೦೬

[ಆರನೆಯ ಅಧ್ಯಾಯ]

ಭಾಗಸೂಚನಾ

ದೇವ-ದಾನವರು ಸೇರಿ ಸಮುದ್ರವನ್ನು ಕಡೆದುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಸ್ತುತಃ ಸುರಗಣೈರ್ಭಗವಾನ್ಹರಿರೀಶ್ವರಃ ।
ತೇಷಾಮಾವಿರಭೂದ್ರಾಜನ್ಸಹಸ್ರಾರ್ಕೋದಯದ್ಯುತಿಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ದೇವತೆಗಳು ಸರ್ವೇಶ್ವರನಾದ ಭಗವಾನ್ ಶ್ರೀಹರಿಯನ್ನು ಹೀಗೆ ಸ್ತುತಿಸಿದಾಗ ಅವನು ಅವರ ನಡುವೆಯೇ ಪ್ರಕಟನಾದನು. ಅವನ ಶರೀರದ ಪ್ರಭೆಯು ಸಾವಿರಾರು ಸೂರ್ಯರು ಒಮ್ಮೆಲೇ ಉದಯಿಸಿದಂತೆ ಇತ್ತು. ॥1॥

(ಶ್ಲೋಕ-2)

ಮೂಲಮ್

ತೇನೈವ ಮಹಸಾ ಸರ್ವೇ ದೇವಾಃ ಪ್ರತಿಹತೇಕ್ಷಣಾಃ ।
ನಾಪಶ್ಯನ್ಖಂ ದಿಶಃ ಕ್ಷೋಣಿಮಾತ್ಮಾನಂ ಚ ಕುತೋ ವಿಭುಮ್ ॥

ಅನುವಾದ

ಭಗವಂತನ ಉಜ್ವಲವಾದ ಪ್ರಭೆಯಿಂದಾಗಿ ದೇವತೆಗಳ ಕಣ್ಣುಗಳು ಕೋರೈಸಿ ಅವನನ್ನು ನೋಡುವುದಿರಲಿ, ಪೃಥಿ ವ್ಯಾಕಾಶಗಳನ್ನಾಗಲೀ, ದಿಕ್ಕುಗಳನ್ನಾಗಲೀ ನೋಡಲು ಅವರಿಂದ ಸಾಧ್ಯವಾಗಲಿಲ್ಲ. ಕಡೆಗೆ ತಮ್ಮ ಶರೀರಗಳನ್ನೂ ನೋಡಿಕೊಳ್ಳಲಾಗಲಿಲ್ಲ. ॥2॥

(ಶ್ಲೋಕ-3)

ಮೂಲಮ್

ವಿರಿಂಚೋ ಭಗವಾನ್ದೃಷ್ಟ್ವಾ ಸಹ ಶರ್ವೇಣ ತಾಂ ತನುಮ್ ।
ಸ್ವಚ್ಛಾಂ ಮರಕತಶ್ಯಾಮಾಂ ಕಂಜಗರ್ಭಾರುಣೇಕ್ಷಣಾಮ್ ॥

(ಶ್ಲೋಕ-4)

ಮೂಲಮ್

ತಪ್ತಹೇಮಾವದಾತೇನ ಲಸತ್ಕೌಶೇಯವಾಸಸಾ ।
ಪ್ರಸನ್ನಚಾರುಸರ್ವಾಂಗೀಂ ಸುಮುಖೀಂ ಸುಂದರಭ್ರುವಮ್ ॥

(ಶ್ಲೋಕ-5)

ಮೂಲಮ್

ಮಹಾಮಣಿಕಿರೀಟೇನ ಕೇಯೂರಾಭ್ಯಾಂ ಚ ಭೂಷಿತಾಮ್ ।
ಕರ್ಣಾಭರಣನಿರ್ಭಾತಕಪೋಲಶ್ರೀಮುಖಾಂಬುಜಾಮ್ ॥

(ಶ್ಲೋಕ-6)

ಮೂಲಮ್

ಕಾಂಚೀಕಲಾಪವಲಯಹಾರನೂಪುರಶೋಭಿತಾಮ್ ।
ಕೌಸ್ತುಭಾಭರಣಾಂ ಲಕ್ಷ್ಮೀಂ ಬಿಭ್ರತೀಂ ವನಮಾಲಿನೀಮ್ ॥

ಅನುವಾದ

ಕೇವಲ, ಭಗವಾನ್ ಶಂಕರನು ಮತ್ತು ಬ್ರಹ್ಮದೇವರು ಅವನ ದರ್ಶನ ಮಾಡಿದರು. ಅವನ ಸ್ವರೂಪವು ತುಂಬಾ ಸುಂದರವಾಗಿತ್ತು. ನಿರ್ಮಲವೂ, ಸ್ವಚ್ಛವೂ ಆದ ಅವನ ಅಂಗಕಾಂತಿಯು ಮರಕತಮಣಿಯಂತೆ ಶ್ಯಾಮಲವರ್ಣದಿಂದ ಶೋಭಿಸುತ್ತಿತ್ತು. ಕಮಲದ ಒಳಭಾಗದಲ್ಲಿರುವ ಕೆಂಪಾದ ಪರಾಗದಂತಹ ಎಣ್ಣೆಗೆಂಪಿನ ಕಣ್ಣುಗಳು, ಪುಟಕ್ಕಿಟ್ಟ ಚಿನ್ನದಂತೆ ಥಳ-ಥಳಿಸುವ ರೇಶ್ಮೆಯ ಪೀತಾಂಬರ, ಸರ್ವಾಂಗಸುಂದರ ಶರೀರದ ರೋಮ-ರೋಮಗಳಲ್ಲಿ ಪ್ರಸನ್ನತೆ ಉಕ್ಕುತ್ತಿತ್ತು. ಧನುಸ್ಸಿನಂತೆ ಬಾಗಿದ ಹುಬ್ಬುಗಳು, ಅತ್ಯಂತ ಸುಂದರವಾದ ಮುಖ-ತಲೆಯ ಮೇಲೆ ಮಹಾಮಣಿಮಯ ದಿವ್ಯಕಿರೀಟ, ಭುಜಗಳಲ್ಲಿ ಕನಕಾಂಗದ-ಕೇಯೂರಗಳು. ಕಿವಿಗಳಲ್ಲಿ ಓಲಾಡುತ್ತಿದ್ದ ಮಕರ ಕುಂಡಲಗಳ ಪ್ರಭೆಯಿಂದ ಕಂಗೊಳಿಸುವ ಕಪೋಲಗಳು ಇನ್ನೂ ಸುಂದರವಾಗಿದ್ದುವು. ಅದರಿಂದ ಮುಖವು ಮತ್ತಷ್ಟು ಶೋಭಿಸುತ್ತಿತ್ತು. ಓಡ್ಯಾಣ, ಕೈಕಡಗ, ಕಾಲಂದುಗೆ, ಕೊರಳಲ್ಲಿ ಮುತ್ತಿನಹಾರ ಇವುಗಳಿಂದ ಶೋಭಾಯಮಾನ ನಾಗಿದ್ದನು. ವಕ್ಷಃಸ್ಥಳದಲ್ಲಿ ಲಕ್ಷ್ಮೀ ಮತ್ತು ಕೊರಳಲ್ಲಿ ಕೌಸ್ತುಭಮಣಿ, ವನಮಾಲೆ ಸುಶೋಭಿಸುತ್ತಿತ್ತು. ॥3-6॥

(ಶ್ಲೋಕ-7)

ಮೂಲಮ್

ಸುದರ್ಶನಾದಿಭಿಃ ಸ್ವಾಸೈರ್ಮೂರ್ತಿಮದ್ಭಿರುಪಾಸಿತಾಮ್ ।
ತುಷ್ಟಾವ ದೇವಪ್ರವರಃ ಸಶರ್ವಃ ಪುರುಷಂ ಪರಮ್ ।
ಸರ್ವಾಮರಗಣೈಃ ಸಾಕಂ ಸರ್ವಾಂಗೈರವನಿಂ ಗತೈಃ ॥

ಅನುವಾದ

ಭಗವಂತನ ಸುದರ್ಶನವೇ ಮುಂತಾದ ದಿವ್ಯಾಯುಧಗಳು ಮೂರ್ತಿಮತ್ತಾಗಿ ನಿಂತು ಪ್ರಭುವಿನ ಸೇವೆ ಮಾಡುತ್ತಿದ್ದವು. ಎಲ್ಲ ದೇವತೆಗಳು ಸಾಷ್ಟಾಂಗ ನಮಸ್ಕಾರಮಾಡಿ ಮತ್ತೆ ದೇವತೆಗಳೆಲ್ಲರೊಡನೆ ಸೇರಿ ಪರಶಿವನು ಮತ್ತು ಬ್ರಹ್ಮ ದೇವರು ಪರಮಪುರುಷನನ್ನು ಸ್ತುತಿಸತೊಡಗಿದರು. ॥7॥

(ಶ್ಲೋಕ-8)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ಅಜಾತಜನ್ಮಸ್ಥಿತಿಸಂಯಮಾಯಾ-
ಗುಣಾಯ ನಿರ್ವಾಣಸುಖಾರ್ಣವಾಯ ।
ಅಣೋರಣಿಮ್ನೇಪರಿಗಣ್ಯಧಾಮ್ನೇ
ಮಹಾನುಭಾವಾಯ ನಮೋ ನಮಸ್ತೇ ॥

ಅನುವಾದ

ಬ್ರಹ್ಮದೇವರು ಹೇಳಿದರು — ಯಾರು ಜನ್ಮ, ಸ್ಥಿತಿ, ಪ್ರಳಯಗಳೊಂದಿಗೆ ಯಾವುದೇ ಸಂಬಂಧವಿರಿಸಿಕೊಳ್ಳುವುದಿಲ್ಲವೋ, ಯಾರು ಪ್ರಾಕೃತ ಗುಣಗಳಿಂದ ರಹಿತನೂ, ಮೋಕ್ಷಸ್ವರೂಪನಾದ ಪರಮಾನಂದದ ಮಹಾಸಮುದ್ರನಾಗಿರುವನೋ, ಯಾರು ಸೂಕ್ಷ್ಮಕ್ಕೂ ಸೂಕ್ಷ್ಮನೋ, ಯಾರ ಸ್ವರೂಪವು ಅನಂತವಾಗಿದೆಯೋ ಆ ಪರಮೈಶ್ವರ್ಯ ಸಂಪನ್ನ ಪ್ರಭುವಿಗೆ ನಾವು ಮತ್ತೆ-ಮತ್ತೆ ನಮಸ್ಕರಿಸುತ್ತೇವೆ. ॥8॥

(ಶ್ಲೋಕ-9)

ಮೂಲಮ್

ರೂಪಂ ತವೈತತ್ಪುರುಷರ್ಷಭೇಜ್ಯಂ
ಶ್ರೇಯೋರ್ಥಿಭಿರ್ವೈದಿಕತಾಂತ್ರಿಕೇಣ ।
ಯೋಗೇನ ಧಾತಃ ಸಹ ನಸಿಲೋಕಾನ್
ಪಶ್ಯಾಮ್ಯಮುಷ್ಮಿನ್ನು ಹ ವಿಶ್ವಮೂರ್ತೌ ॥

ಅನುವಾದ

ಪುರುಷೋತ್ತಮನೇ! ತಮ್ಮ ಶ್ರೇಯಸ್ಸನ್ನು ಬಯಸುವ ಸಾಧಕರು ವೇದೋಕ್ತ ಹಾಗೂ ಪಾಂಚರಾತ್ರೋಕ್ತ ವಿಧಿಯಿಂದ ನಿನ್ನ ಇದೇ ಸ್ವರೂಪವನ್ನು ಉಪಾಸನೆ ಮಾಡುತ್ತಾರೆ. ನನ್ನನ್ನೂ ಸೃಷ್ಟಿಸಿದ ಪ್ರಭೋ! ನಿನ್ನ ಈ ವಿಶ್ವಮಯ ಸ್ವರೂಪದಲ್ಲಿ ನನಗೆ ಸಮಸ್ತ ದೇವತೆಗಳ ಸಹಿತ ಮೂರು ಲೋಕಗಳು ಕಂಡುಬರುತ್ತಿವೆ. ॥9॥

(ಶ್ಲೋಕ-10)

ಮೂಲಮ್

ತ್ವಯ್ಯಗ್ರ ಆಸೀತ್ತ್ವಯಿ ಮಧ್ಯ ಆಸೀ-
ತ್ತ್ವಯ್ಯಂತ ಆಸೀದಿದಮಾತ್ಮತಂತ್ರೇ ।
ತ್ವಮಾದಿರಂತೋ ಜಗತೋಸ್ಯ ಮಧ್ಯಂ
ಘಟಸ್ಯ ಮೃತ್ಸ್ನೇವ ಪರಃ ಪರಸ್ಮಾತ್ ॥

ಅನುವಾದ

ನಿನ್ನಲ್ಲೇ ಮೊದಲು ಈ ಜಗತ್ತು ಲೀನವಾಗಿತ್ತು. ನಡುವೆಯೂ ಇದು ನಿನ್ನಲ್ಲೇ ನೆಲೆಸಿತ್ತು, ಕೊನೆಗೆ ಇದು ಪುನಃ ನಿನ್ನಲ್ಲೇ ಲೀನವಾಗಿ ಹೋದೀತು. ನೀನು ಸ್ವತಃ ಕಾರ್ಯ-ಕಾರಣಗಳಿಂದ ಅತೀತ ಪರಮ ಸ್ವತಂತ್ರನಾಗಿರುವೆ. ಗಡಿಗೆಯಲ್ಲಿ ಆದಿ, ಮಧ್ಯ, ಅಂತ್ಯದಲ್ಲಿ ಮಣ್ಣೇ ಇರುವಂತೆ ಈ ಜಗತ್ತಿನ ಆದಿ, ಅಂತ್ಯ ಮತ್ತು ಮಧ್ಯದಲ್ಲಿ ನೀನೇ ಆಗಿರುವೆ. ॥10॥

(ಶ್ಲೋಕ-11)

ಮೂಲಮ್

ತ್ವಂ ಮಾಯಯಾತ್ಮಾಶ್ರಯಯಾ ಸ್ವಯೇದಂ
ನಿರ್ಮಾಯ ವಿಶ್ವಂ ತದನುಪ್ರವಿಷ್ಟಃ ।
ಪಶ್ಯಂತಿ ಯುಕ್ತಾ ಮನಸಾ ಮನೀಷಿಣೋ
ಗುಣವ್ಯವಾಯೇಪ್ಯಗುಣಂ ವಿಪಶ್ಚಿತಃ ॥

ಅನುವಾದ

ನೀನು ನಿನ್ನಲ್ಲೇ ಆಶ್ರಿತನಾಗಿರುವ ನಿನ್ನ ಮಾಯೆಯಿಂದ ಈ ಪ್ರಪಂಚವನ್ನು ರಚಿಸುತ್ತೀಯೆ ಮತ್ತು ಇದರಲ್ಲಿ ಪುನಃ ಪ್ರವೇಶಿಸಿ ಅಂತರ್ಯಾಮಿಯ ರೂಪದಲ್ಲಿ ವಿರಾಜಿಸುತ್ತಿರುವೆ. ಅದಕ್ಕಾಗಿ ವಿವೇಕಿಗಳೂ, ಶಾಸ್ತ್ರಜ್ಞರೂ ಆದ ಜನರು ಹೆಚ್ಚು ಎಚ್ಚರಿಕೆಯಿಂದ ತಮ್ಮ ಮನಸ್ಸನ್ನು ಏಕಾಗ್ರಗೊಳಿಸಿ ಈ ಗುಣಗಳ, ವಿಷಯಗಳ ಗದ್ದಲದಲ್ಲಿಯೂ ನಿನ್ನ ನಿರ್ಗುಣ ಸ್ವರೂಪವನ್ನೇ ಸಾಕ್ಷಾತ್ಕರಿಸಿಕೊಳ್ಳುವರು. ॥11॥

(ಶ್ಲೋಕ-12)

ಮೂಲಮ್

ಯಥಾಗ್ನಿಮೇಧಸ್ಯಮೃತಂ ಚ ಗೋಷು
ಭುವ್ಯನ್ನಮಂಬೂದ್ಯಮನೇ ಚ ವೃತ್ತಿಮ್ ।
ಯೋಗೈರ್ಮನುಷ್ಯಾ ಅಧಿಯಂತಿ ಹಿ ತ್ವಾಂ
ಗುಣೇಷು ಬುದ್ಧ್ಯಾ ಕವಯೋ ವದಂತಿ ॥

ಅನುವಾದ

ಮನುಷ್ಯನು ಯುಕ್ತಿಯಿಂದ ಕಟ್ಟಿಗೆಯಿಂದ ಬೆಂಕಿಯನ್ನೂ, ಹಸುವಿನಿಂದ ಅಮೃತದಂತಿರುವ ಹಾಲನ್ನೂ, ಪೃಥಿವಿಯಿಂದ ನೀರು ಹಾಗೂ ಅನ್ನವನ್ನೂ ಮತ್ತು ವ್ಯಾಪಾರದಿಂದ ತನ್ನ ಜೀವನ ನಿರ್ವಹಣೆಯನ್ನು ಪಡೆದುಕೊಳ್ಳುವನೋ ಹಾಗೆಯೇ ವಿವೇಕಿ ಮನುಷ್ಯನೂ ಕೂಡ ತನ್ನ ಶುದ್ಧಬುದ್ಧಿಯಿಂದ, ಭಕ್ತಿ ಯೋಗ-ಜ್ಞಾನಯೋಗ ಮುಂತಾದವುಗಳ ಮೂಲಕ ನಿನ್ನನ್ನು ಈ ವಿಷಯಗಳಲ್ಲೇ ಪಡೆದುಕೊಳ್ಳುವರು ಹಾಗೂ ತಮ್ಮ ಅನುಭವಕ್ಕನು ಸಾರವಾಗಿ ನಿನ್ನನ್ನೂ ವರ್ಣಿಸುವರು. ॥12॥

(ಶ್ಲೋಕ-13)

ಮೂಲಮ್

ತಂ ತ್ವಾಂ ವಯಂ ನಾಥ ಸಮುಜ್ಜಿಹಾನಂ
ಸರೋಜನಾಭಾತಿಚಿರೇಪ್ಸಿತಾರ್ಥಮ್ ।
ದೃಷ್ಟ್ವಾ ಗತಾ ನಿರ್ವೃತಿಮದ್ಯ ಸರ್ವೇ
ಗಜಾ ದವಾರ್ತಾ ಇವ ಗಾಂಗಮಂಭಃ ॥

ಅನುವಾದ

ಪದ್ಮನಾಭಾ! ಕಾಡುಗಿಚ್ಚಿನಿಂದ ಬೆಂದು ನೊಂದಿರುವ ಆನೆಯು ಗಂಗಾನದಿಯಲ್ಲಿ ಮುಳುಗಿ ಸುಖ-ಸಂತೋಷಡುವಂತೆಯೇ, ನಿನ್ನ ಆವಿರ್ಭಾವದಿಂದ ನಾವುಗಳು ಪರಮಸುಖಿಗಳು ಮತ್ತು ಶಾಂತಿಯನ್ನು ಹೊಂದಿರುವೆವು. ಸ್ವಾಮಿ! ನಾವುಗಳು ಅನೇಕ ದಿನಗಳಿಂದ ನಿನ್ನ ದರ್ಶನಕ್ಕಾಗಿ ಅತ್ಯಂತ ಕಾತರರಾಗಿದ್ದೇವೆ. ॥13॥

(ಶ್ಲೋಕ-14)

ಮೂಲಮ್

ಸ ತ್ವಂ ವಿಧತ್ಸ್ವಾಖಿಲಲೋಕಪಾಲಾ
ವಯಂ ಯದರ್ಥಾಸ್ತವ ಪಾದಮೂಲಮ್ ।
ಸಮಾಗತಾಸ್ತೇ ಬಹಿರಂತರಾತ್ಮನ್
ಕಿಂ ವಾನ್ಯವಿಜ್ಞಾಪ್ಯಮಶೇಷಸಾಕ್ಷಿಣಃ ॥

ಅನುವಾದ

ನೀನೇ ನಮ್ಮ ಹೊರಗಿನ-ಒಳಗಿನ ಆತ್ಮನಾಗಿರುವೆ. ನಾವೆಲ್ಲ ಲೋಕಪಾಲರು ಯಾವ ಉದ್ದೇಶದಿಂದ ನಿನ್ನ ಚರಣಗಳಲ್ಲಿ ಶರಣಾಗಿದ್ದೇವೋ ಅದನ್ನು ನೀನು ಕೃಪೆಮಾಡಿ ಪೂರ್ಣಮಾಡು. ನೀನು ಎಲ್ಲರ ಸಾಕ್ಷಿಯಾಗಿರುವೆ. ಆದ್ದರಿಂದ ಈ ವಿಷಯದಲ್ಲಿ ನಾವುಗಳು ನಿನ್ನಲ್ಲಿ ಇನ್ನೇನು ನಿವೇದಿಸಿಕೊಳ್ಳಲಿ? ॥14॥

(ಶ್ಲೋಕ-15)

ಮೂಲಮ್

ಅಹಂ ಗಿರತ್ರಶ್ಚ ಸುರಾದಯೋ ಯೇ
ದಕ್ಷಾದಯೋಗ್ನೇರಿವ ಕೇತವಸ್ತೇ ।
ಕಿಂ ವಾ ವಿದಾಮೇಶ ಪೃಥಗ್ವಿಭಾತಾ
ವಿಧತ್ಸ್ವ ಶಂ ನೋ ದ್ವಿಜದೇವಮಂತ್ರಮ್ ॥

ಅನುವಾದ

ಪ್ರಭೋ! ನಾನೂ, ಶಂಕರನೂ, ಬೇರೆ ದೇವತೆಗಳೂ, ಋಷಿಗಳೂ, ದಕ್ಷರೇ ಮುಂತಾದ ಪ್ರಜಾಪತಿಗಳೆಲ್ಲರೂ ಬೆಂಕಿಯಿಂದ ಸಿಡಿದ ಕಿಡಿಯಂತೆ ನಿನ್ನ ಅಂಶರೇ ಆಗಿದ್ದೇವೆ ಇಂತಹ ಸ್ಥಿತಿಯಲ್ಲಿ ಪ್ರಭೋ! ನಾವೇನು ಬಲ್ಲೆವು? ಬ್ರಾಹ್ಮಣರ ಮತ್ತು ದೇವತೆಗಳ ಕಲ್ಯಾಣಕ್ಕಾಗಿ ಏನು ಮಾಡುವ ಆವಶ್ಯಕತೆ ಇದೆಯೋ ಅದನ್ನು ನೀನೇ ಅಪ್ಪಣೆ ಮಾಡಬೇಕು ಹಾಗೂ ನೀನೂ ಸ್ವತಃ ಹಾಗೆಯೇ ಮಾಡು. ॥15॥

(ಶ್ಲೋಕ-16)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ವಿರಿಂಚಾದಿಭಿರೀಡಿತಸ್ತದ್
ವಿಜ್ಞಾಯ ತೇಷಾಂ ಹೃದಯಂ ತಥೈವ ।
ಜಗಾದ ಜೀಮೂತಗಭೀರಯಾ ಗಿರಾ
ಬದ್ಧಾಂಜಲೀನ್ಸಂವೃತಸರ್ವಕಾರಕಾನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಹೀಗೆ ಬ್ರಹ್ಮಾದಿ ದೇವತೆಗಳು ಸ್ತುತಿಮಾಡಿದಾಗ ಶ್ರೀಹರಿಯು ಅವರ ಮನಸ್ಸಿನ ಆಶಯವನ್ನು ತಿಳಿದವನಾಗಿ ಜಿತೇಂದ್ರಿಯರಾಗಿದ್ದು, ಕೈಜೋಡಿಸಿಕೊಂಡಿದ್ದ ಬ್ರಹ್ಮನೇ ಮುಂತಾದ ದೇವತೆಗಳನ್ನು ಕುರಿತು ಮೇಘದಂತೆ ಗಂಭೀರವಾದ ಮಾತಿನಿಂದ ಇಂತೆಂದನು ॥16॥

(ಶ್ಲೋಕ-17)

ಮೂಲಮ್

ಏಕ ಏವೇಶ್ವರಸ್ತಸ್ಮಿನ್ಸುರಕಾರ್ಯೇ ಸುರೇಶ್ವರಃ ।
ವಿಹರ್ತುಕಾಮಸ್ತಾನಾಹ ಸಮುದ್ರೋನ್ಮಥನಾದಿಭಿಃ ॥

ಅನುವಾದ

ಪರೀಕ್ಷಿದ್ರಾಜನೇ! ಸಮಸ್ತ ದೇವತೆಗಳಿಗೂ ಹಾಗೂ ಜಗತ್ತಿಗೂ ಏಕಮಾತ್ರ ಸ್ವಾಮಿಯಾದ ಭಗವಂತನೊಬ್ಬನೇ ಅವರ ಕಾರ್ಯಗಳನ್ನು ಮಾಡಿಕೊಡಲು ಸಮರ್ಥನಾಗಿ ದ್ದರೂ ಸಮುದ್ರ ಮಂಥನವೇ ಮುಂತಾದ ಲೀಲೆಗಳನ್ನು ತೋರಿಸಲಿಚ್ಛಿಸಿ ದೇವತೆಗಳಿಗೆ ಹೀಗೆ ಹೇಳತೊಡಗಿದನು. ॥17॥

ಮೂಲಮ್

(ಶ್ಲೋಕ-18)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಹಂತ ಬ್ರಹ್ಮನ್ನಹೋ ಶಂಭೋ ಹೇ ದೇವಾ ಮಮ ಭಾಷಿತಮ್ ।
ಶೃಣುತಾವಹಿತಾಃ ಸರ್ವೇ ಶ್ರೇಯೋ ವಃ ಸ್ಯಾದ್ಯಥಾ ಸುರಾಃ ॥

ಅನುವಾದ

ಶ್ರೀಭಗವಂತನು ಹೇಳಿದನು — ಚತುರ್ಮುಖನೇ! ಶಂಕರನೇ! ದೇವತೆಗಳೇ! ನೀವು ಸಾವಧಾನರಾಗಿ ನನ್ನ ಸಲಹೆಯನ್ನು ಕೇಳಿರಿ. ನಿಮ್ಮ ಶ್ರೇಯಸ್ಸಿನ ಉಪಾಯವು ಇದೇ ಆಗಿದೆ. ॥18॥

(ಶ್ಲೋಕ-19)

ಮೂಲಮ್

ಯಾತ ದಾನವದೈತೇಯೈಸ್ತಾವತ್ಸಂಧಿರ್ವಿಧೀಯತಾಮ್ ।
ಕಾಲೇನಾನುಗೃಹೀತೈಸ್ತೈರ್ಯಾವದ್ವೋ ಭವ ಆತ್ಮನಃ ॥

ಅನುವಾದ

ಈಗ ಅಸುರರಿಗೆ ಒಳ್ಳೆಯ ಕಾಲವಾಗಿದೆ. ಅದಕ್ಕಾಗಿ ನಿಮ್ಮ ಅಭ್ಯುದಯ ಮತ್ತು ಉನ್ನತಿಯ ಸಮಯವು ಬರುವವರೆಗೆ ನೀವು ದೈತ್ಯ-ದಾನವರ ಬಳಿಗೆ ಹೋಗಿ ಅವರೊಂದಿಗೆ ಸಂಧಿಯನ್ನು ಮಾಡಿಕೊಳ್ಳಿರಿ. ॥19॥

(ಶ್ಲೋಕ-20)

ಮೂಲಮ್

ಅರಯೋಪಿ ಹಿ ಸಂಧೇಯಾಃ ಸತಿ ಕಾರ್ಯಾರ್ಥಗೌರವೇ ।
ಅಹಿಮೂಷಕವದ್ದೇವಾ ಹ್ಯರ್ಥಸ್ಯ ಪದವೀಂ ಗತೈಃ ॥

ಅನುವಾದ

ದೇವತೆಗಳಿರಾ! ಯಾವುದಾದರೂ ದೊಡ್ಡ ಕಾರ್ಯವನ್ನು ಸಾಧಿಸಬೇಕಾದರೆ ಶತ್ರುಗಳೊಂದಿಗೆ ಸಂಧಾನ ಮಾಡಿಕೊಳ್ಳಬೇಕು. ಕೆಲಸವು ಸಿದ್ಧಿಸಿದ ಬಳಿಕ ಅವರೊಂದಿಗೆ ಹಾವು-ಇಲಿಯಿಂತೆ* ವರ್ತಿಸುವುದು ಅವಶ್ಯಕವಾಗಿದೆ. ॥20॥

ಟಿಪ್ಪನೀ
  • ‘ಅಹಿಮೂಷಕನ್ಯಾಯ’ ಹಾವಾಡಿಗನ ಬುಟ್ಟಿಯಲ್ಲಿ ಹಾವೊಂದು ಮೊದಲಿನಿಂದಲೇ ಇತ್ತು. ಅಕಸ್ಮಾತ್ತಾಗಿ ಒಂದು ಇಲಿಯು ಅದರೊಳಗೆ ಬಂದು ಸೇರಿತು. ಇಲಿಯು ಭಯಗೊಂಡಿದ್ದರೂ ಹಾವು ಅದಕ್ಕೆ ಪ್ರೇಮದಿಂದ ಹೇಳಿತು. ಇಲಿರಾಯಾ! ನೀನು ಈ ಬುಟ್ಟಿಯನ್ನು ಕಡಿದು ತೂತುಮಾಡು. ಇದರಿಂದ ನಾವಿಬ್ಬರೂ ಇಲ್ಲಿಂದ ಹೊರಗೆ ಹೋಗಬಹುದು. ಮೊದಲಿಗೆ ಇಲಿಗೆ ಹಾವಿನ ಮಾತಿನಲ್ಲಿ ವಿಶ್ವಾಸಮೂಡಲಿಲ್ಲ. ಆದರೆ ಕೊನೆಗೆ, ಅದು ಬುಟ್ಟಿಯನ್ನು ಕೊರೆದು ರಂಧ್ರವನ್ನು ಮಾಡಿತು. ಹೀಗೆ ತನ್ನ ಕೆಲಸ ಸಾಧಿಸಿದಾಗ ಹಾವು ಇಲಿಯನ್ನು ನುಂಗಿಹಾಕಿ ಬುಟ್ಟಿಯಿಂದ ಹೊರಗೆ ಹೊರಟುಹೋಯಿತು.
ಮೂಲಮ್

(ಶ್ಲೋಕ-21)
ಅಮೃತೋತ್ಪಾದನೇ ಯತ್ನಃ ಕ್ರಿಯತಾಮವಿಲಂಬಿತಮ್ ।
ಯಸ್ಯ ಪೀತಸ್ಯ ವೈ ಜಂತುರ್ಮೃತ್ಯುಗ್ರಸ್ತೋಮರೋ ಭವೇತ್ ॥

ಅನುವಾದ

ನೀವು ದಾನವರೊಡನೆ ಸೇರಿ ತಡಮಾಡದೆ ಅಮೃತದ ಪ್ರಾಪ್ತಿಗಾಗಿ ಪ್ರಯತ್ನಿಸಿರಿ. ಅದನ್ನು ಕುಡಿದರೆ ಮರಣ ಧರ್ಮವಿರುವ ಪ್ರಾಣಿಯೂ ಅಮರನಾಗುತ್ತಾನೆ. ॥21॥

(ಶ್ಲೋಕ-22)

ಮೂಲಮ್

ಕ್ಷಿಪ್ತ್ವಾ ಕ್ಷೀರೋದಧೌ ಸರ್ವಾ ವೀರುತ್ತ ೃಣಲತೌಷಧೀಃ ।
ಮಂಥಾನಂ ಮಂದರಂ ಕೃತ್ವಾ ನೇತ್ರಂ ಕೃತ್ವಾ ತು ವಾಸುಕಿಮ್ ॥

(ಶ್ಲೋಕ-23)

ಮೂಲಮ್

ಸಹಾಯೇನ ಮಯಾ ದೇವಾ ನಿರ್ಮಂಥಧ್ವಮತಂದ್ರಿತಾಃ ।
ಕ್ಲೇಶಭಾಜೋ ಭವಿಷ್ಯಂತಿ ದೈತ್ಯಾ ಯೂಯಂ ಲಗ್ರಹಾಃ ॥

ಅನುವಾದ

ನೀವು ಮೊಟ್ಟಮೊದಲಿಗೆ ಕ್ಷೀರ ಸಾಗರದಲ್ಲಿ ಎಲ್ಲ ಪ್ರಕಾರದ ಹುಲ್ಲು, ಬಳ್ಳಿಗಳು, ನಾರು-ಬೇರು, ಔಷಧಿಗಳನ್ನು ಹಾಕಿರಿ. ಮತ್ತೆ ಮಂದರಪರ್ವತವನ್ನು ಕಡೆಗೋಲಾಗಿಸಿಯೂ, ವಾಸುಕಿಯನ್ನು ಕಡೆಯುವ ಹಗ್ಗ ವನ್ನಾಗಿಯೂ ಮಾಡಿಕೊಂಡು, ನನ್ನ ಸಹಾಯದಿಂದ ದಾನವರೊಡಗೂಡಿ ಸಮುದ್ರವನ್ನು ಕಡೆಯಿರಿ. ಈಗ ಆಲಸ್ಯ ಮತ್ತು ಪ್ರಮಾದದ ಸಮಯವಲ್ಲ. ದೇವತೆಗಳಿರಾ! ದೈತ್ಯರಿಗೆ ಕೇವಲ ಶ್ರಮ, ಕ್ಲೇಶವೇ ದೊರೆಯುವುದು. ಆದರೆ ನಿಮಗೆ ಸತ್ಫಲ ದೊರೆಯುವುದರಲ್ಲಿ ವಿಶ್ವಾಸವಿಡಿರಿ. ॥22-23॥

(ಶ್ಲೋಕ-24)

ಮೂಲಮ್

ಯೂಯಂ ತದನುಮೋದಧ್ವಂ ಯದಿಚ್ಛಂತ್ಯಸುರಾಃ ಸುರಾಃ ।
ನ ಸಂರಂಭೇಣ ಸಿಧ್ಯಂತಿ ಸರ್ವೇರ್ಥಾಃ ಸಾಂತ್ವಯಾ ಯಥಾ ॥

ಅನುವಾದ

ದೇವತೆಗಳಿರಾ! ಅಸುರರು ಬಯಸುವುದೆಲ್ಲವನ್ನು ಸ್ವೀಕರಿಸಿರಿ. ಶಾಂತಿಯಿಂದ ಎಲ್ಲ ಕೆಲಸಗಳು ಕೈಗೂಡುವುವು. ಕ್ರೋಧದಿಂದ ಏನೂ ಆಗುವುದಿಲ್ಲ. ॥24॥

(ಶ್ಲೋಕ-25)

ಮೂಲಮ್

ನ ಭೇತವ್ಯಂ ಕಾಲಕೂಟಾದ್ವಿಷಾಜ್ಜಲಧಿಸಂಭವಾತ್ ।
ಲೋಭಃ ಕಾರ್ಯೋ ನ ವೋ ಜಾತು ರೋಷಃ ಕಾಮಸ್ತು ವಸ್ತುಷು ॥

ಅನುವಾದ

ಮೊದಲಿಗೆ ಸಮುದ್ರದಿಂದ ಕಾಲಕೂಟವಿಷವು ಹೊರಡುವುದು. ಅದಕ್ಕೆ ಭಯಪಡಬೇಡಿರಿ. ಯಾವುದೇ ವಸ್ತುಗಾಗಿಯೂ ಲೋಭವಿಲ್ಲದಿರಲಿ. ಮೊದಲಿಗೆ ಯಾವುದೇ ವಸ್ತುವಿನ ಕಾಮನೆಯೇ ಇಲ್ಲದಿರಲಿ. ಆದರೆ ಕಾಮನೆ ಇದ್ದು ಅದು ಪೂರ್ಣವಾಗದಿದ್ದರೂ ಕ್ರೋಧವನ್ನಂತೂ ಮಾಡಬಾರದು.॥25॥

(ಶ್ಲೋಕ-26)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ದೇವಾನ್ಸಮಾದಿಶ್ಯ ಭಗವಾನ್ಪುರುಷೋತ್ತಮಃ ।
ತೇಷಾಮಂತರ್ದಧೇ ರಾಜನ್ಸ್ವಚ್ಛಂದಗತಿರೀಶ್ವರಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ದೇವತೆಗಳಿಗೆ ಹೀಗೆ ಆದೇಶಿಸಿ ಭಗವಾನ್ ಪುರುಷೋತ್ತಮನು ಅವರು ನೋಡುತ್ತಿರುವಂತೆ ತನ್ನ ಇಷ್ಟಾನುಸಾರವಾಗಿ ಅಂತರ್ಧಾನವಾದನು. ಅವನ ಲೀಲಾರಹಸ್ಯವನ್ನು ಯಾರು ಬಲ್ಲರು? ॥26॥

(ಶ್ಲೋಕ-27)

ಮೂಲಮ್

ಅಥ ತಸ್ಮೈ ಭಗವತೇ ನಮಸ್ಕೃತ್ಯ ಪಿತಾಮಹಃ ।
ಭವಶ್ಚ ಜಗ್ಮತುಃ ಸ್ವಂ ಸ್ವಂ ಧಾಮೋಪೇಯುರ್ಬಲಿಂ ಸುರಾಃ ॥

ಅನುವಾದ

ಅನಂತರ ಬ್ರಹ್ಮ-ಶಂಕರರು ಶ್ರೀಭಗವಂತನಿಗೆ ಪುನಃ ನಮಸ್ಕರಿಸಿ ತಮ್ಮ-ತಮ್ಮ ಲೋಕಗಳಿಗೆ ಹೊರಟು ಹೋದರು. ಬಳಿಕ ಇಂದ್ರಾದಿ ದೇವತೆಗಳು ಬಲಿರಾಜನ ಬಳಿಗೆ ಹೋದರು. ॥27॥

(ಶ್ಲೋಕ-28)

ಮೂಲಮ್

ದೃಷ್ಟ್ವಾರೀನಪ್ಯಸಂಯತ್ತಾನ್ಜಾತಕ್ಷೋಭಾನ್ಸ್ವನಾಯಕಾನ್ ।
ನ್ಯಷೇಧದ್ದೈತ್ಯರಾಟ್ ಶ್ಲೋಕ್ಯಃ ಸಂಧಿವಿಗ್ರಹಕಾಲವಿತ್ ॥

ಅನುವಾದ

ದೇವತೆಗಳು ಶಸ್ತ್ರಾಸ್ತ್ರರಹಿತರಾಗಿ ತಮ್ಮ ಬಳಿಗೆ ಬಂದುದನ್ನು ನೋಡಿ ದೈತ್ಯ ಸೇನಾಪತಿಗಳ ಮನಸ್ಸಿನಲ್ಲಿ ತಳಮಳ ವುಂಟಾಯಿತು. ಅವರು ದೇವತೆಗಳನ್ನು ಬಂಧಿಸಲು ಬಯಸಿದರು. ಆದರೆ ಪವಿತ್ರಕೀರ್ತಿಯುಳ್ಳ ದೈತ್ಯರಾಜ ಬಲಿಯು ಸಂಧಿ-ನಿಗ್ರಹಗಳ ಕಾಲವನ್ನು ತಿಳಿದಿದ್ದನಾದ ಕಾರಣ ದೇವತೆಗಳನ್ನು ಬಂಧಿಸದಂತೆ ದೈತ್ಯರನ್ನು ತಡೆದನು. ॥28॥

ಮೂಲಮ್

(ಶ್ಲೋಕ-29)
ತೇ ವೈರೋಚನಿಮಾಸೀನಂ ಗುಪ್ತಂ ಚಾಸುರಯೂಥಪೈಃ ।
ಶ್ರಿಯಾ ಪರಮಯಾ ಜುಷ್ಟಂ ಜಿತಾಶೇಷಮುಪಾಗಮನ್ ॥

ಅನುವಾದ

ಮೂರು ಲೋಕಗಳನ್ನೂ ಜಯಿಸಿದ್ದ, ಸಮಸ್ತ ಸಂಪತ್ತುಗಳಿಂದ ಸಂಪನ್ನನಾಗಿದ್ದು, ಅಸುರಸೇನಾನಾಯಕರಿಂದ ರಕ್ಷಿಸಲ್ಪಡುತ್ತಿದ್ದ, ರಾಜಸಿಂಹಾಸನಾರೂಢನಾದ ಬಲಿ ಚಕ್ರವರ್ತಿಯನ್ನು ಇಂದ್ರಾದಿ ದೇವತೆಗಳು ಸಂಧಿಸಿದರು. ॥29॥

(ಶ್ಲೋಕ-30)

ಮೂಲಮ್

ಮಹೇಂದ್ರಃ ಶ್ಲಕ್ಷ್ಣಯಾ ವಾಚಾ ಸಾಂತ್ವಯಿತ್ವಾ ಮಹಾಮತಿಃ ।
ಅಭ್ಯಭಾಷತ ತತ್ಸರ್ವಂ ಶಿಕ್ಷಿತಂ ಪುರುಷೋತ್ತಮಾತ್ ॥

ಅನುವಾದ

ಮಹಾಮತಿಯಾದ ಇಂದ್ರನು ಬಲಿಚಕ್ರವರ್ತಿಯನ್ನು ಮೃದು-ಮಧುರವಾದ ಮಾತುಗಳಿಂದ ಸಂತೈಸುತ್ತಾ ಭಗವಂತನು ಹೇಳಿ ಕಳುಹಿಸಿದ್ದಂತೆ ಎಲ್ಲ ವಿಷಯಗಳನ್ನು ಅವನಲ್ಲಿ ಹೇಳಿದನು. ॥30॥

(ಶ್ಲೋಕ-31)

ಮೂಲಮ್

ತದರೋಚತ ದೈತ್ಯಸ್ಯ ತತ್ರಾನ್ಯೇ ಯೇಸುರಾಧಿಪಾಃ ।
ಶಂಬರೋರಿಷ್ಟನೇಮಿಶ್ಚ ಯೇ ಚ ತ್ರಿಪುರವಾಸಿನಃ ॥

ಅನುವಾದ

ಇಂದ್ರನು ಹೇಳಿದ ಮಾತು ಬಲಿಚಕ್ರವರ್ತಿಗೂ, ಅಲ್ಲಿ ಕುಳಿತಿದ್ದ ಶಂಬರ, ಅರಿಷ್ಟನೇಮಿ, ತ್ರಿಪುರಾಸುರ ಮುಂತಾದ ದೈತ್ಯನಾಯಕರಿಗೂ ಸಮ್ಮತವಾಯಿತು. ॥31॥

(ಶ್ಲೋಕ-32)

ಮೂಲಮ್

ತತೋ ದೇವಾಸುರಾಃ ಕೃತ್ವಾ ಸಂವಿದಂ ಕೃತಸೌಹೃದಾಃ ।
ಉದ್ಯಮಂ ಪರಮಂ ಚಕ್ರುರಮೃತಾರ್ಥೇ ಪರಂತಪ ॥

ಅನುವಾದ

ಬಳಿಕ ದೇವಾಸುರರು ಪರಸ್ಪರ ಶಾಂತಿ-ಸಂಧಾನವನ್ನು ಮಾಡಿಕೊಂಡು ಮಿತ್ರರಾದರು. ಪರೀಕ್ಷಿತನೇ! ಅವರೆಲ್ಲರೂ ಸೇರಿ ಅಮೃತದ ಪ್ರಾಪ್ತಿಗಾಗಿ ಸಮುದ್ರ ಮಂಥನಕ್ಕಾಗಿ ಅಗಾಧವಾದ ಪ್ರಯತ್ನಕ್ಕೆ ತೊಡಗಿದರು. ॥32॥

(ಶ್ಲೋಕ-33)

ಮೂಲಮ್

ತತಸ್ತೇ ಮಂದರಗಿರಿಮೋಜಸೋತ್ಪಾಟ್ಯ ದುರ್ಮದಾಃ ।
ನದಂತ ಉದಧಿಂ ನಿನ್ಯುಃ ಶಕ್ತಾಃ ಪರಿಘಬಾಹವಃ ॥

ಅನುವಾದ

ಪರಿಘಾಯುಧದಂತೆ ತೋಳುಗಳನ್ನು ಹೊಂದಿದ್ದ, ಮಹಾಶಕ್ತಿವಂತರಾದ, ಬಲದಿಂದ ಕೊಬ್ಬಿಹೋಗಿದ್ದ ದೇವ-ದಾನವರು ತಮ್ಮ ಬಲ-ಪರಾಕ್ರಮದಿಂದ ಮಂದರಪರ್ವತವನ್ನು ಕಿತ್ತು ಅದನ್ನೆತ್ತಿಕೊಂಡು ನಾಲ್ಕು ದಿಕ್ಕುಗಳೂ ಪ್ರತಿಧ್ವನಿಸುವಂತೆ ಗರ್ಜನೆ ಮಾಡುತ್ತಾ ಕ್ಷೀರಸಮುದ್ರದ ಕಡೆಗೆ ಹೊರಟರು. ॥33॥

(ಶ್ಲೋಕ-34)

ಮೂಲಮ್

ದೂರಭಾರೋದ್ವಹಶ್ರಾಂತಾಃ ಶಕ್ರವೈರೋಚನಾದಯಃ ।
ಅಪಾರಯಂತಸ್ತಂ ವೋಢುಂ ವಿವಶಾ ವಿಜಹುಃ ಪಥಿ ॥

ಅನುವಾದ

ಆದರೆ ಆ ಮಂದರಪರ್ವತವು ಭಾರೀ ಭಾರವಾಗಿತ್ತು ಮತ್ತು ಕೊಂಡು ಹೋಗಲೂ ಬಹಳ ದೂರವಿತ್ತು. ಇದರಿಂದ ಇಂದ್ರ, ಬಲಿ ಮುಂತಾದವರೆಲ್ಲರೂ ಸೋತುಹೋದರು. ಯಾವರೀತಿಯಿಂದಲೂ ಮಂದರಾಚಲವನ್ನು ಮುಂದಕ್ಕೆ ಸಾಗಿಸದಾದಾಗ ವಿವಶರಾಗಿ ಅವರು ದಾರಿಯಲ್ಲೇ ಇರಿಸಿದರು. ॥34॥

(ಶ್ಲೋಕ-35)

ಮೂಲಮ್

ನಿಪತನ್ಸಗಿರಿಸ್ತತ್ರ ಬಹೂನಮರದಾನವಾನ್ ।
ಚೂರ್ಣಯಾಮಾಸ ಮಹತಾ ಭಾರೇಣ ಕನಕಾಚಲಃ ॥

ಅನುವಾದ

ಮಹಾಭಾರದಿಂದ ಕೂಡಿದ್ದ ಆ ಸ್ವರ್ಣ ಪರ್ವತವು ಕೆಳಕ್ಕೆ ಬೀಳುವಾಗ ಅದರ ಬುಡದಲ್ಲಿ ಹಲವಾರು ದೇವತೆಗಳು, ದಾನವರು ನುಚ್ಚುನೂರಾದರು. ॥35॥

(ಶ್ಲೋಕ-36)

ಮೂಲಮ್

ತಾಂಸ್ತಥಾ ಭಗ್ನಮನಸೋ ಭಗ್ನಬಾಹೂರುಕಂಧರಾನ್ ।
ವಿಜ್ಞಾಯ ಭಗವಾಂಸ್ತತ್ರ ಬಭೂವ ಗರುಡಧ್ವಜಃ ॥

ಅನುವಾದ

ಆ ದೇವತೆಗಳ-ದೈತ್ಯರ, ಕೈ, ಸೊಂಟ, ಭುಜಗಳು ಮುರಿದೇ ಹೋಗಿದ್ದವು. ಅವರ ಮನಸ್ಸೂ ಮುರಿದು ಹೋಗಿತ್ತು. ಅವರ ಉತ್ಸಾಹಭಂಗಗೊಂಡಿರುವುದನ್ನು ಕಂಡ ಭಗವಂತನು ಗರುಡನನ್ನೇರಿ ಬಂದು ಅಲ್ಲಿ ಕಾಣಿಸಿ ಕೊಂಡನು. ॥36॥

(ಶ್ಲೋಕ-37)

ಮೂಲಮ್

ಗಿರಿಪಾತವಿನಿಷ್ಪಿಷ್ಟಾನ್ವಿಲೋಕ್ಯಾಮರದಾನವಾನ್ ।
ಈಕ್ಷಯಾ ಜೀವಯಾಮಾಸ ನಿರ್ಜರಾನ್ನಿರ್ವ್ರಣಾನ್ಯಥಾ ॥

ಅನುವಾದ

ದೇವತೆಗಳು, ಅಸುರರು ಪರ್ವತವು ಬೀಳುವುದರಿಂದ ಪುಡಿ-ಪುಡಿಯಾಗಿರುವುದನ್ನು ನೋಡಿ ಅವನು ತನ್ನ ಅಮೃತಮಯ ದೃಷ್ಟಿಯಿಂದ ಅವರನ್ನು ನೋಡಿ ಅವರ ಗಾಯಗಳು ವಾಸಿಯಾಗಿ, ಸಂಕಟರಹಿತರಾಗಿಸಿದನು. ॥37॥

(ಶ್ಲೋಕ-38)

ಮೂಲಮ್

ಗಿರಿಂ ಚಾರೋಪ್ಯ ಗರುಡೇ ಹಸ್ತೇನೈಕೇನ ಲೀಲಯಾ ।
ಆರುಹ್ಯ ಪ್ರಯಯಾವಬ್ಧಿಂ ಸುರಾಸುರಗಣೈರ್ವೃತಃ ॥

ಅನುವಾದ

ಬಳಿಕ ಶ್ರೀಹರಿಯು ಲೀಲಾಜಾಲ ವಾಗಿ ಒಂದೇ ಕೈಯಿಂದ ಆ ಪರ್ವತವನ್ನು ಎತ್ತಿ ಗರುಡನ ಹೆಗಲಮೇಲಿಟ್ಟುಕೊಂಡು ತಾನು ಹತ್ತಿಕೊಂಡು ಮತ್ತೆ ದೇವತೆಗಳು ಹಾಗೂ ಅಸುರರೊಂದಿಗೆ ಸಮುದ್ರದ ತಟಕ್ಕೆ ತೆರಳಿದನು. ॥38॥

(ಶ್ಲೋಕ-39)

ಮೂಲಮ್

ಅವರೋಪ್ಯ ಗಿರಿಂ ಸ್ಕಂಧಾತ್ಸುಪರ್ಣಃ ಪತತಾಂ ವರಃ ।
ಯಯೌ ಜಲಾಂತ ಉತ್ಸೃಜ್ಯ ಹರಿಣಾ ಸ ವಿಸರ್ಜಿತಃ ॥

ಅನುವಾದ

ಪಕ್ಷಿರಾಜ ಗರುಡನು ಸಮುದ್ರ ತೀರದಲ್ಲಿ ಆ ಪರ್ವತವನ್ನು ಇಳಿಸಿ, ಸಮುದ್ರದ ಮಧ್ಯದಲ್ಲಿ ಅದನ್ನು ಇರಿಸಿ, ಭಗವಂತನಿಂದ ಬೀಳ್ಕೊಂಡು ಅಲ್ಲಿಂದ ಹೊರಟುಹೋದನು. ॥39॥

ಅನುವಾದ (ಸಮಾಪ್ತಿಃ)

ಆರನೆಯ ಅಧ್ಯಾಯವು ಮುಗಿಯಿತು. ॥6॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ಅಮೃತಮಥನೇ ಮಂದರಾಚಲಾನಯನಂ ನಾಮ ಷಷ್ಠೋಽಧ್ಯಾಯಃ ॥6॥