೦೫

[ಐದನೆಯ ಅಧ್ಯಾಯ]

ಭಾಗಸೂಚನಾ

ದೇವತೆಗಳೆಲ್ಲರೂ ಬ್ರಹ್ಮನ ಬಳಿಗೆ ಹೋದುದು, ಬ್ರಹ್ಮದೇವರು ಭಗವಂತನನ್ನು ಸ್ತುತಿಸಿದುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ರಾಜನ್ನುದಿತಮೇತತ್ತೇ ಹರೇಃ ಕರ್ಮಾಘನಾಶನಮ್ ।
ಗಜೇಂದ್ರಮೋಕ್ಷಣಂ ಪುಣ್ಯಂ ರೈವತಂ ತ್ವಂತರಂ ಶೃಣು ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಂತನ ಈ ಗಜೇಂದ್ರಮೋಕ್ಷದ ಪವಿತ್ರ ಲೀಲೆಯು ಸಮಸ್ತ ಪಾಪಗಳನ್ನು ನಾಶಮಾಡುವಂತಹುದು. ಅದನ್ನು ನಾನು ನಿನಗೆ ಹೇಳಿದೆನು. ಈಗ ರೈವತ ಮನ್ವಂತರದ ಕಥೆಯನ್ನು ಕೇಳು. ॥1॥

(ಶ್ಲೋಕ-2)

ಮೂಲಮ್

ಪಂಚಮೋ ರೈವತೋ ನಾಮ ಮನುಸ್ತಾಮಸಸೋದರಃ ।
ಬಲಿವಿಂಧ್ಯಾದಯಸ್ತಸ್ಯ ಸುತಾ ಅರ್ಜುನಪೂರ್ವಕಾಃ ॥

ಅನುವಾದ

ಐದನೆಯ ಮನುವಿನ ಹೆಸರು ರೈವತ. ಇವನು ನಾಲ್ಕನೆಯ ಮನುವಾದ ತಾಮಸನ ತಮ್ಮನು. ಅವನಿಗೆ ಅರ್ಜುನ, ಬಲ, ವಿಂಧ್ಯ ಮುಂತಾದವರು ಮಕ್ಕಳಿದ್ದರು. ॥2॥

(ಶ್ಲೋಕ-3)

ಮೂಲಮ್

ವಿಭುರಿಂದ್ರಃ ಸುರಗಣಾ ರಾಜನ್ ಭೂತರಯಾದಯಃ ।
ಹಿರಣ್ಯರೋಮಾ ವೇದಶಿರಾ ಊರ್ಧ್ವಬಾಹ್ವಾದಯೋ ದ್ವಿಜಾಃ ॥

ಅನುವಾದ

ಆ ಮನ್ವಂತರದಲ್ಲಿ ವಿಭು ಎಂಬುವನು ಇಂದ್ರನಾಗಿದ್ದನು. ಭೂತರಯ ಮುಂತಾದ ದೇವತೆಗಳು ಮುಖ್ಯರಾಗಿದ್ದರು. ಪರೀಕ್ಷಿತನೇ! ಆಗ ಹಿರಣ್ಯ ರೋಮಾ, ವೇದಶಿರಾ, ಊರ್ಧ್ವೆಬಾಹು ಮುಂತಾದವರು ಸಪ್ತರ್ಷಿಗಳಿದ್ದರು. ॥3॥

(ಶ್ಲೋಕ-4)

ಮೂಲಮ್

ಪತ್ನೀ ವಿಕುಂಠಾ ಶುಭ್ರಸ್ಯ ವೈಕುಂಠೈಃ ಸುರಸತ್ತಮೈಃ ।
ತಯೋಃ ಸ್ವಕಲಯಾ ಜಜ್ಞೇ ವೈಕುಂಠೋ ಭಗವಾನ್ಸ್ವಯಮ್ ॥

ಅನುವಾದ

ಅವರಲ್ಲಿ ಶುಭ್ರ ಎಂಬ ಋಷಿಯ ಪತ್ನಿಯ ಹೆಸರು ವಿಕುಂಠಾ. ಅವಳ ಗರ್ಭದಲ್ಲಿ ವೈಕುಂಠರೆಂಬ ಶ್ರೇಷ್ಠದೇವತೆಗಳೊಡನೆ ತನ್ನ ಅಂಶದಿಂದ ಸ್ವಯಂ ಭಗವಂತನು ವೈಕುಂಠನೆಂಬ ಹೆಸರಿನಿಂದ ಅವತರಿಸಿದನು. ॥4॥

(ಶ್ಲೋಕ-5)

ಮೂಲಮ್

ವೈಕುಂಠಃ ಕಲ್ಪಿತೋ ಯೇನ ಲೋಕೋ ಲೋಕನಮಸ್ಕೃತಃ ।
ರಮಯಾ ಪ್ರಾರ್ಥ್ಯಮಾನೇನ ದೇವ್ಯಾ ತತ್ಪ್ರಿಯಕಾಮ್ಯಯಾ ॥

ಅನುವಾದ

ಅವನು ಲಕ್ಷ್ಮೀದೇವಿಯ ಪ್ರಾರ್ಥನೆಯಂತೆ ಅವಳನ್ನು ಸಂತೋಷಪಡಿಸಲು ವೈಕುಂಠಧಾಮವನ್ನು ರಚಿಸಿದನು. ಆ ಲೋಕವು ಇತರ ಎಲ್ಲ ಲೋಕಗಳಿಗಿಂತ ಶ್ರೇಷ್ಠವಾದುದು. ॥5॥

(ಶ್ಲೋಕ-6)

ಮೂಲಮ್

ತಸ್ಯಾನುಭಾವಃ ಕಥಿತೋ ಗುಣಾಶ್ಚ ಪರಮೋದಯಾಃ ।
ಭೌಮಾನ್ರೇಣೂನ್ಸ ವಿಮಮೇ ಯೋ ವಿಷ್ಣೋರ್ವರ್ಣಯೇದ್ಗುಣಾನ್ ॥

ಅನುವಾದ

ಆ ವೈಕುಂಠನಾಥನ ಕಲ್ಯಾಣ ಗುಣಗಳನ್ನು ಮತ್ತು ಮಹಿಮೆಯನ್ನು ನಾನು ಸಂಕ್ಷೇಪವಾಗಿ (ಮೂರನೆಯ ಸ್ಕಂಧದಲ್ಲಿ) ಹಿಂದೆಯೇ ವರ್ಣಿಸಿದ್ದೇನೆ. ಭಗವಾನ್ ವಿಷ್ಣುವಿನ ಸಂಪೂರ್ಣಗುಣಗಳನ್ನಾದರೋ ಪೃಥಿವಿಯಲ್ಲಿರುವ ಧೂಳಿನ ಕಣಗಳನ್ನು ಎಣಿಸಬಲ್ಲವನೇ ವರ್ಣಿಸಬಲ್ಲನು. ಅಂದರೆ ವರ್ಣನಾತೀತ ವಾದವುಗಳು. ॥6॥

(ಶ್ಲೋಕ-7)

ಮೂಲಮ್

ಷಷ್ಠಶ್ಚ ಚಕ್ಷುಷಃ ಪುತ್ರಶ್ಚಾಕ್ಷುಷೋ ನಾಮ ವೈ ಮನುಃ ।
ಪೂರುಪೂರುಷಸುದ್ಯುಮ್ನ ಪ್ರಮುಖಾಶ್ಚಾಕ್ಷುಷಾತ್ಮಜಾಃ ॥

ಅನುವಾದ

ಆರನೆಯ ಮನುವು ಚಕ್ಷುವಿನ ಪುತ್ರ ಚಾಕ್ಷುಷನಾಗಿದ್ದನು. ಅವನಿಗೆ ಪೂರು, ಪುರುಷ, ಸುದ್ಯುಮ್ನ ಮುಂತಾದ ಅನೇಕ ಪುತ್ರರಿದ್ದರು. ॥7॥

(ಶ್ಲೋಕ-8)

ಮೂಲಮ್

ಇಂದ್ರೋ ಮಂತ್ರದ್ರುಮಸ್ತತ್ರ ದೇವಾ ಆಪ್ಯಾದಯೋ ಗಣಾಃ ।
ಮುನಯಸ್ತತ್ರ ವೈ ರಾಜನ್ಹವಿಷ್ಮದ್ವೀರಕಾದಯಃ ॥

ಅನುವಾದ

ಅವರಲ್ಲಿ ಮಂತ್ರ ದ್ರುಮನೆಂಬ ಇಂದ್ರನಿದ್ದನು ಮತ್ತು ಆಪ್ಯ ಮುಂತಾದ ಪ್ರಧಾನ ದೇವತೆಗಳಿದ್ದರು. ಆ ಮನ್ವಂತರದಲ್ಲಿ ಹವಿಷ್ಮಾನ್, ವೀರಕ ಮುಂತಾದವರು ಸಪ್ತರ್ಷಿಗಳಾಗಿದ್ದರು. ॥8॥

(ಶ್ಲೋಕ-9)

ಮೂಲಮ್

ತತ್ರಾಪಿ ದೇವಃ ಸಂಭೂತ್ಯಾಂ ವೈರಾಜಸ್ಯಾಭವತ್ಸುತಃ ।
ಅಜಿತೋ ನಾಮ ಭಗವಾನಂಶೇನ ಜಗತಃ ಪತಿಃ ॥

ಅನುವಾದ

ಜಗತ್ಪತಿಯಾದ ಭಗವಂತನು ಆ ಸಮಯದಲ್ಲಿಯೂ ವೈರಾಜನ ಪತ್ನಿಯಾದ ಸಂಭೂತಿಯಲ್ಲಿ ಅಜಿತನೆಂಬ ಹೆಸರಿ ನಿಂದ ಅಂಶಾವತಾರವನ್ನು ತಾಳಿದನು. ॥9॥

ಮೂಲಮ್

(ಶ್ಲೋಕ-10)
ಪಯೋಧಿಂ ಯೇನ ನಿರ್ಮಥ್ಯ ಸುರಾಣಾಂ ಸಾಧಿತಾ ಸುಧಾ ।
ಭ್ರಮಮಾಣೋಂಭಸಿ ಧೃತಃ ಕೂರ್ಮರೂಪೇಣ ಮಂದರಃ ॥

ಅನುವಾದ

ಅವನೇ ಸಮುದ್ರಮಂಥನ ಮಾಡಿ ದೇವತೆಗಳಿಗೆ ಅಮೃತಗಳನ್ನು ಕುಡಿಸಿದ್ದನು ಮತ್ತು ಕೂರ್ಮರೂಪವನ್ನು ಧರಿಸಿ ಗಿರ-ಗಿರನೆ ತಿರುಗುತ್ತಿದ್ದ ಮಂದರಾಚಲವನ್ನು ತನ್ನ ಬೆನ್ನಲ್ಲಿ ಹೊತ್ತನು. ॥10॥

(ಶ್ಲೋಕ-11)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಯಥಾ ಭಗವತಾ ಬ್ರಹ್ಮನ್ಮಥಿತಃ ಕ್ಷೀರಸಾಗರಃ ।
ಯದರ್ಥಂ ವಾ ಯತಶ್ಚಾದ್ರಿಂ ದಧಾರಾಂಬುಚರಾತ್ಮನಾ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಬ್ರಾಹ್ಮಣಶ್ರೇಷ್ಠರೇ! ಭಗವಂತನು ಕ್ಷೀರಸಾಗರ ಮಂಥನವನ್ನು ಹೇಗೆ ಮಾಡಿ ದನು? ಅವನು ಕೂರ್ಮರೂಪವನ್ನು ಧರಿಸಿ ಯಾವ ಕಾರಣದಿಂದ ಮತ್ತು ಯಾವ ಉದ್ದೇಶದಿಂದ ಮಂದರ ಪರ್ವತವನ್ನು ಬೆನ್ನಿನ ಮೇಲೆ ಹೊತ್ತುಕೊಂಡನು? ॥11॥

(ಶ್ಲೋಕ-12)

ಮೂಲಮ್

ಯಥಾಮೃತಂ ಸುರೈಃ ಪ್ರಾಪ್ತಂ ಕಿಂಚಾನ್ಯದಭವತ್ತತಃ ।
ಏತದ್ಭಗವತಃ ಕರ್ಮ ವದಸ್ವ ಪರಮಾದ್ಭುತಮ್ ॥

ಅನುವಾದ

ದೇವತೆಗಳಿಗೆ ಆ ಸಮಯದಲ್ಲಿ ಅಮೃತವು ಹೇಗೆ ದೊರೆಯಿತು? ಇನ್ನೂ ಯಾವ-ಯಾವ ವಸ್ತುಗಳು ಸಮುದ್ರ ಮಂಥನದಿಂದ ದೊರೆತವು? ಭಗವಂತನ ಈ ಲೀಲೆಯು ನಿಶ್ಚಯವಾಗಿಯೂ ಪರಮಾದ್ಭುತವಾಗಿದೆ. ಕೃಪೆಯಿಟ್ಟು ತಾವು ಇದೆಲ್ಲವನ್ನೂ ವಿಶದವಾಗಿ ವರ್ಣಿಸಿರಿ. ॥12॥

(ಶ್ಲೋಕ-13)

ಮೂಲಮ್

ತ್ವಯಾ ಸಂಕಥ್ಯಮಾನೇನ ಮಹಿಮ್ನಾ ಸಾತ್ವತಾಂ ಪತೇಃ ।
ನಾತಿತೃಪ್ಯತಿ ಮೇ ಚಿತ್ತಂ ಸುಚಿರಂ ತಾಪತಾಪಿತಮ್ ॥

ಅನುವಾದ

ಭಕ್ತವತ್ಸಲನಾದ ಭಗವಂತನ ಮಹಿಮೆಗಳನ್ನು ನೀವು ವರ್ಣಿಸಿದಂತೆಯೇ ನನ್ನ ಹೃದಯವು ಅವನ್ನು ಕೇಳಲು ಅಷ್ಟೇ ಉತ್ಸುಕವಾಗುತ್ತಾ ಹೋಗುತ್ತದೆ. ಬೇಸರಬರುವ ಮಾತೇ ಇಲ್ಲ. ಸಂಸಾರತಾಪದಿಂದ ಬೇಯುತ್ತಿರುವ ನನ್ನ ಮನಸ್ಸು ತವಕಪಡುತ್ತದೆ. ॥13॥

(ಶ್ಲೋಕ-14)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಸಂಪೃಷ್ಟೋ ಭಗವಾನೇವಂ ದ್ವೈಪಾಯನಸುತೋ ದ್ವಿಜಾಃ ।
ಅಭಿನಂದ್ಯ ಹರೇರ್ವೀರ್ಯಮಭ್ಯಾಚಷ್ಟುಂ ಪ್ರಚಕ್ರಮೇ ॥

ಅನುವಾದ

ಸೂತಪುರಾಣಿಕರು ಹೇಳಿದರು — ಶೌನಕಾದಿ ಋಷಿಗಳಿರಾ! ಪೂಜ್ಯರಾದ ಶ್ರೀಶುಕಮಹಾಮುನಿಗಳು ಪರೀಕ್ಷಿದ್ರಾಜನ ಈ ಪ್ರಶ್ನೆಯನ್ನು ಕೇಳಿ, ಅವನನ್ನು ಅಭಿನಂದಿಸುತ್ತಾ ಭಗವಂತನ ಸಮುದ್ರ ಮಂಥನ ಲೀಲೆಯನ್ನು ವರ್ಣಿಸ ತೊಡಗಿದರು. ॥14॥

(ಶ್ಲೋಕ-15)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಯದಾ ಯುದ್ಧೇಸುರೈರ್ದೇವಾ ಬಾಧ್ಯಮಾನಾಃ ಶಿತಾಯುಧೈಃ ।
ಗತಾಸವೋ ನಿಪತಿತಾ ನೋತ್ತಿಷ್ಠೇರನ್ಸ್ಮ ಭೂಯಶಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತ ರಾಜನೇ! ಹಿಂದೊಮ್ಮೆ ಅಸುರರು ತಮ್ಮ ನಿಶಿತವಾದ ಶಸ್ತ್ರಾಸ್ತ್ರ ಗಳಿಂದ ದೇವತೆಗಳನ್ನು ಪರಾಜಿತಗೊಳಿಸಿದರು. ಆ ದೇವಾಸುರರ ಯುದ್ಧದಲ್ಲಿ ಹಲವಾರು ದೇವತೆಗಳೂ ಅಸುನೀಗಿದ್ದರು. ಕೆಳಕ್ಕೆ ಬಿದ್ದವರು ಮೇಲೇಳಲೇ ಇಲ್ಲ. ॥15॥

(ಶ್ಲೋಕ-16)

ಮೂಲಮ್

ಯದಾ ದುರ್ವಾಸಸಃ ಶಾಪಾತ್ಸೇಂದ್ರಾ ಲೋಕಾಸಯೋನೃಪ ।
ನಿಃಶ್ರೀಕಾಶ್ಚಾಭವಂಸ್ತತ್ರ ನೇಶುರಿಜ್ಯಾದಯಃ ಕ್ರಿಯಾಃ ॥

ಅನುವಾದ

ದುರ್ವಾಸರ ಶಾಪದಿಂದ* ಮೂರು ಲೋಕಗಳು ಸೇರಿ ಸ್ವತಃ ಇಂದ್ರನೂ ಕೂಡ ಶ್ರೀಹೀನನಾದನು. ಇದರಿಂದ ಯಜ್ಞ-ಯಾಗಾದಿ ಧರ್ಮ-ಕರ್ಮಗಳೂ ನಿಂತು ಹೋದುವು. ॥16॥

ಟಿಪ್ಪನೀ
  • ಈ ಪ್ರಸಂಗವು ವಿಷ್ಣುಪುರಾಣದಲ್ಲಿ ಹೀಗೆ ಬಂದಿದೆ ಒಮ್ಮೆ ದುರ್ವಾಸರು ವೈಕುಂಠದಿಂದ ಬರುತ್ತಿದ್ದರು. ದಾರಿಯಲ್ಲಿ ಐರಾವತವನ್ನೇರಿದ ದೇವೇಂದ್ರನು ಸಿಕ್ಕಿದನು. ಅವನನ್ನು ತ್ರಿಲೋಕಾಧಿಪತಿ ಎಂದೆಣಿಸಿ ದುರ್ವಾಸರು ಭಗವಂತನ ಪ್ರಸಾದದ ಮಾಲೆಯನ್ನು ಕೊಟ್ಟರು. ಆದರೆ ಇಂದ್ರನು ಐಶ್ವರ್ಯದ ಮದದಿಂದ ಅದನ್ನು ಸ್ವಲ್ಪವೂ ಆದರಿಸದೆ ಐರಾವತದ ತಲೆಯಮೇಲಿಟ್ಟನು. ಐರಾವತವು ಅದನ್ನು ಸೊಂಡಿಲಿನಿಂದ ಎತ್ತಿಕೊಂಡು ಕಾಲಿನಿಂದ ತುಳಿದುಬಿಟ್ಟಿತು. ಇದರಿಂದ ದುರ್ವಾಸರು ಕ್ರೋಧಗೊಂಡು ‘ನೀನು ಮೂರು ಲೋಕಗಳಸಹಿತ ಶ್ರೀಹೀನನಾಗು. ಅಂದರೆ ಸಂಪತ್ತುರಹಿತನಾಗು’ ಎಂದು ಶಪಿಸಿದರು. ಇದರಿಂದ ಇಂದ್ರನು ಶ್ರೀಯನ್ನು ಕಳಕೊಂಡನು.

(ಶ್ಲೋಕ-17)

ಮೂಲಮ್

ನಿಶಾಮ್ಯೈತತ್ಸುರಗಣಾ ಮಹೇಂದ್ರವರುಣಾದಯಃ ।
ನಾಧ್ಯಗಚ್ಛನ್ಸ್ವಯಂ ಮಂತ್ರೈರ್ಮಂತ್ರಯಂತೋ ವಿನಿಶ್ಚಯಮ್ ॥

ಅನುವಾದ

ಈ ದುರ್ದಶೆಯನ್ನು ಕಂಡು ಇಂದ್ರ, ವರುಣರೇ ಮುಂತಾದ ದೇವತೆಗಳು ಪರಸ್ಪರ ಅನೇಕ ವಿಧದಿಂದ ವಿಚಾರಮಾಡಿದರೂ ತಮ್ಮ ವಿಚಾರಗಳಿಂದ ಯಾವುದೇ ಇತ್ಯರ್ಥಕ್ಕೆ ಬರಲಾಗಲಿಲ್ಲ. ॥17॥

(ಶ್ಲೋಕ-18)

ಮೂಲಮ್

ತತೋ ಬ್ರಹ್ಮಸಭಾಂ ಜಗ್ಮುರ್ಮೇರೋರ್ಮೂರ್ಧನಿ ಸರ್ವಶಃ ।
ಸರ್ವಂ ವಿಜ್ಞಾಪಯಾನ್ ಚಕ್ರುಃ ಪ್ರಣತಾಃ ಪರಮೇಷ್ಠಿನೇ ॥

ಅನುವಾದ

ಆಗ ಅವರೆಲ್ಲರೂ ಸುಮೇರುಪರ್ವತದ ಶಿಖರದಲ್ಲಿದ್ದ ಬ್ರಹ್ಮದೇವರ ಸಭೆಗೆ ಹೋದರು. ಅಲ್ಲಿ ಅವರು ಅತಿನಮ್ರರಾಗಿ ಬ್ರಹ್ಮದೇವರ ಸೇವೆಯಲ್ಲಿ ತೊಡಗಿ ತಮ್ಮ ಪರಿಸ್ಥಿತಿಯನ್ನು ವಿಶದವಾಗಿ ತಿಳಿಸಿದರು.॥18॥

(ಶ್ಲೋಕ-19)

ಮೂಲಮ್

ಸ ವಿಲೋಕ್ಯೇಂದ್ರವಾಯ್ವಾದೀನ್ನಿಃಸತ್ತ್ವಾನ್ವಿಗತಪ್ರಭಾನ್ ।
ಲೋಕಾನಮಂಗಲಪ್ರಾಯಾನಸುರಾನಯಥಾ ವಿಭುಃ ॥

ಅನುವಾದ

ಬ್ರಹ್ಮದೇವರು ನೋಡಿದರು ಇಂದ್ರ, ವಾಯು ಮುಂತಾದ ದೇವತೆಗಳು ಶ್ರೀಹೀನ ಮತ್ತು ಶಕ್ತಿಹೀನರಾಗಿರುವರು. ಜನರ ಪರಿಸ್ಥಿತಿಯು ಬಲು ವಿಕಟ, ಸಂಕಟಗ್ರಸ್ತವಾಗಿದೆ. ಅಸುರರಾದರೋ ಇದಕ್ಕೆ ವಿಪರೀತವಾಗಿ ಉನ್ನತಿಯನ್ನು ಪಡೆಯುತ್ತಿದ್ದಾರೆ. ॥19॥

(ಶ್ಲೋಕ-20)

ಮೂಲಮ್

ಸಮಾಹಿತೇನ ಮನಸಾ ಸಂಸ್ಮರನ್ಪುರುಷಂ ಪರಮ್ ।
ಉವಾಚೋತ್ಫುಲ್ಲವದನೋ ದೇವಾನ್ಸ ಭಗವಾನ್ಪರಃ ॥

ಅನುವಾದ

ಆಗ ಸರ್ವಸಮರ್ಥರಾದ ಬ್ರಹ್ಮದೇವರು ತಮ್ಮ ಮನಸ್ಸನ್ನು ಏಕಾಗ್ರಗೊಳಿಸಿ ಪರಮ ಪುರುಷ ಭಗವಂತನನ್ನು ಸ್ಮರಿಸಿದರು. ಮತ್ತೆ ಸ್ವಲ್ಪಹೊತ್ತು ತಡೆದು, ಪ್ರಫುಲ್ಲಿತ ವದನಾರವಿಂದದಿಂದ ದೇವತೆಗಳನ್ನು ಸಂಬೋಧಿಸಿ ಹೇಳಿದರು ॥20॥

(ಶ್ಲೋಕ-21)

ಮೂಲಮ್

ಅಹಂ ಭವೋ ಯೂಯಮಥೋಸುರಾದಯೋ
ಮನುಷ್ಯತಿರ್ಯಗ್ದ್ರುಮಘರ್ಮಜಾತಯಃ ।
ಯಸ್ಯಾವತಾರಾಂಶಕಲಾವಿಸರ್ಜಿತಾ
ವ್ರಜಾಮ ಸರ್ವೇ ಶರಣಂ ತಮವ್ಯಯಮ್ ॥

ಅನುವಾದ

ದೇವತೆಗಳಿರಾ! ನಾನು, ಶಂಕರನು, ನೀವುಗಳು ಹಾಗೂ ಅಸುರರು, ದೈತ್ಯರು, ಮನುಷ್ಯರು, ಪಶು-ಪಕ್ಷಿಗಳು, ವೃಕ್ಷಗಳು, ಸ್ವೇದಜ ಮುಂತಾದ ಸಮಸ್ತ ಪ್ರಾಣಿಗಳು ಯಾರ ವಿರಾಟ್ ರೂಪದ ಒಂದು ಅತ್ಯಂತ ಸ್ವಲ್ಪಾತಿಸ್ವಲ್ಪ ಅಂಶದಿಂದ ರಚಿತವಾಗಿವೆಯೋ, ಆ ಅವಿನಾಶೀ ಪ್ರಭುವಿಗೆ ನಾವುಗಳು ಶರಣಾಗಬೇಕು. ॥21॥

(ಶ್ಲೋಕ-22)

ಮೂಲಮ್

ನ ಯಸ್ಯ ವಧ್ಯೋ ನ ಚ ರಕ್ಷಣೀಯೋ
ನೋಪೇಕ್ಷಣೀಯಾದರಣೀಯಪಕ್ಷಃ ।
ಅಥಾಪಿ ಸರ್ಗಸ್ಥಿತಿಸಂಯಮಾರ್ಥಂ
ಧತ್ತೇ ರಜಃಸತ್ತ್ವ ತಮಾಂಸಿ ಕಾಲೇ ॥

ಅನುವಾದ

ಅವನ ದೃಷ್ಟಿಯಲ್ಲಿ ವಧಾರ್ಹನಾಗಲೀ, ರಕ್ಷಿಸಲ್ಪಡತಕ್ಕವರಾಗಲೀ, ಯಾರೂ ಇಲ್ಲದಿದ್ದರೂ, ಅವನಿಗೆ ಉಪೇಕ್ಷಣೀಯ ಹಾಗೂ ಆದರಣೀಯರು ಯಾರೂ ಇಲ್ಲದಿದ್ದರೂ ಸೃಷ್ಟಿ, ಸ್ಥಿತಿ, ಪ್ರಳಯಕ್ಕಾಗಿ ಆಗಾಗ ಅವನು ರಜೋಗುಣವನ್ನೂ, ಸತ್ತ್ವಗುಣವನ್ನು, ತಮೋಗುಣವನ್ನು ಸ್ವೀಕರಿಸುತ್ತಾನೆ.॥22॥

(ಶ್ಲೋಕ-23)

ಮೂಲಮ್

ಅಯಂ ಚ ತಸ್ಯ ಸ್ಥಿತಿಪಾಲನಕ್ಷಣಃ
ಸತ್ತ್ವಂ ಜುಷಾಣಸ್ಯ ಭವಾಯ ದೇಹಿನಾಮ್ ।
ತಸ್ಮಾದ್ವ್ರಜಾಮಃ ಶರಣಂ ಜಗದ್ಗುರುಂ
ಸ್ವಾನಾಂ ಸ ನೋ ಧಾಸ್ಯತಿ ಶಂ ಸುರಪ್ರಿಯಃ ॥

ಅನುವಾದ

ಅವನು ಈ ಸಮಯದಲ್ಲಿ ಪ್ರಾಣಿಗಳ ಕಲ್ಯಾಣಕ್ಕಾಗಿ ಸತ್ತ್ವಗುಣವನ್ನು ಸ್ವೀಕರಿಸಿರುವನು. ಅದಕ್ಕಾಗಿ ಇದು ಜಗತ್ತಿನ ಸ್ಥಿತಿ ಮತ್ತು ರಕ್ಷಣೆಯ ಸಮಯವಾಗಿದೆ. ಆದ್ದರಿಂದ ನಾವೆಲ್ಲರೂ ಆ ಜಗದ್ಗುರು ಪರಮಾತ್ಮ ನನ್ನೇ ಶರಣು ಹೊಂದೋಣ. ಅವನಿಗೆ ದೇವತೆಗಳು ಪ್ರಿಯರೂ, ದೇವತೆಗಳಿಗೆ ಅವನೂ ಪ್ರಿಯನಾಗಿರುವನು. ಅದರಿಂದ ತನ್ನವರಾದ ನಮ್ಮನ್ನು ಅವನು ಖಂಡಿತವಾಗಿ ರಕ್ಷಿಸುವನು. ॥23॥

(ಶ್ಲೋಕ-24)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯಾಭಾಷ್ಯ ಸುರಾನ್ವೇಧಾಃ ಸಹ ದೇವೈರರಿಂದಮ ।
ಅಜಿತಸ್ಯ ಪದಂ ಸಾಕ್ಷಾಜ್ಜಗಾಮ ತಮಸಃ ಪರಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಬ್ರಹ್ಮದೇವರು ದೇವತೆಗಳಿಗೆ ಹೀಗೆ ಹೇಳಿ ಅವರನ್ನೊಳ ಗೊಂಡು ಭಗವಾನ್ ಅಜಿತನ ನಿಜಧಾಮವಾದ ವೈಕುಂಠಕ್ಕೆ ಹೋದರು. ಆ ಧಾಮವು ತಮೋಮಯ ಪ್ರಕೃತಿಯಿಂದ ಹೊರತಾಗಿದೆ. ॥24॥

ಮೂಲಮ್

(ಶ್ಲೋಕ-25)
ತತ್ರಾದೃಷ್ಟಸ್ವರೂಪಾಯ ಶ್ರುತಪೂರ್ವಾಯ ವೈ ವಿಭೋ ।
ಸ್ತುತಿಮಬ್ರೂತ ದೈವೀಭಿರ್ಗೀರ್ಭಿಸ್ತ್ವವಹಿತೇಂದ್ರಿಯಃ ॥

ಅನುವಾದ

ಇವರೆಲ್ಲರೂ ಭಗವಂತನ ಸ್ವರೂಪ ಮತ್ತು ಧಾಮದ ಸಂಬಂಧವಾಗಿ ಮೊದಲಿನಿಂದಲೇ ಬಹಳಷ್ಟು ಕೇಳಿದ್ದರು. ಆದರೆ ಅಲ್ಲಿಗೆ ಹೋದ ಮೇಲೆ ಅವರಿಗೆ ಏನೂ ಕಂಡುಬಂದಿಲ್ಲ. ಅದಕ್ಕಾಗಿ ಬ್ರಹ್ಮದೇವರು ಏಕಾಗ್ರ ಮನಸ್ಸಿನಿಂದ ವೇದವಾಣಿಯ ಮೂಲಕ ವೇದಗಮ್ಯನಾದ ಭಗವಂತನನ್ನು ಸ್ತುತಿಸ ತೊಡಗಿದರು. ॥25॥

(ಶ್ಲೋಕ-26)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ಅವಿಕ್ರಿಯಂ ಸತ್ಯಮನಂತಮಾದ್ಯಂ
ಗುಹಾಶಯಂ ನಿಷ್ಕಲಮಪ್ರತರ್ಕ್ಯಮ್ ।
ಮನೋಗ್ರಯಾನಂ ವಚಸಾನಿರುಕ್ತಂ
ನಮಾಮಹೇ ದೇವವರಂ ವರೇಣ್ಯಮ್ ॥

ಅನುವಾದ

ಬ್ರಹ್ಮದೇವರು ಹೇಳಿದರು — ನೀನು ನಿರ್ವಿಕಾರನೂ, ಸತ್ಯ ಸ್ವರೂಪನೂ, ಅನಂತನೂ, ಆದಿಪುರುಷನೂ, ಎಲ್ಲರ ಹೃದಯದಲ್ಲಿ ಅಂತರ್ಯಾಮಿಯ ರೂಪದಲ್ಲಿ ವಿರಾಜಿಸುತ್ತಿರುವವನೂ, ಉಪಾಧಿರಹಿತನೂ, ಊಹಿಸಲು ಅಸಾಧ್ಯ ನಾದವನೂ, ಮನಸ್ಸಿಗಿಂತಲೂ ವೇಗವಾದ ಗಮನವುಳ್ಳವನೂ, ಮಾತಿನಿಂದ ವಿವರಿಸಲು ಅಶಕ್ಯನಾದವನೂ, ದೇವತೆಗಳಲ್ಲಿ ಶ್ರೇಷ್ಠನೂ, ಸರ್ವೋತ್ತಮನೂ ಆಗಿರುವೆ. ಅಂತಹ ಭಗವಂತನಾದ ನಿನಗೆ ನಮಸ್ಕರಿಸುತ್ತೇವೆ. ॥26॥

(ಶ್ಲೋಕ-27)

ಮೂಲಮ್

ವಿಪಶ್ಚಿತಂ ಪ್ರಾಣಮನೋಧಿಯಾತ್ಮನಾ-
ಮರ್ಥೇಂದ್ರಿಯಾಭಾಸಮನಿದ್ರಮವ್ರಣಮ್ ।
ಛಾಯಾತಪೌ ಯತ್ರ ನ ಗೃಧ್ರಪಕ್ಷೌ
ತಮಕ್ಷರಂ ಖಂ ತ್ರಿಯುಗಂ ವ್ರಜಾಮಹೇ ॥

ಅನುವಾದ

ನೀನು ಪ್ರಾಣ, ಮನಸ್ಸು, ಬುದ್ಧಿ, ಅಹಂಕಾರಗಳನ್ನು ತಿಳಿದವನಾಗಿರುವೆ. ಇಂದ್ರಿಯಗಳು ಮತ್ತು ಅವುಗಳ ವಿಷಯಗಳು ಎರಡೂ ನಿನ್ನಿಂದಲೇ ಪ್ರಕಾಶಿತವಾಗುತ್ತವೆ. ಅಜ್ಞಾನವು ನಿನ್ನನ್ನು ಸ್ಪರ್ಶಿಸಲಾರದು. ಪ್ರಕೃತಿಯ ವಿಕಾರವಾದ ಜನ್ಮ-ಮರಣಗಳಿಂದ ಕೂಡಿದ ಶರೀರದಿಂದಲೂ ನೀನು ರಹಿತನಾಗಿರುವೆ. ಜೀವಿಯ ಎರಡು ರೆಕ್ಕೆಗಳಾದ ವಿದ್ಯೆ-ಅವಿದ್ಯೆಗಳು ನಿನ್ನಲ್ಲಿರುವುದಿಲ್ಲ. ನೀನು ಅವಿನಾಶಿಯೂ, ಸಖಸ್ವರೂಪನೂ ಆಗಿರುವೆ. ಕೃತ, ತ್ರೇತಾ, ದ್ವಾಪರ ಯುಗಗಳಲ್ಲಿ ನೀನು ಅವತರಿಸುವೆ. ಅಂತಹ ನಿನ್ನನ್ನು ನಾವೆಲ್ಲರೂ ಶರಣುಹೊಂದುತ್ತೇವೆ. ॥27॥

(ಶ್ಲೋಕ-28)

ಮೂಲಮ್

ಅಜಸ್ಯ ಚಕ್ರಂ ತ್ವಜಯೇರ್ಯಮಾಣಂ
ಮನೋಮಯಂ ಪಂಚದಶಾರಮಾಶು ।
ತ್ರಿಣಾಭಿ ವಿದ್ಯುಚ್ಚಲಮಷ್ಟನೇಮಿ
ಯದಕ್ಷಮಾಹುಸ್ತಮೃತಂ ಪ್ರಪದ್ಯೇ ॥

ಅನುವಾದ

ಈ ಶರೀರವು ಜೀವಿಯ ಒಂದು ಮನೋಮಯ ಚಕ್ರವಾಗಿದೆ. ಹತ್ತು ಇಂದ್ರಿಯಗಳು ಮತ್ತು ಐದು ಪ್ರಾಣಗಳು ಹೀಗೆ ಹದಿನೈದು ಅದರ ಅರೆಕಾಲುಗಳು. ಸತ್ತ್ವ, ರಜ, ತಮ ಗಳೆಂಬ ಮೂರು ಗುಣಗಳು ಆ ಚಕ್ರದ ನಾಭಿಯಾಗಿದೆ. ಪೃಥಿವಿ, ಜಲ, ತೇಜ, ವಾಯು, ಆಕಾಶ, ಮನ, ಬುದ್ಧಿ, ಅಹಂಕಾರ ಇವು ಎಂಟು ಚಕ್ರದ ಅಂಚಾಗಿದೆ. ಮಾಯೆಯೇ ಈ ಚಕ್ರವನ್ನು ನಡೆಸುತ್ತದೆ. ಇದು ಮಿಂಚಿಗಿಂತಲೂ ಹೆಚ್ಚು ಶೀಘ್ರಗಾಮಿಯಾಗಿದೆ. ಈ ಚಕ್ರಕ್ಕೆ ಸ್ವಯಂ ಪರಮಾತ್ಮನೇ ಅಚ್ಚುಮರವಾಗಿದ್ದಾನೆ. ಏಕಮಾತ್ರ ಸತ್ಯಸ್ವರೂಪನಾದ ಅವನಿಗೆ ನಾವು ಶರಣಾಗಿದ್ದೇವೆ.॥28॥

(ಶ್ಲೋಕ-29)

ಮೂಲಮ್

ಯ ಏಕವರ್ಣಂ ತಮಸಃ ಪರಂ ತತ್
ಅಲೋಕಮವ್ಯಕ್ತಮನಂತಪಾರಮ್ ।
ಆಸಾಂಚಕಾರೋಪಸುಪರ್ಣಮೇನ-
ಮುಪಾಸತೇ ಯೋಗರಥೇನ ಧೀರಾಃ ॥

ಅನುವಾದ

ಯಾರು ಏಕಮಾತ್ರ ಜ್ಞಾನಸ್ವರೂಪನೂ, ಪ್ರಕೃತಿಗೆ ಅತೀತನೂ, ಅದೃಶ್ಯನೂ ಆಗಿರುವನೋ, ಯಾರು ಸಮಸ್ತ ವಸ್ತುಗಳ ಮೂಲದಲ್ಲಿ ಅವ್ಯಕ್ತನಾಗಿರುವನೋ, ದೇಶ, ಕಾಲಗಳಿಗೆ ಒಳಪಡದವನೋ, ಆ ಪ್ರಭುವೇ ಈ ಜೀವಿಯ ಹೃದಯದಲ್ಲಿ ಅಂತರ್ಯಾಮಿರೂಪದಿಂದ ವಿರಾಜಿಸುತ್ತಿರುವನು. ಧೀರರಾದ ಮನುಷ್ಯರು ಭಕ್ತಿಯೋಗದ ಮುಲಕ ಅವನನ್ನೇ ಆರಾಧಿಸುತ್ತಾರೆ. ॥29॥

(ಶ್ಲೋಕ-30)

ಮೂಲಮ್

ನ ಯಸ್ಯ ಕಶ್ಚಾತಿತಿತರ್ತಿ ಮಾಯಾಂ
ಯಯಾ ಜನೋ ಮುಹ್ಯತಿ ವೇದ ನಾರ್ಥಮ್ ।
ತಂ ನಿರ್ಜಿತಾತ್ಮಾತ್ಮಗುಣಂ ಪರೇಶಂ
ನಮಾಮ ಭೂತೇಷು ಸಮಂ ಚರಂತಮ್ ॥

ಅನುವಾದ

ಯಾವ ಮಾಯೆಯಿಂದ ಮೋಹಿತನಾದ ಈ ಜೀವನು ತನ್ನ ವಾಸ್ತವಿಕ ಲಕ್ಷ್ಯವನ್ನು ಅಥವಾ ಸ್ವರೂಪವನ್ನು ಮರೆತಿರು ವನೋ, ಅಂತಹ ಮಾಯೆಯು ಅವನದೇ ಆಗಿದೆ. ಬೇರೆ ಯಾರೂ ಅದನ್ನು ದಾಟಲಾರರು. ಆದರೆ ಸರ್ವಶಕ್ತಿಸಂಪನ್ನ ಪ್ರಭುವು ತನ್ನ ಆ ಮಾಯೆಯನ್ನು ಹಾಗೂ ಅದರ ಗುಣಗಳನ್ನು ತನ್ನ ವಶದಲ್ಲಿರಿಸಿಕೊಂಡು ಸಮಸ್ತ ಪ್ರಾಣಿಗಳ ಹೃದಯದಲ್ಲಿ ಸಮಭಾವದಿಂದ ಸಂಚರಿಸುತ್ತಿರುವನು. ಜೀವನು ತನ್ನ ಪುರುಷಾರ್ಥದಿಂದ ಅವನನ್ನು ಪಡೆಯಲಾರದೆ ಅವನ ಕೃಪೆಯಿಂದಲೇ ಪಡೆದುಕೊಳ್ಳಬಲ್ಲನು. ನಾವು ಅವನ ಚರಣಗಳಲ್ಲಿ ನಮಸ್ಕರಿಸುತ್ತೇವೆ. ॥30॥

(ಶ್ಲೋಕ-31)

ಮೂಲಮ್

ಇಮೇ ವಯಂ ಯತ್ಪ್ರಿಯಯೈವ ತನ್ವಾ
ಸತ್ತ್ವೇನ ಸೃಷ್ಟಾ ಬಹಿರಂತರಾವಿಃ ।
ಗತಿಂ ನ ಸೂಕ್ಷ್ಮಾಮೃಷಯಶ್ಚ ವಿದ್ಮಹೇ
ಕುತೋಸುರಾದ್ಯಾ ಇತರಪ್ರಧಾನಾಃ ॥

ಅನುವಾದ

ದೇವತೆಗಳಾದ ನಾವು, ಋಷಿಗಳು ಅವನ ಪರಮಪ್ರಿಯ ಸತ್ತ್ವಮಯ ಶರೀರದಿಂದಲೇ ಉತ್ಪನ್ನರಾದವರು. ಹೀಗಿದ್ದರೂ ಅವನ ಒಳ-ಹೊರ ಏಕರಸವಾಗಿ ಪ್ರಾಕಟ್ಯವಾದ ವಾಸ್ತವಿಕ ಸ್ವರೂಪವನ್ನು ನಾವು ತಿಳಿಯಲಾರೆವು. ಹಾಗಿರುವಾಗ ರಜೋಗುಣ-ತಮೋಗುಣಪ್ರಧಾನರಾದ ಅಸುರರೇ ಮುಂತಾದವರು ಅವನನ್ನು ಹೇಗೆ ತಿಳಿಯಬಲ್ಲರು? ಅಂತಹ ಪ್ರಭುವಿನ ಚರಣಗಳಲ್ಲಿ ನಾವು ನಮಸ್ಕರಿಸುತ್ತೇವೆ. ॥31॥

(ಶ್ಲೋಕ-32)

ಮೂಲಮ್

ಪಾದೌ ಮಹೀಯಂ ಸ್ವಕೃತೈವ ಯಸ್ಯ
ಚತುರ್ವಿಧೋ ಯತ್ರ ಹಿ ಭೂತಸರ್ಗಃ ।
ಸ ವೈ ಮಹಾಪೂರುಷ ಆತ್ಮತಂತ್ರಃ
ಪ್ರಸೀದತಾಂ ಬ್ರಹ್ಮ ಮಹಾವಿಭೂತಿಃ ॥

ಅನುವಾದ

ಅವನಿಂದಲೇ ರಚಿತವಾದ ಈ ಪೃಥಿವಿಯು ಅವನ ಚರಣವಾಗಿದೆ. ಈ ಪೃಥಿವಿಯಲ್ಲೇ ಜರಾಯುಜ, ಅಂಡಜ, ಸ್ವೇದಜ ಮತ್ತು ಉದ್ಭಿಜ್ಜ ಈ ನಾಲ್ಕೂ ಪ್ರಕಾರದ ಪ್ರಾಣಿ ಗಳು ವಾಸಿಸುತ್ತವೆ. ಆ ಪರಮ ಸ್ವತಂತ್ರ, ಪರಮ ಐಶ್ವರ್ಯ ಶಾಲಿಯಾದ ಪುರುಷೋತ್ತಮ ಪರಬ್ರಹ್ಮನು ನಮ್ಮ ಮೇಲೆ ಪ್ರಸನ್ನನಾಗಿರಲಿ.॥32॥

(ಶ್ಲೋಕ-33)

ಮೂಲಮ್

ಅಂಭಸ್ತು ಯದ್ರೇತ ಉದಾರವೀರ್ಯಂ
ಸಿಧ್ಯಂತಿ ಜೀವಂತ್ಯುತ ವರ್ಧಮಾನಾಃ ।
ಲೋಕಾಸಯೋಥಾಖಿಲಲೋಕಪಾಲಾಃ
ಪ್ರಸೀದತಾಂ ಬ್ರಹ್ಮ ಮಹಾವಿಭೂತಿಃ ॥

ಅನುವಾದ

ಈ ಪರಮಶಕ್ತಿಶಾಲಿಯಾದ ಜಲವು ಅವನ ವೀರ್ಯವಾಗಿದೆ. ಇದರಿಂದಲೇ ಮೂರು ಲೋಕಗಳೂ ಮತ್ತು ಸಮಸ್ತ ಲೋಕಗಳ ಲೋಕಪಾಲರು ಉತ್ಪನ್ನರಾಗುತ್ತಾರೆ, ಬೆಳೆಯುತ್ತಾರೆ, ಜೀವಿಸಿ ಇರುತ್ತಾರೆ. ಆ ಪರಮ ಐಶ್ವರ್ಯಶಾಲಿಯಾದ ಪರಬ್ರಹ್ಮನು ನಮ್ಮ ಮೇಲೆ ಪ್ರಸನ್ನನಾಗಲೀ. ॥33॥

(ಶ್ಲೋಕ-34)

ಮೂಲಮ್

ಸೋಮಂ ಮನೋ ಯಸ್ಯ ಸಮಾಮನಂತಿ
ದಿವೌಕಸಾಂ ವೈ ಬಲಮಂಧ ಆಯುಃ ।
ಈಶೋ ನಗಾನಾಂ ಪ್ರಜನಃ ಪ್ರಜಾನಾಂ
ಪ್ರಸೀದತಾಂ ನಃ ಸ ಮಹಾವಿಭೂತಿಃ ॥

ಅನುವಾದ

ಚಂದ್ರನು ಆ ಪ್ರಭುವಿನ ಮನಸ್ಸು ಆಗಿದ್ದಾನೆ ಎಂದು ಶ್ರುತಿಗಳು ಹೇಳುತ್ತವೆ. ಈ ಚಂದ್ರನೇ ಸಮಸ್ತ ದೇವತೆಗಳ ಅನ್ನ, ಬಲ, ಆಯುಸ್ಸು ಆಗಿದ್ದಾನೆ. ಅವನೇ ವೃಕ್ಷಗಳ ಒಡೆಯನೂ, ಪ್ರಜೆಯನ್ನು ವೃದ್ಧಿಪಡಿಸುವವನೂ ಆಗಿದ್ದಾನೆ. ಅಂತಹ ಮನಸ್ಸನ್ನು ಸ್ವೀಕರಿಸುವ ಪರಮ ಐಶ್ವರ್ಯಶಾಲಿಯಾದ ಪ್ರಭುವು ನಮ್ಮ ಮೇಲೆ ಪ್ರಸನ್ನನಾಗಲಿ. ॥34॥

(ಶ್ಲೋಕ-35)

ಮೂಲಮ್

ಅಗ್ನಿರ್ಮುಖಂ ಯಸ್ಯ ತು ಜಾತವೇದಾ
ಜಾತಃ ಕ್ರಿಯಾಕಾಂಡನಿಮಿತ್ತಜನ್ಮಾ ।
ಅಂತಃಸಮುದ್ರೇನುಪಚನ್ಸ್ವಧಾತೂನ್
ಪ್ರಸೀದತಾಂ ನಃ ಸ ಮಹಾವಿಭೂತಿಃ ॥

ಅನುವಾದ

ಅಗ್ನಿಯು ಪ್ರಭುವಿನ ಮುಖವಾಗಿದೆ. ಅದರ ಉತ್ಪತ್ತಿಯೂ ವೇದದ ಯಜ್ಞ-ಯಾಗಾದಿ ಕರ್ಮಕಾಂಡವನ್ನು ಸಾಂಗವಾಗಿ ನೆರವೇರಲೆಂದೇ ಆಗಿದೆ. ಈ ಅಗ್ನಿಯೇ ಶರೀರದೊಳಗೆ ಜಠರಾಗ್ನಿಯ ರೂಪದಿಂದ ಮತ್ತು ಸಮುದ್ರದೊಳಗೆ ಬಡವಾನಲ ರೂಪದಿಂದ ಇದ್ದು ಅವುಗಳಲ್ಲಿರುವ ಅನ್ನ, ಜಲ ಮುಂತಾದ ಧಾತುಗಳನ್ನು ಜೀರ್ಣವಾಗಿಸುತ್ತಾನೆ. ಸಮಸ್ತ ದ್ರವ್ಯಗಳ ಉತ್ಪತ್ತಿಯೂ ಅದರಿಂದಲೇ ಆಗಿದೆ. ಅಂತಹ ಪರಮೈಶ್ವರ್ಯ ಸಂಪನ್ನನಾದ ಭಗವಂತನು ನಮ್ಮ ಮೇಲೆ ಪ್ರಸನ್ನನಾಗಲೀ.॥35॥

(ಶ್ಲೋಕ-36)

ಮೂಲಮ್

ಯಚ್ಚಕ್ಷುರಾಸೀತ್ತರಣಿರ್ದೇವಯಾನಂ
ತ್ರಯೀಮಯೋ ಬ್ರಹ್ಮಣ ಏಷ ಧಿಷ್ಣ್ಯಮ್ ।
ದ್ವಾರಂ ಚ ಮುಕ್ತೇರಮೃತಂ ಚ ಮೃತ್ಯುಃ
ಪ್ರಸೀದತಾಂ ನಃ ಸ ಮಹಾವಿಭೂತಿಃ ॥

ಅನುವಾದ

ಯಾರ ಮೂಲಕ ಜೀವಭಾವ ತೊರೆದ ನಿಷ್ಕಾಮ ಕರ್ಮ ಯೋಗಿಗಳು ದೇವಯಾನಮಾರ್ಗದಿಂದ ಬ್ರಹ್ಮಲೋಕವನ್ನು ಸೇರುವರೋ, ಯಾರು ವೇದಗಳ ಸಾಕ್ಷಾತ್ ಮೂರ್ತಿಯಾಗಿದ್ದು, ಭಗವಂತನ ಧ್ಯಾನಮಾಡಲು ಯೋಗ್ಯವಾದ ಧಾಮನಾಗಿರುವನೋ, ಯಾರು ಪುಣ್ಯಲೋಕ ಸ್ವರೂಪನಾದ ಕಾರಣ ಮುಕ್ತಿಯದ್ವಾರ ಹಾಗೂ ಅಮೃತ ಮಯನಾಗಿರುವನೋ ಮತ್ತು ಕಾಲರೂಪನಾದ್ದರಿಂದ ಮೃತ್ಯುವೂ ಕೂಡ ಆಗಿರುವನೋ ಸೂರ್ಯನು ಯಾರ ಕಣ್ಣು ಆಗಿರುವನೋ ಆ ಪರಮೈಶ್ವರ್ಯಸಂಪನ್ನ ಭಗವಂತನು ನಮ್ಮ ಮೇಲೆ ಪ್ರಸನ್ನನಾಗಲೀ. ॥36॥

(ಶ್ಲೋಕ-37)

ಮೂಲಮ್

ಪ್ರಾಣಾದಭೂದ್ಯಸ್ಯ ಚರಾಚರಾಣಾಂ
ಪ್ರಾಣಃ ಸಹೋ ಬಲಮೋಜಶ್ಚ ವಾಯುಃ ।
ಅನ್ವಾಸ್ಮ ಸಮ್ರಾಜಮಿವಾನುಗಾ ವಯಂ
ಪ್ರಸೀದತಾಂ ನಃ ಸ ಮಹಾವಿಭೂತಿಃ ॥

ಅನುವಾದ

ಪ್ರಭುವಿನ ಪ್ರಾಣದಿಂದಲೇ ಚರಾಚರದ ಪ್ರಾಣ ಹಾಗೂ ಅವುಗಳಿಗೆ ಮಾನಸಿಕ, ಶಾರೀರಿಕ, ಇಂದ್ರಿಯ ಸಂಬಂಧೀ ಬಲವನ್ನು ಕೊಡುವಂತಹ ವಾಯುವು ಪ್ರಕಟವಾಯಿತು. ಅವನು ಚಕ್ರವರ್ತಿ ಸಾಮ್ರಾಟನಾದರೆ ಇಂದ್ರಿಯಗಳ ಅಧಿಷ್ಠಾತೃದೇವತೆಗಳಾದ ನಾವೆಲ್ಲರೂ ಸೇವಕರಂತೆ ಅವನನ್ನು ಹಿಂಬಾಲಿಸುವೆವು. ಅಂತಹ ಪರಮೈಶ್ವರ್ಯ ಸಂಪನ್ನನಾದ ಭಗವಂತನು ನಮ್ಮ ಮೇಲೆ ಪ್ರಸನ್ನನಾಗಲಿ. ॥37॥

(ಶ್ಲೋಕ-38)

ಮೂಲಮ್

ಶ್ರೋತ್ರಾದ್ದಿಶೋ ಯಸ್ಯ ಹೃದಶ್ಚ ಖಾನಿ
ಪ್ರಜಜ್ಞಿರೇ ಖಂ ಪುರುಷಸ್ಯ ನಾಭ್ಯಾಃ ।
ಪ್ರಾಣೇಂದ್ರಿಯಾತ್ಮಾಸುಶರೀರಕೇತಂ
ಪ್ರಸೀದತಾಂ ನಃ ಸ ಮಹಾವಿಭೂತಿಃ ॥

ಅನುವಾದ

ಪರಮಾತ್ಮನ ಕಿವಿಗಳಿಂದ ದಿಕ್ಕುಗಳು, ಹೃದಯದಿಂದ ಇಂದ್ರಿಯಗೋಲಕಗಳು, ನಾಭಿಯಿಂದ ಆಕಾಶವು ಉಂಟಾಯಿತು. ಐದು ಪ್ರಾಣಗಳಿಗೂ, ಐದು ಉಪಪ್ರಾಣಗಳಿಗೂ ಹತ್ತು ಇಂದ್ರಿಯಗಳಿಗೂ, ಮನಸ್ಸಿಗೂ, ಶರೀರಗಳಿಗೂ ಆಶ್ರಯನು ಅವನೇ. ಅಂತಹ ಮಹದೈಶ್ವರ್ಯ ಸಂಪನ್ನನಾದ ಭಗವಂತನು ನಮ್ಮ ಮೇಲೆ ಪ್ರಸನ್ನನಾಗಲೀ. ॥38॥

(ಶ್ಲೋಕ-39)

ಮೂಲಮ್

ಬಲಾನ್ಮಹೇಂದ್ರಸಿದಶಾಃ ಪ್ರಸಾದಾನ್
ಮನ್ಯೋರ್ಗಿರೀಶೋ ಧಿಷಣಾದ್ವಿರಿಂಚಃ ।
ಖೇಭ್ಯಶ್ಚ ಛಂದಾಂಸ್ಯೃಷಯೋ ಮೇಢ್ರತಃ ಕಃ
ಪ್ರಸೀದತಾಂ ನಃ ಸ ಮಹಾವಿಭೂತಿಃ ॥

ಅನುವಾದ

ಯಾರ ಬಲದಿಂದ ಇಂದ್ರನೂ, ಪ್ರಸನ್ನತೆಯಿಂದ ದೇವತೆಗಳೂ, ಕ್ರೋಧದಿಂದ ಶಂಕರನೂ, ಬುದ್ಧಿಯಿಂದ ಬ್ರಹ್ಮನೂ (ನಾನು), ಇಂದ್ರಿಯಗಳಿಂದ ಋಷಿಗಳೂ ಮತ್ತು ವೇದಗಳೂ, ಲಿಂಗದಿಂದ ಪ್ರಜಾಪತಿಯೂ ಉತ್ಪನ್ನರಾದರೋ, ಅಂತಹ ಪರಮೈಶ್ವರ್ಯ ಸಂಪನ್ನನಾದ ಭಗವಂತನು ನಮ್ಮ ಮೇಲೆ ಪ್ರಸನ್ನನಾಗಲೀ. ॥39॥

(ಶ್ಲೋಕ-40)

ಮೂಲಮ್

ಶ್ರೀರ್ವಕ್ಷಸಃ ಪಿತರಚ್ಛಾಯಯಾಸನ್
ಧರ್ಮಃ ಸ್ತನಾದಿತರಃ ಪೃಷ್ಠತೋಭೂತ್ ।
ದ್ಯೌರ್ಯಸ್ಯ ಶಿರ್ಷ್ಣೋಪ್ಸರಸೋವಿಹಾರಾತ್
ಪ್ರಸೀದತಾಂ ನಃ ಸ ಮಹಾವಿಭೂತಿಃ ॥

ಅನುವಾದ

ಯಾರ ವಕ್ಷಃಸ್ಥಳದಿಂದ ಲಕ್ಷ್ಮಿಯೂ, ನೆರಳಿನಿಂದ ಪಿತೃಗಳೂ, ಸ್ತನದಿಂದ ಧರ್ಮವೂ, ಬೆನ್ನಿನಿಂದ ಅಧರ್ಮವೂ, ತಲೆಯಿಂದ ಆಕಾಶವೂ, ವಿಹಾರದಿಂದ ಅಪ್ಸರೆಯರೂ ಹುಟ್ಟಿದರೋ ಆ ಪರಮ ಐಶ್ವರ್ಯಸಂಪನ್ನನಾದ ಪರಮಾತ್ಮನು ನಮ್ಮ ಮೇಲೆ ಪ್ರಸನ್ನನಾಗಲೀ. ॥40॥

(ಶ್ಲೋಕ-41)

ಮೂಲಮ್

ವಿಪ್ರೋ ಮುಖಂ ಬ್ರಹ್ಮ ಚ ಯಸ್ಯ ಗುಹ್ಯಂ
ರಾಜನ್ಯ ಆಸೀದ್ಭುಜಯೋರ್ಬಲಂ ಚ ।
ಊರ್ವೋರ್ವಿಡೋಜೋಂಘ್ರಿರವೇದಶೂದ್ರೌ
ಪ್ರಸೀದತಾಂ ನಃ ಸ ಮಹಾವಿಭೂತಿಃ ॥

ಅನುವಾದ

ಯಾರ ಮುಖದಿಂದ ಬ್ರಾಹ್ಮಣರು ಮತ್ತು ಅತ್ಯಂತ ರಹಸ್ಯಮಯ ವೇದಗಳು, ಭುಜಗಳಿಂದ, ಕ್ಷತ್ರಿಯರೂ ಮತ್ತು ಬಲವೂ, ತೊಡೆಗಳಿಂದ ವೈಶ್ಯರೂ ಮತ್ತು ಅವರ ವೃತ್ತಿ-ವ್ಯಾಪಾರ ಕುಶಲತೆಯೂ, ಚರಣಗಳಿಂದ ಶೂದ್ರರೂ ಮತ್ತು ಅವರ ಸೇವಾವೃತ್ತಿಯೂ ಪ್ರಕಟವಾಗಿರುವುದೋ, ಆ ಪರಮೈಶ್ವರ್ಯ ಸಂಪನ್ನ ಭಗವಂತನು ನಮ್ಮ ಮೇಲೆ ಪ್ರಸನ್ನನಾಗಲೀ. ॥41॥

(ಶ್ಲೋಕ-42)

ಮೂಲಮ್

ಲೋಭೋಧರಾತ್ಪ್ರೀತಿರುಪರ್ಯಭೂದ್ದ್ಯುತಿ-
ರ್ನಸ್ತಃ ಪಶವ್ಯಃ ಸ್ಪರ್ಶೇನ ಕಾಮಃ ।
ಭ್ರುವೋರ್ಯಮಃ ಪಕ್ಷ್ಮಭವಸ್ತು ಕಾಲಃ
ಪ್ರಸೀದತಾಂ ನಃ ಸ ಮಹಾವಿಭೂತಿಃ ॥

ಅನುವಾದ

ಯಾರ ಕೆಳದುಟಿಯಿಂದ ಲೋಭವೂ, ಮೇಲ್ದುಟಿಯಿಂದ ಪ್ರೀತಿಯೂ, ಮೂಗಿನಿಂದ ಕಾಂತಿಯೂ, ಸ್ಪರ್ಶದಿಂದ ಪಶುಗಳಿಗೆ ಪ್ರಿಯವಾದ ಕಾಮವೂ, ಹುಬ್ಬುಗಳಿಂದ ಯಮನೂ, ರೆಪ್ಪೆಗಳಿಂದ ಕಾಲವೂ ಹುಟ್ಟಿರುವರೋ ಅಂತಹ ಪರಮೈಶ್ವರ್ಯ ಸಂಪನ್ನ ಭಗವಂತನು ನಮ್ಮ ಮೇಲೆ ಪ್ರಸನ್ನನಾಗಲೀ. ॥42॥

(ಶ್ಲೋಕ-43)

ಮೂಲಮ್

ದ್ರವ್ಯಂ ವಯಃ ಕರ್ಮ ಗುಣಾನ್ವಿಶೇಷಂ
ಯದ್ಯೋಗಮಾಯಾವಿಹಿತಾನ್ವದಂತಿ ।
ಯದ್ದುರ್ವಿಭಾವ್ಯಂ ಪ್ರಬುಧಾಪಬಾಧಂ
ಪ್ರಸೀದತಾಂ ನಃ ಸ ಮಹಾವಿಭೂತಿಃ ॥

ಅನುವಾದ

ಪಂಚಭೂತಗಳೂ, ಕಾಲ, ಕರ್ಮ ಸತ್ತ್ವಾದಿಗುಣಗಳು ಮತ್ತು ವಿವೇಕಿ ಪುರುಷರಿಂದ ನಿರಾಕರಿಸಲ್ಪಡುವ ನಿರ್ವಚನೀಯ ಅಥವಾ ಅನಿರ್ವಚನೀಯ ವಿಶೇಷ ಪದಾರ್ಥಗಳು ಇವೆಲ್ಲವೂ ಭಗವಂತನ ಯೋಗಮಾಯೆಯಿಂದಲೇ ಉಂಟಾಗಿವೆ ಎಂದು ಶಾಸ್ತ್ರಗಳು ಹೇಳುತ್ತವೆ. ಅಂತಹ ಪರಮೈಶ್ವರ್ಯಸಂಪನ್ನ ಭಗವಂತನು ನಮ್ಮ ಮೇಲೆ ಪ್ರಸನ್ನನಾಗಲೀ. ॥43॥

(ಶ್ಲೋಕ-44)

ಮೂಲಮ್

ನಮೋಸ್ತು ತಸ್ಮಾ ಉಪಶಾಂತಶಕ್ತಯೇ
ಸ್ವಾರಾಜ್ಯಲಾಭಪ್ರತಿಪೂರಿತಾತ್ಮನೇ ।
ಗುಣೇಷು ಮಾಯಾರಚಿತೇಷು ವೃತ್ತಿಭಿ-
ರ್ನ ಸಜ್ಜಮಾನಾಯ ನಭಸ್ವದೂತಯೇ ॥

ಅನುವಾದ

ಯಾರು ಮಾಯಾ ನಿರ್ಮಿತ ಗುಣಗಳಲ್ಲಿ ದರ್ಶನಾದಿ ವೃತ್ತಿಗಳ ಮೂಲಕ ಆಸಕ್ತನಾಗುವುದಿಲ್ಲವೋ, ಯಾರು ವಾಯುವಿನಂತೆ ಸದಾಕಾಲ ಅಸಂಗನಾಗಿರುವನೋ, ಯಾರಲ್ಲಿ ಸಮಸ್ತ ಶಕ್ತಿಗಳು ಶಾಂತವಾಗಿವೆಯೋ, ಆ ತನ್ನ ಆತ್ಮಾನಂದದ ಲಾಭದಿಂದ ಪರಿಪೂರ್ಣನೂ, ಆತ್ಮ ಸ್ವರೂಪನೂ ಆದ ಭಗವಂತನಿಗೆ ನಮ್ಮ ನಮಸ್ಕಾರಗಳು. ॥44॥

ಮೂಲಮ್

(ಶ್ಲೋಕ-45)
ಸ ತ್ವಂ ನೋ ದರ್ಶಯಾತ್ಮಾನಮಸ್ಮತ್ಕರಣಗೋಚರಮ್ ।
ಪ್ರಪನ್ನಾನಾಂ ದಿದೃಕ್ಷೂಣಾಂ ಸಸ್ಮಿತಂ ತೇ ಮುಖಾಂಬುಜಮ್ ॥

ಅನುವಾದ

ಪ್ರಭುವೇ! ನಾವು ನಿನ್ನಲ್ಲಿ ಶರಣಾಗತರಾಗಿದ್ದೇವೆ ಮತ್ತು ಮಂದ-ಮಂದ ಮುಗುಳ್ನಗೆಯಿಂದ ಕೂಡಿದ ನಿನ್ನ ಮುಖ ಕಮಲವನ್ನು ನಮ್ಮ ಕಣ್ಣುಗಳು ನೋಡಲಿ ಎಂದೇ ಬಯಸುತ್ತೇವೆ. ಕೃಪೆದೋರಿ ನೀನು ನಮಗೆ ಅದರ ದರ್ಶನ ಮಾಡಿಸು. ॥45॥

(ಶ್ಲೋಕ-46)

ಮೂಲಮ್

ತೈಸ್ತೈಃ ಸ್ವೇಚ್ಛಾಧೃತೈ ರೂಪೈಃ ಕಾಲೇ ಕಾಲೇ ಸ್ವಯಂ ವಿಭೋ ।
ಕರ್ಮ ದುರ್ವಿಷಹಂ ಯನ್ನೋ ಭಗವಾಂಸ್ತತ್ಕರೋತಿ ಹಿ ॥

ಅನುವಾದ

ಪ್ರಭೋ! ನೀನು ಆಗಾಗ ಸ್ವತಃ ತನ್ನ ಇಚ್ಛೆಯಿಂದ ಅನೇಕ ರೂಪಗಳನ್ನು ಧರಿಸಿ, ನಮಗೆ ಅತ್ಯಂತ ಕಠಿಣವಾಗಿ ತೋರುವ ಕಾರ್ಯವನ್ನು ನೀನು ಸಹಜವಾಗಿ ಮಾಡಿಬಿಡುತ್ತೀಯೆ. ನೀನು ಸರ್ವಶಕ್ತಿ ಸಂಪನ್ನನಾಗಿರುವೆ. ನಿನಗೆ ಇದರಲ್ಲಿ ಯಾವ ಕಷ್ಟವಿದೆ? ॥46॥

(ಶ್ಲೋಕ-47)

ಮೂಲಮ್

ಕ್ಲೇಶಭೂರ್ಯಲ್ಪಸಾರಾಣಿ ಕರ್ಮಾಣಿ ವಿಲಾನಿ ವಾ ।
ದೇಹಿನಾಂ ವಿಷಯಾರ್ತಾನಾಂ ನ ತಥೈವಾರ್ಪಿತಂ ತ್ವಯಿ ॥

ಅನುವಾದ

ವಿಷಯಗಳ ಲೋಭದಲ್ಲಿ ಬಿದ್ದು ದುಃಖವನ್ನು ಭೋಗಿಸುತ್ತಿರುವ ದೇಹಾಭಿಮಾನಿಗಳಿಗೆ ಕರ್ಮಮಾಡಲು ಪರಿಶ್ರಮ, ಕ್ಲೇಶಗಳು ಬಹಳ ಹೆಚ್ಚಾಗಿರುತ್ತವೆ. ಆದರೆ ಫಲವು ಬಹಳ ಕಮ್ಮಿ ಸಿಗುತ್ತದೆ. ಹೆಚ್ಚಾಗಿ ಅದರಲ್ಲಿ ವಿಫಲತೆಯೇ ಕೈಗೆ ಬರುತ್ತದೆ. ಆದರೆ ನಿನಗೆ ಸಮರ್ಪಿಸಲ್ಪಡುವ ಕರ್ಮಗಳನ್ನು ಮಾಡುವಾಗಲೂ ಪರಮ ಸುಖವುಂಟಾಗುತ್ತದೆ. ಅವು ಸ್ವಯಂ ಫಲರೂಪವೇ ಆಗಿರುತ್ತವೆ. ॥47॥

(ಶ್ಲೋಕ-48)

ಮೂಲಮ್

ನಾವಮಃ ಕರ್ಮಕಲ್ಪೋಪಿ ವಿಲಾಯೇಶ್ವರಾರ್ಪಿತಃ ।
ಕಲ್ಪತೇ ಪುರುಷಸ್ಯೈಷ ಸ ಹ್ಯಾತ್ಮಾ ದಯಿತೋ ಹಿತಃ ॥

ಅನುವಾದ

ಭಗವಂತನಿಗೆ ಅರ್ಪಿಸಲ್ಪಟ್ಟ ಅತಿ ಚಿಕ್ಕ ಕರ್ಮವೂ ಕೂಡ ಎಂದೂ ವಿಫಲವಾಗುವುದಿಲ್ಲ. ಏಕೆಂದರೆ ಭಗವಂತನು ಜೀವರ ಪರಮ ಹಿತೈಷಿಯೂ, ಪರಮ ಪ್ರಿಯತಮನೂ, ಆತ್ಮನೂ ಆಗಿರುವನು. ॥48॥

(ಶ್ಲೋಕ-49)

ಮೂಲಮ್

ಯಥಾ ಹಿ ಸ್ಕಂಧಶಾಖಾನಾಂ ತರೋರ್ಮೂಲಾವಸೇಚನಮ್ ।
ಏವಮಾರಾಧನಂ ವಿಷ್ಣೋಃ ಸರ್ವೇಷಾಮಾತ್ಮನಶ್ಚ ಹಿ ॥

ಅನುವಾದ

ಮರದ ಬೇರಿಗೆ ನೀರೆರೆದರೆ ಅದರ ಶಾಖೋಪಶಾಖೆಗಳು ತಣಿಯುವಂತೆಯೇ ಸರ್ವಾತ್ಮಾ ಭಗವಂತನ ಆರಾಧನೆಯಿಂದ ಸಮಸ್ತ ಪ್ರಾಣಿಗಳ ಮತ್ತು ತನ್ನದೂ ಕೂಡ ಆರಾಧನೆ ಆದಂತಾಗುತ್ತದೆ. ॥49॥

(ಶ್ಲೋಕ-50)

ಮೂಲಮ್

ನಮಸ್ತುಭ್ಯಮನಂತಾಯ ದುರ್ವಿತರ್ಕ್ಯಾತ್ಮಕರ್ಮಣೇ ।
ನಿರ್ಗುಣಾಯ ಗುಣೇಶಾಯ ಸತ್ತ್ವಸ್ಥಾಯ ಚ ಸಾಂಪ್ರತಮ್ ॥

ಅನುವಾದ

ಯಾರು ಮೂರೂ ಕಾಲಗಳಲ್ಲಿಯೂ ಮತ್ತು ಅದರಿಂದ ಆಚೆಗೂ ಏಕರಸನಾಗಿ ಸ್ಥಿತನಾಗಿರುವನೋ, ಯಾರ ಲೀಲೆಗಳ ರಹಸ್ಯವು ತರ್ಕ-ವಿತರ್ಕಗಳಿಂದ ದೂರವಾಗಿದೆಯೋ, ಯಾರು ಸ್ವಯಂ ಗುಣಗಳಿಂದ ಅತೀತನಾಗಿದ್ದರೂ ಎಲ್ಲ ಗುಣಗಳ ಸ್ವಾಮಿಯಾಗಿರುವನೋ, ಈಗ ಸತ್ತ್ವ ಗುಣದಲ್ಲಿ ನೆಲೆಸಿರುವನೋ, ಅಂತಹ ನಿನಗೆ ಮತ್ತೆ-ಮತ್ತೆ ನಮಸ್ಕರಿಸುತ್ತೇನೆ. ॥50॥

ಅನುವಾದ (ಸಮಾಪ್ತಿಃ)

ಐದನೆಯ ಅಧ್ಯಾಯವು ಮುಗಿಯಿತು. ॥5॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ಅಮೃತಮಥನೇ ಪಂಚಮೋಽಧ್ಯಾಯಃ ॥5॥