೧೦

[ಹತ್ತನೆಯ ಅಧ್ಯಾಯ]

ಭಾಗಸೂಚನಾ

ದೇವಾಸುರರ ಸಂಗ್ರಾಮ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ದಾನವದೈತೇಯಾ ನಾವಿಂದನ್ನಮೃತಂ ನೃಪ ।
ಯುಕ್ತಾಃ ಕರ್ಮಣಿ ಯತ್ತಾಶ್ಚ ವಾಸುದೇವಪರಾಙ್ಮುಖಾಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಓ ಪರೀಕ್ಷಿತನೇ! ದೈತ್ಯ-ದಾನವರು ಅಧಿಕ ಪ್ರಯಾಸದಿಂದಲೂ, ಅತ್ಯಂತ ಸಾಹಸದಿಂದಲೂ ಸಮುದ್ರಮಂಥನದ ಕೆಲಸದಲ್ಲಿ ಪಾಲ್ಗೊಂಡಿದ್ದರೂ, ಅವರು ಭಗವಂತನಿಂದ ವಿಮುಖರಾಗಿದ್ದರಿಂದ ಅವರಿಗೆ ಅಮೃತ ದೊರೆಯಲಿಲ್ಲ. ॥1॥

(ಶ್ಲೋಕ-2)

ಮೂಲಮ್

ಸಾಧಯಿತ್ವಾಮೃತಂ ರಾಜನ್ಪಾಯಯಿತ್ವಾ ಸ್ವಕಾನ್ಸುರಾನ್ ।
ಪಶ್ಯತಾಂ ಸರ್ವಭೂತಾನಾಂ ಯಯೌ ಗರುಡವಾಹನಃ ॥

ಅನುವಾದ

ರಾಜನೇ! ಭಗವಂತನು ಕ್ಷೀರಸಮುದ್ರವನ್ನು ಕಡೆದು ಅಮೃತವನ್ನು ಪಡೆದು, ತನ್ನವರಾದ ದೇವತೆಗಳಿಗೆ ಪಾನ ಮಾಡಿಸಿ, ಎಲ್ಲರೂ ನೋಡುತ್ತಿರುವಂತೆ ಗರುಡಾರೂಢನಾಗಿ ಅಲ್ಲಿಂದ ಹೊರಟುಹೋದನು. ॥2॥

(ಶ್ಲೋಕ-3)

ಮೂಲಮ್

ಸಪತ್ನಾನಾಂ ಪರಾಮೃದ್ಧಿಂ ದೃಷ್ಟ್ವಾ ತೇ ದಿತಿನಂದನಾಃ ।
ಅಮೃಷ್ಯಮಾಣಾ ಉತ್ಪೇತುರ್ದೇವಾನ್ಪ್ರತ್ಯುದ್ಯತಾಯುಧಾಃ ॥

ಅನುವಾದ

ತಮ್ಮ ಶತ್ರುಗಳಿಗೆ ಅಮೃತಪಾನದಂತಹ ಸಫಲತೆ ದೊರೆತುದನ್ನು ಕಂಡು ದೈತ್ಯರು ಅವರ ಹಿರಿಮೆಯನ್ನು ಸಹಿಸದಾದರು. ಅವರು ಒಡನೆಯೇ ಆಯುಧಗಳನ್ನೆತ್ತಿಕೊಂಡು ದೇವತೆಗಳನ್ನು ಆಕ್ರ ಮಿಸಿದರು. ॥3॥

(ಶ್ಲೋಕ-4)

ಮೂಲಮ್

ತತಃ ಸುರಗಣಾಃ ಸರ್ವೇ ಸುಧಯಾ ಪೀತಯೈಧಿತಾಃ ।
ಪ್ರತಿಸಂಯುಯುಧುಃ ಶಸೈರ್ನಾರಾಯಣಪದಾಶ್ರಯಾಃ ॥

ಅನುವಾದ

ಇತ್ತ ದೇವತೆಗಳು ಅಮೃತವನ್ನು ಕುಡಿದು ವಿಶೇಷವಾದ ಶಕ್ತಿಯನ್ನು ಪಡೆದಿದ್ದರು; ಜೊತೆಗೆ ಭಗವಂತನ ಚರಣಕಮಲಗಳ ಆಶ್ರಯವೂ ಇತ್ತು. ಸರಿ, ಅವರೂ ಶಸಾಸಗಳಿಂದ ಸಜ್ಜಾಗಿ ದೈತ್ಯರೊಡನೆ ಹೋರಾಡ ತೊಡಗಿದರು. ॥4॥

(ಶ್ಲೋಕ-5)

ಮೂಲಮ್

ತತ್ರ ದೈವಾಸುರೋ ನಾಮ ರಣಃ ಪರಮದಾರುಣಃ ।
ರೋಧಸ್ಯುದನ್ವತೋ ರಾಜಂಸ್ತುಮುಲೋ ರೋಮಹರ್ಷಣಃ ॥

ಅನುವಾದ

ಪರೀಕ್ಷಿತನೇ! ಕ್ಷೀರಸಾಗರದ ತೀರದಲ್ಲಿ ದೇವತೆಗಳಿಗೂ, ದಾನವರಿಗೂ ‘ದೇವಾಸುರ ಸಂಗ್ರಾಮ’ವೆಂಬ ಪರಮದಾರುಣವಾದ, ರೋಮಾಂಚಕರವಾದ, ಭೀಕರವಾದ ಯುದ್ಧವು ಪ್ರಾರಂಭವಾಯಿತು. ॥5॥

(ಶ್ಲೋಕ-6)

ಮೂಲಮ್

ತತ್ರಾನ್ಯೋನ್ಯಂ ಸಪತ್ನಾಸ್ತೇ ಸಂರಬ್ಧಮನಸೋ ರಣೇ ।
ಸಮಾಸಾದ್ಯಾಸಿಭಿರ್ಬಾಣೈರ್ನಿಜಘ್ನುರ್ವಿವಿಧಾಯುಧೈಃ ॥

ಅನುವಾದ

ದೇವ-ದಾನವರಿಬ್ಬರೂ ಪರಸ್ಪರ ಪರಮ ಶತ್ರುಗಳಾಗಿದ್ದರು. ಉಭಯ ಪಕ್ಷದವರು ಕ್ರೋಧಾಭಿಭೂತರಾಗಿದ್ದರು. ಒಬ್ಬರಿಗೊಬ್ಬರು ಇದಿರು-ಬದುರು ನಿಂತು ಬಾಣ-ಖಡ್ಗ ಮುಂತಾದ ಅನೇಕಾನೇಕ ಅಸ್ತ್ರ-ಶಸ್ತ್ರಗಳಿಂದ ಪರಸ್ಪರ ಹೊಡೆ ದಾಡತೊಡಗಿದರು. ॥6॥

(ಶ್ಲೋಕ-7)

ಮೂಲಮ್

ಶಂಖತೂರ್ಯಮೃದಂಗಾನಾಂ ಭೇರೀಡಮರಿಣಾಂ ಮಹಾನ್ ।
ಹಸ್ತ್ಯಶ್ವರಥಪತ್ತೀನಾಂ ನದತಾಂ ನಿಃಸ್ವನೋಭವತ್ ॥

ಅನುವಾದ

ಆಗ ರಣರಂಗದಲ್ಲಿ ಶಂಖ, ತೂರ್ಯ, ಮೃದಂಗ, ಭೇರಿ, ಡಮರು ಮುಂತಾದ ವಾದ್ಯ ಗಳು ಜೋರಾಗಿ ಮೊಳಗಿದವು. ಆನೆಗಳ ಘೀಂಕಾರ, ಕುದುರೆಗಳ ಹೇಷಾರವ, ರಥಗಳ ಚೀತ್ಕಾರ, ಪದಾತಿಗಳ ಸಿಂಹನಾದ ಇವುಗಳಿಂದ ಭಾರೀ ಕೋಲಾಹಲವುಂಟಾಯಿತು. ॥7॥

(ಶ್ಲೋಕ-8)

ಮೂಲಮ್

ರಥಿನೋ ರಥಿಭಿಸ್ತತ್ರ ಪತ್ತಿಭಿಃ ಸಹ ಪತ್ತಯಃ ।
ಹಯಾ ಹಯೈರಿಭಾಶ್ಚೇಭೈಃ ಸಮಸಜ್ಜಂತ ಸಂಯುಗೇ ॥

ಅನುವಾದ

ಆ ಮಹಾಯುದ್ಧದಲ್ಲಿ ರಥಿಕರು-ರಥಿಕರೊಡನೆಯೂ, ಪದಾತಿಗಳು - ಕಾಲಾಳುಗಳೊಡನೆಯೂ, ಕುದುರೆ ಸವಾರರು - ಅಶ್ವಾರೋಹಿಗಳೊಡನೆಯೂ, ಗಜ ಸೈನಿಕರು-ಗಜ ಸೈನಿಕರೊಡನೆಯೂ ಕಾದಾಡುತ್ತಿದ್ದರು. ॥8॥

(ಶ್ಲೋಕ-9)

ಮೂಲಮ್

ಉಷ್ಟ್ರೈಃ ಕೇಚಿದಿಭೈಃ ಕೇಚಿದಪರೇ ಯುಯುಧುಃ ಖರೈಃ ।
ಕೇಚಿದ್ಗೌರಮೃಗೈರ್ಋಕ್ಷೈರ್ದ್ವೀಪಿಭಿರ್ಹರಿಭಿರ್ಭಟಾಃ ॥

ಅನುವಾದ

ಅವರಲ್ಲಿ ಕೆಲವರು ಒಂಟೆಗಳ ಮೇಲೂ, ಕೆಲವರು ಆನೆಗಳ ಮೇಲೂ, ಕತ್ತೆಗಳ ಮೇಲೂ, ಕೆಲವರು ಗೌರಮೃಗಗಳ ಮೇಲೂ, ಕೆಲವರು ಕರಡಿ, ಹುಲಿ, ಸಿಂಹಗಳ ಮೇಲೂ ಹತ್ತಿಕೊಂಡು ಯುದ್ಧ ಮಾಡುತ್ತಿದ್ದರು. ॥9॥

(ಶ್ಲೋಕ-10)

ಮೂಲಮ್

ಗೃಧ್ರೈಃ ಕಂಕೈರ್ಬಕೈರನ್ಯೇ ಶ್ಯೇನಭಾಸೈಸ್ತಿಮಿಂಗಿಲೈಃ ।
ಶರಭೈರ್ಮಹಿಷೈಃ ಖಡ್ಗೈರ್ಗೋವೃಷೈರ್ಗವಯಾರುಣೈಃ ॥

ಅನುವಾದ

ಕೆಲ-ಕೆಲವು ಸೈನಿಕರು ಹದ್ದುಗಳ ಮೇಲೂ, ಬಕಗಳ ಮೇಲೆಯೂ, ಗಿಡುಗ, ತಿಮಿಂಗಿಲ, ಮೊಸಳೆ, ಶರಭ, ಎಮ್ಮೆ, ಖಡ್ಗಮೃಗ, ಎತ್ತು, ಗವಯ ಮುಂತಾದವುಗಳ ಮೇಲೆ ಕುಳಿತು ಯುದ್ಧ ಮಾಡುತ್ತಿದ್ದರು. ॥10॥

(ಶ್ಲೋಕ-11)

ಮೂಲಮ್

ಶಿವಾಭಿರಾಖುಭಿಃ ಕೇಚಿತ್ಕೃಕಲಾಸೈಃ ಶಶೈರ್ನರೈಃ ।
ಬಸ್ತೈರೇಕೇ ಕೃಷ್ಣಸಾರೈರ್ಹಂಸೈರನ್ಯೇ ಚ ಸೂಕರೈಃ ॥

ಅನುವಾದ

ಕೆಲವರು ರುಣಗಳೆಂಬ ಪ್ರಾಣಿ ಗಳ ಮೇಲೂ, ನರಿಗಳು, ಇಲಿಗಳು, ಓತಿಕೇತ, ಇಲಿ, ಮೊಲ, ಮನುಷ್ಯ, ಟಗರು, ಜಿಂಕೆ, ಹಂಸ, ಹಂದಿಗಳು ಮುಂತಾದ ಪ್ರಾಣಿಗಳ ಮೇಲೆ ಕುಳಿತುಕೊಂಡು ಕಾದಾಡುತ್ತಿದ್ದರು. ॥11॥

(ಶ್ಲೋಕ-12)

ಮೂಲಮ್

ಅನ್ಯೇ ಜಲಸ್ಥಲಖಗೈಃ ಸತ್ತ್ವೆ ರ್ವಿಕೃತವಿಗ್ರಹೈಃ ।
ಸೇನಯೋರುಭಯೋ ರಾಜನ್ವಿವಿಶುಸ್ತೇಗ್ರತೋಗ್ರತಃ ॥

ಅನುವಾದ

ಹೀಗೆ ನೆಲ-ಜಲ-ನಭಗಳಲ್ಲಿ ವಾಸಿಸುವ, ನೋಡಲು ಭಯಂಕರವಾದ ಶರೀರಗಳುಳ್ಳ ಅನೇಕ ಪ್ರಾಣಿ ಗಳ ಮೇಲೆ ಹತ್ತಿಕೊಂಡು ದೇವ-ದಾನವರು ಮುಂದೆ ನುಗ್ಗುತ್ತಾ ಹೋರಾಡುತ್ತಿದ್ದರು. ॥12॥

(ಶ್ಲೋಕ-13)

ಮೂಲಮ್

ಚಿತ್ರಧ್ವಜಪಟೈ ರಾಜನ್ನಾತಪತ್ರೈಃ ಸಿತಾಮಲೈಃ ।
ಮಹಾಧನೈರ್ವಜ್ರದಂಡೈರ್ವ್ಯಜನೈರ್ಬಾರ್ಹಚಾಮರೈಃ ॥

(ಶ್ಲೋಕ-14)

ಮೂಲಮ್

ವಾತೋದ್ಧೂತೋತ್ತರೋಷ್ಣೀಷೈರರ್ಚಿರ್ಭಿರ್ವರ್ಮಭೂಷಣೈಃ ।
ಸ್ಫುರದ್ಭಿರ್ವಿಶದೈಃ ಶಸೈಃ ಸುತರಾಂ ಸೂರ್ಯರಶ್ಮಿಭಿಃ ॥

(ಶ್ಲೋಕ-15)

ಮೂಲಮ್

ದೇವದಾನವವೀರಾಣಾಂ ಧ್ವಜಿನ್ಯೌ ಪಾಂಡುನಂದನ ।
ರೇಜತುರ್ವೀರಮಾಲಾಭಿರ್ಯಾದಸಾಮಿವ ಸಾಗರೌ ॥

ಅನುವಾದ

ಪರೀಕ್ಷಿತನೇ! ಚಿತ್ರ-ವಿಚಿತ್ರವಾದ ಧ್ವಜ-ಪತಾಕೆ ಗಳಿಂದಲೂ, ಸ್ಫಟಿಕದಂತೆ ನಿರ್ಮಲವಾದ ಶುಭ್ರ ಛತ್ರ ಗಳಿಂದಲೂ, ವಜ್ರಖಚಿತವಾದ ದಂಡಗಳಿಂದಲೂ, ಬಹು ಮೂಲ್ಯ ಬೀಸಣಿಗೆಗಳಿಂದಲೂ, ನವಿಲುಗರಿಗಳೂ, ಚಾಮರಗಳಿಂದಲೂ, ಗಾಳಿಗೆ ಹಾರಾಡುತ್ತಿದ್ದ ಉತ್ತರೀಯ ಗಳಿಂದಲೂ, ಪೇಟಗಳಿಂದಲೂ, ಸೈನಿಕರು ಧರಿಸಿದ್ದ ವಜ್ರಾ ಭರಣಗಳಿಂದಲೂ, ಸೂರ್ಯಕಿರಣಗಳಂತೆ ಹೊಳೆಯುವ ಖಡ್ಗವೇ ಮುಂತಾದ ಆಯುಧಗಳಿಂದಲೂ, ವೀರಮಾಲೆ ಗಳನ್ನು ಧರಿಸಿದ್ದ ದೇವತೆಗಳ ಸಾಲುಗಳಿಂದಲೂ, ಅಸುರರ ಸೈನ್ಯದಿಂದ ತುಂಬಿದ ಆ ರಣರಂಗವು ಜಲ-ಜಂತುಗಳಿಂದ ತುಂಬಿದ ಎರಡನೆಯ ಸಮುದ್ರದಂತೆ ಕಂಗೊಳಿಸುತ್ತಿತ್ತು. ॥13-15॥

(ಶ್ಲೋಕ-16)

ಮೂಲಮ್

ವೈರೋಚನೋ ಬಲಿಃ ಸಂಖ್ಯೇ ಸೋಸುರಾಣಾಂ ಚಮೂಪತಿಃ ।
ಯಾನಂ ವೈಹಾಯಸಂ ನಾಮ ಕಾಮಗಂ ಮಯನಿರ್ಮಿತಮ್ ॥

ಅನುವಾದ

ಪರೀಕ್ಷಿತನೇ! ರಣಾಂಗಣದಲ್ಲಿ ದೈತ್ಯರ ಸೇನಾಪತಿಯಾದ ವಿರೋಚನಪುತ್ರ ಬಲಿಯು ಮಯ ದಾನವನಿಂದ ನಿರ್ಮಿತವಾದ ವೈಹಾಯಸವೆಂಬ ವಿಮಾನದಲ್ಲಿ ಕುಳಿತಿದ್ದನು. ಆ ವಿಮಾನವು ಕುಳಿತಿದ್ದವರು ಇಚ್ಛಿಸಿದೆಡೆಗೆ ಹೋಗುವುದಾಗಿತ್ತು. ॥16॥

(ಶ್ಲೋಕ-17)

ಮೂಲಮ್

ಸರ್ವಸಾಂಗ್ರಾಮಿಕೋಪೇತಂ ಸರ್ವಾಶ್ಚರ್ಯಮಯಂ ಪ್ರಭೋ ।
ಅಪ್ರತರ್ಕ್ಯಮನಿರ್ದೇಶ್ಯಂ ದೃಶ್ಯಮಾನಮದರ್ಶನಮ್ ॥

ಅನುವಾದ

ಅದರಲ್ಲಿ ಯುದ್ಧದ ಸಮಸ್ತ ಸಾಮಗ್ರಿಗಳು ಸುಸಜ್ಜಿತವಾಗಿದ್ದವು. ಮಹಾರಾಜಾ! ಆ ವಿಮಾನವು ಅತ್ಯಂತ ಆಶ್ಚರ್ಯಕರ ವಾಗಿದ್ದು, ಕೆಲವು ವೇಳೆ ಕಾಣಿಸಿಕೊಳ್ಳುತ್ತಾ, ಕೆಲವು ಸಲ ಅದೃಶ್ಯವಾಗಿರುತ್ತಿತ್ತು. ಅದು ಎಲ್ಲಿದೆ ಎಂದು ಯಾರಿಂದಲೂ ಹೇಳಲಾಗುತ್ತಿರಲಿಲ್ಲ ; ಊಹಿಸಲಾಗುತ್ತಿರಲಿಲ್ಲ. ॥17॥

(ಶ್ಲೋಕ-18)

ಮೂಲಮ್

ಆಸ್ಥಿತಸ್ತದ್ವಿಮಾನಾಗ್ರ್ಯಂ ಸರ್ವಾನೀಕಾಧಿಪೈರ್ವೃತಃ ।
ಬಾಲವ್ಯಜನಛತ್ರಾಗ್ರೈ ರೇಜೇ ಚಂದ್ರ ಇವೋದಯೇ ॥

ಅನುವಾದ

ಅಂತಹ ಶ್ರೇಷ್ಠವಿಮಾನದಲ್ಲಿ ಬಲಿಯು ಕುಳಿತಿದ್ದನು. ದೊಡ್ಡ-ದೊಡ್ಡ ಸೇನಾಪತಿಗಳು ಅವನನ್ನು ಸುತ್ತುವರಿ ಯಲ್ಪಟ್ಟಿದ್ದರು. ಚಾಮರ, ಬೀಸಣಿಗೆ, ಬೆಳ್ಗೊಡೆ ಮುಂತಾದವುಗಳಿಂದ ಕೂಡಿದ ಬಲಿಯು ಆಗತಾನೇ ಉದಯಿಸಿದ ಚಂದ್ರನಂತೆ ಪ್ರಕಾಶಿಸುತ್ತಿದ್ದನು. ॥18॥

(ಶ್ಲೋಕ-19)

ಮೂಲಮ್

ತಸ್ಯಾಸನ್ಸರ್ವತೋ ಯಾನೈರ್ಯೂಥಾನಾಂ ಪತಯೋಸುರಾಃ ।
ನಮುಚಿಃ ಶಂಬರೋ ಬಾಣೋ ವಿಪ್ರಚಿತ್ತಿರಯೋಮುಖಃ ॥

(ಶ್ಲೋಕ-20)

ಮೂಲಮ್

ದ್ವಿಮೂರ್ಧಾ ಕಾಲನಾಭೋಥ ಪ್ರಹೇತಿರ್ಹೇತಿರಿಲ್ವಲಃ ।
ಶಕುನಿರ್ಭೂತಸಂತಾಪೋ ವಜ್ರದಂಷ್ಟ್ರೋ ವಿರೋಚನಃ ॥

(ಶ್ಲೋಕ-21)

ಮೂಲಮ್

ಹಯಗ್ರೀವಃ ಶಂಕುಶಿರಾಃ ಕಪಿಲೋ ಮೇಘದುಂದುಭಿಃ ।
ತಾರಕಶ್ಚಕ್ರದೃಕ್ಶುಂಭೋ ನಿಶುಂಭೋ ಜಂಭ ಉತ್ಕಲಃ ॥

(ಶ್ಲೋಕ-22)

ಮೂಲಮ್

ಅರಿಷ್ಟೋರಿಷ್ಟನೇಮಿಶ್ಚ ಮಯಶ್ಚ ತ್ರಿಪುರಾಧಿಪಃ ।
ಅನ್ಯೇ ಪೌಲೋಮಕಾಲೇಯಾ ನಿವಾತಕವಚಾದಯಃ ॥

ಅನುವಾದ

ಅವನ ಸುತ್ತಲೂ ವಿಮಾನಾರೂಢ ಯೂಥಪತಿಗಳಾದ ನಮೂಚಿ, ಶಂಬರ, ಬಾಣ, ವಿಪ್ರಚಿತ್ತಿ, ಅಯೋಮುಖ, ದ್ವಿಮೂರ್ಧಾ, ಕಾಲ ನಾಭ, ಪ್ರಹೇತಿ, ಹೇತಿ, ಇಲ್ವಲ, ಶಕುನಿ, ಭೂತಸಂತಾಪ, ವಜ್ರದಂಷ್ಟ್ರ, ವಿರೋಚನ, ಹಯಗ್ರೀವ, ಶಂಕು ಶಿರಸ, ಕಪಿಲ, ಮೇಘದುಂದುಭಿ, ತಾರಕ, ಚಕ್ರಾಕ್ಷ, ಶುಂಭ, ನಿಶುಂಭ, ಜಂಭ, ಉತ್ಕಲ, ಅರಿಷ್ಟ, ಅರಿಷ್ಟನೇಮಿ, ತ್ರಿಪುರಾಧಿಪತಿಯಾದ ಮಯ, ಪೌಲೋಮ, ಕಾಲೇಯ, ನಿವಾತಕವಚ ಮೊದಲಾದವರು ತಮ್ಮ ತುಕಡಿಗಳಿಂದ ಯುದ್ಧ ಸನ್ನದ್ಧರಾಗಿದ್ದರು. ॥19-22॥

(ಶ್ಲೋಕ-23)

ಮೂಲಮ್

ಅಲಬ್ಧಭಾಗಾಃ ಸೋಮಸ್ಯ ಕೇವಲಂ ಕ್ಲೇಶಭಾಗಿನಃ ।
ಸರ್ವ ಏತೇ ರಣಮುಖೇ ಬಹುಶೋ ನಿರ್ಜಿತಾಮರಾಃ ॥

ಅನುವಾದ

ಇವರೆಲ್ಲರೂ ಸಮುದ್ರ ಮಂಥನದಲ್ಲಿ ಪಾಲ್ಗೊಂಡವರೇ ಆಗಿದ್ದರು. ಆದರೆ ಇವರಿಗೆ ಅಮೃತದ ಪಾಲು ಸಿಗದೆ ಕೇವಲ ಕ್ಲೇಷವೇ ಕೈಹತ್ತಿತ್ತು. ಇವೆಲ್ಲ ಅಸುರರು ಒಮ್ಮೆಯಲ್ಲ, ಅನೇಕ ಬಾರಿ ಯುದ್ಧದಲ್ಲಿ ದೇವತೆಗಳನ್ನು ಸೋಲಿಸಿದ್ದರು.॥23॥

(ಶ್ಲೋಕ-24)

ಮೂಲಮ್

ಸಿಂಹನಾದಾನ್ವಿಮುಂಚಂತಃ ಶಂಖಾನ್ದಧ್ಮುರ್ಮಹಾರವಾನ್ ।
ದೃಷ್ಟ್ವಾ ಸಪತ್ನಾನುತ್ಸಿಕ್ತಾನ್ಬಲಭಿತ್ಕುಪಿತೋ ಭೃಶಮ್ ॥

ಅನುವಾದ

ಇದರಿಂದಾಗಿ ಅವರು ಭಾರೀ ಉತ್ಸಾಹದಿಂದ ಸಿಂಹನಾದವನ್ನು ಮಾಡುತ್ತಾ ತಮ್ಮ ಘೋರವಾದ ಶಬ್ದವುಳ್ಳ ಶಂಖಗಳನ್ನು ಊದುತ್ತಿದ್ದರು. ಸ್ವರ್ಗಾಧಿಪತಿಯಾದ ಇಂದ್ರನು ಗರ್ವದಿಂದ ಬೀಗುತ್ತಿದ್ದ ಯುದ್ಧೋದ್ಯುಕ್ತರಾದ ಶತ್ರುಗಳನ್ನು ಕಂಡು ಭಾರೀ ಕ್ರುದ್ಧನಾದನು. ॥24॥

(ಶ್ಲೋಕ-25)

ಮೂಲಮ್

ಐರಾವತಂ ದಿಕ್ಕರಿಣಮಾರೂಢಃ ಶುಶುಭೇ ಸ್ವರಾಟ್ ।
ಯಥಾ ಸ್ರವತ್ಪ್ರಸ್ರವಣಮುದಯಾದ್ರಿಮಹರ್ಪತಿಃ ॥

ಅನುವಾದ

ಗಿರಿ-ನದಿಗಳಿಂದ ಕೂಡಿದ ಉದಯಾಚಲವನ್ನೇರಿ ಪ್ರಕಾಶಿಸುವ ಸೂರ್ಯನಂತೆ ಇಂದ್ರನು ಮದೋದಕವನ್ನು ಸುರಿಸುತ್ತಿದ್ದ ಐರಾವತವೆಂಬ ದಿಗ್ಗಜದ ಮೇಲೆ ಕುಳಿತು ಬಹಳವಾಗಿ ಪ್ರಕಾಶಿಸಿದನು. ॥25॥

(ಶ್ಲೋಕ-26)

ಮೂಲಮ್

ತಸ್ಯಾಸನ್ಸರ್ವತೋ ದೇವಾ ನಾನಾವಾಹಧ್ವಜಾಯುಧಾಃ ।
ಲೋಕಪಾಲಾಃ ಸಹ ಗಣೈರ್ವಾಯ್ವಗ್ನಿವರುಣಾದಯಃ ॥

ಅನುವಾದ

ದೇವೇಂದ್ರನ ಸುತ್ತಲೂ ಅನೇಕ ವಿಧವಾದ ವಾಹನಗಳಿಂದಲೂ, ಧ್ವಜಗಳಿಂದಲೂ, ಆಯುಧಗಳಿಂದಲೂ ಯುಕ್ತರಾದ ವಾಯು, ಅಗ್ನಿ, ವರುಣ ಮುಂತಾದ ಲೋಕಪಾಲರು ತಮ್ಮ-ತಮ್ಮ ಗಣಗಳೊಂದಿಗೆ ಯುದ್ಧ ಸನ್ನದ್ಧರಾಗಿ ನಿಂತಿದ್ದರು. ॥26॥

(ಶ್ಲೋಕ-27)

ಮೂಲಮ್

ತೇನ್ಯೋನ್ಯಮಭಿಸಂಸೃತ್ಯ
ಕ್ಷಿಪಂತೋ ಮರ್ಮಭಿರ್ಮಿಥಃ ।
ಆಹ್ವಯಂತೋ ವಿಶಂತೋಗ್ರೇ
ಯುಯುಧುರ್ದ್ವಂದ್ವಯೋಧಿನಃ ॥

ಅನುವಾದ

ದೇವ-ದಾನವರ ಸೈನ್ಯಗಳು ಎದುರು-ಬದುರಾಗಿ ನಿಂತವು. ಇಬ್ಬಿಬ್ಬರೇ ನಿಂತು ಮಾಡುವ ದ್ವಂದ್ವಯುದ್ಧವನ್ನು ಪ್ರಾರಂಭಿಸಿದರು. ಕೆಲವರು ಮುಂದೆ ಬಂದು ತಮ್ಮ ಎದುರಾಳಿಯನ್ನು ಹೆಸರುಹಿಡಿದು ಕರೆಯುತ್ತಿದ್ದರೆ, ಕೆಲವರು ಮರ್ಮಭೇದಕ ಚುಚ್ಚುಮಾತುಗಳಿಂದ ನಿಂದಿಸುತ್ತಿದ್ದರು. ॥27॥

(ಶ್ಲೋಕ-28)

ಮೂಲಮ್

ಯುಯೋಧ ಬಲಿರಿಂದ್ರೇಣ ತಾರಕೇಣ ಗುಹೋಸ್ಯತ ।
ವರುಣೋ ಹೇತಿನಾಯುಧ್ಯನ್ಮಿತ್ರೋ ರಾಜನ್ಪ್ರಹೇತಿನಾ ॥

ಅನುವಾದ

ರಾಜೇಂದ್ರನೇ! ಬಲಿಯು ಇಂದ್ರನೊಡನೆಯೂ, ತಾರಕನು ಕುಮಾರಸ್ವಾಮಿಯೊಂದಿಗೂ, ಹೇತಿಯು ವರುಣನೊಡನೆಯೂ, ಪ್ರಹೇತಿಯು ಸೂರ್ಯನೊಡನೆಯೂ ಧ್ವಂಧ್ವ ಯುದ್ಧವನ್ನು ಪ್ರಾರಂಭಿಸಿದರು. ॥28॥

(ಶ್ಲೋಕ-29)

ಮೂಲಮ್

ಯಮಸ್ತು ಕಾಲನಾಭೇನ ವಿಶ್ವಕರ್ಮಾ ಮಯೇನ ವೈ ।
ಶಂಬರೋ ಯುಯುಧೇ ತ್ವಷ್ಟ್ರಾ ಸವಿತ್ರಾ ತು ವಿರೋಚನಃ ॥

ಅನುವಾದ

ಯಮನು ಕಾಲನಾಭನೊಡನೆಯೂ, ವಿಶ್ವಕರ್ಮನು ಮಯನೊಡನೆಯೂ, ಶಂಬ ರಾಸುರನು ತ್ವಷ್ಟೃವಿನೊಡನೆಯೂ, ಸವಿತೃವು ವಿರೋಚನ ನೊಡನೆಯೂ ದ್ವಂದ್ವಯುದ್ಧವನ್ನು ಪ್ರಾರಂಭಿಸಿದರು. ॥29॥

(ಶ್ಲೋಕ-30)

ಮೂಲಮ್

ಅಪರಾಜಿತೇನ ನಮುಚಿರಶ್ವಿನೌ ವೃಷಪರ್ವಣಾ ।
ಸೂರ್ಯೋ ಬಲಿಸುತೈರ್ದೇವೋ ಬಾಣಜ್ಯೇಷ್ಠೈಃ ಶತೇನ ಚ ॥

ಅನುವಾದ

ನಮುಚಿಯು ಅಪರಾಜಿತನೊಡನೆಯೂ, ಅಶ್ವಿನೀ ಕುಮಾರರು ವೃಷಪರ್ವನೊಡನೆಯೂ, ಸೂರ್ಯನು ಬಾಣನೇ ಮೊದಲಾದ ಬಲಿಯ ನೂರು ಮಕ್ಕಳೊಂದಿಗೂ ಯುದ್ಧ ಮಾಡತೊಡಗಿದರು. ॥30॥

(ಶ್ಲೋಕ-31)

ಮೂಲಮ್

ರಾಹುಣಾ ಚ ತಥಾ ಸೋಮಃ ಪುಲೋಮ್ನಾ ಯುಯುಧೇನಿಲಃ ।
ನಿಶುಂಭಶುಂಭಯೋರ್ದೇವೀ ಭದ್ರಕಾಲೀ ತರಸ್ವಿನೀ ॥

ಅನುವಾದ

ಚಂದ್ರನು ರಾಹುವಿನೊಂದಿಗೂ, ವಾಯುವು ಪುಲೋಮನೊಂದಿಗೂ ಕಾದಾಡಿದರು. ಭದ್ರಕಾಳಿಯು ಶುಂಭ, ನಿಶುಂಭರೊಡನೆ ಹೋರಾಡಿದಳು. ॥31॥

(ಶ್ಲೋಕ-32)

ಮೂಲಮ್

ವೃಷಾಕಪಿಸ್ತು ಜಂಭೇನ ಮಹಿಷೇಣ ವಿಭಾವಸುಃ ।
ಇಲ್ವಲಃ ಸಹ ವಾತಾಪಿರ್ಬ್ರಹ್ಮಪುತ್ರೈರರಿಂದಮ ॥

ಅನುವಾದ

ಪರೀಕ್ಷಿತನೇ! ಜಂಭಾಸುರನೊಡನೆ ಮಹಾದೇವನೂ, ಮಹಿಷಾಸುರ ನೊಡನೆ ಅಗ್ನಿದೇವನೂ, ವಾತಾಪಿ- ಇಲ್ವಲರೊಡನೆ ಬ್ರಹ್ಮನ ಮಕ್ಕಳಾದ ಮರೀಚಿಯೇ ಮೊದಲಾದವರು ಯುದ್ಧ ಮಾಡಿದರು. ॥32॥

(ಶ್ಲೋಕ-33)

ಮೂಲಮ್

ಕಾಮದೇವೇನ ದುರ್ಮರ್ಷ ಉತ್ಕಲೋ ಮಾತೃಭಿಃ ಸಹ ।
ಬೃಹಸ್ಪತಿಶ್ಚೋಶನಸಾ ನರಕೇಣ ಶನೈಶ್ಚರಃ ॥

ಅನುವಾದ

ದುರ್ಮರ್ಷಣನೊಡನೆ ಕಾಮ ದೇವನೂ, ಉತ್ಕಲನೊಡನೆ ಮಾತೃದೇವತೆಗಳೂ, ಶುಕ್ರಾ ಚಾರ್ಯನೊಡನೆ ಬೃಹಸ್ಪತ್ಯಾಚಾರ್ಯರೂ, ನರಕಾಸುರ ನೊಡನೆ ಶನೈಶ್ಚರನೂ ಯುದ್ಧಮಾಡತೊಡಗಿದರು.॥33॥

(ಶ್ಲೋಕ-34)

ಮೂಲಮ್

ಮರುತೋ ನಿವಾತಕವಚೈಃ ಕಾಲೇಯೈರ್ವಸವೋಮರಾಃ ।
ವಿಶ್ವೇದೇವಾಸ್ತು ಪೌಲೋಮೈ ರುದ್ರಾಃ ಕ್ರೋಧವಶೈಃ ಸಹ ॥

ಅನುವಾದ

ನಿವಾತಕವಚರೊಡನೆ ಮರುದ್ಗಣರೂ, ಕಾಲೇಯರೊಡನೆ ವಸುಗಣಗಳೂ, ಪೌಲೋಮರೊಡನೆ ವಿಶ್ವೇದೇವಗಣಗಳೂ, ಕ್ರೋಧವಶರೊಡನೆ ರುದ್ರಗಣಗಳೂ ದ್ವಂದ್ವ ಯುದ್ಧದಲ್ಲಿ ತೊಡಗಿದರು. ॥34॥

(ಶ್ಲೋಕ-35)

ಮೂಲಮ್

ತ ಏವಮಾಜಾವಸುರಾಃ ಸುರೇಂದ್ರಾ
ದ್ವಂದ್ವೇನ ಸಂಹತ್ಯ ಚ ಯುಧ್ಯಮಾನಾಃ ।
ಅನ್ಯೋನ್ಯಮಾಸಾದ್ಯ ನಿಜಘ್ನುರೋಜಸಾ
ಜಿಗೀಷವಸ್ತೀಕ್ಷ್ಣಶರಾಸಿತೋಮರೈಃ ॥

ಅನುವಾದ

ಹೀಗೆ ದೇವತೆಗಳೂ, ಅಸುರರೂ ರಣಭೂಮಿಯಲ್ಲಿ ದ್ವಂದ್ವ ಯುದ್ಧದ ಮೂಲಕವೂ, ಸಾಮೂಹಿಕಯುದ್ಧದ ಮೂಲಕವೂ ಒಂದು ಪಕ್ಷದವರು ಇನ್ನೊಂದು ಪಕ್ಷದವರೊಡನೆ ಕಾದಾಡುತ್ತಾ ವಿಜಯದ ಇಚ್ಛೆಯಿಂದ ಉತ್ಸಾಹದಿಂದ ತೀಕ್ಷ್ಣವಾದ ಖಡ್ಗಗಳಿಂದಲೂ, ಭಲ್ಲೆಗಳಿಂದಲೂ, ಬಾಣಗಳಿಂದಲೂ, ಪರಸ್ಪರ ಪ್ರಹಾರಮಾಡುತ್ತಾ ನಾನಾ ರೀತಿಯಿಂದ ಯುದ್ಧಮಾಡುತ್ತಿದ್ದಾರೆ. ॥35॥

(ಶ್ಲೋಕ-36)

ಮೂಲಮ್

ಭುಷುಂಡಿಭಿಶ್ಚಕ್ರಗದರ್ಷ್ಟಿಪಟ್ಟಿಶೈಃ
ಶಕ್ತ್ಯುಲ್ಮುಕೈಃ ಪ್ರಾಸಪರಶ್ವಧೈರಪಿ ।
ನಿಸಿಂಶಭಲ್ಲೈಃ ಪರಿಘೈಃ ಸಮುದ್ಗರೈಃ
ಸಭಿಂದಿಪಾಲೈಶ್ಚ ಶಿರಾಂಸಿ ಚಿಚ್ಛಿದುಃ ॥

ಅನುವಾದ

ಭುಶಂಡಿ, ಚಕ್ರ, ಗದೆ, ಋಷ್ಟಿ, ಪಟ್ಟಿಶ, ಶಕ್ತಿ, ಉಲ್ಮುಕ, ಪ್ರಾಸ, ಗಂಡು ಕೊಡಲಿ, ಕತ್ತಿ, ಭಲ್ಲೆ, ಮುದ್ಗರ, ಪರಿಘ, ಭಿಂದಿಪಾಲ ಮುಂತಾದ ಆಯುಧಗಳಿಂದ ಒಬ್ಬರು ಮತ್ತೊಬ್ಬರ ತಲೆಯನ್ನು ತರಿಯತೊಡಗಿದರು. ॥36॥

(ಶ್ಲೋಕ-37)

ಮೂಲಮ್

ಗಜಾಸ್ತುರಂಗಾಃ ಸರಥಾಃ ಪದಾತಯಃ
ಸಾರೋಹವಾಹಾ ವಿವಿಧಾ ವಿಖಂಡಿತಾಃ ।
ನಿಕೃತ್ತಬಾಹೂರುಶಿರೋಧರಾಂಘ್ರಯ-
ಶ್ಚಿನ್ನಧ್ವಜೇಶ್ವಾಸತನುತ್ರಭೂಷಣಾಃ ॥

ಅನುವಾದ

ಭಯಂಕರವಾದ ಆ ಮಹಾಯುದ್ಧದಲ್ಲಿ ಗಜಾಶ್ವ ಸೈನಿಕರ, ರಥಿಕರ, ಪದಾತಿಗಳ, ಸೇನಾಪತಿಗಳ ತೋಳು, ತೊಡೆ, ತಲೆ, ಕಾಲುಗಳೂ, ಅವರು ಧರಿಸಿದ್ದ ಧ್ವಜ, ಧನುಷ್ಯ, ಕವಚ, ಆಭೂಷಣಗಳೂ ಭಿನ್ನ-ಭಿನ್ನವಾದುವು. ॥37॥

(ಶ್ಲೋಕ-38)

ಮೂಲಮ್

ತೇಷಾಂ ಪದಾಘಾತರಥಾಂಗ ಚೂರ್ಣಿತಾ-
ದಾಯೋಧನಾದುಲ್ಬಣ ಉತ್ಥಿತಸ್ತದಾ ।
ರೇಣುರ್ದಿಶಃ ಖಂ ದ್ಯುಮಣಿಂ ಚ ಛಾದಯನ್
ನ್ಯವರ್ತತಾಸೃಕ್ಸ್ರುತಿಭಿಃ ಪರಿಪ್ಲುತಾತ್ ॥

ಅನುವಾದ

ಸೈನಿಕರ ಕಾಲುಗಳ ಸಂಘಟ್ಟನೆಯಿಂದಲೂ, ರಥಚಕ್ರಗಳ ಹರಿದಾಟದಿಂದಲೂ, ರಣರಂಗದಲ್ಲಿ ಎದ್ದಿರುವ ಧೂಳಿಯು ಎಲ್ಲ ದಿಕ್ಕುಗಳನ್ನೂ, ಅಂತರಿಕ್ಷವನ್ನೂ, ಸೂರ್ಯನನ್ನೂ ಮುಸುಕಿ ಬಿಟ್ಟಿತು. ಆದರೆ ಮರುಕ್ಷಣದಲ್ಲೇ ಪ್ರವಾಹರೂಪದಿಂದ ಹರಿದ ರಕ್ತದಿಂದ ನೆನೆದು ಆ ಧೂಳಿಯು ಉಡುಗಿಹೋಯಿತು. ॥38॥

(ಶ್ಲೋಕ-39)

ಮೂಲಮ್

ಶಿರೋಭಿರುದ್ಧೂತಕಿರೀಟಕುಂಡಲೈಃ
ಸಂರಂಭದೃಗ್ಭಿಃ ಪರಿದಷ್ಟದಚ್ಛದೈಃ ।
ಮಹಾಭುಜೈಃ ಸಾಭರಣೈಃ ಸಹಾಯುಧೈಃ
ಸಾ ಪ್ರಾಸ್ತ ೃತಾ ಭೂಃ ಕರಭೋರುಭಿರ್ಬಭೌ ॥

ಅನುವಾದ

ಅನಂತರ ರಣರಂಗವು ಕತ್ತರಿಸಲ್ಪಟ್ಟ ಶಿರಸ್ಸುಗಳಿಂದ ತುಂಬಿ ಹೋಯಿತು. ಸೈನಿಕರ ಕಿರೀಟಗಳೂ, ಕುಂಡಲಗಳೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೆಲವರ ಕಣ್ಣುಗಳಿಂದ ಕ್ರೋಧದ ಚಿಹ್ನೆಯು ಕಾಣುತ್ತಿದ್ದಿತು. ಕೆಲವರು ಹಲ್ಲುಗಳಿಂದ ತುಟಿಗಳನ್ನು ಕಚ್ಚಿದ್ದರು. ಅನೇಕರ ಆಭೂಷಣಗಳಿಂದ, ಶಸ್ತ್ರಗಳಿಂದ ಸುಸಜ್ಜಿತವಾಗಿದ್ದ ಉದ್ದುದ್ದ ಬಾಹುಗಳು ತುಂಡಾಗಿ ಬಿದ್ದಿದ್ದವು. ಅನೇಕರ ದುಂಡಾದ ತೊಡೆಗಳು ಕತ್ತರಿಸಲ್ಪಟ್ಟು ಬಿದ್ದಿದ್ದವು. ಹೀಗೆ ಆ ರಣಭೂಮಿಯು ಬಹಳ ಭಯಂಕರವಾಗಿ ಕಾಣುತ್ತಿತ್ತು. ॥39॥

(ಶ್ಲೋಕ-40)

ಮೂಲಮ್

ಕಬಂಧಾಸ್ತತ್ರ ಚೋತ್ಪೇತುಃ ಪತಿತಸ್ವಶಿರೋಕ್ಷಿಭಿಃ ।
ಉದ್ಯತಾಯುಧದೋರ್ದಂಡೈರಾಧಾವಂತೋ ಭಟಾನ್ಮೃಧೇ ॥

ಅನುವಾದ

ಆ ರಣರಂಗದ ಕೆಲವುಕಡೆ ತಲೆಯಿಲ್ಲದ ಮುಂಡಗಳು ಬಿದ್ದಿರುವ ತಲೆಗಳ ಕಣ್ಣುಗಳಿಂದ ನೋಡುತ್ತಾ ಕೈಗಳಲ್ಲಿ ಆಯುಧಗಳನ್ನೆತ್ತಿಕೊಂಡು ವೀರರತ್ತ ಓಡುತ್ತಾ ನೆಗೆಯುತ್ತಿದ್ದವು. ॥40॥

(ಶ್ಲೋಕ-41)

ಮೂಲಮ್

ಬಲಿರ್ಮಹೇಂದ್ರಂ ದಶಭಿಸಿಭಿರೈರಾವತಂ ಶರೈಃ ।
ಚತುರ್ಭಿಶ್ಚತುರೋ ವಾಹಾನೇಕೇನಾರೋಹಮಾರ್ಚ್ಛಯತ್ ॥

ಅನುವಾದ

ಬಲಿಚಕ್ರವರ್ತಿಯು ಹತ್ತು ಬಾಣಗಳನ್ನು ಇಂದ್ರನ ಮೇಲೆಯೂ, ಮೂರು ಅವನ ವಾಹನವಾದ ಐರಾವಕ್ಕೂ, ನಾಲ್ಕು ಅವನ ಅಂಗರಕ್ಷಕರಿಗೂ, ಒಂದು ಬಾಣವನ್ನು ಮಾವಟಿಗನ ಮೇಲೆಯೂ ಒಟ್ಟಿಗೆ ಹದಿನೆಂಟು ಬಾಣಗಳನ್ನು ಪ್ರಯೋಗಿಸಿದನು.॥41॥

(ಶ್ಲೋಕ-42)

ಮೂಲಮ್

ಸ ತಾನಾಪತತಃ ಶಕ್ರಸ್ತಾವದ್ಭಿಃ ಶೀಘ್ರವಿಕ್ರಮಃ ।
ಚಿಚ್ಛೇದ ನಿಶಿತೈರ್ಭಲ್ಲೈರಸನ್ಪ್ರಾಪ್ತಾನ್ಹಸನ್ನಿವ ॥

ಅನುವಾದ

ಬಲಿಯ ಬಾಣಗಳಾದರೋ ನಮ್ಮನ್ನು ಘಾಸಿಪಡಿಸುವುವು ಎಂದು ನೋಡಿದ ಶೀಘ್ರವಿಕ್ರಮಿಯಾದ ಇಂದ್ರನು ಆ ಬಾಣಗಳು ತನ್ನ ಬಳಿಗೆ ಬರುವುದರೊಳಗಾಗಿಯೇ ಅಷ್ಟೇ ಸಂಖ್ಯೆಯ ಭಲ್ಲವೆಂಬ ಬಾಣಗಳಿಂದ ನಗು-ನಗುತ್ತಲೇ ಕತ್ತರಿಸಿಹಾಕಿದನು.॥42॥

(ಶ್ಲೋಕ-43)

ಮೂಲಮ್

ತಸ್ಯ ಕರ್ಮೋತ್ತಮಂ ವೀಕ್ಷ್ಯ ದುರ್ಮರ್ಷಃ ಶಕ್ತಿಮಾದದೇ ।
ತಾಂ ಜ್ವಲಂತೀಂ ಮಹೋಲ್ಕಾಭಾಂ ಹಸ್ತಸ್ಥಾಮಚ್ಛಿನದ್ಧರಿಃ ॥

ಅನುವಾದ

ಇಂದ್ರನ ಈ ಶ್ರೇಷ್ಠವಾದ ಧನುರ್ವಿದ್ಯಾ ಪಾಂಡಿತ್ಯವನ್ನು ಕಂಡು ಕೆರಳಿದ ಬಲಿಯು ಇಂದ್ರನ ಮೇಲೆ ಪ್ರಯೋಗಿಸಲು ಪಂಜಿನಂತೆ ಪ್ರಜ್ವಲಿಸುತ್ತಿದ್ದ ಒಂದು ಭಾರೀ ಶಕ್ತ್ಯಾಯುಧವನ್ನು ಎತ್ತಿಕೊಂಡನು. ಅದನ್ನು ಅವನು ಪ್ರಯೋಗಿಸುವ ಮೊದಲೇ, ಅವನ ಕೈಯಲ್ಲಿರುವಾಗಲೇ ಇಂದ್ರನು ಅದನ್ನೂ ಕತ್ತರಿಸಿಬಿಟ್ಟನು. ॥43॥

(ಶ್ಲೋಕ-44)

ಮೂಲಮ್

ತತಃ ಶೂಲಂ ತತಃ ಪ್ರಾಸಂ ತತಸ್ತೋಮರಮೃಷ್ಟಯಃ ।
ಯದ್ಯಚ್ಛಸಂ ಸಮಾದದ್ಯಾತ್ಸರ್ವಂ ತದಚ್ಛಿನದ್ವಿಭುಃ ॥

ಅನುವಾದ

ಬಳಿಕ ಬಲಿಯು ರೋಷಾವೇಶದಿಂದ ಕೈಗೆತ್ತಿಕೊಂಡ ಶೂಲ, ಪ್ರಾಸ, ತೋಮರ, ಋಷ್ಟಿ ಮುಂತಾದ ಆಯುಧಗಳನ್ನು ಒಂದಾದ ಮೇಲೆ ಮತ್ತೊಂದರಂತೆ ಇಂದ್ರನು ಕತ್ತರಿಸಿಹಾಕಿದನು. ಇಂತಹ ಕೈಚಳಕದಿಂದ ಇಂದ್ರನ ಐಶ್ವರ್ಯವು ಇನ್ನೂ ಬೆಳಗಿತು. ॥44॥

(ಶ್ಲೋಕ-45)

ಮೂಲಮ್

ಸಸರ್ಜಾಥಾಸುರೀಂ ಮಾಯಾಮಂತರ್ಧಾನಗತೋಸುರಃ ।
ತತಃ ಪ್ರಾದುರಭೂಚ್ಛೈಲಃ ಸುರಾನೀಕೋಪರಿ ಪ್ರಭೋ ॥

ಅನುವಾದ

ಪರೀಕ್ಷಿತನೇ! ಇಂದ್ರನ ಪರಾಕ್ರಮದಿಂದ ಗಾಬರಿಗೊಂಡ ಬಲಿಯು ಅಂತರ್ಧಾನನಾಗಿ ಮತ್ತೆ ಅವನು ಆಸುರೀ ಮಾಯೆಯನ್ನು ಸೃಷ್ಟಿಸಿದನು. ಮರುಕ್ಷಣದಲ್ಲೇ ದೊಡ್ಡ ಪರ್ವತವೊಂದು ದೇವಸೈನ್ಯದ ಮೇಲೆ ಬಿತ್ತು. ॥45॥

(ಶ್ಲೋಕ-46)

ಮೂಲಮ್

ತತೋ ನಿಪೇತುಸ್ತರವೋ ದಹ್ಯಮಾನಾ ದವಾಗ್ನಿನಾ ।
ಶಿಲಾಃ ಸಟಂಕಶಿಖರಾಶ್ಚೂರ್ಣಯಂತ್ಯೋದ್ವಿಷದ್ಬಲಮ್ ॥

ಅನುವಾದ

ಅದನ್ನನುಸರಿಸಿ ಕಾಡುಗಿಚ್ಚಿನಿಂದ ಸುಡುತ್ತಿದ್ದ ವೃಕ್ಷಗಳು ಬೀಳತೊಡಗಿದವು. ಬಳಿಕ ಕಲ್ಲುಳಿಗಳಂತೆ ಹರಿತ ವಾದ ಶಿಖರಗಳಿಂದ ಕೂಡಿದ್ದ ಬಂಡೆಗಳು ದೇವಸೈನ್ಯವನ್ನು ನುಚ್ಚುನೂರಾಗಿಸುತ್ತಾ ಬೀಳತೊಡಗಿದವು. ॥46॥

(ಶ್ಲೋಕ-47)

ಮೂಲಮ್

ಮಹೋರಗಾಃ ಸಮುತ್ಪೇತುರ್ದಂದಶೂಕಾಃ ಸವೃಶ್ಚಿಕಾಃ ।
ಸಿಂಹವ್ಯಾಘ್ರವರಾಹಾಶ್ಚ ಮರ್ದಯಂತೋ ಮಹಾಗಜಾನ್ ॥

ಅನುವಾದ

ಅನಂತರ ಹೆಬ್ಬಾವುಗಳೂ, ಚೇಳುಗಳೂ, ವಿಷಸರ್ಪಗಳೂ ಹಾಗೂ ಇತರ ವಿಷಜಂತುಗಳೂ ನೆಗೆ-ನೆಗೆಯುತ್ತಾ ದೇವಸೈನ್ಯವನ್ನು ಕಡಿಯತೊಡಗಿದವು. ಸಿಂಹ, ಹುಲಿ, ಕಾಡಹಂದಿಗಳು ಸೈನ್ಯದ ದೊಡ್ಡ-ದೊಡ್ಡ ಆನೆಗಳನ್ನೂ ಹರಿದು ನುಂಗತೊಡಗಿದವು. ॥47॥

(ಶ್ಲೋಕ-48)

ಮೂಲಮ್

ಯಾತುಧಾನ್ಯಶ್ಚ ಶತಶಃ ಶೂಲಹಸ್ತಾ ವಿವಾಸಸಃ ।
ಛಿಂದಿ ಭಿಂದೀತಿ ವಾದಿನ್ಯಸ್ತಥಾ ರಕ್ಷೋಗಣಾಃ ಪ್ರಭೋ ॥

ಅನುವಾದ

ರಾಜೇಂದ್ರಾ! ಕೈಯಲ್ಲಿ ಶೂಲಾ ಯುಧವನ್ನು ಹಿಡಿದು ಕೊಂಡಿದ್ದ ಬೆತ್ತಲೆಯರಾದ ರಾಕ್ಷಸಿ ಯರು ಮತ್ತು ರಾಕ್ಷಸರು ‘ಕಡಿ-ಬಡಿ-ತಿವಿ’ ಎಂದು ಅರಚಿ ಕೊಳ್ಳುತ್ತಾ ಸಮರಾಂಗಣಕ್ಕೆ ನುಗ್ಗಿದವು. ॥48॥

(ಶ್ಲೋಕ-49)

ಮೂಲಮ್

ತತೋ ಮಹಾಘನಾ ವ್ಯೋಮ್ನಿ ಗಂಭೀರಪರುಷಸ್ವನಾಃ ।
ಅಂಗಾರಾನ್ಮುಮುಚುರ್ವಾತೈರಾಹತಾಃ ಸ್ತನಯಿತ್ನವಃ ॥

ಅನುವಾದ

ಕೆಲವೇ ಕ್ಷಣದಲ್ಲಿ ಆಕಾಶದಲ್ಲಿ ಘನಘೋರವಾದ ಕಾರ್ಮೋಡಗಳು ದಟ್ಟವಾಗಿ ವ್ಯಾಪಿಸಿದುವು. ಅವುಗಳು ಪರಸ್ಪರ ಅಪ್ಪಳಿಸಿದಾಗ ಭಯಂಕರ ಕಠೋರವಾದ ಶಬ್ದವಾಗ ತೊಡಗಿತು. ಮಿಂಚುಗಳು ಬೀಳತೊಡಗಿದವು. ಚಂಡಮಾರುತದೊಂದಿಗೆ ಬೆಂಕಿಯ ಮಳೆಯೇ ಬೀಳತೊಡಗಿತು. ॥49॥

(ಶ್ಲೋಕ-50)

ಮೂಲಮ್

ಸೃಷ್ಟೋ ದೈತ್ಯೇನ ಸುಮಹಾನ್ವಹ್ನಿಃ ಶ್ವಸನಸಾರಥಿಃ ।
ಸಾಂವರ್ತಕ ಇವಾತ್ಯುಗ್ರೋ ವಿಬುಧಧ್ವಜಿನೀಮಧಾಕ್ ॥

ಅನುವಾದ

ದೈತ್ಯರಾಜ ಬಲಿಯು ಪ್ರಳಯಾಗ್ನಿಯಂತಹ ಭಯಾನಕ ಬೆಂಕಿಯನ್ನು ಸೃಷ್ಟಿಸಿದನು. ಅದು ನೋಡು-ನೋಡುತ್ತಲೇ ಗಾಳಿಯ ಸಹಾಯದಿಂದ ದೇವತೆಗಳ ಸೈನ್ಯವನ್ನು ಸುಡಲುತೊಡಗಿತು. ॥50॥

(ಶ್ಲೋಕ-51)

ಮೂಲಮ್

ತತಃ ಸಮುದ್ರ ಉದ್ವೇಲಃ ಸರ್ವತಃ ಪ್ರತ್ಯದೃಶ್ಯತ ।
ಪ್ರಚಂಡವಾತೈರುದ್ಧೂತತರಂಗಾವರ್ತಭೀಷಣಃ ॥

ಅನುವಾದ

ಬಳಿಕ ಚಂಡಮಾರುತದಿಂದ ಎಬ್ಬಿಸಲ್ಪಟ್ಟ ಅಲೆಗಳಿಂದಲೂ, ಸುಳಿಗಳಿಂದಲೂ ಕೂಡಿದ್ದ ಸಮುದ್ರವು ಎಲ್ಲ ಕಡೆಗಳಿಂದ ತನ್ನೆಲ್ಲೆಯನ್ನು ಮೀರಿ ಮುನ್ನುಗ್ಗಿ ಬರುತ್ತಿರುವಂತೆ ಎನಿಸಿತು. ॥51॥

(ಶ್ಲೋಕ-52)

ಮೂಲಮ್

ಏವಂ ದೈತ್ಯೈರ್ಮಹಾಮಾಯೈರಲಕ್ಷ್ಯಗತಿಭೀಷಣೈಃ ।
ಸೃಜ್ಯಮಾನಾಸು ಮಾಯಾಸು ವಿಷೇದುಃ ಸುರಸೈನಿಕಾಃ ॥

ಅನುವಾದ

ಹೀಗೆ ಭಯಂಕರರಾದ ಅಸುರರು ಅದೃಶ್ಯರಾಗಿ ಚಿತ್ರ-ವಿಚಿತ್ರವಾದ ಮಾಯೆಯನ್ನು ಸೃಷ್ಟಿಮಾಡಿ ದೇವತೆಗಳ ಸೈನ್ಯ ವನ್ನು ಪೀಡಿಸುತ್ತಿದ್ದರು. ಅವರು ಅದೃಶ್ಯರಾಗಿದ್ದುದರಿಂದ ಅವರ ಮೇಲೆ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಲೂ ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ದೇವತೆಗಳು ಬಹಳ ಖಿನ್ನರಾದರು. ॥52॥

(ಶ್ಲೋಕ-53)

ಮೂಲಮ್

ನ ತತ್ಪ್ರತಿವಿಧಿಂ ಯತ್ರ ವಿದುರಿಂದ್ರಾದಯೋ ನೃಪ ।
ಧ್ಯಾತಃ ಪ್ರಾದುರಭೂತ್ತತ್ರ ಭಗವಾನ್ವಿಶ್ವಭಾವನಃ ॥

ಅನುವಾದ

ಪರೀಕ್ಷಿತನೇ! ಅಸುರರು ಕಲ್ಪಿಸಿದ ಮಾಯೆಗೆ ಪ್ರತೀಕಾರವನ್ನು ಮಾಡಲು ಇಂದ್ರಾದಿ ದೇವತೆಗಳು ಬಹಳವಾಗಿ ಯೋಚಿಸಿದರು. ಆದರೆ ಅವರಿಗೆ ಏನೂ ತೋಚಲಿಲ್ಲ. ಕೊನೆಗೆ ಅವರೆಲ್ಲರೂ ಜಗದ್ರಕ್ಷಕನಾದ ಭಗವಂತನನ್ನು ಅನನ್ಯ ಭಕ್ತಿಯಿಂದ ಧ್ಯಾನಮಾಡಿದರು. ಒಡನೆಯೇ ಭಕ್ತಪರಾಧೀನನಾದ ಶ್ರೀಹರಿಯು ಅಲ್ಲಿ ಪ್ರಕಟಗೊಂಡನು. ॥53॥

ಮೂಲಮ್

(ಶ್ಲೋಕ-54)
ತತಃ ಸುಪರ್ಣಾಂಸಕೃತಾಂಘ್ರಿಪಲ್ಲವಃ
ಪಿಶಂಗವಾಸಾ ನವಕಂಜಲೋಚನಃ ।
ಅದೃಶ್ಯತಾಷ್ಟಾಯುಧಬಾಹುರುಲ್ಲಸ-
ಚ್ಛ್ರೀಕೌಸ್ತುಭಾನರ್ಘ್ಯಕಿರೀಟಕುಂಡಲಃ ॥

ಅನುವಾದ

ಅವನ ದರ್ಶನವು ಬಹು ಸುಂದರವಾಗಿತ್ತು. ಗರುಡನ ಹೆಗಲಿನಲ್ಲಿ ಭಗವಂತನ ಚರಣ ಕಮಲಗಳು ವಿರಾಜಮಾನವಾಗಿದ್ದವು. ನವಕಮಲದಂತೆ ವಿಶಾಲ ನೇತ್ರಗಳಿದ್ದವು. ದೇವದೇವನು ಪೀತಾಂಬರವನ್ನು ಧರಿಸಿದ್ದನು. ಎಂಟು ಕೈಗಳಿಂದ ಎಂಟು ಆಯುಧಗಳನ್ನು ಧರಿಸಿದ್ದನು. ಕೊರಳಲ್ಲಿ ಕೌಸ್ತುಭಮಣಿಯೂ, ಶಿರದಲ್ಲಿ ಅಮೂಲ್ಯವಾದ ಕಿರೀಟವೂ, ಕಿವಿಗಳಲ್ಲಿ ದಿವ್ಯಕುಂಡಲಗಳೂ ರಾರಾಜಿಸುತ್ತಿದ್ದವು. ಇಂತಹ ದಿವ್ಯವಾದ ಕಾಂತಿಯಿಂದ ಭಗವಂತನು ದೇವತೆಗಳಿಗೆ ಕಾಣಿಸಿಕೊಂಡನು. ॥54॥

(ಶ್ಲೋಕ-55)

ಮೂಲಮ್

ತಸ್ಮಿನ್ಪ್ರವಿಷ್ಟೇಸುರಕೂಟಕರ್ಮಜಾ
ಮಾಯಾ ವಿನೇಶುರ್ಮಹಿನಾ ಮಹೀಯಸಃ ।
ಸ್ವಪ್ನೋ ಯಥಾ ಹಿ ಪ್ರತಿಬೋಧ ಆಗತೇ
ಹರಿಸ್ಮೃತಿಃ ಸರ್ವವಿಪದ್ವಿಮೋಕ್ಷಣಮ್ ॥

ಅನುವಾದ

ಪರಮಪುರುಷ ಪರಮಾತ್ಮನು ಪ್ರಕಟವಾದೊಡನೆಯೇ ಅವನ ಪ್ರಭಾವದಿಂದ ಅಸುರರ ಆ ಕಪಟ ಮಾಯೆಯು ಎಚ್ಚರವಾದಾಗ ಸ್ವಪ್ನವು ಇಲ್ಲವಾಗುವಂತೆ ವಿಲೀನವಾಗಿ ಹೋಯಿತು. ‘ಹರಿಸ್ಮೃತಿಃ ಸರ್ವವಿಪದ್ವಿಮೋಕ್ಷಣಮ್’ ಶ್ರೀಹರಿಯ ಸ್ಮರಣೆಯು ಸಮಸ್ತ ವಿಪತ್ತುಗಳನ್ನು ಪರಿಹರಿಸುತ್ತದೆ.॥55॥

(ಶ್ಲೋಕ-56)

ಮೂಲಮ್

ದೃಷ್ಟ್ವಾ ಮೃಧೇ ಗರುಡವಾಹಮಿಭಾರಿವಾಹ
ಆವಿಧ್ಯಶೂಲಮಹಿನೋದಥ ಕಾಲನೇಮಿಃ ।
ತಲ್ಲೀಲಯಾ ಗರುಡಮೂರ್ಧ್ನಿ ಪತದ್ಗೃಹೀತ್ವಾ
ತೇನಾಹನನ್ನೃಪ ಸವಾಹಮರಿಂ ತ್ರ್ಯಧೀಶಃ ॥

ಅನುವಾದ

ಇದಾದ ಬಳಿಕ ಯುದ್ಧರಂಗದಲ್ಲಿ ಗರುಡವಾಹನ ಭಗವಂತನು ಬಂದಿರುವುದನ್ನು ನೋಡಿದ ಕಾಲನೇಮಿ ಎಂಬ ದೈತ್ಯನು ತನ್ನ ಸಿಂಹದ ಮೇಲೆ ಕುಳಿತಿದ್ದೇ ಭಯಂಕರವಾದ ಶೂಲಾಯುಧವನ್ನು ಗರಗರನೇ ತಿರುಗಿಸುತ್ತಾ ಶ್ರೀಹರಿಯ ಮೇಲೆ ಪ್ರಯೋಗಿಸಿದನು. ಶ್ರೀಹರಿಯಾದರೋ ಗರುಡನ ತಲೆಯಮೇಲೆ ಬೀಳಲಿದ್ದ ಆ ಶೂಲಾಯುಧವನ್ನು ಲೀಲಾಜಾಲವಾಗಿ ಹಿಡಿದು ಅದೇ ಶೂಲಾ ಯುಧದಿಂದ ಸಿಂಹದ ಮೇಲೆ ಕುಳಿತಿದ್ದ ಕಾಲನೇಮಿಯನ್ನು ವಾಹನ ಸಹಿತನಾಗಿ ಸಂಹಾರಮಾಡಿದನು. ॥56॥

(ಶ್ಲೋಕ-57)

ಮೂಲಮ್

ಮಾಲೀ ಸುಮಾಲ್ಯತಿಬಲೌ ಯುಧಿ ಪೇತತುರ್ಯ-
ಚ್ಚಕ್ರೇಣ ಕೃತ್ತಶಿರಸಾವಥ ಮಾಲ್ಯವಾಂಸ್ತಮ್ ।
ಆಹತ್ಯ ತಿಗ್ಮಗದಯಾಹನದಂಡಜೇಂದ್ರಂ
ತಾವಚ್ಛಿರೋಚ್ಛಿನದರೇರ್ನದತೋರಿಣಾದ್ಯಃ ॥

ಅನುವಾದ

ಬಳಿಕ ಮಾಲಿ ಮತ್ತು ಸುಮಾಲಿ ಎಂಬ ಮಹಾಬಲಿಷ್ಠರಾದ ರಾಕ್ಷಸರಿಬ್ಬರೂ ಶ್ರೀಹರಿಯನ್ನು ಆಕ್ರಮಿಸಿದರು. ಭಗವಂತನು ಕ್ಷಣಮಾತ್ರದಲ್ಲಿ ಅವರ ತಲೆಗಳನ್ನು ಚಕ್ರಾಯುಧದಿಂದ ತುಂಡರಿಸಿಬಿಟ್ಟನು. ಮತ್ತೆ ಮಾಲ್ಯವಂತನೆಂಬ ಮಹಾದೈತ್ಯನು ಭಾರೀ ಗರ್ಜಿಸುತ್ತಾ ಪ್ರಚಂಡ ವೇಗದಿಂದ ಗದೆಯನ್ನು ಗರುಡನ ಮೇಲೆ ಎಸೆದಾಗ ಅದು ಗರುಡನನ್ನು ಮುಟ್ಟುವ ಮೊದಲೇ ಭಗವಂತನು ಅದನ್ನು ನಿವಾರಿಸಿ ಮಾಲ್ಯವಂತನ ಶಿರಸ್ಸನ್ನು ಚಕ್ರದಿಂದ ಕತ್ತರಿಸಿ ಬಿಟ್ಟನು. ॥57॥

ಅನುವಾದ (ಸಮಾಪ್ತಿಃ)

ಹತ್ತನೆಯ ಅಧ್ಯಾಯವು ಮುಗಿಯಿತು. ॥10॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ದೇವಾಸುರಸಂಗ್ರಾಮೇ ದಶಮೋಧ್ಯಾಯಃ ॥10॥