೦೭

[ಏಳನೆಯ ಅಧ್ಯಾಯ]

ಭಾಗಸೂಚನಾ

ಸಮುದ್ರಮಂಥನದ ಪ್ರಾರಂಭ ಪರಶಿವನು ವಿಷವನ್ನು ಪಾನಮಾಡಿದುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ತೇ ನಾಗರಾಜಮಾಮಂತ್ರ್ಯ ಲಭಾಗೇನ ವಾಸುಕಿಮ್ ।
ಪರಿವೀಯ ಗಿರೌ ತಸ್ಮಿನ್ನೇತ್ರಮಬ್ಧಿಂ ಮುದಾನ್ವಿತಾಃ ॥

(ಶ್ಲೋಕ-2)

ಮೂಲಮ್

ಅರೇಭಿರೇ ಸುಸಂಯತ್ತಾ ಅಮೃತಾರ್ಥಂ ಕುರೂದ್ವಹ ।
ಹರಿಃ ಪುರಸ್ತಾಜ್ಜಗೃಹೇ ಪೂರ್ವಂ ದೇವಾಸ್ತತೋಭವನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ದೇವ-ದಾನವರು ವಾಸುಕಿಯ ಬಳಿಗೆ ಹೋಗಿ ನೀನು ಮಂದರ ಪರ್ವತವೆಂಬ ಕಡೆಗೋಲಿಗೆ ಹಗ್ಗವಾಗಬೇಕು. ಅಮೃತವನ್ನು ಕಡೆದ ನಂತರ ಅಮೃತದಲ್ಲಿ ನಿನಗೂ ಭಾಗವನ್ನು ಕೊಡುವೆವು ಎಂದು ಹೇಳಿ ಅವನನ್ನು ಒಪ್ಪಿಸಿದರು. ಸಂತೋಷಭರಿತರಾಗಿ ವಾಸುಕಿಯನ್ನು ಕರೆ ತಂದು ಮಂದರಪರ್ವತಕ್ಕೆ ಸುತ್ತಿದರು. ಅಮೃತವನ್ನು ಪಡೆಯಲಿಕ್ಕಾಗಿ ದೇವ-ದಾನವರು ಒಟ್ಟಾಗಿ ಸೇರಿ ಪ್ರಯತ್ನ ಪೂರ್ವಕ ಸಮುದ್ರವನ್ನು ಕಡೆಯಲು ಪ್ರಾರಂಭಿಸಿದರು. ಆಗ ಮೊಟ್ಟಮೊದಲಿಗೆ ಶ್ರೀಹರಿಯು ವಾಸುಕಿಯ ತಲೆಯ ಕಡೆ ಹಿಡಿದು ಕೊಂಡನು. ಅದರಿಂದ ದೇವತೆಗಳೂ ಅವನನ್ನೇ ಅನುಸರಿಸಿ ಅತ್ತಕಡೆಗೆ ಸೇರಿದರು. ॥1-2॥

(ಶ್ಲೋಕ-3)

ಮೂಲಮ್

ತನ್ನೈಚ್ಛನ್ ದೈತ್ಯಪತಯೋ ಮಹಾಪುರುಷಚೇಷ್ಟಿತಮ್ ।
ನ ಗೃಹ್ಣೀಮೋ ವಯಂ ಪುಚ್ಛಮಹೇರಂಗಮಮಂಗಲಮ್ ॥

ಅನುವಾದ

ಆದರೆ ಭಗವಂತನ ಈ ವ್ಯವಸ್ಥೆ ದೈತ್ಯಸೇನಾಪತಿಗಳಿಗೆ ಮೆಚ್ಚಿಗೆ ಯಾಗಲಿಲ್ಲ. ಅವರೆಂದರು ಬಾಲವಾದರೋ ಹಾವಿನ ಅಶುಭ ಅಂಗವಾಗಿದೆ. ನಾವು ಅದನ್ನು ಹಿಡಿಯುವುದಿಲ್ಲ. ॥3॥

(ಶ್ಲೋಕ-4)

ಮೂಲಮ್

ಸ್ವಾಧ್ಯಾಯಶ್ರುತಸಂಪನ್ನಾಃ ಪ್ರಖ್ಯಾತಾ ಜನ್ಮಕರ್ಮಭಿಃ ।
ಇತಿ ತೂಷ್ಣೀಂ ಸ್ಥಿತಾನ್ ದೈತ್ಯಾನ್ವಿಲೋಕ್ಯ ಪುರುಷೋತ್ತಮಃ ।
ಸ್ಮಯಮಾನೋ ವಿಸೃಜ್ಯಾಗ್ರಂ ಪುಚ್ಛಂ ಜಗ್ರಾಹ ಸಾಮರಃ ॥

ಅನುವಾದ

ನಾವು ವಿಧಿವತ್ತಾಗಿ ವೇದ-ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದೇವೆ. ಹಿರಿದಾದ ವಂಶದಲ್ಲಿ ನಾವು ಹುಟ್ಟಿದ್ದೇವೆ ಮತ್ತು ಪರಾಕ್ರಮದಿಂದ ದೊಡ್ಡ-ದೊಡ್ಡ ಕಾರ್ಯಗಳನ್ನು ಮಾಡಿದ್ದೇವೆ. ನಾವು ದೇವತೆಗಳಿಗಿಂತ ಯಾವುದರಲ್ಲಿ ಕಮ್ಮಿಯಾಗಿದ್ದೇವೆ. ಹೀಗೆ ಹೇಳಿ ಅವರು ಸುಮ್ಮನೆ ಒಂದೆಡೆ ನಿಂತುಕೊಂಡಿರಲು, ಭಗವಂತನು ಅವರ ಮನೋವೃತ್ತಿಯನ್ನು ಅರಿತು ಮುಗುಳ್ನಕ್ಕು ವಾಸುಕಿಯ ತಲೆಯನ್ನು ಬಿಟ್ಟು ದೇವತೆಗಳೊಂದಿಗೆ ಅದರ ಬಾಲವನ್ನು ಹಿಡಿದುಕೊಂಡನು. ॥4॥

(ಶ್ಲೋಕ-5)

ಮೂಲಮ್

ಕೃತಸ್ಥಾನವಿಭಾಗಾಸ್ತ ಏವಂ ಕಶ್ಯಪನಂದನಾಃ ।
ಮಮಂಥುಃ ಪರಮಾಯತ್ತಾ ಅಮೃತಾರ್ಥಂ ಪಯೋನಿಧಿಮ್ ॥

ಅನುವಾದ

ಹೀಗೆ ತಮ್ಮ-ತಮ್ಮ ಸ್ಥಾನಗಳನ್ನು ನಿಶ್ಚಯಿಸಿಕೊಂಡು ದೇವತೆಗಳು ಮತ್ತು ಅಸುರರು ಅಮೃತದ ಪ್ರಾಪ್ತಿಗಾಗಿ ಪೂರ್ಣತಯಾರಾಗಿ ಸಮುದ್ರವನ್ನು ಕಡೆಯಲು ಪ್ರಾರಂಭಿಸಿದರು. ॥5॥

(ಶ್ಲೋಕ-6)

ಮೂಲಮ್

ಮಥ್ಯಮಾನೇರ್ಣವೇ ಸೋದ್ರಿರನಾಧಾರೋ ಹ್ಯಪೋವಿಶತ್ ।
ಧ್ರಿಯಮಾಣೋಪಿ ಬಲಿಭಿರ್ಗೌರವಾತ್ಪಾಂಡುನಂದನ ॥

ಅನುವಾದ

ಪರೀಕ್ಷಿತನೇ! ಸಮುದ್ರಮಂಥನವು ಪ್ರಾರಂಭವಾಗುತ್ತಲೇ ಮಹಾಬಲಿಷ್ಠರಾದ ದೇವ-ದಾನವರು ಕಡೆಗೋಲನ್ನು ವಾಸುಕಿಯ ಮೂಲಕ ಭದ್ರವಾಗಿ ಹಿಡಿದುಕೊಂಡಿದ್ದರೂ ಪರ್ವತವು ಮಹಾಭಾರವಾದ್ದರಿಂದ ಹಾಗೂ ಅದಕ್ಕೆ ಕೆಳಗಡೆಯಲ್ಲಿ ಯಾವುದೇ ಆಧಾರವಿಲ್ಲದೇ ಇರುವುದರಿಂದ ಮಂದರಾಚಲವು ಸಮುದ್ರದಲ್ಲಿ ಮುಳುಗ ತೊಡಗಿತು. ॥6॥

(ಶ್ಲೋಕ-7)

ಮೂಲಮ್

ತೇ ಸುನಿರ್ವಿಣ್ಣಮನಸಃ ಪರಿಮ್ಲಾನಮುಖಶ್ರಿಯಃ ।
ಆಸನ್ಸ್ವಪೌರುಷೇ ನಷ್ಟೇ ದೈವೇನಾತಿಬಲೀಯಸಾ ॥

ಅನುವಾದ

ಹೀಗೆ ಅತ್ಯಂತ ಬಲಿಷ್ಠವಾದ ದೈವದಿಂದ ತಮ್ಮ ಪುರುಷಪ್ರಯತ್ನವೆಲ್ಲವೂ ನಷ್ಟವಾದುದನ್ನು ನೋಡಿ ಖೇದಗೊಂಡು ದೇವ-ದಾನವರ ಮುಖವು ಕಳೆಗುಂದಿತು. ॥7॥

(ಶ್ಲೋಕ-8)

ಮೂಲಮ್

ವಿಲೋಕ್ಯ ವಿಘ್ನೇಶವಿಧಿಂ ತದೇಶ್ವರೋ
ದುರಂತವೀರ್ಯೋವಿತಥಾಭಿಸಂಧಿಃ ।
ಕೃತ್ವಾ ವಪುಃ ಕಾಚ್ಛಪಮದ್ಭುತಂ ಮಹ-
ತ್ಪ್ರವಿಶ್ಯ ತೋಯಂ ಗಿರಿಮುಜ್ಜಹಾರ ॥

ಅನುವಾದ

ಇದಾದರೋ ವಿಘ್ನೇಶ್ವರನ ಕಾರ್ಯರೂಪವಾದ ವಿಘ್ನವನ್ನು ನೋಡಿದ ಭಗವಂತನು ಅದನ್ನು ನಿವಾರಿಸುವ ಉಪಾಯವನ್ನು ಯೋಚಿಸಿ ಆಗ ಅತ್ಯಂತ ವಿಶಾಲವೂ, ವಿಚಿತ್ರವೂ ಆದ ಕೂರ್ಮ(ಆಮೆ)ರೂಪವನ್ನು ಧರಿಸಿ ಸಮುದ್ರ ಜಲದಲ್ಲಿ ಮುಳುಗಿ ಮಂದರಾಚಲವನ್ನು ಮೇಲಕ್ಕೆತ್ತಿದನು. ಭಗವಂತನ ಶಕ್ತಿ ಅನಂತವಾಗಿದೆ. ಅವನು ಸತ್ಯಸಂಕಲ್ಪನಾಗಿರುವನು. ಅವನಿಗೆ ಇದು ಯಾವ ಮಹಾದೊಡ್ಡ ಕೆಲಸ? ॥8॥

(ಶ್ಲೋಕ-9)

ಮೂಲಮ್

ತಮುತ್ಥಿತಂ ವೀಕ್ಷ್ಯ ಕುಲಾಚಲಂ ಪುನಃ
ಸಮುತ್ಥಿತಾ ನಿರ್ಮಥಿತುಂ ಸುರಾಸುರಾಃ ।
ದಧಾರ ಪೃಷ್ಠೇನ ಸ ಲಕ್ಷಯೋಜನ-
ಪ್ರಸ್ತಾರಿಣಾ ದ್ವೀಪ ಇವಾಪರೋ ಮಹಾನ್ ॥

ಅನುವಾದ

ಮಂದರ ಪರ್ವತವು ಮೇಲಕ್ಕೆ ಬಂದುದನ್ನು ನೋಡಿ ದೇವಾಸುರರು ಪುನಃ ಸಮುದ್ರ ಮಂಥನಕ್ಕಾಗಿ ಸಿದ್ಧರಾದರು. ಆಗ ಭಗವಂತನು ಜಂಬೂದ್ವೀಪದಂತೆ ಒಂದು ಲಕ್ಷಯೋಜನ ವಿಸ್ತಾರವಾದ ತನ್ನ ಬೆನ್ನಮೇಲೆ ಮಂದ ರಾಚಲವನ್ನು ಧರಿಸಿಕೊಂಡಿದ್ದನು. ॥9॥

ಮೂಲಮ್

(ಶ್ಲೋಕ-10)
ಸುರಾಸುರೇಂದ್ರೈರ್ಭುಜವೀರ್ಯವೇಪಿತಂ
ಪರಿಭ್ರಮಂತಂ ಗಿರಿಮಂಗ ಪೃಷ್ಠತಃ ।
ಬಿಭ್ರತ್ತದಾವರ್ತನಮಾದಿಕಚ್ಛಪೋ
ಮೇನೇಂಗಕಂಡೂಯನಮಪ್ರಮೇಯಃ ॥

ಅನುವಾದ

ರಾಜೇಂದ್ರ! ಮಹಾಪರಾಕ್ರಮಿಗಳಾದ ದೇವ-ದಾನವರು ತಮ್ಮ ಭುಜ ಬಲದಿಂದ ಮಂದರಾಚಲವನ್ನು ಕಡೆದಾಗ ಅದು ಭಗವಂತನ ಬೆನ್ನಿನ ಮೇಲೆ ತಿರುಗತೊಡಗಿತು. ಅಪ್ರಮೇಯ ಆದಿಕಚ್ಛಪ ಭಗವಂತನಿಗೆ ಆ ಪರ್ವತವು ಗಿರ-ಗಿರನೆ ತಿರುಗುತ್ತಿರುವಾಗ ಯಾರೋ ತನ್ನ ಬೆನ್ನನ್ನು ತುರಿಸುತ್ತಿರುವರೋ ಎಂದೆನಿಸಿತು. ॥10॥

(ಶ್ಲೋಕ-11)

ಮೂಲಮ್

ತಥಾಸುರಾನಾವಿಶದಾಸುರೇಣ
ರೂಪೇಣ ತೇಷಾಂ ಬಲವೀರ್ಯಮೀರಯನ್ ।
ಉದ್ದೀಪಯನ್ ದೇವಗಣಾಂಶ್ಚ ವಿಷ್ಣು-
ರ್ದೈವೇನ ನಾಗೇಂದ್ರಮಬೋಧರೂಪಃ ॥

ಅನುವಾದ

ಜೊತೆಗೆ ಸಮುದ್ರ ಮಂಥನವನ್ನು ಸಂಪನ್ನವಾಗಿಸಲು ಭಗವಂತನು ಅಸುರರಲ್ಲಿ ಅವರ ಶಕ್ತಿ-ಬಲಗಳನ್ನು ಹೆಚ್ಚಿಸಲೋಸುಗ ಅಸುರರೂಪದಿಂದ ಪ್ರವೇಶಿಸಿದನು. ಹಾಗೆಯೇ ದೇವತೆಗಳನ್ನು ಪ್ರೋತ್ಸಾ ಹಿಸಲಿಕ್ಕಾಗಿ ಅವರಲ್ಲಿ ದೇವತಾರೂಪದಿಂದ ಪ್ರವೇಶಿಸಿದನು ಹಾಗೂ ವಾಸುಕಿಯಲ್ಲಿ ನಿದ್ರಾರೂಪದಿಂದ ಪ್ರವೇಶಿಸಿದನು. ॥11॥

(ಶ್ಲೋಕ-12)

ಮೂಲಮ್

ಉಪರ್ಯಗೇಂದ್ರಂ ಗಿರಿರಾಡಿವಾನ್ಯ
ಆಕ್ರಮ್ಯ ಹಸ್ತೇನ ಸಹಸ್ರಬಾಹುಃ ।
ತಸ್ಥೌ ದಿವಿ ಬ್ರಹ್ಮಭವೇಂದ್ರಮುಖ್ಯೈ-
ರಭಿಷ್ಟುವದ್ಭಿಃ ಸುಮನೋಭಿವೃಷ್ಟಃ ॥

ಅನುವಾದ

ಇತ್ತ ಮಂದರಪರ್ವತದ ತುದಿಯಲ್ಲಿ ಇನ್ನೊಂದು ಪರ್ವತದಂತೆ ಸಹಸ್ರ ಬಾಹುವಾದ ಭಗವಂತನು ತನ್ನ ಕೈಗಳಿಂದ ಅದನ್ನು ಒತ್ತಿಹಿಡಿದು ಸ್ಥಿತನಾದನು. ಆ ಸಮಯದಲ್ಲಿ ಬ್ರಹ್ಮ-ರುದ್ರ-ಇಂದ್ರರೇ ಮುಂತಾದವರು ಅವನನ್ನು ಸ್ತುತಿಸುತ್ತಾ ಅವನ ಮೇಲೆ ಹೂಮಳೆಯನ್ನು ಸುರಿಸಿದರು. ॥12॥

(ಶ್ಲೋಕ-13)

ಮೂಲಮ್

ಉಪರ್ಯಧಶ್ಚಾತ್ಮನಿ ಗೋತ್ರನೇತ್ರಯೋಃ
ಪರೇಣ ತೇ ಪ್ರಾವಿಶತಾ ಸಮೇಧಿತಾಃ ।
ಮಮಂಥುರಬ್ಧಿಂ ತರಸಾ ಮದೋತ್ಕಟಾ
ಮಹಾದ್ರಿಣಾ ಕ್ಷೋಭಿತನಕ್ರಚಕ್ರಮ್ ॥

ಅನುವಾದ

ಹೀಗೆ ಭಗವಂತನು ಪರ್ವತದ ಮೇಲ್ಗಡೆಯಿಂದ ಅದನ್ನು ಒತ್ತಿಹಿಡಿದ ರೂಪದಿಂದ, ಕೆಳಗಡೆಯಿಂದ ಅದಕ್ಕೆ ಆಧಾರವಾಗಿ ಕೂರ್ಮರೂಪದಿಂದ, ದೇವತೆಗಳ ಮತ್ತು ಅಸುರರ ಶರೀರಗಳಲ್ಲಿ ಅವರ ಶಕ್ತಿರೂಪದಿಂದ, ಪರ್ವತದಲ್ಲಿ ದೃಢತೆಯ ರೂಪದಿಂದ, ಕಡೆಯುವ ಹಗ್ಗವಾದ ವಾಸುಕಿಯಲ್ಲಿ ಅವನಿಗೆ ಕಷ್ಟವಾಗದಿರಲೆಂದು ನಿದ್ರೆಯ ರೂಪದಿಂದ ಪ್ರವೇಶಮಾಡಿ ಎಲ್ಲ ಕಡೆಯಿಂದ, ಎಲ್ಲರನ್ನು ಶಕ್ತಿಸಂಪನ್ನವಾಗಿಸಿದನು. ಆಗ ಅವರು ತಮ್ಮ ಬಲದಿಂದ ಉನ್ಮತ್ತರಾಗಿ ಮಂದರಾಚಲದಿಂದ ಅತ್ಯಂತ ವೇಗದಿಂದ ಸಮುದ್ರವನ್ನು ಕಡೆಯತೊಡಗಿದರು. ಇದರ ಪರಿಣಾಮವಾಗಿ ಸಮುದ್ರದಲ್ಲಿ ವಾಸಿಸುತ್ತಿದ್ದ ಮೀನು ಮೊಸಳೆಯೇ ಮುಂತಾದವುಗಳು ಕಳವಳಗೊಂಡವು. ॥13॥

(ಶ್ಲೋಕ-14)

ಮೂಲಮ್

ಅಹೀಂದ್ರಸಾಹಸ್ರಕಠೋರದೃಙ್ಮುಖ-
ಶ್ವಾಸಾಗ್ನಿಧೂಮಾಹತವರ್ಚಸೋಸುರಾಃ ।
ಪೌಲೋಮಕಾಲೇಯಬಲೀಲ್ವಲಾದಯೋ
ದವಾಗ್ನಿದಗ್ಧಾಃ ಸರಲಾ ಇವಾಭವನ್ ॥

ಅನುವಾದ

ಆಗ ನಾಗರಾಜನಾದ ವಾಸುಕಿಯ ಕಠೋರವಾದ ಸಾವಿರಾರು ಕಣ್ಣುಗಳಿಂದಲೂ, ಮುಖಗಳಿಂದಲೂ, ನಿಟ್ಟು ಸಿರಿನಿಂದಲೂ ವಿಷದ ಜ್ವಾಲೆಗಳು ಹೊರಹೊಮ್ಮತೊಡಗಿದವು. ಇದರ ಹೊಗೆಯಿಂದ ಮುಖದ ಭಾಗವನ್ನೇ ಹಿಡಿದುಕೊಂಡಿದ್ದ ಪೌಲೋಮ, ಕಾಲೇಯ, ಬಲಿ, ಇಲ್ವಲ ಮುಂತಾದ ಅಸುರರು ನಿಸ್ತೇಜರಾದರು. ಆಗ ಅವರು ಕಾಡುಗಿಚ್ಚಿನಿಂದ ಬೆಂದುಹೋದ ಸಾಲವೃಕ್ಷಗಳಂತೆ ಕಂಡು ಬರುತ್ತಿದ್ದರು. ॥14॥

(ಶ್ಲೋಕ-15)

ಮೂಲಮ್

ದೇವಾಂಶ್ಚ ತಚ್ಛ್ವಾಸಶಿಖಾಹತಪ್ರಭಾನ್
ಧೂಮ್ರಾಂಬರಸ್ರಗ್ವರಕಂಚುಕಾನನಾನ್ ।
ಸಮಭ್ಯವರ್ಷನ್ಭಗವದ್ವಶಾ ಘನಾ
ವವುಃ ಸಮುದ್ರೋರ್ಮ್ಯುಪಗೂಢವಾಯವಃ ॥

ಅನುವಾದ

ದೇವತೆಗಳೂ ಕೂಡ ಅದರಿಂದ ತಪ್ಪಿಸಿಕೊಳ್ಳಲಾರದೆ ಹೋದರು. ವಾಸುಕಿಯ ಶ್ವಾಸದ ವಿಷಜ್ವಾಲೆಗಳಿಂದ ಅವರ ತೇಜವೂ ಕಳೆಗುಂದಿತು. ವಸ್ತ್ರಗಳು, ಮಾಲೆಗಳು, ಕವಚಗಳು ಹಾಗೂ ಮುಖಗಳೂ ಹೊಗೆಯಿಂದ ಕಪ್ಪಿಟ್ಟವು. ಅವರ ಈ ದುಃಸ್ಥಿತಿಯನ್ನು ಕಂಡು ಭಗವಂತನ ಪ್ರೇರಣೆಯಿಂದ ಮೋಡಗಳು ದೇವತೆಗಳ ಮೇಲೆ ಮಳೆಗರೆಯತೊಡಗಿದವು. ವಾಯುವು ಸಮುದ್ರದ ತರಂಗಗಳ ಮೇಲಿಂದ ಬೀಸುತ್ತಾ ತಂಪನ್ನೂ ಸುಗಂಧವನ್ನೂ ನೀಡಿದನು. ॥15॥

(ಶ್ಲೋಕ-16)

ಮೂಲಮ್

ಮಥ್ಯಮಾನಾತ್ತಥಾ ಸಿಂಧೋರ್ದೇವಾಸುರವರೂಥಪೈಃ ।
ಯದಾ ಸುಧಾ ನ ಜಾಯೇತ ನಿರ್ಮಮಂಥಾಜಿತಃ ಸ್ವಯಮ್ ॥

ಅನುವಾದ

ಹೀಗೆ ದೇವಾಸುರರು ಸಮುದ್ರಮಥನವನ್ನು ಮುಂದು ವರಿಸಿದರೂ ಅಮೃತವು ಬಾರದಿರಲು ಭಗವಂತನಾದ ಅಜಿತನೇ ಸಮುದ್ರವನ್ನು ಕಡೆಯಲು ಪ್ರಾರಂಭಿಸಿದನು. ॥16॥

(ಶ್ಲೋಕ-17)

ಮೂಲಮ್

ಮೇಘಶ್ಯಾಮಃ ಕನಕಪರಿಧಿಃ ಕರ್ಣವಿದ್ಯೋತವಿದ್ಯು-
ನ್ಮೂರ್ಧ್ನಿ ಭ್ರಾಜದ್ವಿಲುಲಿತಕಚಃ ಸ್ರಗ್ಧರೋ ರಕ್ತನೇತ್ರಃ ।
ಜೈತ್ರೈರ್ದೋರ್ಭಿರ್ಜಗದಭಯದೈರ್ದಂದಶೂಕಂ ಗೃಹೀತ್ವಾ
ಮಥ್ನನ್ಮಥ್ನಾ ಪ್ರತಿಗಿರಿರಿವಾಶೋಭತಾಥೋ ಧೃತಾದ್ರಿಃ ॥

ಅನುವಾದ

ಆಗ ಮೇಘಶ್ಯಾಮನಾದ ಭಗವಂತನು ಚಿನ್ನದ ಬಣ್ಣದ ಪೀತಾಂಬರವನ್ನು ಉಟ್ಟಿದ್ದನು. ಅವನ ಕಿವಿಗಳಲ್ಲಿ ಮಿಂಚಿನಂತೆ ಹೊಳೆಯುವ ಕುಂಡಲಗಳಿದ್ದವು. ತಲೆಯಲ್ಲಿ ಹೊಳೆಯುತ್ತಿದ್ದು ಹಾರಾಡುವ ಗುಂಗುರಕೂದಲುಗಳಿದ್ದವು. ಕಮನೀಯ ಕಣ್ಣುಗಳು ಕೆಂಬಣ್ಣದಿಂದ ಕೂಡಿದ್ದವು. ಕೊರಳಲ್ಲಿ ವನಮಾಲೆಯು ಶೋಭಿಸುತ್ತಿತ್ತು. ಸಮಸ್ತ ಜಗತ್ತಿಗೆ ಅಭಯದಾನವನ್ನೀಯುವ ಭುಜದಂಡಗಳು ವಾಸುಕಿಯನ್ನು ಹಿಡಿದುಕೊಂಡು, ಕೂರ್ಮರೂಪದಿಂದ ಪರ್ವತವನ್ನು ಹೊತ್ತುಕೊಂಡು, ಭಗವಂತನು ಮಂದರಾಚಲವೆಂಬ ಕಡೆಗೋಲಿನಿಂದ ಸಮುದ್ರವನ್ನು ಕಡೆಯುತ್ತಿರುವಾಗ ಅವನು ಇನ್ನೊಂದು ಪರ್ವತದಂತೆ ಅತ್ಯಂತ ಸುಂದರ ವಾಗಿ ಕಾಣುತ್ತಿದ್ದನು. ॥17॥

(ಶ್ಲೋಕ-18)

ಮೂಲಮ್

ನಿರ್ಮಥ್ಯಮಾನಾದುದಧೇರಭೂದ್ವಿಷಂ
ಮಹೋಲ್ಬಣಂ ಹಾಲಹಲಾಹ್ವಮಗ್ರತಃ ।
ಸಂಭ್ರಾಂತ ಮೀನೋನ್ಮಕರಾಹಿಕಚ್ಛಪಾತ್
ತಿಮಿದ್ವಿಪಗ್ರಾಹತಿಮಿಂಗಿಲಾಕುಲಾತ್ ॥

ಅನುವಾದ

ಅಜಿತ ಭಗವಂತನು ಹೀಗೆ ಸಮುದ್ರವನ್ನು ಕಡೆಯುವಾಗ ಸಮುದ್ರದಲ್ಲಿ ಕೋಲಾಹಲ ವುಂಟಾಗಿ, ಮೀನು, ಮೊಸಳೆ, ಹಾವುಗಳು, ಆಮೆಗಳು ಭಯಗೊಂಡು ಮೇಲಕ್ಕೆ ಬಂದು ಅತ್ತ-ಇತ್ತ ಓಡತೊಡಗಿದವು. ತಿಮಿ-ತಿಮಿಂಗಿಲಗಳು ಮುಂತಾದ ಮೀನುಗಳೂ, ನೀರಾನೆಗಳೂ, ಮೊಸಳೆಗಳೂ ತಳಮಳಗೊಂಡವು. ಅದೇ ಸಮಯಕ್ಕೆ ಆ ಕ್ಷೀರಸಾಗರದಿಂದ ಮೊಟ್ಟಮೊದಲು ಹಾಲಾಹಲವೆಂಬ ಅತ್ಯಂತ ಉಗ್ರವಾದ ವಿಷವು ಹೊರಟಿತು.॥18॥

(ಶ್ಲೋಕ-19)

ಮೂಲಮ್

ತದುಗ್ರವೇಗಂ ದಿಶಿ ದಿಶ್ಯುಪರ್ಯಧೋ
ವಿಸರ್ಪದುತ್ಸರ್ಪದಸಹ್ಯಮಪ್ರತಿ ।
ಭೀತಾಃ ಪ್ರಜಾ ದುದ್ರುವುರಂಗ ಸೇಶ್ವರಾ
ಅರಕ್ಷ್ಯಮಾಣಾಃ ಶರಣಂ ಸದಾಶಿವಮ್ ॥

ಅನುವಾದ

ಮಹಾಘೋರವಾದ ಆ ಹಾಲಾಹಲ ಮಹಾವಿಷವು ದಿಕ್ಕುಗಳಲ್ಲಿಯೂ, ಉಪದಿಕ್ಕುಗಳಲ್ಲಿಯೂ, ಭೂಮ್ಯಂತರಿಕ್ಷಗಳಲ್ಲಿಯೂ ಸರ್ವತ್ರ ವ್ಯಾಪಿಸತೊಡಗಿತು. ಸಹಿಸಲು ಅಶಕ್ಯವಾದ ಆ ವಿಷದ ಜ್ಞಾಲೆಯಿಂದ ಭಯಗೊಂಡ ಪ್ರಜೆಗಳೂ, ಪ್ರಜಾಪತಿಗಳೂ ಬೇರೆ ಯಾರೂ ರಕ್ಷಕರಿಲ್ಲದಿರಲು ಭಗವಾನ್ ಸದಾಶಿವನಿಗೆ ಶರಣುಹೋದರು. ॥19॥

(ಶ್ಲೋಕ-20)

ಮೂಲಮ್

ವಿಲೋಕ್ಯ ತಂ ದೇವವರಂ ತ್ರಿಲೋಕ್ಯಾ
ಭವಾಯ ದೇವ್ಯಾಭಿಮತಂ ಮುನೀನಾಮ್ ।
ಆಸೀನಮದ್ರಾವಪವರ್ಗಹೇತೋ-
ಸ್ತಪೋ ಜುಷಾಣಂ ಸ್ತುತಿಭಿಃ ಪ್ರಣೇಮುಃ ॥

ಅನುವಾದ

ಭಗವಾನ್ ಸದಾಶಿವನು ಪಾರ್ವತೀದೇವಿಯೊಡನೆ ಕೈಲಾಸದಲ್ಲಿ ವಿರಾಜಮಾನನಾಗಿದ್ದನು. ದೊಡ್ಡ-ದೊಡ್ಡ ಋಷಿ-ಮುನಿಗಳು ಅವನನ್ನು ಸೇವಿಸುತ್ತಿದ್ದರು. ಅವನು ಅಲ್ಲಿ ಮೂರು ಲೋಕಗಳ ಅಭ್ಯುದಯಕ್ಕಾಗಿ ಹಾಗೂ ಮೋಕ್ಷಕ್ಕಾಗಿ ತಪಸ್ಸು ಮಾಡುತ್ತಿದ್ದನು. ಅಂತಹ ಪರಮೇಶ್ವರನನ್ನು ಪ್ರಜಾಪತಿಗಳು ದರ್ಶಿಸುತ್ತಾ, ಸ್ತುತಿಸುತ್ತಾ ಸಾಷ್ಟಾಂಗ ಪ್ರಣಾಮ ಮಾಡಿದರು. ॥20॥

(ಶ್ಲೋಕ-21)

ಮೂಲಮ್ (ವಾಚನಮ್)

ಪ್ರಜಾಪತಯ ಊಚುಃ

ಮೂಲಮ್

ದೇವದೇವ ಮಹಾದೇವ ಭೂತಾತ್ಮನ್ ಭೂತಭಾವನ ।
ತ್ರಾಹಿ ನಃ ಶರಣಾಪನ್ನಾಂಸೈಲೋಕ್ಯದಹನಾದ್ವಿಷಾತ್ ॥

ಅನುವಾದ

ಪ್ರಜಾಪತಿಗಳು ಭಗವಾನ್ ಶಂಕರನನ್ನು ಸ್ತುತಿಸುತ್ತಿದ್ದಾರೆ ಓ ದೇವದೇವನೇ! ಮಹಾದೇವನೇ! ಸಕಲ ಪ್ರಾಣಿಗಳಲ್ಲಿಯೂ ಆತ್ಮರೂಪದಲ್ಲಿರುವವನೇ! ಪ್ರಾಣಿಗಳನ್ನು ಸೃಷ್ಟಿಸುವವನೇ! ಮೂರು ಲೋಕಗಳನ್ನೂ ಸುಡುತ್ತಿರುವ ಈ ಮಹಾವಿಷದಿಂದ ಶರಣಾಗತರಾಗಿರುವ ನಮ್ಮನ್ನು ರಕ್ಷಿಸು. ॥21॥

(ಶ್ಲೋಕ-22)

ಮೂಲಮ್

ತ್ವಮೇಕಃ ಸರ್ವಜಗತ ಈಶ್ವರೋ ಬಂಧಮೋಕ್ಷಯೋಃ ।
ತಂ ತ್ವಾಮರ್ಚಂತಿ ಕುಶಲಾಃ ಪ್ರಪನ್ನಾರ್ತಿಹರಂ ಗುರುಮ್ ॥

ಅನುವಾದ

ಪರಮೇಶ್ವರನೇ! ಸಮಸ್ತ ಲೋಕಗಳ, ಪ್ರಾಣಿಗಳ ಬಂಧನ ಮತ್ತು ಮೋಕ್ಷಕ್ಕೆ ನೀನೊಬ್ಬನೇ ಒಡೆಯನು. ಆದ್ದರಿಂದ ಕುಶಲಮತಿಗಳಾದರೂ ಶರಣಾಗತರ ಕಷ್ಟಗಳನ್ನು ಪರಿಹರಿಸುವ ಲೋಕಗುರುವಾದ ನಿನ್ನನ್ನೇ ಆರಾಧಿಸುತ್ತಾರೆ. ॥22॥

(ಶ್ಲೋಕ-23)

ಮೂಲಮ್

ಗುಣಮಯ್ಯಾ ಸ್ವಶಕ್ತ್ಯಾಸ್ಯ ಸರ್ಗಸ್ಥಿತ್ಯಪ್ಯಯಾನ್ವಿಭೋ ।
ಧತ್ಸೇ ಯದಾ ಸ್ವದೃಗ್ಭೂಮನ್ಬ್ರಹ್ಮವಿಷ್ಣುಶಿವಾಭಿಧಾಮ್ ॥

ಅನುವಾದ

ಪ್ರಭೋ! ನಿನ್ನ ಗುಣಮಯ ಶಕ್ತಿಯಿಂದ ಈ ಜಗತ್ತಿನ ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಮಾಡುವುದಕ್ಕಾಗಿ ನೀನು ಅನಂತನೂ, ಏಕರಸನೂ ಆಗಿದ್ದರೂ ಬ್ರಹ್ಮಾ, ವಿಷ್ಣು, ಶಿವ ಮುಂತಾದ ನಾಮಗಳನ್ನು ಧರಿಸಿಕೊಂಡಿರುವೆ. ॥23॥

(ಶ್ಲೋಕ-24)

ಮೂಲಮ್

ತ್ವಂ ಬ್ರಹ್ಮ ಪರಮಂ ಗುಹ್ಯಂ ಸದಸದ್ಭಾವಭಾವನಃ ।
ನಾನಾಶಕ್ತಿಭಿರಾಭಾತಸ್ತ್ವಮಾತ್ಮಾ ಜಗದೀಶ್ವರಃ ॥

ಅನುವಾದ

ದೇವದೇವನೇ! ನೀನು ಅತಿ ಗುಹ್ಯವಾದ ಬ್ರಹ್ಮತತ್ತ್ವವೇ ಆಗಿರುವೆ. ಕಾರ್ಯ-ಕಾರಣ ರೂಪದಿಂದ ದೇವತೆಗಳನ್ನೂ, ಮನುಷ್ಯರನ್ನೂ, ಪಶುಪಕ್ಷಿಗಳನ್ನೂ ಸೃಷ್ಟಿಸಿ ಪೋಷಿಸುವವನೂ ನೀನೇ ಆಗಿರುವೆ. ಅನೇಕ ಶಕ್ತಿಗಳ ರೂಪದಲ್ಲಿಯೂ ಕಾಣಿಸಿಕೊಳ್ಳುವೆ. ಸಕಲ ಪ್ರಾಣಿಗಳ ಆತ್ಮಸ್ವರೂಪನೂ ಆಗಿರುವ ನೀನು ಜಗದೀಶ್ವರನೂ ಆಗಿರುವೆ. ॥24॥

(ಶ್ಲೋಕ-25)

ಮೂಲಮ್

ತ್ವಂ ಶಬ್ದಯೋನಿರ್ಜಗದಾದಿರಾತ್ಮಾ
ಪ್ರಾಣೇಂದ್ರಿಯದ್ರವ್ಯಗುಣಸ್ವಭಾವಃ ।
ಕಾಲಃ ಕ್ರತುಃ ಸತ್ಯಮೃತಂ ಚ ಧರ್ಮ-
ಸ್ತ್ವಯ್ಯಕ್ಷರಂ ಯತಿವೃದಾಮನಂತಿ ॥

ಅನುವಾದ

ಮಹಾದೇವನೇ! ಸಮಸ್ತ ವೇದಗಳು ನಿನ್ನಿಂದಲೇ ಪ್ರಕಟವಾಗಿವೆ. ಅದರಿಂದ ನೀನು ಸಮಸ್ತ ಜ್ಞಾನ ಗಳಿಗೂ ಮೂಲಸ್ರೋತನಾಗಿ ಜ್ಞಾನಸ್ವರೂಪನೇ ಆಗಿರುವೆ. ಜಗತ್ತಿನ ಆದಿಕಾರಣ ಮಹತ್ತತ್ತ್ವ ಮತ್ತು ತ್ರಿವಿಧ ಅಹಂಕಾರವೂ ನೀನೇ ಆಗಿರುವೆ. ಪ್ರಾಣ, ಇಂದ್ರಿಯಗಳು, ಪಂಚಭೂತಗಳು ಹಾಗೂ ಶಬ್ದಾದಿ ವಿಷಯಗಳ ಬೇರೆ-ಬೇರೆ ಸ್ವಭಾವಗಳೂ, ಮೂಲಕಾರಣವೂ ನೀನೇ ಆಗಿರುವೆ. ಪ್ರಾಣಿಗಳನ್ನು ವೃದ್ಧಿಗೊಳಿಸುವ ಮತ್ತು ವಿನಾಶಗೊಳಿಸುವ ಕಾಲನೂ ನೀನೇ ಆಗಿರುವೆ. ಪ್ರಾಣಿಗಳಿಗೆ ಕಲ್ಯಾಣವನ್ನುಂಟು ಮಾಡುವ ಯಜ್ಞಸ್ವರೂಪನೂ ನೀನೇ. ಸತ್ಯ ಮತ್ತು ಋತಗಳೂ ನೀನೇ. ಧರ್ಮವೆಂಬುದು ನಿನ್ನ ಸ್ವರೂಪವೇ ಆಗಿದೆ. ಅ-ಉ-ಮ-ಈ ಮೂರು ಅಕ್ಷರಗಳಿಂದ ಯುಕ್ತವಾದ ಓಂಕಾರಸ್ವರೂಪನೂ ನೀನೇ. ತ್ರಿಗುಣಾತ್ಮಕವಾದ ಪ್ರಕೃತಿಯೂ ನೀನೇ. ಹೀಗೆ ವೇದವಾದಿಗಳಾದ ಮಹಾತ್ಮರು ನಿನ್ನ ಗುಣಗಾನ ಮಾಡುತ್ತಾರೆ. ॥25॥

(ಶ್ಲೋಕ-26)

ಮೂಲಮ್

ಅಗ್ನಿರ್ಮುಖಂ ತೇಖಿಲದೇವತಾತ್ಮಾ
ಕ್ಷಿತಿಂ ವಿದುರ್ಲೋಕಭವಾಂಘ್ರಿಪಂಕಜಮ್ ।
ಕಾಲಂ ಗತಿಂ ತೇಖಿಲದೇವತಾತ್ಮನೋ
ದಿಶಶ್ಚ ಕರ್ಣೌ ರಸನಂ ಜಲೇಶಮ್ ॥

ಅನುವಾದ

ಮೂರು ಲೋಕಗಳಿಗೂ ಅಭ್ಯುದಯವನ್ನು ಮಾಡುವ ಶಂಕರನೇ! ಸರ್ವ ದೇವ ಸ್ವರೂಪನಾದ ಅಗ್ನಿಯು ನಿನಗೆ ಮುಖವಾಗಿದ್ದಾನೆ. ಈ ಭೂಮಂಡಲವು ನಿನ್ನ ಚರಣಕಮಲವಾಗಿದೆ. ನೀನು ಸಕಲ ದೇವತಾಸ್ವರೂಪನಾಗಿರುವೆ. ಈ ಕಾಲವೇ ನಿನ್ನ ಗತಿಯಾಗಿದೆ. ದಿಕ್ಕುಗಳೇ ನಿನ್ನ ಕಿವಿಗಳಾಗಿವೆ. ವರುಣನೇ ನಿನ್ನ ರಸನೇಂದ್ರಿಯನಾಗಿದ್ದಾನೆ. ॥26॥

(ಶ್ಲೋಕ-27)

ಮೂಲಮ್

ನಾಭಿರ್ನಭಸ್ತೇ ಶ್ವಸನಂ ನಭಸ್ವಾ-
ನ್ಸೂರ್ಯಶ್ಚ ಚಕ್ಷೂಂಷಿ ಜಲಂ ಸ್ಮ ರೇತಃ ।
ಪರಾವರಾತ್ಮಾಶ್ರಯಣಂ ತವಾತ್ಮಾ
ಸೋಮೋ ಮನೋ ದ್ಯೌರ್ಭಗವನ್ ಶಿರಸ್ತೇ ॥

ಅನುವಾದ

ಭಗವಂತನೇ! ಆಕಾಶವೇ ನಿನ್ನ ನಾಭಿಯು. ವಾಯುವು ಉಸಿರಾಗಿದೆ. ಸೂರ್ಯನು ಕಣ್ಣುಗಳಾಗಿದ್ದಾನೆ. ಜಲವೇ ನಿನ್ನ ರೇತಸ್ಸು. ನಿನ್ನ ಅಹಂಕಾರವೇ ಉಚ್ಚ-ನೀಚ ಸಮಸ್ತ ಪ್ರಾಣಿಗಳಿಗೂ ಪರಮಾಶ್ರಯವಾಗಿದೆ. ಚಂದ್ರನೇ ನಿನ್ನ ಮನಸ್ಸು, ಸ್ವರ್ಗವೇ ನಿನ್ನ ತಲೆಯಾಗಿದೆ.॥27॥

(ಶ್ಲೋಕ-28)

ಮೂಲಮ್

ಕುಕ್ಷಿಃ ಸಮುದ್ರಾ ಗಿರಯೋಸ್ಥಿ ಸಂಘಾ
ರೋಮಾಣಿ ಸರ್ವೌಷಧೀವೀರುಧಸ್ತೇ ।
ಛಂದಾಂಸಿ ಸಾಕ್ಷಾತ್ತವ ಸಪ್ತ ಧಾತವ-
ಸಯೀಮಯಾತ್ಮನ್ ಹೃದಯಂ ಸರ್ವಧರ್ಮಃ ॥

ಅನುವಾದ

ವೇದಸ್ವರೂಪನಾದ ಭಗವಂತನೇ! ಸಮುದ್ರಗಳೇ ನಿನಗೆ ಹೊಟ್ಟೆಯಾಗಿದೆ. ಪರ್ವತಗಳೇ ಮೂಳೆಯಾಗಿವೆ. ಎಲ್ಲ ಪ್ರಕಾರದ ಔಷಧಿಗಳೂ, ಹುಲ್ಲುಗಳೂ ನಿನ್ನ ರೋಮವಾಗಿವೆ. ಗಾಯತ್ರಿಯೇ ಮೊದಲಾದ ಛಂದಸ್ಸುಗಳೇ ನಿನ್ನ ಸಪ್ತಧಾತುಗಳು. ಸಮಸ್ತ ಧರ್ಮಗಳೂ ನಿನ್ನ ಹೃದಯವೇ ಆಗಿದೆ. ॥28॥

(ಶ್ಲೋಕ-29)

ಮೂಲಮ್

ಮುಖಾನಿ ಪಂಚೋಪನಿಷದಸ್ತವೇಶ
ಯೈಸಿಂಶದಷ್ಟೋತ್ತರಮಂತ್ರವರ್ಗಃ ।
ಯತ್ತಚ್ಛಿವಾಖ್ಯಂ ಪರಮಾರ್ಥತತ್ತ್ವಂ
ದೇವ ಸ್ವಯಂಜ್ಯೋತಿರವಸ್ಥಿತಿಸ್ತೇ ॥

ಅನುವಾದ

ಸರ್ವೇಶನೇ! ಸದ್ಯೋಜಾತಾದಿ ಐದು ಉಪನಿಷತ್ತು ಮಂತ್ರಗಳೇ ನಿನ್ನ ತತ್ಪುರುಷ, ಅಘೋರ, ಸದ್ಯೋಜಾತ, ವಾಮದೇವ ಮತ್ತು ಈಶಾನವೆಂಬ ಐದು ಮುಖಗಳಾಗಿವೆ. ಅವುಗಳ ಪದಚ್ಛೇದದಿಂದಲೇ ಮೂವತ್ತೆಂಟು ಕಲಾತ್ಮಕ ಮಂತ್ರಗಳು ಉಂಟಾಗುತ್ತವೆ. ನೀನು ಸಮಸ್ತ ಪ್ರಪಂಚದಿಂದ ಉಪರತನಾಗಿ ನಿನ್ನ ಸ್ವರೂಪದಲ್ಲಿ ನೆಲೆಸಿದಾಗ ಅದೇ ಸ್ಥಿತಿಯ ಹೆಸರು ‘ಶಿವ’ ಎಂದಾಗಿದೆ. ವಾಸ್ತವವಾಗಿ ಅದೇ ಸ್ವಯಂಪ್ರಕಾಶ ಪರಮಾರ್ಥ ತತ್ತ್ವವಾಗಿದೆ. ॥29॥

(ಶ್ಲೋಕ-30)

ಮೂಲಮ್

ಛಾಯಾ ತ್ವಧರ್ಮೋರ್ಮಿಷು ಯೈರ್ವಿಸರ್ಗೋ
ನೇತ್ರತ್ರಯಂ ಸತ್ತ್ವರಜಸ್ತಮಾಂಸಿ ।
ಸಾಂಖ್ಯಾತ್ಮನಃ ಶಾಸಕೃತಸ್ತವೇಕ್ಷಾ
ಛಂದೋಮಯೋ ದೇವ ಋಷಿಃ ಪುರಾಣಃ ॥

ಅನುವಾದ

ಅಧರ್ಮಕ್ಕೆ ಮೂಲವಾದ ದಂಭಾಭಿಮಾನ ಅಹಂಕಾರಗಳೆಂಬ ತರಂಗಗಳೇ ನಿನ್ನ ನೆರಳಾಗಿದೆ. ವಿಧ-ವಿಧವಾದ ಸೃಷ್ಟಿಗೆ ಕಾರಣವಾಗಿರು ವಂತಹ ಸತ್ತ್ವ-ರಜಸ್ತಮೋಗುಣಗಳೇ ನಿನ್ನ ಮೂರು ಕಣ್ಣುಗಳಾಗಿವೆ. ಪ್ರಭುವೇ! ಗಾಯತ್ರಿಯೇ ಮುಂತಾದ ಛಂದೋರೂಪವಾದ ಸನಾತನ ವೇದಗಳು ನಿನ್ನ ಸ್ವರೂಪವನ್ನೇ ಪ್ರತಿಪಾದಿಸುತ್ತವೆ. ಏಕೆಂದರೆ ನೀನೇ ಸಾಂಖ್ಯ ಮುಂತಾದ ಸಮಸ್ತ ಶಾಸ್ತ್ರಗಳ ರೂಪದಲ್ಲಿ ಸ್ಥಿತನಾಗಿದ್ದು, ಅವುಗಳ ಕರ್ತೃವೂ ನೀನೇ ಆಗಿರುವೆ. ॥30॥

(ಶ್ಲೋಕ-31)

ಮೂಲಮ್

ನ ತೇ ಗಿರಿತ್ರಾಖಿಲಲೋಕಪಾಲ-
ವಿರಿಂಚಿವೈಕುಂಠಸುರೇಂದ್ರಗಮ್ಯಮ್ ।
ಜ್ಯೋತಿಃ ಪರಂ ಯತ್ರ ರಜಸ್ತಮಶ್ಚ
ಸತ್ತ್ವಂ ನ ಯದ್ಬ್ರಹ್ಮ ನಿರಸ್ತಭೇದಮ್ ॥

ಅನುವಾದ

ಗಿರಿತ್ರನೇ! ಪರಮೇಶ್ವರನೇ! ನೀನು ಪರಂಜ್ಯೋತಿ ಸ್ವರೂಪನು. ಪರಬ್ರಹ್ಮ ಪರಾತ್ಮತತ್ತ್ವವೇ ಆಗಿರುವೆ. ಸಚ್ಚಿದಾನಂದ ಸ್ವರೂಪನೂ ನೀನೇ. ಪರಂಜ್ಯೋತಿ ಸ್ವರೂಪನಾದ ನಿನ್ನಲ್ಲಿ ಸತ್ತ್ವರಜಸ್ತಮೋಗುಣಗಳಾಗಲೀ, ಯಾವುದೇ ಭೇದಭಾವವಾಗಲೀ ಇಲ್ಲ. ಅಂತಹ ನಿನ್ನ ಚಿದಾನಂದ ಘನ ಸ್ವರೂಪವನ್ನು ಲೋಕಪಾಲಕರಾಗಲೀ, ಬ್ರಹ್ಮೇಂದ್ರವಿಷ್ಣುಗಳಾಗಲೀ ಅರಿಯರು. ॥31॥

(ಶ್ಲೋಕ-32)

ಮೂಲಮ್

ಕಾಮಾಧ್ವರತ್ರಿಪುರಕಾಲಗರಾದ್ಯನೇಕ-
ಭೂತದ್ರುಹಃ ಕ್ಷಪಯತಃ ಸ್ತುತಯೇ ನ ತತ್ತೇ ।
ಯಸ್ತ್ವಂತಕಾಲ ಇದಮಾತ್ಮಕೃತಂ ಸ್ವನೇತ್ರ-
ವಹ್ನಿಸ್ಫುಲಿಂಗಶಿಖಯಾ ಭಸಿತಂ ನ ವೇದ ॥

ಅನುವಾದ

ಕಾಮದಹನ, ದಕ್ಷಯಜ್ಞ ವಿಧ್ವಂಸ, ತ್ರಿಪುರಾಸುರಸಂಹಾರ, (ಈಗ ನಮ್ಮ ಪ್ರಾರ್ಥನೆಯಂತೆ ನಡೆಯಲಿರುವ) ಕಾಲಕೂಟವಿಷಭಕ್ಷಣ, ಜೀವದ್ರೋಹಿ ಅನೇಕ ರಾಕ್ಷಸರ ಸಂಹಾರ ಮುಂತಾದ ಪ್ರಪಂಚಕ್ಕೆ ಹಿತವಾದ ಕಾರ್ಯಗಳನ್ನು ನೀನು ಮಾಡಿರುವೆ. ಇದು ನಿನ್ನನ್ನು ಸ್ತುತಿಮಾಡುವುದಕ್ಕಾಗಿ ಹೇಳುತ್ತಿರುವ ಮಾತಲ್ಲ. ಏಕೆಂದರೆ, ಪ್ರಳಯಕಾಲದಲ್ಲಿ ನೀನೇ ಸೃಷ್ಟಿಸಿದ ಈ ಜಗತ್ತು ನಿನ್ನ ಕಣ್ಣಿಂದ ಹೊರಡುವ ಅಗ್ನಿಯ ಕಿಡಿಯ ಜ್ವಾಲೆಗಳಿಂದ ಕ್ಷಣಮಾತ್ರದಲ್ಲಿ ಭಸ್ಮವಾಗಿ ಹೋಗುತ್ತದೆ. ಸದಾಧ್ಯಾನಮಗ್ನನಾಗಿರುವ ನೀನು ಈ ಕಾರ್ಯಗಳ ಸಾಧನೆಯ ಬಗ್ಗೆ ಯೋಚಿಸುವುದೇ ಇಲ್ಲ. ನಿನ್ನ ಪರಮಾದ್ಭುತವಾದ ಶಕ್ತಿಯಿಂದ ತಾನೇ ತಾನಾಗಿಎಲ್ಲವೂನಡೆದುಹೋಗುತ್ತದೆ.॥32॥

(ಶ್ಲೋಕ-33)

ಮೂಲಮ್

ಯೇ ತ್ವಾತ್ಮರಾಮಗುರುಭಿರ್ಹೃದಿ ಚಿಂತಿತಾಂಘ್ರಿ-
ದ್ವಂದ್ವಂ ಚರಂತಮುಮಯಾ ತಪಸಾಭಿತಪ್ತಮ್ ।
ಕತ್ಥಂತ ಉಗ್ರಪರುಷಂ ನಿರತಂ ಶ್ಮಶಾನೇ
ತೇ ನೂನಮೂತಿಮವಿದಂಸ್ತವ ಹಾತಲಜ್ಜಾಃ ॥

ಅನುವಾದ

ಜೀವನ್ಮುಕ್ತರೂ, ಆತ್ಮಾರಾಮರೂ ಆದ ಗುರುಜನರು ತಮ್ಮ ಹೃದಯ ಕಮಲದಲ್ಲಿ ನಿನ್ನ ದಿವ್ಯವಾದ ಪಾದದ್ವಯಗಳನ್ನು ಧ್ಯಾನ ಮಾಡುತ್ತಿರುತ್ತಾರೆ. ನೀನೂ ಕೂಡ ನಿರಂತರ ಜ್ಞಾನ, ತಪಸ್ಸಿ ನಲ್ಲೇ ಲೀನನಾಗಿರುವೆ. ಅಂತಹ ನಿನ್ನನ್ನು ಕೆಲವರು ಕಾಮಾಸಕ್ತನೆಂದೂ ಸದಾ ಉಮೆಯೊಡನೆ ತಿರುಗುತ್ತಿರುವನೆಂದೂ ಹೇಳುತ್ತಾರೆ. ಯಾವಾಗಲೂ ಸ್ಮಶಾನದಲ್ಲೇ ವಾಸಮಾಡುವ ನಿನ್ನನ್ನು ಉಗ್ರಪುರುಷನೆಂದೂ ತೆಗಳುತ್ತಾರೆ. ನಾಚಿಕೆಗೆಟ್ಟು ಹೀಗೆ ಹೇಳುವ ಅವರಿಗೆ ನಿನ್ನ ಮಹಿಮೆ ಯೇನಾದರೂ ತಿಳಿದಿರುವುದೇ? ॥33॥

(ಶ್ಲೋಕ-34)

ಮೂಲಮ್

ತತ್ತಸ್ಯ ತೇ ಸದಸತೋಃ ಪರತಃ ಪರಸ್ಯ
ನಾಂಜಃ ಸ್ವರೂಪಗಮನೇ ಪ್ರಭವಂತಿ ಭೂಮ್ನಃ ।
ಬ್ರಹ್ಮಾದಯಃ ಕಿಮುತ ಸಂಸ್ತವನೇ ವಯಂ ತು
ತತ್ಸರ್ಗಸರ್ಗವಿಷಯಾ ಅಪಿ ಶಕ್ತಿಮಾತ್ರಮ್ ॥

ಅನುವಾದ

ಪ್ರಭುವೇ! ಕಾರ್ಯ-ಕಾರಣವಾದ ಈ ಜಗತ್ತಿನ ಆಚೆ ಮಾಯೆ ಇದೆ. ಆ ಮಾಯೆಗೂ ಅತೀತನಾಗಿ ನೀನಿರುವೆ. ನಿನ್ನ ಅನಂತಸ್ವರೂಪದ ಸಾಕ್ಷಾತ್ಕಾರ ಮಾಡಿಕೊಳ್ಳಲು ಬ್ರಹ್ಮಾದಿಗಳೂ ಅಸಮರ್ಥರೇ ಸರಿ. ನಿನ್ನ ಸ್ವರೂಪವೇ ತಿಳಿಯದಿದ್ದರೆ ಸ್ತುತಿಮಾಡುವುದಾದರೂ ಹೇಗೆ ಸಾಧ್ಯ? ಹೀಗಿರುವಾಗ ಬ್ರಹ್ಮನ ಅಂಶಾಂಶಸಂಭೂತರಾಗಿರುವ ನಾವೇನು ಮಾಡಬಲ್ಲೆವು? ಆದರೂ ನಮ್ಮ ಶಕ್ತಿಗನು ಸಾರವಾಗಿ ನಿನ್ನ ಗುಣಗಾನವನ್ನು ಮಾಡುತ್ತಿದ್ದೇವೆ. ಇದ ರಿಂದಲೇ ತೃಪ್ತನಾಗಿ ವರದಾನವನ್ನು ಮಾಡು. ॥34॥

(ಶ್ಲೋಕ-35)

ಮೂಲಮ್

ಏತತ್ಪರಂ ಪ್ರಪಶ್ಯಾಮೋ ನ ಪರಂ ತೇ ಮಹೇಶ್ವರ ।
ಮೃಡನಾಯ ಹಿ ಲೋಕಸ್ಯ ವ್ಯಕ್ತಿಸ್ತೇವ್ಯಕ್ತಕರ್ಮಣಃ ॥

ಅನುವಾದ

ನಾವಾದರೋ ಕೇವಲ ನಿನ್ನ ಈ ಲೀಲಾವಿಹಾರೀ ಸ್ವರೂಪ ವನ್ನೇ ನೋಡುತ್ತಿದ್ದೇವೆ. ನಿನ್ನ ಪರಮಸ್ವರೂಪವನ್ನು ನಾವು ತಿಳಿಯಲಾರೆವು. ಮಹೇಶ್ವರಾ! ನಿನ್ನ ಲೀಲೆಗಳು ಅವ್ಯಕ್ತ ವಾಗಿದ್ದರೂ ಜಗತ್ತಿನ ಕಲ್ಯಾಣಕ್ಕಾಗಿಯೇ ನೀನು ವ್ಯಕ್ತರೂಪದಿಂದಲೂ ಇರುತ್ತೀಯೇ ॥35॥

(ಶ್ಲೋಕ-36)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ತದ್ವೀಕ್ಷ್ಯ ವ್ಯಸನಂ ತಾಸಾಂ ಕೃಪಯಾ ಭೃಶಪೀಡಿತಃ ।
ಸರ್ವಭೂತಸುಹೃದ್ದೇವ ಇದಮಾಹ ಸತೀಂ ಪ್ರಿಯಾಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಪ್ರಜೆಗಳ ಈ ಸಂಕಟವನ್ನು ನೋಡಿ ಸಮಸ್ತ ಪ್ರಾಣಿಗಳ ಹಿತೈಷಿಯೂ, ದೇವಾಧಿದೇವನೂ, ಕರುಣಾಮಯನೂ ಆದ ಭಗವಾನ್ ಶಂಕರನು ಹೃದಯದಲ್ಲಿ ವ್ಯಥೆಗೊಂಡು ಪ್ರೇಯಸಿಯಾದ ಪಾರ್ವತಿಯೊಡನೆ ಹೀಗೆಂದನು. ॥36॥

(ಶ್ಲೋಕ-37)

ಮೂಲಮ್ (ವಾಚನಮ್)

ಶ್ರೀಶಿವ ಉವಾಚ

ಮೂಲಮ್

ಅಹೋ ಬತ ಭವಾನ್ಯೇತತ್ಪ್ರಜಾನಾಂ ಪಶ್ಯ ವೈಶಸಮ್ ।
ಕ್ಷೀರೋದಮಥನೋದ್ಭೂತಾತ್ಕಾಲಕೂಟಾದುಪಸ್ಥಿತಮ್ ॥

ಅನುವಾದ

ಶ್ರೀಶಿವನು ಹೇಳಿದನು — ದೇವಿ! ಅಯ್ಯೋ ಪಾಪ! ಕ್ಷೀರಸಮುದ್ರವನ್ನು ಕಡೆಯುವಿಕೆಯಿಂದ ಹುಟ್ಟಿದ ಮಹಾ ಘೋರವಾದ ಕಾಲಕೂಟವಿಷದಿಂದ ಪ್ರಜೆಗಳಿಗುಂಟಾದ ದುಃಖವನ್ನಾದರೂ ನೋಡು. ॥37॥

(ಶ್ಲೋಕ-38)

ಮೂಲಮ್

ಆಸಾಂ ಪ್ರಾಣಪರೀಪ್ಸೂನಾಂ ವಿಧೇಯಮಭಯಂ ಹಿ ಮೇ ।
ಏತಾವಾನ್ಹಿ ಪ್ರಭೋರರ್ಥೋ ಯದ್ದೀನಪರಿಪಾಲನಮ್ ॥

ಅನುವಾದ

ಈ ಬಡಪಾಯಿಗಳು ಹೇಗಾದರೂ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಇವರನ್ನು ನಿರ್ಭಯರನ್ನಾಗಿಸುವುದೇ ಈಗ ನನ್ನ ಕರ್ತವ್ಯವಾಗಿದೆ. ಸಮರ್ಥನಾದ ಪ್ರಭುವಿಗೆ ದೀನ ರಾದವರ ಸಂಕಟವನ್ನು ಪರಿಹರಿಸುವುದೇ ಜೀವನದ ಮುಖ್ಯ ಪ್ರಯೋಜನವಾಗಿದೆ. ॥38॥

(ಶ್ಲೋಕ-39)

ಮೂಲಮ್

ಪ್ರಾಣೈಃ ಸ್ವೈಃ ಪ್ರಾಣಿನಃ ಪಾಂತಿ ಸಾಧವಃ ಕ್ಷಣಭಂಗುರೈಃ ।
ಬದ್ಧವೈರೇಷು ಭೂತೇಷು ಮೋಹಿತೇಷ್ವಾತ್ಮಮಾಯಯಾ ॥

ಅನುವಾದ

ಸಜ್ಜನರಾದವರು ತಮ್ಮ ಕ್ಷಣಭಂಗುರವಾದ ಪ್ರಾಣಗಳನ್ನು ಬಲಿಕೊಟ್ಟಾದರೂ ಬೇರೆಯವರ ಪ್ರಾಣಗಳನ್ನು ರಕ್ಷಿಸುತ್ತಾರೆ. ಕಲ್ಯಾಣೀ! ತಮ್ಮದೇ ಆದ ಮೋಹದ ಮಾಯೆಯಲ್ಲಿ ಸಿಕ್ಕಿಹಾಕಿಕೊಂಡು ಪ್ರಪಂಚದ ಪ್ರಾಣಿಗಳು ಮೋಹಿತರಾಗಿ ಪರಸ್ಪರವಾಗಿ ವೈರಕಟ್ಟಿಕೊಳ್ಳುವರು. ॥39॥

(ಶ್ಲೋಕ-40)

ಮೂಲಮ್

ಪುಂಸಃ ಕೃಪಯತೋ ಭದ್ರೇ ಸರ್ವಾತ್ಮಾ ಪ್ರೀಯತೇ ಹರಿಃ ।
ಪ್ರೀತೇ ಹರೌ ಭಗವತಿ ಪ್ರೀಯೇಹಂ ಸಚರಾಚರಃ ।
ತಸ್ಮಾದಿದಂ ಗರಂ ಭುಂಜೇ ಪ್ರಜಾನಾಂ ಸ್ವಸ್ತಿರಸ್ತು ಮೇ ॥

ಅನುವಾದ

ಸರ್ವಮಂಗಳೇ! ಇಂತಹ ವರ ಮೇಲೆ ಕೃಪೆ ಮಾಡುವವನ ಮೇಲೆ ಸರ್ವಾತ್ಮನಾದ ಶ್ರೀಹರಿಯು ಪ್ರಸನ್ನನಾಗುವನು. ಭಗವಂತನು ಪ್ರಸನ್ನನಾದಾಗ ಚರಾಚರ ಜಗತ್ತಿನೊಂದಿಗೆ ನಾನೂ ಪ್ರಸನ್ನನಾಗುತ್ತೇನೆ. ಅದಕ್ಕಾಗಿ ಈಗಿಂದೀಗಲೇ ನಾನು ಈ ವಿಷವನ್ನು ಕುಡಿಯುತ್ತೇನೆ. ಇದರಿಂದ ನನ್ನ ಪ್ರಜೆಗಳಿಗೆ ಕಲ್ಯಾಣವುಂಟಾಗಲೀ; ಲೋಕಕ್ಕೆ ಕ್ಷೇಮವಾಗಲೀ. ॥40॥

(ಶ್ಲೋಕ-41)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಮಾಮಂತ್ರ್ಯ ಭಗವಾನ್ಭವಾನೀಂ ವಿಶ್ವಭಾವನಃ ।
ತದ್ವಿಷಂ ಜಗ್ಧುಮಾರೇಭೇ ಪ್ರಭಾವಜ್ಞಾನ್ವಮೋದತ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ವಿಶ್ವದ ಜೀವನದಾತನಾದ ಭಗವಾನ್ ಶಂಕರನು ಹೀಗೆ ಪಾರ್ವತಿಗೆ ಹೇಳಿ, ಅವಳ ಸಮ್ಮತಿಯನ್ನು ಪಡೆದು ಆ ಹಾಲಾಹಲ ವಿಷವನ್ನು ಕುಡಿಯಲು ಸಿದ್ಧನಾದನು. ಶಿವನ ಪ್ರಭಾವವನ್ನು ಚೆನ್ನಾಗಿ ಅರಿತಿದ್ದ ಪಾರ್ವತಿಯು ಹೃತ್ಪೂರ್ವಕವಾಗಿ ಅದಕ್ಕೆ ಸಮ್ಮತಿಸಿದಳು. ॥41॥

(ಶ್ಲೋಕ-42)

ಮೂಲಮ್

ತತಃ ಕರತಲೀಕೃತ್ಯ ವ್ಯಾಪಿ ಹಾಲಾಹಲಂ ವಿಷಮ್ ।
ಅಭಕ್ಷಯನ್ಮಹಾದೇವಃ ಕೃಪಯಾ ಭೂತಭಾವನಃ ॥

ಅನುವಾದ

ಪ್ರಾಣಿಗಳ ಹಿತೈಷಿಯಾದ ಭಗವಾನ್ ಶಂಕರನ ಶಕ್ತಿಯಿಂದಲೇ ಸಮಸ್ತ ಪ್ರಾಣಿಗಳು ಜೀವಿಸಿರುತ್ತಾರೆ. ಅವನು ಆ ತೀಕ್ಷ್ಣವಾದ ಹಾಲಾಹಲ ವಿಷವನ್ನು ತನ್ನ ಅಂಗೈಯಲ್ಲಿ ಎತ್ತಿಕೊಂಡು ಕುಡಿದು ಬಿಟ್ಟನು. ॥42॥

(ಶ್ಲೋಕ-43)

ಮೂಲಮ್

ತಸ್ಯಾಪಿ ದರ್ಶಯಾಮಾಸ ಸ್ವವೀರ್ಯಂ ಜಲಕಲ್ಮಷಃ ।
ಯಚ್ಚಕಾರ ಗಲೇ ನೀಲಂ ತಚ್ಚ ಸಾಧೋರ್ವಿಭೂಷಣಮ್ ॥

ಅನುವಾದ

ಜಲಕ್ಕೆ ಕಲ್ಮಷಪ್ರಾಯವಾಗಿದ್ದ ಆ ವಿಷವು ಪರಶಿವನ ಕೊರಳಲ್ಲಿ ಕಪ್ಪನ್ನುಂಟುಮಾಡಿ ತನ್ನ ಶಕ್ತಿಯನ್ನು ಪ್ರದರ್ಶಿಸಿತು. ಆದರೆ ಆ ನೀಲಚ್ಛಾಯೆಯೂ ಜಗದ್ರಕ್ಷಕ ನಾದ ಪರಮೇಶ್ವರನಿಗೆ ಅಲಂಕಾರವೇ ಆಯಿತು. ॥43॥

(ಶ್ಲೋಕ-44)

ಮೂಲಮ್

ತಪ್ಯಂತೇ ಲೋಕತಾಪೇನ ಸಾಧವಃ ಪ್ರಾಯಶೋ ಜನಾಃ ।
ಪರಮಾರಾಧನಂ ತದ್ಧಿ ಪುರುಷಸ್ಯಾಖಿಲಾತ್ಮನಃ ॥

ಅನುವಾದ

ಪರೋಪಕಾರೀ ಸಜ್ಜನರು ಪ್ರಾಯಶಃ ಪ್ರಜೆಗಳ ದುಃಖವನ್ನು ನಿವಾರಿಸಲಿಕ್ಕಾಗಿ ಸ್ವತಃ ದುಃಖವನ್ನು ಸ್ವೀಕರಿಸುತ್ತಾರೆ.ಆದರೆ ಅಂತಹ ಸೇವಾಕಾರ್ಯವು ಸರ್ವಾತ್ಮನಾದ ಪರಮ ಪುರುಷನ ಆರಾಧನೆಯೇ ಆಗುತ್ತದೆ. ॥44॥

(ಶ್ಲೋಕ-45)

ಮೂಲಮ್

ನಿಶಮ್ಯ ಕರ್ಮ ತಚ್ಛಂಭೋರ್ದೇವದೇವಸ್ಯ ಮೀಢುಷಃ ।
ಪ್ರಜಾ ದಾಕ್ಷಾಯಣೀ ಬ್ರಹ್ಮಾ ವೈಕುಂಠಶ್ಚ ಶಶಂಸಿರೇ ॥

ಅನುವಾದ

ದೇವಾಧಿದೇವನಾದ ಭಗವಾನ್ ಶಂಕರನು ಎಲ್ಲರ ಕಾಮನೆ ಗಳನ್ನು ಪೂರ್ಣಮಾಡುವವನಾಗಿದ್ದಾನೆ. ಅವನ ಈ ಕಲ್ಯಾಣಕಾರೀ ಅದ್ಭುತ ಕರ್ಮವನ್ನು ಕೇಳಿ ಸಮಸ್ತ ಪ್ರಜೆ, ದಾಕ್ಷಾಯಿಣೀ, ಬ್ರಹ್ಮದೇವರು ಹಾಗೂ ಸ್ವಯಂ ಭಗವಾನ್ ವಿಷ್ಣುವೂ ಕೂಡ ಅವನನ್ನು ಪ್ರಶಂಸಿಸಿದರು. ॥45॥

(ಶ್ಲೋಕ-46)

ಮೂಲಮ್

ಪ್ರಸ್ಕನ್ನಂ ಪಿಬತಃ ಪಾಣೇರ್ಯತ್ಕಿಂಚಿಜ್ಜಗೃಹುಃ ಸ್ಮ ತತ್ ।
ವೃಶ್ಚಿಕಾಹಿವಿಷೌಷಧ್ಯೋ ದಂದಶೂಕಾಶ್ಚ ಯೇಪರೇ ॥

ಅನುವಾದ

ಭಗವಾನ್ ಶಂಕರನು ವಿಷಪಾನ ಮಾಡುವಾಗ ಅವನ ಕೈಯಿಂದ ಸ್ವಲ್ಪ ವಿಷವು ಕೆಳಗೆ ಚೆಲ್ಲಿತ್ತು. ಅದನ್ನು ಚೇಳುಗಳೂ, ಹಾವುಗಳೂ ಹಾಗೂ ಇತರ ವಿಷ ಜಂತುಗಳೂ, ಕೆಲವು ವಿಷೌಷಧಿಗಳೂ ಅದನ್ನು ಸ್ವೀಕರಿಸಿದವು. ॥46॥

ಅನುವಾದ (ಸಮಾಪ್ತಿಃ)

ಏಳನೆಯ ಅಧ್ಯಾಯವು ಮುಗಿಯಿತು. ॥7॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ಅಮೃತಮಥನೇ ಸಪ್ತಮೋಽಧ್ಯಾಯಃ ॥7॥