[ಹನ್ನೆರಡನೆಯ ಅಧ್ಯಾಯ]
ಭಾಗಸೂಚನಾ
ಮೋಹಿನೀರೂಪವನ್ನು ನೋಡಿ ಮಹಾದೇವನು ಮೋಹಿತನಾದುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಬಾದರಾಯಣಿರುವಾಚ
ಮೂಲಮ್
ವೃಷಧ್ವಜೋ ನಿಶಮ್ಯೇದಂ ಯೋಷಿದ್ರೂಪೇಣ ದಾನವಾನ್ ।
ಮೋಹಯಿತ್ವಾ ಸುರಗಣಾನ್ಹರಿಃ ಸೋಮಮಪಾಯಯತ್ ॥
(ಶ್ಲೋಕ-2)
ಮೂಲಮ್
ವೃಷಮಾರುಹ್ಯ ಗಿರಿಶಃ ಸರ್ವಭೂತಗಣೈರ್ವೃತಃ ।
ಸಹ ದೇವ್ಯಾ ಯಯೌ ದ್ರಷ್ಟುಂ ಯತ್ರಾಸ್ತೇ ಮಧುಸೂದನಃ ॥
ಅನುವಾದ
ಶ್ರೀಶುಕಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಶ್ರೀಹರಿಯು ಸ್ತ್ರೀರೂಪವನ್ನು ಧರಿಸಿ ಅಸುರರಿಗೆ ಮೋಹ ವನ್ನುಂಟುಮಾಡಿ, ದೇವತೆಗಳಿಗೆ ಅಮೃತವನ್ನು ಕುಡಿಸಿದನು ಎಂದು ಕೇಳಿ ವೃಷಭಧ್ವಜನಾದ ಪರಮೇಶ್ವರನು ಪಾರ್ವತಿ ಯೊಡನೆ ವೃಷಭವನ್ನೇರಿ ಸಮಸ್ತ ಭೂತಗಣಗಳನ್ನು ವೆರೆಸಿ ಕೊಂಡು ಭಗವಾನ್ ಮಧುಸೂದನನು ಇದ್ದಲ್ಲಿಗೆ ಆಗಮಿಸಿದನು. ॥1-2॥
(ಶ್ಲೋಕ-3)
ಮೂಲಮ್
ಸಭಾಜಿತೋ ಭಗವತಾ ಸಾದರಂ ಸೋಮಯಾ ಭವಃ ।
ಸೂಪವಿಷ್ಟ ಉವಾಚೇದಂ ಪ್ರತಿಪೂಜ್ಯ ಸ್ಮಯನ್ಹರಿಮ್ ॥
ಅನುವಾದ
ಭಗವಾನ್ ಶ್ರೀಹರಿಯು ಪ್ರೇಮದಿಂದ ಭಗವಂತನಾದ ಪಾರ್ವತೀ ಪರಮೇಶ್ವರರನ್ನು ಸ್ವಾಗತಿಸಿ ಸತ್ಕಾರಮಾಡಿದನು. ಶಿವನು ಸುಖಾಸೀನನಾಗಿ ಭಗವಂತ ನನ್ನು ಸಮ್ಮಾನಿಸುತ್ತಾ ನಸುನಗುತ್ತಾ ಇಂತೆಂದನು. ॥3॥
(ಶ್ಲೋಕ-4)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ದೇವದೇವ ಜಗದ್ವ್ಯಾಪಿನ್ಜಗದೀಶ ಜಗನ್ಮಯ ।
ಸರ್ವೇಷಾಮಪಿ ಭಾವಾನಾಂ ತ್ವಮಾತ್ಮಾ ಹೇತುರೀಶ್ವರಃ ॥
ಅನುವಾದ
ಶ್ರೀಮಹಾದೇವನು ಹೇಳಿದನು — ದೇವದೇವನೇ! ಪ್ರಪಂಚವೆಲ್ಲವನ್ನು ವ್ಯಾಪಿಸಿಕೊಂಡಿರುವವನೇ! ಮೂಜಗ ದೊಡೆಯನೇ! ಜಗತ್ಸ್ವರೂಪನೇ! ಸಮಸ್ತ ಚರಾಚರ ಪದಾರ್ಥಗಳ ಮೂಲ ಕಾರಣನೂ, ಈಶ್ವರನೂ, ಆತ್ಮನೂ ನೀನೇ ಆಗಿರುವೆ. ॥4॥
(ಶ್ಲೋಕ-5)
ಮೂಲಮ್
ಆದ್ಯಂತಾವಸ್ಯ ಯನ್ಮಧ್ಯಮಿದಮನ್ಯದಹಂ ಬಹಿಃ ।
ಯತೋವ್ಯಯಸ್ಯ ನೈತಾನಿ ತತ್ಸತ್ಯಂ ಬ್ರಹ್ಮ ಚಿದ್ಭವಾನ್ ॥
ಅನುವಾದ
ಈ ಜಗತ್ತಿಗೆ ಆದಿ-ಮಧ್ಯ-ಅಂತ್ಯವೂ ನೀನೇ ಆಗಿರುವೆ. ಆದರೆ ನಿನಗೆ ಆದಿ-ಮಧ್ಯಾಂತಗಳಾವುವೂ ಇಲ್ಲ. ನಿನ್ನ ಅವಿನಾಶೀ ಸ್ವರೂಪದಲ್ಲಿ ದ್ರಷ್ಟಾ, ದೃಶ್ಯ, ಭೋಕ್ತಾ, ಭೋಗ್ಯ ಮುಂತಾದ ಭೇದಗಳಾವುವೂ ಇಲ್ಲ. ವಾಸ್ತವವಾಗಿ ನೀನು ಸತ್ಯ, ಚಿನ್ಮಾತ್ರ ಬ್ರಹ್ಮನೇ ಆಗಿರುವೆ.॥5॥
(ಶ್ಲೋಕ-6)
ಮೂಲಮ್
ತವೈವ ಚರಣಾಂಭೋಜಂ ಶ್ರೇಯಸ್ಕಾಮಾ ನಿರಾಶಿಷಃ ।
ವಿಸೃಜ್ಯೋಭಯತಃ ಸಂಗಂ ಮುನಯಃ ಸಮುಪಾಸತೇ ॥
ಅನುವಾದ
ಶ್ರೇಯಸ್ಕಾಮರಾದ ಮಹಾತ್ಮರು ಇಹ- ಪರಲೋಕಗಳ ಆಸಕ್ತಿಯನ್ನು ತೊರೆದು, ಸಮಸ್ತ ಕಾಮನೆಗಳನ್ನು ಪರಿತ್ಯಾಗಮಾಡಿ ನಿನ್ನ ಚರಣಕಮಲಗಳ ಆರಾಧನೆ ಯಲ್ಲೇ ಸದಾಕಾಲ ಆಸಕ್ತರಾಗಿರುತ್ತಾರೆ. ॥6॥
(ಶ್ಲೋಕ-7)
ಮೂಲಮ್
ತ್ವಂ ಬ್ರಹ್ಮ ಪೂರ್ಣಮಮೃತಂ ವಿಗುಣಂ ವಿಶೋಕ-
ಮಾನಂದಮಾತ್ರಮವಿಕಾರಮನನ್ಯದನ್ಯತ್ ।
ವಿಶ್ವಸ್ಯ ಹೇತುರುದಯಸ್ಥಿತಿಸಂಯಮಾನಾ-
ಮಾತ್ಮೇಶ್ವರಶ್ಚ ತದಪೇಕ್ಷತಯಾನಪೇಕ್ಷಃ ॥
ಅನುವಾದ
ಪರಂ ಜ್ಯೋತಿಯೇ! ಪರಮಾತ್ಮನೇ! ನೀನು ಅಮೃತ ಸ್ವರೂಪನು. ಸಮಸ್ತ ಪ್ರಾಕೃತಗುಣಗಳಿಂದ ರಹಿತನಾದವನು. ಶೋಕದ ನೆರಳೂ ಕೂಡ ಇಲ್ಲದವನು. ನೀನು ಪರಿಪೂರ್ಣ ಬ್ರಹ್ಮಸ್ವರೂಪನಾಗಿರುವೆ. ಕೇವಲ ಆನಂದ ಸ್ವರೂಪನಾಗಿದ್ದು, ನಿರ್ವಿಕಾರನಾಗಿರುವೆ. ನಿನ್ನಿಂದ ಭಿನ್ನವಾದುದು ಏನೂ ಇಲ್ಲ, ಆದರೆ ನೀನು ಎಲ್ಲಕ್ಕಿಂತ ಭಿನ್ನನಾಗಿರುವೆ. ನೀನು ವಿಶ್ವದ ಉತ್ಪತ್ತಿ-ಸ್ಥಿತಿ-ಪ್ರಳಯಗಳಿಗೆ ಪರಮ ಕಾರಣನಾಗಿರುವೆ. ಸಮಸ್ತ ಜೀವರಿಗೆ ಶುಭಾಶುಭ ಕರ್ಮ ಫಲಗಳನ್ನು ಕೊಡುವ ಸ್ವಾಮಿಯೂ ನೀನೇ ಆಗಿರುವೆ. ಆದರೆ ಇವೆಲ್ಲ ಮಾತುಗಳು ಜೀವಿಗಳ ಅಪೇಕ್ಷೆಯಿಂದಲೇ ಹೇಳಲಾಗುತ್ತವೆ. ವಾಸ್ತವವಾಗಿ ನೀನು ಎಲ್ಲರ ಅಪೇಕ್ಷೆಯಿಂದ ರಹಿತ ಅನಪೇಕ್ಷನಾಗಿರುವೆ.॥7॥
(ಶ್ಲೋಕ-8)
ಮೂಲಮ್
ಏಕಸ್ತ್ವಮೇವ ಸದಸದ್ದ್ವಯಮದ್ವಯಂ ಚ
ಸ್ವರ್ಣಂ ಕೃತಾಕೃತಮಿವೇಹ ನ ವಸ್ತುಭೇದಃ ।
ಅಜ್ಞಾನತಸ್ತ್ವಯಿ ಜನೈರ್ವಿಹಿತೋ ವಿಕಲ್ಪೋ
ಯಸ್ಮಾದ್ಗುಣೈರ್ವ್ಯತಿಕರೋ ನಿರುಪಾಧಿಕಸ್ಯ ॥
ಅನುವಾದ
ಸ್ವಾಮಿಯೇ! ಆಭರಣದ ರೂಪದಲ್ಲಿರುವ ಚಿನ್ನಕ್ಕೂ, ಮೂಲರೂಪದಲ್ಲಿರುವ ಚಿನ್ನಕ್ಕೂ ಯಾವ ವ್ಯತ್ಯಾಸವೂ ಇರದೆ ಎರಡೂ ಒಂದೇ ವಸ್ತುವಾಗಿದೆ. ಹಾಗೆಯೇ ಇಲ್ಲಿ ಇರುವ ಕಾರ್ಯ-ಕಾರಣ, ದ್ವೈತ-ಅದ್ವೈತ ಇವೆಲ್ಲವೂ ಏಕಮಾತ್ರ ನೀನೇ ಆಗಿರುವೆ. ನಿನ್ನ ವಾಸ್ತವಿಕ ಸ್ವರೂಪವನ್ನು ತಿಳಿಯದ ಕಾರಣ ಜನರು ನಿನ್ನಲ್ಲಿ ನಾನಾರೀತಿಯ ಭೇದ ಭಾವಗಳನ್ನು ಮತ್ತು ವಿಕಲ್ಪಗಳನ್ನು ಮಾಡುತ್ತಾರೆ. ನಿನ್ನಲ್ಲಿ ಯಾವುದೇ ಪ್ರಕಾರದ ಉಪಾಧಿಯೂ ಇಲ್ಲದಿದ್ದರೂ ಗುಣಗಳಿಂದಾಗಿ ಭೇದದ ಪ್ರತೀತಿಯಾಗುವುದೇ ಇದಕ್ಕೆ ಕಾರಣವಾಗಿದೆ. ॥8॥
(ಶ್ಲೋಕ-9)
ಮೂಲಮ್
ತ್ವಾಂ ಬ್ರಹ್ಮ ಕೇಚಿದವಯಂತ್ಯುತ ಧರ್ಮಮೇಕೆ
ಏಕೇ ಪರಂ ಸದಸತೋಃ ಪುರುಷಂ ಪರೇಶಮ್ ।
ಅನ್ಯೇವಯಂತಿ ನವಶಕ್ತಿಯುತಂ ಪರಂ ತ್ವಾಂ
ಕೇಚಿನ್ಮಹಾಪುರುಷಮವ್ಯಯಮಾತ್ಮತಂತ್ರಮ್ ॥
ಅನುವಾದ
ಪ್ರಭುವೇ! ನಿನ್ನನ್ನು ಕೆಲವರು ಬ್ರಹ್ಮನೆಂದು ತಿಳಿಯುತ್ತಾರೆ. ಬೇರೆ ಕೆಲವರು ನಿನ್ನನ್ನು ಧರ್ಮನೆಂದು ತಿಳಿದು ವರ್ಣಿಸುತ್ತಾರೆ. ಹೀಗೆಯೇ ಇನ್ನೂ ಕೆಲವರು ನಿನ್ನನ್ನು ಪ್ರಕೃತಿ ಮತ್ತು ಪುರುಷರಿಗಿಂತಲೂ ಅತೀತನಾದ ಪರಮೇ ಶ್ವರನೆಂದು ಅರಿಯುತ್ತಾರೆ. ಕೆಲವರು ನಿನ್ನನ್ನು ವಿಮಲಾ, ಉತ್ಕರ್ಷಿಣೀ, ಜ್ಞಾನಾ, ಕ್ರಿಯಾ, ಯೋಗಾ, ಪ್ರಹ್ವೀ, ಸತ್ಯಾ, ಈಶಾನಾ ಮತ್ತು ಅನುಗ್ರಹಾ ಎಂಬ ಒಂಭತ್ತು ಶಕ್ತಿಗಳಿಂದ ಯುಕ್ತನಾದ ಮಹಾಪುರುಷನೆಂದು ಹೇಳುತ್ತಾರೆ. ಕೆಲವರು ಕ್ಲೇಶ-ಕರ್ಮ ಮುಂತಾದ ಬಂಧನಗಳಿಂದ ರಹಿತನಾದವ ನೆಂದೂ, ಪೂರ್ವಜರಿಗೂ ಪೂರ್ವಜನೆಂದೂ, ಅವಿನಾಶಿಯೆಂದೂ, ಸರ್ವತಂತ್ರಸ್ವತಂತ್ರನಾದ ಮಹಾಪುರುಷನೆಂದೂ ತಿಳಿಯುತ್ತಾರೆ. ॥9॥
(ಶ್ಲೋಕ-10)
ಮೂಲಮ್
ನಾಹಂ ಪರಾಯುರ್ಋಷಯೋ ನ ಮರೀಚಿಮುಖ್ಯಾ
ಜಾನಂತಿ ಯದ್ವಿರಚಿತಂ ಖಲು ಸತ್ತ್ವಸರ್ಗಾಃ ।
ಯನ್ಮಾಯಯಾ ಮುಷಿತಚೇತಸ ಈಶ ದೈತ್ಯ-
ಮರ್ತ್ಯಾದಯಃ ಕಿಮುತ ಶಶ್ವದಭದ್ರವೃತ್ತಾಃ ॥
ಅನುವಾದ
ಪ್ರಭೋ! ಸತ್ತ್ವಗುಣದ ಸೃಷ್ಟಿಯ ಅಂತರ್ಗತರಾಗಿರುವ ನಾನು ಬ್ರಹ್ಮಾ, ಮರೀಚಿಯೇ ಮೊದಲಾದ ಮಹರ್ಷಿಗಳೂ ಕೂಡ ನಿನ್ನ ಸೃಷ್ಟಿಯ ರಹಸ್ಯವನ್ನು ಅರಿಯೆವು. ಹಾಗಿರುವಾಗ ನಿನ್ನನ್ನು ತಿಳಿಯು ವುದಾದರೂ ಹೇಗೆ? ಮತ್ತೆ ಮಾಯೆಯಿಂದ ಅಪಹೃತವಾದ ಚಿತ್ತವುಳ್ಳ ರಜಸ್ತಮೋಗುಣ ಪ್ರಧಾನವಾದ ಕರ್ಮಗಳಲ್ಲೇ ಆಸಕ್ತರಾದ ಅಸುರರು, ಮನುಷ್ಯರು ನಿನ್ನ ಸೃಷ್ಟಿಯ ರಹಸ್ಯವನ್ನು ಹೇಗೆ ತಾನೇ ತಿಳಿದಾರು? ॥10॥
(ಶ್ಲೋಕ-11)
ಮೂಲಮ್
ಸ ತ್ವಂ ಸಮೀಹಿತಮದಃ ಸ್ಥಿತಿಜನ್ಮನಾಶಂ
ಭೂತೇಹಿತಂ ಚ ಜಗತೋ ಭವಬಂಧಮೋಕ್ಷೌ ।
ವಾಯುರ್ಯಥಾ ವಿಶತಿ ಖಂ ಚ ಚರಾಚರಾಖ್ಯಂ
ಸರ್ವಂ ತದಾತ್ಮಕತಯಾವಗಮೋವರುಂತ್ಸೇ ॥
ಅನುವಾದ
ಸ್ವಾಮಿಯೇ! ನೀನು ಸರ್ವಾತ್ಮನೂ, ಜ್ಞಾನಸ್ವರೂಪನೂ ಆಗಿರುವೆ. ಅದರಿಂದ ವಾಯುವಿನಂತೆ ಆಕಾಶದಲ್ಲಿ ಅದೃಶ್ಯನಾಗಿದ್ದರೂ ಸಂಪೂರ್ಣ ಚರಾಚರ ಜಗತ್ತಿನಲ್ಲಿಯೂ ನೀನು ಸದಾ-ಸರ್ವದಾ ಉಪಸ್ಥಿತನಾಗಿರುವೆ. ಈ ಜಗತ್ತಿನ ಸ್ಥಿತಿ, ಉತ್ಪತ್ತಿ, ನಾಶ, ಪ್ರಾಣಿಗಳ ಕರ್ಮಗಳು, ಸಂಸಾರದ ಬಂಧನ-ಮೋಕ್ಷ ಇವೆಲ್ಲವನ್ನೂ ನೀನು ತಿಳಿದವನಾಗಿರುವೆ. ॥11॥
(ಶ್ಲೋಕ-12)
ಮೂಲಮ್
ಅವತಾರಾ ಮಯಾ ದೃಷ್ಟಾ
ರಮಮಾಣಸ್ಯ ತೇ ಗುಣೈಃ ।
ಸೋಹಂ ತದ್ದ್ರಷ್ಟುಮಿಚ್ಛಾಮಿ
ಯತ್ತೇ ಯೋಷಿದ್ವಪುರ್ಧೃತಮ್ ॥
ಅನುವಾದ
ಪ್ರಭುವೇ! ನೀನು ಗುಣಗಳನ್ನು ಸ್ವೀಕರಿಸಿ ಲೀಲೆಮಾಡಲೋಸುಗ ಅನೇಕ ಅವತಾರಗಳನ್ನು ಮಾಡಿದಾಗ ನಾನು ಅವುಗಳ ದರ್ಶನವನ್ನು ಮಾಡಿಯೇ ಮಾಡುತ್ತೇನೆ. ಈಗ ನೀನು ಸ್ತ್ರೀರೂಪವನ್ನು ಧರಿಸಿ ಮೋಹಿನಿಯ ಅವತಾರವನ್ನು ಮಾಡಿರುವೆಯೋ ಆ ಅವತಾರವನ್ನೂ ದರ್ಶಿಸಲು ನಾನು ಬಯಸುತ್ತೇನೆ. ॥12॥
(ಶ್ಲೋಕ-13)
ಮೂಲಮ್
ಯೇನ ಸಮ್ಮೋಹಿತಾ ದೈತ್ಯಾಃ ಪಾಯಿತಾಶ್ಚಾಮೃತಂ ಸುರಾಃ ।
ತದ್ದಿದೃಕ್ಷವ ಆಯಾತಾಃ ಪರಂ ಕೌತೂಹಲಂ ಹಿ ನಃ ॥
ಅನುವಾದ
ಅದರಿಂದ ದೈತ್ಯರನ್ನು ಮೋಹಗೊಳಿಸಿ ನೀನು ದೇವತೆಗಳಿಗೆ ಅಮೃತವನ್ನು ಕುಡಿಸಿದ್ದೆ. ಸ್ವಾಮಿ! ಅದನ್ನು ನೋಡಲೆಂದೇ ನಾವೆಲ್ಲರೂ ಬಂದಿರು ವೆವು. ನಮ್ಮ ಮನಸ್ಸಿನಲ್ಲಿ ಅದನ್ನು ನೋಡಲು ಬಹಳ ಕುತೂಹಲವಿದೆ. ॥13॥
(ಶ್ಲೋಕ-14)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಮಭ್ಯರ್ಥಿತೋ ವಿಷ್ಣುರ್ಭಗವಾನ್ ಶೂಲಪಾಣಿನಾ ।
ಪ್ರಹಸ್ಯ ಭಾವಗಂಭೀರಂ ಗಿರಿಶಂ ಪ್ರತ್ಯಭಾಷತ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಭಗವಾನ್ ಶಂಕರನು ಮಹಾವಿಷ್ಣುವಿನಲ್ಲಿ ಹೀಗೆ ಪ್ರಾರ್ಥಿಸಿದಾಗ ಗಂಭೀರಭಾವದಿಂದ ನಗುತ್ತಾ ಶಿವನಲ್ಲಿ ಇಂತೆಂದನು॥14॥
(ಶ್ಲೋಕ-15)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಕೌತೂಹಲಾಯ ದೈತ್ಯಾನಾಂ ಯೋಷಿದ್ವೇಷೋ ಮಯಾ ಕೃತಃ ।
ಪಶ್ಯತಾ ಸುರಕಾರ್ಯಾಣಿ ಗತೇ ಪೀಯೂಷಭಾಜನೇ ॥
ಅನುವಾದ
ಶ್ರೀಭಗವಾನ್ ವಿಷ್ಣುವು ಹೇಳಿದನು — ಶಂಕರನೇ! ಆ ಸಮಯದಲ್ಲಿ ಅಮೃತಕಲಶವು ದೈತ್ಯರ ಕೈಸೇರಿ ಹೋಗಿತ್ತು. ಆದ್ದರಿಂದ ದೇವತೆಗಳ ಕಾರ್ಯವನ್ನು ನೆರವೇರಿಸಲೋಸುಗ ಹಾಗೂ ದೈತ್ಯರ ಮನಸ್ಸಿಗೆ ಹೊಸತೊಂದು ಕುತೂಹಲವನ್ನು ತೋರಲೋಸುಗ ನಾನೇ ಆ ಸ್ತ್ರೀರೂಪವನ್ನು ಧರಿಸಿದ್ದೆ. ॥15॥
(ಶ್ಲೋಕ-16)
ಮೂಲಮ್
ತತ್ತೇಹಂ ದರ್ಶಯಿಷ್ಯಾಮಿ ದಿದೃಕ್ಷೋಃ ಸುರಸತ್ತಮ ।
ಕಾಮಿನಾಂ ಬಹು ಮಂತವ್ಯಂ ಸಂಕಲ್ಪ ಪ್ರಭವೋದಯಮ್ ॥
ಅನುವಾದ
ದೇವಶಿರೋ ಮಣಿಯೇ! ಈಗ ನೀವೆಲ್ಲರೂ ಆ ರೂಪವನ್ನು ನೋಡಲು ಬಯಸುತ್ತಿರುವುದರಿಂದ ನಾನು ನಿಮಗೆ ತೋರಿಸುತ್ತೇನೆ. ಆದರೆ ಆ ನನ್ನ ರೂಪವು ಕಾಮಿಗಳಾದ ಪುರುಷರಿಗೆ ಆದರಣೀಯವಾದುದು. ಏಕೆಂದರೆ, ಅದು ಕಾಮಭಾವವನ್ನು ಉತ್ತೇಜಿತಗೊಳಿಸುವಂತಹುದು.॥16॥
(ಶ್ಲೋಕ-17)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ಬ್ರುವಾಣೋ ಭಗವಾಂಸ್ತತ್ರೈವಾಂತರಧೀಯತ ।
ಸರ್ವತಶ್ಚಾರಯಂಶ್ಚಕ್ಷುರ್ಭವ ಆಸ್ತೇ ಸಹೋಮಯಾ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಂತನು ಶಿವನಲ್ಲಿ ಹೀಗೆ ಹೇಳಿ ಅಲ್ಲಿಯೇ ಅಂತರ್ಧಾನ ನಾದನು. ಭಗವಾನ್ ಶಂಕರನು ಉಮೆಯೊಡನೆ ನಾಲ್ಕೂ ದಿಕ್ಕುಗಳನ್ನು ನೋಡುತ್ತಾ ಅಲ್ಲಿಯೇ ಕುಳಿತಿದ್ದನು.॥17॥
(ಶ್ಲೋಕ-18)
ಮೂಲಮ್
ತತೋ ದದರ್ಶೋಪವನೇ ವರಸಿಯಂ
ವಿಚಿತ್ರಪುಷ್ಪಾರುಣಪಲ್ಲವದ್ರುಮೇ ।
ವಿಕ್ರೀಡತೀಂ ಕಂದುಕಲೀಲಯಾ ಲಸದ್
ದುಕೂಲಪರ್ಯಸ್ತನಿತಂಬ ಮೇಖಲಾಮ್ ॥
ಅನುವಾದ
ಅಷ್ಟರಲ್ಲಿ ಇದಿರ್ಗಡೆಯೇ ಒಂದು ಸುಂದರವಾದ ಉಪವನವನ್ನು ನೋಡಿದನು. ಅದರಲ್ಲಿ ಹಲವು ಬಗೆಯ ವೃಕ್ಷಗಳಿದ್ದು ಅವುಗಳು ಬಣ್ಣ-ಬಣ್ಣದ ಹೂವುಗಳಿಂದಲೂ ಚಿಗುರುಗಳಿಂದಲೂ ತುಂಬಿ-ತುಳುಕುತ್ತಿದ್ದವು. ಆ ಉದ್ಯಾನವನದಲ್ಲಿ ಪ್ರಕಾಶಮಾನವಾದ ಪೀತಾಂಬರವನ್ನು ಉಟ್ಟುಕೊಂಡು, ಸೊಂಟದಲ್ಲಿ ಒಡ್ಯಾಣ ಧರಿಸಿದ್ದು, ಚೆಂಡಾಟ ವಾಡುತ್ತಿದ್ದ ಆತಿ ಚೆಲುವೆಯಾದ ಸ್ತ್ರೀಯನ್ನು ನೋಡಿದನು. ॥18॥
(ಶ್ಲೋಕ-19)
ಮೂಲಮ್
ಆವರ್ತನೋದ್ವರ್ತನಕಂಪಿತಸ್ತನ-
ಪ್ರಕೃಷ್ಟಹಾರೋರುಭರೈಃ ಪದೇ ಪದೇ ।
ಪ್ರಭಜ್ಯಮಾನಾಮಿವ ಮಧ್ಯತಶ್ಚಲತ್
ಪದಪ್ರವಾಲಂ ನಯತೀಂ ತತಸ್ತತಃ ॥
ಅನುವಾದ
ಆಕೆಯು ಚೆಂಡಿನೊಡನೆ ಆಡುತ್ತಿದ್ದಾಗ ಅವಳ ಸ್ತನಗಳೂ, ಹಾರಗಳೂ ಕುಣಿದಾಡುತ್ತಿದ್ದವು. ಸ್ತನಗಳ ಭಾರದಿಂದ ಆಕೆಯ ತೆಳುವಾದ ಕಟಿಯು ಮುರಿದುಬೀಳುವುದೋ ಎಂದು ಅನಿಸುತ್ತಿತ್ತು. ನಲುಗಿ ಹೋಗಬಹುದೆಂಬ ಭಯದಿಂದ ಆ ಲಲನಾ ಮಣಿಯು ಚಿಗುರಿನಂತೆ ಸುಕೋಮಲವಾದ ಕೆಂಪು-ಕೆಂಪಾದ ತನ್ನ ಹೆಜ್ಜೆಗಳನ್ನು ಮೆಲ್ಲ-ಮೆಲ್ಲನೆ ಇಡುತ್ತಿದ್ದಳು. ॥19॥
(ಶ್ಲೋಕ-20)
ಮೂಲಮ್
ದಿಕ್ಷು ಭ್ರಮತ್ಕಂದುಕಚಾಪಲೈರ್ಭೃಶಂ
ಪ್ರೋದ್ವಿಗ್ನತಾರಾಯತಲೋಲಲೋಚನಾಮ್ ।
ಸ್ವಕರ್ಣವಿಭ್ರಾಜಿತಕುಂಡಲೋಲ್ಲಸತ್
ಕಪೋಲನೀಲಾಲಕಮಂಡಿತಾನನಾಮ್ ॥
ಅನುವಾದ
ನೆಗೆಯುತ್ತಿರುವ ಚೆಂಡನ್ನು ಹಾರಿ ಅದನ್ನು ಹಿಡಿದುಕೊಳ್ಳುತ್ತಿದ್ದಳು. ಇದರಿಂದ ಆ ಸುಂದರಿಯ ವಿಶಾಲವಾದ ಕಣ್ಣುಗಳು ಉದ್ವಿಗ್ನವಾಗಿರುವಂತೆ ಕಾಣುತ್ತಿತ್ತು. ಹೊಳೆಯುತ್ತಿರುವ ಕರ್ಣಕುಂಡಲ ಕಾಂತಿಯಿಂದ ಬೆಳಗುವ ಕಪೋಲಗಳಿಂದಲೂ, ಕಪ್ಪಾದ ಮುಂಗುರುಳುಗಳಿಂದಲೂ ಆಕೆಯ ಸುಂದರವಾದ ಮುಖಾರವಿಂದವು ಇನ್ನೂ ಅರಳಿದಂತಿತ್ತು. ॥20॥
(ಶ್ಲೋಕ-21)
ಮೂಲಮ್
ಶ್ಲಥದ್ದುಕೂಲಂ ಕಬರೀಂ ಚ ವಿಚ್ಯುತಾಂ
ಸನ್ನಹ್ಯತೀಂ ವಾಮಕರೇಣ ವಲ್ಗುನಾ ।
ವಿನಿಘ್ನತೀಮನ್ಯಕರೇಣ ಕಂದುಕಂ
ವಿಮೋಹಯಂತೀಂ ಜಗದಾತ್ಮಮಾಯಯಾ ॥
ಅನುವಾದ
ಯಾವಾಗಲಾದರೂ ಸೆರಗುಜಾರಿ ಹೋದರೆ, ಕಬರಿಯು ಬಿಚ್ಚಿಹೋದರೆ, ಆಗಲೂ ಚೆಂಡಾಟವನ್ನು ನಿಲ್ಲಿಸದೆ ಬಲಗೈಯಿಂದ ಆಡುತ್ತಾ, ಎಡಗೈಯಿಂದ ಸೆರಗನ್ನೂ, ಕೂದಲನ್ನೂ ಸರಿಪಡಿಸಿಕೊಳ್ಳುತ್ತಾ, ಇಡೀ ಜಗತ್ತನ್ನು ತನ್ನ ಮಾಯೆಯಿಂದ ಮರುಳುಗೊಳಿಸುತ್ತಿದ್ದಳು. ॥21॥
(ಶ್ಲೋಕ-22)
ಮೂಲಮ್
ತಾಂ ವೀಕ್ಷ್ಯ ದೇವ ಇತಿ ಕಂದುಕಲೀಲಯೇಷದ್
ವ್ರೀಡಾಸ್ಫುಟಸ್ಮಿತವಿಸೃಷ್ಟಕಟಾಕ್ಷಮುಷ್ಟಃ ।
ಸೀಪ್ರೇಕ್ಷಣಪ್ರತಿಸಮೀಕ್ಷಣವಿಹ್ವಲಾತ್ಮಾ
ನಾತ್ಮಾನಮಂತಿಕ ಉಮಾಂ ಸ್ವಗಣಾಂಶ್ಚ ವೇದ ॥
ಅನುವಾದ
ಹೀಗೆ ಚೆಂಡಾಟವನ್ನು ಆಡುತ್ತಾ-ಆಡುತ್ತಾ ಆಕೆಯು ಸ್ವಲ್ಪ ಲಜ್ಜೆಯ ಭಾವದಿಂದ ಮುಗುಳ್ನಕ್ಕು ಓರೆನೋಟದಿಂದ ಶಂಕರನ ಕಡೆಗೆ ನೋಡಿದಳು. ಆ ಸ್ತ್ರೀಯ ಕಟಾಕ್ಷವೀಕ್ಷಣೆಯಿಂದಲೂ, ಪ್ರೇಮಭಾವದ ಸೂಚನೆಯಿಂದಲೂ ಕಾಮಪರವಶನಾದ ಶಂಕರನು ತನ್ನನ್ನು ತಾನೇ ಮರೆತನು. ಹೀಗಿರುವಾಗ ಹತ್ತಿರದಲ್ಲೇ ಕುಳಿತಿದ್ದ ಉಮೆ ಮತ್ತು ಗಣಗಳ ನೆನಪಾದರೂ ಹೇಗೆ ಇರಬಲ್ಲದು? ॥22॥
(ಶ್ಲೋಕ-23)
ಮೂಲಮ್
ತಸ್ಯಾಃ ಕರಾಗ್ರಾತ್ಸ ತು ಕಂದುಕೋ ಯದಾ
ಗತೋ ವಿದೂರಂ ತಮನುವ್ರಜತ್ಸಿಯಾಃ ।
ವಾಸಃ ಸಸೂತ್ರಂ ಲಘು ಮಾರುತೋಹರದ್
ಭವಸ್ಯ ದೇವಸ್ಯ ಕಿಲಾನುಪಶ್ಯತಃ ॥
ಅನುವಾದ
ಒಮ್ಮೆ ಚೆಂಡು ಮೋಹಿನಿಯ ಕೈಯಿಂದ ಜಾರಿ ದೂರಕ್ಕೆ ಹೋಯಿತು. ಆಕೆಯು ಅದರ ಹಿಂದೆಯೇ ಓಡಿದಳು. ಆ ಸಮಯದಲ್ಲಿ ಶಿವನು ನೋಡುತ್ತಿರುವಂತೆಯೇ ವಾಯುವು ಆಕೆಯು ಉಟ್ಟಿದ್ದ ತೆಳ್ಳಗಿನ ಸೀರೆಯನ್ನು ಒಡ್ಯಾಣಸಹಿತವಾಗಿ ಹಾರಿಸಿ ಬಿಟ್ಟನು. ॥23॥
(ಶ್ಲೋಕ-24)
ಮೂಲಮ್
ಏವಂ ತಾಂ ರುಚಿರಾಪಾಂಗೀಂ
ದರ್ಶನೀಯಾಂ ಮನೋರಮಾಮ್ ।
ದೃಷ್ಟ್ವಾ ತಸ್ಯಾಂ ಮನಶ್ಚಕ್ರೇ
ವಿಷಜ್ಜಂತ್ಯಾಂ ಭವಃ ಕಿಲ ॥
ಅನುವಾದ
ಮೋಹಿನಿಯ ಪ್ರತಿಯೊಂದು ಅಂಗಾಂಗವೂ ಮನೋಹರವಾಗಿತ್ತು. ಒಮ್ಮೆ ಕಣ್ಣು ನೆಟ್ಟರೆ ಕೀಳಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಮನಸ್ಸೂ ಅಲ್ಲೇ ರಮಮಾಣವಾಗುತ್ತಿತ್ತು. ಈ ಸ್ಥಿತಿಯಲ್ಲಿ ಆಕೆಯನ್ನು ನೋಡಿದ ಭಗವಾನ್ ಶಂಕರನು ಅವಳ ಕಡೆಗೆ ಅತ್ಯಂತ ಆಕರ್ಷಿತನಾದನು. ಮೋಹಿನಿಯೂ ತನ್ನ ಕುರಿತು ಆಸಕ್ತಳಾಗಿರುವಂತೇ ಅವನಿಗೆ ಕಂಡಿತು. ॥24॥
(ಶ್ಲೋಕ-25)
ಮೂಲಮ್
ತಯಾಪಹೃತವಿಜ್ಞಾನಸ್ತತ್ಕೃತಸ್ಮರವಿಹ್ವಲಃ ।
ಭವಾನ್ಯಾ ಅಪಿ ಪಶ್ಯಂತ್ಯಾ ಗತಹ್ರೀಸ್ತತ್ಪದಂ ಯಯೌ ॥
ಅನುವಾದ
ಆಕೆಯು ಶಂಕರನ ವಿವೇಕವನ್ನು ಅಪಹರಿಸಿದಳು. ಆಕೆಯ ಹಾವ-ಭಾವಗಳಿಂದ ಶಿವನು ಕಾಮಾತುರನಾದನು ಮತ್ತು ಭವಾನಿಯ ಇದಿರಿನಲ್ಲೇ ಲಜ್ಜೆ ಬಿಟ್ಟು ಅವಳ ಕಡೆಗೆ ಓಡಿದನು. ॥25॥
(ಶ್ಲೋಕ-26)
ಮೂಲಮ್
ಸಾ ತಮಾಯಾಂತಮಾಲೋಕ್ಯ ವಿವಸಾ ವ್ರೀಡಿತಾ ಭೃಶಮ್ ।
ನಿಲೀಯಮಾನಾ ವೃಕ್ಷೇಷು ಹಸಂತೀ ನಾನ್ವತಿಷ್ಠತ ॥
ಅನುವಾದ
ಆ ಮೋಹಿನಿಯು ತನ್ನ ಕಡೆಗೆ ಶಿವನು ಬರುತ್ತಿರುವುದನ್ನು ನೋಡಿ ಬಹಳ ನಾಚಿಕೆಯಿಂದ ಕಿಲ-ಕಿಲನೆ ನಗುತ್ತಾ ಅಲ್ಲಿ ನಿಲ್ಲದೆ ವೃಕ್ಷದ ಹಿಂದೆ ಅವಿತುಕೊಂಡಳು. ॥26॥
(ಶ್ಲೋಕ-27)
ಮೂಲಮ್
ತಾಮನ್ವಗಚ್ಛದ್ಭಗವಾನ್ಭವಃ ಪ್ರಮುಷಿತೇಂದ್ರಿಯಃ ।
ಕಾಮಸ್ಯ ಚ ವಶಂ ನೀತಃ ಕರೇಣುಮಿವ ಯೂಥಪಃ ॥
ಅನುವಾದ
ಭಗವಾನ್ ಶಂಕರನ ಇಂದ್ರಿಯಗಳು ಅವನ ಕೈಯಿಂದ ಜಾರಿ ಹೋದುವು. ಅವನು ಕಾಮಪರವಶನಾಗಿದ್ದನು. ಆದ್ದರಿಂದ ಹೆಣ್ಣಾನೆಯ ಹಿಂದೆ ಓಡುವ ಗಂಡಾನೆಯಂತೆ ಆಕೆಯ ಹಿಂದೆ-ಹಿಂದೆ ಓಡತೊಡಗಿದನು. ॥27॥
(ಶ್ಲೋಕ-28)
ಮೂಲಮ್
ಸೋನುವ್ರಜ್ಯಾತಿವೇಗೇನ ಗೃಹೀತ್ವಾನಿಚ್ಛತೀಂ ಸಿಯಮ್ ।
ಕೇಶಬಂಧ ಉಪಾನೀಯ ಬಾಹುಭ್ಯಾಂ ಪರಿಷಸ್ವಜೇ ॥
ಅನುವಾದ
ಅವನು ಅತ್ಯಂತ ವೇಗದಿಂದ ಆಕೆಯನ್ನು ಹಿಂಬಾಲಿಸಿ ಹಿಂದಿನಿಂದ ಆಕೆಯ ಮುಡಿಯನ್ನು ಹಿಡಿದುಕೊಂಡನು. ಆಕೆ ಬಯಸದೇ ಇದ್ದರೂ ಶಿವನು ಅವಳನ್ನೂ ಎರಡೂ ಭುಜಗಳಿಂದ ಬಾಚಿ ತಬ್ಬಿಕೊಂಡನು. ॥28॥
(ಶ್ಲೋಕ-29)
ಮೂಲಮ್
ಸೋಪಗೂಢಾ ಭಗವತಾ ಕರಿಣಾ ಕರಿಣೀ ಯಥಾ ।
ಇತಸ್ತತಃ ಪ್ರಸರ್ಪಂತೀ ವಿಪ್ರಕೀರ್ಣಶಿರೋರುಹಾ ॥
ಅನುವಾದ
ಗಂಡಾನೆಯು ಹೆಣ್ಣಾನೆಯನ್ನು ಆಲಿಂಗಿಸಿಕೊಳ್ಳುವಂತೆ ಭಗವಾನ್ ಶಂಕರನು ಆಕೆಯನ್ನು ಆಲಿಂಗಿಸಿಕೊಂಡನು. ಆಕೆಯು ಕೊಸರಾಡಿಕೊಂಡು ಅವನಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಆಕೆಯ ಮುಡಿಯು ಬಿಚ್ಚಿ ಹೋಯಿತು. ॥29॥
(ಶ್ಲೋಕ-30)
ಮೂಲಮ್
ಆತ್ಮಾನಂ ಮೋಚಯಿತ್ವಾಂಗ ಸುರರ್ಷಭಭುಜಾಂತರಾತ್ ।
ಪ್ರಾದ್ರವತ್ಸಾ ಪೃಥುಶ್ರೋಣೀ ಮಾಯಾ ದೇವವಿನಿರ್ಮಿತಾ ॥
ಅನುವಾದ
ವಾಸ್ತವವಾಗಿ ಆ ಸುಂದರಿಯು ಭಗವಂತನಿಂದ ರಚಿತವಾದ ಮಾಯೆಯೇ ಆಗಿತ್ತು. ಇದರಿಂದ ಆಕೆಯು ಹೇಗೋ ಶಂಕರನ ಬಾಹುಪಾಶದಿಂದ ತನ್ನನ್ನು ಬಿಡಿಸಿಕೊಂಡು ವೇಗವಾಗಿ ಓಡಿಹೋದಳು. ॥30॥
(ಶ್ಲೋಕ-31)
ಮೂಲಮ್
ತಸ್ಯಾಸೌ ಪದವೀಂ ರುದ್ರೋ ವಿಷ್ಣೋರದ್ಭುತಕರ್ಮಣಃ ।
ಪ್ರತ್ಯಪದ್ಯತ ಕಾಮೇನ ವೈರಿಣೇವ ವಿನಿರ್ಜಿತಃ ॥
ಅನುವಾದ
ಭಗವಾನ್ ಶಂಕರನೂ ಕೂಡ ಆ ಮೋಹಿನೀ ವೇಷಧಾರಿಯಾದ ಅದ್ಭುತಕರ್ಮಿಯಾದ ಭಗವಾನ್ ವಿಷ್ಣುವಿನ ಹಿಂದೆ-ಹಿಂದೆ ಓಡತೊಡಗಿದನು. ಆಗ ಅವನ ಶತ್ರುವಾದ ಕಾಮದೇವನು ಈಗ ಅವನ ಮೇಲೆ ವಿಜಯ ವನ್ನು ಸಾಧಿಸಿದಂತೆ ಕಂಡುಬರುತ್ತಿತ್ತು. ॥31॥
(ಶ್ಲೋಕ-32)
ಮೂಲಮ್
ತಸ್ಯಾನುಧಾವತೋ ರೇತಃ ಚಸ್ಕಂದಾಮೋಘರೇತಸಃ ।
ಶುಷ್ಮಿಣೋ ಯೂಥಪಸ್ಯೇವ ವಾಸಿತಾಮನು ಧಾವತಃ ॥
ಅನುವಾದ
ಕಾಮುಕವಾದ ಹೆಣ್ಣಾನೆಯ ಹಿಂದೆ ಓಡುವ ಮದಭರಿತವಾದ ಗಂಡಾನೆಯಂತೆ ಮೋಹಿನಿಯ ಹಿಂದೆ-ಹಿಂದೆ ಶಂಕರನು ಓಡುತ್ತಿದ್ದನು. ಭಗವಾನ್ ಶಂಕರನ ವೀರ್ಯವು ಅಮೋಘ ವಾಗಿದ್ದರೂ ಮೋಹಿನಿಯ ಮಾಯೆಯಿಂದ ಅದು ಸ್ಖಲಿತವಾಯಿತು. ॥32॥
(ಶ್ಲೋಕ-33)
ಮೂಲಮ್
ಯತ್ರ ಯತ್ರಾಪತನ್ಮಹ್ಯಾಂ ರೇತಸ್ತಸ್ಯ ಮಹಾತ್ಮನಃ ।
ತಾನಿ ರೂಪ್ಯಸ್ಯ ಹೇಮ್ನಶ್ಚ ಕ್ಷೇತ್ರಾಣ್ಯಾಸನ್ಮಹೀಪತೇ ॥
ಅನುವಾದ
ಮಹೀಪತಿಯೇ! ಭಗವಾನ್ ಶಂಕರನ ವೀರ್ಯವು ಭೂಮಿಯಲ್ಲಿ ಬಿದ್ದಲ್ಲೆಲ್ಲ ಚಿನ್ನದ, ಬೆಳ್ಳಿಯ ಗಣಿಗಳಾದುವು. ॥33॥
(ಶ್ಲೋಕ-34)
ಮೂಲಮ್
ಸರಿತ್ಸರಸ್ಸು ಶೈಲೇಷು ವನೇಷೂಪವನೇಷು ಚ ।
ಯತ್ರ ಕ್ವ ಚಾಸನ್ನೃಷಯಸ್ತತ್ರ ಸಂನಿಹಿತೋ ಹರಃ ॥
ಅನುವಾದ
ಹೀಗೆ ಮೋಹಿನಿಯನ್ನು ಹಿಂಬಾಲಿಸುತ್ತಾ ಪರಶಿವನು ನದೀ-ನದ-ಸರೋವರ, ಪರ್ವತ, ವನ-ಉಪವನ ಹೀಗೆ ಋಷಿ-ಮುನಿಗಳು ವಾಸವಾಗಿದ್ದ ಆಶ್ರಮದಲ್ಲೆಲ್ಲ ಅಡ್ಡಾಡಿದನು. ॥34॥
(ಶ್ಲೋಕ-35)
ಮೂಲಮ್
ಸ್ಕನ್ನೇ ರೇತಸಿ ಸೋಪಶ್ಯದಾತ್ಮಾನಂ ದೇವಮಾಯಯಾ ।
ಜಡೀಕೃತಂ ನೃಪಶ್ರೇಷ್ಠ ಸಂನ್ಯವರ್ತತ ಕಶ್ಮಲಾತ್ ॥
ಅನುವಾದ
ಪರೀಕ್ಷಿತನೇ! ರೇತಸ್ಖಲನವಾದನಂತರ ಮಹರ್ಷಿಗಳ ಆಶ್ರಮಕ್ಕೆ ಬಂದ ಶಿವನು ವಿಷ್ಣುಮಾಯೆಯಿಂದ ವಿವೇಕ ಶೂನ್ಯನಾದೆನೆಂದು ಭಾವಿಸಿ ಕಾಮವಿಕಾರದಿಂದ ಮನಸ್ಸನ್ನು ಹಿಂದೆಗೆದುಕೊಂಡನು. ॥35॥
(ಶ್ಲೋಕ-36)
ಮೂಲಮ್
ಅಥಾವಗತಮಾಹಾತ್ಮ್ಯ ಆತ್ಮನೋ ಜಗದಾತ್ಮನಃ ।
ಅಪರಿಜ್ಞೇಯವೀರ್ಯಸ್ಯ ನ ಮೇನೇ ತದು ಹಾದ್ಭುತಮ್ ॥
ಅನುವಾದ
ಇದಾದ ಬಳಿಕ ಆತ್ಮ ಸ್ವರೂಪನಾದ ಸರ್ವಾತ್ಮಾ ಭಗವಂತನ ಈ ಮಹಿಮೆಯನ್ನು ಅರಿತುಕೊಂಡು ಅವನಿಗೆ ಆಶ್ಚರ್ಯವಾಗಲಿಲ್ಲ. ಭಗವಂತನ ಶಕ್ತಿಗಳ ಅಂತವನ್ನು ಯಾರು ತಾನೇ ತಿಳಿಯಬಲ್ಲನು? ॥36॥
(ಶ್ಲೋಕ-37)
ಮೂಲಮ್
ತಮವಿಕ್ಲವಮವ್ರೀಡಮಾಲಕ್ಷ್ಯ ಮಧುಸೂದನಃ ।
ಉವಾಚ ಪರಮಪ್ರೀತೋ ಬಿಭ್ರತ್ಸ್ವಾಂ ಪೌರುಷೀಂ ತನುಮ್ ॥
ಅನುವಾದ
ಭಗವಾನ್ ಶಂಕರನಿಗೆ ಇದರಿಂದ ವಿಷಾದ ಅಥವಾ ನಾಚಿಕೆಯಾಗಲಿಲ್ಲವೆಂದು ತಿಳಿದ ಭಗವಂತನು ಪುರುಷ ಶರೀರವನ್ನು ಧರಿಸಿಕೊಂಡು ಪ್ರಕಟನಾದನು ಹಾಗೂ ಪರಮಪ್ರೀತಿಯಿಂದ ಶಿವನಲ್ಲಿ ಇಂತೆಂದನು. ॥37॥
(ಶ್ಲೋಕ-38)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ದಿಷ್ಟ್ಯಾತ್ವಂ ವಿಬುಧಶ್ರೇಷ್ಠ
ಸ್ವಾಂ ನಿಷ್ಠಾಮಾತ್ಮನಾ ಸ್ಥಿತಃ ।
ಯನ್ಮೇ ಸೀರೂಪಯಾ ಸ್ವೈರಂ
ಮೋಹಿತೋಪ್ಯಂಗ ಮಾಯಯಾ ॥
ಅನುವಾದ
ಶ್ರೀಭಗವಂತನು ಹೇಳಿದನು — ದೇವಶಿರೋಮಣಿಯೇ! ನನ್ನ ಸ್ತ್ರೀರೂಪವಾದ ಮಾಯೆಯಿಂದ ವಿಮೋಹಿತನಾದರೂ ನೀನು ಸ್ವಯಂ ನಿನ್ನ ನಿಷ್ಠೆಯಲ್ಲಿ ಸ್ಥಿತನಾಗಿರುವೆ. ಇದು ತುಂಬಾ ಆನಂದದ ಮಾತಾಗಿದೆ. ॥38॥
(ಶ್ಲೋಕ-39)
ಮೂಲಮ್
ಕೋ ನು ಮೇತಿತರೇನ್ಮಾಯಾಂ ವಿಷಕ್ತಸ್ತ್ವದೃತೇ ಪುಮಾನ್ ।
ತಾಂಸ್ತಾನ್ವಿಸೃಜತೀಂ ಭಾವಾನ್ದುಸ್ತರಾಮಕೃತಾತ್ಮಭಿಃ ॥
ಅನುವಾದ
ನನ್ನ ಮಾಯೆಯು ಅಪಾರವಾದುದು. ಅಜಿತೇಂದ್ರಿಯರಾದವರು ಯಾವ ವಿಧದಿಂದಲೂ ಅದರಿಂದ ಬಿಡಿಸಿಕೊಳ್ಳಲಾರದಂತಹ ಹಾವ-ಭಾವಗಳನ್ನು ರಚಿಸುತ್ತದೆ. ನೀನಲ್ಲದೆ ಬೇರೆ ಯಾರು ತಾನೇ ಒಮ್ಮೆ ನನ್ನ ಮಾಯಾಜಾಲದಲ್ಲಿ ಸಿಕ್ಕಿಹಾಕಿಕೊಂಡು ಸ್ವತಃ ಹೊರಬರಬಲ್ಲನು? ॥39॥
(ಶ್ಲೋಕ-40)
ಮೂಲಮ್
ಸೇಯಂ ಗುಣಮಯೀ ಮಾಯಾ ನ ತ್ವಾಮಭಿಭವಿಷ್ಯತಿ ।
ಮಯಾ ಸಮೇತಾ ಕಾಲೇನ ಕಾಲರೂಪೇಣ ಭಾಗಶಃ ॥
ಅನುವಾದ
ನನ್ನ ಈ ಗುಣಮಯ ಮಾಯೆಯು ದೊಡ್ಡ-ದೊಡ್ಡವರಿಗೂ ಮೋಹಿಸಿ ಬಿಡುತ್ತಿದ್ದರೂ ಇನ್ನು ಇದು ನಿನ್ನನ್ನು ಎಂದಿಗೂ ಮೋಹಿತ ಗೊಳಿಸಲಾರದು. ಏಕೆಂದರೆ, ಸೃಷ್ಟ್ಯಾದಿಗಳಿಗೆ ಆಯಾ ಸಮಯಗಳಲ್ಲಿ ಅದನ್ನು ಶೋಭಿಸುತ್ತಿರುವ ಕಾಲನು ನಾನೇ ಆಗಿರುವೆನು. ಅದಕ್ಕಾಗಿ ನನ್ನ ಇಚ್ಛೆಗೆ ವಿರುದ್ಧವಾಗಿ ಅದು ರಜೋಗುಣಾದಿ ಸೃಷ್ಟಿಯನ್ನು ಮಾಡಲಾರದು. ॥40॥
ಮೂಲಮ್
(ಶ್ಲೋಕ-41)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ಭಗವತಾ ರಾಜನ್ ಶ್ರೀವತ್ಸಾಂಕೇನ ಸತ್ಕೃತಃ ।
ಆಮಂತ್ರ್ಯ ತಂ ಪರಿಕ್ರಮ್ಯ ಸಗಣಃ ಸ್ವಾಲಯಂ ಯಯೌ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಮಹಾವಿಷ್ಣುವು ಹೀಗೆ ಶಂಕರನನ್ನು ಸತ್ಕರಿಸಿದನು. ಆಗ ಪರಶಿವನು ಅವನಿಂದ ಬೀಳ್ಕೊಂಡು, ಅವನಿಗೆ ಪ್ರದಕ್ಷಿಣೆ ಬಂದು ತನ್ನ ಗಣಗಳೊಂದಿಗೆ ಕೈಲಾಸಕ್ಕೆ ಹೊರಟುಹೋದನು. ॥41॥
(ಶ್ಲೋಕ-42)
ಮೂಲಮ್
ಆತ್ಮಾಂಶಭೂತಾಂ ತಾಂ ಮಾಯಾಂ ಭವಾನೀಂ ಭಗವಾನ್ಭವಃ ।
ಶಂಸತಾಮೃಷಿಮುಖ್ಯಾನಾಂ ಪ್ರೀತ್ಯಾಚಷ್ಟಾಥ ಭಾರತ ॥
ಅನುವಾದ
ಎಲೈ ಭರತವಂಶ ಶಿರೋಮಣಿಯೇ! ಭಗವಾನ್ ಶಂಕರನು ದೊಡ್ಡ-ದೊಡ್ಡ ಋಷಿಗಳ ಸಭೆಯಲ್ಲಿ ತನ್ನ ಅರ್ಧಾಂಗಿನಿಯಾದ ಪಾರ್ವತಿ ದೇವಿಗೆ ತನ್ನ ವಿಷ್ಣುಸ್ವರೂಪದ ಅಂಶಸಂಭೂತ ಮಾಯಾ ಮಯ ಮೋಹಿನಿಯನ್ನು ಈ ವಿಧವಾಗಿ ಪ್ರೇಮದಿಂದ ವರ್ಣಿಸಿದನು. ॥42॥
(ಶ್ಲೋಕ-43)
ಮೂಲಮ್
ಅಪಿ ವ್ಯಪಶ್ಯಃತ್ವಮಜಸ್ಯ ಮಾಯಾಂ
ಪರಸ್ಯ ಪುಂಸಃ ಪರದೇವತಾಯಾಃ ।
ಅಹಂ ಕಲಾನಾಮೃಷಭೋ ವಿಮುಹ್ಯೇ
ಯಯಾವಶೋನ್ಯೇ ಕಿಮುತಾಸ್ವತಂತ್ರಾಃ ॥
ಅನುವಾದ
ದೇವೀ! ಪರಮಪುರುಷ ಪರಮೇಶ್ವರನಾದ ಭಗವಾನ್ ವಿಷ್ಣುವಿನ ಮಾಯೆಯನ್ನು ನೀನು ನೋಡಿದೆಯಲ್ಲ! ಸಮಸ್ತ ಕಲಾವಲ್ಲಭನಾದ ನಾನೇ ಕಾಮವಶನಾಗಿ ವಿಮೋಹಗೊಂಡೆನು. ಹೀಗಿರುವಾಗ ಅಸ್ವತಂತ್ರವಾದ (ರಾಗ-ದ್ವೇಷಾದಿಗಳಿಗೆ ವಶರಾದ) ಇತರರ ವಿಷಯದಲ್ಲಿ ಹೇಳುವುದೇನಿದೆ? ॥43॥
ಮೂಲಮ್
(ಶ್ಲೋಕ-44)
ಯಂ ಮಾಮಪೃಚ್ಛಸ್ತ್ವಮುಪೇತ್ಯ ಯೋಗಾ-
ತ್ಸಮಾಸಹಸ್ರಾಂತ ಉಪಾರತಂ ವೈ ।
ಸ ಏವ ಸಾಕ್ಷಾತ್ಪುರುಷಃ ಪುರಾಣೋ
ನ ಯತ್ರ ಕಾಲೋ ವಿಶತೇ ನ ವೇದಃ ॥
ಅನುವಾದ
ಹಿಂದೆ ನಾನು ಒಂದುಸಾವಿರ ವರ್ಷಗಳ ಕಾಲದ ಸಮಾಧಿಯಿಂದ ಎಚ್ಚತ್ತಿರುವಾಗ ನೀನು ಬಳಿಗೆ ಬಂದು ‘ಸ್ವಾಮಿ! ನೀವು ಯಾರ ಉಪಾಸನೆ ಮಾಡುತ್ತಿದ್ದೀರಿ?’ ಎಂದು ಕೇಳಿದ್ದೆ. ಅವನು ಇದೇ ಸಾಕ್ಷಾತ್ ಸನಾತನ ಪುರುಷನಾಗಿ ದ್ದಾನೆ. ಕಾಲನೂ ಇವನನ್ನು ತನ್ನ ಸೀಮೆಯಲ್ಲಿ ಬಂಧಿಸಲಾರನು. ವೇದಗಳು ಇವನನ್ನು ಪೂರ್ಣವಾಗಿ ವರ್ಣಿಸಲಾರವು. ಇವನ ವಾಸ್ತವಿಕ ಸ್ವರೂಪವು ಅನಂತವೂ, ಅನಿರ್ವಚನೀಯವೂ ಆಗಿದೆ. ॥44॥
(ಶ್ಲೋಕ-45)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ತೇಭಿಹಿತಸ್ತಾತ ವಿಕ್ರಮಃ ಶಾರ್ಙ್ಗಧನ್ವನಃ ।
ಸಿಂಧೋರ್ನಿರ್ಮಥನೇ ಯೇನ ಧೃತಃ ಪೃಷ್ಠೇ ಮಹಾಚಲಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪ್ರಿಯ ಪರೀಕ್ಷಿತನೇ! ಸಮುದ್ರಮಂಥನ ಕಾಲದಲ್ಲಿ ದೊಡ್ಡದಾದ ಮಂದರ ಪರ್ವತವನ್ನು ಬೆನ್ನಮೇಲೆ ಧರಿಸಿದ ಕೂರ್ಮ ರೂಪಿಯಾದ ಶಾರ್ಙ್ಗಧನ್ವನಾದ ಮಹಾವಿಷ್ಣುವಿನ ಮಹಿಮೆಯನ್ನು ನಿನಗೆ ವರ್ಣಿಸಿ ಹೇಳಿರುವೆನು. ॥45॥
(ಶ್ಲೋಕ-46)
ಮೂಲಮ್
ಏತನ್ಮುಹುಃ ಕೀರ್ತಯತೋನುಶೃಣ್ವತೋ
ನ ರಿಷ್ಯತೇ ಜಾತು ಸಮುದ್ಯಮಃ ಕ್ವಚಿತ್ ।
ಯದುತ್ತಮಶ್ಲೋಕಗುಣಾನುವರ್ಣನಂ
ಸಮಸ್ತ ಸಂಸಾರಪರಿಶ್ರಮಾಪಹಮ್ ॥
ಅನುವಾದ
ಈ ಪ್ರಸಂಗವನ್ನು ಪದೇ-ಪದೇ ಕೀರ್ತಿಸುವವನ ಹಾಗೂ ಶ್ರವಣಿಸುವವನ ಪ್ರಯತ್ನವು ಎಂದಿಗೂ, ಎಲ್ಲಿಯೂ ನಿಷ್ಫಲವಾಗುವುದಿಲ್ಲ. ಏಕೆಂದರೆ ಪವಿತ್ರಕೀರ್ತಿಯಾದ ಭಗವಂತನ ಗುಣ-ಲೀಲೆಗಳ ಸಂಕೀರ್ತನವು ಪ್ರಪಂಚದ ಸಮಸ್ತ ಕ್ಲೇಶಗಳನ್ನೂ, ಪರಿಶ್ರಮಗಳನ್ನೂ ಹೋಗಲಾಡಿಸುತ್ತದೆ. ॥46॥
(ಶ್ಲೋಕ-47)
ಮೂಲಮ್
ಅಸದವಿಷಯಮಂಘ್ರಿಂ ಭಾವಗಮ್ಯಂ ಪ್ರಪನ್ನಾ-
ನಮೃತಮಮರವರ್ಯಾನಾಶಯತ್ಸಿಂಧುಮಥ್ಯಮ್ ।
ಕಪಟಯುವತಿವೇಷೋ ಮೋಹಯನ್ಯಃ ಸುರಾರೀಂ-
ಸ್ತಮಹಮುಪಸೃತಾನಾಂ ಕಾಮಪೂರಂ ನತೋಸ್ಮಿ ॥
ಅನುವಾದ
ದುಷ್ಟ ಜನರಿಗೆ ಶ್ರೀಭಗವಂತನ ದಿವ್ಯ ಚರಣಕಮಲಗಳು ಎಂದಿಗೂ ದೊರಕುವುದಿಲ್ಲ. ಅವುಗಳು ಭಕ್ತಿಭಾವದಿಂದ ಕೂಡಿರುವ ಮನುಷ್ಯರಿಗೇ ಮಾತ್ರ ಲಭ್ಯವಾಗುತ್ತವೆ. ಇದ ರಿಂದಲೇ ಅವನು ಮಾಯಾಮಯವಾದ ಹೆಂಗಸಿನ ರೂಪವನ್ನು ಧರಿಸಿ ದೈತ್ಯರನ್ನು ಮೋಹ ಪರವಶರನ್ನಾಗಿ ಮಾಡಿದನು. ತನ್ನ ಚರಣ ಕಮಲಗಳಿಗೆ ಶರಣಾಗಿ ಬಂದಿರುವ ದೇವತೆಗಳಿಗೆ ಸಮುದ್ರ ಮಂಥನದಿಂದ ದೊರಕಿದ ಅಮೃತವನ್ನು ಕುಡಿಸಿದನು. ಕೇವಲ ದೇವತೆಗಳಿಗೆ ಮಾತ್ರವಲ್ಲ ಅವನ ದಿವ್ಯ ಚರಣಕಮಲಗಳಿಗೆ ಯಾರೇ ಶರಣಾಗಲೀ, ಅವರ ಸಮಸ್ತ ಕಾಮನೆಗಳನ್ನು ಪೂರ್ಣಗೊಳಿಸುವನು. ಅಂತಹ ಪ್ರಭುವಿನ ಚರಣಕಮಲಗಳಿಗೆ ನಾನು ನಮಸ್ಕರಿಸುತ್ತೇನೆ. ॥47॥
ಅನುವಾದ (ಸಮಾಪ್ತಿಃ)
ಹನ್ನೆರಡನೆಯ ಅಧ್ಯಾಯವು ಮುಗಿಯಿತು. ॥12॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ಶಂಕರಮೋಹನಂ ನಾಮ ದ್ವಾದಶೋಧ್ಯಾಯಃ ॥12॥