೧೩

[ಹದಿಮೂರನೆಯ ಅಧ್ಯಾಯ]

ಭಾಗಸೂಚನಾ

ಮುಂದಿನ ಏಳು ಮನ್ವಂತರಗಳ ವರ್ಣನೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಮನುರ್ವಿವಸ್ವತಃ ಪುತ್ರಃ ಶ್ರಾದ್ಧದೇವ ಇತಿ ಶ್ರುತಃ ।
ಸಪ್ತಮೋ ವರ್ತಮಾನೋ ಯಸ್ತದಪತ್ಯಾನಿ ಮೇ ಶೃಣು ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಈಗ ನಡೆಯುತ್ತಿರುವ ಏಳನೆಯ ಮನ್ವಂತರದ ಮನುವು ವಿವಸ್ವಂತನ ಮಗನೇ ಯಶೋವಂತನಾದ ಶ್ರಾದ್ಧದೇವ (ವೈವಸ್ವತ) ನೆಂಬುವನು. ಅವನ ಸಂತಾನವನ್ನು ನಾನು ವರ್ಣಿಸುತ್ತೇನೆ, ಕೇಳು. ॥1॥

(ಶ್ಲೋಕ-2)

ಮೂಲಮ್

ಇಕ್ಷ್ವಾಕುರ್ನಭಗಶ್ಚೈವ ಧೃಷ್ಟಃ ಶರ್ಯಾತಿರೇವ ಚ ।
ನರಿಷ್ಯಂತೋಥ ನಾಭಾಗಃ ಸಪ್ತಮೋ ದಿಷ್ಟ ಉಚ್ಯತೇ ॥

(ಶ್ಲೋಕ-3)

ಮೂಲಮ್

ಕರೂಷಶ್ಚ ಪೃಷಧ್ರಶ್ಚ ದಶಮೋ ವಸುಮಾನ್ಸ್ಮೃತಃ ।
ಮನೋರ್ವೈವಸ್ವತಸ್ಯೈತೇ ದಶ ಪುತ್ರಾಃ ಪರಂತಪ ॥

ಅನುವಾದ

ವೈವಸ್ವತ ಮನುವಿಗೆ ಇಕ್ಷ್ವಾಕು, ನಭಗ, ಧೃಷ್ಟ, ಶರ್ಯಾತಿ, ನರಿಷ್ಯಂತ, ನಾಭಾಗ, ದಿಷ್ಟ, ಕರೂಷ, ಪೃಷಧ್ರ ಮತ್ತು ವಸುಮಾನರೆಂಬ ಹತ್ತು ಪುತ್ರರಿದ್ದಾರೆ. ॥2-3॥

(ಶ್ಲೋಕ-4)

ಮೂಲಮ್

ಆದಿತ್ಯಾ ವಸವೋ ರುದ್ರಾ ವಿಶ್ವೇದೇವಾ ಮರುದ್ಗಣಾಃ ।
ಅಶ್ವಿನಾವೃಭವೋ ರಾಜನ್ನಿಂದ್ರಸ್ತೇಷಾಂ ಪುರಂದರಃ ॥

ಅನುವಾದ

ಪರೀಕ್ಷಿದ್ರಾಜಾ! ಈ ಮನ್ವಂತರದಲ್ಲಿ ಆದಿತ್ಯ, ವಸು, ರುದ್ರ, ವಿಶ್ವೇದೇವ, ಮರುದ್ಗಣ, ಅಶ್ವಿನೀಕುಮಾರರು ಮತ್ತು ಋಭು ಇವರುಗಳು ಪ್ರಧಾನ ದೇವತೆಗಳು. ಇವರಿಗೆ ಪುರಂದರನೆಂಬ ಇಂದ್ರನು ಇದ್ದಾನೆ. ॥4॥

(ಶ್ಲೋಕ-5)

ಮೂಲಮ್

ಕಶ್ಯಪೋತ್ರಿರ್ವಸಿಷ್ಠಶ್ಚ ವಿಶ್ವಾಮಿತ್ರೋಥ ಗೌತಮಃ ।
ಜಮದಗ್ನಿರ್ಭರದ್ವಾಜ ಇತಿ ಸಪ್ತರ್ಷಯಃ ಸ್ಮೃತಾಃ ॥

ಅನುವಾದ

ಕಶ್ಯಪ, ಅತ್ರಿ, ವಸಿಷ್ಠ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ಭಾರದ್ವಾಜ ಇವರು ಸಪ್ತರ್ಷಿಗಳು. ॥5॥

(ಶ್ಲೋಕ-6)

ಮೂಲಮ್

ಅತ್ರಾಪಿ ಭಗವಜ್ಜನ್ಮ ಕಶ್ಯಪಾದದಿತೇರಭೂತ್ ।
ಆದಿತ್ಯಾನಾಮವರಜೋ ವಿಷ್ಣುರ್ವಾಮನರೂಪಧೃಕ್ ॥

ಅನುವಾದ

ಈ ಮನ್ವಂತರದಲ್ಲಿಯೂ ಕಶ್ಯಪರ ಪತ್ನಿಯಾದ ಅದಿತಿಯ ಗರ್ಭದಿಂದ ಆದಿತ್ಯರ ಕಡೆಯ ತಮ್ಮನಾಗಿ ವಾಮನ ರೂಪದಲ್ಲಿ ಭಗವಂತನು ಅವತರಿಸಿದ್ದನು. ॥6॥

(ಶ್ಲೋಕ-7)

ಮೂಲಮ್

ಸಂಕ್ಷೇಪತೋ ಮಯೋಕ್ತಾನಿ ಸಪ್ತ ಮನ್ವಂತರಾಣಿ ತೇ ।
ಭವಿಷ್ಯಾಣ್ಯಥ ವಕ್ಷ್ಯಾಮಿ ವಿಷ್ಣೋಃ ಶಕ್ತ್ಯಾನ್ವಿತಾನಿ ಚ ॥

ಅನುವಾದ

ಪರೀಕ್ಷಿತನೇ! ಹೀಗೆ ನಾನು ನಿನಗೆ ಸಂಕ್ಷೇಪವಾಗಿ ಏಳು ಮನ್ವಂತರಗಳ ವರ್ಣನೆಯನ್ನು ಮಾಡಿದ್ದೇನೆ. ಇನ್ನು ಭಗವಂತನ ಶಕ್ತಿಯಿಂದ ಕೂಡಿದ ಮುಂದೆ ಬರುವ ಏಳು ಮನ್ವಂತರಗಳನ್ನು ವರ್ಣಿಸುತ್ತೇನೆ. ॥7॥

(ಶ್ಲೋಕ-8)

ಮೂಲಮ್

ವಿವಸ್ವತಶ್ಚ ದ್ವೇ ಜಾಯೇ ವಿಶ್ವಕರ್ಮಸುತೇ ಉಭೇ ।
ಸಂಜ್ಞಾ ಛಾಯಾ ಚ ರಾಜೇಂದ್ರ ಯೇ ಪ್ರಾಗಭಿಹಿತೇ ತವ ॥

ಅನುವಾದ

ರಾಜೇಂದ್ರಾ! ನಾನು ಈ ಹಿಂದೆ ಆರನೆಯ ಸ್ಕಂಧದಲ್ಲಿ ವಿವಸ್ವಾನ್ (ಸೂರ್ಯದೇವನು) ಎಂಬುವನಿಗೆ ಸಂಜ್ಞಾ ಮತ್ತು ಛಾಯಾ ಎಂಬಿಬ್ಬರು ಮಡದಿಯರಿದ್ದ ವಿಷಯ ವನ್ನು ಹೇಳಿದ್ದೆ. ಇವರಿಬ್ಬರೂ ವಿಶ್ವಕರ್ಮನ ಪುತ್ರಿಯರಾಗಿದ್ದರು. ॥8॥

(ಶ್ಲೋಕ-9)

ಮೂಲಮ್

ತೃತೀಯಾಂ ವಡವಾಮೇಕೇ ತಾಸಾಂ ಸಂಜ್ಞಾಸುತಾಸಯಃ ।
ಯಮೋ ಯಮೀ ಶ್ರಾದ್ಧದೇವಶ್ಛಾಯಾಯಾಶ್ಚ ಸುತಾನ್ ಶೃಣು ॥

(ಶ್ಲೋಕ-10)

ಮೂಲಮ್

ಸಾವರ್ಣಿಸ್ತಪತೀ ಕನ್ಯಾ ಭಾರ್ಯಾ ಸಂವರಣಸ್ಯ ಯಾ ।
ಶನೈಶ್ಚರಸ್ತೃತೀಯೋಭೂದಶ್ವಿನೌ ವಡವಾತ್ಮಜೌ ॥

ಅನುವಾದ

ಸೂರ್ಯನಿಗೆ ವಡವಾ ಎಂಬ ಮೂರನೆಯ ಪತ್ನಿಯೂ ಇದ್ದಳೆಂದು ಕೆಲವರು ಹೇಳುತ್ತಾರೆ. (ನನ್ನ ವಿಚಾರ ದಲ್ಲಿ ಸಂಜ್ಞಾದೇವಿಗೆ ವಡವಾ ಎಂಬ ಹೆಸರಿತ್ತು.) ಆ ಸೂರ್ಯನ ಪತ್ನಿಯರಲ್ಲಿ ಸಂಜ್ಞಾದೇವಿಗೆ ಯಮ, ಯಮೀ ಮತ್ತು ಶ್ರಾದ್ಧದೇವರೆಂಬ ಮೂರು ಮಕ್ಕಳಾದರು. ಛಾಯೆಯಲ್ಲಿಯೂ ಸಾವರ್ಣಿ, ಶನೈಶ್ಚರ ಮತ್ತು ತಪತೀ ಎಂಬ ಮೂವರು ಮಕ್ಕಳು ಹುಟ್ಟಿದ್ದರು. ತಪತೀ ಎಂಬ ಕನ್ಯೆಯು ಸಂವರಣನ ಪತ್ನಿಯಾದಳು. ಸಂಜ್ಞೆಯು ವಡವಾ ಎಂಬ ರೂಪವನ್ನು ತಾಳಿದಾಗ ಅವಳಿಂದ ಅಶ್ವಿನೀಕುಮಾರರಿಬ್ಬರು ಜನಿಸಿದರು. ॥9-10॥

(ಶ್ಲೋಕ-11)

ಮೂಲಮ್

ಅಷ್ಟಮೇಂತರ ಆಯಾತೇ ಸಾವರ್ಣಿರ್ಭವಿತಾ ಮನುಃ ।
ನಿರ್ಮೋಕವಿರಜಸ್ಕಾದ್ಯಾಃ ಸಾವರ್ಣಿತನಯಾ ನೃಪ ॥

ಅನುವಾದ

ಎಂಟನೆಯ ಮನ್ವಂತರದಲ್ಲಿ ಸಾವರ್ಣಿ ಎಂಬುವನು ಮನುವಾಗುವನು. ಅವನಿಗೆ ನಿರ್ಮೋಕ, ವಿರಜಸ್ಕ ಮೊದಲಾದ ಪುತ್ರರು ಹುಟ್ಟುವರು. ॥11॥

(ಶ್ಲೋಕ-12)

ಮೂಲಮ್

ತತ್ರ ದೇವಾಃ ಸುತಪಸೋ ವಿರಜಾ ಅಮೃತಪ್ರಭಾಃ ।
ತೇಷಾಂ ವಿರೋಚನಸುತೋ ಬಲಿರಿಂದ್ರೋ ಭವಿಷ್ಯತಿ ॥

ಅನುವಾದ

ಪರೀಕ್ಷಿತನೇ! ಆ ಸಮಯದಲ್ಲಿ ಸುತಪಾ, ವಿರಜಾ ಮತ್ತು ಅಮೃತಪ್ರಭರೆಂಬ ದೇವತಾಗಣರಿರುವರು. ಈ ದೇವತೆಗಳಿಗೆ ವಿರೋಚನಪುತ್ರ ಬಲಿಯೇ ಇಂದ್ರನಾಗುವನು. ॥12॥

(ಶ್ಲೋಕ-13)

ಮೂಲಮ್

ದತ್ತ್ವೇಮಾಂ ಯಾಚಮಾನಾಯ ವಿಷ್ಣವೇ ಯಃ ಪದತ್ರಯಮ್ ।
ರಾದ್ಧಮಿಂದ್ರಪದಂ ಹಿತ್ವಾ ತತಃ ಸಿದ್ಧಿಮವಾಪ್ಸ್ಯತಿ ॥

(ಶ್ಲೋಕ-14)

ಮೂಲಮ್

ಯೋಸೌ ಭಗವತಾ ಬದ್ಧಃ ಪ್ರೀತೇನ ಸುತಲೇ ಪುನಃ ।
ನಿವೇಶಿತೋಧಿಕೇ ಸ್ವರ್ಗಾದಧುನಾಸ್ತೇ ಸ್ವರಾಡಿವ ॥

ಅನುವಾದ

ಭಗವಂತನಾದ ಮಹಾವಿಷ್ಣುವು ವಾಮನಾವತಾರವನ್ನು ತಾಳಿ ಈ ಬಲಿಯಿಂದಲೇ ಮೂರು ಹೆಜ್ಜೆ ಭೂಮಿಯನ್ನು ಕೇಳಿದ್ದನು. ಆದರೆ ಇವನು ಭಗವಂತನಿಗೆ ಮೂರು ಲೋಕಗಳನ್ನೇ ಅರ್ಪಿಸಿ ಬಿಟ್ಟನು. ಭಗವಂತನು ಒಮ್ಮೆ ಬಲಿಯನ್ನು ಬಂಧಿಸಿದ್ದನು. ಆದರೆ ಮತ್ತೆ ಪ್ರಸನ್ನನಾಗಿ ಅವನು ಇವನಿಗೆ ಸ್ವರ್ಗಕ್ಕಿಂತಲೂ ಶ್ರೇಷ್ಠವಾದ ಸುತಲಲೋಕದ ರಾಜ್ಯವನ್ನು ಕೊಟ್ಟನು. ಅವನು ಈಗಲೂ ಇಂದ್ರನಂತೆ ವಿರಾಜಮಾನನಾಗಿದ್ದಾನೆ. ಮುಂದೇ ಇವನೇ ಇಂದ್ರನಾಗುವನು ಮತ್ತು ಸಮಸ್ತ ಐಶ್ವರ್ಯದಿಂದ ಕೂಡಿದ ಇಂದ್ರಪದವಿಯನ್ನೂ ಪರಿತ್ಯಜಿಸಿ ಪರಮ ಸಿದ್ಧಿಯನ್ನು ಹೊಂದುವನು. ॥13-14॥

(ಶ್ಲೋಕ-15)

ಮೂಲಮ್

ಗಾಲವೋ ದೀಪ್ತಿಮಾನ್ರಾಮೋ ದ್ರೋಣಪುತ್ರಃ ಕೃಪಸ್ತಥಾ ।
ಋಷ್ಯಶೃಂಗಃ ಪಿತಾಸ್ಮಾಕಂ ಭಗವಾನ್ಬಾದರಾಯಣಃ ॥

(ಶ್ಲೋಕ-16)

ಮೂಲಮ್

ಇಮೇ ಸಪ್ತರ್ಷಯಸ್ತತ್ರ ಭವಿಷ್ಯಂತಿ ಸ್ವಯೋಗತಃ ।
ಇದಾನೀಮಾಸತೇ ರಾಜನ್ಸ್ವೇ ಸ್ವ ಆಶ್ರಮಮಂಡಲೇ ॥

ಅನುವಾದ

ಗಾಲವ, ದೀಪ್ತಿಮಾನ್, ಪರಶುರಾಮ, ಅಶ್ವ ತ್ಥಾಮಾ, ಕೃಪಾಚಾರ್ಯರು, ಋಷ್ಯಶೃಂಗ ಮತ್ತು ನನ್ನ ತಂದೆ ಭಗವಾನ್ ವೇದವ್ಯಾಸರು ಈ ಎಂಟನೆಯ ಮನ್ವಂತರದಲ್ಲಿ ಸಪ್ತರ್ಷಿಗಳಾಗುವರು. ಈ ಸಮಯದಲ್ಲಿ ಅವರು ಯೋಗ ಬಲದಿಂದ ತಮ್ಮ-ತಮ್ಮ ಆಶ್ರಮಗಳಲ್ಲಿ ನೆಲಸಿದ್ದಾರೆ. ॥15-16॥

(ಶ್ಲೋಕ-17)

ಮೂಲಮ್

ದೇವಗುಹ್ಯಾತ್ಸರಸ್ವತ್ಯಾಂ ಸಾರ್ವಭೌಮ ಇತಿ ಪ್ರಭುಃ ।
ಸ್ಥಾನಂ ಪುರಂದರಾದ್ಧೃತ್ವಾ ಬಲಯೇ ದಾಸ್ಯತೀಶ್ವರಃ ॥

ಅನುವಾದ

ದೇವಗುಹ್ಯನ ಪತ್ನಿಯಾದ ಸರಸ್ವತೀ ಎಂಬುವಳ ಗರ್ಭದಲ್ಲಿ ಸಾರ್ವಭೌಮನೆಂಬ ಹೆಸರಿನಿಂದ ಭಗವಂತನು ಅವತರಿಸುವನು. ಇವನೇ ಒಡೆಯನಾದ ಇಂದ್ರನಿಂದ ಸ್ವರ್ಗದ ರಾಜ್ಯವನ್ನು ಕಿತ್ತುಕೊಂಡು ಬಲಿರಾಜನಿಗೆ ಕೊಡುವನು. ॥17॥

(ಶ್ಲೋಕ-18)

ಮೂಲಮ್

ನವಮೋ ದಕ್ಷಸಾವರ್ಣಿರ್ಮನುರ್ವರುಣಸಂಭವಃ ।
ಭೂತಕೇತುರ್ದೀಪ್ತಕೇತುರಿತ್ಯಾದ್ಯಾಸ್ತತ್ಸುತಾ ನೃಪ ॥

ಅನುವಾದ

ಪರೀಕ್ಷಿತನೇ! ವರುಣನ ಪುತ್ರನಾದ ದಕ್ಷಸಾವರ್ಣಿಯು ಒಂಭತ್ತನೆಯ ಮನು ಆಗುವನು. ಇವನಿಗೆ ಭೂತಕೇತು, ದೀಪ್ತಕೇತು ಮೊದಲಾದ ಅನೇಕ ಪುತ್ರರು ಹುಟ್ಟುವರು. ॥18॥

(ಶ್ಲೋಕ-19)

ಮೂಲಮ್

ಪಾರಾ ಮರೀಚಿಗರ್ಭಾದ್ಯಾ ದೇವಾ ಇಂದ್ರೋದ್ಭುತಃ ಸ್ಮೃತಃ ।
ದ್ಯುತಿಮತ್ಪ್ರಮುಖಾಸ್ತತ್ರ ಭವಿಷ್ಯಂತ್ಯೃಷಯಸ್ತತಃ ॥

ಅನುವಾದ

ಪಾರ, ಮರೀಚಿಗರ್ಭ, ಮೊದಲಾದ ದೇವತಾಗಣಗಳು ಇರುವರು ಮತ್ತು ಅದ್ಭುತನೆಂಬ ಹೆಸರಿನ ಇಂದ್ರನಾಗುವನು. ಆ ಮನ್ವಂತರದಲ್ಲಿ ದ್ಯುತಿಮಾನ್ ಮೊದಲಾದವರು ಸಪ್ತರ್ಷಿಗಳಾಗುವರು. ॥19॥

(ಶ್ಲೋಕ-20)

ಮೂಲಮ್

ಆಯುಷ್ಮತೋಂಬುಧಾರಾಯಾಮೃಷಭೋ ಭಗವತ್ಕಲಾ ।
ಭವಿತಾ ಯೇನ ಸಂರಾದ್ಧಾಂ ತ್ರಿಲೋಕೀಂ ಭೋಕ್ಷ್ಯತೇದ್ಭುತಃ ॥

ಅನುವಾದ

ಆಯುಷ್ಮಂತನ ಪತ್ನಿಯಾದ ಅಂಬುಧಾರಾ ಎಂಬುವಳ ಗರ್ಭದಿಂದ ಋಷಭನ ರೂಪದಲ್ಲಿ ಭಗವಂತನ ಕಲಾವ ತಾರವಾಗುವುದು. ಅದ್ಭುತನೆಂಬ ಇಂದ್ರನು ಇವನು ಕೊಟ್ಟಿರುವ ತ್ರೈಲೋಕ್ಯದ ರಾಜ್ಯವನ್ನು ಅನುಭವಿಸುವನು. ॥20॥

(ಶ್ಲೋಕ-21)

ಮೂಲಮ್

ದಶಮೋ ಬ್ರಹ್ಮ ಸಾವರ್ಣಿರುಪಶ್ಲೋಕಸುತೋ ಮಹಾನ್ ।
ತತ್ಸುತಾ ಭೂರಿಷೇಣಾದ್ಯಾ ಹವಿಷ್ಮತ್ಪ್ರಮುಖಾ ದ್ವಿಜಾಃ ॥

(ಶ್ಲೋಕ-22)

ಮೂಲಮ್

ಹವಿಷ್ಮಾನ್ಸುಕೃತಿಃ ಸತ್ಯೋ ಜಯೋ ಮೂರ್ತಿಸ್ತದಾ ದ್ವಿಜಾಃ ।
ಸುವಾಸನವಿರುದ್ಧಾದ್ಯಾ ದೇವಾಃ ಶಂಭುಃ ಸುರೇಶ್ವರಃ ॥

ಅನುವಾದ

ಉಪಶ್ಲೋಕನ ಪುತ್ರ ಬ್ರಹ್ಮಸಾವರ್ಣಿಯು ಹತ್ತನೆಯ ಮನುವಾಗುವನು. ಅವನಲ್ಲಿ ಸಮಸ್ತ ಸದ್ಗುಣಗಳು ವಾಸ ವಾಗಿರುವುವು. ಭೂರಿಷೇಣರೇ ಮುಂತಾದವರು ಅವನಿಗೆ ಮಕ್ಕಳಾಗುವರು. ಹವಿಷ್ಮಾನ್, ಸುಕೃತಿ, ಸತ್ಯ, ಜಯ, ಮೂರ್ತಿ ಮೊದಲಾದವರು ಸಪ್ತರ್ಷಿಗಳಾಗುವರು. ಸುವಾಸನ, ವಿರುದ್ಧ ಮೊದಲಾದವರು ದೇವತೆಗಳಾಗಿದ್ದು, ಶಂಭು ಎಂಬುವನು ಇಂದ್ರನಾಗುವನು. ॥21-22॥

(ಶ್ಲೋಕ-23)

ಮೂಲಮ್

ವಿಷ್ವಕ್ಸೇನೋ ವಿಷೂಚ್ಯಾಂ ತು ಶಂಭೋಃ ಸಖ್ಯಂ ಕರಿಷ್ಯತಿ ।
ಜಾತಃ ಸ್ವಾಂಶೇನ ಭಗವಾನ್ಗೃಹೇ ವಿಶ್ವಸೃಜೋ ವಿಭುಃ ॥

ಅನುವಾದ

ವಿಶ್ವ ಸೃಜನ ಪತ್ನಿ ವಿಷೂಚಿಯ ಗರ್ಭದಲ್ಲಿ ಭಗವಂತನು ವಿಷ್ವಕ್ ಸೇನನ ರೂಪದಲ್ಲಿ ಅಂಶಾವತಾರವನ್ನು ಎತ್ತಿ ಶಂಭುವೆಂಬ ಇಂದ್ರನೊಡನೆ ಸಖ್ಯ ಬೆಳೆಸುವನು. ॥23॥

(ಶ್ಲೋಕ-24)

ಮೂಲಮ್

ಮನುರ್ವೈ ಧರ್ಮಸಾವರ್ಣಿರೇಕಾದಶಮ ಆತ್ಮವಾನ್ ।
ಅನಾಗತಾಸ್ತತ್ಸುತಾಶ್ಚ ಸತ್ಯಧರ್ಮಾದಯೋ ದಶ ॥

ಅನುವಾದ

ಅತ್ಯಂತ ಸಂಯಮಿಯಾದ ಧರ್ಮಸಾವರ್ಣಿಯು ಹನ್ನೊಂದನೆಯ ಮನು ಆಗುವನು. ಅವನಿಗೆ ಸತ್ಯ, ಧರ್ಮ ಮೊದಲಾದ ಹತ್ತು ಪುತ್ರರಾಗುವರು. ॥24॥

(ಶ್ಲೋಕ-25)

ಮೂಲಮ್

ವಿಹಂಗಮಾಃ ಕಾಮಗಮಾ ನಿರ್ವಾಣರುಚಯಃ ಸುರಾಃ ।
ಇಂದ್ರಶ್ಚ ವೈಧೃತಸ್ತೇಷಾಮೃಷಯಶ್ಚಾರುಣಾದಯಃ ॥

ಅನುವಾದ

ವಿಹಂಗಮ, ಕಾಮಗಮ, ನಿರ್ವಾಣರುಚಿ ಮೊದಲಾದವರು ದೇವತೆಗಳಾಗುವರು. ಅರುಣಾದಿ ಸಪ್ತರ್ಷಿಗಳಿದ್ದು, ವೈಧೃತನೆಂಬುವನು ಇಂದ್ರನಾಗುವನು. ॥25॥

(ಶ್ಲೋಕ-26)

ಮೂಲಮ್

ಆರ್ಯಕಸ್ಯ ಸುತಸ್ತತ್ರ ಧರ್ಮಸೇತುರಿತಿ ಸ್ಮೃತಃ ।
ವೈಧೃತಾಯಾಂ ಹರೇರಂಶಸಿಲೋಕೀಂ ಧಾರಯಿಷ್ಯತಿ ॥

ಅನುವಾದ

ಆರ್ಯಕ್ ನೆಂಬುವನ ಪತ್ನೀ ವೈಧೃತಿಯ ಗರ್ಭದಿಂದ ಧರ್ಮಸೇತುವಿನ ರೂಪದಲ್ಲಿ ಭಗವಂತನ ಅಂಶಾವತಾರ ವಾಗುವುದು ಮತ್ತು ಅದೇ ರೂಪದಲ್ಲಿ ಅವನು ತ್ರೈಲೋಕ್ಯ ವನ್ನು ರಕ್ಷಿಸುವನು. ॥26॥

(ಶ್ಲೋಕ-27)

ಮೂಲಮ್

ಭವಿತಾ ರುದ್ರಸಾವರ್ಣೀ ರಾಜನ್ದ್ವಾದಶಮೋ ಮನುಃ ।
ದೇವವಾನುಪದೇವಶ್ಚ ದೇವಶ್ರೇಷ್ಠಾದಯಃ ಸುತಾಃ ॥

ಅನುವಾದ

ಪರೀಕ್ಷಿತನೇ! ಹನ್ನೆರಡನೆಯ ಮನುವು ರುದ್ರಸಾವರ್ಣಿ ಯಾಗುವನು. ಅವನಿಗೆ ದೇವವಾನ್, ಉಪದೇವ, ದೇವ ಶ್ರೇಷ್ಠ ಮುಂತಾದವರು ಪುತ್ರರು ಹುಟ್ಟುವರು. ॥27॥

(ಶ್ಲೋಕ-28)

ಮೂಲಮ್

ಋತಧಾಮಾ ಚ ತತ್ರೇಂದ್ರೋ ದೇವಾಶ್ಚ ಹರಿತಾದಯಃ ।
ಋಷಯಶ್ಚ ತಪೋಮೂರ್ತಿಸ್ತಪಸ್ವ್ಯಾಗ್ನೀಧ್ರಕಾದಯಃ ॥

ಅನುವಾದ

ಆ ಮನ್ವಂತರದಲ್ಲಿ ಋತಧಾಮಾನೆಂಬುವನು ಇಂದ್ರನಾಗು ವನು. ಹರಿತರೇ ಮುಂತಾದವರು ದೇವತೆಗಳಿರುವರು. ತಪೋಮೂರ್ತಿ, ತಪಸ್ವೀ, ಆಗ್ನೀಧ್ರಕ ಮೊದಲಾದವರು ಸಪ್ತರ್ಷಿಗಳಾಗುವರು. ॥28॥

(ಶ್ಲೋಕ-29)

ಮೂಲಮ್

ಸ್ವಧಾಮಾಖ್ಯೋ ಹರೇರಂಶಃ ಸಾಧಯಿಷ್ಯತಿ ತನ್ಮನೋಃ ।
ಅಂತರಂ ಸತ್ಯಸಹಸಃ ಸೂನೃತಾಯಾಃ ಸುತೋ ವಿಭುಃ ॥

ಅನುವಾದ

ಸತ್ಯ ಸಹಾಯನ ಪತ್ನೀ ಸೂನೃತಾಳ ಗರ್ಭದಿಂದ ಸ್ವಧಾಮವೆಂಬ ರೂಪದಲ್ಲಿ ಭಗವಂತನ ಅಂಶಾವತಾರವಾಗುವುದು ಹಾಗೂ ಅದೇ ರೂಪದಲ್ಲಿ ಭಗವಂತನು ಆ ಮನ್ವಂತರವನ್ನು ಪಾಲಿಸುವನು. ॥29॥

(ಶ್ಲೋಕ-30)

ಮೂಲಮ್

ಮನುಸಯೋದಶೋ ಭಾವ್ಯೋ ದೇವಸಾವರ್ಣಿರಾತ್ಮವಾನ್ ।
ಚಿತ್ರಸೇನವಿಚಿತ್ರಾದ್ಯಾ ದೇವಸಾವರ್ಣಿದೇಹಜಾಃ ॥

ಅನುವಾದ

ಪರಮ ಜಿತೇಂದ್ರಿಯನಾದ ದೇವಸಾ ವರ್ಣಿಯು ಹದಿಮೂರನೆಯ ಮನುವಾಗುವನು. ಚಿತ್ರ ಸೇನ, ವಿಚಿತ್ರ ಮುಂತಾದವರು ಅವನಿಗೆ ಪುತ್ರರಾಗಿ ಜನಿಸುವರು. ॥30॥

(ಶ್ಲೋಕ-31)

ಮೂಲಮ್

ದೇವಾಃ ಸುಕರ್ಮಸುತ್ರಾಮಸಂಜ್ಞಾ ಇಂದ್ರೋ ದಿವಸ್ಪತಿಃ ।
ನಿರ್ಮೋಕತತ್ತ್ವದರ್ಶಾದ್ಯಾ ಭವಿಷ್ಯಂತ್ಯೃಷಯಸ್ತದಾ ॥

ಅನುವಾದ

ಸುಕರ್ಮ, ಸುತ್ರಾಮ ಮೊದಲಾದವರು ದೇವತೆಗಳಿರುವರು. ದಿವಸ್ಪತಿ ಎಂಬುವನು ಇಂದ್ರನಾಗು ವನು. ನಿರ್ಮೋಕ ಮತ್ತು ತತ್ತ್ವದರ್ಶ ಮೊದಲಾದವರು ಸಪ್ತರ್ಷಿಗಳಾಗುವರು. ॥31॥

(ಶ್ಲೋಕ-32)

ಮೂಲಮ್

ದೇವಹೋತ್ರಸ್ಯ ತನಯ ಉಪಹರ್ತಾ ದಿವಸ್ಪತೇಃ ।
ಯೋಗೇಶ್ವರೋ ಹರೇರಂಶೋ ಬೃಹತ್ಯಾಂ ಸಂಭವಿಷ್ಯತಿ ॥

ಅನುವಾದ

ದೇವಹೋತ್ರನ ಪತ್ನೀ ಬೃಹತಿಯ ಗರ್ಭದಿಂದ ಯೋಗೇಶ್ವರನ ರೂಪದಲ್ಲಿ ಭಗವಂತನ ಅಂಶಾವತಾರವಾಗುವುದು. ಅದೇ ರೂಪದಲ್ಲಿ ದಿವಸ್ಪತಿಗೆ ಇಂದ್ರ ಪದವಿಯನ್ನು ಕರುಣಿಸುವನು. ॥32॥

(ಶ್ಲೋಕ-33)

ಮೂಲಮ್

ಮನುರ್ವಾ ಇಂದ್ರಸಾವರ್ಣಿಶ್ಚತುರ್ದಶಮ ಏಷ್ಯತಿ ।
ಉರುಗಂಭೀರಬುದ್ಧ್ಯಾದ್ಯಾ ಇಂದ್ರಸಾವರ್ಣಿವೀರ್ಯಜಾಃ ॥

ಅನುವಾದ

ರಾಜೇಂದ್ರ! ಇಂದ್ರಸಾವರ್ಣಿಯು ಹದಿನಾಲ್ಕನೆಯ ಮನು ಆಗುವನು. ಉರು, ಗಂಭೀರಬುದ್ಧಿ ಮುಂತಾದವರು ಅವನಿಗೆ ಪುತ್ರರಾಗುವರು. ॥33॥

(ಶ್ಲೋಕ-34)

ಮೂಲಮ್

ಪವಿತ್ರಾಶ್ಚಾಕ್ಷುಷಾ ದೇವಾಃ ಶುಚಿರಿಂದ್ರೋ ಭವಿಷ್ಯತಿ ।
ಅಗ್ನಿರ್ಬಾಹುಃ ಶುಚಿಃ ಶುದ್ಧೋ ಮಾಗಧಾದ್ಯಾಸ್ತಪಸ್ವಿನಃ ॥

ಅನುವಾದ

ಆಗ ಪವಿತ್ರ, ಚಾಕ್ಷುಷ ಮುಂತಾದವರು ದೇವತೆಗಳಾಗುವರು. ಶುಚಿಯೆಂಬುವನು ಇಂದ್ರನಾಗುವನು. ಅಗ್ನಿ, ಬಾಹು, ಶುಚಿ, ಶುದ್ಧ, ಮಾಗಧ ಮುಂತಾದವರು ಸಪ್ತರ್ಷಿಗಳಾಗುವರು. ॥34॥

(ಶ್ಲೋಕ-35)

ಮೂಲಮ್

ಸತ್ರಾಯಣಸ್ಯ ತನಯೋ ಬೃಹದ್ಭಾನುಸ್ತದಾ ಹರಿಃ ।
ವಿತಾನಾಯಾಂ ಮಹಾರಾಜ ಕ್ರಿಯಾತಂತೂನ್ವಿತಾಯಿತಾ ॥

ಅನುವಾದ

ಆ ಸಮಯದಲ್ಲಿ ಸತ್ರಾಯಣದ ಪತ್ನೀ ವಿತಾನಾಳ ಗರ್ಭದಿಂದ ಬೃಹದ್ಭಾನುರೂಪನಾಗಿ ಭಗವಂತನು ಅವತರಿಸಿ ಕರ್ಮಕಾಂಡವನ್ನು ವಿಸ್ತರಿಸುವನು. ॥35॥

(ಶ್ಲೋಕ-36)

ಮೂಲಮ್

ರಾಜಂಶ್ಚತುರ್ದಶೈತಾನಿ ತ್ರಿಕಾಲಾನುಗತಾನಿ ತೇ ।
ಪ್ರೋಕ್ತಾನ್ಯೇಭಿರ್ಮಿತಃ ಕಲ್ಪೋ ಯುಗಸಾಹಸ್ರಪರ್ಯಯಃ ॥

ಅನುವಾದ

ಪರೀಕ್ಷಿತನೇ! ಈ ಹದಿನಾಲ್ಕು ಮನ್ವಂತರಗಳು ಭೂತ, ವರ್ತಮಾನ, ಭವಿಷ್ಯ ಮೂರೂ ಕಾಲಗಳಲ್ಲಿ ನಡೆಯುತ್ತಾ ಇರುತ್ತವೆ. ಇವುಗಳ ಮೂಲಕವೇ ಒಂದುಸಾವಿರ ಚತುರ್ಯುಗಗಳುಳ್ಳ ಕಲ್ಪದ ಗಣನೆ ಮಾಡಲಾಗುತ್ತದೆ. ॥36॥

ಅನುವಾದ (ಸಮಾಪ್ತಿಃ)

ಹದಿಮೂರನೆಯ ಅಧ್ಯಾಯವು ಮುಗಿಯಿತು. ॥13॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇಮನ್ವಂತರಾನುವರ್ಣನಂ ನಾಮ ತ್ರಯೋದಶೋಧ್ಯಾಯಃ ॥13॥