ-19)
ಮೂಲಮ್
ಉಪಧಾವ ಪತಿಂ ಭದ್ರೇ ಪ್ರಜಾಪತಿಮಕಲ್ಮಷಮ್ ।
ಮಾಂ ಚ ಭಾವಯತೀ ಪತ್ಯಾವೇವಂರೂಪಮವಸ್ಥಿತಮ್ ॥
ಅನುವಾದ
ಕಲ್ಯಾಣೀ! ನೀನು ನಿನ್ನ ಪತಿಯಾದ ಕಶ್ಯಪರಲ್ಲಿ ನನ್ನನ್ನು ಇದೇ ರೂಪದಿಂದ ನೆಲೆಸಿರುವನೆಂದು ತಿಳಿದು, ಪಾಪರಹಿತರಾದ ಪ್ರಜಾಪತಿಯ ಸೇವೆಯನ್ನು ಮಾಡು.॥19॥
(ಶ್ಲೋಕ-20)
ಮೂಲಮ್
ನೈತತ್ಪರಸ್ಮಾ ಆಖ್ಯೇಯಂ ಪೃಷ್ಟಯಾಪಿ ಕಥಂಚನ ।
ಸರ್ವಂ ಸಂಪದ್ಯತೇ ದೇವಿ ದೇವಗುಹ್ಯಂ ಸುಸಂವೃತಮ್ ॥
ಅನುವಾದ
ದೇವೀ! ನೋಡು, ಯಾರು ಕೇಳಿದರೂ ಈ ಮಾತನ್ನು ಇತರರಿಗೆ ಹೇಳಬೇಡ. ದೇವತೆಗಳ ರಹಸ್ಯ ಗುಪ್ತವಾದಷ್ಟು ಸಫಲವಾಗುತ್ತದೆ. ॥20॥
(ಶ್ಲೋಕ-21)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏತಾವದುಕ್ತ್ವಾ ಭಗವಾಂಸ್ತತತ್ರೈವಾಂತರಧೀಯತ ।
ಅದಿತಿರ್ದುರ್ಲಭಂ ಲಬ್ಧ್ವಾ ಹರೇರ್ಜನ್ಮಾತ್ಮನಿ ಪ್ರಭೋಃ ॥
(ಶ್ಲೋಕ-22)
ಮೂಲಮ್
ಉಪಾಧಾವತ್ಪತಿಂ ಭಕ್ತ್ಯಾ ಪರಯಾ ಕೃತಕೃತ್ಯವತ್ ।
ಸ ವೈ ಸಮಾಧಿಯೋಗೇನ ಕಶ್ಯಪಸ್ತದಬುಧ್ಯತ ॥
(ಶ್ಲೋಕ-23)
ಮೂಲಮ್
ಪ್ರವಿಷ್ಟಮಾತ್ಮನಿ ಹರೇರಂಶಂ ಹ್ಯವಿತಥೇಕ್ಷಣಃ ।
ಸೋದಿತ್ಯಾಂ ವೀರ್ಯಮಾಧತ್ತ ತಪಸಾ ಚಿರಸಂಭೃತಮ್ ।
ಸಮಾಹಿತಮನಾ ರಾಜನ್ದಾರುಣ್ಯಗ್ನಿಂ ಯಥಾನಿಲಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಭಗವಂತನು ಹೀಗೆ ಹೇಳಿ ಅಲ್ಲಿಯೇ ಅಂತರ್ಧಾನನಾದನು. ಆ ಸಮಯದಲ್ಲಿ ಸ್ವಯಂ ಭಗವಂತನೇ ನನ್ನ ಗರ್ಭದಿಂದ ಅವತರಿಸುವನು ಎಂದು ತಿಳಿದು, ತಾನು ಕೃತಕೃತ್ಯಳಾದೆನೆಂದು ಭಾವಿಸಿದಳು. ಇದೆಂತಹ ದುರ್ಲಭವಾದ ಮಾತು. ಅವಳು ಬಹಳ ಪ್ರೀತಿಯಿಂದ ಪತಿಯಾದ ಕಶ್ಯಪರನ್ನು ಸೇವೆ ಮಾಡತೊಡಗಿದಳು. ಕಶ್ಯಪರು ಸತ್ಯದರ್ಶಿಗಳಾಗಿದ್ದರು. ಅವರಿಂದ ಮರೆಯಾದ ಯಾವ ಮಾತೂ ಇರಲಿಲ್ಲ. ಭಗವಂತನು ತನ್ನ ಅಂಶದಿಂದ ನನ್ನೊಳಗೆ ಪ್ರವೇಶಿಸಿರುವನೆಂದು ಅವರು ಸಮಾಧಿಯೋಗದಿಂದ ತಿಳಿದುಕೊಂಡರು. ವಾಯುವು ಪ್ರಚಂಡವಾಗಿ ಬೀಸುತ್ತಾ ಬಿದಿರುಗಳ ಘರ್ಷಣೆಯಿಂದ ಅಗ್ನಿಯನ್ನು ಹುಟ್ಟಿಸುವಂತೆಯೇ ಕಶ್ಯಪರು ತಪಸ್ಸು ಮಾಡುತ್ತಾ ಬಹಳ ಕಾಲದಿಂದ ಧರಿಸಿದ್ದ ರೇತಸ್ಸನ್ನು ಅದಿತಿ ದೇವಿಯ ಗರ್ಭದಲ್ಲಿರಿಸಿದರು.॥21-23॥
(ಶ್ಲೋಕ-24)
ಮೂಲಮ್
ಅದಿತೇರ್ಧಿಷ್ಟಿತಂ ಗರ್ಭಂ ಭಗವಂತಂ ಸನಾತನಮ್ ।
ಹಿರಣ್ಯಗರ್ಭೋ ವಿಜ್ಞಾಯ ಸಮೀಡೇ ಗುಹ್ಯನಾಮಭಿಃ ॥
ಅನುವಾದ
ಅದಿತಿಯ ಗರ್ಭದಲ್ಲಿ ಅವಿನಾಶಿಯಾದ ಭಗವಂತನು ನೆಲೆಸಿರುವನೆಂದು ತಿಳಿದ ಬ್ರಹ್ಮದೇವರು ಬ್ರಹ್ಮಪ್ರತಿಪಾದಕವಾದ ಸ್ತೋತ್ರಗಳಿಂದ ಆ ಶ್ರೀಹರಿಯನ್ನು ಹೊಗಳತೊಡಗಿದರು. ॥24॥
(ಶ್ಲೋಕ-25)
ಮೂಲಮ್ (ವಾಚನಮ್)
ಬ್ರಹ್ಮೋವಾಚ
ಮೂಲಮ್
ಜಯೋರುಗಾಯ ಭಗವನ್ನುರುಕ್ರಮ ನಮೋಸ್ತು ತೇ ।
ನಮೋ ಬ್ರಹ್ಮಣ್ಯದೇವಾಯ ತ್ರಿಗುಣಾಯ ನಮೋ ನಮಃ ॥
ಅನುವಾದ
ಬ್ರಹ್ಮದೇವರು ಹೇಳಿದರು — ಸಮಗ್ರ ಕೀರ್ತಿಗೂ ಆಶ್ರಯ ನಾಗಿರುವ ಭಗವಂತನೇ! ನಿನಗೆ ಜಯವಾಗಲೀ. ಅನಂತ ಶಕ್ತಿಗಳಿಗೆ ಅಧಿಷ್ಠಾನನಾಗಿರುವವನೇ! ನಿನ್ನ ಚರಣಕಮಲಗಳಿಗೆ ನಮಸ್ಕರಿಸುತ್ತೇನೆ. ಬ್ರಾಹ್ಮಣರಿಗೆ ಹಿತವಾಗಿರುವವನೇ! ತ್ರಿಗುಣಗಳ ನಿಯಾಮಕನೇ! ನಿನ್ನ ಅಡಿದಾವರೆಗಳಲ್ಲಿ ಬಾರಿ-ಬಾರಿಗೂ ನಮಸ್ಕರಿಸುತ್ತೇನೆ. ॥25॥
(ಶ್ಲೋಕ-26)
ಮೂಲಮ್
ನಮಸ್ತೇ ಪೃಶ್ನಿಗರ್ಭಾಯ ವೇದಗರ್ಭಾಯ ವೇಧಸೇ ।
ತ್ರಿನಾಭಾಯ ತ್ರಿಪೃಷ್ಠಾಯ ಶಿಪಿವಿಷ್ಟಾಯ ವಿಷ್ಣವೇ ॥
ಅನುವಾದ
ಪ್ರಶ್ನಿ ಎಂಬುವಳಿಗೆ ಪುತ್ರರೂಪದಲ್ಲಿ ಹುಟ್ಟಿರುವವನೇ! ವೇದಗಳ ಸಮಸ್ತ ಜ್ಞಾನವನ್ನು ನಿನ್ನೊಳಗೆ ಇರಿಸಿಕೊಂಡಿರುವ ಸ್ವಾಮಿಯೇ! ವಾಸ್ತವವಾಗಿ ನೀನೇ ಎಲ್ಲರ ವಿಧಾತೃವಾಗಿರುವೆ. ನಿನಗೆ ನಾನು ಮತ್ತೆ-ಮತ್ತೆ ನಮಸ್ಕರಿಸುತ್ತೇನೆ. ಮೂರೂ ಲೋಕಗಳೂ ನಿನ್ನ ನಾಭಿಯಲ್ಲಿ ನೆಲೆಸಿವೆ. ಮೂರೂ ಲೋಕಗಳಿಗೂ ಅತೀತವಾದ ವೈಕುಂಠದಲ್ಲಿ ನೀನು ಸದಾ ವಿರಾಜಮಾನನಾಗಿರುವೆ. ಸಕಲ ಜೀವರ ಅಂತಃಕರಣದಲ್ಲಿ ಅಂತರ್ಯಾಮಿಯಾಗಿ ನೆಲೆಸಿರುವೆ. ಇಂತಹ ಸರ್ವವ್ಯಾಪಕ ವಿಷ್ಣುವಿಗೆ ನಾನು ನಮಸ್ಕರಿಸುತ್ತೇನೆ. ॥26॥
(ಶ್ಲೋಕ-27)
ಮೂಲಮ್
ತ್ವಮಾದಿರಂತೋ ಭುವನಸ್ಯ ಮಧ್ಯ-
ಮನಂತಶಕ್ತಿಂ ಪುರುಷಂ ಯಮಾಹುಃ ।
ಕಾಲೋ ಭವಾನಾಕ್ಷಿಪತೀಶ ವಿಶ್ವಂ
ಸ್ರೋತ್ರೋ ಯಥಾಂತಃ ಪತಿತಂ ಗಭೀರಮ್ ॥
ಅನುವಾದ
ಪ್ರಭೋ! ನೀನೇ ಜಗತ್ತಿನ ಆದಿಯೂ, ಅಂತ್ಯನೂ ಆಗಿರುವುದರಿಂದ ಮಧ್ಯದಲ್ಲಿಯೂ ನೀನೇ ಇರುವೆ. ಇದರಿಂದಲೇ ವೇದಗಳು ನಿನ್ನನ್ನು ಅನಂತ ಶಕ್ತಿಯುಳ್ಳ ಪುರುಷನೆಂದು ಕೊಂಡಾಡುತ್ತವೆ. ಆಳವಾದ ನೀರಿನ ಸುಳಿಯು ಅದರಲ್ಲಿ ಬಿದ್ದ ಪದಾರ್ಥವನ್ನು ಒಳಗೆ ಸಳೆದುಕೊಳ್ಳುವಂತೆಯೇ ನೀನು ಕಾಲರೂಪದಿಂದ ಈ ಜಗತ್ತನ್ನು ಪ್ರಳಯಕಾಲದಲ್ಲಿ ಒಳಕ್ಕೆ ಸೆಳೆದುಕೊಳ್ಳುವೆ. ॥27॥
(ಶ್ಲೋಕ-28)
ಮೂಲಮ್
ತ್ವಂ ವೈ ಪ್ರಜಾನಾಂ ಸ್ಥಿರಜಂಗಮಾನಾಂ
ಪ್ರಜಾಪತೀನಾಮಸಿ ಸಂಭವಿಷ್ಣುಃ ।
ದಿವೌಕಸಾಂ ದೇವ ದಿವಶ್ಚ್ಯುತಾನಾಂ
ಪರಾಯಣಂ ನೌರಿವ ಮಜ್ಜತೋಪ್ಸು ॥
ಅನುವಾದ
ಚರಾಚರ ಪ್ರಜೆಗಳನ್ನೂ, ಪ್ರಜಾಪತಿಗಳನ್ನೂ ಉಂಟು ಮಾಡುವ ಮೂಲ ಕಾರಣನು ನೀನೇ ಆಗಿರುವೆ. ದೇವಾಧಿದೇವಾ! ನೀರಿನಲ್ಲಿ ಮುಳುಗುವವನಿಗೆ ದೋಣಿಯು ಆಸರೆಯಾಗಿರುವಂತೆ, ಸ್ವರ್ಗದಿಂದ ಓಡಿಸಿದ ದೇವತೆಗಳಿಗೆ ಏಕಮಾತ್ರ ಆಶ್ರಯವು ನೀನೇ ಆಗಿರುವೆ. ॥28॥
ಅನುವಾದ (ಸಮಾಪ್ತಿಃ)
ಹದಿನೇಳನೆಯ ಅಧ್ಯಾಯವು ಮುಗಿಯಿತು. ॥17॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ವಾಮನಪ್ರಾದುರ್ಭಾವೇ ಸಪ್ತದಶೋಧ್ಯಾಯಃ ॥17॥