[ಹದಿನಾಲ್ಕನೆಯ ಅಧ್ಯಾಯ]
ಭಾಗಸೂಚನಾ
ಮನುವೇ ಮೊದಲಾದವರ ಕರ್ತವ್ಯ ನಿರೂಪಣೆ
(ಶ್ಲೋಕ-1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಮನ್ವಂತರೇಷು ಭಗವನ್ಯಥಾ ಮನ್ವಾದಯಸ್ತ್ವಿಮೇ ।
ಯಸ್ಮಿನ್ಕರ್ಮಣಿ ಯೇ ಯೇನ ನಿಯುಕ್ತಾಸ್ತದ್ವದಸ್ವ ಮೇ ॥
ಅನುವಾದ
ಪರೀಕ್ಷಿದ್ರಾಜನು ಕೇಳಿದನು — ಪೂಜ್ಯರೇ! ತಾವು ವರ್ಣಿಸಿದ ಈ ಮನುಗಳು, ಮನುಪುತ್ರರು, ಸಪ್ತರ್ಷಿಗಳು ತಮ್ಮ-ತಮ್ಮ ಮನ್ವಂತರಗಳಲ್ಲಿ ಯಾರಿಂದ ನಿಯುಕ್ತರಾಗುತ್ತಾರೆ? ಯಾವ-ಯಾವ ಕರ್ಮಗಳನ್ನು ಹೇಗೇಗೆ ಮಾಡುತ್ತಾರೆ? ಇದನ್ನು ತಾವು ದಯಮಾಡಿ ನನಗೆ ಹೇಳುವವರಾಗಿರಿ. ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಋಷಿರುವಾಚ
ಮೂಲಮ್
ಮನವೋ ಮನುಪುತ್ರಾಶ್ಚ ಮುನಯಶ್ಚ ಮಹೀಪತೇ ।
ಇಂದ್ರಾಃ ಸುರಗಣಾಶ್ಚೈವ ಸರ್ವೇ ಪುರುಷಶಾಸನಾಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಮನುಗಳನ್ನು, ಮನುಪುತ್ರರನ್ನು, ಸಪ್ತರ್ಷಿಗಳನ್ನು, ದೇವತೆಗಳನ್ನು, ಇಂದ್ರನನ್ನು ನಿಯುಕ್ತಗೊಳಿಸುವವನು ಸ್ವತಃ ಭಗವಂತನೇ ಆಗಿರುವನು.॥2॥
(ಶ್ಲೋಕ-3)
ಮೂಲಮ್
ಯಜ್ಞಾದಯೋ ಯಾಃ ಕಥಿತಾಃ ಪೌರುಷ್ಯಸ್ತನವೋ ನೃಪ ।
ಮನ್ವಾದಯೋ ಜಗದ್ಯಾತ್ರಾಂ ನಯಂತ್ಯಾಭಿಃ ಪ್ರಚೋದಿತಾ ॥
ಅನುವಾದ
ರಾಜನೇ! ಯಜ್ಞ ಪುರುಷನೇ ಮೊದಲಾದ ಭಗವಂತನ ಅಂಶಾವತಾರಗಳನ್ನು ನಾನು ಹೇಳಿರುವೆನಲ್ಲ. ಅವುಗಳ ಪ್ರೇರಣೆಯಿಂದಲೇ ಮನುವೇ ಮೊದಲಾದವರು ಲೋಕದ ರಕ್ಷಣೆಯ ಕಾರ್ಯವನ್ನು ನಿರ್ವಹಿಸುತ್ತಾರೆ.॥3॥
(ಶ್ಲೋಕ-4)
ಮೂಲಮ್
ಚತುರ್ಯುಗಾಂತೇ ಕಾಲೇನ ಗ್ರಸ್ತಾನ್ಶ್ರುತಿಗಣಾನ್ಯಥಾ ।
ತಪಸಾ ಋಷಯೋಪಶ್ಯನ್ಯತೋ ಧರ್ಮಃ ಸನಾತನಃ ॥
ಅನುವಾದ
ಕೃತ, ತ್ರೇತ, ದ್ವಾಪರ, ಕಲಿಗಳೆಂಬ ಚತುರ್ಯುಗಗಳ ಅಂತ್ಯದಲ್ಲಿ ಕಾಲಾನುಗುಣವಾಗಿ ನಷ್ಟವಾದ ವೇದಗಳನ್ನು ಸಪ್ತರ್ಷಿಗಳು ತಮ್ಮ ತಪಸ್ಸಿನಿಂದ ಪುನಃ ಕಂಡುಕೊಳ್ಳುವರು. ಆ ವೇದಗಳ ಸಮೂಹದಿಂದಲೇ ಸನಾತನ ಧರ್ಮದ ರಕ್ಷಣೆಯಾಗುತ್ತದೆ.॥4॥
(ಶ್ಲೋಕ-5)
ಮೂಲಮ್
ತತೋ ಧರ್ಮಂ ಚತುಷ್ಪಾದಂ ಮನವೋ ಹರಿಣೋದಿತಾಃ ।
ಯುಕ್ತಾಃ ಸಂಚಾರಯಂತ್ಯದ್ಧಾ ಸ್ವೇ ಸ್ವೇ ಕಾಲೇ ಮಹೀಂ ನೃಪ ॥
ಅನುವಾದ
ರಾಜೇಂದ್ರಾ! ಭಗವಂತನ ಪ್ರೇರಣೆಯಿಂದ ತಮ್ಮ-ತಮ್ಮ ಮನ್ವಂತರಗಳಲ್ಲಿ ಪ್ರಯತ್ನಪೂರ್ವಕ ಎಲ್ಲ ಮನುಗಳು ಪೃಥಿವಿಯಲ್ಲಿ ನಾಲ್ಕು ಚರಣಗಳಿಂದಲೂ ಪರಿಪೂರ್ಣವಾದ ಧರ್ಮದ ಅನುಷ್ಠಾನವನ್ನು ಮಾಡಿಸುತ್ತಾರೆ.॥5॥
(ಶ್ಲೋಕ-6)
ಮೂಲಮ್
ಪಾಲಯಂತಿ ಪ್ರಜಾಪಾಲಾ ಯಾವದಂತಂ ವಿಭಾಗಶಃ ।
ಯಜ್ಞಭಾಗಭುಜೋ ದೇವಾ ಯೇ ಚ ತತ್ರಾನ್ವಿತಾಶ್ಚ ತೈಃ ॥
ಅನುವಾದ
ಮನುಪುತ್ರರು ಆಯಾಮನ್ವಂತರದ ಕಡೆಯವರೆಗೂ ಕಾಲ-ದೇಶಗಳನ್ನು ವಿಭಾಗಿಸಿಕೊಂಡು ಪ್ರಜಾಪಾಲನೆಯನ್ನೂ, ಧರ್ಮದ ರಕ್ಷಣೆಯನ್ನೂ ಮಾಡುತ್ತಿರುತ್ತಾರೆ. ಪಂಚಮಹಾಯಜ್ಞಗಳಲ್ಲಿ ಭೋಕ್ತೃಗಳಾದ ಋಷಿಗಳೂ, ಪಿತೃಗಳೂ, ಭೂತಗಳೂ, ಮನುಷ್ಯರೂ ಇವರೊಡನೆ ದೇವತೆಗಳೂ ಆಯಾ ಮನ್ವಂತರದಲ್ಲಿ ನಡೆಯುವ ಯಜ್ಞಗಳ ಹವಿರ್ಭಾಗಗಳನ್ನು ಸ್ವೀಕರಿಸುತ್ತಾರೆ.॥6॥
(ಶ್ಲೋಕ-7)
ಮೂಲಮ್
ಇಂದ್ರೋ ಭಗವತಾ ದತ್ತಾಂ
ತ್ರೈಲೋಕ್ಯಶ್ರಿಯಮೂರ್ಜಿತಾಮ್ ।
ಭುಂಜಾನಃ ಪಾತಿ ಲೋಕಾಂ-
ಸೀನ್ಕಾಮಂ ಲೋಕೇ ಪ್ರವರ್ಷತಿ ॥
ಅನುವಾದ
ಇಂದ್ರನು ಭಗವಂತನಿಂದ ಕೊಡಲ್ಪಟ್ಟ ಸಂಪತ್ಸಮೃದ್ಧವಾದ ಮೂರು ಲೋಕಗಳ ಐಶ್ವರ್ಯವನ್ನೂ ಉಪಭೋಗಿಸುತ್ತಾ ಪ್ರಜೆಯ ಪಾಲನೆಯನ್ನು ಮಾಡುತ್ತಾನೆ. ಪ್ರಪಂಚದಲ್ಲಿ ಯಥೇಷ್ಟವಾಗಿ ಮಳೆಗರೆಯುವ ಅಧಿಕಾರವು ಇಂದ್ರನಿಗೇ ಇದೆ.॥7॥
ಮೂಲಮ್
(ಶ್ಲೋಕ-8)
ಜ್ಞಾನಂ ಚಾನುಯುಗಂ ಬ್ರೂತೇ ಹರಿಃ ಸಿದ್ಧಸ್ವರೂಪಧೃಕ್ ।
ಋಷಿರೂಪಧರಃ ಕರ್ಮ ಯೋಗಂ ಯೋಗೇಶರೂಪಧೃಕ್ ॥
ಅನುವಾದ
ಭಗವಂತನು ಪ್ರತಿ ಯುಗ-ಯುಗಗಳಲ್ಲಿ ಸನಕಾದಿ ಸಿದ್ಧರ ರೂಪಗಳನ್ನು ಧರಿಸಿ ಜ್ಞಾನವನ್ನೂ, ಯಾಜ್ಞವಲ್ಕ್ಯಾದಿ ಋಷಿಗಳ ರೂಪದಿಂದ ಕರ್ತವ್ಯವನ್ನೂ, ದತ್ತಾತ್ರೇಯಾದಿ ಯೋಗೇಶ್ವರರ ರೂಪದಿಂದ ಯೋಗವನ್ನೂ ಉಪದೇಶ ಮಾಡುತ್ತಾನೆ.॥8॥
(ಶ್ಲೋಕ-9)
ಮೂಲಮ್
ಸರ್ಗಂ ಪ್ರಜೇಶರೂಪೇಣ ದಸ್ಯೂನ್ಹನ್ಯಾತ್ಸ್ವರಾಡ್ವಪುಃ ।
ಕಾಲರೂಪೇಣ ಸರ್ವೇಷಾಮಭಾವಾಯ ಪೃಥಗ್ಗುಣಃ ॥
ಅನುವಾದ
ಅವನು ಮರೀಚಿಯೇ ಮುಂತಾದ ಪ್ರಜಾಪತಿಗಳ ರೂಪದಿಂದ ಸೃಷ್ಟಿಯ ವಿಸ್ತಾರವನ್ನು ಮಾಡುತ್ತಾನೆ. ಸಾಮ್ರಾಟನ ರೂಪದಿಂದ ದಸ್ಯುಗಳನ್ನು ಸಂಹರಿಸುತ್ತಾನೆ. ಶೀತೋಷ್ಣವೇ ಮೊದಲಾದ ವಿಭಿನ್ನ ಗುಣಗಳನ್ನು ಧರಿಸಿ ಕಾಲರೂಪದಿಂದ ಎಲ್ಲರನ್ನು ಸಂಹಾರದ ಕಡೆಗೆ ಒಯ್ಯುವನು.॥9॥
(ಶ್ಲೋಕ-10)
ಮೂಲಮ್
ಸ್ತೂಯಮಾನೋ ಜನೈರೇಭಿ-
ರ್ಮಾಯಯಾ ನಾಮರೂಪಯಾ ।
ವಿಮೋಹಿತಾತ್ಮಭಿರ್ನಾನಾ-
ದರ್ಶನೈರ್ನ ಚ ದೃಶ್ಯತೇ ॥
ಅನುವಾದ
ನಾಮ ಮತ್ತು ರೂಪಗಳ ಮಾಯೆಯಿಂದ ಪ್ರಾಣಿಗಳ ಬುದ್ಧಿಯು ವಿಮೂಢವಾಗಿಬಿಟ್ಟಿದೆ. ಈ ಕಾರಣದಿಂದಲೇ ಅನೇಕ ಪ್ರಕಾರದ ದರ್ಶನ ಶಾಸ್ತ್ರಗಳ ಮೂಲಕ ಭಗವಂತನ ಮಹಿಮೆಯನ್ನೇ ಕೀರ್ತಿಸುತ್ತಿದ್ದರೂ ಅವನ ವಾಸ್ತವಿಕ ಸ್ವರೂಪವನ್ನು ತಿಳಿಯದೇ ಹೋಗುವರು.॥10॥
(ಶ್ಲೋಕ-11)
ಮೂಲಮ್
ಏತತ್ಕಲ್ಪವಿಕಲ್ಪಸ್ಯ ಪ್ರಮಾಣಂ ಪರಿಕೀರ್ತಿತಮ್ ।
ಯತ್ರ ಮನ್ವಂತರಾಣ್ಯಾಹುಶ್ಚತುರ್ದಶ ಪುರಾವಿದಃ ॥
ಅನುವಾದ
ಪರೀಕ್ಷಿತನೇ! ಹೀಗೆ ನಾನು ನಿನಗೆ ಮಹಾಕಲ್ಪ ಮತ್ತು ಅವಾಂತರ ಕಲ್ಪದ ಪರಿಮಾಣವನ್ನು ಹೇಳಿದೆ. ಪುರಾಣ ತತ್ತ್ವ ವನ್ನು ಬಲ್ಲ ವಿದ್ವಾಂಸರು ಪ್ರತಿಯೊಂದು ಅವಾಂತರ ಕಲ್ಪದಲ್ಲಿ ಹದಿನಾಲ್ಕು ಮನ್ವಂತರಗಳನ್ನು ಹೇಳಿರುವರು.॥11॥
ಅನುವಾದ (ಸಮಾಪ್ತಿಃ)
ಹದಿನಾಲ್ಕನೆಯ ಅಧ್ಯಾಯವು ಮುಗಿಯಿತು. ॥14॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ಚತುರ್ದಶೋಧ್ಯಾಯಃ ॥14॥