[ನಾಲ್ಕನೆಯ ಅಧ್ಯಾಯ]
ಭಾಗಸೂಚನಾ
ಗಜೇಂದ್ರ ಮತ್ತು ಮೊಸಳೆಯ ಪೂರ್ವಚರಿತ್ರೆ ಹಾಗೂ ಅವರ ಉದ್ಧಾರ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತದಾ ದೇವರ್ಷಿಗಂಧರ್ವಾ ಬ್ರಹ್ಮೇಶಾನಪುರೋಗಮಾಃ ।
ಮುಮುಚುಃ ಕುಸುಮಾಸಾರಂ ಶಂಸಂತಃ ಕರ್ಮ ತದ್ಧರೇಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಆ ಸಮಯದಲ್ಲಿ ಬ್ರಹ್ಮ-ರುದ್ರರೇ ಮುಂತಾದ ದೇವತೆಗಳೂ, ಗಂಧರ್ವರೂ, ಋಷಿಗಳೂ ಶ್ರೀಹರಿಯ ಈ ಅದ್ಭುತ ಕಾರ್ಯವನ್ನು ಪ್ರಶಂಸಿಸುತ್ತಾ ಹೂಮಳೆಯನ್ನು ಸುರಿಸ ತೊಡಗಿದರು.॥1॥
(ಶ್ಲೋಕ-2)
ಮೂಲಮ್
ನೇದುರ್ದುಂದುಭಯೋ ದಿವ್ಯಾ ಗಂಧರ್ವಾ ನನೃತುರ್ಜಗುಃ ।
ಋಷಯಶ್ಚಾರಣಾಃ ಸಿದ್ಧಾಸ್ತುಷ್ಟುವುಃ ಪುರುಷೋತ್ತಮಮ್ ॥
ಅನುವಾದ
ಸ್ವರ್ಗದಲ್ಲಿ ದೇವದುಂದುಭಿಗಳು ಮೊಳಗಿದವು. ಗಂಧರ್ವಾಪ್ಸರೆಯರು ನೃತ್ಯಗಾನವನ್ನು ಮಾಡತೊಡಗಿದರು. ಋಷಿ-ಚಾರಣ-ಸಿದ್ಧರು ಭಗವಾನ್ ಶ್ರೀಪುರುಷೋತ್ತಮನನ್ನು ಸ್ತುತಿಸತೊಡಗಿದರು. ॥2॥
(ಶ್ಲೋಕ-3)
ಮೂಲಮ್
ಯೋಸೌ ಗ್ರಾಹಃ ಸ ವೈ ಸದ್ಯಃ ಪರಮಾಶ್ಚರ್ಯರೂಪಧೃಕ್ ।
ಮುಕ್ತೋ ದೇವಲಶಾಪೇನ ಹೂಹೂಗಂಧರ್ವಸತ್ತಮಃ ॥
ಅನುವಾದ
ಗಜೇಂದ್ರನ ಕಾಲನ್ನು ಹಿಡಿದುಕೊಂಡಿದ್ದ ಆ ಮೊಸಳೆಯು ಭಗವಂತನ ಚಕ್ರಸ್ಪರ್ಶಿಸುತ್ತಲೇ ಪರಮ ಆಶ್ಚರ್ಯಮಯ ದಿವ್ಯಶರೀರವನ್ನು ಹೊಂದಿತು. ಇವನು ಮೊದಲು ದೇವಲರ ಶಾಪದಿಂದ ಮೊಸಳೆಯಾಗಿದ್ದ ಹೂಹೂ ಎಂಬ ಗಂಧರ್ವನು. ಈಗ ಭಗವಂತನ ಕೃಪೆಯಿಂದ ಅವನು ಮುಕ್ತನಾದನು. ॥3॥
(ಶ್ಲೋಕ-4)
ಮೂಲಮ್
ಪ್ರಣಮ್ಯ ಶಿರಸಾಧೀಶಮುತ್ತಮಶ್ಲೋಕಮವ್ಯಯಮ್ ।
ಅಗಾಯತ ಯೋಶೋಧಾಮ ಕೀರ್ತನ್ಯಗುಣಸತ್ಕಥಮ್ ॥
ಅನುವಾದ
ಅವನು ಸರ್ವೇಶ್ವರನಾದ ಶ್ರೀಭಗವಂತನ ಚರಣಗಳಲ್ಲಿ ಶಿರವನ್ನಿಟ್ಟು ಪ್ರಣಾಮಗೈದು, ಅವನ ಸತ್ಕೀರ್ತಿಯನ್ನು ಗಾನಮಾಡತೊಡಗಿದನು. ವಾಸ್ತವಿಕವಾಗಿ ಅವಿನಾಶೀ ಭಗವಂತನೇ ಸರ್ವಶ್ರೇಷ್ಠ ಕೀರ್ತಿಯಿಂದ ಸಂಪನ್ನನಾಗಿರು ವನು. ಅವನ ಗುಣಗಳು ಮತ್ತು ಮನಮೋಹಕ ಲೀಲೆಗಳೇ ಗಾನಮಾಡಲು ಯೋಗ್ಯವಾದುವುಗಳು. ॥4॥
(ಶ್ಲೋಕ-5)
ಮೂಲಮ್
ಸೋನುಕಂಪಿತ ಈಶೇನ ಪರಿಕ್ರಮ್ಯ ಪ್ರಣಮ್ಯ ತಮ್ ।
ಲೋಕಸ್ಯ ಪಶ್ಯತೋ ಲೋಕಂ ಸ್ವಮಗಾನ್ಮುಕ್ತ ಕಿಲ್ಬಿಷಃ ॥
ಅನುವಾದ
ಭಗವಂತನ ಕೃಪಾಪೂರ್ಣ ಸ್ಪರ್ಶದಿಂದ ಅವನ ಪಾಪಗಳೆಲ್ಲ ನಾಶವಾಗಿ ಹೋದುವು. ಅವನು ಭಗವಂತನಿಗೆ ಪ್ರದಕ್ಷಿಣೆ ಬಂದು ಅವನ ಚರಣಗಳಲ್ಲಿ ವಂದಿಸಿಕೊಂಡು ಎಲ್ಲರೂ ನೋಡು-ನೋಡುತ್ತಿರುವಂತೆ ತನ್ನ ಲೋಕಕ್ಕೆ ತೆರಳಿದನು. ॥5॥
(ಶ್ಲೋಕ-6)
ಮೂಲಮ್
ಗಜೇಂದ್ರೋ ಭಗವತ್ಸ್ಪರ್ಶಾದ್ವಿಮುಕ್ತೋಜ್ಞಾನಬಂಧನಾತ್ ।
ಪ್ರಾಪ್ತೋ ಭಗವತೋ ರೂಪಂ ಪೀತವಾಸಾಶ್ಚತುರ್ಭುಜಃ ॥
ಅನುವಾದ
ಗಜೇಂದ್ರನೂ ಭಗವಂತನ ಸ್ಪರ್ಶಮಾತ್ರದಿಂದಲೇ ಅಜ್ಞಾನದ ಬಂಧನದಿಂದ ಮುಕ್ತನಾದನು. ಅವನಿಗೆ ಭಗವಂತನ ಸಾರೂಪ್ಯವು ಪ್ರಾಪ್ತವಾಯಿತು. ಅವನು ಪೀತಾಂಬರ ಧಾರಿಯಾಗಿ ಚತುರ್ಭುಜದಿಂದ ಕಂಗೊಳಿಸಿದನು. ॥6॥
(ಶ್ಲೋಕ-7)
ಮೂಲಮ್
ಸ ವೈ ಪೂರ್ವಮಭೂದ್ರಾಜಾ ಪಾಂಡ್ಯೋ ದ್ರವಿಡಸತ್ತಮಃ ।
ಇಂದ್ರದ್ಯುಮ್ನ ಇತಿ ಖ್ಯಾತೋ ವಿಷ್ಣು ವ್ರತಪರಾಯಣಃ ॥
ಅನುವಾದ
ಗಜೇಂದ್ರನು ಹಿಂದಿನ ಜನ್ಮದಲ್ಲಿ ದ್ರವಿಡದೇಶದ ಪಾಂಡ್ಯ ವಂಶೀಯ ರಾಜನಾಗಿದ್ದನು. ಅವನಿಗೆ ಇಂದ್ರದ್ಯುಮ್ನ ಎಂಬ ಹೆಸರಿತ್ತು. ಅವನು ಭಗವಂತನ ಶ್ರೇಷ್ಠ ಉಪಾಸಕನಾಗಿದ್ದು, ಖ್ಯಾತನಾಗಿದ್ದನು. ॥7॥
(ಶ್ಲೋಕ-8)
ಮೂಲಮ್
ಸ ಏಕದಾರಾಧನಕಾಲ ಆತ್ಮವಾನ್
ಗೃಹೀತವೌನವ್ರತ ಈಶ್ವರಂ ಹರಿಮ್ ।
ಜಟಾಧರಸ್ತಾಪಸ ಆಪ್ಲುತೋಚ್ಯುತಂ
ಸಮರ್ಚಯಾಮಾಸ ಕುಲಾಚಲಾಶ್ರಮಃ ॥
ಅನುವಾದ
ಒಮ್ಮೆ ಇಂದ್ರದ್ಯುಮ್ನ ಮಹಾ ರಾಜನು ರಾಜ್ಯವೈಭವಗಳನ್ನು ಬಿಟ್ಟು ಮಲಯ ಪರ್ವತದಲ್ಲಿ ಇರುತ್ತಿದ್ದನು. ಅವನು ಜಟೆಗಳನ್ನು ಬೆಳೆಸಿ, ತಪಸ್ವಿಯ ವೇಷವನ್ನು ಧರಿಸಿದ್ದನು. ಒಂದುದಿನ ಸ್ನಾನಾನಂತರ ಪೂಜೆಯ ಸಮಯ ಮನಸ್ಸನ್ನು ಏಕಾಗ್ರಗೊಳಿಸಿ, ಮೌನವ್ರತವನ್ನಾಂತು ಅವನು ಸರ್ವಶಕ್ತಿಸಂಪನ್ನ ಭಗವಂತ ನನ್ನು ಆರಾಧಿಸತೊಡಗಿದ್ದನು. ॥8॥
(ಶ್ಲೋಕ-9)
ಮೂಲಮ್
ಯದೃಚ್ಛಯಾ ತತ್ರ ಮಹಾಯಶಾ ಮುನಿಃ
ಸಮಾಗಮಚ್ಛಿಷ್ಯಗಣೈಃ ಪರಿಶ್ರಿತಃ ।
ತಂ ವೀಕ್ಷ್ಯ ತೂಷ್ಣೀಮಕೃತಾರ್ಹಣಾದಿಕಂ
ರಹಸ್ಯುಪಾಸೀನಮೃಷಿಶ್ಚುಕೋಪ ಹ ॥
ಅನುವಾದ
ಅದೇ ಸಮಯಕ್ಕೆ ದೈವಯೋಗದಿಂದ ಪರಮತಪಸ್ವಿಗಳಾದ ಅಗಸ್ತ್ಯಮುನಿಗಳು ತನ್ನ ಶಿಷ್ಯಸಂದೋಹದೊಂದಿಗೆ ಅಲ್ಲಿಗೆ ಆಗಮಿಸಿದರು. ಇಂದ್ರದ್ಯುಮ್ನನು ಪ್ರಜಾಪಾಲನೆ, ಗೃಹಸ್ಥರಿಗೆ ಉಚಿತವಾದ ಅತಿಥಿಸೇವೆ ಮುಂತಾದ ಧರ್ಮಗಳನ್ನು ತ್ಯಜಿಸಿ, ತಪಸ್ವಿಗಳಂತೆ ಏಕಾಂತದಲ್ಲಿ ಮೌನವಾಗಿ ಕುಳಿತು ಉಪಾಸನೆ ಮಾಡುವುದನ್ನು ಕಂಡ ಅವರು ರಾಜನ ಮೇಲೆ ಕ್ರೋಧಗೊಂಡರು. ॥9॥
(ಶ್ಲೋಕ-10)
ಮೂಲಮ್
ತಸ್ಮಾ ಇಮಂ ಶಾಪಮದಾದಸಾಧು-
ರಯಂ ದುರಾತ್ಮಾಕೃತಬುದ್ಧಿರದ್ಯ ।
ವಿಪ್ರಾವಮಂತಾ ವಿಶತಾಂ ತಮೋಂಧಂ
ಯಥಾ ಗಜಃ ಸ್ತಬ್ಧಮತಿಃ ಸ ಏವ ॥
ಅನುವಾದ
‘‘ಈ ರಾಜನು ಗುರುಹಿರಿಯರಿಂದ ಶಿಕ್ಷಣವನ್ನು ಗ್ರಹಿಸಲಿಲ್ಲ, ಅಭಿಮಾನಕ್ಕೆ ವಶನಾಗಿ ಪರೋಪ ಕಾರದಿಂದ ನಿವೃತ್ತನಾಗಿ ಮನಬಂದಂತೆ ಮಾಡುತ್ತಿದ್ದಾನೆ. ಬ್ರಾಹ್ಮಣರಿಗೆ ಅಪಮಾನಮಾಡುವ ಇವನು ಆನೆಯಂತೆ ಜಡಬುದ್ಧಿಯವನಾಗಿದ್ದಾನೆ. ಅದರಿಂದ ಇವನಿಗೆ ಘೋರ ಅಜ್ಞಾನಮಯ ಆನೆಯ ಜನ್ಮವು ದೊರೆಯಲಿ’’ ಎಂದು ಶಾಪವನ್ನು ಕೊಟ್ಟರು. ॥10॥
(ಶ್ಲೋಕ-11)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ಶಪ್ತ್ವಾ ಗತೋಗಸ್ತ್ಯೋ ಭಗವಾನ್ನೃಪ ಸಾನುಗಃ ।
ಇಂದ್ರದ್ಯುಮ್ನೋಪಿ ರಾಜರ್ಷಿರ್ದಿಷ್ಟಂ ತದುಪಧಾರಯನ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಶಾಪಾನುಗ್ರಹ ಸಮರ್ಥರಾದ ಅಗಸ್ತ್ಯಋಷಿಗಳು ಇಂದ್ರ ದ್ಯುಮ್ನನಿಗೆ ಹೀಗೆ ಶಾಪವನ್ನು ಕೊಟ್ಟು ಶಿಷ್ಯರೊಡನೆ ಅಲ್ಲಿಂದ ಹೊರಟು ಹೋದರು. ಇದು ನನ್ನ ಪ್ರಾರಬ್ಧವೇ ಹೀಗಿತ್ತು ಎಂದು ರಾಜರ್ಷಿಯು ಸಂತೋಷಪಟ್ಟು ಶಾಪವನ್ನು ಸ್ವೀಕರಿಸಿದನು. ॥11॥
(ಶ್ಲೋಕ-12)
ಮೂಲಮ್
ಆಪನ್ನಃ ಕೌಂಜರೀಂ ಯೋನಿಮಾತ್ಮಸ್ಮೃತಿವಿನಾಶಿನೀಮ್ ।
ಹರ್ಯರ್ಚನಾನುಭಾವೇನ ಯದ್ಗಜತ್ವೇಪ್ಯನುಸ್ಮೃತಿಃ ॥
ಅನುವಾದ
ಇದಾದ ಬಳಿಕ ಆತ್ಮವಿಸ್ಮೃತಿಯನ್ನು ಗೊಳಿಸುವ ಆನೆಯ ಯೋನಿಯು ರಾಜನಿಗೆ ಪ್ರಾಪ್ತವಾಯಿತು. ಆದರೆ ಅವನು ಆನೆಯಾಗಿದ್ದರೂ ಭಗವಂತನ ಆರಾಧನೆಯ ಪ್ರಭಾವದಿಂದ ಅವನಿಗೆ ಭಗವಂತನ ಸ್ಮೃತಿಯು ಹಿಂದಿನಂತೆಯೇ ಇತ್ತು. ॥12॥
(ಶ್ಲೋಕ-13)
ಮೂಲಮ್
ಏವಂ ವಿಮೋಕ್ಷ್ಯ ಗಜಯೂಥಪಮಬ್ಜನಾಭ-
ಸ್ತೇನಾಪಿ ಪಾರ್ಷದಗತಿಂ ಗಮಿತೇನ ಯುಕ್ತಃ ।
ಗಂಧರ್ವಸಿದ್ಧವಿಬುಧೈರುಪಗೀಯಮಾನ-
ಕರ್ಮಾದ್ಭುತಂ ಸ್ವಭವನಂ ಗರುಡಾಸನೋಗಾತ್ ॥
ಅನುವಾದ
ಭಗವಾನ್ ಶ್ರೀಹರಿಯು ಹೀಗೆ ಗಜೇಂದ್ರನ ಉದ್ಧಾರಮಾಡಿ ಅವನನ್ನು ತನ್ನ ಪಾರ್ಷದನನ್ನಾಗಿಸಿಕೊಂಡನು. ಗಂಧರ್ವರು, ಸಿದ್ಧರು, ದೇವತೆಗಳು ಶ್ರೀಹರಿಯ ಈ ಲೀಲೆಯನ್ನು ಹಾಡತೊಡಗಿ ದರು ಮತ್ತು ಅವನು ಪಾರ್ಷದರೂಪೀ ಗಜೇಂದ್ರನೊಂದಿಗೆ ಗರುಡವಾಹನನಾಗಿ ಅಲೌಕಿಕವಾದ ತನ್ನ ಲೋಕಕ್ಕೆ ಹೊರಟು ಹೋದನು. ॥13॥
(ಶ್ಲೋಕ-14)
ಮೂಲಮ್
ಏತನ್ಮಹಾರಾಜ ತವೇರಿತೋ ಮಯಾ
ಕೃಷ್ಣಾನುಭಾವೋ ಗಜರಾಜಮೋಕ್ಷಣಮ್ ।
ಸ್ವರ್ಗ್ಯಂ ಯಶಸ್ಯಂ ಕಲಿಕಲ್ಮಷಾಪಹಂ
ದುಃಸ್ವಪ್ನನಾಶಂ ಕುರುವರ್ಯ ಶೃಣ್ವತಾಮ್ ॥
ಅನುವಾದ
ಕುರುವಂಶಶಿರೋಮಣಿ ಪರೀಕ್ಷಿತನೇ! ನಾನು ನಿನಗೆ ಭಗವಾನ್ ಶ್ರೀಕೃಷ್ಣನ ಮಹಿಮೆಯನ್ನು ಹಾಗೂ ಗಜೇಂದ್ರನ ಉದ್ಧಾರದ ಕಥೆಯನ್ನು ಹೇಳಿದೆನು. ಈ ಕಥಾಪ್ರಸಂಗವು ಕೇಳುವವರ ಕಲಿಮಲ ಮತ್ತು ದುಃಸ್ವಪ್ನವನ್ನು ಇಲ್ಲವಾಗಿಸಿ, ಅವರಿಗೆ ಯಶಸ್ಸು, ಉನ್ನತಿ ಹಾಗೂ ಸ್ವರ್ಗವನ್ನು ಕೊಡುವಂತಹುದು. ॥14॥
(ಶ್ಲೋಕ-15)
ಮೂಲಮ್
ಯಥಾನುಕೀರ್ತಯಂತ್ಯೇತಚ್ಛ್ರೇಯಸ್ಕಾಮಾ ದ್ವಿಜಾತಯಃ ।
ಶುಚಯಃ ಪ್ರಾತರುತ್ಥಾಯ ದುಃಸ್ವಪ್ನಾದ್ಯುಪಶಾಂತಯೇ ॥
ಅನುವಾದ
ಅದಕ್ಕಾಗಿ ಶ್ರೇಯಸ್ಸನ್ನು ಬಯಸುವ ದ್ವಿಜರು ದುಃಸ್ವಪ್ನಾದಿಗಳ ಶಾಂತಿಗಾಗಿ ಪ್ರಾತಃಕಾಲ ಎದ್ದೊಡನೆಯೇ ಪವಿತ್ರರಾಗಿ ಇದನ್ನು ಪಾರಾಯಣ ಮಾಡುತ್ತಾರೆ. ॥15॥
(ಶ್ಲೋಕ-16)
ಮೂಲಮ್
ಇದಮಾಹ ಹರಿಃ ಪ್ರೀತೋ ಗಜೇಂದ್ರಂ ಕುರುಸತ್ತಮ ।
ಶೃಣ್ವತಾಂ ಸರ್ವಭೂತಾನಾಂ ಸರ್ವಭೂತಮಯೋ ವಿಭುಃ ॥
ಅನುವಾದ
ಪರೀಕ್ಷಿತನೇ! ಗಜೇಂದ್ರನ ಸ್ತುತಿಯಿಂದ ಪ್ರಸನ್ನನಾದ ಸರ್ವವ್ಯಾಪಕನೂ, ಸರ್ವಸ್ವರೂಪನೂ ಆದ ಭಗವಾನ್ ಶ್ರೀಹರಿಯು ಎಲ್ಲ ಜನರು ಕೇಳುವಂತೆ ಈ ಮಾತನ್ನು ಹೇಳಿದ್ದನು. ॥16॥
(ಶ್ಲೋಕ-17)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಯೇ ಮಾಂ ತ್ವಾಂ ಚ ಸರಶ್ಚೇದಂ ಗಿರಿಕಂದರಕಾನನಮ್ ।
ವೇತ್ರ ಕೀಚಕವೇಣೂನಾಂ ಗುಲ್ಮಾನಿ ಸುರಪಾದಪಾನ್ ॥
(ಶ್ಲೋಕ-18)
ಮೂಲಮ್
ಶೃಂಗಾಣೀಮಾನಿ ಧಿಷ್ಣ್ಯಾನಿ ಬ್ರಹ್ಮಣೋ ಮೇ ಶಿವಸ್ಯ ಚ ।
ಕ್ಷೀರೋದಂ ಮೇ ಪ್ರಿಯಂ ಧಾಮ ಶ್ವೇತದ್ವೀಪಂ ಚ ಭಾಸ್ವರಮ್ ॥
(ಶ್ಲೋಕ-19)
ಮೂಲಮ್
ಶ್ರೀವತ್ಸಂ ಕೌಸ್ತುಭಂ ಮಾಲಾಂ ಗದಾಂ ಕೌಮೋದಕೀಂ ಮಮ ।
ಸುದರ್ಶನಂ ಪಾಂಚಜನ್ಯಂ ಸುಪರ್ಣಂ ಪತಗೇಶ್ವರಮ್ ॥
(ಶ್ಲೋಕ-20)
ಮೂಲಮ್
ಶೇಷಂ ಚ ಮತ್ಕಲಾಂ ಸೂಕ್ಷ್ಮಾಂ
ಶ್ರಿಯಂ ದೇವೀಂ ಮದಾಶ್ರಯಾಮ್ ।
ಬ್ರಹ್ಮಾಣಂ ನಾರದಮೃಷಿಂ
ಭವಂ ಪ್ರಹ್ಲಾದಮೇವ ಚ ॥
(ಶ್ಲೋಕ-21)
ಮೂಲಮ್
ಮತ್ಸ್ಯಕೂರ್ಮವರಾಹಾದ್ಯೈರವತಾರೈಃ ಕೃತಾನಿ ಮೇ ।
ಕರ್ಮಾಣ್ಯನಂತಪುಣ್ಯಾನಿ ಸೂರ್ಯಂ ಸೋಮಂ ಹುತಾಶನಮ್ ॥
(ಶ್ಲೋಕ-22)
ಮೂಲಮ್
ಪ್ರಣವಂ ಸತ್ಯಮವ್ಯಕ್ತಂ ಗೋವಿಪ್ರಾನ್ಧರ್ಮಮವ್ಯಯಮ್ ।
ದಾಕ್ಷಾಯಣೀರ್ಧರ್ಮಪತ್ನೀಃ ಸೋಮಕಶ್ಯಪಯೋರಪಿ ॥
(ಶ್ಲೋಕ-23)
ಮೂಲಮ್
ಗಂಗಾಂ ಸರಸ್ವತೀಂ ನಂದಾಂ ಕಾಲಿಂದೀಂ ಸಿತವಾರಣಮ್ ।
ಧ್ರುವಂ ಬ್ರಹ್ಮಋಷೀನ್ಸಪ್ತ ಪುಣ್ಯಶ್ಲೋಕಾಂಶ್ಚ ಮಾನವಾನ್ ॥
(ಶ್ಲೋಕ-24)
ಮೂಲಮ್
ಉತ್ಥಾಯಾಪರರಾತ್ರಾಂತೇ ಪ್ರಯತಾಃ ಸುಸಮಾಹಿತಾಃ ।
ಸ್ಮರಂತಿ ಮಮ ರೂಪಾಣಿ ಮುಚ್ಯಂತೇ ಹ್ಯೇನಸೋಖಿಲಾತ್ ॥
ಅನುವಾದ
ಶ್ರೀಭಗವಂತನು ಹೇಳಿದನು — ಗಜೇಂದ್ರನೇ! ಯಾವ ಜನರು ಬ್ರಾಹ್ಮೀಮುಹೂರ್ತದಲ್ಲೆದ್ದು ಇಂದ್ರಿಯನಿಗ್ರಹ ಪೂರ್ವಕವಾಗಿ, ಏಕಾಗ್ರಮನಸ್ಸಿನಿಂದ ನನ್ನನ್ನು-ನಿನ್ನನ್ನು ಹಾಗೂ ಈ ಸರೋವರ, ಪರ್ವತ ಮತ್ತು ಗುಹೆಗಳನ್ನು, ವನವನ್ನೂ, ಬೆತ್ತ-ಬಿದಿರುಗಳ ಪೊದರುಗಳನ್ನು, ಇಲ್ಲಿಯ ದಿವ್ಯ ವೃಕ್ಷಗಳನ್ನೂ, ಪರ್ವತ ಶಿಖರಗಳನ್ನೂ, ನನ್ನ-ಬ್ರಹ್ಮ ದೇವರ-ಶಿವನ ನಿವಾಸಸ್ಥಾನಗಳನ್ನು, ನನಗೆ ಪ್ರಿಯವಾದ ಕ್ಷೀರಸಾಗರ, ಪ್ರಕಾಶಮಯ ಶ್ವೇತದ್ವೀಪವನ್ನು, ಶ್ರೀವತ್ಸ, ಕೌಸ್ತುಭಮಣಿ, ವನಮಾಲೆ, ನನ್ನ ಕೌಮೋದಕೀಗದೆ, ಸುದರ್ಶನ ಚಕ್ರ, ಪಾಂಚಜನ್ಯ ಶಂಖ ಇವುಗಳನ್ನೂ, ಪಕ್ಷಿ ರಾಜ ಗರುಡ, ನನ್ನ ಸೂಕ್ಷ್ಮವಾದ ಕಲಾಸ್ವರೂಪವಾದ ಆದಿಶೇಷನನ್ನು, ನನ್ನಲ್ಲೇ ಆಶ್ರಿತಳಾಗಿರುವ ಲಕ್ಷ್ಮೀದೇವಿ ಯನ್ನು, ಬ್ರಹ್ಮದೇವರನ್ನು, ದೇವರ್ಷಿನಾರದರನ್ನೂ, ಶಂಕರ ನನ್ನು ಹಾಗೂ ಭಕ್ತರಾಜ ಪ್ರಹ್ಲಾದನನ್ನೂ, ಮತ್ಸ್ಯ, ಕೂರ್ಮ, ವರಾಹ ಮುಂತಾದ ಅವತಾರಗಳಲ್ಲಿ ನಾಮ ಮಾಡಿದ ಅನಂತ ಪುಣ್ಯಮಯ ಚರಿತ್ರೆಗಳನ್ನು, ಸೂರ್ಯ, ಚಂದ್ರ, ಅಗ್ನಿ, ಓಂಕಾರ, ಸತ್ಯ, ಮೂಲಪ್ರಕೃತಿ, ಗೋವು, ಬ್ರಾಹ್ಮಣರು, ಅವಿನಾಶೀ ಸನಾತನಧರ್ಮವನ್ನು, ಸೋಮ, ಕಶ್ಯಪ ಇವರನ್ನು ಮತ್ತು ಧರ್ಮನ ಪತ್ನೀ ದಕ್ಷಕನ್ಯೆಯರನ್ನು, ಗಂಗಾ, ಸರಸ್ವತೀ, ಅಲಕನಂದಾ, ಯಮುನಾ, ಗಜರಾಜ, ಐರಾವತ, ಭಕ್ತಶಿರೋಮಣಿ ಧ್ರುವ, ಏಳು ಸಪ್ತರ್ಷಿಗಳನ್ನು, ಪುಣ್ಯಕೀರ್ತಿ (ನಳ, ಯುಧಿಷ್ಠಿರ, ಜನಕ ಮುಂತಾದ) ಮಹಾಪುರುಷರನ್ನು ಹೀಗೆ ಇವರೆಲ್ಲರನ್ನು ಸ್ಮರಿಸುತ್ತಾರೋ, ಅವರು ಸಮಸ್ತ ಪಾಪಗಳಿಂದ ಬಿಡುಗಡೆ ಹೊಂದುವರು. ಏಕೆಂದರೆ, ಇವೆಲ್ಲವೂ ನನ್ನ ಸ್ವರೂಪಗಳೇ ಆಗಿವೆ. ॥17-24॥
(ಶ್ಲೋಕ-25)
ಮೂಲಮ್
ಯೇ ಮಾಂ ಸ್ತುವಂತ್ಯನೇನಾಂಗ ಪ್ರತಿಬುಧ್ಯ ನಿಶಾತ್ಯಯೇ ।
ತೇಷಾಂ ಪ್ರಾಣಾತ್ಯಯೇ ಚಾಹಂ ದದಾಮಿ ವಿಮಲಾಂ ಮತಿಮ್ ॥
ಅನುವಾದ
ಪ್ರಿಯ ಗಜೇಂದ್ರನೇ! ಬ್ರಾಹ್ಮೀ ಮುಹೂರ್ತದಲ್ಲಿ ಎಚ್ಚರಗೊಂಡು ನೀನು ಮಾಡಿದ ಸ್ತೋತ್ರದಿಂದ ನನ್ನನ್ನು ಸ್ತುತಿಸುವವರ ಮೃತ್ಯುವಿನ ಸಮಯದಲ್ಲಿ ಅವರಿಗೆ ನಾನು ನಿರ್ಮಲ ಬುದ್ಧಿಯನ್ನು ಕರುಣಿಸುವೆನು. ॥25॥
(ಶ್ಲೋಕ-26)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯಾದಿಶ್ಯ ಹೃಷೀಕೇಶಃ ಪ್ರಧ್ಮಾಯ ಜಲಜೋತ್ತಮಮ್ ।
ಹರ್ಷಯನ್ವಿಬುಧಾನೀಕಮಾರುರೋಹ ಖಗಾಧಿಪಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಹೀಗೆ ಹೇಳಿ, ದೇವತೆಗಳನ್ನು ಆನಂದ ಪಡಿಸುತ್ತಾ ತನ್ನ ಶ್ರೇಷ್ಠವಾದ ಶಂಖವನ್ನು ಊದಿದನು ಹಾಗೂ ಗರುಡನನ್ನು ಏರಿದನು. ॥26॥
ಅನುವಾದ (ಸಮಾಪ್ತಿಃ)
ನಾಲ್ಕನೆಯ ಅಧ್ಯಾಯವು ಮುಗಿಯಿತು. ॥4॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ಗಜೇಂದ್ರಮೋಕ್ಷಣಂ ನಾಮಚತುರ್ಥೋಽಧ್ಯಾಯಃ ॥4॥