೧೧

[ಹನ್ನೊಂದನೆಯ ಅಧ್ಯಾಯ]

ಭಾಗಸೂಚನಾ

ದೇವಾಸುರರ ಸಂಗ್ರಾಮದ ಸಮಾಪ್ತಿ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಅಥೋ ಸುರಾಃ ಪ್ರತ್ಯುಪಲಬ್ಧಚೇತಸಃ
ಪರಸ್ಯ ಪುಂಸಃ ಪರಯಾನುಕಂಪಯಾ ।
ಜಘ್ನುರ್ಭೃಶಂ ಶಕ್ರಸಮೀರಣಾದಯ-
ಸ್ತಾಂಸ್ತಾನ್ರಣೇ ಯೈರಭಿಸಂಹತಾಃ ಪುರಾ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಪರಮ ಪುರುಷನಾದ ಭಗವಂತನ ನಿರತಿಶಯವಾದ ಕೃಪೆಯಿಂದ ದೇವತೆಗಳ ಭಯವು ದೂರವಾಗಿ ಅವರಲ್ಲಿ ನವಚೈತನ್ಯ ವುಂಟಾಯಿತು. ಈ ಹಿಂದೆ ಇಂದ್ರ, ವಾಯು ಗಳೇ ಮೊದಲಾದ ದೇವತೆಗಳು ಯಾವ-ಯಾವ ದೈತ್ಯರೊಡನೆ ಹೋರಾಡುತ್ತಿದ್ದರೋ ಪುನಃ ಅದೇ ದೈತ್ಯರನ್ನೆದುರಿಸಿ ಶೌರ್ಯದಿಂದ ಯುದ್ಧಮಾಡ ತೊಡಗಿದರು.॥1॥

(ಶ್ಲೋಕ-2)

ಮೂಲಮ್

ವೈರೋಚನಾಯ ಸಂರಬ್ಧೋ ಭಗವಾನ್ಪಾಕಶಾಸನಃ ।
ಉದಯಚ್ಛದ್ಯದಾ ವಜ್ರಂ ಪ್ರಜಾ ಹಾ ಹೇತಿ ಚುಕ್ರುಶುಃ ॥

ಅನುವಾದ

ಮಹಾಮಹಿಮನಾದ ಇಂದ್ರನು ಅತ್ಯಂತ ಕ್ರುದ್ಧನಾಗಿ ಬಲಿಯನ್ನು ಸಂಹರಿಸಬೇಕೆಂಬ ಆಶಯದಿಂದ ವಜ್ರಾ ಯುಧವನ್ನೆತ್ತಿದನು. ಆಗ ಸಮಸ್ತ ಪ್ರಜೆಗಳಲ್ಲಿ ಹಾಹಾಕಾರ ವೆದ್ದಿತು. ॥2॥

(ಶ್ಲೋಕ-3)

ಮೂಲಮ್

ವಜ್ರಪಾಣಿಸ್ತಮಾಹೇದಂ ತಿರಸ್ಕೃತ್ಯ ಪುರಃಸ್ಥಿತಮ್ ।
ಮನಸ್ವಿನಂ ಸುಸಂಪನ್ನಂ ವಿಚರಂತಂ ಮಹಾಮೃಧೇ ॥

ಅನುವಾದ

ಬಲಿಯು ಅಸ್ತ್ರ-ಶಸ್ತ್ರಗಳಿಂದ ಸುಸಜ್ಜಿತ ನಾಗಿ, ನಿರ್ಭಯನಾಗಿ ಪರಮೋತ್ಸಾಹದಿಂದ ಯುದ್ಧ ಭೂಮಿಯಲ್ಲಿ ಸಂಚರಿಸುತ್ತಿದ್ದನು. ತನ್ನ ಎದುರಿಗೆ ಬಂದ ಅವನನ್ನು ತಿರಸ್ಕರಿಸುತ್ತಾ ವಜ್ರಪಾಣಿಯಾದ ಇಂದ್ರನು ಇಂತೆಂದನು ॥3॥

(ಶ್ಲೋಕ-4)

ಮೂಲಮ್

ನಟವನ್ಮೂಢ ಮಾಯಾಭಿರ್ಮಾಯೇಶಾನ್ನೋ ಜಿಗೀಷಸಿ ।
ಜಿತ್ವಾ ಬಾಲಾನ್ನಿಬದ್ಧಾಕ್ಷಾನ್ನಟೋ ಹರತಿ ತದ್ಧನಮ್ ॥

ಅನುವಾದ

ಎಲೈ ಮೂರ್ಖಾ! ನಟನು (ಐಂದ್ರಜಾಲಿಕನು) ಮಕ್ಕಳ ಕಣ್ಣುಕಟ್ಟಿ ತನ್ನ ಮಾಯಾಜಾಲ ದಿಂದ ಅವರಲ್ಲಿದ್ದ ಹಣವನ್ನು ದೋಚುವಂತೆಯೇ ನೀನು ಮಾಯಾಜಾಲದಿಂದ ನಮ್ಮ ಮೇಲೆ ವಿಜಯ ಪಡೆಯ ಬಹುದೆಂದು ಬಯಸಿದ್ದೆ. ಆದರೆ ನಾವುಗಳು ಮಾಯೆಯ ಅಧಿಪತಿಗಳೆಂದು ನೀನು ಅರಿಯೆ. ಅದು ನಮ್ಮನ್ನು ಏನೂ ಮಾಡಲಾರದು. ॥4॥

(ಶ್ಲೋಕ-5)

ಮೂಲಮ್

ಆರುರುಕ್ಷಂತಿ ಮಾಯಾಭಿರುತ್ಸಿಸೃಪ್ಸಂತಿ ಯೇ ದಿವಮ್ ।
ತಾಂದಸ್ಯೂನ್ವಿಧುನೋಮ್ಯಜ್ಞಾನ್ಪೂರ್ವಸ್ಮಾಚ್ಚ ಪದಾದಧಃ ॥

ಅನುವಾದ

ಮಾಯೆಯ ಮೂಲಕ ಸ್ವರ್ಗದ ಮೇಲೆ ಅಧಿಕಾರವನ್ನು ನಡೆಸಲು ಬಯಸುವವನು ಹಾಗೂ ಅದನ್ನು ದಾಟಿ ಮೇಲಿನ ಲೋಕಗಳಲ್ಲಿಯೂ ಅಧಿಕಾರ ಸ್ಥಾಪಿಸಲು ಬಯಸುವಂತಹ ಮೂರ್ಖ ದರೋಡೆಕೋರ ನನ್ನು ನಾನು ಅವನು ಮೊದಲಿದ್ದ ಸ್ಥಾನದಿಂದಲೂ ಕೆಳಗೆ ತಳ್ಳಿಬಿಡುತ್ತೇನೆ. ॥5॥

(ಶ್ಲೋಕ-6)

ಮೂಲಮ್

ಸೋಹಂ ದುರ್ಮಾಯಿನಸ್ತೇದ್ಯ ವಜ್ರೇಣ ಶತಪರ್ವಣಾ ।
ಶಿರೋ ಹರಿಷ್ಯೇ ಮಂದಾತ್ಮನ್ಘಟಸ್ವ ಜ್ಞಾತಿಭಿಃ ಸಹ ॥

ಅನುವಾದ

ಎಲವೋ ಮಂದಮತಿಯೇ! ನೀನು ಭಾರೀ ದೊಡ್ಡ ಮಾಯಾಜಾಲವನ್ನು ರಚಿಸಿದ್ದೆ ನೋಡು. ಇಂದು ನಾನು ನನ್ನ ನೂರು ಗಿಣ್ಣುಗಳಿಂದ ಕೂಡಿದ ಅಜೇಯ ವಜ್ರಾಯುಧದಿಂದ ನಿನ್ನ ರುಂಡ-ಮುಂಡಗಳನ್ನು ಬೇರ್ಪಡಿಸಿಬಿಡುತ್ತೇನೆ. ನೀನು ನಿನ್ನ ಜ್ಞಾತಿಗಳೊಡನೆ ಸೇರಿ ಏನು ಮಾಡಬಹುದೋ ಅದನ್ನು ಮಾಡು.॥6॥

(ಶ್ಲೋಕ-7)

ಮೂಲಮ್ (ವಾಚನಮ್)

ಬಲಿರುವಾಚ

ಮೂಲಮ್

ಸಂಗ್ರಾಮೇ ವರ್ತಮಾನಾನಾಂ
ಕಾಲಚೋದಿತಕರ್ಮಣಾಮ್ ।
ಕೀರ್ತಿರ್ಜಯೋಜಯೋ ಮೃತ್ಯುಃ
ಸರ್ವೇಷಾಂ ಸ್ಯುರನುಕ್ರಮಾತ್ ॥

ಅನುವಾದ

ಬಲಿಯು ಹೇಳಿದನು — ಮಹೇಂದ್ರ! ಕಾಲಶಕ್ತಿಯ ಪ್ರೇರಣೆಯಿಂದ ತನ್ನ ಕರ್ಮಕ್ಕನುಸಾರ ಯುದ್ಧಮಾಡುವವರಿಗೆ ಜಯಾಪಜಯಗಳು ಅಥವಾ ಕೀರ್ತಿ-ಅಪಕೀರ್ತಿ, ಅಥವಾ ಮೃತ್ಯು ಇವುಗಳು ಅನುಕ್ರಮವಾಗಿ ಆಗುತ್ತಲೇ ಇರುತ್ತವೆ. ॥7॥

(ಶ್ಲೋಕ-8)

ಮೂಲಮ್

ತದಿದಂ ಕಾಲರಶನಂ ಜನಾಃ ಪಶ್ಯಂತಿ ಸೂರಯಃ ।
ನ ಹೃಷ್ಯಂತಿ ನ ಶೋಚಂತಿ ತತ್ರ ಯೂಯಮಪಂಡಿತಾಃ ॥

ಅನುವಾದ

ಆದುದರಿಂದ ಪಂಡಿತರಾದವರು ಈ ಜಗತ್ತನ್ನು ಕಾಲಕ್ಕೆ ಅಧೀನವೆಂದು ತಿಳಿದು ವಿಜಯಿ ಯಾದಾಗ ಹರ್ಷಪಡುವುದಿಲ್ಲ. ಅಪಕೀರ್ತಿ, ಸೋಲು, ಮೃತ್ಯು ಸಂಭವಿಸಿದಾಗ ಶೋಕಕ್ಕೆ ವಶರಾಗುವುದಿಲ್ಲ. ನೀವೆಲ್ಲರೂ ಈ ತತ್ತ್ವವನ್ನು ತಿಳಿದವರಲ್ಲ. ॥8॥

(ಶ್ಲೋಕ-9)

ಮೂಲಮ್

ನ ವಯಂ ಮನ್ಯ ಮಾನಾನಾಮಾತ್ಮಾನಂ ತತ್ರ ಸಾಧನಮ್ ।
ಗಿರೋ ವಃ ಸಾಧುಶೋಚ್ಯಾನಾಂ ಗೃಹ್ಣೀಮೋ ಮರ್ಮತಾಡನಾಃ ॥

ಅನುವಾದ

ನೀವುಗಳು ತಮ್ಮನ್ನು ಜಯ-ಪರಾಜಯಗಳ ಕರ್ತೃಗಳೆಂದು ತಿಳಿಯುತ್ತಿರುವಿರಿ. ಅದಕ್ಕಾಗಿ ಮಹಾತ್ಮರ ದೃಷ್ಟಿಯಲ್ಲಿ ನೀವುಗಳು ಶೋಚನೀಯರಾಗಿರುವಿರಿ. ಆದುದರಿಂದ ನಿನ್ನ ಮರ್ಮಭೇದಿಗಳಾದ ಮಾತನ್ನು ನಾವು ಲೆಕ್ಕಿಸುವುದೇ ಇಲ್ಲ. ॥9॥

(ಶ್ಲೋಕ-10)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯಾಕ್ಷಿಪ್ಯ ವಿಭುಂ ವೀರೋ ನಾರಾಚೈರ್ವೀರಮರ್ದನಃ ।
ಆಕರ್ಣಪೂರ್ಣೈರಹನದಾಕ್ಷೇಪೈರಾಹತಂ ಪುನಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ವೀರನಾದ ಬಲಿಯು ಇಂದ್ರನನ್ನು ಹೀಗೆ ನಿಂದಿಸಿದನು. ಬಲಿಯ ನಿಂದನೆಯಿಂದ ಇಂದ್ರನು ಸ್ವಲ್ಪನಾಚಿಕೊಂಡನು. ಅಷ್ಟರಲ್ಲಿ ಶತ್ರುಸೂದನನಾದ ಬಲಿಯು ತನ್ನ ಧನುಸ್ಸನ್ನು ಆಕರ್ಣಾಂತ ವಾಗಿ ಸೆಳೆದು ಅನೇಕ ಬಾಣಗಳನ್ನು ಪ್ರಯೋಗಿಸಿದನು. ॥10॥

ಮೂಲಮ್

(ಶ್ಲೋಕ-11)
ಏವಂ ನಿರಾಕೃತೋ ದೇವೋ ವೈರಿಣಾ ತಥ್ಯವಾದಿನಾ ।
ನಾಮೃಷ್ಯತ್ತದಧಿಕ್ಷೇಪಂ ತೋತ್ರಾಹತ ಇವ ದ್ವಿಪಃ ॥

ಅನುವಾದ

ಹೀಗೆ ಸತ್ಯ ವಾದಿಯಾದ ದೇವಶತ್ರು ಬಲಿಯಿಂದ ತಿರಸ್ಕರಿಸಲ್ಪಟ್ಟ ದೇವೇಂದ್ರನು ಅಂಕುಶದಿಂದ ತಿವಿಯಲ್ಪಟ್ಟ ಆನೆಯಂತೆ ಕೆರಳಿ ಆ ಬಲಿಯ ಮಾತುಗಳನ್ನು ಸಹಿಸಿಕೊಳ್ಳಲಿಲ್ಲ. ॥11॥

(ಶ್ಲೋಕ-12)

ಮೂಲಮ್

ಪ್ರಾಹರತ್ಕುಲಿಶಂ ತಸ್ಮಾ ಅಮೋಘಂ ಪರಮರ್ದನಃ ।
ಸಯಾನೋ ನ್ಯಪತದ್ಭೂವೌ ಛಿನ್ನಪಕ್ಷ ಇವಾಚಲಃ ॥

ಅನುವಾದ

ಅರಿಮರ್ದನನಾದ ಇಂದ್ರನು ಬಲಿಯನ್ನು ತನ್ನ ಅಮೋಘವಾದ ವಜ್ರಾಯುಧದಿಂದ ಪ್ರಹರಿಸಿದನು. ಆ ಏಟಿನಿಂದ ಬಲಿಯ ರೆಕ್ಕ ತುಂಡಾದ ಪರ್ವತದಂತೆ ವಿಮಾನದೊಂದಿಗೆ ನೆಲಕ್ಕೆ ಉರುಳಿದನು. ॥12॥

ಮೂಲಮ್

(ಶ್ಲೋಕ-13)
ಸಖಾಯಂ ಪತಿತಂ ದೃಷ್ಟ್ವಾ ಜಂಭೋ ಬಲಿಸಖಃ ಸುಹೃತ್ ।
ಅಭ್ಯಯಾತ್ಸೌಹೃದಂ ಸಖ್ಯುರ್ಹತಸ್ಯಾಪಿ ಸಮಾಚರನ್ ॥

ಅನುವಾದ

ಬಲಿಯ ಮಿತ್ರನೂ, ಆಪ್ತನೂ ಆದ ಜಂಭಾಸುರ ನೆಂಬ ರಾಕ್ಷಸನು ತನ್ನ ಮಿತ್ರನಾದ ಬಲಿಯು ಕೆಳಕ್ಕೆ ಬಿದ್ದುದನ್ನು ನೋಡಿ ಅವನು ಸತ್ತು ಹೋಗಿದ್ದರೂ ಅವನ ಸ್ನೇಹವನ್ನು ನೆನೆಯುತ್ತಾ ಅದರ ಪ್ರತೀಕಾರದಿಂದ ಇಂದ್ರನ ಮುಂದೆ ಯುದ್ಧಕ್ಕೆ ಬಂದುನಿಂತನು. ॥13॥

(ಶ್ಲೋಕ-14)

ಮೂಲಮ್

ಸ ಸಿಂಹವಾಹ ಆಸಾದ್ಯ ಗದಾಮುದ್ಯಮ್ಯ ರಂಹಸಾ ।
ಜತ್ರಾವತಾಡಯಚ್ಛಕ್ರಂ ಗಜಂ ಚ ಸುಮಹಾಬಲಃ ॥

ಅನುವಾದ

ಸಿಂಹವನ್ನಡರಿ ಇಂದ್ರನ ಬಳಿಗೆ ಬಂದು ಭಾರೀ ವೇಗದಿಂದ ತನ್ನ ಗದೆಯನ್ನು ಎತ್ತಿ ಇಂದ್ರನ ಕೊರಳ ಪ್ರದೇಶದಲ್ಲಿ ಪ್ರಹರಿಸಿದನು. ಜೊತೆಗೆ ಆ ಬಲಶಾಲಿಯು ಐರಾವತವನ್ನೂ ಗದೆಯಿಂದ ಪ್ರಹರಿಸಿದನು. ॥14॥

(ಶ್ಲೋಕ-15)

ಮೂಲಮ್

ಗದಾಪ್ರಹಾರವ್ಯಥಿತೋ ಭೃಶಂ ವಿಹ್ವಲಿತೋ ಗಜಃ ।
ಜಾನುಭ್ಯಾಂ ಧರಣೀಂ ಸ್ಪೃಷ್ಟ್ವಾ ಕಶ್ಮಲಂ ಪರಮಂ ಯಯೌ ॥

ಅನುವಾದ

ಗದಾಪ್ರಹಾರದಿಂದ ಐರಾವತವು ಬಹಳ ವ್ಯಥೆಗೊಂಡು ಮೊಣಕಾಲೂರಿ ನೆಲಕ್ಕೆ ಬಾಗಿ ಮೂರ್ಛಿತವಾಯಿತು. ॥15॥

(ಶ್ಲೋಕ-16)

ಮೂಲಮ್

ತತೋ ರಥೋ ಮಾತಲಿನಾ ಹರಿಭಿರ್ದಶಶತೈರ್ವೃತಃ ।
ಆನೀತೋ ದ್ವಿಪಮುತ್ಸೃಜ್ಯ ರಥಮಾರುರುಹೇ ವಿಭುಃ ॥

ಅನುವಾದ

ಆಗಲೇ ಇಂದ್ರನ ಸಾರಥಿಯಾದ ಮಾತಲಿಯು ಸಾವಿರ ಕುದುರೆಗಳನ್ನು ಹೂಡಿದ್ದ ದಿವ್ಯವಾದ ರಥವನ್ನು ತಂದನು. ಶಕ್ತಿಶಾಲಿಯಾದ ಇಂದ್ರನು ಐರಾವತವನ್ನು ಬಿಟ್ಟು ಶೀಘ್ರವಾಗಿ ರಥಾರೂಢನಾದನು. ॥16॥

(ಶ್ಲೋಕ-17)

ಮೂಲಮ್

ತಸ್ಯ ತತ್ಪೂಜಯನ್ಕರ್ಮ ಯಂತುರ್ದಾನವಸತ್ತಮಃ ।
ಶೂಲೇನ ಜ್ವಲತಾ ತಂ ತು ಸ್ಮಯಮಾನೋಹನನ್ಮೃಧೇ ॥

ಅನುವಾದ

ದಾನವೇಂದ್ರನಾದ ಜಂಭಾಸುರನು ಮಾತಲಿಯ ಈ ಕಾರ್ಯವನ್ನು ಪ್ರಶಂಸಿಸಿ ಮುಗುಳ್ನಗುತ್ತಾ ಹೊಳೆಯು ತ್ತಿರುವ ತ್ರಿಶೂಲವೊಂದನ್ನು ಅವನ ಮೇಲೆ ಪ್ರಯೋಗಿಸಿದನು. ॥17॥

(ಶ್ಲೋಕ-18)

ಮೂಲಮ್

ಸೇಹೇ ರುಜಂ ಸುದುರ್ಮರ್ಷಾಂ ಸತ್ತ್ವಮಾಲಂಬ್ಯ ಮಾತಲಿಃ ।
ಇಂದ್ರೋ ಜಂಭಸ್ಯ ಸಂಕ್ರುದ್ಧೋ ವಜ್ರೇಣಾಪಾಹರಚ್ಛಿರಃ ॥

ಅನುವಾದ

ಮಾತಲಿಯು ಧೈರ್ಯದಿಂದ ಆ ಸಹಿಸಲ ಸಾಧ್ಯವಾದ ಸಂಕಟವನ್ನು ಸಹಿಸಿಕೊಂಡನು. ಇದನ್ನು ನೋಡಿದ ಇಂದ್ರನು ಕ್ರೋಧಗೊಂಡು ತನ್ನ ವಜ್ರಾಯುಧದಿಂದ ಜಂಭನ ತಲೆಯನ್ನು ತುಂಡರಿಸಿಬಿಟ್ಟನು. ॥18॥

(ಶ್ಲೋಕ-19)

ಮೂಲಮ್

ಜಂಭಂ ಶ್ರುತ್ವಾ ಹತಂ ತಸ್ಯ ಜ್ಞಾತಯೋ ನಾರದಾದೃಷೇಃ ।
ನಮುಚಿಶ್ಚ ಬಲಃ ಪಾಕಸ್ತತ್ರಾಪೇತುಸ್ತ್ವರಾನ್ವಿತಾಃ ॥

ಅನುವಾದ

ಜಂಭಾಸುರನು ಹತನಾದುದನ್ನು ನಾರದ ಮಹರ್ಷಿಗಳಿಂದ ಕೇಳಿದ ಅವನ ಬಂಧುಗಳಾದ ನಮೂಚಿ, ಬಲ, ಪಾಕ ಮುಂತಾದವರು ತ್ವರಿತವಾಗಿ ಯುದ್ಧಭೂಮಿಗೆ ಆಗಮಿಸಿದರು. ॥19॥

(ಶ್ಲೋಕ-20)

ಮೂಲಮ್

ವಚೋಭಿಃ ಪರುಷೈರಿಂದ್ರಮರ್ದಯಂತೋಸ್ಯ ಮರ್ಮಸು ।
ಶರೈರವಾಕಿರನ್ಮೇಘಾ ಧಾರಾಭಿರಿವ ಪರ್ವತಮ್ ॥

ಅನುವಾದ

ನಮೂಚಿಯೇ ಮುಂತಾದ ರಾಕ್ಷಸರು ಇಂದ್ರನ ಕುರಿತು ಅತಿ ಕಠೋರವಾದ ಮರ್ಮ ಸ್ಪರ್ಶಿಮಾತುಗಳನ್ನಾಡಿ, ಮೇಘಗಳು ಜಲಧಾರೆಯಿಂದ ಪರ್ವತವನ್ನು ಮುಚ್ಚಿಬಿಡುವಂತೆ ಶರವರ್ಷಗಳಿಂದ ಇಂದ್ರ ನನ್ನು ಮುಚ್ಚಿಬಿಟ್ಟಿತು. ॥20॥

(ಶ್ಲೋಕ-21)

ಮೂಲಮ್

ಹರೀನ್ದಶಶತಾನ್ಯಾಜೌ ಹರ್ಯಶ್ವಸ್ಯ ಬಲಃ ಶರೈಃ ।
ತಾವದ್ಭಿರರ್ದಯಾಮಾಸ ಯುಗಪಲ್ಲಘುಹಸ್ತವಾನ್ ॥

ಅನುವಾದ

ಬಲಾಸುರನು ತನ್ನ ಕೈಚಳಕದಿಂದ ಒಂದೇ ಬಾರಿಗೆ ಒಂದುಸಾವಿರ ಬಾಣಗಳನ್ನು ಪ್ರಯೋಗಿಸಿ ಇಂದ್ರನ ಒಂದುಸಾವಿರ ಕುದುರೆಗಳನ್ನು ಘಾಸಿಗೊಳಿಸಿದನು.॥21॥

(ಶ್ಲೋಕ-22)

ಮೂಲಮ್

ಶತಾಭ್ಯಾಂ ಮಾತಲಿಂ ಪಾಕೋ ರಥಂ ಸಾವಯವಂ ಪೃಥಕ್ ।
ಸಕೃತ್ಸಂಧಾನಮೋಕ್ಷೇಣ ತದದ್ಭುತಮಭೂದ್ರಣೇ ॥

ಅನುವಾದ

ಪಾಕನು ನೂರು ಬಾಣಗಳಿಂದ ಮಾತಲಿಯನ್ನೂ, ನೂರು ಬಾಣಗಳಿಂದ ರಥದ ಅವಯವಗಳನ್ನೂ ಭೇದಿಸಿದನು. ಯುದ್ಧಭೂಮಿಯಲ್ಲಿ ಒಂದೇ ಬಾರಿಗೆ ಇಷ್ಟೊಂದು ಬಾಣಗಳನ್ನು ಹೂಡಿ, ಪ್ರಯೋಗಿಸಿದುದು ಪರಮಾದ್ಭುತವಾದ ಘಟನೆಯಾಗಿತ್ತು. ॥22॥

(ಶ್ಲೋಕ-23)

ಮೂಲಮ್

ನಮುಚಿಃ ಪಂಚದಶಭಿಃ ಸ್ವರ್ಣಪುಂಖೈರ್ಮಹೇಷುಭಿಃ ।
ಆಹತ್ಯ ವ್ಯನದತ್ಸಂಖ್ಯೇ ಸತೋಯ ಇವ ತೋಯದಃ ॥

ಅನುವಾದ

ನಮೂಚಿಯು ಚಿನ್ನದ ಗರಿಕಟ್ಟಿದ ಭಾರೀ ಹದಿನೈದು ಬಾಣಗಳಿಂದ ಇಂದ್ರನನ್ನು ಪ್ರಹರಿಸಿ-ನೀರು ತುಂಬಿದ ಮೇಘಗಳಂತೆ ಯುದ್ಧರಂಗದಲ್ಲಿ ಅವನು ಗರ್ಜಿಸಿದನು. ॥23॥

(ಶ್ಲೋಕ-24)

ಮೂಲಮ್

ಸರ್ವತಃ ಶರಕೂಟೇನ ಶಕ್ರಂ ಸರಥಸಾರಥಿಮ್ ।
ಛಾದಯಾಮಾಸುರಸುರಾಃ ಪ್ರಾವೃಟ್ಸೂರ್ಯಮಿವಾಂಬುದಾಃ ॥

ಅನುವಾದ

ವರ್ಷಾಕಾಲದಲ್ಲಿ ಮೋಡಗಳು ಸೂರ್ಯನನ್ನು ಮುಚ್ಚಿಬಿಡುವಂತೆಯೇ ಅಸುರರು ಬಾಣಗಳ ಮಳೆಯಿಂದ ಇಂದ್ರನನ್ನೂ, ಅವನ ರಥ-ಸಾರಥಿಯನ್ನೂ ಎಲ್ಲೆಡೆಗಳಿಂದ ಮುಚ್ಚಿ ಬಿಟ್ಟರು. ॥24॥

(ಶ್ಲೋಕ-25)

ಮೂಲಮ್

ಅಲಕ್ಷಯಂತಸ್ತಮತೀವ ವಿಹ್ವಲಾ
ವಿಚುಕ್ರುಶುರ್ದೇವಗಣಾಃ ಸಹಾನುಗಾಃ ।
ಅನಾಯಕಾಃ ಶತ್ರುಬಲೇನ ನಿರ್ಜಿತಾ
ವಣಿಕ್ಪಥಾ ಭಿನ್ನನವೋ ಯಥಾರ್ಣವೇ ॥

ಅನುವಾದ

ತಮ್ಮ ನಾಯಕನಾದ ಇಂದ್ರನನ್ನು ಕಾಣದೆ ದೇವತೆಗಳೂ, ಅವನ ಅನುಚರರೂ ವಿಹ್ವಲರಾಗಿ ಅಳತೊಡಗಿದರು. ಒಂದು ಶತ್ರುಗಳಿಂದ ಜಯಿಸಲ್ಪಟ್ಟವರಾಗಿದ್ದರು, ಇನ್ನೊಂದು ಅವರಿಗೆ ಯಾರೂ ಸೇನಾಪತಿಯು ಇರಲಿಲ್ಲ. ಆಗ ಸಮುದ್ರಮಧ್ಯದಲ್ಲಿ ಒಡೆದುಹೋದ ನಾವೆಯಲ್ಲಿದ್ದ ವರ್ತಕರಂತೆ ಅವರ ಸ್ಥಿತಿಯಾಗಿತ್ತು. ॥25॥

(ಶ್ಲೋಕ-26)

ಮೂಲಮ್

ತತಸ್ತುರಾಷಾಡಿಷುಬದ್ಧಪಂಜರಾದ್-
ವಿನಿರ್ಗತಃ ಸಾಶ್ವರಥಧ್ವಜಾಗ್ರಣೀಃ ।
ಬಭೌ ದಿಶಃ ಖಂ ಪೃಥಿವೀಂ ಚ ರೋಚಯನ್
ಸ್ವತೇಜಸಾ ಸೂರ್ಯ ಇವ ಕ್ಷಪಾತ್ಯಯೇ ॥

ಅನುವಾದ

ಅಷ್ಟರಲ್ಲೇ ರಥಾಶ್ವ-ಧ್ವಜಗಳಿಂದ ಕೂಡಿದ ಇಂದ್ರನು ಬಾಣಗಳ ಪಂಜರದಿಂದ ಹೊರ ಬಂದು ಬೆಳಗಾದಕೂಡಲೇ ತನ್ನ ತೇಜಸ್ಸಿನಿಂದ ದಿಕ್ಕುಗಳನ್ನೂ, ಆಕಾಶವನ್ನೂ, ಭೂಮಿಯನ್ನೂ ಪ್ರಕಾಶಗೊಳಿಸುವ ಸೂರ್ಯನಂತೆ ಇಂದ್ರನು ಬೆಳಗಿದನು. ॥26॥

(ಶ್ಲೋಕ-27)

ಮೂಲಮ್

ನಿರೀಕ್ಷ್ಯ ಪೃತನಾಂ ದೇವಃ ಪರೈರಭ್ಯರ್ದಿತಾಂ ರಣೇ ।
ಉದಯಚ್ಛದ್ರಿಪುಂ ಹಂತುಂ ವಜ್ರಂ ವಜ್ರಧರೋ ರುಷಾ ॥

ಅನುವಾದ

ಯುದ್ಧದಲ್ಲಿ ಶತ್ರುಗಳಿಂದ ಸತತವಾಗಿ ಪೀಡಿಸಲ್ಪಡುತ್ತಿದ್ದ ತನ್ನ ಸೈನ್ಯವನ್ನು ನೋಡಿ ವಜ್ರಧರನಾದ ಇಂದ್ರನು ಪರಮ ಕ್ರುದ್ಧನಾಗಿ ಶತ್ರುಗಳನ್ನು ನಿರ್ಮೂಲನ ಮಾಡುವುದಕ್ಕಾಗಿ ವಜ್ರಾ ಯುಧದಿಂದ ಆಕ್ರಮಣ ಮಾಡಿದನು. ॥27॥

(ಶ್ಲೋಕ-28)

ಮೂಲಮ್

ಸ ತೇನೈವಾಷ್ಟಧಾರೇಣ ಶಿರಸೀ ಬಲಪಾಕಯೋಃ ।
ಜ್ಞಾತೀನಾಂ ಪಶ್ಯತಾಂ ರಾಜನ್ಜಹಾರ ಜನಯನ್ಭಯಮ್ ॥

ಅನುವಾದ

ಪರೀಕ್ಷಿತನೇ! ಎಂಟು ಮೂಲೆಗಳುಳ್ಳ ವಜ್ರದಿಂದ ಆ ದೈತ್ಯರ ಬಂಧುಗಳಿಗೆ ಭಯವನ್ನುಂಟುಮಾಡುತ್ತಾ ಇಂದ್ರನು ಬಲ ಮತ್ತು ಪಾಕ ಇವರ ತಲೆಗಳನ್ನು ಹಾರಿಸಿಬಿಟ್ಟನು.॥28॥

ಮೂಲಮ್

(ಶ್ಲೋಕ-29)

ಮೂಲಮ್

ನಮುಚಿಸ್ತದ್ವಧಂ ದೃಷ್ಟ್ವಾ ಶೋಕಾಮರ್ಷರುಷಾನ್ವಿತಃ ।
ಜಿಘಾಂಸುರಿಂದ್ರಂ ನೃಪತೇ ಚಕಾರ ಪರಮೋದ್ಯಮಮ್ ॥

ಅನುವಾದ

ಪರೀಕ್ಷಿತನೇ! ಬಲ-ಪಾಕರಿಬ್ಬರೂ ಇಂದ್ರನಿಂದ ಹತ ರಾದುದನ್ನು ನೋಡಿ ನಮೂಚಿಗೆ ಭಾರೀ ಶೋಕವುಂಟಾ ಯಿತು. ಅವನು ಅಸಹನೆಯಿಂದಲೂ, ಕೋಪದಿಂದಲೂ ಕೆಂಪೇರಿ ಅಸುರಶತ್ರುವಾದ ಇಂದ್ರನನ್ನು ಸಂಹರಿಸಲು ಬಹಳ ವಾಗಿ ಪ್ರಯತ್ನಿಸಿದನು. ॥29॥

(ಶ್ಲೋಕ-30)

ಮೂಲಮ್

ಅಶ್ಮಸಾರಮಯಂ ಶೂಲಂ ಘಂಟಾವದ್ಧೇಮಭೂಷಣಮ್ ।
ಪ್ರಗೃಹ್ಯಾಭ್ಯದ್ರವತ್ಕ್ರುದ್ಧೋ ಹತೋಸೀತಿ ವಿತರ್ಜಯನ್ ।
ಪ್ರಾಹಿಣೋದ್ದೇವರಾಜಾಯ ನಿನದನ್ಮೃಗರಾಡಿವ ॥

ಅನುವಾದ

ಕಿರುಗಂಟೆಗಳಿಂದ ಝಣ-ಝಣಿಸುತ್ತಾ, ಸುವರ್ಣ ಭೂಷಿತವಾಗಿದ್ದ ಒಂದು ಶೂಲವನ್ನೆತ್ತಿಕೊಂಡು ಅತ್ಯಂತ ಕ್ರುದ್ಧನಾಗಿ ಇಂದ್ರನೇ! ‘ಈಗ ನೀನು ಬದುಕುಳಿಯಲಾರೆ’ ಎಂದು ಗರ್ಜಿಸುತ್ತಾ, ಸಿಂಹನಾದವನ್ನು ಮಾಡುತ್ತಾ ದೇವೇಂದ್ರನ ಮೇಲೆ ಆ ನಮೂಚಿಯು ಶೂಲವನ್ನು ರಭಸದಿಂದ ಎಸೆದನು. ॥30॥

(ಶ್ಲೋಕ-31)

ಮೂಲಮ್

ತದಾಪತದ್ ಗಗನತಲೇ ಮಹಾಜವಂ
ವಿಚಿಚ್ಛಿದೇ ಹರಿರಿಷುಭಿಃ ಸಹಸ್ರಧಾ ।
ತಮಾಹನನ್ನೃಪ ಕುಲಿಶೇನ ಕಂಧರೇ
ರುಷಾನ್ವಿತಸಿದಶಪತಿಃ ಶಿರೋ ಹರನ್ ॥

ಅನುವಾದ

ರಾಜೇಂದ್ರನೇ! ನಮೂಚಿಯಿಂದ ಬಿಡಲ್ಪಟ್ಟ ತ್ರಿಶೂಲವು ತನ್ನ ಕಡೆಗೆ ಬರುತ್ತಿರುವುದನ್ನು ನೋಡಿದ ಇಂದ್ರನು ತನ್ನ ನಿಶಿತವಾದ ಬಾಣಗಳಿಂದ ಆಕಾಶದಲ್ಲೇ ಸಾವಿರಾರು ತುಂಡು ಗಳಾಗಿ ಕತ್ತರಿಸಿ ಬಿಟ್ಟನು. ಇದಾದ ಬಳಿಕ ದೇವೇಂದ್ರನು ಅತ್ಯಂತ ಕ್ರುದ್ಧನಾಗಿ ಅವನ ಶಿರವನ್ನು ತುಂಡರಿಸಲಿಕ್ಕಾಗಿ ವಜ್ರಾಯುಧವನ್ನು ರಾಕ್ಷಸನ ಕತ್ತಿನ ಮೇಲೆ ಪ್ರಯೋಗಿಸಿದನು. ॥31॥

(ಶ್ಲೋಕ-32)

ಮೂಲಮ್

ನ ತಸ್ಯ ಹಿ ತ್ವಚಮಪಿ ವಜ್ರ ಊರ್ಜಿತೋ
ಬಿಭೇದ ಯಃ ಸುರಪತಿನೌಜಸೇರಿತಃ ।
ತದದ್ಭುತಂ ಪರಮತಿವೀರ್ಯವೃತ್ರಭಿತ್
ತಿರಸ್ಕೃತೋ ನಮುಚಿಶಿರೋಧರತ್ವಚಾ ॥

ಅನುವಾದ

ಇಂದ್ರನು ಭಾರೀ ವೇಗದಿಂದ ಆ ವಜ್ರವನ್ನು ಪ್ರಯೋಗಿಸಿದ್ದರೂ, ಆ ಯಶಸ್ವೀ ವಜ್ರದಿಂದ ಅವನ ಚರ್ಮದ ಮೇಲೆ ಗುರುತುಕೂಡ ಮಾಡದೆ ಹೋಯಿತು. ಯಾವ ವಜ್ರವು ಮಹಾಬಲಶಾಲಿಯಾದ ವೃತ್ರಾಸುರನ ಶರೀರವನ್ನು ತುಂಡು-ತುಂಡುಮಾಡಿತ್ತೋ ಅದನ್ನು ನಮೂಚಿಯ ಕತ್ತಿನ ತ್ವಚೆಯು ತಿರಸ್ಕರಿಸಿತ್ತು. ಇದೊಂದು ಪರಮಾಶ್ಚರ್ಯಕರ ಘಟನೆ ನಡೆಯಿತು. ॥32॥

(ಶ್ಲೋಕ-33)

ಮೂಲಮ್

ತಸ್ಮಾದಿಂದ್ರೋಬಿಭೇಚ್ಛತ್ರೋರ್ವಜ್ರಃ ಪ್ರತಿಹತೋ ಯತಃ ।
ಕಿಮಿದಂ ದೈವಯೋಗೇನ ಭೂತಂ ಲೋಕವಿಮೋಹನಮ್ ॥

ಅನುವಾದ

ವಜ್ರಾಯುಧವು ನಮೂಚಿಯ ವಿಷಯದಲ್ಲಿ ಬಲಹೀನ ವಾಗಿರುವುದನ್ನು ಕಂಡು ಇಂದ್ರನು ಭಯಗೊಂಡನು. ‘ಲೋಕಗಳನ್ನು ನಿಮೋಹಗೊಳಿಸುವ ರಾಕ್ಷಸ ರೂಪದ ಈ ಪ್ರಾಣಿಯು ದೈವಯೋಗದಿಂದಲೇ ಹುಟ್ಟಿರಬಹುದೇ?’ ಎಂದು ಇಂದ್ರನು ಯೋಚಿಸತೊಡಗಿದನು. ॥33॥

(ಶ್ಲೋಕ-34)

ಮೂಲಮ್

ಯೇನಮೇ ಪೂರ್ವಮದ್ರೀಣಾಂ ಪಕ್ಷಚ್ಛೇದಃ ಪ್ರಜಾತ್ಯಯೇ ।
ಕೃತೋ ನಿವಿಶತಾಂ ಭಾರೈಃ ಪತತೈಃ ಪತತಾಂ ಭುವಿ ॥

ಅನುವಾದ

ಹಿಂದಿನ ಯುಗದಲ್ಲಿ ಈ ಪರ್ವತಗಳು ರೆಕ್ಕೆಗಳಿಂದ ಹಾರಾಡುತ್ತಾ, ತಿರುಗುತ್ತಿರುವಾಗ ಭೂಮಿಯಲ್ಲಿ ಬಿದ್ದು ಪ್ರಜೆಗಳನ್ನು ನಾಶಮಾಡುತ್ತಿದ್ದವು. ಇದನ್ನು ಕಂಡ ನಾನು ನನ್ನ ಈ ವಜ್ರಾಯುಧದಿಂದಲೇ ಪರ್ವತಗಳ ರೆಕ್ಕೆಗಳನ್ನು ಕತ್ತರಿಸಿಹಾಕಿದ್ದೆ. ಈಗ ವಜ್ರಾಯುಧವು ನಮೂಚಿಯ ವಿಷಯದಲ್ಲಿ ವ್ಯರ್ಥವಾಗಿ ಬಿಟ್ಟಿದೆಯಲ್ಲ! ॥34॥

(ಶ್ಲೋಕ-35)

ಮೂಲಮ್

ತಪಃಸಾರಮಯಂ ತ್ವಾಷ್ಟ್ರಂ ವೃತ್ರೋ ಯೇನ ವಿಪಾಟಿತಃ ।
ಅನ್ಯೇ ಚಾಪಿ ಬಲೋಪೇತಾಃ ಸರ್ವಾಸೈರಕ್ಷತತ್ವಚಃ ॥

ಅನುವಾದ

ತ್ವಷ್ಟೃ ಪ್ರಜಾಪತಿಯ ತಪಸ್ಸಿನ ಸಾರವೇ ವೃತ್ರಾಸುರನ ರೂಪದಲ್ಲಿ ಪ್ರಕಟವಾಗಿತ್ತು. ಅಂತಹವನನ್ನೇ ನಾನು ಈ ವಜ್ರದಿಂದ ಸಂಹರಿಸಿ ಬಿಟ್ಟಿದ್ದೆ ಇನ್ನೂ ಅನೇಕ ಬಲಿಷ್ಠರಾಗಿದ್ದ ಮತ್ತು ಯಾವುದೇ ಶಸ್ತ್ರಗಳಿಂದ ಕಿಂಚಿತ್ತಾದರೂ ಗಾಯಗೊಳ್ಳದಿದ್ದ ಮಹಾಸುರ ರನ್ನು ಈ ವಜ್ರಾಯುಧದಿಂದಲೇ ನಾನು ಸಂಹರಿಸಿದ್ದೆ. ॥35॥

(ಶ್ಲೋಕ-36)

ಮೂಲಮ್

ಸೋಯಂ ಪ್ರತಿಹತೋ ವಜ್ರೋ
ಮಯಾ ಮುಕ್ತೋಸುರೇಲ್ಪಕೇ ।
ನಾಹಂ ತದಾದದೇ ದಂಡಂ
ಬ್ರಹ್ಮತೇಜೋಪ್ಯಕಾರಣಮ್ ॥

ಅನುವಾದ

ಅಂತಹ ಶ್ರೇಷ್ಠವಾದ ನನ್ನ ವಜ್ರಾಯುಧವು ಅತ್ಯಲ್ಪನಾದ ಈ ನಮೂಚಿರಾಕ್ಷಸನ ವಿಷಯದಲ್ಲಿ ಪರಾಭವವನ್ನು ಹೊಂದಿತು. ಈ ವಜ್ರಾಯುಧವು ಮಹಾಮಹಿಮನಾದ ದಧೀಚಿ ಮಹರ್ಷಿಯ ಬ್ರಹ್ಮತೇಜದಿಂದ ರೂಪಿತವಾಗಿದ್ದರೂ ನಿಷ್ಕಾರಣವಾಗಿ ಬಲಗುಂದಿದ ಇದನ್ನು ನಾನು ಇನ್ನು ಮುಂದೆ ಹಿಡಿಯುವುದಿಲ್ಲ. ॥36॥

(ಶ್ಲೋಕ-37)

ಮೂಲಮ್

ಇತಿ ಶಕ್ರಂ ವಿಷೀದಂತಮಾಹ ವಾಗಶರೀರಿಣೀ ।
ನಾಯಂ ಶುಷ್ಕೈರಥೋ ನಾರ್ದ್ರೈರ್ವಧಮರ್ಹತಿ ದಾನವಃ ॥

(ಶ್ಲೋಕ-38)

ಮೂಲಮ್

ಮಯಾಸ್ಮೈ ಯದ್ವರೋ ದತ್ತೋ
ಮೃತ್ಯುರ್ನೈವಾರ್ದ್ರಶುಷ್ಕಯೋಃ ।
ಅತೋನ್ಯಶ್ಚಿಂತನೀಯಸ್ತೇ
ಉಪಾಯೋ ಮಘವನ್ರಿಪೋಃ ॥

ಅನುವಾದ

ಹೀಗೆ ಇಂದ್ರನು ವಿಷಾದಿಸುತ್ತಿರುವಾಗ ಆಕಾಶವಾಣಿಯು ಹೀಗೆಂದು ನುಡಿಯಿತು ‘ವಾಸವನೇ! ಈ ರಾಕ್ಷಸನನ್ನು ಒಣಗಿರುವ ವಸ್ತುವಿನಿಂದಾಗಲೀ, ಹಸಿಯಾಗಿರುವ ವಸ್ತುವಿನಿಂದಾಗಲೀ ವಧಿಸಲು ಸಾಧ್ಯವಿಲ್ಲ. ಅವನಿಗೆ ಇಂತಹ ವರಬಲವಿದೆ. ಈಗ ನೀನು ಇವನನ್ನು ಕೊಲ್ಲುವ ಬೇರೆ ಉಪಾಯವನ್ನು ಯೋಚಿಸು’. ॥37-38॥

(ಶ್ಲೋಕ-39)

ಮೂಲಮ್

ತಾಂ ದೈವೀಂ ಗಿರಮಾಕರ್ಣ್ಯ ಮಘವಾನ್ಸುಸಮಾಹಿತಃ ।
ಧ್ಯಾಯನ್ ೇನಮಥಾಪಶ್ಯದುಪಾಯಮುಭಯಾತ್ಮಕಮ್ ॥

ಅನುವಾದ

ಮಹೇಂದ್ರನು ಆ ದೇವವಾಣಿಯನ್ನು ಕೇಳಿ ಏಕಾಗ್ರಚಿತ್ತನಾಗಿ ಯೋಚಿಸುತ್ತಾ-ಯೋಚಿಸುತ್ತಾ ಕೊನೆಗೆ ಅವನಿಗೆ ಹೊಳೆಯಿತು ಸಮುದ್ರದ ನೊರೆಯು ಒಣಗಿದ್ದೂ ಅಲ್ಲ, ಹಸಿಯೂ ಅಲ್ಲ. ॥39॥

(ಶ್ಲೋಕ-40)

ಮೂಲಮ್

ನ ಶುಷ್ಕೇಣ ನ ಚಾರ್ದ್ರೇಣ ಜಹಾರ ನಮುಚೇಃ ಶಿರಃ ।
ತಂ ತುಷ್ಟುವುರ್ಮುನಿಗಣಾ ಮಾಲ್ಯೈಶ್ಚಾವಾಕಿರನ್ವಿಭುಮ್ ॥

ಅನುವಾದ

ಆದ್ದರಿಂದ ಅದನ್ನು ಹಸಿ ಎಂದೂ ಹೇಳುವ ಆಗಿಲ್ಲ, ಒಣಗಿದ್ದು ಎಂದೂ ಹೇಳುವ ಹಾಗಿಲ್ಲ. ಆದ್ದರಿಂದ ಇಂದ್ರನು ಆ ನೊರೆಯಿಂದಲೇ ನಮೂಚಿಯ ಶಿರವನ್ನು ತುಂಡರಿಸಿದನು. ಆಗ ಋಷಿ-ಮುನಿಗಳು ಒಡೆಯನಾದ ಇಂದ್ರನನ್ನು ಸ್ತುತಿಸಿ ಅವನ ಮೇಲೆ ಹೂಮಾಲೆಗಳನ್ನು ಮಳೆಗರೆದರು. ॥40॥

(ಶ್ಲೋಕ-41)

ಮೂಲಮ್

ಗಂಧರ್ವಮುಖ್ಯೌ ಜಗತುರ್ವಿಶ್ವಾವಸುಪರಾವಸೂ ।
ದೇವದುಂದುಭಯೋ ನೇದುರ್ನರ್ತಕ್ಯೋ ನನೃತುರ್ಮುದಾ ॥

ಅನುವಾದ

ಗಂಧರ್ವ ಶಿರೋಮಣಿ ವಿಶ್ವಾವಸು ಹಾಗೂ ಪರಾವಸುಗಳು ಹಾಡತೊಡಗಿದರು. ದೇವತೆಗಳು ದುಂದುಭಿಗಳನ್ನು ನುಡಿಸತೊಡಗಿದರು. ನರ್ತಕಿಯರು ಕುಣಿಯತೊಡಗಿದರು. ॥41॥

(ಶ್ಲೋಕ-42)

ಮೂಲಮ್

ಅನ್ಯೇಪ್ಯೇವಂ ಪ್ರತಿದ್ವಂದ್ವಾನ್ವಾಯ್ವಗ್ನಿವರುಣಾದಯಃ ।
ಸೂದಯಾಮಾಸುರಸೌಘೈರ್ಮೃಗಾನ್ಕೇಸರಿಣೋ ಯಥಾ ॥

ಅನುವಾದ

ಹೀಗೆಯೇ ವಾಯು, ಅಗ್ನಿ, ವರುಣ ಮುಂತಾದ ಇತರ ದೇವತೆಗಳೂ ಕೂಡ ತಮ್ಮ ಅಸ್ತ್ರ-ಶಸ್ತ್ರಗಳಿಂದ ಸಿಂಹವು ಜಿಂಕೆಗಳನ್ನು ಕೊಂದುಹಾಕುವಂತೆ ಎದುರಾಳಿ ರಾಕ್ಷಸರನ್ನು ಧ್ವಂಸಮಾಡಿದರು.॥42॥

(ಶ್ಲೋಕ-43)

ಮೂಲಮ್

ಬ್ರಹ್ಮಣಾ ಪ್ರೇಷಿತೋ ದೇವಾನ್ದೇವರ್ಷಿರ್ನಾರದೋ ನೃಪ ।
ವಾರಯಾಮಾಸ ವಿಬುಧಾನ್ದೃಷ್ಟ್ವಾ ದಾನವಸಂಕ್ಷಯಮ್ ॥

ಅನುವಾದ

ಪರೀಕ್ಷಿತನೇ!ದಾನವರದ್ದಾದರೋ ಪೂರ್ಣನಾಶವಾಗಿದೆ ಎಂದು ನೋಡಿದ ಬ್ರಹ್ಮದೇವರು ದೇವರ್ಷಿಗಳಾದ ನಾರದರನ್ನು ದೇವತೆಗಳ ಬಳಿಗೆ ಕಳಿಸಿದರು. ನಾರದರು ಅಲ್ಲಿಗೆ ಹೋಗಿ ಮುಂದೆ ಯುದ್ಧ ಮಾಡದಂತೆ ದೇವತೆಗಳನ್ನು ತಡೆದರು. ॥43॥

(ಶ್ಲೋಕ-44)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಭವದ್ಭಿರಮೃತಂ ಪ್ರಾಪ್ತಂ ನಾರಾಯಣಭುಜಾಶ್ರಯೈಃ ।
ಶ್ರಿಯಾ ಸಮೇಧಿತಾಃ ಸರ್ವ ಉಪಾರಮತ ವಿಗ್ರಹಾತ್ ॥

ಅನುವಾದ

ನಾರದರು ಹೇಳಿದರು — ದೇವತೆಗಳಿರಾ! ಶ್ರೀನಾರಾಯಣನ ಭುಜಬಲವನ್ನು ಆಶ್ರಯಿಸಿ ನೀವು ಅಮೃತವನ್ನು ಪಡೆದಿರಿ. ಶ್ರೀಲಕ್ಷ್ಮೀದೇವಿಯ ಕೃಪಾಕಟಾಕ್ಷದಿಂದ ಅಭಿವೃದ್ಧಿ ಯನ್ನು ಹೊಂದಿರುವಿರಿ. ನೀವು ಯುದ್ಧವನ್ನು ನಿಲ್ಲಿಸಿ ಬಿಡಿರಿ. ॥44॥

ಮೂಲಮ್

(ಶ್ಲೋಕ-45)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಸಂಯಮ್ಯ ಮನ್ಯುಸಂರಂಭಂ
ಮಾನಯಂತೋ ಮುನೇರ್ವಚಃ ।
ಉಪಗೀಯಮಾನಾನುಚರೈ-
ರ್ಯಯುಃ ಸರ್ವೇ ತ್ರಿವಿಷ್ಟಪಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ರಾಜೇಂದ್ರ! ದೇವರ್ಷಿನಾರದರ ಮಾತನ್ನು ಅನುಮೋದಿಸಿ ದೇವತೆಗಳು ಕೋಪವನ್ನು ತೊರೆದು ಶಾಂತರಾದರು. ಮತ್ತೆ ಗಂಧರ್ವಾಪ್ಸರೆಯರು ಸ್ತುತಿಸುತ್ತಾ ಇರುವಾಗ ಅವರು ತಮ್ಮ ಸ್ವರ್ಗ ಲೋಕಕ್ಕೆ ಬಿಜಯಂಗೈದರು.॥45॥

(ಶ್ಲೋಕ-46)

ಮೂಲಮ್

ಯೇವಶಿಷ್ಟಾ ರಣೇ ತಸ್ಮಿನ್ನಾರದಾನುಮತೇನ ತೇ ।
ಬಲಿಂ ವಿಪನ್ನಮಾದಾಯ ಅಸ್ತಂ ಗಿರಿಮುಪಾಗಮನ್ ॥

ಅನುವಾದ

ಯುದ್ಧದಲ್ಲಿ ಅಳಿದುಳಿದಿದ್ದ ದೈತ್ಯರು ನಾರದ ಮಹರ್ಷಿಗಳ ಸಮ್ಮತಿಯಿಂದ ವಜ್ರಾಯುಧದಿಂದ ಸತ್ತುಬಿದ್ದಿದ್ದ ಬಲಿಯನ್ನು ಎತ್ತಿಕೊಂಡು ಅಸ್ತಾಚಲಕ್ಕೆ ತೆರಳಿದರು. ॥46॥

(ಶ್ಲೋಕ-47)

ಮೂಲಮ್

ತತ್ರಾವಿನಷ್ಟಾವಯವಾನ್ವಿದ್ಯಮಾನಶಿರೋಧರಾನ್ ।
ಉಶನಾ ಜೀವಯಾಮಾಸ ಸಂಜೀವಿನ್ಯಾ ಸ್ವವಿದ್ಯಯಾ ॥

ಅನುವಾದ

ಅಲ್ಲಿ ಶುಕ್ರಾಚಾರ್ಯರು ತಮ್ಮ ಸಂಜೀವನೀ ವಿದ್ಯೆಯಿಂದ ಅಂಗಾಂಗಗಳು ಪೂರ್ಣವಾಗಿ ತುಂಡಾಗದಿದ್ದವರನ್ನು, ಗಾಯಗೊಂಡವರನ್ನು ಬದುಕಿಸಿದರು. ॥47॥

(ಶ್ಲೋಕ-48)

ಮೂಲಮ್

ಬಲಿಶ್ಚೋಶನಸಾ ಸ್ಪೃಷ್ಟಃ ಪ್ರತ್ಯಾಪನ್ನೇಂದ್ರಿಯಸ್ಮೃತಿಃ ।
ಪರಾಜಿತೋಪಿ ನಾಖಿದ್ಯಲ್ಲೋಕತತ್ತ್ವವಿಚಕ್ಷಣಃ ॥

ಅನುವಾದ

ಶುಕ್ರಾಚಾರ್ಯರು ಸ್ಪರ್ಶಿಸಿದೊಡನೆ ಬಲಿಯ ಇಂದ್ರಿಯಗಳಲ್ಲಿ ಚೈತನ್ಯವೂ, ಮನಸ್ಸಿನಲ್ಲಿ ಸ್ಮೃತಿಯೂ ಮರುಕಳಿಸಿ ಜೀವಂತನಾದನು. ಪ್ರಪಂಚದಲ್ಲಿ ಜಯಾ ಪಜಯಗಳು, ಜೀವನ-ಮೃತ್ಯುಗಳು ಕಾಲನ ಪ್ರೇರಣೆಯಿಂದ ನಡೆಯುತ್ತಿವೆ ಎಂದು ತಿಳಿದಿದ್ದ ಬಲಿಯು ತಾನು ಪರಾಜಿತನಾದುದಕ್ಕೆ ಸ್ವಲ್ಪವಾದರೂ ದುಃಖಿಸಲಿಲ್ಲ. ॥48॥

ಅನುವಾದ (ಸಮಾಪ್ತಿಃ)

ಹನ್ನೊಂದನೆಯ ಅಧ್ಯಾಯವು ಮುಗಿಯಿತು. ॥11॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ದೇವಾಸುರಸಂಗ್ರಾಮೇ ಏಕಾದಶೋಧ್ಯಾಯಃ ॥11॥