೧೫

[ಹದಿನೈದನೆಯ ಅಧ್ಯಾಯ]

ಭಾಗಸೂಚನಾ

ಬಲಿಚಕ್ರವರ್ತಿಯು ಸ್ವರ್ಗವನ್ನು ಜಯಿಸಿದುದು ವಾಮನಾವತಾರದ ಕಥೆ

(ಶ್ಲೋಕ-1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಬಲೇಃ ಪದತ್ರಯಂ ಭೂಮೇಃ ಕಸ್ಮಾದ್ಧರಿರಯಾಚತ ।
ಭೂತ್ವೇಶ್ವರಃ ಕೃಪಣವಲ್ಲಬ್ಧಾರ್ಥೋಪಿ ಬಬಂಧ ತಮ್ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಪೂಜ್ಯರೇ! ಶ್ರೀಹರಿಯು ಸ್ವಯಂ ಎಲ್ಲರಿಗೂ ಸ್ವಾಮಿಯಾಗಿದ್ದಾನೆ. ಹೀಗಿರುವಾಗ ಅವನು ದೀನನಂತೆ ಬಲಿಚಕ್ರವರ್ತಿಯ ಬಳಿ ಮೂರು ಹೆಜ್ಜೆ ಭೂಮಿಯನ್ನು ಏಕೆ ಬೇಡಿದನು? ಬೇಡಿದುದನ್ನು ಪಡೆದು ಕೊಂಡ ಮೇಲೆ ಶ್ರೀಹರಿಯು ಬಲಿಯನ್ನು ಏಕೆ ಬಂಧಿಸಿದನು? ॥1॥

(ಶ್ಲೋಕ-2)

ಮೂಲಮ್

ಏತದ್ವೇದಿತುಮಿಚ್ಛಾಮೋ ಮಹತ್ಕೌತೂಹಲಂ ಹಿ ನಃ ।
ಯಜ್ಞೇಶ್ವರಸ್ಯ ಪೂರ್ಣಸ್ಯ ಬಂಧನಂ ಚಾಪ್ಯನಾಗಸಃ ॥

ಅನುವಾದ

ಪರಿಪೂರ್ಣಸ್ವರೂಪನೂ, ಯಜ್ಞೇ ಶ್ವರನೂ ಆದ ಭಗವಂತನು ಯಾಚಿಸಿದ್ದು ಮತ್ತು ನಿರಪರಾಧಿಯಾದ ಬಲಿಯನ್ನು ಬಂಧಿಸಿದ್ದು ಇವೆರಡೂ ನನಗೆ ಬಹಳ ಅಚ್ಚರಿಯುಂಟುಮಾಡಿದೆ. ಇದು ಹೇಗೆ ಸಂಭ ವಿಸಿತು? ಇವೆಲ್ಲವನ್ನು ನಾವು ಕೇಳಲು ಬಯಸುತ್ತೇವೆ.॥2॥

(ಶ್ಲೋಕ-3)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಪರಾಜಿತಶ್ರೀರಸುಭಿಶ್ಚ ಹಾಪಿತೋ
ಹೀಂದ್ರೇಣ ರಾಜನ್ಭೃಗುಭಿಃ ಸ ಜೀವಿತಃ ।
ಸರ್ವಾತ್ಮನಾ ತಾನಭಜದ್ಭೃಗೂನ್ಬಲಿಃ
ಶಿಷ್ಯೋ ಮಹಾತ್ಮಾರ್ಥನಿವೇದನೇನ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಇಂದ್ರನು ಬಲಿಯನ್ನು ಪರಾಭವಗೊಳಿಸಿ ಅವನ ಸಂಪತ್ತನ್ನೂ ಕಸಿದುಕೊಂಡನಲ್ಲದೆ ಅವನ ಪ್ರಾಣಗಳನ್ನೂ ಕಿತ್ತುಕೊಂಡಾಗ ಭೃಗುನಂದನ ಶುಕ್ರಾಚಾರ್ಯರು ಅವನನ್ನು ಸಂಜೀವನೀ ವಿದ್ಯೆಯಿಂದ ಬದುಕಿಸಿದರು. ಇದರಿಂದ ಶುಕ್ರಾಚಾರ್ಯರ ಶಿಷ್ಯನಾದ ಮಹಾತ್ಮಾ ಬಲಿಯು ತನ್ನ ಸರ್ವಸ್ವವನ್ನು ಅವರ ಚರಣಗಳಲ್ಲಿ ಅರ್ಪಿಸಿದನು ಹಾಗೂ ಅವನು ತನು-ಮನದಿಂದ ಗುರುಗಳೊಂದಿಗೆ ಸಮಸ್ತ ಭೃಗುವಂಶೀಯರಾದ ಬ್ರಾಹ್ಮಣರ ಸೇವೆ ಮಾಡ ತೊಡಗಿದನು. ॥3॥

(ಶ್ಲೋಕ-4)

ಮೂಲಮ್

ತಂ ಬ್ರಾಹ್ಮಣಾ ಭೃಗವಃ ಪ್ರೀಯಮಾಣಾ
ಅಯಾಜಯನ್ವಿಶ್ವಜಿತಾ ತ್ರಿಣಾಕಮ್ ।
ಜಿಗೀಷಮಾಣಂ ವಿಧಿನಾಭಿಷಿಚ್ಯ
ಮಹಾಭಿಷೇಕೇಣ ಮಹಾನುಭಾವಾಃ ॥

ಅನುವಾದ

ಇದರಿಂದ ಪ್ರಭಾವಶಾಲಿಗಳಾದ ಭೃಗುವಂಶೀ ಬ್ರಾಹ್ಮಣರು ಅವನ ಮೇಲೆ ಬಹಳ ಪ್ರಸನ್ನ ರಾದರು. ಸ್ವರ್ಗವನ್ನು ಜಯಿಸಬೇಕೆಂಬ ಇಚ್ಚೆಯುಳ್ಳ ಬಲಿ ಚಕ್ರವರ್ತಿಗೆ ಮಹಾನುಭಾವರಾದ ಅವರು ಮಹಾಭಿ ಷೇಕದ ವಿಧಿಯಿಂದ ಅಭಿಷೇಕಮಾಡಿ ಅವನಿಂದ ವಿಶ್ವಜಿತ್ ಎಂಬ ಯಜ್ಞವನ್ನು ಮಾಡಿಸಿದರು. ॥4॥

(ಶ್ಲೋಕ-5)

ಮೂಲಮ್

ತತೋ ರಥಃ ಕಾಂಚನಪಟ್ಟನದ್ಧೋ
ಹಯಾಶ್ಚ ಹರ್ಯಶ್ವತುರಂಗವರ್ಣಾಃ ।
ಧ್ವಜಶ್ಚ ಸಿಂಹೇನ ವಿರಾಜಮಾನೋ
ಹುತಾಶನಾದಾಸ ಹವಿರ್ಭಿರಿಷ್ಟಾತ್ ॥

ಅನುವಾದ

ಯಜ್ಞದ ವಿಧಿಯಿಂದ ಹವಿಸ್ಸುಗಳ ಮೂಲಕ ಯಜ್ಞೇಶ್ವರನನ್ನು ಪೂಜಿಸಿದಾಗ ಅಗ್ನಿಕುಂಡದಿಂದ ಇಂದ್ರನ ಕುದುರೆಗಳಂತಿರುವ ಹಸಿರು ಬಣ್ಣವುಳ್ಳ ಕುದುರೆಗಳಿಂದಲೂ, ಸಿಂಹದ ಚಿಹ್ನೆಯಿಂದ ವಿರಾಜಿಸುತ್ತಿದ್ದ ಧ್ವಜದಿಂದಲೂ ಕೂಡಿದ ಚಿನ್ನದ ಪರಿಕರಗಳಿಂದ ಸಮಲಂಕೃತವಾದ ರಥವೊಂದು ಹೊರಬಂದಿತು. ॥5॥

(ಶ್ಲೋಕ-6)

ಮೂಲಮ್

ಧನುಶ್ಚ ದಿವ್ಯಂ ಪುರಟೋಪನದ್ಧಂ
ತೂಣಾವರಿಕ್ತೌ ಕವಚಂ ಚ ದಿವ್ಯಮ್ ।
ಪಿತಾಮಹಸ್ತಸ್ಯ ದದೌ ಚ ಮಾಲಾ-
ಮಮ್ಲಾನಪುಷ್ಪಾಂ ಜಲಜಂ ಚ ಶುಕ್ರಃ ॥

ಅನುವಾದ

ಜೊತೆಗೆ ಸ್ವರ್ಣಭೂಷಿತ ದಿವ್ಯಧನುಸ್ಸೂ, ಅಕ್ಷಯ ವಾದ ಬತ್ತಳಿಕೆಯೂ, ದಿವ್ಯವಾದ ಅಭೇದ್ಯಕವಚವೂ ಪ್ರಕಟಗೊಂಡವು. ಬಳಿಕ ಬ್ರಹ್ಮದೇವರು ಬಾಡದೇ ಇರುವ ಕಮಲದ ಮಾಲೆಯನ್ನೂ, ಶುಕ್ರಾಚಾರ್ಯರೂ ಒಂದು ಶಂಖವನ್ನು ಅವನಿಗೆ ಅನುಗ್ರಹಿಸಿದರು. ॥6॥

(ಶ್ಲೋಕ-7)

ಮೂಲಮ್

ಏವಂ ಸ ವಿಪ್ರಾರ್ಜಿತಯೋಧನಾರ್ಥ-
ಸ್ತೈಃ ಕಲ್ಪಿತಸ್ವಸ್ತ್ಯಯನೋಥ ವಿಪ್ರಾನ್ ।
ಪ್ರದಕ್ಷಿಣೀಕೃತ್ಯ ಕೃತಪ್ರಣಾಮಃ
ಪ್ರಹ್ಲಾದಮಾಮಂತ್ರ್ಯ ನಮಶ್ಚಕಾರ ॥

ಅನುವಾದ

ಹೀಗೆ ಬ್ರಾಹ್ಮಣರ ಕೃಪೆಯಿಂದ ಯುದ್ಧದ ಸಾಮಗ್ರಿಯನ್ನು ಪಡೆದುಕೊಂಡು, ಅವರಿಂದ ಸ್ವಸ್ತಿವಾಚನವನ್ನು ಮಾಡಿಸಿ ಬಲಿಚಕ್ರವರ್ತಿಯು ಆ ಬ್ರಾಹ್ಮಣರಿಗೆ ಪ್ರದಕ್ಷಿಣೆಮಾಡಿ ನಮಸ್ಕರಿಸಿದನು. ಬಳಿಕ ಅಜ್ಜನಾದ ಪ್ರಹ್ಲಾದನಿಂದಲೂ ದಿಗ್ವಿಜಯಕ್ಕೆ ಅನುಮತಿಯನ್ನು ಪಡೆದು ಅವನಿಗೂ ನಮಸ್ಕರಿಸಿದನು. ॥7॥

(ಶ್ಲೋಕ-8)

ಮೂಲಮ್

ಅಥಾರುಹ್ಯ ರಥಂ ದಿವ್ಯಂ ಭೃಗುದತ್ತಂ ಮಹಾರಥಃ ।
ಸುಸ್ರಗ್ಧರೋಥ ಸಂನಹ್ಯ ಧನ್ವೀ ಖಡ್ಗೀ ಧೃತೇಷುಧಿಃ ॥

ಅನುವಾದ

ಮತ್ತೆ ಬ್ರಹ್ಮನು ಅನುಗ್ರಹಿಸಿದ ಬಾಡದಿರುವ ಕಮಲದ ಮಾಲೆಯನ್ನು ಧರಿಸಿ, ಭೃಗುವಂಶೀಯ ಬ್ರಾಹ್ಮಣರು ಕೊಟ್ಟಿರುವ ದಿವ್ಯವಾದ ರಥವನ್ನೇರಿ, ಧನುಸ್ಸನ್ನು ಹಿಡಿದುಕೊಂಡು, ಕತ್ತಿಯನ್ನು ಸೊಂಟಕ್ಕೆ ಬಿಗಿದು, ಬರಿದಾಗದ ಬತ್ತಳಿಕೆಯನ್ನು ಬೆನ್ನಿಗೇರಿಸಿದನು. ॥8॥

(ಶ್ಲೋಕ-9)

ಮೂಲಮ್

ಹೇಮಾಂಗದಲಸದ್ಬಾಹುಃ ಸ್ಫುರನ್ಮಕರಕುಂಡಲಃ ।
ರರಾಜ ರಥಮಾರೂಢೋ ಧಿಷ್ಣ್ಯಸ್ಥ ಇವ ಹವ್ಯವಾಟ್ ॥

ಅನುವಾದ

ಸುವರ್ಣಮಯ ಭುಜಕೀರ್ತಿಗಳಿಂದಲೂ, ಹೊಳೆಯುತ್ತಿರುವ ಮಕರಾಕಾರದ ಕುಂಡಲಗಳಿಂದಲೂ ಶೋಭಿಸುತ್ತಿದ್ದನು. ರಥಾರೂಢನಾಗಿ ಕುಳಿತಿರುವ ಬಲಿಚಕ್ರವರ್ತಿಯು ಅಗ್ನಿಕುಂಡದಲ್ಲಿ ಪ್ರಜ್ವಲಿಸುವ ಅಗ್ನಿಯಂತೆ ಕಂಗೊಳಿಸುತ್ತಿದ್ದನು. ॥9॥

(ಶ್ಲೋಕ-10)

ಮೂಲಮ್

ತುಲ್ಯೈಶ್ವರ್ಯಬಲಶ್ರೀಭಿಃ ಸ್ವಯೂಥೈರ್ದೈತ್ಯಯೂಥಪೈಃ ।
ಪಿಬದ್ಭಿರಿವ ಖಂ ದೃಗ್ಭಿರ್ದಹದ್ಭಿಃ ಪರಿಧೀನಿವ ॥

ಅನುವಾದ

ಅವನ ಜೊತೆಗೆ ಅವನಂತೆ ಐಶ್ವರ್ಯ, ಬಲ, ಪರಾಕ್ರಮಗಳಿಂದ ಕೂಡಿದ ದೈತ್ಯಸೇನಾಪತಿಗಳು ತಮ್ಮ- ತಮ್ಮ ಸೈನ್ಯದೊಂದಿಗೆ ಹೊರಟರು. ಬಲಿಚಕ್ರವರ್ತಿಯು ಕ್ರೋಧತುಂಬಿದ ಕಣ್ಣುಗಳಿಂದಲೇ ಆಕಾಶವನ್ನು ಕುಡಿಯು ತ್ತಿರುವನೋ, ಎಂಬಂತೆಯೂ ದಿಕ್ಕುಗಳನ್ನು ಸುಟ್ಟು ಬಿಡುತ್ತಿರುವನೋ ಎಂದು ಕಾಣುತ್ತಿತ್ತು. ॥10॥

(ಶ್ಲೋಕ-11)

ಮೂಲಮ್

ವೃತೋ ವಿಕರ್ಷನ್ಮಹತೀಮಾಸುರೀಂ ಧ್ವಜಿನೀಂ ವಿಭುಃ ।
ಯಯಾವಿಂದ್ರಪುರೀಂ ಸ್ವದ್ಧಾಂ ಕಂಪಯನ್ನಿವ ರೋದಸೀ ॥

ಅನುವಾದ

ರಾಕ್ಷಸರ ದೊಡ್ಡದಾದ ಸೈನ್ಯದೊಡನೆ ಪ್ರಭುವಾದ ಬಲಿಯು ಭೂಮ್ಯಾಕಾಶಗಳನ್ನು ನಡುಗಿಸುತ್ತಿರುವನೋ ಎಂಬಂತೆ ಗರ್ಜಿಸುತ್ತಾ ಸಂಪತ್ಸಮೃದ್ಧವಾದ ಅಮರಾವತಿಗೆ ಧಾಳಿಯಿಟ್ಟನು. ॥11॥

(ಶ್ಲೋಕ-12)

ಮೂಲಮ್

ರಮ್ಯಾಮುಪವನೋದ್ಯಾನೈಃ ಶ್ರೀಮದ್ಭಿರ್ನಂದನಾದಿಭಿಃ ।
ಕೂಜದ್ವಿಹಂಗಮಿಥುನೈರ್ಗಾಯನ್ಮತ್ತಮಧುವ್ರತೈಃ ॥

ಅನುವಾದ

ದೇವತೆಗಳ ಆ ರಾಜಧಾನೀ ಅಮರಾವತಿಯು ಭಾರೀ ಸುಂದರವಾದ ನಂದನವನವೇ ಮೊದಲಾದ ಉದ್ಯಾನವನ ಗಳಿಂದಲೂ, ಉಪವನಗಳಿಂದಲೂ ಪರಿಶೋಭಿಸುತ್ತಿತ್ತು. ಆ ಉದ್ಯಾನ-ಉಪವನಗಳಲ್ಲಿ ಪಕ್ಷಿಗಳ ಜೋಡಿಗಳೂ, ಮಧು ಪಾನದಿಂದ ಮತ್ತೇರಿದ ದುಂಬಿಗಳು ಉಲಿಯುತ್ತಿದ್ದವು. ॥12॥

(ಶ್ಲೋಕ-13)

ಮೂಲಮ್

ಪ್ರವಾಲಲಪುಷ್ಪೋರುಭಾರಶಾಖಾಮರದ್ರುಮೈಃ ।
ಹಂಸಸಾರಸಚಕ್ರಾಹ್ವಕಾರಂಡವಕುಲಾಕುಲಾಃ ।
ನಲಿನ್ಯೋ ಯತ್ರ ಕ್ರೀಡಂತಿ ಪ್ರಮದಾಃ ಸುರಸೇವಿತಾಃ ॥

ಅನುವಾದ

ನವಪಲ್ಲವಗಳಿಂದಲೂ, ಫಲ-ಪುಷ್ಪಗಳಿಂದಲೂ, ಕಲ್ಪವೃಕ್ಷದ ಕೊಂಬೆಗಳು ಶೋಭಿಸುತ್ತಿದ್ದವು. ಅಲ್ಲಿಯ ಸರೋ ವರಗಳು ಹಂಸ, ಸಾರಸ, ಚಕ್ರವಾಕ, ಕಾರಂಡವ ಮೊದಲಾದ ಪಕ್ಷಿಗಳಿಂದ ತುಂಬಿದ್ದವು. ಆ ಸರೋವರಗಳಲ್ಲೇ ದೇವತೆಗಳಿಂದ ಸಮ್ಮಾನಿತರಾದ ದೇವಾಂಗನೆಯರು ಜಲಕ್ರೀಡೆ ಯಾಡುತ್ತಿದ್ದರು.॥13॥

(ಶ್ಲೋಕ-14)

ಮೂಲಮ್

ಆಕಾಶಗಂಗಯಾ ದೇವ್ಯಾ ವೃತಾಂ ಪರಿಖಭೂತಯಾ ।
ಪ್ರಾಕಾರೇಣಾಗ್ನಿವರ್ಣೇನ ಸಾಟ್ಟಾಲೇನೋನ್ನತೇನ ಚ ॥

ಅನುವಾದ

ಜ್ಯೋತಿರ್ಮಯ ಆಕಾಶ ಗಂಗೆಯು ಕಂದಕದಂತೆ ಅಮರಾವತಿಯನ್ನು ಸುತ್ತಲೂ ಆವರಿಸಿಕೊಂಡಿತ್ತು. ಅಮರಾವತಿಯ ಸುತ್ತಲೂ ಎತ್ತರವಾದ ಬೆಂಕಿಯಂತೆ ಜಾಜ್ವಲ್ಯಮಾನವಾಗಿದ್ದ, ಉಪ್ಪರಿಗೆಯಿಂದ ಕೂಡಿದ ಸುವರ್ಣಮಯವಾದ ಪ್ರಾಕಾರವಿದ್ದಿತು.॥14॥

(ಶ್ಲೋಕ-15)

ಮೂಲಮ್

ರುಕ್ಮಪಟ್ಟಕಪಾಟೈಶ್ಚ ದ್ವಾರೈಃ ಸ್ಫಟಿಕಗೋಪುರೈಃ ।
ಜುಷ್ಟಾಂ ವಿಭಕ್ತಪ್ರಪಥಾಂ ವಿಶ್ವಕರ್ಮವಿನಿರ್ಮಿತಾಮ್ ॥

ಅನುವಾದ

ಆ ಪ್ರಾಕಾರದ ಸುತ್ತಲೂ ಚಿನ್ನದ ಕವಾಟಗಳಿಂದ ಕೂಡಿದ ಮಹಾದ್ವಾರಗಳೂ, ಸ್ಫಟಿಕಮಯವಾದ ಗೋಪುರ ಗಳಿದ್ದವು. ಅಲ್ಲಿ ಬೇರೆ-ಬೇರೆಯಾದ ದೊಡ್ಡ-ದೊಡ್ಡ ರಾಜಮಾರ್ಗಗಳಿದ್ದು, ಸ್ವತಃ ವಿಶ್ವಕರ್ಮನೇ ಆ ನಗರವನ್ನು ನಿರ್ಮಿಸಿದ್ದನು. ॥15॥

(ಶ್ಲೋಕ-16)

ಮೂಲಮ್

ಸಭಾಚತ್ವರರಥ್ಯಾಢ್ಯಾಂ ವಿಮಾನೈರ್ನ್ಯರ್ಬುದೈರ್ಯುತಾಮ್ ।
ಶೃಂಗಾಟಕೈರ್ಮಣಿಮಯೈರ್ವಜ್ರವಿದ್ರುಮವೇದಿಭಿಃ ॥

ಅನುವಾದ

ಸಭಾಭವನಗಳಿಂದಲೂ, ಚೌಕಗಳಿಂದಲೂ, ಅಗಲವಾದ ರಥಬೀದಿಗಳಿಂದಲೂ ಅದು ಶೋಭಾಯಮಾನವಾಗಿತ್ತು. ಹತ್ತುಕೋಟಿ ವಿಮಾನಗಳು ಅಮರಾವತಿಯನ್ನು ಅಲಂಕರಿಸಿದ್ದವು. ರತ್ನಖಚಿತವಾದ ವಜ್ರ, ಹವಳಗಳಿಂದ ಚೆಂದವಾಗಿ ನಿರ್ಮಿಸಲ್ಪಟ್ಟ ಜಗುಲಿಗಳು ಅಮರಾವತಿಯ ನಾಲ್ಕು ಮಾರ್ಗಗಳು ಕೂಡುವ ಚೌಕಗಳಲ್ಲಿ ಶೋಭಿಸುತ್ತಿದ್ದವು. ॥16॥

(ಶ್ಲೋಕ-17)

ಮೂಲಮ್

ಯತ್ರ ನಿತ್ಯವಯೋರೂಪಾಃ ಶ್ಯಾಮಾ ವಿರಜವಾಸಸಃ ।
ಭ್ರಾಜಂತೇ ರೂಪವನ್ನಾರ್ಯೋ ಹ್ಯರ್ಚಿರ್ಭಿರಿವ ವಹ್ನಯಃ ॥

ಅನುವಾದ

ಅಲ್ಲಿಯ ಸ್ತ್ರೀಯರು ಯಾವಾಗಲೂ ಹದಿನಾರು ವರ್ಷದವರಂತೆ ಇರುತ್ತಾರೆ. ಅವರ ಯೌವನ ಮತ್ತು ಸೌಂದರ್ಯವು ಸ್ಥಿರವಾಗಿರುತ್ತದೆ. ಅವರು ನಿರ್ಮಲವಾದ ವಸಗಳನ್ನುಟ್ಟುಕೊಂಡು ಆ ನಾರಿಯರು ಜ್ವಾಲೆಗಳಿಂದ ಕೂಡಿದ ಅಗ್ನಿಯೋ ಪಾದಿಯಲ್ಲಿ ರಾರಾಜಿಸುತ್ತಿದ್ದರು. ॥17॥

(ಶ್ಲೋಕ-18)

ಮೂಲಮ್

ಸುರಸೀಕೇಶವಿಭ್ರಷ್ಟನವಸೌಗಂಧಿಕಸ್ರಜಾಮ್ ।
ಯತ್ರಾಮೋದಮುಪಾದಾಯ ಮಾರ್ಗ ಆವಾತಿ ಮಾರುತಃ ॥

ಅನುವಾದ

ದೇವಾಂಗನೆಯರ ಮುಡಿಯಿಂದ ಜಾರಿಬಿದ್ದ ನೂತನ ಸೌಗಂಧಿಕಾಪುಷ್ಪಗಳ ಸುರಭಿಯನ್ನು ಹೊತ್ತು ವಾಯು ದೇವನು ಅಲ್ಲಿಯ ಮಾರ್ಗಗಳಲ್ಲಿ ಮಂದ-ಮಂದವಾಗಿ ಬೀಸುತ್ತಿದ್ದನು. ॥18॥

(ಶ್ಲೋಕ-19)

ಮೂಲಮ್

ಹೇಮಜಾಲಾಕ್ಷನಿರ್ಗಚ್ಛದ್ಧೂಮೇನಾಗುರುಗಂಧಿನಾ ।
ಪಾಂಡುರೇಣ ಪ್ರತಿಚ್ಛನ್ನಮಾರ್ಗೇ ಯಾಂತಿ ಸುರಪ್ರಿಯಾಃ ॥

ಅನುವಾದ

ಮಹಾಸೌಧಗಳ ಸ್ವರ್ಣಮಯ ಕಿಟಕಿಗಳಿಂದ ಹೊರಸೂಸುತ್ತಿದ್ದ ಅಗರುವಾಸನೆಯಿಂದ ಕೂಡಿದ ಬಿಳಿಯ ಹೊಗೆಯಿಂದ ಸಮಾವೃತವಾದ ಮಾರ್ಗಗಳಲ್ಲಿ ದೇವಾಂಗನೆಯರು ಸಂಚರಿಸುತ್ತಿದ್ದರು. ॥19॥

(ಶ್ಲೋಕ-20)

ಮೂಲಮ್

ಮುಕ್ತಾವಿತಾನೈರ್ಮಣಿಹೇಮಕೇತುಭಿ-
ರ್ನಾನಾಪತಾಕಾವಲಭೀಭಿರಾವೃತಾಮ್ ।
ಶಿಖಂಡಿಪಾರಾವತಭೃಂಗನಾದಿತಾಂ
ವೈಮಾನಿಕಸೀಕಲಗೀತಮಂಗಲಾಮ್ ॥

ಅನುವಾದ

ಅಲ್ಲಲ್ಲಿ ಮುತ್ತುಗಳ ಝಲ್ಲರಿಗಳಿಂದ ಅಲಂಕೃತವಾದ ಮಂಟಪಗಳಿಂದಲೂ, ರತ್ನಖಚಿತವಾದ ಚಿನ್ನದ ಧ್ವಜಗಳಿಂದಲೂ, ಸೌಧಗಳ ಮೇಲೆ ಹಾರಾಡುತ್ತಿದ್ದ ನಾನಾ ವಿಧವಾದ ಪತಾಕೆಗಳಿಂದಲೂ ಸಮಾವೃತವಾಗಿದ್ದು, ನವಿಲು, ಪಾರಿವಾಳ, ದುಂಬಿಗಳ ಧ್ವನಿಗಳಿಂದಲೂ, ದೇವತೆಗಳ ಇಂಪಾದ ಸಂಗೀತದಿಂದಲೂ ಅಲ್ಲಿ ಮಂಗಳಮಯ ವಾತಾವರಣ ನಿರ್ಮಾಣವಾಗಿತ್ತು. ॥20॥

(ಶ್ಲೋಕ-21)

ಮೂಲಮ್

ಮೃದಂಗಶಂಖಾನಕದುಂದುಭಿಸ್ವನೈಃ
ಸತಾಲವೀಣಾಮುರಜರ್ಷ್ಟಿವೇಣುಭಿಃ ।
ನೃತ್ಯೈಃ ಸವಾದ್ಯೈರುಪದೇವಗೀತಕೈ-
ರ್ಮನೋರಮಾಂ ಸ್ವಪ್ರಭಯಾ ಜಿತಪ್ರಭಾಮ್ ॥

ಅನುವಾದ

ಮೃದಂಗ, ಶಂಖ, ಆನಕ, ಡೋಲು, ವೀಣಾ-ವೇಣು ಮೊದಲಾದ ವಾದ್ಯಗಳು ನುಡಿಸಲ್ಪಡುತ್ತಿದ್ದವು. ಗಂಧರ್ವರು ವಾದ್ಯಗಳ ಜೊತೆಗೆ ಹಾಡುತ್ತಿದ್ದರೆ, ಅಪ್ಸರೆಯರು ನರ್ತನ ಮಾಡುತ್ತಿದ್ದರು. ಆ ಅಮರಾವತಿಯು ತನ್ನ ಕಾಂತಿಯಿಂದ ಕಾಂತಿಯ ಅಧಿದೇವತೆಯನ್ನೂ ಧಿಕ್ಕರಿಸುತ್ತಿದೆಯೋ ಎಂಬಂತೆ ಕಾಣುತ್ತಿದ್ದಿತು. ಅಂತಹ ಅಮರಾವತಿಯನ್ನು ಬಲಿಯು ನೋಡಿದನು. ॥21॥

ಮೂಲಮ್

(ಶ್ಲೋಕ-22)
ಯಾಂ ನ ವ್ರಜಂತ್ಯಧರ್ಮಿಷ್ಠಾಃ ಖಲಾ ಭೂತದ್ರುಹಃ ಶಠಾಃ ।
ಮಾನಿನಃ ಕಾಮಿನೋ ಲುಬ್ಧಾ ಏಭಿರ್ಹೀನಾ ವ್ರಜಂತಿ ಯತ್ ॥

ಅನುವಾದ

ಆ ಪುರಿಯಲ್ಲಿ ಅಧರ್ಮಿಗಳು, ದುಷ್ಟರು, ಜೀವ ದ್ರೋಹಿಗಳು, ಮೋಸಗಾರರು, ದುರಭಿಮಾನಿಗಳು, ಕಾಮುಕರು, ಲೋಭಿಗಳು ಹೋಗಲಾರರು. ಇಂತಹ ದೋಷಗಳಿಂದ ರಹಿತರಾದವರು ಮಾತ್ರ ಅಲ್ಲಿಗೆ ಹೋಗ ಬಲ್ಲರು. ॥22॥

(ಶ್ಲೋಕ-23)

ಮೂಲಮ್

ತಾಂ ದೇವಧಾನೀಂ ಸ ವರೂಥಿನೀಪತಿ-
ರ್ಬಹಿಃ ಸಮಂತಾದ್ರುರುಧೇ ಪೃತನ್ಯಯಾ ।
ಆಚಾರ್ಯದತ್ತಂ ಜಲಜಂ ಮಹಾಸ್ವನಂ
ದಧ್ಮೌ ಪ್ರಯುಂಜನ್ಭಯಮಿಂದ್ರಯೋಷಿತಾಮ್ ॥

ಅನುವಾದ

ಅಸುರರ ಸೇನೆಯ ಒಡೆಯನಾದ ಬಲಿಚಕ್ರವರ್ತಿಯು ತನ್ನ ಭಾರೀ ದೊಡ್ಡ ಸೈನ್ಯದಿಂದ ಅಮರಾವತಿಯನ್ನು ಹೊರಗಿನಿಂದ ಮುತ್ತಿಗೆ ಹಾಕಿದನು. ಅವನು ಶುಕ್ರಾಚಾರ್ಯರು ಇತ್ತ ಮಹಾಶಂಖವನ್ನು ಊದಿದನು. ಇದರಿಂದ ಇಂದ್ರಪತ್ನಿಯರ ಹೃದಯದಲ್ಲಿ ಭಯ ವನ್ನು ಹುಟ್ಟಿಸುತ್ತಾ ಆ ಶಂಖಧ್ವನಿಯು ಎಲ್ಲೆಡೆ ಹರಡಿ ಕೊಂಡಿತು. ॥23॥

(ಶ್ಲೋಕ-24)

ಮೂಲಮ್

ಮಘವಾಂಸ್ತಮಭಿಪ್ರೇತ್ಯ ಬಲೇಃ ಪರಮಮುದ್ಯಮಮ್ ।
ಸರ್ವದೇವಗಣೋಪೇತೋ ಗುರುಮೇತದುವಾಚ ಹ ॥

ಅನುವಾದ

ಬಲಿಯು ಯುದ್ಧಕ್ಕಾಗಿ ಭಾರೀ ಸಿದ್ಧತೆಯನ್ನು ಮಾಡಿರುವನು ಎಂದು ನೋಡಿದ ಇಂದ್ರನು ಎಲ್ಲ ದೇವತೆಗಳೊಂದಿಗೆ ತಮ್ಮ ಗುರುಗಳಾದ ಬೃಹಸ್ಪತ್ಯಾಚಾರ್ಯರ ಬಳಿಗೆ ಹೋಗಿ ಇಂತೆಂದನು ॥24॥

(ಶ್ಲೋಕ-25)

ಮೂಲಮ್

ಭಗವನ್ನುದ್ಯಮೋ ಭೂಯಾನ್ಬಲೇರ್ನಃ ಪೂರ್ವವೈರಿಣಃ ।
ಅವಿಷಹ್ಯಮಿಮಂ ಮನ್ಯೇ ಕೇನಾಸೀತ್ತೇಜಸೋರ್ಜಿತಃ ॥

ಅನುವಾದ

ಪೂಜ್ಯರೇ! ಹಿಂದಿನ ನಮ್ಮ ಶತ್ರುವಾದ ಬಲಿಯು ಈ ಬಾರಿ ಯುದ್ಧಕ್ಕಾಗಿ ಭಾರೀ ಸಿದ್ಧತೆ ಮಾಡಿರುವನು. ನಮ್ಮಿಂದ ಅವನನ್ನು ಇದಿರಿಸಲು ಸಾಧ್ಯವಾಗದೆಂದೇ ನನಗೆ ಅನಿಸುತ್ತದೆ. ಇವನು ಯಾವ ಶಕ್ತಿಯಿಂದ ನಮ್ಮನ್ನು ಎದುರಿಸುವಷ್ಟು ಬಲಶಾಲಿಯಾಗಿದ್ದಾನೆ, ತಿಳಿಯದು. ॥25॥

(ಶ್ಲೋಕ-26)

ಮೂಲಮ್

ನೈನಂ ಕಶ್ಚಿತ್ಕುತೋ ವಾಪಿ ಪ್ರತಿವ್ಯೋಢುಮಧೀಶ್ವರಃ ।
ಪಿಬನ್ನಿವ ಮುಖೇನೇದಂ ಲಿಹನ್ನಿವ ದಿಶೋ ದಶ ।
ದಹನ್ನಿವ ದಿಶೋ ದೃಗ್ಭಿಃ ಸಂವರ್ತಾಗ್ನಿರಿವೋತ್ಥಿತಃ ॥

ಅನುವಾದ

ಈ ಸಮಯದಲ್ಲಿ ಬಲಿಯನ್ನು ಯಾರೂ ಕೂಡ ಯಾವ ರೀತಿಯಿಂದಲೂ ತಡೆಯಲಾರರು ಎಂದು ನನಗೆ ಭಾಸವಾಗುತ್ತದೆ. ಅವನು ಪ್ರಳಯಾಗ್ನಿಯಂತೆ ಬೆಳೆದಿರುವನು ಮತ್ತು ಈ ವಿಶ್ವವನ್ನೇ ಬಾಯಿಂದ ತಿಂದುಬಿಡುವನೋ ಎಂದೆನಿಸುತ್ತದೆ. ಹತ್ತು ದಿಕ್ಕುಗಳನ್ನೂ ಕಟವಾಯಿಂದ ನೆಕ್ಕಿಬಿಡುವನೋ ಮತ್ತು ಕಣ್ಣುಗಳ ಜ್ವಾಲೆಗಳಿಂದ ದಶದಿಕ್ಕುಗಳನ್ನೂ ಸುಟ್ಟು ಬಿಡುವನೋ ಎಂಬಂತಿದೆ. ॥26॥

(ಶ್ಲೋಕ-27)

ಮೂಲಮ್

ಬ್ರೂಹಿ ಕಾರಣಮೇತಸ್ಯ ದುರ್ಧರ್ಷತ್ವಸ್ಯ ಮದ್ರಿಪೋಃ ।
ಓಜಃ ಸಹೋ ಬಲಂ ತೇಜೋ ಯತ ಏತತ್ಸ ಮುದ್ಯಮಃ ॥

ಅನುವಾದ

ನನ್ನ ಶತ್ರುವಾದ ಬಲಿಗೆ ನಾನೂ ಕೂಡ ಎದುರಿಸಲಾರದಷ್ಟು ಪರಾಕ್ರಮವು ಎಲ್ಲಿಂದ ಬಂತು? ಯಾವುದರಿಂದ ಇವನಿಗೆ ಇಂದ್ರಿಯ ಶಕ್ತಿಯೂ, ಮನಶ್ಶಕ್ತಿಯೂ, ದೇಹಶಕ್ತಿಯೂ, ತೇಜಸ್ಸು ಮತ್ತು ಈ ಸಮರೋದ್ಯಮಕ್ಕೆ ಪ್ರೇರಣೆಯೂ ಲಭಿಸಿತು? ಎಂಬುದನ್ನು ದಯವಿಟ್ಟು ಹೇಳಿರಿ. ॥27॥

(ಶ್ಲೋಕ-28)

ಮೂಲಮ್ (ವಾಚನಮ್)

ಗುರುರುವಾಚ

ಮೂಲಮ್

ಜಾನಾಮಿ ಮಘವನ್ ಶತ್ರೋರುನ್ನತೇರಸ್ಯ ಕಾರಣಮ್ ।
ಶಿಷ್ಯಾಯೋಪಭೃತಂ ತೇಜೋ ಭೃಗುಭಿರ್ಬ್ರಹ್ಮವಾದಿಭಿಃ ॥

ಅನುವಾದ

ದೇವಗುರು ಬೃಹಸ್ಪತ್ಯಾಚಾರ್ಯರು ಹೇಳಿದರು ಇಂದ್ರನೇ! ನಿನ್ನ ಈ ಶತ್ರುವಿನ ಉನ್ನತಿಯ ಕಾರಣವನ್ನು ಬಲ್ಲೆನು. ಬ್ರಹ್ಮವಾದಿಗಳಾದ ಭೃಗುವಂಶೀಯರು ತಮ್ಮ ಶಿಷ್ಯ ಬಲಿಯಲ್ಲಿ ಮಹಾನ್ ತೇಜ-ಬಲಗಳ ಭಂಡಾರವನ್ನೇ ತುಂಬಿರುವರು.॥28॥

(ಶ್ಲೋಕ-29)

ಮೂಲಮ್

ಭವದ್ವಿಧೋ ಭವಾನ್ವಾಪಿ ವರ್ಜಯಿತ್ವೇಶ್ವರಂ ಹರಿಮ್ ।
ನಾಸ್ಯ ಶಕ್ತಃ ಪುರಃ ಸ್ಥಾತುಂ ಕೃತಾಂತಸ್ಯ ಯಥಾ ಜನಾಃ ॥

ಅನುವಾದ

ಸರ್ವೇಶ್ವರನಾದ ಶ್ರೀಹರಿಯನ್ನು ಬಿಟ್ಟು ನೀನಾಗಲೀ, ನಿನ್ನಂತಹವರು ಯಾರೂ ಬಲಿಯ ಮುಂದೆ ಕಾಲನ ಮುಂದೆ ಪ್ರಾಣಿಗಳು ಹೇಗೆ ನಿಲ್ಲಲಾರರೋ ಹಾಗೇ ನಿಲ್ಲಲಾರಿರಿ.॥29॥

(ಶ್ಲೋಕ-30)

ಮೂಲಮ್

ತಸ್ಮಾನ್ನಿಲಯಮುತ್ಸೃಜ್ಯ ಯೂಯಂ ಸರ್ವೇ ತ್ರಿವಿಷ್ಟಪಮ್ ।
ಯಾತ ಕಾಲಂ ಪ್ರತೀಕ್ಷಂತೋ ಯತಃ ಶತ್ರೋರ್ವಿಪರ್ಯಯಃ ॥

ಅನುವಾದ

ಅದಕ್ಕಾಗಿ ನೀವೆಲ್ಲ ಸ್ವರ್ಗವನ್ನು ಬಿಟ್ಟು ಅಡಗಿಕೊಂಡಿರಿ. ಶತ್ರುವಿನ ಭಾಗ್ಯಚಕ್ರವು ವಿಪರೀತ ವಾಗುವವರೆಗೆ ನೀವು ಪ್ರತೀಕ್ಷೆಮಾಡುತ್ತಾ ಇರಿ. ॥30॥

(ಶ್ಲೋಕ-31)

ಮೂಲಮ್

ಏಷ ವಿಪ್ರಬಲೋದರ್ಕಃ ಸಂಪ್ರತ್ಯೂರ್ಜಿತವಿಕ್ರಮಃ ।
ತೇಷಾಮೇವಾಪಮಾನೇನ ಸಾನುಬಂಧೋ ವಿನಂಕ್ಷ್ಯತಿ ॥

ಅನುವಾದ

ಈ ಸಮಯದಲ್ಲಿ ಭೃಗುವಂಶೀ ಬ್ರಾಹ್ಮಣರ ತೇಜದಿಂದಲೇ ಬಲಿಯ ಅಭಿವೃದ್ಧಿ ಉತ್ತರೋತ್ತರವಾಗಿ ಬೆಳೆಯುತ್ತಾ ಇದೆ. ಅವನು ಬ್ರಾಹ್ಮಣರನ್ನು ತಿರಸ್ಕರಿಸಿದಾಗ, ಅವಮಾನಗೊಳಿಸಿದಾಗ ಅವನು ತನ್ನ ಪರಿವಾರದೊಂದಿಗೆ ವಿನಾಶಹೊಂದುವನು. ॥31॥

(ಶ್ಲೋಕ-32)

ಮೂಲಮ್

ಏವಂ ಸುಮಂತ್ರಿತಾರ್ಥಾಸ್ತೇ ಗುರುಣಾರ್ಥಾನುದರ್ಶಿನಾ ।
ಹಿತ್ವಾ ತ್ರಿವಿಷ್ಟಪಂ ಜಗ್ಮುರ್ಗೀರ್ವಾಣಾಃ ಕಾಮರೂಪಿಣಃ ॥

ಅನುವಾದ

ದೇವಗುರು ಬೃಹಸ್ಪತ್ಯಾಚಾರ್ಯರು ದೇವತೆಗಳ ಸ್ವಾರ್ಥ ಮತ್ತು ಪರಮಾರ್ಥವೆಲ್ಲವನ್ನು ಬಲ್ಲವರಾಗಿದ್ದರು. ಗುರುಗಳು ಹೀಗೆ ದೇವತೆಗಳಿಗೆ ಸಲಹೆ ನೀಡಿದಾಗ ಅವರೆಲ್ಲರೂ ಇಷ್ಟಾನುಸಾರವಾದ ರೂಪಗಳನ್ನು ಧರಿಸಿ ಸ್ವರ್ಗವನ್ನು ಬಿಟ್ಟು ಹೊರಟುಹೋದರು.॥32॥

(ಶ್ಲೋಕ-33)

ಮೂಲಮ್

ದೇವೇಷ್ವಥ ನಿಲೀನೇಷು ಬಲಿರ್ವೈರೋಚನಃ ಪುರೀಮ್ ।
ದೇವಧಾನೀಮಧಿಷ್ಠಾಯ ವಶಂ ನಿನ್ಯೇ ಜಗತಯಮ್ ॥

ಅನುವಾದ

ದೇವತೆಗಳು ಅಡಗಿಕೊಂಡಾಗ ವಿರೋಚನನಂದನ ಬಲಿಯು ಅಮರಾವತಿಯ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಿ, ಮೂರುಲೋಕಗಳನ್ನು ವಶಪಡಿಸಿಕೊಂಡು ಆಳತೊಡಗಿದನು. ॥33॥

(ಶ್ಲೋಕ-34)

ಮೂಲಮ್

ತಂ ವಿಶ್ವಜಯಿನಂ ಶಿಷ್ಯಂ ಭೃಗವಃ ಶಿಷ್ಯವತ್ಸಲಾಃ ।
ಶತೇನ ಹಯಮೇಧಾನಾಮನುವ್ರತಮಯಾಜಯನ್ ॥

ಅನುವಾದ

ಬಲಿಚಕ್ರವರ್ತಿಯು ವಿಶ್ವವಿಜಯಿಯಾದಾಗ ಶಿಷ್ಯಪ್ರೇಮಿ ಶುಕ್ರಾಚಾರ್ಯರೇ ಮೊದಲಾದ ಭೃಗುವಂಶೀಯರು ತಮ್ಮ ಶಿಷ್ಯನಾದ ಬಲಿಯಿಂದ ನೂರು ಅಶ್ವಮೇಧ ಯಜ್ಞಗಳನ್ನು ಮಾಡಿಸಿದರು. ॥34॥

(ಶ್ಲೋಕ-35)

ಮೂಲಮ್

ತತಸ್ತದನುಭಾವೇನ ಭುವನತ್ರಯವಿಶ್ರುತಾಮ್ ।
ಕೀರ್ತಿಂ ದಿಕ್ಷು ವಿತನ್ವಾನಃ ಸ ರೇಜ ಉಡುರಾಡಿವ ॥

ಅನುವಾದ

ಆ ಯಜ್ಞಗಳ ಮೂಲಕ ಬಲಿಯ ಕೀರ್ತಿ ಕೌಮುದಿಯು ಮೂರು ಲೋಕಗಳನ್ನೂ ಆಕ್ರಮಿಸಿ ದಶದಿಕ್ಕುಗಳಲ್ಲಿಯೂ ಪಸರಿಸಿತು ಹಾಗೂ ಅವನು ನಕ್ಷತ್ರಗಳ ರಾಜನಾದ ಚಂದ್ರ ನಂತೆ ಶೋಭಾಯ ಮಾನನಾದನು. ॥35॥

(ಶ್ಲೋಕ-36)

ಮೂಲಮ್

ಬುಭುಜೇ ಚ ಶ್ರಿಯಂ ಸ್ವ ದ್ಧಾಂ ದ್ವಿಜದೇವೋಪಲಂಭಿತಾಮ್ ।
ಕೃತಕೃತ್ಯಮಿವಾತ್ಮಾನಂ ಮನ್ಯಮಾನೋ ಮಹಾಮನಾಃ ॥

ಅನುವಾದ

ದೇವತಾ ಸ್ವರೂಪರಾದ ಬ್ರಾಹ್ಮಣರ ಕೃಪಾಶ್ರಯದಿಂದ ಲಭಿಸಿದ ಸಂಪತ್ಸಮೃದ್ಧವಾದ ರಾಜ್ಯಲಕ್ಷ್ಮಿಯನ್ನು ಮಹಾತ್ಮನಾದ ಬಲಿಯು ಉಪಭೋಗಿಸುತ್ತಾ ತನ್ನನ್ನು ಕೃತಕೃತ್ಯನೆಂದು ಭಾವಿಸಿಕೊಂಡನು. ॥36॥

ಅನುವಾದ (ಸಮಾಪ್ತಿಃ)

ಹದಿನೈದನೆಯ ಅಧ್ಯಾಯವು ಮುಗಿಯಿತು. ॥15॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ಪಂಚದಶೋಧ್ಯಾಯಃ ॥15॥