[ಒಂಭತ್ತನೆಯ ಅಧ್ಯಾಯ]
ಭಾಗಸೂಚನಾ
ಭಗವಂತನು ಮೋಹಿನಿಯ ರೂಪದಲ್ಲಿ ಅಮೃತವನ್ನು ಹಂಚಿದುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತೇನ್ಯೋನ್ಯತೋಸುರಾಃ ಪಾತ್ರಂ ಹರಂತಸ್ತ್ಯಕ್ತಸೌಹೃದಾಃ ।
ಕ್ಷಿಪಂತೋ ದಸ್ಯುಧರ್ಮಾಣ ಆಯಾಂತೀಂ ದದೃಶುಃ ಸಿಯಮ್ ॥
ಅನುವಾದ
ಶ್ರೀಶುಕಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಅಸುರರು ತಮ್ಮ-ತಮ್ಮಲ್ಲಿಯೇ ಸದ್ಭಾವವನ್ನೂ, ವಿಶ್ವಾಸವನ್ನೂ ಕಳಕೊಂಡು ಒಬ್ಬರು ಮತ್ತೊಬ್ಬರನ್ನು ನಿಂದಿಸುತ್ತಾ, ಕಳ್ಳರಂತೆ ಒಬ್ಬರಿಂದ ಮತ್ತೊಬ್ಬರು ಅಮೃತಕಲಶವನ್ನು ಕಸಿದುಕೊಳ್ಳುತ್ತಾ ಇದ್ದರು. ಅದೇ ಸಮಯಕ್ಕೆ ಸರಿಯಾಗಿ ಸುಂದರಿಯಾದ ಓರ್ವ ಸ್ತ್ರೀಯು ತಮ್ಮ ಕಡೆಗೆ ಬರುತ್ತಿರುವುದನ್ನು ನೋಡಿದರು. ॥1॥
(ಶ್ಲೋಕ-2)
ಮೂಲಮ್
ಅಹೋ ರೂಪಮಹೋ ಧಾಮ ಅಹೋ ಅಸ್ಯಾ ನವಂ ವಯಃ ।
ಇತಿ ತೇ ತಾಮಭಿದ್ರುತ್ಯ ಪಪ್ರಚ್ಛುರ್ಜಾತಹೃಚ್ಛಯಾಃ ॥
ಅನುವಾದ
ಆಹಾ! ಎಂತಹ ರೂಪು! ಎಂತಹ ತೇಜಸ್ಸು! ಎಂತಹ ನವಯೌವನ! ಎಂದು ಉದ್ಗರಿಸುತ್ತಾ ಕಾಮೋದ್ದೀಪ್ತರಾದ ಆ ದಾನವರು ಅವಳ ಬಳಿಗೆ ಓಡಿಬಂದು ಬೆಸಗೊಂಡರು. ॥2॥
(ಶ್ಲೋಕ-3)
ಮೂಲಮ್
ಕಾ ತ್ವಂ ಕಂಜಪಲಾಶಾಕ್ಷಿ ಕುತೋ ವಾ ಕಿಂ ಚಿಕೀರ್ಷಸಿ ।
ಕಸ್ಯಾಸಿ ವದ ವಾಮೋರು ಮಥ್ನಂತೀವ ಮನಾಂಸಿ ನಃ ॥
ಅನುವಾದ
ಪದ್ಮಪತ್ರಾಕ್ಷಿಯೇ! ಸುಂದರಿಯೇ! ನೀನು ಯಾರು? ಎಲ್ಲಿಂದ ಬಂದಿರುವೆ? ಏನು ಮಾಡಲು ಬಯಸಿ ಇಲ್ಲಿಗೆ ಬಂದಿರುವೆ? ನೀನು ಯಾರ ಮಗಳಾಗಿರುವೆ? ನಿನ್ನನ್ನು ನೋಡಿ ನಮ್ಮ ಮನಸ್ಸು ಕಲಕಿಹೋಗಿದೆ. ॥3॥
(ಶ್ಲೋಕ-4)
ಮೂಲಮ್
ನ ವಯಂ ತ್ವಾಮರೈರ್ದೈತ್ಯೈಃ ಸಿದ್ಧಗಂಧರ್ವಚಾರಣೈಃ ।
ನಾಸ್ಪೃಷ್ಟಪೂರ್ವಾಂ ಜಾನೀಮೋ ಲೋಕೇಶೈಶ್ಚ ಕುತೋ ನೃಭಿಃ ॥
ಅನುವಾದ
ಸುಂದರಿಯೇ! ನಮಗೆ ತಿಳಿದಿರುವಂತೆ ದೇವತೆಗಳಾಗಲೀ ದೈತ್ಯರಾಗಲೀ, ಸಿದ್ಧ-ಗಂಧರ್ವ-ಚಾರಣರಾಗಲೀ ನಿನ್ನನ್ನು ಸ್ಪರ್ಶಿಸಿರುವುದಿಲ್ಲ. ಹೀಗಿರುವಾಗ ಮನುಷ್ಯರು ನಿನ್ನನ್ನು ಹೇಗೆ ಸ್ಪರ್ಶಿಸಬಲ್ಲರು? ॥4॥
(ಶ್ಲೋಕ-5)
ಮೂಲಮ್
ನೂನಂ ತ್ವಂ ವಿಧಿನಾ ಸುಭ್ರೂಃ ಪ್ರೇಷಿತಾಸಿ ಶರೀರಿಣಾಮ್ ।
ಸರ್ವೇಂದ್ರಿಯಮನಃಪ್ರೀತಿಂ ವಿಧಾತುಂ ಸಘೃಣೇನ ಕಿಮ್ ॥
ಅನುವಾದ
ಸುಂದರೀ! ಖಂಡಿತವಾಗಿ ವಿಧಾತನೇ ದಯೆಗೈದು ಶರೀರಧಾರಿಗಳ ಸಮಸ್ತ ಇಂದ್ರಿಯಗಳನ್ನೂ, ಮನಸ್ಸನ್ನೂ ತೃಪ್ತಿಪಡಿಸಲಿಕ್ಕಾಗಿಯೇ ನಿನ್ನನ್ನು ಇಲ್ಲಿಗೆ ಕಳಿಸಿರಬಹುದೇ? ನಿಜ! ಹಾಗೆಯೇ ಆಗಿರಬೇಕು. ॥5॥
(ಶ್ಲೋಕ-6)
ಮೂಲಮ್
ಸಾ ತ್ವಂ ನಃ ಸ್ಪರ್ಧಮಾನಾನಾಮೇಕವಸ್ತುನಿ ಮಾನಿನಿ ।
ಜ್ಞಾತೀನಾಂ ಬದ್ಧವೈರಾಣಾಂ ಶಂ ವಿಧತ್ಸ್ವ ಸುಮಧ್ಯಮೇ ॥
ಅನುವಾದ
ಮಾನಿನೀ! ಹಾಗಂತ ನಾವುಗಳೆಲ್ಲ ಒಂದೇ ಜಾತಿಯವರು. ಹಾಗೂ ನಾವೆಲ್ಲ ಒಂದೇ ವಸ್ತುವನ್ನು ಬಯಸುತ್ತಿದ್ದೇವೆ. ಅದರಿಂದ ನಮ್ಮಲ್ಲಿ ಅಸೂಯೆ, ಬದ್ಧವೈರ ಉಂಟಾಗಿದೆ. ಸುಂದರೀ! ನೀನು ನಮ್ಮ ಜಗಳವನ್ನು ಕೊನೆಗಾಣಿಸು. ॥6॥
(ಶ್ಲೋಕ-7)
ಮೂಲಮ್
ವಯಂ ಕಶ್ಯಪದಾಯಾದಾ ಭ್ರಾತರಃ ಕೃತಪೌರುಷಾಃ ।
ವಿಭಜಸ್ವ ಯಥಾನ್ಯಾಯಂ ನೈವ ಭೇದೋ ಯಥಾ ಭವೇತ್ ॥
ಅನುವಾದ
ನಾವೆಲ್ಲರೂ ಕಶ್ಯಪನ ಮಕ್ಕಳು. ಅಣ್ಣ-ತಮ್ಮಂದಿರು. ನಾವುಗಳು ಅಮೃತಕ್ಕಾಗಿ ಭಾರೀ ಪುರುಷಾರ್ಥವನ್ನು ಮಾಡಿರುವೆವು. ನೀನು ನ್ಯಾಯವಾಗಿ ನಿಷ್ಪಕ್ಷ ಭಾವದಿಂದ ಇದನ್ನು ಹಂಚಿಬಿಡು. ಇದರಿಂದ ಮತ್ತೆ ನಮ್ಮಲ್ಲಿ ಯಾವುದೇ ಜಗಳ ಆಗದಿರಲಿ. ॥7॥
(ಶ್ಲೋಕ-8)
ಮೂಲಮ್
ಇತ್ಯುಪಾಮಂತ್ರಿತೋ ದೈತ್ಯೈರ್ಮಾಯಾಯೋಷಿದ್ವಪುರ್ಹರಿಃ ।
ಪ್ರಹಸ್ಯ ರುಚಿರಾಪಾಂಗೈರ್ನಿರೀಕ್ಷನ್ನಿದಮಬ್ರವೀತ್ ॥
ಅನುವಾದ
ಅಸುರರು ಹೀಗೆ ಪ್ರಾರ್ಥಿಸಿದಾಗ ಮಾಯೆಯಿಂದ ಸ್ತ್ರೀವೇಷವನ್ನು ಧರಿಸಿದ್ದ ಶ್ರೀಹರಿಯು ನಗುತ್ತಾ ಸುಂದರವಾದ ಕಟಾಕ್ಷವೀಕ್ಷಣದಿಂದ ಅವರ ಕಡೆಗೆ ನೋಡುತ್ತಾ ಇಂತೆಂದನು. ॥8॥
(ಶ್ಲೋಕ-9)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಕಥಂ ಕಶ್ಯಪದಾಯಾದಾಃ ಪುಂಶ್ಚಲ್ಯಾಂ ಮಯಿ ಸಂಗತಾಃ ।
ವಿಶ್ವಾಸಂ ಪಂಡಿತೋ ಜಾತು ಕಾಮಿನೀಷು ನ ಯಾತಿ ಹಿ ॥
ಅನುವಾದ
ಶ್ರೀಭಗವಂತನು ಹೇಳಿದನು — ದೈತ್ಯರೇ! ಮಹರ್ಷಿಗಳಾದ ಕಶ್ಯಪರ ಮಕ್ಕಳಾದ ನೀವು, ಸ್ವೇಚ್ಛೆಯಿಂದ ಮನೆ-ಮನೆ ತಿರುಗುವ ಕುಲಟೆಯಾದ ನನ್ನ ಮೇಲೆ ನ್ಯಾಯದ ಭಾರವನ್ನು ಏಕೆ ಹಾಕುತ್ತಿದ್ದೀರಿ? ಪಂಡಿತರಾದವರು ಯಾವಾಗಲೂ ಕಾಮಿನಿಯರಲ್ಲಿ ವಿಶ್ವಾಸವನ್ನಿಡುವುದಿಲ್ಲ. ॥9॥
(ಶ್ಲೋಕ-10)
ಮೂಲಮ್
ಸಾಲಾವೃಕಾಣಾಂ ಸೀಣಾಂ ಚ ಸ್ವೈರಿಣೀನಾಂ ಸುರದ್ವಿಷಃ ।
ಸಖ್ಯಾನ್ಯಾಹುರನಿತ್ಯಾನಿ ನೂತ್ನಂ ನೂತ್ನಂ ವಿಚಿನ್ವತಾಮ್ ॥
ಅನುವಾದ
ದೈತ್ಯರೇ! ನಾಯಿಯಲ್ಲಿ ಮತ್ತು ಜಾರಿಣಿಯಾದ ಸ್ತ್ರೀಯರ ವಿಷಯದಲ್ಲಿ ಸ್ನೇಹವು ಅನಿತ್ಯವಾದುದು ಎಂದು ವಿದ್ವಾಂಸರು ಹೇಳುತ್ತಾರೆ. ಅವರಿಬ್ಬರೂ ಸದಾಕಾಲ ಹೊಸ-ಹೊಸ ಬೇಟೆಯನ್ನು ಹುಡುಕುತ್ತಾ ಇರುತ್ತಾರೆ. ॥10॥
(ಶ್ಲೋಕ-11)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ತೇ ಕ್ಷ್ವೇಲಿತೈಸ್ತಸ್ಯಾ ಆಶ್ವಸ್ತಮನಸೋಸುರಾಃ ।
ಜಹಸುರ್ಭಾವಗಂಭೀರಂ ದದುಶ್ಚಾಮೃತಭಾಜನಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಮೋಹಿನಿಯ ಇಂತಹ ಹುಡುಗಾಟದ ಮಾತುಗಳಿಂದ ದೈತ್ಯರ ಮನಸ್ಸಿನಲ್ಲಿ ಅವಳ ಮೇಲೆ ವಿಶ್ವಾಸವು ಹೆಚ್ಚಿತು. ಅವರೆಲ್ಲರೂ ಗಂಭೀರವಾಗಿ ನಕ್ಕು ಅಮೃತ ಕಲಶವನ್ನು ಆಕೆಯ ಕೈಗಿತ್ತರು. ॥11॥
(ಶ್ಲೋಕ-12)
ಮೂಲಮ್
ತತೋ ಗೃಹೀತ್ವಾಮೃತಭಾಜನಂ ಹರಿ-
ರ್ಬಭಾಷ ಈಷತ್ಸ್ಮಿತಶೋಭಯಾ ಗಿರಾ ।
ಯದ್ಯಭ್ಯುಪೇತಂ ಕ್ವ ಚ ಸಾಧ್ವಸಾಧು ವಾ
ಕೃತಂ ಮಯಾ ವೋ ವಿಭಜೇ ಸುಧಾಮಿಮಾಮ್ ॥
ಅನುವಾದ
ಭಗವಂತನು ಅಮೃತದ ಕಲಶವನ್ನು ತನ್ನ ಕೈಯಲ್ಲಿ ಪಡೆದುಕೊಂಚ ನಸುನಗುತ್ತಾ ಸವಿನುಡಿಗಳಿಂದ ಇಂತೆಂದನು ದೈತ್ಯಶಿರೋಮ ಣಿಗಳೇ! ನಾನು ಮಾಡುವ ವಿಭಾಗ ಸರಿಯಾಗಿರಲಿ, ಸರಿಯಲ್ಲದಿರಲಿ ನೀವು ಅದನ್ನು ಸಮ್ಮತಿಸುವುದಾದರೆ, ನಿಮ್ಮ ಪ್ರಾರ್ಥನೆಯಂತೆ ಈ ಕಲಶದಲ್ಲಿರುವ ಅಮೃತವನ್ನು ನಾನು ಹಂಚುತ್ತೇನೆ. ॥12॥
(ಶ್ಲೋಕ-13)
ಮೂಲಮ್
ಇತ್ಯಭಿವ್ಯಾಹೃತಂ ತಸ್ಯಾ ಆಕರ್ಣ್ಯಾಸುರಪುಂಗವಾಃ ।
ಅಪ್ರಮಾಣವಿದಸ್ತಸ್ಯಾಸ್ತತ್ತಥೇತ್ಯನ್ವಮಂಸತ ॥
ಅನುವಾದ
ಹೀಗೆ ಆಕೆಯ ಸವಿಮಾತುಗಳನ್ನು ಕೇಳಿ, ಅವಳ ಮಾತಿನಲ್ಲಿದ್ದ ಅಪ್ರಾಮಾಣ್ಯವನ್ನು ತಿಳಿಯದೆ ದೊಡ್ಡ-ದೊಡ್ಡ ದೈತ್ಯರೆಲ್ಲರೂ ಏಕಕಂಠದಿಂದ ‘ನಮಗೆ ಸಮ್ಮತವಿದೆ’ ಎಂದು ನುಡಿದರು. ಅವರಿಗೆ ಮೋಹಿನಿಯ ವಾಸ್ತವಿಕ ಸ್ವರೂಪದ ಅರಿವು ಇರಲಿಲ್ಲ.॥13॥
(ಶ್ಲೋಕ-14)
ಮೂಲಮ್
ಅಥೋಪೋಷ್ಯ ಕೃತಸ್ನಾನಾ ಹುತ್ವಾ ಚ ಹವಿಷಾನಲಮ್ ।
ದತ್ತ್ವಾ ಗೋವಿಪ್ರಭೂತೇಭ್ಯಃ ಕೃತಸ್ವಸ್ತ್ಯಯನಾ ದ್ವಿಜೈಃ ॥
ಅನುವಾದ
ಇದಾದ ಬಳಿಕ ಮೋಹಿನಿಯ ನಿರ್ದೇಶದಂತೆ ದೇವ-ದಾನವರು ಒಂದು ದಿನದ ಉಪವಾಸಮಾಡಿ ಎಲ್ಲರೂ ಸ್ನಾನಮಾಡಿದರು. ಹವಿಸ್ಸಿನಿಂದ ಯಜ್ಞೇಶ್ವರನಲ್ಲಿ ಹೋಮ ಮಾಡಿ, ಗೋ-ಬ್ರಾಹ್ಮಣರಿಗೂ, ಪ್ರಾಣಿಗಳಿಗೂ ಯಥಾ ಯೋಗ್ಯವಾದ ಉಪಹಾರಗಳನ್ನು ಕೊಟ್ಟು, ಬ್ರಾಹ್ಮಣರಿಂದ ಸ್ವಸ್ತಿವಾಚನ ಮಾಡಿಸಿದರು. ॥14॥
(ಶ್ಲೋಕ-15)
ಮೂಲಮ್
ಯಥೋಪಜೋಷಂ ವಾಸಾಂಸಿ ಪರಿಧಾಯಾಹತಾನಿ ತೇ ।
ಕುಶೇಷು ಪ್ರಾವಿಶನ್ಸರ್ವೇ ಪ್ರಾಗಗ್ರೇಷ್ವಭಿಭೂಷಿತಾಃ ॥
ಅನುವಾದ
ತಮ್ಮ ಇಷ್ಟಾನುಸಾರವಾಗಿ ನೂತನವಾದ ವಸ್ತ್ರಗಳನ್ನು ಧರಿಸಿ, ಗಂಧ-ಮಾಲ್ಯಾದಿಗಳಿಂದ ಅಲಂಕರಿಸಿಕೊಂಡು ಪೂರ್ವಾಗ್ರವಾಗಿದ್ದ ದರ್ಭಾಸನಗಳಲ್ಲಿ ಕುಳಿತುಕೊಂಡರು. ॥15॥
(ಶ್ಲೋಕ-16)
ಮೂಲಮ್
ಪ್ರಾಙ್ಮುಖೇಷೂಪವಿಷ್ಟೇಷು ಸುರೇಷು ದಿತಿಜೇಷು ಚ ।
ಧೂಪಾಮೋದಿತಶಾಲಾಯಾಂ ಜುಷ್ಟಾಯಾಂ ಮಾಲ್ಯದೀಪಕೈಃ ॥
(ಶ್ಲೋಕ-17)
ಮೂಲಮ್
ತಸ್ಯಾಂ ನರೇಂದ್ರ ಕರಭೋರುರುಶದ್ದುಕೂಲ-
ಶ್ರೋಣೀತಟಾಲಸಗತಿರ್ಮದವಿಹ್ವಲಾಕ್ಷೀ ।
ಸಾ ಕೂಜತೀ ಕನಕನೂಪುರಶಿಂಜಿತೇನ
ಕುಂಭಸ್ತನೀ ಕಲಶಪಾಣಿರಥಾವಿವೇಶ ॥
ಅನುವಾದ
ದೇವ-ದಾನವರೆಲ್ಲರೂ ಧೂಪದಿಂದ ಸುಗಂಧಿತವಾದ, ಮಾಲೆಗಳಿಂದ, ದೀಪಗಳಿಂದ ಅಲಂಕೃತವಾದ ಭವ್ಯಭವನದಲ್ಲಿ ಪೂರ್ವಾಗ್ರಗಳುಳ್ಳ ದರ್ಭಾಸನದಲ್ಲಿ ಕುಳಿತಿರುವಾಗ ಮೋಹಿನಿಯು ಅಮೃತದ ಕಲಶವನ್ನೆತ್ತಿಕೊಂಡು ಆ ಸಭಾಭವನಕ್ಕೆ ಆಗಮಿಸಿದಳು. ಆಗ ಅವಳು ಕಮನೀಯವಾದ ಪೀತಾಂಬರವನ್ನು ಉಟ್ಟಿದ್ದಳು. ಮೃದುವಾದ ನಿತಂಬಗಳ ಭಾರದಿಂದಾಗಿ ಮೆಲ್ಲ-ಮೆಲ್ಲನೆ ನಡೆಯುತ್ತಿದ್ದಳು. ಕಣ್ಣುಗಳು ಮದದಿಂದ ವಿಹ್ವಲವಾಗಿದ್ದವು. ಕಲಶಗಳಂತಿದ್ದ ಸ್ತನಗಳೂ ಉನ್ನತವಾಗಿದ್ದವು. ಆನೆಮರಿಯ ಸೊಂಡಿಲಿನಂತೆ ತೊಡೆಗಳು ದುಂಡಾಗಿದ್ದವು. ಚಿನ್ನದ ಕಾಲಂದುಗೆಗಳಿಂದ ಝಣ-ಝಣನೆ ಶಬ್ದಮಾಡುತ್ತಾ ಅಮೃತಹಸ್ತಳಾಗಿ ಸಭಾಭವನವನ್ನು ಬೆಳಗುತ್ತಾ ಪ್ರವೇಶಿಸಿದಳು. ॥16-17॥
(ಶ್ಲೋಕ-18)
ಮೂಲಮ್
ತಾಂ ಶ್ರೀಸಖೀಂ ಕನಕಕುಂಡಲಚಾರುಕರ್ಣ-
ನಾಸಾಕಪೋಲವದನಾಂ ಪರದೇವತಾಖ್ಯಾಮ್ ।
ಸಂವೀಕ್ಷ್ಯ ಸಂಮುಮುಹುರುತ್ಸ್ಮಿತವೀಕ್ಷಣೇನ
ದೇವಾಸುರಾ ವಿಗಲಿತಸ್ತನಪಟ್ಟಿಕಾಂತಾಮ್ ॥
ಅನುವಾದ
ಅವಳ ಸುಂದರವಾದ ಕಿವಿಗಳಲ್ಲಿ ಸ್ವರ್ಣಕುಂಡಲಗಳು ಶೋಭಿಸುತ್ತಿದ್ದವು. ಮೂಗೂ, ಕಪೋಲಗಳು, ಮುಖವು ಬಹು ಅಂದವಾಗಿದ್ದವು. ಸ್ವಯಂ ಪರದೇವತೆಯಾದ ಭಗವಂತನು ಆ ಮೋಹಿನಿಯ ರೂಪದಲ್ಲಿ ಸಾಕ್ಷಾತ್ ಲಕ್ಷ್ಮೀದೇವಿಯ ಯಾರೋ ಶ್ರೇಷ್ಠ ಸಖಿಯೇ ಬಂದಂತೆ ಕಾಣುತ್ತಿದ್ದನು. ಮೋಹಿನಿಯು ತನ್ನ ಮಂದಹಾಸದಿಂದ ಕೂಡಿದ ಓರೆ ನೋಟದಿಂದ ದೇವ-ದಾನವರನ್ನು ನೋಡಿದಾಗ ಅವರೆಲ್ಲರೂ ಮೋಹಿತರಾಗಿ ಬಿಟ್ಟರು. ಆಗ ಅವಳ ಸೆರಗು ಸ್ತನಗಳಿಂದ ಸ್ವಲ್ಪಜಾರಿತ್ತು.॥18॥
(ಶ್ಲೋಕ-19)
ಮೂಲಮ್
ಅಸುರಾಣಾಂ ಸುಧಾದಾನಂ ಸರ್ಪಾಣಾಮಿವ ದುರ್ನಯಮ್ ।
ಮತ್ವಾ ಜಾತಿನೃಶಂಸಾನಾಂ ನ ತಾಂ ವ್ಯಭಜದಚ್ಯುತಃ ॥
ಅನುವಾದ
ಭಗವಂತನು ಮೋಹಿನೀ ರೂಪದಲ್ಲಿರುವಾಗ ಅಸುರರಾದರೋ ಜನ್ಮತಃ ಕ್ರೂರ ಸ್ವಭಾವದವರು, ಇವರಿಗೆ ಅಮೃತ ಕುಡಿಸಿದರೆ ಹಾವಿಗೆ ಹಾಲೆರೆದಂತೆ ಅನ್ಯಾಯವೇ ಆದೀತು ಎಂದು ವಿಚಾರ ಮಾಡಿ, ಅವನು ಅಸುರರಿಗೆ ಅಮೃತವನ್ನು ಹಂಚಿಕೊಡಲಿಲ್ಲ.॥19॥
(ಶ್ಲೋಕ-20)
ಮೂಲಮ್
ಕಲ್ಪಯಿತ್ವಾ ಪೃಥಕ್ಪಂಕ್ತೀರುಭಯೇಷಾಂ ಜಗತ್ಪತಿಃ ।
ತಾಂಶ್ಚೋಪವೇಶಯಾಮಾಸ ಸ್ವೇಷು ಸ್ವೇಷು ಚ ಪಂಕ್ತಿಷು ॥
ಅನುವಾದ
ಭಗವಂತನು ದೇವತೆಗಳನ್ನು ಮತ್ತು ದಾನವರನ್ನು ಬೇರೆ-ಬೇರೆ ಪಂಕ್ತಿಗಳನ್ನಾಗಿಸಿದನು. ಅವರೆಲ್ಲರೂ ತಮ್ಮ-ತಮ್ಮವರೊಂದಿಗೆ ಎರಡುಸಾಲು ಹಿಡಿದು ಕುಳಿತು ಬಿಟ್ಟರು.॥20॥
(ಶ್ಲೋಕ-21)
ಮೂಲಮ್
ದೈತ್ಯಾನ್ಗೃಹೀತಕಲಶೋ ವಂಚಯನ್ನುಪಸಂಚರೈಃ ।
ದೂರಸ್ಥಾನ್ಪಾಯಯಾಮಾಸ ಜರಾಮೃತ್ಯು ಹರಾಂ ಸುಧಾಮ್ ॥
ಅನುವಾದ
ಇದಾದ ಬಳಿಕ ಅಮೃತಕಲಶವನ್ನೆತ್ತಿ ಕೊಂಡು ಭಗವಂತನು ದೈತ್ಯರ ಬಳಿಗೆ ಬಂದನು. ಅವರನ್ನು ಹಾವ-ಭಾವ ಕಟಾಕ್ಷ-ವೀಕ್ಷಣಗಳಿಂದ ಮೋಹಿತರನ್ನಾಗಿಸಿ, ದೂರದಲ್ಲಿ ಕುಳಿತಿದ್ದ ದೇವತೆಗಳ ಬಳಿಗೆಬಂದು, ಯಾವುದನ್ನು ಕುಡಿಯುವುದರಿಂದ ಮುಪ್ಪು-ಸಾವುಗಳು ತೊಲಗುವುದೋ ಅಂತಹ ಅಮೃತವನ್ನು ದೇವತೆಗಳಿಗೆ ಕುಡಿಸಿದನು.॥21॥
(ಶ್ಲೋಕ-22)
ಮೂಲಮ್
ತೇ ಪಾಲಯಂತಃ ಸಮಯಮಸುರಾಃ ಸ್ವಕೃತಂ ನೃಪ ।
ತೂಷ್ಣೀಮಾಸನ್ಕೃತಸ್ನೇಹಾಃ ಸೀವಿವಾದಜುಗುಪ್ಸಯಾ ॥
ಅನುವಾದ
ಪರೀಕ್ಷಿತನೇ! ಅಸುರರು ತಾವು ಮಾಡಿದ ಪ್ರತಿಜ್ಞೆಯನ್ನು ಪಾಲಿಸುತ್ತಿದ್ದರು. ಅವರಿಗೆ ಮೋಹಿನಿಯಲ್ಲಿ ಅಪಾರ ಸ್ನೇಹವೂ ಇತ್ತು ಹಾಗೂ ಸ್ತ್ರೀಯೊಡನೆ ಜಗಳಕಾಯುವುದು ತಮಗೆ ನಿಂದನೀಯವೆಂದೇ ತಿಳಿಯುತ್ತಿದ್ದರು. ಅದಕ್ಕಾಗಿ ಅವರು ಸುಮ್ಮನೆ ಕುಳಿತುಬಿಟ್ಟರು.॥22॥
(ಶ್ಲೋಕ-23)
ಮೂಲಮ್
ತಸ್ಯಾಂ ಕೃತಾತಿಪ್ರಣಯಾಃ ಪ್ರಣಯಾಪಾಯಕಾತರಾಃ ।
ಬಹುಮಾನೇನ ಚಾಬದ್ಧಾ ನೋಚುಃ ಕಿಂಚನ ವಿಪ್ರಿಯಮ್ ॥
ಅನುವಾದ
ಮೋಹಿನಿಯಲ್ಲಿ ಅವರಿಗೆ ಅತ್ಯಂತ ಪ್ರೇಮ ಉಂಟಾಗಿತ್ತು. ಅವಳೊಂದಿಗಿನ ನಮ್ಮ ಪ್ರೇಮದ ಸಂಬಂಧ ಕಡಿದುಹೋದೀತೆಂದು ಅವರು ಭಯಪಡುತ್ತಿದ್ದರು. ಮೋಹಿನಿಯೂ ಮೊದಲಿಗೆ ಅವರಿಗೆ ಬಹಳ ಸಮ್ಮಾನ ಮಾಡಿದ್ದಳು. ಇದರಿಂದ ಅವರು ಮತ್ತೂ ಬಂಧಿತರಾಗಿದ್ದರು. ಈ ಕಾರಣದಿಂದಲೇ ಅವರು ಮೋಹಿನಿಗೆ ಯಾವುದೇ ಅಪ್ರಿಯ ಮಾತನ್ನೂ ಆಡಲಿಲ್ಲ.॥23॥
(ಶ್ಲೋಕ-24)
ಮೂಲಮ್
ದೇವಲಿಂಗಪ್ರತಿಚ್ಛನ್ನಃ ಸ್ವರ್ಭಾನುರ್ದೇವಸಂಸದಿ ।
ಪ್ರವಿಷ್ಟಃ ಸೋಮಮಪಿಬಚ್ಚಂದ್ರಾರ್ಕಾಭ್ಯಾಂ ಚ ಸೂಚಿತಃ ॥
ಅನುವಾದ
ಭಗವಂತನು ದೇವತೆಗಳಿಗೆ ಅಮೃತವನ್ನು ಕುಡಿಸುತ್ತಿರುವಾಗ ಸ್ವರ್ಭಾನು (ರಾಹು) ಎಂಬ ದಾನವನು ದೇವತೆಗಳ ವೇಷವನ್ನು ತೊಟ್ಟು ಅವರ ಸಾಲಿನಲ್ಲಿ ಬಂದು ಕುಳಿತಿದ್ದನು. ದೇವತೆಗಳೊಂದಿಗೆ ಅವನೂ ಅಮೃತವನ್ನು ಕುಡಿದು ಬಿಟ್ಟನು. ಆದರೆ ಒಡನೆಯೇ ಸೂರ್ಯ-ಚಂದ್ರರು ಅವನ ಕಪಟವನ್ನು ಬಯಲು ಗೊಳಿಸಿದರು.॥24॥
(ಶ್ಲೋಕ-25)
ಮೂಲಮ್
ಚಕ್ರೇಣ ಕ್ಷುರಧಾರೇಣ ಜಹಾರ ಪಿಬತಃ ಶಿರಃ ।
ಹರಿಸ್ತಸ್ಯ ಕಬಂಧಸ್ತು ಸುಧಯಾಪ್ಲಾವಿತೋಪತತ್ ॥
ಅನುವಾದ
ಅಮೃತವನ್ನು ಕುಡಿಸುತ್ತಿರುವಾಗಲೇ ಭಗವಂತನು ತನ್ನ ತೀಕ್ಷ್ಣವಾದ ಸುದರ್ಶನ ಚಕ್ರದಿಂದ ಅವನ ತಲೆಯನ್ನು ತರಿದನು. ಆ ವೇಳೆಗೆ ಅಮೃತವು ಗಂಟಲಿನಿಂದ ಕೆಳಗೆ ಹೋಗದಿರುವುದರಿಂದ ಕಬಂಧವು (ತಲೆಯಿಲ್ಲದ ಶರೀರವು) ಬಿದ್ದುಹೋಯಿತು. ॥25॥
(ಶ್ಲೋಕ-26)
ಮೂಲಮ್
ಶಿರಸ್ತ್ವಮರತಾಂ ನೀತಮಜೋ ಗ್ರಹಮಚೀಕ್ಲೃಪತ್ ।
ಯಸ್ತು ಪರ್ವಣಿ ಚಂದ್ರಾರ್ಕಾವಭಿಧಾವತಿ ವೈರಧೀಃ ॥
ಅನುವಾದ
ಆದರೆ ತಲೆಯು ಅಮರವಾಯಿತು. ಬ್ರಹ್ಮದೇವರು ಅವನನ್ನು ಗ್ರಹವನ್ನಾಗಿಸಿದರು. ಅದೇ ರಾಹುವು ಪರ್ವದಿನಗಳಲ್ಲಿ (ಗ್ರಹಣಗಳಲ್ಲಿ) ದ್ವೇಷಬುದ್ಧಿಯುಳ್ಳವನಾಗಿ ಸೂರ್ಯ-ಚಂದ್ರರನ್ನು ನುಂಗಲು ಹೋಗುತ್ತದೆ. ॥26॥
(ಶ್ಲೋಕ-27)
ಮೂಲಮ್
ಪೀತಪ್ರಾಯೇಮೃತೇ ದೇವೈರ್ಭಗವಾಲ್ಲೋಕಭಾವನಃ ।
ಪಶ್ಯತಾಮಸುರೇಂದ್ರಾಣಾಂ ಸ್ವಂ ರೂಪಂ ಜಗೃಹೇ ಹರಿಃ ॥
ಅನುವಾದ
ದೇವತೆಗಳು ಅಮೃತ ಪಾನಮಾಡಿದ ಬಳಿಕ ಸಮಸ್ತ ಲೋಕಗಳಿಗೆ ಜೀವನದಾನ ಮಾಡುವಂತಹ ಭಗವಂತನು ದೊಡ್ಡ-ದೊಡ್ಡ ದೈತ್ಯರ ಇದಿರಿನಲ್ಲೇ ಮೋಹಿನೀ ರೂಪವನ್ನು ತ್ಯಜಿಸಿ ನಿಜರೂಪವನ್ನು ತಾಳಿದನು. ॥27॥
(ಶ್ಲೋಕ-28)
ಮೂಲಮ್
ಏವಂ ಸುರಾಸುರಗಣಾಃ ಸಮದೇಶಕಾಲ-
ಹೇತ್ವರ್ಥಕರ್ಮಮತಯೋಪಿ ಲೇ ವಿಕಲ್ಪಾಃ ।
ತತ್ರಾಮೃತಂ ಸುರಗಣಾಃ ಲಮಂಜಸಾಪು-
ರ್ಯತ್ಪಾದಪಂಕಜರಜಃಶ್ರಯಣಾನ್ನ ದೈತ್ಯಾಃ ॥
ಅನುವಾದ
ಪರೀಕ್ಷಿತನೇ! ಹೀಗೆ ದೇವ-ದಾನವರು ಒಂದೇ ಕಡೆಯಲ್ಲಿ, ಒಂದೇ ಕಾಲದಲ್ಲಿ, ಅಮೃತ ರೂಪವಾದ ಒಂದೇ ಪ್ರಯೋಜನಕ್ಕಾಗಿ, ಒಂದೇ ವಸ್ತುವಿಗಾಗಿ, ಒಂದೇ ವಿಚಾರದಿಂದ, ಒಂದೇ ಕರ್ಮವನ್ನು ಮಾಡಿದ್ದರು; ಆದರೆ ಫಲದಲ್ಲಿ ದೊಡ್ಡ ಭೇದವೇ ಉಂಟಾಯಿತು. ಅವರಲ್ಲಿ ದೇವತೆಗಳು ತುಂಬಾ ಸುಲಭವಾಗಿ ತಮ್ಮ ಪರಿಶ್ರಮದ ಫಲ-ಅಮೃತವನ್ನು ಪಡೆದುಕೊಂಡರು. ಏಕೆಂದರೆ, ಅವರು ಭಗವಂತನ ಚರಣರಜವನ್ನು ಆಶ್ರಯಿಸಿದ್ದರು. ಆದರೆ ದೈತ್ಯರು ಭಗವಂತನನ್ನು ವಿರೋಧಿಸುವುದರಿಂದ ಅಮೃತದಿಂದ ವಂಚಿತರಾದರು. ॥28॥
(ಶ್ಲೋಕ-29)
ಮೂಲಮ್
ಯದ್ಯುಜ್ಯತೇಸುವಸುಕರ್ಮಮನೋವಚೋಭಿ-
ರ್ದೇಹಾತ್ಮಜಾದಿಷು ನೃಭಿಸ್ತದಸತ್ಪೃಥಕ್ತ್ವಾತ್ ।
ತೈರೇವ ಸದ್ಭವತಿ ಯತ್ಕ್ರಿಯತೇಪೃಥಕ್ತ್ವಾತ್
ಸರ್ವಸ್ಯ ತದ್ಭವತಿ ಮೂಲನಿಷೇಚನಂ ಯತ್ ॥
ಅನುವಾದ
ಮನುಷ್ಯನು ತನ್ನ ಪ್ರಾಣ, ಧನ, ಕರ್ಮ, ಮನಸ್ಸು, ಮಾತು ಮುಂತಾದವುಗಳಿಂದ ಶರೀರ ಮತ್ತು ಪುತ್ರಾದಿಗಳಿಗಾಗಿ ಮಾಡುವುದೆಲ್ಲವೂ ವ್ಯರ್ಥವೇ ಸರಿ. ಏಕೆಂದರೆ, ಅದರ ಮೂಲದಲ್ಲಿ ಭೇದಬುದ್ಧಿ ಇರುತ್ತದೆ. ಆದರೆ ಅದೇ ಪ್ರಾಣ ಮುಂತಾದ ವಸ್ತುಗಳಿಂದ ಭಗವಂತನಿಗಾಗಿ ಮಾಡಲಾಗುವುದೆಲ್ಲವೂ ಭೇದಭಾವದಿಂದ ರಹಿತವಾಗಿರುವುದರಿಂದ ತನ್ನ ಶರೀರ, ಪುತ್ರ ಮತ್ತು ಸಮಸ್ತ ಜಗತ್ತಿಗಾಗಿ ಸಫಲವಾಗಿ ಹೋಗುತ್ತದೆ. ವೃಕ್ಷದ ಬೇರುಗಳಿಗೆ ನೀರುಣಿಸಿದರೆ ಅದರ ಶಾಖೋಪಶಾಖೆಗಳಿಗೆ ನೀರುಸಿಗುವಂತೆ ಭಗವಂತನಿಗಾಗಿ ಕರ್ಮಮಾಡುವುದರಿಂದ ಅವು ಎಲ್ಲರಿಗಾಗಿ ಆಗಿ ಹೋಗುತ್ತವೆ. ॥29॥
ಅನುವಾದ (ಸಮಾಪ್ತಿಃ)
ಒಂಭತ್ತನೆಯ ಅಧ್ಯಾಯವು ಮುಗಿಯಿತು. ॥9॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ಅಮೃತಮಥನೇ ನವಮೋಽಧ್ಯಾಯಃ ॥9॥